My Blog List

Sunday, August 16, 2020

ಮಾಜಿ ಕ್ರಿಕೆಟಿಗ,ಉತ್ತರ ಪ್ರದೇಶ ಸಚಿವ ಚೇತನ್ ಚೌಹಾಣ್ ಕೋವಿಡ್ ಗೆ ಬಲಿ

 ಮಾಜಿ ಕ್ರಿಕೆಟಿಗ,ಉತ್ತರ ಪ್ರದೇಶ ಸಚಿವ
ಚೇತನ್ ಚೌಹಾಣ್ ಕೋವಿಡ್ ಗೆ ಬಲಿ

ನವದೆಹಲಿ: ಮಾಜಿ ಕ್ರಿಕೆಟಿಗ ಮತ್ತು ಉತ್ತರ ಪ್ರದೇಶದ ಸಚಿವ ಚೇತನ್ ಚೌಹಾಣ್ ಅವರು ಕೊರೋನಾ ಸೋಂಕಿನ ಪರಿಣಾಮವಾಗಿ 2020 ಆಗಸ್ಟ್ 16ರ  ಭಾನುವಾರ ನಿಧನರಾದರು.

ವಿಚಾರವನ್ನು ಚೇತನ್ ಅವರ ಸಹೋದರ ಪುಷ್ಪೇಂದ್ರ ಚೌಹಾಣ್ ತಿಳಿಸಿದರು.

೭೨ ವರ್ಷದ ಚೌಹಾಣ್ ಅವರಿಗೆ ಕೋವಿಡ್ ಇರುವುದು ಕಳೆದ ಶುಕ್ರವಾರ ದೃಢಪಟ್ಟಿತ್ತು. ಅವರು ಲಕ್ನೋದ  ಸಂಜಯ್ ಗಾಂಧಿ ಪಿಜಿಐ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. ಚೌಹಾಣ್ ಅವರನ್ನು ಆರಂಭದಲ್ಲಿ ಲಖನೌದ ಎಸ್ಜಿಪಿಜಿಐನಲ್ಲಿ ದಾಖಲಿಸಲಾಗಿತ್ತು. ನಂತರ ಗುರುಗ್ರಾಮದ ಮೇದಂತ ಆಸ್ಪತ್ರೆಗೆ ಸ್ಥಳಾಂತರಿಸಲಾಗಿತ್ತು.

ಚೇತನ್ ಚೌಹಾಣ್ ಅವರು ೧೯೬೯ ಮತ್ತು ೧೯೭೮ರ ನಡುವೆ ೪೦ ಟೆಸ್ಟ್ ಪಂದ್ಯಗಳಲ್ಲಿ ಆಡಿ, ೨೦೮೪ ರನ್ ಗಳಿಸಿದ್ದರು. ಉತ್ತರ ಪ್ರದೇಶ ಸರ್ಕಾರದಲ್ಲಿ ಚೇತನ್ ಚೌಹಾಣ್ ಅವರು ಸೈನಿಕ ಕಲ್ಯಾಣ, ಹೋಮ್ ಗಾರ್ಡ್ಸ್ ಮತ್ತು ನಾಗರಿಕ ಭದ್ರತೆ ಖಾತೆಗಳ ಸಚಿವರಾಗಿದ್ದರು.

ಚೌಹಾಣ್ ಅವರು ಪತ್ನಿ, ಒಬ್ಬ ಪುತ್ರನನ್ನು ಅಗಲಿದ್ದಾರೆ. ಪುತ್ರ ವಿನಾಯಕ್ ಅವರು ಮೆಲ್ಬೋನ್ನಿಲ್ಲಿದ್ದ ಅವರು ಭಾರತಕ್ಕೆ ಬಂದ ಬಳಿಕ ಅಂತ್ಯಕ್ರಿಯೆ ನೆರವೇರಲಿದೆ.

ಚೇತನ್ ಚೌಹಾಣ್ ಅವರ ನಿಧನಕ್ಕೆ ಪ್ರಧಾನಿ ಮೋದಿಯವರಿಂದ ಹಿಡಿದು, ಉತ್ತರ ಪ್ರದೇಶ ಸಿಎಂ ಯೋಗಿ ಆದಿತ್ಯನಾಥರವರೆಗೆ ಹಲವಾರು ಮಂದಿ ಸಂತಾಪ ಸೂಚಿಸಿದರು.

No comments:

Advertisement