Friday, July 17, 2020

ಲಡಾಖ್ ಗೆ ರಾಜನಾಥ್ ಭೇಟಿ: ಮಾತುಕತೆ ಬಗ್ಗೆ ಯಾವ ಖಾತರಿಯೂ ಇಲ್ಲ

ಲಡಾಖ್ ಗೆ ರಾಜನಾಥ್ ಭೇಟಿ: ಮಾತುಕತೆ ಬಗ್ಗೆ ಯಾವ ಖಾತರಿಯೂ ಇಲ್ಲ

ಲುಕುಂಗ್ (ಲಡಾಕ್): ಚೀನಾದ ಜೊತೆಗೆ ಲಡಾಕ್ ಪ್ರದೇಶದಲ್ಲಿನ ಗಡಿ ಸಮಸ್ಯೆ ಬಗೆಹರಿಸಿಕೊಳ್ಳುವ ನಿಟ್ಟಿನಲ್ಲಿ ಮಾತುಕತೆ ನಡೆಯುತ್ತಿದೆ, ಆದರೆ ಇದರ ಬಗ್ಗೆ ಏನನ್ನೂ ಖಚಿತವಾಗಿ ಹೇಳಲಾಗದು ಎಂದು ರಕ್ಷಣಾ ಸಚಿವ ರಾಜನಾಥ್ ಸಿಂಗ್ 2020 ಜುಲೈ 17ರ ಶುಕ್ರವಾರ ಇಲ್ಲಿ ಹೇಳಿದರು.

ಲಡಾಖ್ ಲುಕುಂಗ್ ಪ್ರದೇಶಕ್ಕೆ ಭೇಟಿ ನೀಡಿದ ರಾಜನಾಥ್ ಸಿಂಗ್ ಅವರು ಭಾರತೀಯ ಸೇನೆ ಮತ್ತು ಭಾರತ - ಟಿಬೆಟ್ ಗಡಿ ಪೊಲೀಸ್ ಪಡೆ (ಇಂಡೊ-ಟಿಬೆಟನ್ ಬಾರ್ಡರ್ ಪೊಲೀಸ್ ಫೋರ್ಸ್-ಐಟಿಬಿಪಿ) ಸಿಬ್ಬಂದಿಯೊಂದಿಗೆ ಮಾತುಕತೆ ನಡೆಸಿದರು. ಯೋಧರೊಂದಿಗೆ ಚಹಾ ಕುಡಿಯುತ್ತಾ ಕೆಲವರಿಗೆ ಸಿಹಿ ತಿನ್ನಿಸಿ ಕುಶಲೋಪರಿ ವಿಚಾರಿಸಿದರು. ರಕ್ಷಣಾ ಪಡೆಗಳ ಮುಖ್ಯಸ್ಥ ಬಿಪಿನ್ ರಾವತ್ ಮತ್ತು ಸೇನಾ ಮುಖ್ಯಸ್ಥ ಎಂ.ಎಂ.ನರವಾಣೆ ಅವರ ಜೊತೆಗಿದ್ದರು.

ಜೂನ್ ೧೫ರಂದು ಪೂರ್ವ ಲಡಾಖ್ ಗಲ್ವಾನ್ ಕಣಿವೆ ಪ್ರದೇಶದಲ್ಲಿ ಚೀನಾ ಮತ್ತು ಭಾರತದ ಪಡೆಗಳ ನಡುವಣ ಸಂಘರ್ಷದ ಬಳಿಕವೂ ಉಭಯ ರಾಷ್ಟ್ರಗಳ ಅಧಿಕಾರಿಗಳು ಹಾಗೂ ಸಚಿವರೊಂದಿಗೆ ಗಡಿ ಸಮಸ್ಯೆ ಶಮನಗೊಳಿಸುವ ಸಲುವಾಗಿ ಹಲವು ಸುತ್ತಿನ ಮಾತುಕತೆ ನಡೆಸಲಾಗಿದೆ.

ಗಡಿ ವಿವಾದ ಇತ್ಯರ್ಥಕ್ಕಾಗಿ ಪರಸ್ಪರ ಮಾತುಕತೆ ನಡೆಯುತ್ತಿದೆ. ಆದರೆ, ಎಷ್ಟರ ಮಟ್ಟಿಗೆ ಅದು ಫಲಪ್ರದವಾಗಲಿದೆ ಎಂಬುದನ್ನು ಖಚಿತಪಡಿಸಲಾರೆ. ಜಗತ್ತಿನ ಯಾವುದೇ ಶಕ್ತಿಯಿಂದ ನಮ್ಮ ನೆಲದ ಒಂದು ಅಂಗುಲ ಜಾಗವನ್ನೂ ಕಿತ್ತುಕೊಳ್ಳಲು ಸಾಧ್ಯವಿಲ್ಲ ಎಂಬುದರ ಬಗ್ಗೆ ನಾನು ಭರವಸೆ ನೀಡುತ್ತೇವೆ.’ ಎಂದು ರಾಜನಾಥ್ ಸಿಂಗ್ ಹೇಳಿದರು.

ಮಾತುಕತೆಯ ಮೂಲಕವೇ ಇತ್ಯರ್ಥ ಕಂಡುಕೊಂಡರೆ, ಅದಕ್ಕಿಂತಲೂ ಉತ್ತಮ ಬೇರೆ ಇಲ್ಲ ಎಂದು ಕೇಂದ್ರ ಸಚಿವರು ಹೇಳಿದರು.

ಪಿಪಿ೧೪ರಲ್ಲಿ ಇತ್ತೀಚೆಗೆ ಭಾರತ ಮತ್ತು ಚೀನಾ ಪಡೆಗಳ ನಡುವೆ ನಡೆದ ಘರ್ಷಣೆ ಬಗ್ಗೆ ಪ್ರಸ್ತಾಪಿಸಿದ ರಕ್ಷಣಾ ಸಚಿವರುಗಡಿ ರಕ್ಷಣೆ ಮಾಡುತ್ತಲೇ ನಮ್ಮ ಕೆಲವು ಸಿಬ್ಬಂದಿ ಪ್ರಾಣ ತ್ಯಾಗ ಮಾಡಿದರು. ನಿಮ್ಮೆಲ್ಲರನ್ನೂ ಭೇಟಿ ಮಾಡಿರುವುದು ನನಗೆ ಸಂತಸ ತಂದಿದೆ, ಆದರೆ ಅವರನ್ನು ಕಳೆದು ಕೊಂಡಿರುವುದಕ್ಕೆ ದುಃಖಿತನಾಗಿರುವೆ. ಅವರಿಗೆ ನನ್ನ ಗೌರವಗಳನ್ನು ಸಮರ್ಪಿಸುತ್ತೇನೆ ಎಂದು ಹೇಳಿದರು.

ರಾಜನಾಥ್ ಸಿಂಗ್ ಅವರು ಬೆಳಗ್ಗೆ ಪ್ಯಾರಾ ಡ್ರಾಪಿಂಗ್, ದೂರದರ್ಶಕ ಶಸ್ತ್ರಾಸ್ತ್ರಗಳು ಹಾಗೂ ಪಿಕೆ ಮೆಷಿನ್ ಗನ್ ಬಳಕೆಯನ್ನು ಪರಿಶೀಲಿಸಿದರು. ರಕ್ಷಣಾ ಸಚಿವರ ಎದುರು ಲೆಹ್ ಪ್ರದೇಶದ ಸ್ಟಕನಾದಲ್ಲಿ ಭಾರತೀಯ ಸೇನೆಯ ಟಿ-೯೦ ಟ್ಯಾಂಕರ್ಗಳು ಹಾಗೂ ಬಿಎಂಪಿ ಇನ್ಫೆಂಟ್ರಿ ಸಮರ ವಾಹನಗಳು ಅಭ್ಯಾಸ ನಡೆಸಿದವು.

ವಾಸ್ತವ ನಿಯಂತ್ರಣ ರೇಖೆ (ಎಲ್ಎಸಿ) ಹಾಗೂ ಗಡಿ ನಿಯಂತ್ರಣ ರೇಖೆ (ಎಲ್ಒಸಿ) ಎರಡೂ ಕಡೆಯ ಪರಿಸ್ಥಿಯ ಅವಲೋಕನ ನಡೆಸಲು ರಾಜನಾಥ್ ಸಿಂಗ್, ಲಡಾಕ್ ಹಾಗೂ ಜಮ್ಮು ಮತ್ತು ಕಾಶ್ಮೀರಕ್ಕೆ ಎರಡು ದಿನಗಳ ಭೇಟಿ ನೀಡಿದ್ದಾರೆ.

ಪಾಕಿಸ್ತಾನ ಯುದ್ಧ ವಿರಾಮ ಒಪ್ಪಂದ ಉಲ್ಲಂಘಿಸುವ ಮೂಲಕ ಗಡಿ ನಿಯಂತ್ರಣ ರೇಖೆ ಸಮೀಪ ಆಗಾಗ್ಗೆ ದಾಳಿ ನಡೆಸುತ್ತಿದೆ. ಚೀನಾವು ಲಡಾಖ್ನಲ್ಲಿ ಭಾರತದ ಭೂ ಪ್ರದೇದ ಅತಿಕ್ರಮಣ ನಡೆಸುತ್ತಿರುವುದು ಗಡಿ ಭಾಗಗಳಲ್ಲಿ ಉದ್ವಿಗ್ನ ಪರಿಸ್ಥಿತಿ ಸೃಷ್ಟಿಸಿದೆ. ಗಲ್ವಾನ್ ಕಣಿವೆಯಲ್ಲಿ ಜೂನ್ ೧೫ರಂದು ಭಾರತ-ಚೀನಾ ಪಡೆಗಳ ನಡುವೆ ನಡೆದ ಘರ್ಷಣೆಯಲ್ಲಿ ೨೦ ಮಂದಿ ಭಾರತೀಯ ಯೋಧರು ಹುತಾತ್ಮರಾಗಿದ್ದರು.

ಉಭಯ ರಾಷ್ಟ್ರಗಳ ರಾಜತಾಂತ್ರಿಕ ಹಾಗೂ ಸೇನಾ ಅಧಿಕಾರಿಗಳ ಮಟ್ಟದ ಮಾತುಕತೆಯ ಬಳಿಕ ಚೀನಾ ಪಡೆಗಳು ಲಡಾಕ್ ಪ್ರದೇಶದಿಂದ ಹಿಂದೆ ಸರಿಯುತ್ತಿವೆ.

No comments:

Advertisement