My Blog List

Saturday, December 19, 2020

ಸುವೇಂದು ಅಧಿಕಾರಿ ಬಿಜೆಪಿಗೆ

 ಸುವೇಂದು ಅಧಿಕಾರಿ ಬಿಜೆಪಿಗೆ

ಕೋಲ್ಕತ: ಅಖಿಲ ಭಾರತ ತೃಣಮೂಲ ಕಾಂಗ್ರೆಸ್ (ಎಐಟಿಎಂಸಿ) ಬಂಡಾಯ ನಾಯಕ ಸುವೇಂದು ಅಧಿಕಾರಿ ಅವರು 2020 ಡಿಸೆಂಬರ್ 19ರ ಶನಿವಾರ ಕೇಂದ್ರ ಸಚಿವ ಅಮಿತ್ ಶಾ ಅವರ ಸಮ್ಮುಖದಲ್ಲಿ ಭಾರತೀಯ ಜನತಾ ಪಕ್ಷಕ್ಕೆ (ಬಿಜೆಪಿ) ಸೇರ್ಪಡೆಯಾದರು.

ಅಮಿತ್ ಶಾ ಅವರ ನಡೆಸಿದ ಮಿಡ್ನಾಪುರ ರ್ಯಾಲಿಯ ಸಂದರ್ಭದಲ್ಲಿ ಅಧಿಕಾರಿ ಮತ್ತು ಇತರ ಹಲವರು ಬಿಜೆಪಿಯನ್ನು ಸೇರಿದರು.

ಪಕ್ಷವು ಭ್ರಷ್ಟಗೊಂಡಿದೆ ಮತ್ತು ಮತ್ತು ಕೊಳೆತು ನಾರುತ್ತಿದೆ ಎಂದು ಆರೋಪಿಸಿ ಅಧಿಕಾರಿಯವರು ತೃಣಮೂಲ  ಕಾಂಗ್ರೆಸ್ ತೊರೆದರು.

ಕೇಂದ್ರ ಸಚಿವ ಅಮಿತ್ ಶಾ ಅವರೊಂದಿಗೆ ಬಿಜೆಪಿ ಬಂಗಾಳ ಮುಖ್ಯಸ್ಥ ದಿಲೀಪ್ ಘೋಷ್, ನಾಯಕ ಮುಕುಲ್ ರಾಯ್ ಮತ್ತು ಹಿರಿಯ ನಾಯಕ ಕೈಲಾಶ್ ವಿಜಯವರ್ಗಿಯ ಉಪಸ್ಥಿತರಿದ್ದರು.

ಬಿಜೆಪಿ ಸೇರ್ಪಡೆ ಸಮಾರಂಭದಲ್ಲಿ ಪಕ್ಷವನ್ನು ಸೇರಿದ ಬಳಿಕ ಮಾತನಾಡಿದ ಅಧಿಕಾರಿ, ’ದೆಹಲಿಯನ್ನು ಯಾವ ಸರ್ಕಾರ ಆಳುತ್ತಿದೆಯೋ ಅದೇ ಸರ್ಕಾರವು ಬಂಗಾಳವನ್ನು ಆಳದಿದ್ದರೆ, ಅದರಿಂದ ರಾಜ್ಯದ ಆರ್ಥಿಕ ಭವಿಷ್ಯಕ್ಕೆ ಧಕ್ಕೆ ಉಂಟಾಗುತ್ತದೆ ಎಂದು ಹೇಳಿದರು.

ಭಾರತೀಯ ಜನತಾ ಪಕ್ಷದ ವಿರುದ್ಧದ ವಿರೋಧದ ಬಗ್ಗೆ ಅಧಿಕಾರಿ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿಯವರನ್ನು ಪ್ರಶ್ನಿಸಿದರು ಮತ್ತು ಅಟಲ್ ಬಿಹಾರಿ ವಾಜಪೇಯಿ ಪ್ರಧಾನಿಯಾಗಿದ್ದಾಗ ಅವರು ಎನ್ಡಿಎ ನೇತೃತ್ವದ ಸರ್ಕಾರದ ಪಾಲುದಾರರಾಗಿದ್ದರು ಎಂದು ನೆನಪಿಸಿದರು.

ಉತ್ತರ ಪ್ರದೇಶದ ಆರೋಗ್ಯ ಸಚಿವ ಸಿದ್ಧಾರ್ಥನಾಥ ಸಿನ್ಹ ಅವರು ೨೦೧೪ ರಲ್ಲಿ ದೆಹಲಿಯಲ್ಲಿ ಅಮಿತ್ ಶಾ ಅವರನ್ನು ಪರಿಚಯಿಸಿದರು ಎಂದು ಅವರು ನೆನಪಿಸಿಕೊಂಡರು. ಹಲವಾರು ಬಿಜೆಪಿ ನಾಯಕರನ್ನು ತಿಳಿದಿದ್ದರೂ ಅವರಲ್ಲಿ ಒಬ್ಬರೂ ಸಹ ಅವರನ್ನು ಪಕ್ಷ ಬದಲಿಸಲು ಕೇಳಲಿಲ್ಲ ಎಂದು ಅವರು ಗಮನಸೆಳೆದರು.

ನಾನು ಕೋವಿಡ್ -೧೯ರಿಂದಾಗಿ ಅನಾರೋಗ್ಯದಿಂದ ಬಳಲುತ್ತಿದ್ದಾಗ, ನಾನು ೨೧ ವರ್ಷಗಳ ಕಾಲ ಕೆಲಸ ಮಾಡಿದ ಪಕ್ಷಕ್ಕೆ (ಟಿಎಂಸಿ) ನಾನು ಹೇಗಿದ್ದೇನೆ ಎಂದು ನನ್ನನ್ನು ಕೇಳುವ ಅಗತ್ಯ ಬರಲಿಲ್ಲ, ಆದರೆ ನನ್ನ ಆರೋಗ್ಯದ ಬಗ್ಗೆ ವಿಚಾರಿಸುವ ಅವಶ್ಯಕತೆ ಅಮಿತ್ ಶಾ ಅವರಿಗೆ ಮಾತ್ರ ಇತ್ತು ಎಂದು ಅಧಿಕಾರಿ ಮಮತಾಗೆ ಚುಚ್ಚಿದರು.

ತೃಣಮೂಲದಲ್ಲಿ ಅಧಿಕಾರ ವ್ಯವಸ್ಥೆಯನ್ನು ವಿರೋಧಿಸಲು ಯಾರು ಧೈರ್ಯ ಮಾಡುತ್ತಾರೋ ಅವರು ಮುಖ್ಯಮಂತ್ರಿಯ ಕೋಪಕ್ಕೆ ಗುರಿಯಾಗುತ್ತಾರೆ ಎಂದೂ ಬಂಡಾಯ ನಾಯಕ ಉಲ್ಲೇಖಿಸಿದರು.

ಮುಕುಲ್ ರಾಯ್, ದಿಲೀಪ್ ಘೋಷ್ ಮತ್ತು ಅರ್ಜುನ್ ಸಿಂಗ್ ಅವರಂತಹ ಜನರು ಸುಳ್ಳು ಪ್ರಕರಣಗಳ ಅಡಿಯಲ್ಲಿ ಬಂಧನಕ್ಕೆ ಒಳಗಾಗಿದ್ದಾರೆ ಏಕೆಂದರೆ ಅವರು ಬ್ಯಾನರ್ಜಿ ವಿರುದ್ಧ ಧ್ವನಿ ಎತ್ತಲು ಧೈರ್ಯ ಮಾಡಿದ್ದರು ಎಂದು ಅಧಿಕಾರಿ ಹೇಳಿದರು.

ಪೊಲೀಸರನ್ನು ತನ್ನ ಅಸ್ತ್ರವಾಗಿ ಬಳಸಿಕೊಂಡು ಬಿಜೆಪಿಯನ್ನು ಸೋಲಿಸಲು ಬ್ಯಾನರ್ಜಿ ಅವರಿಗೆ ಸಾಧ್ಯವಾಗುವುದಿಲ್ಲ. ಮುಂಬರುವ ಚುನಾವಣೆಯಲ್ಲಿ ತೃಣಮೂಲ ಕಾಂಗ್ರೆಸ್ ಬದಲಿಗೆ ಪಶ್ಚಿಮ ಬಂಗಾಳದಲ್ಲಿ ಬಿಜೆಪಿ ಸರ್ಕಾರ ರಚಿಸಲಿದೆ ಎಂದು ಅಧಿಕಾರಿ ನುಡಿದರು.

No comments:

Advertisement