My Blog List

Thursday, August 6, 2009

ಸಮುದ್ರ ಮಥನ 33: ಧರ್ಮ ಸರ್ವವ್ಯಾಪಕ

ಸಮುದ್ರ ಮಥನ 33:

ಧರ್ಮ ಸರ್ವವ್ಯಾಪಕ

ದುರಂತವೇ ಸರಿ. ಇಂದು ನಮ್ಮಲ್ಲಿ ಧರ್ಮ ಶಬ್ದ ಸಂಕುಚಿತ ಅರ್ಥದಲ್ಲಿ ಬಳಕೆಯಾಗುತ್ತಿದೆ. ಪೂಜೆ-ಪುನಸ್ಕಾರ, ಆಚಾರ-ವಿಚಾರ, ಸಂಸ್ಕೃತಿ-ಸಂಪ್ರದಾಯ ಇವಿಷ್ಟನ್ನು ಒಳಗೊಂಡು ಧರ್ಮ ವ್ಯಾಪ್ತಿ ನಿಂತ ನೀರಾಗಿದೆ. ಇವೆಲ್ಲ ಸಾಧನಗಳ ವ್ಯಾಪ್ತಿಯಲ್ಲಿ ಬರುತ್ತವೆ ಎಂಬುದನ್ನು ಮರೆತಿದ್ದೇವೆ.

ಸ್ಥಿತಿ ವಿಶೇಷವೇ ಧರ್ಮ. ಅಂದರೆ ಕಣ್ಣಿಗೆ ನೋಡುವುದು, ಕಿವಿಗೆ ಕೇಳುವುದು, ಮೂಗಿಗೆ ಮೂಸುವುದು, ಸೂರ್ಯ-ಚಂದ್ರರು ಬೆಳಗುವುದು, ನಕ್ಷತ್ರಗಳು ಮಿನುಗುವುದು, ಭೂಮಿ ಸ್ಥಿರವಾಗಿ ನಿಂತಿರುವುದು, ಗಾಳಿ ಬೀಸುವುದು, ನದಿ ಹರಿಯುವುದು ಎಲ್ಲವೂ ಧರ್ಮ.

ಅಂದರೆ ಧರ್ಮ ನಮಗೆ ಮಾತ್ರವಲ್ಲ. ಉಳಿದೆಲ್ಲ ಪಶು, ಪಕ್ಷಿ, ಪ್ರಾಣಿ, ಕಲ್ಲು, ಬಂಡೆ, ಮಣ್ಣು ಹೀಗೆ ಎಲ್ಲದಕ್ಕೂ ಧರ್ಮದ ಚೌಕಟ್ಟು ಇದೆ. ಆ ಚೌಕಟ್ಟಿನಲ್ಲಿ ಪ್ರತಿಯೊಂದರ
ಸ್ಥಿತಿಯೂ ಅನನ್ಯವಾಗಿರುವುದೇ ವಿಶೇಷ. ಹಾಗಾಗಿ ಪ್ರತಿಯೊಂದಕ್ಕೂ ಭಿನ್ನಿಭಿನ್ನ ಕಾರ್ಯವ್ಯಾಪ್ತಿ. ಆ ವ್ಯಾಪ್ತಿಯಲ್ಲಿ ಪ್ರತಿಯೊಂದೂ ಒಂದು ಉನ್ನತದ ಸಾಧನೆಗಾಗಿ ತನ್ನದೇ ರೀತಿಯಲ್ಲಿ ತವಕಿಸುತ್ತಿರುತ್ತದೆ. ಆದ್ದರಿಂದ ಧರ್ಮದ ವ್ಯಾಪ್ತಿ ಇಷ್ಟು ಹೌದು, ಇಷ್ಟು ಅಲ್ಲ ಎಂದು ವಿಂಗಡಿಸಲು ಸಾಧ್ಯವಿಲ್ಲ.

ದುರಂತವೇ ಸರಿ. ಇಂದು ನಮ್ಮಲ್ಲಿ ಧರ್ಮ ಶಬ್ದ ಸಂಕುಚಿತ ಅರ್ಥದಲ್ಲಿ ಬಳಕೆಯಾಗುತ್ತಿದೆ. ಪೂಜೆ-ಪುನಸ್ಕಾರ, ಆಚಾರ-ವಿಚಾರ, ಸಂಸ್ಕೃತಿ-ಸಂಪ್ರದಾಯ ಇವಿಷ್ಟನ್ನು ಒಳಗೊಂಡು ಧರ್ಮ ವ್ಯಾಪ್ತಿ ನಿಂತ ನೀರಾಗಿದೆ. ಇವೆಲ್ಲ ಸಾಧನಗಳ ವ್ಯಾಪ್ತಿಯಲ್ಲಿ ಬರುತ್ತವೆ ಎಂಬುದನ್ನು ಮರೆತಿದ್ದೇವೆ. ಅಷ್ಟಾಗಿಯೂ ಇವಿಷ್ಟನ್ನು ಇಟ್ಟುಕೊಂಡರೆ ಎಲ್ಲವನ್ನೂ ಸಾಧಿಸಿದಂತೆ ಎಂದು ಬೀಗುತ್ತೇವೆ. ಒಂದು ವೇಳೆ ಧಕ್ಕೆಯಾದರೆ ಬಡಿದಾಡುತ್ತೇವೆ. ಬಡಿದಾಡುವ ಗಲಾಟೆಯಲ್ಲಿ ನಿಜವಾಗಿಯೂ ಧರ್ಮದಿಂದ ಸಾಧಿಸಬೇಕಾದದ್ದು ಏನನ್ನು ? ಗೊತ್ತಾಗುವುದೇ ಇಲ್ಲ.

ನಮ್ಮಂತೆಯೇ ಉಳಿದವೂ ಅಂದುಕೊಂಡರೆ ನಮ್ಮ ಬದುಕು ಸಾಧ್ಯವೇ ! ನಮ್ಮಂತೆಯೇ ಆಲೋಚಿಸುತ್ತ ಸೂರ್ಯ-ಚಂದ್ರರು ಬೆಳಗುವುದನ್ನೇ ಬಿಟ್ಟುಬಿಟ್ಟರೆ, ಮಳೆ ಬರುವುದೇ ನಿಂತು ಹೋದರೆ, ಬೆಂಕಿ ಬಿಸಿ ಮಾಡದೇ ಹೋದರೆ ಎಂಬುದರ ಬಗ್ಗೆಯೂ ಚಿಂತನೆ ಮಾಡಲೇಬೇಕು.

ಗಂಭೀರ ಚಿಂತನೆ ಆಗಿದ್ದೇ ಆದರೆ ನಮ್ಮ ಧರ್ಮ ಶಬ್ದ ಮತ್ತೆ ಅರಳುತ್ತದೆ. ಮನಸ್ಸಿಗೆ ವಾಸ್ತವದ ಅರಿವಾಗಿ ನಮ್ಮ ಜೀವ ಎಲ್ಲದರೊಂದಿಗೂ ಬೆಸೆದುಕೊಂಡು ಆತಂಕ ಮುಕ್ತವಾಗುತ್ತದೆ.

ಶ್ರೀಮಜ್ಜಗದ್ಗುರು ಶಂಕರಾಚಾರ್ಯ ಗೋಕರ್ಣ ಮಂಡಲಾಧೀಶ



No comments:

Advertisement