Thursday, June 18, 2026

ರಾಜರಾಜೇಶ್ವರಿ ನಗರದಲ್ಲಿ ʼಕಂಸವಧೆʼ

 ರಾಜರಾಜೇಶ್ವರಿ ನಗರದಲ್ಲಿ ʼಕಂಸವಧೆʼ

ಬೆಂಗಳೂರು ರಾಜರಾಜೇಶ್ವರಿ ನಗರದ ಶಿವರತ್ನಪುರಿ ಟೆಂಪಲ್‌ ಆಫ್‌ ಹೆಲ್ತ್.‌ ರಸ್ತೆಯಲ್ಲಿ ಹೋಗುವವರನ್ನು ತನ್ನ ʼಪಿರಮಿಡ್‌ʼ ಆಕಾರದ ವಿಶಿಷ್ಠ ವಿನ್ಯಾಸದಿಂದಲೇ ಗಮನ ಸೆಳೆಯುವ ಸ್ಥಳ. ಇಲ್ಲಿ ಇತ್ತೀಚೆಗೆ ʼಪವಿತ್ರ ಭಾರತʼ ಕಾರ್ಯಕ್ರಮ. ೨೦೨೬ ಜೂನ್‌ ೧೩ರಂದು ವೇದ ಕುರಿತ ಸಂವಾದ ಮತ್ತು ಭರತ ನಾಟ್ಯದ ಸೊಬಗು.

೨೦೨೬ ಜೂನ್‌ ೧೪ರಂದು ವೇದ ಕುರಿತು ಸಂವಾದ ಮತ್ತು ಯಕ್ಷಗಾನ. ಈ ಕಾರ್ಯಕ್ರಮದಲ್ಲಿ ಬೆಂಗಳೂರು ಹೆಗಡೆ ನಗರ ಸಮೀಪದ ಅಮೃತಹಳ್ಳಿಯ ಮಕ್ಕಳಿಂದ ಸೊಗಸಾದ ʼಕಂಸವಧೆʼ ಯಕ್ಷಗಾನ. ಹೆಗಡೆ ನಗರದ ಶ್ರೀ ಬಾಲಾಜಿ ಕೃಪಾ ಬಡಾವಣೆಯ ಶ್ರೀ ಬಾಲಾಜಿ ಮಹಾಗಣಪತಿ, ವೆಂಕಟೇಶ್ವರ, ಅಭಯ ಆಂಜನೇಯ ಸ್ವಾಮಿ ದೇವಸ್ಥಾನದಲ್ಲಿ ʼಯಕ್ಷ ಕಲಾ ಕೌಸ್ತುಭʼ ತಂಡದ ಮೂಲಕ ಯಕ್ಷಗಾನ ಹೇಳಿಕೊಡುತ್ತಿರುವ ಯಕ್ಷಗುರು ಉಮೇಶರಾಜ್‌ ಮಂದಾರ್ತಿ ಅವರ ನಿರ್ದೇಶನ.

ಭರತನಾಟ್ಯ ಕಲಿಯುತ್ತಿರುವ ಬಾಲಕಿಯರು ಮಂದಾರ್ತಿ ಅವರ ನಿರ್ದೇಶನದಲ್ಲಿ ಕೇವಲ ೧೦-೧೫ ದಿನಗಳ ಕಾಲ ನೀಡಿದ ತರಬೇತಿಯಲ್ಲಿ ಯಕ್ಷಗಾನ ಕಲಿತು ಯಶಸ್ವಿಯಾಗಿ ಅದ್ಭುತ ಪ್ರದರ್ಶನವನ್ನು ನೀಡಿದರು.


ಈ ಸಂದರ್ಭದ ಕೆಲವು ಚಿತ್ರ ಹಾಗೂ ವಿಡಿಯೋಗಳು ಇಲ್ಲಿವೆ. ಯಕ್ಷಗಾನದ ಪೂರ್ಣ ಪ್ರಸಂಗವನ್ನು ವೀಕ್ಷಿಸಲು ಕೆಳಗಿನ ಚಿತ್ರಕ್ಲಿಕ್‌ ಮಾಡಿ.



Monday, June 15, 2026

ಅರಳಲು ಅವಸರವಾಯಿತೇ ಈ ಬ್ರಹ್ಮ ಕಮಲಕ್ಕೆ?

 ಅರಳಲು ಅವಸರವಾಯಿತೇ ಈ ಬ್ರಹ್ಮ ಕಮಲಕ್ಕೆ?

ಇದು ʼಸುವರ್ಣʼ ನೋಟ

ವಾಮಾನ ವೈಪರೀತ್ಯದಿಂದ ಈ ಬಾರಿ ಮುಂಗಾರು ಕಣ್ಣಾ ಮುಚ್ಚಾಲೆ ಆಡುತ್ತಿದೆ. ವಾರ ಮುಂಚಿತವಾಗಿ ಬರುವುದೆಂದು ಹವಾಮಾನ ಇಲಾಖೆ ಭವಿಷ್ಯ ನುಡಿದಿದ್ದರೂ, ಬರುವುದು ತಡವಾಗಿದೆ.

ಸೆಕೆಗಾಲದ ಬಿಸಿಲ ಝಳವೂ ಈ ಸಾಲು ಅಂದರೆ ೨೦೨೬ನೇ ವರ್ಷದಲ್ಲಿ ಮಿತಿ ಮೀರಿತು. ಚಳಿಕಾಲದ ಕಥೆಯೂ ಅಷ್ಟೇ. ವಿಪರೀತ ಚಳಿ.

ಗಿಡ, ಮರ, ಬಳ್ಳಿಗಳ ಮೇಲೂ ಹವಾಮಾನದ ವೈಪರೀತ್ಯ ತನ್ನದೇ ಆದ ರೀತಿಯಲ್ಲಿ ಪ್ರಭಾವ ಬೀರಿದೆ. ಬೀರುತ್ತಿದೆ.

ನೋಡಿ. ಸಾಮಾನ್ಯವಾಗಿ ವರ್ಷಕ್ಕೆ ಒಂದೇ ಬಾರಿ ಅರಳುವ ಹೂ ಅದ್ಭುತ ಸೊಗಸಿನ ʼಬಹ್ಮ ಕಮಲʼ. ಸಾಮಾನ್ಯವಾಗಿ ಈ ಹೂ ಅರಳುವುದು ಜುಲೈ-ಆಗಸ್ಟ್‌ ತಿಂಗಳಲ್ಲಿ ಹುಣ್ಣಿಮೆ, ಅಮಾವಾಸ್ಯೆಯ ಸಮಯದಲ್ಲಿ.

ಈ ಬಾರಿ ಅದು ಕೂಡಾ ತಿಂಗಳು ಮುಂಚಿತವಾಗಿಯೇ ಅರಳಿ ಬಿಟ್ಟಿದೆ. ಮೊನ್ನೆ, ಮೊನ್ನೆ ಅಂದರೆ ೨೦೨೬ರ ಜೂನ್‌ ತಿಂಗಳ ೧೩ರ ಶನಿವಾರ ರಾತ್ರಿ ಅರಳಿತು. ಹೀಗೆ ಅರಳಿದ ಬ್ರಹ್ಮ ಕಮಲ ಹಿರಿಯ ಪತ್ರಿಕಾ ಛಾಯಾಗ್ರಾಹಕ ವಿಶ್ವನಾಥ ಸುವರ್ಣ ಅವರ ಕ್ಯಾಮರಾದಲ್ಲಿ ಬಂಧಿಯಾಗಿ ಬಿಟ್ಟಿತು. ಚಿತ್ರಗಳ ಸಮೀಪ ನೋಟಕ್ಕೆ ಅವುಗಳನ್ನು ಕ್ಲಿಕ್‌ ಮಾಡಿರಿ.

ಅಂದಹಾಗೆ, ಈ ಶನಿವಾರ ಪುಣ್ಯಪ್ರದವಾದ ಅಧಿಕ ಮಾಸದ  ಕೊನೆಯ ಶನಿವಾರ. ಅಧಿಕ ಮಾಸದಲ್ಲೇ ಅರಳಲು ʼಬ್ರಹ್ಮಕಮಲʼಕ್ಕೂ ಅವಸರವಾಗಿರಬಹುದೇನೋ? ಏನೇ ಆಗಲಿ, ಪುಣ್ಯದಿನದಂದೇ ಅರಳಿದ ಈ ಹೂವನ್ನು ನೋಡಿದವರಿಗೆ ಲಭಿಸುವ ಪುಣ್ಯ ಅಧಿಕವಾಗಲಿ ಎಂದು ಹಾರೈಸೋಣ.


Thursday, June 11, 2026

ಅಧಿಕ ಮಾಸದ ಪರಮ ಏಕಾದಶಿ ಸಂಭ್ರಮ

 ಅಧಿಕ ಮಾಸದ ಪರಮ ಏಕಾದಶಿ ಸಂಭ್ರಮ

ಬೆಂಗಳೂರು ರಾಮಕೃಷ್ಣ ಹೆಗಡೆ ನಗರದ ಶ್ರೀ ಬಾಲಾಜಿ ಕೃಪಾ ಬಡಾವಣೆಯ ಶ್ರೀ ಬಾಲಾಜಿ ಮಹಾಗಣಪತಿ, ವೆಂಕಟೇಶ್ವರ, ಅಭಯ ಆಂಜನೇಯ ಸ್ವಾಮಿ ದೇವಸ್ಥಾನದಲ್ಲಿ ೨೦೨೬ ಜೂನ್‌ ೧೧ರ ಗುರುವಾರ ಅಧಿಕ ಮಾಸದ ಪರಮ ಏಕಾದಶಿಯನ್ನು ಸಂಭ್ರಮದೊಂದಿಗೆ ಆಚರಿಸಲಾಯಿತು.

ದೇವಾಲಯದ ಭಕ್ತರು ವಿಷ್ಣು ಸಹಸ್ರನಾಮ, ಅಷ್ಟೋತ್ತರ, ಭಜನೆ, ಪ್ರಸಾದ ಸೇವೆಯೊಂದಿಗೆ ಈ ಸಂಭ್ರಮದಲ್ಲಿ ಪಾಲ್ಗೊಂಡರು.

ಇದೇ ಸಂದರ್ಭದಲ್ಲಿ ಬೆಳಗ್ಗೆ ರಾಷ್ಟ್ರೋತ್ಥಾನ ವಿದ್ಯಾಕೇಂದ್ರದ ಕಿರಿಯ ಮಕ್ಕಳು, ಶಿಕ್ಷಕ ಮತ್ತಿತರ ಸಿಬ್ಬಂದಿ ದೇವಸ್ಥಾನಕ್ಕೆ ಆಗಮಿಸಿ, ಭಜನೆ, ಭಗವದ್ಗೀತೆ ಹಾಡುವ ಮೂಲಕ ಭಗವಂತನ ಸೇವಾ ಕೈಂಕರ್ಯ ನೆರವೇರಿಸಿದರು.

ಕಾಕತಾಳೀಯವಾಗಿ ಅಮೃತಹಳ್ಳಿಯ ಮಕ್ಕಳು ಯಕ್ಷಗುರು ಉಮೇಶರಾಜ್‌ ನೇತೃತ್ವದಲ್ಲಿ ಚೆಂಡೆ ಸಹಿತವಾಗಿ ʼಕಂಸವಧೆʼ ಯಕ್ಷಗಾನ ಅಭ್ಯಾಸ ಸೇವೆಯನ್ನು ಮಾಡಿದರು. ಭಕ್ತ ಸತೀಶ್‌ ಮತ್ತು ಕುಟುಂಬ ಸದಸ್ಯರು ಇದೇ ಸಂದರ್ಭದಲ್ಲಿ ಶ್ರೀ ವೆಂಕಟೇಶ್ವರನಿಗೆ ತೂಗುದೀಪವನ್ನು ಸಮರ್ಪಿಸಿದರು.

ಈ ಸಂದರ್ಭದ ಕೆಲವು ಚಿತ್ರಗಳು ಹಾಗೂ ವಿಡಿಯೋಗಳು ☝ ಇಲ್ಲಿವೆ. ಚಿತ್ರಗಳನ್ನು ಕ್ಲಿಕ್ಕಿಸುವ ಮೂಲಕ ಚಿತ್ರಗಳ ಸಮೀಪ ನೋಟ ಹಾಗೂ ವಿಡಿಯೋಗಳನ್ನು ನೋಡಬಹುದು.👇

ಅಧಿಕಮಾಸದ ಕೊನೆಯವಾರದ ಪ್ರಯುಕ್ತ ಸಂಪಿಗೆಹಳ್ಳಿಯ ಕೋದಂಡರಾಮ ಭಜನಾ ಮಂಡಳಿಯ ಸದಸ್ಯರು ಶನಿವಾರ ಸಂಜೆ ದೇವಾಲಯದಲ್ಲಿ ಭಜನಾ ಕಾರ್ಯಕ್ರಮವನ್ನು ಹಮ್ಮಿಕೊಂಡಿದ್ದಾರೆ.





ಗೃಹಿಣಿಯರು 'ರಾಷ್ಟ್ರ ನಿರ್ಮಾಪಕರು': ಅವರ ಶ್ರಮಕ್ಕೆ ಮಾಸಿಕ ₹30,000 ಮೌಲ್ಯ!

 ಗೃಹಿಣಿಯರು 'ರಾಷ್ಟ್ರ ನಿರ್ಮಾಪಕರು': ಅವರ ಶ್ರಮಕ್ಕೆ ಮಾಸಿಕ ₹30,000 ಮೌಲ್ಯ!

ಭಾರತೀಯ ನ್ಯಾಯಾಂಗ ಇತಿಹಾಸದಲ್ಲಿ ಒಂದು ಐತಿಹಾಸಿಕ ಮತ್ತು ಭಾವನಾತ್ಮಕ ತೀರ್ಪನ್ನು ಸುಪ್ರೀಂ ಕೋರ್ಟ್ 2026 ಜೂನ್‌ 11ರ ಗುರುವಾರ ನೀಡಿದೆ. ಇನ್ನು ಮುಂದೆ ಗೃಹಿಣಿಯರನ್ನು ಕೇವಲ 'ಮನೆಯಲ್ಲಿ ಇರುವವರು' ಎಂದು ನೋಡುವಂತಿಲ್ಲ, ಬದಲಾಗಿ ಅವರನ್ನು 'ರಾಷ್ಟ್ರ ನಿರ್ಮಾಪಕರು' (Nation Builders) ಎಂದು ಗೌರವಿಸಬೇಕು ಎಂದು ಸರ್ವೋಚ್ಚ ನ್ಯಾಯಾಲಯ ಘೋಷಿಸಿದೆ.

ರಸ್ತೆ ಅಪಘಾತಗಳಲ್ಲಿ ಮೃತಪಟ್ಟ ಗೃಹಿಣಿಯರ ಕುಟುಂಬಕ್ಕೆ ಪರಿಹಾರ ನೀಡುವಾಗ, ಅವರ ಮನೆಯ ಕೆಲಸದ ಮೌಲ್ಯವನ್ನು ಮಾಸಿಕ ಕನಿಷ್ಠ ₹30,000 ಎಂದು ಪರಿಗಣಿಸಬೇಕೆಂದು ನ್ಯಾಯಪೀಠ ಆದೇಶ ನೀಡಿದೆ.

ಈ ತೀರ್ಪು ಪಂಜಾಬ್‌ನ ಮೋಟಾರು ಅಪಘಾತ ಪರಿಹಾರ ಪ್ರಕರಣವೊಂದಕ್ಕೆ ಸಂಬಂಧಿಸಿದ ಮೇಲ್ಮನವಿಗೆ ಸಂಬಂಧಿಸಿದಂತೆ  ಬಂದಿದೆ. 2001ರ ನವೆಂಬರ್‌ನಲ್ಲಿ ರೇಷ್ಮಾ ಎಂಬ ಮಹಿಳೆಯೊಬ್ಬರು ರಸ್ತೆ ಅಪಘಾತದಲ್ಲಿ ಮೃತಪಟ್ಟಿದ್ದರು. ಅವರ ಪತಿ ಮತ್ತು ಮೂವರು ಮಕ್ಕಳು ಪರಿಹಾರ ಕೋರಿ ಮೋಟಾರು ಅಪಘಾತ ಪರಿಹಾರ ನ್ಯಾಯಾಧಿಕರಣವನ್ನು (Motor Accident Claims Tribunal) ಸಂಪರ್ಕಿಸಿದ್ದರು.
2003ರಲ್ಲಿ ನ್ಯಾಯಾಧಿಕರಣವು ಪರಿಹಾರವನ್ನು ಘೋಷಿಸಿದ್ದರೂ, ಈ ವಿಷಯವು ಹಲವು ವರ್ಷಗಳ ಕಾಲ ಕಾನೂನು ಸಮರದಲ್ಲಿ ಸಿಲುಕಿಕೊಂಡಿತ್ತು. ಅಂತಿಮವಾಗಿ, ಅಪಘಾತ ನಡೆದ ಎರಡು ದಶಕಗಳಿಗೂ ಹೆಚ್ಚು ಸಮಯದ ನಂತರ, 2024ರ ಡಿಸೆಂಬರ್‌ನಲ್ಲಿ ಪಂಜಾಬ್ ಮತ್ತು ಹರಿಯಾಣ ಹೈಕೋರ್ಟ್ ಪ್ರಕರಣವನ್ನು ಇತ್ಯರ್ಥ ಪಡಿಸಿತ್ತು. ಈ ತೀರ್ಪಿನ ವಿರುದ್ಧ ಸುಪ್ರೀಂಕೋರ್ಟಿಗೆ   ಈ ಮೇಲ್ಮನವಿ ಬಂದಿತ್ತು.

ತೀರ್ಪಿನ ಪ್ರಮುಖ ಮುಖ್ಯಾಂಶಗಳು:

  • ಗೃಹಿಣಿಯರ ಶ್ರಮಕ್ಕೆ ಬೆಲೆ: ದಶಕಗಳಿಂದ ರಸ್ತೆ ಅಪಘಾತ ಪರಿಹಾರ ಪ್ರಕರಣಗಳಲ್ಲಿ, ಗೃಹಿಣಿಯರ ಕೆಲಸವನ್ನು ಕೌಶಲ್ಯರಹಿತ ಕಾರ್ಮಿಕರ ವೇತನಕ್ಕೆ ಹೋಲಿಸಲಾಗುತ್ತಿತ್ತು. ಇದನ್ನು ತಳ್ಳಿಹಾಕಿರುವ ನ್ಯಾಯಮೂರ್ತಿಗಳಾದ ಸಂಜಯ್ ಕರೋಲ್ ಮತ್ತು ಎನ್. ಕೋಟಿಸ್ವರ್ ಸಿಂಗ್ ಅವರ ಪೀಠ, ಗೃಹಿಣಿಯರ ಕೆಲಸದ ಸಾಮಾಜಿಕ ಮತ್ತು ಆರ್ಥಿಕ ಮೌಲ್ಯ ಅಪಾರವಾದುದು ಎಂದು ಅಭಿಪ್ರಾಯಪಟ್ಟಿದೆ.
  • ಹೊಸ ಮಾನದಂಡ: "ನಾವು ಒಂದು ಹೊಸ ತತ್ವವನ್ನು ರೂಪಿಸಿದ್ದೇವೆ. ಪ್ರಣಯ್ ಸೇಥಿ ಪ್ರಕರಣದಲ್ಲಿ ಸುಪ್ರೀಂ ಕೋರ್ಟ್ ನೀಡಿದ ತೀರ್ಪಿನ ಜೊತೆಗೆ, ಗೃಹಸೇವೆ ಅಥವಾ ಮನೆಯ ನಿರ್ವಹಣೆಯ ನಷ್ಟವನ್ನು ಮಾಸಿಕ ಕನಿಷ್ಠ ₹30,000 ಎಂದು ಪರಿಗಣಿಸಬೇಕು" ಎಂದು ನ್ಯಾಯಮೂರ್ತಿ ಕರೋಲ್ ತಿಳಿಸಿದ್ದಾರೆ.
  • ನ್ಯಾಯಕ್ಕಾಗಿ ಎರಡು ದಶಕಗಳ ಕಾಯುವಿಕೆ: ಪಂಜಾಬ್‌ನ ರೇಷ್ಮಾ ಎಂಬ ಮಹಿಳೆ 2001ರಲ್ಲಿ ಅಪಘಾತದಲ್ಲಿ ಮೃತಪಟ್ಟಿದ್ದರು. ಅವರ ಕುಟುಂಬಕ್ಕೆ ನ್ಯಾಯ ಸಿಗಲು ಬರೋಬ್ಬರಿ 20 ವರ್ಷಕ್ಕೂ ಹೆಚ್ಚು ಸಮಯ ಬೇಕಾಯಿತು. ಈ ವಿಳಂಬದ ಬಗ್ಗೆ ತೀವ್ರ ಆತಂಕ ವ್ಯಕ್ತಪಡಿಸಿದ ನ್ಯಾಯಾಲಯ, ಇಂತಹ ಪ್ರಕರಣಗಳನ್ನು ಒಂದು ವರ್ಷದೊಳಗೆ ಇತ್ಯರ್ಥಪಡಿಸಬೇಕು ಎಂದು ಕಟ್ಟುನಿಟ್ಟಿನ ಸೂಚನೆ ನೀಡಿದೆ.

ಈ ತೀರ್ಪು ಯಾಕೆ ಐತಿಹಾಸಿಕ?

ಹಿಂದೆ, ಗೃಹಿಣಿಯರು ವೇತನ ಪಡೆಯದ ಕಾರಣ ಅವರ ಕೆಲಸಕ್ಕೆ ಮೌಲ್ಯವೇ ಇಲ್ಲ ಎಂಬಂತೆ ಪರಿಗಣಿಸಲಾಗುತ್ತಿತ್ತು. ಆದರೆ, 2010ರ ಅರುಣ್ ಕುಮಾರ್ ಅಗರ್ವಾಲ್ ಪ್ರಕರಣ ಮತ್ತು 2021ರ ಕೀರ್ತಿ ಪ್ರಕರಣಗಳಲ್ಲಿ ನ್ಯಾಯಾಲಯವು ಈ ಅಸಮಾನತೆಯನ್ನು ಪ್ರಶ್ನಿಸುತ್ತಾ ಬಂದಿತ್ತು. ಈಗ ಸುಪ್ರೀಂ ಕೋರ್ಟ್ ₹30,000 ರೂಪಾಯಿಯ ನಿಶ್ಚಿತ ಮಾನದಂಡವನ್ನು ನಿಗದಿಪಡಿಸುವ ಮೂಲಕ ಗೃಹಿಣಿಯರ ನಿರಂತರ ಸೇವೆಯನ್ನು ಅಧಿಕೃತವಾಗಿ ಮಾನ್ಯ ಮಾಡಿದೆ.

ಅಪಘಾತ ಪರಿಹಾರ ಪ್ರಕರಣಗಳಲ್ಲಿ ಸುಧಾರಣೆ

ಸುಪ್ರೀಂ ಕೋರ್ಟಿನ ಈ ಆದೇಶವು ಕೇವಲ ಪರಿಹಾರದ ಮೊತ್ತವನ್ನು ಹೆಚ್ಚಿಸುವುದಷ್ಟೇ ಅಲ್ಲ, ಬದಲಾಗಿ ಪರಿಹಾರ ಪ್ರಕರಣಗಳ ಇತ್ಯರ್ಥದಲ್ಲಿನ ವಿಳಂಬವನ್ನು ಹೋಗಲಾಡಿಸಲು ಎಲ್ಲಾ ಹೈಕೋರ್ಟುಗಳ ಮುಖ್ಯ ನ್ಯಾಯಮೂರ್ತಿಗಳಿಗೆ ನಿರ್ದೇಶನವನ್ನೂ  ನೀಡಿದೆ. "ಮೋಟಾರು ವಾಹನ ಕಾಯ್ದೆಯು ಸಂತ್ರಸ್ತ ಕುಟುಂಬಗಳಿಗೆ ಕಲ್ಯಾಣವನ್ನು ತಲುಪಿಸುವ ಉದ್ದೇಶವನ್ನು ಹೊಂದಿದೆ, ಆದರೆ ದಶಕಗಳ ಕಾಲ ಕಾಯುವಿಕೆ ಈ ಉದ್ದೇಶವನ್ನೇ ಸೋಲಿಸುತ್ತದೆ" ಎಂದು ನ್ಯಾಯಪೀಠ ಅಸಮಾಧಾನ ವ್ಯಕ್ತಪಡಿಸಿದೆ.

ತೀರ್ಮಾನ: ಈ ತೀರ್ಪು ಭಾರತದ ಲಕ್ಷಾಂತರ ಗೃಹಿಣಿಯರ ಶ್ರಮಕ್ಕೆ ದೊರೆತ ದೊಡ್ಡ ಮನ್ನಣೆ. ಮನೆ ಎಂಬ ಸಂಸ್ಥೆಯನ್ನು ಕಟ್ಟುವಲ್ಲಿ ಮಹಿಳೆಯರ ಕೊಡುಗೆ ಕೇವಲ ವೈಯಕ್ತಿಕವಲ್ಲ, ಅದು ರಾಷ್ಟ್ರ ನಿರ್ಮಾಣದ ಪ್ರಕ್ರಿಯೆ ಎಂಬುದನ್ನು ಸುಪ್ರೀಂ ಕೋರ್ಟ್ ಈ ಮೂಲಕ ಜಗತ್ತಿಗೆ ಸಾರಿದೆ.

ಈ ಐತಿಹಾಸಿಕ ತೀರ್ಪಿನ ಬಗ್ಗೆ ನಿಮ್ಮ ಅನಿಸಿಕೆಗಳೇನು? ಈ ತೀರ್ಪು ಸಾಮಾನ್ಯ ಜನರಿಗೆ ಹೇಗೆ ಸಹಾಯ ಮಾಡುತ್ತದೆ ಎಂದು ನೀವು ಭಾವಿಸುತ್ತೀರಿ? ನಿಮ್ಮ ಅನಿಸಿಕೆಯನ್ನು ಕೆಳಗೆ ‘comments’ ವಿಭಾಗದಲ್ಲಿ ಬರೆಯಿರಿ.

Wednesday, June 10, 2026

ಇಂದಿನ ಇತಿಹಾಸ History Today ಜೂನ್ 10

 ಇಂದಿನ ಇತಿಹಾಸ History Today ಜೂನ್ 10

2026: ನವದೆಹಲಿ: ಪ್ರಧಾನಿ ನರೇಂದ್ರ ಮೋದಿಯವರು ಈದಿನ (2026 ಜೂನ್ 10ರ ಬುಧವಾರ) ಭಾರತದ ಅತಿ ದೀರ್ಘಕಾಲ ಸತತವಾಗಿ ಚುನಾಯಿತರಾದ ಪ್ರಧಾನಿ ಎಂಬ ಹೊಸ ರಾಜಕೀಯ ಮೈಲಿಗಲ್ಲನ್ನು ಸ್ಥಾಪಿಸಿದರು. ಈ ಮೂಲಕ ಅವರು ದೇಶದ ಮೊದಲ ಪ್ರಧಾನಿ ಜವಾಹರಲಾಲ್ ನೆಹರೂ ಅವರ ಹೆಸರಿನಲ್ಲಿದ್ದ ದಾಖಲೆಯನ್ನು ಹಿಂದಿಕ್ಕಿದರು. ಮೇ 26, 2014 ರಂದು ಮೊದಲ ಬಾರಿಗೆ ಅಧಿಕಾರ ಸ್ವೀಕರಿಸಿದ ಮೋದಿಯವರು, ಜೂನ್ 10 ರಂದು ಪ್ರಧಾನಿಯಾಗಿ ಆ ಹುದ್ದೆಯಲ್ಲಿಯೇ ಸತತವಾಗಿ ಮುಂದುವರೆದು 4,399 ದಿನಕ್ಕೆ ಕಾಲಿರಿಸಿದರು. ಈ ಸಾಧನೆಯು, ಚುನಾವಣೆಗಳ ಮೂಲಕ ಆಯ್ಕೆಯಾದ ನಂತರ ಜವಾಹರಲಾಲ್ ನೆಹರೂ ಅವರು ಹೊಂದಿದ್ದ 4,398 ದಿನಗಳ ನಿರಂತರ ಅಧಿಕಾರದ ದಾಖಲೆಯನ್ನು ಮೀರಿಸಿತು. ಭಾರತದ ಮೊದಲ ಸಾರ್ವತ್ರಿಕ ಚುನಾವಣೆಗಳ ನಂತರ ಮೇ 13, 1952 ರಿಂದ ಮೇ 27, 1964 ರಂದು ತಮ್ಮ ನಿಧನದವರೆಗೆ ನೆಹರೂ ಅವರು ಸತತವಾಗಿ ಸೇವೆ ಸಲ್ಲಿಸಿದ್ದರು.

2020: ನವದೆಹಲಿ: ಭಾರತದಲ್ಲಿ ಕೊರೋನಾವೈರಸ್ ಪ್ರಕರಣಗಳ ಏರಿಕೆ ಪ್ರಮಾಣ ಪ್ರತಿದಿನ ಅಂದಾಜು ೧೦,೦೦೦ಕ್ಕೆ ಏರಿದ್ದರ ನಡುವೆಯೂ ಇದೇ ಮೊದಲ ಬಾರಿಗೆ ಗುಣಮುಖರಾದ ಕೋವಿಡ್-೧೯ ರೋಗಿಗಳ ಸಂಖ್ಯೆಯು ಸಕ್ರಿಯ ಪ್ರಕರಣಗಳನ್ನು ಮೀರಿಸಿದೆ. ಆರೋಗ್ಯ ಸಚಿವಾಲಯವು  ೨೦೨೦ ಜೂನ್ ೧೦ರ ಬುಧವಾರ ಬಿಡುಗಡೆ ಮಾಡಿದ ಅಂಕಿಸಂಖ್ಯೆಗಳಿಂದ ವಿಚಾರವು ಬೆಳಕಿಗೆ ಬಂದಿತು. ರೋಗ ಪ್ರಾರಂಭವಾದಾಗಿನಿಂದ ಇಲ್ಲಿಯವರೆಗೆ ಕೊರೋನಾವೈರಸ್ ಸೋಂಕಿನಿಂದ ಗುಣಮುಖರಾದವರ ಸಂಖ್ಯೆ ,೩೫,೨೦೫ಕ್ಕೆ ಏರಿದೆ. ಇದೇ ವೇಳೆಗೆ ಬುಧವಾರದ ಅಂಕಿಸಂಖ್ಯೆಯಂತೆ ಭಾರತದಲ್ಲಿರುವ ಸಕ್ರಿಯ ಕೋವಿಡ್-೧೯ ಪ್ರಕರಣಗಳ ಸಂಖ್ಯೆ  ,೩೩,೬೩೨. ಒಟ್ಟಾರೆ ಚೇತರಿಕೆ ಪ್ರಮಾಣ ಶೇಕಡಾ ೪೯. ಭಾರತದ ಒಟ್ಟು ಕೊರೋನಾವೈರಸ್ ಸೋಂಕಿತರ ಸಂಖ್ಯೆ ಬುಧವಾರ .೭೬ ಲಕ್ಷವನ್ನು ಮೀರಿದ್ದು, ಸೋಂಕಿಗೆ ಬಲಿಯಾದವರ ಸಂಖ್ಯೆ ,೫೦೦ನ್ನು  ದಾಟಿದೆ. ಭಾರತೀಯ ವೈದ್ಯಕೀಯ ಸಂಶೋಧನಾ ಮಂಡಳಿ (ಐಸಿಎಂಆರ್) ಪ್ರಕಾರ, ಈವರೆಗೆ ಕೊರೋನಾವೈರಸ್ ಪತ್ತೆ ಸಲುವಾಗಿ ೫೦ ಲಕ್ಷಕ್ಕೂ ಹೆಚ್ಚು ಮಾದರಿಗಳನ್ನು ಪರೀಕ್ಷಿಸಲಾಗಿದೆ. ಕಳೆದ ೨೪ ಗಂಟೆಗಳಲ್ಲಿ .೪೫ ಲಕ್ಷ ಮಾದರಿಗಳನ್ನು ಪರೀಕ್ಷಿಸಲಾಗಿದೆ. ಒಟ್ಟು ೯೦,೦೦೦ ಪ್ರಕರಣಗಳೊಂದಿಗೆ ಮಹಾರಾಷ್ಟ್ರವು ಈಗಲೂ ದೇಶದ ಅತಿಬಾಧಿತ ರಾಜ್ಯವಾಗಿದೆ. ಕಳೆದ ೨೪ ಗಂಟೆಗಳಲ್ಲಿ ರಾಜ್ಯದಲ್ಲಿ ,೨೫೯ ಹೊಸ ಪ್ರಕರಣಗಳು ದಾಖಲಾದವು. ಆಶಾದಾಯಕ ವಿಚಾರವೇನೆಂದರೆ ಸುಮಾರು ಶೇಕಡಾ ೪೭ರಷ್ಟು ಕೋವಿಡ್ ರೋಗಿಗಳು ರಾಜ್ಯದಲ್ಲಿ ಚೇತರಿಸಿಕೊಂಡಿದ್ದಾರೆ. ಭಾರತದಲ್ಲಿ ಅತ್ಯಂತ ಹೆಚ್ಚಿನ ಪ್ರಮಾಣದಲ್ಲಿ ಕೊರೋನಾಸೋಂಕಿನಿಂದ ಗುಣಮುಖರಾದವರು ಪಂಜಾಬಿನಲ್ಲಿದ್ದಾರೆ. ರಾಜ್ಯದಲ್ಲಿ ಶೇಕಡಾ ೮೦ರಷ್ಟು ಕೊರೋನಾವೈರಸ್ ರೋಗಿಗಳು ಗುಣಮುಖರಾಗಿದ್ದಾರೆ. ಪಂಜಾಬಿನಲ್ಲಿ ಪ್ರಸ್ತುತ ೪೯೭ ಸಕ್ರಿಯ ಪ್ರಕರಣಗಳಿದ್ದರೆ, ,೧೬೭ ಮಂದಿ ಸೋಂಕಿನಿಂದ ಗುಣಮುಖರಾಗಿದ್ದಾರೆ. (ವಿವರಗಳಿಗೆ ಇಲ್ಲಿ ಕ್ಲಿಕ್  ಮಾಡಿರಿ)

2020: ನವದೆಹಲಿ: ಆಸ್ಪತ್ರೆಯ ಹಾಸಿಗೆಗಳನ್ನು ಹುಡುಕಲು ಓಡಾಡುವ ರೋಗಿಗಳಿಗೆ ಸಹಾಯ ಮಾಡುವ ಸಲುವಾಗಿ, ದೆಹಲಿಯ ಎಲ್ಲ ಆಸ್ಪತ್ರೆಗಳಲ್ಲಿ ಇರುವ ರೋಗಿಗಳು, ಹಾಸಿಗೆಗಳ ಲಭ್ಯತೆಯನ್ನು ಸೂಚಿಸುವ ಎಲೆಕ್ಟ್ರಾನಿಕ್ ಫಲPವನ್ನು ಆಸ್ಪತ್ರೆಗಳ ಪ್ರವೇಶದ್ವಾರದಲ್ಲಿ ಅಳವಡಿಸುವಂತೆ ಲೆಫ್ಟಿನೆಂಟ್ ಗವರ್ನರ್ ಅನಿಲ್ ಬೈಜಾಲ್ ಅವರು ೨೦೨೦ ಜೂನ್ ೧೦ರ ಬುಧವಾರ ಆದೇಶ ನೀಡಿದರು. ನಿಟ್ಟಿನಲ್ಲಿ ಆಸ್ಪತ್ರೆಗಳಿಗೆ ಸೂಕ್ತ ಆದೇಶ ನೀಡುವಂತೆ ಬೈಜಾಲ್ ಅವರು ಈಗಾಗಲೇ ಮುಖ್ಯ ಕಾರ್ಯದರ್ಶಿ ವಿಜಯ್ ದೇವ್ ಅವರಿಗೆ ಸೂಚಿಸಿದರು. ಎಲೆಕ್ಟ್ರಾನಿಕ್ ಫಲಕಗಳ ಸಂಪರ್ಕವನ್ನು ವಿಭಾಗೀಯ ಆಯುಕ್ತರ ಕಚೇರಿಯಲ್ಲಿ ಸ್ಥಾಪಿಸಲಾಗುವ ಕೇಂದ್ರ ನಿಯಂತ್ರಣ ಘಟಕಕ್ಕೆ ಒದಗಿಸುವಂತೆ ಕೂಡಾ ಲೆಫ್ಟಿನೆಂಟ್ ಗವರ್ನರ್ ಸೂಚಿಸಿದರು. ಸರ್ಕಾರವು ಹಿಂದೆ ಆಸ್ಪತ್ರೆಗಳಲ್ಲಿ ಹಾಸಿಗೆಗಳ ಲಭ್ಯತೆ ಬಗ್ಗೆ ತಿಳಿಯಲು ಆಸ್ಪತ್ರೆಗಳಲ್ಲಿ ಎಲೆಕ್ಟ್ರಾನಿಕ್ ಫಲಕ ಅಳವಡಿಸುವುದರ ಜೊತೆಗೆ ಸರ್ಕಾರ ಸ್ಥಾಪಿಸಿದ ವೆಬ್ ಸೈಟ್ ಮತ್ತು ಆಪ್ಗಳನ್ನು ಬಳಸುವಂತೆ ಸಾರ್ವಜನಿಕರಿಗೆ ಸೂಚಿಸಿತ್ತು. ಆದರೆ ವೆಬ್ ಸೈಟ್ ಮತ್ತು ಆಪ್ಗಳಲ್ಲಿ ಹಾಸಿಗೆ ಲಭ್ಯತೆಯ ಮಾಹಿತಿ ಇದ್ದರೂ, ಆಸ್ಪತ್ರೆಗೆ ಹೋದಾಗಿ ಹಾಸಿಗೆ ಇಲ್ಲ ಎಂಬುದಾಗಿ ವಾಪಸ್ ಕಳುಹಿಸಲಾಗುತ್ತಿದೆ ಎಂಬ ದೂರುಗಳು ಬಂದಿದ್ದವು. (ವಿವರಗಳಿಗೆ ಇಲ್ಲಿ ಕ್ಲಿಕ್  ಮಾಡಿರಿ)

2020: ಬೀಜಿಂಗ್:  ರಾಜತಾಂತ್ರಿಕರು ಮತ್ತು ಸೇನಾ ಅಧಿಕಾರಿಗಳ ನಡುವಣ ಮಾತುಕತೆಯ ಬಳಿಕ ಉಭಯ ದೇಶಗಳೂ ಪರಿಸ್ಥಿತಿ ಶಮನಕ್ಕೆ ಯತ್ನಿಸುತ್ತಿವೆ ಎಂದು ಚೀನಾ ೨೦೨೦ ಜೂನ್ ೧೦ರ ಬುಧವಾರ ಹೇಳಿತು. ಆದರೆ ಲಡಾಖ್ ವಾಸ್ತವಿಕ ನಿಯಂತ್ರಣ ರೇಖೆಯಿಂದ ಹಿಂದಕ್ಕೆ ತೆರಳುತ್ತಿರುವ ಉಭಯ ದೇಶಗಳ ಪಡೆಗಳ ವಿವರ ನೀಡಲು ಅದು ನಿರಾಕರಿಸಿತು. ಬುಧವಾರ ಇನ್ನೊಂದು ಸುತ್ತಿನ ಮಾತುಕತೆ ನಡೆಯುವುದಕ್ಕೆ ಮುಂಚಿತವಾಗಿ ಗಡಿಬಿಕ್ಕಟ್ಟನ್ನು ಕೊನೆಗೊಳಿಸುವ ಉದ್ದೇಶದಿಂದ ಉಭಯ ದೇಶಗಳ ಸೇನೆಗಳು ಪೂರ್ವ ಲಡಾಖ್ನಿಂದ ಸೀಮಿತ ಪ್ರಮಾಣದಲ್ಲಿ ಹಿಂದಕ್ಕೆ ಹೊರಟಿವೆ ಎಂಬುದಾಗಿ ಭಾರತೀಯ ಮಾಧ್ಯಮಗಳಲ್ಲಿ ಬಂದ ವರದಿಗಳಿಗೆ ಚೀನಾದ ವಿದೇಶಾಂಗ ಸಚಿವಾಲಯದ ವಕ್ತಾರ ಹುವಾ ಚುನಿಯಿಂಗ್ ಅವರು ಪ್ರತಿಕ್ರಿಯಿಸಿದರು. ಉಭಯ ದೇಶಗಳ ಸೇನೆಗಳು ಹಿಂದಿನ ಸ್ಥಳಗಳಿಂದ ಹಿಂದಕ್ಕೆ ಸಾಗುತ್ತಿವೆ ಎಂಬ ವರದಿಗಳ ಬಗ್ಗೆ ಪ್ರಶ್ನಿಸಿದಾಗಗಡಿಯುದ್ದಕ್ಕೂ ಉದ್ವಿಗ್ನತೆ ಶಮನಕ್ಕೆ ಉಭಯ ಕಡೆಗಳೂ ಕ್ರಮಗಳನ್ನು ಕೈಗೊಳ್ಳುತ್ತಿವೆಎಂದಷ್ಟೇ ಹುವಾ ತಮ್ಮ ಪತ್ರಿಕಾಗೋಷ್ಠಿಯಲ್ಲಿ ಹೇಳಿದರು. ಸಮಸ್ಯೆ ಇತ್ಯರ್ಥಕ್ಕಾಗಿ ಶನಿವಾರ ನಡೆದ ಭಾರತ ಮತ್ತು ಚೀನಾ ನಡುವಣ ಸೇನಾ ಮಾತುಕತೆಗಳನ್ನು ನಿರ್ದಿಷ್ಟವಾಗಿ ಆಕೆ ಉಲ್ಲೇಖಿಸಲಿಲ್ಲ. ಇತೀಚೆಗೆ ಚೀನಾ ಮತ್ತು ಭಾರತದ ರಾಜತಾಂತ್ರಿಕ ಮತ್ತು ಸೇನಾ ಮಟ್ಟದಲ್ಲಿ ಗಡಿಯಲ್ಲಿನ ಪರಿಸ್ಥಿತಿಗೆ ಸಂಬಂಧಿಸಿದಂತೆ ಪರಿಣಾಮಕಾರಿ ಸಂಪರ್ಕ ಸಾಧಿಸಲಾಗಿದೆ ಮತ್ತು ಧನಾತ್ಮಕ ಸಹಮತಕ್ಕೆ ಬರಲಾಗಿದೆಎಂದು ಆಕೆ ನುಡಿದರು. (ವಿವರಗಳಿಗೆ ಇಲ್ಲಿ ಕ್ಲಿಕ್  ಮಾಡಿರಿ)

2020: ಮುಂಬೈ: ಕೊರೋನಾವೈರಸ್ ಸಾಂಕ್ರಾಮಿಕದ ಪ್ರಾಥಮಿಕ ದಿನಗಳಲ್ಲಿ ಮುಂಬೈ ನಗರದಲ್ಲಿ ಕೋವಿಡ್ ಹಾಟ್ ಸ್ಪಾಟ್ ಆಗಿ ಪರಿವರ್ತನೆಗೊಂಡಿದ್ದ ಧಾರಾವಿ ಕೊಳಚೆಗೇರಿಯು ದಿನದಿಂದ ದಿನಕ್ಕೆ ಕಡಿಮೆ ಸೋಂಕಿನ ಪ್ರಕರಣಗಳನ್ನು ಕಾಣುತ್ತಿದೆ. ದೈನಂದಿನ ಸರಾಸರಿ ಸೋಂಕು ಪ್ರಕರಣಗಳು ಇಳಿಮುಖವಾಗುತ್ತಿವೆ. ಸೋಂಕು ನಿಯಂತ್ರಣಕ್ಕೆ ಧಾರಾವಿ ದಾರಿ ತೋರಿಸಿದೆ. ಏಷ್ಯಾದ ಅತಿದೊಡ್ಡ ಕೊಳಚೆಗೇರಿ ಆಗಿರುವ ಧಾರಾವಿಯಲ್ಲಿ ಜೂನ್ ಮೊದಲ ವಾರ ಕೊರೋನಾವೈರಸ್ ಸೋಂಕಿಗೆ ಒಬ್ಬನೇ ಒಬ್ಬ ವ್ಯಕ್ತಿ ಕೂಡಾ ಬಲಿಯಾಗಿಲ್ಲ. ಮೇ ತಿಂಗಳಲ್ಲಿ ಸರಾಸರಿ ೪೭ ಪ್ರಕರಣಗಳು ವರದಿಯಾಗಿದ್ದ ಧಾರಾವಿಯಲ್ಲಿ ಜೂನ್ ಹೊತ್ತಿಗೆ ಸೋಂಕಿನ ಪ್ರಕರಣಗಳ ಸಂಖ್ಯೆ ೨೭ಕ್ಕೆ ಇಳಿದಿತ್ತು. ಸೋಂಕು ದುಪ್ಪಟ್ಟಾಗುವ ಪ್ರಮಾಣ ೪೪ ದಿನಗಳಿಗೆ ಏರಿತ್ತು. ಪ್ರದೇಶದಲ್ಲಿ ಒಟ್ಟು ಕೊರೋನಾವೈರಸ್ ಪ್ರಕರಣಗಳಲ್ಲಿ ಶೇಕಡಾ ೫೦ರಷ್ಟು ಪ್ರಕರಣಗಳಲ್ಲಿ ರೋಗಿಗಳು ಚೇತರಿಸಿದ್ದಾರೆ. ಜೂನ್ ೮ರಂದು ಪ್ರದೇಶದಲ್ಲಿ ೧೨ ಹೊಸ ಪ್ರಕರಣಗಳು ದಾಖಲಾದವು ಮತ್ತು ಜೂನ್ ೭ರಂದು ೧೩ ಹೊಸ ಪ್ರಕರಣಗಳು ದೃಢಪಟ್ಟವು. ಆದಾಗ್ಯೂ, ಜೂನ್ ೯ರಂದು ಇಲ್ಲಿ ೨೬ ಹೊಸ ಪ್ರಕರಣಗಳು ಮತ್ತು ಸಾವುಗಳು ದಾಖಲಾದವು. ಮಹಾರಾಷ್ಟ್ರ ಸರ್ಕಾರದವೈರಸ್ಸನ್ನು ಬೆನ್ನಟ್ಟುವ ನೀತಿಯುಕೊರೋನಾವೈರಸ್ ವಿರುದ್ಧದ ಸಮರದಲ್ಲಿ ವಿಜಯಸಾಧನೆಗೆ ಕಾರಣವಾಗಿದೆ ಎಂದು ಧಾರಾವಿಯನ್ನೂ ಒಳಗೊಳ್ಳುವ ಬಿಎಂಸಿ ಜಿ ಉತ್ತರ ವಾರ್ಡಿನ ಅಸಿಸ್ಟೆಂಟ್ ಮುನಿಸಿಪಲ್ ಕಮೀಷನರ್ ಕಿರಣ್ ದಿಘಾವ್ಕರ್ ೨೦೨೦ ಜೂನ್ ೧೦ರ ಬುಧವಾರ ಹೇಳಿದರು. ತೀವ್ರ ಸ್ವರೂಪದ ಸಂಪರ್ಕ ಪತ್ತೆ, ಪ್ರತ್ಯೇಕವಾಸ ಮತ್ತು ಪರೀಕ್ಷೆಗಳು ಪಾಸಿಟಿವ್ ಪ್ರಕರಣಗಳ ಸಂಖ್ಯೆಯನ್ನು ಇಳಿಮುಖಗೊಳಿಸಲು ಮುಂಬೈಗೆ ನೆರವಾದವು. (ವಿವರಗಳಿಗೆ ಇಲ್ಲಿ ಕ್ಲಿಕ್  ಮಾಡಿರಿ)

2020: ನವದೆಹಲಿ: ಪಾಲಿಶ್ ಮಾಡಿದ ವಜ್ರಗಳು, ಬೆಳ್ಳಿ ಚಿನ್ನಾಭರಣ ಮತ್ತು ಮುತ್ತು ಸೇರಿದಂತೆ ಸುಮಾರು ,೩೫೦ ಕೋಟಿ ರೂಪಾಯಿ ಮೌಲ್ಯದ ೧೦೮ ವಸ್ತುಗಳನ್ನು ನೀರವ್ ಮೋದಿ ಮತ್ತು ಮೆಹುಲ್ ಚೊಕ್ಸಿಗೆ ಸೇರಿದ ಹಾಂಕಾಂಗ್ ಗೋದಾಮಿನಿಂದ ಭಾರತಕ್ಕೆ ತರಲಾಗಿದೆ ಎಂದು ಜಾರಿ ನಿರ್ದೇಶನಾಲಯವು 2020 ಜೂನ್ 10ರ ಬುಧವಾರ ಪ್ರಕಟಿಸಿತು. ವಸ್ತುಗಳ ಮೌಲ್ಯ ಅಂದಾಜು ,೩೫೦ ಕೋಟಿ ರೂಪಾಯಿಗಳು ಎಂಬುದಾಗಿ ಘೋಷಿಸಲಾಗಿದೆ. ಪಾಲಿಶ್ ಮಾಡಿದ ವಜ್ರಗಳು, ಮುತ್ತುಗಳು, ಬೆಳ್ಳಿ ಚಿನ್ನಾಭರಣಗಳು ಇತ್ಯಾದಿ ಅಮೂಲ್ಯ ಸೊತ್ತುಗಳು ಇವುಗಳಲ್ಲಿ ಸೇರಿವೆ. ಇವುಗಳನ್ನು ಹಾಂಕಾಂಗಿನಲ್ಲಿ ಸಾಗಣೆ ಕಂಪೆನಿಯೊಂದರ ಗೋದಾಮಿನಲ್ಲಿ ಇಡಲಾಗಿತ್ತು ಎಂದು ಸಂಸ್ಥೆಯ ಅಧಿಕಾರಿಯೊಬ್ಬರು ತಿಳಿಸಿದರು. ಸುಮಾರು ,೩೪೦ ಕಿ.ಗ್ರಾಂ ತೂಕದ ಸರಕನ್ನು ಬುಧವಾರ ಮುಂಬೈಗೆ ವಾಪಸ್ ತರಲಾಗಿದೆ ಎಂದು ಅಧಿಕಾರಿ ನುಡಿದರು. ನೀರವ್ ಮೋದಿ ಮತ್ತು ಮೆಹುಲ್ ಚೊಕ್ಸಿ ಭಾರತೀಯ ವ್ಯಾಪಾರೋದ್ಯಮಿಗಳಾಗಿದ್ದು, ಭಾರತೀಯ ಬ್ಯಾಂಕುಗಳಿಗೆ ಸಹಸ್ರಾರು ಕೋಟಿ ರೂಪಾಯಿ ವಂಚನೆ ಎಸಗಿದ ಪ್ರಕರಣಗಳಲ್ಲಿ ಅಧಿಕಾರಿಗಳಿಗೆ ಬೇಕಾಗಿದ್ದಾರೆ. ನೀರವ್ ಮೋದಿ ೨೩,೭೮೦ ಕೋಟಿ ರೂಪಾಯಿ ಮೊತ್ತದ ಪಂಜಾಬ್ ನ್ಯಾಷನಲ್ ಬ್ಯಾಂಕ್ (ಪಿಎನ್ ಬಿ) ವಂಚನೆ ಪ್ರಕರಣದ ಮುಖ್ಯ ಆರೋಪಿಯಾಗಿದ್ದು ಕಳೆದ ವರ್ಷ ಮಾರ್ಚ್ನಿಂದೀಚೆಗೆ ಇಂಗ್ಲೆಂಡಿನಲ್ಲಿ ಸೆರೆವಾಸದಲ್ಲಿರುವ  ನೀರವ್ ಮೋದಿಯನ್ನು ಇಂಗ್ಲೆಂಡಿನಿಂದ ಹಸ್ತಾಂತರ ಮಾಡಿಕೊಳ್ಳಲು ಭಾರತವು ತೀವ್ರ ಪ್ರಯತ್ನ ನಡೆಸುತ್ತಿದೆ. (ವಿವರಗಳಿಗೆ ಇಲ್ಲಿ ಕ್ಲಿಕ್  ಮಾಡಿರಿ)

 ಇಂದಿನ ಇತಿಹಾಸ  History Today ಜೂನ್  10  (2019+ ಹಿಂದಿನವುಗಳಿಗೆ ಇಲ್ಲಿ ಕ್ಲಿಕ್ ಮಾಡಿರಿ)

-ಸಂಗ್ರಹ: ನೆತ್ರಕೆರೆ ಉದಯಶಂಕರ

Advertisement