My Blog List

Thursday, August 6, 2020

ಬಿರುಮಳೆಗೆ ಮುಂಬೈ ಕಂಗಾಲು, ಎನ್ ಡಿಆರ್ ಎಫ್ ಗೆ ಬುಲಾವ್

ಬಿರುಮಳೆಗೆ ಮುಂಬೈ ಕಂಗಾಲು, ಎನ್ ಡಿಆರ್ ಎಫ್ ಗೆ ಬುಲಾವ್

ಮುಂಬೈ: ಕೇವಲ ಎರಡು ದಿನಗಳ ಕೆಲವೇ ಗಂಟೆಗಳಲ್ಲಿ ಸುರಿದ ಮಹಾಮಳೆಗೆ ಮುಂಬೈ ತತ್ತರಿಸಿದ್ದು ಮಹಾರಾಷ್ಟ್ರ ಸರ್ಕಾರವು ರಕ್ಷಣೆ ಮತ್ತು ಪರಿಹಾರ ಕಾರ್ಯಾಚರಣೆಗಾಗಿ ರಾಷ್ಟ್ರೀಯ ವಿಪತ್ತು ನಿರ್ವಹಣಾ ಪಡೆಯ (ಎನ್‌ಡಿಆರ್‌ಎಫ್) ೧೬ ತುಕಡಿಗಳನ್ನು ನಗರದ ವಿವಿಧ ಕಡೆಗಳಲ್ಲಿ 2020 ಆಗಸ್ಟ್ 06ರ ಗುರುವಾರ ನಿಯೋಜಿಸಿದೆ.

ಬುಧವಾರ ಮತ್ತು ಗುರುವಾರ ಕೆಲವೇ ಗಂಟೆಗಳ ಅವಧಿಯಲ್ಲಿ ಮುಂಬೆಯಲ್ಲಿ ಇಡೀ ಋತುವಿನಲ್ಲೇ ಅತ್ಯಧಿಕ  ಮಳೆ ಸುರಿದಿದೆ.

ಮುಂಬೈಯಲ್ಲಿ ಐದು, ಕೊಲ್ಹಾಪುರದಲ್ಲಿ ನಾಲ್ಕು ಮತ್ತು ಸಾಂಗ್ಲಿಯಲ್ಲಿ ಎರಡು ಎನ್‌ಡಿಆರ್‌ಎಫ್ ತಂಡಗಳನ್ನು  ನಿಯೋಜಿಸಲಾಗಿದೆ. ವಿಪರೀತ ಮಳೆಯ ನಂತರ ಉಕ್ಕಿ ಹರಿಯುತ್ತಿರುವ ಪಂಚಗಂಗಾ ನದಿಯು ಕೊಲ್ಹಾಪುರದಲ್ಲಿ ತನ್ನ ಅಪಾಯದ ಮಟ್ಟ ತಲುಪುತ್ತಿದ್ದು, ಸ್ಥಳೀಯ ಅಧಿಕಾರಿಗಳನ್ನು ಎಚ್ಚರಿಸಲಾಗಿದೆ ಎಂದು ಪರಿಹಾರ ಮತ್ತು ಪುನರ್ವಸತಿ ಸಚಿವ ವಿಜಯ್ ವಾಡೆಟ್ಟಿವಾರ್ ಹೇಳಿದರು.

ನಗರದಲ್ಲಿ ೩೩೧.೦೮ ಮಿ.ಮೀ ಮಳೆಯಾಗಿದ್ದು, ಪೂರ್ವ ಉಪನಗರಗಳಲ್ಲಿ ೧೦೧. ಮಿ.ಮೀ ಮತ್ತು ಪಶ್ಚಿಮ ಉಪನಗರಗಳಲ್ಲಿ ೭೬.೦೩ ಮಿ.ಮೀ ಮಳೆಯಾಗಿದೆ. ಇದರೊಂದಿಗೆ ಮುಂಬೈಯಲ್ಲಿ ಗಂಟೆಗೆ ೧೦೬ ಕಿ.ಮೀ ವೇಗದಲ್ಲಿ ಬಲವಾದ ಗಾಳಿ ಕೂಡಾ ಬೀಸಿತು. ಇತರ ಜಿಲ್ಲೆಗಳಲ್ಲಿ ೭೦ ರಿಂದ ೮೦ ಕಿ.ಮೀ ವೇಗದಲ್ಲಿ ಗಾಳಿ ಬೀಸುತ್ತಿದೆ.

ಸತತ ಭಾರಿ ಮಳೆಯಿಂದಾಗಿ ಹಲವಾರು ಪ್ರದೇಶಗಳಲ್ಲಿ ನೀರು ತುಂಬಿದ್ದು, ಮನೆಗಳು ಕುಸಿದಿವೆ ಮತ್ತು ಮುಂಬೈಯ ಹಲವಾರು ಪ್ರದೇಶಗಳಿಂದ ಮರಗಳು ಬೇರುಸಹಿತ ಉರುಳಿ ಬಿದ್ದ ವರದಿಗಳು ಬಂದಿವೆ. ಮುಂಬೈಯ ರೆಡ್ ಕಾರ್ನರ್ ಬಳಿಯ ಪೆಡ್ಡಾರ್ ರಸ್ತೆಯಲ್ಲಿ, ರಸ್ತೆಯ ಒಂದು ಭಾಗವು ಕುಸಿದು ಬಾಯಿಬಿಟ್ಟಿದೆ. ದಾದರ್ ಪಶ್ಚಿಮದಲ್ಲಿ ಮನೆಯೊಂದರ ಎರಡನೇ ಅಂತಸ್ತು, ಮತ್ತು ಇತರ ನಾಲ್ಕು ಕಟ್ಟqಗಳು ಗುರುವಾರ ಮಧ್ಯಾಹ್ನ ಕುಸಿದಿದೆ. ಆದರೆ, ಯಾವುದೇ ಸಾವು ನೋವು ಸಂಭವಿಸಿಲ್ಲ.

ಮತ್ತೊಂದು ಘಟನೆಯಲ್ಲಿ, ದಕ್ಷಿಣ ಮುಂಬೈಯ ಪ್ರಭಾದೇವಿ ಪ್ರದೇಶದಲ್ಲಿ ಕಟ್ಟಡದ ಒಂದು ಭಾಗ ಕುಸಿದಿದ್ದು, ಹಲವಾರು ಮರಗಳು ಹಾನಿಗೀಡಾಗಿವೆ ಎಂದು ವರದಿಯಾಗಿದೆ. ದಕ್ಷಿಣ ಮುಂಬೈ ಅನೇಕ ಪ್ರದೇಶಗಳು ನೀರಿನ ಅಡಿಯಲ್ಲಿ ಮುಳುಗಿದೆ.

ಥಾಣೆ ಮತ್ತು ಪಾಲ್ಘಾರ್ ಜಿಲ್ಲೆಗಳಲ್ಲಿ ಬುಧವಾರ ಅತಿ ಹೆಚ್ಚು ಮಳೆಯಾದ ನಂತರ, ಭಾರತೀಯ ಹವಾಮಾನ ಇಲಾಖೆ (ಐಎಂಡಿ) "ಗುರುವಾರ ಪೂರ್ತಿ ಥಾಣೆಯಲ್ಲಿ ಭಾರೀ ಮಳೆಯೊಂದಿಗೆ ಸಾಮಾನ್ಯವಾಗಿ ಮೋಡ ಕವಿದ ವಾತಾವರಣ ಇರಲಿದ್ದು ಮುಂದಿನ ಕೆಲವು ಗಂಟೆಗಳಲ್ಲಿ ಮುಂಬೈ ನಗರದ ಮೇಲೆ ತೀವ್ರ ಮಳೆಯಾಗಲಿದೆ ಎಂದು ಮುನ್ಸೂಚನೆ ನೀಡಿತ್ತು.

ಮಹಾರಾಷ್ಟ್ರ ಮುಖ್ಯಮಂತ್ರಿ ಉದ್ಧವ್ ಠಾಕ್ರೆ ಬುಧವಾರ ಸಂಜೆ ಜನರಿಗೆ ಮನೆಗಳ ಒಳಗೇ ಉಳಿಯುವಂತೆ ಮತ್ತು  ಅಗತ್ಯ ಕೆಲಸಗಳಿಗಾಗಿ ಮಾತ್ರ ಹೊರಹೋಗುವಂತೆ ಮನವಿ ಮಾಡಿದ್ದರು. ಜನರ ಸುರಕ್ಷತೆಯನ್ನು ಖಚಿತಪಡಿಸಿಕೊಳ್ಳಲು ಪೊಲೀಸ್ ಮತ್ತು ರೈಲ್ವೆ ಅಧಿಕಾರಿಗಳು, ಆರೋಗ್ಯ ಯಂತ್ರೋಪಕರಣಗಳು ಮತ್ತು ಎನ್‌ಡಿಆರ್‌ಎಫ್‌ನೊಂದಿಗೆ ಸಮನ್ವಯ ಸಾಧಿಸುವಂತೆ ಮುಖ್ಯಮಂತ್ರಿ ಬೃಹನ್ಮುಂಬೈ ಮುನ್ಸಿಪಲ್ ಕಾರ್ಪೊರೇಷನ್‌ಗೆ (ಬಿಎಂಸಿ) ನಿರ್ದೇಶನ ನೀಡಿದರು.

ಮುಖ್ಯಮಂತ್ರಿಯವರು ಭಾgತೀಯ ಹವಾಮಾನ ಇಲಾಖೆಯ (ಐಎಂಡಿ) ಅಧಿಕಾರಿಗಳೊಂದಿಗೆ ಕೂಡಾ ಮಾತನಾಡಿದ್ದಾರೆ ಎಂದು ಮುಖ್ಯಮಂತ್ರಿಗಳ ಕಚೇರಿ (ಸಿಎಮ್‌ಒ) ಪ್ರಕಟಣೆ ತಿಳಿಸಿದೆ.

ಮುಂಬೈ ಕರಾವಳಿಯಲ್ಲಿ ೧೬ ಮೀನುಗಾರರನ್ನು ಕೋಸ್ಟ್ ಗಾರ್ಡ್ ರಕ್ಷಿಸಿದೆ

ಕೊಲ್ಹಾಪುರ, ರಾಯಗಢ ಮತ್ತು ರತ್ನಾಗಿರಿ ಜಿಲ್ಲೆಗಳಲ್ಲಿ ಭಾರೀ ಮಳೆಯಿಂದಾಗಿ ನದಿಗಳ ನೀರಿನ ಮಟ್ಟ ಏರುತ್ತಿದ್ದು, ಸಮೀಪ ವಾಸಿಸುವವರಿಗೆ ಜನರನ್ನು ಸುರಕ್ಷಿತ ಪ್ರದೇಶಗಳಿಗೆ ಸ್ಥಳಾಂತರಿಸುವತ್ತ ಗಮನಹರಿಸುವಂತೆ ಮಹಾರಾಷ್ಟ್ರ ಮುಖ್ಯಮಂತ್ರಿ ಕೊಂಕಣ ಮತ್ತು ಪುಣೆ ವಿಭಾಗೀಯ ಆಯುಕ್ತರಿಗೆ ನಿರ್ದೇಶನ ನೀಡಿದ್ದಾರೆ.

ಪಂಚಗಂಗಾ (ಕೊಲ್ಹಾಪುರ), ಕೊಡವಾಳಿ (ರತ್ನಗಿರಿ) ಮತ್ತು ಕುಂಡಲಿಕಾ (ರಾಯಗಡ) ನದಿಗಳಲ್ಲಿನ ನೀರಿನ ಮಟ್ಟವು ಅಪಾಯದ ಸನಿಹದಲ್ಲಿ ಇರುವುದರಿಂದ ಮತ್ತು ಮಳೆ ಕಡಿಮೆಯಾಗುವ ಲಕ್ಷಣಗಳು ಕಂಡುಬಂದಿಲ್ಲವಾದ್ದರಿಂದ ಎಚ್ಚರವಾಗಿರಲು ಠಾಕ್ರೆ ಸಂಬಂಧಪಟ್ಟ ಅಧಿಕಾರಿಗಳಿಗೆ ಸೂಚಿಸಿದರು.

ರಾಜ್ಯದ ಮಳೆ ಹಾನಿ ಪ್ರದೇಶಗಳಲ್ಲಿ ನಿಯೋಜಿಸಲಾಗಿರುವ ೧೬ ಎನ್‌ಡಿಆರ್‌ಎಫ್ ತಂಡಗಳಲ್ಲಿ ಕನಿಷ್ಠ ನಾಲ್ಕನ್ನು ಕೊಲ್ಹಾಪುರಕ್ಕೆ ಕಳುಹಿಸಲಾಗಿದೆ.

ಮುಂಬೈ ನಗರದಲ್ಲಿ ಭಾರಿ ಮಳೆಯಿಂದಾಗಿ ಒಬ್ಬ ವ್ಯಕ್ತಿ ಸಾವನ್ನಪ್ಪಿದ್ದಾನೆ. ರೈಲ್ವೆ ಉದ್ಯೋಗಿಯೊಬ್ಬರು ಮಸ್ಜಿಬ್ ಬಂದರಿನಲ್ಲಿ ಮೋಟಾರ್ ಪಂಪ್ ಸ್ಪರ್ಶಿಸಿದಾಗ ವಿದ್ಯುದಾಘಾತಕ್ಕೊಳಗಾಗಿದ್ದರೆ, ಕುರ್ಲಾದಲ್ಲಿ ಇದ್ದಕ್ಕಿದ್ದಂತೆ ಮರ ಬಿದ್ದು ಇನ್ನೊಬ್ಬ ವ್ಯಕ್ತಿಗೆ ಗಾಯಗಳಾಗಿವೆ.

No comments:

Advertisement