Showing posts with label ನ್ಯಾಯಮೂರ್ತಿ ಎನ್.‌ ಸಂತೋಷ ಹೆಗ್ಡೆ. Show all posts
Showing posts with label ನ್ಯಾಯಮೂರ್ತಿ ಎನ್.‌ ಸಂತೋಷ ಹೆಗ್ಡೆ. Show all posts

Tuesday, February 27, 2024

ಇದೀಗ ಬಿಡುಗಡೆಯಾಗಿದೆ……

 ಇದೀಗ ಬಿಡುಗಡೆಯಾಗಿದೆ……

ಬೆಂಗಳೂರು: ಬೆಂಗಳೂರಿನಲ್ಲಿ ತಲೆಯ ಮೇಲೊಂದು ಸೂರು ಕಟ್ಟಿಸಿಕೊಳ್ಳಲು ದಶಕಗಳ ಕಾಲ ನಡೆದ ʼಗಾಂಧಿಗಿರಿ ಹೋರಾಟವನ್ನು ಬಿಡಿಸಿಟ್ಟಿರುವ ʼಬೆಂಗಳೂರಿನ ಭೂ ಮಾಫಿಯಾ ಭ್ರಷ್ಟಾಚಾರದ ಚಕ್ರವ್ಯೂಹʼ ಪುಸ್ತಕ ಇದೀಗ ಬಿಡುಗಡೆಯಾಗಿದೆ.

ಬೆಂಗಳೂರಿನ ಗ್ಲೋಬಲ್‌ ಅಕಾಡೆಮಿ ಆಫ್‌ ಟೆಕ್ನಾಲಜಿ ಕಾಲೇಜು ಸಭಾಂಗಣದಲ್ಲಿ ೨೦೨೪ ಫೆಬ್ರುವರಿ ೨೫ರ ಭಾನುವಾರ ನಡೆದ ಸಮಾರಂಭದಲ್ಲಿ ಡಿಜಿಟಲ್‌ ತಜ್ಞ ಡಾ. ಶಂಕರ ಕೆ. ಪ್ರಸಾದ್‌ ಮತ್ತು ಪತ್ರಕರ್ತ ನೆತ್ರಕೆರೆ ಉದಯಶಂಕರ ವಿರಚಿತ ʼಬೆಂಗಳೂರಿನ ಭೂ ಮಾಫಿಯಾ ಭ್ರಷ್ಟಾಚಾರದ ಚಕ್ರವ್ಯೂಹʼ ಪುಸ್ತಕವನ್ನು ನಿವೃತ್ತ ಪೊಲೀಸ್‌ ಮಹಾನಿರ್ದೇಶಕ ಡಾ. ಡಿ.ವಿ. ಗುರುಪ್ರಸಾದ್‌ ಮತ್ತು ಚಾಣಕ್ಯ ವಿಶ್ವ ವಿದ್ಯಾಲಯದ ಸಂದರ್ಶಕ ಪ್ರಾದ್ಯಾಪಕ ಪ್ರೊ. ಸದಾನಂದ ಜಾನೆಕರೆ ಬಿಡುಗಡೆ ಮಾಡಿದರು.

ಈ ಸಂದರ್ಭದಲ್ಲಿ ಆನ್‌ ಲೈನ್‌ ಮೂಲಕ ತಮ್ಮ ಸಂದೇಶ ನೀಡಿದ ಕರ್ನಾಟಕದ ನಿವೃತ್ತ ಲೋಕಾಯುಕ್ತ ನ್ಯಾಯಮೂರ್ತಿ ಎನ್.‌ ಸಂತೋಷ ಹೆಗ್ಡೆ ಅವರು “ಸಮಾಜದಲ್ಲಿ ಶಾಂತಿ, ಸೌಹಾರ್ದತೆ ನೆಲೆಸಲು ತೃಪ್ತಿ ಮತ್ತು ಮಾನವೀಯತೆಯನ್ನು ಅಳವಡಿಸಿಕೊಳ್ಳುವುದೊಂದೇ ದಾರಿ” ಎಂದು ಹೇಳಿದರು.

ನಮ್ಮಲ್ಲಿ ಅರ್ಥಿಕತೆ ಮುನ್ನಡೆಯುತ್ತಿದ್ದರೂ ದುರಾಸೆಯಿಂದಾಗಿ ಸಮಾಜದಲ್ಲಿನ ಶಾಂತಿ, ಸೌಹಾರ್ದತೆ ಅಳಿಯುತ್ತಿದೆ.  ನಾವು ಚಿಕ್ಕವರಾಗಿದ್ದಾಗ ನಮ್ಮ ಹಿರಿಯರು ಮಕ್ಕಳಿಗೆ ಚಿಕ್ಕಂದಿನಿಂದಲೇ ಮೌಲ್ಯಗಳನ್ನು ಹೇಳಿಕೊಡುತ್ತಿದ್ದರು. ತಪ್ಪು ಮಾಡಿದವರಿಗೆ ಶಿಕ್ಷೆ ನೀಡುತ್ತಿದ್ದರು. ಅಂತಹ ಮೌಲ್ಯ ಆಗ ಇತ್ತು.  ಇಂದು ಪ್ರಾಮಾಣಿಕತೆ ಉಳಿದಿಲ್ಲ. ಶ್ರೀಮಂತಿಕೆಯ ಪೂಜೆ ನಡೆಯುತ್ತಿದೆ. ತಪ್ಪೆಸಗಿದ ವ್ಯಕ್ತಿ ಜೈಲಿಗೆ ಹೋಗಿ ಹೊರಕ್ಕೆ ಬಂದರೆ ಅವರಿಗೆ ಅಪೂರ್ವ ಸ್ವಾಗತ ನೀಡಲಾಗುತ್ತಿದೆʼ ಎಂದು ಅವರು ವಿಷಾದಿಸಿದರು.

ವ್ಯಕ್ತಿ ಶ್ರೀಮಂತನಾಗುವುದು ತಪ್ಪಲ್ಲ. ಆದರೆ ಅಕ್ರಮ ಎಸಗಿ ಅದನ್ನು ಸಂಪಾದಿಸಬಾರದು. ಅಂತಹ ಸಂಪತ್ತು ಉಳಿಯುವುದಿಲ್ಲ ಎಂದು ನುಡಿದ ಹೆಗ್ಡೆ,  ಕಳೆದ ಕೆಲವು ದಶಕಗಳಿಂದ ದುರಾಸೆಯ ಪರಿಣಾಮವಾಗಿ ಸಂಭವಿಸಿದ 1948 ಜೀಪ್‌ ಹಗರಣ, ಬೊಪೋರ್ಸ್‌ ಹಗರಣ, ಕಾಮನ್ವೆಲ್ತ್‌ ಗೇಮ್ಸ್‌ ಹಗರಣ, ಪೂಂಜಿ ಹಗರಣ, ಕೋಲ್‌ ಗೇಟ್ ಹಗರಣಗಳನ್ನು ಉದಾಹರಿಸಿ ಭ್ರಷ್ಟಾಚಾರದ ಪ್ರಮಾಣ 52 ಲಕ್ಷ ರೂಪಾಯಿಗಳಿಂದ 1.92 ಕೋಟಿ ರೂಪಾಯಿಗಳವರೆಗೆ ಬೆಳೆದದ್ದನ್ನು ಉದಾಹರಿಸಿದರು.

ಇದೇ ವೇಳೆಗೆ ಸಂಸತ್ತಿನಲ್ಲಿ ವೇತನ, ಭತ್ಯೆ ಪಡೆಯುವ ಜನ ಪ್ರತಿನಿಧಿಗಳು ಸಂಸತ್ತಿನಲ್ಲಿ ಮಾತನಾಡುವುದು ಕಡಿಮೆಯಾಗುತ್ತಿದೆ ಎಂದು ನುಡಿದ ಅವರು ಇಂತಹ ಸ್ಥಿತಿಯಲ್ಲಿ ಅಭಿವೃದ್ಧಿ ಹೇಗೆ ಸಾಧ್ಯ ಎಂದು ಪ್ರಶ್ನಿಸಿದರು.

ಪುಸ್ತಕ ಬಿಡುಗಡೆ ಮಾಡಿ ಮಾತನಾಡಿದ ಮುಖ್ಯ ಅತಿಥಿ ಚಾಣಕ್ಯ ವಿಶ್ವ ವಿದ್ಯಾಲಯದ ಸಂದರ್ಶಕ ಪ್ರಾಧ್ಯಾಪಕ ಸದಾನಂದ ಜಾನೆಕೆರೆ ಅವರು ಜನಹಿತಕ್ಕಾಗಿ ಶ್ರಮಿಸಬೇಕಾದ ಪ್ರಜಾಪ್ರಭುತ್ವ ವ್ಯವಸ್ಥೆ ಹೇಗೆ ಕೆಲಸ ಮಾಡುತ್ತಿದೆ ಎಂಬುದನ್ನು ಪುಸ್ತಕ ಬಿಡಿಸಿ ಇಡುತ್ತಿದೆ. ಯುವಕರು, ವಿಶೇಷವಾಗಿ ಸಮಾಜ ಶಾಸ್ತ್ರ ವಿದ್ಯಾರ್ಥಿಗಳು ಅಧ್ಯಯನ ಮಾಡಬೇಕಾದ ವಿಚಾರಗಳು ಇಲ್ಲಿವೆ ಎಂದು ಹೇಳಿದರು.

ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಶಾಸಕಾಂಗ, ಕಾರ್ಯಾಂಗ, ನ್ಯಾಯಾಂಗ ಮತ್ತು ಮಾಧ್ಯಮರಂಗಕ್ಕೆ ಜನಹಿತ ಸಾಧನೆಗಾಗಿ ತಮ್ಮದೇ ಆದ ಕೆಲಸಗಳಿವೆ. ಅವುಗಳ ಜಾರಿಗಾಗಿ ಕಾನೂನುಗಳಿವೆ. ಆದರೆ ಈ ವ್ಯವಸ್ಥೆಯ ಆಯಕಟ್ಟಿನ ಜಾಗದಲ್ಲಿ ಇರುವವರು ತಮ್ಮ ಸ್ವಹಿತಾಸಕ್ತಿ ಬೆಳೆಸಿಕೊಂಡು ಅದರ ಪೋಷಣೆಗಾಗಿ ಕಾನೂನುಗಳನ್ನೇ ಹೇಗೆ ತಿರುಚುತ್ತಾರೆ ಎಂಬುದರ ಒಳನೋಟವನ್ನು ಪುಸ್ತಕ ನೀಡುತ್ತಿದೆ ಎಂದು ಅವರು ನುಡಿದರು.

ಪ್ರಜಾಪ್ರಭುತ್ವ ವ್ಯವಸ್ಥೆ ಯಶಸ್ವಿಯಾಗಲು ನಿರಂತರ ಜಾಗೃತಿ, ಹೋರಾಟ ಅಗತ್ಯ. ಹಾಗೆಯೇ ಆರ್‌ ಟಿ ಐ ವ್ಯವಸ್ಥೆ ದುರ್ಬಲವಾಗದಂತೆ ನೋಡಿಕೊಳ್ಳಬೇಕು ಎಂದು ಅವರು ನುಡಿದರು.

ಸಮಾರಂಭದ ಅಧ್ಯಕ್ಷತೆ ವಹಿಸಿದ್ದ ನಿವೃತ್ತ ಪೊಲೀಸ್‌ ಮಹಾನಿರ್ದೇಶಕ ಡಾ. ಡಿ.ವಿ. ಗುರುಪ್ರಸಾದ್‌ ಅವರು ಮಾತನಾಡಿ ಭ್ರಷ್ಟಾಚಾರವನ್ನು ನಿಯಂತ್ರಿಸಲು ಇರುವುದು ಒಂದೇ ದಾರಿ. ಲಂಚ ಕೊಡುವುದಿಲ್ಲ ಮತ್ತು ಇತರರಿಂದ ತೆಗೆದುಕೊಳ್ಳುವುದಿಲ್ಲ ಎಂಬುದಾಗಿ ಹಿರಿಯರು ನಿರ್ಧಾರ ಮಾಡುವುದು ಮತ್ತು ಮಕ್ಕಳಿಗೆ ಇಂತಹ ಮೌಲ್ಯಗಳನ್ನು ಶಾಲಾ ಮಟ್ಟದಿಂದಲೇ ಕಲಿಸಿಕೊಡುವುದು ಎಂದು ಹೇಳಿದರು.

ʼಏನೇ ಮಾಡಿದರೂ ನಡೀತದೆ ಎಂಬ ಭಾವನೆ ಮಕ್ಕಳಲ್ಲಿ ಮೂಡದಂತೆ ಎಚ್ಚರಿಕೆ ವಹಿಸಬೇಕುʼ ಎಂದೂ ಅವರು ನುಡಿದರು.

ಚಿತ್ರನಟ ಅರುಣ ಕುಮಾರ್‌ ಪುಸ್ತಕದ ಅಧ್ಯಾಯವೊಂದನ್ನು ವಾಚಿಸಿದರು.

ಲೇಖಕರಲ್ಲಿ ಒಬ್ಬರಾದ ಡಾ. ಶಂಕರ ಕೆ. ಪ್ರಸಾದ್‌ ಪವರ್‌ ಪಾಯಿಂಟ್‌ ಪ್ರಸಂಟೇಷನ್‌ ಮೂಲಕ ಪುಸ್ತಕ ಬರೆಯಲು ಏನು ಕಾರಣ ಎಂದು ವಿವರಿಸಿ, ಸಮಸ್ಯೆಗಳ ನಿವಾರಣೆಗೆ ತಂತ್ರಜ್ಞಾನ ಅಳವಡಿಕೆಯ ಮಾಹಿತಿ ಪುಸ್ತಕದಲ್ಲಿದೆ ಎಂದರು.

ಸಹಲೇಖಕ ನೆತ್ರಕೆರೆ ಉದಯಶಂಕರ ಧನ್ಯವಾದ ಅರ್ಪಿಸಿದರು. ನಿವೃತ್ತ ನ್ಯಾಯಾಧೀಶ ಪ್ರಾಣೇಶ್‌,  ವಾಸುಕಿ ರಮೇಶ್‌, ಅಮರನಾಥ್‌, ನಾಗೇಶ್‌, ಗುಣಶೇಖರ ನಾಯ್ಡು ಮಾತನಾಡಿದರು. ಶಂಕರ ನಾರಾಯಣ ಕಾರಂತ ಕಾರ್ಯಕ್ರಮ ನಿರ್ವಹಿಸಿದರು. 

ಹಿರಿಯ  ಸಾಹಿತಿ ಗೊ.ರು. ಚನ್ನಬಸಪ್ಪ, ಗ್ಲೋಬಲ್‌ ಅಕಾಡೆಮಿ ಆಫ್‌ ಟೆಕ್ನಾಲಜಿ ಕಾಲೇಜು ಪ್ರಾಂಶುಪಾಲ ಪೃಥ್ವೀ ರೆಡ್ಡಿ ಮತ್ತಿತರರು ಸಮಾರಂಭದಲ್ಲಿ ಹಾಜರಿದ್ದರು.

ಚಿತ್ರಗಳ ಸಮೀಪ ದರ್ಶನಕ್ಕೆ ಚಿತ್ರಗಳನ್ನು ಕ್ಲಿಕ್‌ ಮಾಡಿ.

ಆನ್‌ ಲೈನ್‌ ಮೂಲಕ ಕಾರ್ಯಕ್ರಮದಲ್ಲಿ ಪಾಲ್ಗೊಂಡ ಕರ್ನಾಟಕದ ನಿವೃತ್ತ ಲೋಕಾಯುಕ್ತ ನ್ಯಾಯಮೂರ್ತಿ ಎನ್.‌ ಸಂತೋಷ ಹೆಗ್ಡೆ ಅವರ ವಿಡಿಯೋ ಸಂದೇಶ ಆಲಿಸಲು ಕೆಳಗೆ ಕ್ಲಿಕ್‌ ಮಾಡಿ. 


ಪುಸ್ತಕ ಖರೀದಿಗೆ ಕ್ಲಿಕ್‌ ಮಾಡಿ: https://buynow.sampoornaswaraj.org/

Saturday, February 24, 2024

ಗಾಂಧಿಗಿರಿಯ ʼಗುಲಾಬಿ ಗ್ಯಾಂಗ್‌ʼ ಕಥೆಗೆ ಇದೀಗ ಪುಸ್ತಕ ರೂಪ

 ಗಾಂಧಿಗಿರಿಯ ʼಗುಲಾಬಿ ಗ್ಯಾಂಗ್‌ʼ ಕಥೆಗೆ ಇದೀಗ ಪುಸ್ತಕ ರೂಪ

ಬೆಂಗಳೂರು: ಬಿಬಿಎಂಪಿ ಖಾತೆಗಳಿಗಾಗಿ ʼಗಾಂಧಿಗಿರಿʼ ಹೋರಾಟ ನಡೆಸುತ್ತಿದ್ದ ಬೆಂಗಳೂರಿನ ಗುಲಾಬಿ ಗ್ಯಾಂಗ್‌ ಕಥೆ ಇದೀಗ ಪುಸ್ತಕ ರೂಪದಲ್ಲಿ ಪ್ರಕಟಗೊಂಡಿದೆ. ಪುಸ್ತಕದ ಬಿಡುಗಡೆ ಸಮಾರಂಭವು ಫೆಬ್ರುವರಿ 25ರ ಭಾನುವಾರ ಬೆಳಗ್ಗೆ ಬೆಂಗಳೂರಿನ ರಾಜರಾಜೇಶ್ವರಿ ನಗರದ ಬಂಗಾರಪ್ಪ ನಗರದಲ್ಲಿನ ಗ್ಲೋಬಲ್‌ ಅಕಾಡೆಮಿ ಆಫ್‌ ಟೆಕ್ನಾಲಜಿ ಕಾಲೇಜು ಸಭಾಂಗಣದಲ್ಲಿ ನಡೆಯಲಿದೆ.

ಕರ್ನಾಟಕದ ನಿವೃತ್ತ ಲೋಕಾಯುಕ್ತ ನ್ಯಾಯಮೂರ್ತಿ ಎನ್.‌ ಸಂತೋಷ ಹೆಗ್ಡೆ ಅವರು ʼಬೆಂಗಳೂರಿನ ಭೂ ಮಾಫಿಯಾ ಭ್ರಷ್ಟಾಚಾರದ ಚಕ್ರವ್ಯೂಹʼ ಪುಸ್ತಕವನ್ನು ಬಿಡುಗಡೆ ಮಾಡಲಿದ್ದಾರೆ. ನಿವೃತ್ತ ಪೊಲೀಸ್‌ ಮಹಾನಿರ್ದೇಶಕ ಹಾಗೂ ಲೇಖಕ ಡಾ. ಡಿ.ವಿ. ಗುರುಪ್ರಸಾದ್‌ ಸಮಾರಂಭದ ಅಧ್ಯಕ್ಷತೆ ವಹಿಸಲಿದ್ದಾರೆ. ಚಾಣಕ್ಯ ವಿಶ್ವ ವಿದ್ಯಾಲಯದ ಸಂದರ್ಶಕ ಪ್ರಾಧ್ಯಾಪಕ ಪ್ರೊ. ಸದಾನಂದ ಜಾನೆಕೆರೆ ಮುಖ್ಯ ಅತಿಥಿಯಾಗಿ ಪಾಲ್ಗೊಳ್ಳಲಿದ್ದಾರೆ.

ಡಿಜಿಟಲ್‌ ತಂತ್ರಜ್ಞಾನ ಪರಿಣತ ಡಾ. ಶಂಕರ ಕೆ. ಪ್ರಸಾದ್‌ ಮತ್ತು ಹಿರಿಯ ಪತ್ರಕರ್ತ ನೆತ್ರಕೆರೆ ಉದಯಶಂಕರ ಈ ಪುಸ್ತಕವನ್ನು ಬರೆದಿದಾರೆ. ಸಚ್ಚಿದಾನಂದ ನಗರ ನ್ಯಾಯಪರ ಆಂದೋಲನವು ಸಮಾರಂಭವನ್ನು ಸಂಘಟಿಸಿದೆ.

ಬೆಂಗಳೂರಿನ ಬಡಾವಣೆಯೊಂದರ ಸುಮಾರು 950 ಕುಟುಂಬಗಳ ಸದಸ್ಯರು ಸೂರು ಕಟ್ಟಿಕೊಳ್ಳಲು ಹೊರಟಾಗ ಎದುರಾದ ಸಮಸ್ಯೆಗಳ ಸರಮಾಲೆಯ ಕಥೆಯನ್ನು ಪುಸ್ತಕ ಹೊಂದಿದೆ. ಭೂ ಮಾಫಿಯಾ, ಅಧಿಕಾರಿಗಳು ಮತ್ತು ರಾಜಕಾರಣಿಗಳ ʼಭ್ರಷ್ಟಾಚಾರದ ಚಕ್ರವ್ಯೂಹʼ ಪಡೆ ಹೇಗೆ ಅವರನ್ನು ಕಾಡಿತು ಎಂಬ ವಿವರದ ಜೊತೆಗೆ ಇಂತಹ ಸಮಸ್ಯೆಗಳ ಪರಿಹಾರಕ್ಕೆ ತಂತ್ರಜ್ಞಾನವನ್ನು ಹೇಗೆ ಬಳಸಿಕೊಳ್ಳಬಹುದು ಎಂಬ ಅನ್ವೇಷಣೆಯೇ ಈ ಪುಸ್ತಕದ ಹೂರಣ ಎಂದು ಪುಸ್ತಕವನ್ನು ಪ್ರಕಟಿಸಿರುವ ಸಂಪೂರ್ಣ ಸ್ವರಾಜ್‌ ಫೌಂಡೇಷನ್‌ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದೆ.

Advertisement