Showing posts with label ಇಂದಿನ ಇತಿಹಾಸ History Today (November 1-10).. Show all posts
Showing posts with label ಇಂದಿನ ಇತಿಹಾಸ History Today (November 1-10).. Show all posts

Tuesday, November 24, 2009

ಇಂದಿನ ಇತಿಹಾಸ History Today ನವೆಂಬರ್ 10

ಇಂದಿನ ಇತಿಹಾಸ

ನವೆಂಬರ್ 10

ಒಂದೂವರೆ ದಶಕದ ಕಾಲ ಭಾರತದ ಕ್ರಿಕೆಟಿನಲ್ಲಿ ನಕ್ಷತ್ರದಂತೆ ಮಿನುಗಿದ್ದ ಸೌರವ್ ಚಂಡಿದಾಸ್ ಗಂಗೂಲಿ ಮಹಾರಾಷ್ಟ್ರದ ನಾಗಪುರದ ವಿದರ್ಭ ಕ್ರಿಕೆಟ್ ಸಂಸ್ಥೆಯ ನೂತನ ಕ್ರೀಡಾಂಗಣದಲ್ಲಿ ಕಿಕ್ಕಿರಿದು ಸೇರಿದ್ದ ಸಾವಿರಾರು ಕ್ರಿಕೆಟ್ ಅಭಿಮಾನಿಗಳ ಸಮ್ಮುಖದಲ್ಲಿ ಅಂತಾರಾಷ್ಟ್ರೀಯ ಕ್ರಿಕೆಟಿಗೆ ಪೂರ್ಣ ವಿದಾಯ ಹೇಳಿದರು. ಗಾವಸ್ಕರ್- ಬಾರ್ಡರ್ ಟ್ರೋಫಿ ಟೆಸ್ಟ್ ಸರಣಿಯ ನಾಲ್ಕನೇ ಪಂದ್ಯ `ದಾದಾ' ವೃತ್ತಿ ಜೀವನದ ಕೊನೆಯ ಪಂದ್ಯವಾಗಿ ಇತಿಹಾಸದ ಪುಟ ಸೇರಿತು.


2008: ಒಂದೂವರೆ ದಶಕದ ಕಾಲ ಭಾರತದ ಕ್ರಿಕೆಟಿನಲ್ಲಿ ನಕ್ಷತ್ರದಂತೆ ಮಿನುಗಿದ್ದ ಸೌರವ್ ಚಂಡಿದಾಸ್ ಗಂಗೂಲಿ ಮಹಾರಾಷ್ಟ್ರದ ನಾಗಪುರದ ವಿದರ್ಭ ಕ್ರಿಕೆಟ್ ಸಂಸ್ಥೆಯ ನೂತನ ಕ್ರೀಡಾಂಗಣದಲ್ಲಿ ಕಿಕ್ಕಿರಿದು ಸೇರಿದ್ದ ಸಾವಿರಾರು ಕ್ರಿಕೆಟ್ ಅಭಿಮಾನಿಗಳ ಸಮ್ಮುಖದಲ್ಲಿ ಅಂತಾರಾಷ್ಟ್ರೀಯ ಕ್ರಿಕೆಟಿಗೆ ಪೂರ್ಣ ವಿದಾಯ ಹೇಳಿದರು. ಗಾವಸ್ಕರ್- ಬಾರ್ಡರ್ ಟ್ರೋಫಿ ಟೆಸ್ಟ್ ಸರಣಿಯ ನಾಲ್ಕನೇ ಪಂದ್ಯ `ದಾದಾ' ವೃತ್ತಿ ಜೀವನದ ಕೊನೆಯ ಪಂದ್ಯವಾಗಿ ಇತಿಹಾಸದ ಪುಟ ಸೇರಿತು.

2008: ಭಯೋತ್ಪಾದನೆ ಇಸ್ಲಾಂ ಧರ್ಮಕ್ಕೆ ವಿರುದ್ಧವಾದದ್ದು ಎಂಬ ದಾರುಲ್ ಉಲೂಮ್ ದಿಯೊಬಂದ್ (ದೇವಬಂದ್) ಇಸ್ಲಾಂ ಅಕಾಡೆಮಿಕ್ ಸೆಂಟರಿನ ಫತ್ವಾಕ್ಕೆ (ಧಾರ್ಮಿಕ ಆದೇಶ) ಹೈದರಾಬಾದಿನಲ್ಲಿ ನಡೆದ ಮುಸ್ಲಿಮ್ ಧಾರ್ಮಿಕ ಮುಖಂಡರ ಮತ್ತು ಶಿಕ್ಷಕರ ರಾಷ್ಟ್ರೀಯ ಸಮಾವೇಶದಲ್ಲಿ ಸಹಮತ ವ್ಯಕ್ತಪಡಿಸಲಾಯಿತು. ಜಮಾತ್ ಉಲೆಮಾ ಇ ಹಿಂದ್ ಸಮಾವೇಶದಲ್ಲಿ ರಾಷ್ಟ್ರದ ವಿವಿಧ ಭಾಗಗಳಿಂದ ಬಂದಿದ್ದ ಸುಮಾರು ಆರು ಸಾವಿರ ಧಾರ್ಮಿಕ ಮುಖಂಡರು ಹಾಗೂ ಶಿಕ್ಷಕರು ಭಾಗವಹಿಸಿದ್ದರು. ಈ ಸಮಾವೇಶದಲ್ಲಿ ಅಂಗೀಕರಿಸಲಾದ ಗೊತ್ತುವಳಿಯನ್ನು ಹೈದರಾಬಾದ್ ನಿರ್ಣಯ ಎಂದು ಕರೆಯಲಾಯಿತು. ಇಸ್ಲಾಮ್ ಮತ್ತು ಭಯೋತ್ಪಾದನೆಗೆ ಸಂಬಂಧವೇ ಇಲ್ಲ, ಇಸ್ಲಾಂ ಅಕಾಡೆಮಿಕ್ ಸೆಂಟರಿನ ಫತ್ವಾಕ್ಕೆ ಸಹಮತವಿದೆ, ಅನಗತ್ಯ ಹಿಂಸಾಚಾರಕ್ಕೆ ಇಸ್ಲಾಮಿನ ವಿರೋಧವಿದೆ, ಶಾಂತಿ ಕದಡುವ ಹಾಗೂ ರಕ್ತಪಾತದ ಕೃತ್ಯಗಳಿಗೆ ವಿರೋಧವಿದೆ ಎಂಬ ಮಹತ್ವದ ನಿರ್ಣಯವನ್ನು ಈ ಸಮಾವೇಶದಲ್ಲಿ ಅಂಗೀಕರಿಸಲಾಯಿತು. ಒಳ್ಳೆಯ ಕೆಲಸಗಳಿಗೆ ಸಹಕಾರ ಮನೋಭಾವದಿಂದ ಕೆಲಸ ಮಾಡಬೇಕೆ ವಿನಾ ಪಾಪ ಕೃತ್ಯಗಳಿಗೆ ಮತ್ತು ದಮನಕಾರಿ ಕೃತ್ಯಗಳಿಗಲ್ಲ ಎಂದು ನಿರ್ಣಯದಲ್ಲಿ ತಿಳಿಸಲಾಯಿತು.

2008: ಟಿಪ್ಪರ್ ಒಂದಕ್ಕೆ ವೇಗವಾಗಿ ಬಂದ ಬೈಕ್ ಒಂದು ಡಿಕ್ಕಿ ಹೊಡೆದ ಪರಿಣಾಮ ಸ್ಥಳದಲ್ಲೇ ಬೈಕ್ ಸವಾರ ಚಲನಚಿತ್ರ ನಟ, ನಿರ್ಮಾಪಕ ದೇವದತ್ತ (37) ಮೃತರಾದ ಘಟನೆ ಮೈಸೂರಿನ ಕುವೆಂಪುನಗರದ ವಿಶ್ವಮಾನವ ಜೋಡಿ ರಸ್ತೆಯಲ್ಲಿ ನಡೆಯಿತು. ಮೈಸೂರಿನವರೇ ಆದ ದೇವದತ್ತ ಇತ್ತೀಚೆಗೆ ನಾಲ್ಕೈದು ಮಂದಿಯ ಜೊತೆ ಸೇರಿ `ಟೀಂ'ಎನ್ನುವ ಚಲನ ಚಿತ್ರವನ್ನು ನಿರ್ಮಿಸುತ್ತಿದ್ದರು.

2008: ಇರಾಕಿನ ಸುನ್ನಿ ಜನಾಂಗದ ಪ್ರಾಬಲ್ಯವಿರುವ ಜಿಲ್ಲೆಯೊಂದರ ಮಾರುಕಟ್ಟೆ ಪ್ರದೇಶದಲ್ಲಿ ಎರಡು ಬಾಂಬುಗಳು ಸ್ಫೋಟಿಸಿದ ಪರಿಣಾಮ ಕನಿಷ್ಠ 25 ಜನರು ಮೃತರಾಗಿ, ಸುಮಾರು 50 ಮಂದಿ ಗಾಯಗೊಂಡರು. ದಾಳಿಕೋರರು ಮೊದಲಿಗೆ ಅಧಾಮಿಯಾ ಪ್ರದೇಶದಲ್ಲಿ ಕಾರು ಬಾಂಬ್ ಸ್ಫೋಟಿಸಿ, ನಂತರ ಆತ್ಮಹತ್ಯಾ ದಾಳಿ ನಡೆಸಿದರು.

2008: ಅಮೆರಿಕ ನೇತೃತ್ವದ ಸಮ್ಮಿಶ್ರ ಪಡೆಯು ಉಗ್ರರನ್ನು ಗುರಿಯಾಗಿಸಿ ಪೂರ್ವ ಆಫ್ಘನಿನ ಖೋಸ್ಟ್ ಪ್ರಾಂತ್ಯದಲ್ಲಿ ವಾಯು ದಾಳಿ ನಡೆಸಿದ ಪರಿಣಾಮ ಖಾಸಗಿ ರಸ್ತೆ ನಿರ್ಮಾಣ ಕಂಪೆನಿಯೊಂದರ ಕನಿಷ್ಠ 14 ಭದ್ರತಾ ಸಿಬ್ಬಂದಿ ಮೃತರಾದರು.

2008: ವಾಯವ್ಯ ಪಾಕಿಸ್ಥಾನದಲ್ಲಿ ಇಸ್ಲಾಮಿಕ್ ಉಗ್ರರು ಮತ್ತು ಸರ್ಕಾರಿ ಪಡೆಗಳ ನಡುವೆ ನಡೆದ ವಾಯುದಾಳಿ ಮತ್ತು ಕಾಳಗದಲ್ಲಿ ಮೂವರು ಯೋಧರು ಸೇರಿದಂತೆ ಕನಿಷ್ಠ 54 ಮಂದಿ ಮೃತರಾದರು. ಆಫ್ಘನ್ ಗಡಿಯಲ್ಲಿನ ಮೋರ್ಗಾ ಪ್ರದೇಶದಲ್ಲಿ ಈ ಸಂಘರ್ಷ ನಡೆಯಿತು.

2008: ನ್ಯೂಯಾರ್ಕಿನ ವಾಲ್ ಸ್ಟ್ರೀಟ್ ಜರ್ನಲಿನ 50 ಜನರ ಜಾಗತಿಕ ಪಟ್ಟಿಯಲ್ಲಿ ಇಂದ್ರಾ ನೂಯಿ ಮೊದಲುಗೊಂಡು ಒಟ್ಟು ಮೂವರು ಭಾರತೀಯ ಮಹಿಳೆಯರು ಸ್ಥಾನ ಗಿಟ್ಟಿಸಿದರು. ಪೆಪ್ಸಿ ಕಂಪೆನಿಯ ಮುಖ್ಯಸ್ಥರಾದ ಇಂದ್ರಾ ನೂಯಿ ಎರಡನೇ ಸ್ಥಾನ ಪಡೆಯುವುದರೊಂದಿಗೆ ಮೊದಲ ಹತ್ತು ಜನರಲ್ಲಿ ಒಬ್ಬರು ಎನಿಸಿದರೆ; ಸಿಸ್ಕೊದ ಮುಖ್ಯ ತಾಂತ್ರಿಕ ಅಧಿಕಾರಿ ಪದ್ಮಶ್ರೀ ವಾರಿಯರ್ (31ನೇ ಸ್ಥಾನ) ಹಾಗೂ ಐ ಎನ್ ಎಕ್ಸ್ ಮೀಡಿಯಾದ ಮುಖ್ಯ ಕಾರ್ಯನಿರ್ವಾಹಕರಾದ ಇಂದ್ರಾಣಿ ಮುಖರ್ಜಿ 41ನೇ ಸ್ಥಾನ) ಈ ಪಟ್ಟಿಗೆ ಸೇರಿದ ಇತರ ಇಬ್ಬರು ಭಾರತೀಯ ಮಹಿಳೆಯರು. ಫೆಡರಲ್ ಡಿಪಾಸಿಟ್ ಇನ್ಶೂರೆನ್ಸ್ ಕಾರ್ಪೊರೇಷನ್ನಿನ ಅಧ್ಯಕ್ಷರಾದ ಶೀಲಾ ಬಯರ್ ಎಲ್ಲಕ್ಕಿಂತ ಮೇಲಿನ ಸ್ಥಾನ ಪಡೆದರು.

2007: ವಿಶೇಷ ಆರ್ಥಿಕ ವಲಯ ಸ್ಥಾಪನೆಗೆ ಸರ್ಕಾರ ಫಲವತ್ತಾದ ಕೃಷಿ ಭೂಮಿ ಸ್ವಾಧೀನಪಡಿಸಿಕೊಳ್ಳುವಂತಿಲ್ಲ ಎಂದು ಸುಪ್ರೀಂಕೋರ್ಟ್ ತೀರ್ಪು ನೀಡಿತು. ರಾಜ್ಯ ಸರ್ಕಾರದ ಭೂಸ್ವಾಧೀನ ಪ್ರಕ್ರಿಯೆ ಪ್ರಶ್ನಿಸಿ ಪಂಜಾಬಿನ ಹೋಶಿಯಾರ್ ಪುರ ಜಿಲ್ಲೆಯ ರೈತರಾದ ದೇವಿಂದರ್ ಸಿಂಗ್ ಮತ್ತಿತರರ ಮನವಿ ಪುರಸ್ಕರಿಸಿದ ನ್ಯಾಯಮೂರ್ತಿ ಎಸ್.ಪಿ.ಸಿನ್ಹಾ ಹಾಗೂ ಹರ್ಜೀತ್ ಸಿಂಗ್ ಬೇಡಿ ಅವರನ್ನೊಳಗೊಂಡ ಪೀಠವು ಈ ತೀರ್ಪು ನೀಡಿತು. ಜೊತೆಗೆ ಈ ಸಂಬಂಧ ರಾಜ್ಯ ಸರ್ಕಾರಕ್ಕೆ 25,000 ರೂ ದಂಡವನ್ನೂ ನ್ಯಾಯಾಲಯ ವಿಧಿಸಿತು. ವಿಶೇಷ ಆರ್ಥಿಕ ವಲಯ ಸ್ಥಾಪಿಸಲು ಯಾವುದೇ ಕಂಪೆನಿಗೆ ಭೂಮಿ ನೀಡುವಾಗ ಅದು ಫಲವತ್ತಾದ ಕೃಷಿ ಭೂಮಿಯೇ ಅಲ್ಲವೇ ಎಂಬುದನ್ನು ಸರ್ಕಾರ ಖಾತರಿ ಮಾಡಿಕೊಳ್ಳಬೇಕು. ಫಲವತ್ತಾದ ಭೂಮಿ ಅಲ್ಲ ಎಂದು ದೃಢಪಡಿಸಿಕೊಂಡೇ ಮುಂದಿನ ಹೆಜ್ಜೆ ಇಡಬೇಕು ಎಂದು ಸುಪ್ರೀಂಕೋರ್ಟ್ ತಿಳಿಸಿತು. ಈ ಸಂಬಂಧ ನಿಯಮಗಳು ಇರುವುದರಿಂದ ಸರ್ಕಾರ ಅವುಗಳನ್ನು ಕಡೆಗಣಿಸುವ ಪ್ರಶ್ನೆಯೇ ಉದ್ಭವಿಸಬಾರದು ಎಂದು ಹೇಳಿದ ಪೀಠವು, ರೈತರ ಜಮೀನು ಸ್ವಾಧೀನ ಪ್ರಕ್ರಿಯೆ ಎತ್ತಿಹಿಡಿದು ಪಂಜಾಬ್ ಹಾಗೂ ಹರಿಯಾಣ ಹೈಕೋರ್ಟ್ ನೀಡಿದ ಆದೇಶ ಸರಿಯಾದುದಲ್ಲ ಎಂದು ಹೇಳಿತು.

2007: ಸರ್ಕಾರಿ ವೈದ್ಯರ ನೇಮಕಾತಿ ನಡೆಯುತ್ತಿದ್ದ ಸಂದರ್ಭದಲ್ಲಿ ಬ್ರಿಟಿಷ್ ಹಾಗೂ ಯೂರೋಪಿಯನ್ ವೈದ್ಯರಿಗೆ ಸರ್ಕಾರ ನೀಡುತ್ತಿದ್ದ ಪ್ರಾಶಸ್ತ್ಯದ ಕ್ರಮ `ಕಾನೂನು ಬಾಹಿರ' ಎಂದು ಲಂಡನ್ ಹೈಕೋರ್ಟ್ ಹೇಳಿತು. ಉನ್ನತ ಮಟ್ಟದ ಪರಿಣಿತ ವಲಸೆ ಕಾರ್ಯಕ್ರಮದಡಿಯಲ್ಲಿ (ಎಚ್ಎಸ್ಎಂಪಿ) ವೈದ್ಯರನ್ನು ನೇಮಕ ಮಾಡಿಕೊಳ್ಳುವಾಗ ತಾರತಮ್ಯ ನೀತಿ ಅನುಸರಿಸುತ್ತಿದ್ದ ಆರೋಗ್ಯ ಇಲಾಖೆಯ ಕ್ರಮ ಕಾನೂನು ಬಾಹಿರ ಎಂದು ಮೂವರು ನ್ಯಾಯಾಧೀಶರನ್ನು ಒಳಗೊಂಡ ಪೀಠ ತೀರ್ಪು ನೀಡಿತು. ಸರ್ಕಾದ ಕ್ರಮದ ವಿರುದ್ಧ ಭಾರತೀಯ ವೈದ್ಯರು ಅರ್ಜಿ ಸಲ್ಲಿಸಿದ್ದರು. ಭಾರತೀಯ ವೈದ್ಯರ ಸಂಘಟನೆ `ಬ್ರಿಟಿಷ್ ಅಸೋಸಿಯೇಷನ್ ಆಫ್ ಫಿಜಿಸಿಯನ್ ಆಫ್ ಇಂಡಿಯನ್ ಒರಿಜಿನ್ (ಬಿಎಪಿಐಒ)' ಸುಮಾರು 16 ತಿಂಗಳು ಕಾಲ ಕಾನೂನು ಹೋರಾಟ ನಡೆಸಿತು. ಕಳೆದ ವರ್ಷದ ಏಪ್ರಿಲ್ ತಿಂಗಳಿನಲ್ಲಿ ಅಂತಾರಾಷ್ಟ್ರೀಯ ವೈದ್ಯರನ್ನು ನೇಮಕ ಮಾಡಿಕೊಳ್ಳುವ ಸಂದರ್ಭದಲ್ಲಿ ಸರ್ಕಾರ ಎರಡು ರೀತಿಯ ಪಟ್ಟಿಯನ್ನು ತಯಾರಿಸಿತ್ತು. ಮೊದಲನೇ ಪಟ್ಟಿ ಬ್ರಿಟಿಷ್ ಹಾಗೂ ಯೂರೋಪಿಯನ್ ವೈದ್ಯರದ್ದಾದರೆ, ಇನ್ನೊಂದು ಭಾರತೀಯರು ಸೇರಿದಂತೆ ಇತರ ರಾಷ್ಟ್ರಗಳ ವೈದ್ಯರ ಪಟ್ಟಿ. ಮೊದಲನೇ ಪಟ್ಟಿಯಲ್ಲಿರುವ ವೈದ್ಯರಿಂದ ಸ್ಥಾನ ಭರ್ತಿಯಾಗದಿದ್ದಾಗ ಮಾತ್ರ ಎರಡನೇ ಪಟ್ಟಿಯನ್ನು ಪರಿಶೀಲಿಸಲಾಗುತ್ತಿತ್ತು. ಇದರಿಂದ 16 ಸಾವಿರ ಸಾಗರೋತ್ತರ ವೈದ್ಯರಿಗೆ ತೊಂದರೆ ಉಂಟಾಯಿತು. ಸರ್ಕಾರದ ಈ ಆದೇಶವನ್ನು ಪ್ರಶ್ನಿಸಿ ಭಾರತೀಯ ವೈದ್ಯರು ನ್ಯಾಯಾಲಯದಲ್ಲಿ ದಾವೆ ಹೂಡಿದ್ದರು.

2006: ಹದಿನಾರು ವರ್ಷದ ಬಾಲೆ ಅಕಾಂಷ ಜಾಚಕ್ ನಿರಂತರವಾಗಿ 61 ಗಂಟೆಗಳ ಕಾಲ ಹಾಡುವ ಮೂಲಕ ಇಂದೋರಿನಲ್ಲಿ ಗಿನ್ನೆಸ್ ದಾಖಲೆ ಸೃಷ್ಟಿಸಿದಳು. ನವೆಂಬರ್ 7ರಿಂದ ನವೆಂಬರ್ 9ರ ಮಧ್ಯರಾತ್ರಿಯವರೆಗೆ ಆಕೆ ನಿರಂತರವಾಗಿ 725 ಹಾಡುಗಳನ್ನು ಹಾಡಿ ಜನರನ್ನು ರಂಜಿಸಿದಳು.

2006: ಆಧುನಿಕ ವಚನಕಾರ ಶಿವಕವಿ ಸಂಗಮೇಶ ಹೊಸಮನಿ (90) ರಾಣೆಬೆನ್ನೂರಿನಲ್ಲಿ ನಿಧನರಾದರು. ಮೂಲತಃ ಹುನಗುಂದ ತಾಲ್ಲೂಕಿನ ರಾಮವಾಡಗಿ ಗ್ರಾಮದವರಾದ ಸಂಗಮೇಶ ರಾಣೆಬೆನ್ನೂರಿನಲ್ಲಿ ಹತ್ತು ವರ್ಷಗಳಿಂದ ವಾಸವಾಗಿದ್ದರು.

2006: `ಶೇನ್' ಚಿತ್ರದಲ್ಲಿ ಬಾಡಿಗೆ ಹಂತಕನಾಗಿ ನಟಿಸಿ ಖ್ಯಾತಿಯ ಶಿಖರ ತಲುಪಿದ್ದ ಹಾಲಿವುಡ್ ನಟ ಜಾಕ್ ಪಲಾನ್ಸ್ (87) ಲಾಸ್ ಏಂಜೆಲಿಸ್ನಲ್ಲಿ ನಿಧನರಾದರು.

2006: ಮದುವೆಯಾದ 11 ವರ್ಷಗಳ ಬಳಿಕ ಬಾಲಿವುಡ್ ನಟಿ ಶ್ರೀದೇವಿ ತನ್ನನ್ನು ತ್ಯಜಿಸಿರುವುದಾಗಿ ಪ್ರತಿಪಾದಿಸಿ ಆಂಧ್ರಪ್ರದೇಶದ ಗುಂಟೂರು ನಿವಾಸಿ ವಿಚರಪು ರಾಮಕೃಷ್ಣ ಗೌಡ ಸಲ್ಲಿಸಿದ್ದ ಅರ್ಜಿಯನ್ನು ಸುಪ್ರೀಂಕೋರ್ಟ್ ವಜಾ ಮಾಡಿತು. ತಾನು ಕಾನೂನು ಬದ್ಧವಾಗಿ ಶ್ರೇದೇವಿಯನ್ನು 15-3-1992ರಲ್ಲಿ ಮದುವೆಯಾಗಿದ್ದು ಆಕೆ 2003ರಲ್ಲಿ ತನ್ನನ್ನು ತ್ಯಜಿಸಿದ್ದಾಳೆ ಎಂದು ರಾಮಕೃಷ್ಣ ಗೌಡ ಚೆನ್ನೈ ಕೌಟುಂಬಿಕ ನ್ಯಾಯಾಲಯಕ್ಕೆ ದೂರು ನೀಡಿದ್ದ. 2004ರ ಮಾರ್ಚ್ 26ರಂದು ಕೌಟುಂಬಿಕ ನ್ಯಾಯಾಲಯ ಶ್ರೀದೇವಿಗೆ ನೋಟಿಸ್ ನೀಡಿತ್ತು. ಶ್ರೀದೇವಿ ಉತ್ತರಿಸುವ ಬದಲು ಹೈಕೋರ್ಟಿಗೆ ಅರ್ಜಿ ಸಲ್ಲಿಸಿದರು. ಹೈಕೋರ್ಟ್ ಆಕೆಯ ಅರ್ಜಿಯನ್ನು ಪುರಸ್ಕರಿಸಿತು. ಗೌಡ ಈ ಹೈಕೋರ್ಟ್ ತೀರ್ಪಿನ ವಿರುದ್ಧ ಸುಪ್ರೀಂಕೋರ್ಟಿಗೆ ಅರ್ಜಿ ಸಲ್ಲಿಸಿದ್ದ.

2006: ಭಾರತದ ಪ್ರಮುಖ ಕಂಪೆನಿ ಟಾಟಾ ಸಮೂಹವು ಪ್ರಸಿದ್ಧ ಬೋಸ್ಟನ್ ರಿಜ್ ಕಾರ್ಲಟನ್ ಹೋಟೆಲನ್ನು 17 ಕೋಟಿ ಡಾಲರ್ಗೆ ಖರೀದಿಸಲು ಮತ್ತು ಅದಕ್ಕೆ `ತಾಜ್ ಬೋಸ್ಟನ್' ಹೆಸರು ಇಡಲು ನಿರ್ಧರಿಸಿತು.

2001: ಬ್ಯೂನೋಸ್ ಐರಿಸ್ಸಿನ ಬೊಂಬೊನೇರಾ ಕ್ರೀಡಾಂಗಣದಲ್ಲಿ ಅರ್ಜೆಂಟೀನಾದ ಅತ್ಯುತ್ತಮ ಫುಟ್ಬಾಲ್ ಆಟಗಾರ ಡೀಗೋ ಮರಡೋನಾ ಅವರು ತಮ್ಮ `ವಿದಾಯ ಆಟ'ವನ್ನು ಆಡಿದರು.

2000: ಭಾರತ ಮತ್ತು ಬಾಂಗ್ಲಾದೇಶ ಡಾಕ್ಕಾದಲ್ಲಿ ತಮ್ಮ ಮೊತ್ತ ಮೊದಲ ಕ್ರಿಕೆಟ್ ಟೆಸ್ಟ್ ಆಡಿದವು.

1998: ಲಾಹೋರಿನಲ್ಲಿ ಪಾಕಿಸ್ಥಾನ ಮತ್ತು ಆಸ್ಟ್ರೇಲಿಯಾ ನಡುವಣ ಒಂದು ದಿನದ ಅಂತಾರಾಷ್ಟ್ರೀಯ ಕ್ರಿಕೆಟ್ ಪಂದ್ಯದಲ್ಲಿ ಮೊತ್ತ ಮೊದಲ ಬಾರಿಗೆ ನಾಲ್ಕು ಸೆಂಚುರಿಗಳು ಸಿಡಿದವು. ಪಾಕಿಸ್ಥಾನದ ಇಯಾಜ್ ಅಹಮದ್ ಮತ್ತು ಯೂಸುಫ್ ಯೌಹಾನ ಅವರು ಶತಕಗಳನ್ನು ಬಾರಿಸಿದರೆ, ಆಸ್ಟ್ರೇಲಿಯಾದ ಆಡಮ್ ಗಿಲ್ ಕ್ರಿಸ್ಟ್ ಮತ್ತು ರಿಕಿ ಪಾಂಟಿಂಗ್ ಶತಕಗಳನ್ನು ಬಾರಿಸಿದರು. ಆಸ್ಟ್ರೇಲಿಯಾ 6 ವಿಕೆಟುಗಳ ಜಯ ಗಳಿಸಿತು.

1994: ಕನ್ನಡದ ಮೊದಲ ಜ್ಞಾನಪೀಠ ಪ್ರಶಸ್ತಿ ಪುರಸ್ಕೃತ ಸಾಹಿತಿ ಡಾ. ಕೆ.ವಿ. ಪುಟ್ಟಪ್ಪ (ಕುವೆಂಪು) ನಿಧನರಾದರು.

1990: ಚಂದ್ರಶೇಖರ್ ಅವರು ಭಾರತದ ನೂತನ ಪ್ರಧಾನಿಯಾಗಿ ಪ್ರಮಾಣವಚನ ಸ್ವೀಕರಿಸಿದರು.

1989: ಅಯೋಧ್ಯೆಯ ರಾಮಜನ್ಮಭೂಮಿಯ್ಲಲಿ ರಾಮ ಮಂದಿರ ನಿರ್ಮಾಣಕ್ಕಾಗಿ ಶಂಕುಸ್ಥಾಪನೆ ನೆರವೇರಿತು.

1983: ಮೈಕ್ರೋಸಾಫ್ಟ್ ಕಾರ್ಪೊರೇಷನ್ ನ್ಯೂಯಾರ್ಕ್ ನಗರದಲ್ಲಿ `ವಿಂಡೋಸ್'ನ್ನು ಔಪಚಾರಿಕವಾಗಿ ಪ್ರಕಟಿಸಿತು.

1982: ಸೋವಿಯತ್ ನಾಯಕ ಲಿಯೋನಿದ್ ಬ್ರೆಜ್ನೇವ್ ತಮ್ಮ 75ನೇ ವಯಸ್ಸಿನಲ್ಲಿ ಹೃದಯಾಘಾತದಿಂದ ಮೃತರಾದರು.

1970: ಪ್ರವಾಸೋದ್ಯಮಕ್ಕಾಗಿ ಚೀನಾದ ಮಹಾಗೋಡೆಯನ್ನು ತೆರೆಯಲಾಯಿತು.

1948: ಸಾಹಿತಿ ವೇಣುಗೋಪಾಲ ಕಾಸರಗೋಡು ಜನನ.

1948: ಸಾಹಿತಿ ಬಿ.ವಿ. ಸತ್ಯನಾರಾಯಣರಾವ್ ಜನನ.

1933: ಸಾಹಿತಿ ಕೆ.ಎಸ್. ಕರುಣಾಕರನ್ ಜನನ.

1931: ಸಾಹಿತಿ ಬಿ.ಆರ್. ನಾಗೇಶ್ ಜನನ.

1926: ಸಾಹಿತಿ ಆದ್ಯ ರಾಮಾಚಾರ್ಯ ಜನನ.

1925: ಬ್ರಿಟಿಷ್ ಚಿತ್ರನಟ ರಿಚರ್ಡ್ ಬರ್ಟನ್ (1925-1984) ಹುಟ್ಟಿದ ದಿನ. ಇವರು ಚಿತ್ರನಟಿ ಎಲಿಜಬೆತ್ ಟೇಲರ್ ಅವರನ್ನು ಮದುವೆಯಾಗಿದ್ದರು.

1924: ಸಾಹಿತಿ ಕ.ವೆಂ. ರಾಜಗೋಪಾಲ ಜನನ.

1905: ಸಹೃದಯ, ಸುಸಂಸ್ಕೃತ ಹಾಸ್ಯದ `ರಾಶಿ' ಕಾವ್ಯನಾಮದ ಸಾಹಿತಿ ಡಾ. ಎಂ. ಶಿವರಾಂ (10-11-1905ರಿಂದ 13-1-1984) ಅವರು ರಾಮಸ್ವಾಮಯ್ಯ- ಸೀತಮ್ಮ ದಂಪತಿಯ ಮಗನಾಗಿ ಬೆಂಗಳೂರಿನಲ್ಲಿ ಹುಟ್ಟಿದರು.

1848: ಆಧುನಿಕ ಭಾರತದ ಸ್ಥಾಪಕರಲ್ಲಿ ಒಬ್ಬರಾದ ಸುರೇಂದ್ರನಾಥ ಬ್ಯಾನರ್ಜಿ (1848-1925) ಹುಟ್ಟಿದ ದಿನ. ಬ್ರಿಟಿಷ್ ಕಾಮನ್ವೆಲ್ಥ್ ಅಡಿಯಲ್ಲೇ ಹೆಚ್ಚಿನ ಸ್ವಾಯತ್ತತೆ ನೀಡಬೇಕು ಎಂದು ಇವರು ಪ್ರಬಲವಾಗಿ ಪ್ರತಿಪಾದಿಸಿದ್ದರು.

Monday, November 23, 2009

ಇಂದಿನ ಇತಿಹಾಸ History Today ನವೆಂಬರ್ 09

ಇಂದಿನ ಇತಿಹಾಸ

ನವೆಂಬರ್ 09

800 ಸೇತುವೆಗಳು ಹಾಗೂ 102 ಸುರಂಗಗಳನ್ನು ಹೊಂದಿರುವ 105 ವರ್ಷಗಳ ಹಳೆಯದಾದ ಕಲ್ಕಾ-ಶಿಮ್ಲಾ ರೈಲ್ವೆ ಹಳಿಯನ್ನು ವಿಶ್ವ ಪಾರಂಪರಿಕ ತಾಣ ಎಂದು ಯುನೆಸ್ಕೊ ಘೋಷಿಸಿದ ಹಿನ್ನೆಲೆಯಲ್ಲಿ, ವಿಶ್ವ ಪಾರಂಪರಿಕ ತಾಣ ಎಂದು ಬರೆದ ಅಲಂಕಾರಿಕ ಫಲಕವನ್ನು ಚಂಡೀಗಢದಿಂದ ಸುಮಾರು 25 ಕಿ.ಮೀ. ದೂರದಲ್ಲಿ ಕಲ್ಕಾ ರೈಲ್ವೆ ನಿಲ್ದಾಣದಲ್ಲಿ ರೈಲ್ವೆ ಖಾತೆ ರಾಜ್ಯ ಸಚಿವ ಆರ್.ವೇಲು ಅನಾವರಣಗೊಳಿಸಿದರು.

2008: 800 ಸೇತುವೆಗಳು ಹಾಗೂ 102 ಸುರಂಗಗಳನ್ನು ಹೊಂದಿರುವ 105 ವರ್ಷಗಳ ಹಳೆಯದಾದ ಕಲ್ಕಾ-ಶಿಮ್ಲಾ ರೈಲ್ವೆ ಹಳಿಯನ್ನು ವಿಶ್ವ ಪಾರಂಪರಿಕ ತಾಣ ಎಂದು ಯುನೆಸ್ಕೊ ಘೋಷಿಸಿದ ಹಿನ್ನೆಲೆಯಲ್ಲಿ, ವಿಶ್ವ ಪಾರಂಪರಿಕ ತಾಣ ಎಂದು ಬರೆದ ಅಲಂಕಾರಿಕ ಫಲಕವನ್ನು ಚಂಡೀಗಢದಿಂದ ಸುಮಾರು 25 ಕಿ.ಮೀ. ದೂರದಲ್ಲಿ ಕಲ್ಕಾ ರೈಲ್ವೆ ನಿಲ್ದಾಣದಲ್ಲಿ ರೈಲ್ವೆ ಖಾತೆ ರಾಜ್ಯ ಸಚಿವ ಆರ್.ವೇಲು ಅನಾವರಣಗೊಳಿಸಿದರು. ಭಾರತದ ಬೇಸಿಗೆ ರಾಜಧಾನಿ ಎಂದು ಗುರುತಿಸಿಕೊಳ್ಳುವ ಶಿಮ್ಲಾಕ್ಕೆ ದೇಶದ ಇತರ ಭಾಗಗಳಿಂದ ಸಂಪರ್ಕ ಕಲ್ಪಿಸಲು 1898ರಲ್ಲಿ ಬ್ರಿಟಿಷರು ಕಲ್ಕಾ-ಶಿಮ್ಲಾ ರೈಲ್ವೆ ಮಾರ್ಗ ನಿರ್ಮಾಣ ಪ್ರಾರಂಭಿಸಿದ್ದರು. 2 ಅಡಿ 6 ಇಂಚು ಅಗಲವಿರುವ 96 ಕಿ.ಮೀ. ದೂರದ ನ್ಯಾರೋ ಗೇಜ್ ರೈಲ್ವೆ ಹಳಿಯನ್ನು 1903ರ ನವೆಂಬರ್ 9ರಂದು ಸಂಚಾರಕ್ಕೆ ಮುಕ್ತಗೊಳಿಸಲಾಗಿತ್ತು. ರೈಲಿನ ಹಳೆಯ ಚಕ್ರಗಳು, ವಿಶ್ವದಲ್ಲಿ ಎಲ್ಲೂ ಕಾಣದ ವಿವಿಧ ತಾಂತ್ರಿಕ ವಸ್ತುಗಳು, ಅಪರೂಪದ ಗಡಿಯಾರ ಮತ್ತು ಉಗಿ ಎಂಜಿನ್ನುಗಳನ್ನು ಶಿಮ್ಲಾದ ವಸ್ತು ಸಂಗ್ರಹಾಲಯದಲ್ಲಿ ಸಂರಕ್ಷಿಸಲಾಗಿದೆ. ಈ ಕಂಪ್ಯೂಟರ್ ಯುಗದಲ್ಲೂ ಸಹ ಮಾರ್ಗದ ತೆರವಿಗಾಗಿ ಎಲ್ಲಾ ನಿಲ್ದಾಣಗಳಲ್ಲಿ ಟೋಕನ್ ಬದಲಾಯಿಸುವ ನಿಯಾಲ್ಸ್ ಟೋಕನ್ ಪದ್ಧತಿ ಇಲ್ಲಿ ಜಾರಿಯಲ್ಲಿದೆ ಎಂದು ಕಲ್ಕಾ ರೈಲ್ವೆ ನಿಲ್ದಾಣದ ಅಧಿಕಾರಿ ಅಜಯ್ ಕೋಚರ್ ಹೇಳಿದರು. ಈ ರೈಲ್ವೆ ಹಳಿ ಸಮುದ್ರ ಮಟ್ಟದಿಂದ 656 ಮೀಟರ್ ಎತ್ತರದಲ್ಲಿರುವ ಕಲ್ಕಾದಿಂದ ಆರಂಭಗೊಂಡು ಸಮುದ್ರ ಮಟ್ಟದಿಂದ 2,076 ಮೀಟರ್ ಎತ್ತರದಲ್ಲಿರುವ ಶಿಮ್ಲಾದಲ್ಲಿ ಕೊನೆಗೊಳ್ಳುವುದು. ಈ ರೈಲ್ವೆ ಹಾದಿಯಲ್ಲಿ ಬೆಟ್ಟದ ರಮಣೀಯ ದೃಶ್ಯಗಳು ಪ್ರವಾಸಿಗರಿಗೆ ಮುದ ನೀಡುತ್ತವೆ.

2008: ಹೈಟಿಯ ರಾಜಧಾನಿ ಪೆಟಿಯಾನ್ ವಿಲ್ಲಿಯಲ್ಲಿ 8-11-2008ರಂದು ಸಂಭವಿಸಿದ ಶಾಲಾ ಕಟ್ಟದ ಕುಸಿತದಲ್ಲಿ ಮೃತರಾದವರ ಸಂಖ್ಯೆ 84 ಕ್ಕೆ ಏರಿತು. ಹಿಂದಿನ ದಿನ ದುರಂತದಲ್ಲಿ 58 ಶಾಲಾ ಮಕ್ಕಳು ಹಾಗೂ ಅಧ್ಯಾಪಕರು ಮೃತರಾಗಿದ್ದಾರೆ ಎಂದು ನಂಬಲಾಗಿತ್ತು.

2008: ಮಲೇಷ್ಯಾ ರಾಷ್ಟ್ಟ್ರಿಯ ಫತ್ವಾ ಮಂಡಳಿ ಯೋಗಾಭ್ಯಾಸಕ್ಕೆ ನಿಷೇಧ ಹೇರಿ ಧಾರ್ಮಿಕ ಆದೇಶ ಹೊರಡಿಸುವುದನ್ನು ಮುಂದೂಡಿತು. ಮಂಡಳಿಯ ಅಧ್ಯಕ್ಷ ಪ್ರಸ್ತುತ ವಿದೇಶ ಪ್ರವಾಸದಲ್ಲಿ ಇರುವುದರಿಂದ ಈ ನಿರ್ಧಾರವನ್ನು ಕೈಗೊಳ್ಳಲಾಯಿತು ಎಂದು ಇಸ್ಲಾಂ ಅಭಿವೃದ್ಧಿ ಮಂಡಳಿಯ ನಿರ್ದೇಶಕ ಶೇಖ್ ಅಬ್ದುಲ್ ಅಜೀಜ್ ಹೇಳಿಕೆ ನೀಡಿದರು.

2008: ಸಾಧಾರಣ ಮುಖಚಹರೆಯುಳ್ಳವರು ಅತ್ಯಂತ ಸುಂದರವಾಗಿ ಕಾಣಿಸಿಕೊಳ್ಳುವಂತೆ ಮಾಡುವ ಸಾಫ್ಟ್ವೇರ್ ಒಂದನ್ನು ಸಿದ್ಧಪಡಿಸಿರುವುದಾಗಿ ಟೆಲ್ ಅವೀವ್ ವಿವಿಯ ವಿಜ್ಞಾನಿಗಳು ಪ್ರಕಟಿಸಿದರು. ಸದ್ಯಕ್ಕೆ ಈ ಸಾಫ್ಟ್ ವೇರನ್ನು ಡಿಜಿಟಲ್ ಬಿಂಬಗಳಲ್ಲಿ ಮಾತ್ರ ಬಳಸಲಾಗಿದೆ. ಇನ್ನಷ್ಟು ಅಭಿವೃದ್ಧಿಪಡಿಸಿದಲ್ಲಿ ಸುರೂಪಿ ಚಿಕಿತ್ಸೆ ನೀಡುವ ಪ್ಲಾಸ್ಟಿಕ್ ಸರ್ಜನ್ಗಳು ಇದನ್ನು ಬಳಸಿಕೊಳ್ಳಬಹುದು. ಭವಿಷ್ಯದಲ್ಲಿ ಎಲ್ಲಾ ಡಿಜಿಟಲ್ ಕ್ಯಾಮೆರಾಗಳಲ್ಲೂ ಈ ಸಾಫ್ ್ಟವೇರ್ ಅಳವಡಿಸುವ ಸಾಧ್ಯತೆಯಿದೆ ಎಂದು ತಜ್ಞರು ಹೇಳಿದರು.

2008: ಜಲಜನಕವನ್ನು ಇಂಧನವಾಗಿ ಬಳಸಿಕೊಂಡು ಅತಿ ವೇಗ ವಾಗಿ ಚಲಿಸನಬಲ್ಲ ಕಾರನ್ನು ಸಿದ್ಧ ಪಡಿಸಿರುವುದಾಗಿ ಆಸ್ಟ್ರೇಲಿಯಾದ ಸಂಶೋಧಕರು ಸಿಡ್ನಿಯಲ್ಲಿ ಪ್ರಕಟಿಸಿದರು. ಮುಂದಿನ ವರ್ಷದ ಜನವರಿಯಲ್ಲಿ ಜರ್ಮನಿಯಲ್ಲಿ ನಡೆಯುವ ಸ್ಪರ್ಧೆಯಲ್ಲಿ ಈ ಕಾರು ಪಾಲ್ಗೊಳ್ಳಲ್ದಿದು, ಜಗತ್ತಿನಲ್ಲೇ ಅತಿ ವೇಗವಾಗಿ ಓಡುವ ಜಲಜನಕ ಕಾರು ಎಂದು ಗಿನ್ನೆಸ್ ದಾಖಲೆ ಪುಸ್ತಕದ್ಲಲಿ ನಮೂದಾಗುವ ಸಾಧ್ಯತೆಯಿದೆ. ಗಂಟೆಗೆ 170 ಕಿ.ಮೀ. ವೇಗದಲ್ಲಿ ಚಲಿಸಬಲ್ಲ ಈ ಕಾರನ್ನು ರಾಯಲ್ ಮೆಬೋರ್ನ್ ತಾಂತ್ರಿಕ ಸಂಸ್ಥೆಯ ವಿಜ್ಞಾನಿಗಳು ತಯಾರಿಸಿದರು. ಭವಿಷ್ಯದ ವಾಹನಗಳಲ್ಲಿ ಜಲಜನಕವನ್ನು ಇಂಧನವಾಗಿ ಬಳಸುವ ಸಾಧ್ಯತೆಯ ಮೇಲೆ ಈ ಕಾರು ಬೆಳಕು ಚೆಲ್ಲುವುದು.

2008: ಗರ್ಭ ಧರಿಸಿದ್ದ ಹಸುವೊಂದನ್ನು ಕೊಂದದ್ದಕ್ಕಾಗಿ ದೆಹಲಿಯ ಬೇಕರಿ ಮಾಲೀಕನೊಬ್ಬನಿಗೆ ನ್ಯಾಯಾಲಯ ಒಂದು ವರ್ಷದ ಜೈಲು ಶಿಕ್ಷೆ ವಿಧಿಸಿತು. ತನ್ನ ಬೇಕರಿಗೆ ಹಸುವೊಂದು ನುಗ್ಗಿ ತಿಂಡಿ, ತಿನಿಸುಗಳಿಗೆ ಬಾಯಿಹಾಕಿದಾಗ ಕುಪಿತಗೊಂಡ ನಸೀಮ್ ಖಾನ್ (25) ಚಾಕು ತೆಗೆದುಕೊಂಡು ಮೂರು ಬಾರಿ ಇರಿದ. ಹಸು ಸ್ಥಳದ್ಲಲೇ ಸಾವನ್ನಪ್ಪಿತು. ಹಸುವಿನ ಮಾಲೀಕ ವೀರ್ ಸಿಂಗ್ ಈ ಬಗ್ಗೆ ದೂರು ಸಲ್ಲಿಸಿದ. ಈ ದೂರಿನ ವಿಚಾರಣೆಯ ಸಂದರ್ಭದಲ್ಲಿ ಖಾನನ ವಕೀಲರು ವೀರ್ ಸಿಂಗನನ್ನು ಪಾಟೀ ಸವಾಲಿಗೆ ಒಳಪಡಿಸಿರಲಿಲ್ಲ. ಘಟನೆ ಕುರಿತು ತೀರ್ಪು ನೀಡಿದ ದೆಹಲಿ ಮೆಟ್ರೊಪಾಲಿಟನ್ ನ್ಯಾಯಾಧೀಶರು, ಖಾನ್ ಮೇಲಿನ ಆರೋಪ ಸಾಬೀತುಪಡಿಸುವಲ್ಲಿ ಪ್ರಾಸೆಕ್ಯೂಷನ್ ಯಶಸ್ವಿಯಾಗಿದೆ. ಆರೋಪಿ ಪರ ವಕೀಲರು ಸಾಕ್ಷ್ಯವನ್ನು ಪಾಟೀ ಸವಾಲಿಗೆ ಒಳಪಡಿಸದ ಕಾರಣ ಆತನ ಹೇಳಿಕೆ ಒಪ್ಪಿಕೊಳ್ಳಲೇಬೇಕಾಗಿದೆ ಎಂದು ತಿಳಿಸಿದರು. ವಯಸ್ಸಾದ ತಂದೆ-ತಾಯಿ ಹಾಗೂ ಚಿಕ್ಕ ಮಗುವನ್ನು ನೋಡಿಕೊಳ್ಳಬೇಕಿರುವುದರಿಂದ ಶಿಕ್ಷೆಯಿಂದ ವಿನಾಯತಿ ನೀಡುವಂತೆ ನಸೀಮ್ ಖಾನ್ ಮಾಡಿಕೊಂಡ ಮನವಿಯನ್ನು ನ್ಯಾಯಾಲಯ ತಳ್ಳಿಹಾಕಿತು.

2008: ಭಾರತಕ್ಕೆ ಮುಂದಿನ ವರ್ಷ ಗುತ್ತಿಗೆ ಆಧಾರದ ಮೇಲೆ ನೀಡಲು ಉದ್ದೇಶಿಸಲಾದ ಹೊಚ್ಚ ಹೊಸ ಅಣುಶಕ್ತಿ ಚಾಲಿತ ಜಲಾಂತರ್ಗಾಮಿ ನೌಕೆಯನ್ನು ಪರೀಕ್ಷೆಗೆ ಒಳಪಡಿಸಿದಾಗ ಅನಿಲ ಸೋರಿ 20 ಜನರು ಮೃತರಾಗಿ 21 ಜನ ಗಾಯಗೊಂಡರು. ರಷ್ಯಾದಲ್ಲಿ ದಶಕದ ನಂತರ ಸಂಭವಿಸಿದ ನೌಕಾ ದುರಂತವಿದು. ಸತ್ತವರಲ್ಲಿ ಮೂವರು ನಾವಿಕರು.

2008: ಡಾ. ರಾಜಕುಮಾರ್ ಅವರ ಹುಟ್ಟೂರಾದ ದೊಡ್ಡಗಾಜನೂರಿನ ಗ್ರಾಮಸ್ಥರು ಗ್ರಾಮದ ಕೂಡು ರಸ್ತೆ (ಪೆಟ್ರೋಲ್ ಬಂಕ್ ಬಳಿ) ವೃತ್ತಕ್ಕೆ `ಪದ್ಮಭೂಷಣ ಡಾ. ರಾಜಕುಮಾರ್' ಎಂದು ನಾಮಕರಣ ಮಾಡಿ ಪ್ರತಿಮೆ ಸ್ಥಾಪಿಸುವ ಮೂಲಕ ವರನಟನಿಗೆ ತಮ್ಮ ಗೌರವ ಸಲ್ಲಿಸಿದರು. ಈ ಸಂಬಂಧಿ ಫಲಕವನ್ನು ನಿರ್ಮಾಪಕಿ ಪಾರ್ವತಮ್ಮ ರಾಜಕುಮಾರ್ ಅನಾವರಣ ಮಾಡಿದರು.

2008: ಗ್ರಾಮೀಣ ಜನರಿಗೆ ನೆರವಾಗುವ ಸಣ್ಣ ಕಂತಿನ ಜನತಾ ಬಿಮಾ ಯೋಜನೆಗೆ ಕೇಂದ್ರ ಹಣಕಾಸು ಸಚಿವ ಪಿ. ಚಿದಂಬರಂ ತಮಿಳುನಾಡಿನ ಕುರೈಕುಡಿಯಲ್ಲಿ ಚಾಲನೆ ನೀಡಿದರು. ಖಾಸಗಿ ಕಂಪೆನಿಯೊಂದು ಈ ಯೋಜನೆಯನ್ನು ರೂಪಿಸಿತು. ಇದು ರೂ 100 ರ ಪ್ರೀಮಿಯಂ ಮೊತ್ತವನ್ನು ಹೊಂದಿದೆ. ಗ್ರಾಮೀಣರನ್ನೇ ಉದ್ದೇಶವಾಗಿಟ್ಟುಕೊಳ್ಳಲಾದ ಈ ಯೋಜನೆಯ ವಾಪ್ತಿಗೆ 18-60ರ ವರೆಗಿನ ವಯಸ್ಸಿನವರು ಬರುತ್ತಾರೆ.

2007: ದೇಶದಲ್ಲೇ ಪ್ರಥಮ ಎನ್ನಲಾದ ಅನಗತ್ಯ ಅವಯವಗಳ ನಿವಾರಣೆಗಾಗಿ ನಡೆಸಲಾದ 27 ಗಂಟೆಗಳ ಶಸ್ತ್ರಚಿಕಿತ್ಸೆಗೆ ಬೆಂಗಳೂರಿನ ಸ್ಪರ್ಶ ಆಸ್ಪತ್ರೆಯಲ್ಲಿ ಒಳಗಾಗಿದ್ದ ಬಿಹಾರ ಲಕ್ಷ್ಮಿ ಎರಡು ದಿನಗಳ ಬಳಿಕ ಈದಿನ ಚೇತರಿಸಿಕೊಂಡು ಅಪ್ಪ, ಅಮ್ಮ, ಅಣ್ಣನನ್ನು ಗುರುತಿಸಿದಳು. ಅಮ್ಮನನ್ನು ಕಂಡೊಡನೆಯೇ ಕಿರುನಗೆ ಸೂಚಿಸಿದಳು. ಆಕೆ ಚೇತರಿಸಿಕೊಂಡ ವಿಚಾರವನ್ನು ಆಸ್ಪತ್ರೆಯ ಮುಖ್ಯಸ್ಥ ಡಾ. ಶರಣ್ ಪಾಟೀಲ್ ಬಹಿರಂಗಗೊಳಿಸಿದರು.

2007: ರಾಜ್ಯಪಾಲ ರಾಮೇಶ್ವರ ಠಾಕೂರ್ ಅವರು ಸರ್ಕಾರ ರಚನೆಗೆ ಬಿಜೆಪಿ ಮುಖಂಡ ಬಿ.ಎಸ್. ಯಡಿಯೂರಪ್ಪ ಅವರಿಗೆ ಅಧಿಕೃತ ಆಹ್ವಾನ ನೀಡಿದರು. ಮಾಜಿ ಮುಖ್ಯಮಂತ್ರಿ ಎಚ್. ಡಿ.ಕುಮಾರಸ್ವಾಮಿ ಜೊತೆಗೆ ಈದಿನ ಸಂಜೆ ರಾಜಭವನಕ್ಕೆ ತೆರಳಿ 45 ನಿಮಿಷಗಳ ಕಾಲ ಮಾತುಕತೆ ನಡೆಸಿದ ಸಂದರ್ಭದಲ್ಲಿ ರಾಜ್ಯಪಾಲರು ಈ ಆಹ್ವಾನ ನೀಡಿದರು. ಇದರೊಂದಿಗೆ ಬಿಜೆಪಿಯು ದಕ್ಷಿಣ ಭಾರತದಲ್ಲಿ ಮೊತ್ತ ಮೊದಲ ಬಿಜೆಪಿ ನೇತೃತ್ವದ ಸರ್ಕಾರ ರಚನೆಗೆ ಸಜ್ಜಾಯಿತು. ಕುಮಾರಸ್ವಾಮಿಯವರು ತಮ್ಮ 20 ತಿಂಗಳ ಅಧಿಕಾರಾವಧಿ ನಂತರ ಅಕ್ಟೋಬರ್ 3ರಂದು ಬಿಜೆಪಿಗೆ ಅಧಿಕಾರ ಹಸ್ತಾಂತರ ಮಾಡಬೇಕಿತ್ತು. ಆದರೆ, `ರಾಜಕೀಯ ಕಾರಣ'ಗಳಿಂದಾಗಿ ಅಧಿಕಾರ ಹಸ್ತಾಂತರ ಮಾಡಲಿಲ್ಲ. ಇದರಿಂದ ಬೇಸತ್ತ ಬಿಜೆಪಿ ತನ್ನ ಬೆಂಬಲವನ್ನು ಅಕ್ಟೋಬರ್ 7ರಂದು ವಾಪಸ್ ಪಡೆದಿತ್ತು. ಮರುದಿನ ಕುಮಾರಸ್ವಾಮಿ ಸರ್ಕಾರ ಪತನಗೊಂಡಿತು. ಬಿಜೆಪಿ, ಜೆಡಿಎಸ್ ಮತ್ತು ಕಾಂಗ್ರೆಸ್- ಮೂರು ಪಕ್ಷಗಳೂ ವಿಧಾನಸಭೆ ವಿಸರ್ಜಿಸುವಂತೆ ಮನವಿ ಸಲ್ಲಿಸಿದ ಹಿನ್ನೆಲೆಯಲ್ಲಿ ರಾಜ್ಯಪಾಲರ ಶಿಫಾರಸಿನ ಮೇರೆಗೆ ಅಕ್ಟೋಬರ್ 9ರಿಂದ ರಾಷ್ಟ್ರಪತಿ ಆಳ್ವಿಕೆ ಜಾರಿಯಾಗಿತ್ತು. ನಂತರದ ಬೆಳವಣಿಗೆಗಳಲ್ಲಿ ಜೆಡಿಎಸ್ ನ ಬಹುತೇಕ ಶಾಸಕರು ಚುನಾವಣೆ ಬೇಡ ಎಂದು ಎಂ.ಪಿ.ಪ್ರಕಾಶ್ ನೇತೃತ್ವದಲ್ಲಿ ಕಾಂಗ್ರೆಸ್ ಜತೆ ಸೇರಿ ಸರ್ಕಾರ ರಚಿಸಲು ಮುಂದಾದರು. ಇದರ ಸುಳಿವರಿತ ಜೆಡಿಎಸ್ ವರಿಷ್ಠರು ಬಿಜೆಪಿ ಜತೆ ಮರು ಮೈತ್ರಿ ಮಾಡಿಕೊಳ್ಳಲು ನಿರ್ಧರಿಸಿದರು. 15 ದಿನಕ್ಕೂ ಹೆಚ್ಚು ಕಾಲ ಜೆಡಿಎಸ್ ವಿರುದ್ಧ ಟೀಕಾಪ್ರಹಾರ ನಡೆಸಿದ್ದ ಬಿಜೆಪಿ ಮರು ಹೊಂದಾಣಿಕೆಗೆ ಒಪ್ಪಿತು. ಪುನಃ ಎರಡೂ ಪಕ್ಷಗಳ ಮುಖಂಡರು ಅಕ್ಟೋಬರ್ 27ರಂದು ರಾಜ್ಯಪಾಲರನ್ನು ಭೇಟಿ ಮಾಡಿ, ಸರ್ಕಾರ ರಚನೆಗೆ ಅವಕಾಶ ನೀಡುವಂತೆ ಮನವಿ ಮಾಡಿದರು. ಬಿಜೆಪಿ- ಜೆಡಿ ಎಸ್ ಸರ್ಕಾರ ರಚನೆಗೆ ಅವಕಾಶ ನೀಡಬಾರದು ಎಂದು ಕಾಂಗ್ರೆಸ್ ಕೇಂದ್ರದ ಮೇಲೆ ಒತ್ತಡ ಹೇರಿದರೂ, ಅಕ್ಟೋಬರ್ 8ರ ಸಂಪುಟ ಸಭೆಯಲ್ಲಿ ಕೇಂದ್ರವು ಬಿಜೆಪಿ- ಜೆಡಿ ಎಸ್ ಸರ್ಕಾರ ರಚನೆಗೆ ಹಸಿರು ನಿಶಾನೆ ತೋರಿಸಿತು. ಈ ನಿರ್ಧಾರಕ್ಕೆ ರಾಷ್ಟ್ರಪತಿ ಅಂಕಿತ ಹಾಕಿದರು. ಇದಕ್ಕೂ ಮುನ್ನ ಬಿಜೆಪಿ ಹಾಗೂ ಜೆಡಿಎಸ್ ಈ ಎರಡೂ ಪಕ್ಷಗಳ 129 ಮಂದಿ ಶಾಸಕರು ರಾಜ್ಯಪಾಲರು ಹಾಗೂ ರಾಷ್ಟ್ರಪತಿಗಳ ಮುಂದೆ ಪೆರೇಡ್ ಕೂಡಾ ನಡೆಸಿ ಬಹುಮತ ಪ್ರದರ್ಶಿಸಿದ್ದರು.

2007: ತುರ್ತು ಪರಿಸ್ಥಿತಿಯನ್ನು ವಿರೋಧಿಸಲು ಪಾಕಿಸ್ತಾನ ಪೀಪಲ್ಸ್ ಪಕ್ಷ (ಪಿಪಿಪಿ) ರಾವಲ್ಪಿಂಡಿಯಲ್ಲಿ ಆಯೋಜಿಸಿದ್ದ ಪ್ರತಿಭಟನಾ ಮೆರವಣಿಗೆಯಲ್ಲಿ ಪಾಲ್ಗೊಳ್ಳಲು ಹೊರಟಿದ್ದ ಪಕ್ಷದ ಅಧ್ಯಕ್ಷೆ ಹಾಗೂ ಮಾಜಿ ಪ್ರಧಾನಿ ಬೆನ ಜೀರ್ ಭುಟ್ಟೋ ಅವರನ್ನು ಪೊಲೀಸರು ಬಂಧಿಸಿದರು.

2007: ನೈಋತ್ಯ ಚೀನಾದ ಕಲ್ಲಿದ್ದಲು ಗಣಿಯೊಂದರಲ್ಲಿ ಸಂಭವಿಸಿದ ವಿಷಾನಿಲ ಸೋರಿಕೆಯಿಂದ 29 ಕಾರ್ಮಿಕರು ಮೃತರಾಗಿ, ಆರು ಮಂದಿ ಕಾಣೆಯಾದರು. ಈ ಗಣಿಯಲ್ಲಿ 52 ಮಂದಿ ಕಾರ್ಮಿಕರು ಕೆಲಸ ಮಾಡುತ್ತಿದ್ದರು.

2006: ಕಾದಂಬರಿಗಾರ್ತಿ ಎಚ್. ಜಿ. ರಾಧಾದೇವಿ (55) ಅವರು ಹೃದಯಾಘಾತದಿಂದ ರಾಯಚೂರಿನಲ್ಲಿ ನಿಧನರಾದರು. ಮೂಲತಃ ಕೋಲಾರದವರಾದ ರಾಧಾದೇವಿ 1975ರಲ್ಲಿ ಸುದರ್ಶನ ಅವರ ಜೊತೆಗೆ ವಿವಾಹವಾದ ಬಳಿಕ ರಾಯಚೂರಿನಲ್ಲಿ ನೆಲೆಸಿ ಕಾದಂಬರಿ ರಚನೆಯಲ್ಲಿ ತೊಡಗಿದ್ದರು. ಅನುರಾಗ ಅರಳಿತು, ಸುವರ್ಣ ಸೇತುವೆ, ಭ್ರಮರ ಬಂಧನ, ಅಮರ ಚುಂಬಿತೆ, ಬಂಗಾರದ ನಕ್ಷತ್ರ, ಕನಸಿನ ಚಪ್ಪರ ಇತ್ಯಾದಿ 150ಕ್ಕೂ ಹೆಚ್ಚು ಕಾದಂಬರಿಗಳನ್ನು ಅವರು ರಚಿಸಿದ್ದಾರೆ. ಅತ್ತಿಮಬ್ಬೆ ಪ್ರಶಸ್ತಿ ಸೇರಿದಂತೆ ಹಲವಾರು ಪ್ರತಿಷ್ಠಿತ ಪ್ರಶಸ್ತಿಗಳು ಅವರಿಗೆ ಬಂದಿವೆ. `ಅನುರಾಗ ಅರಳಿತು', `ಸುವರ್ಣ ಸೇತುವೆ' ಚಲನಚಿತ್ರಗಳಾಗಿವೆ. `ಅನುರಾಗ ಅರಳಿತು' ಆಧರಿಸಿ ತೆಲುಗಿನಲ್ಲೂ `ಘರಾನ ಮೊಗಡು' ಚಲನಚಿತ್ರ ನಿರ್ಮಾಣಗೊಂಡಿತ್ತು.

2006: ಸಂಸತ್ತಿನ ಮೇಲೆ 2001 ರಲ್ಲಿ ನಡೆಸಿದ ಭಯೋತ್ಪಾದಕ ದಾಳಿಗಾಗಿ ಮರಣದಂಡನೆಗೆ ಗುರಿಯಾಗಿರುವ ಮೊಹಮ್ಮದ್ ಅಫ್ಜಲ್ ಗುರು ತಡವಾಗಿ ರಾಷ್ಟ್ರಪತಿ ಎ.ಪಿ.ಜೆ. ಅಬ್ದುಲ್ ಕಲಾಂ ಅವರಿಗೆ ಕ್ಷಮಾದಾನ ಕೋರಿ ಅರ್ಜಿ ಸಲ್ಲಿಸಿದ. 102 ಪುಟಗಳ ತನ್ನ ಕ್ಷಮಾದಾನ ಕೋರಿಕೆ ಅರ್ಜಿಯನ್ನು ಆತ ತಿಹಾರ್ ಸೆರೆಮನೆ ಅಧಿಕಾರಿಗಳಿಗೆ ಸಲ್ಲಿಸಿದ.

2006: ಸಂವೇದನಾಶೀಲ, ಕೃತಕ ಹಲ್ಲುಗಳನ್ನು ಶಾಶ್ವತವಾಗಿ ಅಳವಡಿಸುವ ಅತ್ಯಾಧುನಿಕ ತಂತ್ರಜ್ಞಾನ ಬೆಂಗಳೂರಿನ ಲ್ಯಾವೆಲ್ಲೇ ರಸ್ತೆಯಲ್ಲಿನ `ಡೆಂಟಲ್ ಲ್ಯಾವೆಲ್ಲೆ' ಚಿಕಿತ್ಸಾಲಯಕ್ಕೆ ಬಂತು. ಸ್ವೀಡನ್ ಮೂಲದ ಈ ತಂತ್ರಜ್ಞಾನವನ್ನು ದಕ್ಷಿಣ ಭಾರತದಲ್ಲಿ ಇದೇ ಮೊದಲ ಬಾರಿಗೆ ಅಳವಡಿಸಲಾಗಿದೆ ಎಂದು ಚಿಕಿತ್ಸಾಲಯದ ಸ್ಥಾಪಕ, ಹಿರಿಯ ವೈದ್ಯ ಡಾ. ಜಗದೀಶ್ ಬೆಲೂರು ಪ್ರಕಟಿಸಿದರು.

2005: ನಿಷ್ಠುರ ನಡೆ ನುಡಿಯ ಮುತ್ಸದ್ಧಿ ಭಾರತದ ಮಾಜಿ ರಾಷ್ಟ್ರಪತಿ ಕೊಚೇರಿಲ್ ರಾಮನ್ ವೈದ್ಯರ್ ನಾರಾಯಣನ್ (ಕೆ.ಆರ್. ನಾರಾಯಣನ್) (85) ನವದೆಹಲಿಯಲ್ಲಿ ನಿಧನರಾದರು. ಅವರು 1997-2002ರ ಅವದಿಯಲ್ಲಿ ರಾಷ್ಟ್ರಪತಿಯಾಗಿ ಸೇವೆ ಸಲ್ಲಿಸಿದ್ದರು.

2005: ಭೂಮಿಗೆ ಸಮೀಪದಲ್ಲಿರುವ ಶುಕ್ರಗ್ರಹದ ಬಗ್ಗೆ ಸಂಶೋಧನೆ ನಡೆಸುವ ಸಲುವಾಗಿ `ವೀನಸ್ ಎಕ್ಸ್ ಪ್ರೆಸ್' ಅಂತರಿಕ್ಷ ನೌಕೆಯನ್ನು ರಷ್ಯದ ಕಜಕಸ್ಥಾನದ ಬಾಹ್ಯಾಕಾಶ ಕೇಂದ್ರದಿಂದ ಗಗನಕ್ಕೆ ಹಾರಿಬಿಡಲಾಯಿತು. ಅದು ಸೋಯುಜ್ ಎಫ್. ಜಿ. ರಾಕೆಟ್ಟಿನಿಂದ ಬೇರ್ಪಟ್ಟು ಶುಕ್ರಗ್ರಹದಿಂದ 163 ದಿನಗಳ ಪಯಣ ಆರಂಭಿಸಿತು.

1989: ಕಮ್ಯೂನಿಸ್ಟ್ ಪೂರ್ವ ಜರ್ಮನಿಯು ತನ್ನ ಗಡಿಗಳನ್ನು ತೆರೆದು ತನ್ನ ನಾಗರಿಕರಿಗೆ ಪಶ್ಚಿಮ ಜರ್ಮನಿಗೆ ಪ್ರವಾಸ ಮಾಡಲು ಮುಕ್ತ ಅವಕಾಶ ಕಲ್ಪಿಸಿತು. ಮರುದಿನ ಪೂರ್ವ ಜರ್ಮನಿಯ ಪಡೆಗಳು `ಬರ್ಲಿನ್ ಗೋಡೆ'ಯ ಭಾಗಗಳನ್ನು ಕೆಡವಿ ಹಾಕಲು ಆರಂಭಿಸಿದವು. ನವೆಂಬರ್ 22ರಂದು ಬ್ರಾಂಡೆನ್ ಬರ್ಗ್ ಗೇಟ್ ನ ಉತ್ತರ ಮತ್ತು ದಕ್ಷಿಣ ಭಾಗಗಳಲ್ಲಿ ಹೊಸ ದಾರಿಗಳನ್ನು ನಿರ್ಮಿಸಲಾಯಿತು. 1990ರ ವೇಳೆಗೆ ಸಂಪೂರ್ಣ ಗೋಡೆಯನ್ನು ಕೆಡವಿ ಹಾಕಲಾಯಿತು.

1960: ಭಾರತದ ವಾಯುಪಡೆಯ ಪ್ರಥಮ ಏರ್ ಚೀಫ್ ಮಾರ್ಷಲ್ ಸುಬ್ರತೋ ಮುಖರ್ಜಿ ನಿಧನರಾದರು.

1943: ಸಾಹಿತ್ಯ , ಸಂಗೀತ, ಚಿತ್ರಕಲೆ ಮುಂತಾದುವುಗಳಲ್ಲಿ ಪರಿಣತಿ ಪಡೆದಿರುವ ಅಮೃತೇಶ್ವರ ತಂಡರ ಅವರು ಉಮ್ಮಣ್ಣ ತಂಡರ- ಬಸವಣ್ಣೆವ್ವ ದಂಪತಿಯ ಮಗನಾಗಿ ಧಾರವಾಡ ಜಿಲ್ಲೆ ನವಲಗುಂದ ತಾಲ್ಲೂಕಿನ ಅಣ್ಣಿಗೇರಿಯಲ್ಲಿ ಜನಿಸಿದರು.

1938: ನಾಜಿ ಪಡೆಗಳು ಮತ್ತು ಬೆಂಬಲಿಗರು 7500 ಯಹೂದಿ ವಾಣಿಜ್ಯ ಮುಂಗಟ್ಟುಗಳನ್ನು ನಾಶಮಾಡಿ ಲೂಟಿ ಮಾಡಿದರು. 267 ಯಹೂದಿ ಪೂಜಾ ಮಂದಿರಗಳನ್ನು ಸುಟ್ಟು ಹಾಕಲಾಯಿತು. 91 ಯಹೂದ್ಯರನ್ನು ಕೊಲ್ಲಲಾಯಿತು. 25,000 ಯಹೂದಿಗಳನ್ನು ಬಂಧಿಸಲಾಯಿತು.

1877: ಖ್ಯಾತ ಉರ್ದು ಕವಿ, ತತ್ವಜ್ಞಾನಿ ಸರ್ . ಮಹಮ್ಮದ್ ಇಕ್ಬಾಲ್ (1877-1938) ಹುಟ್ಟಿದ ದಿನ. ಮುಸ್ಲಿಮರಿಗೆ ಪ್ರತ್ಯೇಕ ರಾಜ್ಯ ಸ್ಥಾಪನೆಯ ವಿಚಾರವನ್ನು ಬೆಂಬಲಿಸಿದ ಇವರು 20ನೇ ಶತಮಾನದ ಶ್ರೇಷ್ಠ ಉರ್ದು ಕವಿ ಎಂಬ ಖ್ಯಾತಿ ಪಡೆದವರು.

ಇಂದಿನ ಇತಿಹಾಸ History Today ನವೆಂಬರ್ 08

ಇಂದಿನ ಇತಿಹಾಸ

ನವೆಂಬರ್ 08

ಫೋರ್ಡ್ ಮೋಟಾರ್ ಕಂಪೆನಿಯು 18,000 ಹೆಸರುಗಳನ್ನು ತಿರಸ್ಕರಿಸಿ ಹೆನ್ರಿ ಫೋರ್ಡ್ ಅವರ ಏಕೈಕ ಪುತ್ರ `ಎಡ್ಸೆಲ್' (Edsel) ಹೆಸರನ್ನೇ ಹೊಸ ಕಾರಿಗೆ ಇರಿಸಿತು. ಈ ಕಾರು ಸಾರ್ವಜನಿಕರ ಮನಸೆಳೆಯುವಲ್ಲಿ ಸಂಪೂರ್ಣ ವಿಫಲವಾಯಿತು.

ಇದು ಎಕ್ಸ್ ರೇ ಪತ್ತೆಯಾದ ದಿನ. 1895ರಲ್ಲಿ ವಿಲ್ಹೆಮ್ ರಾಂಟ್ಜೆನ್ ಗಾಳಿ ತೆಗೆದ ಗಾಜಿನ ಬಲ್ಬ್ ಮುಖಾಂತರ ಹೈ ವೋಲ್ಟೇಜ್ ಬೆಳಕು ಹಾಯಿಸುತ್ತಿದ್ದಾಗ ಅದರಿಂದ `ಅಪರಿಚಿತ ವಿಕಿರಣ' ಹೊರ ಹೊಮ್ಮುತ್ತಿದ್ದುದನ್ನು ಗಮನಿಸಿದ. ಈ ವಿಕಿರಣವು ಬೆಂಚಿನ ಮೇಲೆ ಇದ್ದ ಸಣ್ಣ ಬಾರಿಯಂ ಪ್ಲಾಟಿನೊಸಯನೈಡ್ ಪರದೆಯ ಮೇಲೆ ಹೊಳಪು ಮೂಡಿಸುತ್ತಿತ್ತು. ಅದು ಏನು ಎಂಬುದಾಗಿ ಗೊತ್ತಿಲ್ಲದೇ ಇದ್ದುದರಿಂದ ಆತ ಅದನ್ನು `ಎಕ್ಸ್ ರೇ' ಎಂಬುದಾಗಿ ಕರೆದ. ಆತನ ಗೌರವಾರ್ಥ ನಂತರ ಅದಕ್ಕೆ `ರಾಂಟ್ಜೆನ್ ಕಿರಣ' ಎಂಬುದಾಗಿ ಪುನರ್ ನಾಮಕರಣ ಮಾಡಲಾಯಿತು. (ಆತನ ಪತ್ನಿಯ ತೋಳನ್ನೇ ಮೊತ್ತ ಮೊದಲ `ಎಕ್ಸ್ ರೇ' ಫೊಟೋಗ್ರಾಫಿ'ಗೆ ಬಳಸಲಾಗಿತ್ತು. ಪ್ರಾರಂಭದಲ್ಲಿ ಜನರಿಗೆ ಇದರ ಬಗ್ಗೆ ಬಹಳ ಗುಮಾನಿ ಇತ್ತು. ಬಟ್ಟೆಯ ಮುಖಾಂತರ ದೇಹದ ಒಳಭಾಗ ವೀಕ್ಷಣೆಗೆ ಇದನ್ನು ಬಳಸಬಹುದೆಂದು ಅವರು ಶಂಕಿಸಿದ್ದರು. ಲಂಡನ್ನಿನ ಕಂಪೆನಿಯೊಂದು ಇದೇ ಹಿನ್ನೆಲೆಯಲ್ಲಿ `ಎಕ್ಸ್ ರೇ ಪ್ರೂಫ್ ಅಂಡರ್ ವೇರ್' ತಯಾರಿಸಿರುವುದಾಗಿಯೂ ಜಾಹೀರಾತು ನೀಡಿತ್ತು.)

2008: ಚಂದ್ರನ ಸಮಗ್ರ ಅಧ್ಯಯನಕ್ಕೆ ಪಯಣ ಬೆಳೆಸಿದ `ಚಂದ್ರ ಯಾನ-1' ಬಾಹ್ಯಾಕಾಶ ನೌಕೆಯು ಚಂದ್ರನ ಕಕ್ಷೆಯನ್ನು ಯಶಸ್ವಿಯಾಗಿ ಪ್ರವೇಶಿಸಿತು. ಭೂಮಿಯಿಂದ ಸುಮಾರು 3.80 ಲಕ್ಷ ಕಿಲೋಮೀಟರ್ ದೂರದಲ್ಲಿದ್ದ ನೌಕೆಯು ಸಂಜೆ 5.15ಕ್ಕೆ ಚಂದ್ರನ ಕಕ್ಷೆ ಪ್ರವೇಶಿಸಿದಾಗ, ವಿಜ್ಞಾನಿಗಳ ಸಂತಸ ಇಮ್ಮಡಿಯಾಯಿತು. `ನೌಕೆಗೆ ಅಳವಡಿಸಿದ ದ್ರವ ಇಂಧನದ ಲ್ಯಾಮ್ ರಾಕೆಟನ್ನು' ಉರಿಸಿ, ಚಂದ್ರನ ಕಕ್ಷೆಯ ಸಮೀಪಕ್ಕೆ ಸಾಗುವಂತೆ ಮಾಡಲಾಗಿತ್ತು. ಈದಿನ ಸಂಜೆ ಈ ರಾಕೆಟನ್ನು 817 ಸೆಕೆಂಡುಗಳ ಕಾಲ ಮತ್ತೊಮ್ಮೆ ಉರಿಸಿ, ಚಂದ್ರನ ಕಕ್ಷೆ ಪ್ರವೇಶಿಸುವಂತೆ ಮಾಡಲಾಯಿತು. ಕ್ಲಿಷ್ಟಕರವಾದ ಈ ಕಾರ್ಯ ಯಶಸ್ವಿಯಾದಾಗ ಸಂತಸವಾಯಿತು' ಎಂದು ಚಂದ್ರಯಾನ ಯೋಜನೆ ನಿರ್ದೇಶಕ ಎಂ.ಅಣ್ಣಾದೊರೈ ಹೇಳಿದರು.

2008: ಹೈಟಿಯ ಪೆಟಿಯಾನ್- ವಿಲ್ಲಿಯ ಶಾಲಾ ಕಟ್ಟಡವೊಂದು ಕುಸಿದು 58 ಶಾಲಾ ಮಕ್ಕಳು ಮತ್ತು ಅಧ್ಯಾಪಕರು ಸಾವನ್ನಪ್ಪಿ, ನೂರಾರು ವಿದ್ಯಾರ್ಥಿಗಳು ಗಾಯಗೊಂಡರು. ಬೆಳಗ್ಗೆ 10 ಗಂಟೆ ವೇಳೆಗೆ ಮೂರು ಅಂತಸ್ತಿನ ಶಾಲಾ ಕಟ್ಟಡ ಕುಸಿದು ಅನಾಹುತ ಸಂಭವಿಸಿತು.

2008: ಹಲವು ಸಾಧನೆಗಳನ್ನು ತೋರಿರುವ ಭಾರತೀಯ ವಿಮಾನ ಯಾನ ಕ್ಷೇತ್ರ ಮತ್ತೊಂದು ಗರಿಯನ್ನು ತನ್ನ ಮುಡಿಗೇ ರಿಸಿಕೊಂಡಿತು. ಸ್ವದೇಶಿ ನಿರ್ಮಿತ `ತೇಜಸ್' ಯುದ್ಧ ವಿಮಾನವನ್ನು ಈ ರಾತ್ರಿ ಪರೀಕ್ಷಾರ್ಥವಾಗಿ ಹಾರಾಟ ನಡೆಸುವ ಮೂಲಕ ಯಶಸ್ಸು ಸಾಧಿಸಿತು. ಬೆಂಗಳೂರಿನ ವಿಮಾನ ನಿಲ್ದಾಣದಿಂದ ರಾತ್ರಿ 8.05ರ ಸುಮಾರಿಗೆ `ತೇಜಸ್'ನ್ನು ಕೆಲ ದೂರದವರೆಗೆ ಹಾರಾಟ ನಡೆಸುವ ಮೂಲಕ ಯಶಸ್ಸು ಸಾಧಿಸಿದೆವು ಎಂದು ಹಿಂದೂಸ್ಥಾನ್ ಏರೊನಾಟಿಕಲ್ಸ್ ಲಿಮಿಟೆಡ್ ಸಂಸ್ಥೆ ಅಧಿಕಾರಿ ತಿಳಿಸಿದರು. ನ್ಯಾಷನಲ್ ಫ್ಲೈಟ್ ಟೆಸ್ಟ್ ಸೆಂಟರಿನ ಕ್ಯಾಪ್ಟನ್ ಎನ್.ತಿವಾರಿ ವಿಮಾನದ ಪೈಲಟ್ ಆಗಿ ಯಶಸ್ವಿ ಹಾರಾಟ ನಡೆಸಿದರು.
2008: ಏರಿದ ನಷ್ಟ ಭರಿಸಲಾಗದೆ ಖಾಸಗಿ ವಿಮಾನ ಸಂಸ್ಥೆ ಜೆಟ್ ಏರ್ವೇಸ್ ಕನಿಷ್ಠ 25 ವಿದೇಶಿ ಪೈಲಟ್ಗಳನ್ನು ಸೇವೆಯಿಂದ ವಜಾಗೊಳಿಸಿತು. ಈ ವಿದೇಶಿ ಪೈಲಟ್ಗಳಿಗೆ ಮಾಸಿಕ 15,000 ದಿಂದ 18,000 ಅಮೆರಿಕ ಡಾಲರುವರೆಗೆ ವೇತನ ನೀಡಲಾಗುತ್ತಿತ್ತು. ಜೊತೆಗೆ ಪಂಚತಾರಾ ಹೋಟೆಲ್ ವಾಸ ಸೌಕರ್ಯ, ತಮ್ಮ ಸ್ವದೇಶಕ್ಕೆ ಹೋಗಿ ಬರಲು ಬಿಸಿನೆಸ್ ಕ್ಲಾಸ್ ಪ್ರಯಾಣ ಭತ್ಯೆ ಇತ್ಯಾದಿ ಸೌಲಭ್ಯಗಳನ್ನೂ ನೀಡಲಾಗುತ್ತಿತ್ತು.

2007: ತಮ್ಮ ವೃತ್ತಿ ಬದುಕಿನ ಮುಸ್ಸಂಜೆಯಲ್ಲಿ ಭಾರತ ಕ್ರಿಕೆಟ್ ತಂಡದ ನಾಯಕನಾಗುವ ಮೂಲಕ ಅನಿಲ್ ಕುಂಬ್ಳೆ ವಿಶ್ವದಾಖಲೆ ನಿರ್ಮಿಸಿದರು. ಅತಿ ಹೆಚ್ಚು ಪಂದ್ಯಗಳನ್ನು ಆಡಿದ ನಂತರ ತಂಡದ ಚುಕ್ಕಾಣಿ ಹಿಡಿದವರ ಪೈಕಿ ಅನಿಲ್ ಕುಂಬ್ಳೆ ಈಗ ಅಗ್ರಗಣ್ಯರು. ತಂಡದ ನಾಯಕತ್ವ ಹಿಡಿಯುವ ಮುನ್ನ ಅವರು 118 ಟೆಸ್ಟ್ ಪಂದ್ಯಗಳಲ್ಲಿ ಪಾಲ್ಗೊಂಡಿದ್ದರು. ಇದಕ್ಕೂ ಮೊದಲು ಆಸ್ಟ್ರೇಲಿಯಾದ ಸ್ಟೀವ್ ವಾ 111 ಪಂದ್ಯಗಳ ನಂತರ ಸಾರಥ್ಯ ವಹಿಸಿದ್ದರು. ದಕ್ಷಿಣ ಆಫ್ರಿಕಾದ ಜಾಕ್ ಕಾಲಿಸ್ 97 ಪಂದ್ಯಗಳ ಬಳಿಕ, ಭಾರತದ ವೆಂಗ್ ಸರ್ಕಾರ್ 95 ಪಂದ್ಯಗಳ ಬಳಿಕ ತಂಡದ ನಾಯಕರಾಗಿ ಆಯ್ಕೆಯಾಗಿದ್ದರು.

2006: ಹಾಲಿವುಡ್ಡಿನ ಖ್ಯಾತ ಸಂಗೀತ ನಿರ್ದೇಶಕ ಬೆಸಿಲ್ ಪೊಲಿಜ್ಯುರಸ್ (61) ಲಾಸ್ ಏಂಜೆಲ್ಸಿನಲ್ಲಿ ನಿಧನರಾದರು. 80ರ ದಶಕದಲ್ಲಿ ಸಂಗೀತ ಸಾಮ್ರಾಟರಾಗಿ ಮೆರೆದಿದ್ದ ಬೆಸಿಲ್ 1989ರಲ್ಲಿ ಪ್ರತಿಷ್ಠಿತ `ಎಮ್ಮಿ' ಪ್ರಶಸ್ತಿಗೆ ಪಾತ್ರರಾಗಿದ್ದರು. ಸಾಹಸ ಚಿತ್ರಗಳಾದ ಕ್ಯಾನನ್ ದಿ ಬಾರ್ಬರಿಯನ್ ಮತ್ತು ಕ್ಯಾನನ್ ಡೆಸ್ಟ್ರಾಯರ್ ಚಿತ್ರಕ್ಕೆ ಅವರು ಸಂಗೀತ ನೀಡಿದ್ದರು.

2006: ಗರಿಷ್ಠ 10 ಸಾವಿರ ಟನ್ ತೂಕದ ಹಡಗನ್ನು ಮೇಲೆತ್ತಬಹುದಾದ ಹಾಗೂ ಏಕಕಾಲಕ್ಕೆ 4 ಹಡಗುಗಳನ್ನು ದುರಸ್ತಿ ಮಾಡಬಹುದಾದ ಹಡಗು ಮೇಲೆತ್ತುವ ದೇಶದ ಪ್ರಪ್ರಥಮ `ಶಿಪ್ ಲಿಫ್ಟ್' ವ್ಯವಸ್ಥೆಯನ್ನು ಪಶ್ಚಿಮ ಕಮಾಂಡಿನ ನೌಕಾ ಮುಖ್ಯಸ್ಥ ವೈಸ ಅಡ್ಮಿರಲ್ ಸಂಗ್ರಾಮ್ ಸಿಂಗ್ ಬೈಸ್ ಉದ್ಘಾಟಿಸಿದರು. ಇದರ ಉದ್ದ 175 ಮೀಟರ್, ಅಗಲ 28 ಮೀಟರ್. ತಲಾ 430 ಟನ್ ಭಾರ ಹೊರುವ 42 ಫ್ಲಾಟ್ ಫಾರಂಗಳನ್ನು ಸೇರಿಸಿ ಸಿದ್ಧಪಡಿಸಿದ ಈ ಲಿಫ್ಟನ್ನು ಅಮೆರಿಕದ ರೋಲ್ಸ್ ರಾಯ್ ಅಂಗಸಂಸ್ಥೆ ಸಿಂಕ್ರೋಸಾಫ್ಟ್ ಸಿಂಕ್ ಯುಎಸ್ ಎ ನಿರ್ಮಿಸಿದೆ. ನಾರ್ವೆಯ ಟಿಟಿಎಸ್ ಕಂಪೆನಿ ಹಡಗು ವರ್ಗಾವಣೆ ವ್ಯವಸ್ಥೆಯನ್ನು ರೂಪಿಸಿದೆ.

2006: ಲಾಭದ ಹುದ್ದೆ ಮಸೂದೆಗೆ ರಾಜ್ಯಪಾಲರ ಅಂಕಿತ ಲಭಿಸಿತು. ಇದರಿಂದ ನಿಗಮ, ಮಂಡಳಿಗಳ ಸಹಿತ ಸರ್ಕಾರದ ವಿವಿಧ ಸಂಸ್ಥೆಗಳಿಗೆ ನೇಮಕಾತಿ ಮಾಡಲು ಎದುರಾಗಿದ್ದ ಅಡ್ಡಿ ನಿವಾರಣೆಗೊಂಡಿತು.

2006: ಒಂದು ದಶಕದಿಂದ ನಡೆಯುತ್ತಿದ್ದ ಹೋರಾಟವನ್ನು ಸ್ಥಗಿತಗೊಳಿಸಿ ರಾಷ್ಟ್ರದಲ್ಲಿ ಶಾಂತಿ ಸ್ಥಾಪಿಸಲು ನೇಪಾಳ ಸರ್ಕಾರ ಹಾಗೂ ಮಾವೋವಾದಿ ಬಣಗಳ ಮಧ್ಯೆ ಐತಿಹಾಸಿಕ ಒಪ್ಪಂದ ಏರ್ಪಟ್ಟಿತು. ಪ್ರಧಾನಿ ಕೊಯಿರಾಲ ನಿವಾಸದಲ್ಲಿ ನಡೆದ ಸಭೆಯಲ್ಲಿ 15 ಅಂಶಗಳ ಒಪ್ಪಂದ ಸಿದ್ಧಪಡಿಸಲಾಯಿತು.

2000: ಉತ್ತರಾಂಚಲವು ಭಾರತದ 27ನೇ ರಾಜ್ಯವಾಯಿತು. ಡೆಹ್ರಾಡೂನ್ ಅದರ ರಾಜಧಾನಿಯಾಯಿತು.

1999: ಹೈದರಾಬಾದಿನಲ್ಲಿ ನ್ಯೂಜಿಲ್ಯಾಂಡ್ ವಿರುದ್ಧ ನಡೆದ ಒಂದು ದಿನದ ಪಂದ್ಯದಲ್ಲಿ ಸಚಿನ್ ತೆಂಡೂಲ್ಕರ್ ಮತ್ತು ರಾಹುಲ್ ದ್ರಾವಿಡ್ 331 ರನ್ ಗಳಿಸುವ ಮೂಲಕ ಅತ್ಯಂತ ಹೆಚ್ಚು ರನ್ ಗಳಿಸಿದ `ಬ್ಯಾಟ್ಸ್ ಮನ್ ಜೋಡಿ' ಎನಿಸಿದರು.

1966: ಸ್ವಾತಂತ್ರ್ಯ ಹೋರಾಟಗಾರ್ತಿ, ಸಮಾಜ ಸೇವಕಿ ರಾಮೇಶ್ವರಿ ನೆಹರು ನಿಧನರಾದರು.

1958: ಚಂದ್ರಗ್ರಹ ಶೋಧಕ್ಕೆಂದು ಅಮೆರಿಕ ಪ್ರಯೋಗಿಸಿದ ಮೂರನೇ ರಾಕೆಟ್ ವಿಫಲವಾಯಿತು. ಕೇಪ್ ಕೆನವರಾಲಿನ ಪ್ರಯೋಗ ಕ್ಷೇತ್ರದಿಂದ ಒಂದು ಸಾವಿರ ಮೈಲಿ ಮೇಲಕ್ಕೆ ಹೋದ ನಂತರ ಆ ರಾಕೆಟ್ ಮಧ್ಯ ಆಫ್ರಿಕದ ಪೂರ್ವಭಾಗದ ಪ್ರದೇಶದ ಮೇಲೆ ಚೂರು ಚೂರಾಯಿತು. 88 ಅಡಿ ಉದ್ದದ ವಿಮಾನ ಪಡೆಯ ಆ ರಾಕೆಟಿನ ಮೂರನೆಯ ಹಂತವು ಹೊತ್ತಿಕೊಳ್ಳದೆ, ಗಂಟೆಗೆ ಹದಿನಾರು ಸಾವಿರ ಮೈಲಿ ವೇಗವನ್ನು ಮುಟ್ಟಿದ ನಂತರ ಭೂಮಿಯ ವಾತಾವರಣಕ್ಕೇ ವಾಪಸಾಯಿತು.

1956: ಫೋರ್ಡ್ ಮೋಟಾರ್ ಕಂಪೆನಿಯು 18,000 ಹೆಸರುಗಳನ್ನು ತಿರಸ್ಕರಿಸಿ ಹೆನ್ರಿ ಫೋರ್ಡ್ ಅವರ ಏಕೈಕ ಪುತ್ರ `ಎಡ್ಸೆಲ್' (Edsel) ಹೆಸರನ್ನೇ ಹೊಸ ಕಾರಿಗೆ ಇರಿಸಿತು. ಈ ಕಾರು ಸಾರ್ವಜನಿಕರ ಮನಸೆಳೆಯುವಲ್ಲಿ ಸಂಪೂರ್ಣ ವಿಫಲವಾಯಿತು.

1953: ಸಾಹಿತಿ ತಾರಾನಾಥ ಜನನ.

1933: ಸಾಹಿತಿ ಎಂ.ಆರ್. ನರಸಿಂಹನ್ ಜನನ.

1929: ಭಾರತದ ಮಾಜಿ ಉಪ ಪ್ರಧಾನಿ, ಬಿಜೆಪಿ ಧುರೀಣ ಲಾಲ್ ಕೃಷ್ಣ ಆಡ್ವಾಣಿ ಹುಟ್ಟಿದ ದಿನ.

1923: ದಂಗೆ ಮೂಲಕ ಜರ್ಮನಿಯ ಅಧಿಕಾರ ವಶಪಡಿಸಿಕೊಳ್ಳುವ ಅಡಾಲ್ಫ್ ಹಿಟ್ಲರನ ಮೊದಲ ಪ್ರಯತ್ನ ವಿಫಲವಾಯಿತು. ಆತ ಬಂಧಿತನಾಗಿ ಸೆರೆಮನೆ ಸೇರಿದ. ಸೆರೆಮನೆಯಲ್ಲಿ ಇದ್ದಾಗಲೇ ತನ್ನ `ಮೆಯ್ನ್ ಕಾಮ್ಫ್' ಪುಸ್ತಕವನ್ನು ರುಡಾಲ್ಫ್ ಹೆಸ್ ಗೆ ಹೇಳಿ ಬರೆಯಿಸಿದ.

1908: ಹಾಸನದಲ್ಲಿ ಹುಟ್ಟಿ ಇಂಗ್ಲಿಷ್ ಸಾಹಿತ್ಯ ರಚನೆಯಲ್ಲಿ ವಿಶ್ವಮಾನ್ಯತೆ ಗಳಿಸಿದ ಹಾಸನ ರಾಜಾರಾವ್ (8-11-1908ರಿಂದ 8-7-2006) ಅವರು ಎಚ್. ವಿ. ಕೃಷ್ಣಸ್ವಾಮಿ - ಗೌರಮ್ಮ ದಂಪತಿಯ ಮಗನಾಗಿ ಈದಿನ ಜನಿಸಿದರು.

Friday, November 20, 2009

ಇಂದಿನ ಇತಿಹಾಸ History Today ನವೆಂಬರ್ 07

ಇಂದಿನ ಇತಿಹಾಸ

ನವೆಂಬರ್ 07

ಸಾಮಾನ್ಯವಾಗಿ ಎಲ್ಲರೂ ತಮ್ಮ ಹೆಸರು `ಚಿಕ್ಕದಾಗಿ ಆಕರ್ಷಕವಾಗಿ' ಇರಬೇಕು ಎಂದು ಬಯಸುತ್ತಾರೆ. ಆದರೆ ಬ್ರಿಟಿಷ್ ವಿದ್ಯಾರ್ಥಿಯೊಬ್ಬ ತನ್ನ ಮೂಲ ಹೆಸರನ್ನು ಬದಲಾಯಿಸಿಕೊಂಡು ಗಿನ್ನೆಸ್ ಪುಸ್ತಕದ ದಾಖಲೆಯಲ್ಲಿ ಸೇರಿದ. ಈತನ ಮೂಲ ಹೆಸರು: ಜಾರ್ಜ್ ಗ್ಯಾರಟ್. ಬದಲಾಯಿಸಿಕೊಂಡ ಹೆಸರು: ಕ್ಯಾಪ್ಟನ್ ಫಂಟಾಸ್ಟಿಕ್ ಫಾಸ್ಟರ್ ದ್ಯಾನ್ ಸೂಪರ್ಮನ್ ಸ್ಪೈಡರ್ಮನ್ ಬ್ಯಾಟಮನ್ ವೋಲ್ವೊರೈನ್ ಹಲ್ಕ್ ಅಂಡ್ ದ ಫ್ಲಾಸ್ ಕಂಬೈನ್ಡ್. ಈ ಹೆಸರು ಆಂಗ್ಲ ವರ್ಣ ಮಾಲೆಯಲ್ಲಿ ಬರೋಬ್ಬರಿ 81 ಅಕ್ಷರಗಳನ್ನು ಹೊಂದಿದೆ.

2008: ಸಾಮಾನ್ಯವಾಗಿ ಎಲ್ಲರೂ ತಮ್ಮ ಹೆಸರು `ಚಿಕ್ಕದಾಗಿ ಆಕರ್ಷಕವಾಗಿ' ಇರಬೇಕು ಎಂದು ಬಯಸುತ್ತಾರೆ. ಆದರೆ ಬ್ರಿಟಿಷ್ ವಿದ್ಯಾರ್ಥಿಯೊಬ್ಬ ತನ್ನ ಮೂಲ ಹೆಸರನ್ನು ಬದಲಾಯಿಸಿಕೊಂಡು ಗಿನ್ನೆಸ್ ಪುಸ್ತಕದ ದಾಖಲೆಯಲ್ಲಿ ಸೇರಿದ. ಈತನ ಮೂಲ ಹೆಸರು: ಜಾರ್ಜ್ ಗ್ಯಾರಟ್. ಬದಲಾಯಿಸಿಕೊಂಡ ಹೆಸರು: ಕ್ಯಾಪ್ಟನ್ ಫಂಟಾಸ್ಟಿಕ್ ಫಾಸ್ಟರ್ ದ್ಯಾನ್ ಸೂಪರ್ಮನ್ ಸ್ಪೈಡರ್ಮನ್ ಬ್ಯಾಟಮನ್ ವೋಲ್ವೊರೈನ್ ಹಲ್ಕ್ ಅಂಡ್ ದ ಫ್ಲಾಸ್ ಕಂಬೈನ್ಡ್. ಈ ಹೆಸರು ಆಂಗ್ಲ ವರ್ಣ ಮಾಲೆಯಲ್ಲಿ ಬರೋಬ್ಬರಿ 81 ಅಕ್ಷರಗಳನ್ನು ಹೊಂದಿದೆ. ಆನ್ ಲೈನಿನಲ್ಲಿ ಈತ ಬದಲಾಯಿಸಿಕೊಂಡಿರುವ ಹೆಸರಿಗಾಗಿ 10 ಪೌಂಡುಗಳನ್ನು ಪಾವತಿ ಮಾಡಿದ್ದ. `ನನ್ನ ಕುಟುಂಬದ ಸದಸ್ಯರೂ ಸಹ ಈ ರೀತಿ ಹೆಸರು ಬದಲಾಯಿಸಲು ಇಚ್ಛೆ ಪಡುತ್ತಾರೆ. ಅದಕ್ಕೆಂದೇ `ಸೂಪರ್ ಹೀರೋ'ಗಳ ಹೆಸರನ್ನು ಆಯ್ಕೆ ಮಾಡುತ್ತೇನೆ. ನನ್ನ ಹಲವು ಗೆಳೆಯರು ಈ ಬಗ್ಗೆ ಹಾಸ್ಯ ಮಾಡುತ್ತಾರೆ' ಎನ್ನುತ್ತಾನೆ ಈತ. ಗಿನ್ನೆಸ್ ದಾಖಲೆಗಳಲ್ಲಿ 57 ಅಕ್ಷರಗಳ ಹೆಸರು ಅತಿ ಉ್ದದವಾದದ್ದು ಎಂದು ಈ ಹಿಂದೆ ದಾಖಲಾಗಿತ್ತು.

2008: ಅಮೆರಿಕದ ನೂತನ ಅಧ್ಯಕ್ಷ ಬರಾಕ್ ಒಬಾಮ ಅವರು ಶ್ವೇತಭವನದ ಆಡಳಿತ ಮುಖ್ಯಸ್ಥರಾಗಿ ಜನಪ್ರತಿನಿಧಿ ಸಭೆಯ ಸದಸ್ಯ ತಮ್ಮದೇ ಪಕ್ಷದ ಪ್ರಭಾವಿ ವ್ಯಕ್ತಿ ರ್ಯಾಮ್ ಇಮಾನ್ಯುಯೆಲ್ ಅವರನ್ನು ನೇಮಕ ಮಾಡಿದರು. ಶ್ವೇತಭವನದ ಸಿಬ್ಬಂದಿ ಮುಖ್ಯಸ್ಥರು ಅತ್ಯಂತ ದಕ್ಷವಾಗಿ ಕೆಲಸ ನಿರ್ವಹಿಸಬೇಕಾಗುತ್ತದೆ. ಅಧ್ಯಕ್ಷರು ಕೈಗೊಂಡ ನಿರ್ಧಾರಗಳನ್ನು ಕಾರ್ಯಾಚರಣೆಗೆ ತರಬೇಕಾಗುತ್ತದೆ. ಈ ಹುದ್ದೆಗೆ ರ್ಯಾಮ್ ಇಮಾನ್ಯುಯೆಲ್ ಅವರಷ್ಟು ಸಮರ್ಥ ವ್ಯಕ್ತಿ ಬೇರೊಬ್ಬರಿಲ್ಲ ಎಂದು ಒಬಾಮ ಹೇಳಿದರು.

2008: ಬರಾಕ್ ಒಬಾಮ ಗೌರವಾರ್ಥ ಆಂಟಿಗುವಾದ ಅತ್ಯುನ್ನತ ಪರ್ವತಕ್ಕೆ `ಮೌಂಟ್ ಒಬಾಮ' ಎಂದು ಮರುನಾಮಕರಣ ಮಾಡಲು ಅಲ್ಲಿನ ಪ್ರಧಾನಿ ನಿರ್ಧರಿಸಿದರು. `ಬೊಗ್ಗಿ ಪೀಕ್' ಎಂದೇ ಹೆಸರಾಗಿರುವ ಈ ಪರ್ವತ 396 ಮೀಟರ್ ಎತ್ತರವಿದ್ದು, ದೂರಸಂಪರ್ಕ ಉದ್ದೇಶಗಳಿಗಾಗಿ ಪ್ರಸಾರ ಕೇಂದ್ರವಾಗಿ ಬಳಸಿಕೊಳ್ಳಲಾಗುತ್ತಿದೆ. ಈ ದ್ವೀಪ ದೇಶದ ದಕ್ಷಿಣದ ತುದಿಯಲ್ಲಿ ಈ ಪರ್ವತವಿದ್ದು ಮರು ನಾಮಕರಣದಿಂದ ಹೆಚ್ಚಿನ ಪ್ರವಾಸಿಗಳನ್ನು ಆಕರ್ಷಿಸಲಿದೆ ಎಂದು ನಿರೀಕ್ಷಿಸಲಾಯಿತು.

2008: ಟಾಟಾ ಸ್ಟೀಲ್ ಕಂಪೆನಿ ಸ್ವಾಮ್ಯದ ಕೋರಸ್ ಸಂಸ್ಥೆ ಮಾರುಕಟ್ಟೆ ಕುಸಿತದ ಹಿನ್ನೆಲೆಯಲ್ಲಿ 400 ಉದ್ಯೋಗಗಳನ್ನು ಕಡಿತ ಮಾಡುವ ವಿಚಾರವನ್ನು ಲಂಡನ್ನಿನಲ್ಲಿ ಪ್ರಕಟಿಸಿತು. ಬ್ರಿಟನ್ನಿನಾದ್ಯಂತ ಇರುವ ಕಂಪೆನಿಯ ವಿತರಣಾ ಘಟಕಗಳಲ್ಲಿ ಉದ್ಯೋಗ ಕಡಿತ ಮಾಡಲಾಗುತ್ತಿದೆ. ಸೆಪ್ಟೆಂಬರಿನಿಂದ ವಹಿವಾಟು ಇಳಿಮುಖವಾಗಿದೆ ಎಂದು ಕಂಪೆನಿ ಹೇಳಿತು.

2008: ಮುಂದಿನ ವರ್ಷದಲ್ಲಿ 1.8 ಶತಕೋಟಿ ಅಮೆರಿಕ ಡಾಲರಿನಷ್ಟು ವೆಚ್ಚ ಕಡಿಮೆ ಮಾಡುವ ಉದ್ದೇಶದಿಂದ ಅಮೆರಿಕದ ಪ್ರಮುಖ ಕ್ರೆಡಿಟ್ ಕಾರ್ಡ್ ಸಮೂಹ ಅಮೆರಿಕನ್ ಎಕ್ಸ್ಪ್ರೆಸ್ ತನ್ನ 7000 ಸಿಬ್ಬಂದಿ ಕಡಿತಕ್ಕೆ ಯೋಜಿಸಿತು. ಇದರ ಮೂಲಕ ವಿಶ್ವದಾದ್ಯಂತ ಶೇ 10ರಷ್ಟು ಸಿಬ್ಬಂದಿ ಕಡಿತ ಉಂಟಾಗುವುದು.

2008: ಶಂಕಿತ ತಾಲಿಬಾನ್ ಉಗ್ರರು ನಡೆಸಿದ ಆತ್ಮಹತ್ಯಾದಳದ ಎರಡು ದಾಳಿ ಮತ್ತು ಸೇನಾಪಡೆಯ ವಾಯುದಾಳಿಯಿಂದ ಪಾಕಿಸ್ಥಾನದ ವಾಯವ್ಯ ಪ್ರದೇಶದಲ್ಲಿ 35ಕ್ಕೂ ಹೆಚ್ಚು ಜನರು ಹತ್ಯೆಗೀಡಾದರು. ಆದಿವಾಸಿಗಳ ಬಜೂರು ಜಿಲ್ಲೆಯ ಬಟ್ಮಲೆ ಗ್ರಾಮದಲ್ಲಿ ಅಲ್ಲಿನ ಸುಮಾರು 200 ನಿವಾಸಿಗಳು ಸಭೆ ನಡೆಸುತ್ತಿದ್ದಾಗ ಆತ್ಮಹತ್ಯಾ ದಳದ ವ್ಯಕ್ತಿಯೊಬ್ಬ ತನ್ನನ್ನು ಸ್ಫೋಟಿಸಿಕೊಂಡ. ಸ್ಥಳಿಯರ ಪ್ರಕಾರ ಈ ಸ್ಫೋಟದಲ್ಲಿ 18ರಿಂದ 19 ಜನರು ಮೃತರಾಗಿ, 40ಕ್ಕೂ ಹೆಚ್ಚು ಜನರು ಗಾಯಗೊಂಡರು.

2007: ಸತತ 27 ಗಂಟೆಗಳ ಶಸ್ತ್ರಚಿಕಿತ್ಸೆಯ ಬಳಿಕ ಈದಿನ ಬೆಳಿಗ್ಗೆ 10.30ಕ್ಕೆ ಸುಮಾರಿಗೆ ಮಂದಹಾಸದೊಂದಿಗೆ ತಮ್ಮ ವೈದ್ಯರ ತಂಡದೊಂದಿಗೆ ಶಸ್ತ್ರಚಿಕಿತ್ಸಾ ಸಮವಸ್ತ್ರದೊಂದಿಗೇ ಹೊರಬಂದ ಬೆಂಗಳೂರಿನ ನಾರಾಯಣ ಆರೋಗ್ಯ ನಗರದ ಸ್ಪರ್ಶ ಆಸ್ಪತ್ರೆಯ ಮುಖ್ಯಸ್ಥ ಡಾ. ಶರಣ್ ಪಾಟೀಲ್ ಅವರು, ಬಿಹಾರದ ಬಾಲಕಿ ಲಕ್ಷ್ಮಿಯ ದೇಹದ ಹೆಚ್ಚಿನ ಅನವಶ್ಯಕ ಅವಯವಗಳನ್ನು ತೆಗೆದುಹಾಕುವ ಶಸ್ತ್ರ ಚಿಕಿತ್ಸೆ ಯಶಸ್ವಿಯಾಗಿದೆ ಎಂದು ಪ್ರಕಟಿಸಿದರು. ಲಕ್ಷ್ಮಿಯ ಶಸ್ತ್ರಚಿಕಿತ್ಸೆಗೆ 40 ಗಂಟೆಗಳಷ್ಟು ದೀರ್ಘ ಅವಧಿ ಬೇಕಾಗಬಹುದು ಎಂದು ಮೊದಲು ಭಾವಿಸಲಾಗಿತ್ತು. ಆದರೆ 13 ಗಂಟೆ ಮೊದಲೇ ಅಂದರೆ ಕೇವಲ 27 ಗಂಟೆಗಳಲ್ಲೇ ಆಕೆಯ ದೇಹದ ಅನಗತ್ಯ ಭಾಗಗಳನ್ನು ತೆಗೆದುಹಾಕಿ ಅಂಗಾಂಗಳನ್ನು ಮರುಜೋಡಿಸುವ ಅತ್ಯಂತ ಜಟಿಲವಾದ ಕಾರ್ಯ ಕೊನೆಗೊಂಡಿತು. ಇಂತಹ ಶಸ್ತ್ರ ಚಿಕಿತ್ಸೆ ನಡೆದದ್ದು ದೇಶದಲ್ಲೇ ಇದು ಪ್ರಥಮ ಎನ್ನಲಾಗಿದೆ. ಲಕ್ಷ್ಮಿಯ ಮೂಲದೇಹದಲ್ಲಿ ಇದ್ದುದು ಒಂದೇ ಮೂತ್ರಪಿಂಡ. ಅವಳಿ ದೇಹದಲ್ಲಿದ್ದ ಮೂತ್ರಪಿಂಡವನ್ನು ಕಸಿಮಾಡಿ ಲಕ್ಷ್ಮಿಯ ದೇಹದೊಳಕ್ಕೆ ಸೇರಿಸುವ ಕೆಲಸ ಮೊದಲು ನಡೆಯಿತು. ದೇಹದಲ್ಲಿ ಸೇರಿಕೊಂಡಿದ್ದ ಅವಳಿ ದೇಹದ ಅವಶೇಷಗಳನ್ನು ಕತ್ತರಿಸಿ ತೆಗೆಯುವ ಕೆಲಸ ಮಧ್ಯರಾತ್ರಿ 12.30ರ ಹೊತ್ತಿಗೆ ಕೊನೆಗೊಂಡಿತು. ಬಳಿಕ ಕಾಲುಗಳು ಸೊಂಟದ ಮೂಳೆಗಳ ಜೋಡಣೆಯನ್ನು (ಪೆಲ್ವಿಕ್ ರಿಂಗ್ಸ್) ಸಮರ್ಪಕಗೊಳಿಸುವ ಮಹತ್ವದ ಕಾರ್ಯದ ಜತೆ ಪ್ಲಾಸ್ಟಿಕ್ ಸರ್ಜರಿಗಳೂ ನಡೆದವು. ಆಸ್ಪತ್ರೆಯ 36 ಮಂದಿ ವೈದ್ಯರು ಹಾಗೂ ಸಿಬ್ಬಂದಿ ಈ ಶಸ್ತ್ರಚಿಕಿತ್ಸೆಯಲ್ಲಿ ವಿವಿಧ ಹಂತಗಳಲ್ಲಿ ಪಾಲ್ಗೊಂಡರು.

2007: ತಾನು ನೀಡಿದ ಆದೇಶವನ್ನು 35 ವರ್ಷಗಳಿಂದ ಉಲ್ಲಂಘಿಸಿದ ಆರೋಪಕ್ಕೆ ಒಳಗಾದ ಕರ್ನಾಟಕ ಹಾಲು ಉತ್ಪಾದಕರ ಸಹಕಾರ ಮಹಾಮಂಡಳಕ್ಕೆ (ಕೆಎಂಎಫ್) ನ್ಯಾಯಾಂಗ ನಿಂದನೆ ಪ್ರಕರಣದಲ್ಲಿ ಸುಪ್ರೀಂ ಕೋರ್ಟ್ ತೀವ್ರ ಎಚ್ಚರಿಕೆ ನೀಡಿ, ಆದೇಶ ಜಾರಿಗೆ ತರಲು ನಿರ್ದೇಶಿಸಿತು. 1972ರ ಆಗಸ್ಟ್ 30ರಂದು ಸುಪ್ರೀಂ ಕೋರ್ಟ್, ಕೆಎಂಎಫ್ ವ್ಯಾಪ್ತಿಯಲ್ಲಿನ ಎರಡು ಎಕರೆ ಐದು ಗುಂಟೆ ಖಾಲಿ ನಿವೇಶನವನ್ನು ಅರ್ಜಿದಾರರಾದ ವೈ. ಎನ್. ಗಂಗಾಧರ ಶೆಟ್ಟಿ ಮತ್ತು ಇನ್ನಿತರರಿಗೆ ನೀಡಲು ಸೂಚಿಸಿತ್ತು. ಆದರೆ ಕೆಎಂಎಫ್ ಈ ಭೂಮಿಯನ್ನು ಹಸ್ತಾಂತರಿಸದೇ ಅಲ್ಲಿ ಕಟ್ಟಡಗಳನ್ನು ನಿರ್ಮಿಸಿತ್ತು. ನ್ಯಾಯಮೂರ್ತಿ ತರುಣ್ ಚಟರ್ಜಿ ಮತ್ತು ದಲ್ವೀರ್ ಭಂಡಾರಿ ಅವರನ್ನು ಒಳಗೊಂಡ ಪೀಠವು ಈ ಸಂಬಂಧ ಕೆಎಂಎಫ್ ವ್ಯವಸ್ಥಾಪಕ ನಿರ್ದೇಶಕ ಜಯಪ್ರಕಾಶ ರೆಡ್ಡಿ ಅವರಿಗೆ ಎಚ್ಚರಿಕೆ ನೀಡಿತು.

2007: ಮುಂಬೈ ಚಿನಿವಾರ ಪೇಟೆಯಲ್ಲಿ ಅಪರಂಜಿ ಚಿನ್ನವು ಈದಿನದ ವಹಿವಾಟಿನಲ್ಲಿ ಪ್ರತಿ 10 ಗ್ರಾಂಗಳಿಗೆ ರೂ 275ರಷ್ಟು ಹೆಚ್ಚಳಗೊಂಡು, ರೂ 10,735ಕ್ಕೆ ಏರಿಕೆಯಾಗಿ ಸಾರ್ವಕಾಲಿಕ ದಾಖಲೆ ಮಾಡಿತು. ಬೆಳ್ಳಿಯೂ ವರ್ಷದ ಗರಿಷ್ಠ ಮಟ್ಟವಾದ ಪ್ರತಿ ಕೆಜಿಗೆ ರೂ 20,740ರಷ್ಟಕ್ಕೆ ಹೆಚ್ಚಿತು.

2006: ಭಾರತೀಯ ಕ್ರಿಕೆಟ್ ತಂಡದ ಹಳೆಯ ಹುಲಿ ಆಲ್ ರೌಂಡ್ ಆಟಗಾರ ಪಾಹ್ಲನ್ ರತನ್ ಜಿ ಉಮ್ರಿಗರ್ (80) ನಿಧನ. ಭಾರತ ತಂಡದ ಪರವಾಗಿ 59 ಟೆಸ್ಟ್ ಪಂದ್ಯಗಳನ್ನು ಆಡ್ದಿದ ಉಮ್ರಿಗರ್ ಎಂಟು ಬಾರಿ ನಾಯಕನ ಜವಾಬ್ದಾರಿ ಹೊತ್ತಿದ್ದರು.

2006: ಖ್ಯಾತ ವಿಜ್ಞಾನಿ ಪ್ರೊ. ಸಿ.ಎನ್. ಆರ್. ರಾವ್ ಅವರಿಗೆ ಲಂಡನ್ ಭೌತಶಾಸ್ತ್ರ ಸಂಸ್ಥೆಯು ಗೌರವ ಫೆಲೋಷಿಪ್ ನೀಡಿತು. ಈ ಗೌರವಕ್ಕೆ ಪಾತ್ರರಾದ ಪ್ರಥಮ ಭಾರತೀಯ ವಿಜ್ಞಾನಿ ಎಂಬ ಹೆಗ್ಗಳಿಕೆಗೆ ರಾವ್ ಪಾತ್ರರಾದರು. ರಷ್ಯದ ನೊಬೆಲ್ ಪುರಸ್ಕೃತ ವಿಜ್ಞಾನಿ ಲಝಾರಿವಿಚ್ ಗಿಂಜ್ಬರ್ಗ್ ಜೊತೆಗೆ ರಾವ್ ಈ ಫೆಲೋಷಿಪ್ ಹಂಚಿಕೊಂಡರು.

2005: ವೋಲ್ಕರ್ ಸಮಿತಿ ವರದಿಯ ಹಿನ್ನೆಲೆಯಲ್ಲಿ ಪ್ರತಿಪಕ್ಷಗಳ ಒತ್ತಡಕ್ಕೆ ಮಣಿದು ಪ್ರಧಾನಿ ಮನಮೋಹನ್ ಸಿಂಗ್ ಅವರು ನಟವರ್ ಸಿಂಗ್ ಅವರಿಂದ ವಿದೇಶಾಂಗ ವ್ಯವಹಾರ ಖಾತೆಯನ್ನು ಕಿತ್ತುಕೊಂಡು ತಮ್ಮ ಕೈಯಲ್ಲೇ ಇರಿಸಿಕೊಂಡರು.

2000: ಭಾರತದ ಹಿರಿಯ ಮುತ್ಸದ್ದಿ, ಹಸಿರು ಕ್ರಾಂತಿಯ ಮುಖ್ಯ ಶಿಲ್ಪಿ ಸಿ. ಸುಬ್ರಮಣಿಯಂ ತಮ್ಮ 90ನೇ ವಯಸ್ಸಿನಲ್ಲಿ ನಿಧನರಾದರು.

2000: ನ್ಯೂಯಾರ್ಕ್ ರಾಜ್ಯದಿಂದ ಅಮೆರಿಕನ್ ಸೆನೆಟ್ ಗೆ ಆಯ್ಕೆಯಾಗುವ ಮೂಲಕ ಹಿಲರಿ ರೋಢಾಮ್ ಕ್ಲಿಂಟನ್ ಅವರು ಸಾರ್ವಜನಿಕ ಹುದ್ದೆಗೆ ಆಯ್ಕೆಯಾದ ಮೊದಲ ಅಧ್ಯಕ್ಷರ ಪತ್ನಿ ಎಂಬ ಹೆಗ್ಗಳಿಕೆ ಗಳಿಸಿ ಇತಿಹಾಸ ನಿರ್ಮಿಸಿದರು.

1991: ಆರು ಖಂಡಗಳು ಸೇರಿದಂತೆ ಭೂಮಿಗೆ ಅತಿ ವೇಗವಾಗಿ ಪ್ರದಕ್ಷಿಣೆ ಹಾಕಲು ಸಲಾವುದ್ದೀನ್ `ಸಲೂ' ಚೌಧರಿ ಮತ್ತು ಅವರ ಪತ್ನಿ ನೀನಾ ದೆಹಲಿಯಿಂದ `ಕಾರು ಪ್ರಯಾಣ' ಹೊರಟರು. 39 ದಿನ, 20 ಗಂಟೆ ಮತ್ತು 15 ನಿಮಿಷಗಳ ದಾಖಲೆ ಅವಧಿಯಲ್ಲಿ ಅವರು 40,535 ಕಿ.ಮೀ. ಕ್ರಮಿಸಿದರು. ಗಿನ್ನೆಸ್ ಪಬ್ಲಿಕ್ ಲಿಮಿಟೆಡ್ ಜೊತೆಗೆ ಖಟ್ಲೆ ಹೂಡಿದ ಬಳಿಕ ಅವರನ್ನು ಭೂಮಿಗೆ ಪ್ರದಕ್ಷಿಣೆಗೈದ `ಮೊತ್ತ ಮೊದಲ ಅತಿ ವೇಗದ ಪುರುಷ ಹಾಗೂ ಮಹಿಳೆ' ಎಂಬುದಾಗಿ ಮಾನ್ಯ ಮಾಡಲಾಯಿತು. ಈ ಸಾಹಸವನ್ನು ಗೌರವಿಸುವ ಸಲುವಾಗಿ `ಗಿನ್ನೆಸ್ ವರ್ಲ್ಡ್ ರೆಕಾರ್ಡ್ಸ್, ರೋಡ್ ಚಾಲೆಂಜ್ ಟ್ರೋಫಿ'ಯನ್ನು `ಚೌಧರಿ ಟ್ರೋಫಿ' ಎಂಬುದಾಗಿ ಕರೆಯಲು ಗಿನ್ನೆಸ್ ಅಧಿಕಾರಿಗಳು ನಿರ್ಧರಿಸಿದರು.

1991: ಅಮೆರಿಕನ್ ಬಾಸ್ಕೆಟ್ ಬಾಲ್ ಆಟಗಾರ ಮ್ಯಾಜಿಕ್ ಜಾನ್ಸನ್ (ಎನ್ ಬಿ ಎ) ಅವರು ತಾವು ಏಡ್ಸ್ ರೋಗಕ್ಕೆ ತುತ್ತಾಗಿರುವುದು ಪರೀಕ್ಷೆಗಳಲ್ಲಿ ದೃಢಪಟ್ಟಿದೆ ಎಂದು ಪ್ರಕಟಿಸಿ ಬಾಸ್ಕೆಟ್ ಬಾಲ್ ಕ್ರೀಡೆಯಿಂದ ನಿವೃತ್ತರಾಗುವುದಾಗಿ ಘೋಷಿಸಿದರು.

1990: ಭಾರತದ ಪ್ರಧಾನಿ ವಿ.ಪಿ. ಸಿಂಗ್ ನೇತೃತ್ವದ ರಾಷ್ಟ್ರೀಯ ರಂಗ ಸರ್ಕಾರವು ಲೋಕಸಭೆಯಲ್ಲಿ ವಿಶ್ವಾತಮತ ಗಳಿಸಲು ವಿಫಲಗೊಂಡಿತು. ಸಿಂಗ್ ರಾಜೀನಾಮೆ ಸಲ್ಲಿಸಿದರು..

1981: ಬಿಲ್ಲ ಮತ್ತು ರಂಗನಿಗೆ ವಿಧಿಸಿದ ಮರಣದಂಡನೆ ಸೇರಿದಂತೆ ದೇಶದಾದ್ಯಂತ ಗಲ್ಲು ಶಿಕ್ಷೆಗಳ ಜಾರಿಯನ್ನು ತಡೆ ಹಿಡಿದು ಸುಪ್ರೀಂಕೋರ್ಟ್ ಮಹತ್ವದ ತೀರ್ಪು ನೀಡಿತು.

1956: ಸೈನಿಕ ರಾಜಕಾರಣಿ ಡ್ವೈಟ್ ಡೇವಿಡ್ ಐಸೆನ್ ಹೋವರ್ (`ಐಕ್') (66) ಅವರು ಇನ್ನೂ ನಾಲ್ಕು ವರ್ಷಗಳ ಅವಧಿಗೆ ಅಮೆರಿಕದ ಅಧ್ಯಕ್ಷರಾಗಿ ಪ್ರಚಂಡ ಬಹುಮತದಿಂದ ಚುನಾಯಿತರಾದರು.

1956: ಅಂತಾರಾಷ್ಟ್ರೀಯ ಪೊಲೀಸ್ ವಶಕ್ಕೆ ವಹಿಸುವ ಕಾರ್ಯಗಳ ಬಗ್ಗೆ ವಿಶ್ವಸಂಸ್ಥೆಯ ಪ್ರಧಾನ ಕಾರ್ಯದರ್ಶಿ ದಾಗ್ ಹ್ಯಾಮರ್ ಷೀಲ್ಡ್ ಅವರು ವಿವರಣೆ ನೀಡಿದ ಬಳಿಕ ಈಜಿಪ್ಟಿನಲ್ಲಿ ಸ್ಥಾಪಿಸಲಾದ ಅಂತಾರಾಷ್ಟ್ರೀಯ ಪೊಲೀಸ್ ದಳಕ್ಕೆ ಸೇರಲು ಭಾರತ ತಾತ್ವಿಕ ಒಪ್ಪಿಗೆ ನೀಡಿತು.

1944: ಅಮೆರಿಕಾದ ಅಧ್ಯಕ್ಷ ಫ್ರಾಂಕ್ಲಿನ್ ಡಿ. ರೂಸ್ ವೆಲ್ಟ್ ಅವರು ಅಧ್ಯಕ್ಷರಾಗಿ ನಾಲ್ಕನೇ ಬಾರಿಗೆ ಆಯ್ಕೆಯಾದ ಮೊದಲ ವ್ಯಕ್ತಿ ಎಂಬ ಹೆಗ್ಗಳಿಕೆಗೆ ಪಾತ್ರರಾದರು.

1938: ಭಾರತೀಯ ಸಂಸ್ಕೃತಿಯ ಪ್ರಚಾರಕ್ಕಾಗಿ ಕೆ.ಎಂ. ಮುನ್ಶಿ ಅವರು ಬಾಂಬೆಯಲ್ಲಿ (ಈಗಿನ ಮುಂಬೈ) ಭಾರತೀಯ ವಿದ್ಯಾ ಭವನವನ್ನು ಸ್ಥಾಪಿಸಿದರು.

1910: ವಿದ್ವಾಂಸ, ಸಂಶೋಧಕ, ಸಾಹಿತಿ ಸಂ.ಶಿ. ಭೂಸನೂರಮಠ (7-11-1910ರಿಂದ 6-11-1991) ಅವರು ಶಿವಮೂರ್ತಯ್ಯ- ರಾಚಮ್ಮ ದಂಪತಿಯ ಮಗನಗಿ ರೋಣ ತಾಲ್ಲೂಕು ನಿಡಗುಂದಿಯಲ್ಲಿ ಜನಿಸಿದರು.

1924: ಸಾಹಿತಿ ವಸಂತ ಮಧ್ವರಾಜ್ ಜನನ.

1893: ಸಾಹಿತಿ ಶಿ.ಶಿ. ಬಸವನಾಳ ಜನನ.

1888: ನೊಬೆಲ್ ಪ್ರಶಸ್ತಿ ವಿಜೇತ ಭೌತವಿಜ್ಞಾನಿ ಸರ್ ಚಂದ್ರಶೇಖರ ವೆಂಕಟರಾಮನ್ (1888-1970) ಹುಟ್ಟಿದ ದಿನ. ಇವರಿಗೆ ನೊಬೆಲ್ ಪ್ರಶಸ್ತಿ ತಂದುಕೊಟ್ಟ ಬೆಳಕಿನ ಸಿದ್ಧಾಂತ `ರಾಮನ್ ಎಫೆಕ್ಟ್' ಎಂದೇ ಖ್ಯಾತಿ ಪಡೆದಿದೆ.

1867: ಎರಡು ಬಾರಿ ನೊಬೆಲ್ ಪ್ರಶಸ್ತಿ ಗೆದ್ದ ಪೊಲಿಶ್ ಸಂಜಾತ ಫ್ರೆಂಚ್ ಭೌತ ವಿಜ್ಞಾನಿ ಮೇರೀ ಕ್ಯೂರೀ (1867-1934) ಹುಟ್ಟಿದ ದಿನ. ರೇಡಿಯೊ ಆಕ್ಟಿವಿಟಿ ಕುರಿತ ಸಂಶೋಧನೆಯಿಂದ ಈಕೆ ಖ್ಯಾತರಾಗಿದ್ದಾರೆ.

1862: ಕೊನೆಯ ಮೊಘಲ್ ಚಕ್ರವರ್ತಿ ಎರಡನೇ ಬಹಾದುರ್ ಶಹಾ ಬರ್ಮಾದ (ಈಗನ ಮ್ಯಾನ್ಮಾರ್) ರಂಗೂನಿನಲ್ಲಿ 87ನೇ ವಯಸ್ಸಿನಲ್ಲಿ ಮೃತನಾದ.

1858: ಭಾರತದ ರಾಷ್ಟ್ರೀಯ ನಾಯಕ ಬಿಪಿನ್ ಚಂದ್ರಪಾಲ್ (1858-1932) ಜನ್ಮದಿನ. 1906ರಲ್ಲಿ ಅರವಿಂದ ಘೋಷ್ ಸಂಪಾದಕತ್ವದಲ್ಲಿ ಇವರು `ವಂದೇ ಮಾತರಂ' ಪತ್ರಿಕೆ ಆರಂಭಿಸಿದ್ದರು.

1627: ನಾಲ್ಕನೇ ಮೊಘಲ್ ಚಕ್ರವರ್ತಿ ಜಹಾಂಗೀರ್ (1569-1627) ತನ್ನ 58ನೇ ವಯಸ್ಸಿನಲ್ಲಿ ಮೃತನಾದ.

Saturday, November 14, 2009

ಇಂದಿನ ಇತಿಹಾಸ History Today ನವೆಂಬರ್ 06

ಇಂದಿನ ಇತಿಹಾಸ

ನವೆಂಬರ್ 06

ಹಿಮಾಲಯದ ತಪ್ಪಲಲ್ಲಿರುವ ಸಣ್ಣ ರಾಷ್ಟ್ರ ಭೂತಾನಿನ ನೂತನ 5 ನೇ ದೊರೆಯಾಗಿ ಜಿಗ್ಮೆ ಖೇಸರ್ ನಮ್ಜಿಲ್ ವಾಂಗ್ ಚುಕ್ ಅವರು ಅಧಿಕಾರ ಸ್ವೀಕರಿಸುವುದರೊಂದಿಗೆ ಈ ದೇಶದಲ್ಲಿ ಹೊಸ ಅಧ್ಯಾಯವೊಂದು ಪ್ರಾರಂಭವಾಯಿತು. ಭೂತಾನಿನ ಥಿಂಪುವಿನಲ್ಲಿ ನಡೆದ ಅಧಿಕಾರ ಸ್ವೀಕಾರದ ವರ್ಣರಂಜಿತ ಸಮಾರಂಭದಲ್ಲಿ ಭಾರತದ ರಾಷ್ಟ್ರಪತಿ ಪ್ರತಿಭಾ ಪಾಟೀಲ್, ಯುಪಿಎ ಅಧ್ಯಕ್ಷೆ ಸೋನಿಯಾ ಗಾಂಧಿ ಹಾಗೂ ವಿದೇಶಾಂಗ ಸಚಿವ ಪ್ರಣವ್ ಮುಖರ್ಜಿ ಅವರು ಭಾಗವಹಿಸಿದರು.

2008: ಕಾಮಗಾರಿಯ ಬಿಲ್ ಅನುಮೋದನೆಯ ಸಂಬಂಧ 20 ಲಕ್ಷ ರೂಪಾಯಿ ಲಂಚ ಪಡೆಯುತ್ತಿದ್ದ ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರದ ಎಂಜಿನಿಯರಿಂಗ್ ವಿಭಾಗದ ಮುಖ್ಯಸ್ಥ ಮತ್ತು ಹಣ ನೀಡಿದ ಖಾಸಗಿ ಕಂಪೆನಿಯ ಮೂವರನ್ನು ಲೋಕಾಯುಕ್ತ ಪೊಲೀಸರು ಬಂಧಿಸಿದರು. ಬಿಡಿಎ ಸದಸ್ಯ ಎಂಜಿನಿಯರ್ ಡಿ.ಶಿವಶಂಕರ್, ಈಸ್ಟ್ ಕೋಸ್ಟ್ ಕನ್ಸ್ಟ್ರಕ್ಷನ್ಸ್ ಅಂಡ್ ಇಂಡಸ್ಟ್ರೀಸ್ ಲಿಮಿಟೆಡ್ ನಿರ್ದೇಶಕ ಎಸ್.ಎ.ಮೊಹಮ್ಮದ್ ಮೊಯಿದ್ದೀನ್, ಪ್ರಧಾನ ವ್ಯವಸ್ಥಾಪಕ ಇಲಿಯಾಸ್ ಲತೀಫ್ ಮತ್ತು ವ್ಯವಸ್ಥಾಪಕ ಬಸಪ್ಪ ಬಂಧಿತರು. ಯಾವುದೇ ದೂರಿಲ್ಲದೇ ಸಿಬಿಐ ಮಾದರಿಯಲ್ಲಿ ಕಾರ್ಯಾಚರಣೆ ನಡೆಯಿತು. ಈ ಅಧಿಕಾರಿಗೆ ಭಾರಿ ಪ್ರಮಾಣದ ಲಂಚ ನೀಡಲಾಗುತ್ತಿದೆ ಎಂಬ ಖಚಿತ ಮಾಹಿತಿ ಲೋಕಾಯುಕ್ತದ ಹೆಚ್ಚುವರಿ ಪೊಲೀಸ್ ಮಹಾನಿರ್ದೇಶಕ ರೂಪಕ್ ಕುಮಾರ್ ದತ್ತ ಅವರಿಗೆ ತಲುಪಿತ್ತು. ಈ ಸುಳಿವು ಆಧರಿಸಿ ಕಾರ್ಯತಂತ್ರ್ರ ರೂಪಿಸಿದ ಅವರು, ಜಾಗೃತ ದಳದ ಅಧಿಕಾರಿಗಳ ತಂಡವನ್ನು ಕಾರ್ಯಾಚರಣೆಗೆ ನಿಯೋಜಿಸಿದ್ದರು.

2008: ಹಿಮಾಲಯದ ತಪ್ಪಲಲ್ಲಿರುವ ಸಣ್ಣ ರಾಷ್ಟ್ರ ಭೂತಾನಿನ ನೂತನ 5 ನೇ ದೊರೆಯಾಗಿ ಜಿಗ್ಮೆ ಖೇಸರ್ ನಮ್ಜಿಲ್ ವಾಂಗ್ ಚುಕ್ ಅವರು ಅಧಿಕಾರ ಸ್ವೀಕರಿಸುವುದರೊಂದಿಗೆ ಈ ದೇಶದಲ್ಲಿ ಹೊಸ ಅಧ್ಯಾಯವೊಂದು ಪ್ರಾರಂಭವಾಯಿತು. ಭೂತಾನಿನ ಥಿಂಪುವಿನಲ್ಲಿ ನಡೆದ ಅಧಿಕಾರ ಸ್ವೀಕಾರದ ವರ್ಣರಂಜಿತ ಸಮಾರಂಭದಲ್ಲಿ ಭಾರತದ ರಾಷ್ಟ್ರಪತಿ ಪ್ರತಿಭಾ ಪಾಟೀಲ್, ಯುಪಿಎ ಅಧ್ಯಕ್ಷೆ ಸೋನಿಯಾ ಗಾಂಧಿ ಹಾಗೂ ವಿದೇಶಾಂಗ ಸಚಿವ ಪ್ರಣವ್ ಮುಖರ್ಜಿ ಅವರು ಭಾಗವಹಿಸಿದರು. ಆಕ್ಸ್ಫರ್ಡ್ ವಿಶ್ವವಿದ್ಯಾಲಯದಲ್ಲಿ ಪದವಿ ಪಡೆದಿರುವ 28 ವರ್ಷದ ಜಿಗ್ಮೆ ಅವರು ವಿಶ್ವದ ಅತಿ ಕಿರಿಯ ದೊರೆ ಎಂಬ ಹೆಗ್ಗಳಿಕೆಗೆ ಪಾತ್ರರಾದರು.

2008: ಅಧಿಕಾರ ಹಸ್ತಾಂತರ ಪ್ರಕ್ರಿಯೆಯಲ್ಲಿ ಒಬಾಮ ತಂಡಕ್ಕೆ ನೆರವಾಗುವ ನಿಟ್ಟಿನಲ್ಲಿ ಭಾರತೀಯ ಮೂಲದ ಖ್ಯಾತ ಅರ್ಥಶಾಸ್ತ್ರಜ್ಞೆ ಸೋನಲ್ ಷಾ ಅವರನ್ನು ಸಲಹೆಗಾರರಾಗಿ ನೇಮಕ ಮಾಡಲಾಯಿತು. ಸೋನಲ್ ಷಾ ಗೂಗಲ್ನ ಸಾಮಾಜಿಕ ಸೇವಾ ವಿಭಾಗದ ಮುಖ್ಯಸ್ಥರಾಗಿ ಕಾರ್ಯ ನಿರ್ವಹಿಸುತ್ತಿದ್ದರು. ಒಬಾಮ ಮತ್ತವರ ತಂಡಕ್ಕೆ ಸಲಹೆ ನೀಡಲು ನೇಮಿಸಲಾಗಿರುವ ವಿವಿಧ ಕ್ಷೇತ್ರಗಳ ತಜ್ಞರ ಸಮಿತಿಯಲ್ಲಿ 40 ವರ್ಷದ ಸೋನಲ್ ಷಾ ಸಹ ಒಬ್ಬರು. ಸೋನಲ್ ಅವರ ತಂದೆ 1970ರಲ್ಲಿ ಗುಜರಾತಿನಿಂದ ನ್ಯೂಯಾರ್ಕಿಗೆ ತೆರಳಿದ್ದರು. 1972ರಲ್ಲಿ ಸೋನಲ್ ತಮ್ಮ ತಾಯಿ ಹಾಗೂ ಸಹೋದರಿಯ ಜೊತೆ ಅಲ್ಲಿಗೆ ತೆರಳಿದ್ದರು. ಅಮೆರಿಕದಲ್ಲಿಯೇ ವಿದ್ಯಾಭ್ಯಾಸ ಪೂರ್ಣಗೊಳಿಸಿದ ಸೋನಲ್, ಆ ದೇಶದ ಖ್ಯಾತ ಸಂಸ್ಥೆಗಳಲ್ಲಿ ಕೆಲಸ ಮಾಡಿದ್ದರು.

2007: ಎಂಟು ಕೈಕಾಲುಗಳನ್ನು ಹೊಂದಿದ್ದ ಬಿಹಾರದ ಬಾಲಕಿ ಲಕ್ಷ್ಮಿಯ ದೇಹದ ಅನಗತ್ಯ ಭಾಗಗಳನ್ನು ಬೇರ್ಪಡಿಸುವ ಅತ್ಯಂತ ಕ್ಲಿಷ್ಟಕರ ಶಸ್ತ್ರಚಿಕಿತ್ಸೆ ಈದಿನ ಬೆಳಿಗ್ಗೆ 7 ಗಂಟೆಗೆ ಬೆಂಗಳೂರಿನ ಸ್ಪರ್ಶ ಆಸ್ಪತ್ರೆಯಲ್ಲಿ ಆರಂಭವಾಗಿ ರಾತ್ರಿಯ ವೇಳೆಗೆ ಬೆನ್ನಹುರಿಯಿಂದ ಅವಳಿ ದೇಹ ಬೇರ್ಪಡಿಸುವ ಕಾರ್ಯ ಯಶಸ್ವಿಯಾಯಿತು. ಬೆನ್ನುಹುರಿಯಲ್ಲಿನ ಹಲವು ನರಮಂಡಲಗಳಿಗೆ ಯಾವುದೇ ಧಕ್ಕೆಯಾಗದಂತೆ ಅವಳಿ ಭಾಗವನ್ನು ಬೇರ್ಪಡಿಸಲಾಯಿತು. ಸುಮಾರು 30 ತಜ್ಞ ವೈದ್ಯರು ಡಾ. ಶರಣ್ ಪಾಟೀಲ ನೇತೃತ್ವದಲ್ಲಿ ಈ ಶಸ್ತ್ರಚಿಕಿತ್ಸೆಯಲ್ಲಿ ಪಾಲ್ಗೊಂಡರು.

2007: ಆಫ್ಘಾನಿಸ್ಥಾನದ ಬಘಲನ್ ನಗರಕ್ಕೆ ಭೇಟಿ ನೀಡಿದ್ದ ಸಂಸತ್ ಸದಸ್ಯರ ನಿಯೋಗದ ಮೇಲೆ ಆತ್ಮಾಹುತಿ ದಳದ ವ್ಯಕ್ತಿಯೊಬ್ಬ ನಡೆಸಿದ ದಾಳಿಗೆ 90 ಮಂದಿ ಬಲಿಯಾಗಿ, 50 ಜನ ಗಾಯಗೊಂಡರು. ವಿರೋಧಪಕ್ಷದ ವಕ್ತಾರ ಮುಸ್ತಫಾ ಕಸೆಮಿ ಸೇರಿದಂತೆ ಐವರು ಸಂಸದರು ಘಟನೆಯಲ್ಲಿ ಮೃತರಾದರು.

2007: ಪಾಕಿಸ್ಥಾನದಲ್ಲಿ ಬರುವ ಜನವರಿಯೊಳಗೆ ರಾಷ್ಟ್ರೀಯ ಚುನಾವಣೆ ನಡೆಯಲಿದ್ದು ಅಧ್ಯಕ್ಷ ಜನರಲ್ ಪರ್ವೇಜ್ ಮುಷರಫ್ ಅವರು ಅಮೆರಿಕದ ಒತ್ತಡಕ್ಕೆ ಮಣಿದು ಶೀಘ್ರವೇ ಸೇನಾ ಸಮವಸ್ತ್ರ ತ್ಯಜಿಸಲು ನಿರ್ಧರಿಸಿದರು.

2007: ಬಹುಮತದ ಬಗ್ಗೆ ತೃಪ್ತಿ, ಸುಭದ್ರತೆ ಬಗ್ಗೆ ಅನುಮಾನ ವ್ಯಕ್ತಪಡಿಸುವ ಅಂತಿಮ ವರದಿಯನ್ನು ಕರ್ನಾಟಕದ ರಾಜ್ಯಪಾಲ ರಾಮೇಶ್ವರ ಠಾಕೂರ್ ರಾಷ್ಟ್ರಪತಿಯವರಿಗೆ ಸಲ್ಲಿಸಿದರು. ಈ ಮಧ್ಯೆ ಬಿಜೆಪಿ ಮತ್ತು ಜೆಡಿ (ಎಸ್) ಪಕ್ಷಗಳಿಗೆ ಸೇರಿದ 125 ಶಾಸಕರು ರಾಷ್ಟ್ರಪತಿ ಪ್ರತಿಭಾ ಪಾಟೀಲ್ ಸಮ್ಮುಖದಲ್ಲಿ ಪೆರೇಡ್ ನಡೆಸಿ ತಮಗಿರುವ ಬಹುಮತ ಪ್ರದರ್ಶಿಸಿದರು.

2007: ಭಾರತ ಟೆಸ್ಟ್ ಕ್ರಿಕೆಟ್ ತಂಡದ ನಾಯಕತ್ವದ ಜವಾಬ್ದಾರಿ ಹೊತ್ತುಕೊಳ್ಳಲು ಸಚಿನ್ ತೆಂಡೂಲ್ಕರ್ ನಿರಾಕರಿಸಿದರು. ಸಚಿನ್ ಅವರು ಭಾರತ ಟೆಸ್ಟ್ ತಂಡದ ನಾಯಕ ಎಂಬ ಅಧಿಕೃತ ಪ್ರಕಟಣೆ ಹೊರಬೀಳುವ ಎರಡು ದಿನಗಳ ಮೊದಲು ಈ ನಿರ್ಧಾರ ಹೊರಬಿದ್ದಿತು. ರಾಹುಲ್ ದ್ರಾವಿಡ್ ಅವರು ರಾಜೀನಾಮೆ ನೀಡಿದ ಕಾರಣ ಭಾರತ ಏಕದಿನ ಮತ್ತು ಟೆಸ್ಟ್ ತಂಡಗಳ ನಾಯಕ ಸ್ಥಾನ ತೆರವಾಗಿತ್ತು.

2007: ಎಂಟು ವಾರಗಳ ಯೋಗದಿಂದ ಹೃದ್ರೋಗ ತಹಬಂದಿಗೆ ಬರುವುದು ಮಾತ್ರವಲ್ಲ ಮೃತ್ಯುಮುಖಿ ಲಕ್ಷಣಗಳೂ ಕಡಿಮೆಯಾಗುತ್ತವೆ ಎಂದು ಅಧ್ಯಯನದ ವರದಿಯೊಂದು ತಿಳಿಸಿತು. ಅಟ್ಲಾಂಟಾದ ಎಮೊರಿ ವೈದ್ಯಕೀಯ ವಿಶ್ವವಿದ್ಯಾಲಯದ ಸಂಶೋಧಕರು ಎಂಟು ವಾರಗಳ ನಿಯಮಿತ ಯೋಗಾಸನ ನಡೆಸಿ ಅಧ್ಯಯನ ಮಾಡಿದ ಬಳಿಕ ಈ ವಿಚಾರವನ್ನು ಬಹಿರಂಗಪಡಿಸಿದರು. ಸುಮಾರು 50 ಲಕ್ಷ ಅಮೆರಿಕನ್ನರು ಹೃದ್ರೋಗದಿಂದ ಬಳಲುತ್ತಿದ್ದರು. ಪರಿಣಾಮಕಾರಿ ಔಷಧಿಗಳು ಮತ್ತು ಶಸ್ತ್ರಚಿಕಿತ್ಸೆಯಿಂದಲೂ ಸಂಪೂರ್ಣ ಗುಣ ಸಾಧ್ಯವಾಗಿರಲಿಲ್ಲ. ಅವರಲ್ಲಿ 19 ಹೈದ್ರೋಗಿಗಳಿಗೆ ಅಟ್ಲಾಂಟಾದ ಎಮೊರಿ ವೈದ್ಯಕೀಯ ವಿಶ್ವವಿದ್ಯಾಲಯದ ಸಂಶೋಧಕರು ಎಂಟು ವಾರಗಳ ನಿಯಮಿತ ಯೋಗಾಸನ ನೀಡಿ ಫಲಿತಾಂಶ ಪರಿಶೀಲಿಸಿದಾಗ ಅವರಲ್ಲಿ ರೋಗದ ತೀವ್ರತೆ ಕಡಿಮೆಯಾಗಿದ್ದುದು ಕಾಣಿಸಿತು.

2006: ಮೈಸೂರಿನ ಚಾಮುಂಡಿಬೆಟ್ಟದಲ್ಲಿ ವಿರಾಜಮಾನವಾಗಿರುವ 342 ವರ್ಷಗಳ ಇತಿಹಾಸ ಹೊಂದಿರುವ 16 ಅಡಿ ಎತ್ತರ, 25 ಅಡಿ ಉದ್ದದ ಮಹಾನಂದಿಗೆ ಇದೇ ಮೊದಲ ಬಾರಿಗೆ ಭಕ್ತರ ಜೈಕಾರ, ಪುರೋಹಿತರ ಮಂತ್ರಘೋಷಗಳ ಮಧ್ಯೆ ಮಹಾಮಜ್ಜನ ನೆರವೇರಿಸಲಾಯಿತು. ಸುತ್ತೂರು ಶಿವರಾತ್ರಿ ದೇಶಿಕೇಂದ್ರ ಸ್ವಾಮೀಜಿ ಬೆಳಗ್ಗೆ 10.45ಕ್ಕೆ ಹಾಲಿನ ಅಭಿಷೇಕ ಮಾಡುವ ಮೂಲಕ ಮಹಾಭಿಷೇಕಕ್ಕೆ ಚಾಲನೆ ನೀಡಿದರು.

2006: ಭಾರತದ ಜೊತೆ ಬಾಹ್ಯಾಕಾಶ ಒಪ್ಪಂದಕ್ಕೆ ರಷ್ಯಾ ಸಹಿ ಹಾಕಿತು. ಇದರೊಂದಿಗೆ ಬಾಹ್ಯಾಕಾಶ ತಂತ್ರಜ್ಞಾನ ವರ್ಗಾವಣೆ ಮತ್ತು ಜಂಟಿ ಬಾಹ್ಯಾಕಾಶ ಅನ್ವೇಷಣೆಗೆ ಹಾದಿ ಸುಗಮಗೊಂಡಿತು.

2005: ವೋಲ್ಕರ್ ವರದಿಯಲ್ಲಿ ಭಾರತದ ವಿದೇಶಾಂಗ ಸಚಿವ ನಟವರ್ ಸಿಂಗ್ ಹಾಗೂ ಕಾಂಗ್ರೆಸ್ ಪಕ್ಷದ ವಿರುದ್ಧ ಮಾಡಲಾದ ಆರೋಪಗಳ ಸತ್ಯಾಸತ್ಯತೆ ಬಯಲಿಗೆ ಎಳೆಯಲು ವಿಶ್ವಸಂಸ್ಥೆಯ ಮಾಜಿ ಉಪ ಕಾರ್ಯದರ್ಶಿ ವೀರೇಂದ್ರ ದಯಾಳ್ ನೇತೃತ್ವದಲ್ಲಿ ತನಿಖೆ ನಡೆಸಲು ಕೇಂದ್ರದ ಯುಪಿಎ ಸರ್ಕಾರ ನಿರ್ಧರಿಸಿತು.

2005: ಭಾರತೀಯ ಗೋ ತಳಿಗಳ ಸಂರಕ್ಷಣೆಗಾಗಿ ರಾಮಚಂದ್ರಾಪುರ ಮಠದ ರಾಘವೇಶ್ವರ ಭಾರತಿ ಸ್ವಾಮೀಜಿ ನೇತೃತ್ವದ 68 ದಿನಗಳ ಕರ್ನಾಟಕ ವ್ಯಾಪಿ `ಭಾರತೀಯ ಗೋ ಯಾತ್ರೆ'ಗೆ ಬೆಂಗಳೂರು ನ್ಯಾಷನಲ್ ಕಾಲೇಜು ಮೈದಾನದಲ್ಲಿ ಚಾಲನೆ ನೀಡಲಾಯಿತು.

2000: ಬಂಗಾಳ ರಾಜ್ಯದಲ್ಲಿ ದೀರ್ಘಕಾಲ ಆಳ್ವಿಕೆ ನಡೆಸಿದ ಮುಖ್ಯಮಂತ್ರಿ ಜ್ಯೋತಿ ಬಸು ಅವರು 23 ವರ್ಷಗಳ ಆಳ್ವಿಕೆಯ ಬಳಿಕ ತಮ್ಮ ಹುದ್ದೆಯಿಂದ ಕೆಳಗಿಳಿದರು. ಬುದ್ಧದೇವ ಭಟ್ಟಾಚಾರ್ಯ ಅವರು ಬಸು ಉತ್ತರಾಧಿಕಾರಿಯಾದರು.

1967: ಓಹಾಯೋದ ಡೇಟನ್ನಿನಲ್ಲಿ `ಫಿಲ್ ಡೊನಾಹ್ಯೂ ಟಿ.ವಿ. ಟಾಕ್ ಶೋ' ಆರಂಭವಾಯಿತು. ಈ ಶೋ 29 ವರ್ಷಗಳ ಕಾಲ ಪ್ರಸಾರಗೊಂಡಿತು.

1955: ಸಾಹಿತಿ ವೆಂಕಟಸ್ವಾಮಿ ಎಂ. ಜನನ.

1951: ಸಾಹಿತಿ ಮಧು ವೆಂಕಾರೆಡ್ಡಿ ಜನನ.

1945: ಸಾಹಿತಿ ಶ್ರೀನಿವಾಸ ಉಡುಪ ಜನನ.

1936: `ದೇಶಾಂಶ ಹುಡಗಿ' ಕಾವ್ಯನಾಮದ ಸಾಹಿತಿ ಶಾಂತಪ್ಪ ದೇವರಾಯ ಅವರು ಶರಣಪ್ಪ ದೇವರಾಯ- ಭೀಮಾಬಾಯಿ ದಂಪತಿಯ ಮಗನಾಗಿ ಬೀದರ್ ಜಿಲ್ಲೆಯ ಹುಮನಾಬಾದ ತಾಲ್ಲೂಕಿನ ಹುಡಗಿ ಗ್ರಾಮದಲ್ಲಿ ಜನಿಸಿದರು.

1931: ಸಾಹಿತಿ ಟೇಕಲ್ ಗೋಪಾಲಕೃಷ್ಣ ಜನನ.

1888: ಮಹಾತ್ಮಾ ಗಾಂಧಿ ಅವರನ್ನು ಲಂಡನ್ನಿನಲ್ಲಿ ಕಾನೂನು ವಿದ್ಯಾರ್ಥಿಯಾಗಿ ದಾಖಲು ಮಾಡಿಕೊಳ್ಳಲಾಯಿತು. ಅವರು `ಇನ್ನರ್ ಟೆಂಪಲ್' ನ ಸದಸ್ಯರೂ ಆದರು. ಆದರೆ 1922ರಲ್ಲಿ ಅವರನ್ನು ಬ್ರಿಟಿಷ್ ರಾಜ್ ವಿರುದ್ಧ ಅತೃಪ್ತಿ ಪ್ರಚೋದಿಸಿದ್ದಕ್ಕಾಗಿ ಡಿಬಾರ್ ಮಾಡಲಾಯಿತು. 100 ವರ್ಷಗಳ ನಂತರ ಕಾನೂನು ವಿದ್ಯಾರ್ಥಿಯಾಗಿ ದಾಖಲು ಮಾಡಿಕೊಂಡ ಶತಮಾನೋತ್ಸವ ಸಂದರ್ಭದಲ್ಲಿ ಅವರನ್ನು `ಬಾರ್ - ಅಟ್- ಲಾ' ಆಗಿ ಮರು ದಾಖಲು ಮಾಡಿಕೊಳ್ಳಲಾಯಿತು.

1854: ಅಮೆರಿಕನ್ ಬ್ರ್ಯಾಂಡ್ ಮಾಸ್ಟರ್ ಹಾಗೂ ಸೇನಾ ಕವಾಯತುಗಳ ಸಂಗೀತ ರಚನೆಕಾರ ಜಾನ್ ಫಿಲಿಪ್ ಸೌಸಾ (1854-1932) ಹುಟ್ಟಿದ ದಿನ. ತನ್ನ ವಾದ್ಯವೊಂದಕ್ಕೆ ಈತ `ಸೌಸಾಫೋನ್' ಎಂದೇ ಹೆಸರಿಟ್ಟ.

1814: ಸ್ಯಾಕ್ಸೋಫೋನ್ ಸಂಶೋಧಕ ಬೆಲ್ಜಿಯನ್- ಫ್ರೆಂಚ್ನ ಆಂಟೋನಿ- ಜೋಸೆಫ್ ಸ್ಯಾಕ್ಸ್ (1814-1994) ಹುಟ್ಟಿದ ದಿನ. `ಸ್ಯಾಕ್ಸೋಫೋನ್' ವಾದ್ಯೋಪಕರಣಕ್ಕೆ ಈತನ ಹೆಸರನ್ನೇ ಇಡಲಾಗಿದೆ.

Thursday, November 5, 2009

ಇಂದಿನ ಇತಿಹಾಸ History Today ನವೆಂಬರ್ 05

ಇಂದಿನ ಇತಿಹಾಸ

ನವೆಂಬರ್ 05

ಅಮೆರಿಕದ ಅಧ್ಯಕ್ಷರಾಗಿ ಆಯ್ಕೆಯಾಗುವ ಮೂಲಕ ಡೆಮಾಕ್ರೆಟಿಕ್ ಪಕ್ಷದ ಸಂಸದ ಬರಾಕ್ ಹುಸೇನ್ ಒಬಾಮ ಹೊಸ ಯುಗಕ್ಕೆ ನಾಂದಿ ಹಾಡಿದರು. ಅಮೆರಿಕ ಅಧ್ಯಕ್ಷ ಹುದ್ದೆಗೆ ಏರಿದ ಮೊದಲ ಕಪ್ಪು ವರ್ಣೀಯ ವ್ಯಕ್ತಿ ಎಂಬ ಹೆಗ್ಗಳಿಕೆ ಅವರದಾಯಿತು. ಇದಲ್ಲದೇ, ಅಧ್ಯಕ್ಷ ಹುದ್ದೆಗೆ ಏರಿದ ಅತ್ಯಂತ ಚಿಕ್ಕ ವಯಸ್ಸಿನ ಸಂಸದ ಎಂಬ ಹಿರಿಮೆಯೂ ಒಬಾಮ ಪಾಲಿಗೆ ಬಂದಿತು. ಇಲಿನಾಯ್ಸ್ ಸಂಸದ ಒಬಾಮ ಅವರಿಗೆ ಈವೇಳೆಗೆ 47 ವರ್ಷ ವಯಸ್ಸು.

2008: ಅಮೆರಿಕದ ಅಧ್ಯಕ್ಷರಾಗಿ ಆಯ್ಕೆಯಾಗುವ ಮೂಲಕ ಡೆಮಾಕ್ರೆಟಿಕ್ ಪಕ್ಷದ ಸಂಸದ ಬರಾಕ್ ಹುಸೇನ್ ಒಬಾಮ ಹೊಸ ಯುಗಕ್ಕೆ ನಾಂದಿ ಹಾಡಿದರು. ಅಮೆರಿಕ ಅಧ್ಯಕ್ಷ ಹುದ್ದೆಗೆ ಏರಿದ ಮೊದಲ ಕಪ್ಪು ವರ್ಣೀಯ ವ್ಯಕ್ತಿ ಎಂಬ ಹೆಗ್ಗಳಿಕೆ ಅವರದಾಯಿತು. ಇದಲ್ಲದೇ, ಅಧ್ಯಕ್ಷ ಹುದ್ದೆಗೆ ಏರಿದ ಅತ್ಯಂತ ಚಿಕ್ಕ ವಯಸ್ಸಿನ ಸಂಸದ ಎಂಬ ಹಿರಿಮೆಯೂ ಒಬಾಮ ಪಾಲಿಗೆ ಬಂದಿತು. ಇಲಿನಾಯ್ಸ್ ಸಂಸದ ಒಬಾಮ ಅವರಿಗೆ ಈವೇಳೆಗೆ 47 ವರ್ಷ ವಯಸ್ಸು. ಇಡೀ ವಿಶ್ವವೇ ತೀವ್ರ ಕುತೂಹಲದಿಂದ ವೀಕ್ಷಿಸುತ್ತಿದ್ದ ಅಮೆರಿಕದ 44ನೇ ಅಧ್ಯಕ್ಷೀಯ ಚುನಾವಣೆಯಲ್ಲಿ ಒಬಾಮಾ ಅವರು ತಮ್ಮ ಸಮೀಪದ ಪ್ರತಿಸ್ಪರ್ಧಿ ರಿಪಬ್ಲಿಕನ್ ಪಕ್ಷದ ಅರಿಜೋನಾ ಸಂಸದ ಜಾನ್ ಮೆಕೇನ್ ಅವರನ್ನು ಭಾರಿ ಅಂತರದಿಂದ ಸೋಲಿಸಿದರು.

2008: ಬಿ.ಆರ್. ಚೋಪ್ರಾ ಎಂದೇ ಮನೆಮಾತಾಗಿದ್ದ ವಿಶ್ವಖ್ಯಾತ ಚಲನಚಿತ್ರ- ಕಿರುತೆರೆ ಧಾರಾವಾಹಿ ನಿರ್ದೇಶಕ, ನಿರ್ಮಾಪಕ ಹಾಗೂ ದಾದಾ ಸಾಹೇಬ್ ಫಾಲ್ಕೆ ಪ್ರಶಸ್ತಿ ಪುರಸ್ಕೃತ ಬಲದೇವ್ ರಾಜ್ ಚೋಪ್ರಾ (95) ಈದಿನ ಮುಂಬೈ ಹೊರವಲಯ ಜುಹುವಿನಲ್ಲಿನ ತಮ್ಮ ನಿವಾಸದಲ್ಲಿ ಬೆಳಗ್ಗೆ ನಿಧನರಾದರು. ಚೋಪ್ರಾ ನಿರ್ದೇಶಿಸಿದ ಯಶಸ್ವಿ ಚಿತ್ರಗಳ ಪಟ್ಟಿ ದೊಡ್ಡದು. ಆ ಪೈಕಿ ನಯಾ ದೌರ್, ಗುಮ್ ರಾಹ್, ಹಮ್ ರಾಜ್é್, ದುಂದ್, ಇನ್ ಸಾಫ್ ಕ ತರಾಜéೂ, ನಿಕಾಹ್ ಪ್ರಮುಖವಾದವುಗಳು. 1914ರ ಏಪ್ರಿಲ್ 14ರಂದು ಅವಿಭಜಿತ ಪಾಕಿಸ್ಥಾನದಲ್ಲಿ ಜನಿಸಿದ ಅವರು ಲಾಹೋರ್ ವಿ.ವಿ.ಯಲ್ಲಿ ಎಂ.ಎ.ಇಂಗ್ಲಿಷ್ ಸಾಹಿತ್ಯ ವ್ಯಾಸಂಗ ಮಾಡಿದರು. ಆದರೆ, ಬಾಲ್ಯದಿಂದಲೂ ಬೆಳ್ಳಿತೆರೆಯೆಡೆಗೆ ಆಕರ್ಷಿತರಾಗಿದ್ದ ಅವರು ನಂತರ ಸಿನಿಮಾ ಪತ್ರಿಕೋದ್ಯಮಕ್ಕೆ ಹೊರಳಿ, ಮಾಸಿಕ ನಿಯತಕಾಲಿಕವೊಂದರಲ್ಲಿ ವಿಮರ್ಶೆ ಬರೆಯುವ ಮೂಲಕ ತಮ್ಮ ಚಲನಚಿತ್ರ ವೃತ್ತಿಯಾತ್ರೆ ಆರಂಭಿಸಿದರು. ಕಿರುತೆರೆ ಧಾರಾವಾಹಿ ಕ್ಷೇತ್ರದಲ್ಲಿ ಚೋಪ್ರಾ ಸಾಧನೆ ಪರ್ವತದಷ್ಟು ಎತ್ತರ. ಅವರ `ಮಹಾಭಾರತ' ಧಾರಾವಾಹಿಯು ಭಾರತದ ಕಿರುತೆರೆ ಇತಿಹಾಸದಲ್ಲೇ ಅತ್ಯಂತ ಯಶಸ್ವಿ ಧಾರಾವಾಹಿ. `ಎಂದಿಗಾದರೂ ಕೆಡುಕಿನ ವಿರುದ್ಧ ಒಳಿತೇ ಜಯಿಸುತ್ತದೆ' ಎಂಬ ಮಹಾಕಾವ್ಯದ ಸಂದೇಶವನ್ನು ಅವರು ಈ ಧಾರಾವಾಹಿ ಮೂಲಕ ಸಮಾಜಕ್ಕೆ ನೀಡಿದರು.

2008: ಧಾರವಾಡದ ಕರ್ನಾಟಕ ವಿಶ್ವ ವಿದ್ಯಾಲಯದಲ್ಲಿ ಡಾ.ಗಂಗೂಬಾಯಿ ಹಾನಗಲ್ ಪೀಠವನ್ನು ಕುಲಪತಿ ಡಾ. ಎಸ್. ಕೆ. ಸೈದಾಪುರ ಉದ್ಘಾಟಿಸಿದರು.

2008: ಭಾರತದ ಶೂಟರ್ ಗಗನ್ ನಾರಂಗ್ ಅವರು ಬ್ಯಾಂಕಾಕಿನಲ್ಲಿ ನಡೆದ ವಿಶ್ವಕಪ್ ಶೂಟಿಂಗಿನ ಪುರುಷರ 10 ಮೀ. ಏರ್ ರೈಫಲ್ ವಿಭಾಗದ ಸ್ಪರ್ಧೆಯಲ್ಲಿ ನೂತನ ವಿಶ್ವದಾಖಲೆ ನಿರ್ಮಿಸಿ ಚಿನ್ನದ ಪದಕ ತಮ್ಮದಾಗಿಸಿಕೊಂಡರು. ಈ ಸಾಧನೆಯ ಮೂಲಕ ಅವರು ಬೀಜಿಂಗ್ ಒಲಿಂಪಿಕ್ ಕೂಟದಲ್ಲಿ ಎದುರಾದ ನಿರಾಸೆಯ ಕರಿನೆರಳನ್ನು ದೂರ ಮಾಡಿದರು. ಈದಿನ ಬೆಳಗ್ಗೆ ನಡೆದ ಸ್ಪರ್ಧೆಯ ಅರ್ಹತಾ ಸುತ್ತುಗಳಲ್ಲಿ 600 ಹಾಗೂ ಫೈನಲಿನಲ್ಲಿ 103.5 ಪಾಯಿಂಟ್ ಕಲೆಹಾಕಿದ ನಾರಂಗ್ ಒಟ್ಟು 703.5 ಪಾಯಿಂಟುಗಳೊಂದಿಗೆ ಬಂಗಾರದ ಪದಕ ಕೊರಳಿಗೇರಿಸಿಕೊಂಡರು. ಈ ಹಾದಿಯಲ್ಲಿ ಅವರು ಆಸ್ಟ್ರೇಲಿಯಾದ ಫಾರ್ನಿಕ್ ಥಾಮಸ್ 2006ರಲ್ಲಿ ಸ್ಪೇನಿನ ಗ್ರೆನಾಡದಲ್ಲಿ ನಡೆದ ವಿಶ್ವಕಪ್ ಫೈನಲಿನಲ್ಲಿ ಸ್ಥಾಪಿಸಿದ್ದ ವಿಶ್ವದಾಖಲೆಯನ್ನು ಮುರಿದರು. ಒಲಿಂಪಿಕ್ ಕೂಟದ ಪದಕ ವಿಜೇತರಾದ ಚೀನಾದ ಜು ಕ್ವಿನಾನ್ ಮತ್ತು ಫಿನ್ ಹೆನ್ ಹಕಿನೆನ್ ಅವರನ್ನು ಹಿಂದಿಕ್ಕುವ ಮೂಲಕ 25ರ ಹರೆಯದ ನಾರಂಗ್ ಅದ್ವಿತೀಯ ಸಾಧನೆ ಮಾಡಿದರು. ಗಗನ್ಗೆ ಒಲಿಂಪಿಕ್ ಪದಕ ಗಗನ ಕುಸುಮವಾಗಿಯೇ ಉಳಿದಿತ್ತು. ಅಲ್ಲಿ ಅಂತಿಮ ಸುತ್ತು ಪ್ರವೇಶಿಸಿದ್ದರಾದರೂ ಪದಕ ದಕ್ಕಿರಲಿಲ್ಲ. ಇದೀಗ ವಿಶ್ವದಾಖಲೆಯೊಂದಿಗೆ ಚಿನ್ನ ಗೆದ್ದು ತಮ್ಮ ಸಾಮರ್ಥ್ಯ ಏನೆಂಬುದನ್ನು ತೋರಿಸಿಕೊಟ್ಟರು.

2008: ಆಫ್ಘಾನಿಸ್ಥಾನದ ದಕ್ಷಿಣ ಪ್ರಾಂತದ ಕಂದಹಾರದಲ್ಲಿ (05-11-2008) ಮದುವೆ ನಡೆಯುತ್ತಿದ ಸ್ಥಳದ ಮೇಲೆ ಅಮೆರಿಕ ನೇತೃತ್ವದ ಸೇನಾಪಡೆ ನಡೆಸಿದ ವಾಯುದಾಳಿಯಲ್ಲಿ 40 ಜನ ಮೃತರಾಗಿ 28 ಜನರು ಗಾಯಗೊಂಡರು.. ಅಮೆರಿಕ ನೇತೃತ್ವದ ಜಂಟಿ ಪಡೆಗಳು ತಪ್ಪು ತಿಳಿವಳಿಕೆಯಿಂದ ನಡೆಸಿದ ದಾಳಿ ಇದಾಗಿತ್ತು. ಶಾ ವಾಲಿ ಕೋಟ್ ಜ್ಲಿಲೆಯ್ಲಲಿ ತಾಲಿಬಾನ್ ಪಡೆಗಳ ಮೇಲೆ ಬಾಂಬ್ ದಾಳಿ ನಡೆಸಲಾಗಿತ್ತು. ಆದರೆ ಇದರಲ್ಲಿ ಒಂದು ಬಾಂಬ್ ಮದುವೆ ನಡೆಯುತ್ತಿದ್ದ ಸ್ಥಳದಲ್ಲಿ ಬಿತ್ತು.

2007: ರಾಜ್ಯಪಾಲ ರಾಮೇಶ್ವರ ಠಾಕೂರ್ ಮತ್ತು ಬಿಜೆಪಿ- ಜೆಡಿ ಎಸ್ ಶಾಸಕರು ಪ್ರತ್ಯೇಕ ವಿಮಾನಗಳಲ್ಲಿ ದೆಹಲಿಗೆ ತೆರಳುವುದರೊಂದಿಗೆ ಕರ್ನಾಟಕದಲ್ಲಿ ಚುನಾಯಿತ ಸರ್ಕಾರ ರಚನೆ ಸಂಬಂಧ ನಡೆದ ರಾಜಕೀಯ ಕಸರತ್ತು ಹಾಗೂ ಚಟುವಟಿಕೆಗಳು ರಾಜ್ಯದ ರಾಜಧಾನಿಯಿಂದ ರಾಷ್ಟ್ರದ ರಾಜಧಾನಿ ದೆಹಲಿಗೆ ಸ್ಥಳಾಂತರಗೊಂಡವು.

2007: ತುರ್ತು ಪರಿಸ್ಥಿತಿ ಹೇರಿಕೆಯ ವಿರುದ್ಧ ಪಾಕಿಸ್ಥಾನದ ವಿವಿಧ ಕಡೆ ವ್ಯಾಪಕ ಪ್ರತಿಭಟನೆ ಕಂಡು ಬಂದಿತು. ಈ ಪ್ರತಿಭಟನೆಗಳನ್ನು ನಿಯಂತ್ರಿಸುವ ಸಲುವಾಗಿ ಹಲವು ಕಡೆ ಪೊಲೀಸರು ಬಲ ಪ್ರಯೋಗ ನಡೆಸಿ ನೂರಾರು ಮಂದಿಯನ್ನು ಬಂಧಿಸಿದರು. ಪೇಶಾವರ, ಕರಾಚಿ, ರಾವಲ್ಪಿಂಡಿ ಸೇರಿದಂತೆ ಪಾಕಿಸ್ಥಾನದ ಮುಖ್ಯ ಪಟ್ಟಣಗಳಲ್ಲಿ ಎಲ್ಲೆಂದರಲ್ಲಿ ಪೊಲೀಸರ ಲಾಠಿ- ಬೂಟಿನ ಸದ್ದು, ಪ್ರತಿಭಟನಕಾರರ ಮುಗಿಲು ಮುಟ್ಟುವ ಘೋಷಣೆಗಳು, ಬೀದಿಗಿಳಿದ ವಕೀಲರ ಕಪ್ಪು ದಿನಾಚರಣೆ ಮತ್ತು ನ್ಯಾಯಾಂಗ ಕಲಾಪ ಬಹಿಷ್ಕಾರ ಪ್ರತಿಭಟನೆಯ ಅಬ್ಬರ ಸಾಮಾನ್ಯ ದೃಶ್ಯವಾಗಿತ್ತು.

2007: ತಮ್ಮನ್ನು ಹತ್ಯೆ ಮಾಡಲು `ಚಿಕ್ಕ ಮಗುವೊಂದನ್ನು ಆತ್ಮಹತ್ಯಾ ದಾಳಿಕೋರ'ನನ್ನಾಗಿ ಬಳಸಿಕೊಳ್ಳಲಾಗಿತ್ತು ಎಂದು ಪಾಕಿಸ್ಥಾನದ ಮಾಜಿ ಪ್ರಧಾನಿ ಬೆನಜೀರ್ ಭುಟ್ಟೋ ಬಹಿರಂಗಪಡಿಸಿದರು. ಬಾಂಬು ಸ್ಫೋಟ ಘಟನೆಯಲ್ಲಿ ತೀವ್ರವಾಗಿ ಗಾಯಗೊಂಡಿದ್ದವರನ್ನು ಭೇಟಿ ಮಾಡಿದಾಗ ತಮ್ಮನ್ನು ಹತ್ಯೆ ಮಾಡಲು ಚಿಕ್ಕ ಮಗುವೊಂದನ್ನು ಬಳಸಿರುವ ವಿಷಯ ತಿಳಿದುಬಂತು ಎಂದು ಬೆನಜೀರ್ ಸಿಎನ್ನೆನ್ ಗೆ ಬರೆದ ಪತ್ರದಲ್ಲಿ ತಿಳಿಸಿದರು. `ಭಯೋತ್ಪಾದಕರು ನನ್ನ ಪಕ್ಷದ ಧ್ವಜವನ್ನು ಈ ಮಗುವಿನ ಮೇಲೆ ಹೊದಿಸಿ ನನ್ನ ಬಳಿ ಕರೆತಂದಿದ್ದರು. ಆದರೆ ಬಾಂಬ್ ಸಿಡಿಸಲು ವಿಫಲರಾದ ಅವರು ನಂತರ ನನ್ನ ವಾಹನದ ಬಳಿ ಮಗುವನ್ನು ಬಿಟ್ಟು ಹೋದರು. ಕೆಲ ಸಮಯದ ನಂತರ ವಾಹನ ಸ್ಫೋಟಗೊಂಡಿತು. ಆಗ ನಾನು ಅಲ್ಲಿರಲಿಲ್ಲ' ಎಂದು ಬೆನಜೀರ್ ನ್ಯೂಯಾರ್ಕಿನಲ್ಲಿ ಹೇಳಿದರು. ಎಂಟು ವರ್ಷಗಳ ನಂತರ ಬೆನಜೀರ್ ಸ್ವದೇಶಕ್ಕೆ ವಾಪಸಾದ ಅಕ್ಟೋಬರ್ 18 ರಂದು ಬೆನಜೀರ್ ಅವರ ಪಕ್ಷದ ಕಾರ್ಯಕರ್ತರು ಭಾರಿ ರ್ಯಾಲಿ ನಡೆಸಿದಾಗ ಭಯೋತ್ಪಾದಕರು ಹಲವೆಡೆ ಬಾಂಬುಗಳನ್ನು ಸಿಡಿಸಿ, 140ಕ್ಕೂ ಹೆಚ್ಚು ಜನರ ಮಾರಣಹೋಮ ಗೈದಿದ್ದರು.

2007: ಜಮ್ಮು ಮತ್ತು ಕಾಶ್ಮೀರದ ರೇಸಿ ಜಿಲ್ಲೆಯಲ್ಲಿ ಭಾರತೀಯ ರೈಲ್ವೆ ಇಲಾಖೆ ನಿರ್ಮಿಸುತ್ತಿರುವ ಚೆನಾಬ್ ಸೇತುವೆ ವಿಶ್ವದಲ್ಲೇ ಅತಿ ಎತ್ತರದ ಸೇತುವೆಯಾಗಲಿದೆ ಎಂದು ಕೊಂಕಣ ರೈಲ್ವೆ ಉಪ ಮುಖ್ಯ ಎಂಜಿನಿಯರ್ ಈಶ್ವರ ಚಂದ್ರ ಹೇಳಿದರು. 359 ಮೀಟರ್ ಎತ್ತರದ ಈ ಸೇತುವೆ ಜಿಲ್ಲೆಯ ಬಕ್ಕಳ್ ಮತ್ತು ಕೌರಿ ಗ್ರಾಮಗಳಿಗೆ ಸಂಪರ್ಕ ಕಲ್ಪಿಸಲಿದೆ. ಪ್ರಸ್ತುತ ವಿಶ್ವದ ಅತಿ ಎತ್ತರದ ಸೇತುವೆಯ ಪಟ್ಟಿಯಲ್ಲಿ ದಕ್ಷಿಣಫ್ರಾನ್ಸಿನ 323 ಮೀಟರ್ ಎತ್ತರದ ಮಿಲ್ಲಾವ್ ಸೇತುವೆ ಇದ್ದು, ಚೆನಾಬ್ ಸೇತುವೆ ನಿರ್ಮಾಣಗೊಂಡ ನಂತರ ಆ ಸ್ಥಾನ ಈ ಸೇತುವೆಗೆ ಲಭ್ಯವಾಗಲಿದೆ. ಭಾರತವು ಐರೋಪ್ಯ ದೇಶಗಳ ಸಹಭಾಗಿತ್ವದಲ್ಲಿ ಕೊಂಕಣ ರೈಲ್ವೆ ಫ್ಲಾಗ್ ಶಿಪ್ ಯೋಜನೆಯಡಿಯಲ್ಲಿ ಈ ಸೇತುವೆ ನಿರ್ಮಾಣ ಕಾರ್ಯ ನಡೆಯುತ್ತಿದೆ.

2007: ಈಶಾನ್ಯ ಅರ್ಜೆಂಟೀನಾದ ಬ್ಯೂನಸ್ ಏರಿಸ್ ನಗರದ ಕಾರಾಗೃಹದಲ್ಲಿ ಕೈದಿಗಳ ಪರಸ್ಪರ ಕಾದಾಟದಲ್ಲಿ ಹೊತ್ತಿಕೊಂಡ ಬೆಂಕಿಯಿಂದ ಕನಿಷ್ಠ 29 ಜನರು ಸಾವಿಗೀಡಾದರು.

2007: ಹನ್ನೆರಡು ದಿನಗಳ ಹಿಂದೆ ಗಗನಕ್ಕೆ ಉಡಾಯಿಸಲಾಗಿದ್ದ ಮಾನವ ರಹಿತ ಉಪಗ್ರಹ `ಚಾಂಗ್' ಈದಿನ ಚಂದ್ರನ ಕಕ್ಷೆಗೆ ಯಶಸ್ವಿಯಾಗಿ ತಲುಪಿತು. ಇದು ಚೀನಾದ ಬಾಹ್ಯಾಕಾಶ ಕ್ಷೇತ್ರದಲ್ಲಿ ಮಹತ್ವದ ಮೈಲಿಗಲ್ಲಾಯಿತು.

2007: ವೀಕ್ಷಕರ ಕುತೂಹಲ ಕೆರಳಿಸಿದ್ದ ಝೀ ಕನ್ನಡದ `ಶ್ರೀಮತಿ ಕರ್ನಾಟಕ' ಸ್ಪರ್ಧೆಯಲ್ಲಿ ಹುಬ್ಬಳ್ಳಿಯ ಶಾಂತಾ ವೆಂಕಟೇಶ್ ವಿಜೇತರಾದರು.

2006: ಮಾನವೀಯತೆ ವಿರುದ್ಧ ಎಸಗಿದ ಅಪರಾಧಕ್ಕಾಗಿ ಇರಾಕಿನ ಪದಚ್ಯುತ ಅಧ್ಯಕ್ಷ ಸದ್ದಾಂ ಹುಸೇನ್ (69) ಅವರಿಗೆ, ಅಮೆರಿಕ ಬೆಂಬಲಿತ ಉನ್ನತ ನ್ಯಾಯಮಂಡಳಿಯು ಬಾಗ್ದಾದಿನಲ್ಲಿ ಮರಣದಂಡನೆ ವಿಧಿಸಿತು. 1982ರ ಜುಲೈ 8ರಂದು ಸದ್ದಾಂ ಹತ್ಯೆಗೆ ವಿಫಲ ಯತ್ನ ನಡೆಸಿದ ದುಜೈಲಿನ ಶಿಯಾ ಜನಾಂಗಕ್ಕೆ ಸೇರಿದ 148 ಜನರನ್ನು ಪ್ರತೀಕಾರಕ್ಕಾಗಿ ಬರ್ಬರವಾಗಿ ಕೊಂದ ಆರೋಪ ಸದ್ದಾಂ ಮತ್ತು ಏಳು ಮಂದಿ ಸಹಚರರ ಮೇಲೆ ಇತ್ತು. ಇರಾಕಿನ ಮಾಜಿ ಮುಖ್ಯ ನ್ಯಾಯಾಧೀಶ ಅವದ್ ಅಹ್ಮದ್ ಅಲ್ ಬಂದರ್ ಮತ್ತು ಸದ್ದಾಂ ಮಲ ಸೋದರನಾಗಿರುವ ಬೇಹುಗಾರಿಕೆ ಪಡೆ ಮುಖಾಬಾರತ್ ನ ಮಾಜಿ ಮುಖ್ಯಸ್ಥ ಬರ್ಜಾನ್ ಇಬ್ರಾಹಿಂ ಅಲ್ ಟಿಕ್ರಿತಿ ಅವರಿಗೂ ಮರಣ ದಂಡನೆ ವಿಧಿಸಿದ ನ್ಯಾಯಾಲಯ, ಇರಾಕಿನ ಮಾಜಿ ಉಪಾಧ್ಯಕ್ಷ ತಹಾ ಯಾಸಿನ್ ರಮ್ದಾನ್ ಗೆ ಜೀವಾವಧಿ ಶಿಕ್ಷೆ ವಿಧಿಸಿತು.

2006: ಅಸ್ಸಾಂ ರಾಜಧಾನಿ ಗುವಾಹತಿಯಲ್ಲಿ ಸೂರ್ಯಾಸ್ತದ ವೇಳೆಯಲ್ಲಿ ಅವಳಿ ಬಾಂಬ್ ಸ್ಫೋಟಗಳಿಂದ 10 ಮಂದಿ ಸತ್ತು 52ಕ್ಕೂ ಹೆಚ್ಚು ಮಂದಿ ಗಾಯಗೊಂಡರು. ವಾಣಿಜ್ಯ ಪ್ರದೇಶವಾದ ಫ್ಯಾನ್ಸಿ ಬಜಾರ್ ಮತ್ತು ನೂನ್ಮತಿ ಪ್ರದೇಶಗಳಲ್ಲಿ ಈ ಬಾಂಬ್ ಸ್ಫೋಟಗಳು ಸಂಭವಿಸಿದವು.

2006: ಮುಂಬೈಯಲ್ಲಿ ನಡೆದ ಪಂದ್ಯದಲ್ಲಿ ವೆಸ್ಟ್ ಇಂಡೀಸ್ ತಂಡವನ್ನು ಎಂಟು ವಿಕೆಟ್ ಅಂತರದಿಂದ ಸೋಲಿಸಿದ ಆಸ್ಟ್ರೇಲಿಯಾ ಮೊದಲ ಬಾರಿಗೆ `ಚಾಂಪಿಯನ್ಸ್ ಟ್ರೋಫಿ' ಗೆಲ್ಲುವಲ್ಲಿ ಯಶಸ್ಸು ಸಾಧಿಸಿ, ಕ್ರಿಕೆಟ್ ವಿಶ್ವದಲ್ಲಿ ತನ್ನ ಸಾರ್ವಭೌಮತ್ವವನ್ನು ಮತ್ತೊಮ್ಮೆ ಸಾಬೀತು ಪಡಿಸಿತು.

2005: ಪಾಕಿಸ್ಥಾನದ ಈಶಾನ್ಯ ಭಾಗದಲ್ಲಿ ಸಿಂಧೂನದಿಯಲ್ಲಿ ದೋಣಿ ಮುಳುಗಿ ಅದರಲ್ಲಿದ್ದ 70 ಮಂದಿ ಜಲ ಸಮಾಧಿಯಾದರು. ಅವರೆಲ್ಲರೂ ಸಂಬಂಧಿಯೊಬ್ಬನ ಅಂತ್ಯಕ್ರಿಯೆಗೆ ಹೊರಟಿದ್ದಾಗ ಈ ದುರಂತ ಸಂಭವಿಸಿತು.

1999: ಅಮೆರಿಕದ ಜಿಲ್ಲಾ ನ್ಯಾಯಾಧೀಶ ಥಾಮಸ್ ಪೆನ್ ಫೀಲ್ಡ್ ಅವರು ಮೈಕ್ರೋಸಾಫ್ಟ್ ಕಾರ್ಪೊರೇಷನ್ ಒಂದು `ಏಕಸ್ವಾಮ್ಯ' ಸಂಸ್ಥೆ ಎಂದು ಘೋಷಿಸಿದರು. ಈ ಸಾಫ್ಟ್ ವೇರ್ ದೈತ್ಯ ಸಂಸ್ಥೆಯ `ಆಕ್ರಮಣಕಾರಿ' ಕ್ರಮಗಳು ಸಂಶೋಧನೆಗಳಿಗೆ ಅಡ್ಡಿ ಉಂಟು ಮಾಡುತ್ತಿವೆ ಹಾಗೂ ಗ್ರಾಹಕರನ್ನು ನೋಯಿಸುತ್ತಿವೆ ಎಂದು ಅವರು ಹೇಳಿದರು.

1994: ಲಾಸ್ ವೆಗಾಸಿನಲ್ಲಿ ನಡೆದ ಜಾಗತಿಕ ಬಾಕ್ಸಿಂಗ್ ಅಸೋಸಿಯೇಶನ್ (ಡಬ್ಲ್ಯೂಬಿಎ ) ಕ್ರೀಡಾಕೂಟದ 10ನೇ ಸುತ್ತಿನಲ್ಲಿ ಎದುರಾಳಿ ಮೈಕೆಲ್ ಮೂರರ್ ಅವರನ್ನು ಕೆಳಕ್ಕೆ ಕೆಡಹುವ ಮೂಲಕ 45 ವರ್ಷ ವಯಸ್ಸಿನ ಜಾರ್ಜ್ ಫೋರ್ಮನ್ ಬಾಕ್ಸಿಂಗಿನ ಅತ್ಯಂತ ಹಿರಿಯ ಹೆವಿವೇಯ್ಟ್ ಚಾಂಪಿಯನ್ ಎಂಬ ಹೆಗ್ಗಳಿಕೆಗೆ ಪಾತ್ರರಾದರು.

1991: ಅಂತಾರಾಜ್ಯ ಸಂಪರ್ಕ ಸಾಮ್ರಾಜ್ಯ ಕಟ್ಟಿದ ಜೆಕೊಸ್ಲೋವೇಕಿಯಾ ಸಂಜಾತ ಬ್ರಿಟಿಷ್ ಪ್ರಕಾಶನಕಾರ ರಾಬರ್ಟ್ ಮ್ಯಾಕ್ಸ್ ವೆಲ್ (1923-1991) ಕ್ಯಾನರಿ ದ್ವೀಪಗಳ ಬಳಿ ಸಮುದ್ರದಲ್ಲಿಮುಳುಗಿ ಆತ್ಮಹತ್ಯೆ ಮಾಡಿಕೊಂಡರು.

1978: ಜಿ.ಪಿ. ದೇಶಪಾಂಡೆ ಅವರ ನಾಟಕ `ಉಧ್ವಸ್ತ ಧರ್ಮಶಾಲಾ' ನಾಟಕ ಪ್ರದರ್ಶನದೊಂದಿಗೆ ಬಾಂಬೆಯಲ್ಲಿ (ಈಗಿನ ಮುಂಬೈ) `ಪೃಥ್ವಿ ಥಿಯೇಟರ್' (ಪೃಥ್ವಿ ರಂಗಭೂಮಿ) ಉದ್ಘಾಟನೆಗೊಂಡಿತು. ಪೃಥ್ವಿರಾಜ್ ಕಪೂರ್ ಸ್ಮಾರಕ ಟ್ರಸ್ಟ್ ಈ ಥಿಯೇಟರನ್ನು ನಿರ್ಮಿಸಿತು. ಶಶಿ ಮತ್ತು ಜೆನ್ನಿಫರ್ ಕಪೂರ್ ಅವರು ಪೃಥ್ವಿರಾಜ್ ಕಪೂರ್ ಅವರ `ಪ್ರತ್ಯೇಕ ರಂಗಭೂಮಿ'ಯ ಕನಸನ್ನು ನನಸುಗೊಳಿಸಿದರು. (1944ರಲ್ಲಿ ಪೃಥ್ವಿರಾಜ್ ಕಪೂರ್ `ಪೃಥ್ವಿ ಥಿಯೇಟರ್ಸ್' ಹೆಸರಿನಲ್ಲಿ ಹಿಂದಿ ಥಿಯೇಟರ್ ಕಂಪೆನಿಯನ್ನು ಸ್ಥಾಪಿಸಿ ಭಾರತದಾದ್ಯಂತ ಈ ತಂಡದೊಂದಿಗೆ ಪ್ರವಾಸ ಮಾಡಿದ್ದರು. ಅವರು ಈ ತಂಡದ ನಟ-ನಿರ್ವಾಹಕರಾಗಿದ್ದರು.)

1977: ವಿದೇಶಾಂಗ ಸಚಿವ ಅಟಲ್ ಬಿಹಾರಿ ವಾಜಪೇಯಿ ಅವರು ವಿಶ್ವಸಂಸ್ಥೆಯ ಸಾಮಾನ್ಯ ಸಭೆಯಲ್ಲಿ ಹಿಂದಿಯಲ್ಲಿ ಭಾಷಣ ಮಾಡಿದರು.

1961: ಪ್ರಧಾನಿ ಜವಾಹರಲಾಲ್ ನೆಹರೂ ಅವರು ಮೊತ್ತ ಮೊದಲ ಬಾರಿಗೆ ಅಮೆರಿಕಕ್ಕೆ ಭೇಟಿ ನೀಡಿದರು.

1951: ಬಾಂಬೆ- ಬರೋಡ, ಸೆಂಟ್ರಲ್ ಇಂಡಿಯಾ ರೈಲ್ವೇ, ಸೌರಾಷ್ಟ್ರ, ರಾಜಸ್ಥಾನ ಮತ್ತು ಜೈಪುರ ರೈಲ್ವೇಗಳು ವಿಲೀನಗೊಂಡು `ವೆಸ್ಟರ್ನ್ ರೈಲ್ವೇ' ಪಶ್ಚಿಮ ರೈಲ್ವೇ ರಚನೆಯಾಯಿತು. ಇದೇ ದಿನ ಗ್ರೇಟ್ ಇಂಡಿಯನ್ ಪೆನಿನ್ ಸ್ಯುಲರ್ ರೈಲ್ವೇ ಮತ್ತು ಇತರ ರೈಲ್ವೇಗಳ ಮರು ವರ್ಗೀಕರಣ ನಡೆದು ಸೆಂಟ್ರಲ್ ರೈಲ್ವೆ ರಚನೆಯಾಯಿತು.

1915: ಭಾರತದ ರಾಜಕೀಯ ನಾಯಕ, ಬಾಂಬೆ ಮುನಿಸಿಪಲ್ ಪ್ಲಾನರ್ ಯೋಜಕ ಹಾಗೂ `ಬಾಂಬೆ ಕ್ರಾನಿಕಲ್' (1913) ಪತ್ರಿಕೆಯ ಸ್ಥಾಪಕ ಫಿರೋಜ್ ಶಹಾ ಮೆಹ್ತಾ ತಮ್ಮ 70ನೇ ವಯಸ್ಸಿನಲ್ಲಿ ಮೃತರಾದರು.

1904: ಇತಿಹಾಸ ಸಂಶೋಧಕ, ಸಾಹಿತ್ಯಾಸಕ್ತ ಶ್ರೀಕಂಠಶಾಸ್ತ್ರಿ (5-11-1904ರಿಂದ 7-5-1974) ಅವರು ರಾಮಸ್ವಾಮಿ ಶಾಸ್ತ್ರಿ- ಶೇಷಮ್ಮ ದಂಪತಿಯ ಮಗನಾಗಿ ನೆಲಮಂಗಲ ತಾಲ್ಲೂಕಿನ ಸೊಂಡೆಕೊಪ್ಪದಲ್ಲಿ ಜನಿಸಿದರು.

1870: ಭಾರತೀಯ ವಕೀಲ, ಬ್ರಿಟಿಷ್ ಆಳ್ವಿಕೆ ಕಾಲದಲ್ಲಿ ಬಂಗಾಳದ ಸ್ವರಾಜ್ ಪಕ್ಷದ ಧುರೀಣರಾಗಿದ್ದ ಚಿತ್ತರಂಜನ್ ದಾಸ್ ಜನ್ಮದಿನ. ಅಲಿಪುರ ಬಾಂಬ್ ಪ್ರಕರಣದ ವಿಚಾರಣೆ ಕಾಲದಲ್ಲಿ ಅವರು ಅರವಿಂದ ಘೋಷ್ ಅವರ ವಕೀಲರಾಗಿದ್ದರು.

1556: ಪಾಣಿಪತ್ತದಲ್ಲಿ ನಡೆದ ಎರಡನೇ ಕದನದಲ್ಲಿ ಅಕ್ಬರನು ಹಿಂದು ಜನರಲ್ ಹೇಮುವನ್ನು ಕೊಂದು ಹಾಕಿದ. ಇದು ಭಾರತದಲ್ಲಿ ಮೊಘಲ ಅಧಿಕಾರದ ಮರುಸ್ಥಾಪನೆ ಹಾಗೂ ಭಾರತದಲ್ಲಿ ಮೊಘಲ್ ಸಾಮ್ರಾಜ್ಯ ವಿಸ್ತರಣೆಗೆ ಅಡಿಪಾಯವಾಯಿತು.

Wednesday, November 4, 2009

ಇಂದಿನ ಇತಿಹಾಸ History Today ನವೆಂಬರ್ 04

ಇಂದಿನ ಇತಿಹಾಸ

ನವೆಂಬರ್ 04

ಕನ್ನಡಿಗರಾದ ಖ್ಯಾತ ಹಿಂದೂಸ್ಥಾನಿ ಶಾಸ್ತ್ರೀಯ ಸಂಗೀತ ಗಾಯಕ ಪಂಡಿತ್ ಭೀಮಸೇನ ಗುರುರಾಜ ಜೋಶಿ ಅವರು ದೇಶದ ಅತ್ಯುನ್ನತ ನಾಗರಿಕ ಗೌರವ ಪ್ರಶಸ್ತಿಯಾದ `ಭಾರತ ರತ್ನ'ಕ್ಕೆ ಭಾಜನರಾದರು. ಈ ಸಂಬಂಧ ಕೇಂದ್ರ ಸರ್ಕಾರ ಈದಿನ ರಾತ್ರಿ ಪ್ರಕಟಣೆ ಹೊರಡಿಸಿತು. 86 ವರ್ಷದ ಜೋಶಿಯವರು ಭಾರತೀಯ ಶಾಸ್ತ್ರೀಯ ಸಂಗೀತವನ್ನು ತಮ್ಮ ಕಂಠಸಿರಿಯ ಮೂಲಕ ಶ್ರೀಮಂತಗೊಳಿಸಿದ ಧೀಮಂತ ಗಾಯಕರು. ಹಿಂದೂಸ್ಥಾನಿ ಸಂಗೀತಕ್ಕೆ ವಿವಿಧ ರಾಗಗಳ ಮೂಲಕ ಹೊಸ ಚೈತನ್ಯ ನೀಡಿ, ಸಂಗೀತಪ್ರಿಯರ ಮನಗೆದ್ದ ವಿದ್ವಾಂಸರು

2008: ಕನ್ನಡಿಗರಾದ ಖ್ಯಾತ ಹಿಂದೂಸ್ಥಾನಿ ಶಾಸ್ತ್ರೀಯ ಸಂಗೀತ ಗಾಯಕ ಪಂಡಿತ್ ಭೀಮಸೇನ ಗುರುರಾಜ ಜೋಶಿ ಅವರು ದೇಶದ ಅತ್ಯುನ್ನತ ನಾಗರಿಕ ಗೌರವ ಪ್ರಶಸ್ತಿಯಾದ `ಭಾರತ ರತ್ನ'ಕ್ಕೆ ಭಾಜನರಾದರು. ಈ ಸಂಬಂಧ ಕೇಂದ್ರ ಸರ್ಕಾರ ಈದಿನ ರಾತ್ರಿ ಪ್ರಕಟಣೆ ಹೊರಡಿಸಿತು. 86 ವರ್ಷದ ಜೋಶಿಯವರು ಭಾರತೀಯ ಶಾಸ್ತ್ರೀಯ ಸಂಗೀತವನ್ನು ತಮ್ಮ ಕಂಠಸಿರಿಯ ಮೂಲಕ ಶ್ರೀಮಂತಗೊಳಿಸಿದ ಧೀಮಂತ ಗಾಯಕರು. ಹಿಂದೂಸ್ಥಾನಿ ಸಂಗೀತಕ್ಕೆ ವಿವಿಧ ರಾಗಗಳ ಮೂಲಕ ಹೊಸ ಚೈತನ್ಯ ನೀಡಿ, ಸಂಗೀತಪ್ರಿಯರ ಮನಗೆದ್ದ ವಿದ್ವಾಂಸರು. ಅವರು ಭಜನೆಗಳು, ಖಯಾಲ್ ಪ್ರಕಾರಗಳ ಹಾಡುಗಳಿಗೆ ಹಾಗೂ ಹಿಂದೂಸ್ಥಾನಿ ಸಂಗೀತದ ಒಂದು ಪದ್ಧತಿಯಾದ `ಕಿರಾಣಾ ಘರಾನಾ'ದಲ್ಲಿ ಪರಿಣತರು. ಮೂಲತಃ ಗದಗ ಪಟ್ಟಣದಲ್ಲಿ 1922ರಲ್ಲಿ ಶಾಲಾ ಶಿಕ್ಷಕರೊಬ್ಬರ ಪುತ್ರನಾಗಿ ಜನಿಸಿದ ಭೀಮಸೇನ ಜೋಶಿಯವರು ಅತಿಯಾದ ಸಂಗೀತದ ಗೀಳಿನಿಂದಾಗಿ ಹನ್ನೊಂದನೇ ವಯಸಿನಲ್ಲೇ ಮನೆಬಿಟ್ಟು ಹೋಗಿದ್ದರು. ನಂತರ ಧಾರವಾಡ ಜಿಲ್ಲೆಗೆ ಮರಳಿದ ಅವರು ಕುಂದಗೋಳದ ಖ್ಯಾತ ಸಂಗೀತ ಗಾಯಕ ಸವಾಯಿ ಗಂಧರ್ವರ ಶಿಷ್ಯರಾದರು. ಜೋಶಿಯವರು ತಮ್ಮ 20ನೇ ವಯಸ್ಸಿನಲ್ಲೇ ಕನ್ನಡ ಮತ್ತು ಹಿಂದಿ ಭಾಷೆಗಳಲ್ಲಿ ಭಜನೆಗಳ ಗಾಯನದ ಧ್ವನಿಮುದ್ರಿಕೆಗಳನ್ನು (ಆಲ್ಬಂ) ಬಿಡುಗಡೆ ಮಾಡಿದರು. ಅವರು ತಮ್ಮ ಗುರುವಿನ ನೆನಪಿಗಾಗಿ ಪ್ರತಿವರ್ಷ ಸವಾಯಿ ಗಂಧರ್ವ ಶಾಸ್ತ್ರೀಯ ಸಂಗೀತ ಮಹೋತ್ಸವ ನಡೆಸುತ್ತಾ ಬಂದಿದ್ದಾರೆ. ಜೋಶಿಯವರಿಗೆ ಈ ಹಿಂದೆಯೂ ಅನೇಕ ಪ್ರತಿಷ್ಠಿತ ಪ್ರಶಸ್ತಿಗಳು ಲಭಿಸಿದ್ದು ಅವುಗಳಲ್ಲಿ ಪದ್ಮಶ್ರೀ, ಪದ್ಮಭೂಷಣ ಹಾಗೂ ಪದ್ಮ ವಿಭೂಷಣ ಪ್ರಮುಖವಾದುವು. ಕನ್ನಡ ಭಾಷೆಯ ದಾಸಪದವಾದ `ಭಾಗ್ಯದ ಲಕ್ಷ್ಮೀ ಬಾರಮ್ಮ' ಜೋಶಿಯವರ ಹೆಸರಿನೊಂದಿಗೆ ಐಕ್ಯವಾಗುವಷ್ಟು ಪ್ರಸಿದ್ಧ. ಕಲೆ ಮತ್ತು ಸಂಸ್ಕೃತಿ ಕ್ಷೇತ್ರದಲ್ಲಿ ಈ ಹಿಂದೆ ಸತ್ಯಜಿತ್ ರೇ, ಎಂ.ಎಸ್. ಸುಬ್ಬಲಕ್ಷ್ಮಿ, ಪಂಡಿತ್ ರವಿಶಂಕರ್, ಲತಾ ಮಂಗೇಶ್ಕರ್, ಉಸ್ತಾದ್ ಬಿಸ್ಮಿಲ್ಲಾ ಖಾನ್ ಈ ಐವರಿಗೆ ಭಾರತ ರತ್ನ ಪ್ರಶಸ್ತಿ ಲಭಿಸಿತ್ತು.

2008: ಗಂಗಾ ನದಿಯನ್ನು `ರಾಷ್ಟ್ರೀಯ ನದಿ' ಎಂದು ಘೋಷಿಸಲು ಕೇಂದ್ರ ಸರ್ಕಾರ ನಿರ್ಧರಿಸಿತು. ಜೊತೆಗೆ ಈ ಪುರಾತನ ನದಿಯನ್ನು ಮಾಲಿನ್ಯದಿಂದ ರಕ್ಷಿಸಲು ಉನ್ನತ ಮಟ್ಟದ ಗಂಗಾ ನದಿ ಪಾತ್ರ ಪ್ರಾಧಿಕಾರ ರಚಿಸಲೂ ತೀರ್ಮಾನಿಸಿತು. ಉ್ದದೇಶಿತ ಪ್ರಾಧಿಕಾರದ ನೇತೃತ್ವವನ್ನು ಪ್ರಧಾನಿ ಮನಮೋಹನ್ ಸಿಂಗ್ ವಹಿಸಿಕೊಳ್ಳುವರು. ಗಂಗಾ ನದಿ ಹರಿಯುವ ರಾಜ್ಯಗಳ ಮುಖ್ಯಮಂತ್ರಿಗಳು ಇದರ ಸದಸ್ಯರು. ಗಂಗಾ ಕಾರ್ಯ ಯೋಜನೆ ಪರಿಶೀಲಿಸಲು ಪ್ರಧಾನಿ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ಈ ತೀರ್ಮಾನ ತೆಗೆದುಕೊಳ್ಳಲಾಯಿತು. ನವದೆಹಲಿಯಲ್ಲಿ ನಡೆದ ಗಂಗಾ ಕಾರ್ಯಯೋಜನೆ ಪುನರ್ ಪರಿಶೀಲನಾ ಸಲಹಾ ಸಮಿತಿ ಸಭ್ಯೆ ಅಧ್ಯಕ್ಷತೆಯನ್ನು ಪ್ರಧಾನಿ ಮನಮೋಹನ್ ಸಿಂಗ್ ವಹಿಸ್ದಿದರು. ಯೋಜನಾ ಆಯೋಗದ ಉಪಾಧ್ಯಕ್ಷ ಮೊಂಟೆಕ್ ಸಿಂಗ್ ಅಹ್ಲುವಾಲಿಯಾ, ಕೇಂದ್ರ ಜಲಸಂಪನ್ಮೂಲ ಸಚಿವ ಸೈಪುದ್ದೀನ್ ಸೋಜ್ ಮತ್ತಿತರರು ಭಾಗವಹಿಸಿದ್ದರು.

2008: ಕುಫ್ರಿಯ ಪ್ರಸಿದ್ಧ ಪ್ರವಾಸಿ ಸ್ಥಳದ ಬಳಿ ಖಾಸಗಿ ಬಸ್ಸೊಂದು 200 ಮೀಟರ್ ಆಳದ ಕಮರಿಗೆ ಬಿದ್ದ ಪರಿಣಾಮ ಅದರಲ್ಲಿದ್ದ ಕನಿಷ್ಠ 45 ಪ್ರಯಾಣಿಕರು ಮೃತರಾಗಿ ಐವರು ಗಾಯಗೊಂಡರು.

2008: ಲೋಕಸಭೆಯ ವಿರೋಧ ಪಕ್ಷದ ನಾಯಕ ಎಲ್.ಕೆ.ಅಡ್ವಾಣಿ ಅವರ ಆತ್ಮಕಥನ `ಮೈ ಕಂಟ್ರಿ, ಮೈ ಲೈಫ್'ನ ಕನ್ನಡ ಅನುವಾದದ ಪುಸ್ತಕ `ನನ್ನ ದೇಶ, ನನ್ನ ಜೀವನ' ಬೆೆಂಗಳೂರಿನಲ್ಲಿ ಬಿಡುಗಡೆಯಾಯಿತು.

2008: `ಜುರಾಸಿಕ್ ಪಾರ್ಕ್'ನಿಂದ ಹೆಸರಾಗಿದ್ದ ಅಮೆರಿಕದ ಖ್ಯಾತ ಬರಹಗಾರ ಮೈಕೆಲ್ ಕ್ರಿಕ್ ಟನ್ (66) ಲಾಸ್ ಏಂಜಲಿಸಿನಲ್ಲಿ ನಿಧನರಾದರು. ಕ್ಯಾನ್ಸರಿನಿಂದ ಬಳಲುತ್ತಿದ್ದ ಅವರು `ಜುರಾಸಿಕ್ ಪಾರ್ಕ್', `ದಿ ಅಂಡ್ರೋಮಿಡ ಸ್ಟ್ರೇನ್' ಪುಸ್ತಕಗಳನ್ನು ಬರೆದಿದ್ದರು. ಅವರ ಪುಸ್ತಕಗಳು ವಿಶ್ವದಲ್ಲೇ ಅತ್ಯಂತ ಹೆಚ್ಚು ಮಾರಾಟವಾಗುತ್ತಿದ್ದವು. ಅವರು ಹಾರ್ವರ್ಡ್ ವಿಶ್ವವಿದ್ಯಾಲಯದಲ್ಲಿ ವೈದ್ಯಕೀಯ ಅಧ್ಯಯನ ನಡೆಸಿದ್ದರು. ಆನಂತರ ಸಾಲ್ಕ್ ಜೈವಿಕ ಅಧ್ಯಯನ ಸಂಸ್ಥೆಯಲ್ಲಿ ವೃತ್ತಿ ಆರಂಭಿಸಿದ್ದರು. ವಿದ್ಯಾರ್ಥಿಯಾಗಿದ್ದಾಗಲೇ ಮೈಕೆಲ್ `ದಿ ಅಂಡ್ರೋಮಿಡ ಸ್ಟ್ರೇನ್' ಪುಸ್ತಕ ಪ್ರಕಟಿಸಿದ್ದರು. ಆನಂತರ ಅವರು ಚಲನಚಿತ್ರ ಹಾಗೂ ಬರವಣಿಗಯಲ್ಲಿ ತಮ್ಮನ್ನು ತೊಡಗಿಸಿಕೊಂಡಿದ್ದರು. ಅವರ ಪುಸ್ತಕಗಳು 36 ಭಾಷೆಗಳಲ್ಲಿ ಅನುವಾದಗೊಂಡಿವೆ ಮತ್ತು 13 ಪುಸ್ತಕಗಳು ಸಿನಿಮಾಗಳಾಗಿವೆ. ಜನಪ್ರಿಯ ಟಿವಿ ಸರಣಿಗಳನ್ನೂ ಅವರು ನಿರ್ಮಿಸಿದ್ದರು.

2007: ಪಾಕಿಸ್ಥಾನದ ಪ್ರತಿಪಕ್ಷಗಳ ಪ್ರಮುಖ ನಾಯಕ ಹಾಗೂ ಮಾಜಿ ಕ್ರಿಕೆಟಿಗ ಇಮ್ರಾನ್ ಖಾನ್ ಪೊಲೀಸರಿಗೆ ಚಳ್ಳೆಹಣ್ಣು ತಿನ್ನಿಸಿ ಗೃಹ ಬಂಧನದಿಂದ ತಪ್ಪಿಸಿಕೊಂಡರು. ಈ ಸಂಗತಿಯನ್ನು ಅವರ ಸಂಬಂಧಿಯೊಬ್ಬರು ಸುದ್ದಿಗಾರರಿಗೆ ತಿಳಿಸಿದರು. ಇಮ್ರಾನ್ ಖಾನ್ ಮತ್ತು ಅವರ ಎಂಟು ಜನ ಬೆಂಬಲಿಗರನ್ನು ಗೃಹ ಬಂಧನದಲ್ಲಿ ಇಡಲಾಗಿತ್ತು.

2007: ಕೇಂದ್ರ ಸರ್ಕಾರಕ್ಕೆ ಅಂತಿಮ ವರದಿ ಕಳುಹಿಸಿಕೊಡುವುದಾಗಿ ರಾಜ್ಯಪಾಲ ರಾಮೇಶ್ವರ ಠಾಕೂರ್ ಭರವಸೆ ನೀಡಿದ ಮೇಲೆ ಭಾರತೀಯ ಜನತಾ ಪಕ್ಷವು ಬೆಂಗಳೂರಿನಲ್ಲಿ ಮಹಾತ್ಮ ಗಾಂಧಿ ಪ್ರತಿಮೆ ಮುಂದೆ ಆರಂಬಿಸಿದ್ದ ಧರಣಿಯನ್ನು ಈದಿನ ಸಂಜೆ ಮುಕ್ತಾಯಗೊಳಿಸಿತು. ಜೊತೆಗೆ ರಥಯಾತ್ರೆ ಸೇರಿದಂತೆ ತನ್ನೆಲ್ಲ ಹೋರಾಟದ ಕಾರ್ಯಕ್ರಮಗಳನ್ನು ತಾತ್ಕಾಲಿಕವಾಗಿ ಮುಂದೂಡಲು ನಿರ್ಧರಿಸಿತು. ಬಿ.ಎಸ್. ಯಡಿಯೂರಪ್ಪ ತಮ್ಮ ಎರಡು ದಿನಗಳ ಮೌನವನ್ನು ಮುರಿದರೆ, ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿ ಮೌನದ ಮೊರೆ ಹೊಕ್ಕರು. ಚುನಾವಣೆ ಒಂದೇ ಪರಿಹಾರ ಎಂಬ ತನ್ನ ನಿಲುವನ್ನು ಪುನರುಚ್ಚರಿಸಿದ ಕಾಂಗ್ರೆಸ್, ಬಿಜೆಪಿ- ಜೆಡಿಎಸ್ ಮರು ಮೈತ್ರಿ ವಿರುದ್ಧ ಜನಾಂದೋಲನ ಕಾರ್ಯಕ್ರಮದ ಸಿದ್ಧತೆಗೆ ತೊಡಗಿತು.

2007: ವಿಮಾ ಕಂಪೆನಿಗಳ ಕಾನೂನನ್ನು ಪಾಲಿಸಿರುವಾಗ, ಇತರ ಕಾನೂನು ಉಲ್ಲಂಘನೆಗಳನ್ನು ನೆಪವಾಗಿಟ್ಟುಕೊಂಡು ಗ್ರಾಹಕರಿಗೆ ವಿಮೆ ಹಣ ನೀಡದೇ ಇರುವುದು ತಪ್ಪು ಎಂದು ರಾಷ್ಟ್ರೀಯ ಗ್ರಾಹಕ ನ್ಯಾಯಾಲಯ (ರಾಷ್ಟ್ರೀಯ ಗ್ರಾಹಕ ವಿವಾದಗಳ ನಿವಾರಣಾ ಆಯೋಗ) ತೀರ್ಪು ನೀಡಿತು. `ವಿಮೆ ಎಂಬುದು ಕಂಪೆನಿ ಮತ್ತು ಪಾಲಿಸಿದಾರರ ನಡುವಿನ ಒಪ್ಪಂದ. ಪಾಲಿಸಿದಾರ ವಿಮಾ ಕಂಪೆನಿಯ ನೀತಿ ನಿಯಮಗಳನ್ನು ಉಲ್ಲಂಘಿಸದೇ ಇರುವಾಗ ವಿಮಾ ಹಣವನ್ನು ನೀಡಲು ನಿರಾಕರಿಸಬಾರದು' ಎಂದು ನ್ಯಾಯಮೂರ್ತಿ ಎಂ.ಬಿ. ಷಾ, ಸದಸ್ಯರಾದ ರಾಜ್ಯ ಲಕ್ಷ್ಮಿ ರಾವ್ ಮತ್ತು ಕೆ.ಎಸ್. ಗುಪ್ತಾ ಅವರ ನೇತೃತ್ವದ ಪೀಠ ಹೇಳಿತು. ತಮಿಳುನಾಡಿನಲ್ಲಿ ಅಪಘಾತ ಮಾಡಿದ ಕಾರಿನ ಮಾಲೀಕನ ಬಳಿ ಮೋಟಾರ್ ವಾಹನ ಕಾಯ್ದೆ ಪ್ರಕಾರ ಅಗತ್ಯವಾಗಿ ಇರಬೇಕಾದ `ಅರ್ಹತೆ ಪ್ರಮಾಣ ಪತ್ರ'ದ ಅವಧಿ ಮುಗಿದುಹೋಗಿತ್ತು ಎಂಬ ನೆಪ ನೀಡಿ ಯುನೈಟೆಡ್ ಇನ್ಶೂರೆನ್ಸ್ ಸಂಸ್ಥೆ ವಿಮಾ ಪರಿಹಾರದ ಹಣ ನೀಡಲು ನಿರಾಕರಿಸಿತ್ತು. ಈ ಸಂಬಂಧ ತಮಿಳುನಾಡಿನ ರಾಜ್ಯ ಗ್ರಾಹಕ ನ್ಯಾಯಾಲಯ, ವಿಮಾ ಪಾಲಿಸಿಗಳು ಶಾಸನಬದ್ಧ ಒಪ್ಪಂದಗಳಲ್ಲ ಎಂದು ನೀಡಿದ ತೀರ್ಪಿನ ವಿರುದ್ಧ ರಾಷ್ಟ್ರೀಯ ಗ್ರಾಹಕ ನ್ಯಾಯಾಲಯಕ್ಕೆ ಸಂಸ್ಥೆ ಮೇಲ್ಮನವಿ ಸಲ್ಲಿಸಿತ್ತು. ಮೋಟಾರ್ ವಾಹನ ಕಾಯ್ದೆ ಉಲ್ಲಂಘನೆಗೂ ವಿಮಾ ಕಂಪೆನಿಯ ನಿಯಮಾವಳಿಗಳಿಗೂ ಸಂಬಂಧವಿಲ್ಲ ಎಂದು ತೀರ್ಮಾನಿಸಿದ ಆಯೋಗ ವ್ಯಕ್ತಿ, ಕಾರಿಗೆ ಮಾಡಿಸಿದ್ದ ವಿಮಾ ಹಣ ನೀಡುವಂತೆ ಆದೇಶಿತು.

2007: ಮೊಬೈಲ್ ಚಾರ್ಜರುಗಳು ಇನ್ನು ಮುಂದೆ ಹಳೆಯ ಸರಕಾಗಲಿವೆ. ನೋಟುಗಳ ಸಹಾಯದಿಂದ ಮೊಬೈಲ್ ರೀಚಾರ್ಜು ಮಾಡಲು ಸಾಧ್ಯ ಎಂಬುದನ್ನು ಪುರಿ ನಗರದ ಯುವಕನೊಬ್ಬ ಕಂಡುಹಿಡಿದ. ಎಲೆಕ್ಟ್ರಿಷಿಯನ್ ಆಗಿ ಕಾರ್ಯ ನಿರ್ವಹಿಸುತ್ತಿದ್ದ 20 ವರ್ಷದ ತಪನ್ ಕುಮಾರ್ ಪತ್ರ, ಬಹಳ ದಿನಗಳಿಂದ ತಾನು ಪ್ರಯೋಗಿಸುತ್ತಿದ್ದ ಕರೆನ್ಸಿ ನೋಟುಗಳ ಮೂಲಕ ಒಂದೇ ನಿಮಿಷದಲ್ಲಿ ನೋಕಿಯಾ ಮೊಬೈಲಿನ ಬ್ಯಾಟರಿಯನ್ನು ರೀಚಾರ್ಜ್ ಮಾಡುವ ತನ್ನ ಸಂಶೋಧನೆಯನ್ನು ಪ್ರದರ್ಶಿಸಿ ತೋರಿಸಿದ.

2007: `ಸಮಾಜದಲ್ಲಿ ಈಗ ಭಾವನೆಗಳೇ ಸತ್ತಿವೆ. ಪ್ರತಿಯೊಬ್ಬರೂ ವ್ಯಾವಹಾರಿಕವಾಗಿಯೇ ಜೀವಿಸುತ್ತಿದ್ದಾರೆ. ಹೀಗಾಗಿ ಭಾವನೆಗಳ ಜಾಗೃತಿಯಾಗಬೇಕು' ಎಂದು ರಾಮಚಂದ್ರಾಪುರ ಮಠದ ರಾಘವೇಶ್ವರ ಭಾರತೀ ಸ್ವಾಮೀಜಿ ಬೆಂಗಳೂರಿನ ಪದ್ಮನಾಭ ನಗರದಲ್ಲಿ ಗೋಸಂಧ್ಯಾ ಕಾರ್ಯಕ್ರಮದಲ್ಲಿ ಹೇಳಿದರು. ಗೋ ಸಂರಕ್ಷಣೆಯ ಮಹತ್ವದ ಬಗ್ಗೆ ಮಾತನಾಡಿದ ಅವರು ಗೋವುಗಳೆಂದರೆ ಕಾಮಧೇನು. ಎಲ್ಲರೂ ಗೋ ಸಂರಕ್ಷಣೆ ಮಾಡಬೇಕು. ಅದು ಶ್ರೇಷ್ಠ ಕಾರ್ಯ. ಕವಿಗಳು ಸಾಹಿತಿಗಳು ಕೂಡ ಗೋವುಗಳ ಮಹತ್ವದ ಬಗ್ಗೆ ಸಾಹಿತ್ಯ ರಚಿಸಬೇಕು ಎಂದು ಸಲಹೆ ಮಾಡಿದರು. ಹಿರಿಯ ಕವಿಗಳಾದ ಸುಮತೀಂದ್ರ ನಾಡಿಗ್ ಹಾಗೂ ಡಾ. ಎನ್. ಎಸ್. ಲಕ್ಷ್ಮಿನಾರಾಯಣ ಭಟ್ಟ, ಮಾಜಿ ಸಚಿವ ಆರ್. ಅಶೋಕ್ ಮಾತನಾಡಿದರು.

2007: ಮೈಸೂರು ನಗರದ ಬೆಮೆಲ್ ನಲ್ಲಿ ತಂತ್ರಜ್ಞರಾಗಿರುವ ರಾಜೀವ ಸರಳಾಯ ಅವರು ಕನ್ನಡದಲ್ಲೇ ಪರೀಕ್ಷೆ ಎದುರಿಸಿ ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾಲಯದಿಂದ ಎಂ.ಬಿ.ಎ ಪದವಿ ಪಡೆದರು. ಕನ್ನಡದಲ್ಲೇ ಪರೀಕ್ಷೆ ಎದುರಿಸಲು ಅವರಿಗೆ ಅನುಮತಿ ನೀಡಲು ಮೂರು ವರ್ಷಗಳ ಹಿಂದೆ ಮುಕ್ತ ವಿಶ್ವವಿದ್ಯಾಲಯ ನಿರಾಕರಿಸಿತ್ತು. ನಂತರ ಕನ್ನಡ ಕ್ರಿಯಾ ಸಮಿತಿಯ ಪ್ರಧಾನ ಸಂಚಾಲಕ ಸ.ರ.ಸುದರ್ಶನ ಮತ್ತು ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಸದಸ್ಯ ಎಂ.ಬಿ.ವಿಶ್ವನಾಥ್ ಮನವಿ ಮತ್ತು ಮಧ್ಯಪ್ರವೇಶದಿಂದ ಅನುಮತಿ ದೊರೆತಿತ್ತು. ಇಂಗ್ಲಿಷಿನ ಪಠ್ಯ ಸಾಮಗ್ರಿ-ಪ್ರಶ್ನೆಪತ್ರಿಕೆಗಳನ್ನು ತಾನೇ ಅನುವಾದ ಮಾಡಿಕೊಳ್ಳಬೇಕು ಎಂಬ ಷರತ್ತಿನೊಂದಿಗೆ ಮುಕ್ತ ವಿ.ವಿ ಅವರಿಗೆ ಕನ್ನಡದಲ್ಲಿ ಉತ್ತರ ಬರೆಯಲು ಅನುಮತಿ ನೀಡಿತ್ತು. `ಅದನ್ನು ಸವಾಲಾಗಿ ಸ್ವೀಕರಿಸಿದ ಸರಳಾಯ ಅವರು, ಶೇ. 60ರಷ್ಟು ಅಂಕಗಳನ್ನು ಪಡೆದು ಉತ್ತೀರ್ಣರಾದರು.

2007: ಅಮೆರಿಕದ ಮ್ಯಾರಥಾನ್ ಸ್ಪರ್ಧಿ ರಯಾನ್ ಶೇ (28) ಈದಿನ ನ್ಯೂಯಾರ್ಕಿನಲ್ಲಿ ಓಟದಲ್ಲಿ ನಿರತರಾಗಿದ್ದ ವೇಳೆ ಕುಸಿದು ಬಿದ್ದು ಮೃತರಾದರು. ಐದೂವರೆ ಮೈಲುಗಳಷ್ಟು ದೂರ ಕ್ರಮಿಸಿದಾಗ ಅವರು ಕುಸಿದು ಬಿದ್ದರು. ಅವರನ್ನು ಕೂಡಲೇ ಆಸ್ಪತ್ರೆಗೆ ದಾಖಲಿಸಿದರೂ ಜೀವ ಉಳಿಸಲು ಸಾಧ್ಯವಾಗಲಿಲ್ಲ. ರಯಾನ್ ಅವರು ವಿಶ್ವದ ವಿವಿಧ ಭಾಗಗಳಲ್ಲಿ ನಡೆದ ಐದು ಪ್ರಮುಖ ಮ್ಯಾರಥಾನ್ ಕೂಟಗಳಲ್ಲಿ ಪ್ರಶಸ್ತಿ ಜಯಿಸಿದ್ದರು.

2006: ದೆಹಲಿ ವಿಶ್ವವಿದ್ಯಾಲಯವು 60ರ ದಶಕದಲ್ಲಿ ತನ್ನಿಂದಲೇ ಪದವಿ ಪಡೆದಿದ್ದ ಅಮಿತಾಭ್ ಬಚ್ಚನ್ ಅವರಿಗೆ ಚಿತ್ರರಂಗಕ್ಕೆ ನೀಡಿದ ಕೊಡುಗೆಯನ್ನು ಪರಿಗಣಿಸಿ ಡಾಕ್ಟರೇಟ್ ಗೌರವವನ್ನು ನೀಡಿತು. ಖ್ಯಾತ ವಿಜ್ಞಾನಿ ಸಿ.ಎನ್. ಆರ್. ರಾವ್, ವ್ಯಂಗ್ಯ ಚಿತ್ರಕಾರ ಆರ್. ಕೆ. ಲಕ್ಷ್ಮಣ್, ದೆಹಲಿ ಮುಖ್ಯಮಂತ್ರಿ ಶೀಲಾ ದೀಕ್ಷಿತ್ ಅವರಿಗೂ ಈ ಗೌರವ ಡಾಕ್ಟರೇಟ್ ನೀಡಿ ಗೌರವಿಸಲಾಯಿತು.

2006: ಕೇವಲ ಏಳನೇ ತರಗತಿವರೆಗೆ ಓದಿದ ಬೆಂಗಳೂರಿನ ಯುವಕ ಕೆ. ಬಾಲಕೃಷ್ಣ ಅವರು ನಿಧಾನವಾಗಿ ಹರಿಯುವ ಕೊಳಚೆ ನೀರಿನಿಂದ ವಿದ್ಯುತ್ ತಯಾರಿಸಬಹುದಾದ `ಹೈಡ್ರೋ ಪವರ್ ಜನರೇಟಿಂಗ್ ಡಿವೈಸ್ ಬೈ ಸ್ಲೋ ಫ್ಲೋ ಆಫ್ ವಾಟರ್' ಎಂಬ ಯಂತ್ರ ತಯಾರಿಸಿರುವುದಾಗಿ ಪತ್ರಿಕಾಗೋಷ್ಠಿಯಲ್ಲಿ ಪ್ರಕಟಿಸಿದರು. ಒಂದು ಯಂತ್ರದಿಂದ 10 ಕಿ.ವಿ. ವಿದ್ಯುತ್ ಉತ್ಪಾದಿಸಬಹುದು. ಬೆಂಗಳೂರಿನ ವಿವಿಧ ಭಾಗಗಳಲ್ಲಿ ಕೊಳಚೆ ನೀರಿಗೆ ಅಳವಡಿಸಿದರೆ ಒಟ್ಟು ಬೇಡಿಕೆಯ ಶೇಕಡಾ 25ರಷ್ಟು ವಿದ್ಯುತ್ ಉತ್ಪಾದಿಸಬಹುದು ಎಂಬುದು ಅವರ ಅಭಿಪ್ರಾಯ.

2005: `ಶಹನಾಯಿ ಮಾಂತ್ರಿಕ' ಬಿಸ್ಮಿಲ್ಲಾ ಖಾನ್ ಅವರಿಗೆ ಹೈದರಾಬಾದಿನಲ್ಲಿ ಆಂಧ್ರಪ್ರದೇಶ ಕಲಾ ವೇದಿಕೆ ಆಶ್ರಯದಲ್ಲಿ `ಭಾರತದ ಹೆಮ್ಮೆಯ ಪುತ್ರ' (ಪ್ರೈಡ್ ಆಫ್ ಇಂಡಿಯಾ) ಪ್ರಶಸ್ತಿಯನ್ನು ಮುಖ್ಯಮಂತ್ರಿ ರಾಜಶೇಖರ ರೆಡ್ಡಿ ಪ್ರದಾನ ಮಾಡಿದರು.

2001: ಜೆ.ಕೆ. ರೌಲಿಂಗ್ಸ್ ಅವರ ಪುಸ್ತಕ ಆಧಾರಿತ `ಹ್ಯಾರಿ ಪಾಟರ್ ಅಂಡ್ ದಿ ಫಿಲಾಸಫರ್ಸ್ ಸ್ಟೋನ್' ಚಲನಚಿತ್ರ ಲಂಡನ್ನಿನ ಲೀಸ್ಟರ್ ಚೌಕದ ಓಡಿಯಾನ್ ಥಿಯೇಟರಿನಲ್ಲಿ ಪ್ರದರ್ಶನಗೊಂಡಿತು.

1998: ಕಲ್ಕತ್ತಾದ (ಈಗಿನ ಕೋಲ್ಕತ್ತಾ) ಸಾಲ್ಟ್ ಲೇಕ್ ಸ್ಟೇಡಿಯಮ್ಮಿನಲ್ಲಿ ನಡೆದ 38ನೇ ಓಪನ್ ನ್ಯಾಷನಲ್ ಚಾಂಪಿಯನ್ ಶಿಪ್ ಕ್ರೀಡಾಕೂಟದಲ್ಲಿ 45.7 ಸೆಕೆಂಡುಗಳಲ್ಲಿ 400 ಮೀಟರ್ ಓಡುವ ಮೂಲಕ ಪಂಜಾಬ್ ಪೊಲೀಸ್ ಪರಮಜಿತ್ ಸಿಂಗ್ ಅವರು ಮಿಲ್ಕಾಸಿಂಗ್ ದಾಖಲೆಯನ್ನು ಮುರಿದರು. ಮಿಲ್ಖಾಸಿಂಗ್ 1960ರ ರೋಮ್ ಒಲಿಂಪಿಕ್ಸ್ ನಲ್ಲಿ 45.73 ಸೆಕೆಂಡುಗಳಲ್ಲಿ ಓಡಿ ಈ ದಾಖಲೆ ನಿರ್ಮಿಸಿದ್ದರು. ತಮ್ಮ ದಾಖಲೆಯನ್ನು ಮುರಿಯುವ ಯಾವನೇ ಭಾರತೀಯನಿಗೆ 2 ಲಕ್ಷ ರೂಪಾಯಿಗಳನ್ನು ನೀಡುವುದಾಗಿ ಮಿಲ್ಖಾ ಸಿಂಗ್ ಸವಾಲು ಹಾಕಿದ್ದರು. ಆದರೆ ಪರಮಜಿತ್ ಸಿಂಗ್ ಗೆ ಈ ಹಣ ನೀಡಲು ಮಿಲ್ಖಾಸಿಂಗ್ ನಿರಾಕರಿಸಿದರು. ತಮ್ಮ ಓಟದ ಎಲೆಕ್ಟ್ರಾನಿಕ್ ಅವಧಿ (45.73 ಸೆಕೆಂಡ್) ಅನಧಿಕೃತವಾಗಿದ್ದು, ಕೈಗಡಿಯಾರ ಪ್ರಕಾರ ತಾವು ಓಡಿದ್ದು 45.6 ಸೆಕೆಂಡಿನಲ್ಲಿ. ಈ ದಾಖಲೆಗಿಂತ ಪರಮಜಿತ್ ದಾಖಲೆ ಕೆಳಗಿದೆ ಎಂಬುದು ತಮ್ಮ ನಿರಾಕರಣೆಗೆ ಅವರು ನೀಡಿದ ಕಾರಣ. `ದಾಖಲೆ ವಿದೇಶಿ ನೆಲದಲ್ಲಿ ಆಗಬೇಕು' ಎಂಬ ಹೊಸ ಷರತ್ತನ್ನು ನಂತರ ಮಿಲ್ಖಾಸಿಂಗ್ ತಮ್ಮ ಸವಾಲಿಗೆ ಸೇರಿಸಿದರು.

1995: ಇಸ್ರೇಲಿ ಪ್ರಧಾನಿ ಯಿಟ್ಜ್ ಹಾಕ್ ರಾಬಿನ್ (73) ಅವರನ್ನು ಶಾಂತಿ ರ್ಯಾಲಿಯಲ್ಲಿ ಪಾಲ್ಗೊಂಡಿದ್ದಾಗ ಬಲಪಂಥೀಯ ಇಸ್ರೇಲಿಗಳು ಕೊಲೆಗೈದರು.

1945: ವಿಶ್ವಸಂಸ್ಥೆಯ ಅಂಗಸಂಸ್ಥೆಯಾದ ಯುನೆಸ್ಕೊವನ್ನು (ವಿಶ್ವಸಂಸ್ಥೆಯ ಶೈಕ್ಷಣಿಕ, ಸಾಮಾಜಿಕ, ಸಾಂಸ್ಕೃತಿಕ ಸಂಘಟನ) ಸ್ಥಾಪಿಸಲಾಯಿತು. ಇದರ ಕೇಂದ್ರ ಕಚೇರಿ ಪ್ಯಾರಿಸ್ಸಿನಲ್ಲಿದೆ. ಪ್ರಸ್ತುತ 191 ದೇಶಗಳು ಇದರ ಸದಸ್ಯತ್ವ ಹೊಂದಿವೆ.

1936: ಮಾನವ ಕಂಪ್ಯೂಟರ್ ಎಂಬುದಾಗಿ ಹೆಸರು ಗಳಿಸಿರುವ ಬಾರತೀಯ ಗಣಿತ ತಜ್ಞೆ ಶಕುಂತಲಾ ದೇವಿ ಹುಟ್ಟಿದ ದಿನ. 1977 ರಲ್ಲಿ ಇವರು 201 ಅಂಕಿಗಳ 23 ನೇ ವರ್ಗಮೂಲವನ್ನು ಕೇವಲ 50 ಸೆಕೆಂಡುಗಳಲ್ಲಿ ಲೆಕ್ಕಹಾಕಿ ಹೇಳಿದರು. ಇದೇ ಲೆಕ್ಕವನ್ನು ಮಾಡಲು ಕಂಪ್ಯೂಟರ್ ಯುನಿವ್ಯಾಕ್ ಒಂದು ನಿಮಿಷಕ್ಕೂ ಹೆಚ್ಚು ಸಮಯವನ್ನು ತೆಗೆದುಕೊಂಡಿತು.

1934: ರಣಜಿ ಟ್ರೋಫಿಯ ಉದ್ಘಾಟನಾ ಪಂದ್ಯವು ಮದ್ರಾಸ್ ಮತ್ತು ಮೈಸೂರು ತಂಡಗಳ ಮಧ್ಯೆ ಮದ್ರಾಸಿನ ಚೀಪಾಕ್ ಸ್ಟೇಡಿಯಮ್ಮಿನಲ್ಲಿ ನಡೆಯಿತು. ಬಾಂಬೆಯಲ್ಲಿ (ಈಗಿನ ಮುಂಬೈ) 1935ರ ಮಾರ್ಚಿನಲ್ಲಿ ನಡೆದ ಅಂತಿಮ ಪಂದ್ಯದಲ್ಲಿ ಉತ್ತರ ಭಾರತ ತಂಡವನ್ನು ಸೋಲಿಸಿ ಬಾಂಬೆ ತಂಡವು ಆ ವರ್ಷದ ರಣಜಿ ಟ್ರೋಫಿಯನ್ನು ಗೆದ್ದುಕೊಂಡಿತು. 67 ವರ್ಷಗಳಲ್ಲಿ ಬಾಂಬೆ ತಂಡವು 33 ಸಲ ರಣಜಿ ಟ್ರೋಫಿಯನ್ನು ಗೆದ್ದಿತು. ಅದರಲ್ಲಿ 1959ರಿಂದ 73ರವರೆಗೆ ಅದು ನಿರಂತರ ವಿಜಯ ಸಾಧಿಸಿತ್ತು.

1916: ಸಾಹಿತಿ ಕುಮಾರ ವೆಂಕಣ್ಣ ಜನನ.

1893: ಸಾಹಿತಿ ಪತ್ರಿಕೋದ್ಯಮಿ ರಾಜಕಾರಣಿ ಸೀತಾರಾಮ ಶಾಸ್ತ್ರಿ (4-11-1893ರಿಂದ 7-1-1971) ಅವರು ನಾಗೇಶ ಶಾಸ್ತ್ರಿ- ಪಾರ್ವತಮ್ಮ ದಂಪತಿಯ ಮಗನಾಗಿ ನಂಜನಗೂಡಿನಲ್ಲಿ ಜನಿಸಿದರು.

1889: ಭಾರತೀಯ ಸ್ವಾತಂತ್ರ್ಯ ಯೋಧ, ಕೈಗಾರಿಕೋದ್ಯಮಿ ಹಾಗೂ ದಾನಿ ಜಮ್ನಾಲಾಲ್ ಬಜಾಜ್ (1889-1942) ಜನ್ಮದಿನ.

1845: ಭಾರತೀಯ ಕ್ರಾಂತಿಕಾರಿ ಸ್ವಾತಂತ್ರ್ಯ ಯೋಧ ವಾಸುದೇವ ಬಲವಂತ ಫಡ್ಕೆ (1845-83) ಹುಟ್ಟಿದ ದಿನ. ಇವರು ತಮ್ಮ ಗೆರಿಲ್ಲಾ ಯುದ್ಧ ತಂತ್ರಗಳಿಂದ ಖ್ಯಾತಿ ಪಡೆದರು

ಇಂದಿನ ಇತಿಹಾಸ History Today ನವೆಂಬರ್ 03

ಇಂದಿನ ಇತಿಹಾಸ

ನವೆಂಬರ್ 03

ಹೈದರಾಬಾದಿನ ವಿಶ್ವ ಪ್ರಸಿದ್ಧ ಸಾಲಾರ್ ಜಂಗ್ ವಸ್ತು ಸಂಗ್ರಹಾಲಯದಲ್ಲಿ ಅಗ್ನಿ ಅನಾಹುತ ಸಂಭವಿಸಿತು. ಆದರೆ ಆದರೆ ಯಾವುದೇ ಪ್ರಾಚೀನ ವಸ್ತುಗಳಿಗೂ ಹಾನಿ ಉಂಟಾಗಲಿಲ್ಲ. ವಸ್ತುಸಂಗ್ರಹಾಲಯದ ದಾಸ್ತಾನುಕೋಣೆಯ ಒಳಗೆ ಮೊದಲಿಗೆ ಬೆಂಕಿ ಕಾಣಿಸಿಕೊಂಡಿತು. ಇದನ್ನು ಗಮನಿಸಿದ ಭದ್ರತಾ ಸಿಬ್ಬಂದಿ ತತ್ ಕ್ಷಣ ಅಗ್ನಿಶಾಮಕ ಸಿಬ್ಬಂದಿಗೆ ಸುದ್ದಿ ಮುಟ್ಟಿಸಿದರು. ಕ್ಷಿಪ್ರವಾಗಿ ಸ್ಥಳಕ್ಕೆ ಆಗಮಿಸಿದ ಅಗ್ನಿಶಾಮಕ ಸಿಬ್ಬಂದಿ ಬೆಂಕಿಯನ್ನು ಆರಿಸಿದರು.

2008: ಚರ್ಮದ ಯಾವುದಾದರೂ ಒಂದು ಭಾಗದಲ್ಲಿ ಕೂದಲು/ ರೋಮ ಎಷ್ಟುಂಟು ಎಂದು ಹೇಳಬಲ್ಲಿರಾ? `ಉಹೂಂ' ಎಂಬುದು ಬಹುತೇಕ ಮಂದಿಯ ಉತ್ತರ. ಈಗ ಕಾಲ ಬದಲಾಗುತ್ತಿದೆ. ಚರ್ಮದ ಯಾವುದೇ ಭಾಗದ ಕೂದಲನ್ನಾದರೂ ಚಕ ಚಕನೆ ಎಣಿಸಬಲ್ಲಂತಹ ಸಾಫ್ಟ್ ವೇರ್ ಸಿದ್ಧವಾಗಿ ಬಿಟ್ಟಿದೆ. `ನಾವು ಅಂತಹ ಸಾಫ್ಟ್ ವೇರ್ ಅಭಿವೃದ್ಧಿ ಪಡಿಸಿದ್ದೇವೆೆ' ಎಂದು ಆಸ್ಟ್ರೇಲಿಯಾದ ಸಂಶೋಧಕರು ಪ್ರಕಟಿಸಿದರು. `ಕೂದಲು ಉದುರದಂತೆ ಹಚ್ಚುವ ಕ್ರೀಮುಗಳು ಎಷ್ಟು ಪರಿಣಾಮಕಾರಿ ಎಂದು ಅರಿತುಕೊಳ್ಳಲು ಈ ಸಾಫ್ಟ್ ವೇರ್ ಅತ್ಯುಪಯೋಗಿ' ಎಂದು ಸಿಡ್ನಿಯ ಸಿ ಎಸ್ ಐ ಆರ್ ಓ ಗಣಿತ ಮತ್ತು ಮಾಹಿತಿ ವಿಜ್ಞಾನ ಸಂಸ್ಥೆಯ ಸಂಶೋಧಕರು ಹೇಳಿದರು. ತಮ್ಮ ಸಂಶೋಧನೆಯ ವಿವರಗಳನ್ನು ಅವರು `ಸ್ಕಿನ್ ರೀಸರ್ಚ್ ಅಂಡ್ ಟೆಕ್ನಾಲಜಿ' ನಿಯತಕಾಲಿಕದ ನವೆಂಬರ್ ಸಂಚಿಕೆಯಲ್ಲಿ ಪ್ರಕಟಿಸಿದರು. ಇಂಗ್ಲೆಂಡ್ ಕಂಪೆನಿಯೊಂದರ ಸಹಯೋಗದಲ್ಲಿ ಅಭಿವೃದ್ಧಿ ಪಡಿಸಲಾದ ಈ ಸಾಫ್ಟ್ ವೇರ್ ರೋಮ ನಿವಾರಕ ಕ್ರೀಮುಗಳು ಎಷ್ಟು ಪರಿಣಾಮಕಾರಿ ಎಂದು ನಿಖರವಾಗಿ ಅಂದಾಜು ಮಾಡಬಲ್ಲುದು ಎಂದು ಬಿಂಬ ವಿಶ್ಲೇಷಕ ಪಾಸ್ಕಲ್ ವ್ಯ್ಲಾಲೋಟ್ಟನ್ ಅವರನ್ನು ಉಲ್ಲೇಖಿಸಿ ಎಬಿಸಿ ವರದಿ ಮಾಡಿತು.

2008: ಕರ್ನಾಟಕದ ಸ್ಥಳೀಯ ಸಂಸ್ಥೆಗಳಿಂದ ರಾಜ್ಯ ವಿಧಾನ ಪರಿಷತ್ತಿಗೆ ನಡೆದ ಚುನಾವಣೆಯಲ್ಲಿ ಮೂರೂ ಸ್ಥಾನಗಳನ್ನು ಬಿಜೆಪಿ ಗೆದ್ದುಕೊಂಡಿತು. ಕೊಡಗು ಕ್ಷೇತ್ರದಿಂದ ಎಸ್.ಜಿ.ಮೇದಪ್ಪ, ಬೆಳಗಾವಿ ಕ್ಷೇತ್ರದಿಂದ ಶಶಿಕಾಂತ್ ಅಕ್ಕಪ್ಪ ನಾಯಕ್ ಮತ್ತು ಧಾರವಾಡದಿಂದ ಶಿವರಾಜ್ ಸಜ್ಜನರ ಅವರು ಚುನಾವಣೆಯಲ್ಲಿ ಗೆದ್ದರು. ಈ ಮೂವರೂ ಬಿಜೆಪಿ ಅಭ್ಯರ್ಥಿಗಳು.

2008: ಹಿಂದುತ್ವ ಚಳವಳಿಗೆ ಕಳಂಕ ತರುವ ಉದ್ದೇಶದಿಂದ ಮಾಲೆಗಾಂವ್ ಸ್ಫೋಟ ಪ್ರಕರಣದಲ್ಲಿ ತಮ್ಮನ್ನು ಬುದ್ಧಿಪೂರ್ವಕವಾಗಿ ಸಿಲುಕಿಸಲಾಗಿದೆ ಎಂದು ಸಾಧ್ವಿ ಪ್ರಗ್ಯಾ ಸಿಂಗ್ ಠಾಕೂರ್ ನಾಸಿಕ್ ಚೀಫ್ ಜುಡಿಷಿಯಲ್ ಮ್ಯಾಜಿಸ್ಟ್ರೇಟ್ ಕೋರ್ಟಿನಲ್ಲಿ ಆರೋಪಿಸಿದರು. ಪ್ರಕರಣದಲ್ಲಿ ಬಂಧಿತರಾಗಿರುವ ತಾವು ಹಾಗೂ ಇನ್ನಿಬ್ಬರು ನಿರ್ದೋಷಿಗಳು ಎಂದು ಹೇಳಿದ ಪ್ರಗ್ಯಾ, ವಿಚಾರಣೆ ವೇಳೆ ಮಹಾರಾಷ್ಟ್ರ ಭಯೋತ್ಪಾದನಾ ನಿಗ್ರಹ ದಳದ ಸಿಬ್ಬಂದಿ (ಎಟಿಎಸ್) ತಮಗೆ ಕಿರುಕುಳ ನೀಡಿದರು ಎಂದೂ ದೂರಿದರು.

2008: ಉತ್ತರ ಮತ್ತು ದಕ್ಷಿಣ ವಿಯೆಟ್ನಾಮಿನಲ್ಲಿ 55 ಜನರು ಪ್ರವಾಹಕ್ಕೆ ಬಲಿಯಾದರು. ರಾಜಧಾನಿ ಹನೋಯಿಯಲ್ಲಿ ಪ್ರವಾಹದಿಂದಾಗಿ 18 ಜನರು ಮೃತರಾದರು. ಕಳೆದ 25 ವರ್ಷಗಳಲ್ಲಿ ಸಂಭವಿಸಿದ ಭೀಕರ ಪ್ರವಾಹ ಇದು.

2008: ಭೂತಾನಿನಲ್ಲಿ ಸರ್ಕಾರ ಮಾಧ್ಯಮಗಳಿಗೆ ಹೆಚ್ಚು ಸ್ವಾತಂತ್ರ್ಯ ನೀಡಲಾರಂಭಿಸಿದ ಪರಿಣಾಮವಾಗಿ ಇದೇ ಮೊದಲ ಬಾರಿಗೆ `ಭೂತಾನ್ ಟುಡೆ' ಹೆಸರಿನ ದಿನಪತ್ರಿಕೆಯೊಂದು ಆರಂಭಗೊಂಡಿದೆ. ಪತ್ರಿಕೆಯು ಅಕ್ಟೋಬರ್ 30 ರಿಂದ ಮುದ್ರಣ ಆರಂಭಿಸಿತು.

2008: ಆಸ್ಟ್ರೇಲಿಯಾ ವಿಶ್ವ ಪರಂಪರಾ ತಾಣಗಳ ಪಟ್ಟಿಯಲ್ಲಿ ಸೇರ್ಪಡೆಯಾಗಿರುವ `ಗ್ರೇಟ್ ಬ್ಯಾರಿಯರ್ ರೀಪ್' ಸಮೀಪದ ಪ್ರವಾಸಿ ಕಡಲ ಕಿನಾರೆಯಲ್ಲಿ ಸಿಕ್ಕಿದ ಭಾರಿ ಮೊಸಳೆ ಭಾರೀ ಪ್ರಮಾಣದಲ್ಲಿ ಪ್ಲಾಸ್ಟಿಕ್ ಸೇವಿಸಿದ್ದರಿಂದ ಸಾವನ್ನಪ್ಪಿತು ಎಂದು ಅಧಿಕಾರಿಗಳು ಪ್ರಕಟಿಸಿದರು. ಪ್ರವಾಸಿಗರಿಗೆ ಸಿಂಹಸ್ವಪ್ನವಾಗಿದ್ದ ಮೊಸಳೆಯನ್ನು ಮ್ಯಾಗ್ನಟಿಕ್ ದ್ವೀಪದ ಸಮೀಪ ಸೆರೆ ಹಿಡಿದ ಒಂದು ದಿನದ ನಂತರ ಅದು ಸತ್ತಿದೆ ಎಂದು ಕ್ವೀನ್ಸ್ ಲ್ಯಾಂಡ್ ಪರಿಸರ ಸಂರಕ್ಷಣಾ ಏಜೆನ್ಸಿ ಘೋಷಿಸಿತು. ಮೊಸಳೆಯ ಹೊಟ್ಟೆಯಲ್ಲಿ ಸರಕಿಗಾಗಿ ಬಳಸುವ ಹಾಗೂ ಅನುಪಯುಕ್ತ ಪದಾರ್ಥ ತುಂಬುವ 25 ಪ್ಲಾಸ್ಟಿಕ್ ಚೀಲಗಳು ಪತ್ತೆಯಾದವು. ಇದಲ್ಲದೆ ಮದ್ಯ ತಂಪು ಮಾಡುವ ಚೀಲ ಮತ್ತಿತರ ವಸ್ತುಗಳು ದೊರೆತವು. ಹೊಟ್ಟೆಯಲ್ಲಿ ಪ್ಲಾಸ್ಟಿಕ್ ತ್ಯಾಜ್ಯ ಸೇರಿದ್ದರಿಂದ ಅದರ ಜೀರ್ಣಕ್ರಿಯೆಗೆ ಅಡ್ಡಿಯಾಗಿತ್ತು.

2007: ತಮಿಳು ಉಗ್ರಗಾಮಿ ಸಂಘಟನೆ ಎಲ್ಟಿಟಿಇ ಪೊಲೀಸ್ ಮುಖ್ಯಸ್ಥ ಪಿ.ನಟೇಶನ್ ಅವರನ್ನು ರಾಜಕೀಯ ಘಟಕದ ನೂತನ ಮುಖ್ಯಸ್ಥರನ್ನಾಗಿ ನೇಮಕ ಮಾಡಲಾಯಿತು. ಲಂಕಾ ವಾಯುಪಡೆಯಿಂದ ಹತ್ಯೆಯಾದ ಬಂಡಾಯ ನಾಯಕ ಎಸ್. ಪಿ. ತಮಿಳ್ ಸೆಲ್ವಂ ಸ್ಥಾನಕ್ಕೆ ನಟೇಶನ್ ನೇಮಕಗೊಂಡರು.

2007: ಅಂತಾರಾಷ್ಟ್ರೀಯ ಬಾಹ್ಯಾಕಾಶ ಕೇಂದ್ರದ ರೆಕ್ಕೆಯ ದುರಸ್ತಿ ಮಾಡುವ ಸಾಹಸವನ್ನು ಇಬ್ಬರು ಗಗನಯಾತ್ರಿಗಳು ಈದಿನ ಆರಂಭಿಸಿದರು. ಡಿಸ್ಕವರಿ ಉಪಗ್ರಹ ಉಡಾವಣೆಗೆ ಸೀಳು ಬಂದಿರುವ ರೆಕ್ಕೆಯನ್ನು ಸರಿಪಡಿಸುವುದು ಅಗತ್ಯ. ದುರಸ್ತಿ ಮಾಡದಿದ್ದಲ್ಲಿ ವಿದ್ಯುತ್ ಉತ್ಪಾದಿಸುವ ಈ ರೆಕ್ಕೆಯ ಕಾರ್ಯ ಸಂಪೂರ್ಣವಾಗಿ ಸ್ಥಗಿತಗೊಳ್ಳುವುದು ಎಂದು ಅಮೆರಿಕದ ಬಾಹ್ಯಾಕಾಶ ಸಂಸ್ಥೆ ನಾಸಾ ಹೇಳಿತು. ಬಾಹ್ಯಾಕಾಶ ನಡಿಗೆಯಲ್ಲಿ ನುರಿತ ಗಗನಯಾತ್ರಿ ಸ್ಕಾಟ್ ಪಾರಾಜಿನ್ ಸಕಿ (46) ಅವರು ಈ ಕೆಲಸಕ್ಕೆ ಮುಂದಾದರು.

2007: ಅಕ್ರಮ ಆಸ್ತಿ ಸಂಪಾದನೆಯ ಆರೋಪದ ಮೇರೆಗೆ ಬೆಂಗಳೂರು, ಬಳ್ಳಾರಿ ಮತ್ತು ಬೀದರಿನಲ್ಲಿ ಪೊಲೀಸ್, ಸಾರಿಗೆ ಮತ್ತು ನೀರಾವರಿ ಇಲಾಖೆಯ 13 ಅಧಿಕಾರಿಗಳ ಮನೆ, ಕಚೇರಿಗಳ ಮೇಲೆ ಏಕಕಾಲಕ್ಕೆ ದಾಳಿ ನಡೆಸಿದ ಲೋಕಾಯುಕ್ತ ಪೊಲೀಸರು 50 ಕೋಟಿ ರೂಪಾಯಿಗೂ ಹೆಚ್ಚು ಮೌಲ್ಯದ ಆಸ್ತಿಯನ್ನು ಪತ್ತೆ ಹಚ್ಚಿದರು. ಇದು ಕರ್ನಾಟಕ ಲೋಕಾಯುಕ್ತದ ಇತಿಹಾಸದಲ್ಲೇ ಅತ್ಯಂತ ದೊಡ್ಡ ದಾಳಿ. ಇಬ್ಬರು ಸಹಾಯಕ ಪೊಲೀಸ್ ಆಯುಕ್ತರು, ಒಬ್ಬ ಎಸ್ ಪಿ, ಒಬ್ಬ ಡಿ ವೈ ಎಸ್ ಪಿ, ಮೂವರು ಪೊಲೀಸ್ ಇನ್ ಸ್ಪೆಕ್ಟರುಗಳು, ಐದು ಮೋಟಾರು ವಾಹನ ನಿರೀಕ್ಷಕರು ಮತ್ತು ಒಬ್ಬ ಸಹಾಯಕ ಕಾರ್ಯಪಾಲಕ ಎಂಜಿನಿಯರುಗಳ ಮನೆ-ಕಚೇರಿ ಮೇಲೆ ದಾಳಿ ನಡೆಯಿತು. ಅಕ್ರಮ ಆಸ್ತಿ ಸಂಪಾದನೆಗೆ ಸಂಬಂಧಿಸಿದಂತೆ ವರ್ಷವೊಂದರಲ್ಲಿ ಎಂಟರಿಂದ ಹತ್ತು ಮಂದಿ ಅಧಿಕಾರಿಗಳ ಮೇಲೆ ದಾಳಿ ನಡೆಸಿದ್ದು ಈವರೆಗಿನ ಇತಿಹಾಸ. ಆದರೆ ಈದಿನ ಬೆಳಿಗ್ಗೆ 6 ಗಂಟೆಗೆ ಪ್ರಾರಂಭವಾದ ದಾಳಿಯಲ್ಲಿ 13 ಮಂದಿ ಅಧಿಕಾರಿಗಳ ಮೇಲೆ ದಾಳಿ ನಡೆಸಿ, ಭಾರಿ ಪ್ರಮಾಣದ ಅಕ್ರಮ ಆಸ್ತಿಯನ್ನು ಬಯಲಿಗೆ ತರುವ ಮೂಲಕ ಲೋಕಾಯುಕ್ತ ಪೊಲೀಸರು ನೂತನ ದಾಖಲೆ ಸೃಷ್ಟಿಸಿದರು. ಬೆಂಗಳೂರಿನ ಕಬ್ಬನ್ ಪಾರ್ಕ್ ಉಪವಿಭಾಗದ ಎಸಿಪಿ ಅಜ್ಜಪ್ಪ, ವಿಧಾನಸೌಧ ಭದ್ರತಾ ವಿಭಾಗದ ಎಸಿಪಿ ವಿಶ್ವನಾಥ್ ಸಿಂಗ್, ಯಲಹಂಕ ಪೊಲೀಸ್ ತರಬೇತಿ ಕೇಂದ್ರದ ಅಧೀಕ್ಷಕ ಶ್ರೀನಿವಾಸ ಅಯ್ಯರ್, ಪೊಲೀಸ್ ಇನ್ಸ್ಪೆಕ್ಟರುಗಳಾದ ರಾಮಮೂರ್ತಿನಗರ ಠಾಣೆಯ ಸಿದ್ದಪ್ಪ, ವಿಶೇಷ ಘಟಕದ ಮರಿಸ್ವಾಮಿಗೌಡ, ಉಪ್ಪಾರಪೇಟೆ ಸಂಚಾರ ಪೊಲೀಸ್ ಠಾಣೆಯ ಎಸ್.ಪಿ. ಮಲ್ಲಿಕಾರ್ಜುನ, ಕಾಡುಗೋಡಿ ಠಾಣೆಯ ಪುರುಷೋತ್ತಮ್, ಸಾರಿಗೆ ಇಲಾಖೆಯ ಮೋಟಾರು ವಾಹನ ನಿರೀಕ್ಷಕರಾದ ಬಾಲಚಂದ್ರರಾವ್ (ಯಶವಂತಪುರ ಪ್ರಾದೇಶಕ ಸಾರಿಗೆ ಅಧಿಕಾರಿಗಳ ಕಚೇರಿ), ಈಶ್ವರ ನಾಯಕ್ (ರಾಜಾಜಿನಗರ) ಮತ್ತು ಎಂ. ಲಕ್ಷ್ಮಣ್ (ದೇವನಹಳ್ಳಿ) ಅವರ ಮನೆ, ಕಚೇರಿ ಮೇಲೆ ದಾಳಿ ನಡೆಯಿತು.

2007: `ರಾಜಕೀಯ ಅಸ್ಥಿರತೆ, ನ್ಯಾಯಾಂಗದ ಮಿತಿಮೀರಿದ ಹಸ್ತಕ್ಷೇಪ ಹಾಗೂ ಭಯೋತ್ಪಾದಕ ಕೃತ್ಯಗಳು ಹೆಚ್ಚುತ್ತಿರುವ' ನೆಪವೊಡ್ಡಿ ಪಾಕಿಸ್ಥಾನದಲ್ಲಿ ಅಧ್ಯಕ್ಷ ಜನರಲ್ ಪರ್ವೇಜ್ ಮುಷರಫ್ ತುರ್ತು ಪರಿಸ್ಥಿತಿ ಘೋಷಿಸಿದರು. ಸುಪ್ರೀಂ ಕೋರ್ಟಿನ ಮುಖ್ಯ ನ್ಯಾಯಮೂರ್ತಿ ಇಫ್ತಿಕರ್ ಮೊಹಮ್ಮದ್ ಚೌಧರಿ ಅವರನ್ನೂ ವಜಾ ಮಾಡಲಾಯಿತು. ಆದರೆ ಸುಪ್ರೀಂಕೋರ್ಟ್ ಈ ಆದೇಶವನ್ನು ಸಂವಿಧಾನಬಾಹಿರ ಎಂದು ಹೇಳಿತು.

2007: ಕರ್ನಾಟಕದಲ್ಲಿ ಸರ್ಕಾರ ರಚನೆಗೆ ಆಹ್ವಾನ ನೀಡಬೇಕೆಂದು ಆಗ್ರಹಿಸಿ ಬಿಜೆಪಿಯು ಬೆಂಗಳೂರು ಮಹಾತ್ಮ ಗಾಂಧಿ ರಸ್ತೆಯಲ್ಲಿ ಮಹಾತ್ಮ ಗಾಂಧಿ ಪ್ರತಿಮೆಯ ಬಳಿ ಅನಿರ್ದಿಷ್ಟಾವಧಿಯ ಧರಣಿಯನ್ನು ಆರಂಭಿಸಿತು.

2006: ಹೈದರಾಬಾದಿನ ವಿಶ್ವ ಪ್ರಸಿದ್ಧ ಸಾಲಾರ್ ಜಂಗ್ ವಸ್ತುಸಂಗ್ರಹಾಲಯದಲ್ಲಿ ಅಗ್ನಿ ಅನಾಹುತ ಸಂಭವಿಸಿತು. ಆದರೆ ಆದರೆ ಯಾವುದೇ ಪ್ರಾಚೀನ ವಸ್ತುಗಳಿಗೂ ಹಾನಿ ಉಂಟಾಗಲಿಲ್ಲ. ವಸ್ತುಸಂಗ್ರಹಾಲಯದ ದಾಸ್ತಾನುಕೋಣೆಯ ಒಳಗೆ ಮೊದಲಿಗೆ ಬೆಂಕಿ ಕಾಣಿಸಿಕೊಂಡಿತು. ಇದನ್ನು ಗಮನಿಸಿದ ಭದ್ರತಾ ಸಿಬ್ಬಂದಿ ತತ್ ಕ್ಷಣ ಅಗ್ನಿಶಾಮಕ ಸಿಬ್ಬಂದಿಗೆ ಸುದ್ದಿ ಮುಟ್ಟಿಸಿದರು. ಕ್ಷಿಪ್ರವಾಗಿ ಸ್ಥಳಕ್ಕೆ ಆಗಮಿಸಿದ ಅಗ್ನಿಶಾಮಕ ಸಿಬ್ಬಂದಿ ಬೆಂಕಿಯನ್ನು ಆರಿಸಿದರು.

2006: ಬೆಂಗಳೂರಿನ ಸುತ್ತಮುತ್ತ ಇರುವ ಏಳು ನಗರಸಭೆ, ಕೆಂಗೇರಿ ಪುರಸಭೆ ಮತ್ತು 111 ಗ್ರಾಮಗಳನ್ನು ಸೇರಿಸಿಕೊಂಡು ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ (ಗ್ರೇಟರ್ ಬೆಂಗಳೂರು ಮುನಿಸಿಪಲ್ ಕಾರ್ಪೊರೇಷನ್ ರಚಿಸಲು ಅಧಿಸೂಚನೆ ಹೊರಡಿಸಲಾಯಿತು. ಯೋಜನೆ ಅನುಷ್ಠಾನಕ್ಕೆ ಇಸ್ರೊ ಮಾಜಿ ಅಧ್ಯಕ್ಷ ರಾಜ್ಯಸಭಾ ಸದಸ್ಯ ಡಾ. ಕಸ್ತೂರಿ ರಂಗನ್, ರಾಜ್ಯ ಯೋಜನಾ ಮಂಡಳಿಯ ಉಪಾಧ್ಯಕ್ಷ ಎ. ರವೀಂದ್ರ ನೇತೃತ್ವದ 12 ಸದಸ್ಯರ ಸಮಿತಿ ರಚಿಸಲಾಯಿತು.

2006: ಭಾರತೀಯ ಕ್ರಿಕೆಟ್ ರಂಗದ ಪ್ರತಿಭಾನ್ವಿತ ಆಟಗಾರರರಲ್ಲಿ ಒಬ್ಬರಾದ ವಿಜಯ್ ರಾಘವೇಂದ್ರ ಭಾರಧ್ವಾಜ್ ಕ್ರಿಕೆಟ್ ಬದುಕಿಗೆ ವಿದಾಯ ಹೇಳಿದರು. ಉತ್ತಮ ಬ್ಯಾಟ್ ಮನ್ ಹಾಗೂ ಆಫ್ ಸ್ಪಿನ್ನರ್ ಆಗಿದ್ದ ಭಾರಧ್ವಾಜ್ ಸುದ್ದಿಗೋಷ್ಠಿಯಲ್ಲಿ ನಿವೃತ್ತಿ ನಿರ್ಧಾರ ಪ್ರಕಟಿಸಿದರು. (ಜನನ: 15 ಆಗಸ್ಟ್ 1975).

2006: ಭಾರತ ತಂಡದ ನಾಯಕ ರಾಹುಲ್ ದ್ರಾವಿಡ್ ವರ್ಷದ ಐಸಿಸಿ ವಿಶ್ವ ಇಲೆವೆನ್ ತಂಡದ ಅತ್ಯುತ್ತಮ ನಾಯಕ ಗೌರವಕ್ಕೆ ಪಾತ್ರರಾದರು. ಅಂತಾರಾಷ್ಟ್ರೀಯ ಕ್ರಿಕೆಟ್ ಸಮಿತಿ ವಿವಿಧ ಪ್ರಶಸ್ತಿಗಳಿಗೆ ಕ್ರಿಕೆಟಿಗರನ್ನು ಆಯ್ಕೆ ಮಾಡಿತು.

1998: `ಬ್ಯಾಟ್ ಮ್ಯಾನ್' ಸೃಷ್ಟಿಕರ್ತ ಬಾಬ್ ಕೇನ್ ತಮ್ಮ 83ನೇ ವಯಸ್ಸಿನಲ್ಲಿ ಮೃತರಾದರು. ಲಿಯೋನಾರ್ಡೊ ಡ ವಿಂಚಿ ಅವರ `ಹಾರುವ ಯಂತ್ರ'ಗಳ ಚಿತ್ರಗಳಿಂದ ಸ್ಫೂರ್ತಿ ಪಡೆದು `ಬ್ಯಾಟ್ ಮ್ಯಾನ್' ಸೃಷ್ಟಿಸಿದರು ಎನ್ನಲಾಗಿದೆ.

1992: ಬಾಲಿವುಡ್ ನಟ ಪ್ರೇಮನಾಥ್ ನಿಧನ.

1986: ಸಿರಿಯನ್ ಪರ ಮ್ಯಾಗಜಿನ್ `ಆಶ್- ಶಿರಾ' ಮೊತ್ತ ಮೊದಲ ಬಾರಿಗೆ ಅಮೆರಿಕವು ಇರಾನಿಗೆ ಶಸ್ತ್ರಾಸ್ತ್ರ ಮಾರಾಟ ಮಾಡಿದ್ದನ್ನು ಪ್ರಕಟಿಸಿತು. ಈ ಶಸ್ತ್ರಾಸ್ತ್ರಗಳ ರಹಸ್ಯ ಮಾರಾಟದಿಂದ ಬಂದ ಲಾಭವನ್ನು ನಿಕರಾಗುವಾದ ಬಂಡುಕೋರರಿಗೆ ನೀಡಲಾಗಿದೆ ಎಂಬುದಾಗಿ ಅಮೆರಿಕಾದ ಅಧ್ಯಕ್ಷ ರೀಗನ್ ಹಾಗೂ ಅಟಾರ್ನಿ ಜನರಲ್ ಎಡ್ವಿನ್ ಮೀಸ್ ಪ್ರಕಟಿಸಿದಾಗ ಈ ಪ್ರಕರಣ ಪ್ರಮುಖ ಹಗರಣಯಿತು.

1984: ಓಂ ಅಗರ್ವಾಲ್ ಅವರು ಡಬಿನ್ನಿನಲ್ಲಿ ನಡೆದ ಅಂತಿಮ ಪಂದ್ಯದಲ್ಲಿ ವಿಜಯ ಗಳಿಸುವ ಮೂಲಕ ವಿಶ್ವ ಸ್ನೂಕರ್ ಚಾಂಪಿಯನ್ ಶಿಪ್ ಗೆದ್ದ ಪ್ರಥಮ ಭಾರತೀಯ ಎಂಬ ಹೆಗ್ಗಳಿಕೆಗೆ ಪಾತ್ರರಾದರು.

1984: ಹತ್ಯೆಗೊಳಗಾದ ಭಾರತದ ಪ್ರಧಾನಿ ಇಂದಿರಾಗಾಂಧಿ ಅವರ ಅಂತ್ಯಕ್ರಿಯೆ.

1978: ಸರ್ ಫ್ರಾಜ್ ನವಾಜ್ `ಶಾರ್ಟ್ ಪಿಚ್ಡ್ ಬೌಲಿಂಗ್' ಮಾಡಿದ್ದನ್ನು ಪ್ರತಿಭಟಿಸಿ ಭಾರತೀಯ ಕ್ಯಾಪ್ಟನ್ ಬಿಷನ್ ಸಿಂಗ್ ಬೇಡಿ ಅವರು ಪಾಕಿಸ್ಥಾನದ ಸಹಿವಾಲ್ ನ ಝಾಫರ್ ಸ್ಟೇಡಿಯಂನಿಂದ ತಮ್ಮ ಆಟಗಾರರನ್ನು ವಾಪಸ್ ಕರೆಸಿಕೊಂಡರು. ಒಂದು ದಿನದ ಅಂತಾರಾಷ್ಟ್ರೀಯ ಪಂದ್ಯವೊಂದು ಹೀಗೆ ಮುಕ್ತಾಯಗೊಂಡದ್ದು ಇದೇ ಪ್ರಥಮ.

1968: ಸಾಹಿತಿ ಚಂದ್ರಿಕಾ ಕಾಕೋಳ ಜನನ.

1957: ಸೋವಿಯತ್ ಒಕ್ಕೂಟ ನಿರ್ಮಿಸಿದ ಕೃತಕ ಉಪಗ್ರಹ ಸ್ಪುಟ್ನಿಕ್-2ನ್ನು ಈದಿನ ಉಡಾವಣೆ ಮಾಡಿ ಕಕ್ಷೆಗೆ ಸೇರಿಸಲಾಯಿತು. ಇದು ಮಾನವ ನಿರ್ಮಿತ ಎರಡನೆ ಉಪಗ್ರಹ. ಲೈಕಾ ಎಂಬ ನಾಯಿಯನ್ನು ಈ ಉಪಗ್ರಹದೊಂದಿಗೆ ಕಳುಹಿಸಿ ಪ್ರಾಣಿಯೊಂದನ್ನು ಮೊದಲ ಬಾರಿಗೆ ಅಂತರಿಕ್ಷಯಾನ ಮಾಡಿಸಿದ ಕೀರ್ತಿಗೆ ಸೋವಿಯತ್ ಒಕ್ಕೂಟ ಭಾಜನವಾಯಿತು.

1939: ಕನ್ನಡ ಮತ್ತು ಹಿಂದಿ ಭಾಷೆಗಳೆರಡರಲ್ಲಿ ವಿಶಿಷ್ಟ ಸ್ಥಾನ ಗಳಿಸಿರುವ ಡಾ. ಸಿದ್ದಲಿಂಗ ಪಟ್ಟಣಶೆಟ್ಟಿ ಅವರು ಬಸೆಟ್ಟು- ಗಿರಿಜವ್ವ ದಂಪತಿಯ ಮಗನಾಗಿ ಯಾದವಾಡ ಗ್ರಾಮದಲ್ಲಿ ಜನಿಸಿದರು.

1933: ಭಾರತದ ನೊಬೆಲ್ ಪ್ರಶಸ್ತಿ ವಿಜೇತ ಆರ್ಥಿಕ ತಜ್ಞ ಅಮರ್ತ್ಯ ಸೇನ್ ಜನ್ಮದಿನ.

1933: ಸಾಹಿತಿ ಪದ್ಮಾ ಶೆಣೈ ಜನನ.

1929: ಸಾಹಿತಿ ಬಿ.ಎನ್. ನಾಣಿ ಜನನ.

1910: ಸಾಹಿತಿ ಬಾಲಚಂದ್ರ ಘಾಣೇಕರ್ ಜನನ.

1906: ಭಾರತೀಯ ಚಿತ್ರನಟ, ನಿರ್ದೇಶಕ ಪೃಥ್ವಿರಾಜ್ ಕಪೂರ್ ಹುಟ್ಟಿದ ದಿನ.

1838: `ದಿ ಟೈಮ್ಸ್ ಆಫ್ ಇಂಡಿಯಾ' ಪತ್ರಿಕೆಯು ಬಾಂಬೆಯಿಂದ (ಈಗಿನ ಮುಂಬೈ) ಮೊದಲ ಬಾರಿಗೆ ಪ್ರಕಟಗೊಂಡಿತು. `ದಿ ಬಾಂಬೆ ಟೈಮ್ಸ್ ಅಂಡ್ ಜರ್ನಲ್ ಆಫ್ ಕಾಮರ್ಸ್' ಎಂಬ ಹೆಸರಿನಿಂದ ವಾರಕ್ಕೆ ಎರಡು ಬಾರಿ ಪ್ರಕಟಗೊಳ್ಳುತ್ತಿದ್ದ ಅದನ್ನು ಬೆನ್ನೆಟ್, ಕೋಲ್ಮನ್ ಅಂಡ್ ಕಂಪೆನಿ ಲಿಮಿಟೆಡ್ ಪ್ರಕಟಿಸಿತು. 1850ರಲ್ಲಿ ಅದಕ್ಕೆ `ದಿ ಟೈಮ್ಸ್ ಆಫ್ ಇಂಡಿಯಾ' ಎಂಬುದಾಗಿ ಮರುನಾಮಕರಣ ಮಾಡಲಾಯಿತು. ಜೆ.ಇ. ಬ್ರೆನ್ನನ್ ಆಗ ಅದರ ಸಂಪಾದಕರಾಗಿದ್ದರು.

1618: ಭಾರತದ ಮೊಘಲ್ ಚಕ್ರವರ್ತಿ ಔರಂಗಜೇಬ್ ಹುಟ್ಟಿದ ದಿನ.

Monday, November 2, 2009

ಇಂದಿನ ಇತಿಹಾಸ History Today ನವೆಂಬರ್ 02

ಇಂದಿನ ಇತಿಹಾಸ

ನವೆಂಬರ್ 02

ಹದಿನೆಂಟು ವರ್ಷಗಳಿಂದ ಭಾರತ ಟೆಸ್ಟ್ ತಂಡದ ಬೆನ್ನೆಲುಬಾಗಿದ್ದ ಅನಿಲ್ ಕುಂಬ್ಳೆ ಅಂತಾರಾಷ್ಟ್ರೀಯ ಕ್ರಿಕೆಟಿಗೆ ವಿದಾಯ ಹೇಳಿದರು. ತಮ್ಮ ನೆಚ್ಚಿನ ಅಂಗಳ ಎನಿಸಿದ ನವದೆಹಲಿಯ ಫಿರೋಜ್ ಷಾ ಕೋಟ್ಲಾ ಕ್ರೀಡಾಂಗಣದಲ್ಲಿ ಆಸ್ಟ್ರೇಲಿಯಾ ವಿರುದ್ಧದ ಮೂರನೇ ಟೆಸ್ಟ್ ಪಂದ್ಯದ ಅಂತಿಮ ದಿನವಾದ ಈದಿನ ಕುಂಬ್ಳೆ ಈ ನಿರ್ಧಾರ ಪ್ರಕಟಿಸಿದರು.ಡ್ರಾದಲ್ಲಿ ಅಂತ್ಯಗೊಂಡ ಈ ಪಂದ್ಯದಲ್ಲಿ ಗಾಯಗೊಂಡಿದ್ದರೂ ಬೌಲಿಂಗ್ ಮಾಡಿದ ಅವರು ಮೂರು ವಿಕೆಟ್ ಪಡೆದರು.

2008: ಹದಿನೆಂಟು ವರ್ಷಗಳಿಂದ ಭಾರತ ಟೆಸ್ಟ್ ತಂಡದ ಬೆನ್ನೆಲುಬಾಗಿದ್ದ ಅನಿಲ್ ಕುಂಬ್ಳೆ ಅಂತಾರಾಷ್ಟ್ರೀಯ ಕ್ರಿಕೆಟಿಗೆ ವಿದಾಯ ಹೇಳಿದರು. ತಮ್ಮ ನೆಚ್ಚಿನ ಅಂಗಳ ಎನಿಸಿದ ನವದೆಹಲಿಯ ಫಿರೋಜ್ ಷಾ ಕೋಟ್ಲಾ ಕ್ರೀಡಾಂಗಣದಲ್ಲಿ ಆಸ್ಟ್ರೇಲಿಯಾ ವಿರುದ್ಧದ ಮೂರನೇ ಟೆಸ್ಟ್ ಪಂದ್ಯದ ಅಂತಿಮ ದಿನವಾದ ಈದಿನ ಕುಂಬ್ಳೆ ಈ ನಿರ್ಧಾರ ಪ್ರಕಟಿಸಿದರು. ಡ್ರಾದಲ್ಲಿ ಅಂತ್ಯಗೊಂಡ ಈ ಪಂದ್ಯದಲ್ಲಿ ಗಾಯಗೊಂಡಿದ್ದರೂ ಬೌಲಿಂಗ್ ಮಾಡಿದ ಅವರು ಮೂರು ವಿಕೆಟ್ ಪಡೆದರು. 1990ರಲ್ಲಿ ಇಂಗ್ಲೆಂಡ್ ವಿರುದ್ಧ ಮ್ಯಾಂಚೆಸ್ಟರಿನಲ್ಲಿ ಪದಾರ್ಪಣೆ ಮಾಡಿದ್ದ ಕುಂಬ್ಳೆ ಟೆಸ್ಟ್ ಕ್ರಿಕೆಟಿನಲ್ಲಿ ಅತಿ ಹೆಚ್ಚು ವಿಕೆಟ್ ಪಡೆದ ವಿಶ್ವದ ಮೂರನೇ ಬೌಲರ್ (619). `ಟಾಪ್ ಸ್ಪಿನ್' ಖ್ಯಾತಿಯ ಕುಂಬ್ಳೆ ಆಡಿರುವ 132 ಟೆಸ್ಟ್ ಕ್ರಿಕೆಟ್ ಪಂದ್ಯಗಳಲ್ಲಿ 29.65 ಸರಾಸರಿಯಲ್ಲಿ ಒಟ್ಟು 619 ಹೊಂದಿದ್ದಾರೆ. 1999ರಲ್ಲಿ ಫಿರೋಜ್ ಷಾ ಕೋಟ್ಲಾ ಕ್ರೀಡಾಂಗಣದಲ್ಲಿ ನಡೆದ ಪಾಕ್ ವಿರುದ್ಧದ ಟೆಸ್ಟ್ ಪಂದ್ಯದ ಒಂದೇ ಇನಿಂಗ್ಸಿನಲ್ಲಿ ಎಲ್ಲ ಹತ್ತು ವಿಕೆಟ್ ಪಡೆದು
ವಿಶ್ವದಾಖಲೆ ಸರಿಗಟ್ಟಿದ್ದು ಕುಂಬ್ಳೆ ಅವರ ಕ್ರಿಕೆಟ್ ಜೀವನದ ಅವಿಸ್ಮರಣೀಯ ಕ್ಷಣ.

2008: ಪುಣೆ- ಮುಂಬೈ ಎಕ್ಸ್ ಪ್ರೆಸ್ಸಿನ ಬಾಳೆವಾಡಿಯ ಶಿವಛತ್ರಪತಿ ಕ್ರೀಡಾನಗರದ ಒಳಾಂಗಣ ಬ್ಯಾಡ್ಮಿಂಟನ್ ಅಂಕಣದಲ್ಲಿ ಆಕರ್ಷಕ ಆಟದ ಪ್ರದರ್ಶನ ತೋರಿದ ಸೈನಾ ನೆಹ್ವಾಲ್ `ಯೋನೆಕ್ಸ್-ಸನ್ ರೈಸ್ ವಿಶ್ವ ಜೂನಿಯರ್' ಬ್ಯಾಡ್ಮಿಂಟನ್ ಚಾಂಪಿಯನ್ ಶಿಪ್ಪಿನ ಬಾಲಕಿಯರ ಸಿಂಗಲ್ಸ್ ಪ್ರಶಸ್ತಿ ಗೆದ್ದುಕೊಂಡರು. ಬಾಲಕಿಯರ ಸಿಂಗಲ್ಸಿನ ಫೈನಲ್ ಪಂದ್ಯದಲ್ಲಿ ಅವರು 21-9, 21-18ರಲ್ಲಿ ಜಪಾನಿನ ಸಾಟೊ ಸಯಾಕಾ ಅವರನ್ನು ಸೋಲಿಸಿದರು.

2008: ಮಾವೋವಾದಿಗಳು ಹೆಚ್ಚಿರುವ ಪಶ್ಚಿಮ ಬಂಗಾಳದ ಪಶ್ವಿಮ ಮಿಡ್ನಾಪುರ ಜಿಲ್ಲೆಯ ಬರೋವಾ ಬಳಿ ಪಶ್ಚಿಮ ಬಂಗಾಳದ ಮುಖ್ಯಮಂತ್ರಿ ಬುದ್ಧದೇವ ಭಟ್ಟಾಚಾರ್ಯ ಮತ್ತು ಕೇಂದ್ರ ಸಚಿವ ರಾಮ ವಿಲಾಸ್ ಪಾಸ್ವಾನ್ ಅವರ ಬೆಂಗಾವಲು ಪಡೆ ತೆರಳಿದ ಕೆಲ ನಿಮಿಷಗಳಲ್ಲೇ ನೆಲಬಾಂಬ್ ಸ್ಫೋಟಗೊಂಡು, ಇಬ್ಬರೂ ಮುಖಂಡರು ಕೂದಲೆಳೆ ಅಂತರದಲ್ಲಿಪಾರಾದರು. ಘಟನೆಯಲ್ಲಿ ಆರು ಪೊಲೀಸರು ಗಾಯಗೊಂಡರು. ಬುದ್ಧದೇವ, ಪಾಸ್ವಾನ್, ರಾಜ್ಯದ ಕೈಗಾರಿಕಾ ಸಚಿವ ನಿರುಪಮ್ ಸೇನ್ ಮತ್ತು ಉದ್ಯಮಿ ಸಜ್ಜನ್ ಜಿಂದಾಲ್ ಅವರು ಜಿಂದಾಲ್ ಸ್ಟೀಲ್ ವರ್ಕ್ಸ್ ಪ್ಲಾಂಟಿನ ಶಂಕುಸ್ಥಾಪನೆ ನೆರವೇರಿಸಿ ಹಿಂತಿರುಗುತ್ತಿದ್ದಾಗ ಸಾಲ್ಬಾನಿಯಿಂದ 17 ಕಿ.ಮೀ. ದೂರದ ಬರೋವಾದಲ್ಲಿ `ದೂರ ನಿಯಂತ್ರಿತ ನೆಲಬಾಂಬ್' ಸ್ಫೋಟಗೊಂಡಿತು.

2007: ಅಸ್ವಸ್ಥತೆಯಿಂದ ಬಳಲುತ್ತಿದ್ದ ಎಚ್ ಐ ವಿ ಸೋಂಕು ಬಾಧಿತೆ ಮತ್ತು ಸಾಮಾಜಿಕ ಕಾರ್ಯಕರ್ತೆ ವೀಣಾಧರಿ (54) ಈದಿನ ಬೆಂಗಳೂರಿನ ಮಣಿಪಾಲ ಆಸ್ಪತ್ರೆಯಲ್ಲಿ ನಿಧನರಾದರು. ಮಂಗಳೂರು ಸಮೀಪದ ಮಂಜೇಶ್ವರ ನಿವಾಸಿಯಾದ ವೀಣಾಧರಿ ಅವರು ಕೆಲ ವರ್ಷಗಳಿಂದ ಬೆಂಗಳೂರಿನಲ್ಲಿ ವಾಸವಿದ್ದರು. ಎಚ್ ಐ ವಿ ಸೋಂಕಿನಿಂದ ಬಳಲುತ್ತಿದ್ದ ಅವರು ಆತ್ಮವಿಶ್ವಾಸದಿಂದ ಜೀವನ ನಡೆಸುತ್ತಿದ್ದರು. ಎಚ್ ಐ ವಿ ಸೋಂಕು ಮತ್ತು ಏಡ್ಸ್ ನಿಂದ ಬಳಲುತ್ತಿದ್ದವರಿಗೆ ನೆಮ್ಮದಿಯಿಂದ ಜೀವನ ನಡೆಸುವಂತೆ ಧೈರ್ಯ ಹೇಳುತ್ತಿದ್ದರು. ಖಾಸಗಿ ಸಂಸ್ಥೆಯ ಶಾಲೆಯೊಂದರಲ್ಲಿ ಶಿಕ್ಷಕಿಯಾಗಿ ವೃತ್ತಿ ಜೀವನ ಆರಂಭಿಸಿದ್ದ ಅವರು ತಮಗೆ ಎಚ್ ಐ ವಿ ಸೋಂಕಿದೆ ಎಂದು ಯಾವತ್ತೂ ಧೃತಿಗೆಟ್ಟವರಲ್ಲ. ಬೆಂಗಳೂರಿನ ಜೆ.ಸಿ.ರಸ್ತೆ ಬಳಿಯಿರುವ ಕಚೇರಿಯೊಂದರಲ್ಲಿ ಎಚ್ ಐ ವಿ ಸೋಂಕು ಬಾಧಿತ ಮತ್ತು ಏಡ್ಸ್ ಕಾಯಿಲೆ ಪೀಡಿತರಿಗಾಗಿ ಅವರು ಪ್ರತಿ ವಾರ ಸಲಹಾ ಶಿಬಿರ ನಡೆಸುತ್ತಿದ್ದರು. ಕರಾವಳಿ ಎಚ್ ಐವಿ ಸೋಂಕು ಬಾಧಿತ ಮಹಿಳಾ ಮತ್ತು ಮಕ್ಕಳ ಜಾಲ ಸಂಘವನ್ನು ಸ್ಥಾಪಿಸಿದ್ದ ವೀಣಾಧರಿ ರಾಜ್ಯೋತ್ಸವ ಪ್ರಶಸ್ತಿಯ ಜೊತೆಗೆ ವಿವಿಧ ಸಂಘ ಸಂಸ್ಥೆಗಳು ನೀಡುವ ಪ್ರಶಸ್ತಿಗಳನ್ನು ಪಡೆದಿದ್ದರು. ಬ್ಯಾಂಕ್ ಉದ್ಯೋಗಿಯಾದ ಪತಿಯಿಂದ ವೀಣಾಧರಿ ಅವರಿಗೆ ಎಚ್ ಐ ವಿ ಸೋಂಕು ತಗುಲಿತು. ಪತಿಯನ್ನು ವೈದ್ಯಕೀಯ ಪರೀಕ್ಷೆಗೆ ಒಳಪಡಿಸಿದಾಗ ಎಚ್ ಐ ವಿ ಸೋಂಕು ಸೇರಿದಂತೆ ಬೇರೆ ಕಾಯಿಲೆಗಳು ಇರುವುದು ಬೆಳಕಿಗೆ ಬಂತು. ನಂತರ ಪತಿಯನ್ನು ತೊರೆದ ವೀಣಾ ಮಂಗಳೂರಿನಲ್ಲಿ ನೆಲೆಸಿದರು. ಎಚ್ ಐ ವಿ ಸೋಂಕಿನಿಂದ ಬಾಧಿತರಾಗಿದ್ದಾರೆ ಎಂದು ತಿಳಿದ ನಂತರ ಅವರನ್ನು ತಂದೆ ತಾಯಿ ಸಹ ದೂರವಿರಿಸಿದ್ದರು.

2007: ಸಾಗರೋಲ್ಲಂಘನ ಮಾಡಿದ ಪುತ್ತಿಗೆ ಮಠಾಧೀಶ ಸುಗುಣೇಂದ್ರ ತೀರ್ಥರು ಪರ್ಯಾಯ ಸಂದರ್ಭದಲ್ಲಿ ನಿಯಮದಂತೆ ಶ್ರೀಕೃಷ್ಣನ ಪೂಜೆ ಮಾಡುವಂತಿಲ್ಲ. ಆದರೆ ಪುತ್ತಿಗೆ ಪರ್ಯಾಯ ಸಂದರ್ಭದಲ್ಲಿ ಕೃಷ್ಣಮಠದ ಆಡಳಿತ ಜವಾಬ್ದಾರಿಯನ್ನು ಸುಗುಣೇಂದ್ರ ತೀರ್ಥರಿಗೆ ನೀಡಬಹುದು ಎಂದು ಉಡುಪಿಯಲ್ಲಿ ಜರುಗಿದ ಅಷ್ಟ ಮಠಾಧೀಶರ ಸಭೆ ನಿರ್ಣಯಿಸಿತು. ಆದರೆ ಈ ನಿರ್ಣಯವನ್ನು ಈ ತಿಂಗಳ 28ರ ಸಭೆಯ ಬಳಿಕವೇ ಜಾರಿಗೆ ತರಲು ನಿರ್ಧರಿಸಲಾಯಿತು. ಅಷ್ಟ ಮಠಾಧೀಶರಾದ ಪರ್ಯಾಯ ಕೃಷ್ಣಾಪುರ ಸ್ವಾಮೀಜಿ, ಪೇಜಾವರ ಸ್ವಾಮೀಜಿ, ಪಲಿಮಾರು ಸ್ವಾಮೀಜಿ, ಕಾಣಿಯೂರು ಹಾಗೂ ಸೋದೆ ಸ್ವಾಮೀಜಿಗಳು ನಡೆಸಿದ ಸಭೆಯ ಕಾಲಕ್ಕೆ ಈ ನಿರ್ಧಾರ ತೆಗೆದು ಕೊಳ್ಳಲಾಯಿತು. ಆದರೆ ಅದಮಾರು ಮಠಾಧೀಶರು ಮತ್ತು ಪುತ್ರಿಗೆ ಮಠಾಧೀಶರ ಅನುಪಸ್ಥಿತಿಯಲ್ಲಿ ಈ ಸಭೆ ನಡೆಯಿತು.

2007: ಮನೆಯ ತಾರಸಿಯ ಮೇಲೆ ವಿದ್ಯುತ್ ಘಟಕವನ್ನು ಸ್ಥಾಪಿಸಿ ಮನೆಗೆ ಬೇಕಾಗುವಷ್ಟು ವಿದ್ಯುತ್ ಉತ್ಪಾದಿಸಿಕೊಳ್ಳಬಹುದಾದ ಗಾಳಿ ಮತ್ತು ಸೌರಶಕ್ತಿಗಳನ್ನು ಜೊತೆಯಾಗಿ ಬಳಸುವ ವಿದ್ಯುತ್ ಉತ್ಪಾದನಾ ಘಟಕವನ್ನು ಕರ್ನಾಟಕ ನವೀಕರಿಸ ಬಹುದಾದ ಇಂಧನ ಅಭಿವೃದ್ಧಿ ಸಂಸ್ಥೆ (ಕ್ರೆಡಲ್) ರೂಪಿಸಿರುವುದಾಗಿ ಸಂಸ್ಥೆಯ ಉಪ ಪ್ರಧಾನ ವ್ಯವಸ್ಥಾಪಕ ಡಾ. ಎಚ್. ನಾಗನಗೌಡ ಮೈಸೂರಿನಲ್ಲಿ ಪ್ರಕಟಿಸಿದರು. ರಾಜ್ಯದಲ್ಲಿ ಈಗಾಗಲೇ ಸುಮಾರು 21 ಮನೆಗಳಲ್ಲಿ ಈ ಘಟಕವನ್ನು ಸ್ಥಾಪಿಸಲಾಗಿದ್ದು ಎಲ್ಲ ಕಡೆ ಅತ್ಯುತ್ತಮ ಕಾರ್ಯ ನಿರ್ವಹಣೆ ಇದೆ ಎಂದು ಅವರು ಹೇಳಿದರು. ಎರಡು ಕಡೆ ಬೀದಿ ದೀಪ ಹಾಗೂ ಒಂದು ಕಡೆ ನಾಡದೋಣಿ ಓಡಿಸಲು ಈ ವಿದ್ಯುತ್ ಬಳಕೆ ಮಾಡಲಾಗುತ್ತಿದೆ. 550 ವಾಟ್ ಸಾಮರ್ಥ್ಯದ ಘಟಕವನ್ನು ಮನೆಯ ಮೇಲೆ ಸ್ಥಾಪಿಸಿಕೊಂಡರೆ 8 ದೀಪಗಳನ್ನು ನಿರಂತರವಾಗಿ 5 ಗಂಟೆಗಳ ಕಾಲ ಉರಿಸಬಹುದು. ಜೊತೆಗೆ ಒಂದು ಟಿವಿಯನ್ನು 6 ಗಂಟೆಗಳ ಕಾಲ ಬಳಸಬಹುದು. ಜೊತೆಗೆ ಟೇಪ್ ರೆಕಾರ್ಡರ್, ರೇಡಿಯೋ, ಫ್ಯಾನ್, ಫ್ರಿಜ್ಜುಗಳಿಗೂ ಕೂಡ ಈ ವಿದ್ಯುತ್ ಬಳಸಬಹುದು. ಒಟ್ಟಾರೆಯಾಗಿ ಮನೆಗೆ ಬೇಕಾಗುವಷ್ಟು ವಿದ್ಯುತ್ತನ್ನು ಇದರಿಂದ ಪಡೆಯಬಹುದು. ವಿದ್ಯುತ್ ಖೋತಾ, ವೋಲ್ಟೇಜ್ ಸಮಸ್ಯೆ ಮುಂತಾದ ತೊಂದರೆಗಳು ಇಲ್ಲ. 550 ವಾಟ್ ಸಾಮರ್ಥ್ಯದ ಈ ಗಾಳಿ ಮತ್ತು ಸೌರಶಕ್ತಿಗಳನ್ನು ಜೊತೆ ಜೊತೆಯಾಗಿ ಬಳಸುವ ವಿದ್ಯುತ್ ಘಟಕವನ್ನು ಸ್ಥಾಪಿಸಲು 95 ಸಾವಿರ ರೂಪಾಯಿ ವೆಚ್ಚವಾಗುತ್ತದೆ. ವೈಯಕ್ತಿಕ ಉಪಯೋಗ, ಕೈಗಾರಿಕೆಗಳು, ಸಂಶೋಧನೆ ಮತ್ತು ಅಬಿವೃದ್ಧಿ ಸಂಸ್ಥೆಗಳು, ಶೈಕ್ಷಣಿಕ ಸಂಸ್ಥೆಗಳಿಗೆ ಶೇ 50ರಷ್ಟು ಸಬ್ಸಿಡಿ ನೀಡಲಾಗುತ್ತದೆ. ಸಾರ್ವಜನಿಕ ಉಪಯೋಗ, ಕೇಂದ್ರ, ರಾಜ್ಯ ಸರ್ಕಾರಿ ಕಚೇರಿಗಳಿಗಾದರೆ ಶೇ 75ರಷ್ಟು ಸಬ್ಸಿಡಿ, ಅಲ್ಲದೆ ಅತ್ಯಂತ ಕುಗ್ರಾಮಗಳಿಗಾದರೆ ಶೇ 90ರಷ್ಟು ಸಬ್ಸಿಡಿ ನೀಡಲಾಗುತ್ತದೆ ಎಂಬುದು ನಾಗನಗೌಡ ವಿವರಣೆ. ಈ ಘಟಕ ಸ್ಥಾಪಿಸಿಕೊಳ್ಳಬಯಸಿದರೆ, ಕ್ರೆಡಲ್ ಸಂಸ್ಥೆ ನಿಮ್ಮ ಮನೆಯ ಜಾಗವನ್ನು ನೋಡಿ ಪರಿಶೀಲಿಸುತ್ತದೆ. ಗಾಳಿ ಯಂತ್ರವನ್ನು ಭೂಮಿಯ ಮಟ್ಟಕ್ಕಿಂತ ಕನಿಷ್ಠ 18 ಅಡಿ ಎತ್ತರದಲ್ಲಿ ಇಡಬೇಕು. ಘಟಕದ ನೂರು ಮೀಟರ್ ವ್ಯಾಪ್ತಿಯೊಳಗೆ ಎತ್ತರವಾದ ಮರಗಳು, ಕಟ್ಟಡಗಳಂತಹ ಅಡೆತಡೆ ಇರಬಾರದು. ಗಾಳಿ ಯಾವ ದಿಕ್ಕಿನಲ್ಲಿ ಯಾವ ವೇಗದಲ್ಲಿ ತಿರುಗುತ್ತದೆ ಎನ್ನುವುದನ್ನು ನೋಡಿಕೊಂಡು ಘಟಕ ಸ್ಥಾಪಿಸಲಾಗುತ್ತದೆ. ಗಾಳಿ ಮತ್ತು ಸೂರ್ಯ ಇರುವವರೆಗೂ ವಿದ್ಯುತ್ ಉತ್ಪಾದನೆ ಸಾಧ್ಯ. ಚಲಿಸುವ ಭಾಗಗಳು ಕಡಿಮೆ ಇರುವುದರಿಂದ ನಿರ್ವಹಣೆ ವೆಚ್ಚ ಕಡಿಮೆ. ಸುಲಭವಾಗಿ ನಿರ್ವಹಿಸುವಂತೆ ಇದನ್ನು ವಿನ್ಯಾಸಗೊಳಿಸಲಾಗಿದೆ. ಸ್ಥಾವರಕ್ಕೆ 2 ವರ್ಷಗಳ ಖಾತರಿ ಇದೆ. ಸೋಲಾರ್ ಪಿವಿ ಮಾಡ್ಯೂಲುಗಳಿವೆ 10 ವರ್ಷದ ಗ್ಯಾರಂಟಿ. ಸ್ವಯಂ ಚಾಲಿತ ವ್ಯವಸ್ಥೆ ಇದಾಗಿದ್ದು ವಿದ್ಯುತ್ ಬಿಲ್ ಪಾವತಿ ಮಾಡುವ ಅಗತ್ಯವೇ ಇಲ್ಲ. ಇದು ಪರಿಸರ ಸ್ನೇಹಿ ಹಾಗೂ ಶುದ್ಧ ಇಂಧನ ಮೂಲ. ದೃಢವಾದ ವೋಲ್ಟೇಜ್ ಮತ್ತು ಪ್ರೀಕ್ವೆನ್ಸಿ ಹೊಂದಿರುವ ವಿದ್ಯುತ್ ಉತ್ಪಾದನೆ ಇರುವುದರಿಂದ ವಿದ್ಯುತ್ ಅಡೆತಡೆಯ ಪ್ರಶ್ನೆ ಇಲ್ಲ. ಆಸಕ್ತರು ಡಾ.ನಾಗನಗೌಡ ಅವರನ್ನು 9845787698 ಮೂಲಕ ಸಂಪರ್ಕಿಸಬಹುದು.

2007: ಸ್ವಿಟ್ಜರ್ಲೆಂಡಿನ ಆಟಗಾರ್ತಿ ಮಾರ್ಟಿನಾ ಹಿಂಗಿಸ್ ಅವರು ತಮ್ಮ ಟೆನಿಸ್ ಜೀವನಕ್ಕೆ ಜ್ಯೂರಿಸ್ಸಿನಲ್ಲಿ ವಿದಾಯ ಹೇಳಿದರು. ವಿಂಬಲ್ಡನ್ ಟೂರ್ನಿಯ ವೇಳೆಯಲ್ಲಿ ತಾನು ಉದ್ದೀಪನ ಮದ್ದು ಕೊಕೇನ್ ಪರೀಕ್ಷೆಯಲ್ಲಿ ಸಿಕ್ಕಿಬಿದ್ದಿದ್ದ ಸಂಗತಿಯನ್ನೂ ಅವರು ಇದೇ ವೇಳೆ ಬಹಿರಂಗಪಡಿಸಿ ಟೆನಿಸ್ ಜಗತ್ತನ್ನು ಅಚ್ಚರಿಯಲ್ಲಿ ಕೆಡವಿದರು. ಆದರೆ ತಾನು ಯಾವುದೇ ಉದ್ದೀಪನ ಮದ್ದು ಸೇವಿಸಿಲ್ಲ ಎಂದು ಅವರು ಸ್ಪಷ್ಟ ಪಡಿಸಿದರು. ಹಿಂಗಿಸ್ ವೃತ್ತಿಪರ ಟೆನಿಸಿನಿಂದ ನಿವೃತ್ತಿ ಹೊಂದುತ್ತಿರುವುದು ಇದು ಎರಡನೇ ಬಾರಿ. ಐದು ಗ್ರ್ಯಾಂಡ್ ಸ್ಲಾಮ್ ಕಿರೀಟ ಮುಡಿಗೇರಿಸಿಕೊಂಡ ಅವರು 2003ರಲ್ಲಿ ಮೊದಲ ಬಾರಿ ಟೆನಿಸಿಗೆ ನಿವೃತ್ತಿ ಘೋಷಿಸಿದ್ದರು. ಪಾದದ ಗಾಯದಿಂದ ಬಳಲಿದ ಅವರು ಈ ನಿರ್ಧಾರ ಕೈಗೊಂಡಿದ್ದರು. 2006 ರಲ್ಲಿ ಮತ್ತೆ ಟೆನಿಸ್ ಕಣಕ್ಕೆ ಮರಳಿದರೂ ಅವರಿಗೆ ಹಳೆಯ ಲಯವನ್ನು ಕಂಡುಕೊಳ್ಳಲು ಸಾಧ್ಯವಾಗಲಿಲ್ಲ. ಮೂರು ಡಬ್ಲ್ಯುಟಿಎ ಪ್ರಶಸ್ತಿಗಳನ್ನು ಗೆಲ್ಲುವ ಮೂಲಕ ಮೂಲಕ ತಮ್ಮ ಪುನರಾಗಮವನ್ನು ಭರ್ಜರಿಯಾಗಿಸಿದ್ದರೂ ಅವರು ಮತ್ತೆ ಗಾಯದ ಸಮಸ್ಯೆ ಎದುರಿಸಬೇಕಾಯಿತು.

2007: ಭಾರತ-ಅಮೆರಿಕ ನಾಗರಿಕ ಪರಮಾಣು ಸಹಕಾರ ಒಪ್ಪಂದವನ್ನು ವಿರೋಧಿಸುತ್ತಿರುವ ದೇಶದ ಸಂಸದರನ್ನು `ರುಂಡವಿಲ್ಲದ ಕೋಳಿಗಳು' ಎಂದು ಟೀಕಿಸಿ ತೀವ್ರ ವಿವಾದಕ್ಕೆ ಕಾರಣರಾಗಿದ್ದ ಅಮೆರಿಕದಲ್ಲಿನ ಭಾರತೀಯ ರಾಯಭಾರಿ ರೊನೆನ್ ಸೇನ್ ರಾಜ್ಯಸಭೆಯ ಉಪ ಸಭಾಪತಿ ಕೆ. ರೆಹಮಾನ್ ನೇತೃತ್ವದ ಹಕ್ಕುಬಾಧ್ಯತಾ ಸಮಿತಿಯ ಮುಂದೆ ಹಾಜರಾಗಿ ಬೇಷರತ್ ಕ್ಷಮೆಯಾಚನೆ ಮಾಡಿದರು. ಇಂತಹ ಹೇಳಿಕೆ ನೀಡುವ ಮೂಲಕ ಸೇನ್ ಅನುಚಿತವಾಗಿ ವರ್ತಿಸಿದ್ದಾರೆ ಎಂದು ತೀವ್ರ ಆಕ್ಷೇಪ ವ್ಯಕ್ತಪಡಿಸಿದ್ದ ಸಂಸದರು, ತತ್ ಕ್ಷಣವೇ ಅವರನ್ನು ಸ್ವದೇಶಕ್ಕೆ ವಾಪಸ್ ಕರೆಸಿಕೊಳ್ಳಬೇಕು ಮತ್ತು ಸಂಸತ್ತಿನಿಂದ ಛೀಮಾರಿ ಹಾಕಬೇಕು ಎಂದು ಸರ್ಕಾರವನ್ನು ಒತ್ತಾಯಿಸಿದ್ದರು. ಈ ಹಿನ್ನೆಲೆಯಲ್ಲಿ ಸೇನ್ ಲೋಕಸಭೆಯ ಹಕ್ಕುಬಾಧ್ಯತಾ ಸಮಿತಿ ಮುಂದೆ ಹಾಜರಾಗಿ ಕ್ಷಮೆ ಯಾಚಿಸಿದರು.

2006: ಬೆಂಗಳೂರು- ಮೈಸೂರು ಕಾರಿಡಾರ್ ಯೋಜನೆ ಸಂಬಂಧ ನಡೆದ ಸುದೀರ್ಘ ಕಾನೂನು ಸಮರದಲ್ಲಿ ನೈಸ್ ಕಂಪೆನಿ ವಿಜಯ ಗಳಿಸಿತು. ನ್ಯಾಯಮೂರ್ತಿಗಳಾದ ಕೆ.ಜಿ. ಬಾಲಕೃಷ್ಣ, ಎಸ್.ಬಿ. ಸಿನ್ಹ ಮತ್ತು ದಲ್ವೀರ್ ಭಂಡಾರಿ ಅವರನ್ನು ಒಳಗೊಂಡ ಸುಪ್ರೀಂಕೋರ್ಟ್ ಪೀಠವು ವಿವಾದಕ್ಕೆ ಸಂಬಂಧಿಸಿದಂತೆ ಹೈಕೋರ್ಟ್ ನೀಡಿದ್ದ ಆದೇಶ ಮರುಪರಿಶೀಲನೆ ಕೋರಿ ರಾಜ್ಯ ಸರ್ಕಾರ ಸಲ್ಲಿಸಿದ್ದ ಅರ್ಜಿಯನ್ನು ವಜಾ ಮಾಡಿ, ತನ್ಮೂಲಕ ಹೈಕೋರ್ಟ್ ತೀರ್ಪನ್ನು ಮತ್ತೊಮ್ಮೆ ಎತ್ತಿ ಹಿಡಿಯಿತು. ಇದರಿಂದಾಗಿ ಬೆಂಗಳೂರು- ಮೈಸೂರು ನಡುವಣ 111 ಕಿ.ಮೀ. ಉದ್ದದ ಎಕ್ಸ್ಪ್ರೆಸ್ ಮಾರ್ಗ ನಿರ್ಮಾಣ ಯೋಜನೆಗೆ ಇದ್ದ ಕಾನೂನು ಅಡಚಣೆ ನಿವಾರಣೆ ಗೊಂಡಂತಾಯಿತು.

2006: ಡಾ. ಸೀ. ಹೊಸಬೆಟ್ಟು ಎಂದೇ ಖ್ಯಾತರಾಗಿದ್ದ ವಾಗ್ಮಿ, ಚಿಂತಕ, ಕವಿ, ಅಂಕಣಕಾರ ಡಾ. ಸೀತಾರಾಮಾಚಾರ್ಯ (74) ಸುರತ್ಕಲ್ಲಿನ ತಮ್ಮ ನಿವಾಸದಲ್ಲಿ ನಿಧನರಾದರು. ಸುರತ್ಕಲ್ ಗೋವಿಂದದಾಸ್ ಕಾಲೇಜಿನ ಕನ್ನಡ ವಿಭಾಗದ ಮುಖ್ಯಸ್ಥರಾಗಿ, ಕಾಲೇಜಿನ ಪ್ರಾಂಶುಪಾಲರಾಗಿ ಸೇವೆ ಸಲ್ಲಿಸಿದ್ದ ಸೀತಾರಾಮಾಚಾರ್ಯ ಅದಕ್ಕೂ ಮೊದಲು ಪ್ರಾಥಮಿಕ ಶಾಲಾ ಶಿಕ್ಷಕ, ಮುಖ್ಯೋಪಾಧ್ಯಾಯರಾಗಿ, ಪ್ರೌಢಶಾಲಾ ಶಿಕ್ಷಕರಾಗಿ ಮುಖ್ಯೋಪಾಧ್ಯಾಯರಾಗಿ ಸೇವೆ ಸಲ್ಲಿಸಿದ್ದರು.

2005: ಜಮ್ಮು ಮತ್ತು ಕಾಶ್ಮೀರದ ಮುಖ್ಯಮಂತ್ರಿಯಾಗಿ ಕಾಂಗ್ರೆಸ್ ಧುರೀಣ ಗುಲಾಂ ನಬಿ ಆಜಾದ್ ಪ್ರಮಾಣ ವಚನ ಸ್ವೀಕರಿಸಿದರು.

1999: ಭಾರತೀಯ ಪೌರತ್ವದಿಂದ ಸೋನಿಯಾ ಗಾಂಧಿ ಹೆಸರನ್ನು ತೆಗೆದುಹಾಕುವಂತೆ ಕೋರಿ ಸಲ್ಲಿಸಲಾಗಿದ್ದ ಅರ್ಜಿಯನ್ನು ನವದೆಹಲಿಯ ಹೈಕೋರ್ಟ್ ತಳ್ಳಿಹಾಕಿತು.

1975: ಸಾಹಿತಿ ಚಂದ್ರಕಲಾ ಎಸ್.ಎನ್. ಜನನ.

1965: ಭಾರತದ ಚಿತ್ರನಟ ಶಾರುಖ್ ಖಾನ್ ಜನ್ಮದಿನ.

1963: ದಕ್ಷಿಣ ವಿಯೆಟ್ನಾಂ ಅಧ್ಯಕ್ಷ ನೊ ಡಿಹ್ನ್ ಡೀಮ್ ಅವರನ್ನು ಸೇನಾ ದಂಗೆಯೊಂದರಲ್ಲಿ ಕೊಲೆಗೈಯಲಾಯಿತು.

1955: ಸಾಹಿತಿ ಓಂಕಾರಯ್ಯ ತವನಿಧಿ ಜನನ.

1951: ಜಾನಪದ ತಜ್ಞ, ಸಂಶೋಧಕ ವೀರಣ್ಣ ದಂಡೆ ಅವರು ಶರಣಪ್ಪ ದಂಡೆ- ಬಂಡಮ್ಮ ದಂಪತಿಯ ಮಗನಾಗಿ ಗುಲ್ಬರ್ಗ ಜಿಲ್ಲೆಯ ಅಳಂದ ತಾಲ್ಲೂಕಿನ ಸಲಗರ ಗ್ರಾಮದಲ್ಲಿ ಜನಿಸಿದರು.

1950: ಐರಿಷ್ ನಾಟಕಕಾರ ಜಾರ್ಜ್ ಬರ್ನಾರ್ಡ್ ಶಾ ಅವರು ಹೆರ್ಟ್ ಫೋರ್ಡ್ ಶೈರಿನ ಅಯೊಟ್ ಸೇಂಟ್ ಲಾರೆನ್ಸಿನಲ್ಲಿ ತಮ್ಮ 94ನೇ ವಯಸ್ಸಿನಲ್ಲಿ ಮೃತರಾದರು.

1930: ಡ್ಯುಪಾಂಟ್ ಕಂಪೆನಿಯು ಮೊತ್ತ ಮೊದಲ ಸಿಂಥೆಟಿಕ್ ರಬ್ಬರ್ ತಯಾರಿಯನ್ನು ಪ್ರಕಟಿಸಿತು. ಕಂಪೆನಿಯು ಅದನ್ನು `ಡ್ಯುಪ್ರೇನ್' ಎಂದು ಹೆಸರಿಸಿತು. ಇದೇ ದಿನ ಹೈಲೆ ಸೆಲೆಸೀ ಇಥಿಯೋಪಿಯಾದ ಚಕ್ರವರ್ತಿಯಾದರು.

1917: ಪ್ಯಾಲೆಸ್ಟೈನಿನ ಯಹೂದ್ಯರಿಗೆ `ರಾಷ್ಟ್ರೀಯ ನೆಲೆ'ಗೆ ಬೆಂಬಲ ವ್ಯಕ್ತಪಡಿಸುವ `ಬಾಲ್ ಫೋರ್ ಘೋಷಣೆ'ಗೆ ಬ್ರಿಟಿಷ್ ವಿದೇಶಾಂಗ ಕಾರ್ಯದರ್ಶಿ ಆರ್ಥರ್ ಬಾಲ್ ಫೋರ್ ಬೆಂಬಲ ವ್ಯಕ್ತಪಡಿಸಿದರು.

1885: ಮೊದಲ ಮರಾಠಿ ಸಂಗೀತ ನಾಟಕಕಾರ ಬಲವಂತ ಪಾಂಡುರಂಗ ಕಿರ್ಲೋಸ್ಕರ್ (ಅಣ್ಣಾಸಾಹೇಬ್) ನಿಧನ.

1871: ಗ್ರೇಟ್ ಬ್ರಿಟನ್ನಿನ ಎಲ್ಲ ಸೆರೆಯಾಳುಗಳ ಛಾಯಾಚಿತ್ರ ತೆಗೆಯಲಾಯಿತು. ಇದರೊಂದಿಗೆ `ರೋಗ್ಸ್ ಗ್ಯಾಲರಿ' ಆರಂಭವಾಯಿತು.

1774: ಭಾರತದಲ್ಲಿ ಬ್ರಿಟಿಷ್ ಆಡಳಿತ ಸ್ಥಾಪನೆಯಲ್ಲಿ ಪ್ರಮುಖ ಪಾತ್ರ ವಹಿಸಿದವರಲ್ಲಿ ಒಬ್ಬರಾಗಿದ್ದ ಲಾರ್ಡ್ ರಾಬರ್ಟ್ ಕ್ಲೈವ್ ತನ್ನ 49ನೇ ವಯಸ್ಸಿನಲ್ಲಿ ಇಂಗ್ಲೆಂಡಿನಲ್ಲಿ ಆತ್ಮಹತ್ಯೆ ಮಾಡಿಕೊಂಡು ಅಸು ನೀಗಿದ. ಭಾರತದ ಕಂಪೆನಿ ವ್ಯವಹಾರದಲ್ಲಿ ್ಲಅವ್ಯವಹಾರ ನಡೆಸಿದ ಆರೋಪಕ್ಕೆ ಗುರಿಯಾಗಿದ್ದ ಕ್ಲೈವ್, ಇದೇ ಕಾರಣಕ್ಕೆ ಹೆದರಿ ಆತ್ಮಹತ್ಯೆ ಮಾಡಿಕೊಂಡ ಎನ್ನಲಾಗಿದೆ.

1607: ಹಾರ್ವರ್ಡ್ ಕಾಲೇಜು ಸ್ಥಾಪನೆಗೆ ಮೂಲಕಾರಣನಾದ ಜಾನ್ ಹಾರ್ವರ್ಡ್ (1607-38) ಜನ್ಮದಿನ.

Sunday, November 1, 2009

ಇಂದಿನ ಇತಿಹಾಸ History Today ನವೆಂಬರ್ 01

ಇಂದಿನ ಇತಿಹಾಸ

ನವೆಂಬರ್ 01

ಇದು ಕರ್ನಾಟಕ ರಾಜ್ಯವು ಉದಯಿಸಿದ ದಿನ. 1956 ರಲ್ಲಿ ಈ ದಿನ ಭಾಷಾವಾರು ರಾಜ್ಯಗಳ ಪುನರ್ ವಿಂಗಡಣೆಯಾಗಿ ಕರ್ನಾಟಕ (ಆಗ ಮೈಸೂರು ರಾಜ್ಯ) ಸೇರಿದಂತೆ ಹೊಸ ಭಾಷಾವಾರು ರಾಜ್ಯಗಳು ಅಸ್ತಿತ್ವಕ್ಕೆ ಬಂದವು. ಕರ್ನಾಟಕದ ಜೊತೆಗೆ ಅಸ್ತಿತ್ವಕ್ಕೆ ಬಂದ ಇತರ ರಾಜ್ಯಗಳು: ಮದ್ರಾಸ್, ಕೇರಳ, ದ್ವಿಭಾಷಾ ಬಾಂಬೆ, ಮಧ್ಯ ಪ್ರದೇಶ, ರಾಜಸ್ಥಾನ ಮತ್ತು ಪಂಜಾಬ್. ಮೊದಲೇ ಸ್ಥಾಪನೆಗೊಂಡಿದ್ದ ಆಂಧ್ರಪ್ರದೇಶ ರಾಜ್ಯವು ವಿಸ್ತರಣೆಗೊಂಡು ಹೈದರಾಬಾದ್ ಅದರ ರಾಜಧಾನಿಯಾಯಿತು. ರಾಷ್ಟ್ರಾಧ್ಯಕ್ಷ ರಾಜೇಂದ್ರ ಪ್ರಸಾದ್ ಅವರು ಈ ದಿನ ಮಧ್ಯಾಹ್ನ ಶುಭ ಮುಹೂರ್ತದಲ್ಲಿ ಕರ್ನಾಟಕ ರಾಜ್ಯದ ಆರಂಭೋತ್ಸವವನ್ನು ನೆರವೇರಿಸಿ `ಒಂದುಗೂಡಿರುವ ಜನತೆಗೆ ಕಲ್ಯಾಣವಾಗಲಿ' ಎಂದು ಹಾರೈಸಿದರು. 1973ರಲ್ಲಿಮೈಸೂರು ರಾಜ್ಯಕ್ಕೆ `ಕರ್ನಾಟಕ' ಎಂಬುದಾಗಿ ಪುನರ್ ನಾಮಕರಣ ಮಾಡಲಾಯಿತು.

2008: ಮಂಗಳೂರು ನಗರದ ಜಿಲ್ಲಾ ಕಾರಾಗೃಹಕ್ಕೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಸತೀಶ್ ಕುಮಾರ್ ನೇತೃತ್ವದ ಪೊಲೀಸ್ ಪಡೆ ಈದಿನ ಬೆಳಿಗ್ಗೆ ಏಕಾಏಕಿ ದಾಳಿ ನಡೆಸಿ ಕೈದಿಗಳ ವಶದಲ್ಲಿದ್ದ ಮೊಬೈಲ್, ಸಿಮ್ ಕಾರ್ಡ್, ಮಾರಕಾಯುಧ ಮತ್ತು ಗಾಂಜಾ ವಶಪಡಿಸಿಕೊಂಡಿತು. ಕೆಲವು ದಿನಗಳಿಂದ ಜಿಲ್ಲಾ ಕಾರಾಗೃಹದಲ್ಲಿ ಕೈದಿಗಳ ಮಧ್ಯೆ ಹೊಡೆದಾಟ ನಡೆದಿತ್ತು. ಹಿಂದಿನ ದಿನ ಜೈಲು ವಾರ್ಡನ್ ಒಬ್ಬರ ಮೇಲೆ ಕೈದಿಗಳು ಹಲ್ಲೆ ಯತ್ನ ನಡೆಸಿದ್ದರು. ಈ ಹಿನ್ನೆಲೆಯಲ್ಲಿ ಜಿಲ್ಲಾಧಿಕಾರಿ ಎಂ. ಮಹೇಶ್ವರ ರಾವ್ ಅವರ ನಿರ್ದೇಶನದಂತೆ ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ದಿಲೀಪ್ ಕುಮಾರ್ ಸಹಿತ ಉನ್ನತ ಪೊಲೀಸ್ ಅಧಿಕಾರಿಗಳು, ನಗರ ಠಾಣೆಗಳ ಪೊಲೀಸ್ ಇನ್ಸ್ಪೆಕ್ಟರುಗಳು ಮತ್ತು ಪೊಲೀಸ್ ಸಿಬ್ಬಂದಿ ಜತೆ ಸತೀಶ್ ಕುಮಾರ್ ಅವರು ದಿಢೀರ್ ದಾಳಿ ನಡೆಸಿದರು.

2008: ಮಾಜಿ ವಿಶ್ವ ಸುಂದರಿ ಮತ್ತು ಬಾಲಿವುಡ್ ನಟಿ ಯುಕ್ತಾಮುಖಿ ಅವರ ವಿವಾಹ ಕಾರ್ಯಕ್ರಮದ ವಿಧಿಗಳು ಈದಿನ ನಾಗಪುರದಲ್ಲಿ ಮೆಹಂದಿ ಕಾರ್ಯಕ್ರಮದೊಂದಿಗೆ ಆರಂಭವಾದವು.

2008: ಶ್ರೀಲಂಕಾದ ಉತ್ತರ ಕರಾವಳಿಯಲ್ಲಿ ರಕ್ಷಣಾ ಪಡೆಗಳು ಎಲ್ಟಿಟಿಇಯನ್ನು ಬಗ್ಗುಬಡಿಯುವ ಕಾರ್ಯಾಚರಣೆ ಮುಂದುವರೆಸಿತು, ಈದಿನ ಬೆಳಗ್ಗೆ ನೌಕಾಪಡೆ ಸಿಬ್ಬಂದಿ 14 ಮಂದಿ ನೌಕಾದಳದ ಬಂಡುಕೋರರ ಸಹಿತ 29 ಮಂದಿ ಬಂಡುಕೋರರನ್ನು ಕೊಂದುಹಾಕಿತು. ಕಾಳಗದಲ್ಲಿ ಬಂಡುಕೋರರಿಗೆ ಸೇರಿದ 6 ದೋಣಿ ಧ್ವಂಸಗೊಂಡವು. ಲಂಕಾ ನೌಕಾದಳಕ್ಕೆ ಬೆಂಗಾವಲಾಗಿ ವಾಯುಪಡೆ ಕಾರ್ಯನಿರ್ವಹಿಸಿತ್ತು. ನಾಗರಕೊವಿಲ್ ಹಾಗೂ ಪಾಯಿಂಟ್ ಪೆಡ್ರೋ ಬಳಿ ಕರ್ತವ್ಯದಲ್ಲಿದ್ದ ಸೇನಾ ಸಿಬ್ಬಂದಿ ಮೇಲೆ ಬಂಡುಕೋರರ ದಾಳಿ ಪ್ರಯತ್ನವನ್ನು ಲಂಕಾ ನೌಕಾಪಡೆ ವಿಫಲಗೊಳಿಸಿ ಬಳಿಕ ನಡೆಸಿದ ಪ್ರತಿದಾಳಿಯಲ್ಲಿ ಉಗ್ರರ ಈ ಸಾವು ನೋವು ಸಂಭವಿಸಿತು ಎಂದು ನೌಕಾಪಡೆ ಮೂಲಗಳು ತಿಳಿಸಿದವು.

2008: ಚಂದ್ರನ ಮೇಲೆ ಮೊದಲು ಕಾಲಿರಿಸಿದ ಹೆಗ್ಗಳಿಕೆಯ ಮಾಜಿ ಗಗನಯಾತ್ರಿ ನೀಲ್ ಆರ್ಮ್ಸ್ಟ್ರಾಂಗ್ ಅವರು ತಮ್ಮ ಗಗನಯಾತ್ರೆಗೆ ಸಂಬಂಧಿಸಿದ ವಿವರಗಳನ್ನು ಪರ್ಡ್ಯೂ ವಿಶ್ವವಿದ್ಯಾಲಯಕ್ಕೆ ನೀಡಲು ಒಪ್ಪಿಕೊಂಡು ಮಾಹಿತಿ ನೀಡಲು ಮುಂದಾದರು. ವಿವಿಗೆ ಈಗಾಗಲೇ ಈ ವಿವರಗಳು ಹರಿದುಬರುತ್ತಿದ್ದು, ಇದು ವಿದ್ಯಾರ್ಥಿಗಳು ಹಾಗೂ ಸಂಶೋಧಕರಿಗೆ ಪ್ರೇರಣೆಯಾಗಲಿದೆ ಎಂದು ಪರ್ಡ್ಯೂ ವಿವಿ ಲೈಬ್ರರಿ ಸೈನ್ಸ್ ಸಹಾಯಕ ಪ್ರಾಧ್ಯಾಪಕರಾದ ಸೆಮಿ ಮೊರಿಸ್ ಹೇಳಿದರು. ಆರ್ಮಸ್ಟ್ರಾಂಗ್ ಅವರು 1955ರಲ್ಲಿ ಪರ್ಡ್ಯೂ ವಿವಿಯಿಂದ ಎರೊನಾಟಿಕಲ್ ಎಂಜಿನಿಯರಿಂಗಿನಲ್ಲಿ ಪದವಿ ಪಡೆದಿದ್ದರು.

2008: ವಿವಾಹ ಬಂಧನದಿಂದ ಬಿಡುಗಡೆ ಪಡೆದ ನಿರುದ್ಯೋಗಿ ಪತಿಗೆ ದುಡಿಯುವ ಪತ್ನಿ ಜೀವನಾಂಶ ನೀಡಬೇಕು ಎಂದು ಚಂಡಿಗಢದ ಜಿಲ್ಲಾ ನ್ಯಾಯಾಲಯ ಆದೇಶಿಸಿತು. ಪತ್ನಿಯಿಂದ ಜೀವನಾಂಶ ಕೊಡಿಸುವಂತೆ 40 ವರ್ಷದ ನಿರುದ್ಯೋಗಿ ಗುರ್ಮೀತ್ ಸಿಂಗ್ ಸಿಂಗ್ ನ್ಯಾಯಾಲಯದ ಮೆಟ್ಟಿಲು ಏರಿದ್ದರು. ಈ ಬಗ್ಗೆ ವಿಚಾರಣೆ ನಡೆಸಿದ ಜಿಲ್ಲಾ ಹೆಚ್ಚುವರಿ ಸೆಷನ್ಸ್ ನ್ಯಾಯಾಧೀಶ ಆ.ಕೆ. ಸೋಂಧಿ ಅವರು ಪತಿಗೆ ಮಾಸಿಕ ರೂ 2000 ನೀಡುವಂತೆ ಹಾಗೂ ಆತನ ನ್ಯಾಯಾಲಯ ವೆಚ್ಚ 3000 ರೂಪಾಯಿಗಳನ್ನೂ ಭರಿಸುವಂತೆ ಪತ್ನಿಗೆ ಆದೇಶಿಸಿ ತೀರ್ಪು ನೀಡಿದರು. ಪ್ರೇಮ ವಿವಾಹದ ಮೂಲಕ ದಾಂಪತ್ಯ ಆರಂಭಿಸಿದ ಇವರಿಗೆ ದಾಂಪತ್ಯದಲ್ಲಿ ವಿರಸ ಮೂಡಿದ ಕಾರಣ ಪತ್ನಿ ವಿಚ್ಛೇದನ ಕೋರಿ ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸಿದ್ದರು. ಇದಕ್ಕೂ ಮುನ್ನ ಸಿಂಗ್ ತಾನು ನಿರುದ್ಯೋಗಿಯಾಗಿರುವ ಕಾರಣ ದುಡಿಯುತ್ತಿರುವ ತನ್ನ ಪತ್ನಿಯಿಂದ ಜೀವನಾಂಶ ಕೊಡಿಸುವಂತೆ ಕೋರಿದ್ದರು.

2008: ಮಹಾರಾಷ್ಟ್ರದ ರಾಯಗಢದಲ್ಲಿ ಬಸ್ಸೊಂದು ಕಮರಿಗೆ ಉರುಳಿದ ಪರಿಣಾಮ 15 ಪ್ರಯಾಣಿಕರು ಸಾವನ್ನಪ್ಪಿ, 38 ಜನರು ಗಾಯಗೊಂಡರು. ಪಶ್ಚಿಮ ಘಟ್ಟದ ಘೋನ್ಸೆ ಕಣಿವೆ ಪ್ರದೇಶದಲ್ಲಿ ಬಸ್ ಉರುಳಿತು. ಮಹಾರಾಷ್ಟ್ರ ರಸ್ತೆ ಸಾರಿಗೆ ಸಂಸ್ಥೆಗೆ ಸೇರಿದ ಈ ಬಸ್ ಥಾಣೆ ಮತ್ತು ಮುಂಬೈ ಮಧ್ಯೆ ಪ್ರಯಾಣಸುತ್ತಿತ್ತು.

2008: ಮಧ್ಯಪ್ರದೇಶದಲ್ಲಿ ವಿಧಾನಸಭಾ ಚುನಾವಣೆ ಹತ್ತಿರವಾಗುತ್ತಿದ್ದಂತೆಯೇ ಬುಡಕಟ್ಟು ಜನರನ್ನು ಗಮನದಲ್ಲಿರಿಸಿದ `ಆದಿಜನ ಮುಕ್ತಿ ಸೇನೆ' (ಎ ಎಂ ಎಸ್) ಎಂಬ ರಾಜಕೀಯ ಪಕ್ಷ ರಚನೆಯಾಯಿತು. ನಾರಾಯಣ ಸಿಂಗ್ ಎಂಬವರ ನೇತೃತ್ವದಲ್ಲಿ ಇದು ರಚನೆಗೊಂಡಿತು.

2008: ಅಪಘಾತ, ಅನಾರೋಗ್ಯ, ಆಕಸ್ಮಿಕ ದುರಂತ ಘಟನೆಗಳು ಸಂಭವಿಸಿದಾಗ ತುರ್ತು ವೈದ್ಯಕೀಯ ಸೇವೆ ಒದಗಿಸುವ `ಆರೋಗ್ಯ ಕವಚ- 108' ಯೋಜನೆಗೆ ಮಾಜಿ ರಾಷ್ಟ್ರಪತಿ ಎ.ಪಿ.ಜೆ.ಅಬ್ದುಲ್ ಕಲಾಂ ಬೆಂಗಳೂರಿನಲ್ಲಿ ಚಾಲನೆ ನೀಡಿದರು. ಆಂಧ್ರಪ್ರದೇಶ ಮೂಲದ ತುರ್ತು ನಿರ್ವಹಣೆ ಮತ್ತು ಸಂಶೋಧನಾ ಸಂಸ್ಥೆಯ (ಇ ಎಂ ಆರ್ ಎಸ್) ಸಹಭಾಗಿತ್ವದೊಂದಿಗೆ ಕರ್ನಾಟಕ ಸರ್ಕಾರ ಈ ಯೋಜನೆಯನ್ನು ಜಾರಿಗೊಳಿಸಿತು. ಗುಜರಾತ್, ಆಂಧ್ರಪ್ರದೇಶ, ಉತ್ತರಖಂಡ, ಗೋವಾ, ತಮಿಳುನಾಡು ಮೊದಲಾದ ರಾಜ್ಯಗಳಲ್ಲಿ ಈಗಾಗಲೇ ಈ ಯೋಜನೆ ಜಾರಿಯಲ್ಲಿತ್ತು. ತುರ್ತು ಸ್ಥಿತಿಯಲ್ಲಿ ಯಾವುದೇ ಸ್ಥಿರ ದೂರವಾಣಿ ಅಥವಾ ಮೊಬೈಲಿನಿಂದ 108 ಸಂಖ್ಯೆಗೆ (ಹಿಂದೆ ಯಾವುದೇ ಸಂಖ್ಯೆ ಸೇರಿಸುವಂತಿಲ್ಲ) ಕರೆ ಮಾಡಿದರೆ ನಗರ ಪ್ರದೇಶದಲ್ಲಿ 20 ನಿಮಿಷದ ಒಳಗೆ, ಗ್ರಾಮೀಣ ಪ್ರದೇಶದಲ್ಲಿ 30 ನಿಮಿಷದೊಳಗೆ ಸುಸಜ್ಜಿತ ಅಂಬುಲೆನ್ಸ್ ಕರೆ ಮಾಡಿದ ಸ್ಥಳಕ್ಕೆ ಬರುತ್ತದೆ. ಅಂಬುಲೆನ್ಸಿನಲ್ಲಿ ಪ್ರಥಮ ಚಿಕಿತ್ಸೆಯಂತಹ ಅಗತ್ಯ ಔಷಧೋಪಾಚಾರ ನೀಡಿ ಆಸ್ಪತ್ರೆಗೆ ಸೇರಿಸಲಾಗುವುದು. ಈ ಎಲ್ಲ ಸೇವೆಗಳು ಉಚಿತ. ವ್ಯಕ್ತಿ ಸುಸ್ಥಿತಿಗೆ ಬರುವ ತನಕದ ಮೊದಲ 24 ಗಂಟೆಗಳವರೆಗೆ ಆಸ್ಪತ್ರೆಗಳಿಗೆ ದಾಖಲು ಮಾಡುವುದು ಸಹ ಉಚಿತ. ಸುಸಜ್ಜಿತ ಅಂಬುಲೆನ್ಸುಗಳನ್ನು ಬಿಡುಗಡೆ ಮಾಡಿ ಮಾತನಾಡಿದ ಕಲಾಂ, `ಲಕ್ಷಾಂತರ ಜನರ ಜೀವ ಉಳಿಸುವ ಈ ಯೋಜನೆ ಕರ್ನಾಟಕದಲ್ಲಿ ಜಾರಿಯಾಗುತ್ತಿದೆ. ಶಾಸ್ತ್ರೀಯ ಸ್ಥಾನಮಾನ ಘೋಷಣೆಯ ಹಿನ್ನೆಲೆಯಲ್ಲಿ ರಾಜ್ಯೋತ್ಸವದ ದಿನದಂದು ಆರೋಗ್ಯ ಕವಚ ಯೋಜನೆ ಆರಂಭವಾಗುತ್ತಿರುವುದು ಕರ್ನಾಟಕದ ಪಾಲಿಗೆ ಮಹತ್ವ್ದದಾಗಿದೆ' ಎಂದು ಹೇಳಿದರು.

2008: ಉಕ್ಕು ವಲಯದ `ಆರ್ಸೆಲರ್ ಮಿತ್ತಲ್'ನಲ್ಲಿ ತಾವು ಹೊಂದಿರುವ ಷೇರುಗಳಲ್ಲಿ 50 ಶತಕೋಟಿ ಅಮೆರಿಕ ಡಾಲರ್ ಇಳಿಕೆಯ ನಷ್ಟವನ್ನು ಅನಿವಾಸಿ ಭಾರತೀಯ ಉಕ್ಕು ಉದ್ಯಮಿ ಲಕ್ಷ್ಮಿ ಮಿತ್ತಲ್ ಅನುಭವಿಸಿದರು. ಆರ್ಸೆಲರ್ ಮಿತ್ತಲ್ನಲ್ಲಿ ಶೇ 45 ರಷ್ಟು ಷೇರು ಹೊಂದಿರುವ ಅನಿವಾಸಿ ಭಾರತೀಯ ಪ್ರಭಾವಿ ಉದ್ಯಮಿ ಲಕ್ಷ್ಮಿಮಿತ್ತಲ್, ತಮ್ಮ ವೈಯಕ್ತಿಕ ಷೇರು ಮೌಲ್ಯದಲ್ಲಿ ಜೂನಿನಲ್ಲಿನ 66 ಶತಕೋಟಿ ಅಮೆರಿಕ ಡಾಲರಿನಿಂದ 16 ಶತಕೋಟಿ ಅಮೆರಿಕ ಡಾಲರಿಗೆೆ ಕುಸಿತ ಕಂಡರು ಎಂದು `ಸ್ಟೀಲ್ ಉದ್ಯಮದ ಮೇಲೆ ಜಾಗತಿಕ ಹಣಕಾಸು ಬಿಕ್ಕಟ್ಟಿನ ಪರಿಣಾಮ' ಎಂಬ ವಿಶ್ಲೇಷಣಾ ವರದಿಯಲ್ಲಿ `ದಿ ಫೈನಾನ್ಶಿಯಲ್ ಟೈಮ್ಸ್' ಹೇಳಿತು.

2007: ಸುವರ್ಣ ಕರ್ನಾಟಕ ರಾಜ್ಯೋತ್ಸವದ ಪ್ರಯುಕ್ತ ಬೆಳಗಾವಿಯಿಂದ 21 ಚಿಣ್ಣರು ಸ್ಕೇಟಿಂಗ್ ಮೂಲಕ 530 ಕಿ.ಮೀ. ಕ್ರಮಿಸಿ ರಾಜಧಾನಿಯಲ್ಲಿರುವ ವಿಧಾನಸೌಧಕ್ಕೆ ಬಂದು ರಾಜ್ಯಪಾಲ ರಾಮೇಶ್ವರ ಠಾಕೂರ್ ಅವರನ್ನು ಭೇಟಿ ಮಾಡಿದರು. 530 ಕಿ.ಮೀ. ದೂರವನ್ನು ಈ ಚಿಣ್ಣರು ನಾಲ್ಕು ದಿನಗಳಲ್ಲಿ ಕ್ರಮಿಸಿದರು. ಬೆಳಗಾವಿಯ ವಿವಿಧ ಶಾಲೆಗಳ ಈ ಚಿಣ್ಣರಲ್ಲಿ ಅತ್ಯಂತ ಕಿರಿಯ ಮಗುವಿನ ವಯಸ್ಸು 5 ವರ್ಷವಾದರೆ, ಗರಿಷ್ಠ ವಯಸ್ಸು 14 ವರ್ಷ. ಕನ್ನಡ ಧ್ವಜದ ಬಣ್ಣದ ವೇಷ ಧರಿಸಿದ್ದ ಮಕ್ಕಳೂ ರಾಜ್ಯೋತ್ಸವ ಪ್ರಯುಕ್ತ ರಾಜ್ಯಪಾಲರು ಬ್ಯಾಂಕ್ವೆಟ್ ಹಾಲಿನಲ್ಲಿ ಏರ್ಪಡಿಸಿದ್ದ ಸಂತೋಷ ಕೂಟದಲ್ಲಿ ಕೂಡಾ ಪಾಲ್ಗೊಂಡರು. ಬೆಳಗಾವಿಯ ರೋಲರ್ ಸ್ಕೇಟಿಂಗ್ ಅಕಾಡೆಮಿ ಆಯೋಜಿಸಿದ್ದ ಈ 'ಚಿಣ್ಣರ ಸ್ಕೇಟಿಂಗ್ ಓಟ'ಕ್ಕೆ ಅಲ್ಲಿನ ರಾಣಿ ಚೆನ್ನಮ್ಮ ಪ್ರತಿಮೆ ಬಳಿ ಅಕ್ಟೋಬರ್ 28ರಂದು ಚಾಲನೆ ನೀಡಲಾಗಿತ್ತು. ಈ ಮಕ್ಕಳ ತಂಡ ಧಾರವಾಡ, ಹುಬ್ಬಳ್ಳಿ, ಹಾವೇರಿ, ರಾಣೆಬೆನ್ನೂರು, ದಾವಣಗೆರೆ, ಚಿತ್ರದುರ್ಗ, ಸಿರಾ, ತುಮಕೂರು, ನೆಲಮಂಗಲ ಮಾರ್ಗವಾಗಿ ಬೆಂಗಳೂರಿಗೆ ಬಂದು ತಲುಪಿತು.

2007: ಅನಾರೋಗ್ಯದಿಂದ ಬಳಲುತ್ತಿದ್ದ ಗುಬ್ಬಿ ವೀರಣ್ಣ ಪ್ರಶಸ್ತಿ ಪುರಸ್ಕೃತ ಹಿರಿಯ ನಾಟಕಕಾರ ಹಾಗೂ ನಿರ್ದೇಶಕ ಪುಂಡಲೀಕಪ್ಪ ಬಸನಗೌಡ ಧುತ್ತರಗಿ (78) ಮಧ್ಯಾಹ್ನ ಕೆರೂಡಿ ಆಸ್ಪತ್ರೆಯಲ್ಲಿ ನಿಧನರಾದರು. ಪುಂಡಲೀಕ ಬಸವನಗೌಡ ಧುತ್ತರಗಿ ವೃತ್ತಿರಂಗಭೂಮಿಯ ಪ್ರಖ್ಯಾತ ನಾಟಕಕಾರರು. ನಟ, ನಾಟಕ ಕಂಪನಿಯ ಮಾಲೀಕರು ಆಗಿದ್ದ ಇವರು ರಚಿಸಿದ ನಾಟಕಗಳನ್ನು ಬಹುತೇಕ ಎಲ್ಲ ನಾಟಕ ಕಂಪೆನಿಗಳೂ ಪ್ರಯೋಗಿಸಿವೆ. ಹಾಗಾಗಿ ಐದು ದಶಕಗಳ ಕಾಲ ಕನ್ನಡ ವೃತ್ತಿ ರಂಗಭೂಮಿಯ ಅವಿಭಾಜ್ಯ ಅಂಗವಾಗಿದ್ದರು. ಧುತ್ತರಗಿ ರಚಿಸಿದ 'ಸಂಪತ್ತಿಗೆ ಸವಾಲು' ವರ್ಗ ಸಂಘರ್ಷ ಕುರಿತ ಮೊದಲ ನಾಟಕ. ಡಾ. ರಾಜಕುಮಾರ್ ನಾಯಕನ ಪಾತ್ರದಲ್ಲಿ ಅಭಿನಯಿಸಿದ ಇದೇ ಹೆಸರಿನ ಚಲನಚಿತ್ರ ಭಾರಿ ಜನಪ್ರಿಯ ಚಿತ್ರವಾಯಿತಲ್ಲದೆ, ತಮಿಳು, ತೆಲುಗು, ಮಲೆಯಾಳಿ ಭಾಷೆಯಲ್ಲೂ ಚಿತ್ರೀಕರಣಗೊಂಡು 4 ಭಾಷೆಯಲ್ಲಿ ಮೂಡಿಬಂದ ಹೆಗ್ಗಳಿಕೆ ಪಡೆಯಿತು. `ಕಲ್ಪನಾ ಪ್ರಪಂಚ'ದಿಂದ ಆರಂಭಿಸಿ ಒಟ್ಟು 63 ನಾಟಕಗಳನ್ನು ರಚಿಸಿರುವ ಧುತ್ತರಗಿ ಅವರ ಮಲಮಗಳು (ಮುದುಕನ ಮದುವೆ), ತಾಯಿಕರುಳು, ಸುಖದ ಸುಪ್ಪತ್ತಿಗೆ, ಸಂಪತ್ತಿಗೆ ಸವಾಲು, ಸೊಸೆ ತಂದ ಸೌಭಾಗ್ಯ (ಚಿಕ್ಕಸೊಸೆ) ಕಿತ್ತೂರು ಚೆನ್ನಮ್ಮ, ಸಿಂಧೂರ ಲಕ್ಷ್ಮಣ, ಪುರಂದರದಾಸ ಮುಂತಾದವು ಶ್ರೇಷ್ಠ ಹಾಗೂ ಜನಪ್ರಿಯ ನಾಟಕಗಳಾಗಿದ್ದು, ವಿವಿಧ ನಾಟಕ ಕಂಪೆನಿಗಳಲ್ಲಿ ಹಾಗೂ ಗ್ರಾಮೀಣ ಹವ್ಯಾಸಿಗಳಲ್ಲಿ ಲಕ್ಷಗಟ್ಟಲೆ ಪ್ರದರ್ಶನ ಕಂಡಿವೆ. ಪತ್ನಿ ಸರೋಜಮ್ಮ ಧುತ್ತರಗಿ ವೃತ್ತಿರಂಗಭೂಮಿಯ ಜನಪ್ರಿಯ ತಾರೆ. ಪತ್ನಿಯೊಂದಿಗೆ 15 ವರ್ಷಕ್ಕಿಂತ ಹೆಚ್ಚು ಕಾಲ ನಾಟಕ ಕಂಪೆನಿಯೊಂದನ್ನು ಅವರು ನಡೆಸಿದ್ದರು. ಕರ್ನಾಟಕ ನಾಟಕ ಅಕಾಡೆಮಿ ಪ್ರಶಸ್ತಿ (1985), ರಾಜ್ಯೋತ್ಸವ ಪ್ರಶಸ್ತಿ (1996)ಗೆ ಭಾಜನರಾದ ಅವರಿಗೆ ಕನ್ನಡ ರಂಗಭೂಮಿಯ ಅತ್ಯುನ್ನತ ಪ್ರಶಸ್ತಿಯಾದ ಗುಬ್ಬಿ ವೀರಣ್ಣ ಪ್ರಶಸ್ತಿಯನ್ನು 2000ರಲ್ಲಿ ಪ್ರದಾನ ಮಾಡಲಾಗಿತ್ತು. ಪತ್ನಿ ಸರೋಜಮ್ಮನವರಿಗೆ ಪ್ರಸಕ್ತ ವರ್ಷದ ರಾಜ್ಯೋತ್ಸವ ಪ್ರಶಸ್ತಿ ಪ್ರಕಟಿಸಲಾಗಿತ್ತು. ಅವರು ಇತ್ತ ಬೆಂಗಳೂರಿನಲ್ಲಿ ಪ್ರಶಸ್ತಿ ಸ್ವೀಕರಿಸುತ್ತಿದ್ದಾಗಲೇ ಅತ್ತ ಧುತ್ತರಗಿ ಅವರು ನಿಧನರಾದುದು, ನಾಟಕಕಾರನ ಜೀವನದ ಬಹುದೊಡ್ಡ ನಾಟಕೀಯ ದುಃಖಾಂತ್ಯಕ್ಕೆ ಕನ್ನಡಿ ಹಿಡಿಯಿತು.

2007: ಮಾನವ ಭಾಷೆ ತಿಳಿದಿದ್ದ ಹೆಣ್ಣು ಚಿಂಪಾಂಜಿ ವಾಶೋಯೆ ವಾಷಿಂಗ್ಟನ್ ಸಂಶೋಧನಾ ಸಂಸ್ಥೆಯಲ್ಲಿ ಸಾವನ್ನಪ್ಪಿತು. 1965 ರಲ್ಲಿ ಹುಟ್ಟಿದ ಈ ಚಿಂಪಾಜಿ ಮಾನವ ಭಾಷೆಯನ್ನು ಮಾತನಾಡುವ, ಮೊಟ್ಟಮೊದಲ ಮಾನವೇತರ ಪ್ರಾಣಿ ಎಂದು ಹೇಳಲಾಗಿತ್ತು. ಈ ಚಿಂಪಾಂಜಿ ಮೊದಲಿಗೆ ಅಮೆರಿಕದ ಸಂಜ್ಞೆ ಭಾಷೆ ಕಲಿತಿತ್ತು. ನಂತರ 250 ಪದಗಳನ್ನು ಕಲಿತು, ನೆನಪಿನಲ್ಲಿ ಇಟ್ಟುಕೊಂಡಿತ್ತು. ಆದರೆ ಟೀಕಾಕಾರರು ಇದನ್ನು ಒಪ್ಪಿರಲಿಲ್ಲ. ಚಿಂಪಾಂಜಿಯ ಮತ್ತೊಂದು ವಿಶೇಷ ಗುಣವೆಂದರೆ ತಾನು ಕಲಿತ ಭಾಷೆಯನ್ನು ಅದು ಮೂರು ಮರಿ ಚಿಂಪಾಂಚಿಗಳಿಗೂ ಕಲಿಸಿತ್ತು.

2007: `ಮಾಜಿ ಮುಖ್ಯಮಂತ್ರಿ ಎಚ್. ಡಿ.ಕುಮಾರಸ್ವಾಮಿ ಅಧ್ಯಕ್ಷತೆಯಲ್ಲಿ ಉಭಯ ಪಕ್ಷಗಳ ಸಮನ್ವಯ ಸಮಿತಿಯನ್ನು ರಚಿಸಬೇಕು' ಎಂಬ ಷರತ್ತನ್ನು ವಿಧಿಸುವ ಮೂಲಕ ಬಿಜೆಪಿ ಮೇಲೆ ತಮ್ಮ ಹಿಡಿತ ಸಾಧಿಸಲು ಜೆಡಿಎಸ್ ರಾಷ್ಟ್ರೀಯ ಅಧ್ಯಕ್ಷ ಎಚ್.ಡಿ.ದೇವೇಗೌಡ ಮುಂದಾದರು. ಬಿಜೆಪಿ- ಜೆಡಿಎಸ್ ಮೈತ್ರಿ ಕೂಟಕ್ಕೆ ಸರ್ಕಾರ ರಚಿಸಲು ರಾಜ್ಯಪಾಲರು ಇನ್ನೂ ಆಹ್ವಾನಿಸಿಲ್ಲ. ಮೈತ್ರಿ ಸರ್ಕಾರ ರಚನೆ ಇನ್ನೂ ಅನಿಶ್ಚಿತವಾಗಿರುವ ಸನ್ನಿವೇಶದಲ್ಲಿ 12 ಅಂಶಗಳ ಪರಸ್ಪರ ಒಪ್ಪಂದ ಪತ್ರಕ್ಕೆ ಸಹಿ ಹಾಕುವಂತೆ ಗೌಡರು ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ರಾಜನಾಥಸಿಂಗ್ ಅವರಿಗೆ ಪತ್ರ ಬರೆದರು.

2007: ಭಾರತದ ಮೊದಲ ಮಹಿಳಾ ಐಪಿಎಸ್ ಅಧಿಕಾರಿ ಎಂದು ಜನ ಗುರುತಿಸುವುದು ಕಿರಣ್ ಬೇಡಿ ಅವರನ್ನು. ಆದರೆ ನಿಜವಾಗಿಯೂ ಕಾಂಚನ್ ಚೌಧರಿ ಭಟ್ಟಾಚಾರ್ಯ ಅವರು ಭಾರತದ ಮೊದಲ ಮಹಿಳಾ ಐಪಿಎಸ್ ಅಧಿಕಾರಿ ಎಂಬುದು ಅನೇಕರಿಗೆ ಗೊತ್ತಿಲ್ಲ. 1973ರ ತಂಡದಲ್ಲಿ ಆಯ್ಕೆಯಾದ ಭಟ್ಟಾಚಾರ್ಯ ಅವರು, 2004ರ ಜೂನ್ 15ರಂದು ಉತ್ತರಖಂಡದ ಡಿಜಿಪಿಯಾಗಿ ಅಧಿಕಾರ ಸ್ವೀಕರಿಸಿ, ಮೂರು ವರ್ಷಗಳಿಗೂ ಹೆಚ್ಚು ಕಾಲ ಡಿಜಿಪಿಯಾಗಿ ಅಧಿಕಾರ ನಿರ್ವಹಿಸಿ ಈದಿನ ಡೆಹರಾಡೂನಿನಲ್ಲಿ ನಿವೃತ್ತಿಯಾದರು. ಭಟ್ಟಾಚಾರ್ಯ ಅವರ ಕುರಿತಾಗಿ, ಅವರ ಸೋದರಿ ಕವಿತಾ ಅವರು ನಿರ್ದೇಶಿಸಿ, 1990ರಲ್ಲಿ ದೂರದರ್ಶನದಲ್ಲಿ ಪ್ರಸಾರವಾದ `ಉಡಾನ್' ಧಾರಾವಾಹಿಯಲ್ಲಿ ಭಟ್ಟಾಚಾರ್ಯ ಅವರ ಪಾತ್ರವನ್ನು ಕವಿತಾ ನಿರ್ವಹಿಸಿದ್ದರು. ಭ್ರಷ್ಟಾಚಾರದ ವಿರುದ್ಧ ಹೋರಾಡಲು ಪೊಲೀಸ್ ಕೆಲಸವನ್ನು ಆರಿಸಿಕೊಂಡ ದಿಟ್ಟ ಯುವತಿಯಾದ ಭಟ್ಟಾಚಾರ್ಯ ಅವರನ್ನು ಕುರಿತು ಈ ಧಾರಾವಾಹಿ ನಿರ್ಮಿಸಲಾಗಿತ್ತು.

2006: ದಕ್ಷಿಣ ಆಫ್ರಿಕದ ಮಾಜಿ ಅಧ್ಯಕ್ಷ ನೆಲ್ಸನ್ ಮಂಡೇಲಾ ಅವರಿಗೆ 2006ರ ಅಮ್ನೆಸ್ಟಿ ಇಂಟರ್ ನ್ಯಾಷನಲ್ ನ `ಪ್ರಜ್ಞೆಯ ರಾಯಭಾರಿ' ಪ್ರಶಸ್ತಿಯನ್ನು ಜೋಹಾನ್ಸ್ ಬರ್ಗಿನಲ್ಲಿ ಪ್ರದಾನ ಮಾಡಲಾಯಿತು.

2006: ಪೋಲಿಯೋ ಲಸಿಕೆಗಳ ದಾಸ್ತಾನಿಗೆ ಅನುಕೂಲವಾಗುವಂತೆ ವಿಶ್ವಸಂಸ್ಥೆ ಪರಿಸರ ಕಾರ್ಯಕ್ರಮ (ಯು ಎನ್ ಇ ಪಿ) ಅಡಿಯಲ್ಲಿ ತಾವೇ ಸ್ವತಃ ನಿರ್ಮಿಸಿದ `ಸೋಲಾರ್ ಚಿಲ್' ಹೆಸರಿನ `ಸೌರ ಲಸಿಕಾ ಶೈತ್ಯ ಪೆಟ್ಟಿಗೆ'ಯನ್ನು (ಸೋಲಾರ್ ವ್ಯಾಕ್ಸೀನ್ ಕೂಲರ್) ಭಾರತೀಯ ವಿಜ್ಞಾನಿ ರಾಜೇಂದ್ರ ಶೆಂಡೆ ಅವರು ಭಾರತದ ರಾಷ್ಟ್ರಪತಿ ಎ.ಪಿ.ಜೆ. ಅಬ್ದುಲ್ ಕಲಾಂ ಅವರಿಗೆ ಅರ್ಪಿಸಿದರು. ಬ್ಯಾಟರಿಗಳು ಹಾಗೂ ಸಾಂಪ್ರದಾಯಿಕ ರೆಫ್ರಿಜರೇಟರುಗಳಲ್ಲಿ ಬಳಸುವ ಓಝೋನ್ ಗೆ ಮಾರಕವಾದ ಕ್ಲೋರೋ-ಫ್ಲುರೋ ಕಾರ್ಬನ್ನುಗಳಿಗೆ ಪರ್ಯಾಯವಾಗಿರುವ ಈ `ಸೋಲಾರ್ ಚಿಲ್' ಪರಿಸರ ಮಿತ್ರ ಸಾಧನವಾಗಿದ್ದು ವಿದ್ಯುತ್ ಸರಬರಾಜು ತೊಂದರೆಯಿಂದ ಬಳಲುತ್ತಿರುವ ಹಳ್ಳಿಗಳಿಗೆ ವರದಾನ ಆಗಬಲ್ಲುದು. `ಸೋಲಾರ್ ಚಿಲ್' ನಲ್ಲಿ ಸಾಂಪ್ರದಾಯಿಕ ಸೌರ ಶೈತ್ಯಾಗಾರಗಳಲ್ಲಿ ಬಳಸುವಂತೆ ಬ್ಯಾಟರಿಗಳು ಅಥವಾ ಸೀಮೆ ಎಣ್ಣೆಯನ್ನು ಬಳಸುವುದಿಲ್ಲ. ಮಂಜುಗಡ್ಡೆಯ ದಪ್ಪ ಪೊರೆ ನಿರ್ಮಿಸಲು ಸೌರಶಕ್ತಿಯನ್ನೇ ಬಳಸಲಾಗುತ್ತದೆ. ಇದು ಕೂಲರಿನ ಒಳಗಿನ ಉಷ್ಣತೆಯನ್ನು ಮೈನಸ್ 2 ಡಿಗ್ರಿಯಿಂದ 8 ಡಿಗ್ರಿ ಸೆಲ್ಷಿಯಸ್ ಮಟ್ಟದಲ್ಲಿ ಇರಿಸುತ್ತದೆ. ಈ ಶೈತ್ಯ ಪೆಟ್ಟಿಗೆ ರಾತ್ರಿಯಲ್ಲಿ ಕೂಡಾ ಲಸಿಕೆಯನ್ನು ತಂಪಾಗಿ ಇರಿಸಬಲ್ಲುದು. ಸೂರ್ಯನಿಲ್ಲದೇ ಇದ್ದರೂ ನಾಲ್ಕೈದು ದಿನಗಳ ಕಾಲ ಲಸಿಕೆಯನ್ನು ತಂಪಾಗಿ ಇಡಬಲ್ಲುದು. ಶೈತ್ಯ ಪೆಟ್ಟಿಗೆಗೆ ಯಾವುದೇ ರಾಸಾಯನಿಕಗಳ ಬಳಕೆ ಮಾಡುವುದಿಲ್ಲವಾದ ಕಾರಣ ಅದರಿಂದ ಓಝೋನ್ ಗೆ ಧಕ್ಕೆಯಾಗುವುದಿಲ್ಲ, ವಾತಾವರಣವೂ ಬಿಸಿ ಆಗುವುದಿಲ್ಲ.
2005: ಒಟ್ಟು 175 ಮಂದಿಗೆ ರಾಜ್ಯೋತ್ಸವ ಪ್ರಶಸ್ತಿ ನೀಡುವ ಮೂಲಕ ಕರ್ನಾಟಕದ ಧರ್ಮಸಿಂಗ್ ನೇತೃತ್ವದ ಸಮ್ಮಿಶ್ರ ಸರ್ಕಾರ ದಾಖಲೆ ನಿರ್ಮಿಸಿತು. 1992 ರಲ್ಲಿ ಎಸ್. ಬಂಗಾರಪ್ಪ ನೇತೃತ್ವದ ಕಾಂಗ್ರೆಸ್ ಸರ್ಕಾರ 172 ಮಂದಿಗೆ ರಾಜ್ಯೋತ್ಸವ ಪ್ರಶಸ್ತಿ ನೀಡಿತ್ತು.

2005: ವಿಧಾನ ಪರಿಷತ್ ಸದಸ್ಯ, ಕರ್ನಾಟಕ ಬಿಜೆಪಿ ಹಿರಿಯ ಧುರೀಣ ಗುಲ್ಬರ್ಗದ ಡಾ. ಎಂ.ಆರ್. ತಂಗಾ ಬೆಂಗಳೂರಿನಲ್ಲಿ ಹೃದಯಾಘಾತದಿಂದ ನಿಧನರಾದರು.

1981: ಸೌರಾಷ್ಟ್ರ ಕರಾವಳಿಯಲ್ಲಿ ಬೀಸಿದ ತೀವ್ರ ಚಂಡಮಾರುತಕ್ಕೆ ಸಿಲುಕಿ ದ್ವಾರಕಾ ಮತ್ತು ಜಕೋವೋ ಬಂದರುಗಳ ನಡುವೆ 190 ಮೀನುಗಾರಿಕೆ ದೋಣಿಗಳು ನಾಪತ್ತೆಯಾದವು.

1974: ಭಾರತೀಯ ಕ್ರಿಕೆಟ್ ಆಟಗಾರ ವೆಂಗಿಪುರುಪ್ಪು ವೆಂಕಟ್ ಸಾಯಿ ಲಕ್ಷ್ಮಣ್ ಜನ್ಮದಿನ.

1973: ಭಾರತದ ವಿಶ್ವಸುಂದರಿ ಐಶ್ವರ್ಯ ರೈ ಜನ್ಮದಿನ. ಈಗ ಈಕೆ ಬಾಲಿವುಡ್ ನಿಂದ ಹಾಲಿವುಡ್ ವರೆಗೂ ಖ್ಯಾತಿ ಪಡೆದಿರುವ ಚಿತ್ರನಟಿ.

1956: ವಿಶಾಲ ಮೈಸೂರು ರಾಜ್ಯ ಉದಯವಾದ ಕೆಲವೇ ಗಂಟೆಗಳಲ್ಲಿ ಗೌರ್ನರ್ ಮತ್ತು 54 ವರ್ಷದ ಕರ್ನಾಟಕದ ಹಿರಿಯ ರಾಜಕಾರಣಿ ಎಸ್. ನಿಜಲಿಂಗಪ್ಪ ಅವರ ಮುಖ್ಯಮಂತ್ರಿತ್ವದಲ್ಲಿ 12 ಮಂದಿ ಸಚಿವರ ಮಂತ್ರಿ ಮಂಡಲವು ಪ್ರಮಾಣವಚನ ಸ್ವೀಕರಿಸಿತು.

1954: ಫ್ರೆಂಚರ ಆಡಳಿತಕ್ಕೆ ಒಳಪಟ್ಟಿದ್ದ ಪಾಂಡಿಚೆರಿ, ಕಾರೈಕಲ್, ಮಾಹೆ ಮತ್ತು ಯಾನಮ್ ಗಳು ಭಾರತಕ್ಕೆ ಸೇರ್ಪಡೆಯಾದವು.

1913: ಲಾಲಾ ಹರ್ ದಯಾಳ್ ಮತ್ತು ಸೋಹನ್ ಸಿಂಗ್ ಭಾಂಕ್ನಾ ಅವರು ಭಾರತದ ಸ್ವಾತಂತ್ರ್ಯ ಹೋರಾಟಕ್ಕೆ ಪಶ್ಚಿಮದಲ್ಲಿ ಬೆಂಬಲ ದೊರಕಿಸುವ ಸಲುವಾಗಿ ಸ್ಯಾನ್ ಫ್ರಾನ್ಸಿಸ್ಕೊದಲ್ಲಿ `ಘದರ್' ಚಳವಳಿಯನ್ನು ಆರಂಭಿಸಿದರು.

1858: ಭಾರತದ ಆಡಳಿತವನ್ನು ಈಸ್ಟ್ ಇಂಡಿಯಾ ಕಂಪೆನಿಯಿಂದ ಬ್ರಿಟಿಷ್ ರಾಜಸತ್ತೆಯು ವಹಿಸಿಕೊಂಡಿತು. ಗವರ್ನರ್ ಜನರಲ್ ಗೆ `ವೈಸ್ ರಾಯ್' ಎಂಬ ಹೆಸರು ನೀಡಲಾಯಿತು. ಈ ಹೆಸರೇ ಭಾರತವು ಸ್ವಾತಂತ್ರ್ಯ ಗಳಿಸುವವರೆಗೂ ಮುಂದುವರಿಯಿತು.

1848: ಡಬ್ಲ್ಯೂ.ಎಚ್. ಸ್ಮಿತ್ ಅವರ ಮೊತ್ತ ಮೊದಲ ರೈಲ್ವೆ ಬುಕ್ ಸ್ಟಾಲ್ ಲಂಡನ್ನಿನ ಈಸ್ಟನ್ ಸ್ಟೇಷನ್ನಿನಲ್ಲಿ ಪ್ರಾರಂಭಗೊಂಡಿತು.

1800: ಅಮೆರಿಕದ ಅಧ್ಯಕ್ಷ ಜಾನ್ ಆಡಮ್ಸ್ ಅವರು `ಶ್ವೇತಭವನ'ಕ್ಕೆ ತಮ್ಮ ವಾಸ್ತವ್ಯವನ್ನು ವರ್ಗಾಯಿಸಿದರು. ಇದರೊಂದಿಗೆ `ಶ್ವೇತಭವನ'ದಲ್ಲಿ ವಾಸ್ತವ್ಯ ಹೂಡಿದ ಮೊದಲ ಅಧ್ಯಕ್ಷರೆಂಬ ಹೆಗ್ಗಳಿಕೆ ಅವರದಾಯಿತು.

Advertisement