Wednesday, November 11, 2020

ಬಿಹಾರ ಕಡೆಗೂ ಎನ್ ಡಿಎ ಗೆಲುವು: ಗೆದ್ದ ಸ್ಥಾನ 122

ಬಿಹಾರ ಕಡೆಗೂ  ಎನ್ ಡಿಎ ಗೆಲುವು: ಗೆದ್ದ ಸ್ಥಾನ 122 

ನವದೆಹಲಿ: ಕಟ್ಟು ನಿಟ್ಟಾದ ಕೋವಿಡ್ ಶಿಷ್ಟಾಚಾರದ ಪರಿಣಾಮವಾಗಿ ಕುತೂಹಲ ಕೆರಳಿಸಿರುವ 243 ಸದಸ್ಯ ಬಲದ ಬಿಹಾರ ವಿಧಾನಸಭೆಯ ಫಲಿತಾಂಶ 2020 ನವೆಂಬರ್ 11ರ ಮಂಗಳವಾರ ವಿಳಂಬಗೊಂಡು ಮಧ್ಯ ರಾತ್ರಿಯ ವೇಳೆಗೆ ಪ್ರಕಟಗೊಂಡಿದ್ದು, ಒಟ್ಟು 122 ಸ್ಥಾನಗಳ ‘ಮ್ಯಾಜಿಕ್’ ಸಂಖ್ಯೆಯನ್ನು ದಾಟುವ ಮೂಲಕ ರಾಷ್ಟ್ರೀಯ ಪ್ರಜಾತಾಂತ್ರಿಕ ಮೈತ್ರಿಕೂಟ (ಎನ್ ಡಿಎ) ಗೆಲುವು ಸಾಧಿಸಿದೆ.

ಗೆಲುವಿಗಾಗಿ ಪ್ರಧಾನಿ ನರೇಂದ್ರ ಮೋದಿ, ಬಿಜೆಪಿ ಅಧ್ಯಕ್ಷ ಜೆಪಿ ನಡ್ಡಾ, ಕೇಂದ್ರ ಸಚಿವ ಜೆಪಿ ನಡ್ಡಾ ಅವರು ಟ್ವೀಟ್ ಮೂಲಕ ಜನತೆಯನ್ನು ಅಭಿನಂದಿಸಿದರು.

ಚುನಾವಣಾ ಆಯೋಗದ ವೆಬ್ ಸೈಟ್ ಮಾಹಿತಿಯ ಪ್ರಕಾರ ಎನ್ ಡಿಎ ಅಂಗ ಪಕ್ಷಗಳಾದ ಬಿಜೆಪಿ 72, ಜೆಡಿ(ಯು) 42, ಹಿಂದುಸ್ಥಾನ ಅವಾಮ್ ಮೋರ್ಚಾ (ಸೆಕ್ಯುಲರ್) ಮತ್ತು ವಿಕಾಸಶೀಲ ಇನ್ಸಾನ್ ಪಾರ್ಟಿ ತಲಾ 4 (ಒಟ್ಟು 8) ಸ್ಥಾನಗಳಲ್ಲಿ ಗೆಲುವು/ ಮುನ್ನಡೆ ದಾಖಲಿಸಿವೆ.  ವಿರೋಧೀ ಮಹಾ ಘಟಬಂಧನ್ ನ ನೇತ್ವತ್ವ ವಹಿಸಿರುವ  ರಾಷ್ಟ್ರೀಯ ಜನತಾದಳ (ಆರ್ ಜೆಡಿ) 77 ಸ್ಥಾನ, ಕಾಂಗ್ರೆಸ್ 19 ಸ್ಥಾನಗಳಲ್ಲಿ,  ಕಮ್ಯೂನಿಸ್ಟ್ ಪಕ್ಷಗಳು ಒಟ್ಟು 14 ಸ್ಥಾನಗಳಲ್ಲಿ ವಿಜಯ/ ಮುನ್ನಡೆ ದಾಖಲಿಸಿವೆ.  

ಇದಕ್ಕೆ ಮುನ್ನ  ಬಿಜೆಪಿ ನೇತೃತ್ವದ ರಾಷ್ಟ್ರೀಯ ಪ್ರಜಾತಾಂತ್ರಿಕ ಮೈತ್ರಿಕೂಟ (ಎನ್ಡಿಎ) ಮತ್ತು ತೇಜಸ್ವಿ ಯಾದವ್ ಅವರ ರಾಷ್ಟ್ರೀಯ ಜನತಾದಳ (ಆರ್ಜೆಡಿ) ಮಧ್ಯೆ ತೀವ್ರ ಹಣಾಹಣಿ ನಡೆಯಿತು.

ಮತಗಳ ಎಣಿಕೆಯ ಪ್ರವೃತ್ತಿಗಳ ಪ್ರಕಾರ ಬೆಳಗ್ಗಿನಿಂದಲೇ ಬಿಜೆಪಿ ಮತ್ತು ಆರ್ಜೆಡಿ ಮಧ್ಯೆ ತೀವ್ರ ಹಣಾಹಣಿ ನಡೆದಿದ್ದು, ಒಮ್ಮೆ ಬಿಜೆಪಿ ಏಕೈಕ ದೊಡ್ಡ ಪಕ್ಷವಾಗುವತ್ತ ಮುನ್ನಡೆದರೆ, ಮಗುದೊಮ್ಮೆ ಆರ್ಜೆಡಿ ಅದನ್ನು ಹಿಂದಕ್ಕೆ ಹಾಕಿ ಏಕೈಕ ದೊಡ್ಡ ಪಕ್ಷವಾಗುವತ್ತ ಮುನ್ನಡೆದಿತ್ತು. ವರದಿ ಸಿದ್ಧವಾಗುವ ವೇಳೆಗೆ ಆರ್ಜೆಡಿ ೭೩ ಸ್ಥಾನಗಳಲ್ಲಿ ಮುಂದಿದ್ದರೆ, ಬಿಜೆಪಿ ೭೨ ಸ್ಥಾನಗಳಲ್ಲಿ ಮುಂದಿತ್ತು.

ಸ್ಥಾನ ಹೊಂದಾಣಿಕೆಯ ವೇಳೆಯಲ್ಲಿ ಮುಖ್ಯಮಂತ್ರಿ ನಿತೀಶ ಕುಮಾರ್ ವಿರುದ್ಧ ಸಿಟ್ಟಿಗೆದ್ದು ಎನ್ಡಿಎಯಿಂದ ಹೊರನಡೆದ ಚಿರಾಗ್ ಪಾಸ್ವಾನ್ ಅವರ ಎಲ್ಜೆಪಿ ಗಣನೀಯ ಸಾಧನೆ ಮಾಡುವಲ್ಲಿ ವಿಫಲಗೊಂಡರೂ, ನಿತೀಶ ಕುಮಾರ್ ಅವರಬಾಣವನ್ನು ಮೊಂಡಾಗಿಸುವಲ್ಲಿ ಸಮರ್ಥವಾಗಿದೆ. ಪರಿಣಾಮವಾಗಿ ವರದಿ ಸಿದ್ಧವಾಗುವ ವೇಳೆಯಲ್ಲಿ ಜನತಾದಳ (ಯು) ಕೇವಲ ೪೪ ಸ್ಥಾನಗಳಲ್ಲಿ ಮಾತ್ರವೇ ಮುನ್ನಡೆ ಸಾಧಿಸುವಲ್ಲಿ ಸಮರ್ಥವಾಯಿತು.

ಮಹಾ ಘಟಬಂಧನದ ಇನ್ನೊಂದು ಮುಖ್ಯ ಅಂಗಪಕ್ಷವಾದ ಕಾಂಗ್ರೆಸ್ ಕೇವಲ ೨೧ ಸ್ಥಾನಗಳಲ್ಲಿ ಮುನ್ನಡೆಯಲ್ಲಿದ್ದರೆ ಇತರರು ೩೩ ಸ್ಥಾನಗಳಲ್ಲಿ ಮುಂದಿದ್ದರು.

ಪ್ರಧಾನಿ ನರೇಂದ್ರ ಮೋದಿ ಅವರ ಪ್ರಚಾರದ ಪರಿಣಾಮವೋ ಎಂಬಂತೆ ಅವರು ಪ್ರಚಾರ ಮಾಡಿದ್ದ ಕಡೆಗಳಲ್ಲಿ ಬಿಜೆಪಿ ಹಾಗೂ ಮಿತ್ರ ಪಕ್ಷವಾದ ಜೆಡಿಯು ಮುನ್ನಡೆ ಸಾಧಿಸಿದವು. ಬಿಜೆಪಿಯಂತೂ ನಿರೀಕ್ಷೆ ಮೀರಿದ ಮುನ್ನಡೆ ಗಳಿಸಿತು.

ನಿತೀಶ್ ನಿವಾಸಕ್ಕೆ ಬಿಜೆಪಿ ಪ್ರಮುಖರು:

ಕೋವಿಡ್ ಶಿಷ್ಟಾಚಾರದ ಕಾರಣ ಮತಗಳ ಎಣಿಕೆ ವಿಳಂಬವಾಗಿರುವುದರಿಂದ, ಬಿಹಾರದಲ್ಲಿ ಇನ್ನೂ ವಿಜೇತರು ಯಾರು ಎಂಬುದು ಸ್ಪಷ್ಟವಾಗಿಲ್ಲ. ಆದರೂ, ಬಿಜೆಪಿಯ ರಾಜ್ಯದ ಹಿರಿಯ ನಾಯಕರಾದ ಸುಶೀಲ್ ಕುಮಾರ್ ಮೋದಿ ಮತ್ತು ಭೂಪೇಂದ್ರ ಯಾದವ್ ಅವರು ಪಾಟ್ನಾzಲ್ಲಿನ ಹಾಲಿ ಮುಖ್ಯಮಂತ್ರಿ ಮತ್ತು ಜೆಡಿಯು ಅಧ್ಯಕ್ಷ ನಿತೀಶ್ ಕುಮಾರ್ ಅವರ ನಿವಾಸಕ್ಕೆ ತಲುಪಿದ್ದಾರೆ.

ಮೂಲಗಳ ಪ್ರಕಾರ, ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು ನಿತೀಶ ಕುಮಾರ್ ಅವರಿಗೆ ದೂರವಾಣಿ ಕರೆ ಮಾಡಿ ಪರಿಸ್ಥಿತಿ ಬಗ್ಗೆ ಚರ್ಚಿಸಿದ್ದಾರೆ ಎನ್ನಲಾಗಿದೆ. ಉಭಯ ನಾಯಕರು ಮತದಾನ ಫಲಿತಾಂಶಗಳು ಮತ್ತು ಪ್ರವೃತ್ತಿಗಳ ಬಗ್ಗೆ ಮಾತನಾಡಿದರು ಎಂದು ವರದಿಗಳು ಹೇಳಿವೆ.

ಬಿಜೆಪಿಯ ಆಜ್ಞೆಯ ಮೇರೆಗೆ ಕಣಕ್ಕಿಳಿದ ಎಐಐಎಂಐನ ಅಸಾದುದ್ದೀನ್ ಒವೈಸಿ ತನ್ನ ಮತ ಪಾಲನ್ನು ತಿನ್ನುತ್ತಿದೆ ಎಂದು ಕಾಂಗ್ರೆಸ್ ದೂಷಿಸಿದೆ.

೧೫ ವರ್ಷಗಳ ಕಾಲದಿಂದ ರಾಜ್ಯವನ್ನು ಆಳುತ್ತಿರುವ ನಿತೀಶ ಕುಮಾರ್ ಸರ್ಕಾರದ ಭವಿಷ್ಯವನ್ನು ನಿರ್ಧರಿಸಲು ೨೪೩ ವಿಧಾನಸಭಾ ಕ್ಷೇತ್ರಗಳಲ್ಲಿ ಮತ ಎಣಿಕೆ ನಡೆಯುತ್ತಿದೆ. ಬಿಹಾರ ರಾಜ್ಯ ಚುನಾವಣಾ ಆಯೋಗದ ಪ್ರಕಾರ, ಪೂರ್ವ ಚಂಪಾರನ್, ಸಿವಾನ್, ಬೆಗುಸರಾಯ್ ಮತ್ತು ಗಯಾದಲ್ಲಿ ತಲಾ ಮೂರು ಎಣಿಕೆ ಕೇಂದ್ರಗಳು ಮತ್ತು ನಳಂದ, ಬಂಕಾ, ಪೂರ್ಣಿಯಾ, ಭಾಗಲ್ಪುರ, ದರ್ಭಂಗಾ, ಗೋಪಾಲ್ಗಂಜ್ ಮತ್ತು ಸಹರ್ಸಾದಲ್ಲಿ ತಲಾ ಎರಡು ಎಣಿಕೆ ಕೇಂದ್ರಗಳನ್ನು ಸ್ಥಾಪಿಸಲಾಗಿದೆ.

ಬಿಜೆಪಿಯ ಅಭ್ಯರ್ಥಿಗಳು ಹಾಜಿಪುರ, ದರ್ಭಾಂಗ ಮತ್ತು ಕೆಯೋಟಿ ಕ್ಷೇತ್ರಗಳಲ್ಲಿ ಜಯ ಗಳಿಸುವ ಮೂಲಕ ಬಿಹಾರ ವಿಧಾನಸಭೆಯ ಮೊದಲ ವಿಜಯವನ್ನು ದಾಖಲಿಸಿದರು. ಬಿಜೆಪಿಯ ಸಂಜಯ್ ಸರಯೋಗಿ ದರ್ಭಾಂಗ ಕ್ಷೇತ್ರವನ್ನು ಗೆದ್ದುಕೊಂಡಿದ್ದಾರೆ. ಅವರು ಆರ್ ಜೆಡಿಯ ಅಮರನಾಥ ಗಮಿ ಅವರನ್ನು ೧೦,೦೦೦  ಮತಗಳ ಅಂತರದಲ್ಲಿ ಸೋಲಿಸಿದರು. ಬಿಜೆಪಿಯ ಮುರಾರಿ ಮೋಹನ್ ಝಾ ಅವರು ಆರ್ ಜೆಡಿಯ ಅಬ್ದುಲ್ ಬರಿ ಸಿದ್ದಿಕಿ ಅವರನ್ನು ೮೦೦೦ ಮತಗಳ ಅಂತರದಲ್ಲಿ ಸೋಲಿಸಿ ಕೆಯೋಟಿ ಸ್ಥಾನವನ್ನು ಗೆದ್ದುಕೊಂಡರು. ಸಿದ್ದಿಕಿ ಅವರು ೨೦೧೫ರಲ್ಲಿ  ಆರ್ ಜೆಡಿ-ಜೆಡಿ(ಯು) ಸರ್ಕಾರದಲ್ಲಿ ವಿತ್ತ ಸಚಿವರಾಗಿದ್ದರು.

  ಮಧ್ಯೆ, ತೇಜ್ ಪ್ರತಾಪ್ ಯಾದವ್ ಹಸನ್ಪುರ ಸ್ಥಾನವನ್ನು ಗೆದ್ದಿದ್ದಾರೆ. ತೇಜಸ್ವೀ ಯಾದವ್ ರಘೋಪುರ್ ಕ್ಷೇತ್ರದಲ್ಲಿ ಮುನ್ನಡೆಯಲ್ಲಿದ್ದಾರೆ ಎಂದು ವರದಿಗಳು ಹೇಳಿವೆ. ಎಐಎಂಐಎಂ ಸ್ಥಾನಗಳನ್ನು ಗೆದ್ದಿದೆ.

ಬಿಜೆಪಿಯು ಪಾಟ್ನಾ ಸಾಹಿಬ್ ಕ್ಷೇತ್ರವನ್ನು ಗೆದ್ದುಕೊಂಡಿದೆ.

ಇದುವರೆಗೆ ಶೇಕಡಾ ೬೦ರಷ್ಟು ಮತಗಳನ್ನು ಎಣಿಸಲಾಗಿದ್ದು, ಮತಗಳ ಎಣಿಕೆಯು ತಡರಾತ್ರಿಯವರೆಗೂ ಮುಂದುವರೆಯುವ ನಿರೀಕ್ಷೆ ಇದೆ ಎಂದು ವರದಿಗಳು ಹೇಳಿದೆ.

ಮಹಾಘಟ ಬಂಧನ್ ಸರ್ಕಾರ ರಚಿಸುವುದು ಶೇಕಡಾ ೨೦೦ರಷ್ಟು ಖಚಿತ ಎಂದು ಆರ್ಜೆಡಿ ಪ್ರತಿಪಾದಿಸಿದೆ.

No comments:

Advertisement