My Blog List

Saturday, August 1, 2020

ಹಿಂದೂಸ್ತಾನ್ ಶಿಪ್‌ಯಾರ್ಡ್‌ನಲ್ಲಿ ಕ್ರೇನ್ ಕುಸಿತ: ೧೧ ಸಾವು

ಹಿಂದೂಸ್ತಾನ್ ಶಿಪ್‌ಯಾರ್ಡ್‌ನಲ್ಲಿ ಕ್ರೇನ್ ಕುಸಿತ: ೧೧ ಸಾವು

ವಿಶಾಖಪಟ್ಟಣ: ಆಂಧ್ರಪ್ರದೇಶದ ವಿಶಾಖಪಟ್ಟಣದ ಹಿಂದೂಸ್ತಾನ್ ಶಿಪ್‌ಯಾರ್ಡ್ ಲಿಮಿಟೆಡ್‌ನಲ್ಲಿ (ಎಚ್‌ಎಸ್‌ಎಲ್) 2020 ಆಗಸ್ಟ್ 01ರ ಶನಿವಾರ ಕಾರ್‍ಯಾಚರಣೆಯಲ್ಲಿ ಕ್ರೇನ್ ಕುಸಿದು ಬಿದ್ದ ಪರಿಣಾಮವಾಗಿ ಹನ್ನೊಂದು ಕಾರ್ಮಿಕರು ಅಸು ನೀಗಿದರು.

ತೀವ್ರವಾಗಿ ಗಾಯಗೊಂಡ ಕಾರ್ಮಿಕರನ್ನು ಹತ್ತಿರದ ಆಸ್ಪತ್ರೆಗೆ ಸಾಗಿಸಲಾಗಿದ್ದು, ಸಾವಿನ ಸಂಖ್ಯೆ ಹೆಚ್ಚಾಗುವ ಭೀತಿ ಇದೆ. ದುರಂತದ ಸುದ್ದಿ ತಿಳಿಯುತ್ತಿದ್ದಂತೆಯೇ ಪೊಲೀಸರು ಮತ್ತು ರಕ್ಷಣಾ ತಂಡಗಳು ಅಪಘಾತದ ಸ್ಥಳಕ್ಕೆ ಧಾವಿಸಿದವು.

"ಹೊಸ ಕ್ರೇನ್‌ನ್ನು ಅಳವಡಿಸಲಾಗಿದ್ದು, ಇದರ ಪೂರ್ಣ ಪ್ರಮಾಣದ ಕಾರ್ಯಾಚರಣೆ ಸಲುವಾಗಿ ತರಲು ಟ್ರಯಲ್ ರನ್ ನಡೆಸಲಾಗುತ್ತಿತ್ತು. ವೇಳೆಯಲ್ಲಿ ದುರಂತ ಸಂಭವಿಸಿದ್ದು, ಹಿಂದೂಸ್ತಾನ್ ಶಿಪ್‌ಯಾರ್ಡ್ ಮತ್ತು ಆಡಳಿತದ ಉನ್ನತ ಮಟ್ಟದ ಸಮಿತಿಯಿಂದ ವಿಚಾರಣೆ ನಡೆಯಲಿದೆಎಂದು ವೈಜಾಗ್ ಜಿಲ್ಲಾಧಿಕಾರಿ ವಿನಯ್ ಚಂದ್ ಹೇಳಿದರು.

ದುರಂತದ ಸುದ್ದಿ ತಿಳಿಯುತ್ತಿದ್ದಂತೆಯೇ ತುರ್ತು ರಕ್ಷಣಾ ಕ್ರಮ ಕೈಗೊಳ್ಳುವಂತೆ ಮುಖ್ಯಮಂತ್ರಿ ವೈ.ಎಸ್.ಜಗನ್ಮೋಹನ್ ರೆಡ್ಡಿ ವಿಶಾಖಪಟ್ಟಣಂ ಜಿಲ್ಲಾಧಿಕಾರಿ ಮತ್ತು ಪೊಲೀಸ್ ಆಯುಕ್ತರಿಗೆ ನಿರ್ದೇಶನ ನೀಡಿದರು.

ಕಾರ್ಮಿಕರು ಹಡಗು ನಿರ್ಮಾಣಕ್ಕೆ ಉಪಕರಣಗಳನ್ನು ಸಾಗಿಸಲು ಬಳಸಲಾಗುವ ಕ್ರೇನ್‌ನ ತಪಾಸಣೆ ನಡೆಸುತ್ತಿದ್ದಾಗ ಅಪಘಾತ ಸಂಭವಿಸಿದೆ. ಬೃಹತ್ ಕ್ರೇನ್ ಇದ್ದಕ್ಕಿದ್ದಂತೆ ಮುರಿದು ಭಾರೀ ಸದ್ದಿನೊಂದಿಗೆ ನೆಲಕ್ಕೆ ಅಪ್ಪಳಿಸಿತು.

"ಕ್ರೇನ್ ಅಪಘಾತಕ್ಕೀಡಾದಾಗ ಸುಮಾರು ೨೦ ಕಾರ್ಮಿಕರು ತಪಾಸಣೆಗೆ ಕೆಲಸ ಮಾಡುತ್ತಿದ್ದರು ಎಂದು ಹೇಳಲಾಗಿದೆ. ಕೆಲವು ಕಾರ್ಮಿಕರು ಸುರಕ್ಷಿತವಾಗಿ ಓಡುವಲ್ಲಿ ಯಶಸ್ವಿಯಾದರು, ಇನ್ನೂ ಕೆಲವರು ಗಾಯಗೊಂಡರು ಮತ್ತು ಕನಿಷ್ಠ ೧೦ ಕಾರ್ಮಿಕರನ್ನು ಕ್ರೇನ್‌ನ ತೂಕದ ಕೆಳಗೆ ಅಪ್ಪಚ್ಚಿಯಾದರುಎಂದು ಪೊಲೀಸ್ ಅಧಿಕಾರಿಯೊಬ್ಬರು ಹೇಳಿದರು.

"ಗಾಯಗೊಂಡ ಕಾರ್ಮಿಕರನ್ನು ಸ್ಥಳೀಯ ಆಸ್ಪತ್ರೆಗಳಿಗೆ ಸ್ಥಳಾಂತರಿಸಲಾಯಿತುಎಂದು ಅಧಿಕಾರಿ ನುಡಿದರು.

ಕ್ರೇನ್‌ನ ಭಗ್ನಾವಶೇಷಗಳ ಅಡಿಯಿಂದ ಮೂರು ಶವಗಳನ್ನು ಹೊರಗೆತ್ತಲಾಗಿದೆ. ಉಳಿದ ಶವಗಳು ಸಂಪೂರ್ಣ ಛಿದ್ರಗೊಂಡಿವೆ ಎಂದು ನಂಬಲಾಗಿದೆ. ನೌಕಾಪಡೆಯ ಸಿಬ್ಬಂದಿಯ ಸಹಾಯದೊಂದಿಗೆ ಪೊಲೀಸರು ರಕ್ಷಣಾ ಕಾರ್ಯಾಚರಣೆಯಲ್ಲಿ ಭಾಗಿಯಾಗಿದ್ದಾರೆ.

ವಿಶಾಖಪಟ್ಟಣ ಪೊಲೀಸ್ ಕಮಿಷನರ್ ಆರ್.ಕೆ. ಮೀನಾ ತತ್ ಕ್ಷಣ ಸ್ಥಳಕ್ಕೆ ಧಾವಿಸಿದರು.

ವಿಶಾಖಪಟ್ಟಣ ಮೂಲದ ಪ್ರವಾಸೋದ್ಯಮ ಖಾತೆ ಸಹಾಯಕ ಸಚಿವ ಮುತಮ್‌ಸೆಟ್ಟಿ ಶ್ರೀನಿವಾಸ್ ರಾವ್ ದುರಂತದ ಬಗ್ಗೆ ವಿಚಾರಿಸಿ, ರಕ್ಷಣಾ ಕಾರ್ಯಗಳನ್ನು ಕೈಗೊಳ್ಳುವಂತೆ ಜಿಲ್ಲಾ ಅಧಿಕಾರಿಗಳಿಗೆ ಸೂಚಿಸಿದರು.

ಇನ್ನೊಂದು ವರದಿಯ ಪ್ರಕಾರ, ಕ್ರೇನನ್ನು ಸುಮಾರು ಒಂದು ದಶಕದ ಹಿಂದೆ ಎಚ್‌ಎಸ್‌ಎಲ್ ಖರೀದಿಸಿದ್ದು ಅದರ ಕಾರ್ಯಾಚರಣೆಯನ್ನು ಇತ್ತೀಚೆಗೆ ಖಾಸಗಿ ಏಜೆನ್ಸಿಯೊಂದಕ್ಕೆ ಹೊರಗುತ್ತಿಗೆ ನೀಡಲಾಗಿತ್ತು ಎನ್ನಲಾಗಿದೆ.

No comments:

Advertisement