My Blog List

Saturday, November 28, 2020

‘ಅಕ್ರಮ’ ಮತಾಂತರ ನಿಷೇಧ: ಉ.ಪ್ರ.ಸುಗ್ರೀವಾಜ್ಞೆಗೆ ರಾಜ್ಯಪಾಲರ ಅಂಕಿತ

 ‘ಅಕ್ರಮ’ ಮತಾಂತರ ನಿಷೇಧ: ಉ.ಪ್ರ.ಸುಗ್ರೀವಾಜ್ಞೆಗೆ ರಾಜ್ಯಪಾಲರ ಅಂಕಿತ

ಲಕ್ನೋ: ಬಲವಂತದ ಅಥವಾ "ಅಪ್ರಾಮಾಣಿಕ" ಧಾರ್ಮಿಕ ಮತಾಂತರ ನಿಗ್ರಹ ಸುಗ್ರೀವಾಜ್ಞೆಗೆ ಉತ್ತರ ಪ್ರದೇಶದ ರಾಜ್ಯಪಾಲರಾದ ಆನಂದಿಬೆನ್ ಪಟೇಲ್  2020  ನವೆಂಬರ್ 28ರ ಶನಿವಾರ ಒಪ್ಪಿಗೆ ನೀಡಿದ್ದಾರೆ ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ಉತ್ತರಪ್ರದೇಶದ ಕಾನೂನುಬಾಹಿರ ಧಾರ್ಮಿಕ ಮತಾಂತರದ ನಿಷೇಧ, ೨೦೨೦ ಸುಗ್ರೀವಾಜ್ಞೆಗೆ ರಾಜ್ಯಪಾಲರು ಅನುಮೋದನೆ ನೀಡಿದ್ದಾರೆ ಎಂದು ಅಧಿಕಾರಿ ನುಡಿದರು.

ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರ ಅಧ್ಯಕ್ಷತೆಯ ರಾಜ್ಯ ಸಚಿವ ಸಂಪುಟವು ವಾರದ ಆರಂಭದಲ್ಲಿ ವಿವಾಹದ ಸಲುವಾಗಿ ಸೇರಿದಂತೆ ಬಲವಂತದ ಅಥವಾ "ಅಪ್ರಾಮಾಣಿಕ" ಧಾರ್ಮಿಕ ಮತಾಂತರಗಳನ್ನು ತಡೆಯುವ ಕರಡು ಸುಗ್ರೀವಾಜ್ಞೆಗೆ ಅನುಮೋದನೆ ನೀಡಿತ್ತು,

ಸುಗ್ರೀವಾಜ್ಞೆಯ ಪ್ರಕಾರ ಇದನ್ನು ಉಲ್ಲಂಘಿಸುವವರನ್ನು ೧೦ ವರ್ಷಗಳವರೆಗೆ ಜೈಲಿನಲ್ಲಿ ಇರಿಸಬಹುದು., ಕೇವಲ ಮದುವೆಯ ಉದ್ದೇಶಕ್ಕಾಗಿ ಮಹಿಳೆಯ ಮತಾಂತರವಾಗಿದ್ದರೆ, ಅಂತಹ ಮದುವೆಯನ್ನು ನಿಷ್ಫಲ ಮತ್ತು ಅನೂರ್ಜಿತವೆಂದು ಘೋಷಿಸಲಾಗುತ್ತದೆ ಮತ್ತು ಮದುವೆಯ ನಂತರ ತಮ್ಮ ಧರ್ಮವನ್ನು ಬದಲಾಯಿಸಲು ಬಯಸುವವರು ಜಿಲ್ಲಾಧಿಕಾರಿಗೆ ಅರ್ಜಿ ಸಲ್ಲಿಸಬೇಕಾಗುತ್ತದೆ.

ಅಲಹಾಬಾದ್ ಹೈಕೋರ್ಟ್ ಪ್ರಮುಖ ತೀರ್ಪಿನಲ್ಲಿ ಇಬ್ಬರು ವಯಸ್ಕರಿಗೆ ತಮ್ಮ ಜೀವನ ಸಂಗಾತಿಯನ್ನು ಆಯ್ಕೆ ಮಾಡುವ ಹಕ್ಕಿದೆ ಎಂದು ಹೇಳಿದ ನಂತರ ಕ್ರಮ ಕೈಗೊಳ್ಳಲಾಗಿದೆ. ಇಬ್ಬರು ವಯಸ್ಕರು ಒಂದೇ ಅಥವಾ ವಿರುದ್ಧ ಲಿಂಗದವರಾಗಿದ್ದರೂ ಒಟ್ಟಿಗೆ ವಾಸಿಸಲು ಕಾನೂನು ಅನುಮತಿ ನೀಡುತ್ತದೆ ಎಂದು ನ್ಯಾಯಾಲಯ ಹೇಳಿದೆ. ಯಾವುದೇ ವ್ಯಕ್ತಿ ಅಥವಾ ಕುಟುಂಬ ಅವರ ಶಾಂತಿಯುತ ಜೀವನದಲ್ಲಿ ಹಸ್ತಕ್ಷೇಪ ಮಾಡಲು ಸಾಧ್ಯವಿಲ್ಲ ಎಂದು ನ್ಯಾಯಾಲಯ ಸ್ಪಷ್ಟಪಡಿಸಿದೆ. ಇಬ್ಬರು ವಯಸ್ಕರ ಸಂಬಂಧವನ್ನು ರಾಜ್ಯವು ಆಕ್ಷೇಪಿಸಲು ಸಾಧ್ಯವಿಲ್ಲ ಎಂದೂ ನ್ಯಾಯಾಲಯ ಹೇಳಿದೆ.

ಇದಕ್ಕೆ ಮುನ್ನ ಉತ್ತರಪ್ರದೇಶ ಸರ್ಕಾರವು ವಿವಾಹದ ಸಲುವಾಗಿ ಧಾರ್ಮಿಕ ಮತಾಂತರವನ್ನು ನಿಭಾಯಿಸಲು ಕಠಿಣ ಕಾನೂನಿನ ಕರಡನ್ನು ಅಂಗೀಕರಿಸಿತ್ತು. ಮತಾಂತರಕ್ಕಾಗಿ ನಡೆಯುವ ಮದುವೆಗಳನ್ನು ಬಿಜೆಪಿ ನಾಯಕರು "ಲವ್ ಜಿಹಾದ್" ಎಂದು ಬಣ್ಣಿಸುತ್ತಾರೆ.

ಇತ್ತೀಚಿನ ವಾರಗಳಲ್ಲಿ, ಬಿಜೆಪಿ ಆಡಳಿತದ ರಾಜ್ಯಗಳಾದ ಉತ್ತರ ಪ್ರದೇಶ, ಹರಿಯಾಣ ಮತ್ತು ಮಧ್ಯಪ್ರದೇಶಗಳು ಕೂಡಾ ವಿವಾಹದ ಸೋಗಿನಲ್ಲಿ ಹಿಂದೂ ಮಹಿಳೆಯರನ್ನು ಇಸ್ಲಾಮಿಗೆ ಪರಿವರ್ತಿಸುವ ಆಪಾದಿತ ಪ್ರಯತ್ನಗಳೊಂದಿಗೆ ವ್ಯವಹರಿಸಲು ಕಾನೂನುಗಳನ್ನು ರೂಪಿಸುವ ಯೋಜನೆಗಳನ್ನು ಬಹಿರಂಗಪಡಿಸಿವೆ.

"ಉತ್ತರ ಪ್ರದೇಶ ಸಚಿವ ಸಂಪುಟವು ಕಾನೂನುಬಾಹಿರ ಧಾರ್ಮಿಕ ಮತಾಂತರಗಳ ವಿರುದ್ಧ ಸುಗ್ರೀವಾಜ್ಞೆಯನ್ನು ತರಲು ನಿರ್ಧರಿಸಿದೆ" ಎಂದು ರಾಜ್ಯ ಸಂಪುಟ ಸಚಿವ ಸಿದ್ಧಾರ್ಥನಾಥ್ ನಾಥ್ ಸಿಂಗ್ ಹೇಳಿದ್ದರು.

"ವಂಚನೆ, ಸುಳ್ಳು, ಬಲ ಮತ್ತು ಅಪ್ರಾಮಾಣಿಕತೆಯನ್ನು ಬಳಸಿಕೊಂಡು ಧಾರ್ಮಿಕ ಮತಾಂತರಗಳನ್ನು ಮಾಡುವ ವಿಧಾನವು ಹೃದ್ರಾವಕವಾಗಿದೆ, ಮತ್ತು ಇದನ್ನು ತಡೆಯುವ ನಿಟ್ಟಿನಲ್ಲಿ ಕಾನೂನನ್ನು ಹೊಂದಿರುವುದು ಅಗತ್ಯವಾಗಿತ್ತುಎಂದು ಅವರು ಹೇಳಿದ್ದರು.

ಲಕ್ನೋದಲ್ಲಿ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರ ಅಧ್ಯಕ್ಷತೆಯಲ್ಲಿ ನಡೆದ ರಾಜ್ಯ ಸಚಿವ ಸಂಪುಟ ಸಭೆಯಲ್ಲಿ ಸುಗ್ರೀವಾಜ್ಞೆಗೆ ಅನುಮೋದನೆ ನೀಡಲಾಗಿತ್ತು.

No comments:

Advertisement