Showing posts with label ಇಂದಿನ ಇತಿಹಾಸ History Today (December 1-10).. Show all posts
Showing posts with label ಇಂದಿನ ಇತಿಹಾಸ History Today (December 1-10).. Show all posts

Saturday, January 9, 2010

ಇಂದಿನ ಇತಿಹಾಸ History Today ಡಿಸೆಂಬರ್ 10

ಇಂದಿನ ಇತಿಹಾಸ

ಡಿಸೆಂಬರ್ 10

ಇಂಗ್ಲೆಂಡ್ ಸಂಸತ್ತಿನ ಮೇಲ್ಮನೆಯಾದ ಹೌಸ್ ಆಫ್ ಲಾರ್ಡ್ಸ್‌ನ ಉಪ ಸಭಾಧಕ್ಷರಾಗಿ ಭಾರತ ಮೂಲದ ಉದ್ಯಮಿ ಲಾರ್ಡ್ ಸ್ವರಾಜ್ ಪಾಲ್ ಆಯ್ಕೆಯಾದರು. ಇದರಿಂದಾಗಿ ಮೊದಲ ಬಾರಿಗೆ ಇಂತಹ ಉನ್ನತ ಸ್ಥಾನಕ್ಕೆ ಏರಿದ ಏಷ್ಯಾ ಮೂಲದ ವ್ಯಕ್ತಿ ಎಂಬ ಹೆಗ್ಗಳಿಕೆಗೆ ಸ್ವರಾಜ್ ಪಾಲ್ ಪಾತ್ರರಾಗಿ, ಇತಿಹಾಸ ನಿರ್ಮಾಣಗೊಂಡಿತು. ಬ್ರಿಟನ್ನಿನ ಸಚಿವ ಸಂಪುಟದಲ್ಲಿ ಭಾರತ ಮೂಲದವರು ಸಚಿವರಾದ ನಿದರ್ಶನವಿತ್ತು, ಆದರೆ, ಉಪ ಸಭಾಧ್ಯಕ್ಷ ಸ್ಥಾನವನ್ನು ಇದುವರೆಗೆ ಯಾರೂ ಅಲಂಕರಿಸಿರಲಿಲ್ಲ.

ಸಾಹಿತ್ಯ, ಭೌತವಿಜ್ಞಾನ, ರಾಸಾಯನಿಕ ವಿಜ್ಞಾನ, ಶಾಂತಿ, ವೈದ್ಯಕೀಯ ಈ ಐದು ಕ್ಷೇತ್ರಗಳಲ್ಲಿ ವಿಶೇಷ ಸಾಧನೆ ಮಾಡಿದ ವ್ಯಕ್ತಿಗಳಿಗೆ ಪ್ರತಿವರ್ಷ ಈ ದಿನ ನೊಬೆಲ್ ಪ್ರಶಸ್ತಿಗಳನ್ನು ಪ್ರದಾನ ಮಾಡಲಾಗುತ್ತದೆ. ಸ್ಟಾಕ್ ಹೋಮಿನಲ್ಲಿ ನಡೆಯುವ ಸಮಾರಂಭದಲ್ಲಿ ಸ್ವೀಡನ್ ದೊರೆ ಈ ಪ್ರಶಸ್ತಿಗಳನ್ನು ಪ್ರದಾನ ಮಾಡುತ್ತಾರೆ. ಶಾಂತಿಗಾಗಿ ನೀಡಲಾಗುವ ಪ್ರಶಸ್ತಿಯನ್ನು ಓಸ್ಲೋದಲ್ಲೂ, ಇತರರಿಗೆ ನೀಡಲಾಗುವ ಪ್ರಶಸ್ತಿಗಳನ್ನು ಸ್ಟಾಕ್ ಹೋಮಿನಲ್ಲೂವಿತರಿಸಲಾಗುತ್ತದೆ. 1901 ರಲ್ಲಿ ಪ್ರಶಸ್ತಿಯ ಸ್ಥಾಪಕ ಅಲ್ ಫ್ರೆಡ್ ನೊಬೆಲ್ ಅವರ ಮರಣದ ಐದನೇ ವಾರ್ಷಿಕೋತ್ಸವದ ದಿನ ಮೊದಲ ಪ್ರಶಸ್ತಿಗಳನ್ನು ವಿತರಿಸಲಾಯಿತು. 1969ರಲ್ಲಿ ನೊಬೆಲ್ ಪ್ರಶಸ್ತಿಗಳ ಪಟ್ಟಿಗೆ ಅರ್ಥವಿಜ್ಞಾನ ಆರನೆಯದಾಗಿ ಸೇರ್ಪಡೆಯಾಯಿತು. 2001ರಲ್ಲಿ ನೊಬೆಲ್ ಪ್ರಶಸ್ತಿಯ ಶತಮಾನೋತ್ಸವ ಆಚರಣೆಗೆ ಆವರೆಗೆ ಪ್ರಶಸ್ತಿ ಪಡೆದ ಜೀವಂತವಿದ್ದ ಎಲ್ಲರನ್ನೂ ಆಹ್ವಾನಿಸಲಾಗಿತ್ತು.

2008: 'ಮುಂಬೈ ಮುತ್ತಿಗೆ' ಸಂಚು ರೂಪಿಸಿದ ಲಷ್ಕರ್ -ಎ -ತೊಯ್ಬಾದ ಅಂಗಸಂಸ್ಥೆ ಜಮಾತ್-ಉದ್-ದವಾ (ಜೆಯುಡಿ) ಸಂಘಟನೆ ನಿಷೇಧಿಸಬೇಕೆಂಬ ಭಾರತದ ಬಲವಾದ ಒತ್ತಾಯಕ್ಕೆ ಪಾಕಿಸ್ಥಾನವು ಕೊನೆಗೂ ಮೆತ್ತಗಾಯಿತು. ವಿಶ್ವಸಂಸ್ಥೆ ಸೂಚನೆ ನೀಡಿದರೆ ಅದನ್ನು ಭಯೋತ್ಪಾದಕ ಸಂಘಟನೆಯಾಗಿ ಪರಿಗಣಿಸಿ ನಿಷೇಧಿಸುವುದಾಗಿ ಪಾಕಿಸ್ಥಾನ ಹೇಳಿತು. ಇನ್ನೊಂದು ಮಹತ್ವದ ಬೆಳವಣಿಗೆಯಲ್ಲಿ, ಮುಂಬೈ ಮೇಲಿನ ವಿಧ್ವಂಸಕ ದಾಳಿಯ ಪ್ರಮುಖ ರೂವಾರಿಗಳಾದ ಝಕೀರ್ ರೆಹಮಾನ್ ಲಖ್ವಿ ಮತ್ತು ಎಲ್‌ಇಟಿಯ ಇನ್ನೊಬ್ಬ ಕಮಾಂಡರ್ ಜರಾರ್ ಶಾನನ್ನು ಬಂಧಿಸಿರುವುದಾಗಿ ಪಾಕಿಸ್ಥಾನದ ಪ್ರಧಾನಿ ಯೂಸುಫ್ ರಝಾ ಜಿಲಾನಿ ಅವರು ಇಸ್ಲಾಮಾಬಾದಿನಲ್ಲಿ ಔಪಚಾರಿಕವಾಗಿ ಪ್ರಕಟಿಸಿದರು. ಜೆಯುಡಿ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವುದಾಗಿ ವಿಶ್ವಸಂಸ್ಥೆಯ ಭದ್ರತಾ ಮಂಡಳಿಗೆ ಪಾಕಿಸ್ಥಾನವು ಭರವಸೆ ನೀಡಿದ ಕೆಲವೇ ಗಂಟೆಗಳಲ್ಲಿ ಜಿಲಾನಿ ಅವರು ಈ ಇಬ್ಬರ ಬಂಧನ ಸುದ್ದಿ ಖಚಿತಪಡಿಸಿದರು.

2008: ಇಂಗ್ಲೆಂಡ್ ಸಂಸತ್ತಿನ ಮೇಲ್ಮನೆಯಾದ ಹೌಸ್ ಆಫ್ ಲಾರ್ಡ್ಸ್‌ನ ಉಪ ಸಭಾಧಕ್ಷರಾಗಿ ಭಾರತ ಮೂಲದ ಉದ್ಯಮಿ ಲಾರ್ಡ್ ಸ್ವರಾಜ್ ಪಾಲ್ ಆಯ್ಕೆಯಾದರು. ಇದರಿಂದಾಗಿ ಮೊದಲ ಬಾರಿಗೆ ಇಂತಹ ಉನ್ನತ ಸ್ಥಾನಕ್ಕೆ ಏರಿದ ಏಷ್ಯಾ ಮೂಲದ ವ್ಯಕ್ತಿ ಎಂಬ ಹೆಗ್ಗಳಿಕೆಗೆ ಸ್ವರಾಜ್ ಪಾಲ್ ಪಾತ್ರರಾಗಿ, ಇತಿಹಾಸ ನಿರ್ಮಾಣಗೊಂಡಿತು. ಬ್ರಿಟನ್ನಿನ ಸಚಿವ ಸಂಪುಟದಲ್ಲಿ ಭಾರತ ಮೂಲದವರು ಸಚಿವರಾದ ನಿದರ್ಶನವಿತ್ತು, ಆದರೆ, ಉಪ ಸಭಾಧ್ಯಕ್ಷ ಸ್ಥಾನವನ್ನು ಇದುವರೆಗೆ ಯಾರೂ ಅಲಂಕರಿಸಿರಲಿಲ್ಲ.

2008: ಕಡು ಬಡತನದ ನಡುವೆಯೂ ಸತತ ಪ್ರಯತ್ನ, ಕಠಿಣ ಪರಿಶ್ರಮದಿಂದಾಗಿ ಗ್ರಾಮೀಣ ಪ್ರದೇಶದ ಅಪ್ಪಟ ಪ್ರತಿಭೆಯಾದ ಪ್ರಸನ್ನ ವಿ.ಸಾಲಿಯಾನ್ 'ಭಾರತೀಯ ಆರ್ಥಿಕ ಸೇವೆ'ಯ ಪರೀಕ್ಷೆಯಲ್ಲಿ 16ನೇ ಸ್ಥಾನ ಪಡೆಯುವ ಮೂಲಕ ಕರ್ನಾಟಕ ರಾಜ್ಯಕ್ಕೆ ಕೀರ್ತಿ ತಂದರು. ಪ್ರಸಕ್ತ ಸಾಲಿನ ಭಾರತೀಯ ಆರ್ಥಿಕ ಸೇವೆ (ಐಇಎಸ್) ಪರೀಕ್ಷೆಗೆ ದೇಶದ ವಿವಿಧೆಡೆಯಿಂದ ಸುಮಾರು 7 ಸಾವಿರ ಅಭ್ಯರ್ಥಿಗಳು ಹಾಜರಾಗಿದ್ದರು. ಆದರೆ ಹುದ್ದೆಗಳ ಸಂಖ್ಯೆ ಕೇವಲ 21 ಮಾತ್ರ. ರಾಜ್ಯದಿಂದ ಸುಮಾರು 50ಕ್ಕೂ ಹೆಚ್ಚು ಮಂದಿ ಪರೀಕ್ಷೆ ತೆಗೆದುಕೊಂಡಿದ್ದರೂ ಲಿಖಿತ ಪರೀಕ್ಷೆ, ಸಂದರ್ಶನ ಸೇರಿದಂತೆ ಎಲ್ಲ ಹಂತಗಳಲ್ಲಿ ಯಶಸ್ವಿಯಾದವರು ಪ್ರಸನ್ನ ಒಬ್ಬರೇ!

2008: ಖಗೋಳಶಾಸ್ತ್ರಜ್ಞ ಅಲೈಸ್ ಕ್ವಿಲ್ಲೆನ್, ದೂರದ ನಕ್ಷತ್ರವೊಂದರ ಸಮೀಪ ಒಂದು ಗ್ರಹ ಇದೆ ಎಂದು 2006ರಲ್ಲೇ ಮಾಡಿದ್ದ ಊಹೆ ಇದೀಗ ಇದೀಗ ನಿಜವಾಯಿತು. ಭೂಮಿಯಿಂದ ಶತಕೋಟಿ ಶತಕೋಟಿ ಮೈಲುಗಳಾಚೆ ದೂರ ಇರುವ ಈ ಗ್ರಹದ ಚಿತ್ರವನ್ನು ಕ್ಯಾಮರಾದಲ್ಲಿ ಸೆರೆ ಹಿಡಿಯಲಾಯಿತು. ಮಾತ್ರವಲ್ಲ; ಆ ಮೂಲಕ ನಮ್ಮ ಸೌರಮಂಡಲದ ಆಚೆಗಿನ ಗ್ರಹವೊಂದರ ಚಿತ್ರವನ್ನು ಮಾನವ ಕುಲದ ಇತಿಹಾಸದಲ್ಲಿ ಇದೇ ಮೊತ್ತಮೊದಲ ಬಾರಿಗೆ ಸೆರೆಹಿಡಿದ ಹೆಗ್ಗಳಿಕೆಗೆ ಕ್ಯಾಲಿಫೋರ್ನಿಯಾ ಬರ್ಕಲಿ ವಿಶ್ವವಿದ್ಯಾನಿಲಯದ ಪ್ರೊಫೆಸರ್ ಯೂಜೀನ್ ಚಿಯಾಂಗ್ ಮತ್ತಿತರರ ತಂಡ ಪಾತ್ರವಾಯಿತು. ಹಬಲ್ ಅಂತರಿಕ್ಷ ದೂರದರ್ಶಕದ ಸಹಾಯದಿಂದ ಈ ಗ್ರಹ ಸೆರೆಹಿಡಿಯಲಾಯಿತು. ಗ್ರಹದ ಇರುವನ್ನು ಮೊದಲೇ ಊಹಿಸಿ ಆಮೇಲೆ ಅದು ಖಚಿತಗೊಂಡಿರುವ ಸಂಗತಿ ಜಗತ್ತಿನ ಖಗೋಳ ಇತಿಹಾಸದಲ್ಲಿ ಸಂಭವಿಸಿರುವುದು ಇದು ಕೇವಲ ಎರಡನೇ ಬಾರಿ. ಈ ಮುನ್ನ, 160 ವರ್ಷಗಳ ಹಿಂದೆ, ನೆಪ್ಚೂನ್ ಗ್ರಹದ ಇರುವಿಕೆಯನ್ನು ಮುಂಚೆಯೇ ಊಹಿಸಲಾಗಿತ್ತು. ನಂತರದ ವರ್ಷಗಳಲ್ಲಿ ಈ ಲೆಕ್ಕಾಚಾರ ನಿಜವಾಗಿತ್ತು. ಆದರೆ ಈಗಿನ ಸಾಧನೆ ಹಿಂದೆ ನುಡಿದಿದ್ದ ಭವಿಷ್ಯಕ್ಕಿಂತ ಹೆಚ್ಚಿನ ರೋಮಾಂಚನ ಮೂಡಿಸಿದೆ. ಕಾರಣ, ನೆಪ್ಚೂನ್ ನಮ್ಮ ಸೌರವ್ಯೆಹದೊಳಗೇ ಇರುವ ಗ್ರಹವಾದರೆ ಈಗ ಪತ್ತೆಯಾಗಿರುವ ಗ್ರಹ ಅದಕ್ಕಿಂತ ಕೋಟಿ ಕೋಟಿ ಪಟ್ಟು ಮೈಲುಗಳಾಚೆ ಇರುವ ಅನ್ಯ ನಕ್ಷತ್ರ ಲೋಕವೊಂದರ ಗ್ರಹ! ಭೂಮಿಯಿಂದ 212 'ಬೆಳಕಿನ ವರ್ಷ'ಗಳಷ್ಟು ಅಗಾಧ ದೂರದಲ್ಲಿ ಹೊಳಪಿನ ತಾರೆಯೊಂದರ ಸುತ್ತ ಈ ಗ್ರಹ ಇರುವ ಸಾಧ್ಯತೆಯನ್ನು ವಾಷಿಂಗ್ಟನ್ ವಿ.ವಿ.ಯ ಖಗೋಳ ವಿಜ್ಞಾನಿಗಳು ಮೊದಲಿಗೆ 2004ರಲ್ಲಿ ಊಹಿಸಿದ್ದರು. 'ರೇಡಿಯಲ್ ವೆಲಾಸಿಟಿ' ಎಂಬ ಪರಿಕಲ್ಪನೆ ಮೂಲಕ 2007ರಲ್ಲಿ ಈ ಊಹೆಗೆ ರೆಕ್ಕೆಪುಕ್ಕ ಬಂದಿತ್ತು. ಅದೀಗ ಪ್ರತ್ಯಕ್ಷವಾಗಿ ಕ್ಯಾಮರಾದಲ್ಲಿ ದಾಖಲಾಗುವ ಮೂಲಕ ಅನುಮಾನಕ್ಕೆ ಆಸ್ಪದವೇ ಇಲ್ಲದಂತೆ ನಿಜವಾಗಿ ಬಿಟ್ಟಿತು. ತಾರೆಯ ಸುತ್ತಲ ದೂಳಿನುಂಗುರದ ಸಂಗತಿಗಳ ಕೂಲಂಕಷ ಅಧ್ಯಯನದಿಂದ ಅಲೈಸ್ ಕ್ವಿಲ್ಲೆನ್ ಗ್ರಹದ ಇರುವಿಕೆ ಊಹೆ ಮಾಡಿದ್ದರು. ಬ್ರಹ್ಮಾಂಡದ ತಾರಾ ಸಾಮ್ರಾಜ್ಯದಲ್ಲಿ ಇರುವ ಗ್ರಹದ ಗಾತ್ರ ಹಾಗೂ ಸ್ಥಾನವನ್ನು ನಿಖರವಾಗಿ ಲೆಕ್ಕಾಚಾರ ಹಾಕುವ ವಿಶ್ವಪ್ರಸಿದ್ಧ ತಜ್ಞರಲ್ಲಿ ಅಲೈಸ್ ಒಬ್ಬರು.

2008: 'ಡಾರ್ವಿನ್ನನ ಜೀವವಿಕಾಸ ಸಿದ್ದಾಂತ ಇನ್ನು 10 ವರ್ಷಗಳಲ್ಲಿ ಕೇವಲ ಇತಿಹಾಸವಾಗಿಯಷ್ಟೇ ಪಠ್ಯಪುಸ್ತಕಗಳಲ್ಲಿ ಉಳಿಯಲಿದೆ' ಎಂದು ಟರ್ಕಿಯ ವಿದ್ವಾಂಸನೊಬ್ಬನ ವಿವಾದಾತ್ಮಕ ಪ್ರತಿಪಾದನೆ ವಿಜ್ಞಾನ ಜಗತ್ತಿನಲ್ಲಿ ತಲ್ಲಣಗಳನ್ನು ಎಬ್ಬಿಸಿತು.. ಜೀವವಿಕಾಸ ಸಿದ್ಧಾಂತ ಬರೀ ಬೊಗಳೆ. ಈ ಸಿದ್ಧಾಂತ ಪುಷ್ಟೀಕರಿಸಲು ಅಗತ್ಯವಾದ 'ಸ್ಥಿತ್ಯಂತರ ಪಳೆಯುಳಿಕೆ' ಅಸ್ತಿತ್ವದಲ್ಲೇ ಇಲ್ಲ. ಆದರೆ ದೈವ ಪ್ರೇರಣೆಯಿಂದ ಈ ಪ್ರಪಂಚ ಸೃಷ್ಟಿಯಾಗಿದೆ ಎಂಬುದನ್ನು ಪುಷ್ಟೀಕರಿಸಲು 100 ದಶಲಕ್ಷ ಪಳೆಯುಳಿಕೆಗಳು ಜಗತ್ತಿನಲ್ಲಿವೆ ಎಂದು ಅದ್ನಾನ್ ಒಕ್ತರ್ ಎಂಬ ವಿದ್ವಾಂಸ ತರ್ಕ ಮಂಡಿಸಿದರು. ಸುಮಾರು 800 ಪುಟಗಳ 'ಅಟ್ಲಾಸ್ ಆಫ್ ಕ್ರಿಯೇಷನ್' ಎಂಬ ಬೃಹತ್ ಕೃತಿಯನ್ನೇ ಹೊರತಂದ ಅವರು, ಆ ಪುಸ್ತಕದಲ್ಲಿ ಡಾರ್ವಿನ್ನನ ಜೀವವಿಕಾಸ ಸಿದ್ಧಾಂತ ಇನ್ನು 10 ವರ್ಷಗಳಲ್ಲಿ ಗತಕಾಲದ ಸಿದ್ಧಾಂತವಾಗಿ ಮೂಲೆಗುಂಪಾಗಲಿದೆ ಎಂದು ಪ್ರತಿಪಾದಿಸಿದರು. ತಮ್ಮ ಕೃತಿಯ ಸಾವಿರಾರು ಪ್ರತಿಗಳನ್ನು ಈಗಾಗಲೇ ಪ್ರಪಂಚದ ವಿವಿಧೆಡೆ ಇರುವ ಶಾಲೆಗಳು, ಕಾಲೇಜುಗಳು, ಶಿಕ್ಷಣ ಸಂಸ್ಥೆಗಳಿಗೆ ರವಾನಿಸಿರುವುದಾಗಿ ಅವರು ಪ್ರಕಟಿಸಿದರು. ಹಿಂದಿ, ಉರ್ದು ಸೇರಿ ಭಾರತದ ಹಲವು ಭಾಷೆಗಳಿಗೂ ಕೃತಿಯ ಭಾಷಾಂತರ ಕಾರ್ಯ ನಡೆದಿದ್ದು ಭಾರಿ ಸಂಖ್ಯೆಯಲ್ಲಿ ಅದನ್ನು ವಿತರಿಸುವ ಯೋಜನೆ ಹಾಕಿಕೊಳ್ಳಲಾಗಿದೆ ಎಂದು ಅವರು ಹೇಳಿದರು. 'ಜೀವಜಾಲದ ಪ್ರತಿಯೊಂದು ಜೀವಿಯೂ ಪರಸ್ಪರ ಸಂಬಂಧ ಹೊಂದಿದ್ದು, ಅವೆಲ್ಲವೂ ಒಂದೇ ಮೂಲದಿಂದ ಜೀವ ತಳೆದಿವೆ. ಪ್ರಪಂಚದಲ್ಲಿ ಮೊತ್ತಮೊದಲ ಜೀವಕೋಶ ಉದ್ಭವಿಸಿದ್ದು ಕಾಕತಾಳೀಯವಾಗಿ' ಎನ್ನುತ್ತದೆ ಡಾರ್ವಿನ್ನನ ಪರಿಕಲ್ಪನೆ. 'ಆದರೆ, ಜಗತ್ತಿನ ಅಸ್ತಿತ್ವಕ್ಕೆ ಕಾರಣ ವಿಕಾಸವಾದ ಅಲ್ಲ; ದೈವವೇ ಈ ಸೃಷ್ಟಿಗೆಲ್ಲಾ ಕಾರಣ' ಎನ್ನುವುದು ಒಕ್ತರ್ ಹಾಗೂ ಆತನ ತಂಡದಲ್ಲಿರುವ 30 ವಿದ್ವಾಂಸರ ವಾದ. ತನ್ನ ಪ್ರತಿಪಾದನೆಯಿಂದಾಗಿ ಎಲ್ಲರ ಗಮನ ಸೆಳೆದಿರುವ ಒಕ್ತರ್‌ನ ಸಂದರ್ಶನ ಜಗತ್ತಿನ ಪ್ರಮುಖ ಮಾಧ್ಯಮಗಳಲ್ಲಿ ಬಿತ್ತರವಾಗಿದ್ದು ಯೂರೋಪಿನ ದೈನಿಕಗಳಲ್ಲಿ ಕೂಡ ಲೇಖನಗಳ ಸರಮಾಲೆಯೇ ಪ್ರಕಟಗೊಳ್ಳುತ್ತಿವೆ. ಆದರೆ ಹಲವಾರು ವಿಜ್ಞಾನಿಗಳು ಒಕ್ತರ್‌ನ ವಾದ ತಿರಸ್ಕರಿಸಿದರು. ಅಮೆರಿಕ ಹಾಗೂ ಯೂರೋಪ್‌ನ ಹಲವಾರು ತಜ್ಞರು, ಒಕ್ತರ್ ವಿಕಾಸವಾದದ ಬುನಾದಿ ಏನೆಂಬುದನ್ನೇ ಸರಿಯಾಗಿ ಗ್ರಹಿಸಿಲ್ಲ ಎಂದು ಟೀಕಿಸಿದರು.

2008: ಒಂದು ವರ್ಷಕ್ಕೂ ಹೆಚ್ಚು ಸಮಯದಿಂದ ಖಾಲಿಯಿದ್ದ ಮೈಸೂರು ವಿಶ್ವವಿದ್ಯಾಲಯ ಕುಲಪತಿ ಹುದ್ದೆಗೆ ಮೈಸೂರು ವಿ.ವಿಯ ಗ್ರಂಥಾಲಯ ಮತ್ತು ಮಾಹಿತಿ ವಿಜ್ಞಾನ ವಿಭಾಗದ ಪ್ರಾಧ್ಯಾಪಕ ಪ್ರೊ. ವಿ.ಜಿ.ತಳವಾರ್ ಅವರನ್ನು ನೇಮಕ ಮಾಡಿ ರಾಜ್ಯಪಾಲ ರಾಮೇಶ್ವರ ಠಾಕೂರ್ ಆದೇಶ ಹೊರಡಿಸಿದರು.

2008: 1998, 2003 ನಂತರ 2008ರಲ್ಲಿ ಮೂರನೇ ಬಾರಿ ಸತತವಾಗಿ ದೆಹಲಿಯಲ್ಲಿ ಕಾಂಗ್ರೆಸ್ ಪಕ್ಷವನ್ನು ಗೆಲ್ಲಿಸುವಲ್ಲಿ ಯಶಸ್ಸಿಯಾದ ಶೀಲಾ ದೀಕ್ಷಿತ್ ಕಾಂಗ್ರೆಸ್ ಶಾಸಕಾಂಗ ಪಕ್ಷದ ನಾಯಕರಾಗಿ ಅವಿರೋಧವಾಗಿ ಆಯ್ಕೆಯಾದರು. ಪಕ್ಷದ 42 ಶಾಸಕರು ಶೀಲಾ ದೀಕ್ಷಿತ್ ಅವರನ್ನು ಆಯ್ಕೆಮಾಡಿದರು. ಈ ಸಭೆಯಲ್ಲಿ ಎಐಸಿಸಿ ಪ್ರಧಾನ ಕಾರ್ಯದರ್ಶಿ ಮೊಹ್ಸಿನಾ ಕಿದ್ವಾಯಿ, ರಾಜ್ಯ ಹಣಕಾಸು ಸಚಿವ ಪಿ.ಕೆ. ಬನ್ಸಾಲ್ ಮತ್ತು ಡಿಪಿಸಿಸಿ ಮುಖ್ಯಸ್ಥ ಜೈಪ್ರಕಾಶ್ ಅಗರ್‌ವಾಲ್ ಭಾಗವಹಿಸಿದ್ದರು.

2008: ಮಿಜೋರಾಂ ವಿಧಾನಸಭೆಯಲ್ಲಿ ಕಾಂಗ್ರೆಸ್ ಶಾಸಕಾಂಗ ಪಕ್ಷದ ನಾಯಕರಾಗಿ ಪಕ್ಷದ ರಾಜ್ಯ ಘಟಕ ಅಧ್ಯಕ್ಷ- ಮಾಜಿ ಮುಖ್ಯಮಂತ್ರಿ ಲಾಲ್ತನ್‌ ಹವ್ಲಾ ಅವಿರೋಧವಾಗಿ ಆಯ್ಕೆಯಾದರು.

2007: ಎಲ್. ಕೆ. ಅಡ್ವಾಣಿ ಮುಂದಿನ ಲೋಕಸಭಾ ಚುನಾವಣೆಯಲ್ಲಿ ತಮ್ಮ ಪಕ್ಷದ ನೇತೃತ್ವ ವಹಿಸಿ ಮುನ್ನಡೆಸಲಿದ್ದಾರೆ ಎಂದು ಬಿಜೆಪಿ ಅಧ್ಯಕ್ಷ ರಾಜನಾಥ್ ಸಿಂಗ್ ಈದಿನ ಸಂಜೆ ನವದೆಹಲಿಯಲ್ಲಿ ಪ್ರಕಟಿಸಿದರು. ಗುಜರಾತ್ ವಿಧಾನಸಭೆಗೆ ಚುನಾವಣೆಯ ಮೊದಲ ಹಂತದ ಮತದಾನ ಪ್ರಕ್ರಿಯೆ ಹಿನ್ನೆಲೆಯಲ್ಲಿ ನಡೆದ ಬಿಜೆಪಿ ಸಂಸದೀಯ ಮಂಡಳಿಯ ತುರ್ತು ಸಭೆಯಲ್ಲಿ ಮುಂದಿನ ಲೋಕಸಭಾ ಚುನಾವಣೆಯಲ್ಲಿ ಅಡ್ವಾಣಿಯವರನ್ನೇ ಮುಂದಿನ ಪ್ರಧಾನ ಮಂತ್ರಿ ಎಂದು ಬಿಂಬಿಸಲು ನಿರ್ಧರಿಸಲಾಯಿತು ಈ ತೀರ್ಮಾನಕ್ಕೆ ಮಾಜಿ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿ ಅವರ ಪೂರ್ಣ ಒಪ್ಪಿಗೆ ಇದೆ ಎಂದೂ ರಾಜನಾಥ್ ಸಿಂಗ್ ಹೇಳಿದರು.

2007: ಮಕ್ಕಳಿಲ್ಲದ ಕೊರಗಿದೆಯೇ? ಆಲೂಗಡ್ಡೆ ಬಿಡಿ, ಐಸ್ ಕ್ರೀಮ್ ತಿನ್ನಿ, ಅದರಿಂದ ಮಹಿಳೆಯರು ಗರ್ಭವತಿಯರಾಗುವ ಸಾಧ್ಯತೆ ಹೆಚ್ಚು ಎಂದು ಹಾರ್ವರ್ಡಿನ ಸಾರ್ವಜನಿಕ ಆರೋಗ್ಯ ಇಲಾಖೆಯ ಸಂಶೋಧನೆ ತಿಳಿಸಿತು. ಕೆಲವೊಂದು ಆಹಾರ ಪದಾರ್ಥಗಳು ಹಾಗೂ ಜೀವನ ಪದ್ಧತಿ ಹಾರ್ಮೋನುಗಳ ಮೇಲೆ ಗಮನಾರ್ಹ ಪರಿಣಾಮ ಬೀರುವ ಮೂಲಕ ಗರ್ಭಧಾರಣಾ ಸಾಮರ್ಥ್ಯವನ್ನು ಹೆಚ್ಚಿಸುತ್ತವೆ, ಬ್ರೆಡ್, ಸಿಹಿ ಲಘು ಪಾನೀಯ, ಆಲೂ ಪದಾರ್ಥಗಳ ಸೇವನೆಯಿಂದ ರಕ್ತದಲ್ಲಿ ಸಕ್ಕರೆ ಪ್ರಮಾಣ ದಿಢೀರನೇ ಹೆಚ್ಚುವುದರಿಂದ ಹಾರ್ಮೋನುಗಳ ಮೇಲೆ ದುಷ್ಪರಿಣಾಮವಾಗುತ್ತದೆ. ಆದರೆ ಹಾಲು ಹಾಗೂ ಹೈನು ಉತ್ಪನ್ನಗಳ ಸೇವನೆ ಹಾಗೂ ಜೀವನ ಶೈಲಿಯಲ್ಲಿ ಮಾಡಿಕೊಳ್ಳುವ ಕೆಲ ಬದಲಾವಣೆಗಳು ಅಂಡಾಣು ಚಟುವಟಿಕೆಯನ್ನು ಚುರುಕುಗೊಳಿಸುತ್ತದೆ ಎಂದು ಸಂಶೋಧನೆ ಹೇಳಿತು.

2007: ಶ್ವಾಸಕೋಶ ಕ್ಯಾನ್ಸರಿಗೆ ಹಸಿರು ತರಕಾರಿ ಮಿಶ್ರಣ (ಪಚಡಿ ಅಥವಾ ಸಲಾಡ್) ಉತ್ತಮ ಮದ್ದು ಎಂದು ಟೆಕ್ಸಾಸ್ ವಿಶ್ವವಿದ್ಯಾಲಯದ ಕ್ಯಾನ್ಸರ್ ಸಂಶೋಧನಾ ಕೇಂದ್ರ ಪತ್ತೆ ಹಚ್ಚಿತು. ಹಸಿರು ತರಕಾರಿಗಳ ಸೇವನೆ ಜೊತೆಗೆ ಕೈತೋಟದಲ್ಲಿ ಕೆಲಸ ಮಾಡುವುದರಿಂದ ಶ್ವಾಸಕೋಶ ಕ್ಯಾನ್ಸರ್ ಬರುವ ಸಾಧ್ಯತೆ ತೀರಾ ಕಡಿಮೆ. ಧೂಮಪಾನಿಗಳಿಗೆ ಇದು ಉತ್ತಮ ಔಷಧ ಎಂದು ವರದಿ ಹೇಳಿತು.

2007: `ಬ್ಯಾಂಕಿನ ಸಾಲ ವಸೂಲಿ ಕಿರುಕುಳ ತಾಳಲಾರದೆ ಆತ್ಮಹತ್ಯೆ ಮಾಡಿಕೊಂಡ ರೈತನ' ಕುಟುಂಬಕ್ಕೆ 25 ಲಕ್ಷ ರೂಪಾಯಿ ಪರಿಹಾರ ನೀಡಬೇಕೆಂದು ಆಗ್ರಹಿಸಿ ಐಸಿಐಸಿಐ ಬ್ಯಾಂಕಿಗೆ ಮುತ್ತಿಗೆ ಹಾಕಿದ ರೈತರು ಹಾಗೂ ಪ್ರತಿಭಟನೆಕಾರರು ಜಿಲ್ಲಾಧಿಕಾರಿಯನ್ನು ಸ್ಥಳಕ್ಕೇ ಕರೆಸಿ, ಬ್ಯಾಂಕಿಗೆ ಬೀಗಮುದ್ರೆ ಹಾಕಿಸಿದ ನಾಟಕೀಯ ಪ್ರಕರಣ ಮೈಸೂರು ನಗರದಲ್ಲಿ ನಡೆಯಿತು. ರಮಾವಿಲಾಸ ರಸ್ತೆಯಲ್ಲಿನ ಐಸಿಐಸಿಐ ಬ್ಯಾಂಕಿನ ಮುಂದೆ ಬೆಳಿಗ್ಗೆ 11 ಗಂಟೆಗೆ ಆರಂಭವಾದ ಪ್ರತಿಭಟನೆ ರಾತ್ರಿಯೂ ಮುಂದುವರಿಯಿತು. ಹೊಸಹಳ್ಳಿ ಕಸಬಾದ ರೈತ ಎಚ್.ಎಂ. ಮಂಜುನಾಥ್ ಬ್ಯಾಂಕಿನಿಂದ ಟ್ರಾಕ್ಟರ್ ಕೊಳ್ಳಲು ಒಟ್ಟು 4.79 ಲಕ್ಷ ರೂಪಾಯಿಯ ಮೂರು ಸಾಲಗಳನ್ನು ಪಡೆದಿದ್ದರು. ಆರು ತಿಂಗಳಿಗೊಮ್ಮೆ ಕಂತು ಕಟ್ಟಬೇಕಿದ್ದ ಅವರು ಮೊದಲ ಕಂತು 48 ಸಾವಿರ ರೂಪಾಯಿಗಳನ್ನು ಕಟ್ಟಿದ್ದರು. ಎರಡನೆಯ ಕಂತು ಕಟ್ಟಲು ಒತ್ತಡ ಹೇರಿದ್ದ ಬ್ಯಾಂಕಿನವರು ನವೆಂಬರ್ 5ರ ದಿನಾಂಕ ನಮೂದಿಸಿ ಏಳು ದಿನಗಳ ಒಳಗೆ ಹಣ ಕಟ್ಟಬೇಕೆಂದು ಒಟ್ಟು ಮೂರು ನೋಟಿಸ್ ಕಳಿಸಿದ್ದರು. ಮೊದಲ ನೋಟಿಸಿನಲ್ಲಿ 42,194 ರೂಪಾಯಿ, ಎರಡನೆ ನೋಟಿಸಿನಲ್ಲಿ 3,866 ರೂಪಾಯಿ ಹಾಗೂ ಮೂರನೆ ನೋಟಿಸಿನಲ್ಲಿ 7,839 ರೂಪಾಯಿ ಕಟ್ಟಬೇಕೆಂದು ಸೂಚಿಸಲಾಗಿತ್ತು. ಆದರೆ ಮಂಜುನಾಥ್ ಗೆ ಈ ನೋಟಿಸುಗಳು ಡಿಸೆಂಬರ್ 3ರಂದು ತಲುಪಿದವು. ಡಿಸೆಂಬರ್ 4ರಂದೇ ಗ್ರಾಮಕ್ಕೆ ಬಂದ ಬ್ಯಾಂಕಿನ ಖಾಸಗಿ ವಸೂಲಿ ಸಿಬ್ಬಂದಿ ಹೊಲದಿಂದ ಟ್ರಾಕ್ಟರಿನಲ್ಲಿ ಬರುತ್ತಿದ್ದ ಮಂಜುನಾಥ ಅವರನ್ನು ತಡೆದು ಬಲವಂತವಾಗಿ ಟ್ರಾಕ್ಟರನ್ನು ವಶಕ್ಕೆ ತೆಗೆದುಕೊಂಡರು. ವಾರದೊಳಗೆ ಕಂತು ಕಟ್ಟುವುದಾಗಿ ಹೇಳಿದರೂ ಕಿವಿಗೊಡಲಿಲ್ಲ. ಗ್ರಾಮಸ್ಥರ ಎದುರೇ ಆದ ಈ ಅವಮಾನದಿಂದ ತೀವ್ರ ಮನನೊಂದ ಮಂಜುನಾಥ, ಅಂದೇ ಸಂಜೆ ವಿಷ ಸೇವಿಸಿ, ಹೊಲದ ಬದಿಯಲ್ಲಿದ್ದ ನೀರಿನ ಬಂಡ್ ಗೆ ಬಿದ್ದು ಆತ್ಮಹತ್ಯೆ ಮಾಡಿಕೊಂಡರು.

2007: ಕೈಗಾರಿಕಾಭಿವೃದ್ಧಿಯ ನೆಪದಲ್ಲಿ ರೈತರ ಫಲವತ್ತಾದ ಭೂಮಿಯನ್ನು ಸ್ವಾಧೀನ ಪಡಿಸಿಕೊಳ್ಳುವ ಕೈಗಾರಿಕಾ ಪ್ರದೇಶಾಭಿವೃದ್ಧಿ ಮಂಡಳಿ ಕ್ರಮದ ವಿರುದ್ಧ ರೈತರು ಮೈಸೂರಿನಲ್ಲಿ ಹಗಲು ರಾತ್ರಿ ಧರಣಿ ಆರಂಭಿಸಿದರು.

2006: ಭಾರತೀಯ ಮೂಲದ ಗಗನಯಾತ್ರಿ ಸುನೀತಾ ವಿಲಿಯಮ್ಸ್ ಸೇರಿದಂತೆ 7ಮಂದಿ ಬಾಹ್ಯಾಕಾಶಯಾನಿಗಳನ್ನು ಹೊತ್ತ `ಡಿಸ್ಕವರಿ' ಬಾಹ್ಯಾಕಾಶ ನೌಕೆಯನ್ನು ಅಮೆರಿಕದ ಫ್ಲೋರಿಡಾದಲ್ಲಿ ಇರುವ ಕೇಪ್ ಕೆನವರಾಲಿನ ಕೆನಡಿ ಬಾಹ್ಯಾಕಾಶ ಕೇಂದ್ರದಿಂದ ಭಾರತೀಯ ಕಾಲಮಾನ ಪ್ರಕಾರ ಬೆಳಿಗ್ಗೆ 7.17ಕ್ಕೆ ಯಶಸ್ವಿಯಾಗಿ ಹಾರಿಬಿಡಲಾಯಿತು. ನೌಕೆ ಕೇವಲ 9 ನಿಮಿಷಗಳಲ್ಲಿ ಬಾಹ್ಯಾಕಾಶದಲ್ಲಿ ತನ್ನ ಸೂಚಿತ ಕಕ್ಷೆಯನ್ನು ತಲುಪಿತು. `ಡಿಸ್ಕವರಿ' ನೌಕೆಯು 2003ರಲ್ಲಿ ಭಾರತದ ಕಲ್ಪನಾ ಚಾವ್ಲಾ ಸೇರಿದಂತೆ 7 ಮಂದಿ ಗಗನ ಯಾತ್ರಿಗಳು ಇದ್ದ ಕೊಲಂಬಿಯಾ ನೌಕೆ ಸ್ಫೋಟಗೊಂಡ ಘಟನೆ ನಂತರ ಉಡಾವಣೆಗೊಂಡ 4ನೇ ನೌಕೆ. ಅಲ್ಲದೆ ಕಳೆದ ನಾಲ್ಕು ವರ್ಷಗಳಲ್ಲಿ ರಾತ್ರಿ ಹೊತ್ತಿನಲ್ಲಿ ನಡೆದ ಮೊದಲ ಉಡಾವಣಾ ಕಾರ್ಯಕ್ರಮ ಇದು. ಬಾಹ್ಯಾಕಾಶದಂಚಿನಲ್ಲಿ `ಅಂತಾರಾಷ್ಟ್ರೀಯ ಬಾಹ್ಯಾಕಾಶ ನಿಲ್ದಾಣ'ದ ಮರುನಿರ್ಮಾಣ ಹಾಗೂ ದುರಸ್ತಿ ಉದ್ದೇಶಕ್ಕಾಗಿ `ಡಿಸ್ಕವರಿ' ನೌಕೆಯನ್ನು ಹಾರಿಬಿಡಲಾಯಿತು. 12ದಿನಗಳ ಕಾಲ ನಡೆಯಲಿರುವ ಈ ಮರುನಿರ್ಮಾಣ ಕಾರ್ಯ ಅಥವಾ ದುರಸ್ತಿ ಕಾರ್ಯ ಅತಿ ಸಂಕೀರ್ಣಮಯವಾಗಿದ್ದು, ಇದಕ್ಕಾಗಿ 11ದಶಕೋಟಿ ಡಾಲರ್ ವೆಚ ್ಚಮಾಡಲಾಗುತ್ತಿದೆ. ಇದು ಸಂಪೂರ್ಣಗೊಳ್ಳಲು ಸುಮಾರು 3ಬಾಹ್ಯಾಕಾಶ ನಡಿಗೆಗಳು ಬೇಕಾಗಬಹುದು ಎಂಬುದು ಅಮೆರಿಕದ ಬಾಹ್ಯಾಕಾಶ ಏಜೆನ್ಸಿಗಳ ಲೆಕ್ಕಾಚಾರ. ಡಿಸ್ಕವರಿ ನೌಕೆಯಲ್ಲಿ ಭಾರತೀಯ ಮೂಲದ ಸುನೀತಾ ವಿಲಿಯಮ್ಸ್ ಅವರಲ್ಲದೆ ಪೈಲಟ್ ವಿಲಿಯಮ್ ಓಫೆಲಿನ್, ಜಾನ್ ಹಿಗ್ಗಿನ್ ಬಾಥಮ್, ನಿಕೋಲಾಸ್ ಪ್ಯಾಟ್ರಿಕ್, ಬಾಬ್ ಕರ್ಬೀಮ್ ಹಾಗೂ ಸ್ಟಾಕ್ ಹೋಂ ಭೌತಶಾಸ್ತ್ರಜ್ಞ ಕ್ರಿಸ್ಟೆರ್ ಫ್ಯುಗ್ಲೆಸಾಂಗ್ ಇದ್ದಾರೆ. ಈ 7 ಮಂದಿಯ ತಂಡದ ಕಮಾಂಡರ್ 50 ವರ್ಷ ವಯಸ್ಸಿನ ಜೆಟ್ ಪೈಲಟ್ ಮಾರ್ಕ್ ಪೊಲಾನ್ಸ್ಕಿ. ಸುನೀತಾ ವಿಲಿಯಮ್ಸ್ ಅವರು ತಮ್ಮ ಜೊತೆಗೆ ಪುಟ್ಟ ಗಣಪತಿ ವಿಗ್ರಹ, ಭಗವದ್ಗೀತೆ ಮತ್ತು ಸಮೋಸಾವನ್ನೂ ಬಾಹ್ಯಾಕಾಶಕ್ಕೆ ಒಯ್ದು ತಮ್ಮ ಭಾರತೀಯತೆ ಮೆರೆದರು.

2006: ಶ್ರೀಲಂಕಾ ಪೂರ್ವಭಾಗದಲ್ಲಿ ಸರ್ಕಾರಿ ಪಡೆಗಳು ಮತ್ತು ತಮಿಳು ಉಗ್ರಗಾಮಿಗಳ ನಡುವೆ ಎರಡು ದಿನಗಳಿಂದ ನಡೆದ ಸಮರದಲ್ಲಿ ಸತ್ತವರ ಸಂಖ್ಯೆ 100 ದಾಟಿತು. ಗುಂಡಿನ ಘರ್ಷಣೆಯಿಂದ ಭಯಭೀತರಾದ 3000ಕ್ಕೂ ಹೆಚ್ಚು ನಾಗರಿಕರು ಮನೆ ಮಠ ಬಿಟ್ಟು ಓಡಿ ದೇವಾಲಯ, ಬೌದ್ಧ ಮಂದಿರಗಳಲ್ಲಿ ಆಶ್ರಯ ಪಡೆದರು. ಮೃತರಲ್ಲಿ ಸುಮಾರು 25 ಮಂದಿ ನಾಗರಿಕರು. 30 ಮಂದಿ ಸೈನಿಕರು ಮತ್ತು 40 ಮಂದಿ ತಮಿಳು ಉಗ್ರಗಾಮಿಗಳು.

2006: ಹಿಂದಿನ ವಾರವಷ್ಟೇ `ಡ್ಯೂರಿಯನ್' ಚಂಡಮಾರುತದಿಂದ ತತ್ತರಿಸಿದ್ದ ಫಿಲಿಪ್ಪೀನ್ಸಿನ ಸಹಸ್ರಾರು ಮಂದಿ ಇನ್ನೊಂದು ಚಂಡಮಾರುತ `ಉತೂರ್' ಭಯದಿಂದ ಮನೆಮಠಗಳನ್ನು ಬಿಟ್ಟು ತಾತ್ಕಾಲಿಕ ಆಶ್ರಯಗಳಲ್ಲಿ ಇಡೀ ರಾತ್ರಿಯನ್ನು ಕಳೆದರು. ಕೇಂದ್ರ ಫಿಲಿಪ್ಪೀನ್ಸಿಗೆ ಅಪ್ಪಳಿಸಿದ ಈ `ಉತೂರ್' ಚಂಡಮಾರುತ ಮೂವರನ್ನು ಬಲಿ ತೆಗೆದುಕೊಂಡು ಹಲವಾರು ಪ್ರದೇಶಗಳ ಜನ ಜೀವನವನ್ನು ಅಸ್ತವ್ಯಸ್ತಗೊಳಿಸಿತು. ಹಿಂದಿನ ವಾರ ಅಪ್ಪಳಿಸಿದ್ದ `ಡ್ಯೂರಿಯನ್' ಚಂಡಮಾರುತ 1000 ಜನರನ್ನು ಬಲಿ ತೆಗೆದುಕೊಂಡು, ಸಕ್ರಿಯವಾಗಿರುವ `ಮೌಂಟ್ ಮಯೋನ್' ಜ್ವಾಲಾಮುಖಿಯಿಂದ ಹೊರಟ ಲಾವಾರಸದ ಜೊತೆಗೆ ಭಾರಿ ಮಳೆ, ಕೆಸರು ನೀರನ್ನು ಹೊತ್ತು ತಂದು ಜನ ಜೀವನವನ್ನು ಅಸ್ತವ್ಯಸ್ತಗೊಳಿಸಿತ್ತು.

2006: ಹದಿನೇಳು ವರ್ಷಗಳ ಕಾಲ ಚಿಲಿಯಲ್ಲಿ ಸರ್ವಾಧಿಕಾರ ನಡೆಸಿದ್ದ ಆಗಸ್ಟೋ ಪಿನೋಷೆ (91) ಈದಿನ ನಡುರಾತ್ರಿ ನಿಧನರಾದರು. ಆಡಳಿತಾವಧಿಯಲ್ಲಿ ನೂರಾರು ಜನರ ಹತ್ಯೆಗೆ ಪಿನೋಷೆ ಕಾರಣರಾಗಿದ್ದ ಹಿನ್ನೆಲೆಯಲ್ಲಿ ಚಿಲಿಯಲ್ಲಿ ಮಿಶ್ರ ಪ್ರತಿಕ್ರಿಯೆ ವ್ಯಕ್ತಗೊಂಡಿತು. ಕೆಲವರು ಖುಷಿಯಿಂದ ಕುಣಿದು ಕುಪ್ಪಳಿಸಿದರೆ, ಇನ್ನು ಕೆಲವರು ಪಿನೋಷೆ ಚಿಲಿಯನ್ನು ಕಮ್ಯೂನಿಸ್ಟರ ಕಪಿ ಮುಷ್ಟಿಯಿಂದ ಪಾರು ಮಾಡಿದರು ಎಂದು ಹೇಳಿ ಕಣ್ಣೀರಿಟ್ಟರು. ಕೆಲವೆಡೆ ವ್ಯಾಪಕ ಹಿಂಸಾಚಾರವೂ ನಡೆಯಿತು.

2006: ಬಾಂಗ್ಲಾದೇಶದ ಸಹಸ್ರಾರು ಜನರ ಉತ್ತಮ ಬದುಕಿನ ಕನಸನ್ನು ನನಸಾಗಿಸಿದ `ಗ್ರಾಮೀಣ ಬ್ಯಾಂಕ್' ರೂವಾರಿ ಮಹಮ್ಮದ್ ಯೂನಸ್ ಅವರಿಗೆ ಪ್ರಸಕ್ತ ವರ್ಷದ ನೊಬೆಲ್ ಪ್ರಶಸ್ತಿಯನ್ನು ಓಸ್ಲೋದಲ್ಲಿ ಪ್ರದಾನ ಮಾಡಲಾಯಿತು.

2005: ದಕ್ಷಿಣ ಚೀನಾದ ಸಾನ್ಯಾದಲ್ಲಿ ನಡೆದ ವಿಶ್ವ ಸುಂದರಿ (ಮಿಸ್ ವರ್ಲ್ಡ್- 2005) ಸ್ಪರ್ಧೆಯಲ್ಲಿ ಐಸ್ ಲ್ಯಾಂಡಿನ ಬೆಡಗಿ ಉನ್ನೂರ್ ಬಿರ್ನಾ ವಿಲ್ಜಾ ಮ್ಯಾಡಾಟಿರ್ ವಿಶ್ವ ಸುಂದರಿ ಕಿರೀಟ ಧರಿಸಿದರು. ಮಿಸ್ ಮೆಕ್ಸಿಕೊ ಡಾಫ್ಲೆ ಮೊಲಿನಾ ಲೋನಾ ಅವರು ದ್ವಿತೀಯ ಸ್ಥಾನವನ್ನೂ, ಮಿಸ್ ಪೋರ್ಟರಿಕೊ ಇಂಗ್ರಿಡ್ ಮೇರಿ ರಿವೇರಾ ಸ್ಯಾಂಟೊ ಮೂರನೇ ಸ್ಥಾನವನ್ನೂ ಗಳಿಸಿದರು. ಭಾರತದ ಸಿಂಧೂರ ಗದ್ದೆ ಸೇರಿದಂತೆ 102 ಸ್ಪರ್ಧಿಗಳು ಕಣದಲ್ಲಿ ಇದ್ದರು.

2005: ನೈಜೀರಿಯಾದ ಪ್ರಯಾಣಿಕ ವಿಮಾನವೊಂದು ಪೋರ್ಟ್ ಹಾರ್ ಕೋರ್ಟ್ ನಗರದಲ್ಲಿ ನೆಲಕ್ಕೆ ಅಪ್ಪಳಿಸಿ ಅದರಲ್ಲಿದ್ದ ಕನಿಷ್ಠ 103 ಜನ ಮೃತರಾದರು. ಸೊಸೊಲಿಸೊ ಏರ್ ಲೈನ್ಸಿಗೆ ಸೇರಿದ ಈ ವಿಮಾನ ಅಬುಜಾದಿಂದ ಪ್ರಯಾಣ ಹೊರಟಿತ್ತು.

2005: ಶ್ರೀಲಂಕಾ ವಿರುದ್ಧ ದೆಹಲಿಯ 2ನೇ ಟೆಸ್ಟ್ ಪಂದ್ಯದಲ್ಲಿ ಟೆಸ್ಟ್ ಜೀವನದ 35ನೇ ಶತಕ ಗಳಿಸುವ ಮೂಲಕ ಸಚಿನ್ ರಮೇಶ ತೆಂಡೂಲ್ಕರ್ ಅವರು ವಿಶ್ವದಾಖಲೆ ಸ್ಥಾಪಿಸಿ ಹೊಸ ಎತ್ತರಕ್ಕೆ ಏರಿದರು.

2005: ಈಕ್ವೆಡಾರಿನ 116 ವರ್ಷ ವಯಸ್ಸಿನ ಅಜ್ಜಿ ಮರಿಯಾ ಎಸ್ತರ್ ಕ್ಯಾಪೊವಿಲ್ಲಾ ಅವರು ವಿಶ್ವದ ಅತ್ಯಂತ ಹಿರಿಯ ಮಹಿಳೆ ಎಂದು ಗಿನ್ನೆಸ್ ದಾಖಲೆಗಳ ಸಂಸ್ಥೆ ಮಾನ್ಯ ಮಾಡಿತು. ಈವರೆಗೆ ಅಮೆರಿಕದ ಟೆನ್ನಿಸೀ ಪ್ರಾಂತ್ಯದ ಮೆಂಫಿಸ್ನ ಎಲಿಜಬೆತ್ ಬೋಲ್ಡನ್ ಅವರಿಗೆ ವಿಶ್ವದ ಅತ್ಯಂತ ಹಿರಿಯ ಮಹಿಳೆ ಎಂಬ ಖ್ಯಾತಿ ಇತ್ತು. ಮರಿಯಾ ಹುಟ್ಟಿದ್ದು 1889ರ ಸೆಪ್ಟೆಂಬರ್ 14ರಂದು. ಈಕ್ವಡಾರಿನ ಗುಯಾಕಲ್ ಎಂಬಲ್ಲಿ. ಐವರು ಮಕ್ಕಳು, ನಾಲ್ವರು ಮೊಮ್ಮಕ್ಕಳು, ಒಂಭತ್ತು ಮರಿಮಕ್ಕಳು ಮತ್ತು ಮರಿಮಕ್ಕಳ ನಾಲ್ಕು ಮಕ್ಕಳು ಈ ಅಜ್ಜಿಯ ಸಂಸಾರದ ಸದಸ್ಯರು. ಪತಿ 1949ರಲ್ಲಿ ಮೃತರಾಗಿದ್ದಾರೆ.

2005: ಜುಲೈ 7ರ ಲಂಡನ್ ಬಾಂಬ್ ದಾಳಿಯಲ್ಲಿ ಎರಡೂ ಕಾಲುಗಳನ್ನು ಕಳೆದುಕೊಂಡ ಆಸ್ಟ್ರೇಲಿಯಾದ ಹುಡುಗಿ ಗಿಲ್ ಹಿಕ್ಸ್ (37) ಜೊ ಕೆರ್ (47) ಅವರನ್ನು ಮದುವೆಯಾದರು. ಲಂಡನ್ನಿನ ರಸೆಲ್ ಚೌಕ ಟ್ಯೂಬ್ ಸ್ಟೇಷನ್ನಿನಿಂದ ಜೀವಂತವಾಗಿ ಕರೆತರಲಾದ ಕೊನೆಯ ವ್ಯಕ್ತಿಯ ಈಕೆಯಾಗಿದ್ದರು. ಆಕೆಯ ಕಾಲುಗಳನ್ನು ಕತ್ತರಿಸಿ ಕೃತಕ ಕಾಲುಗಳನ್ನು ಜೋಡಿಸಲಾಗಿತ್ತು. ಆ ಕೃತಕ ಕಾಲುಗಳಲ್ಲೇ ನಡೆದಾಡಲು ಆಕೆ ಅಭ್ಯಾಸ ಮಾಡಿಕೊಂಡರು.

2005: ವೆಲಿಂಗ್ಟನ್ನಿನಲ್ಲಿ ನಡೆದ ಮೂರನೇ ಏಕದಿನ ಪಂದ್ಯದಲ್ಲಿ ಆಸ್ಟ್ರೇಲಿಯಾ ವಿರುದ್ಧ ಇನ್ನೂ ಒಂದು ಓವರ್ ಬಾಕಿ ಇರುವಂತೆಯೇ ಎರಡು ವಿಕೆಟುಗಳ ಅಂತರದ ವಿಜಯ ಸಾಧಿಸುವ ಮೂಲಕ ನ್ಯೂಜಿಲೆಂಡ್ ತಂಡವು ವಿಶ್ವದಾಖಲೆಯ ಗೌರವ ಪಡೆಯಿತು. ಆಸ್ಟ್ರೇಲಿಯಾ ಮೊದಲು ಬ್ಯಾಟಿಂಗ್ ಮಾಡಿ ಐವತ್ತು ಓವರುಗಳಲ್ಲಿ 331 ರನ್ನುಗಳ ಬೃಹತ್ ಮೊತ್ತ ಪೇರಿಸಿತ್ತು. ನ್ಯೂಜಿಲೆಂಡ್ 49 ಓವರುಗಳಲ್ಲಿ 8 ವಿಕೆಟ್ ಕಳೆದುಕೊಂಡು 332 ರನ್ ಪೇರಿಸಿ, ಅತಿ ಹೆಚ್ಚು ಮೊತ್ತದ ಗುರಿಯನ್ನು ಬೆನ್ನಟ್ಟಿ ವಿಜಯಸಾಧಿಸಿದ ವಿಶ್ವ ದಾಖಲೆಯ ಶ್ರೇಯಸ್ಸು ಸಾಧಿಸಿತು. 2002ರಲ್ಲಿ ದಕ್ಷಿಣ ಆಫ್ರಿಕಾ ವಿರುದ್ಧ 7 ವಿಕೆಟ್ ಕಳೆದುಕೊಂಡು 330 ರನ್ ಪೇರಿಸಿದದ ಆಸ್ಟ್ರೇಲಿಯಾ ಈ ವಿಶ್ವದಾಖಲೆಯ ಶ್ರೇಯಸ್ಸು ಗಳಿಸಿತ್ತು.

1988: ವಿಶಾಖಪಟ್ಟಣದಲ್ಲಿ ನ್ಯೂಜಿಲ್ಯಾಂಡ್ ವಿರುದ್ಧ ನಡೆದ ಏಕದಿನ ಕ್ರಿಕೆಟ್ ಪಂದ್ಯದಲ್ಲಿ ಭಾರತೀಯ ಕ್ರಿಕೆಟ್ಪಟು ಕೃಷ್ಣಮಾಚಾರಿ ಶ್ರೀಕಾಂತ್ ಅವರು 27 ರನ್ನುಗಳಿಗೆ 5 ವಿಕೆಟುಗಳನ್ನು ಉರುಳಿಸಿದ ಹಾಗೂ ಅರ್ಧ ಶತಕಕ್ಕೂ ಹೆಚ್ಚು (70) ರನ್ ಗಳಿಸಿದ ಮೊದಲ ಆಟಗಾರ ಎಂಬ ಹೆಗ್ಗಳಿಕೆಗೆ ಪಾತ್ರರಾದರು.

1961: ಸಾಹಿತಿ ವಾಸಂತಿ ಆದಿಕೇಷ್ ಜನನ.

1952: ಜಗತ್ತಿನಲ್ಲೇ ಮೊದಲ ಬಾರಿಗೆ ಭಾರತದಲ್ಲಿ ಕುಟುಂಬ ನಿಯಂತ್ರಣ ಯೋಜನೆ ಜಾರಿಗೊಂಡಿತು.

1948: ಸಾಹಿತಿ ಮಾರ್ಕಂಡಪುರಂ ಜನನ.

1948: ಸಾಹಿತಿ ಶ್ರೀನಿವಾಸ್ ಜನನ.

1942: ಬಾಂಬೆಯ (ಈಗಿನ ಮುಂಬೈ) ವೈದ್ಯ ದ್ವಾರಕಾನಾಥ್ ಶಾಂತಾರಾಮ್ ಕೊಟ್ನಿಸ್ (1910-1942) ತಮ್ಮ 32ನೇ ವಯಸ್ಸಿನಲ್ಲಿ ಮೃತರಾದರು. ಇವರು 1938ರಲ್ಲಿ ಚೀನಾಕ್ಕೆ ತೆರಳಿ ಚೀನೀ-ಜಪಾನ್ ಯುದ್ಧದಲ್ಲಿ ಕಮ್ಯೂನಿಸ್ಟ್ ಸೇನೆಗೆ ನೆರವಾಗಿದ್ದರು. ಭಾರತದ ಖ್ಯಾತ ಚಿತ್ರ ನಿರ್ದೇಶಕ ವಿ. ಶಾಂತಾರಾಮ್ ಅವರು `ಡಾ. ಕೊಟ್ನಿಸ್ ಕಿ ಅಮರ್ ಕಹಾನಿ' ಚಿತ್ರದ ಮೂಲಕ ಕೊಟ್ನಿಸ್ ಅವರನ್ನು ಅಮರರನ್ನಾಗಿ ಮಾಡಿದ್ದಾರೆ.

1939: ಸಾಹಿತಿ ಎಂ.ಕೆ. ರವೀಂದ್ರನಾಥ್ ಜನನ.

1922: ಸಾಹಿತಿ ಶಾಂತಾದೇವಿ ಮಾಳವಾಡ ಜನನ.

1902: ಭಾರತದ ಸ್ವಾತಂತ್ರ್ಯ ಹೋರಾಟಗಾರ ಮೈಸೂರಿನ (ಈಗಿನ ಕರ್ನಾಟಕ) ಮುಖ್ಯಮಂತ್ರಿ ಹಾಗೂ ಕಾಂಗ್ರೆಸ್ ಅಧ್ಯಕ್ಷರಾಗಿದ್ದ ಎಸ್. ನಿಜಲಿಂಗಪ್ಪ (1902-2000) ಹುಟ್ಟಿದ ದಿನ.

1896: ಕನ್ನಡದ ಖ್ಯಾತ ವಿದ್ವಾಂಸ, ವಾಗ್ಮಿ ಸಿ.ಕೆ. ವೆಂಕಟರಾಮಯ್ಯ (10-12-1896ರಿಂದ 3-4-1973) ಅವರು ಕೃಷ್ಣಪ್ಪ- ನಂಜಮ್ಮ ದಂಪತಿಯ ಮಗನಾಗಿ ಚನ್ನಪಟ್ಟಣ ತಾಲ್ಲೂಕಿನ ಪೊಟ್ಟು ಗ್ರಾಮದಲ್ಲಿ ಜನಿಸಿದರು.

1878: ಚಕ್ರವರ್ತಿ ರಾಜಗೋಪಾಲಾಚಾರಿ ಅವರು ತಮಿಳುನಾಡಿನ ಹೊಸೂರಿನಲ್ಲಿ ಜನಿಸಿದರು.

1870: ಸರ್ ಜದುನಾಥ ಸರ್ಕಾರ್ (1870-1958) ಹುಟ್ಟಿದ ದಿನ. ಭಾರತೀಯ ಇತಿಹಾಸಕಾರರಾದ ಇವರು ಮೊಘಲ್ ವಂಶಕ್ಕೆ ಸಂಬಂಧಿಸಿದಂತೆ ಇತಿಹಾಸ ಬರೆದವರು.

1768: ಲಂಡನ್ನಿನಲ್ಲಿ ರಾಯಲ್ ಅಕಾಡೆಮಿ ಆಫ್ ಆರ್ಟ್ಸ್ ಸ್ಥಾಪನೆಗೊಂಡಿತು. ಸರ್ ಜೊಶುವಾ ರೇನಾಲ್ಡ್ಸ್ ಅದರ ಮೊದಲ ಅಧ್ಯಕ್ಷರಾದರು.

(ಸಂಗ್ರಹ: ನೆತ್ರಕೆರೆ ಉದಯಶಂಕರ)

Friday, January 8, 2010

ಇಂದಿನ ಇತಿಹಾಸ History Today ಡಿಸೆಂಬರ್ 09

ಇಂದಿನ ಇತಿಹಾಸ

ಡಿಸೆಂಬರ್ 09

ಮಾದಕ ದ್ರವ್ಯ ಕಳ್ಳಸಾಗಣೆ ಆರೋಪದ ಮೇಲೆ ಗಾಟ್ವಿಕ್ ವಿಮಾನ ನಿಲ್ದಾಣದಲ್ಲಿ ಇಂಗ್ಲೆಂಡ್ ಕ್ರಿಕೆಟ್ ತಂಡದ ಮಾಜಿ ಆಟಗಾರ ಕ್ರಿಸ್ ಲೂಯಿಸ್ ಅವರನ್ನು ಬಂಧಿಸಲಾಯಿತು. 2 ಸಾವಿರ ಯೂರೊ ಮೌಲ್ಯದ ಕೊಕೇನನ್ನು ಅವರಿಂದ ವಶ ಪಡಿಸಿಕೊಳ್ಳಲಾಯಿತು. 40 ವರ್ಷ ವಯಸ್ಸಿನ ಲೂಯಿಸ್ ಅವರು ದ್ರವ ರೂಪದಲ್ಲಿದ್ದ ನಾಲ್ಕು ಕೆಜಿ ಕೊಕೇನನ್ನು ಹಣ್ಣಿನ ಡಬ್ಬದೊಳಗೆ ಇಟ್ಟು ಕಳ್ಳ ಸಾಗಣೆ ಮಾಡುತ್ತಿದ್ದರು ಎಂದು ಲೂಯಿಸ್ ಅವರನ್ನು ಬಂಧಿಸಿದ ಬ್ರಿಟನ್ ಬಾರ್ಡರ್ ಏಜೆನ್ಸಿ ಸಿಬ್ಬಂದಿ ತಿಳಿಸಿದರು. ಲೂಯಿಸ್ ಅವರೊಂದಿಗಿದ್ದ ಬ್ಯಾಸ್ಕೆಟ್‌ಬಾಲ್ ಆಟಗಾರ ಚಡ್ ಕಿರ್ನೊನ್ ಅವರನ್ನೂ ಬಂಧಿಸಲಾಯಿತು.


2008: ದೇಶದ ವಾಣಿಜ್ಯ ರಾಜಧಾನಿ ಮುಂಬೈ ಮೇಲೆ ದಾಳಿ ನಡೆಸಿದ ಎಲ್ಲಾ 10 ಉಗ್ರಗಾಮಿಗಳ ಗುರುತು ಪತ್ತೆಯಾಯಿತು. ಇವರೆಲ್ಲರೂ ಪಾಕಿಸ್ಥಾನ ಮೂಲದವರೇ ಎಂಬುದನ್ನು ದೃಢಪಡಿಸಲು ಹಲವಾರು ಸುಳಿವುಗಳು ಪೊಲೀಸರಿಗೆ ಲಭ್ಯವಾದವು. ಎಲ್ಲಾ 10 ಮಂದಿಯ ತವರೂರುಗಳನ್ನು ಸಹ ಪತ್ತೆ ಹಚ್ಚುವಲ್ಲಿ ಅವರು ಯಶಸ್ವಿಯಾದರು. ಎಲ್ಲಾ ದುಷ್ಕರ್ಮಿಗಳೂ ಪಾಕಿಸ್ಥಾನದ ಪಂಜಾಬ್ ಪ್ರಾಂತ್ಯಕ್ಕೆ ಸೇರಿದವರು. ಏಕೈಕ ಬಂಧಿತ ಉಗ್ರ ಅಜ್ಮಲ್ ಕಸಾಬ್ ಸೇರಿದಂತೆ ಇತರ ಮೂವರ ಜಿಲ್ಲೆ ಒಕಾರ. ಇನ್ನು ಮೂವರು ಮುಲ್ತಾನ್, ಇಬ್ಬರು ಫೈಸಾಬ್ಲಾದ್ ಮತ್ತು ತಲಾ ಒಬ್ಬರು ಸಿಯಾಲ್‌ ಕೋಟ್ ಮತ್ತು ದೇರಾ ಇಸ್ಮಾಯಿಲ್ ಖಾನ್ ಜಿಲ್ಲೆಯವರು.

2008: ಲಷ್ಕರ್-ಇ-ತೊಯ್ಬಾ (ಎಲ್‌ಇಟಿ) ಕಮಾಂಡರ್ ಝಾಕೀರ್ ರೆಹಮಾನ್ ಲಖ್ವಿಯನ್ನು ಹಿಂದಿನ ದಿನ ಬಂಧಿಸಲಾಗಿದ್ದರೂ, ಆತನನ್ನು ಭಾರತಕ್ಕೆ ಹಸ್ತಾಂತರಿಸುವ ಪ್ರಶ್ನೆಯೇ ಇಲ್ಲ. ಆತನ ಭಯೋತ್ಪಾದಕ ಕೃತ್ಯಗಳ ಬಗ್ಗೆ ಭಾರತ ಸಾಕ್ಷ್ಯಗಳನ್ನು ಒದಗಿಸಿದರೆ ಮಾತ್ರ ಅವನನ್ನು ವಿಚಾರಣೆಗೆ ಒಳಪಡಿಸಲಾಗುವುದು ಎಂದು ಪಾಕಿಸ್ಥಾನ ಹೇಳಿತು. ಲಖ್ವಿಯನ್ನು ಬಂಧಿಸಿರುವುದು ನಿಜ. ಆದರೆ ಭಾರತ ಆತನ ವಿರುದ್ಧ ಸೂಕ್ತ ಪುರಾವೆಗಳನ್ನು ಒದಗಿಸಿದರೆ ಮಾತ್ರ ವಿಚಾರಣೆಗೆ ಒಳಪಡಿಸಲಾಗುವುದು. ಆತನನ್ನು ಭಾರತಕ್ಕೆ ಹಸ್ತಾಂತರಿಸುವ ಪ್ರಶ್ನೆಯೇ ಇಲ್ಲ ಎಂದು ಪಾಕಿಸ್ಥಾನದ ಹಿರಿಯ ಅಧಿಕಾರಿಯೊಬ್ಬರು ಸ್ಪಷ್ಟಪಡಿಸಿದರು.

2008: ಕ್ರಿಮಿನಲ್ ಹಿನ್ನೆಲೆಯುಳ್ಳ ಕಳಂಕಿತ ಸಚಿವರನ್ನು ಸಂಪುಟದಿಂದ ಕೈಬಿಡಲು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರಿಗೆ ಆದೇಶಿಸುವಂತೆ ಹಾಗೂ ಈ ಪ್ರಕರಣವನ್ನು ಸಿಬಿಐಗೆ ವಹಿಸಿಕೊಡುವಂತೆ ಕೋರಿ ಸಲ್ಲಿಸಲಾಗಿದ್ದ ಅರ್ಜಿಯನ್ನು ಹೈಕೋರ್ಟ್ ವಜಾ ಮಾಡಿತು. ಈ ಪ್ರಕರಣವು ರಾಜಕೀಯ ಪ್ರೇರಿತವಾದಂತೆ ಕಂಡುಬರುತ್ತಿದೆ. ಈ ಹಿನ್ನೆಲೆಯಲ್ಲಿ ಇದನ್ನು ಮಾನ್ಯ ಮಾಡಲಾಗದು ಎಂದು ಮುಖ್ಯ ನ್ಯಾಯಮೂರ್ತಿ ಪಿ.ಡಿ.ದಿನಕರನ್ ಹಾಗೂ ನ್ಯಾಯಮೂರ್ತಿ ಬಿ.ಎಸ್.ಪಾಟೀಲ್ ಅವರನ್ನು ಒಳಗೊಂಡ ವಿಭಾಗೀಯ ಪೀಠ ಅಭಿಪ್ರಾಯ ಪಟ್ಟಿತು.

2008: ಮಧ್ಯಪ್ರದೇಶದ ಮಾಜಿ ಮುಖ್ಯಮಂತ್ರಿ ಬಾಬುಲಾಲ್ ಗೌರ್ ಗೋವಿಂದ್‌ಪುರ ಕ್ಷೇತ್ರದಲ್ಲಿ ಗೆಲುವು ಸಾಧಿಸುವ ಮೂಲಕ ಸತತ ಒಂಬತ್ತನೇ ಬಾರಿ ವಿಧಾನ ಸಭೆಗೆ ಪ್ರವೇಶಿಸಿ ದಾಖಲೆ ನಿರ್ಮಿಸಿದರು. ಬಾಬುಲಾಲ್ ಗೌರ್ 1974ರಲ್ಲಿ ಪ್ರಥಮ ಬಾರಿ ಭೊಪಾಲಿನ ದಕ್ಷಿಣ ಕ್ಷೇತ್ರದಿಂದ ಸ್ವತಂತ್ರ ಅಭ್ಯರ್ಥಿಯಾಗಿ ಸ್ಪರ್ಧಿಸಿ ಆಯ್ಕೆಯಾಗುವ ಮೂಲಕ ರಾಜಕೀಯ ರಂಗ ಪ್ರವೇಶ ಮಾಡಿದರು. ನಂತರ 1977ರಲ್ಲಿ ಭಾರತೀಯ ಜನತಾ ಪಕ್ಷದ ಗೋವಿಂದ್‌ಪುರ ಕ್ಷೇತ್ರ ಅಭ್ಯರ್ಥಿಯಾಗಿ ಚುನಾವಣೆ ಕಣಕ್ಕೆ ಇಳಿದಿದ್ದರು.

2008: ಮಾದಕ ದ್ರವ್ಯ ಕಳ್ಳಸಾಗಣೆ ಆರೋಪದ ಮೇಲೆ ಗಾಟ್ವಿಕ್ ವಿಮಾನ ನಿಲ್ದಾಣದಲ್ಲಿ ಇಂಗ್ಲೆಂಡ್ ಕ್ರಿಕೆಟ್ ತಂಡದ ಮಾಜಿ ಆಟಗಾರ ಕ್ರಿಸ್ ಲೂಯಿಸ್ ಅವರನ್ನು ಬಂಧಿಸಲಾಯಿತು. 2 ಸಾವಿರ ಯೂರೊ ಮೌಲ್ಯದ ಕೊಕೇನನ್ನು ಅವರಿಂದ ವಶ ಪಡಿಸಿಕೊಳ್ಳಲಾಯಿತು. 40 ವರ್ಷ ವಯಸ್ಸಿನ ಲೂಯಿಸ್ ಅವರು ದ್ರವ ರೂಪದಲ್ಲಿದ್ದ ನಾಲ್ಕು ಕೆಜಿ ಕೊಕೇನನ್ನು ಹಣ್ಣಿನ ಡಬ್ಬದೊಳಗೆ ಇಟ್ಟು ಕಳ್ಳ ಸಾಗಣೆ ಮಾಡುತ್ತಿದ್ದರು ಎಂದು ಲೂಯಿಸ್ ಅವರನ್ನು ಬಂಧಿಸಿದ ಬ್ರಿಟನ್ ಬಾರ್ಡರ್ ಏಜೆನ್ಸಿ ಸಿಬ್ಬಂದಿ ತಿಳಿಸಿದರು. ಲೂಯಿಸ್ ಅವರೊಂದಿಗಿದ್ದ ಬ್ಯಾಸ್ಕೆಟ್‌ಬಾಲ್ ಆಟಗಾರ ಚಡ್ ಕಿರ್ನೊನ್ ಅವರನ್ನೂ ಬಂಧಿಸಲಾಯಿತು.

2008: ಫಿರೋಜಾಬಾದಿನ ಮಖಾನಪುರ ಪೊಲೀಸ್ ಠಾಣೆ ವ್ಯಾಪ್ತಿಯ ರುಪ್ಸಾಪುರದ ಬಳಿ ಬಸ್ಸಿನಲ್ಲಿ ಸಂಭವಿಸಿದ ಬೆಂಕಿ ಆಕಸ್ಮಿಕದಲ್ಲಿ ಮಹಿಳೆಯರು ಮಕ್ಕಳು ಸೇರಿದಂತೆ 40 ಮಂದಿ ಸಜೀವ ದಹನಗೊಂಡು, ಇತರ 30 ಮಂದಿಗೆ ಗಂಭೀರವಾದ ಸುಟ್ಟ ಗಾಯಗಳಾದವು. ಮಥುರಾದ ಜೈ ಗುರುದೇವ ಆಶ್ರಮದ ಸತ್ಸಂಗದಲ್ಲಿ ಪಾಲ್ಗೊಂಡು ವಾಪಸಾಗುತ್ತಿದ್ದಾಗ ಈ ದುರ್ಘಟನೆ ಸಂಭವಿಸಿತು.

2007: ಪಾಕಿಸ್ಥಾನ ವಿರುದ್ಧ ಬೆಂಗಳೂರಿನ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆದ ಮೂರನೇ ಕ್ರಿಕೆಟ್ ಟೆಸ್ಟ್ ಪಂದ್ಯದ ಮೊದಲ ದಿನ ಭಾರತದ ಬ್ಯಾಟ್ಸ್ ಮನ್ನರು ಕೆಲವು ದಾಖಲೆಗಳನ್ನು ಅಳಿಸಿಹಾಕಿದರೆ, ಎರಡನೇ ದಿನ ಮತ್ತೊಂದಷ್ಟು ದಾಖಲೆಗಳನ್ನು ಕಡತದಿಂದ ಕಿತ್ತುಹಾಕಿದರು. ಮೊದಲದಿನ ಯುವರಾಜ್ ಮತ್ತು ಸೌರವ್ ಗಂಗೂಲಿ ಸೇರಿ ತಂಡದ ಬೃಹತ್ ಮೊತ್ತಕ್ಕೆ ಕಾರಣರಾಗಿದ್ದರು. ಅದೇ ಪ್ರದರ್ಶನವನ್ನು ಗಂಗೂಲಿ ಎರಡನೇ ದಿನವಾದ ಈದಿನವೂ ಮುಂದುವರೆಸಿದರು. ಇರ್ಫಾನ್ ಪಠಾಣ್ ಅವರು ಗಂಗೂಲಿಗೆ ಸಾಥ್ ನೀಡಿದರು. ಭಾರತ ಮೊದಲ ಇನಿಂಗ್ಸಿನಲ್ಲಿ ಪೇರಿಸಿದ 626 ರನ್ನುಗಳು ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ತಂಡವೊಂದು ದಾಖಲಿಸಿದ ಅತಿದೊಡ್ಡ ಮೊತ್ತವಾಯಿತು. ಸೌರವ್ ಗಂಗೂಲಿ ತಮ್ಮ ಟೆಸ್ಟ್ ಕ್ರಿಕೆಟ್ ಜೀವನದ ಮೊದಲ ದ್ವಿಶತಕ (239) ಗಳಿಸಿ ಮೆರೆದಾಡಿದರೆ, ಇರ್ಫಾನ್ ಪಠಾಣ್ (102) ಚೊಚ್ಚಲ ಶತಕ ಗಳಿಸಿದರು. 2004-05 ರಲ್ಲಿ ಪಾಕಿಸ್ಥಾನವು ಪೇರಿಸಿದ 570 ರನ್ನುಗಳು ಇಲ್ಲಿ ದಾಖಲಾದ ಈವರೆಗಿನ ಅತಿದೊಡ್ಡ ಮೊತ್ತವಾಗಿತ್ತು. 1993-94 ರಲ್ಲಿ ಶ್ರೀಲಂಕಾ ವಿರುದ್ಧ 6 ವಿಕೆಟಿಗೆ 541 ರನ್ ಪೇರಿಸಿದ್ದು ಇಲ್ಲಿ ಭಾರತ ತಂಡದ ಈವರೆಗಿನ ಉತ್ತಮ ಮೊತ್ತವಾಗಿತ್ತು. ಈ ಸಲ ಅದೂ ಕೂಡ ದಾಖಲೆಯ ಪುಸ್ತಕದಿಂದ ಮರೆಯಾಯಿತು. ರನ್ನುಗಳ ಚಿತ್ತಾರ ಬಿಡಿಸಿದ ಕೋಲ್ಕತ್ತದ ಮಹಾರಾಜ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಅತ್ಯಧಿಕ ರನ್ ಪೇರಿಸಿದ ಎಡಗೈ ಬ್ಯಾಟ್ಸ್ ಮನ್ ಎಂಬ ಗೌರವ ತಮ್ಮದಾಗಿಸಿದರು. ಇದರಿಂದ ಯುವರಾಜ್ ಸಿಂಗ್ ಹೆಸರಿನಲ್ಲಿದ್ದ ದಾಖಲೆ ಒಂದೇ ದಿನದಲ್ಲಿ ಅಳಿಸಿಹೋಯಿತು. ಪಂದ್ಯದ ಮೊದಲ ದಿನ ಯುವರಾಜ್ ಗಳಿಸಿದ್ದ 169 ರನ್ನುಗಳು ಎಡಗೈ ಬ್ಯಾಟ್ಸ್ ಮನ್ ಒಬ್ಬನ ಶ್ರೇಷ್ಠ ಪ್ರದರ್ಶನವಾಗಿತ್ತು. ಜೊತೆಗೆ ಭಾರತದ ಪರ ಅತ್ಯಧಿಕ ರನ್ ಗಳಿಸಿದ ಎಡಗೈ ಬ್ಯಾಟ್ಸ್ ಮನ್ ಎನಿಸಿದರು. ಈ ಮೊದಲು ವಿನೋದ್ ಕಾಂಬ್ಳಿ ಅವರು 227 ರನ್ ಪೇರಿಸಿದ್ದರು. 239 ರನ್ ಗಳಿಸುವ ಮೂಲಕ ಟೆಸ್ಟ್ ಇನಿಂಗ್ಸ್ ಒಂದರಲ್ಲಿ ಅತ್ಯಧಿಕ ರನ್ ಗಳಿಸಿದ ಭಾರತದ ಬ್ಯಾಟ್ಸ್ ಮನ್ನರ ಪಟ್ಟಿಯಲ್ಲಿ ಗಂಗೂಲಿ ಐದನೇ ಸ್ಥಾನ ಪಡೆದರು. ವೀರೇಂದ್ರ ಸೆಹ್ವಾಗ್ (309 ಮತ್ತು 254) ಮೊದಲ ಸ್ಥಾನದಲ್ಲಿದ್ದರೆೆ, ವಿವಿಎಸ್ ಲಕ್ಷ್ಮಣ್ (281), ರಾಹುಲ್ ದ್ರಾವಿಡ್ (270), ಸಚಿನ್ ತೆಂಡೂಲ್ಕರ್ (248 ಮತ್ತು 241) ಕ್ರಮವಾಗಿ ನಂತರದ ಮೂರು ಸ್ಥಾನಗಳಲ್ಲಿ ಇದ್ದಾರೆ. 1997ರಲ್ಲಿ ಶ್ರೀಲಂಕಾ ವಿರುದ್ಧ ಮುಂಬೈಯಲ್ಲಿ 173 ರನ್ ಗಳಿಸಿದ್ದು ಗಂಗೂಲಿಯ ಈವರೆಗಿನ ಅತ್ಯಧಿಕ ಮೊತ್ತವಾಗಿತ್ತು. ಮೊದಲ ದಿನ ಐದನೇ ವಿಕೆಟಿಗೆ 300 ರನ್ನುಗಳ ಜೊತೆಯಾಟ ನೀಡಿದ್ದ ಗಂಗೂಲಿ ಮತ್ತು ಯುವರಾಜ್ ಕೆಲವೊಂದು ದಾಖಲೆಗಳನ್ನು ಅಳಿಸಿಹಾಕಿದರು.

2007: ಖಂಡಾಂತರ ಭೂಸ್ತರಗಳ ಚಲನವಲನದಿಂದಾಗಿ ಭೂಕಂಪ ಹಾಗೂ ಜ್ವಾಲಾಮುಖಿ ಚಟುವಟಿಕೆಗಳ ತಾಣವಾಗಿರುವ ಪೆಸಿಫಿಕ್ ಸಾಗರದ ತಳದಲ್ಲಿ 187 ಕಿಮೀ ಒಳಗೆ, ಟೊಂಗಾದ ಕರಾವಳಿಯಾಚೆ ರಿಕ್ಟರ್ ಮಾಪಕದಲ್ಲಿ 7.6ರಷ್ಟು ತೀವ್ರತೆ ಹೊಂದಿದ್ದ ಪ್ರಬಲ ಭೂಕಂಪ ಈದಿನ ಮಧ್ಯಾಹ್ನ ಸಂಭವಿಸಿತು.

2007: ಅಮೆರಿಕ ನಿರ್ಮಿತ ಬಾಹ್ಯಾಕಾಶ ನೌಕೆ ಅಟ್ಲಾಂಟಿಸ್ ಉಡಾವಣೆಯನ್ನು ಫ್ಲೋರಿಡಾದ ಕೇಪ್ ಕೆನವರಾಲ್ನಲ್ಲಿ ಈದಿನ ಕೂಡಾ ಸ್ಥಗಿತಗೊಳಿಸಲಾಯಿತು. ನೌಕೆಯ ಹೈಡ್ರೋಜನ್ ಇಂಧನ ಟ್ಯಾಂಕಿನಲ್ಲಿ ಕಂಡು ಬಂದ ತಾಂತ್ರಿಕ ಸಮಸ್ಯೆಯಿಂದಾಗಿ ಉಡಾವಣೆ ಸಾಧ್ಯವಾಗಲಿಲ್ಲ. ಬೆಳಿಗ್ಗೆ ನಡೆದ ಪರೀಕ್ಷೆಗಳಲ್ಲಿ ಈ ತಾಂತ್ರಿಕ ಸಮಸ್ಯೆ ಬೆಳಕಿಗೆ ಬಂದ ಕಾರಣ ಉಡಾವಣೆಯನ್ನು ಸದ್ಯಕ್ಕೆ ಸ್ಥಗಿತಗೊಳಿಸಲಾಗಿದೆ ಎಂದು ನಾಸಾ ವಿಜ್ಞಾನಿಗಳು ತಿಳಿಸಿದರು.

2007: ಬಿಜೆಪಿಯಿಂದ ಭಾರಿ ಒತ್ತಡ ಬಂದ ಹಿನ್ನೆಲೆಯಲ್ಲಿ, ಚುನಾವಣಾ ಪ್ರಚಾರ ಭಾಷಣದಲ್ಲಿ ಗುಜರಾತ್ ಮುಖ್ಯಮಂತ್ರಿ ನರೇಂದ್ರ ಮೋದಿ ಅವರನ್ನು `ಸಾವಿನ ವ್ಯಾಪಾರಿ' ಎಂದು ತೆಗಳಿದ್ದಕ್ಕಾಗಿ ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿ ಅವರಿಗೆ ಚುನಾವಣಾ ಆಯೋಗ ನೋಟಿಸ್ ಜಾರಿ ಮಾಡಿತು.

2007: ತಮಿಳುನಾಡು ಪೊಲೀಸರು ಎಲ್ಟಿಟಿಇಯ ಕಡಲು ಪಡೆ ವಿಭಾಗದ ಹಿರಿಯ ನಾಯಕರಾದ ಜಯಕುಮಾರ್ (34), ಜೇಮ್ಸ್ (46) ಮತ್ತು ರವಿ ಕುಮಾರ್ (42) ಅವರನ್ನು ಚೆನ್ನೈ ವಿಮಾನ ನಿಲ್ದಾಣದಲ್ಲಿ ಹಿಂದಿನದಿನ ರಾತ್ರಿ ಬಂಧಿಸಿದರು. ಒಂದು ಅತ್ಯಾಧುನಿಕ ದೋಣಿ, ಈಜುಗಾರರ ಪಾದರಕ್ಷೆಗಳು ಇತ್ಯಾದಿಗಳನ್ನು ಶ್ರೀಲಂಕಾಗೆ ಕೊಂಡೊಯ್ಯುವ ಬಗ್ಗೆ ವ್ಯವಹರಿಸುವ ಸಲುವಾಗಿ ಅವರು ಚೆನ್ನೈಗೆ ಆಗಮಿಸಿದ್ದರು.

2007: ಕಾಶ್ಮೀರ ಪಂಡಿತನ ಅಂತ್ಯಸಂಸ್ಕಾರವನ್ನು ನೂರಾರು ಮುಸ್ಲಿಮರು ಶ್ರೀನಗರದ ಗಡೆರ್ಬಾಲ್ ಬಳಿ ನೆರವೇರಿಸಿದರು. ದೀರ್ಘ ಕಾಲದಿಂದ ಅಸ್ವಸ್ಥರಾಗಿದ್ದ ಜಿಯಲಾಲ್ ರೈನಾ (85) ಅವರು ಹಿಂದಿನ ದಿನ ಶ್ರೀನಗರದ ಮಣಿಗಂ ಗಂಡರ್ಬಾಲಿನಲ್ಲಿ ನಿಧನರಾದರು. 1990ರಲ್ಲಿ ಆತನ ಕುಟುಂಬ ಸದಸ್ಯರು ಕಣಿವೆಯನ್ನು ತ್ಯಜಿಸಿ ಹೋಗಿದ್ದುದರಿಂದ ಅವರು ಒಂಟಿಯಾಗಿ ಜೀವನ ಸಾಗಿಸುತ್ತಿದ್ದರು. ಸಾವಿನ ಸುದ್ದಿ ತಿಳಿಯುತ್ತಿದ್ದಂತೆ ನೂರಾರು ಮುಸ್ಲಿಂ ಬಾಂಧವರು ಆಗಮಿಸಿ ಅಂತ್ಯ ಸಂಸ್ಕಾರ ನಡೆಸಿದರು.

2007: ಏಷ್ಯಾ ಮತ್ತು ಯೂರೋಪಿನ ದೊಡ್ಡ ಮಾಧ್ಯಮ ಸಂಸ್ಥೆಯಾದ `ನ್ಯೂಸ್ ಕಾರ್ಪೊರೇಷನ್' ಮುಖ್ಯಸ್ಥನ ಹುದ್ದೆಗೆ ಮಾಧ್ಯಮ ದೊರೆ ರೂಪರ್ಟ್ ಮರ್ಡೋಕ್ ಅವರ ಪುತ್ರ ಜೇಮ್ಸ್ ಮರ್ಡೋಕ್ (34) ಅವರನ್ನು ನೇಮಕ ಮಾಡಲಾಯಿತು. ನ್ಯೂಸ್ ಇಂಟರ್ ನ್ಯಾಷನಲ್ ಸ್ಕೈ, ಸ್ಕೈ ಇಟಾಲಿಯಾ, ಸ್ಟಾರ್ ಸಮೂಹ ಹಾಗೂ ನ್ಯೂಸ್ ಕಾರ್ಪೊರೇಷನ್ ಯೂರೋಪ್' ಸಂಸ್ಥೆಗಳನ್ನು ಈ ಸಮೂಹ ಹೊಂದಿದೆ.

2006: ಭಾರತಕ್ಕೆ ಅಮೆರಿಕದ ಪರಮಾಣು ತಂತ್ರಜ್ಞಾನ ರಫ್ತಿಗೆ ವಿಧಿಸಲಾಗಿದ್ದ 32 ವರ್ಷಗಳ ನಿಷೇಧವನ್ನು ತೆರವುಗೊಳಿಸಲು ಅವಕಾಶ ಒದಗಿಸುವ ಚಾರಿತ್ರಿಕ ಭಾರತ- ಅಮೆರಿಕ ನಾಗರಿಕ ಪರಮಾಣು ಒಪ್ಪಂದ ಮಸೂದೆಗೆ ಕಾಂಗ್ರೆಸ್ಸಿನ ಬಳಿಕ ಅಮೆರಿಕದ ಸೆನೆಟ್ ಸದಸ್ಯರೂ ಈದಿನ ಸರ್ವಾನುಮತದ ಒಪ್ಪಿಗೆ ನೀಡಿದರು. ಕಾಂಗ್ರೆಸ್ ಹಿಂದಿನ ರಾತ್ರಿ 330- 59 ಮತಗಳಿಂದ ಅಂಗೀಕರಿಸಿದ ಮಸೂದೆಯನ್ನು ಸೆನೆಟ್ ಯಾವ ಚರ್ಚೆಯನ್ನೂ ನಡೆಸದೆ ಒಮ್ಮತದಿಂದ ಅಂಗೀಕರಿಸಿತು. ಈ ಒಪ್ಪಂದ ಜಾರಿಯೊಂದಿಗೆ 32 ವರ್ಷಗಳಲ್ಲಿ ಮೊದಲ ಬಾರಿಗೆ ಭಾರತ- ಅಮೆರಿಕ ನಡುವೆ ಪರಮಾಣು ತಂತ್ರಜ್ಞಾನ ವಹಿವಾಟು ನಡೆಯುವುದು. ಅಮೆರಿಕದ ಅಧ್ಯಕ್ಷ ಬುಷ್ ಮತ್ತು ಭಾರತದ ಪ್ರಧಾನಿ ಮನಮೋಹನ ಸಿಂಗ್ ಅವರು 2005ರ ಜುಲೈ ತಿಂಗಳಲ್ಲಿ ಈ ಚಾರಿತ್ರಿಕ ಒಪ್ಪಂದಕ್ಕೆ ಸಹಿ ಮಾಡಿದ್ದರು.

2006: ರಷ್ಯದ ಮಾಸ್ಕೊದ ಮಾದಕ ವಸ್ತು ಸೇವನೆ ವ್ಯಸನಿಗಳ ಪುನರ್ವಸತಿ ಆಸ್ಪತ್ರೆಯಲ್ಲಿ ಅಗ್ನಿ ಅನಾಹುತ ಸಂಭವಿಸಿ 45 ಮಂದಿ ಮಹಿಳೆಯರು ಸಜೀವವಾಗಿ ದಹನಗೊಂಡರು. ಐದು ಮಹಡಿಗಳ ಆಸ್ಪತ್ರೆಯ ಎರಡನೇ ಮಹಡಿಯಲ್ಲಿ ಬೆಳಗಿನ ಜಾವ ಮೊದಲು ಬೆಂಕಿ ಕಾಣಿಸಿಕೊಂಡಿತು. ತುರ್ತು ನಿರ್ಗಮನದ ದ್ವಾರಗಳನ್ನೆಲ್ಲ ಮುಚ್ಚಿದ್ದುದರಿಂದ ಬೆಂಕಿಯಿಂದ ತಪ್ಪಿಸಿಕೊಳ್ಳಲು ದುರ್ದೈವಿಗಳಿಗೆ ಸಾಧ್ಯವಾಗಲಿಲ್ಲ. ಮೃತರಲ್ಲಿ ಬಹುತೇಕ ಮಂದಿ ಅಮಲು ಪದಾರ್ಥ ಮತ್ತು ಮದ್ಯ ವ್ಯಸನಿಗಳಾಗಿದ್ದು ಇಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. ಆಸ್ಪತ್ರೆಯ ಇಬ್ಬರು ಸಿಬ್ಬಂದಿಯೂ ಸತ್ತವರಲ್ಲಿ ಸೇರಿದ್ದಾರೆ.

2006: ಪರಮಾಣು ಸಿಡಿತಲೆಯನ್ನು ಹೊತ್ತೊಯ್ಯುವ ಸಾಮರ್ಥ್ಯವುಳ್ಳ ತನ್ನ ಕ್ಷಿಪಣಿ ಸರಣಿಯ ಮೂರನೆಯ ಕ್ಷಿಪಣಿ `ಘಜನಿ'ಯ ಪರೀಕ್ಷಾ ಉಡಾವಣೆಯನ್ನು ಪಾಕಿಸ್ಥಾನ ಯಶಸ್ವಿಯಾಗಿ ನಡೆಸಿತು. ಇದು ಕಡಿಮೆ ದೂರಕ್ಕೆ ಚಿಮ್ಮುವ ಕ್ಷಿಪಣಿಯಾಗಿದ್ದು, 290 ಕಿ.ಮೀ ದೂರ ಹಾರುವ ಸಾಮರ್ಥ್ಯ ಹೊಂದಿದೆ. ಭಾರತದ ಹಲವು ನಗರಗಳಿಗೆ ಬಂದು ಬೀಳುವ ಸಾಮರ್ಥ್ಯ ಇದಕ್ಕೆ ಇದೆ. ಪಾಕಿಸ್ಥಾನ ಈಗಾಗಲೇ ಘೋರಿ-1 ಮತ್ತು ಶಾಹೀನ್-1 ಎಂಬ ಎರಡು ಯುದ್ಧ ಕ್ಷಿಪಣಿಗಳ ಪರೀಕ್ಷಾ ಉಡಾವಣೆ ನಡೆಸಿದೆ.

2005: ಮೂಲಸೌಲಭ್ಯ ಅಭಿವೃದ್ಧಿ ಸೇರಿದಂತೆ ಶಿಕ್ಷಣ ಮತ್ತು ಎಲೆಕ್ಟ್ರಾನಿಕ್ ಆಡಳಿತ ಕ್ಷೇತ್ರದಲ್ಲಿ ಭಾರತದೊಂದಿಗೆ ಸಹಕಾರಕ್ಕೆ ಸಿದ್ಧ ಎಂಬುದಾಗಿ ಘೋಷಿಸಿದ ಮೈಕ್ರೋಸಾಫ್ಟ್ ಅಧ್ಯಕ್ಷ ಬಿಲ್ ಗೇಟ್ಸ್ ಅವರು ಇದಕ್ಕೆ ಪೂರಕವಾಗಿ ಬೆಂಗಳೂರಿನಲ್ಲಿ ರಾಷ್ಟ್ರವ್ಯಾಪಿ ಪ್ರತಿಭಾನ್ವೇಷಣೆ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು.

2005: ದೀರ್ಘಕಾಲ ಬಾಳ್ವಿಕೆ ಬರುವಂತಹ ದ್ವಿ ಆಯುಷ್ಯಿ ವಿದ್ಯುತ್ ಬಲ್ಬ್ ತಯಾರಿಸಿರುವುದಾಗಿ ಬೆಂಗಳೂರಿನ ಆರ್. ಪ್ರಕಾಶ್ ಪ್ರಕಟಿಸಿದರು. ಈ ಬಲ್ಬಿಗೆ ಚೆನ್ನೈಯ ಬೌದ್ಧಿಕ ಹಕ್ಕು ನೋಂದಣಿ ಕಚೇರಿಯಿಂದ ಮಾನ್ಯತೆ ದೊರಕಿದೆ. ಏಳು ವರ್ಷಗಳ ಸತತದ ಪ್ರಯತ್ನದಿಂದ ರೂಪುಗೊಂಡಿರುವ ಈ ಬಲ್ಪ್ ಮಾಮೂಲಿ ಬಲ್ಬಿಗಿಂತ ಹೆಚ್ಚು ಬಾಳಿಕೆ ಬರುತ್ತದೆ. ಸಾಮಾನ್ಯ ಬಲ್ಬ್ 1000 ಗಂಟೆ ಬಾಳಿಕೆ ಬಂದರೆ ಇದು 2000 ಗಂಟೆ ಬಾಳಿಕೆ ಬರುತ್ತದೆ ಎಂಬುದು ಪ್ರಕಾಶ್ ಪ್ರತಿಪಾದನೆ.

1997: ಜ್ಞಾನಪೀಠ ಪ್ರಶಸ್ತಿ ಪುರಸ್ಕತ, ಕನ್ನಡದ ಶ್ರೇಷ್ಠ ಸಾಹಿತಿ ಸಂಶೋಧಕ ಡಾ. ಕೆ. ಶಿವರಾಮ ಕಾರಂತ ಅವರು ಮಣಿಪಾಲದಲ್ಲಿ ನಿಧನರಾದರು. ದಕ್ಷಿಣ ಕನ್ನಡ ಜಿಲ್ಲೆಯ (ಈಗಿನ ಉಡುಪಿ ಜಿಲ್ಲೆ) ಕುಂದಾಪುರ ತಾಲ್ಲೂಕು ಕೋಟದಲ್ಲಿ 1902ರ ಅಕ್ಟೋಬರ್ 20ರಂದು ಜನಿಸಿದ ಕಾರಂತರು ಸಾಹಿತ್ಯದಲ್ಲಿ ಕೈಯಾಡಿಸದ ಕ್ಷೇತ್ರ. ಪ್ರಾಕಾರ ಇಲ್ಲ. ಪರಿಸರ, ಮಕ್ಕಳ ಸಾಹಿತ್ಯ, ವಿಜ್ಞಾನ ನಿಘಂಟು, ಕಾದಂಬರಿ, ಮತ್ತಿತರ ಪ್ರಾಕಾರಗಳಲ್ಲಿ 100ಕ್ಕೂ ಹೆಚ್ಚು ಅಮೂಲ್ಯ ಕೃತಿಗಳನ್ನು ಅವರು ಕನ್ನಡಕ್ಕೆ ನೀಡಿದ್ದಾರೆ. ಮೂಕಜ್ಜಿಯ ಕನಸುಗಳು ಅವರಿಗೆ ಜ್ಞಾನಪೀಠ ಪ್ರಶಸ್ತಿಯನ್ನು ತಂದುಕೊಟ್ಟಿತು. ಸ್ವಾತಂತ್ರ್ಯ ಹೋರಾಟ, ಪರಿಸರ ಹೋರಾಟದಲ್ಲೂ ಪಾಲ್ಗೊಂಡಿದ್ದ ಅವರು ಸಿನಿಮಾ, ಯಕ್ಷಗಾನದಲ್ಲೂ ಪ್ರಯೋಗ ನಡೆಸಿದವರು. ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಸೇರಿದಂತೆ ಹಲವಾರು ಪ್ರಶಸ್ತಿಗಳು ಅವರನ್ನು ಅರಸಿ ಬಂದಿದ್ದವು. ಮಕ್ಕಳಿಗಾಗಿ ಪುತ್ತೂರಿನಲ್ಲಿ ವಾಸ್ತವ್ಯ ಇದ್ದಾಗ ಬಾಲವನ ನಿರ್ಮಿಸಿದ್ದರು. ಅವರ ಚೋಮನ ದುಡಿ ಕೃತಿ ಚಲನಚಿತ್ರವಾಗಿ ಜನಪ್ರಿಯಗೊಂಡಿತ್ತು.

1992: ಬ್ರಿಟನ್ನಿನ ರಾಜಕುಮಾರ ಚಾರ್ಲ್ಸ್ ಮತ್ತು ರಾಜಕುಮಾರಿ ಡಯಾನಾ ತಾವು ಬೇರ್ಪಟ್ಟಿರುವುದಾಗಿ ಪ್ರಕಟಿಸಿದರು.

1971: ಭಾರತ - ಪಾಕ್ ಸಮರ ಕಾಲದಲ್ಲಿ ಜಲಾಂತರ್ಗಾಮೀ ಶೋಧಕ ಹಡಗು `ಐ ಎನ್ ಎಸ್ ಖುಕಿ'್ರಗೆ ಅದು ಜಲಾಂತರ್ಗಾಮಿಯ ಶೋಧದಲ್ಲಿದ್ದಾಗ ಮೂರು ಸ್ಫೋಟಕಗಳು ಬಡಿದವು. ಹಡಗು ಅದರಲ್ಲಿದ್ದ 18 ಅಧಿಕಾರಿಗಳು ಮತ್ತು ಇತರ 176 ಮಂದಿಯೊಂದಿಗೆ ನೀರಿನಲ್ಲಿ ಮುಳುಗಿತು. ಸಮರ ಕಾಲದಲ್ಲಿ ಭಾರತದ ನೌಕಾ ಪಡೆ ಕಳೆದುಕೊಂಡ ಏಕೈಕ ನೌಕೆ ಇದು.

1946: ಭಾರತೀಯ ಸಂವಿಧಾನ ಸಭೆಯ ಸಮಾವೇಶ ಮೊತ್ತ ಮೊದಲ ಬಾರಿಗೆ `ಕಾನಸ್ಟಿಟ್ಯೂಷನ್ ಹಾಲ್' ನಲ್ಲಿ ನಡೆಯಿತು. ಈಗ ಇದನ್ನು ಸಂಸತ್ತಿನ `ಸೆಂಟ್ರಲ್ ಹಾಲ್' ಎಂಬುದಾಗಿ ಕರೆಯಲಾಗುತ್ತಿದೆ. 9 ಮಂದಿ ಮಹಿಳೆಯರು ಸೇರಿದಂತೆ 207ಮಂದಿ ಪ್ರತಿನಿಧಿಗಳು ಪಾಲ್ಗೊಂಡಿದ್ದರು. ಸ್ವತಂತ್ರ ಭಾರತದ ಸಂವಿಧಾನದ ಕರಡು ನಿರ್ಮಿಸುವ ಕಾರ್ಯವನ್ನು ಪೂರ್ಣಗೊಳಿಸಲು 2 ವರ್ಷ 11 ತಿಂಗಳು, 17 ದಿನಗಳು ಬೇಕಾದವು. ಸಂವಿಧಾನವನ್ನು 1949ರ ನವೆಂಬರ್ 26ರಂದು ಅಂಗೀಕರಿಸಲಾಯಿತು. ಅದು 1950ರ ಜನವರಿ 26ರಂದು ಅನುಷ್ಠಾನಕ್ಕೆ ಬಂದಿತು.

1947: ಇಟಲಿ ಸಂಜಾತ ಭಾರತೀಯ ರಾಜಕಾರಣಿ, ಕಾಂಗ್ರೆಸ್ ಪಕ್ಷದ ನಾಯಕಿ ಸೋನಿಯಾ ಗಾಂಧಿ ಹುಟ್ಟಿದ ದಿನ. ಮಾಜಿ ಪ್ರಧಾನಿ ರಾಜೀವ ಗಾಂಧಿ ಅವರನ್ನು ಮದುವೆಯಾದರು.

1945: ಚಿತ್ರನಟ, ರಾಜಕಾರಣಿ ಶತ್ರುಘ್ನ ಸಿನ್ಹ ಹುಟ್ಟಿದ ದಿನ.

1902: ಬ್ರಿಟಿಷ್ ಮುತ್ಸದ್ಧಿ ರಿಚರ್ಡ್ ಆಸ್ಟೆನ್ ಬಟ್ಲರ್ (1902-1982) ಹುಟ್ಟಿದ ದಿನ. ಅಂತಾರಾಷ್ಟ್ರೀಯ ಶಿಕ್ಷಣ ಸಂಘಟನೆಗೆ ಸಂಬಂಧಿಸಿದಂತೆ ಇವರು ನೀಡಿದ ಸಲಹೆಗಳು ಯುನೆಸ್ಕೊ ಸ್ಥಾಪನೆಯಲ್ಲಿ ಮಹತ್ವದ ಪಾತ್ರ ವಹಿಸಿದವು.

1825: ಭಾರತದ ಮೊದಲ ಸ್ವಾತಂತ್ರ್ಯ ಸಂಗ್ರಾಮ (1857)ದ `ಹೀರೋ' ತುಲಾ ರಾಮ್ (1825-1863) ಹುಟ್ಟಿದ ದಿನ.

1754: ಪ್ರಾನ್ಸಿಸ್ ರಾಡನ್ ಹೇಸ್ಟಿಂಗ್ಸ್ (1754-1826) ಹುಟ್ಟಿದ ದಿನ. ಬ್ರಿಟಿಷ್ ಸೈನಿಕ ಹಾಗೂ ವಸಾಹತು ಆಡಳಿತಗಾರನಾದ ಈತ ಬಂಗಾಳದ ಗವರ್ನರ್ ಜನರಲ್ ಆಗಿ ಮರಾಠಾ ರಾಜ್ಯಗಳನ್ನು ಸೋಲಿಸಿ ಭಾರತದಲ್ಲಿ ಬ್ರಿಟಿಷ್ ಆಳ್ವಿಕೆಯನ್ನು ಬಲ ಪಡಿಸಿದ.

1608: ಖ್ಯಾತ ಇಂಗ್ಲಿಷ್ ಕವಿ ಜಾನ್ ಮಿಲ್ಟನ್ (1608-1674) ಹುಟ್ಟಿದ ದಿನ. ಇಂಗ್ಲಿಷಿನಲ್ಲಿ ಇವರು ಬರೆದ ಕಾವ್ಯ `ಪ್ಯಾರಡೈಸ್ ಲಾಸ್ಟ್' ಇವರಿಗೆ ಅಪಾರ ಖ್ಯಾತಿ ತಂದು ಕೊಟ್ಟಿತು.

Thursday, January 7, 2010

ಇಂದಿನ ಇತಿಹಾಸ History Today ಡಿಸೆಂಬರ್ 08

ಇಂದಿನ ಇತಿಹಾಸ

ಡಿಸೆಂಬರ್ 08


ಭಾರತದ ಖ್ಯಾತ ಕ್ಯಾಮರಾಮ್ಯಾನ್ ಸುಬ್ರತೊ ಮಿತ್ರ (1930-2001) ನಿಧನರಾದರು. ಸತ್ಯಜಿತ್ ರೇ ಅವರ ಎರಡನೇ ಚಿತ್ರ `ಅಪರಾಜಿತೊ'ದಲ್ಲಿ ಅವರು `ಬೌನ್ಸ್ ಲೈಟ್ನಿಂಗ್' ನ್ನು ಅಳವಡಿಸಿದ್ದರು. ರೇ ಅವರ ಖ್ಯಾತ ಚಿತ್ರಗಳಾದ `ಪಥೇರ್ ಪಾಂಚಾಲಿ', `ಅಪುರ್ ಸಂಸಾರ್' ಇತ್ಯಾದಿ ಚಿತ್ರಗಳ ಚಿತ್ರೀಕರಣವನ್ನೂ ಅವರು ಮಾಡಿದ್ದರು.

2014: ಹೈದರಾಬಾದ್: ಕರ್ನಾಟಕ ಶಾಸ್ತ್ರೀಯ ಸಂಗೀತ ಕ್ಷೇತ್ರದ ದಿಗ್ಗಜ ನೆಡುನೂರಿ ಕೃಷ್ಣಮೂರ್ತಿ (87)
ವಿಶಾಖಪಟ್ಟಣಂನಲ್ಲಿರುವ ತಮ್ಮ ನಿವಾಸದಲ್ಲಿ ಈದಿನ ನಸುಕಿನಲ್ಲಿ ಕೊನೆಯುಸಿರೆಳೆದರು. ಶ್ವಾಸಕೋಶದ ಕ್ಯಾನ್ಸರ್​ನಿಂದ ಬಳಲುತ್ತಿದ್ದ ಕೃಷ್ಣಮೂರ್ತಿ ಬೆಳಗಿನ ಜಾವ 1.38ರ ಸುಮಾರಿಗೆ ನಿಧನರಾಗಿದ್ದಾರೆಂದು ಕುಟುಂಬಸ್ಥರು ತಿಳಿಸಿದರು. ನೆಡುನೂರಿ ಸಾವಿಗೆ ಸಂತಾಪ ಸೂಚಿಸಿರುವ ಆಂಧ್ರಪ್ರದೇಶ ಮುಖ್ಯಮಂತ್ರಿ ಎನ್.ಚಂದ್ರಬಾಬು ನಾಯ್ಡು, ಕೃಷ್ಣಮೂರ್ತಿ ಕರ್ನಾಟಕ ಶಾಸ್ತ್ರೀಯ ಸಂಗೀತದ ರಾಯಭಾರಿಯಂತಿದ್ದರು ಎಂದರು. 1927 ಅ.10ರಂದು ಆಂಧ್ರದ ಕೊತ್ತಪಲ್ಲಿಯಲ್ಲಿ ಜನಿಸಿದ ಕೃಷ್ಣಮೂರ್ತಿ ಸಂಗೀತ ಕ್ಷೇತ್ರಕ್ಕೆ ತಮ್ಮದೇ ಆದ ಕೊಡುಗೆಗಳನ್ನು ನೀಡಿದ್ದರು. ಸಂಗೀತ ಕಾಲೇಜುಗಳ ಮುಖ್ಯಸ್ಥರಾಗಿ ಸೇವೆಸಲ್ಲಿಸಿದ್ದ ಅವರು, ಟಿಟಿಡಿಯ ಅನ್ನಮಾಚಾರ್ಯ ಕೀರ್ತನೆಗಳಿಗೆ ಕಂಠ ಕೊಟ್ಟವರು. ಅಲ್ಲದೆ ಟಿಟಿಡಿ ಆಸ್ಥಾನ ವಿದ್ವಾನ್ ಆಗಿಯೂ ಸೇವೆಸಲ್ಲಿಸಿದ್ದರು. 1991ರಲ್ಲಿ ಮದ್ರಾಸ್ ಮ್ಯೂಸಿಕ್ ಅಕಾಡೆಮಿ ಸಂಗೀತ ಕಲಾನಿಧಿ ಪ್ರಶಸ್ತಿ ನೀಡಿ ಅವರನ್ನು ಗೌರವಿಸಿತ್ತು..

2014: ಕೇಪ್ ಟೌನ್: ಮಧುಚಂದ್ರದ ವೇಳೆ ಸೆಕ್ಸ್ ನಿರಾಕರಿಸಿದ ಬ್ರಿಟಿಷ್ ಇಂಡಿಯನ್ ಉದ್ಯಮಿ ಶ್ರಿಯನ್ ದೆವಾನಿ ಕೊಲೆಗಾರನಲ್ಲ ಎಂದು ದಕ್ಷಿಣ ಆಫ್ರಿಕಾದ ಕೋರ್ಟ್ ಹೇಳಿತು. 2010ರಲ್ಲಿ ಹನಿಮೂನ್ ವೇಳೆ ಇಂಡೋ ಸ್ವೀಡಿಷ್ ಪತ್ನಿ ಅನ್ನಿ ದೆವಾನಿ ಕೊಲೆ ಸಂಚು ಆರೋಪ ಹೊತ್ತಿದ್ದ ದೆವಾನಿಯನ್ನು ಕೋರ್ಟ್ ಆರೋಪ ಮುಕ್ತಗೊಳಿಸಿತು. ಹನಿಮೂನ್ ವೇಳೆ ಸೆಕ್ಸ್ ನಿರಾಕರಿಸುತ್ತಾ ಬಂದ 34ರ ಹರೆಯ ಶ್ರಿಯನ್ ದೆವಾನಿ ಸಲಿಂಗಕಾಮಿ ಎಂಬ ಸತ್ಯ ತಿಳಿದ 28 ವರ್ಷದ ಅನ್ನಿ ದೆವಾನಿ, ಪತಿಯಿಂದ ವಿವಾಹ ವಿಚ್ಛೇದನ ಪಡೆಯಲು ಮುಂದಾಗಿದ್ದಳು. ಆದರೆ ಅಷ್ಟರಲ್ಲೇ ಅನ್ನಿಯ ಕೊಲೆಯಾಗಿತ್ತು. ಶ್ರಿಯನ್ ತನ್ನ
ಸಲಿಂಗಕಾಮಿ ನೆಟ್ವರ್ಕ್ ಬಳಸಿ ಆಕೆಯನ್ನು ಕೊಲೆ ಮಾಡಿಸಿದ್ದಾನೆ ಎಂಬ ಆರೋಪವನ್ನು ಹೊತ್ತಿದ್ದ. ಈ ಪ್ರಕರಣಕ್ಕೆ ಪ್ರಮುಖ ಸಾಕ್ಷಿಯಾಗಿದ್ದ ಟ್ಯಾಕ್ಸಿ ಚಾಲಕ ಜೋಲಾ ಟಾಂಗೋ ನೀಡಿದ ಹೇಳಿಕೆಗಳು ದೆವಾನಿಯ ಆರೋಪಿ ಎಂದು ಸಾಬೀತು ಪಡಿಸಲು ಸಾಧ್ಯವಾಗಲಿಲ್ಲ. ಹೀಗಾಗಿ ಕೋರ್ಟ್ ಶ್ರಿಯನ್ ಕೊಲೆಗಾರನಲ್ಲ ಎಂದು ಹೇಳಿತು. ವಿಚಾರಣೆ ಆರಂಭದಲ್ಲೇ ದೆವಾನಿ ತಾನು ಬೈ ಸೆಕ್ಸುಯಲ್, ಸಲಿಂಗಿ ವಿಟರನ್ನು ಹುಡುಕಿಕೊಂಡು ಹೋಗುತ್ತಿದ್ದೆ. ಅದರೆ ನನ್ನ ಪತ್ನಿಯನ್ನು ಕೊಲ್ಲಿಸುವಷ್ಟು ಕ್ರೂರಿಯಲ್ಲ ಆಕೆಯನ್ನು ತುಂಬಾ ಪ್ರೀತಿಸುತ್ತಿದ್ದೆ ಎಂದು ಹೇಳಿದ್ದ. ಈ ಪ್ರಕರಣದ ಸಹ ಆರೋಪಿಗಳಾದ ಟ್ಯಾಕ್ಸಿ ಚಾಲಕ ಟಾಂಗೋಗೆ 18 ವರ್ಷ ಜೈಲು, ಮಿವಾಮಾಡೊಡಾ ಕ್ವಾಬೆಗೆ 25 ವರ್ಷ ಹಾಗೂ ಜೊಲಿಲೆ ಗೆನಿಗೆ ಜೀವಾವಧಿ ಶಿಕ್ಷೆ ವಿಧಿಸಲಾಗಿತ್ತು. ಈ ಪೈಕಿ ಗೆನಿ ಜೈಲಿನಲ್ಲೇ ಮೃತನಾಗಿದ್ದ. ಅನ್ನಿ ಜೊತೆಗೂಡಿ ಕೇಪ್ಸ್ ಟೌನಿನಲ್ಲಿ ಹನಿಮೂನಿಗೆ ಬಂದಿದ್ದ. ಆದರೆ ಇಂಗ್ಲೆಂಡಿಗೆ ಒಬ್ಬನೇ ಮರಳಿದ್ದ. ಅನ್ನಿ ಸೆಕ್ಸ್ ಮನವಿಯನ್ನು ನಿರಾಕರಿಸಿದ ಶ್ರಿಯಾನಿ ಮುಂಬೈನಲ್ಲಿ ಆರತಕ್ಷತೆ ಆದ ಮೇಲೆ ಇದೆಲ್ಲ ಇಟ್ಟುಕೊಳ್ಳೊಣ ಎಂದಿದ್ದ. ಆದರೆ, ಅನ್ನಿಗೆ ತನ್ನ ಪತಿ ಆತನ ಸಲೀಂಗಿ ಗೆಳೆಯನಿಗೆ ಕಳಿಸಿದ್ದ ಸರಸ ಸಂದೇಶಗಳು ಸಿಕ್ಕಿದ್ದವು. ಕೂಡಲೇ ಅನ್ನಿ ವಿಚ್ಛೇದನಕ್ಕೆ ತಯಾರಿ ನಡೆಸಿದ್ದಳು. ಆದರೆ ಮರುದಿನವೇ ಅನ್ನಿ ಕೊಲೆಯಾಗಿತ್ತು.

2014: ಮುಂಬೈ: ಐಟಿ ಕ್ಷೇತ್ರದ ದಿಗ್ಗಜ ಎನ್ನಿಸಿಕೊಂಡ ಇನ್ಫೋಸಿಸ್‌ ಸಂಸ್ಥೆಯ ಸಹ ಸ್ಥಾಪಕರಾದ ಎನ್.ಆರ್ ನಾರಾಯಣ ಮೂರ್ತಿ, ನಂದನ್ ನೀಲೆಕಣಿ, ಕೆ. ದಿನೇಶ್ ಮತ್ತು ಅವರ ಕುಟುಂಬ ಸದಸ್ಯರು ತಮ್ಮ ಒಡೆತನದಲ್ಲಿದ್ದ ಕಂಪೆನಿಯ 1.1 ಬಿಲಿಯನ್ ಡಾಲರ್ (ರೂ. 6,484 ಕೋಟಿ) ಮೌಲ್ಯದ ಷೇರುಗಳನ್ನು ಮಾರಾಟ ಮಾಡಿದರು. ಈ ನಾಲ್ವರು ತಮ್ಮ
ಒಡೆತನದಲ್ಲಿದ್ದ ಒಟ್ಟು 326 ಲಕ್ಷ ಷೇರುಗಳನ್ನು ವಿದೇಶಿ ಸಾಂಸ್ಥಿಕ ಹೂಡಿಕೆದಾರರಿಗೆ(ಎಫ್‌ಐಐ) ಪ್ರತಿ ಷೇರಿಗೆ ರೂ. 1,988 ರಂತೆ ಮಾರಾಟ ಮಾಡಿದ್ದಾರೆ. ಇದರಿಂದ ಸಂಗ್ರಹವಾಗುವ ಮೊತ್ತವನ್ನು ದಾನ ಧರ್ಮದ ಉದ್ದೇಶಕ್ಕೆ ಬಳಸಲಾಗುತ್ತದೆ ಎಂದು ಇನ್ಫೋಸಿಸ್ ಪರವಾಗಿ ಈ ಮಾರಾಟ ಪ್ರಕ್ರಿಯೆ ನಡೆಸಿದ ಡಾಯಿಷ್ ಈ ಕ್ವಿಟ್ ಇಂಡಿಯಾ ಸಂಸ್ಥೆ ತಿಳಿಸಿತು. ನಾರಾಯಣ ಮೂರ್ತಿ ಕುಟುಂಬ ತಮ್ಮ ಒಡೆತನದ ಒಟ್ಟು ಷೇರುಗಳಲ್ಲಿ ಶೇ. 23ರಷ್ಟು ಅಂದರೆ, 120 ಲಕ್ಷ ಷೇರುಗಳನ್ನು ಮಾರಾಟ ಮಾಡಿತು. ನೀಲೆಕಣಿ ಕುಟುಂಬ ತಮ್ಮ ಒಡೆತನದ ಷೇರುಗಳಲ್ಲಿ ಶೇ 31.3ರಷ್ಟು ಅಂದರೆ, 120 ಲಕ್ಷ ಷೇರುಗಳನ್ನು, ದಿನೇಶ್‌ ಕುಟುಂಬ ತಮ್ಮ ಒಡೆತನದ ಷೇರುಗಳಲ್ಲಿ ಶೇ 21.5ರಷ್ಟು ಅಂದರೆ, 62 ಲಕ್ಷ ಷೇರುಗಳನ್ನು ಮತ್ತು ಕುಮಾರಿ ಶಿಬುಲಾಲ್‌ ಅವರು ತಮ್ಮ ಒಡೆತನದ ಷೇರುಗಳಲ್ಲಿ ಶೇ9.6ರಷ್ಟು ಅಂದರೆ, 24 ಲಕ್ಷ ಷೇರುಗಳನ್ನು ಮಾರಾಟ ಮಾಡಿದರು ಎಂದು ಡಾಯಿಷ್‌ ಈಕ್ವಿಟಿ ಹೇಳಿತು. ಡಿ.5ರಂದು ಇನ್ಫೊಸಿಸ್ ಮಾರುಕಟ್ಟೆ ಮೌಲ್ಯ 2,37,768 ಕೋಟಿಯಷ್ಟಿತ್ತು. ಪ್ರಸಕ್ತ ಹಣಕಾಸು ವರ್ಷದಲ್ಲಿ ಇದುವರೆಗೆ ಇನ್ಫೊಸಿಸ್‌ ಷೇರು ಮೌಲ್ಯ ಶೇ 21.4ರಷ್ಟು ಹೆಚ್ಚಿದೆ.

2014: ಚಿಕ್ಕಮಗಳೂರು : ಪ್ರಮುಖ ನಕ್ಸಲ್‌ ಹೋರಾಟಗಾರರಿಬ್ಬರು ಈದಿನ ಶರಣಾಗತರಾಗಿ ಸಮಾಜದ ಮುಖ್ಯವಾಹಿನಿಗೆ ಸೇರ್ಪಡೆಗೊಳ್ಳುವಲ್ಲಿ ಪ್ರಮುಖ ಹೆಜ್ಜೆ ಇಟ್ಟರು. ಸಿರಿಮನೆ ನಾಗರಾಜ್‌ ಹಾಗೂ ನೂರ್‌ ಜುಲ್ಫಿಕರ್‌ ಅವರು ಶರಣಾದ ನಕ್ಸಲ್‌ ನಾಯಕರು. ಸಿರಿಮನೆ ಮತ್ತು ಜುಲ್ಫಿಕರ್‌ ಅವರು ಚಿಕ್ಕಮಗಳೂರು ಜಿಲ್ಲಾಧಿಕಾರಿ ಶೇಖರಪ್ಪ ಅವರೆದುರು ಶರಣಾಗತರಾದರು. ಸಾಮಾಜಿಕ ಹೋರಾಟಗಾರ್ತಿ ಗೌರಿ ಲಂಕೇಶ್‌ ಹಾಗೂ ಹಿರಿಯ ಸ್ವಾತಂತ್ರ್ಯ ಹೋರಾಟಗಾರರಾಗಿರುವ ದೊರೆಸ್ವಾಮಿ ಅವರು ಈ ಕ್ಷಣಕ್ಕೆ ಸಾಕ್ಷಿಯಾಗಿದ್ದರು.

2014: ಜಿನೀವಾ: 2014 ಮಕ್ಕಳ ಪಾಲಿಗೆ ಕರಾಳ ವರ್ಷ ಎಂದು ಯುನಿಸೆಫ್ ಕಾರ್ಯ ನಿರ್ವಾಹಕ ನಿರ್ದೇಶಕ ಆಂಥೋನಿ ಲೆಕ್ ತಿಳಿಸಿದರು. ಮಧ್ಯ ಆಫ್ರಿಕಾ ದೇಶಗಳು, ಇರಾಕ್, ಸಿರಿಯಾ, ದಕ್ಷಿಣ ಸುಡಾನ್, ಉಕ್ರೇನ್ ಮತ್ತು ಪ್ಯಾಲಿಸ್ತೀನ್
ಪ್ರಾಂತ್ಯದಲ್ಲಿ ನಡೆಯುತ್ತಿರುವ ಘರ್ಷಣಿಯಿಂದಾಗಿ ಸುಮಾರು 1.5 ಕೋಟಿ ಮಕ್ಕಳು ಸಮಸ್ಯೆಗೆ ತುತ್ತಾಗಿದ್ದಾರೆ. ಅಫ್ಘಾನಿಸ್ತಾನ, ಕಾಂಗೋ, ನೈಜೀರಿಯಾ,ಲ ಪಾಕಿಸ್ತಾನ, ಸೊಮಾಲಿಯಾ, ಸುಡಾನ್, ಯೆಮನ್ ಸೇರಿದಂತೆ ಪ್ರಪಂಚದಾದ್ಯಂತ ಸಶಸ್ತ್ರ ಘರ್ಷಣೆ ನಡೆಯುತ್ತಿರುವ ದೇಶಗಳಲ್ಲಿ ಸುಮಾರು 23 ಕೋಟಿ ಮಕ್ಕಳಿದ್ದಾರೆ. ಶಾಲೆಯಲ್ಲಿ ಪಾಠ ಕಲಿಯುತ್ತಿರುವಾಗ, ನಿದ್ದೆ ಮಾಡುತ್ತಿರುವಾಗ ಮಕ್ಕಳ ಮೇಲೆ ಹಲ್ಲೆಗಳಾಗಿವೆ. ಮಕ್ಕಳನ್ನು ಅನಾಥರನ್ನಾಗಿ ಮಾಡಲಾಗಿದೆ, ಅಪಹರಣ, ಕಿರುಕುಳ, ಬಾಲ ಕಾರ್ವಿುಕರಾಗಿ ಸೇರ್ಪಡೆ, ರೇಪ್ ಪ್ರಕರಣ ಮತ್ತು ಗುಲಾಮಗಿರಿಯಂತಹ ಕೃತ್ಯಗಳಲ್ಲಿ ಮಕ್ಕಳನ್ನು ಉಪಯೋಗಿಕೊಳ್ಳಲಾಗಿದೆ. ಮಧ್ಯ ಆಫ್ರಿಕಾ ರಾಷ್ಟ್ರಗಳಲ್ಲಿ 23 ಲಕ್ಷ ಮಕ್ಕಳು ಸಮಸ್ಯೆಗೆ ತುತ್ತಾಗಿದ್ದು, 10,000 ಮಕ್ಕಳನ್ನು ಸಶಸ್ತ್ರ ಪಡೆಗಳಿಗೆ ಸೇರಿಸಿಕೊಳ್ಳಲಾಗಿದೆ. ಜತೆಗೆ 2014ರಲ್ಲಿ 430 ಮಕ್ಕಳು ಘರ್ಷಣೆಗೆ ಬಲಿಯಾಗಿದ್ದಾರೆ. ಸಿರಿಯಾದಲ್ಲಿ 73ಲಕ್ಷ ಮಕ್ಕಳು ನಾಗರಿಕ ಯುದ್ಧದಿಂದ ಪ್ರಭಾವಕ್ಕೆ ಒಳಗಾಗಿದ್ದು, ಇರಾಕ್​ನಲ್ಲಿ 27 ಲಕ್ಷ ಮಕ್ಕಳು ತೊಂದರೆಗೆ ಒಳಗಾಗಿದ್ದಾರೆ. ದಕ್ಷಿಣ ಸುಡಾನ್​ನಲ್ಲಿ 7,50,000 ಮಕ್ಕಳನ್ನು ಸ್ಥಳಾಂತರಿಸಲಾಗಿದೆ. ಅವರಲ್ಲಿ 3,20,000 ಮಕ್ಕಳು ಅನಾಥರಾಗಿ ಜೀವನ ಸಾಗಿಸುತ್ತಿದ್ದಾರೆ ಎಂದು ಯುನಿಸೆಫ್ ಹೇಳಿತು.

2014:ರಿಯಾದ್: ಸೌದಿ ಅರೇಬಿಯಾ ದೇಶಾದ್ಯಂತ ನಡೆಸಿದ ದಾಳಿಯಲ್ಲಿ 135 ಉಗ್ರವಾದಿಗಳನ್ನು ಬಂಧಿಸಲಾಗಿದೆ ಎಂದು ಸೌದಿ ಅರೇಬಿಯಾ ಆಂತರಿಕ ಸಚಿವಾಲಯ ತಿಳಿಸಿತು. ಬಂಧಿತ ಉಗ್ರವಾದಿಗಳ ಪೈಕಿ 26 ವಿದೇಶಿಯರೂ ಸೇರಿದ್ದು, ಅವರಲ್ಲಿ ಬಹುತೇಕರು ಸಿರಿಯಾ ದೇಶದವರು. ಉಳಿದಂತೆ ಯೆಮನ್, ಬಹರೇನ್, ಇರಾಕ್, ಈಜಿಪ್ಟ್, ಲೆಬನಾನ್, ಇಥಿಯೋಪಿಯಾ ಮತ್ತು ಆಫ್ಘಾನಿಸ್ತಾನದ ಉಗ್ರರು ಸೇರಿದ್ದಾರೆ. ಇವರೆಲ್ಲರೂ ಐಎಸ್​ಐಎಸ್ ಉಗ್ರರಿಂದ ಪ್ರಚೋದಿತರಾಗಿದ್ದರು ಎಂದು ತಿಳಿಸಲಾಯಿತು. ಐಎಸ್​ಐಎಸ್ ಉಗ್ರರು ಮತ್ತು ಅಲ್ ಖೈದಾ ಸಂಘಟನೆಗಳು ಸಾಮಾಜಿಕ ಜಾಲತಾಣಗಳು ಮೂಲಕ ಸೌದಿ ಅರೇಬಿಯಾ ಯುವಕರನ್ನು ಸೆಳೆಯಲು ಪ್ರಯತ್ನಿಸುತ್ತಿರುವ ಬೆನ್ನಲ್ಲೇ ಸರ್ಕಾರ ಎಚ್ಚೆತ್ತಿದ್ದು, ದಾಳಿ ನಡೆಸುವ ಮೂಲಕ ಉಗ್ರಗಾಮಿಗಳನ್ನು ಬಂಧಿಸಿತು.

2008: ಮುಂಬೈ ಭಯೋತ್ಪಾದನೆಯ ಬಿರುಗಾಳಿ ಚುನಾವಣೆಯಲ್ಲಿ ಕಾಂಗ್ರೆಸ್ ಮೇಲೆ ಪರಿಣಾಮ ಬೀರುವುದು ಎಂಬ ಎಲ್ಲ ಊಹೆಗಳು ಸುಳ್ಳಾಗಿ, ಐದು ರಾಜ್ಯಗಳಲ್ಲಿ ನಡೆದ ವಿಧಾನಸಭಾ ಚುನಾವಣೆಗಳಲ್ಲಿ ಕಾಂಗ್ರೆಸ್ ಮೂರರಲ್ಲಿ (ದೆಹಲಿ, ಮಹಾರಾಷ್ಟ್ರ, ಮಿಜೋರಂ) ಜಯಭೇರಿ ಬಾರಿಸಿದರೆ, ಬಿಜೆಪಿಯು ರಾಜಸ್ಥಾನವನ್ನು ಕಳೆದುಕೊಂಡು ಎರಡು ರಾಜ್ಯಗಳಲ್ಲಷ್ಟೇ ಅಧಿಕಾರದ ಚುಕ್ಕಾಣಿ ಹಿಡಿಯುವ ಹಾದಿಯಲ್ಲಿ ಮುಂದುವರೆಯಿತು. ಮುಂದಿನ ವರ್ಷದ ಲೋಕಸಭಾ ಚುನಾವಣೆಯ ಹಿನ್ನೆಲೆಯಲ್ಲಿ ಈ 'ಮಿನಿ ಚುನಾವಣೆ'ಯು ಸ್ಪಷ್ಟ ದಿಕ್ಸೂಚಿಯಾಗುವ ಸಾಧ್ಯತೆಗಳಿದ್ದುದರಿಂದ ಕಾಂಗ್ರೆಸ್ ಮತ್ತು ಬಿಜೆಪಿ ಮೇಲುಗೈ ಸಾಧಿಸಲು ಶಕ್ತಿ ಮೀರಿ ಪ್ರಯತ್ನಿಸಿದ್ದವು.

2008: ದೇಶದ ವಿವಿಧ ಕಡೆ ಲಷ್ಕರ್- ಇ- ತೊಯ್ಬಾ (ಎಲ್‌ಇಟಿ) ಕಾರ್ಯಕರ್ತರ ವಿರುದ್ಧ ಗುಪ್ತ ಕಾರ್ಯಾಚರಣೆ ಆರಂಭಿಸಿದ ಪಾಕಿಸ್ಥಾನದ ಭದ್ರತಾ ಪಡೆಯು, ಸಂಘಟನೆಯ ನಾಯಕ, ಮುಂಬೈ ದಾಳಿಯ ಸೂತ್ರಧಾರ ಎಂದು ನಂಬಲಾದ ಝಾಕೀರ್ ರೆಹಮಾನ್ ಲಖ್ವಿಯನ್ನು ಬಂಧಿಸಿರುವುದಾಗಿ ಮಾಧ್ಯಮಗಳು ವರದಿ ಮಾಡಿದವು. ಪಾಕ್ ಭದ್ರತಾ ಪಡೆಯು ದೇಶದ ವಿವಿಧ ಕಡೆ ಮತ್ತು ಪಾಕ್ ಆಕ್ರಮಿತ ಕಾಶ್ಮೀರದಲ್ಲಿ ಎಲ್‌ಇಟಿ ವಿರುದ್ಧ ಗುಪ್ತ ಕಾರ್ಯಾಚರಣೆ ಆರಂಭಿಸಿದೆ ಎಂದು ಡಾನ್ ಪತ್ರಿಕೆಯೂ ವರದಿ ಮಾಡಿತು.

2008: ಚುಂಬನದ ಮೋಹಕ್ಕೆ ಸಿಲುಕಿದ ಯುವತಿಯೊಬ್ಬಳು ತನ್ನ ಕಿವಿತಮ್ಮಟೆಯನ್ನೇ ಕಳೆದುಕೊಂಡು ಭಾಗಶಃ ಕಿವುಡಿಯಾದ ವಿಲಕ್ಷಣ ಪ್ರಸಂಗ ದಕ್ಷಿಣ ಚೀನಾದ ಗ್ವಾಂಗ್‌ಡಂಗ್ ಪ್ರಾಂತ್ಯದಿಂದ ವರದಿಯಾಯಿತು. ಒಳಗಿವಿ ಮತ್ತು ಬಾಯಿಗೆ ನಳಿಕೆಯೊಂದರ ಸಂಪರ್ಕ ಇರುತ್ತದೆ. ಕಿವಿ ಮತ್ತು ಬಾಯಿಯಲ್ಲಿನ ಒತ್ತಡವನ್ನು ಸರಿಸಮಾನಗೊಳಿಸುವುದು ಈ ನಳಿಕೆಯ ಕೆಲಸ. ದೀರ್ಘ ಚುಂಬನದ ವೇಳೆ ಬಾಯಿಯಲ್ಲಿನ ಒತ್ತಡ ಕಡಿಮೆಯಾದುದರಿಂದ ಕಿವಿತಮಟೆ ಛಿದ್ರಗೊಂಡಿತು ಎಂದು ಜುಹೈ ಸೆಕೆಂಡ್ ಪೀಪಲ್ಸ್ ಹಾಸ್ಪಿಟಲ್ಲಿನ ಡಾ. ಲಿ ಹೇಳಿದರು. 20ರ ಹರೆಯದ ಈ ಯುವತಿಗೆ ಮತ್ತೆ ತನ್ನ ಎಡಗಿವಿಯಲ್ಲಿ ಶಬ್ಧ ಕೇಳಿಸಬೇಕಾದರೆ ಇನ್ನೂ ಎರಡು ತಿಂಗಳು ಕಾಯುವುದು ಅನಿವಾರ್ಯವಾಯಿತು. ಚುಂಬನದಿಂದ ಯಾವುದೇ ಅಪಾಯವೂ ಇಲ್ಲ ಎಂಬುದು ಇದುವರೆಗೆ ತಿಳಿದ ಸಂಗತಿ. ಆದರೆ ಇಲ್ಲೂ ಕೆಲವು ಅಪಾಯ ಇದೆ ಎಂಬುದನ್ನು ಈ ವಿದ್ಯಮಾನ ತೋರಿಸಿಕೊಟ್ಟಿತು.

2008: ಕುಷ್ಠ ರೋಗಿಗಳು ಹಾಗೂ ಕುಷ್ಠ ರೋಗಿಗಳ ಮಕ್ಕಳಿಗಾಗಿ ಮಾಡಿದ ಸಮಾಜ ಸೇವೆಯನ್ನು ಗುರುತಿಸಿ ಗುಲ್ಬರ್ಗ ನಗರದ ಹಣಮಂತ ದೇವನೂರ ಅವರಿಗೆ ಭಾರತ ಸರ್ಕಾರದ ಸಾಮಾಜಿಕ ನ್ಯಾಯ ಮತ್ತು ಅಧಿಕಾರಿತಾ ಮಂತ್ರಾಲಯ ನವದೆಹಲಿಯಲ್ಲಿ ರಾಷ್ಟ್ರೀಯ ಪ್ರಶಸ್ತಿ ನೀಡಿ ಗೌರವಿಸಿತು. ಉಪರಾಷ್ಟ್ರಪತಿ ಹಮೀದ್ ಅನ್ಸಾರಿ ಅವರು ವಿಜ್ಞಾನ ಭವನದಲ್ಲಿ ಪ್ರಶಸ್ತಿ ಫಲಕ, ಮೆಡಲ್ ಹಾಗೂ 25 ಸಾವಿರ ನಗದು ಬಹುಮಾನ ನೀಡಿದರು.

2007: ದಶಕದ ನಂತರ ಕೊನೆಗೂ ಮಂಗಳೂರು - ಬೆಂಗಳೂರು ಮಧ್ಯೆ ರೈಲು ಸಂಚಾರ ಆರಂಭಗೊಂಡಿತು. ಮಂಗಳೂರು ರೈಲು ನಿಲ್ದಾಣದಲ್ಲಿ ನಡೆದ ಸಮಾರಂಭದಲ್ಲಿ ಮಂಗಳೂರು- ಬೆಂಗಳೂರು ಪ್ರಯಾಣಿಕ ರೈಲು ಆರಂಭಕ್ಕೆ ರೈಲ್ವೇ ಸಚಿವ ಲಾಲೂ ಪ್ರಸಾದ್ ಹಸಿರು ನಿಶಾನೆ ತೋರಿಸಿದರು. ಇದೇ ಸಂದರ್ಭದಲ್ಲಿ ಸುಬ್ರಹ್ಮಣ್ಯ- ಸಕಲೇಶಪುರ ನಡುವಣ ಬ್ರಾಡ್ ಗೇಜ್ ಹಳಿಯನ್ನೂ ಅವರು ಉದ್ಘಾಟಿಸಿದರು. ಸಚಿವ ಲಾಲು ಪ್ರಸಾದ್ ರಿಮೋಟ್ ಮೂಲಕ ಉದ್ಘಾಟನಾ ಫಲಕದ ಪರದೆ ಸರಿಸಿ, ಸಿಗ್ನಲ್ಲಿನ ಗೇರ್ ಅದುಮಿ, ಮಂಗಳೂರು-ಬೆಂಗಳೂರು ರೈಲಿಗೆ ಹಸಿರು ನಿಶಾನೆ ತೋರಿಸುತ್ತಿದ್ದಂತೆಯೇ 6517 ನಂಬರಿನ ರೈಲು ಮಂಗಳೂರು ಸೆಂಟ್ರಲ್ ರೈಲು ನಿಲ್ದಾಣದಿಂದ ಮುಂದಡಿಯಿಟ್ಟಿತು. ರಾಷ್ಟ್ರಗೀತೆಯ ನಾದಕ್ಕನುಗುಣವಾಗಿ ಹಾರ್ನ್ ಹಾಕುತ್ತಾ ಚುಕು ಪುಕು ಸದ್ದು ಮಾಡುತ್ತಾ ಹೊರಟ ರೈಲಿನ ದೃಶ್ಯವನ್ನು ವೇದಿಕೆ ಪಕ್ಕದಲ್ಲಿ ನಿರ್ಮಿಸಿದ್ದ ಬೃಹತ್ ಡಿಜಿಟಲ್ ಪರದೆಯಲ್ಲಿ ಕಂಡ ಕರಾವಳಿಯ ಜನೆ ಪುಳಕಗೊಂಡರು. ಸಕಲೇಶಪುರ- ಸುಬ್ರಹ್ಮಣ್ಯದ ನಡುವೆ ಸುಮಾರು 128 ಸೇತುವೆ ಹಾಗೂ 58 ಸುರಂಗ ಮಾರ್ಗಗಳನ್ನು ಹೊಂದಿರುವ ಘಾಟ್ ಮಾರ್ಗದಲ್ಲಿ ಕರಾವಳಿ ಜನತೆಯ ದಶಕಗಳ ಕನಸು, ರಾಜಧಾನಿಯ ಸಂಪರ್ಕ, ನಿಸರ್ಗ ಸಿರಿ ದರ್ಶನದ ಬ್ರಾಡ್ ಗೇಜ್ ಮಂಗಳೂರು- ಬೆಂಗಳೂರು ಪ್ರಯಾಣಿಕ ರೈಲನ್ನು ಅಪ್ಪಟ ಕನ್ನಡಿಗ ಮೈಸೂರಿನ ರಾಮಸ್ವಾಮಿ ಮೊದಲ ಬಾರಿ ಚಲಾಯಿಸಿದರು. ರೈಲ್ವೆ ವಿಭಾಗದಲ್ಲಿ ಒಟ್ಟು 33 ವರ್ಷಗಳ ರೈಲು ಚಾಲನೆ ಅನುಭವ ಇರುವ ಕ್ಲಾಸ್-1 ಚಾಲಕರಾದ ರಾಮಸ್ವಾಮಿ, ಮಂಗಳೂರು- ಬೆಂಗಳೂರು ಮಧ್ಯೆ ಮೀಟರ್ ಗೇಜ್ ರೈಲನ್ನೂ ಚಲಾಯಿಸಿದ್ದರು. ದೇಶದ ಇತರ ಕಡೆಗಳಲ್ಲಿ 1843ರಲ್ಲೇ ರೈಲು ಸಂಚಾರ ಆರಂಭಗೊಂಡರೂ ಮಂಗಳೂರಿಗೆ ಮೊದಲ ರೈಲು ಬಂದದ್ದೇ 1907ರಲ್ಲಿ. ಮಂಗಳೂರಿಗೆ ಸಮೀಪದ ಉಳ್ಳಾಲದಲ್ಲಿ ರೈಲ್ವೆ ಸೇತುವೆ ನಿರ್ಮಾಣಗೊಂಡ ಬಳಿಕ 1907ರಲ್ಲಿ ಮೊತ್ತಮೊದಲು ಕೇರಳ ಕಡೆಯಿಂದ ಮಂಗಳೂರಿಗೆ ರೈಲು ಬಂದಿತ್ತು. ಇದಾದ 100 ವರ್ಷಗಳ ಬಳಿಕ ಮಂಗಳೂರು-ಬೆಂಗಳೂರು ಮಧ್ಯೆ ಬ್ರಾಡ್ ಗೇಜ್ ಮೇಲೆ ರೈಲು ಸಂಚಾರ ಈದಿನ ಆರಂಭಗೊಂಡಿತು. ಕೊಂಕಣ ರೈಲು ಬಳಿಕ ಕರಾವಳಿಗೆ ಇದು ಮಹತ್ತರ ಕೊಡುಗೆ. ಶಿರಾಡಿ ಘಾಟ್ ರಸ್ತೆ ಹದಗೆಟ್ಟು ಸಂಪರ್ಕ ಸ್ಥಗಿತಗೊಂಡಾಗ ಇಲ್ಲಿ ರೈಲು ಸಂಚಾರದ ಕೂಗು ಬಲವಾಯಿತು. 2006ರ ಮೇ ತಿಂಗಳಲ್ಲೇ ಗೂಡ್ಸ್ ರೈಲು ಓಡಾಟ ಪ್ರಾರಂಭ ಆದರೂ ಪ್ರಯಾಣಿಕ ರೈಲು ಮಾತ್ರ ಓಡಲಿಲ್ಲ. ಕಬ್ಬಿಣದ ಅದಿರು ಸಾಗಾಟ ಮೂಲಕ ಭಾರಿ ಲಾಭ ತಂದುಕೊಂಡುವ ಮಾರ್ಗವಾಗಿ ಇದು ಪರಿವರ್ತಿತವಾಯಿತಾದರೂ ಪ್ರಯಾಣಿಕ ರೈಲು ಸಂಚಾರಕ್ಕೆ ಮುಹೂರ್ತ ಕೂಡಿ ಬಂದಿರಲೇ ಇಲ್ಲ. ಕೊನೆಗೆ ಜನರ ಚಳವಳಿಯ ಬಳಿಕ ಈದಿನ ಬ್ರಾಡ್ ಗೇಜ್ ಆಗಿ ಪರಿವರ್ತನೆಗೊಂಡ ಮಾರ್ಗದಲ್ಲಿ ರೈಲು ಸಂಚಾರ ಪುನರಾರಂಭಗೊಂಡಿತು. ದೀರ್ಘ ಹೋರಾಟದ ಬಳಿಕ ಮೀಟರ್ ಗೇಜ್ ಮಾರ್ಗದಲ್ಲಿ ಕೆಲವು ವರ್ಷಗಳ ಹಿಂದೆ ಆರಂಭವಾಗಿದ್ದ ರೈಲುಸಂಚಾರ ಬ್ರಾಡ್ ಗೇಜ್ ಮಾರ್ಗ ಪರಿವರ್ತನೆ ಸಲುವಾಗಿ ನಿಂತು ಹೋಗಿತ್ತು. ಮಂಗಳೂರು- ಬೆಂಗಳೂರು ಬ್ರಾಡ್ ಗೇಜ್ ರೈಲು ಸಂಚಾರ ಉದ್ಘಾಟನಾ ಸಮಾರಂಭದಲ್ಲಿ ರಾಜ್ಯಪಾಲ ರಾಮೇಶ್ವರ ಠಾಕೂರ್ ಮುಖ್ಯ ಅತಿಥಿಯಾಗಿದ್ದರು.

2007: ಅನಿಲ ಸ್ಫೋಟದಿಂದ ಅಪಾಯದಲ್ಲಿ ಸಿಲುಕಿಕೊಂಡಿದ್ದ ಸಹೋದ್ಯೋಗಿಗಳನ್ನು ರಕ್ಷಿಸಲು ಗಣಿಯೊಳಗೆ ಧಾವಿಸಿದವರೂ ಸೇರಿದಂತೆ ಸುಮಾರು 104 ಮಂದಿ ಕಲ್ಲಿದ್ದಲು ಗಣಿ ಕಾರ್ಮಿಕರು ಅಸು ನೀಗಿದ ದಾರುಣ ಘಟನೆ ಚೀನಾದ ಶಾಂಗ್ ಶಿ ಪ್ರಾಂತ್ಯದ ಹಾಂಗ್ ಟಾಗ್ ಕೌಂಟಿಯಲ್ಲಿ ಸಂಭವಿಸಿತು.

2007: ದಕ್ಷಿಣ ಫೆಸಿಫಿಕ್ ನ ಫಿಜಿಯಲ್ಲಿ ತೀವ್ರವಾದ ಬಿರುಗಾಳಿಯಿಂದ ಕೂಡಿದ ಸಿಕೋಬಿಯಾ ಚಂಡಮಾರುತ ಬೀಸಿದ ಪರಿಣಾಮವಾಗಿ ಎರಡು ಸಣ್ಣಹಳ್ಳಿಗಳು ನೆಲಸಮವಾದವು. ನಿರಾಶ್ರಿತರಾದ 69 ಮಂದಿ ಗುಹೆಗಳಲ್ಲಿ ಆಶ್ರಯ ಪಡೆದರು.

2006: ಕೊಯಮತ್ತೂರಿನ ವಕೀಲ ಎಂ. ರಾಜಾ ಷರೀಫ್ ಅವರು 7 ಅಡಿ ಎತ್ತರ, 4 ಅಡಿ ಅಗಲ ಮತ್ತು 250 ಕಿಲೋ ಗ್ರಾಂ ತೂಕದ ಬೃಹತ್ ಕುರಾನ್ ಗ್ರಂಥವನ್ನು ತಮಿಳುನಾಡಿನ ಚೆನ್ನೈಯಲ್ಲಿ ಪ್ರದರ್ಶಿಸಿದರು. ಅರಬ್ಬೀ ಭಾಷೆಯಲ್ಲಿ ಬರೆಯಲಾಗಿರುವ ಈ ಗ್ರಂಥ 610 ಪುಟಗಳನ್ನು ಹೊಂದಿದೆ. ಷರೀಫ್ ಕುಟುಂಬದ ಎಲ್ಲ ಸದಸ್ಯರೂ ಈ ಗ್ರಂಥ ರಚನೆಗೆ ಒಂದು ವರ್ಷಕಾಲ ಶ್ರಮಿಸಿದ್ದಾರೆ. ಷರೀಫ್ ಅವರು ಈ ಹಿಂದೆ ತಾಳೆಗರಿಯಲ್ಲಿ ತಮಿಳು ಭಾಷೆಯ `ತಿರುಕ್ಕುರಳ್' ಗ್ರಂಥದ 1330 ಪದ್ಯಗಳನ್ನು ಬರೆದು ದಾಖಲೆ ನಿರ್ಮಿಸಿದ್ದರು. 2003ರಲ್ಲಿ ರಾಷ್ಟ್ರಪತಿ ಎ.ಪಿ.ಜೆ. ಅಬ್ದುಲ್ ಕಲಾಂ ಅವರು ಕೊಯಮತ್ತೂರಿಗೆ ಭೇಟಿ ನೀಡಿದ್ದಾಗ ಷರೀಫ್ ಅವರು ಈ ತಾಳೆಗರಿ ಹಾಳೆಯನ್ನು ರಾಷ್ಟ್ರಪತಿಗಳಿಗೆ ಅರ್ಪಿಸಿದ್ದರು.

2006: ಪ್ರತಿಕೂಲ ಹವಾಮಾನದಿಂದಾಗಿ ಫ್ಲೋರಿಡಾದ ಕೇಪ್ ಕೆನವರಾಲಿನಲ್ಲಿ ನಡೆಯಬೇಕಾಗಿದ್ದ ಅಮೆರಿಕದ ಗಗನನೌಕೆ `ಡಿಸ್ಕವರಿ'ಯ ಉಡಾವಣೆಯನ್ನು ಮುಂದೂಡಲಾಯಿತು. ರಾತ್ರಿ ನಡೆಯಬೇಕಾಗಿದ್ದ ಉಡಾವಣೆಗೆ ಕೆಲವೇ ನಿಮಿಷಗಳ ಮೊದಲು ಹವಾಮಾನದಲ್ಲಿ ವೈಪರೀತ್ಯ ಕಂಡುಬಂದದ್ದರಿಂದ ನಾಸಾ ವಿಜ್ಞಾನಿಗಳು ಇದನ್ನು ಮುಂದೂಡುವ ನಿರ್ಧಾರ ಕೈಗೊಂಡರು. ಭಾರತದ ಸುನಿತಾ ವಿಲಿಯಮ್ಸ್ ಸೇರಿದಂತೆ ಏಳು ಮಂದಿ ಗಗನಯಾತ್ರಿಗಳು ಡಿಸ್ಕವರಿ ಮೂಲಕ ಗಗನಕ್ಕೆ ನೆಗೆದು ಅಂತಾರಾಷ್ಟ್ರೀಯ ಬಾಹ್ಯಾಕಾಶ ನಿಲ್ದಾಣದ ದುರಸ್ತಿ ಮಾಡಬೇಕಾಗಿತ್ತು. ಮೂಲ ಯೋಜನೆಯಂತೆ ಅಮೆರಿಕದ ಕಾಲಮಾನ ರಾತ್ರಿ 9.35 ನಿಮಿಷಕ್ಕೆ ಡಿಸ್ಕವರಿ ಗಗನಕ್ಕೆ ಚಿಮ್ಮಲು ಸಿದ್ಧವಾಗಿತ್ತು. ಗಗನಯಾತ್ರಿಗಳೂ ಆಸನದಲ್ಲಿ ಕುಳಿತು ಕ್ಷಣಗಣನೆ ಆರಂಭಿಸಿದ್ದರು. ಆದರೆ 8.05 ಗಂಟೆ ಹೊತ್ತಿಗೆ ದಟ್ಟ ಮೋಡಗಳು ಕಾಣಿಸಿಕೊಂಡವು. 2002ರ ನವೆಂಬರ್ 23ರಂದು ಉಡಾವಣೆಗೊಂಡ ಎಂಡೀವರ್ ಗಗನನೌಕೆಯ ಬಳಿಕ ರಾತ್ರಿವೇಳೆ ಉಡಾವಣೆಗೆ ಸಜ್ಜಾದ ಮೊದಲ ಗಗನನೌಕೆ ಡಿಸ್ಕವರಿ. `ಕೊಲಂಬಿಯ' ದುರಂತದ ಬಳಿಕ ಮೂರು ನೌಕೆಗಳನ್ನು ಹಗಲು ಹೊತ್ತಿನಲ್ಲೇ ಉಡಾವಣೆ ಮಾಡಲಾಗಿತ್ತು.

2006: ನೇಪಾಳದ ದೊರೆ ಜ್ಞಾನೇಂದ್ರ ಹಾಗೂ ರಾಜಕುಮಾರ ಪಾರಸ್ ಕಠ್ಮಂಡು ವಿಮಾನ ನಿಲ್ದಾಣದಲ್ಲಿ 53,739 ರೂ. ತೆರಿಗೆ ಪಾವತಿಸಿ ಅಮೆರಿಕದಿಂದ ತಮ್ಮ ವಿಳಾಸಕ್ಕೆ ಬಂದಿದ್ದ ಪಾರ್ಸೆಲ್ ಪಡೆದುಕೊಂಡರು. ಏಕನಾಯಕ ಚಕ್ರಾಧಿಪತ್ಯವಿರುವ ಈ ಹಿಮಾಲಯ ರಾಷ್ಟ್ರದಲ್ಲಿ 238 ವರ್ಷಗಳ ಇತಿಹಾಸದಲ್ಲೇ ಮೊದಲ ಬಾರಿಗೆ `ದೊರೆ ತೆರಿಗೆ ಪಾವತಿ ಮಾಡಿದ' ಈ ಪ್ರಕರಣ ನಡೆಯಿತು. ದೊರೆ ಜ್ಞಾನೇಂದ್ರ ಅವರ ವಿಳಾಸಕ್ಕೆ ಬಂದ ಪಾರ್ಸೆಲ್ ಪೆಟ್ಟಿಗೆಯಲ್ಲಿ ಇದ್ದದ್ದು 50 ಟಾರ್ಚ್ ಲೈಟುಗಳು.

2006: `ಹೆನ್ರಿ ಜೆ. ಹೈಡ್ ಅಮೆರಿಕ- ಭಾರತ ಶಾಂತಿಯು ಪರಮಾಣು ಶಕ್ತಿ ಸಹಕಾರ ಕಾಯ್ದೆ 2006' ಎಂದು ಕರೆಯಲಾಗುವ ಭಾರತ- ಅಮೆರಿಕ ನಡುವಣ ನಾಗರಿಕ ಬಳಕೆಯ ಪರಮಾಣು ಒಪ್ಪಂದಕ್ಕೆ ಅವಕಾಶ ಒದಗಿಸುವ 74 ಪುಟಗಳ ಮಸೂದೆಗೆ ಅಮೆರಿಕದ ಕಾಂಗ್ರೆಸ್ ಈ ರಾತ್ರಿ ಒಪ್ಪಿಗೆ ನೀಡಿತು. ಭಾರತ ವ್ಯಕ್ತಪಡಿಸಿದ ಆಕ್ಷೇಪಗಳನ್ನು ದೃಷ್ಟಿಯಲ್ಲಿಟ್ಟುಕೊಂಡು ಅಮೆರಿಕದ ಸೆನೆಟ್ ಮತ್ತು ಕಾಂಗ್ರೆಸ್ ಸದಸ್ಯರ ಸಮಿತಿ ಮಸೂದೆಯಲ್ಲಿ ಬಳಸಿದ ಭಾಷೆಗೆ ತಿದ್ದುಪಡಿಗಳನ್ನು ತಂದಿದೆ. ಒಪ್ಪಂದದಿಂದಾಗಿ ಕಳೆದ 32 ವರ್ಷಗಳಲ್ಲಿ ಮೊದಲ ಬಾರಿಗೆ ಪರಮಾಣು ತಂತ್ರಜ್ಞಾನ ನೆರವನ್ನು ಅಮೆರಿಕ ಭಾರತಕ್ಕೆ ನೀಡಲಿದ್ದು, ಭಾರತ ತನ್ನ ಬಹುತೇಕ ಪರಮಾಣು ಸ್ಥಾವರಗಳನ್ನು ಮುಕ್ತ ವೀಕ್ಷಣೆಗೆ ತೆರೆದಿಡಲಿದೆ.

2005: ಖಾಸಗಿ ವೃತ್ತಿ ಶಿಕ್ಷಣ ಸಂಸ್ಥೆಗಳಲ್ಲೂ ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡಗಳಿಗೆ ಮೀಸಲು ನೀಡುವ ಸಂಬಂಧ ಸಂವಿಧಾನ ತಿದ್ದುಪಡಿ ಮಸೂದೆ ಮಂಡಿಸಲು ಭಾರತದ ಕೇಂದ್ರ ಸಚಿವ ಸಂಪುಟ ಅನುಮೋದನೆ ನೀಡಿತು. ಅನುದಾನರಹಿತ ಕಾಲೇಜುಗಳಲ್ಲಿ ಮೀಸಲು ನೀಡಬೇಕಾದ ಅಗತ್ಯ ಇಲ್ಲ ಎಂಬುದಾಗಿ ಸುಪ್ರೀಂಕೋರ್ಟ್ ನೀಡಿದ ತೀರ್ಪಿಗೆ ಪ್ರತಿಯಾಗಿ ಸರ್ಕಾರ ಈ ಕ್ರಮ ಕೈಗೊಂಡಿದ್ದು, ಮಸೂದೆಯನ್ನು ಅಲ್ಪಸಂಖ್ಯಾತ ಸಂಸ್ಥೆಗಳಿಗೆ ಅನ್ವಯಿಸದಿರಲು ನಿರ್ಧರಿಸಿತು.

2005: ಲೈಂಗಿಕ ಕಿರುಕುಳ ಸಂಬಂಧ ಮೇಲಧಿಕಾರಿಗಳ ವಿರುದ್ಧ ದೂರು ನೀಡಿದ್ದ ಭಾರತೀಯ ವಾಯುಪಡೆಯ ಫ್ಲೈಯಿಂಗ್ ಅಧಿಕಾರಿ ಅಂಜಲಿ ಗುಪ್ತಾ ಅವರ ವಿಚಾರಣೆ ನಡೆಸಿದ ಮಿಲಿಟರಿ ನ್ಯಾಯಾಲಯ ಆಕೆಯನ್ನು ತಪ್ಪಿತಸ್ಥೆ ಎಂದು ತೀರ್ಮಾನಿಸಿ ಅವರನ್ನು ಸೇವೆಯಿಂದ ವಜಾಗೊಳಿಸಲು ಆದೇಶಿಸಿತು.

2005: ಹಿರಿಯ ಪತ್ರಕರ್ತ, ಡೆಕ್ಕನ್ ಹೆರಾಲ್ಡ್ ಪತ್ರಿಕೆಯ ನಿವೃತ್ತ ಮುಖ್ಯ ವರದಿಗಾರ ಎಸ್. ಜಿ. ಮೈಸೂರುಮಠ ಅವರು ಹೃದಯಾಘಾತದಿಂದ ಬೆಂಗಳೂರಿನಲ್ಲಿ ನಿಧನರಾದರು. ವಿಶ್ವ ಕರ್ನಾಟಕ ಮೂಲಕ ಪತ್ರಿಕಾ ರಂಗ ಪ್ರವೇಶಿಸಿದ ಅವರು ಡೆಕ್ಕನ್ ಹೆರಾಲ್ಡ್ ಪತ್ರಿಕೆಯಲ್ಲಿ 25 ವರ್ಷ ಸೇವೆ ಸಲ್ಲಿಸಿದ್ದೂ ಸೇರಿದಂತೆ ವಿವಿಧ ಪತ್ರಿಕೆಗಳಲ್ಲಿ ನಾಲ್ಕು ದಶಕಗಳ ಸೇವೆ ಸಲ್ಲಿಸಿದ್ದರು.

2001: ಭಾರತದ ಖ್ಯಾತ ಕ್ಯಾಮರಾಮ್ಯಾನ್ ಸುಬ್ರತೊ ಮಿತ್ರ (1930-2001) ನಿಧನರಾದರು. ಸತ್ಯಜಿತ್ ರೇ ಅವರ ಎರಡನೇ ಚಿತ್ರ `ಅಪರಾಜಿತೊ'ದಲ್ಲಿ ಅವರು `ಬೌನ್ಸ್ ಲೈಟ್ನಿಂಗ್' ನ್ನು ಅಳವಡಿಸಿದ್ದರು. ರೇ ಅವರ ಖ್ಯಾತ ಚಿತ್ರಗಳಾದ `ಪಥೇರ್ ಪಾಂಚಾಲಿ', `ಅಪುರ್ ಸಂಸಾರ್' ಇತ್ಯಾದಿ ಚಿತ್ರಗಳ ಚಿತ್ರೀಕರಣವನ್ನೂ ಅವರು ಮಾಡಿದ್ದರು. 1992 ರಲ್ಲಿ ಸಿನಿಮಾಟೋಗ್ರಪಿಯಲ್ಲಿ ಜೀವಮಾನದ ಸಾಧನೆಗಾಗಿ ನೀಡಲಾಗುವ `ಈಸ್ಟ್ಮನ್ ಕೊಡಕ್' ಪ್ರಶಸ್ತಿಯನ್ನು ಗೆದ್ದ ಮೊತ್ತ ಮೊದಲ ಭಾರತೀಯನೆಂಬ ಹೆಗ್ಗಳಕೆಗೆ ಸುಬ್ರತೊ ಮಿತ್ರ ಭಾಜನರಾಗಿದ್ದರು.

1991: ರಷ್ಯ, ಉಕ್ರೇನ್ ಮತ್ತು ಬೆಲಾರಸ್ ರಾಷ್ಟ್ರಗಳು ಬೆಲಾರಸ್ನಲ್ಲಿ ಒಪ್ಪಂದವೊಂದಕ್ಕೆ ಸಹಿ ಹಾಕಿ ಕಮ್ಯೂನಿಸ್ಟ್ ಯುಗದ ಒಕ್ಕೂಟವನ್ನು ವಿಸರ್ಜಿಸಿದವು ಮತ್ತು ಸ್ವತಂತ್ರ ರಾಷ್ಟ್ರಗಳ ಕಾಮನ್ವೆಲ್ತನ್ನು ಸ್ಥಾಪಿಸಿದವು.

1980: ರಾಕ್ ಸಂಗೀತಗಾರ ಜಾನ್ ಲೆನ್ನನ್ ಅವರನ್ನು ನ್ಯೂಯಾರ್ಕ್ ನಗರದ ಹೊರವಲಯದ ಅಪಾರ್ಟ್ಮೆಂಟ್ ಕಟ್ಟಡವೊಂದರಲ್ಲಿ ಗುಂಡಿಟ್ಟು ಕೊಲೆಗೈಯಲಾಯಿತು. ಹುಚ್ಚೆದ್ದ ಅಭಿಮಾನಿ ಮಾರ್ಕ್ ಚಾಪ್ ಮ್ಯಾನ್ ಎಂಬ ವ್ಯಕ್ತಿ ಈ ಕೃತ್ಯ ಎಸಗಿದ.

1978: ಇಸ್ರೇಲಿನ ಪ್ರಧಾನಿ ಗೋಲ್ಡಾ ಮೀರ್ ಅವರು ಜೆರುಸಲೇಮಿನಲ್ಲಿ ತಮ್ಮ 80ನೇ ವಯಸ್ಸಿನಲ್ಲಿ ನಿಧನರಾದರು. 1969ರಿಂದ

1974ರವರೆಗೆ ಅವರು ಇಸ್ರೇಲ್ ಪ್ರಧಾನಿಯಾಗಿ ಆಡಳಿತ ನಡೆಸಿದ್ದರು.

1941: ಎರಡನೇ ಜಾಗತಿಕ ಯುದ್ಧ ಕಾಲದಲ್ಲಿ ಈದಿನ ಗ್ರೇಟ್ ಬ್ರಿಟನ್, ಆಸ್ಟ್ರೇಲಿಯಾ ಮತ್ತು ಅಮೆರಿಕಾ ಒಟ್ಟಾಗಿ ಜಪಾನ್ ವಿರುದ್ಧ ಸಮರ ಸಾರಿದವು.

1937: ಭಾರತದ ಮೊತ್ತ ಮೊದಲ ಡಬಲ್ ಡೆಕರ್ ಬಸ್ಸು ಬಾಂಬೆಯಲ್ಲಿ (ಈಗಿನ ಮುಂಬೈ) ಸೇವೆಗೆ ಇಳಿಯಿತು. ಈ ಬಸ್ಸಿನಲ್ಲಿ 58 ಮಂದಿ ಪ್ರಯಾಣಿಸಬಹುದಾಗಿತ್ತು.

1935: ಬಾಲಿವುಡ್ಡಿನ ಖ್ಯಾತ ನಟ ಹಾಗೂ ಚಿತ್ರ ನಿರ್ಮಾಪಕ ಧರ್ಮೇಂದ್ರ ಡಿಯೋಲ್ ಜನಿಸಿದರು.

1900: ಭಾರತದ ಖ್ಯಾತ ನೃತ್ಯಪಟು ಹಾಗೂ ನೃತ್ಯ ನಿರ್ದೇಶಕ ಉದಯ ಶಂಕರ್ (1900-1977) ಹುಟ್ಟಿದ ದಿನ. ಇವರು ಸಾಂಪ್ರದಾಯಿಕ ಹಿಂದೂ ನೃತ್ಯಗಳಿಗೆ ಪಾಶ್ಚಾತ್ಯ ತಂತ್ರಗಳನ್ನು ಅಳವಡಿಸಿ ಭಾರತದ ಪುರಾತನ ಕಲಾ ಪ್ರಕಾರವನ್ನು ಭಾರತ ಹಾಗೂ ಹೊರ ದೇಶಗಳಲ್ಲಿ ಜನಪ್ರಿಯಗೊಳಿಸಿದರು.

1875: ಭಾರತೀಯ ನ್ಯಾಯವಾದಿ ಹಾಗೂ ಮುತ್ಸದ್ದಿ ಸರ್ ತೇಗ್ ಬಹಾದುರ್ ಸಪ್ರು (1875-1949) ಹುಟ್ಟಿದ ದಿನ.

Monday, January 4, 2010

ಇಂದಿನ ಇತಿಹಾಸ History Today ಡಿಸೆಂಬರ್ 07

ಇಂದಿನ ಇತಿಹಾಸ

ಡಿಸೆಂಬರ್  0 7
2014:  ಬೆಂಗಳೂರು: ಪ್ರತಿಕೂಲ ಹವಾಮಾನದ ಕಾರಣ ಎರಡು ಬಾರಿ ಮುಂದೂಡಿಕೆಯಾಗಿದ್ದ ಭಾರತದ ಅತ್ಯಾಧುನಿಕ ಸಂಪರ್ಕ ಉಪಗ್ರಹ ಜಿಸ್ಯಾಟ್-16ನ್ನು ಏರಿಯನ್ 5 ರಾಕೆಟ್ ಮೂಲಕ ಈದಿನ ನಸುಕಿನಲ್ಲಿ ಯಶಸ್ವಿಯಾಗಿ ಕಕ್ಷೆಗೆ ಸೇರಿಸುವ ಮೂಲಕ ಭಾರತೀಯ ವಿಜ್ಞಾನಿಗಳು ಇನ್ನೊಂದು ವಿಕ್ರಮ ಸಾಧಿಸಿದರು. ಫ್ರೆಂಚ್ ಗಯಾನಾದ ಕೌರು ಬಾಹ್ಯಾಕಾಶ ಕೇಂದ್ರದಿಂದ ರಾಕೆಟ್ ಉಡಾವಣೆ ಮೂಲಕ ಈ ಕಾರ್ಯಾಚರಣೆಯನ್ನು ಸುಸೂತ್ರವಾಗಿ ನೆರವೇರಿಸಲಾಯಿತು. ನಸುಕಿನ ವೇಳೆ ಭಾರತೀಯ ಕಾಲಮಾನ 2.10 ಗಂಟೆಗೆ ಜಿಸ್ಯಾಟ್-16 ಉಪಗ್ರಹವನ್ನು ಹೊತ್ತ ಐರೋಪ್ಯ ರಾಕೆಟ್​ನ್ನು ಉಡಾವಣೆ ಮಾಡಲಾಯಿತು. ಯಾವುದೇ ತೊಡಕುರಹಿತ ಪಯಣದ ಮೂಲಕ ಅದನ್ನು ಬಾಹ್ಯಾಕಾಶದಲ್ಲಿ ನಿಗದಿತ ಕಕ್ಷೆಗೆ ಸೇರಿಸಲಾಯಿತು. ಈ ಉಪಗ್ರಹವು ಭಾರತದ ರಾಷ್ಟ್ರೀಯ ಬಾಹ್ಯಾಕಾಶ ಸಾಮರ್ಥ್ಯವನ್ನು ಇನ್ನಷ್ಟು ವೃದ್ಧಿಸಿತು. ಜಿಸ್ಯಾಟ್-16 ಉಪಗ್ರಹವನ್ನು ಭೂಸ್ಥಾಯೀ ವರ್ಗಾವಣೆ ಕಕ್ಷೆಯಲ್ಲಿ (ಜಿಟಿಒ) ಕೂರಿಸಲಾಗಿದೆ. ಏರಿಯನ್ ರಾಕೆಟ್​ನಲ್ಲಿ ಎಸ್​ಎಸ್​ಎಲ್ (ಸ್ಪೇಸ್ ಸಿಸ್ಟಮ್ಸ್/ಲೋರಲ್) ನಿರ್ಮಿಸಿದ ಡೈರೆಕ್ಟ್​ವಿ-14 ಉಪಗ್ರಹ ಕೂಡಾ ಪಯಣಿಸಿತು. ಈ ಉಪಗ್ರಹವು ಅಮೆರಿಕದಾದ್ಯಂತ ಮನೆ ಮನೆಗೆ ಟೆಲಿವಿಷನ್ ಸವಲತ್ತು ಕಲ್ಪಿಸುವ ಡೈರೆಕ್ಟ್​ವಿ-14ಕ್ಕೆ ಅನುಕೂಲ ಕಲ್ಪಿಸುವುದು. ಏರಿಯನ್ ರಾಕೆಟ್​ನ 63ನೇ ಯಶಸ್ವೀ ಉಡಾವಣಾ ಯೋಜನೆಯಿದು. 'ಏರಿಯನ್ 5 ಡೈರೆಕ್ಟ್​ವಿ-14 ಮತ್ತು ಜಿಸ್ಯಾಟ್-16 ಉಪಗ್ರಹಗಳನ್ನು ಕಕ್ಷೆಯಲ್ಲಿ ಕೂರಿಸುವ ಇತ್ತೀಚಿನ ಯೋಜನೆಯಲ್ಲಿ ಯಶಸ್ವಿಯಾಗಿದೆ' ಎಂದು ಏರಿಯನ್ ಸ್ಪೇಸ್ ತನ್ನ ವೆಬ್​ಸೈಟ್​ನಲ್ಲಿ ತಿಳಿಸಿತು. 3,181 ಕಿ.ಗ್ರಾಂ. ತೂಕದ ಜಿಸ್ಯಾಟ್-16 ಒಟ್ಟು 48 ಸಂಪರ್ಕ ಟ್ರಾನ್ಸ್​ಪಾಂಡರ್​ಗಳನ್ನು ಒಯ್ದಿದ್ದು ಇದು ಈವರೆಗೆ ಇಸ್ರೋ ಅಭಿವೃದ್ಧಿ ಪಡಿಸಿದ ಅತಿದೊಡ್ಡ ಸಂಪರ್ಕ ಉಪಗ್ರಹವಾಗಿದೆ. ಉಪಗ್ರಹ ಉತ್ತಮ ಸ್ಥಿತಿಯಲ್ಲಿದೆ ಎಂದು ಉಡಾವಣೆಯಾದ ಸ್ವಲ್ಪ ಹೊತ್ತಿನಲ್ಲೇ ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆಯ (ಇಸ್ರೋ) ಬೆಂಗಳೂರು ಕೇಂದ್ರ ಕಚೇರಿ ತಿಳಿಸಿತು.. ಕರ್ನಾಟಕದ ಹಾಸನದಲ್ಲಿ ಇರುವ ಇಸ್ರೋದ ಮಾಸ್ಟರ್ ಕಂಟ್ರೋಲ್ ಫೆಸಿಲಿಟಿ ಜಿಸ್ಯಾಟ್-16ರ ನಿಯಂತ್ರಣವನ್ನು ಪಡೆದುಕೊಂಡಿದೆ ಎಂದು ಇಸ್ರೋ ತಿಳಿಸಿತು.

2014: ಚೆನ್ನೈ: 50ಸಾವಿರ ಸ್ವಯಂ ಸೇವಕರು ಭಾರತ ಧ್ವಜವನ್ನು ಮಾನವ ಸರಪಳಿ ಮೂಲಕ ನಿರ್ವಿುಸುವ ಮೂಲಕ ನೂತನ ವಿಶ್ವದಾಖಲೆ ಬರೆದರು. ಹಿಂದೆ ಪಾಕಿಸ್ತಾನದಲ್ಲಿ ಅತಿ ದೊಡ್ಡ ಮಾನವ ಧ್ವಜ ನಿರ್ವಿುಸಿ ದಾಖಲೆ ನಿರ್ವಿುಸಲಾಗಿತ್ತು. ಚೆನ್ನೈನ ವೈಎಂಸಿಎ ಕ್ರೀಡಾಂಗಣದಲ್ಲಿ 50ಸಾವಿರ ಜನರು ತ್ರಿವರ್ಣದ ಬಟ್ಟೆ ಧರಿಸಿ ಭಾರತದ ಧ್ವಜವನ್ನು ನಿರ್ವಿುಸಿದರು. ಪಾಕಿಸ್ತಾನದ ಲಾಹೋರ್​ನಲ್ಲಿ ಈ ಹಿಂದೆ 28,957 ಜನರು ಪಾಕಿಸ್ತಾನ ಧ್ವಜವನ್ನು ನಿರ್ವಿುಸಿ ದಾಖಲೆ ಬರೆದಿದ್ದರು. ಯುವಜನತೆಯಲ್ಲಿ ರಾಷ್ಟ್ರಾಭಿಮಾನ ಬೆಳೆಸುವ ಉದ್ದೇಶದಿಂದ ಈ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು.

2014: ಬೆಳಗಾವಿ: ಕರ್ನಾಟಕದ ಬೆಳಗಾವಿಯಿಂದ ಸುಮಾರು 100 ಕಿ.ಮೀ. ದೂರದ ರಾಯಭಾಗ ತಾಲೂಕಿನ ಮಾಕಳಿ ಗ್ರಾಮದಲ್ಲಿ ಟಂ ಟಂ ಒಂದು ಬಾವಿಗೆ ಬಿದ್ದ ಪರಿಣಾಮವಾಗಿ 5 ವರ್ಷದ ಒಬ್ಬ ಬಾಲಕಿ ಮೃತಳಾಗಿ ಇತರ 6 ಮಂದಿ ಗಾಯಗೊಂಡ ಘಟನೆ ಘಟಿಸಿತು. ಗಾಯಾಳುಗಳ ಪೈಕಿ ಮೂವರ ಸ್ಥಿತಿ ಗಂಭೀರವಾಗಿದೆ ಎಂದು ವರದಿ ಹೇಳಿತು. ನತದೃಷ್ಟ ಟಂಟಂ ವಾಹನದಲ್ಲಿ ಇದ್ದ ಪ್ರಯಾಣಿಕರು ಸವದತ್ತಿ ಯಲ್ಲಮ್ಮ ಜಾತ್ರೆ ಮುಗಿಸಿಕೊಂಡು ತಮ್ಮ ಊರಾದ ಮಾವಿನಹೊಂಡಕ್ಕೆ ವಾಪಸ್ ಹೊರಟಿದ್ದರು. ಮಾಕಳಿ ಗ್ರಾಮದಲ್ಲಿ ವಾಹನ ಚಾಲಕನ ನಿಯಂತ್ರಣ ತಪ್ಪಿ ಬಾವಿಗೆ ಬಿತ್ತು ಎಂದು ಹೇಳಲಾಯಿತು. ಸುದ್ದಿ ತಿಳಿದ ತತ್​ಕ್ಷಣವೇ ಸ್ಥಳಕ್ಕೆ ಧಾವಿಸಿದ ಸ್ಥಳೀಯರು ವಾಹನವನ್ನು ಬಾವಿಯಿಂದ ಮೇಲೆತ್ತಿದರು. ಆದರೆ ಅಷ್ಟರಲ್ಲಾಗಲೇ ಬಾಲಕಿಯ ಪ್ರಾಣಪಕ್ಷಿ ಹಾರಿಹೋಗಿತ್ತು. ಗಾಯಾಳುಗಳೆಲ್ಲರನ್ನೂ ಹಾರೋಗೇರಿ ಆಸ್ಪತ್ರೆಗೆ ದಾಖಲಿಸಲಾಯಿತು.
.
2014: ನವದೆಹಲಿ: ವಿಶ್ವಸಂಸ್ಥೆಯು ಶೀಘ್ರದಲ್ಲೇ ಜೂನ್ 21ನೇ ದಿನಾಂಕವನ್ನು ವಿಶ್ವ ಯೋಗ ದಿನ ಎಂಬುದಾಗಿ ಘೋಷಿಸಲಿದೆ ಎಂದು ವಿದೇಶಾಂಗ ವ್ಯವಹಾರಗಳ ಸಚಿವೆ ಸುಷ್ಮಾ ಸ್ವರಾಜ್ ಅವರು ನವದೆಹಲಿಯಲ್ಲಿ ತಿಳಿಸಿದರು. ಪ್ರಧಾನಿ ನರೇಂದ್ರ ಮೋದಿ ಅವರ ಪ್ರಸ್ತಾಪವನ್ನು ಅನುಸರಿಸಿ ವಿಶ್ವಸಂಸ್ಥೆ ಈ ಕ್ರಮ ಕೈಗೊಳ್ಳಲಿದೆ ಎಂದು ಅವರು ಹೇಳಿದರು. ಮೂರು ತಿಂಗಳ ಹಿಂದೆ ಪ್ರಧಾನಿ ನರೇಂದ್ರ ಮೋದಿ ಅವರು ಭಾರತದ ಯೋಗವನ್ನು 'ವಿಶ್ವ ಯೋಗ ದಿನ'ವಾಗಿ ಆಚರಿಸಬೇಕು ಎಂದು ವಿಶ್ವ ಸಮುದಾಯಕ್ಕೆ ಮನವಿ ಮಾಡಿದ್ದರು.
2014: ಬೆಳಗಾವಿ: ಅತ್ಯಾಚಾರ ಮತ್ತು ಕೊಲೆ ಪ್ರಕರಣದಲ್ಲಿ ಮರಣದಂಡನೆಗೆ ಗುರಿಯಾಗಿದ್ದ ಕೈದಿಯೊಬ್ಬ ಬೆಳಗಾವಿಯ ಹಿಂಡಲಗಾ ಸೆರೆಮನೆಯಲ್ಲಿ ನೇಣುಹಾಕಿಕೊಂಡು ಆತ್ಮಹತ್ಯೆ ಮಾಡಿಕೊಂಡ ಘಟನೆ ಘಟಿಸಿತು. 'ನಂಜಪ್ಪ ಶಿವನಂಜಪ್ಪ ಎಂಬ ಕೈದಿಗೆ ಅತ್ಯಾಚಾರ ಹಾಗೂ ಕೊಲೆ ಪ್ರಕರಣದಲ್ಲಿ ಮರಣದಂಡನೆ ವಿಧಿಸಲಾಗಿತ್ತು. ಆತ ಹಿಂದಿನ ರಾತ್ರಿ ಹಿಂಡಲಗಾ ಕೇಂದ್ರೀಯ ಸೆರೆಮನೆಯ 7ನೇ ನಂಬರ್ ಬ್ಯಾರಕ್ ಬಳಿ ಶೌಚಾಲಯದಲ್ಲಿ ಸ್ವತಃ ನೇಣುಹಾಕಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾನೆ' ಎಂದು ಬೆಳಗಾವಿ ಪೊಲೀಸ್ ಕಮೀಷನರ್ ಎಸ್. ರವಿ ತಿಳಿಸಿದರು.

2014: ಲೆಗಾಝ್ಪಿ, ಫಿಲಿಪ್ಪೈನ್ಸ್: ಹಗುಪಿಟ್ ಚಂಡಮಾರುತವು ಈದಿನ ವೇಳೆಗೆ ದುರ್ಬಲಗೊಂಡಿದ್ದು, ಅದಕ್ಕೆ ಮುನ್ನ ಫಿಲಿಪ್ಪೈನ್ಸ್​ನ ಕರಾವಳಿ ಪ್ರಾಂತಗಳಲ್ಲಿ ಸಹಸ್ರಾರು ಮರಗಳನ್ನು ಉರುಳಿಸಿದ್ದಲ್ಲದೆ, 6,50,000 ಮಂದಿಯನ್ನು ನಿರ್ವಸಿತರನ್ನಾಗಿ ಮಾಡಿತು. ಜೊತೆಗೆ ಇಡೀ ಪ್ರದೇಶದಲ್ಲಿ ವಿದ್ಯುತ್ ಕಡಿತಗೊಳಿಸಿತು.. ಏನಿದ್ದರೂ ಈದಿನದ ಹೊತ್ತಿಗೆ ಚಂಡಮಾರುತ ದುರ್ಬಲಗೊಂಡು ಸಾಗಿದ್ದರಿಂದ ಫಿಲಿಪ್ಪೈನ್ ಕಳೆದ ವರ್ಷದ ಕರಾಳ ದುರಂತ ಪರಿಸ್ಥಿತಿಯ ಪುನರಾವರ್ತನೆಯ ಭೀತಿಯಿಂದ ಪಾರಾಯಿತು. ಹಾನಿಗೊಂಡಿರುವ ಗುಡಿಸಲು, ಅಬ್ಬರ ರಹಿತ ಪ್ರವಾಹದ ನೀರು, ಹಾರಿಹೋಗಿರುವ ಟಿನ್ ಛಾವಣಿಗಳು ಇಡೀ ಪ್ರದೇಶದಲ್ಲಿ ಎಲ್ಲೆಂದರಲ್ಲಿ ಕಂಡು ಬಂದವು. ಆದರೆ, ಹಗುಪಿಟ್ ಚಂಡಮಾರುತ ಅಪ್ಪಳಿಸಿದ ಪೂರ್ವ ಸಮರ್ ಮತ್ತು ಇತರ ದ್ವೀಪಪ್ರಾಂತ್ಯಗಳಲ್ಲಿ ಸಾವು ನೋವು ಹಾಗೂ ಭಾರಿ ಹಾನಿ ಸಂಭವಿಸಿರುವ ಬಗ್ಗೆ ಯಾವುದೇ ವರದಿ ಬರಲಿಲ್ಲ. ಗರಿಷ್ಠ ಗಂಟೆಗೆ 140 ಕಿ.ಮೀ. (87ಮೈಲು) ವೇಗದಲ್ಲಿ ಗಾಳಿ ಬೀಸಿತು. ಇದು ಚಂಡಮಾರುತದ ಗರಿಷ್ಠ ವೇಗಕ್ಕಿಂತ ತುಂಬಾ ಕಡಿಮೆ ಎಂದು ಹೇಳಲಾಯಿತು.
2014: ಕೋಲ್ಕತ: ಪಶ್ಚಿಮ ಬಂಗಾಳ ಕರಾವಳಿಯಲ್ಲಿ ಭಾರತೀಯ ಜಲ ಪ್ರದೇಶದಲ್ಲಿ ಅಕ್ರಮವಾಗಿ ಮೀನು ಹಿಡಿಯುತ್ತಿದ್ದುದಕ್ಕಾಗಿ 56 ಮಂದಿ ಮೀನುಗಾರರ ಜೊತೆಗೆ ಎರಡು ಬಾಂಗ್ಲಾದೇಶೀ ಮೀನುಗಾರಿಕಾ ದೋಣಿಗಳನ್ನು ವಶಕ್ಕೆ ತೆಗೆದುಕೊಳ್ಳಲಾಗಿದೆ ಎಂದು ಅಧಿಕಾರಿಗಳು ಕೋಲ್ಕತದಲ್ಲಿ ತಿಳಿಸಿದರು. 'ಅಲ್ಹಾರ್ ಮಲಿಕ್-2' ಮತ್ತು 'ಅನೊವರ' ದೋಣಿಗಳನ್ನು ಭಾರತದ ಕರಾವಳಿ ಕಾವಲುಪಡೆಯ ನೌಕೆ ಸುಚೇತಾ ಕೃಪಲಾನಿ ವಶಕ್ಕೆ ತೆಗೆದುಕೊಂಡಿತು. ಉಭಯ ದೋಣಿಗಳಲ್ಲಿ ಇದ್ದ ತಲಾ 28 ಮಂದಿ ಮೀನುಗಾರರನ್ನೂ ಸಾಗರ ದ್ವೀಪದಿಂದ ಆಗ್ನೇಯಕ್ಕೆ 63 ನಾಟಿಕಲ್ ಮೈಲು ದೂರದಲ್ಲಿ ವಶಕ್ಕೆ ತೆಗೆದುಕೊಳ್ಳಲಾಯಿತು ಎಂದು ಅವರು ಹೇಳಿದರು. ತಲಾ 1200 ಕಿ.ಗ್ರಾಂ. ಮತ್ತು 1000 ಕಿ.ಗ್ರಾಂ. ಮೀನು ಇದ್ದ ದೋಣಿಗಳನ್ನು ಫಿರೋಜ್​ಗಂಜ್ ಮರೀನ್ ಪೊಲೀಸರ ವಶಕ್ಕೆ ಮುಂದಿನ ಕ್ರಮಕ್ಕಾಗಿ ನೀಡಲಾಯಿತು.. 'ಮೀನುಗಾರರು ಬಾಂಗ್ಲಾದೇಶದ ಚಿತ್ತಗಾಂಗ್ ಬಂದರಿನಿಂದ ಬಂದಿದ್ದಾರೆ ಎಂಬುದು ಪ್ರಾಥಮಿಕ ತನಿಖೆಯಿಂದ ಗೊತ್ತಾಗಿದೆ. ಈ ದೋಣಿಗಳು ಡಿಸೆಂಬರ್ 4ರಂದು ಅಲ್ಲಿಂದ ಹೊರಟಿದ್ದವು. ಒಂದು ವಾರದಲ್ಲಿ ಅವು ವಾಪಸಾಗುವ ನಿರೀಕ್ಷೆ ಇತ್ತು' ಎಂದು ಕರಾವಳಿ ಕಾವಲು ಪಡೆಯ ಡೆಪ್ಯುಟಿ ಇನ್​ಸ್ಪೆಕ್ಟರ್ ಜನರಲ್ ಡಿ.ಆರ್. ಶರ್ಮಾ ನುಡಿದರು. ಅಕ್ರಮ ಮೀನುಗಾರಿಕೆಗಾಗಿ ಅಕ್ಟೋಬರ್​ನಿಂದ ಒಟ್ಟು 106 ಬಾಂಗ್ಲಾದೇಶಿ ಮೀನುಗಾರರನ್ನು ಬಂಧಿಸಿತ್ತು.

2014: ರಾಂಚಿ: ಕಾಶ್ಮೀರದಲ್ಲಿ ಉಗ್ರಗಾಮಿಗಳು ಮೆರೆದ ಅಟ್ಟಹಾಸದಲ್ಲಿ ಹುತಾತ್ಮರಾದ ಲೆಫ್ಟಿನೆಂಟ್ ಕರ್ನಲ್ ಸಂಕಲ್ಪ ಕುಮಾರ್ ಅವರ ಪಾರ್ಥಿವ ಶರೀರದ ಅಂತ್ಯಕ್ರಿಯೆಯನ್ನು ಸಂಪೂರ್ಣ ಸೇನಾ ಗೌರವದೊಂದಿಗೆ ಈದಿನ ರಾಂಚಿಯಲ್ಲಿ ನೆರವೇರಿಸಲಾಯಿತು. ರಾಜ್ಯದ ಹಲವಾರು ಸ್ಥಳಗಳಿಂದ ದೊಡ್ಡ ಪ್ರಮಾಣದಲ್ಲಿ ಆಗಮಿಸಿದ ಜನರ ಸಮೂಹ ಹುತಾತ್ಮ ಯೋಧನಿಗೆ ಹೂವಿನ ಮಳೆಗರೆಯಿತು. ನೂರಾರು ಮಂದಿ ಬೈಕ್ ಸವಾರರು ಪಾರ್ಥಿವ ಶರೀರವನ್ನು ಹಿಂಬಾಲಿಸಿದರು. ರಾಜ್ಯಪಾಲ ಸೈಯದ್ ಅಹಮದ್, ಮುಖ್ಯಮಂತ್ರಿ ಹೇಮಂತ ಸೊರೇನ್, ಕೇಂದ್ರ ಸಚಿವರಾದ ಧರ್ಮೇಂದ್ರ ಪ್ರಧಾನ್, ಜಯಂತ ಸಿನ್ಹ, ಸೇನೆ ಹಾಗೂ ಪೊಲೀಸ್ ಇಲಾಖೆಯ ಹಲವಾರು ಅಧಿಕಾರಿಗಳು ಅಂತ್ಯಕ್ರಿಯೆಯಲ್ಲಿ ಪಾಲ್ಗೊಂಡರು.
2014: ದುಬೈ: ಪಾಕಿಸ್ತಾನದ ಬೌಲರ್ ಮೊಹಮ್ಮದ್ ಹಫೀಜ್ ಬೌಲಿಂಗ್ ಶೈಲಿ ನಿಯಮಬಾಹಿರವಾಗಿರುವುದನ್ನು ಖಚಿತಗೊಳಿಸಿದ ಅಂತಾರಾಷ್ಟ್ರೀಯ ಕ್ರಿಕೆಟ್ ಮಂಡಳಿ ತತ್ ಕ್ಷಣದಿಂದಲೇ ಅವರನ್ನು ಅಮಾನತು ಮಾಡಿತು. ಪರಿಣಾಮ ಐಸಿಸಿ ಅಮಾನತು ತೆರವು ಮಾಡುವ ತನಕ ಹಫೀಜ್ ಐಸಿಸಿ ಮಾನ್ಯತೆಯ ಯಾವುದೇ ಪಂದ್ಯಗಳಲ್ಲಿ ಬೌಲಿಂಗ್ ಮಾಡುವಂತಿಲ್ಲ. ಒಂದೊಮ್ಮೆ ಬೌಲಿಂಗ್ ಮಾಡಬೇಕೆಂದರೂ ಬೌಲಿಂಗ್ ಶೈಲಿಯನ್ನು ತಿದ್ದಿಕೊಂಡು ಐಸಿಸಿಯಿಂದ ಗ್ರೀನ್​ಸಿಗ್ನಲ್ ಪಡೆದುಕೊಳ್ಳಬೇಕು. ಅಮಾನತು ಕ್ರಮ ತಕ್ಷಣದಿಂದಲೇ ಜಾರಿಗೆ ಬರಲಿದೆ ಎಂದು ಐಸಿಸಿ ಪ್ರಕಟಿಸಿತು. ಬೌಲಿಂಗ್ ಶೈಲಿ ಅನುಮಾನಾಸ್ಪದ ವಾಗಿರುವ ಬಗ್ಗೆ ಆಕ್ಷೇಪ ವ್ಯಕ್ತವಾದ ಹಿನ್ನೆಲೆಯಲ್ಲಿ ಐಸಿಸಿ ಹಫೀಜ್ ಬೌಲಿಂಗ್ ಶೈಲಿಯನ್ನು ಪರೀಕ್ಷೆಗೊಳಪಡಿಸಿದಾಗ ನಿಯಮಬಾಹಿರವಾಗಿರುವುದು ಸಾಬೀತಾಗಿತ್ತು. ಕಳೆದ ತಿಂಗಳು ಅಬುಧಾಬಿಯಲ್ಲಿ ನಡೆದ ನ್ಯೂಜಿಲೆಂಡ್ ವಿರುದ್ಧದ ಮೊದಲ ಟೆಸ್ಟ್​ನಲ್ಲಿ ಹಫೀಜ್ ಬೌಲಿಂಗ್ ಶೈಲಿಯ ಬಗ್ಗೆ ದೂರು ನೀಡಲಾಗಿತ್ತು. ಬಳಿಕ ನಂ.24ರಂದು ಇಂಗ್ಲೆಂಡ್​ನಲ್ಲಿರುವ ರಾಷ್ಟ್ರೀಯ ಕ್ರಿಕೆಟ್ ಪರ್ಫಾರ್ಮೆನ್ಸ್ ಸೆಂಟರ್​ನಲ್ಲಿ ಪರೀಕ್ಷೆಗೊಳಪಡಿಸಲಾಗಿತ್ತು.

2014: ಚೆನ್ನೈ: ದೇಹದಲ್ಲಿರುವ ವಿವಿಧ ರೋಗಗಳ ಪತ್ತೆಗೆ ಸಾಮಾನ್ಯವಾಗಿ ವಿವಿಧ ರೀತಿಯ ಸ್ಕ್ಯಾನಿಂಗ್ ಮಾಡಬೇಕಾಗುತ್ತದೆ. ಆದರೆ, ನಾಲಗೆಯಿಂದ ದೇಹದ ಕಾಯಿಲೆಗಳನ್ನು ಗುರುತಿಸುವ ವಿನೂತನ ಪದ್ಧತಿಯೊಂದನ್ನು ಚೆನ್ನೈಯ ಎಂಜಿನಿಯರಿಂಗ್ ಕಾಲೇಜೊಂದರ ಸಹಾಯದಿಂದ ನ್ಯೂರಲ್ ನೆಟ್ವರ್ಕ್ ವ್ಯವಸ್ಥೆಯನ್ನ ರೂಪಿಸಲಾಗಿದ್ದು, ನಾಲಗೆ ಮತ್ತು ಕಣ್ಣಿನ ಪರೀಕ್ಷೆ ಮೂಲಕ ವ್ಯಕ್ತಿಯ ಕೆಲ ರೋಗಗಳನ್ನು ಪತ್ತೆ ಹಚ್ಚಬಹುದು. ವ್ಯಕ್ತಿಯ ನಾಲಗೆಯಲ್ಲಿರುವ ವಿವಿಧ ರೀತಿಯ ವ್ಯತ್ಯಾಸಗಳು ವಿವಿಧ ರೋಗಗಳಿಗೆ ಸೂಚಕವಾಗಿರುತ್ತವೆ. ಉದಾಹರಣೆಗೆ, ನಾಲಗೆಯ ಬಣ್ಣದಲ್ಲಿ ಬದಲಾವಣೆ, ನಾಲಗೆ ತೀರಾ ಮೃದುವಾಗಿರುವುದು, ಬೊಬ್ಬೆಯಾಗಿರುವುದು ಇತ್ಯಾದಿ ಸಂಗತಿಗಳು ವಿವಿಧ ರೋಗಗಳನ್ನು ಸೂಚಿಸುತ್ತವೆ. ನಾಲಗೆಯ ಡಿಜಿಟಲ್ ಫೋಟೋದ ಸಹಾಯದಿಂದ ಹಾಗೂ ರೋಗಿಯ ರೋಗಲಕ್ಷಣಗಳ ಸುಳಿವಿಂದ ತಜ್ಞರು ರೋಗವನ್ನು ಪತ್ತೆಹಚ್ಚಬಹುದು. ಕಣ್ಣಿನಲ್ಲಿನ ವ್ಯತ್ಯಾಸಗಳ ಮೂಲಕವೂ ಒಂದಷ್ಟು ರೋಗವನ್ನು ಪತ್ತೆ ಮಾಡಬಹುದು. ಈ ವ್ಯವಸ್ಥೆಯಿಂದ ಸದ್ಯಕ್ಕೆ 14ಕ್ಕೂ ಹೆಚ್ಚು ರೋಗಗಳನ್ನು ಗುರುತಿಸಬಹುದು.

2014: ನವದೆಹಲಿ: ಕಪ್ಪು ಹಣ ಕುರಿತು ಪ್ರಬಲ ಸಾಕ್ಷಿ ಇರದ ಹೊರತು ಮಾಹಿತಿ ಕೇಳಿಕೊಂಡು ಬರಬೇಡಿ ಎಂದು ಸ್ವಿಟ್ಜರ್ಲೆಂಡ್ ಭಾರತಕ್ಕೆ ಹೇಳಿತು.. ಕಪ್ಪುಹಣ ಕುರಿತಂತೆ ಎಲ್ಲ ಭಾರತೀಯರ ಮಾಹಿತಿ ನೀಡುವಂತೆ ಭಾರತದಿಂದ ಒತ್ತಡ ಹೆಚ್ಚಾಗುತ್ತಿದ್ದಂತೆಯೇ, ಉಲ್ಟಾ ಹೊಡೆದ ಸ್ವಿಟ್ಜರ್ಲೆಂಡ್ ಸರ್ಕಾರ ಆದಾಯ ತೆರಿಗೆ ಅಕ್ರಮದಲ್ಲಿ ಖಾತೆದಾರ ಪಾಲ್ಗೊಂಡಿರುವ ಕುರಿತು ಪ್ರಬಲ ಸಾಕ್ಷಿಯನ್ನು ನೀಡಿದರೆ ಮಾತ್ರ ಭಾರತಕ್ಕೆ ಮಾಹಿತಿ ನೀಡುತ್ತೇವೆ. ಇಲ್ಲವಾದರೆ ಈ ಬಗ್ಗೆ ಮಾತನಾಡಲು ಬರಬೇಡಿ ಎಂದು ಹೇಳಿತು. ಸ್ವಿಸ್ ಸರ್ಕಾರ ರಾಯಭಾರಿ ಲೀನಸ್ ವಾನ್ ಕ್ಯಾಸ್ಟೆಲ್‌ಮಾರ್ ಅವರು, ಗತಕಾಲದ ವಿಚಾರಗಳನ್ನು ಹಿಂದಿರುಗಿಸಲು ಸಾಧ್ಯವಿಲ್ಲ. ಆದರೆ ಕಪ್ಪು ಹಣ ಪ್ರಕರಣಕ್ಕೆ ಸಂಬಂಧಿಸಿದಂತೆ ಭಾರತಕ್ಕೆ ನಾವು ನೀಡಿದ ಭರವಸೆಯಂತೆ ಸಾಕ್ಷ್ಯಾಧಾರಗಳನ್ನು ನೀಡಿದರೆ ಮಾಹಿತಿ ನೀಡುತ್ತೇವೆ ಎಂದು ಹೇಳಿದರು. ಅಂತೆಯೇ ಈ ಹಿಂದೆ ಸ್ವಿಸ್‌ನಲ್ಲಿ ಖಾತೆ ತೆರೆದಿರುವ ಎಲ್ಲ ಖಾತೆದಾರರೂ ತೆರಿಗೆ ವಂಚಕರು ಎಂದು ಹೇಳಲು ಸಾಧ್ಯವಿಲ್ಲ. ಖಾತೆದಾರರ ಖಾತೆಯ ವಿವರಗಳನ್ನು ಗೌಪ್ಯವಾಗಿಡುವುದು ನಮ್ಮ ಕರ್ತವ್ಯ. ಹೀಗಾಗಿಯೇ ನಾವು ಪ್ರಬಲ ಸಾಕ್ಷ್ಯ ನೀಡದ ಹೊರತು ಖಾತೆ ವಿವರಗಳನ್ನು ನೀಡುವುದಿಲ್ಲ ಎಂದು ಲೀನಸ್ ವಾನ್ ಕ್ಯಾಸ್ಟೆಲ್‌ಮಾರ್ ನೇರವಾಗಿ ಹೇಳಿದರು. ಕಪ್ಪು ಹಣ ಪ್ರಕರಣಕ್ಕೆ ಸಂಬಂಧಿಸಿದಂತೆ ಭಾರತ ಸರ್ಕಾರ ಕೈಗೊಂಡ ಕ್ರಮಗಳನ್ನು ನಾವು ಅಭಿನಂದಿಸುತ್ತೇವೆ. ಭಾರತ ಸರ್ಕಾರದೊಂದಿಗೆ ನಾವು ಅತ್ಯುತ್ತಮವಾದ ಸಂಪರ್ಕ ಹೊಂದಿದ್ದೇವೆ. ಅಂತೆಯೇ ವರ್ತಮಾನ ಮತ್ತು ಭವಿಷ್ಯತ್ತಿನಲ್ಲಿ ಭಾರತ ಸರ್ಕಾರಕ್ಕೆ ಎಲ್ಲ ರೀತಿಯ ನೆರವು ನೀಡುತ್ತೇವೆ. ಗತಕಾಲದ ವಿಚಾರಗಳನ್ನು ನಾವು ಮತ್ತೆ ಪುನರ್ ಸೃಷ್ಟಿ ಮಾಡಲು ಸಾಧ್ಯವಿಲ್ಲ ಎಂದು ಲೀನಸ್ ವಾನ್ ಕ್ಯಾಸ್ಟೆಲ್‌ಮಾರ್ ಹೇಳಿದರು.


2008: ಜಾಗತಿಕ ಹಣಕಾಸು ಬಿಕ್ಕಟ್ಟಿನಿಂದ ಕುಸಿಯಲ್ಪಟ್ಟ ದೇಶದ ಆರ್ಥಿಕ ವ್ಯವಸ್ಥೆಯನ್ನು ಸುಧಾರಿಸುವ ನಿಟ್ಟಿನಲ್ಲಿ ಕೇಂದ್ರ ಸರ್ಕಾರವು ನವದೆಹಲಿಯಲ್ಲಿ ಹಲವು 'ಪರಿಹಾರ ಪ್ಯಾಕೇಜ್'ಗಳನ್ನು ಪ್ರಕಟಿಸಿತು. ಮುಖ್ಯವಾಗಿ ಬೇಡಿಕೆ ಹೆಚ್ಚಿಸಲು ಸಂಬಂಧಪಟ್ಟ ಎಲ್ಲ ವಾಣಿಜ್ಯ ರಂಗಗಳಲ್ಲೂ ತೆರಿಗೆ ಕಡಿತ, ರಫ್ತು, ಗೃಹ ನಿರ್ಮಾಣ, ಜವಳಿ ಹಾಗೂ ಮೂಲಭೂತ ಸೌಲಭ್ಯಗಳ ಕ್ಷೇತ್ರಗಳಿಗೆ ಹೆಚ್ಚುವರಿ ಹಣ ಮತ್ತು ಪ್ರೋತ್ಸಾಹಧನ ಮಂಜೂರು ಇತ್ಯಾದಿ ಇವುಗಳಲ್ಲಿ ಸೇರಿವೆ.

2008: ನೀರಾವರಿ ಯೋಜನೆಗಳನ್ನು ಕಾಲಮಿತಿಯೊಳಗೆ ಪೂರ್ಣಗೊಳಿಸುವಂತೆ ಗುತ್ತಿಗೆದಾರರಿಗೆ ಕಟ್ಟಾಜ್ಞೆ ಮಾಡಿದ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ, ಜಲಾಶಯಗಳಿಂದ ಕೆರೆಗಳಿಗೆ ನೀರು ತುಂಬಿಸುವ ಯೋಜನೆಯನ್ನು ರಾಜ್ಯವ್ಯಾಪಿ ವಿಸ್ತರಿಸುವುದಾಗಿ ಪ್ರಕಟಿಸಿದರು. ಕೃಷ್ಣಾ ನದಿಯಿಂದ ವಿಜಾಪುರ ಜಿಲ್ಲೆಯ ಕೆರೆಗಳಿಗೆ ನೀರು ತುಂಬಿಸುವ ಮೊದಲ ಹಂತದ ಯೋಜನೆಗೆ ವಿಜಾಪುರ ತಾಲ್ಲೂಕು ತಿಕೋಟಾದಲ್ಲಿ ಚಾಲನೆ ನೀಡಿ ಅವರು ಮಾತನಾಡಿದರು. 'ಜಲಾಶಯಗಳಿಂದ ಕೆರೆಗಳಿಗೆ ನೀರು ತುಂಬಿಸುವ ದೇಶದ ಮೊದಲ ಯೋಜನೆಯ ಅನುಷ್ಠಾನಕ್ಕೆ ನಮ್ಮ ಸರಕಾರ ದಿಟ್ಟ ಹೆಜ್ಜೆ ಇಟ್ಟಿದೆ. ಸಾಧ್ಯವಿರುವೆಡೆ ಜಲಾಶಯಗಳಿಂದ ಕೆರೆಗಳಿಗೆ ನೀರು ಹರಿಸುತ್ತೇವೆ. ಕಡಿಮೆ ಖರ್ಚಿನ ಈ ಯೋಜನೆಯಿಂದ ಹೆಚ್ಚು ಪ್ರದೇಶಕ್ಕೆ ನೀರಾವರಿಯಾಗಿ, ಕುಡಿಯುವ ನೀರಿನ ಸಮಸ್ಯೆ ನಿವಾರಣೆಯಾಗುತ್ತದೆ. ಜತೆಗೆ ಮೀನುಗಾರಿಕೆಯಿಂದ ಒಂದು ಕೆರೆಯಿಂದ ವಾರ್ಷಿಕ ಒಂದು ಲಕ್ಷ ರೂಪಾಯಿ ಆದಾಯವೂ ಬರುತ್ತದೆ' ಎಂದರು.

2008: ಪೊಲೀಸರಿಗೆ ಮಾಹಿತಿ ನೀಡುತ್ತಿದ್ದರು ಎಂದು ಆರೋಪಿಸಿ ವ್ಯಕ್ತಿಯೊಬ್ಬರನ್ನು ಶಸ್ತ್ರಸಜ್ಜಿತ ನಕ್ಸಲರ ತಂಡವೊಂದು ಗುಂಡಿಕ್ಕಿ ಕೊಂದ ಘಟನೆ ಉಡುಪಿ ಜಿಲ್ಲೆ ಕುಂದಾಪುರ ಸಮೀಪದ ಶಂಕರನಾರಾಯಣ ಠಾಣೆ ವ್ಯಾಪ್ತಿಯ ಹಳ್ಳಿಹೊಳೆ ಗ್ರಾಮದ ಅಕ್ಷರಪಾಲು ಎಂಬಲ್ಲಿ ಸಂಭವಿಸಿತು. ಮೃತ ವ್ಯಕ್ತಿಯನ್ನು ಬಿಜೆಪಿಯ ಸಕ್ರಿಯ ಕಾರ್ಯಕರ್ತ, ಕೃಷಿಕ ಕೇಶವ ಯಡಿಯಾಳ (63) ಎಂದು ಗುರುತಿಸಲಾಯಿತು. ಸಂಜೆ ಸುಮಾರು 6.30ರಿಂದ 7ರ ಮಧ್ಯೆ ಕೇಶವ ಅವರನ್ನು ಮನೆಯಿಂದ ಹೊರಕ್ಕೆ ಎಳೆದು ತಂದ ನಕ್ಸಲ್ ತಂಡ, ಮನೆಯ ಎದುರಿನ ಮರವೊಂದಕ್ಕೆ ಕಟ್ಟಿಹಾಕಿ ಈ ದುಷ್ಕೃತ್ಯ ಎಸಗಿತು. ತಡೆಯಲು ಬಂದ ಅವರ ಪತ್ನಿ ಕಾಂತಿಮತಿ ಮಗ ಉಪೇಂದ್ರ ಅವರ ಮೇಲೂ ನಕ್ಸಲರು ಹಲ್ಲೆ ನಡೆಸಿ ಗಾಯಗೊಳಿಸಿದರು. ನಂತರ ಕೇಶವ ಅವರ ಜೀಪಿಗೆ ಕಿಚ್ಚಿಟ್ಟ ನಕ್ಸಲರು, ಪರಿಸರದಲ್ಲಿ ಕರಪತ್ರಗಳನ್ನು ಎಸೆದು ಪರಾರಿಯಾದರು.

2008: ಒಂದು ತಿಂಗಳಿನಿಂದ ಕಚೇರಿಗೆ ಗೈರು ಹಾಜರಾಗಿದ್ದ ಹರಿಯಾಣದ ಉಪಮುಖ್ಯಮಂತ್ರಿ ಚಂದರ್ ಮೋಹನ್ ಅವರನ್ನು ಸಂಪುಟದಿಂದ ಕೈಬಿಡಲಾಯಿತು. ಮುಸಲ್ಮಾನ ಧರ್ಮಕ್ಕೆ ಮತಾಂತರ ಹೊಂದಿ ತಾವು ಎರಡನೇ ಮದುವೆಯಾಗಿರುವುದಾಗಿ ಚಂದರ್ ಮೋಹನ್ ಹಿಂದಿ ವಾಹಿನಿಯೊಂದರಲ್ಲಿ ಹೇಳಿಕೆ ನೀಡಿದ ಕೆಲ ಗಂಟೆಗಳಲ್ಲಿ ಅವರನ್ನು ಸಂಪುಟದಿಂದ ತೆಗೆದುಹಾಕಲಾಯಿತು. 50 ದಿನಗಳಿಂದ ಅವರು ಸಂಪುಟ ಸಭೆಗೆ ಹಾಜರಾಗಿರಲಿಲ್ಲ.

2008: ಕಾಲ್‌ಸೆಂಟರ್ ಉದ್ಯೋಗಿಗಳು ಸೇರಿದಂತೆ ಬದಲಾಗುವ ಪಾಳಿಗಳಲ್ಲಿ ಕೆಲಸ ಮಾಡುವವರು ಮಧುಮೇಹ ರೋಗಕ್ಕೆ ತುತ್ತಾಗುವ ಸಾಧ್ಯತೆ ಅತ್ಯಂತ ಹೆಚ್ಚು. ವ್ಯಕ್ತಿಯೊಬ್ಬನ ಸಕ್ಕರೆಯ ಮಟ್ಟ ಆತನ ದೇಹದ ಗತಿ ಹಾಗೂ ನಿದ್ರಾ ಸ್ವರೂಪವನ್ನು ಅವಲಂಬಿಸಿರುತ್ತದೆ ಎಂಬುದನ್ನು ನೂತನ ಸಂಶೋಧನೆಯೊಂದು ಪತ್ತೆ ಹಚ್ಚಿತು. ಮಧುಮೇಹ ಹಾಗೂ ರಕ್ತ ಸಕ್ಕರೆಯ ಮಟ್ಟವನ್ನು ನಿದ್ರಾ ಸಮಸ್ಯೆಗೆ ಪರಿಹಾರ ಹುಡುಕುವ ಮೂಲಕ ಸ್ವಲ್ಪ ಮಟ್ಟಿಗೆ ಬಗೆಹರಿಸಲು ಸಾಧ್ಯ ಎಂಬುದು ಇದರಿಂದ ತಿಳಿದು ಬಂದಿತು. 'ಪಾಳಿಗಳಲ್ಲಿ ದುಡಿಯುವ ಮಂದಿ ಬಹುಬೇಗನೇ ರಕ್ತದೊತ್ತಡ ಹಾಗೂ ಮಧುಮೇಹಕ್ಕೆ ಗುರಿಯಾಗುವುದಕ್ಕೆ ಒತ್ತಡ ಕಾರಣ ಎಂದು ವೈದ್ಯರು ಸಾಮಾನ್ಯವಾಗಿ ಹೇಳುತ್ತಾರೆ. ಆದರೆ ಇದಕ್ಕೆ ಬದಲಾಗುವ ದೇಹದ ಗತಿ ಕಾರಣವಾಗಿರುವ ಸಾಧ್ಯತೆ ಅಧಿಕ' ಎಂದು ಸಂಶೋಧಕರಲ್ಲಿ ಒಬ್ಬರಾದ ಫಿಲಿಪ್ ಫ್ರೋಗ್ಯುಯೆಲ್ ಸುದ್ದಿಸಂಸ್ಥೆಗೆ ನೀಡಿರುವ ಇ- ಮೇಲ್ ಸಂದರ್ಶನದಲ್ಲಿ ಎಚ್ಚರಿಸಿದರು.

2007: ಹವ್ಯಾಸಿ ಸಿನಿಮಾ ನಿರ್ದೇಶಕಿ ಜಿ.ಡಿ.ಜಯಲಕ್ಷ್ಮಿ ಅವರ `ಪೇಪರ್! ಪೇಪರ್!' ಚಿತ್ರ 2007ನೇ ಸಾಲಿನ ಕಾಮನ್ ವೆಲ್ತ್ ಪ್ರಶಸ್ತಿಯ ಪ್ರಮುಖ ಬಹುಮಾನ ಗಳಿಸಿಕೊಂಡಿತು. ಕಾಗದದ ಪುನರ್ ಬಳಕೆ ಕುರಿತು 90 ನಿಮಿಷಗಳ ಈ ಚಿತ್ರವನ್ನು ನಿರ್ಮಿಸಲಾಗಿದೆ. `ಯಾವುದೇ ವಸ್ತುವನ್ನು ವ್ಯರ್ಥ ಮಾಡಬಾರದು, ಎಲ್ಲಾ ವಸ್ತುಗಳನ್ನು ಬಳಸಿಕೊಳ್ಳುವ ಮೂಲಕ ರಕ್ಷಿಸಬೇಕು ಎಂಬ ಭಾರತದ ಸಾಂಪ್ರದಾಯಿಕ ಮೌಲ್ಯಗಳಿಗೆ ಸಂಕೇತವಾಗಿ ಈ ಚಿತ್ರ ನಿಲ್ಲುತ್ತದೆ. ಹನ್ನೊಂದು ವರ್ಷ ಇಂಗ್ಲೆಂಡಿನ ಬಿಬಿಸಿಯಲ್ಲಿ ಕಾರ್ಯ ನಿರ್ವಹಿಸಿದ ಬಳಿಕ ಏಳು ವರ್ಷಗಳಿಂದ ಹವ್ಯಾಸಿ ಚಲನಚಿತ್ರ ನಿರ್ಮಾಪಕಿಯಾಗಿರುವ ಜಯಲಕ್ಷ್ಮಿ ಈ ಚಿತ್ರದ ನಿರ್ಮಾಪಕಿ ಮತ್ತು ನಿರ್ದೇಶಕಿ ಕೂಡ ಆಗಿದ್ದಾರೆ.

2007: ಬೆಂಗಳೂರಿನ ಹೆಬ್ಬಾಳದ ಕೊಲಂಬಿಯಾ ಏಷ್ಯಾ ಆಸ್ಪತ್ರೆಯಲ್ಲಿ ಲ್ಯಾಪ್ರೊಸ್ಕೋಪಿಕ್ ವಿಧಾನದ ಮೂಲಕ ಮೂತ್ರಪಿಂಡವನ್ನು (ಕಿಡ್ನಿ) ಯಶಸ್ವಿಯಾಗಿ ಕಸಿ ಮಾಡಲಾಯಿತು. `ಲ್ಯಾಪ್ರೊಸ್ಕೋಪಿ' ಎಂದರೆ ಶರೀರದಲ್ಲಿ ಚಿಕ್ಕ ರಂಧ್ರ ಕೊರೆದು, ಅದರ ಮೂಲಕ ಶಸ್ತ್ರಚಿಕಿತ್ಸೆ ನಡೆಸುವ ವಿಧಾನ. ಅರ್ಧ ಇಂಚೂ ಇಲ್ಲದ ಚಿಕ್ಕ ಉಪಕರಣವನ್ನು ರಂಧ್ರದ ಮೂಲಕ ಹಾಯಿಸಿ, ರಕ್ತನಾಳಗಳನ್ನು ಬಿಡಿಸಿ ಕಿಡ್ನಿಯನ್ನು ತೆಗೆಯಲಾಗುತ್ತದೆ. ಆಸ್ಪತ್ರೆಯ ಮೂತ್ರಪಿಂಡ ತಜ್ಞ ಡಾ. ಟಿ.ಮನೋಹರ್ ಅವರು ಈ ವಿಧಾನವನ್ನು ಬಳಸಿ ಕಿಡ್ನಿ ಕಸಿ ಮಾಡುವಲ್ಲಿ ಯಶಸ್ವಿಯಾಗಿದ್ದಾರೆ ಎಂದು ಆಸ್ಪತ್ರೆ ಈದಿನ ಪ್ರಕಟಿಸಿತು. ಸಾಮಾನ್ಯವಾಗಿ, ತೆರೆದ ಶಸ್ತ್ರಚಿಕಿತ್ಸೆ ಮೂಲಕ ಕಿಡ್ನಿಯನ್ನು ತೆಗೆದು ಅವಶ್ಯವಿರುವ ವ್ಯಕ್ತಿಗೆ ಕಸಿ ಮಾಡಲಾಗುತ್ತದೆ. ಆದರೆ ಇದು ಕ್ಲಿಷ್ಟಕರವಾದ ಕಾರಣ ಕಿಡ್ನಿ ದಾನಕ್ಕೆ ಹೆಚ್ಚಿನವರು ಹಿಂದೇಟು ಹಾಕುತ್ತಿದ್ದರು. ಈಗ ಈ ಹೊಸ ವಿಧಾನ ಮೂತ್ರಪಿಂಡ ರೋಗಿಗಳಿಗೆ ಆಶಾಕಿರಣವಾಗಿದ್ದು, ರಾಜ್ಯದ ಮಟ್ಟಿಗೆ ಇದು ಅಪರೂಪದ ಸಾಧನೆ ಎಂದು ಎನ್ನಲಾಗಿದೆ. ಈ ವಿಧಾನದಲ್ಲಿ ಉದರದ ಭಿತ್ತಿಯ ಮೂಲಕ ಪುಟ್ಟ ನಳಿಕೆಯನ್ನು ಹಾಯಿಸಲಾಗುತ್ತದೆ. ಇದರಿಂದ ಶಸ್ತ್ರಚಿಕಿತ್ಸೆಗೆ ಅಗತ್ಯವಾದ ಉಪಕರಣಗಳ ಚಲನೆಗೆ ಅನುಕೂಲವಾಗುತ್ತದೆ. ಲ್ಯಾಪ್ರೊಸ್ಕೋಪ್ ಜತೆಗೆ ಹೊಂದಿಕೊಂಡಿರುವ ವಿಡಿಯೋ ಕ್ಯಾಮೆರಾದ ಮೂಲಕ ಉದರದೊಳಗೆ ನಡೆಯುವ ಚಟುವಟಿಕೆಗಳನ್ನು ಪರದೆಯಲ್ಲಿ ವೀಕ್ಷಿಸಬಹುದು. ಹೊಟ್ಟೆಯ ಇನ್ನೊಂದು ಬದಿ ಮಾಡಲಾಗಿರುವ ಎರಡೂವರೆ ಇಂಚಿನ ತೂತಿನ ಮೂಲಕ ಕಿಡ್ನಿಯನ್ನು ತೆಗೆಯಲಾಗುತ್ತದೆ. ಈ ವಿಧಾನದಲ್ಲಿ ಕಿಡ್ನಿಯ ದಾನಿ ಕೇವಲ ಎರಡು ದಿನಗಳ ಕಾಲ ಆಸ್ಪತ್ರೆಯಲ್ಲಿ ಇದ್ದರೆ ಸಾಕು. ಒಂದೆರಡು ವಾರಗಳಲ್ಲಿಯೇ ಅವರು ತಮ್ಮ ದೈನಂದಿನ ಕೆಲಸಗಳಲ್ಲಿ ತೊಡಗಬಹುದು ಎಂಬುದು ಆಸ್ಪತ್ರೆಯ ವಿವರಣೆ.

2007: ಕಂಪ್ಯೂಟರ್ ಕಲಿಕೆಗೆ, ಕಾರ್ಯನಿರ್ವಹಣೆಗೆ ಇಂಗ್ಲಿಷ್ ಜ್ಞಾನ ಕಡ್ಡಾಯ ಎಂಬ ಭಾವನೆ ಜನಸಾಮಾನ್ಯರಲ್ಲಿದೆ. ಆದರೆ, ಇಂಗ್ಲಿಷ್ ಗಂಧಗಾಳಿಯಿಲ್ಲದ ಭಾರತೀಯರು ಕಂಪ್ಯೂಟರಿನಲ್ಲಿ ಕೆಲಸ ಮಾಡಬಲ್ಲ ಸಾಫ್ಟವೇರನ್ನು ಇಸ್ರೇಲಿ ಕಂಪೆನಿಯ ಸಹಭಾಗಿತ್ವದಲ್ಲಿ ಭಾರತೀಯ ಸಂಸ್ಥೆಯೊಂದು ಸಿದ್ಧಪಡಿಸಿತು. ಮಾಹಿತಿ ತಂತ್ರಜ್ಞಾನ ಸಚಿವಾಲಯದ ವ್ಯಾಪ್ತಿಯಲ್ಲಿ ಬರುವ ಸಿ-ಡಾಕ್ (ಅತ್ಯಾಧುನಿಕ ಕಂಪ್ಯೂಟರ್ ತಂತ್ರಜ್ಞಾನ ಅಭಿವೃದ್ಧಿ ಕೇಂದ್ರ) ಹಾಗೂ ಇಸ್ರೇಲಿನ `ಎಫ್ ಟಿ ಕೆ ಟೆಕ್ನಾಲಜೀಸ್' ಜೊತೆಯಾಗಿ ಈ ಹೊಸ ಸಾಫ್ಟವೇರ್ ಸಿದ್ಧಪಡಿಸಿವೆ. ಇಸ್ರೇಲ್ ರಾಜಧಾನಿ ಟೆಲ್ ಅವೀವಿನಲ್ಲಿ ಈದಿನ ಈ ಸಾಫ್ಟವೇರನ್ನು ವಿಧ್ಯುಕ್ತವಾಗಿ ಬಿಡುಗಡೆ ಮಾಡಲಾಯಿತು. ಸಾಫ್ಟವೇರಿನ ಮೊದಲ ಪ್ರತಿಯನ್ನು ಇಸ್ರೇಲಿನಲ್ಲಿ ಭಾರತದ ರಾಯಭಾರಿಯಾಗಿರುವ ಅರುಣ್ ಕುಮಾರ್ ಸಿಂಗ್ ಅವರಿಗೆ ನೀಡಲಾಯಿತು. ಭಾರತದಲ್ಲಿ ಇಂಗ್ಲಿಷ್ ತಿಳಿದವರು ಕೇವಲ ಶೇ 10 ಜನ ಮಾತ್ರ. ಉಳಿದ ಶೇ 90 ಜನರಿಗೆ ಮಾಹಿತಿ ತಂತ್ರಜ್ಞಾನದ ಲಾಭ ಮುಟ್ಟಿಸಲು ಈ ಸಾಫ್ಟವೇರ್ ನೆರವಾಗಲಿದೆ ಎಂಬುದು `ಎಫ್ ಟಿ ಕೆ ಟೆಕ್ನಾಲಜೀಸ್' ಮುಖ್ಯಸ್ಥ ಹಾರೆಲ್ ಕೊಹೆನ್ ಅಭಿಪ್ರಾಯ. ಈ ಹೊಸ ಸಾಫ್ಟವೇರ್ 3,000 ರೂಪಾಯಿಗೆ ಲಭ್ಯವಾಗಲಿದೆ. ಸದ್ಯಕ್ಕೆ ಕನ್ನಡ, ಹಿಂದಿ, ಬಂಗಾಳಿ, ತೆಲುಗು, ತಮಿಳು, ಮಲಯಾಳಂ, ಮರಾಠಿ, ಉರ್ದು ಹಾಗೂ ಪಂಜಾಬಿ ಭಾಷೆಯ ಜನ ಈ ಸಾಫ್ಟವೇರ್ ಬಳಸಬಹುದು. 2009ರ ಹೊತ್ತಿಗೆ ಭಾರತದಲ್ಲಿ ಅಧಿಕೃತವಾಗಿ ಮನ್ನಣೆ ಪಡೆದ ಎಲ್ಲ ಭಾಷೆಗಳಲ್ಲೂ ಈ ಸಾಫ್ಟವೇರ್ ಲಭ್ಯವಾಗಲಿದೆ ಎಂದು ಅವರು ತಿಳಿಸಿದರು.

2007: ಬಹುಕೋಟಿ ಮೇವು ಹಗರಣಕ್ಕೆ ಸಂಬಂಧಿಸಿದಂತೆ ಸಿಬಿಐ ವಿಶೇಷ ನ್ಯಾಯಾಲಯವು 64 ಆರೋಪಿಗಳಿಗೆ ಶಿಕ್ಷೆ ವಿಧಿಸಿತು. 24 ಆರೋಪಿಗಳಿಗೆ 3ರಿಂದ 6 ವರ್ಷ ಜೈಲು ಶಿಕ್ಷೆ ವಿಧಿಸಿ ನ್ಯಾಯಾಲಯ ರಾಂಚಿಯಲ್ಲಿ ತೀರ್ಪು ನೀಡಿತು. ಉಳಿದ ಆರೋಪಿಗಳಿಗೆ ಡಿಸೆಂಬರ್ 12 ರಂದು ಶಿಕ್ಷೆಯ ಪ್ರಮಾಣವನ್ನು ಪ್ರಕಟಿಸುವುದಾಗಿ ನ್ಯಾಯಾಲಯ ಹೇಳಿತು. ಬಹುಕೋಟಿ ಮೇವು ಹಗರಣಕ್ಕೆ ಸಂಬಂಧಿಸಿದಂತೆ ದಾಖಲಾಗಿರುವ ಒಟ್ಟು 53 ಪ್ರಕರಣಗಳಲ್ಲಿ 23 ಪ್ರಕರಣಗಳು ಇತ್ಯರ್ಥವಾದವು.

2007: ಇರಾಕಿನ ದಯಾಲ್ ಪ್ರಾಂತ್ಯದ ಮುಕದ್ದಿಯಾ ಅಲ್ ಖೈದಾ ಸಂಘಟನೆ ವಿರುದ್ಧ ರಚಿಸಲಾದ ಜಾಗೃತ ಗುಂಪಿನ ಕಚೇರಿಯ ಮೇಲೆ ಆತ್ಮಾಹುತಿ ದಳದ ಮಹಿಳೆಯೊಬ್ಬಳು ದಾಳಿ ನಡೆಸಿದ್ದರಿಂದ 16 ಮಂದಿ ಮೃತರಾಗಿ, 27 ಜನ ಗಾಯಗೊಂಡರು. ಕಚೇರಿಗೆ ಬಂದ ಆತ್ಮಾಹುತಿ ದಳದ ಈ ಮಹಿಳೆ ತನ್ನ ಕೋಟಿನಲ್ಲಿ ಇಟ್ಟಿದ್ದ ಬಾಂಬನ್ನು ಸ್ಪೋಟಿಸಿದಳು.

2007: ದೇವನಹಳ್ಳಿ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಬೆಂಗಳೂರು ನಗರದ ಮಹಾತ್ಮ ಗಾಂಧಿ ರಸ್ತೆಯ ಬಿ. ಆರ್. ವಿ. ಪೆರೇಡ್ ಮೈದಾನದಿಂದ ಎತ್ತರಿಸಿದ (ಎಲಿವೆಟೆಡ್) ರೈಲುಮಾರ್ಗ ನಿರ್ಮಿಸುವುದರಿಂದ ಎಂ.ಜಿ.ರಸ್ತೆಯಲ್ಲಿ ಆಗುವ ಸಂಚಾರ ದಟ್ಟಣೆ ಬಗ್ಗೆ ವರದಿ ಸಲ್ಲಿಸುವಂತೆ ಸರ್ಕಾರವು ನಗರ ಸಂಚಾರ ಪೊಲೀಸರಿಗೆ ಸೂಚನೆ ನೀಡಿತು.

2006: ಉತ್ತರಾಂಚಲವನ್ನು ಉತ್ತರ ಖಂಡ ಎಂಬುದಾಗಿ ಪುನರ್ ನಾಮಕರಣ ಮಾಡುವ ಮಸೂದೆಗೆ ಸಂಸತ್ತು ಅಂಗೀಕಾರ ನೀಡಿತು. ಮಸೂದೆಗೆ ಲೋಕಸಭೆ ಡಿಸೆಂಬರ್ 5ರಂದು ಒಪ್ಪಿಗೆ ನೀಡಿತ್ತು. ಲೋಕಸಭೆ ಈದಿನ ಮಸೂದೆಗೆ ಅಂಗೀಕಾರ ನೀಡಿತು.

2006: ತಮಿಳುನಾಡು ಮಾಜಿ ಮುಖ್ಯಮಂತ್ರಿ ಎಐಎಡಿಎಂಕೆ ಸ್ಥಾಪಕ ದಿವಂಗತ ಎಂ.ಜಿ. ರಾಮಚಂದ್ರನ್ ಪ್ರತಿಮೆಯನ್ನು ಸಂಸತ್ ಭವನದ ಆವರಣದಲ್ಲಿ ಅನಾವರಣಗೊಳಿಸಲಾಯಿತು. ಭಾರತದಲ್ಲಿ ಕಮ್ಯೂನಿಸ್ಟ್ ಚಳವಳಿಯ ನೇತಾರರಾಗಿದ್ದ ಭೂಪೇಶ್ ಗುಪ್ತಾ ಪ್ರತಿಮೆಯನ್ನೂ ಇದೇ ಸಂದರ್ಭದಲ್ಲಿ ಲೋಕಸಭಾಧ್ಯಕ್ಷ ಸೋಮನಾಥ ಚಟರ್ಜಿ ಅನಾವರಣಗೊಳಿಸಿದರು.

2006: ಕರ್ನಾಟಕದಲ್ಲಿ ವಿಧಾನಸಭೆಗೆ ಈವರೆಗೆ ನಡೆದ ಮರು ಚುನಾವಣೆಗಳಲ್ಲಿ ಅತೀ ಕಡಿಮೆ ಮತಗಳ ಅಂತರದಲ್ಲಿ (257 ಮತಗಳು) ಗೆಲುವು ಸಾಧಿಸಿದ ಕೀರ್ತಿಗೆ ಮಾಜಿ ಮುಖ್ಯಮಂತ್ರಿ, ಕಾಂಗ್ರೆಸ್ ಅಭ್ಯರ್ಥಿ ಸಿದ್ದರಾಮಯ್ಯ ಭಾಜನರಾದರು. ಪ್ರತಿಷ್ಠಿತ ಚಾಮುಂಡೇಶ್ವರಿ ಮತಕ್ಷೇತ್ರದಲ್ಲಿ ಜೆಡಿಎಸ್ ನ ಶಿವಬಸಪ್ಪ ಅವರನ್ನು ಸಿದ್ದರಾಮಯ್ಯ ಪರಾಭವಗೊಳಿಸಿದರು. 1983ರಲ್ಲಿ ರಾಮಕೃಷ್ಣ ಹೆಗಡೆ ಮುಖ್ಯಮಂತ್ರಿಯಾಗಿ ಕನಕಪುರ ಕ್ಷೇತ್ರದಿಂದ ಸ್ಪರ್ಧಿಸಿದ್ದಾಗ 24,000ಕ್ಕೂ ಅಧಿಕ ಮತಗಳ ಅಂತರದಿಂದ ಜಯಿಸಿದ್ದುದು ಒಂದು ದಾಖಲೆಯಾಗಿತ್ತು.

2005: ಚೀನಾದ ತಂಗ್ಷಾನ್ ಕಲ್ಲಿದ್ದಲು ಗಣಿಯಲ್ಲಿ ಸಂಭವಿಸಿದ ಅನಿಲ ಸ್ಫೋಟದಲ್ಲಿ ಕನಿಷ್ಠ 74 ಕಾರ್ಮಿಕರು ಮೃತರಾಗಿ ಹಲವರು ಗಾಯಗೊಂಡರು. ಸುಮಾರು 30 ಮಂದಿ ಕಣ್ಮರೆಯಾದರು.

1981: ನ್ಯಾಟೋ ಕೂಟದ ಸದಸ್ಯನಾಗಿ ಸ್ಪೇನ್ ದೇಶವು ಸೇರ್ಪಡೆಗೊಂಡಿತು.

1980: ಆಧುನಿಕ ಕನ್ನಡ ಸಾಹಿತ್ಯ ಕ್ಷೇತ್ರದಲ್ಲಿ ವಿಡಂಬನೆಗೆ ಹೊಸ ಆಯಾಮವನ್ನು ಸೃಷ್ಟಿಸಿದ ಬಿಚ್ಚು ಮನಸ್ಸಿನ ಧೀಮಂತ ಸಾಹಿತಿ ಬಳ್ಳಾರಿಯ ಬೀಚಿ ಬೆಂಗಳೂರಿನಲ್ಲಿ ನಿಧನರಾದರು.

1955: ಬ್ರಿಟನ್ನಿನ ಲೇಬರ್ ಪಾರ್ಟಿ ನಾಯಕತ್ವಕ್ಕೆ ಕ್ಲೆಮೆಂಟ್ ಅಟ್ಲಿ ರಾಜೀನಾಮೆ ನೀಡಿದರು. ಕಳೆದ 20 ವರ್ಷಗಳಿಂದ ಅಟ್ಲಿ ಲೇಬರ್ ಪಾರ್ಟಿಯ ನಾಯಕರಾಗಿದ್ದರು.

1946: ಸಾಹಿತಿ ಡಾ. ಕೆ.ಎಂ. ರಾಘವ ನಂಬಿಯಾರ್ ಜನನ.

1945: ಸಾಹಿತಿ, ಚಿತ್ರ ಕಲಾವಿದ, ನಾಟಕಕಾರ ಹೀಗೆ ಬಹುಮುಖ ಪ್ರತಿಭೆಯ ಪಿ.ಆರ್. ಆಚಾರ್ಯ (ಆರ್ಯ) ಅವರು ಪಿ. ವಿಠಲಾಚಾರ್ಯ- ರುಕ್ಮಿಣಿ ದಂಪತಿಯ ಮಗನಾಗಿ ಉಡುಪಿಯಲ್ಲಿ ಜನಿಸಿದರು.

1941: ಜಪಾನಿನ ಯುದ್ಧ ವಿಮಾನಗಳು ಪರ್ಲ್ ಬಂದರಿನಲ್ಲಿ ಅಮೆರಿಕಾದ ಪೆಸಿಫಿಕ್ ಪಡೆ ಮೇಲೆ ದಾಳಿ ನಡೆಸಿದವು. ಈ ಕೃತ್ಯವು ಎರಡನೇ ವಿಶ್ವಸಮರಕ್ಕೆ ಪ್ರವೇಶಿಸಲು ಅಮೆರಿಕಾಕ್ಕೆ ಪ್ರೇರಣೆ ನೀಡಿತು.

1937: ಸರ್ ರೋಗರ್ ಲ್ಯೂಮ್ ಲೇ ಅವರು ಅಧಿಕೃತವಾಗಿ ಬಾಂಬೆಯಲ್ಲಿ (ಈಗಿನ ಮುಂಬೈ) ಬ್ರಾಬೋರ್ನ್ ಸ್ಟೇಡಿಯಮ್ಮನ್ನು ಉದ್ಘಾಟಿಸಿದರು. (ಲಾರ್ಡ್ ಬ್ರಾಬೋರ್ನ್ ಅವರು ಈ ವೇಳೆಗೆ ಮುಂಬೈ ಬಿಟ್ಟಿದ್ದರು. ಹಾಗೂ ಬಂಗಾಳದ ಗವರ್ನರ್ ಆಗಿ ಅಧಿಕಾರ ವಹಿಸಿಕೊಂಡಿದ್ದರು. ಇವರ ಹೆಸರಿನಲ್ಲೇ ಈ ಸ್ಟೇಡಿಯಮ್ಮನ್ನು ಸ್ಥಾಪಿಸಲಾಯಿತು).

1935: ಸಾಹಿತಿ ಇಂದಿರಾಕೃಷ್ಣ ಜನನ.

1856: ಈಶ್ವರಚಂದ್ರ ವಿದ್ಯಾಸಾಗರ ಅವರು ಮೊತ್ತ ಮೊದಲ ವಿಧವಾ ಪುನರ್ ವಿವಾಹವನ್ನು ಏರ್ಪಡಿಸಿದರು. ಬಾಲವಿಧವೆ ಕಾಳಿಮತಿ ದೇವಿ ಮತ್ತು ಸಿರಿಸ್ ಚಂದ್ರ ವಿದ್ಯಾರತ್ನ ಅವರ ಮದುವೆ ನಡೆಯಿತು. (1856ರ ಹಿಂದು ಪುನರ್ ವಿವಾಹ ಕಾಯ್ದೆಯ ಅಡಿಯಲ್ಲಿಹಿಂದು ವಿಧವೆಯರ ಮರು ಮದುವೆಗೆ ಅವಕಾಶ ಕಲ್ಪಿಸುವ ಕಾನೂನನ್ನು ಲಾರ್ಡ್ ಕ್ಯಾನಿಂಗ್ 1856ರ ಜುಲೈ ತಿಂಗಳಲ್ಲಿ ಜಾರಿಗೆ ತಂದಿದ್ದ.).

1783: ವಿಲಿಯಂ ಪಿಟ್ ಅವರು ಬ್ರಿಟನ್ನಿನ ಪ್ರಧಾನಿಯಾದರು. 24 ವರ್ಷ ವಯಸ್ಸಿನ ಅವರು ಬ್ರಿಟನ್ನಿನ ಅತ್ಯಂತ ಕಿರಿಯ ಪ್ರಧಾನಿ ಎಂಬ ಹೆಗ್ಗಳಿಕೆಗೆ ಭಾಜನರಾದರು.

1782: ಮುಸ್ಲಿಂ ದೊರೆ ಮೈಸೂರಿನ ಹೈದರಾಲಿ ಚಿತ್ತೂರು ಸಮೀಪದ ಶಿಬಿರವೊಂದರಲ್ಲಿ ಅಸು ನೀಗಿದ. ಫಿರಂಗಿ ಹಾಗೂ ಬಯೋನೆಟ್ಟುಗಳನ್ನು ಹೊಂದಿದ ಮೊತ್ತ ಮೊದಲ ಭಾರತೀಯ ಸೇನಾಪಡೆ ಕಟ್ಟಿದ ಹೆಗ್ಗಳಿಕೆ ಈತನದು.

Saturday, January 2, 2010

ಇಂದಿನ ಇತಿಹಾಸ History Today ಡಿಸೆಂಬರ್ 06

ಇಂದಿನ ಇತಿಹಾಸ

ಡಿಸೆಂಬರ್ 06


ಮುಂಬೈ ಮೇಲೆ ಭಯೋತ್ಪಾದಕರು ನಡೆಸಿದ ಭಾರಿ ವಿಧ್ವಂಸಕ ದಾಳಿಯಲ್ಲಿ ಪಾಕಿಸ್ಥಾನದಲ್ಲಿನ ಉಗ್ರಗಾಮಿ ಸಂಘಟನೆಗಳ ಕೈವಾಡದ ಬಗ್ಗೆ ತಳ್ಳಿಹಾಕಲಾಗದಂತಹ ಸಾಕ್ಷ್ಯಾಧಾರಗಳು ಇರುವುದರಿಂದ ಅಲ್ಲಿನ ಸರ್ಕಾರ ಸೂಕ್ತ ಕ್ರಮ ಕೈಗೊಳ್ಳಲು ವಿಫಲವಾದರೆ, ಸ್ವತಃ ಕಾರ್ಯಾಚರಣೆಗೆ ಇಳಿಯಬೇಕಾದೀತು ಎಂದು ಅಮೆರಿಕವು ಪಾಕಿಸ್ಥಾನಕ್ಕೆ ತಾಕೀತು ಮಾಡಿತು. ಅಮೆರಿಕದ ವಿದೇಶಾಂಗ ಕಾರ್ಯದರ್ಶಿ ಕಾಂಡೋಲಿಸಾ ರೈಸ್ ಅವರು ಇಸ್ಲಾಮಾಬಾದಿಗೆ ನೀಡಿದ್ದ ಭೇಟಿ ಸಂದರ್ಭದಲ್ಲಿ ಈ ಎಚ್ಚರಿಕೆ ನೀಡಿದರು ಎಂದು ಪಾಕಿಸ್ಥಾನದ ಪ್ರಭಾವಿ ದಿನಪತ್ರಿಕೆ 'ಡಾನ್' ವರದಿ ಮಾಡಿತು.

2014: ನವದೆಹಲಿ: ಜಮ್ಮು ಕಾಶ್ಮೀರ ಚುನಾವಣೆ ವಿಫಲಗೊಳಿಸುವ ಉದ್ದೇಶದಿಂದ 2014ರ ಡಿಸೆಂಬರ್ 5ರಂದು  ಒಂದೇ ದಿನ ನಾಲ್ಕು ಕಡೆ ದಾಳಿ ನಡೆಸಿ 11 ಜನರನ್ನು ಬಲಿ ಪಡೆದ ಪಾಕ್ ಪ್ರೇರಿತ ಉಗ್ರರ ಮತ್ತೊಂದು ಸಂಚು ಬಯಲಾಯಿತು. ಜ. 26ರಂದು ನಡೆಯುವ ಗಣರಾಜ್ಯೊತ್ಸವ ಕಾರ್ಯಕ್ರಮದಲ್ಲಿ ಅಮೆರಿಕ ಅಧ್ಯಕ್ಷ ಬರಾಕ್ ಒಬಾಮ ಭಾಗವಹಿಸದಂತೆ ತಡೆಯಲು ಉಗ್ರ ಸಂಘಟನೆಗಳು ಶತಾಯಗತಾಯ ಯತ್ನಿಸುತ್ತಿವೆ ಎಂಬ ಅಂಶವನ್ನು ಕೇಂದ್ರ ಗುಪ್ತಚರ ದಳ ಹೊರಹಾಕಿತು. ಮುಂದಿನ ಕೆಲ ದಿನಗಳಲ್ಲಿ ದೆಹಲಿ, ಬೆಂಗಳೂರು ಸೇರಿದಂತೆ ದೇಶದ ಮಹಾನಗರಗಳಲ್ಲಿ ಭಾರಿ ಹಿಂಸಾಚಾರ ಸೃಷ್ಟಿಸಿ, ಭದ್ರತಾ ಆತಂಕ
ಉಂಟು ಮಾಡಿದರೆ ಒಬಾಮ ಭೇಟಿ ರದ್ದಾಗುತ್ತದೆ ಎಂಬುದು ಲಷ್ಕರ್ ಉಗ್ರರ ಯೋಜನೆ. ಹಲವು ಉಗ್ರ ಸಂಘಟನೆಗಳೂ ಈ ಯೋಜನೆಗೆ ಕೈ ಜೋಡಿಸಿವೆ. ಇದಕ್ಕಾಗಿ 26/11ರ ಮುಂಬೈ ಮಾದರಿಯ ದಾಳಿ ನಡೆಸಲು ಉಗ್ರರು ಸಿದ್ಧತೆ ನಡೆಸಿದ್ದಾರೆ ಎಂಬ ಮಾಹಿತಿಯೂ ಲಭ್ಯವಾಯಿತು. ಈ ವಿಷಯ ಬೆಳಕಿಗೆ ಬರುತ್ತಲೇ ದೆಹಲಿಯಲ್ಲಿ ಕಟ್ಟೆಚ್ಚರ ಘೋಷಿಸಲಾಯಿತು. ಬೆಂಗಳೂರು, ಮುಂಬೈ, ಚೆನ್ನೈ ಸೇರಿದಂತೆ ಹಲವು ಮಹಾನಗರಗಳಲ್ಲಿ ತೀವ್ರ ನಿಗಾ ವಹಿಸಲಾಯಿತು. ಭದ್ರತೆ ಕುರಿತು ದೆಹಲಿ ಪೊಲೀಸ್ ಮಹಾನಿರ್ದೇಶಕರ ನೇತೃತ್ವದಲ್ಲಿ ಉನ್ನತ ಮಟ್ಟದ ಸಭೆ ನಡೆಯಿತು. ತನಿಖಾ ಸಂಸ್ಥೆಗಳು, ಗುಪ್ತಚರ ಇಲಾಖೆ ಹಿರಿಯ ಅಧಿಕಾರಿಗಳು ಇದರಲ್ಲಿ ಭಾಗವಹಿಸಿದವು. ಮುನ್ನೆಚ್ಚರಿಕೆ ಕ್ರಮಗಳ ಕುರಿತು ವಿಸõತವಾಗಿ ರ್ಚಚಿಸಲಾಯಿತು. ದೆಹಲಿಯ ರೈಲ್ವೆ ಹಾಗೂ ವಿಮಾನ ನಿಲ್ದಾಣ, ರಾಷ್ಟ್ರಪತಿ ಭವನ, ಸಂಸತ್, ಮೆಟ್ರೋ ನಿಲ್ದಾಣ, ಇಂಡಿಯಾ ಗೇಟ್ ಮತ್ತಿತರ ಕಡೆ ಬಿಗಿ ಬಂದೋಬಸ್ತ್ ಕೈಗೊಳ್ಳಲು ನಿರ್ಧರಿಸಲಾಯಿತು. ಸೂಕ್ಷ್ಮ ಪ್ರದೇಶಗಳಲ್ಲಿ ಅಣಕು ಕಾರ್ಯಾಚರಣೆ ನಡೆಸುವ ಮೂಲಕ ಭದ್ರತಾ ವ್ಯವಸ್ಥೆ ಬಲ ಪಡಿಸಲು ನಿರ್ಣಯ ಕೈಗೊಳ್ಳಲಾಯಿತು.. ಒಬಾಮ ಭೇಟಿ ಸಂದರ್ಭದಲ್ಲಿ ಕೈಗೊಳ್ಳಬೇಕಾದ ರಕ್ಷಣಾ ವ್ಯವಸ್ಥೆ ಕುರಿತು ಇದೇ ವೇಳೆ ರ್ಚಚಿಸಲಾಯಿತು. ದೆಹಲಿಯ 5 ಪ್ರಮುಖ ಪ್ರದೇಶದಲ್ಲಿ 289 ಸಿಸಿಟಿವಿ ಕ್ಯಾಮರಾಗಳನ್ನು ಅಳವಡಿಸಲು ಕೇಂದ್ರ ಗೃಹ ಸಚಿವಾಲಯ ನಿರ್ಧರಿಸಿತು. ಕ್ಯಾಮರಾದಲ್ಲಿ ಎರಡು ಹೈಡೆಫಿನಿಷನ್ ಲೆನ್ಸ್ ಇರಲಿದ್ದು, ಇದು ನಾಲ್ಕೂ ದಿಕ್ಕುಗಳ ದೃಶ್ಯಗಳನ್ನು ಸೆರೆ ಹಿಡಿಯುವುವು.

2014: ಭದ್ರಾವತಿ: ಉಕ್ಕಿನ ನಗರಿಯ ಬೆಡಗಿಗೆ ಅಂತಾರಾಷ್ಟ್ರೀಯ ಸೌಂದರ್ಯ ಸ್ಪರ್ಧೆಯ ಕಿರೀಟ ಮುಡಿಗೇರಿತು. ಪೋಲೆಂಡ್ನಲ್ಲಿ ನಡೆದ ಸ್ಪರ್ಧೆಯಲ್ಲಿ ಆಶಾ ಭಟ್ 'ಮಿಸ್ ಸುಪ್ರಾ ಇಂಟರ್ನ್ಯಾಷನಲ್' ಆಗಿ ಹೊರಹೊಮ್ಮಿದರು. ಈ ಮೂಲಕ ಭಾರತಕ್ಕೆ ಮೊದಲ ಬಾರಿಗೆ ಈ ಪ್ರಶಸ್ತಿ ತಂದುಕೊಟ್ಟ ಕೀರ್ತಿಗೆ ಭಾಜನರಾದರು.  'ಮಗಳು ಮೊದಲಿನಿಂದಲೂ ಪ್ರತಿಭಾವಂತೆ. ಜೀವನದಲ್ಲಿ ಏನಾದರೂ ಸಾಧಿಸಬೇಕೆಂಬ ಛಲವಿತ್ತು. ಅದು ಅವಳನ್ನು ಅಂತಾರಾಷ್ಟ್ರೀಯ ಮಟ್ಟದಲ್ಲಿ ಗುರುತಿಸುವಂತೆ ಮಾಡಿದೆ' ಎಂದು ತಾಯಿ ಶ್ಯಾಮಲಾ ಭಟ್ 'ವಿಜಯವಾಣಿ'ಯೊಂದಿಗೆ ಸಂಭ್ರಮ ಹಂಚಿಕೊಂಡರು. ಸದ್ಯ ಆಶಾ ಅವರು ಬೆಂಗಳೂರಿನ ಕಾಲೇಜೊಂದರಲ್ಲಿ ಇಂಜಿನಿಯರಿಂಗ್ ವಿದ್ಯಾರ್ಥಿನಿ. ಆಶಾ ಅವರು ಕಳೆದ ತಿಂಗಳು ಮುಂಬೈಯಲ್ಲಿ ನಡೆದ 'ಮಿಸ್ ಡೀವಾ ಯೂನಿವರ್ಸ್'ನಲ್ಲಿ ದ್ವಿತೀಯ ರನ್ನರ್ಅಪ್ ಪ್ರಶಸ್ತಿ ಪಡೆದಿದ್ದರು.

2014: ಲಂಡನ್: ದಿ ಟೈಮ್ಸ್ ನ ಹೈಯರ್ ಎಜುಕೇಷನ್ (ಟಿಎಚ್ಇ) ಬಿಡುಗಡೆ ಮಾಡಿದ ಬ್ರಿಕ್ಸ್ ದೇಶಗಳ ಅತ್ಯುತ್ತಮ ಶಿಕ್ಷಣ ಸಂಸ್ಥೆಗಳ ಪಟ್ಟಿಯಲ್ಲಿ ಬೆಂಗಳೂರಿನ ಇಂಡಿಯನ್ ಇನ್ಸ್ಟಿಟ್ಯೂಟ್ ಆಫ್ ಸೈನ್ಸ್ 25ನೇ ಸ್ಥಾನ ಪಡೆದುಕೊಂಡಿತು. ಬ್ರಿಕ್ಸ್ ದೇಶಗಳ ಒಟ್ಟು 100 ವಿವಿಗಳ ಪಟ್ಟಿ ಮಾಡಲಾಗಿದ್ದು, ಇದರಲ್ಲಿ 40ರೊಳಗಿನ ಶ್ರೇಣಿಯಲ್ಲಿ ಭಾರತದ ನಾಲ್ಕು ವಿವಿಗಳು ಸೇರಿದವು. ಐಐಟಿ ಬಾಂಬೆ (37), ಐಐಟಿ ರೂರ್ಕಿ(38), ಚಂಡೀಗಢದ ಪಂಜಾಬ್ ವಿವಿ (39) ಪಟ್ಟಿಯಲ್ಲಿರುವ ಇತರ ವಿವಿಗಳು. ಪಟ್ಟಿಯಲ್ಲಿ ಚೀನಾದ ಪೆಕಿಂಗ್ ವಿಶ್ವವಿದ್ಯಾಲಯ ಮೊದಲ ಸ್ಥಾನದಲ್ಲಿದೆ. ಭಾರತೀಯ ಶಿಕ್ಷಣ ಸಂಸ್ಥೆಗಳ ಪೈಕಿ ಬೆಂಗಳೂರಿನ ಐಐಎಸ್ಸಿ ಮೊದಲ ಸ್ಥಾನದಲ್ಲಿದೆ. ನ್ಯೂಯಾರ್ಕ್ನ ರಾಕ್ಫೆಲ್ಲರ್ ಫೌಂಡೇಶನ್ ಈ ವರದಿ ತಯಾರಿಸಿದ್ದು, ಜಗತ್ತಿನ 100 ನಗರಗಳನ್ನು ಪಟ್ಟಿ ಮಾಡಲಾಯಿತು.

2014: ಶ್ರೀನಗರ: ಕಾಶ್ಮೀರದಲ್ಲಿ 2014ರ ಡಿಸೆಂಬರ್ 5ರಂದು ಅಟ್ಟಹಾಸ ಮೆರೆದ ಉಗ್ರಗಾಮಿಗಳಿಗೆ ಪಾಕಿಸ್ತಾನ ಕುಮ್ಮಕ್ಕು ನೀಡಿದ್ದನ್ನು ಸಾಬೀತು ಪಡಿಸುವ ದಾಖಲೆಗಳು ಲಭ್ಯವಾದವು.. ಉರಿ ಸೇನಾ ಶಿಬಿರದ ಮೇಲೆ ನಡೆದ ದಾಳಿಯಲ್ಲಿ ಷಾಮೀಲಾಗಿದ್ದ 6 ಹತ ಉಗ್ರಗಾಮಿಗಳ ಬಳಿ ಇದ್ದ ಆಹಾರದ ಪೊಟ್ಟಣಗಳಲ್ಲಿ ಪಾಕಿಸ್ತಾನಿ ಸರ್ಕಾರದ 'ಗುರುತು'ಗಳು ಪತ್ತೆಯಾದವು. ಘರ್ಷಣೆ ಸಂಭವಿಸಿದ ಸ್ಥಳದಲ್ಲಿ ಪತ್ತೆಯಾದ ಆಹಾರದ ಪೊಟ್ಟಣಗಳು ಸಾಮಾನ್ಯವಾಗಿ ಪಾಕಿಸ್ತಾನಿ ಸೇನೆ ಬಳಸುವ ಆಹಾರದ ಪೊಟ್ಟಣಗಳಾಗಿವೆ ಎಂದು ಹಿರಿಯ ಸೇನಾ ಅಧಿಕಾರಿ ಹೇಳಿದರು. ಶಸ್ತ್ರಾಸ್ತ್ರಗಳು ಮತ್ತು ಮದ್ದುಗುಂಡಿನ ಜೊತೆಗೆ ಲಭಿಸಿದ ಈ ಆಹಾರದ ಪೊಟ್ಟಣಗಳು ಉಗ್ರಗಾಮಿಗಳು ಭದ್ರತಾ ಪಡೆಗಳನ್ನು ದೀರ್ಘಕಾಲ ಪೀಡಿಸಲು ಹೊಂಚು ಹಾಕಿದ್ದರು ಎಂಬುದನ್ನು ತೋರಿಸಿವೆ ಎಂದು ಅವರು ನುಡಿದರು. ಸೇನೆ ಮತ್ತು ಉಗ್ರಗಾಮಿಗಳ ಗುಂಪಿನ ನಡುವೆ ಡಿ.5ರಂದು ಸುಮಾರು 6 ಗಂಟೆಗಳ ಕಾಲ ನಡೆದ ಗುಂಡಿನ ಕಾಳಗದಲ್ಲಿ ಎಂಟು ಸೈನಿಕರು ಸೇರಿದಂತೆ 11 ಮಂದಿ ಭದ್ರತಾ ಸಿಬ್ಬಂದಿ ಮೃತರಾಗಿದ್ದರು. ಕದನದಲ್ಲಿ 6 ಮಂದಿ ಉಗ್ರಗಾಮಿಗಳೂ ಹತರಾಗಿದ್ದರು. ಭೀಕರ ಕದನ ನಡೆದ ಸ್ಥಳದಲ್ಲಿ ಲಭಿಸಿದ ಇತರ ವಸ್ತುಗಳಲ್ಲಿ 6 ಎಕೆ ರೈಫಲ್ಗಳು, 55 ಮ್ಯಾಗಝೀನ್ಗಳು, ಎರಡು ಶಾಟ್ ಗನ್ಗಳು, ಎರಡು ರಾತ್ರಿ ಕಾಲದ ವೀಕ್ಷಣೆಗೆ ಬಳಸುವ ಬೈನಾಕ್ಯುಲರ್ಗಳು, ನಾಲ್ಕು ರೇಡಿಯೋ ಸೆಟ್ಗಳು, 32 ಬಳಸದ ಗ್ರೆನೇಡ್ಗಳು ಮತ್ತು ಒಂದು ವೈದ್ಯಕೀಯ ಕಿಟ್ ಕೂಡಾ ಸೇರಿದ್ದವು.

2014: ಮುಂಬೈ: ಪುಣೆ - ಬೆಂಗಳೂರು ರಾಷ್ಟ್ರೀಯ ಹೆದ್ದಾರಿಯಲ್ಲಿ ಕರಾಡ್ ಸಮೀಪ ಟ್ಯಾಂಕರ್ ಮತ್ತು ಬಸ್ಸು ಮುಖಾಮುಖಿ ಢಿಕ್ಕಿಯಲ್ಲಿ ಐವರು ಮೃತರಾಗಿ ಇತರ ಎಂಟು ಮಂದಿ ಗಾಯಗೊಂಡಿಡ ಘಟನೆ ಘಟಿಸಿತು. ಪಶ್ಚಿಮ ಮಹಾರಾಷ್ಟ್ರದ ಬೆಳವಡೆ ಗ್ರಾಮದ ಬಳಿ ಈ ದುರ್ಘಟನೆ ಸಂಭವಿಸಿತು. ಗಾಯಾಳುಗಳಲ್ಲಿ ಕೆಲವರನ್ನು ಕರಾಡ್ ಸರ್ಕಾರಿ ಆಸ್ಪತ್ರೆಗೆ ದಾಖಲಿಸಲಾಯಿತು.. ಇತರ ಕೆಲವರನ್ನು ಅಲ್ಲಿನ ಖಾಸಗಿ ಆಸ್ಪತ್ರೆಗೂ ದಾಖಲು ಮಾಡಲಾಯಿತು.

2014: ನವದೆಹಲಿ: ಹಿರಿಯ ಐಎಎಸ್ ಅಧಿಕಾರಿ ದಿನೇಶ ಕುಮಾರ್ ಅವರನ್ನು ಪೋಲಾವರಂ ಯೋಜನಾ ಪ್ರಾಧಿಕಾರದ ಮುಖ್ಯ ಕಾರ್ಯಕಾರಿ ಅಧಿಕಾರಿಯಾಗಿ (ಸಿಇಒ) ನೇಮಕ ಮಾಡಲಾಯಿತು. ಆಂಧ್ರ ಪ್ರದೇಶ ಕೇಡರ್ನ 1963ರ ತಂಡದ ಐಎಎಸ್ ಅಧಿಕಾರಿಯಾದ ಕುಮಾರ್ ಪ್ರಸ್ತುತ ಜವುಳಿ ಸಚಿವಾಲಯದಲ್ಲಿ ಅಭಿವೃದ್ಧಿ ಆಯುಕ್ತ. ಪೋಲಾವರಂ ಯೋಜನೆಯು ಕೇಂದ್ರ ಸರ್ಕಾರದಿಂದ ರಾಷ್ಟ್ರೀಯ ಯೋಜನಾ ಸ್ಥಾನಮಾನ ಪಡೆದಿರುವ ವಿವಿಧೋದ್ದೇಶೀ ನೀರಾವರಿ ಯೋಜನೆ. ಗೋದಾವರಿ ನದಿಗೆ ಅಡ್ಡವಾಗಿ ಆಂಧ್ರಪ್ರದೇಶದ ಪಶ್ಚಿಮ ಗೋದಾವರಿ ಜಿಲ್ಲೆ ಮತ್ತು ಪೂರ್ವ ಗೋದಾವರಿ ಜಿಲ್ಲೆಯಲ್ಲಿ ಪೋಲಾವರಂ ಅಣೆಕಟ್ಟು ನಿರ್ವಿುಸಲಾಗಿದೆ. ಈ ಜಲಾಶಯ ಛತ್ತೀಸ್ಗಢದ ಕೆಲವು ಭಾಗಗಳು ಮಾತ್ರವೇ ಅಲ್ಲ ಒಡಿಶಾ ರಾಜ್ಯದ ಹಲವು ಭಾಗಗಳಿಗೂ ವ್ಯಾಪಿಸಿದೆ.

2014: ಗುವಾಹಟಿ: ಪಶ್ಚಿಮ ಬಂಗಾಳದ ಬುರ್ದ್ವಾನ್ ಜಿಲ್ಲೆಯ ಅಕ್ಟೋಬರ್ 2ರ ಸ್ಪೋಟದ ಮುಖ್ಯ ಆರೋಪಿ ಶಹನೂರ್ ಅಲೋಮ್ಸನನ್ನು ಅಸ್ಸಾಮಿನಲ್ಲಿ ಬಂಧಿಸಲಾಗಿದೆ ಎಂದು ಪೊಲೀಸರು ಹೇಳಿದರು. ನಲ್ಬಾರಿ ಜಿಲ್ಲೆಯಲ್ಲಿ ಹಿಂದಿನ ದಿನ ತಡರಾತ್ರಿಯಲ್ಲಿ ಆತನನ್ನು ಬಂಧಿಸಲಾಗಿದೆ. ಅಸ್ಸಾಮಿನಲ್ಲಿ ಜಮಾತ್-ಉಲ್-ಮುಜಾಹಿದೀನ್ ಬಾಂಗ್ಲಾದೇಶ ಸಂಘಟನೆಯ ಮುಖ್ಯ ಸಂಚಾಲಕರಲ್ಲಿ ಒಬ್ಬನಾದ ಅಲೋಮ್ ಬರಪೇಟಾ ಜಿಲ್ಲೆಯ ಛಟ್ಲಾ ಗ್ರಾಮದ ತನ್ನ ಮನೆಯಿಂದ ಈ ವರ್ಷದ ಅಕ್ಟೋಬರ್ ತಿಂಗಳಿನಿಂದ ತಲೆತಪ್ಪಿಸಿಕೊಂಡಿದ್ದ. ಅಸ್ಸಾಂ ಪೊಲೀಸ್ ಘಟಕವು ನಲ್ಬಾರಿ ಜಿಲ್ಲೆಯ ಲಾರ್ಕೂಚಿ ಗ್ರಾಮದಲ್ಲಿ ನಡೆಸಿದ ವಿಶೇಷ ಕಾರ್ಯಾಚರಣೆಯಲ್ಲಿ ಅಲೋಮ್ನ್ನು ಬಂಧಿಸಲಾಯಿತು ಎಂದು ಹಿರಿಯ ಪೊಲೀಸ್ ಅಧಿಕಾರಿ ತಿಳಿಸಿದರು. 'ಇದೊಂದು ಮಹತ್ವದ ಬಂಧನ. ರಾಜ್ಯದಲ್ಲಿ ಜಿಹಾದಿ ಸಂಘಟನೆ ಬಗ್ಗೆ ವ್ಯಾಪಕ ವಿವರಗಳನ್ನು ಆತನಿಂದ ನಾವು ಪಡೆಯುವ ಸಾಧ್ಯತೆಗಳಿವೆ. ಸಂಘಟನೆಯ ಸದಸ್ಯ ಬಲ, ಹಣಕಾಸು ವರ್ಗಾವಣೆ ಮತ್ತಿತರ ವಿವರಗಳು ಆತನಿಂದ ಲಭಿಸುವ ನಿರೀಕ್ಷೆಯಿದೆ' ಎಂದು ಅಧಿಕಾರಿ ನುಡಿದರು. ಬುರ್ದ್ವಾನಿನ ಖಾಗ್ರಾಗಡ ಪ್ರದೇಶದಲ್ಲಿ ಸಂಭವಿಸಿದ್ದ ಆಕಸ್ಮಿಕ ಸ್ಪೋಟದಲ್ಲಿ ಜಮಾತ್-ಉಲ್-ಮುಜಾಹಿದೀನ್ ಬಾಂಗ್ಲಾದೇಶ್ ಸಂಘಟನೆಯ ಉಗ್ರಗಾಮಿಗಳಿಬ್ಬರು ಹತರಾಗಿ ಇನ್ನೊಬ್ಬ ಗಾಯಗೊಂಡಿದ್ದ. ಅಲೋಮ್ ಪತ್ನಿ ಸುಜೀನಾ ಬೇಗಂಳನ್ನು ಮತ್ತು ಆಕೆಯ ಅಪ್ರಾಪ್ತ ವಯಸ್ಸಿನ ಪುತ್ರನನ್ನು ಗುವಾಹಟಿಯಲ್ಲಿ ಪೊಲೀಸರು ಕಳೆದ ತಿಂಗಳು ಬಂಧಿಸಿದ್ದರು.

2014: ಹಾಸನ: ಅರಸೀಕೆರೆ ತಾಲೂಕು ಬೊಮ್ಮೇನಹಳ್ಳಿ ರಸ್ತೆಯಲ್ಲಿ ಆಟೋ ಮತ್ತು ಮ್ಯಾಕ್ಸಿಕ್ಯಾಬ್ ಢಿಕ್ಕಿಯಲ್ಲಿ ಒಬ್ಬ ಮಹಿಳೆ ಸೇರಿದಂತೆ ಮೂವರು ಮೃತರಾಗಿ ಇತರ 15 ಮಂದಿ ಗಾಯಗೊಂಡರು. ಮೃತರನ್ನು ಮಾಡಾಳುವಿನ ಮಂಜಾಚಾರ್ (46), ಅರಳಿಕಟ್ಟದ ರಾಜಪ್ಪ (40) ಮತ್ತು ಅರಸೀಕೆರೆಯ ದ್ರಾಕ್ಷಾಯಣಮ್ಮ (40) ಎಂದು ಗುರುತಿಸಲಾಯಿತು.

2014: ಹಜಾರಿಬಾಗ್ (ಜಾರ್ಖಂಡ್): ಕಾಶ್ಮೀರ ಕಣಿವೆಯಲ್ಲಿ ಉಗ್ರಗಾಮಿಗಳು ಅಟ್ಟಹಾಸ ಮೆರೆದ ಒಂದು ದಿನದ ಬಳಿಕ ಈದಿನ ಇಲ್ಲಿ ಮಾತನಾಡಿದ ಪ್ರಧಾನಿ ನರೇಂದ್ರ ಮೋದಿ ಅವರು 'ಉಗ್ರಗಾಮಿಗಳು ಭಾರತೀಯ ಪ್ರಜಾಪ್ರಭುತ್ವದ ಮೇಲೆ ದಾಳಿ ನಡೆಸಲು ಯತ್ನಿಸಿದ್ದಾರೆ. ಆದರೆ ದಿಟ್ಟ ಯೋಧರು ರಾಷ್ಟ್ರದ ಭದ್ರತೆ ಕಾಪಾಡುತ್ತಾ ತಮ್ಮ ಪ್ರಾಣಗಳನ್ನೇ ಬಲಿದಾನ ಮಾಡಿದ್ದಾರೆ' ಎಂದು ಹೇಳಿದರು. ಉಗ್ರಗಾಮಿಗಳೊಂದಿಗೆ ಹೋರಾಡುತ್ತಾ ಹುತಾತ್ಮರಾದ ಯೋಧರಿಗೆ ಪ್ರಧಾನಿ ತಮ್ಮ ಶ್ರದ್ಧಾಂಜಲಿಯನ್ನೂ ಸಲ್ಲಿಸಿದರು. ಹಜಾರಿಬಾಗ್ನಲ್ಲಿ ಚುನಾವಣಾ ಪ್ರಚಾರ ಸಭೆಯನ್ನು ಉದ್ದೇಶಿಸಿ ಮಾತನಾಡಿದ ಪ್ರಧಾನಿ 'ಭಯೋತ್ಪಾದಕರು ಭಾರತದ ಪ್ರಜಾಪ್ರಭುತ್ವದ ಮೇಲೆ ದಾಳಿ ನಡೆಸಲು ಯತ್ನಿಸಿದ್ದಾರೆ. ಆದರೆ ನಮ್ಮ ದಿಟ್ಟ ಯೋಧರು ರಾಷ್ಟ್ರದ ಭದ್ರತೆ ಕಾಪಾಡಲು ತಮ್ಮ ಪ್ರಾಣಗಳನ್ನೇ ಬಲಿದಾನ ಮಾಡಿದ್ದಾರೆ ಎಂದು ನುಡಿದರು. 'ತಮ್ಮ ಜೀವಗಳನ್ನೇ ಬಲಿದಾನ ಮಾಡಿದ ಜಾರ್ಖಂಡ್ನ ಧೀರ ಪುತ್ರ ಸಂಕಲ್ಪ ಕುಮಾರ ಶುಕ್ಲ ಮತ್ತು ಇತರ ಧೀರ ಯೋಧರಿಗೆ ನಾನು ಶ್ರದ್ಧಾಂಜಲಿ ಸಲ್ಲಿಸುತ್ತೇನೆ. ಸಂಕಲ್ಪ ಕುಮಾರ ಶುಕ್ಲಾ ಅವರ ಬಲಿದಾನವು ರಾಜ್ಯದಲ್ಲಿ ಮುಂದಿನ ತಲೆಮಾರುಗಳವರೆಗೂ ನೆನಪಿನಲ್ಲಿ ಉಳಿಯುತ್ತದೆ' ಎಂದು ಅವರು ಹೇಳಿದರು. ಕಾಶ್ಮೀರ ಕಣಿವೆಯಲ್ಲಿ ಶನಿವಾರ ಗಡಿ ದಾಟಿ ಬಂದ ಉಗ್ರಗಾಮಿಗಳು ಉರಿ ಸೇನಾ ಶಿಬಿರದ ಮೇಲೆ ದಾಳಿ ನಡೆಸಿ ಲೆಫ್ಟಿನೆಂಟ್ ಕರ್ನಲ್ ಸಂಕಲ್ಪ ಕುಮಾರ ಸೇರಿದಂತೆ 11 ಮಂದಿ ಭದ್ರತಾ ಸಿಬ್ಬಂದಿ ಮತ್ತು ಟ್ರಾಲ್ನಲ್ಲಿ ಇಬ್ಬರು ನಾಗರಿಕರನ್ನು ಕೊಂದಿದ್ದರು. ಭಯೋತ್ಪಾದಕರ ದಾಳಿಗಳು ಹಾಗೂ ಗುಂಡಿನ ಕಾಳಗಗಳಲ್ಲಿ ಒಟ್ಟು 21 ಜನ ಮೃತರಾಗಿದ್ದರು. ಅವರಲ್ಲಿ ಪಾಕಿಸ್ತಾನಿ ಮೂಲದ ಎಲ್ಇಟಿ ಭಯೋತ್ಪಾದಕ ಸಂಘಟನೆಯ ಒಬ್ಬ ಉನ್ನತ ಕಮಾಂಡರ್ ಸೇರಿದಂತೆ 7 ಜನ ಉಗ್ರಗಾಮಿಗಳು ಸೇರಿದ್ದರು.

2008: ಮುಂಬೈ ಮೇಲೆ ಭಯೋತ್ಪಾದಕರು ನಡೆಸಿದ ಭಾರಿ ವಿಧ್ವಂಸಕ ದಾಳಿಯಲ್ಲಿ ಪಾಕಿಸ್ಥಾನದಲ್ಲಿನ ಉಗ್ರಗಾಮಿ ಸಂಘಟನೆಗಳ ಕೈವಾಡದ ಬಗ್ಗೆ ತಳ್ಳಿಹಾಕಲಾಗದಂತಹ ಸಾಕ್ಷ್ಯಾಧಾರಗಳು ಇರುವುದರಿಂದ ಅಲ್ಲಿನ ಸರ್ಕಾರ ಸೂಕ್ತ ಕ್ರಮ ಕೈಗೊಳ್ಳಲು ವಿಫಲವಾದರೆ, ಸ್ವತಃ ಕಾರ್ಯಾಚರಣೆಗೆ ಇಳಿಯಬೇಕಾದೀತು ಎಂದು ಅಮೆರಿಕವು ಪಾಕಿಸ್ಥಾನಕ್ಕೆ ತಾಕೀತು ಮಾಡಿತು. ಅಮೆರಿಕದ ವಿದೇಶಾಂಗ ಕಾರ್ಯದರ್ಶಿ ಕಾಂಡೋಲಿಸಾ ರೈಸ್ ಅವರು ಇಸ್ಲಾಮಾಬಾದಿಗೆ ನೀಡಿದ್ದ ಭೇಟಿ ಸಂದರ್ಭದಲ್ಲಿ ಈ ಎಚ್ಚರಿಕೆ ನೀಡಿದರು ಎಂದು ಪಾಕಿಸ್ಥಾನದ ಪ್ರಭಾವಿ ದಿನಪತ್ರಿಕೆ 'ಡಾನ್' ವರದಿ ಮಾಡಿತು.

2008: ಮಹಾರಾಷ್ಟ್ರದ ಪಕ್ಷ ನಾಯಕ ನಾರಾಯಣ ರಾಣೆ ಅವರನ್ನು ಕಾಂಗ್ರೆಸ್ ಪಕ್ಷವು ಅಮಾನತುಗೊಳಿಸಿತು. ಮುಖ್ಯಮಂತ್ರಿ ಸ್ಥಾನಕ್ಕೆ ಸ್ಪರ್ಧೆಯಲ್ಲಿದ್ದ ರಾಣೆ ತಾವು ಸ್ಪರ್ಧೆಯಲ್ಲಿ ಹಿಂದೆ ಬಿದ್ದಿರುವುದು ಗೊತ್ತಾದಾಗ ಪಕ್ಷದ ಅಧ್ಯಕ್ಷೆ ಸೋನಿಯಾ ಗಾಂಧಿ ಮತ್ತು ಇತರ ಹಲವರ ವಿರುದ್ಧ ಹರಿಹಾಯ್ದಿದ್ಧರು. ಈ ಟೀಕೆಗಳು ಬಂದ ಒಂದು ದಿನದ ಬಳಿಕ ಕಾಂಗ್ರೆಸ್ ಪಕ್ಷವು ಅವರನ್ನು ಅಮಾನತುಗೊಳಿಸವ ಕ್ರಮ ಕೈಗೊಂಡಿತು.

2008: ಅಪಹರಣ ಮತ್ತು ದರೋಡೆ ಪ್ರಕರಣದಲ್ಲಿ ತಪ್ಪಿತಸ್ಥ ಎನಿಸಿದ ಅಮೆರಿಕನ್ ಫುಟ್‌ಬಾಲ್ (ರಗ್ಬಿ) ದಂತಕತೆ ಒ.ಜೆ. ಸಿಂಪ್ಸನ್ ಅವರಿಗೆ ನ್ಯೂಯಾರ್ಕ್ ಜಿಲ್ಲಾ ನ್ಯಾಯಾಲಯ 33 ವರ್ಷಗಳ ಜೈಲು ಶಿಕ್ಷೆ ವಿಧಿಸಿತು. ತೀರ್ಪು ಪ್ರಕಟಿಸಿದ ಜಿಲ್ಲಾ ನ್ಯಾಯಾಧೀಶರಾದ ಜಾಕೀ ಗ್ಲಾಸ್ ಅವರು ಸಿಂಪ್ಸನ್‌ಗೆ ಕಠಿಣ ಶಿಕ್ಷೆಯನ್ನೇ ವಿಧಿಸಿದರು. ಸಿಂಪನ್ಸ್ 2007ರಲ್ಲಿ ಲಾಸ್ ವೆಗಾಸ್‌ನಲ್ಲಿ ಕ್ರೀಡಾ ಸ್ಮರಣಿಕೆಗಳ ವಿತರಕರಿಬ್ಬರನ್ನು ಅಪಹರಿಸಿ ಬೆಲೆಬಾಳುವ ವಸ್ತುಗಳನ್ನು ದರೋಡೆ ಮಾಡಿದ್ದರು. ಇತರ ಬಂದೂಕುಧಾರಿಗಳು ಕೂಡಾ ಈ ವೇಳೆ ಅವರ ಜೊತೆಗಿದ್ದರು. ಈ ಪ್ರಕರಣದ ಬಗ್ಗೆ ವಿಚಾರಣೆ ನಡೆಸಿದ ನ್ಯಾಯಾಲಯ ಎರಡು ತಿಂಗಳ ಹಿಂದೆ ತೀರ್ಪು ಪ್ರಕಟಿಸಿ ಸಿಂಪ್ಸನ್ ತಪ್ಪಿತಸ್ಥ ಎಂದು ಘೋಷಿಸಿತ್ತು. ಇದೀಗ 61 ರ ಹರೆಯದ ಅವರಿಗೆ ಜೈಲು ಶಿಕ್ಷೆ ವಿಧಿಸಿತು.

2008: ವಿಮಾನಯಾನ ಟರ್ಬೈನ್ ಇಂಧನದ ಬೆಲೆಯನ್ನು ತೈಲ ಮಾರುಕಟ್ಟೆ ಕಂಪೆನಿಗಳು ಕಡಿತಗೊಳಿಸಿರುವುದನ್ನು ಅನುಸರಿಸಿ ಕಿಂಗ್‌ಫಿಶರ್, ಜೆಟ್ ಏರ್‌ವೇಸ್, ಏರ್ ಇಂಡಿಯಾ ಮತ್ತು ಇಂಡಿಗೋ ಸೇರಿದಂತೆ ಎಲ್ಲ ಪ್ರಮುಖ ದೇಶೀಯ ವಿಮಾನಯಾನ ಸಂಸ್ಥೆಗಳು ವಿಮಾನ ಹಾರಾಟಗಳ ಸರ್‌ಚಾರ್ಜ ಕಡಿತಗೊಳಿಸಿದವು. ಇದರಿಂದಾಗಿ ವಿಮಾನಯಾನ ದರ ಅಂದಾಜು 400 ರೂಪಾಯಿಗಳಷ್ಟು ಅಗ್ಗವಾಯಿತು.

2007: ಮತದಾರರ ಪಟ್ಟಿ ಪರಿಷ್ಕರಣೆ ಅಥವಾ ಮತಗಟ್ಟೆಯ ಚುನಾವಣಾ ಕರ್ತವ್ಯಗಳಿಗೆ ಶಾಲಾ ಶಿಕ್ಷಕರನ್ನು ನಿಯೋಜನೆ ಮಾಡಬಾರದು ಎಂದು ಸುಪ್ರೀಂಕೋರ್ಟ್ ಆದೇಶಿಸಿತು. ಈ ಸಂಬಂಧ ದೆಹಲಿ ಹೈಕೋರ್ಟ್ ನೀಡಿದ ತೀರ್ಪನ್ನು ಎತ್ತಿಹಿಡಿದ ನ್ಯಾಯಮೂರ್ತಿಗಳಾದ ಎಸ್.ಬಿ. ಸಿನ್ಹಾ ಮತ್ತು ಎಚ್. ಎಸ್. ಬೇಡಿ ಅವರನ್ನು ಒಳಗೊಂಡ ಸುಪ್ರೀಂಕೋರ್ಟ್ ನ್ಯಾಯಪೀಠವು, `ಆದರೆ ರಜೆಯ ಅವಧಿ ಮತ್ತು ಬೋಧನೇತರ ದಿನಗಳಲ್ಲಿ ಮಾತ್ರ ಮತದಾರರ ಪಟ್ಟಿ ಪರಿಷ್ಕರಣೆ ಮತ್ತು ಚುನಾವಣಾ ಕೆಲಸಗಳಿಗೆ ನಿಯೋಜಿಸಬಹುದು' ಎಂದು ಅಭಿಪ್ರಾಯಪಟ್ಟಿತು. ಬೋಧನಾ ಅವಧಿಗಳಲ್ಲಿ ಶಿಕ್ಷಕರನ್ನು ಚುನಾವಣೆ ಕೆಲಸಗಳಿಗೆ ಬಳಸಿಕೊಳ್ಳಬಾರದು. ಆದರೆ ಕಾನೂನಿನಲ್ಲಿ ಅವಕಾಶವಿರುವಂತೆ ಶಿಕ್ಷಕೇತರ ವರ್ಗವನ್ನು ಶಾಲಾ ಕೆಲಸದ ಅವಧಿ ಅಥವಾ ಯಾವುದೇ ಸಮಯದಲ್ಲಾದರೂ ಚುನಾವಣಾ ಕಾರ್ಯಗಳಿಗೆ ಬಳಸಿಕೊಳ್ಳಬಹುದು ಎಂದೂ ಪೀಠ ಸ್ಪಷ್ಟಪಡಿಸಿತು. ಲೋಕಸಭೆ, ವಿಧಾನಸಭೆ, ನಗರಾಡಳಿತ, ಗುರುದ್ವಾರ ಮಂಡಳಿ ಮುಂತಾದ ಆಡಳಿತ ಸಂಸ್ಥೆಗಳ ಚುನಾವಣಾ ಕೆಲಸ, ಮತದಾರರ ಪಟ್ಟಿ ಪರಿಷ್ಕರಣೆ, ಪಲ್ಸ್ ಪೋಲಿಯೊ ಕಾರ್ಯಕ್ರಮ, ಜನಸಂಖ್ಯಾ ಗಣತಿ, ಮಲೇರಿಯಾ, ಪರಿಸರ ಮಾಲಿನ್ಯ ಮತ್ತಿತರ ಕ್ಷೇತ್ರಗಳ ಸಮೀಕ್ಷೆ ಇತ್ಯಾದಿ ಕಾರ್ಯಗಳಿಗೆ ಶಿಕ್ಷಕರನ್ನು ಬಳಸಿಕೊಳ್ಳಲು ಸರ್ಕಾರವು ಸುತ್ತೋಲೆ ಹೊರಡಿಸುತ್ತಿರುವುದನ್ನು ಪ್ರಶ್ನಿಸಿ ಸೇಂಟ್ ಮೇರೀಸ್ ಶಾಲೆಯು ದೆಹಲಿ ಹೈಕೋರ್ಟಿಗೆ ಅರ್ಜಿ ಸಲ್ಲಿಸಿತ್ತು. ಇಂತಹ ಕೆಲಸಗಳಿಂದ ಅಪೂರ್ಣ ಬೋಧನೆ, ತರಗತಿಗೆ ವಿದ್ಯಾರ್ಥಿಗಳ ಗೈರು, ಕೆಟ್ಟಫಲಿತಾಂಶ, ಗುಣಮಟ್ಟವಿಲ್ಲದ ಶಿಕ್ಷಣ ಮುಂತಾದ ದುಷ್ಪರಿಣಾಮಗಳನ್ನು ತಡೆಯಲು ಮಧ್ಯಪ್ರವೇಶ ಮಾಡಬೇಕೆಂದು ಅರ್ಜಿದಾರರು ಕೋರಿದ್ದರು.

2007: ವೈರಿ ಕ್ಷಿಪಣಿಗಳನ್ನು ಆಗಸದಲ್ಲೇ ನಾಶ ಪಡಿಸುವ ತಂತ್ರಜ್ಞಾನವನ್ನು ಅಭಿವೃದ್ಧಿಪಡಿಸುವ ನಿಟ್ಟಿನಲ್ಲಿ ರಕ್ಷಣಾ ಸಂಶೋಧನೆ ಮತ್ತು ಅಭಿವೃದ್ಧಿ ಸಂಸ್ಥೆ (ಡಿ ಆರ್ ಡಿ ಒ) ಬಂಗಾಳ ಕೊಲ್ಲಿಯಲ್ಲಿ ದೇಶೀಯವಾಗಿ ನಿರ್ಮಿಸಿದ ಕ್ಷಿಪಣಿ ನಿರೋಧಕ ವ್ಯವಸ್ಥೆಯನ್ನು 2ನೇ ಬಾರಿ ಪರೀಕ್ಷೆಗೆ ಒಡ್ಡಿತು. ಈ ಪ್ರಾಯೋಗಿಕ ಪರೀಕ್ಷೆ ಕರಾರುವಾಕ್ಕಾಗಿ ನಡೆದು `ಡಿ ಆರ್ ಡಿ ಒ' ವಿಜ್ಞಾನಿಗಳ ಮುಖದಲ್ಲಿ ಸಂತಸ ಮೂಡಿತು. ಪರೀಕ್ಷೆಯ ಅಂಗವಾಗಿ ಮೊದಲು ಮಾರ್ಪಡಿಸಿದ ಪೃಥ್ವಿ ಕ್ಷಿಪಣಿಯನ್ನು ಬಾಲಸೋರಿನ ಚಂಡಿಪುರದಿಂದ ಹಾರಿಸಲಾಯಿತು. ಅದನ್ನು ಆಗಸದಲ್ಲೇ ನಾಶಪಡಿಸಲು 2 ನಿಮಿಷ 40 ಸೆಕೆಂಡ್ ನಂತರ ಪಕ್ಕದ ಭದ್ರಕ್ ಜಿಲ್ಲೆಯ ವೀಲ್ಹರ್ ದ್ವೀಪದಿಂದ ಮತ್ತೊಂದು ಕ್ಷಿಪಣಿಯನ್ನು (ಅತ್ಯಾಧುನಿಕ ವಾಯು ರಕ್ಷಣಾ ವ್ಯವಸ್ಥೆ) ಹಾರಿಬಿಡಲಾಯಿತು.

2007: `ಅಕ್ರಮ- ಸಕ್ರಮ ಯೋಜನೆ ಬಗ್ಗೆ ರಾಜ್ಯ ಸರ್ಕಾರ ಯಾವುದೇ ನಿರ್ಧಾರ ತೆಗೆದುಕೊಳ್ಳುವುದಿಲ್ಲ, ಬದಲಿಗೆ ಡಿಸೆಂಬರ್ 10ರಂದು ಹೈಕೋರ್ಟ್ ನೀಡುವ ನಿರ್ದೇಶನವನ್ನು ಪಾಲಿಸುವುದು' ಎಂದು ಎಂದು ರಾಜ್ಯಪಾಲ ರಾಮೇಶ್ವರ ಠಾಕೂರ್ ಸರ್ಕಾರದ ಕಾರ್ಯಕಾರಿ ಸಮಿತಿ ಸಭೆಯ ಬಳಿಕ ಹೇಳಿದರು. ಇದರಿಂದಾಗಿ ಸಕ್ರಮ ಚೆಂಡು ಮತ್ತೆ ನ್ಯಾಯಾಲಯಕ್ಕೆ ಹೊರಳಿದಂತಾಯಿತು.

2007: ರಕ್ತ ಕ್ಯಾನ್ಸರ್ ರೋಗಿಗಳಿಗೆ ಅತ್ಯಂತ ಕಡಿಮೆ ವೆಚ್ಚದಲ್ಲಿ ಚಿಕಿತ್ಸೆ ನೀಡುವ ನೂತನ ಯೋಜನೆಯನ್ನು `ಡಾಬರ್ ಆಂಕ್ವೆಸ್ಟ್' ದೇಶದಲ್ಲಿಯೇ ಪ್ರಥಮ ಬಾರಿಗೆ ಬೆಂಗಳೂರಿನಲ್ಲಿ ಪರಿಚಯಿಸಿತು. ಸಂಸ್ಥೆಯು ಆಯ್ದ ರೋಗಿಗಳಿಗೆ ನೀಡಲಾಗುವ ಚಿಕಿತ್ಸೆಯ ಉಸ್ತುವಾರಿ ವಹಿಸಿಕೊಳ್ಳುವುದು. ಆದರೆ ಯೋಜನೆಯನ್ನು ಮೂರನೇ ಸಂಸ್ಥೆ ಜಾರಿ ತರಲಿದ್ದು ಆ ಸಂಸ್ಥೆಯೇ ರೋಗಿಗಳನ್ನು ಗುರುತಿಸುವುದು. ಪ್ರಸ್ತುತ ರೋಗ ಪತ್ತೆಗೆ ಸಂಬಂಧಿಸಿದ ಎಲ್ಲ ನಾಲ್ಕು ಪರೀಕ್ಷೆಗಳಿಗೆ ಸುಮಾರು 24 ಸಾವಿರ ರೂಪಾಯಿ ವೆಚ್ಚವಾಗುತ್ತಿದ್ದು, ಈ ಯೋಜನೆಯಡಿ 10,200 ರೂಪಾಯಿಗಳಿಗೆ ಎಲ್ಲ ನಾಲ್ಕೂ ಪರೀಕ್ಷೆಗಳನ್ನು ಮಾಡಿಸಿಕೊಳ್ಳಬಹುದು.

2007: ಧರ್ಮಪುರಿಯಲ್ಲಿ 2000ರ ಫೆಬ್ರುವರಿಯಲ್ಲಿ ಬಸ್ಸಿಗೆ ಬೆಂಕಿ ಹಚ್ಚಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಅಣ್ಣಾಡಿಎಂಕೆ ಪಕ್ಷದ ಮೂವರು ಕಾರ್ಯಕರ್ತರಿಗೆ ವಿಚಾರಣಾ ನ್ಯಾಯಾಲಯ ನೀಡಿದ್ದ ಮರಣ ದಂಡನೆಯನ್ನು ಮದ್ರಾಸ್ ಹೈಕೋರ್ಟ್ ಕಾಯಂಗೊಳಿಸಿತು. ತಮಿಳುನಾಡು ಕೃಷಿ ವಿಶ್ವವಿದ್ಯಾಲಯದ ಬಸ್ಸಿಗೆ 2000ದ ಫೆಬ್ರುವರಿಯಲ್ಲಿ ಅಣ್ಣಾಡಿಎಂಕೆ ಕಾರ್ಯಕರ್ತರು ಧರ್ಮಪುರಿಯಲ್ಲಿ ಬೆಂಕಿ ಹಚ್ಚಿದ್ದರು. ಪ್ಲೆಸೆಂಟ್ ಸ್ಟೇ ಹೋಟೆಲ್ ಪ್ರಕರಣಕ್ಕೆ ಸಂಬಂಧಿಸಿದಂತೆ ಪಕ್ಷದ ನಾಯಕಿ, ಮಾಜಿ ಮುಖ್ಯಮಂತ್ರಿ ಜಯಲಲಿತಾ ಅವರಿಗೆ ವಿಶೇಷ ನ್ಯಾಯಾಲಯ ಒಂದು ವರ್ಷ ಜೈಲು ಶಿಕ್ಷೆ ವಿಧಿಸಿದ್ದನ್ನು ವಿರೋಧಿಸಿ ಕಾರ್ಯಕರ್ತರು ಬಸ್ಸಿಗೆ ಬೆಂಕಿ ಹಚ್ಚಿದ್ದರು. ಆಗ ವಿಶ್ವ ವಿದ್ಯಾಲಯದ ಮೂವರು ವಿದ್ಯಾರ್ಥಿನಿಯರು ಸಜೀವ ದಹನ ಗೊಂಡಿದ್ದರು.

2007: ಜರ್ಮನಿ ಮೂಲದ ವಿಶ್ವದ ಅತಿ ದೊಡ್ಡ ಖಾಸಗಿ ಕೈಗಾರಿಕಾ ಸಂಸ್ಥೆ ಬಾಷ್, ಭಾರತದಲ್ಲಿನ ತನ್ನ ವಿವಿಧ ಕಾರ್ಯಾಚರಣೆಗಳಲ್ಲಿ ರೂ 850 ಕೋಟಿಗಳಷ್ಟು ಹೆಚ್ಚುವರಿ ಬಂಡವಾಳ ಹೂಡಲು ನಿರ್ಧರಿಸಿತು. ಇದರಿಂದ ಭಾರತದಲ್ಲಿನ ಬಾಷ್ ನ ಒಟ್ಟು ಹೂಡಿಕೆಯು 2010ನೇ ಇಸ್ವಿ ಹೊತ್ತಿಗೆ ರೂ 2,650 ಕೋಟಿಗಳಷ್ಟಾಗಲಿದೆ. ಮೋಟಾರ್ ಇಂಡಸ್ಟ್ರೀಸ್ ಕಂಪೆನಿಯು ಲಿಮಿಟೆಡ್ (ಮೈಕೊ) ಹೆಸರನ್ನು ಬಾಷ್ ಲಿಮಿಟೆಡ್ ಎಂದು ಬದಲಾಯಿಸಲು ಮೈಕೊದ ನಿರ್ದೇಶಕ ಮಂಡಳಿಯು ನಿರ್ಧರಿಸಿತು.

2007: ಮಾಹಿತಿ ತಂತ್ರಜ್ಞಾನ, ಜೈವಿಕ ತಂತ್ರಜ್ಞಾನದ ಬಳಿಕ ತಾಂತ್ರಿಕ ಕ್ಷೇತ್ರದಲ್ಲಿ ಮುಂದಿನ ದಿನಗಳು ನ್ಯಾನೊ ತಂತ್ರಜ್ಞಾನದ್ದಾಗಿದ್ದು, ಇದಕ್ಕೆ ಸರ್ಕಾರ, ಸಮಾಜ ಸಜ್ಜಾಗಬೇಕು ಎಂಬ ಸ್ಪಷ್ಟ ಸಂದೇಶದೊಂದಿಗೆ ದೇಶದ ಪ್ರಥಮ ನ್ಯಾನೊ ಸಮ್ಮೇಳನ ಬೆಂಗಳೂರಿನಲ್ಲಿ ಆರಂಭವಾಯಿತು. ರಾಜ್ಯಪಾಲ ರಾಮೇಶ್ವರ ಠಾಕೂರ್ ಸಮ್ಮೇಳನವನ್ನು ಉದ್ಘಾಟಿಸಿದರು.

2006: ರಸ್ತೆಬದಿ ಜಗಳ ಸಾವಿನಲ್ಲಿ ಅಂತ್ಯಗೊಂಡ ಪ್ರಕರಣಕ್ಕೆ ಸಂಬಂಧಿಸಿದಂತೆ ಖ್ಯಾತ ಕ್ರಿಕೆಟಿಗ, ಬಿಜೆಪಿ ಮುಖಂಡ ನವಜೋತ್ಸಿಂಗ್ ಸಿಧು ಅವರಿಗೆ ಪಂಜಾಬ್- ಹರಿಯಾಣ ಹೈಕೋರ್ಟ್ ಮೂರು ವರ್ಷಗಳ ಕಠಿಣ ಸಜೆ ಮತ್ತು ಒಂದು ಲಕ್ಷ ರೂಪಾಯಿ ದಂಡ ವಿಧಿಸಿತು. ಮತ್ತೊಬ್ಬ ಆರೋಪಿ ರೂಪಿಂದರ್ ಸಿಂಗ್ ಸಂಧು ಅವರಿಗೂ ಇದೇ ಶಿಕ್ಷೆ ವಿಧಿಸಲಾಯಿತು.

2006: ಭ್ರಷ್ಟಾಚಾರ ಪ್ರಕರಣಗಳಿಗೆ ಸಂಬಂಧಿಸಿದಂತೆ ಮುಖ್ಯಮಂತ್ರಿ ಮತ್ತು ಸಚಿವರು ಸೇರಿದಂತೆ ಜನ ಪ್ರತಿನಿಧಿಗಳನ್ನು ಕಾನೂನು ವಿಚಾರಣೆಗೆ ಗುರಿಪಡಿಸಲು ಪೂರ್ವಾನುಮತಿಯ ಅಗತ್ಯ ಇಲ್ಲ ಎಂದು ಸುಪ್ರೀಂಕೋರ್ಟ್ ಮಹತ್ವದ ತೀರ್ಪು ನೀಡಿತು.

2006: ಜೈನ ಸಾಹಿತ್ಯಕ್ಕೆ ಮೌಲಿಕ ಕೊಡುಗೆ ನೀಡಿದ ಹಿರಿಯ ಸಾಹಿತಿ ಎಸ್. ಬಿ. ವಸಂತರಾಜಯ್ಯ ಅವರನ್ನು 2006-07ರ ಸಾಲಿನ `ಚಾವುಂಡರಾಯ ಪ್ರಶಸ್ತಿ'ಗೆ ಕನ್ನಡ ಸಾಹಿತ್ಯ ಪರಿಷತ್ ಆಯ್ಕೆ ಮಾಡಿತು. 15ಕ್ಕೂ ಅಧಿಕ ಜೈನ ಸಾಹಿತ್ಯ ಕೃತಿಗಳನ್ನು ಅವರು ರಚಿಸಿದ್ದಾರೆ.

2006: ಫಿಜಿಯಲ್ಲಿ ಕ್ಷಿಪ್ರಕ್ರಾಂತಿ ನಡೆಸಿದ್ದ ಸೇನಾ ದಂಡನಾಯಕ ಫ್ರಾಂಕ್ ಬೈನಿಮರಮ ರಾಷ್ಟ್ರದಲ್ಲಿ ತುರ್ತು ಪರಿಸ್ಥಿತಿಯನ್ನು ಘೋಷಿಷಿ, ಸಂಸತ್ ವಿಸರ್ಜಿಸುವ ಮೂಲಕ ತಮ್ಮ ಹಿಡಿತ ಭದ್ರಗೊಳಿಸಿದರು.

2005: ರಾಷ್ಟ್ರಧ್ವಜವನ್ನು ವಸ್ತ್ರ ಮತ್ತು ಸಮವಸ್ತ್ರವಾಗಿ ಗೌರವಾರ್ಹ ರೂಪದಲ್ಲಿ ಧರಿಸಲು ಅವಕಾಶ ನೀಡುವ ರಾಷ್ಟ್ರೀಯ ಗೌರವ (ತಿದ್ದುಪಡಿ) ಮಸೂದೆಗೆ ಲೋಕಸಭೆ ಅಂಗೀಕಾರ ನೀಡಿತು. ರಾಷ್ಟ್ರಧ್ವಜವನ್ನು ಇನ್ನು ಮುಂದೆ ಉಡುಪು, ಸಮವಸ್ತ್ರದ ಮೇಲೆ ಗೌರವಯುತ ರೀತಿಯಲ್ಲಿ ಬಳಸಿಕೊಳ್ಳಬಹುದು. ಆದರೆ ರಾಷ್ಟ್ರಧ್ವಜವನ್ನು ಸೊಂಟದ ಕೆಳಗೆ ಹಾಗೂ ಕುಷನ್, ಕರವಸ್ತ್ರಗಳು, ನ್ಯಾಪ್ ಕಿನ್, ಒಳ ಉಡುಪು ಮುಂತಾದ ನಿತ್ಯಬಳಕೆಯ ವಸ್ತುಗಳ ಮೇಲೆ ಬಳಸುವಂತಿಲ್ಲ. ಧ್ವಜದ ಮೇಲೆ ಕಸೂತಿ ಅಥವಾ ಮುದ್ರಣ ಮಾಡುವಂತಿಲ್ಲ. ಗೃಹಖಾತೆಯ ರಾಜ್ಯಸಚಿವ ಮಾಣಿಕ್ ರಾವ್ ಗವಿಟ್ ಲೋಕಸಭೆಯಲ್ಲಿ ಈ ಮಸೂದೆಯನ್ನು ಮಂಡಿಸಿದರು.

2005: ಸಿಲಿಕಾನ್ ಲೋಹದ ಅಸ್ಪಟಿಕ ರೂಪ (ಎಮಾರ್ಫಸ್ ಸಿಲಿಕಾನ್) ಪತ್ತೆ ಕ್ಷೇತ್ರದಲ್ಲಿ ಹೆಸರು ಮಾಡಿದ ಭಾರತೀಯ ಮೂಲದ ಅಮೆರಿಕನ್ ವಿಜ್ಞಾನಿ ಸುಬೇಂದು ಗುಹಾ ಅವರು ಇಂಧನ ಕ್ಷೇತ್ರದ ಪ್ರತಿಷ್ಠಿತ 2005ನೇ ಸಾಲಿನ ಜಾಗತಿಕ ತಂತ್ರಜ್ಞಾನ ಪ್ರಶಸ್ತಿಗೆ ಆಯ್ಕೆಯಾದರು. ಸ್ಯಾನ್ ಫ್ರಾನ್ಸಿಸ್ಕೊದಲ್ಲಿ ನಡೆದ ವಿಶ್ವತಂತ್ರಜ್ಞಾನ ಶೃಂಗಸಭೆಯಲ್ಲಿ ಈ ಪ್ರಶಸ್ತಿಯನ್ನು ಪ್ರಕಟಿಸಲಾಯಿತು.

2005: ಕೇಂದ್ರ ಸಂಪುಟಕ್ಕೆ ತಮ್ಮ ರಾಜೀನಾಮೆ ನೀಡುವ ನಿರ್ಧಾರವನ್ನು ಕೇಂದ್ರ ದ ಖಾತಾ ರಹಿತ ಸಚಿವ ಕೆ. ನಟವರ್ಸಿಂಗ್ ಅವರು ನವದೆಹಲಿಯಲ್ಲಿ ನಡುರಾತ್ರಿ ಪ್ರಕಟಿಸಿದರು. ವೋಲ್ಕರ್ ವರದಿ ಹಿನ್ನೆಲೆಯಲ್ಲಿ ಭುಗಿಲೆದ್ದ ಭಾರೀ ವಿವಾದದ ಹಿನ್ನೆಲೆಯಲ್ಲಿ ಇದಕ್ಕೆ ಮೊದಲು ಅವರು ವಿದೇಶಾಂಗ ಖಾತೆಯನ್ನು ಕಳೆದುಕೊಂಡಿದ್ದರು. ಡಿಸೆಂಬರ್ 5 ರ ರಾತ್ರಿ ಕಾಂಗ್ರೆಸ್ ಪಕ್ಷದ ಚಾಲನಾ ಸಮಿತಿಯಿಂದ ಕಿತ್ತು ಹಾಕಲಾಯಿತು. ಕ್ರೊಯೇಷಿಯಾ ರಾಯಭಾರಿಯಾಗಿದ್ದ ಅನಿಲ್ ಮಥೆರಾನಿ ಅವರು ಆಹಾರಕ್ಕಾಗಿ ತೈಲ ಪ್ರಕರಣದ ಮುಖ್ಯ ಫಲಾನುಭವಿ ನಟವರ್ ಸಿಂಗ್ ಎಂಬುದಾಗಿ ಹೇಳಿದ ಹಿನ್ನೆಲೆಯಲ್ಲಿ ನಟವರ್ ರಾಜೀನಾಮೆ ನೀಡಬೇಕು ಎಂದು ಪಟ್ಟು ಹಿಡಿದು ವಿರೋಧಪಕ್ಷಗಳು ಸಂಸತ್ತಿನ ಕಲಾಪಗಳನ್ನು ಸ್ಥಗಿತಗೊಳಿಸುತ್ತಾ ಬಂದಿದ್ದವು.

2005: ಇರಾನಿನ ಟೆಹರಾನಿನಲ್ಲಿ ಸೇನೆಯ ಸರಕುಸಾಗಣೆ ವಿಮಾನ 10 ಅಂತಸ್ತಿನ ಕಟ್ಟಡಕ್ಕೆ ಅಪ್ಪಳಿಸಿ 119 ಜನ ಅಸುನೀಗಿದರು. ಪತ್ರಕರ್ತರೇ ಅಧಿಕ ಸಂಖ್ಯೆಯಲ್ಲಿದ್ದ ವಿಮಾನದೊಳಗಿನ 94 ಮಂದಿ ಸತ್ತರೆ, ಕಟ್ಟಡದಲ್ಲಿದ್ದ 25 ಮಂದಿ ಮೃತರಾಗಿ 80ಕ್ಕೂ ಹೆಚ್ಚು ಜನ ಗಾಯಗೊಂಡರು. ಪತ್ರಕರ್ತರು ಬಂಡಾ ಅಬ್ಬಾಸ್ ಪಟ್ಟಣಕ್ಕೆ ಸೇನಾ ಕವಾಯತು ವರದಿಗಾಗಿ ಹೊರಟಿದ್ದರು.

2005: ಪರಿಸರ ಶಿಕ್ಷಣಕ್ಕೆ ಆಂದೋಲನದ ರೂಪ ನೀಡಿದ ಮೈಸೂರಿನ ಪಕ್ಷಿ ತಜ್ಞ ಕೆ. ಮನು ಅವರಿಗೆ ಹಸಿರು ಶಿಕ್ಷಕ ಪ್ರಶಸ್ತಿ ಘೋಷಿಸಲಾಯಿತು. ಪ್ರತಿಷ್ಠಿತ ಸ್ಯಾಂಚುರಿ ಏಷ್ಯಾ ಪತ್ರಿಕೆ ಮತ್ತು ಎಬಿಎನ್ ಆಮ್ರೊ ಬ್ಯಾಂಕಿನ ಸಹಯೋಗದಲ್ಲಿ ಈ ಪ್ರಶಸ್ತಿ ಸ್ಥಾಪಿಸಲಾಗಿದೆ.

2005: ಹುಬ್ಬಳ್ಳಿಯಲ್ಲಿ ರಾಷ್ಟ್ರೀಯ ಹಿಂದೂಸೇನೆ ಉದಯ. ಭಜರಂಗದಳದಿಂದ ಶಿವಸೇನೆ ಸೇರಿ ಅಲ್ಲಿಂದಲೂ ಹೊರಬಂದ ಪ್ರಮೋದ್ ಮುತಾಲಿಕ್ ಈ ಸೇನೆಯ ಅಧ್ಯಕ್ಷರಾಗಿದ್ದು ಗಾಜಿನಮನೆಯಲ್ಲಿ ಹೊಸ ಪಕ್ಷದ ಉದಯವನ್ನು ಘೋಷಿಸಿದರು.

2001: ಕಾರುಗಳಲ್ಲಿ ಮುಂಭಾಗದಲ್ಲಿ ಕುಳಿತು ಪ್ರಯಾಣ ಮಾಡುವವರು ಸೀಟ್ ಬೆಲ್ಟ್ಗಳನ್ನು ಧರಿಸುವುದು ಕಡ್ಡಾಯ ಎಂದು ಭಾರತದ ಸುಪ್ರೀಂ ಕೋರ್ಟ್ ತೀರ್ಪು ನೀಡಿತು.

1992: ಉತ್ತರ ಪ್ರದೇಶದ ಅಯೋಧ್ಯೆಯ ಬಾಬರಿ ಮಸೀದಿ- ರಾಮಜನ್ಮಭೂಮಿ ವಿವಾದಕ್ಕೆ ಸಂಬಂಧಿಸಿದಂತೆ ತೀವ್ರಗೊಳ್ಳುತ್ತಾ ನಡೆದ ಸರಣಿ ಘಟನೆಗಳು ಈ ದಿನ ಅಯೋಧ್ಯೆಯಲ್ಲಿ ವಿವಾದಿತ ರಾಮಜನ್ಮಭೂಮಿ- ಬಾಬರಿ ಮಸೀದಿ ಕಟ್ಟಡ ಧ್ವಂಸದೊಂದಿಗೆ ಪರ್ಯವಸಾನಗೊಂಡವು.

1956: ಭಾರತೀಯ ಸಂವಿಧಾನ ರಚನಾ ಸಮಿತಿಯ ಅಧ್ಯಕ್ಷ ಭೀಮರಾವ್ ರಾಮ್ ಜಿ ಅಂಬೇಡ್ಕರ್ ತಮ್ಮ 65ನೇ ವಯಸ್ಸಿನಲ್ಲಿ ನಿಧನರಾದರು. ಇವರು ಭಾರತ ಸರ್ಕಾರದ ಪ್ರಥಮ ಕಾನೂನು ಸಚಿವರಾಗಿದ್ದರು. ಈ ದಿನವನ್ನು ಮಹಾರಾಷ್ಟ್ರದಲ್ಲಿ `ಮಹಾಪರಿನಿವರ್ಾಣ ದಿನ' ಆಗಿ ಆಚರಿಸಲಾಗುತ್ತದೆ.

1955: ಸಾಹಿತಿ ಪೂರ್ಣಿಮಾ ರಾಮಣ್ಣ ಜನನ.

1949: ಸಾಹಿತಿ ಶಿವಳ್ಳಿ ಕೆಂಪೇಗೌಡ ಜನನ.

1947: ಸಾಹಿತಿ ಡಾ. ಡಿ.ಎಸ್. ಜಯಪ್ಪ ಗೌಡರ ಜನನ.

1934: ಪ್ರಾಧ್ಯಾಪಕ, ಜಾನಪದ ತಜ್ಞ, ಮಹಾದೇವಯ್ಯ ಅವರು ರುದ್ರಯ್ಯ- ಹೊನ್ನಮ್ಮ ದಂಪತಿಯ ಮಗನಾಗಿ ತುಮಕೂರು ಜಿಲ್ಲೆ ಗುಬ್ಬಿ ತಾಲ್ಲೂಕಿನ ತಿಪ್ಪೂರು ಗ್ರಾಮದಲ್ಲಿ ಜನಿಸಿದರು.

1898: ಜರ್ಮನ್ ಸಂಜಾತ ಛಾಯಾಗ್ರಾಹಕ ಆಲ್ ಫ್ರೆಡ್ ಐಸೆನ್ ಸ್ಟೇಟ್ (1898-1995) ಹುಟ್ಟಿದ ದಿನ. `ಲೈಫ್' ಪತ್ರಿಕೆಗೆ ಇವರು ಒದಗಿಸುತ್ತಿದ್ದ ಛಾಯಾಚಿತ್ರಗಳು ಅಮೆರಿಕಾದ `ಫೊಟೋ ಜರ್ನಲಿಸಂ'ನ್ನು ರೂಪಿಸುವಲ್ಲಿ ಮಹತ್ವದ ಪಾತ್ರ ವಹಿಸಿದವು.

1877: ಅಮೆರಿಕನ್ ಸಂಶೋಧಕ ಥಾಮಸ್ ಆಲ್ವಾ ಎಡಿಸನ್ ಅವರಿಂದ ಮೊತ್ತ ಮೊದಲ ಧ್ವನಿ ಮುದ್ರಣ ನಡೆಯಿತು. ನ್ಯೂ ಜೆರ್ಸಿಯ ವೆಸ್ಟ್ ಆರೆಂಜಿನಲ್ಲಿ ನಡೆದ ಪ್ರದರ್ಶನದಲ್ಲಿ ಎಡಿಸನ್ ಫೋನೋಗ್ರಾಫ್ ಎದುರು `ಮೇರಿ ಹ್ಯಾಡ್ ಎ ಲಿಟ್ಲ್ ಲ್ಯಾಂಬ್' ಹಾಡಿದಾಗ ಅದು ಮುದ್ರಣಗೊಂಡು ನಂತರ ಪುನಃ ಆಲಿಸಲು ಸಾಧ್ಯವಾಯಿತು.

1823: ಈ ದಿನ ಜರ್ಮನ್ ಭಾಷಾ ತಜ್ಞ ಮ್ಯಾಕ್ಸ್ ಮುಲ್ಲರ್ (1823-1900) ಜನ್ಮದಿನ. `ದಿ ಸೇಕ್ರೆಡ್ ಬುಕ್ಸ್ ಆಫ್ ಈಸ್ಟ್' ನ್ನು ಸಂಪಾದಿಸಿದ್ದು ಇವರ ಮಹತ್ತರ ಸಾಧನೆ. `ಋಗ್ವೇದ' ಸಂಪಾದಿಸಿದ ಹೆಗ್ಗಳಿಕೆಯೂ ಇವರಿಗಿದೆ.

Advertisement