Thursday, July 9, 2026

ಮತದಾರರ ಪಟ್ಟಿಯಲ್ಲಿ ವಿಳಾಸ ಬದಲಾವಣೆ: 'ಫಾರ್ಮ್ 6' ಪರಿಹಾರ

 ಮತದಾರರ ಪಟ್ಟಿಯಲ್ಲಿ ವಿಳಾಸ ಬದಲಾವಣೆ: 'ಫಾರ್ಮ್ 6'  ಪರಿಹಾರ

 ಬೆಂಗಳೂರು: ಮತದಾರರ ಪಟ್ಟಿಯಲ್ಲಿರುವ ಹಳೆಯ ವಿಳಾಸ ಈಗ ಬದಲಾಗಿದ್ದರೆ, ಅಂತಹವರಿಗೆ ಎಣಿಕೆ ನಮೂನೆ (Enumeration Form) ತಲುಪುವುದಿಲ್ಲ ಎಂಬ ಆತಂಕ ಸದ್ಯ ನಗರದ ಮತದಾರರಲ್ಲಿ ಮನೆಮಾಡಿದೆ. ಆದರೆ, ಈ ಬಗ್ಗೆ ಯಾವುದೇ ಆತಂಕ ಪಡುವ ಅಗತ್ಯವಿಲ್ಲ ಎಂದು ರಾಜ್ಯ ಚುನಾವಣಾ ಆಯೋಗ ಸ್ಪಷ್ಟನೆ ನೀಡಿದೆ.

ಕರ್ನಾಟಕದ ಮುಖ್ಯ ಚುನಾವಣಾಧಿಕಾರಿ (CEO) ಅವರು ರಾಜಕೀಯ ಪಕ್ಷಗಳ ಪ್ರತಿನಿಧಿಗಳೊಂದಿಗೆ ನಡೆಸಿದ ವಿಶೇಷ ತೀವ್ರ ಪರಿಷ್ಕರಣೆ (SIR) ಕುರಿತ ಸಭೆಯಲ್ಲಿ ಈ ಮಹತ್ವದ ಮಾಹಿತಿ ಹಂಚಿಕೊಳ್ಳಲಾಗಿದೆ.

ಪ್ರಮುಖ ಅಂಶಗಳು:

  • ವಿಳಾಸ ಬದಲಾವಣೆ: ಹಾಲಿ ಮತದಾರರ ಪಟ್ಟಿಯಲ್ಲಿರುವ ವಿಳಾಸಕ್ಕಿಂತ ಪ್ರಸ್ತುತ ವಾಸವಿರುವ ವಿಳಾಸ ಬದಲಾಗಿದ್ದರೆ, ಅವರಿಗೆ ಎಣಿಕೆ ನಮೂನೆಗಳನ್ನು ವಿತರಿಸಲಾಗುವುದಿಲ್ಲ. ಹೀಗಾಗಿ, ಅವರ ಹೆಸರು ಕರಡು ಮತದಾರರ ಪಟ್ಟಿಯಲ್ಲಿ ಕಾಣಿಸಿಕೊಳ್ಳುವುದಿಲ್ಲ.
  • ಪರಿಹಾರವೇನು?: ಆಗಸ್ಟ್ 5ರ ನಂತರ ಕರಡು ಮತದಾರರ ಪಟ್ಟಿಯು ಪ್ರಕಟವಾಗಲಿದೆ. ಆ ನಂತರ ನಡೆಯುವ ಪರಿಶೀಲನೆ ಹಾಗೂ ಆಕ್ಷೇಪಣೆಗಳ ಅವಧಿಯಲ್ಲಿ, ಮತದಾರರು 'ಫಾರ್ಮ್ 6' (Form 6) ಭರ್ತಿ ಮಾಡಿ ಸಲ್ಲಿಸುವ ಮೂಲಕ ಅಂತಿಮ ಮತದಾರರ ಪಟ್ಟಿಯಲ್ಲಿ ತಮ್ಮ ಹೆಸರನ್ನು ಸೇರಿಸಿಕೊಳ್ಳಬಹುದು.
  • ನಗರ ಪ್ರದೇಶಗಳಿಗೆ ವಿಶೇಷ ಗಮನ: ಬೆಂಗಳೂರಿನಂತಹ ವೇಗವಾಗಿ ಬೆಳೆಯುತ್ತಿರುವ ನಗರಗಳಲ್ಲಿ ಮನೆ ಬದಲಾವಣೆ ಸಾಮಾನ್ಯ. ಈ ಸ್ಪಷ್ಟನೆಯು ಇಂತಹ ಸಾವಿರಾರು ಮತದಾರರಲ್ಲಿ ಇದ್ದ ಗೊಂದಲವನ್ನು ನಿವಾರಿಸಲಿದೆ ಎಂದು ರಾಜಕೀಯ ಪಕ್ಷಗಳ ಪ್ರತಿನಿಧಿಗಳು ಅಭಿಪ್ರಾಯಪಟ್ಟಿದ್ದಾರೆ.

ಸಭೆಯಲ್ಲಿ ಚರ್ಚಿಸಲ್ಪಟ್ಟ ಇತರ ವಿಷಯಗಳು:

ಸಭೆಯು ಕೇವಲ ವಿಳಾಸ ಬದಲಾವಣೆಗೆ ಸೀಮಿತವಾಗಿರಲಿಲ್ಲ; ಹಲವು ಪ್ರಮುಖ ವಿಚಾರಗಳ ಕುರಿತು ಪಕ್ಷಗಳ ಪ್ರತಿನಿಧಿಗಳು ಆಯೋಗದ ಗಮನ ಸೆಳೆದಿದ್ದಾರೆ:

  • ವಿತರಣೆಯ ಅಂಕಿಅಂಶ: ಎಣಿಕೆ ನಮೂನೆಗಳ ವಿತರಣೆ ಶೇ. 80ರಷ್ಟು ಪೂರ್ಣಗೊಂಡಿದೆ ಎಂಬ ಆಯೋಗದ ಹೇಳಿಕೆಯ ಬಗ್ಗೆ ಬಿಜೆಪಿ ಪ್ರತಿನಿಧಿಗಳು ಪ್ರಶ್ನಿಸಿದ್ದಾರೆ. ಕೇವಲ ನಮೂನೆಗಳನ್ನು ಮನೆಗೆ ತಲುಪಿಸುವುದು ಮಾತ್ರವಲ್ಲದೆ, ಬೂತ್ ಮಟ್ಟದ ಅಧಿಕಾರಿಗಳು (BLOs) ಮತದಾರರಿಗೆ ಪ್ರಕ್ರಿಯೆಯನ್ನು ಸರಿಯಾಗಿ ವಿವರಿಸಿದ್ದಾರೆಯೇ ಎಂಬ ಬಗ್ಗೆ ಸ್ಪಷ್ಟನೆ ಕೋರಿದ್ದಾರೆ.
  • ಕ್ಷೇತ್ರ ಮಟ್ಟದ ಪರಿಶೀಲನೆ: ಜಿಲ್ಲೆಗಳು, ತಾಲೂಕುಗಳು ಮತ್ತು ಮತಗಟ್ಟೆಗಳಲ್ಲಿನ ವಾಸ್ತವ ಸ್ಥಿತಿಯನ್ನು ತಿಳಿಯಲು ಮುಖ್ಯ ಚುನಾವಣಾಧಿಕಾರಿಗಳು ಸ್ವತಃ ಕ್ಷೇತ್ರಗಳಿಗೆ ಭೇಟಿ ನೀಡಿ ಪರಿಶೀಲನೆ ನಡೆಸಬೇಕು ಎಂದು ಕಾಂಗ್ರೆಸ್ ಪ್ರತಿನಿಧಿಗಳು ಸಲಹೆ ನೀಡಿದ್ದಾರೆ.
  • ಇತರೆ ಸುಧಾರಣೆಗಳು: ಮತದಾರರ ಹೆಸರು ಅಥವಾ ಉಪನಾಮದಲ್ಲಿನ ಕಾಗುಣಿತ ದೋಷಗಳನ್ನು ಸರಿಪಡಿಸುವುದು, ಮದುವೆಯಾದ ಮಹಿಳೆಯರ ಹೆಸರಿನಲ್ಲಿ ಪತಿಯ ಹೆಸರನ್ನು ಸೇರಿಸುವಂತಹ ತಾಂತ್ರಿಕ ಬದಲಾವಣೆಗಳಿಗೆ ಹೆಚ್ಚಿನ ಆದ್ಯತೆ ನೀಡುವಂತೆ ರಾಜಕೀಯ ಪಕ್ಷಗಳು ಮನವಿ ಮಾಡಿವೆ. ಅಲ್ಲದೆ, ಬಿಎಲ್‌ಒಗಳು (BLO) ಮತ್ತು ಬೂತ್ ಮಟ್ಟದ ಏಜೆಂಟರ (BLA) ನಡುವಿನ ಸಮನ್ವಯವನ್ನು ಬಲಪಡಿಸುವ ಅಗತ್ಯವನ್ನೂ ಒತ್ತಿ ಹೇಳಲಾಗಿದೆ.

ಈ ಹೊಸ ಮಾಹಿತಿಯು ಮತದಾರರಿಗೆ ತಮ್ಮ ಹೆಸರನ್ನು ಪಟ್ಟಿಯಲ್ಲಿ ಸೇರಿಸಿಕೊಳ್ಳಲು ಅಥವಾ ಬದಲಾವಣೆಗಳನ್ನು ಮಾಡಿಕೊಳ್ಳಲು ಸೂಕ್ತ ಅವಕಾಶ ಕಲ್ಪಿಸಿದೆ. 

Wednesday, July 8, 2026

ಜುಲೈ 17ರಂದು ಹಳಿ ಏರಲಿದೆ ದೇಶದ ಮೊದಲ ಹೈಡ್ರೋಜನ್ ರೈಲು!

 ಜುಲೈ 17ರಂದು ಹಳಿ ಏರಲಿದೆ ದೇಶದ ಮೊದಲ ಹೈಡ್ರೋಜನ್ ರೈಲು!

ವದೆಹಲಿ: ಭಾರತೀಯ ರೈಲ್ವೆಯು ಪರಿಸರ ಸ್ನೇಹಿ ಪ್ರಯಾಣದತ್ತ ಐತಿಹಾಸಿಕ ಹೆಜ್ಜೆ ಇಡಲು ಸಜ್ಜಾಗಿದೆ. ದೇಶದ ಮೊದಲ ಹೈಡ್ರೋಜನ್ ಚಾಲಿತ ರೈಲಿಗೆ ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ಜುಲೈ 17 ರಂದು ಹಸಿರು ನಿಶಾನೆ ತೋರಲಿದ್ದಾರೆ ಎಂದು ರೈಲ್ವೆ ಸಚಿವಾಲಯದ ಮೂಲಗಳು ತಿಳಿಸಿವೆ. ಹರಿಯಾಣದ ಜಿಂದ್ ರೈಲು ನಿಲ್ದಾಣದಿಂದ ಈ ರೈಲು ತನ್ನ ಮೊದಲ ಪಯಣ ಆರಂಭಿಸಲಿದೆ.

ಯೋಜನೆಯ ಮುಖ್ಯಾಂಶಗಳು:

  • ಮಾರ್ಗ: ಹರಿಯಾಣದ ಜಿಂದ್ – ಸೋನಿಪತ್ ನಡುವೆ ಈ ರೈಲು ಸಂಚರಿಸಲಿದೆ.
  • ದೈನಂದಿನ ಪ್ರಯಾಣ: ಪ್ರತಿದಿನ ಒಟ್ಟು 356 ಕಿ.ಮೀ ಅಂತರವನ್ನು ಕ್ರಮಿಸಲಿದೆ.
  • ಸಂಚಾರ: ದಿನಕ್ಕೆ ಎರಡು ರೌಂಡ್ ಟ್ರಿಪ್‌ಗಳನ್ನು ಪೂರೈಸಲಿದೆ.
  • ಸಾಮರ್ಥ್ಯ: ಒಟ್ಟು 682 ಪ್ರಯಾಣಿಕರು ಕುಳಿತುಕೊಳ್ಳುವ ಸಾಮರ್ಥ್ಯವನ್ನು ಹೊಂದಿದ್ದು, ಒಟ್ಟಾರೆ ಸುಮಾರು 2,600 ಪ್ರಯಾಣಿಕರನ್ನು ಹೊತ್ತೊಯ್ಯಬಲ್ಲದು.

ಹೈಡ್ರೋಜನ್ ರೈಲು ಹೇಗೆ ಕೆಲಸ ಮಾಡುತ್ತದೆ?

ಈ ರೈಲು ಡೀಸೆಲ್ ಅಥವಾ ವಿದ್ಯುತ್ ಬದಲಿಗೆ 'ಹೈಡ್ರೋಜನ್ ಫ್ಯೂಯಲ್ ಸೆಲ್' ತಂತ್ರಜ್ಞಾನವನ್ನು ಬಳಸುತ್ತದೆ. ಇದು ಹೈಡ್ರೋಜನ್ ಅನ್ನು ವಿದ್ಯುತ್ ಆಗಿ ಪರಿವರ್ತಿಸುವ ಮೂಲಕ ರೈಲನ್ನು ಚಲಾಯಿಸುತ್ತದೆ.

  • ಪರಿಸರ ಸ್ನೇಹಿ: ಈ ತಂತ್ರಜ್ಞಾನದಲ್ಲಿ ಯಾವುದೇ ಮಾಲಿನ್ಯಕಾರಕ ಹೊಗೆ ಬರುವುದಿಲ್ಲ. ಬದಲಾಗಿ, ಕೇವಲ ನೀರಿನ ಹಬೆ (Water Vapour) ಮಾತ್ರ ಹೊರಸೂಸುತ್ತದೆ, ಇದು ಪರಿಸರಕ್ಕೆ ಅತ್ಯಂತ ಸುರಕ್ಷಿತವಾಗಿದೆ.
  • ಶಕ್ತಿ: ಈ ರೈಲಿನಲ್ಲಿ ಎರಡು ಡ್ರೈವಿಂಗ್ ಪವರ್ ಕಾರ್‌ಗಳಿದ್ದು, ತಲಾ 1,200 kW ಶಕ್ತಿಯನ್ನು ಉತ್ಪಾದಿಸುತ್ತವೆ. ಒಟ್ಟಾರೆಯಾಗಿ ಇದು ಸುಮಾರು 3,200 ಕುದುರೆ ಶಕ್ತಿ (hp) ಸಾಮರ್ಥ್ಯವನ್ನು ಹೊಂದಿದೆ.

ವೇಗ ಮತ್ತು ಸುರಕ್ಷತೆ:

ರೈಲು ಗರಿಷ್ಠ 110 ಕಿ.ಮೀ ವೇಗದಲ್ಲಿ ಚಲಿಸುವ ಸಾಮರ್ಥ್ಯವನ್ನು ಹೊಂದಿದ್ದರೂ, ಸುರಕ್ಷತೆಯ ದೃಷ್ಟಿಯಿಂದ ಪ್ರಸ್ತುತ ಜಿಂದ್-ಸೋನಿಪತ್ ಮಾರ್ಗದಲ್ಲಿ 75 ಕಿ.ಮೀ ವೇಗದಲ್ಲಿ ಕಾರ್ಯನಿರ್ವಹಿಸಲಿದೆ. ಟ್ಯೂವಿ ಸುಡ್ (TÜV SÜD) ಸಂಸ್ಥೆಯಿಂದ ಈ ರೈಲಿನ ಸುರಕ್ಷತಾ ವ್ಯವಸ್ಥೆಗಳು ಈಗಾಗಲೇ ಅಂತರಾಷ್ಟ್ರೀಯ ಮಟ್ಟದಲ್ಲಿ ದೃಢೀಕರಿಸಲ್ಪಟ್ಟಿವೆ.

ಈ ರೈಲಿನ ಆಗಮನದಿಂದ ಭಾರತವು ಜರ್ಮನಿ, ಜಪಾನ್ ಮತ್ತು ಚೀನಾದಂತಹ ಮುಂದುವರಿದ ರಾಷ್ಟ್ರಗಳ ಸಾಲಿಗೆ ಸೇರ್ಪಡೆಯಾಗಿದ್ದು, ಇದು ಭಾರತೀಯ ರೈಲ್ವೆಯ ಇಂಗಾಲ ಮುಕ್ತ (Net-Zero) ಗುರಿಯತ್ತ ಇಟ್ಟ ದೊಡ್ಡ ಹೆಜ್ಜೆಯಾಗಿದೆ.

Tuesday, June 30, 2026

ದೇಗುಲಕ್ಕೆ ಕಳೆಗಟ್ಟಿಸಿದ ಎರಡು ಕಾರ್ಯಕ್ರಮಗಳು

 ದೇಗುಲಕ್ಕೆ ಕಳೆಗಟ್ಟಿಸಿದ ಎರಡು ಕಾರ್ಯಕ್ರಮಗಳು

ಯಕ್ಷಗಾನ ತರಗತಿ ದ್ವಿತೀಯ ತಂಡ ಪ್ರಾರಂಭೋತ್ಸವ + ಸತ್ಯನಾರಾಯಣ ಪೂಜಾ

ಕ್ತಿ ಶ್ರದ್ಧೆಯೊಂದಿಗೆ ನಡೆಯುವ ದೇವಾರಾಧನೆ ಜೊತೆಗೆ ಸಾಂಸ್ಕೃತಿಕ ಚಟುವಟಿಕೆಗಳಿಗೆ ಇಂಬುಕೊಡುವ ಕಾರ್ಯಕ್ರಮಗಳು ದೇವಾಲಯಕ್ಕೆ ವಿಶೇಷ ಕಳೆಯನ್ನು ನೀಡುತ್ತವೆ.

ಗಣೇಶೋತ್ಸವ, ವಾರ್ಷಿಕೋತ್ಸವ, ಜಾತ್ರೆ ಇವುಗಳೆಲ್ಲ ದೇವಸ್ಥಾನಕ್ಕೆ ವಿಶೇಷ ಕಳೆಯನ್ನು ತಂದುಕೊಡುವ ವಿಶೇಷ ಸಂದರ್ಭಗಳು. ಹಾಗೆಯೇ ಇಂತಹ ಸಂದರ್ಭಗಳಲ್ಲಿ ನಡೆಯುವ ಸಾಂಸ್ಕೃತಿಕ ಕಾರ್ಯಕ್ರಮಗಳು ಈ ವಿಶೇಷ ಸಂದರ್ಭಗಳನ್ನು ಇನ್ನಷ್ಟು ಸ್ಮರಣೀಯವನ್ನಾಗಿ ಮಾಡುತ್ತವೆ.

ದೇವಸ್ಥಾನಗಳಲ್ಲಿ ಇಂತಹ ಸಾಂಸ್ಕತಿಕ ಚಟುವಟಿಕೆಗೆ ಒದಗಿ ಬರುವ ಪ್ರೋತ್ಸಾಹ ಇನ್ನೂ ವಿಶೇಷವಾದದ್ದು.

ಬೆಂಗಳೂರಿನ ರಾಮಕೃಷ್ಣ ಹೆಗಡೆ ನಗರದ ಶ್ರೀ ಬಾಲಾಜಿ ಕೃಪಾ ಬಡಾವಣೆಯ ಶ್ರೀ ಬಾಲಾಜಿ ಮಹಾಗಣಪತಿ, ವೆಂಕಟೇಶ್ವರ, ಅಭಯ ಆಂಜನೇಯ ಸ್ವಾಮಿ ದೇವಸ್ಥಾನವು ಈ ನಿಟ್ಟಿನಲ್ಲಿ ನಿರಂತರ ಶ್ರಮ ವಹಿಸುತ್ತಿದೆ.

ಪ್ರತಿ ಮಾಸವೂ ಸತ್ಯ ನಾರಾಯಣ ಪೂಜೆ ಮತ್ತು ಸಂಕಷ್ಟಿ ಪೂಜೆಯನ್ನು ನಿರಂತರವಾಗಿ ನೆರವೇರಿಸುತ್ತಾ ಬಂದಿರುವುದರ ಜೊತೆಗೆ ಕಳೆದ ಎಂಟು ತಿಂಗಳುಗಳಿಂದ ಯಕ್ಷಗುರು ಉಮೇಶರಾಜ್‌ ಮಂದಾರ್ತಿ ನೇತೃತ್ವದ ʼಯಕ್ಷ ಕಲಾ ಕೌಸ್ತುಭʼ ತಂಡದ ಮೂಲಕ ಆಸಕ್ತರಿಗೆ ಕರ್ನಾಟಕದ ಹೆಮ್ಮೆಯ ಕಲೆಯಾದ ಯಕ್ಷಗಾನವನ್ನು ಕಲಿಸಿಕೊಡುವ ಕೈಕಂಕರ್ಯಕ್ಕೆ ನೀರೆಯುತ್ತಾ ಬಂದಿದೆ.

ಈ ತಂಡದ ಮೂಲಕ ಯಕ್ಷಗಾನ ಕಲಿತ ಮಕ್ಕಳು, ಮಹಿಳೆಯರು ಈ ಅವಧಿಯಲ್ಲಿ ಮೂರು ಯಕ್ಷಗಾನ ಪ್ರದರ್ಶನಗಳನ್ನೂ ಯಶಸ್ವಿಯಾಗಿ ನೀಡಿದ್ದಾರೆ. ಇದೀಗ ತಂಡವು ಯಕ್ಷಗಾನ ಕಲಿಯಬಯಸಿರುವ ಎರಡನೇ ತಂಡಕ್ಕೆ ತರಗತಿಗಳನ್ನೂ ಆರಂಭಿಸಿದೆ.

೨೦೨೬ ಜೂನ್‌ ೨೮ರ ಭಾನುವಾರ ಎರಡನೇ ತಂಡದ ಯಕ್ಷಗಾನ ತರಗತಿಯ ಆರಂಭೋತ್ಸವ ʼಬಾಲಾಜಿ ಮಹಾಗಣಪತಿಯ ಸನ್ನಿಧಿಯಲ್ಲಿ ಕಿರೀಟ ಪೂಜೆಯೊಂದಿಗೆ ಜರುಗಿತು. ಯಕ್ಷಗಾನ ವಿದ್ಯಾರ್ಥಿಗಳು, ಪೋಷಕರು, ಯಕ್ಷ ಕಲಾ ಕೌಸ್ತುಭ ಕುಟುಂಬದ ಸರ್ವ ಸದಸ್ಯರು, ದೇವಸ್ಥಾನ ಆಡಳಿತ ಸಮಿತಿಯ ಅಧ್ಯಕ್ಷ, ಉಪಾಧ್ಯಕ್ಷ, ಕಾರ್ಯದರ್ಶಿ ಸೇರಿದಂತೆ ಟ್ರಸ್ಟಿಗಳು ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು.

ಮರುದಿನ ೨೦೨೬ ಜೂನ್‌ ೨೯ರ ಸೋಮವಾರ ದೇವಸ್ಥಾನದ ಸಾಮೂಹಿಕ ಸತ್ಯನಾರಾಯಣ ಪೂಜೆ ನಡೆಯಿತು.

ಈ ಎರಡೂ ಕಾರ್ಯಕ್ರಮಗಳ ಚಿತ್ರಗಳು ಹಾಗೂ ವಿಡಿಯೋಗಳು ಇಲ್ಲಿವೆ.


Sunday, June 21, 2026

ಯಕ್ಷಗಾನದಲ್ಲಿ ಗೆಜ್ಜೆ ಕಟ್ಟುವುದು

 ಯಕ್ಷಗಾನದಲ್ಲಿ ಗೆಜ್ಜೆ ಕಟ್ಟುವುದು

ಕ್ಷಗಾನದಲ್ಲಿ ಗೆಜ್ಜೆ ಕಟ್ಟುವುದು ಒಂದು ಮಹತ್ವದ ಅಂಗ. ಗೆಜ್ಜೆ ಕಟ್ಟುವುದು ಯಕ್ಷಗಾನ ಕಲಾವಿದರಿಗೆ ಒಂದು ಸಂಭ್ರಮದ ಕ್ಷಣವೂ ಅಹುದು.


ಯಕ್ಷಗಾನ ಕಲಾವಿದರು ತಮ್ಮ ವೇಷ ಧರಿಸುವುದನ್ನು ಸ್ವತಃ ಮಾಡುತ್ತಾರೆ, ಅದು ಅಂದವಾಗಿ ಬಣ್ಣ ಬಳಿದುಕೊಂಡು, ವೇಷಭೂಷಣ ತೊಟ್ಟುಕೊಳ್ಳುವುದರಿಂದ ಹಿಡಿದು ಗೆಜ್ಜೆ ಕಟ್ಟುವವರೆಗೂ ಅವರವರೇ ತಮ್ಮ ಕೆಲಸಗಳನ್ನು ಮಾಡುತ್ತಾರೆ.

ಗೆಜ್ಜೆ ಕಟ್ಟುವುದನ್ನು ಕಲಿಯುವ ಮುನ್ನ ಗುರುಗಳು ಗೆಜ್ಜೆಯನ್ನು ಕಲಾವಿದರಿಗೆ ಕೊಡುತ್ತಾರೆ. ಅದನ್ನು ಪಡೆದುಕೊಳ್ಳುವ ಕಲಾವಿದರು ಪ್ರಪ್ರಥಮವಾಗಿ ದೇವರ ಮುಂದೆ ಹೋಗಿ ನಮಸ್ಕರಿಸಿ ಆ ಬಳಿಕ ಗುರುಗಳಿಗೆ ನಮಸ್ಕರಿಸುತ್ತಾರೆ. ಆ ಬಳಿಕ ಗುರುಗಳು ಕಲಾವಿದರಿಗೆ ಗೆಜ್ಜೆ ಕಟ್ಟುವುದನ್ನು ಹೇಳಿಕೊಡುತ್ತಾರೆ.

ಯಕ್ಷಗಾನ ಪ್ರದರ್ಶನದ ಸಂದರ್ಭದಲ್ಲಿ ಚೌಕಿಯಲ್ಲಿ ಗಣೇಶನ ಭಾವಚಿತ್ರವನ್ನು ಇರಿಸಿರುತ್ತಾರೆ. ಗೆಜ್ಜೆ ಕಟ್ಟುವ ಮುನ್ನ ಕಲಾವಿದರು ಗಣೇಶನಿಗೆ ನಮಸ್ಕರಿಸಿ ನಂತರ ಗೆಜ್ಜೆ ಕಟ್ಟಿಕೊಳ್ಳುತ್ತಾರೆ.

ಬೆಂಗಳೂರಿನ ರಾಮಕೃಷ್ಣ ಹೆಗಡೆ ನಗರದ ಶ್ರೀ ಬಾಲಾಜಿ ಮಹಾಗಣಪತಿ, ವೆಂಕಟೇಶ್ವರ, ಅಭಯ ಆಂಜನೇಯ ಸ್ವಾಮಿ ದೇವಾಲಯದಲ್ಲಿ ಕಳೆದ ಎಂಟು ತಿಂಗಳುಗಳಿಂದ ಯಕ್ಷಗಾನ ಕಲಿಯುತ್ತಿರುವ ಮಕ್ಕಳಿಗೆ ಇಂದು ೨೦೨೬ ಜೂನ್‌ ೨೧ರ ಭಾನುವಾರ ಗೆಜ್ಜೆ ಕಟ್ಟುವ ಸಂಭ್ರಮ. ಯಕ್ಷ ಕಲಾ ಕೌಸ್ತುಭ ತಂಡದ ಯಕ್ಷಗುರು ಉಮೇಶ ರಾಜ್‌ ಮಂದಾರ್ತಿ ಅವರು ಮಕ್ಕಳಿಗೆ ಗೆಜ್ಜೆ ಕಟ್ಟುವ ಬಗ್ಗೆ ಕಾರ್ಯಾಗಾರವನ್ನು ನಡೆಸಿದರು.

ಸಂದರ್ಭದ ಕೆಲವು ಪಟಗಳು ಹಾಗೂ ವಿಡಿಯೋಗಳು ಇಲ್ಲಿವೆ.

ಅಂದಹಾಗೆ ಯಕ್ಷಗಾನ ಕಲಿಯಲು ಇಚ್ಛಿಸುವವರಿಗಾಗಿ ಯಕ್ಷ ಕಲಾ ಕೌಸ್ತುಭದ ಎರಡನೇ ತಂಡದ ಅಭ್ಯಾಸ ಮುಂದಿನ ಭಾನುವಾರ ೨೦೨೬ ಜೂನ್‌ ೨೧ರಂದು ಬೆಳಗ್ಗೆ ಆರಂಭವಾಗಲಿದೆ. 
ಆಸಕ್ತರು ಇಲ್ಲಿ ಕ್ಲಿಕ್‌ ಮಾಡಿ ನೋಡಿ 👉


Thursday, June 18, 2026

ರಾಜರಾಜೇಶ್ವರಿ ನಗರದಲ್ಲಿ ʼಕಂಸವಧೆʼ

 ರಾಜರಾಜೇಶ್ವರಿ ನಗರದಲ್ಲಿ ʼಕಂಸವಧೆʼ

ಬೆಂಗಳೂರು ರಾಜರಾಜೇಶ್ವರಿ ನಗರದ ಶಿವರತ್ನಪುರಿ ಟೆಂಪಲ್‌ ಆಫ್‌ ಹೆಲ್ತ್.‌ ರಸ್ತೆಯಲ್ಲಿ ಹೋಗುವವರನ್ನು ತನ್ನ ʼಪಿರಮಿಡ್‌ʼ ಆಕಾರದ ವಿಶಿಷ್ಠ ವಿನ್ಯಾಸದಿಂದಲೇ ಗಮನ ಸೆಳೆಯುವ ಸ್ಥಳ. ಇಲ್ಲಿ ಇತ್ತೀಚೆಗೆ ʼಪವಿತ್ರ ಭಾರತʼ ಕಾರ್ಯಕ್ರಮ. ೨೦೨೬ ಜೂನ್‌ ೧೩ರಂದು ವೇದ ಕುರಿತ ಸಂವಾದ ಮತ್ತು ಭರತ ನಾಟ್ಯದ ಸೊಬಗು.

೨೦೨೬ ಜೂನ್‌ ೧೪ರಂದು ವೇದ ಕುರಿತು ಸಂವಾದ ಮತ್ತು ಯಕ್ಷಗಾನ. ಈ ಕಾರ್ಯಕ್ರಮದಲ್ಲಿ ಬೆಂಗಳೂರು ಹೆಗಡೆ ನಗರ ಸಮೀಪದ ಅಮೃತಹಳ್ಳಿಯ ಮಕ್ಕಳಿಂದ ಸೊಗಸಾದ ʼಕಂಸವಧೆʼ ಯಕ್ಷಗಾನ. ಹೆಗಡೆ ನಗರದ ಶ್ರೀ ಬಾಲಾಜಿ ಕೃಪಾ ಬಡಾವಣೆಯ ಶ್ರೀ ಬಾಲಾಜಿ ಮಹಾಗಣಪತಿ, ವೆಂಕಟೇಶ್ವರ, ಅಭಯ ಆಂಜನೇಯ ಸ್ವಾಮಿ ದೇವಸ್ಥಾನದಲ್ಲಿ ʼಯಕ್ಷ ಕಲಾ ಕೌಸ್ತುಭʼ ತಂಡದ ಮೂಲಕ ಯಕ್ಷಗಾನ ಹೇಳಿಕೊಡುತ್ತಿರುವ ಯಕ್ಷಗುರು ಉಮೇಶರಾಜ್‌ ಮಂದಾರ್ತಿ ಅವರ ನಿರ್ದೇಶನ.

ಭರತನಾಟ್ಯ ಕಲಿಯುತ್ತಿರುವ ಬಾಲಕಿಯರು ಮಂದಾರ್ತಿ ಅವರ ನಿರ್ದೇಶನದಲ್ಲಿ ಕೇವಲ ೧೦-೧೫ ದಿನಗಳ ಕಾಲ ನೀಡಿದ ತರಬೇತಿಯಲ್ಲಿ ಯಕ್ಷಗಾನ ಕಲಿತು ಯಶಸ್ವಿಯಾಗಿ ಅದ್ಭುತ ಪ್ರದರ್ಶನವನ್ನು ನೀಡಿದರು.


ಈ ಸಂದರ್ಭದ ಕೆಲವು ಚಿತ್ರ ಹಾಗೂ ವಿಡಿಯೋಗಳು ಇಲ್ಲಿವೆ. ಯಕ್ಷಗಾನದ ಪೂರ್ಣ ಪ್ರಸಂಗವನ್ನು ವೀಕ್ಷಿಸಲು ಕೆಳಗಿನ ಚಿತ್ರಕ್ಲಿಕ್‌ ಮಾಡಿ.



Monday, June 15, 2026

ಅರಳಲು ಅವಸರವಾಯಿತೇ ಈ ಬ್ರಹ್ಮ ಕಮಲಕ್ಕೆ?

 ಅರಳಲು ಅವಸರವಾಯಿತೇ ಈ ಬ್ರಹ್ಮ ಕಮಲಕ್ಕೆ?

ಇದು ʼಸುವರ್ಣʼ ನೋಟ

ವಾಮಾನ ವೈಪರೀತ್ಯದಿಂದ ಈ ಬಾರಿ ಮುಂಗಾರು ಕಣ್ಣಾ ಮುಚ್ಚಾಲೆ ಆಡುತ್ತಿದೆ. ವಾರ ಮುಂಚಿತವಾಗಿ ಬರುವುದೆಂದು ಹವಾಮಾನ ಇಲಾಖೆ ಭವಿಷ್ಯ ನುಡಿದಿದ್ದರೂ, ಬರುವುದು ತಡವಾಗಿದೆ.

ಸೆಕೆಗಾಲದ ಬಿಸಿಲ ಝಳವೂ ಈ ಸಾಲು ಅಂದರೆ ೨೦೨೬ನೇ ವರ್ಷದಲ್ಲಿ ಮಿತಿ ಮೀರಿತು. ಚಳಿಕಾಲದ ಕಥೆಯೂ ಅಷ್ಟೇ. ವಿಪರೀತ ಚಳಿ.

ಗಿಡ, ಮರ, ಬಳ್ಳಿಗಳ ಮೇಲೂ ಹವಾಮಾನದ ವೈಪರೀತ್ಯ ತನ್ನದೇ ಆದ ರೀತಿಯಲ್ಲಿ ಪ್ರಭಾವ ಬೀರಿದೆ. ಬೀರುತ್ತಿದೆ.

ನೋಡಿ. ಸಾಮಾನ್ಯವಾಗಿ ವರ್ಷಕ್ಕೆ ಒಂದೇ ಬಾರಿ ಅರಳುವ ಹೂ ಅದ್ಭುತ ಸೊಗಸಿನ ʼಬಹ್ಮ ಕಮಲʼ. ಸಾಮಾನ್ಯವಾಗಿ ಈ ಹೂ ಅರಳುವುದು ಜುಲೈ-ಆಗಸ್ಟ್‌ ತಿಂಗಳಲ್ಲಿ ಹುಣ್ಣಿಮೆ, ಅಮಾವಾಸ್ಯೆಯ ಸಮಯದಲ್ಲಿ.

ಈ ಬಾರಿ ಅದು ಕೂಡಾ ತಿಂಗಳು ಮುಂಚಿತವಾಗಿಯೇ ಅರಳಿ ಬಿಟ್ಟಿದೆ. ಮೊನ್ನೆ, ಮೊನ್ನೆ ಅಂದರೆ ೨೦೨೬ರ ಜೂನ್‌ ತಿಂಗಳ ೧೩ರ ಶನಿವಾರ ರಾತ್ರಿ ಅರಳಿತು. ಹೀಗೆ ಅರಳಿದ ಬ್ರಹ್ಮ ಕಮಲ ಹಿರಿಯ ಪತ್ರಿಕಾ ಛಾಯಾಗ್ರಾಹಕ ವಿಶ್ವನಾಥ ಸುವರ್ಣ ಅವರ ಕ್ಯಾಮರಾದಲ್ಲಿ ಬಂಧಿಯಾಗಿ ಬಿಟ್ಟಿತು. ಚಿತ್ರಗಳ ಸಮೀಪ ನೋಟಕ್ಕೆ ಅವುಗಳನ್ನು ಕ್ಲಿಕ್‌ ಮಾಡಿರಿ.

ಅಂದಹಾಗೆ, ಈ ಶನಿವಾರ ಪುಣ್ಯಪ್ರದವಾದ ಅಧಿಕ ಮಾಸದ  ಕೊನೆಯ ಶನಿವಾರ. ಅಧಿಕ ಮಾಸದಲ್ಲೇ ಅರಳಲು ʼಬ್ರಹ್ಮಕಮಲʼಕ್ಕೂ ಅವಸರವಾಗಿರಬಹುದೇನೋ? ಏನೇ ಆಗಲಿ, ಪುಣ್ಯದಿನದಂದೇ ಅರಳಿದ ಈ ಹೂವನ್ನು ನೋಡಿದವರಿಗೆ ಲಭಿಸುವ ಪುಣ್ಯ ಅಧಿಕವಾಗಲಿ ಎಂದು ಹಾರೈಸೋಣ.


Advertisement