My Blog List

Saturday, December 21, 2019

ನಿಲ್ಲದ ಹಿಂಸಾತ್ಮಕ ಪ್ರತಿಭಟನೆ: ಉತ್ತರ ಪ್ರದೇಶದಲ್ಲಿ ೬ ಸಾವು

ನಿಲ್ಲದ ಹಿಂಸಾತ್ಮಕ ಪ್ರತಿಭಟನೆ: ಉತ್ತರ ಪ್ರದೇಶದಲ್ಲಿ ಸಾವು
ಇನ್ನಷ್ಟು ಪ್ರದೇಶಗಳಿಗೆ ಹಬ್ಬಿದ  ಪೌರತ್ವ ಚಳವಳಿ, ಹಿಂಸಾಚಾರ
ನವದೆಹಲಿ/ ಲಕ್ನೋ: ಪೌರತ್ವ ತಿದ್ದುಪಡಿ ಕಾಯ್ದೆ ವಿರೋಧ ಪ್ರತಿಭಟನೆಯ ಉತ್ತರ ಪ್ರದೇಶದಲ್ಲಿ 2019 ಡಿಸೆಂಬರ್ 20 ಶುಕ್ರವಾರ ಇನ್ನಷ್ಟು ನಗರಗಳಿಗೆ ವ್ಯಾಪಿಸಿದ್ದು, ರಾಜ್ಯದ ವಿವಿಧೆಡೆಗಳಲ್ಲಿ ಹಿಂಸಾಚಾರಕ್ಕೆ  ಮಂದಿ ಬಲಿಯಾಗಿದ್ದು, ಸಾವಿನ ಸಂಖ್ಯೆ ೭ಕ್ಕೆ ಏರಿದೆ ಎಂದು ವರದಿಗಳು ತಿಳಿಸಿದವು. ಉತ್ತರ ಪ್ರದೇಶದ ಬುಲಂದ ಶಹರ್, ಗೋರಖ್ ಪುರ, ಫಿರೋಜಾಬಾದ್ ಮತ್ತು ಹಾಪುರ್ ನಿಂದ ಕಿಚ್ಚಿಡುವಿಕೆ ಮತ್ತು ಕಲ್ಲೆಸೆತದ ವರದಿಗಳು ಬಂದಿದ್ದು ಪರಿಸ್ಥಿತಿ ಪ್ರಕ್ಷುಬ್ಧವಾಗಿದೆ ಎಂದು ವರದಿಗಳು ಹೇಳಿದವು.

ಉತ್ತರ
ಪ್ರದೇಶದ ಫಿರೋಜಾಬಾದ್, ಕಾನ್ಪುರ, ಮೀರತ್ ಮತ್ತು ಸಂಭಲ್ ಜಿಲ್ಲೆಗಳಲ್ಲಿ ತಲಾ ಒಬ್ಬರು ಮತ್ತು  ಬಿಜ್ನೂರಿನಲ್ಲಿ ಇಬ್ಬರು 2019 ಡಿಸೆಂಬರ್ 20 ಶುಕ್ರವಾರ ಪೌರತ್ವ ಕಾಯ್ದೆ ವಿರೋಧಿ ಪ್ರತಿಭಟನಕಾರರು ಪೊಲೀಸರ ಜೊತೆಗೆ ಘರ್ಷಿಸಿದಾಗ ಸಾವನ್ನಪ್ಪಿರುವುದಾಗಿ ವರದಿಗಳು ತಿಳಿಸಿದವು.

ಫಿರೋಜಾಬಾದ್ ಮತ್ತು ಭದೋಹಿ ಸೇರಿದಂತೆ ಹಿಂದೆ ಚಳವಳಿ ನಡೆಯದೇ ಇದ್ದ ಹಲವಾರು ನಗರಗಳಿಗೂ ಶುಕ್ರವಾರ ಹಿಂಸಾಚಾರ ಹರಡಿದ್ದು, ಜನರು ಕಲ್ಲೆಸೆತದಲ್ಲಿ ತೊಡಗುವುದರ ಜೊತೆಗೆ ಕೆಲವು ಪ್ರದೇಶಗಳಲ್ಲಿ ರ್ಯಾಲಿ ತಡೆದಾಗ ವಾಹನಗಳಿಗೆ ಕಲ್ಲು ತೂರಿದ ಹಾಗೂ ಬೆಂಕಿ ಹಚ್ಚಿನ ಘಟನೆಗಳು ಘಟಿಸಿವೆ ಎಂದು ವರದಿಗಳು ಹೇಳಿದವು.

ಹಿಂಸಾಚಾರ ವ್ಯಾಪಿಸಿದ ಹೊಸ ಪ್ರದೇಶಗಳಲ್ಲಿ ಭದೋಹಿ, ಬಹರಾಯಿಚ್, ಫರೂಖಾಬಾದ್ ಸೇರಿವೆ ಎಂದು ಪೊಲೀಸರು ತಿಳಿಸಿದ್ದಾರೆ. ಗುರುವಾರ ಗೋರಖ್ ಪುರ ಮತ್ತು ಸಂಭಾಲ್ನಲ್ಲಿ ಮಾತ್ರ ಹಿಂಸಾತ್ಮಕ ಪ್ರತಿಭಟನೆಗಳು ಕಂಡು ಬಂದಿದ್ದವು.

ಫಿರೋಜಾಬಾದಿನಲ್ಲಿ ಸಂಭವಿಸಿದ ಸಾವು ಕಳೆದ ೨೪ ಗಂಟೆಗಳಲ್ಲಿ ಸಂಭವಿಸಿದ ಎರಡನೇ ಸಾವಿನ ಘಟನೆಯಾಗಿದೆ. ಗುರುವಾರ ಪ್ರತಿಭಟನೆ ಕಾಲದಲ್ಲಿ ಪ್ರತಿಭಟನಕಾರನೊಬ್ಬ ಅಸು ನೀಗಿದ್ದ.

ಪ್ರತಿಭಟನಕಾರರು ಹಿಂಸೆಗೆ ಇಳಿದು, ನಿರ್ಬಂಧಕಾಜ್ಞೆಗಳನ್ನು ಉಲ್ಲಂಘಿಸಿ ಮೆರವಣಿಗೆ ನಡೆಸಲು ಯತ್ನಿಸಿದ ಬಳಿಕ ಹಲವಾರು ಪ್ರದೇಶಗಳಲ್ಲಿ ಬೆತ್ತ ಪ್ರಹಾರ ಮತ್ತು ಅಶ್ರುವಾಯು ಶೆಲ್ ಬಳಸುವುದು ನಮಗೆ ಅನಿವಾರ್ಯವಾಯಿತು ಎಂದು ಪೊಲೀಸರು ತಿಳಿಸಿದರು.

ಅಲಿಗಢ, ಮವು, ಆಜಂಗಢ, ಲಕ್ನೋ, ಕಾನ್ಪುರ, ಬರೇಲಿ, ಶಹಜಹಾನ್ ಪುರ, ಗಾಜಿಯಾಬಾದ್, ಬುಲಂದಶಹರ, ಸಂಭಲ್ ಮತ್ತು ಅಲಹಾಬಾದ್ ಸೇರಿದಂತೆ ಹಲವಾರು ಜಿಲ್ಲೆಗಳಲ್ಲಿ ಇಂಟರ್ ನೆಟ್ ಸೇವೆ ರದ್ದತಿ ಮುಂದುವರೆಸಲಾಯಿತು. ಪೌರತ್ವ ತಿದ್ದುಪಡಿ ಕಾಯ್ದೆ ವಿರುದ್ಧ ಹಿಂಸಾತ್ಮಕ ಘರ್ಷಣೆಗಳು ಸಂಭವಿಸಿದ್ದ ಲಕ್ನೋ ಮತ್ತು ಅಲಿಗಢ ಶುಕ್ರವಾರ ಬಹುತೇಕ ಶಾಂತವಾಗಿತ್ತು.

ರಾಜ್ಯ ರಾಜಧಾನಿಯಲ್ಲಿ ಭದ್ರತೆಯನ್ನು ಬಿಗಿಗೊಳಿಸಲಾಗಿದ್ದು, ಸಶಸ್ತ್ರ ಪೊಲೀಸ್ ಕಾವಲ ಹಾಕಲಾಗಿದೆ. ಶುಕ್ರವಾರದ ಪ್ರಾರ್ಥನೆಗಳು ಶಾಂತಿಯುತವಾಗಿ ನಡೆದವು ಎಂದು ಹಿರಿಯ ಅಧಿಕಾರಿಗಳು ತಿಳಿಸಿದರು. ಆದರೆ ಜನನಿಬಿಡವಾಗಿರುತ್ತಿದ್ದ ಮಾರುಕಟ್ಟೆಗಳಿಂದ ದೂರ ಉಳಿಯಲು ಅಂಗಡಿಕಾರರು ಆದ್ಯತೆ ನೀಡಿದರು. ಇಲ್ಲಿನ ಹಳೆನಗರದಲ್ಲಿ ಪ್ರದರ್ಶನ ವೇಳೆಯಲ್ಲಿ ಒಬ್ಬ ವ್ಯಕ್ತಿ ಸಾವನ್ನಪ್ಪಿದ್ದ.

ಅಧಿಕಾರಿಗಳು
ಸೂಕ್ಷ್ಮಪ್ರದೇಶಗಳು ಎಂಬುದಾಗಿ ಗುರುತಿಸಿದ ಪ್ರದೇಶಗಳಲ್ಲಿ ಪೊಲೀಸ್ ಪಡೆಗಳು ಧ್ವಜ ಮೆರವಣಿಗೆ ನಡೆಸಿದವು. ಫಿರೋಜಾಬಾದಿನಲ್ಲಿ ಪೊಲೀಸ್ ವಾಹನಗಳು ಸೇರಿದಂತೆ ಕನಿಷ್ಠ ವಾಹನಗಳಿಗೆ ಪ್ರತಿಭಟನಕಾರರು ಬೆಂಕಿ ಹಚ್ಚಿದರು. ಪರಿಣಾಮವಾಗಿ ಪರಿಸ್ಥಿತಿ ನಿಯಂತ್ರಿಸಲು ಪೊಲೀಸರು ಅಶ್ರುವಾಯು ಬಳಸಬೇಕಾಯಿತು ಎಂದು ಅಧಿಕಾರಿಗಳು ತಿಳಿಸಿದರು. ಘರ್ಷಣೆಗಳಲ್ಲಿ ಕೆಲವು ಪೊಲೀಸರೂ ಗಾಯಗೊಂಡರು. ಫಿರೋಜಾಬಾದ್ ಎಸ್ಎಸ್ಪಿ ಸಚಿಂದರ್ ಪಟೇಲ್ ಮತ್ತು ಜಿಲ್ಲಾ ಮ್ಯಾಜಿಸ್ಟ್ರೇಟ್ ಚಂದ್ರ ವಿಜಯ್ ಸಿಂಗ್  ಪೊಲೀಸ್ ಪಹರೆ ತುಕಡಿಗಳ ನೇತೃತ್ವ ವಹಿಸಿದ್ದರು.

ಭದೋಹಿಯಲ್ಲಿ ಪ್ರತಿಭಟನಾ ಮೆರವಣಿಗೆ ನಡೆಸಲಾಯಿತು. ಆದರೆ ಮಾರ್ಗಮಧ್ಯದಲ್ಲಿ ಮೆರವಣಿಗೆಯಲ್ಲಿ ಇದ್ದವರು ಪೊಲೀಸರ ಜೊತೆ ಘರ್ಷಣೆಗೆ ಇಳಿದರು. ಪರಿಸ್ಥಿತಿಯನ್ನು ನಿಯಂತ್ರಿಸಲು ಆಶ್ರುವಾಯು ಶೆಲ್ ಬಳಸುವುದರ ಜೊತೆ ಸ್ವಲ್ಪ ಪ್ರಮಾಣದ ಬಲ ಪ್ರಯೋಗ ಮಾಡಲಾಯಿತು. ಪ್ರತಿಭಟನಕಾರರು ಕಲ್ಲೆಸೆತದಲ್ಲಿ ತೊಡಗಿ ಹಲವಾರು ಮೋಟಾರ್ ಬೈಕುಗಳನ್ನು ಹಾನಿ ಪಡಿಸಿದರು ಎಂದು ಭದೋಹಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ರಾಮ್ ಬದನ್ ಸಿಂಗ್ ನುಡಿದರು.

ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರ ಜಿಲ್ಲೆಯಾದ ಗೋರಖ್ಪುರದಲ್ಲಿ ಭಾರೀ ಪ್ರತಿಭಟನಾ ಪ್ರದರ್ಶನಗಳನ್ನು ಸಂಘಟಿಸಲಾಗಿತ್ತು. ಶುಕ್ರವಾರದ ಪ್ರಾರ್ಥನೆಯ ಬಳಿಕ ಪ್ರತಿಭಟನಕಾರರು ಕನಿಷ್ಠ ಒಂದು ಜಾಗದಲ್ಲಿ ಪೊಲೀಸರತ್ತ ಕಲ್ಲೆಸೆದರು.

ಖೂನಿಪುರ ಪ್ರದೇಶದಲ್ಲಿ ಪ್ರತಿಭಟನಕಾರರನ್ನು ಚದುರಿಸಲು ಪೊಲೀಸರು ಅಶ್ರುವಾಯು ಶೆಲ್ ಪ್ರಯೋಗಿಸಿದರು. ಇನ್ನೊಂದು ಪ್ರದೇಶದಲ್ಲಿ ಪ್ರದರ್ಶನಕಾರರ ಮೇಲೆ ಬೆತ್ತ ಬೀಸಲಾಯಿತು. ಘಂಟಘರ್, ಶಹಮರೂಫ್, ನಖಾಸ್, ಖೋನಿಪುರ ಮತ್ತು ಇಸ್ಮಾಯಿಲ್ ಪುರ ಪ್ರದೇಶಗಳಲ್ಲಿ ಶುಕ್ರವಾರದ ಪ್ರಾರ್ಥನೆಯಿಂದ ದೊಡ್ಡ ಸಂಖ್ಯೆಯಲ್ಲಿ ಹೊರಬಂದ ಜನರು ಬೀದಿಗಳಲ್ಲಿ ಪ್ರದರ್ಶನ ನಡೆಸಿದರು.

ಅಲಿಗಢ, ಸಂಭಲ್ ಜಿಲ್ಲೆಯ ಚಂದೌಸಿ ಪ್ರದೇಶದಲ್ಲೂ ಪ್ರತಿಭಟನಾ ಪ್ರದರ್ಶನಗಳು ನಡೆದವು. ಪೊಲೀಸರು ಪೌರತ್ವ ತಿದ್ದುಪಡಿ ಕಾಯ್ದೆ ಬಗ್ಗೆ ವಿವರಗಳನ್ನು ಒದಗಿಸಿ, ದಾರಿ ತಪ್ಪದಂತೆ ಮನವಿ ಮಾಡಿದ ಕರಪತ್ರಗಳನ್ನೂ ಹಂಚಿದರು.

ದೆಹಲಿಯಲ್ಲಿ: ಬಹುತೇಕ ಶಾಂತಿಯುತವಾಗಿದ್ದ ದೆಹಲಿಯ ದರಿಯಾಗಂಜ್ ಪ್ರದೇಶದಲ್ಲಿ ಶುಕ್ರವಾರ ಸಂಭವಿಸಿದ ಮೊದಲ ಕಿಚ್ಚಿಡುವಿಕೆಯ ಘಟನೆಯಲ್ಲಿ ಕಾರೊಂದಕ್ಕೆ ಬೆಂಕಿ ಹಚ್ಚಲಾಯಿತು. ದೆಹಲಿಯ ಜಂತರ್ ಮಂತರ್ ಗೆ ಹಳೆ ದೆಹಲಿ ಪ್ರದೇಶದಿಂದ ಮೆರವಣಿಗೆ ಒಯ್ಯಲು ಯತ್ನಿಸುತ್ತಿದ್ದ ಪ್ರತಿಭಟನಕಾರರ ದೊಡ್ಡ ಗುಂಪನ್ನು ಚದುರಿಸಲು ಪೊಲೀಸರು ಬೆತ್ತ ಪ್ರಹಾರ ಮತ್ತು ಜಲಫಿರಂಗಿ ಬಳಸಿದರು. ಅವರನ್ನು ದೆಹಲಿ ಗೇಟ್ನಲ್ಲೇ ಅಡ್ಡ ಗಟ್ಟಲಾಯಿತು. ರಾಜಧಾನಿಯಲ್ಲಿ ತ್ರಿವರ್ಣ ಧ್ವಜದೊಂದಿಗೆಸಂವಿಧಾನ ರಕ್ಷಿಸಿಬರಹದ ಬ್ಯಾನರುಗಳೊಂದಿಗೆ ಸಹಸ್ರಾರು ಮಂದಿ ಮೆರವಣಿಗೆ ನಡೆಸಿದರು.

ದೆಹಲಿಯ ಇಂಡಿಯಾ ಗೇಟ್ ನಲ್ಲಿ ಕಾಂಗ್ರೆಸ್ ನಾಯಕಿ ಪ್ರಿಯಾಂಕಾ ಗಾಂಧಿ ವಾದ್ರಾ ಪ್ರತಿಭಟನಕಾರರ ಜೊತೆ ಸೇರಿದರು. ’ನಾವು ದೇಶಾದ್ಯಂತ ಪ್ರತಿಭಟನೆಗಳನ್ನು ನೋಡುತ್ತಿದ್ದೇವೆ. ಕಾನೂನು ಬಡವರಿಗೆ ವಿರುದ್ಧವಾಗಿದೆ. ನೋಟು ಅಮಾನ್ಯೀಕರಣದ ರೀತಿಯಲ್ಲಿ, ಜನರು ಈಗ ಸರದಿ ಸಾಲುಗಳಲ್ಲಿ ನಿಲ್ಲಬೇಕಾಗಿದೆ. ಶ್ರೀಮಂತರು ತಮ್ಮ ಪಾಸ್ ಪೋರ್ಟ್ ತೋರಿಸುತ್ತಾರೆ. ಬಡವರು ಏನನ್ನು ತೋರಿಸಲು ಸಾಧ್ಯ? ಬಹುತೇಕ ಮಂದಿಯ ಬಳಿ ದಾಖಲೆಗಳೇ ಇಲ್ಲಎಂದು ಪ್ರಿಯಾಂಕ ನುಡಿದರು.

ರಾಜಧಾನಿಯ ಹಲವಾರು ಸೂಕ್ಷ್ಮ ಪ್ರದೇಶಗಳಲ್ಲಿ ಶುಕ್ರವಾರದ ಪ್ರಾರ್ಥನೆ ಹಿನ್ನೆಲೆಯಲ್ಲಿ ಹೆಚ್ಚುವರಿ ಭದ್ರತಾ ವ್ಯವಸ್ಥೆ ಮಾಡಲಾಗಿತ್ತು.

ಆದರೆ ಮಧ್ಯಾಹ್ನದ ಪ್ರಾರ್ಥನೆಯ ಬಳಿಕ ಜಾಮಿಯಾ ಮಸೀದಿಯಿಂದ ಭಾರೀ ಪ್ರತಿಭಟನಾ ಮೆರವಣಿಗೆ ಶುರುವಾಯಿತು. ಇದೇ ವೇಳಗೆ ಪೊಲೀಸ್ ಅನುಮತಿ ನಿರಾಕರಣೆಯನ್ನು ಧಿಕ್ಕರಿಸಿ ಭೀಮ್ ಆರ್ಮಿ ಮುಖ್ಯಸ್ಥ ಚಂದ್ರಶೇಖರ ಆಜಾದ್ ಮೆರವಣಿಗೆ ನಡೆಸಲು ಯತ್ನಿಸಿದಾಗ ಅವರನ್ನು ಬಂಧಿಸಲಾಯಿತು.

ದೆಹಲಿ ಮೆಟ್ರೋ ಗೇಟ್ ಗಳನ್ನು ಕೆಲವೆಡೆಗಳಲ್ಲಿ ಶುಕ್ರವಾರವೂ ಮುಚ್ಚಲಾಗಿತ್ತು. ಪೊಲೀಸರು ಪ್ರತಿಭಟನಕಾರರ ಮೇಲೆ ಕಣ್ಣಿಡಲು ಡ್ರೋಣ್ಗಳನ್ನು ಬಳಸಿದರು.

ಮಧ್ಯೆ, ಕರ್ನಾಟಕ  ಮತ್ತು ಉತ್ತರ ಪ್ರದೇಶದ ಕೆಲವು ಭಾಗಗಳಲ್ಲಿ ಮೊಬೈಲ್ ಇಂಟರ್ ನೆಟ್ ಮತ್ತು ಎಸ್ ಎಂಎಸ್ ಸೇವೆಗಳನ್ನು ರದ್ದು ಪಡಿಸಲಾಯಿತು. ಕರ್ನಾಟಕದ ಮಂಗಳೂರಿನಲ್ಲಿ ಗುರುವಾರ ಪೊಲೀಸ್ ಗೋಲಿಬಾರಿಗೆ ಇಬ್ಬರು ಬಲಿಯಾಗಿದ್ದರೆ, ಲಕ್ನೋದಲ್ಲಿ ಒಬ್ಬ ವ್ಯಕ್ತಿ ಸಾವನ್ನಪ್ಪಿದ್ದ.

ಕರ್ನಾಟಕದ ಮಂಗಳೂರಿನಲ್ಲಿ ಪೊಲೀಸ್ ಗೋಲಿಬಾರಿಗೆ ಇಬ್ಬರು ಬಲಿಯಾದ ಬಳಿಕ ಉತ್ತರ ಜಿಲ್ಲೆಗಳಲ್ಲಿ ತೀವ್ರ ಕಟ್ಟೆಚ್ಚರ ವಹಿಸುವಂತೆ ಕೇರಳ ಪೊಲೀಸರಿಗೆ ನಿರ್ದೇಶನ ನೀಡಲಾಗಿದೆ.

ಮಂಗಳೂರು
ಹಿಂಸಾಚಾರದ ಬಳಿಕ ಗುರುವಾರ ರಾತ್ರಿ ಕೇರಳದ ವಿವಿಧ ಸಂಘಟನೆಗಳು ರೈಲು ಮತ್ತು ಬಸ್ಸುಗಳನ್ನು ಅಡ್ಡಗಟ್ಟಿದ ಹಾಗೂ ಸರಣಿ ಮೆರವಣಿಗೆಗಳು ನಡೆದ ವರದಿಗಳು ಬಂದಿವೆ.

ಪೌರತ್ವ ಕಾಯ್ದೆ ವಿರೋಧಿ ಪ್ರತಿಭಟನಕಾರರು ಕೋಯಿಕ್ಕೋಡಿನ ಕೆಲ ಭಾಗಗಳಲ್ಲಿ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಬಸ್ಸುಗಳನ್ನು ತಡೆದುದಲ್ಲದೆ, ಮಂಗಳೂರು ಪೊಲೀಸ್ ಕ್ರಮದ ವಿರುದ್ಧ ಘೋಷಣೆಗಳನ್ನು ಕೂಗಿದರು. ಕೇರಳ ರಸ್ತೆ ಸಾರಿಗೆ ಸಂಸ್ಥೆಯು ಮಂಗಳೂರಿಗೆ ತನ್ನ ಬಸ್ ಸೇವೆಯನ್ನು ಸ್ಥಗಿತಗೊಳಿಸಿತು.

ಭಾರೀ ಸಂಖ್ಯೆಯ ಕಾಂಗ್ರೆಸ್ ಕಾರ್ಯಕರ್ತರು ಕೋಯಿಕ್ಕೋಡಿನಲ್ಲಿ ಟೈರುಗಳನ್ನು ಸುಡುವುದರ ಜೊತೆಗೆ ಗೃಹ ಸಚಿವ ಅಮಿತ್ ಶಾ ಅವರ ಪ್ರತಿಕೃತಿಯನ್ನೂ ದಹಿಸಿದರು.

ಇದಕ್ಕೆ ಪ್ರತಿಯಾಗಿ ಕರ್ನಾಟಕ ಪೊಲೀಸರು ಕೇರಳದಿಂದ ಬರುವ ವಾಹನಗಳನ್ನು ತಡೆ ಹಿಡಿದರು. ಸರ್ಕಾರಿ ವೆನ್ ಲಾಕ್ ಆಸ್ಪತ್ರೆಗೆ ತೆರಳದಂತೆ ಕೆಲವು ಮಾಧ್ಯಮ ಮಂದಿಯನ್ನೂ ತಡೆಯಲಾಯಿತು.

ಮಂಗಳೂರಿನಲ್ಲಿ ಪೊಲೀಸ್ ಠಾಣೆಗೆ ಮುತ್ತಿಗೆ ಹಾಕಲು ಯತ್ನಿಸಲಾಗಿದ್ದು, ಪ್ರತಿಭಟನಕಾರರು ನಿಷೇಧಾಜ್ಞೆ  ಉಲ್ಲಂಘಿಸಲು ಯತ್ನಿಸಿದಾಗ ಪೊಲೀಸರು ಅವರ ಮೇಲೆ ಬಲ ಪ್ರಯೋಗಿಸಿದರು ಎಂದು ಪೊಲೀಸ್ ಮೂಲಗಳು ಹೇಳಿವೆ.

ವದಂತಿ ಹರಡುವ ಸ್ಥಾಪಿತ ಹಿತಾಸಕ್ತರ ಮಾತುಗಳಿಗೆ ಕಿವಿಗೊಡದಂತೆ ಜನರಿಗೆ ಮನವಿ ಮಾಡಿದ ಕರ್ನಾಟಕ ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪ ಅವರು ಎಲ್ಲ ನಾಗರಿಕರ ಹಕ್ಕು ರಕ್ಷಣೆಗೆ ತಮ್ಮ ಸರ್ಕಾರ ಬದ್ಧವಾಗಿದೆ ಎಂದು ಹೇಳಿದರು.

ಪಶ್ಚಿಮ ಬಂಗಾಳವು ಶುಕ್ರವಾರ ಬಹುತೇಕ ಶಾಂತವಾಗಿತ್ತು. ಹಿಂಸಾಚಾರದ ವಿರುದ್ಧ ಪೊಲೀಸರು ಬಿಗಿ ಬಂದೋಬಸ್ತ್ ಕ್ರಮ ಕೈಗೊಂಡಿದ್ದರು.

ಬಿಹಾರದಲ್ಲಿ ಬಿಜೆಪಿಯ ಮಿತ್ರಪಕ್ಷವಾಗಿರುವ ಜನತಾದಳ (ಸಂಯುಕ್ತ) ನಾಯಕ ಮುಖ್ಯಮಂತ್ರಿ ನಿತೀಶ್ ಕುಮಾರ್ ಅವರು ತ್ಮ ರಾಜ್ಯದಲ್ಲಿ  ವಿವಾದಾತ್ಮಕ ರಾಷ್ಟ್ರೀಯ ಪೌರತ್ವ ನೋಂದಣಿ ಅನುಷ್ಠಾನಕ್ಕೆ ನಿರಾಕರಿಸಿದರು.

ಭಾನುವಾರ ವ್ಯಾಪಕ ಹಿಂಸಾಚಾರ ನಡೆದಿದ್ದ ಈಶಾನ್ಯ ರಾಜ್ಯದ ಜಿಲ್ಲೆಗಳಲ್ಲಿ ಪೊಲೀಸರು ಶುಕ್ರವಾರವೂ ಧ್ವಜ ಮೆರವಣಿಗೆ ನಡೆಸಿದರು. ಜಂಟಿ ಪೊಲೀಸ್ ಆಯುಕ್ತ ಅಲೋಕ್ ಕುಮಾರ್ ಮತ್ತು ಡಿಸಪಿ ವೇದ ಪ್ರಕಾಶ್ ಸೂರ್ಯ ಧ್ವಜ ಮೆರವಣಿಗೆ ವೇಳೆ ಹಾಜರಿದ್ದರು.

ತಿದ್ದುಪಡಿ ಮಾಡಲಾಗಿರುವ ಪೌರತ್ವ ಕಾಯ್ದೆಯು ೨೦೧೫ಕ್ಕೆ ಮುನ್ನ ಧಾರ್ಮಿಕ ಕಿರುಕುಳದ ಹಿನ್ನೆಲೆಯಲ್ಲಿ ಪಾಕಿಸ್ತಾನ, ಬಾಂಗ್ಲಾದೇಶ ಮತ್ತು ಆಫ್ಘಾನಿಸ್ಥಾನದಿಂದ ವಲಸೆ ಬಂದ ಅಲ್ಲಿನ ಅಲ್ಪಸಂಖ್ಯಾತರಾದ ಹಿಂದುಗಳು, ಕ್ರೈಸ್ತರು, ಸಿಕ್ಖರು, ಬೌದ್ಧರು, ಜೈನರು ಮತ್ತು ಪಾರ್ಸಿಗಳಿಗೆ ಭಾರತೀಯ ಪೌರತ್ವವನ್ನು ಒದಗಿಸಿದೆ. ಪಟ್ಟಿಯಲ್ಲಿ ಸದರಿ ಮೂರು ದೇಶಗಳ ಬಹುಸಂಖ್ಯಾತ ಮುಸ್ಲಿಮರನ್ನು ಹೊರತುಪಡಿಸಲಾಗಿದೆ.

No comments:

Advertisement