My Blog List

Friday, October 9, 2020

ಹತ್ರಾಸ್: ‘ಕಣ್ಮರೆ ಕೊಂಡಿ’ ಪತ್ತೆಗಾಗಿ ಅಪರಾಧ ದೃಶ್ಯದ ಮರುಸೃಷ್ಟಿ

 ಹತ್ರಾಸ್: ಕಣ್ಮರೆ ಕೊಂಡಿ ಪತ್ತೆಗಾಗಿ ಅಪರಾಧ ದೃಶ್ಯದ ಮರುಸೃಷ್ಟಿ

ಲಕ್ನೋ:  ಹತ್ತೊಂಬತ್ತು ವರ್ಷದ ದಲಿತ ಸಂತ್ರಸ್ತೆಯ ಕುಟುಂಬ ಸದಸ್ಯರು ಮತ್ತು ಇತರ ಗ್ರಾಮಸ್ಥರು ನೀಡುತ್ತಿರುವ ಹೇಳಿಕೆಗಳ ನಡುವೆ "ಕಾಣೆಯಾದ ಕೊಂಡಿಗಳನ್ನು ಪತ್ತೆ ಹಚ್ಚಲು ಉತ್ತರ ಪ್ರದೇಶ ಪೊಲೀಸರು ಹತ್ರಾಸ್ ಸಾಮೂಹಿಕ ಅತ್ಯಾಚಾರ ಪ್ರಕರಣದ ಅಪರಾಧದ ದೃಶ್ಯವನ್ನು ಮರುಸೃಷ್ಟಿಸಲಿದ್ದಾರೆ ಎಂದು ಹೆಸರು ಹೇಳಲು ಇಚ್ಛಿಸದ ಹಿರಿಯ ಪೊಲೀಸ್ ಅಧಿಕಾರಿಗಳು 2020 ಅಕ್ಟೋಬರ್ 09ರ ಶುಕ್ರವಾರ ತಿಳಿಸಿದರು.

ಸೆಪ್ಟೆಂಬರ್ ೧೪ ರಂದು ಮೇಲ್ಜಾತಿಯ ಯುವಕರಿಂದ ಸಾಮೂಹಿಕ ಅತ್ಯಾಚಾರಕ್ಕೆ ಒಳಗಾದಳೆನ್ನಲಾಗಿರುವ ದಲಿತ ಸಂತ್ರಸ್ತೆ ತೀವ್ರವಾಗಿ ಗಾಯಗೊಂಡಿದ್ದಳು. ಬಳಿಕ ಸೆಪ್ಟೆಂಬರ್ ೨೯ ರಂದು ದೆಹಲಿ ಆಸ್ಪತ್ರೆಯಲ್ಲಿ ಆಕೆ ಸಾವನ್ನಪ್ಪಿದ್ದಳು.

ಅಪರಾಧಕ್ಕೆ ಸಂಬಂಧಿಸಿದ ಎಲ್ಲ ಸಾಕ್ಷ್ಯಗಳನ್ನು ಸಂಗ್ರಹಿಸಲು ತನಿಖಾಧಿಕಾರಿಗಳು ಪ್ರಯತ್ನಿಸುತ್ತಿದ್ದಾರೆ ಎಂದು ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದರು. ಕುಟುಂಬ ಮತ್ತು ಇತರ ಸಾಕ್ಷಿಗಳ ಹೇಳಿಕೆಗಳು ಸಾಕಷ್ಟು ಭಿನ್ನವಾಗಿರುವುದರಿಂದ ತನಿಖಾಧಿಕಾರಿಗಳು ಅಪರಾಧದ ದೃಶ್ಯವನ್ನು ವಿಭಿನ್ನ ರೀತಿಯಲ್ಲಿ ಮರುಸೃಷ್ಟಿಸಲು ನಿರ್ಧರಿಸಿದ್ದಾರೆ ಎಂದು ಅಧಿಕಾರಿ ಹೇಳಿದರು.

ತನಿಖಾಧಿಕಾರಿಗಳು ಅಪರಾಧದ ಸ್ಥಳzಲ್ಲಿ ಸಂತ್ರಸ್ತೆಯ ಮನೆಗೆ ಸಮೀಪದ ಬಜ್ರಾ ಮೈದಾನದಲ್ಲಿ ನಾಲ್ಕು ಕುಡುಗೋಲುಗಳು ಮತ್ತು ಚಪ್ಪಲಿಯನ್ನು ಪತ್ತೆ ಮಾಡಿದ್ದಾರೆ ಎಂದು ಹೆಸರು ಹೇಳಲು ಇಚ್ಛಿಸದ ಇನ್ನೊಬ್ಬ ಅಧಿಕಾರಿ ಹೇಳಿದರು.

ಘಟನಾ ಸ್ಥಳದ ಸಮೀಪ ಬೆಳೆ ಕಟಾವು ಮಾಡುತ್ತಿದ್ದ ಕನಿಷ್ಠ ನಾಲ್ಕು ಜನರಿದ್ದರು ಮತ್ತು ಇಡೀ ಪ್ರಸಂಗಕ್ಕೆ ಅವರು ಪ್ರತ್ಯಕ್ಷದರ್ಶಿಯಾಗಿರಬಹುದು ಎಂಬುದನ್ನು ಇದು  ಸೂಚಿಸುತ್ತದೆ ಎಂದು ಅವರು ಹೇಳಿದರು.

ಸಂತ್ರಸ್ತೆಯ ರಕ್ತಸಂಬಂಧಿಗಳ ಉಪಸ್ಥಿತಿಯಲ್ಲಿ ಉಪಸ್ಥಿತಿಯಲ್ಲಿ ಘಟನೆಗಳ ಅನುಕ್ರಮವನ್ನು ಮರುಸೃಷ್ಟಿಸಲು ಮೃತಳ ತಾಯಿ ಮತ್ತು ಸಹೋದರನ ಹೇಳಿಕೆಯನ್ನು ವಿವರವಾಗಿ ದಾಖಲಿಸಲಾಗುವುದು ಎಂದು ಅಧಿಕಾರಿ ಹೇಳಿದರು.

ಹತ್ರಾಸ್ ಪ್ರಕರಣದ ಬಗ್ಗೆ ಸಿಬಿಐ ತನಿಖೆಗೆ ರಾಜ್ಯ ಸರ್ಕಾರ ಈಗಾಗಲೇ ಶಿಫಾರಸು ಮಾಡಿದ್ದರೂ, ಪೊಲೀಸ್ ತನಿಖಾಧಿಕಾರಿಗಳು ಅಪರಾಧಕ್ಕೆ ಸಂಬಂಧಿಸಿದ ಎಲ್ಲಾ ವಿವರಗಳನ್ನು ಸಂಗ್ರಹಿಸಲು ಪ್ರಯತ್ನಿಸುತ್ತಿದ್ದಾರೆ ಮತ್ತು ಪ್ರಕರಣವನ್ನು ವಹಿಸಿಕೊಂಡಾಗ ಅದನ್ನು ಸಿಬಿಐಗೆ ಹಸ್ತಾಂತರಿಸಲಾಗುವುದು ಎಂದು ಅವರು ಹೇಳಿದರು.

ಪೊಲೀಸ್ ಅಧಿಕಾರಿಗಳ ಅಮಾನತು:

ಏತನ್ಮಧ್ಯೆ, ಮೂವರು ಸದಸ್ಯರ ವಿಶೇಷ ತನಿಖಾ ತಂಡವು (ಎಸ್ಐಟಿ) ಶುಕ್ರವಾರ ಹಲವಾರು ಸಾಕ್ಷಿಗಳ ಹೇಳಿಕೆಯನ್ನು ದಾಖಲಿಸಿದೆ. ಮೊದಲು ಎಸ್ಐಟಿಯ ಪ್ರಾಥಮಿಕ ವರದಿಯ ಆಧಾರದ ಮೇಲೆ, ಆಗಿನ ಹತ್ರಾಸ್ ಪೊಲೀಸ್ ಅಧೀಕ್ಷಕ ವಿಕ್ರಾಂತ್ ವೀರ್ ಸೇರಿದಂತೆ ಐದು ಪೊಲೀಸ್ ಅಧಿಕಾರಿಗಳನ್ನು ರಾಜ್ಯ ಸರ್ಕಾರ ಅಮಾನತುಗೊಳಿಸಿದೆ.

ಕಾರ್ಯದರ್ಶಿ (ಗೃಹ) ಭಗವಾನ್ ಸ್ವರೂಪ್ ಶ್ರೀವಾಸ್ತವ, ಪೊಲೀಸ್ ಸಬ್- ಇನ್ಸ್ಪೆಕ್ಟರ್ ಜನರಲ್ ಚಂದ್ರ ಪ್ರಕಾಶ್ ಮತ್ತು ಕಮಾಂಡೆಂಟ್, ಪ್ರಾಂತೀಯ ಸಶಸ್ತ್ರ ಕಾನ್ಸ್ಟಾಬ್ಯುಲರಿ (ಪಿಎಸಿ), ಆಗ್ರಾ, ಪೂನಂ ಅವರು ವಿಶೇಷ ತನಿಖಾ ತಂಡದ ಸದಸ್ಯರಾಗಿದ್ದಾರೆ.

 

ಕುತೂಹಲಕಾರಿ ಇಡಿ ಹೇಳಿಕೆ

ಮಧ್ಯೆ, ಹತ್ರಾಸ್ ಅತ್ಯಾಚಾರದ ವಿರುದ್ಧದ ಪ್ರತಿಭಟನೆಗೆ ಸಂಬಂಧಿಸಿದಂತೆ ಚಂದ್ರಶೇಖರ್ ಆಜಾದ್ ನೇತೃತ್ವದ ಭೀಮ್ ಆರ್ಮಿ ಮತ್ತು ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾ (ಪಿಎಫ್) ನಡುವೆ ಯಾವುದೇ ಸಂಬಂಧಗಳು ಕಂಡುಬಂದಿಲ್ಲ ಎಂದು ಜಾರಿ ನಿರ್ದೇಶನಾಲಯ (ಇಡಿ) 2020 ಅಕ್ಟೋಬರ್ 09ರ ಶುಕ್ರವಾರ ತಿಳಿಸಿದೆ.

ಹತ್ರಾಸ್ ಪ್ರಕರಣದ ಮೂಲಕ ಹಿಂಸಾಚಾರವನ್ನು ಪ್ರಚೋದಿಸಲು ೧೦೦ ಕೋಟಿ ರೂ. ವಿದೇಶಿ ಧನಸಹಾಯವನ್ನು ಪಡೆಯಲಾಗಿದೆ ಎಂಬ ಆರೋಪವನ್ನು ಕೂಡಾ ಜಾರಿ ನಿರ್ದೇಶನಾಲಯ ತಳ್ಳಿ ಹಾಕಿದೆ.

ಬೆಳವಣಿಗೆಯು ಉತ್ತರ ಪ್ರದೇಶ ಪೋಲಿಸರ ಪ್ರತಿಪಾದನೆಗಳನ್ನು ಪ್ರಶ್ನಾರ್ಹವನ್ನಾಗಿ ಮಾಡಿದೆ.

ರಾಜ್ಯ ಸರ್ಕಾgಕ್ಕೆ ಮಸಿ ಬಳಿಯಲು ಮತ್ತು ಜಾತಿ ನೆಲೆಯಲ್ಲಿ ಗಲಭೆಯನ್ನು ಪ್ರಚೋದಿಸಲು ಅಂತಾರಾಷ್ಟ್ರೀಯ ಸಂಚು ನಡೆದಿದೆ ಎಂಬುದಾಗಿ ಉತ್ತರ ಪ್ರದೇಶ ಪೊಲೀಸರು ಪದೇ ಪದೇ ಮಾಡುತ್ತಿರುವ ಆರೋಪಕ್ಕೆ ಜಾರಿ ನಿರ್ದೇಶನಾಲಯದ ಹೇಳಿಕೆ ವ್ಯತಿರಿಕ್ತವಾಗಿದೆ.

ಪಿಎಫ್ ಕೇರಳ ಮೂಲದ ವಿವಾದಾತ್ಮಕ ಸಂಘಟನೆಯಾಗಿದ್ದು, ವಿವಿಧ ಭಯೋತ್ಪಾದಕ ಚಟುವಟಿಕೆಗಳಲ್ಲಿ ಭಾಗಿಯಾಗಿದೆ ಎಂದು ಆಗಾಗ್ಗೆ ಆರೋಪಿಸಲಾಗುತ್ತಿದೆ. ಸಿಎಎ ವಿರೋಧಿ ಪ್ರತಿಭಟನೆಯ ಸಮಯದಲ್ಲಿ ಸಂಘಟನೆಯು ಉದ್ವಿಗ್ನತೆಯನ್ನು ಸೃಷ್ಟಿಸಿದೆ ಎಂಬ ಆರೋಪವೂ ಅದರ ಮೇಲಿದೆ.

ಉತ್ತರ ಪ್ರದೇಶದ ಡಿಜಿಪಿ ಬ್ರಿಜ್ ಲಾಲ್ ಇತ್ತೀಚೆಗೆ ಭೀಮ್ ಆರ್ಮಿ ಮತ್ತು ಇತರ ಸಂಘಟನೆಗಳು ಹತ್ರಾಸ್ ಸಂತ್ರಸ್ತೆಯ ಕುಟುಂಬವನ್ನು ದಾರಿ ತಪ್ಪಿಸಲು ಪ್ರಯತ್ನಿಸುತ್ತಿವೆ ಎಂದು ಪ್ರತಿಪಾದಿಸಿದ್ದರು.

ಹತ್ರಾಸ್ನಲ್ಲಿ ಸಾಮೂಹಿಕ ಅತ್ಯಾಚಾರ ಮತ್ತು ಯುವತಿಯ ಸಾವಿನ ನಂತರ, ನಾಗರಿಕರು ಸೇರಿದಂತೆ ವಿವಿಧ ಸಾಮಾಜಿಕ ಮತ್ತು ರಾಜಕೀಯ ಸಂಸ್ಥೆಗಳು ನ್ಯಾಯಯುತ ವಿಚಾರಣೆ ಮತ್ತು ನ್ಯಾಯಕ್ಕಾಗಿ ಉತ್ತರ ಪ್ರದೇಶ ಸರ್ಕಾರದ ಮೇಲೆ ಒತ್ತಡ ಹೇರಿವೆ. ಸಂತ್ರಸ್ತೆಯ ಶವದ ಅಂತ್ಯಕ್ರಿಯೆಯನ್ನು ಕುಟುಂಬದ ಗೈರು ಹಾಜರಿಯಲ್ಲಿ ತಡರಾತ್ರಿ ನಡೆಸಿದ್ದಕ್ಕಾಗಿಯೂ ಪೊಲೀಸರು ತೀವ್ರ ಟೀಕೆಗೆ ಗುರಿಯಾಗಿದ್ದಾರೆ.

ಸಂತ್ರಸ್ತೆಯ ಕುಟುಂಬ ಸದಸ್ಯರನ್ನು ಭೇಟಿಯಾಗುವಲ್ಲಿ ಕಾಂಗ್ರೆಸ್, ಮತ್ತು ಭೀಮ್ ಆರ್ಮಿ ಸೇರಿದಂತೆ ವಿವಿಧ ರಾಜಕೀಯ ಪಕ್ಷಗಳು ಆಡಳಿತಾತ್ಮಕ ಅಡೆತಡೆಗಳನ್ನು ಎದುರಿಸಿದ ನಂತರ, ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರ ಕಾರ್ಯತಂತ್ರದಲ್ಲಿ ಬದಲಾವಣೆ ಕಂಡುಬಂದಿತ್ತು.

ತಮ್ಮ ಸರ್ಕಾರಕ್ಕೆ ಮಸಿ ಬಳಿಯಲು ಮತ್ತು ರಾಜ್ಯದಲ್ಲಿ ಗಲಭೆಗಳನ್ನು ಪ್ರಚೋದಿಸಲು ಸಂಚು ನಡೆದಿದ್ದು, ಅದಕ್ಕಾಗಿಯೇ ಪ್ರದರ್ಶನಗಳು ಮತ್ತು ಪ್ರಚಾರಗಳು ನಡೆಯುತ್ತಿವೆ ಎಂದು ಮುಖ್ಯಮಂತ್ರಿ ಅಕ್ಟೋಬರ್ ರಂದು ಆಪಾದಿಸಿದ್ದರು.

ಜಾತಿ ನೆಲೆಯಲ್ಲಿ ಸಂಘರ್ಷವನ್ನು ಪ್ರಚೋದಿಸಿದ ಪ್ರಯತ್ನಕ್ಕಾಗಿ "ಅಪರಿಚಿತ" ವ್ಯಕ್ತಿಗಳ ವಿರುದ್ಧ ಹತ್ರಾಸ್ ಪೊಲೀಸರು ಎಫ್ಐಆರ್ ದಾಖಲಿಸಿ, ದೇಶದ್ರೋಹ ಸೇರಿದಂತೆ ಗಂಭೀರ ಆರೋಪಗಳನ್ನು ಮಾಡಿದ್ದಾರೆ ಎಂದು ಅಧಿಕಾರಿಗಳು ಅಕ್ಟೋಬರ್ ರಂದು ಮಾಹಿತಿ ನೀಡಿದ್ದರು.

No comments:

Advertisement