ಗ್ರಾಹಕರ ಸುಖ-ದುಃಖ

My Blog List

Monday, January 22, 2024

ಬಾಲರಾಮನ ಪ್ರಾಣಪ್ರತಿಷ್ಠೆ, ವೇದಘೋಷ, ಸಂಭ್ರಮ ಸಡಗರ

 ಬಾಲರಾಮನ ಪ್ರಾಣಪ್ರತಿಷ್ಠೆ, ವೇದಘೋಷ, ಸಂಭ್ರಮ ಸಡಗರ

ಯೋಧ್ಯೆ: ವೇದಘೋಷ, ಭಕ್ತಿಗೀತೆಗಳು, ಭಜನೆ, ವಿವಿಧ್ಯ ವಾದ್ಯ ಸೇವೆಗಳ ಮಧ್ಯೆ ಅಯೋಧ್ಯೆಯಲ್ಲಿ ಶ್ರೀರಾಮ ಜನ್ಮಭೂಮಿ ತೀರ್ಥಕ್ಷೇತ್ರ ಟ್ರಸ್ಟ್‌ ನೂತನವಾಗಿ ನಿರ್ಮಿಸಿದ ಸುಂದರ ರಾಮ ಮಂದಿರದಲ್ಲಿ ರಾಮಲಲ್ಲಾ ಮೂರ್ತಿ ಪ್ರತಿಷ್ಠಾಪನೆಯು ಪ್ರಧಾನಿ ನರೇಂದ್ರ ಮೋದಿ ಅವರ ಯಜಮಾನಿಕೆಯಲ್ಲಿ 2024 ಜನವರಿ 22ರ ಸೋಮವಾರ ಮಧ್ಯಾಹ್ನ 12 ಗಂಟೆ ಬಳಿಕದ ಶುಭ ಮುಹೂರ್ತದಲ್ಲಿ ಸಡಗರೋತ್ಸಾಹದೊಂದಿಗೆ ನೆರವೇರಿತು.

ಇದರೊಂದಿಗೆ ಸುಮಾರು 500 ವರ್ಷಗಳ ಬಳಿಕ ಶ್ರೀ ರಾಮ ಚಂದ್ರನು ಮೂಲಸ್ಥಾನದಲ್ಲಿ ಬಾಲರಾಮನ (ರಾಮಲಲ್ಲಾ) ರೂಪದಲ್ಲಿ ಪುನರ್‌ ಪ್ರತಿಷ್ಠೆಗೊಂಡಿದ್ದಾನೆ. ಇದಕ್ಕೆ ಮುನ್ನ ವಿವಾದಿತ ಕಟ್ಟಡದಲ್ಲಿ ಪೂಜೆಗೊಳ್ಳುತ್ತಿದ್ದ ರಾಮ ಲಲ್ಲಾ ವಿಗ್ರಹಗಳನ್ನೂ ಮಂದಿರದಲ್ಲಿ ಪ್ರತಿಷ್ಠಾಪಿಸಲಾಗಿದೆ.

ಪ್ರಧಾನಿ ನರೇಂದ್ರ ಮೋದಿ ಅವರು ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್‌, ಉತ್ತರ ಪ್ರದೇಶದ ರಾಜ್ಯಪಾಲೆ ಆನಂದಿ ಬೆನ್‌, ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಸರಸಂಘ ಚಾಲಕ ಮೋಹನ್‌ ಭಾಗ್ವತ್‌, ರಾಮ ಜನ್ಮಭೂಮಿ ತೀರ್ಥ ಕ್ಷೇತ್ರ ಟ್ರಸ್ಟ್‌ ಪ್ರಮುಖರ ಸಮ್ಮುಖದಲ್ಲಿ ಬಾಲರಾಮನ ಪ್ರತಿಷ್ಠಾಪನೆಯ ವಿಧಿ ವಿಧಾನಗಳನ್ನು ನೆರವೇರಿಸಿದರು. ಮೂರ್ತಿಗೆ ಕಮಲದ ಹೂ, ಅಕ್ಷತೆ, ಕುಂಕುಮ ಇತ್ಯಾದಿಗಳನ್ನು ಅರ್ಪಿಸಿದರು. ಪ್ರಾಣ ಪ್ರತಿಷ್ಠಾಪನೆಯ ಬಳಿಕ ಮಂಗಳಾರತಿಯನ್ನೂ ಬೆಳಗಿದರು.

ಪ್ರಾಣಪ್ರತಿಷ್ಠೆಯ ಬಳಿಕ ಪ್ರಧಾನಿಯವರು ಅರ್ಚಕರಿಗೆ ವಸ್ತ್ರದಾನ ಮಾಡಿದರು.

ಪ್ರಾಣಪ್ರತಿಷ್ಠಾ ಸಮಾರಂಭದಲ್ಲಿ ಗರ್ಭಗುಡಿಯೊಳಗೆ ಪ್ರಧಾನಿ ಸೇರಿದಂತೆ ಐವರು ಗಣ್ಯರಿಗೆ ಮಾತ್ರ ಪ್ರವೇಶವಿತ್ತು. ಉಡುಪಿ ಪೇಜಾವರ ಮಠದ ವಿಶ್ವ ಪ್ರಸನ್ನ ತೀರ್ಥರು ಈ ಸಂದರ್ಭದಲ್ಲಿ ಹಾಜರಿದ್ದರು.

ನೂರಾರು ಮಂದಿ ಸಂತರು, ದೇಶ ವಿದೇಶಗಳಿಂದ ಆಗಮಿಸಿದ್ದ ಗಣ್ಯರು ಸಮಾರಂಭದಲ್ಲಿ ಪಾಲ್ಗೊಂಡಿದ್ದರು. ದೇವಾಲಯದ ಹೊರಭಾಗದಲ್ಲಿ ಸಹಸ್ರಾರು ಮಂದಿ ಭಕ್ತರು ನೆರೆದು ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು.

ಪ್ರಾಣಪ್ರತಿಷ್ಠಾ ಕಾರ್ಯಕ್ರಮದ ಬಳಿಕ ದೇವಾಲಯದ ಹೊರಭಾಗದಲ್ಲಿ ನಡೆದ ಸಭೆಯಲ್ಲಿ ಪ್ರಧಾನಿಯವರು ದೇವಾಲಯ ನಿರ್ಮಾಣಕ್ಕಾಗಿ ದುಡಿದ ಕಾರ್ಯಕ್ರಮರಿಗೆ ಗೌರವ ಸಲ್ಲಿಸಿದರು.

ಪ್ರಾಣಪ್ರತಿಷ್ಠೆಯ ಈ ಸಂಭ್ರಮದ ಕ್ಷಣ ವಿಶ್ವಾದ್ಯಂತ ಬೃಹತ್‌ ಪರದೆಗಳಲ್ಲಿ ಪ್ರಸಾರಗೊಂಡಿತು. ಕೋಟ್ಯಂತರ ಭಕ್ತರು ದೇವಾಲಯಗಳಲ್ಲಿ ನೆರೆದು ಈ ಅಪೂರ್ವ ಕ್ಷಣಗಳನ್ನು ಕಣ್ತುಂಬಿಗೊಂಡದ್ದಲ್ಲದೆ, ಪೂಜಾ ಕೈಂಕರ್ಯಗಳನ್ನು ಕೈಗೊಂಡರು.

ಬಾಲರಾಮನ ಪ್ರತಿಷ್ಠಾ ಸಮಾರಂಭದ ಕ್ಷಣಗಳ ಸಮೀಪ ನೋಟಕ್ಕಾಗಿ ಮೇಲಿನ ಚಿತ್ರಗಳನ್ನು ಕ್ಲಿಕ್ಕಿಸಿ.
ವಿಡಿಯೋ ನೋಡಲು ಇಲ್ಲಿ ಕ್ಲಿಕ್ಕಿಸಿ.

ಈ ಕೆಳಗಿನ ಸುದ್ದಿಗಳನ್ನೂ ಓದಿರಿ:

ಉಕ್ಕು ಇಲ್ಲ, ಕಬ್ಬಿಣ ಇಲ್ಲ, ವಾಸ್ತುಶಿಲ್ಪದ ಅಧ್ಬುತ ಈ ರಾಮ ಮಂದಿರ

No comments:

Advertisement