Showing posts with label ಇಂದಿನ ಇತಿಹಾಸ History Today (May 1-10).. Show all posts
Showing posts with label ಇಂದಿನ ಇತಿಹಾಸ History Today (May 1-10).. Show all posts

Monday, May 10, 2010

ಇಂದಿನ ಇತಿಹಾಸ History Today ಮೇ 10

ಇಂದಿನ ಇತಿಹಾಸ

ಮೇ 10

ಟ್ಯಾಬ್ಲಾಯ್ಡ್ ಗಳ ಅಚ್ಚುಮೆಚ್ಚಿನ ರೂಪದರ್ಶಿ ಲಿಂಡ್ಸೆ ಲೋಹನ್ ಛಾಯಾಗ್ರಾಹಕರನ್ನು ತನ್ನಿಂದ ದೂರವಿಡಲು ಹೊಸ ಉಪಾಯ ಕಂಡು ಹಿಡಿದರು. ಕ್ಯಾಲಿಫೋರ್ನಿಯಾದಲ್ಲಿನ ಮನೆಯ ಹೊರಗಡೆ ತಮ್ಮನ್ನು ಕ್ಯಾಮರಾಗಳಲ್ಲಿ ಸೆರೆಹಿಡಿಯಲು ಬಂದ ಛಾಯಾಗ್ರಾಹಕರ ಮೇಲೆ ಹಸಿ ಮೊಟ್ಟೆ ಹಾಗೂ ಪಿಜ್ಜಾಗಳನ್ನು ಎಸೆದು ಸುದ್ದಿ ಮಾಡಿದರು. ಈ ತಿಂಗಳಲ್ಲಿ ಲೋಹನ್ ಛಾಯಾಗ್ರಾಹಕರ ಮೇಲೆ ಮಾಡುತ್ತಿರುವ ಇಂತಹ ಎರಡನೇ ದಾಳಿ ಇದು ಎಂದು ಕಾಂಟಾಕ್ಟ್‌ ಮ್ಯೂಸಿಕ್ ವರದಿ ಮಾಡಿತು.


ಇಂದು ಮಾತೆಯರ ದಿನ. ಅಮೆರಿಕನ್ ಅಂತರ್ಯುದ್ಧದ ಬಳಿಕ ಈ `ಮಾತೆಯರ ದಿನ' ಆಚರಣೆ ಬಳಕೆಗೆ ಬಂತು. ಜೂಲಿಯಾ ವಾರ್ಡ್ ಹೋವೆ ಎಂಬ ಸಮಾಜ ಸೇವಕಿ ಯುದ್ಧದ ವಿರುದ್ಧ ಮಹಿಳೆಯರನ್ನು ಒಗ್ಗೂಡಲು ಕರೆ ನೀಡುವುದರೊಂದಿಗೆ ಈ ದಿನದ ಆಚರಣೆ ಆರಂಭವಾಯಿತು. ನಂತರ ಈದಿನ ಮಾತೆಯರಿಗೆ ಧನ್ಯವಾದ ಅರ್ಪಿಸುವ ದಿನವಾಗಿ ಬದಲಾಯಿತು. ಗ್ರೀಕ್ ಇತಿಹಾಸದ ಪ್ರಕಾರ ಮಾತೆಯರನ್ನು ದೇವರೆಂದು ಪೂಜಿಸುವುದರಿಂದ ಈ ಆಚರಣೆ ಬೆಳೆದು ಬಂತು. ಪ್ರತಿವರ್ಷ ಮೇ ತಿಂಗಳ ಎರಡನೇ ಭಾನುವಾರ ಮಾತೆಯರ ದಿನ ಆಚರಿಸಲಾಗುತ್ತದೆ.

2009: ಟ್ಯಾಬ್ಲಾಯ್ಡ್ ಗಳ ಅಚ್ಚುಮೆಚ್ಚಿನ ರೂಪದರ್ಶಿ ಲಿಂಡ್ಸೆ ಲೋಹನ್ ಛಾಯಾಗ್ರಾಹಕರನ್ನು ತನ್ನಿಂದ ದೂರವಿಡಲು ಹೊಸ ಉಪಾಯ ಕಂಡು ಹಿಡಿದರು. ಕ್ಯಾಲಿಫೋರ್ನಿಯಾದಲ್ಲಿನ ಮನೆಯ ಹೊರಗಡೆ ತಮ್ಮನ್ನು ಕ್ಯಾಮರಾಗಳಲ್ಲಿ ಸೆರೆಹಿಡಿಯಲು ಬಂದ ಛಾಯಾಗ್ರಾಹಕರ ಮೇಲೆ ಹಸಿ ಮೊಟ್ಟೆ ಹಾಗೂ ಪಿಜ್ಜಾಗಳನ್ನು ಎಸೆದು ಸುದ್ದಿ ಮಾಡಿದರು. ಈ ತಿಂಗಳಲ್ಲಿ ಲೋಹನ್ ಛಾಯಾಗ್ರಾಹಕರ ಮೇಲೆ ಮಾಡುತ್ತಿರುವ ಇಂತಹ ಎರಡನೇ ದಾಳಿ ಇದು ಎಂದು ಕಾಂಟಾಕ್ಟ್‌ ಮ್ಯೂಸಿಕ್ ವರದಿ ಮಾಡಿತು.

2009: ಉದ್ಯೋಗಿಯೊಬ್ಬ ತನ್ನ ಸೇವಾ ಅವಧಿಯಲ್ಲಿ ನಿಯಮ ಉಲ್ಲಂಘಿಸಿದ್ದಾನೆ ಎಂಬ ಶಂಕೆ ವ್ಯಕ್ತವಾಗಿದ್ದರೆ, ನಿವೃತ್ತಿ ನಂತರವೂ ಆತನ ವಿರುದ್ಧ ಇಲಾಖಾ ತನಿಖೆ ನಡೆಸಬಹುದು ಎಂದು ಸುಪ್ರೀಂಕೋರ್ಟ್ ಅಭಿಪ್ರಾಯ ಪಟ್ಟಿತು. ನ್ಯಾಯಮೂರ್ತಿಗಳಾದ ತರುಣ್ ಚಟರ್ಜಿ ಹಾಗೂ ಎಚ್.ಎಲ್. ದತ್ತು ಅವರನ್ನೊಳಗೊಂಡ ವಿಭಾಗೀಯ ಪೀಠವು ಈ ತೀರ್ಪು ನೀಡಿತು. ಯಾವುದೇ ಸರ್ಕಾರಿ ನೌಕರ ತನ್ನ ಸೇವಾ ಅವಧಿಯಲ್ಲಿ ಲೋಪವೆಸಗಿದ್ದರೆ, 1971ರ ಸೇವಾ ನಿಯಮ 10(1)ರ ಅನುಸಾರ ಆತನ ನಿವೃತ್ತಿ ನಂತರವೂ ತನಿಖೆ ಮುಂದುವರೆಸಬಹುದು ಎಂದು ಅಭಿಪ್ರಾಯಪಟ್ಟಿತು.

2008: ತಮಿಳುನಾಡಿನ ರಾಮನಾಥ ಪುರಂ ಜಿಲ್ಲೆಯ 21 ವರ್ಷದ ಯುವಕ ವೇಲಿಪಟ್ಟಿಣಂ ನಿವಾಸಿ ವಿ. ಶಂಕರನಾರಾಯಣನ್ ಒಂದೇ ಉಸಿರಿಗೆ 151 ಮೇಣದ ಬತ್ತಿಗಳ (ಕ್ಯಾಂಡಲ್) ಜ್ವಾಲೆಯನ್ನು ಆರಿಸಿ ವಿಶ್ವದಾಖಲೆ ನಿರ್ಮಿಸಿದ್ದು ಗಿನ್ನೆಸ್ ದಾಖಲೆಗೆ ಸೇರಿತು. ಕಳೆದ ಜನವರಿ ತಿಂಗಳಲ್ಲಿ ಈ ಸಾಧನೆ ಮಾಡಿದ್ದ ವಿ. ಶಂಕರನಾರಾಯಣನ್ ಅವರಿಗೆ ಗಿನ್ನೆಸ್ ವಿಶ್ವದಾಖಲೆಗಳ ಪುಸ್ತಕದ ಅಧಿಕಾರಿಗಳಿಂದ ಬಂದ ಈ ಸಂಬಂಧಿ ಪ್ರಮಾಣಪತ್ರ ವನ್ನು ಜಿಲ್ಲಾಧಿಕಾರಿ ಎ. ಕಿಶೋರಕುಮಾರ್ ಅವರು ನೀಡಿದರು. ಫ್ರಾನ್ಸಿನ ಡೇವಿಡ್ ಲಾಮೆ ಅವರು 2001ರಲ್ಲಿ ನಿರ್ಮಿಸಿದ್ದ ದಾಖಲೆಯನ್ನು ಶಂಕರನಾರಾಯಣನ್ ಮುರಿದಿದ್ದಾರೆ. ಡೇವಿಡ್ ಲಾಮೆ ಅವರು ಒಂದೇ ಉಸಿರಿಗೆ 117 ಕ್ಯಾಂಡಲ್ಲುಗಳ ಜ್ವಾಲೆಯನ್ನು ಆರಿಸಿ ವಿಶ್ವದಾಖಲೆ ನಿರ್ಮಿಸಿದ್ದರು. ಉಸಿರು ನಿಯಂತ್ರಣದಲ್ಲಿ ತಜ್ಞರೆನಿಸಿಕೊಂಡಿರುವ ಶಂಕರನಾರಾಯಣನ್ ಅವರು ಈ ಕಲೆಯನ್ನು ತಮ್ಮ ಯೋಗ ಗುರುವಿನಿಂದ ಕಲಿತರು.

2008: ಚಂಡಮಾರುತದ ಪರಿಣಾಮವಾಗಿ ಸಹಸ್ರಾರು ಮಂದಿ ಅಸುನೀಗಿ, ಇತರರು ಸಂಕಟದಲ್ಲಿ ನರಳುತ್ತಿರುವಾಗಲೇ, ನೂತನ ಸಂವಿಧಾನಕ್ಕೆ ಅಂಗೀಕಾರ ನೀಡುವ ಸಲುವಾಗಿ ಮ್ಯಾನ್ಮಾರಿನ ಸೇನಾ ಸರ್ಕಾರವು ಸಂತ್ರಸ್ಥ ಪ್ರದೇಶಗಳಲ್ಲಿ ಮತಗಟ್ಟೆಗಳನ್ನು ತೆರೆಯಿತು. `ನರ್ಗಿಸ್' ಚಂಡಮಾರುತದಿಂದ ತೀವ್ರ ತೊಂದರೆಗೊಳಗಾದ ಪ್ರಮುಖ ನಗರ ಹಾಗೂ ಹಿಂದಿನ ರಾಜಧಾನಿ ಯಾಂಗೂನ್ ಸೇರಿದಂತೆ ಹಲವು ಪ್ರದೇಶಗಳಲ್ಲಿ ಸೇನಾ ಸರ್ಕಾರವು ಮತದಾನವನ್ನು ಎರಡು ವಾರಗಳ ಮಟ್ಟಿಗೆ ಮಾತ್ರ ವಿಳಂಬಿಸಿತು. 1990ರಲ್ಲಿ ಸೇನಾ ಆಡಳಿತವು ಮೊತ್ತ ಮೊದಲ ಮತದಾನ ನಡೆಸಿತ್ತು. ಆ ಚುನಾವಣೆಯಲ್ಲಿ ವಿರೋಧಿ ನಾಯಕಿ ಆಂಗ್ ಸಾನ್ ಸೂ ಕೀ ಅವರ ನೇತೃತ್ವದ ನ್ಯಾಷನಲ್ ಲೀಗ್ ಟು ಡೆಮಾಕ್ರಸಿ (ಎನ್ ಎಲ್ ಡಿ) ಭಾರಿ ವಿಜಯ ಸಾಧಿಸಿತ್ತು. ಆದರೆ ಆ ಫಲಿತಾಂಶವನ್ನು ಸೇನಾ ಆಡಳಿತ ಎಂದೂ ಮಾನ್ಯ ಮಾಡಲೇ ಇಲ್ಲ. ಆ ಬಳಿಕ ಇದೇ ಮೊದಲ ಬಾರಿಗೆ ಜನಮತಗಣನೆಗೆ ವ್ಯವಸ್ಥೆಯಾಯಿತು.

2008: ಶಂಕಿತ ಉಗ್ರರ ವಿಚಾರಣೆ ನಡೆದ ಹುಬ್ಬಳ್ಳಿ ನಗರದ ನ್ಯಾಯಾಲಯದ ಸಭಾಂಗಣದೊಳಗೆ ಈದಿನ ಮಧ್ಯಾಹ್ನ ಶಕ್ತಿಶಾಲಿ ಬಾಂಬ್ ಸ್ಫೋಟಿಸಿತು. ಆದರೆ ಎರಡನೇ ಶನಿವಾರದ ರಜೆ ಇದ್ದ ಕಾರಣ ಯಾವುದೇ ಸಾವು-ನೋವು ಸಂಭವಿಸಲಿಲ್ಲ. ನ್ಯಾಯಾಲಯ ಸಂಕೀರ್ಣದ ನೆಲಮಹಡಿಯಲ್ಲಿನ ಒಂದನೇ ಜೆ ಎಂ ಎಫ್ ಸಿ ನ್ಯಾಯಾಲಯದ ಸಭಾಂಗಣದಲ್ಲಿ ಮಧ್ಯಾಹ್ನ 1.25ರ ಸುಮಾರಿಗೆ ಈ ಸ್ಫೋಟ ಸಂಭವಿಸಿತು. ಭಯೋತ್ಪಾದಕರು ಅಥವಾ ದೇಶದ್ರೋಹಿ ಶಕ್ತಿಗಳು ಈ ದುಷ್ಕೃತ್ಯ ಎಸಗಿರಬಹುದು ಎಂದು ಪೊಲೀಸರು ಶಂಕಿಸಿದರು.

2008: ಕರ್ನಾಟಕ ವಿಧಾನಸಭೆಗೆ ಮೊದಲ ಹಂತದ ಮತದಾನ ಬಹುತೇಕ ಶಾಂತಿಯುತವಾಗಿ ಮುಕ್ತಾಯಗೊಂಡಿತು.

2008: ನೀತಿ ಸಂಹಿತೆ ಜಾರಿಯಲ್ಲಿ ಇರುವುದನ್ನೂ ಲೆಕ್ಕಿಸದೆ ಕೇಂದ್ರ ವಿದ್ಯುತ್ ಖಾತೆ ಸಚಿವ ಸುಶೀಲ್ ಕುಮಾರ್ ಶಿಂಧೆ ಅವರು ರಾಜ್ಯದಲ್ಲಿ ನೆನೆಗುದಿಗೆ ಬಿದ್ದಿರುವ 4000 ಮೆಗಾವಾಟ್ ಸಾಮರ್ಥ್ಯದ ತದಡಿ ವಿದ್ಯುತ್ ಯೋಜನೆ ಜಾರಿಗೆ ಕ್ರಮ ತೆಗೆದುಕೊಳ್ಳುವುದಾಗಿ ಘೋಷಿಸಿದರು. ಈ ಆಶ್ವಾಸನೆಯು ನೀತಿ ಸಂಹಿತೆಯ ಸ್ಪಷ್ಟ ಉಲ್ಲಂಘನೆ ಎಂದು ಪರಿಗಣಿಸಿದ ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ ವ್ಯಾಪ್ತಿಯ ಚುನಾವಣಾಧಿಕಾರಿಗಳು ಶಿಂಧೆ ಅವರಿಗೆ ನೋಟಿಸ್ ಜಾರಿ ಮಾಡಿದರು.

2008: ಸಾಂಪ್ರದಾಯಿಕ ರಕ್ತ ಪರೀಕ್ಷೆಯ ಮೂಲಕವಲ್ಲ, ಜೊಲ್ಲುರಸದ ಮೂಲಕವೇ ಏಡ್ಸ್ ಸೋಂಕಿನ ಇರುವಿಕೆಯನ್ನು ಪರೀಕ್ಷಿಸುವ ವಿಧಾನವನ್ನು ಭಾರತೀಯ ವಿಜ್ಞಾನಿಗಳು ಅಭಿವೃದ್ಧಿಪಡಿಸಿದರು. ಅತ್ಯಂತ ಅಗ್ಗದ ಮತ್ತು ಸುಲಭ ವಿಧಾನದ ಈ ಜೊಲ್ಲುರಸ ಪರೀಕ್ಷೆಯನ್ನು ಯಾವುದೇ ಸಾಮಾನ್ಯ ಆಸ್ಪತ್ರೆಯಲ್ಲೂ ನಡೆಸಬಹುದು. ಗರ್ಭಿಣಿಯರು ಈ ಪರೀಕ್ಷೆ ಮಾಡಿಸಿಕೊಂಡು ಗರ್ಭದಲ್ಲಿ ಇರುವ ಮಗುವಿಗೆ ಅಗತ್ಯದ ಆರೈಕೆ ನೀಡಲು ಸಾಧ್ಯ. ಭಾರತೀಯ ವಿಜ್ಞಾನಿ ನಿಖಿತಾ ಪಂತ್ ಪೈ, ಕೆನಡಾದ ಮೆಕ್ ಗಿಲ್ ವಿಶ್ವವಿದ್ಯಾಲಯದ ಅವರ ಸಹೋದ್ಯೋಗಿಗಳು ಹಾಗೂ ವಾರ್ಧಾದ ಮಹಾತ್ಮಾ ಗಾಂಧಿ ವೈದ್ಯಕೀಯ ವಿಜ್ಞಾನ ಸಂಸ್ಥೆಯ ತಜ್ಞರು ಈ ಎಚ್ಐವಿ/ಏಡ್ಸ್ ಪತ್ತೆ ಉಪಕರಣ ಅಭಿವೃದ್ಧಿ ಪಡಿಸಿದರು. ಜೊಲ್ಲುರಸವನ್ನು (ಉಗುಳು) ಕಡ್ಡಿಯೊಂದರಲ್ಲಿ ಸಂಗ್ರಹಿಸಿ (ಗರ್ಭಿಣಿಯೇ ಎಂಬುದನ್ನು ತಿಳಿಯಲು ನಡೆಸುವ ಪರೀಕ್ಷೆಯಂತೆ) ವಿಶೇಷ ದ್ರಾವಣ ಇರುವ ಚಿಕ್ಕ ನಳಿಕೆಯಲ್ಲಿ ಇರಿಸಿದರೆ ಮುಗಿಯಿತು. 20ರಿಂದ 40 ನಿಮಿಷಗಳ ಒಳಗೆ ಕಡ್ಡಿಯ ತುದಿಯಲ್ಲಿ ನೇರಳೆ/ಕಡುಗೆಂಪು ಬಣ್ಣ ಕಾಣಿಸಿಕೊಂಡರೆ ವ್ಯಕ್ತಿಗೆ ಎಚ್ ಐ ವಿ ಸೋಂಕು ತಗುಲಿದೆ ಎಂಬುದು ಸಾಬೀತಾಗುತ್ತದೆ. ವಾರ್ಧಾ ಆಸ್ಪತ್ರೆಯಲ್ಲಿ ಒಟ್ಟು 1,222 ಮಹಿಳೆಯರಿಗೆ ಈ ವಿಧಾನದಲ್ಲಿ ಪರೀಕ್ಷೆ ನಡೆಸಲಾಯಿತು. ಈ ಪೈಕಿ 1003 ಮಂದಿ ಈ ಮೊದಲು ಎಚ್ ಐ ವಿ ಪರೀಕ್ಷೆ ಮಾಡಿಸಿಕೊಂಡೇ ಇರಲಿಲ್ಲ. ಪರೀಕ್ಷೆಯಿಂದ ಅವರ ಎಚ್ ಐ ವಿ/ಏಡ್ಸ್ ಸ್ಥಿತಿಗತಿ ತಿಳಿಯುವಂತಾಯಿತು. `ನಮ್ಮ ಸಂಶೋಧನೆಯಿಂದ ದಿನದ 24 ಗಂಟೆಯೂ ತ್ವರಿತ ಎಚ್ ಐ ವಿ/ಏಡ್ಸ್ ಪರೀಕ್ಷೆ ನಡೆಸುವ ಮತ್ತು ಕೌನ್ಸೆಲಿಂಗ್ ನಡೆಸುವುದು ಸಾಧ್ಯವಾಗಿದೆ. ಭಾರತದ ಗ್ರಾಮೀಣ ಪ್ರದೇಶದ ಹೆರಿಗೆ ಆಸ್ಪತ್ರೆಗಳ ಹೆರಿಗೆ ಕೊಠಡಿಗಳ್ಲಲೂ ಈ ಪರೀಕ್ಷೆ ನಡೆಸುವುದು ಸಾಧ್ಯ' ಎಂದು ಡಾ. ನಿಖಿತಾ ಪೈ ಹೇಳಿದರು.

2008: ಪೋರ್ಟ್ ಬ್ಲೇರಿನಲ್ಲಿ ಹಿಂದಿನ ರಾತ್ರಿ ಭಾರೀ ಮಳೆ ಸುರಿದು ವಿಮಾನ ನಿಲ್ದಾಣ ಜಲಾವೃತಗೊಂಡು, ಸಂಚಾರ ಸೇವೆ ಸ್ಥಗಿತವಾಯಿತು.

2008: ಕಾಂಗ್ರೆಸ್ ಮತ್ತು ರಾಜ್ಯಸಭಾ ಸದಸ್ಯತ್ವಕ್ಕೆ ರಾಜೀನಾಮೆ ನೀಡಿದ್ದ ಮಾಜಿ ಕೇಂದ್ರ ಸಚಿವ ಅಖಿಲೇಶ್ ದಾಸ್ ಬಿ ಎಸ್ ಪಿ ಗೆ ಸೇರ್ಪಡೆಯಾದರು.

2008: ಉತ್ತರ ಭಾರತೀಯರ ವಿರುದ್ಧ ಮಲತಾಯಿ ಧೋರಣೆ ಹೊಂದಿದ ಶಿವಸೇನಾ ನಿಲುವಿನಿಂದ ರೋಸಿಹೊದ ಉತ್ತರ ಘಟಕದ ಶಿವಸೇನಾ ಮುಖ್ಯಸ್ಥ ಜೈ ಭಗವಾನ್ ಗೋಯಲ್ ಹೊಸ ಪಕ್ಷ ಸ್ಥಾಪಿಸಿದರು. `ರಾಷ್ಟ್ರವಾದಿ ಶಿವಸೇನಾ' ಎಂದು ಕರೆಯಲ್ಪಡುವ ಹೊಸ ಪಕ್ಷಕ್ಕೆ ಉತ್ತರ ಪ್ರದೇಶ, ರಾಜಸ್ತಾನ, ಪಂಜಾಬ್, ಹರಿಯಾಣ ಮತ್ತು ಹಿಮಾಚಲ ಪ್ರದೇಶದ ಹಲವಾರು ಶಿವಸೇನಾ ಸದಸ್ಯರು ಶಿವಸೇನೆ ತೊರೆದು ಹೊಸ ಪಕ್ಷಕ್ಕೆ ಸೇರ್ಪಡೆಯಾಗಿದ್ದಾರೆ' ಎಂದು ಪಕ್ಷ ಹೇಳಿಕೆ ನೀಡಿತು.

2008: ಹಿಂದೂಸ್ಥಾನಿ ಶಾಸ್ತ್ರೀಯ ಸಂಗೀತದ ಹಿರಿಯ ಗಾಯಕ, ಕಿರಾಣಾ- ಘರಾಣಾ ಸಂಗೀತ ಪ್ರಕಾರದ ಗುರು ಎಂದೇ ಹೆಸರುವಾಸಿಯಾಗಿದ್ದ ಖ್ಯಾತ ಸಂಗೀತಗಾರ ಪಂಡಿತ್ ಫಿರೋಜ್ ದಸ್ತೂರ್ (89) ಹಿಂದಿನ ದಿನ ರಾತ್ರಿ ಮುಂಬೈಯಲ್ಲಿ ನಿಧನರಾದರು. ಹಿಂದೂಸ್ಥಾನಿ ಸಂಗೀತ ಕ್ಷೇತ್ರದ ಧ್ರುವತಾರೆ ಸವಾಯಿ ಗಂಧರ್ವ ಅವರ ಅನುಯಾಯಿಗಳಲ್ಲಿ ಹಿರಿಯರಾದ ಪಂಡಿತ್ ದಸ್ತೂರ್ ಅವರು ಘರಾಣಾ ಪ್ರಕಾರದಲ್ಲಿ ವಿಖ್ಯಾತಿ ಪಡೆದಿದ್ದರು. ಆರು ದಶಕಗಳಿಂದ ದೇಶ ವಿದೇಶಗಳಲ್ಲಿ ತಮ್ಮ ಮಧುರ ಕಂಠಸಿರಿಯಿಂದ ಸಂಗೀತ ರಸಿಕರ ಮನಸೂರೆಗೊಂಡಿದ್ದ ಪಂಡಿತ್ ಫಿರೋಜ್ ದಸ್ತೂರ್ ಅವರಿಗೆ ಸಂಗೀತ ನಾಟಕ ಅಕಾಡೆಮಿ ಪ್ರಶಸ್ತಿ, ತಾನ್ಸೇನ್ ಪ್ರಶಸ್ತಿ, ದಕ್ಷಿಣ ಗುಜರಾತ್ ವಿಶ್ವವಿದ್ಯಾಲಯದಿಂದ ಗೌರವ ಡಾಕ್ಟರೇಟ್ ಮತ್ತು ಮಹಾರಾಷ್ಟ್ರ ಸರ್ಕಾರದ ಗೌರವ ಪ್ರಶಸ್ತಿ ಲಭಿಸಿವೆ. ತಮ್ಮ 7ನೇ ವಯಸ್ಸಿನಲ್ಲಿ ಸಂಗೀತ ಗುರು ಎ.ಡಿ.ಜಾವ್ಕರ್ ಅವರ ಬಳಿ ಸಂಗೀತಾಭ್ಯಾಸ ಆರಂಭಿಸಿದ ದಸ್ತೂರ್, ಸಂಗೀತ ಕ್ಷೇತ್ರದಲ್ಲಿ ಹೆಮ್ಮರವಾಗಿ ಬೆಳೆದರು. ಸಂಗೀತ ಕ್ಷೇತ್ರದಲ್ಲಿ ಪೂರ್ಣಾವಧಿಯಲ್ಲಿ ತೊಡಗಿಸಿಕೊಳ್ಳುವ ಮುನ್ನ ವಾಡಿಯಾ ಮೂವಿಟೋನ್ ಮತ್ತು ಮಿನೆರ್ವಾ ಮೂವಿಟೋನ್ ಲಾಂಛನದ ಸಿನಿಮಾಗಳಲ್ಲಿ ಬಾಲ ನಟರಾಗಿಯೂ ಗುರುತಿಸಿಕೊಂಡಿದ್ದರು. ಕೆಲವು ಸಿನಿಮಾಗಳಿಗೆ ನಟರಿಗೆ ಧ್ವನಿಯೂ ಆಗಿದ್ದರು.

2007: ಪೆರಾಜೆ ಶ್ರೀ ರಾಮಚಂದ್ರಾಪುರ ಮಠದಲ್ಲಿ 7 ಲಕ್ಷ ರೂಪಾಯಿ ವೆಚ್ಚದಲ್ಲಿ ನಿರ್ಮಿಸಲಾದ ಅಮೃತಧಾರಾ ಗೋಶಾಲೆಯನ್ನು ಸಚಿವ ನಾಗರಾಜ ಶೆಟ್ಟಿ ಲೋಕಾರ್ಪಣೆ ಮಾಡಿದರು.

2007: ಪ್ರಥಮ ಸ್ವಾತಂತ್ರ್ಯ ಸಂಗ್ರಾಮದ 150ನೇ ವರ್ಷಾಚರಣೆ ಸ್ಮರಣಾರ್ಥ ಸಂಸತ್ತನ್ನು ಉದ್ದೇಶಿಸಿ ಮಾತನಾಡಿದ ರಾಷ್ಟ್ರಪತಿ ಡಾ. ಎ.ಪಿ.ಜೆ. ಅಬ್ದುಲ್ ಕಲಾಂ ಅವರು ಸಮ್ಮಿಶ್ರ ಯುಗದಲ್ಲಿರುವ ಭಾರತದಲ್ಲಿ ಸುಸ್ಥಿರವಾದ ದ್ವಿಪಕ್ಷ ವ್ಯವಸ್ಥೆ ಜಾರಿಗೆ ಬರಬೇಕು ಎಂದು ಹಾರೈಸಿದರು.

2007: ಚೆನ್ನೈಯಲ್ಲಿ `ದಿನಕರನ್' ಪತ್ರಿಕಾ ಕಚೇರಿ ಮೇಲೆ ಡಿಎಂಕೆ ಕಾರ್ಯಕರ್ತರ ದಾಳಿ ಪ್ರಕರಣವನ್ನು ಸಿಬಿಐ ತನಿಖೆಗೆ ಒಪ್ಪಿಸಲು ತಮಿಳುನಾಡು ಸರ್ಕಾರ ನಿರ್ಧರಿಸಿತು.

2007: ರಾಷ್ಟ್ರೀಯ ಮೌಲ್ಯಮಾಪನ ಹಾಗೂ ಮಾನ್ಯತಾ ಮಂಡಳಿಯ (ನ್ಯಾಕ್) ಕಾರ್ಯಕಾರಿ ಮಂಡಳಿ ಅಧ್ಯಕ್ಷ ಪ್ರೊ. ಗೋವರ್ಧನ್ ಮೆಹ್ತಾ ಅವರು ರಸಾಯನ ವಿಜ್ಞಾನ ಕ್ಷೇತ್ರದ ಸಾಧನೆಗಾಗಿ 2007ನೇ ಸಾಲಿನ ಪ್ರತಿಷ್ಠಿತ ಟ್ರೈಸ್ಟ್ ಸೈನ್ಸ್ ಪ್ರಶಸ್ತಿಗೆ ಆಯ್ಕೆಯಾದರು. ಪರ್ಯಾಯ ನೊಬೆಲ್ ಪ್ರಶಸ್ತಿ ಎಂದೇ ಬಣ್ಣಿಸಲಾದ ಟ್ರೈಸ್ಟ್ ವಿಜ್ಞಾನ ಪ್ರಶಸ್ತಿಯು 50 ಸಾವಿರ ಅಮೆರಿಕನ್ ಡಾಲರ್ ಪದಕ ಹಾಗೂ ಪ್ರಶಸ್ತಿ ಪತ್ರವನ್ನು ಒಳಗೊಂಡಿದೆ.

2006: ಒಂದನೇ ತರಗತಿಯಿಂದ ಒಂದು ಭಾಷೆಯಾಗಿ ಇಂಗ್ಲಿಷ್ ಹಾಗೂ ಮಾನ್ಯತೆ ಪಡೆದಿರುವ ಎಲ್ಲ ಆಂಗ್ಲ ಮಾಧ್ಯಮ ಶಾಲೆಗಳಲ್ಲಿ ಒಂದು ಭಾಷೆಯಾಗಿ ಕಡ್ಡಾಯ ಕನ್ನಡ ಕಲಿಕೆ ಪ್ರಸ್ತಾವವನ್ನು ಪ್ರಾಥಮಿಕ ಮತ್ತು ಪ್ರೌಢಶಿಕ್ಷಣ ಸಚಿವ ಬಸವರಾಜ ಹೊರಟ್ಟಿ ಮುಂದಿಟ್ಟರು. ಇದರೊಂದಿಗೆ ಪ್ರಾಥಮಿಕ ಹಂತದಲ್ಲಿ ಒಂದನೇ ತರಗತಿಯಿಂದ ಇಂಗ್ಲಿಷ್ ಕಲಿಸುವ ಚರ್ಚೆಗೆ ಮತ್ತೆ ಚಾಲನೆ ದೊರೆಯಿತು.

2006: ನೇಪಾಳದಲ್ಲಿ ಹೊಸದಾಗಿ ಅಸ್ತಿತ್ವಕ್ಕೆ ಬಂದಿರುವ ಪ್ರಧಾನಿ ಗಿರಿಜಾ ಪ್ರಸಾದ್ ಕೊಯಿರಾಲ ಸರ್ಕಾರವು ದೊರೆ ಜ್ಞಾನೇಂದ್ರ ಅವರು ತಮ್ಮ 14 ತಿಂಗಳ ಆಡಳಿತಾವದಿಯಲ್ಲಿ ಜಾರಿಗೊಳಿಸಿದ ವಿವಾದಾತ್ಮಕ ಮಾಧ್ಯಮ ಸುಗ್ರೀವಾಜ್ಞೆ ಸೇರಿ ಆರು ಆದೇಶಗಳನ್ನು ಅನೂರ್ಜಿತಗೊಳಿಸಿತು. ಮಾಧ್ಯಮ ಅಥವಾ ಉಗ್ರ ಪತ್ರಿಕಾ ಸುಗ್ರೀವಾಜ್ಞೆಯ ಮೂಲಕ ಪತ್ರಿಕಾ ಸ್ವಾತಂತ್ಯದ ಮೇಲೆ ಸಾಕಷ್ಟು ನಿರ್ಬಂಧಗಳನ್ನು ವಿಧಿಸಿ, ದೊರೆ ಸರ್ಕಾರದ ವಿರುದ್ಧ ಬರೆದ ಪತ್ರಕರ್ತರಿಗೆ ಜೈಲು ಮತ್ತು ದಂಡ ಶಿಕ್ಷೆಯನ್ನು ನೀಡಲು ತೀರ್ಮಾನಿಸಲಾಗಿತ್ತು. ಈ ಕಾನೂನಿನಡಿ, ರಾಜಪ್ರಭುತ್ವ ಕುಟುಂಬವನ್ನು ಟೀಕಿಸುವ ಅಥವಾ ಉಗ್ರಗಾಮಿಗಳ ವರದಿಗಳನ್ನು ಪ್ರಕಟಿಸುವ ಪತ್ರಕರ್ತರಿಗೆ ಒಂದು ವರ್ಷ ಜೈಲು ಮತ್ತು ರೂ 500 ದಂಡಶಿಕ್ಷೆ ನಿರ್ಧರಿಸಲಾಗಿತ್ತು.

2006: ಭಾರತ ಮತು ಇಸ್ರೇಲ್ ಇದೇ ಪ್ರಥಮ ಬಾರಿಗೆ ಕೃಷಿ ಕ್ಷೇತದಲ್ಲಿ ಪರಸ್ಪರ ಸಹಕರಿಸುವ ಸಲುವಾಗಿ ಮೂರು ವರ್ಷಗಳ ಕಾಲ ಮಹತ್ವದ ಕಾರ್ಯ ಯೋಜನೆ ರೂಪಿಸುವ ಐತಿಹಾಸಿಕ ಒಪ್ಪಂದಕ್ಕೆ ಇಸ್ರೇಲಿನ ಟೆಲ್ ಅವೀವಿನಲ್ಲಿ ಸಹಿ ಹಾಕಿದವು. ಭಾರತ ಸರ್ಕಾರದ ಕೃಷಿ ಸಚಿವ ಶರದ್ ಪವಾರ್ ಮತ್ತು ಇಸ್ರೇಲ್ ಸರ್ಕಾರದ ಕೃಷಿ ಸಚಿವ ಶಲಾಮ್ ಸೈಮ್ಹಾನ್ ಅವರು ರಾತ್ರಿ ಇಲ್ಲಿ ಈ ಪ್ರಮುಖ ಒಪ್ಪಂದಕ್ಕೆ ಸಹಿ ಹಾಕಿದರು.

2002: ಉರ್ದು ಕವಿ ಕೈಫಿ ಅಜ್ಮಿ ಮುಂಬೈಯಲ್ಲಿ ತಮ್ಮ 83ನೇ ವಯಸ್ಸಿನಲ್ಲಿ ನಿಧನರಾದರು. ಇವರು ಬಾಲಿವುಡ್ ನಟಿ ಶಬಾನಾ ಅಜ್ಮಿ ಅವರ ತಂದೆ.

1993: ಭಾರತದ ಸಂತೋಷ ಯಾದವ್ ಎವರೆಸ್ಟ್ ಪರ್ವತವನ್ನು ಎರಡು ಸಲ ಏರಿದ ಜಗತ್ತಿನ ಪ್ರಪ್ರಥಮ ಮಹಿಳೆ ಎಂಬ ಹೆಗ್ಗಳಿಕೆಗೆ ಪಾತ್ರರಾದರು. ಆಕೆ 1992ರ ಮೇ 12ರಂದು ಮೊದಲ ಬಾರಿಗೆ ಎವರೆಸ್ಟ್ ಪರ್ವತವನ್ನು ಏರಿದ್ದರು.

1977: ಕಲಾವಿದೆ ದಿವ್ಯಾ ರಾಘವನ್ ಜನನ.

1957: ಕಲಾವಿದೆ ಉಮಾಶ್ರೀ ಜನನ.

1949: ಕಲಾವಿದ ದ್ವಾರಕಾನಾಥ್ ಜನನ.

1940: ಬ್ರಿಟಿಷ್ ಪ್ರಧಾನಿ ನೆವಿಲ್ ಚೆಂಬರ್ಲಿನ್ ರಾಜೀನಾಮೆ ನೀಡಿದರು. ಅವರ ಉತ್ತರಾಧಿಕಾರಿಯಾಗಿ ವಿನ್ ಸ್ಟನ್ ಚರ್ಚಿಲ್ ಅಧಿಕಾರಕ್ಕೆ ಏರಿದರು.

1940: ಕಲಾವಿದ ರಾಘವೇಂದ್ರರಾವ್ ಎಸ್ ಜನನ.

1933: ಕರ್ನಾಟಕದ ಜಾನಪದ ಕಲೆಗಳಲ್ಲಿ ನಶಿಸಿ ಹೋಗಿದ್ದ ಸಲಾಕೆ ಗೊಂಬೆ ಕಲೆಗೆ ಮರುಹುಟ್ಟು ನೀಡಿದ ರಂಗನಾಥರಾವ್ ಅವರು ಎಂ. ರಂಗಯ್ಯ- ಪುಟ್ಟ ಲಕ್ಷ್ಮಮ್ಮ ದಂಪತಿಯ ಮಗನಾಗಿ ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಮಾಗಡಿ ತಾಲ್ಲೂಕಿನ ದೊಡ್ಡ ಮುದಿಗೆರೆಯಲ್ಲಿ ಜನಿಸಿದರು.

1933: `ಚಿ.ಮೂ.' ಎಂದೇ ಖ್ಯಾತರಾದ ಸಾಹಿತಿ, ಪ್ರಾಧ್ಯಾಪಕ, ಸಂಶೋಧಕ ಡಾ. ಎಂ. ಚಿದಾನಂದ ಮೂರ್ತಿ ಅವರು ಈದಿನ ಶಿವಮೊಗ್ಗ ಜಿಲ್ಲೆಯ ಚನ್ನಗಿರಿ ತಾಲ್ಲೂಕಿನ ಹಿರೇಕೊಗಲೂ ಗ್ರಾಮದಲ್ಲಿ ಕೊಟ್ಟೂರಯ್ಯ- ಪಾರ್ವತವ್ವ ದಂಪತಿಯ ಪುತ್ರರಾಗಿ ಜನಿಸಿದರು. ವಿವಿಧ ಪ್ರಕಾರಗಳಲ್ಲಿ ಐವತ್ತಕ್ಕೂ ಹೆಚ್ಚು ಕೃತಿಗಳನ್ನು ರಚಿಸಿರುವ ಚಿ.ಮೂ. ಕೇಂದ್ರ ಸಾಹಿತ್ಯ ಅಕಾಡೆಮಿ, ರಾಜ್ಯ ಸಾಹಿತ್ಯ ಅಕಾಡೆಮಿ ಪ್ರಶಸ್ತಿ, ರಾಜ್ಯೋತ್ಸವ ಪ್ರಶಸ್ತಿ, ಅ.ನ.ಕೃ. ಪ್ರಶಸ್ತಿ, ನಾಡೋಜ ಪ್ರಶಸ್ತಿ ಸೇರಿದಂತೆ ಹಲವಾರು ಪ್ರಶಸ್ತಿಗಳಿಗೆ ಪಾತ್ರರಾಗಿದ್ದಾರೆ. ಜನತೆ ಪ್ರೀತಿ ಗೌರವಗಳಿಂದ ಅವರಿಗೆ ಅರ್ಪಿಸಿದ ಗೌರವ ಗ್ರಂಥ `ಸಂಶೋಧನೆ'.

1857: ಭಾರತದ ಮೊತ್ತ ಮೊದಲ ಸ್ವಾತಂತ್ರ್ಯ ಸಂಗ್ರಾಮ ಮೀರತ್ತಿನಲ್ಲಿ ಆರಂಭಗೊಂಡಿತು. ಬ್ರಿಟಿಷರು ಇದನ್ನು ಸಿಪಾಯಿ ದಂಗೆ ಎಂದು ಕರೆದರು. 1844, 1849, 1850 ಹಾಗೂ 1852ರಲ್ಲಿ ಸಣ್ಣ ಪ್ರಮಾಣದ ದಂಗೆಗಳು ನಡೆದರೂ 1857ಕ್ಕೆ ಹೋಲಿಸಿದರೆ ಅವುಗಳಿಗೆ ಲಭಿಸಿದ ಮಹತ್ವ ಅತ್ಯಂತ ಕಡಿಮೆ.

1774: ಹದಿನಾರನೇ ಲೂಯಿ ಫ್ರಾನ್ಸಿನ ಸಿಂಹಾಸನ ಏರಿದ. ಆತನ ಆಡಳಿತಾವಧಿಯಲ್ಲಿ ಫ್ರೆಂಚ್ ಕ್ರಾಂತಿ ಆರಂಭವಾಯಿತು. 1793ರ ಜನವರಿ 21ರಂದು ಪ್ಯಾರಿಸ್ಸಿನಲ್ಲಿ ಆತನನ್ನು ಗಿಲೋಟಿನ್ ಯಂತ್ರದ ಮೂಲಕ ಕೊಲ್ಲಲಾಯಿತು.

ಇಂದಿನ ಇತಿಹಾಸ History Today ಮೇ 09

ಇಂದಿನ ಇತಿಹಾಸ

ಮೇ 09

ಜೆಡಿ (ಯು) ನಾಯಕ ನಿತೀಶ್ ಕುಮಾರ್ ಅವರ ಮೇಲೆ ಅಚ್ಚರಿಯ ದಾಳಿ ನಡೆಸಿದ ಎಂ. ವೀರಪ್ಪ ಮೊಯಿಲಿ ಅವರನ್ನು ಕಾಂಗ್ರೆಸ್ ವರಿಷ್ಠ ಮಂಡಳಿಯು ಹಠಾತ್ತನೆ ಕಾಂಗ್ರೆಸ್ ಮಾಧ್ಯಮ ವಿಭಾಗದ ಅಧ್ಯಕ್ಷ ಸ್ಥಾನದಿಂದ ಕಿತ್ತು ಹಾಕಿತು. ಹಿಂದೆ ಇದೇ ಹುದ್ದೆ ನಿಭಾಯಿಸುತ್ತಿದ್ದ ಎಐಸಿಸಿ ಪ್ರಧಾನ ಕಾರ್ಯದರ್ಶಿ ಜನಾರ್ದನ ದ್ವಿವೇದಿ ಅವರನ್ನು ಮೊಯಿಲಿ ಸ್ಥಾನಕ್ಕೆ ನೇಮಿಸಲಾಗಿದೆ ಎಂದು ಪಕ್ಷದ ಮೂಲಗಳು ತಿಳಿಸಿದವು.

2009: ಸತತ ಪರಿಶ್ರಮ, ಗುರಿ ಸಾಧಿಸುವ ಛಲವಿದ್ದರೆ ಯಶಸ್ಸು ಸಾಧಿಸಬಹುದು ಎಂಬುದಕ್ಕೆ ದ್ವಿತೀಯ ಪಿಯುಸಿ ಕಲಾ ವಿಭಾಗದಲ್ಲಿ ರಾಜ್ಯಕ್ಕೆ ಪ್ರಥಮ ರಾಂಕ್ ಗಳಿಸುವ ಮೂಲಕ ಎಸ್.ಕೆ. ಶ್ರುತಿ ಸಾಕ್ಷಿಯಾದಳು. ಸರ್ಕಾರಿ ಬಸ್‌ಗಳಿಲ್ಲದೆ ಖಾಸಗಿ ಬಸ್ ಮತ್ತು ಟೆಂಪೋಗಳಲ್ಲಿ ಪ್ರತಿದಿನ ಕಾಲೇಜಿಗೆ ಪ್ರಯಾಣ ಮಾಡಿ ಕಡುಬಡತನದಲ್ಲಿ ಅಭ್ಯಾಸ ಮಾಡಿದ ಹರಪನಹಳ್ಳಿ ಎಸ್‌ಯುಜೆಎಂ ಕಾಲೇಜಿನ ವಿದ್ಯಾರ್ಥಿನಿ ಶ್ರುತಿ ಕನ್ನಡ 94, ಸಂಸ್ಕೃತ 92, ಇತಿಹಾಸ 92, ಐಚ್ಛಿಕ ಕನ್ನಡ 98, ರಾಜ್ಯಶಾಸ್ತ್ರ 97, ಶಿಕ್ಷಣ 91, ಒಟ್ಟು 564 (ಶೇ.94) ಅಂಕಗಳನ್ನು ಗಳಿಸಿ ಪ್ರಥಮ ರಾಂಕ್ ಪಡೆದು ತಾಲ್ಲೂಕಿನ ಹೆಮ್ಮೆಯ ಪುತ್ರಿ ಎನಿಸಿಕೊಂಡಳು. ಹರಪನಹಳ್ಳಿ ತಾಲ್ಲೂಕು ಕೇಂದ್ರದಿಂದ 17 ಕಿ.ಮೀ. ದೂರದ ಜೋಷಿಲಿಂಗಾಪುರ ಗ್ರಾಮದ ಜ್ಯೋತೆಪ್ಪ ಮತ್ತು ಮಂಜಮ್ಮ ದಂಪತಿ ಮಗಳಾದ ಶ್ರುತಿ ಪ್ರಾಥಮಿಕ ಹಂತದಿಂದಲೇ ಯಾವ ಖಾಸಗಿ ಟ್ಯೂಷನ್‌ಗಳ ಗೀಳಿಗೆ ಬೀಳದೆ ಹಾಸ್ಟೆಲ್ ಮತ್ತಿತರ ಸೌಲಭ್ಯಗಳಿಲ್ಲದೆ ಸರ್ಕಾರಿ ಶಾಲೆಗಳಲ್ಲಿ ಅಭ್ಯಾಸ ಮಾಡಿದ ಬಾಲಕಿ. ಕಾನ್ವೆಂಟ್ ಮತ್ತು ವಸತಿ ಶಾಲೆಗಳಲ್ಲಿ ಅಭ್ಯಾಸ ಮಾಡಿದವರಿಗೆ ಮಾತ್ರ ರಾಂಕ್ ಎನ್ನುವವರಿಗೆ ಸವಾಲು ಎಂಬಂತೆ ಶ್ರುತಿ ಸಾಧನೆ ಮಾಡಿ ತೋರಿಸಿದಳು.

2009: ಕನ್ನಡ ಮತ್ತು ತೆಲುಗು ಭಾಷೆಗಳಿಗೆ ಶಾಸ್ತ್ರೀಯ ಸ್ಥಾನಮಾನ ನೀಡಲು ನವದೆಹಲಿಯಲ್ಲಿ ನಡೆದ ಕೇಂದ್ರ ಸಂಪುಟ ಸಭೆ ಒಪ್ಪಿಗೆ ನೀಡಿತು. ಈ ಮೂಲಕ ಶಾಸ್ತ್ರೀಯ ಸ್ಥಾನಮಾನ ಸಿಗಲು ಬೇಕಾಗಿದ್ದ ತಾಂತ್ರಿಕ ಅಗತ್ಯವೊಂದು ಪೂರ್ಣಗೊಂಡಂತಾಯಿತು. 2008ರ ರಾಜ್ಯೋತ್ಸವದ ಸಂದರ್ಭದಲ್ಲೇ ಪ್ರಧಾನಿ ಮನಮೋಹನ್ ಸಿಂಗ್ ಅವರು ಕನ್ನಡಕ್ಕೆ ಶಾಸ್ತ್ರೀಯ ಸ್ಥಾನಮಾನ ನೀಡಲು ಸಮ್ಮತಿ ಸೂಚಿಸಿದ್ದರು. ಆದರೆ ಇದು ಮದ್ರಾಸ್ ಹೈಕೋರ್ಟಿನಲ್ಲಿ ಸಲ್ಲಿಸಲಾದ ಪ್ರಕರಣವೊಂದರ ಫಲಶ್ರುತಿಯನ್ನು ಆಧರಿಸಿರುತ್ತದೆ ಎಂದು ತಿಳಿಸಲಾಗಿತ್ತು. ಈದಿನ ನಡೆದ ಸಂಪುಟ ಸಭೆ ಪ್ರಧಾನಿ ಅವರು ನೀಡಿದ ಒಪ್ಪಿಗೆಗೆ ಸಮ್ಮತಿ ನೀಡಿತು.

2009: ಶ್ರೀಲಂಕಾದಲ್ಲಿ ಮುಂದುವರಿದ ಘೋರ ಕಾಳಗದಲ್ಲಿ ಒಂದೆಡೆ ಭೂಸೇನೆಯು ಇನ್ನಷ್ಟು ಮುನ್ನುಗ್ಗಿ 66 ತಮಿಳು ಉಗ್ರರ ಹತ್ಯೆ ಮಾಡಿದರೆ, ಇನ್ನೊಂದೆಡೆ ನೌಕಾಪಡೆಯು ವೈರಿಗಳ ಎರಡು ದೋಣಿಗಳನ್ನು ಹೊಡೆದುರುಳಿಸಿ 14 ಬಂಡುಕೋರರನ್ನು ಹತ್ಯೆ ಮಾಡಿತು. ಯುದ್ಧ ನಿರ್ಬಂಧ ವಲಯದಲ್ಲಿ ಎಲ್‌ಟಿಟಿಇ ಹಿಡಿತದಲ್ಲಿ ಅಳಿದುಳಿದ ಪ್ರದೇಶವನ್ನೂ ಸೇನಾ ಪಡೆಗಳು ವಶಪಡಿಸಿಕೊಳ್ಳತೊಡಗಿದವು. 'ಈ ಸಂದರ್ಭದಲ್ಲಿ 14 ಕಡಲು ವ್ಯಾಘ್ರರು ಸೇರಿ ಕನಿಷ್ಠ 80 ತಮಿಳು ಉಗ್ರರು ಹತರಾಗಿದ್ದಾರೆ' ಎಂದು ರಕ್ಷಣಾ ಸಚಿವಾಲಯ ಹೇಳಿತು.

2009: ಜೆಡಿ (ಯು) ನಾಯಕ ನಿತೀಶ್ ಕುಮಾರ್ ಅವರ ಮೇಲೆ ಅಚ್ಚರಿಯ ದಾಳಿ ನಡೆಸಿದ ಎಂ. ವೀರಪ್ಪ ಮೊಯಿಲಿ ಅವರನ್ನು ಕಾಂಗ್ರೆಸ್ ವರಿಷ್ಠ ಮಂಡಳಿಯು ಹಠಾತ್ತನೆ ಕಾಂಗ್ರೆಸ್ ಮಾಧ್ಯಮ ವಿಭಾಗದ ಅಧ್ಯಕ್ಷ ಸ್ಥಾನದಿಂದ ಕಿತ್ತು ಹಾಕಿತು. ಹಿಂದೆ ಇದೇ ಹುದ್ದೆ ನಿಭಾಯಿಸುತ್ತಿದ್ದ ಎಐಸಿಸಿ ಪ್ರಧಾನ ಕಾರ್ಯದರ್ಶಿ ಜನಾರ್ದನ ದ್ವಿವೇದಿ ಅವರನ್ನು ಮೊಯಿಲಿ ಸ್ಥಾನಕ್ಕೆ ನೇಮಿಸಲಾಗಿದೆ ಎಂದು ಪಕ್ಷದ ಮೂಲಗಳು ತಿಳಿಸಿದವು. ನಿತೀಶ್ ಕುಮಾರ್ ಅವರನ್ನು 'ಹೀರೋ' ಮಾಡಲು ಕಾಂಗ್ರೆಸ್ ಪಕ್ಷವು ಹೊರಡುವುದಿಲ್ಲ ಎಂದು ಮೊಯಿಲಿ ಹೇಳಿದ್ದರು.

2009: ಬೆಂಗಳೂರು ವಿಶ್ವವಿದ್ಯಾಲಯದ ಸಂವಹನ ವಿಭಾಗದ ಪ್ರಾಧ್ಯಾಪಕ ಪ್ರೊ.ಬಿ.ಎ.ಶ್ರೀಧರ (59) ಅವರು ಬೆಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ನಿಧನರಾದರು. ಮೂಲತಃ ಮಂಡ್ಯ ಜಿಲ್ಲೆ ಶ್ರೀರಂಗಪಟ್ಟಣದವರಾದ ಶ್ರೀಧರ ಅವರು ಹತ್ತು ದಿನಗಳ ಹಿಂದೆ ತೆರೆದ ಹೃದಯ ಶಸ್ತ್ರಚಿಕಿತ್ಸೆಗೆ ಒಳಗಾಗಿದ್ದರು. 'ಪ್ರಜಾವಾಣಿ'ಯಲ್ಲಿ ಕೆಲವು ತಿಂಗಳುಗಳ ಕಾಲ 'ಟಿವಿ ಲೋಕ' ಅಂಕಣ ಬರೆದಿದ್ದ ಶ್ರೀಧರ್ ಅವರ ಮೂರು ಕೃತಿಗಳು ಇತ್ತೀಚೆಗೆ ಪ್ರಕಟವಾಗಿದ್ದವು. ಜಗತ್ತಿನ ಶ್ರೇಷ್ಠ ಚಿಂತಕರನ್ನು ಕುರಿತ 'ಇಳೆಯ ಬೆಳಗು', ಇಪ್ಪತ್ತನೇ ಶತಮಾನದ ವಿದ್ಯಮಾನಗಳನ್ನು ಕುರಿತ 'ಪಲ್ಲಟ ಪರ್ವ', ಮಹಾತ್ಮ ಗಾಂಧೀಜಿ ಚಿಂತನೆಗಳನ್ನು ಕುರಿತ 'ಬಾಪೂ ಚಿಂತನೆ' ಎಂಬ ಬರಹ ಸಂಕಲನಗಳು ಬಿಡುಗಡೆಯಾಗಿದ್ದವು.

2008: ಹಿಂದೂಗಳ ಮನ ನೋಯಿಸದಿರಲು ಬ್ರಿಟಿಷ್ ಏರ್ವೇಸ್ ತನ್ನ ಅಂತಾರಾಷ್ಟ್ರೀಯ ವಿಮಾನಯಾನದ ಎಕಾನಮಿ ದರ್ಜೆಯ ಪ್ರಯಾಣಿಕರ ಖಾದ್ಯಪಟ್ಟಿಯಿಂದ ಗೋಮಾಂಸವನ್ನು ತೆಗೆದುಹಾಕಿತು. ಬ್ರಿಟಿಷ್ ಏರ್ ವೇಸ್ಗೆ ಭಾರತ ಎರಡನೇ ಅತಿ ದೊಡ್ಡ ಮಾರುಕಟ್ಟೆ. `ಧಾರ್ಮಿಕ ನಿರ್ಬಂಧ'ದ ಅಡಿ ಗೋಮಾಂಸಕ್ಕೆ ಬದಲು ಮೀನು, ಕೋಳಿಮಾಂಸ ನೀಡಲಾಗುವದು ಎಂದು ಏರ್ ವೇಸ್ ತಿಳಿಸಿತು.

2008: ಹೈದರಾಬಾದಿನ ಕೋಶ ಮತ್ತು ಅಣು ಜೀವಶಾಸ್ತ್ರ ಕೇಂದ್ರದ ವಿಜ್ಞಾನಿಗಳು ಗಿಡಗಳ ವಂಶವಾಹಿಯೊಂದರ (ಜೀನ್) ಕಿವಿ ಹಿಂಡಿ ಅದರ ಲಿಂಗ ಪರಿವರ್ತಿಸಲು ಸಾಧ್ಯ ಎಂದು ಕಂಡು ಕೊಂಡಿರುವುದಾಗಿ ಪ್ರಕಟಿಸಿದರು. ಈ ಸಂಶೋಧನೆಯಿಂದ ಬೆಳೆಗಳ ಉತ್ಪಾದನೆ ಹೆಚ್ಚಳ ಸುಸ್ಥಿರಗೊಳ್ಳುವಂತೆ ಮಾಡಬಹುದು ಎಂಬುದು ಈ ವಿಜ್ಞಾನಿಗಳು ಲೆಕ್ಕಾಚಾರ. `ಡ್ಯಾಡ್' ಹೆಸರಿನ ಈ ವಂಶವಾಹಿಯನ್ನು ಗುರುತಿಸಿದವರು ಕೇಂದ್ರದ ಖ್ಯಾತ ಸಂಶೋಧಕ ಇಮ್ರಾನ್ ಸಿದ್ದಿಕಿ. ಅರಬಿಡೋಪ್ಸಿಸ್ ಎಂಬ ಗಿಡದಲ್ಲಿನ ಈ ವಂಶವಾಹಿಯ ವಿಶೇಷ ಗುಣವನ್ನು ಅವರು ಪತ್ತೆ ಮಾಡಿದರು. ಈ ನಿರ್ದಿಷ್ಟ ವಂಶವಾಹಿ ಎಲ್ಲ ಗಿಡಮರಗಳಲ್ಲೂ ಇರುತ್ತದೆ ಎಂಬುದನ್ನು ನಾವು ಪತ್ತೆ ಹಚ್ಚಿದ್ದೇವೆ ಎನ್ನುತ್ತಾರೆ ಸಿದ್ದಿಕಿ. ಈ ಸಂಶೋಧನೆ ಖಚಿತ ಹಂತಕ್ಕೆ ಬಂದರೆ ರೈತರು ಹೈಬ್ರಿಡ್ ಬೀಜಗಳನ್ನು ಖರೀದಿಸದೆಯೇ ಅತಿ ಹೆಚ್ಚು ಬೆಳೆ ಬೆಳೆಯುವ ಸಸಿಗಳನ್ನು ಬೆಳೆಸಿಕೊಳ್ಳಬಹುದು ಎಂಬುದು ಸಿದ್ದಿಕಿ ಮತ್ತು ಇತರ ವಿಜ್ಞಾನಿಗಳು ಅಭಿಪ್ರಾಯ.

2008: ಜಮ್ಮು ವಲಯದ ಸಾಂಬಾ ವಿಭಾಗದಲ್ಲಿ ಬಿ ಎಸ್ ಎಫ್ ತಪಾಸಣಾ ಕೇಂದ್ರದ ಮೇಲೆ ಪಾಕಿಸ್ಥಾನದ ಕಡೆಯಿಂದ ಭಾರಿ ಗುಂಡಿನ ದಾಳಿ ನಡೆಯಿತು. ಉಗ್ರಗಾಮಿಗಳ ನುಸುಳುವಿಕೆ ಯತ್ನ ಇದೆಂದು ವರದಿಗಳು ಹೇಳಿದವು. ರಾತ್ರಿ 10.40ರ ವೇಳೆಯಲ್ಲಿ ಈ ಘಟನೆ ನಡೆಯಿತು. ಬಿ ಎಸ್ ಎಫ್ ನ 112ನೇ ಬೆಟಾಲಿಯನ್ನಿಗೆ ಸೇರಿದ ತಪಾಸಣಾ ಕೇಂದ್ರದ ಮೇಲೆ ಭಾರಿ ಗುಂಡಿನ ದಾಳಿ ನಡೆಯಿತು. ಶಂಕಿತ ಉಗ್ರಗಾಮಿಗಳು ಬಿ ಎಸ್ ಎಫ್ ತಪಾಸಣಾ ಕೇಂದ್ರದ ಮೇಲೆ ಸುಮಾರು 1000 ಸುತ್ತು ಗುಂಡು ಹಾರಿಸಿ 16 ಗ್ರೆನೇಡುಗಳನ್ನು ಎಸೆದರು.

2008: ಐಪಿಎಲ್ ಪಂದ್ಯವೊಂದರಲ್ಲಿ ಆಫ್ ಸ್ಪಿನ್ನರ್ ಹರಭಜನ್ ಸಿಂಗ್ ಅವರು ವೇಗಿ ಎಸ್. ಶ್ರೀಶಾಂತ್ ಕೆನ್ನೆಗೆ ಬಾರಿಸಿದ ಪ್ರಕರಣದ ವಿಚಾರಣೆಯನ್ನು ಆಯುಕ್ತ ಸುಧೀರ್ ನಾನಾವತಿ ಅವರು ಮುಗಿಸಿದರು.

2008: ಪಾಕಿಸ್ಥಾನದ ಮಾಜಿ ಪ್ರಧಾನಿ ಬೆನಜೀರ್ ಭುಟ್ಟೊ ಅವರು 1993ರಲ್ಲಿ ತಾವು ಪ್ರಧಾನಿ ಆಗಿದ್ದಾಗ ಪರಮಾಣು ತಂತ್ರಜ್ಞಾನದ ರಹಸ್ಯವನ್ನು ಉತ್ತರ ಕೊರಿಯಾಕ್ಕೆ ತಮ್ಮ ಕೋಟಿನೊಳಗೇ ಇರಿಸಿ ರವಾನಿಸಿದ ಅಂಶ ಬಯಲಾಯಿತು. ಭುಟ್ಟೊ ಅವರ ಆಪ್ತ ಗೆಳೆಯ ಹಾಗೂ ಆಕ್ಸ್ ಫರ್ಡ್ ಸಹಪಾಠಿ ಶ್ಯಾಮ್ ಭಾಟಿಯಾ ಅವರು ಬರೆದಿರುವ `ಗುಡ್ ಬೈ ಶಹಜಾದಿ' ಜೀವನ ಚರಿತ್ರೆ ಕೃತಿ ಈ ಸ್ಫೋಟಕ ಅಂಶವನ್ನು ಬಹಿರಂಗಪಡಿಸಿತು. ಕ್ಷಿಪಣಿ ಪಡೆಯುವ ಸಲುವಾಗಿ ಪಾಕಿಸ್ಥಾನವು ಉತ್ತರ ಕೊರಿಯಾಕ್ಕೆ ಯುರೇನಿಯಮ್ಮನ್ನು ಇಂಧನವಾಗಿ ಬಳಸುವ (ಎನ್ರಿಚ್ ಮೆಂಟ್) ತಂತ್ರಜ್ಞಾನವನ್ನು ಹಸ್ತಾಂತರಿಸಿತ್ತು. ಭುಟ್ಟೊ ಅವರೇ ಇದರಲ್ಲಿ ನೇರ ಪಾತ್ರ ವಹಿಸಿದ್ದರು ಎಂದು ಕೃತಿ ತಿಳಿಸಿತು. ಶ್ಯಾಮ್ ಭಾಟಿಯಾ ಅವರೊಂದಿಗೆ ಸಂಭಾಷಣೆ ನಡೆಸುತ್ತಿದ್ದಾಗ ಸ್ವತಃ ಬೆನಜೀರ್ ಭುಟ್ಟೊ ಅವರೇ ಈ ಮಾಹಿತಿ ನೀಡಿದ್ದರು ಎಂದು ಕೃತಿ ತಿಳಿಸಿತು. ಪಾಕಿಸ್ಥಾನದ ಸೇನಾ ಸಂಶೋಧನೆಯ ಪ್ರತಿಯೊಂದು ನಡೆಯನ್ನೂ ಭಾರತ, ರಷ್ಯ ಮತ್ತು ಕೆಲವು ಪಾಶ್ಚಾತ್ಯ ರಾಷ್ಟ್ರಗಳು ಸೂಕ್ಷ್ಮವಾಗಿ ಗಮನಿಸುತ್ತಿದ್ದವು. ಇವರೆಲ್ಲರ ಕಣ್ಣು ತಪ್ಪಿಸಲು ಭುಟ್ಟೊ ಅವರು ಸ್ವತಃ ತಾವೇ ಈ ಸೂಕ್ಷ್ಮ ಮಾಹಿತಿ ರವಾನೆಯ ಹೊಣೆ ಹೊತ್ತುಕೊಂಡರು ಎಂದು ಪುಸ್ತಕ ತಿಳಿಸಿತು. `ಭುಟ್ಟೊ ಅವರು 1993ರ ಕೊನೆಯಲ್ಲಿ ಉತ್ತರ ಕೊರಿಯಾಕ್ಕೆ ಭೇಟಿ ನೀಡುವ ಕಾರ್ಯಕ್ರಮ ನಿಗದಿಯಾಗಿತ್ತು. ಪರಮಾಣು ತಂತ್ರಜ್ಞಾನದ ಮಾಹಿತಿಯನ್ನು ತಾವೇ ತರಲಿದ್ದು, ಪೆಂಗ್ಯಾಂಗಿಗೆ ತಲುಪಿದ ತಕ್ಷಣ ಅದನ್ನು ಹಸ್ತಾಂತರಿಸುವುದಾಗಿ ಅವರು ಉತ್ತರ ಕೊರಿಯಾಕ್ಕೆ ತಿಳಿಸಿದರು. ಇಸ್ಲಾಮಾಬಾದಿನಿಂದ ತೆರಳುವ ಮೊದಲು ಅವರು ಆಳವಾದ ಜೇಬು ಇರುವ ಓವರ್ ಕೋಟ್ ಒಂದನ್ನು ಖರೀದಿಸಿದರು. ಉತ್ತರ ಕೊರಿಯಾ ಬಯಸಿದ್ದ ಯುರೇನಿಯಂ ಎನ್ರಿಚ್ ಮೆಂಟ್ ತಂತ್ರಜ್ಞಾನದ ಬಗ್ಗೆ ಮಾಹಿತಿ ಇದ್ದ ಸಿ.ಡಿ.ಗಳನ್ನು ಜೇಬಿನಲ್ಲಿ ಇಟ್ಟರು' ಎಂದು ಪುಸ್ತಕ ವಿವರಿಸಿತು. ವಾಪಸ್ ಬರುವಾಗ ಅವರು ಉತ್ತರ ಕೊರಿಯಾದ ಕ್ಷಿಪಣಿ ಮಾಹಿತಿಗಳನ್ನು ಸಿ.ಡಿ.ಗಳಲ್ಲಿ ತಂದಿದ್ದರು' ಎಂದು ಶ್ಯಾಮ್ ಭಾಟಿಯಾ ಕೃತಿ ಹೇಳಿತು.

2008: ವಿಶ್ವ ಚೆಸ್ ಚಾಂಪಿಯನ್ ಭಾರತದ ವಿಶ್ವನಾಥನ್ ಆನಂದ್ ಅವರು ಚೆಸ್ ಆಟಗಾರರಿಗೆ ನೀಡಲಾಗುವ ಅತ್ಯುನ್ನತ ಪದವಿ `ಆಸ್ಕರ್' ಪ್ರಶಸ್ತಿಯನ್ನು ಐದನೇ ಬಾರಿ ಪಡೆದರು. 2007ರಲ್ಲಿ ಆನಂದ್ ತೋರಿದ ಶ್ರೇಷ್ಠ ಸಾಧನೆಗಾಗಿ ಈ ಪ್ರಶಸ್ತಿ ನೀಡಲಾಯಿತು. ಆನಂದ್ ಈ ಮೊದಲು 1997, 1998, 2003 ಹಾಗೂ 2004ರಲ್ಲಿ ಈ ಗೌರವ ಪಡೆದಿದ್ದರು.

2008: ಇಟಲಿಯ ಪ್ರಧಾನಿಯಾಗಿ ಸಿಲ್ವಿಯೊ ಬೆರ್ಲುಸ್ ಕೋನಿ (71) ಅವರು ಮೂರನೇ ಬಾರಿಗೆ ಅಧಿಕಾರ ವಹಿಸಿಕೊಂಡರು. ಏಪ್ರಿಲ್ 13-14ರಂದು ನಡೆದ ಚುನಾವಣೆಯಲ್ಲಿ ಸಿಲ್ವಿಯೊ ಅವರ ಕನ್ಸರ್ವೇಟಿವ್ ಪಕ್ಷ ಬಹುಮತ ಗಳಿಸಿತ್ತು.

2007: ತಮಿಳುನಾಡು ಮುಖ್ಯಮಂತ್ರಿ ಎಂ. ಕರುಣಾನಿಧಿ ಅವರ ಹಿರಿಯ ಪುತ್ರ ಎಂ.ಕೆ. ಅಳಗಿರಿ ಅವರ ಬೆಂಬಲಿಗರು ಮದುರೆಯಲ್ಲಿ ಜನಪ್ರಿಯ ತಮಿಳು ದೈನಿಕ `ದಿನಕರನ್' ಕಚೇರಿ ಮೇಲೆ ದಾಳಿ ಮಾಡಿ ಇಬ್ಬರು ನೌಕರರು ಹಾಗೂ ಭದ್ರತಾ ಸಿಬ್ಬಂದಿಯನ್ನು ಕೊಂದು ಹಾಕಿದರು. ಇದರೊಂದಿಗೆ ಆಡಳಿತಾರೂಢ ಡಿಎಂಕೆಯ ಸಂಭಾವ್ಯ ಉತ್ತರಾಧಿಕಾರಿ ಸಮರ ಬಹಿರಂಗವಾಗಿ ಬೀದಿಗೆ ಬಂತು. ಕರುಣಾನಿಧಿಯ ಕಿರಿಯ ಪುತ್ರ ಎಂ.ಕೆ. ಸ್ಟಾಲಿನ್ ಅವರನ್ನು 84ರ ಹರೆಯದ ಕರುಣಾನಿಧಿ ಅವರ ರಾಜಕೀಯ ಉತ್ತರಾಧಿಕಾರಿ ಎಂಬುದಾಗಿ ಬಿಂಬಿಸಿ `ದಿನಕರನ್' ಪ್ರಕಟಿಸಿದ ಸಮೀಕ್ಷೆಗೆ ಪ್ರತಿಭಟನೆಯಾಗಿ ಈ ದಾಳಿ ನಡೆಯಿತು.

2007: ಮೂಲಸೌಕರ್ಯಗಳಿಲ್ಲದ ಕಾರಣಕ್ಕಾಗಿ 27 ನರ್ಸಿಂಗ್ ಕಾಲೇಜುಗಳ ಮಾನ್ಯತೆಯನ್ನು (ಸಂಯೋಜನೆ) ರಾಜೀವ್ ಗಾಂಧಿ ಆರೋಗ್ಯ ವಿಜ್ಞಾನಗಳ ವಿಶ್ವ ವಿದ್ಯಾಲಯವು ರದ್ದುಪಡಿಸಿತು. ಹೈಕೋರ್ಟ್ ನೀಡಿರುವ ತೀರ್ಪಿನ ಮೇರೆಗೆ ಈ ನಿರ್ಧಾರ ಕೈಗೊಳ್ಳಲಾಗಿದೆ ಎಂದು ವಿ.ವಿ. ಕುಲಪತಿ ಡಾ.ಪಿ.ಎಸ್. ಪ್ರಭಾಕರನ್ ಪ್ರಕಟಿಸಿದರು.

2007: ಮಹಿಳಾ ನೌಕರರಿಗೆ ರಾತ್ರಿ ಪಾಳಿಯನ್ನು ನಿಷೇಧಿಸುವ ಕರ್ನಾಟಕ ಅಂಗಡಿ ಮತ್ತು ವಾಣಿಜ್ಯ ಸಂಸ್ಥೆ ಕಾಯ್ದೆ- 1961ರ ತಿದ್ದುಪಡಿಗೆ ರಾಜ್ಯ ಸರ್ಕಾರವು ಸಮ್ಮತಿ ನೀಡಿದ್ದು, ರಾಜ್ಯಪಾಲರ ಮುದ್ರೆ ಪಡೆದ ನಂತರ ಕರ್ನಾಟಕ ಅಂಗಡಿ ಮತ್ತು ವಾಣಿಜ್ಯ ಕಾಯ್ದೆ 2007 ನ್ನು ಏಪ್ರಿಲ್ 30ರಂದು ರಾಜ್ಯಪತ್ರದಲ್ಲಿ (ಗೆಜೆಟ್) ಪ್ರಕಟಿಸಿದೆ, ಈ ಸಂಬಂಧ ಅಧಿಸೂಚನೆ 15 ದಿನಗಳ ಒಳಗೆ ಜಾರಿಯಾಗಲಿದೆ ಎಂದು ಕಾರ್ಮಿಕ ಸಚಿವ ಇಕ್ಬಾಲ್ ಅನ್ಸಾರಿ ಪ್ರಕಟಿಸಿದರು.

2007: ಕರ್ನಾಟಕದಲ್ಲಿ ಸುಮಾರು 1728.68 ಕೋಟಿ ರೂಪಾಯಿ ಹೂಡಿಕೆಯ ಎರಡು ವಿಶೇಷ ವಿತ್ತ ವಲಯಗಳಿಗೆ ಕೇಂದ್ರ ಸರ್ಕಾರವು ಮಂಜೂರಾತಿ ನೀಡಿತು. ದಕ್ಷಿಣ ಕನ್ನಡ ಜಿಲ್ಲೆ ಬಂಟ್ವಾಳ ತಾಲ್ಲೂಕಿನ ತುಂಬೆ ಗ್ರಾಮದ ಬಳಿ 432.84 ಕೋಟಿ ರೂಪಾಯಿ ಹೂಡಿಕೆಯೊಂದಿಗೆ ಮಾಹಿತಿ ತಂತ್ರಜ್ಞಾನ ವಲಯ ಸ್ಥಾಪನೆ ಹಾಗೂ ಉಡುಪಿ ತಾಲ್ಲೂಕಿನ ಹೆಜಮಾಡಿ, ನಂದಿಕೂರು, ಫಲಿಮಾರು ಹಾಗೂ ನಡ್ಸಾಲು (ಪಡುಬಿದ್ರಿ) ಗ್ರಾಮಗಳ ಬಳಿ ಉನ್ನತ ತಂತ್ರಜ್ಞಾನ ಉತ್ಪನ್ನಗಳು ಹಾಗೂ ಸಂಬಂಧಿತ ಸೇವೆಗಳ ವಿಶೇಷ ಆರ್ಥಿಕ ವಲಯ ಸ್ಥಾಪನೆ ಇವುಗಳಲ್ಲಿ ಸೇರಿವೆ.

2007: ಪ್ರಶಸ್ತಿ ಪ್ರದಾನ ಸಮಾರಂಭ ಒಂದರಲ್ಲಿ ಕನ್ನಡ ಸಾಹಿತ್ಯ ಪರಿಷತ್ ಮಾಜಿ ಅಧ್ಯಕ್ಷ ಹರಿಕೃಷ್ಣ ಪುನರೂರು ಅವರ ಪಂಚೆ ಎಳೆದ ಆರೋಪ ಹೊತ್ತಿದ್ದ ಕನ್ನಡ ಸಂಘರ್ಷ ಸಮಿತಿಯ ಐವರು ಪದಾಧಿಕಾರಿಗಳನ್ನು ನಿರ್ದೋಷಿಗಳು ಎಂದು ಬೆಂಗಳೂರು ನಗರದ ಒಂದನೇ ಹೆಚ್ಚುವರಿ ಪ್ರಧಾನ ಮೆಟ್ರೋಪಾಲಿಟನ್ ಮ್ಯಾಜಿಸ್ಟ್ರೇಟ್ ಕೋರ್ಟ್ ತೀರ್ಪು ನೀಡಿತು.

2007: ಭೂ ಮೇಲ್ಮೈಯಿಂದ ಭೂ ಮೇಲ್ಮೈಗೆ ನೆಗೆಯುವಂತಹ ಅತ್ಯಾಧುನಿಕ ಮಧ್ಯಂತರಗಾಮೀ ಸ್ವದೇಶೀ ನಿರ್ಮಿತ `ಪೃಥ್ವಿ-1' ಕ್ಷಿಪಣಿಯ ಪರೀಕ್ಷಾ ಉಡಾವಣೆಯನ್ನು ಭಾರತವು ಒರಿಸ್ಸಾದ ಬಾಲಸೋರ್ ಸಮೀಪದ 15 ಕಿ.ಮೀ. ದೂರದ ಚಂಡಿಪುರದ ಸಮಗ್ರ ಪರೀಕ್ಷಾ ವಲಯದಿಂದ ಯಶಸ್ವಿಯಾಗಿ ನಡೆಸಿತು.

2007: ಲೇಖಕ ಮತ್ತು ವಿಶ್ವಸಂಸ್ಥೆಯ ಮಾಜಿ ಪ್ರಧಾನ ಕಾರ್ಯದರ್ಶಿ ಶಶಿ ತರೂರ್ ಅವರಿಗೆ ಸಾಗರೋತ್ತರ ಭಾರತೀಯರಿಗೆ ನೀಡುವ ಅತ್ಯುನ್ನತ ಪ್ರಶಸ್ತಿಯಾದ ಪ್ರವಾಸಿ ಭಾರತೀಯ ಸಮ್ಮಾನ್ ಪ್ರಶಸ್ತಿಯನ್ನು ನೀಡಲಾಯಿತು.

2007: ಕನ್ನಡ ಸಾಹಿತ್ಯ ಪರಿಷತ್ ಮತ್ತು ಬಿಎಂಟಿಸಿ ಸಹಯೋಗದಲ್ಲಿ ನೀಡಲಾಗುವ ಪ್ರತಿಷ್ಠಿತ `ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆ ನೃಪತುಂಗ ಪ್ರಶಸ್ತಿ'ಗೆ ಹಿರಿಯ ಸಾಹಿತಿ ಪ್ರೊ. ದೇ. ಜವರೇಗೌಡ ಅವರನ್ನು ಆಯ್ಕೆ ಮಾಡಲಾಯಿತು.

2006: ಭಾರತದ ಮಹತ್ವಾಕಾಂಕ್ಷೆಯ `ಚಂದ್ರಯಾನ-1' ಯೋಜನೆಯ ಐತಿಹಾಸಿಕ ಒಪ್ಪಂದ ಪತ್ರಕ್ಕೆ ಬಾಹ್ಯಾಕಾಶ ಸಂಶೋಧನಾ ಕ್ಷೇತ್ರದ ಜಾಗತಿಕ ದಿಗ್ಗಜ ಸಂಸ್ಥೆಗಳಾದ ಭಾರತದ ಬಾಹ್ಯಾಕಾಶ ಸಂಸ್ಥೆ (ಇಸ್ರೋ) ಮತ್ತು ಅಮೆರಿಕದ ಬಾಹ್ಯಾಕಾಶ ಸಂಸ್ಥೆ `ನಾಸಾ' ಸಹಿ ಹಾಕಿದವು. ಇದರೊಂದಿಗೆ ಉಭಯ ರಾಷ್ಟ್ರಗಳ ಬಾಹ್ಯಾಕಾಶ ಸಂಶೋಧನೆ ಕ್ಷೇತ್ರದಲ್ಲಿ ಹೊಸ ಅಧ್ಯಾಯ ಆರಂಭಗೊಂಡಿತು. ಭಾರತದ ಶ್ರೀಹರಿಕೋಟಾದಿಂದಲೇ ಮಾನವ ರಹಿತ `ಚಂದ್ರಯಾನ-1' ಉಪಗ್ರಹ ಉಡಾವಣೆಗೊಳ್ಳಲಿದ್ದು, ಚಂದ್ರಲೋಕದ ಪೂರ್ವಾಪರಗಳ ಸಂಶೋಧನೆ ನಡೆಸುವುದು.

2006: ವಿವಾದಾತ್ಮಕ `ಲಾಭದ ಹುದ್ದೆ' ವ್ಯಾಪ್ತಿಯಿಂದ ಇನ್ನಷ್ಟು ಹುದ್ದೆಗಳಿಗೆ ವಿನಾಯ್ತಿ ನೀಡುವ ಸಲುವಾಗಿ ಕಾಯ್ದೆಗೆ ತಿದ್ದುಪಡಿ ತರಲು ಪ್ರಧಾನಿ ಮನಮೋಹನ್ ಸಿಂಗ್ ನೇತೃತ್ವದಲ್ಲಿ ನಡೆದ ಕೇಂದ್ರ ಸಚಿವ ಸಂಪುಟ ಸಭೆ ನಿರ್ಧರಿಸಿತು.

2006: ವಾರಣಾಸಿ ಸಂಕಟ ಮೋಚನ ಹನುಮಾನ್ ಮಂದಿರದಲ್ಲಿ ನಡೆದ ಬಾಂಬ್ ಸ್ಫೋಟದ ರೂವಾರಿ ಎನ್ನಲಾದ ಜಾವೇದ್ ಯಾನೆ ಜುಬೇರ್ ಜಮ್ಮು-ಕಾಶ್ಮೀರ ಪೊಲೀಸರ ಗುಂಡಿಗೆ ಬಲಿಯಾದ. ಉತ್ತರ ಪ್ರದೇಶದ ಭರೂಜ್ ನಿವಾಸಿ ಜುಬೇರನ ಚಟುವಟಿಕೆಗಳ ಮೇಲೆ ಒಂದು ತಿಂಗಳಿನಿಂದ ಕಣ್ಣಿಡಲಾಗಿತ್ತು.

2006: ಮಾನವ ಹಕ್ಕುಗಳ ಮಂಡಳಿಯ ಸದಸ್ಯತ್ವಕ್ಕೆ ಭಾರತವು ಆಯ್ಕೆಯಾಯಿತು. ವಿಶ್ವಸಂಸ್ಥೆಯ ಸಾಮಾನ್ಯ ಸಭೆಯು ಏಷ್ಯಾದ 13 ರಾಷ್ಟ್ರಗಳನ್ನು ಗೌಪ್ಯ ಮತದಾನಕ್ಕೆ ಒಳಪಡಿಸಿದಾಗ ಭಾರತಕ್ಕೆ ಅತೀ ಹೆಚ್ಚು ಅಂದರೆ 173 ಮತಗಳು ಬಂದವು.

2006: ಆಸ್ಟ್ರೇಲಿಯಾದ ಗಣಿಯೊಳಗಿನ ತಂತಿಯ ಪಂಜರದಲ್ಲಿ 14ದಿನಗಳ ಕಾಲ ಸಿಕ್ಕಿ ಹಾಕಿಕೊಂಡಿದ್ದ ಬ್ರಾಂಟ್ ವೆಬ್ (37) ಮತ್ತು ಟಾಡ್ ರಸೆಲ್ (34) ಎಂಬ ಇಬ್ಬರು ಆಸ್ಟ್ರೇಲಿಯಾ ಗಣಿಕಾರ್ಮಿಕರನ್ನು ಬೆಳಗಿನ ಜಾವ ರಕ್ಷಿಸಲಾಯಿತು. ಮೂರನೇ ಗಣಿಕಾರ್ಮಿಕ ಲ್ಯಾರಿ ನೈಟ್ (44) ಭೂಕುಸಿತದಲ್ಲಿ ಸಾವಿಗೀಡಾದ. ಭೂಕಂಪದಿಂದ ಭೂಕುಸಿತ ಉಂಟಾಗಿ ಈ ಗಣಿ ಕಾರ್ಮಿಕರು 925 ಮೀಟರ್ ಆಳದಲ್ಲಿ ಎರಡು ಹಾಸಿಗೆ ಹಾಕುವಷ್ಟು ತಂತಿಯಿಂದ ಮಾಡಿದ ಪಂಜರದಲ್ಲಿ ಏ.25ರಂದು ಸಿಕ್ಕಿಹಾಕಿಕೊಂಡಿದ್ದರು.

2006: ತಮಿಳುನಾಡಿನ ವಿಲ್ಲುಪುರಂ ಜಿಲ್ಲೆಯ ತಿಂಡಿವನಮ್ಮಿನಲ್ಲಿ ಪಿಎಂಕೆಯಿಂದ ಪಕ್ಷಾಂತರಗೊಂಡ ಎಐಎಡಿಎಂಕೆ ಕಾರ್ಯಕರ್ತ ಮುರುಘನಂದಮ್ ಕೊಲೆಗೆ ಮೇ 8ರ ರಾತ್ರಿ ಪ್ರಚೋದನೆ ನೀಡಿದ ಆಪಾದನೆಯಲ್ಲಿ ಕೇಂದ್ರ ಆರೋಗ್ಯ ಸಚಿವ ಡಾ. ಅನ್ಬುಮಣಿ ರಾಮದಾಸ್ ಮತ್ತು ಪಿ ಎಂ ಕೆ ಸ್ಥಾಪಕ ಡಾ. ಎಸ್. ರಾಮದಾಸ್ ಅವರ ವಿರುದ್ಧ ಪೊಲೀಸರು ಪ್ರಕರಣ ದಾಖಲಿಸಿದರು.

1994: ದಕ್ಷಿಣ ಆಫ್ರಿಕಾದ ನೂತನ ಚುನಾಯಿತ ಸಂಸತ್ತು ನೆಲ್ಸನ್ ಮಂಡೇಲಾ ಅವರನ್ನು ರಾಷ್ಟ್ರದ ಪ್ರಥಮ ಕರಿಯ ರಾಷ್ಟ್ರಪತಿಯಾಗಿ ಆಯ್ಕೆ ಮಾಡಿತು.

1986: ಎಡ್ಮಂಡ್ ಹಿಲರಿ ಜೊತೆಗೆ ಮೊತ್ತ ಮೊದಲ ಬಾರಿಗೆ ಎವರೆಸ್ಟ್ ಪರ್ವತವನ್ನು ಏರಿದ್ದ ತೇನ್ ಸಿಂಗ್ ನಾರ್ಗೆ ಡಾರ್ಜಿಲಿಂಗಿನಲ್ಲಿ ತನ್ನ 72ನೇ ಹುಟ್ಟುಹಬ್ಬಕ್ಕೆ 6 ದಿನ ಮುಂಚಿತವಾಗಿ ಮೃತನಾದ.

1984: ಭಾರತದ ಫು ದೋರ್ಜಿ ಆಮ್ಲಜನಕ ಇಲ್ಲದೆಯೇ ಮೌಂಟ್ ಎವರೆಸ್ಟ್ ಏರಿದ ಪ್ರಥಮ ಭಾರತೀಯ ಎನ್ನಿಸಿಕೊಂಡ.

1975: ಕಲಾವಿದೆ ಯಮುನಾ ರಾಣಿ ಜನನ.

1951: ಕಲಾವಿದೆ ಲತಾ ನಾಡಿಗೇರ್ ಜನನ.

1935: ಕಲಾವಿದ ಬಿ.ಆರ್.ಜಿ. ರಾವ್ ಜನನ.

1927: ಸಂಗೀತ, ನೃತ್ಯ, ಭೌತ ವಿಜ್ಞಾನ, ಪುರಾತತ್ವ ಕ್ಷೇತ್ರಗಳಲ್ಲಿ ಖ್ಯಾತಿ ಪಡೆದ ಸಂಗೀತಗಾರರ ಮನೆತನದ ರಾ. ಸತ್ಯನಾರಾಯಣ ಅವರು ರಾಮಯ್ಯ- ವರಲಕ್ಷ್ಮಮ್ಮ ದಂಪತಿಯ ಮಗನಾಗಿ ಮೈಸೂರಿನಲ್ಲಿ ಜನಿಸಿದರು.

1921: ಕಲಾವಿದ ನಾರಾಯಣ ಎಲ್. ನಾಥನ್ ಜನನ.

1915: ಕಲಾವಿದ ಮಣಿ ಅಯ್ಯರ್ ಜನನ.

1908: ಕನ್ನಡನಾಡು, ನುಡಿಯ ಬಗ್ಗೆ ಮುಂಚೂಣಿಯ ಹೋರಾಟಗಾರರಾಗಿ ಕನ್ನಡಿಗರಲ್ಲಿ ಕನ್ನಡತನ ಬಡಿದೆಬ್ಬಿಸಿದ ಅರಕಲಗೂಡು ನರಸಿಂಗರಾಯ ಕೃಷ್ಣರಾಯ (ಅ.ನ.ಕೃ) (1908-1971) ಅವರು ಈದಿನ ಹಾಸನ ಜಿಲ್ಲೆಯ ಅರಕಲಗೂಡಿನಲ್ಲಿ ನರಸಿಂಗರಾಯ- ಅನ್ನಪೂರ್ಣಮ್ಮ ದಂಪತಿಯ ಪುತ್ರರಾಗಿ ಜನಿಸಿದರು. ಶಾಲಾ ದಿನಗಳಿಂದಲೇ ಸಾಹಿತ್ಯದ ಹುಚ್ಚು ಹಚ್ಚಿಕೊಂಡ ಇವರನ್ನು ಮಣಿಪಾಲದ 42ನೇ ಸಾಹಿತ್ಯ ಸಮ್ಮೇಳನದ ಅಧ್ಯಕ್ಷರನ್ನಾಗಿ ಆಯ್ಕೆ ಮಾಡುವ ಮೂಲಕ ನಾಡು ಗೌರವಿಸಿತು. 14 ಐತಿಹಾಸಿಕ ಕಾದಂಬರಿ ಸೇರಿ 116 ಕಾದಂಬರಿ, ನಾಟಕಗಳು, ಸಾಹಿತ್ಯ ವಿಮರ್ಶೆ, ಜೀವನ ಚರಿತ್ರೆ, ಅನುವಾದ, ಸಂಪಾದಿತ ಗ್ರಂಥಗಳು ಇತ್ಯಾದಿ ಸೇರಿ ಒಟ್ಟು 250ಕ್ಕೂ ಹೆಚ್ಚು ಕೃತಿ ರಚಿಸಿದವರು ಅ.ನ.ಕೃ. 1971ರ ಜುಲೈ 8ರಂದು ಅವರು ನಿಧನರಾದರು.

1866: ಗೋಪಾಲ ಕೃಷ್ಣ ಗೋಖಲೆ (1866-1915) ಜನ್ಮದಿನ. ಭಾರತದ ರಾಷ್ಟ್ರೀಯ ನಾಯಕರಾದ ಇವರು ರಾಷ್ಟ್ರದ ಅತ್ಯಂತ ದುರ್ಬಲ ವರ್ಗದ ಜನರ ಏಳಿಗೆಗಾಗಿ `ಸರ್ವೆಂಟ್ಸ್ಸ್ ಆಫ್ ಇಂಡಿಯಾ ಸೊಸೈಟಿ ಸ್ಥಾಪಿಸಿದರು. ಪುಣೆಯಲ್ಲಿ ರಾನಡೆ ಇನ್ ಸ್ಟಿಟ್ಯೂಟ್ ಆಫ್ ಇಕನಾಮಿಕ್ಸ್ ಸ್ಥಾಪಿಸಿದ್ದು ಕೂಡಾ ಇವರೇ.

1800: ಅಮೆರಿಕದ ಗುಲಾಮೀ ಪದ್ಧತಿ ವಿರೋಧಿ ಹೋರಾಟಗಾರ ಜಾನ್ ಬ್ರೌನ್ (1800-1849) ಜನ್ಮದಿನ. ಗುಲಾಮೀ ಪದ್ಧತಿಯನ್ನು ಹೋಗಲಾಡಿಸಲು ಈತ ನಡೆಸಿದ ಪ್ರಯತ್ನಗಳು ಅಮೆರಿಕದ ಅಂತರ್ಯುದ್ಧಕ್ಕೆ ಪ್ರಮುಖ ಕಾರಣಗಳಾದವು.

Saturday, May 8, 2010

ಇಂದಿನ ಇತಿಹಾಸ History Today ಮೇ 08

ಇಂದಿನ ಇತಿಹಾಸ

ಮೇ 08

ಇಂದು ವಿಶ್ವ ರೆಡ್ ಕ್ರಾಸ್ ದಿನ. ರೆಡ್ ಕ್ರಾಸ್ ಸಂಸ್ಥೆಯ ಸ್ಥಾಪನೆಗೆ ಕಾರಣನಾದ ಸ್ವಿಸ್ ವ್ಯಾಪಾರಿ ಹೆನ್ರಿ ಡ್ಯೂನಾಟ್ ಅವರ ಜನ್ಮದಿನ. 1859ರಲ್ಲಿ ಸೆಲ್ಫೋರಿನೋ ಎಂಬಲ್ಲಿ ಬರುತ್ತಿದ್ದಾಗ ಯುದ್ಧದಲ್ಲಿ ಸಹಸ್ರಾರು ಜನ ಸತ್ತು ಹಲವಾರು ಗಾಯಗೊಂಡು ನರಳುತ್ತಿದ್ದುದನ್ನು ಡ್ಯೂನಾಟ್ ನೋಡಿದರು. ತತ್ ಕ್ಷಣವೇ ತಮ್ಮ ಕೆಲಸ ಬದಿಗಿಟ್ಟು ಸ್ಥಳೀಯರ ನೆರವು ಪಡೆದು ಗಾಯಾಳುಗಳಿಗೆ ಸಹಾಯ ಮಾಡಿದರು. ಇದರೊಂದಿಗೆ ಹುಟ್ಟಿದ ರೆಡ್ ಕ್ರಾಸ್ ಸಂಸ್ಥೆ ಈಗ ವಿಶ್ವವ್ಯಾಪಿ. ಜಾತಿ, ಧರ್ಮ, ಪ್ರದೇಶ, ರಾಜಕೀಯ ಇತ್ಯಾದಿ ಯಾವುದರ ಆಧಾರದ ಮೇಲೆ ತಾರತಮ್ಯ ಮಾಡದೆ ತೊಂದರೆಯಲ್ಲಿ ಇರುವ ಜನರಿಗೆ ನೆರವಾಗುತ್ತದೆ.

2009: ರಾಗಿಂಗ್ ಘಟನೆಗಳ ಪರಿಶೀಲನೆಗಾಗಿ ಸಮಿತಿಗಳನ್ನು ರಚಿಸಿ ರಾಗಿಂಗ್ ಹಾವಳಿಯನ್ನು ನಿಯಂತ್ರಿಸುವಂತೆ ಸುಪ್ರೀಂ ಕೋರ್ಟ್ ಎಲ್ಲ ರಾಜ್ಯ ಸರ್ಕಾರಗಳಿಗೆ ನಿರ್ದೇಶನ ನೀಡಿತು. ದೇಶಾದ್ಯಂತ ಶಿಕ್ಷಣ ಸಂಸ್ಥೆಗಳಿಂದ ರಾಗಿಂಗ್ ಹಾವಳಿಯನ್ನು ಸಂಪೂರ್ಣವಾಗಿ ನಿರ್ಮೂಲನಗೊಳಿಸಲು ಹಲವಾರು ನಿರ್ದೇಶನಗಳನ್ನು ನೀಡಿದ ನ್ಯಾಯಮೂರ್ತಿ ಅರಿಜಿತ್ ಪಸಾಯತ್ ನೇತೃತ್ವದ ಪೀಠವು ವಿದ್ಯಾರ್ಥಿಗಳಿಗೆ ಆಪ್ತ ಸಮಾಲೋಚನೆಗಾಗಿ ಪ್ರತಿಯೊಂದು ಕಾಲೇಜು ಕೂಡಾ ಮನಃಶಾಸ್ತ್ರಜ್ಞರನ್ನು ಹೊಂದಿರಬೇಕು ಎಂದು ಹೇಳಿತು. ಮದ್ಯಪಾನ ಸಮಸ್ಯೆಯ ಪ್ರಕರಣಗಳ ಸಂದರ್ಭದಲ್ಲಿ ಶಿಕ್ಷಣ ಸಂಸ್ಥೆಗಳು ಚಟ ಬಿಡಿಸುವ ಕ್ರಮಗಳನ್ನು ಕೈಗೊಳ್ಳಬೇಕು ಎಂದು ನ್ಯಾಯಾಲಯ ಸೂಚಿಸಿತು.

2009: ಸುಪ್ರೀಂ ಕೋರ್ಟ್ ನೇಮಿತ ವಿಶೇಷ ತನಿಖಾ ತಂಡವು (ಸಿಟ್) 2002ರ ಗೋಧ್ರಾ ಘಟನೆ ನಂತರದ ದಂಗೆ ಪ್ರಕರಣಗಳ ವಿಚಾರಣೆಗಾಗಿ ವಿಶೇಷ ನ್ಯಾಯಾಲಯಗಳಿಗೆ ಒಂಭತ್ತು ನ್ಯಾಯಾಧೀಶರನ್ನು ಗುಜರಾತ್ ಹೈಕೋರ್ಟ್ ನಿಯೋಜಿಸಿತು. ಈ ನಿಟ್ಟಿನಲ್ಲಿ ಈ ತಿಂಗಳ ಆದಿಯಲ್ಲಿ ಸುಪ್ರೀಂಕೋರ್ಟ್ ನೀಡಿದ ತೀರ್ಪಿಗೆ ಅನುಗುಣವಾಗಿ ಆದೇಶ ಹೊರಡಿಸಿದ ಹೈಕೋರ್ಟ್ ಪ್ರತಿಯೊಂದು ವಿಶೇಷ ನ್ಯಾಯಾಲಯಕ್ಕೂ ಒಬ್ಬೊಬ್ಬರಂತೆ ನ್ಯಾಯಾಧೀಶರನ್ನು ನಿಯೋಜಿಸಿತು. ನ್ಯಾಯಾಲಯದ ಆದೇಶದಂತೆ ಹೆಚ್ಚುವರಿ ಸತ್ರ ನ್ಯಾಯಾಧೀಶ ಪಿ.ಆರ್. ಪಟೇಲ್ ಅವರು ಗೋಧ್ರಾ ರೈಲು ಹತ್ಯಾಕಾಂಡ ಘಟನೆಯ ತನಿಖೆಗೆಗಾಗಿ ನಿಯೋಜಿತರಾದರು.

2009: ಭಯೋತ್ಪಾದನೆ ಕೃತ್ಯದಲ್ಲಿ ಭಾಗಿಯಾಗಿರುವುದು ಸಾಬೀತಾದರೆ ಮರಣ ದಂಡನೆ ಅಥವಾ ಜೀವಾವಧಿ ಶಿಕ್ಷೆ ವಿಧಿಸುವುದು, ಅಪರಾಧ ಮಾಡಿದ್ದಕ್ಕೆ ಐದು ಲಕ್ಷ ರೂಪಾಯಿ ದಂಡ ವಿಧಿಸುವುದು ಸೇರಿದಂತೆ ಕರ್ನಾಟಕ ವ್ಯವಸ್ಥಿತ ಅಪರಾಧ ನಿಯಂತ್ರಣ ಮಸೂದೆ- 2009ಕ್ಕೆ ಕೆಲವು ತಿದ್ದುಪಡಿಗಳನ್ನು ತರುವ ಸಲುವಾಗಿ ಸುಗ್ರಿವಾಜ್ಞೆ ಹೊರಡಿಸಲು ಸರ್ಕಾರ ತೀರ್ಮಾನಿಸಿತು. ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅಧ್ಯಕ್ಷತೆಯಲ್ಲಿ ಬೆಂಗಳೂರಿನಲ್ಲಿ ನಡೆದ ಸಚಿವ ಸಂಪುಟ ಸಭೆಯಲ್ಲಿ ಈ ತೀರ್ಮಾನ ತೆಗೆದುಕೊಳ್ಳಲಾಯಿತು.

2009: ಜಗತ್ತಿನ ನಿದ್ದೆಗೆಡಿಸಿದ ಎಚ್1ಎನ್1 ರೋಗಾಣುವಿನ (ವೈರಸ್) ತಳಿಸೂತ್ರ ಭೇದಿಸುವಲ್ಲಿ ತಮ್ಮ ವಿಜ್ಞಾನಿಗಳು ಯಶಸ್ವಿಯಾಗಿದ್ದಾರೆ ಎಂದು ಕೆನಡಾ ಪ್ರತಿಪಾದಿಸಿತು. ಕೆನಡಾ ವಿಜ್ಞಾನಿಗಳ ತಂಡವ ರೋಗಾಣು ಹೇಗೆ ಹರಡುತ್ತದೆ, ಅದು ಹೇಗೆ ವೃದ್ಧಿಯಾಗುತ್ತದೆ ಎಂಬುದನ್ನು ಆವಿಷ್ಕರಿಸಿದೆ. ಈ ರೋಗಾಣುವಿನ ತಳಿ ಸೂತ್ರದ ರಹಸ್ಯ ಪತ್ತೆಹಚ್ಚಿದ ಹೆಗ್ಗಳಿಕೆ ನಮ್ಮದಾಗಿದೆ. ಇನ್ನು ಮುಂದೆ ಹಂದಿ ಜ್ವರ ನಿಯಂತ್ರಣ, ಲಸಿಕೆ ಹಾಗೂ ಪರಿಣಾಮಕಾರಿ ಔಷಧಗಳ ತಯಾರಿಕೆಗಳ ಹೊಸ ಬಾಗಿಲುಗಳನ್ನು ಇದು ತೆರೆಯಲಿದೆ ಎಂದು ತಜ್ಞರು ಟೊರಾಂಟೊದಲ್ಲಿ ಅಭಿಪ್ರಾಯಪಟ್ಟರು.

2009: 'ಅಜ್ಮಲ್ ಅಮೀರ್ ಕಸಾಬ್ ಎ.ಕೆ. 47 ರೈಫಲ್‌ನಿಂದ ಎಎಸ್‌ಐ ತುಕಾರಾಂ ಓಂಬ್ಳೆ ಅವರತ್ತ ಗುಂಡು ಹಾರಿಸಿದ್ದನ್ನು ನಾನು ನೋಡಿದೆ' ಎಂದು ಮುಂಬೈ ದಾಳಿಯ ಮೊದಲ ಪ್ರತ್ಯಕ್ಷ ಸಾಕ್ಷಿ ಸಬ್ ಇನ್ಸ್‌ಪೆಕ್ಟರ್ ಭಾಸ್ಕರ್ ಕದಂ ಅವರು, ಪ್ರಕರಣದ ವಿಚಾರಣೆ ನಡೆಸಿದ ವಿಶೇಷ ನ್ಯಾಯಾಲಯಕ್ಕೆ ತಿಳಿಸಿದರು. ಇದರಿಂದ ಇತ್ತೀಚೆಗೆ ಆರಂಭವಾದ ಪ್ರಕರಣದ ವಿಚಾರಣೆ ವೇಗ ಪಡೆದುಕೊಂಡಿತು. ದಾಳಿಯಂದು ಕಸಾಬ್ ಜತೆ ಸ್ಕೋಡಾ ಕಾರಿನಲ್ಲಿ ಇದ್ದ ಅಬು ಇಸ್ಮಾಯಿಲ್‌ನತ್ತ ಗುಂಡು ಹಾರಿಸಿದ ಅಧಿಕಾರಿಗಳ ತಂಡದಲ್ಲಿ ತಾವೂ ಒಬ್ಬರಾಗಿದ್ದುದಾಗಿ ಕದಂ ಹೇಳಿದರು. 2008ರ ನವೆಂಬರ್ 26ರಂದು ಗಿರ್‌ಗಾವ್ ಚೌಪಾಟಿಯಲ್ಲಿ ನಡೆದ ಉಗ್ರರ ದಾಳಿಯಲ್ಲಿ ಓಂಬ್ಳೆ ಮೃತರಾಗಿದ್ದರು.

2008: ಅಖಿಲ ಭಾರತ ವೈದ್ಯಕೀಯ ವಿಜ್ಞಾನ ಸಂಸ್ಥೆಯ ನಿರ್ದೇಶಕ ಹಾಗೂ ಖ್ಯಾತ ಹೃದ್ರೋಗ ತಜ್ಞ ಡಾ. ಪಿ. ವೇಣು ಗೋಪಾಲ್ ಅವರು ತಮ್ಮ ಎತ್ತಂಗಡಿ ಮಾಡುವ `ಏಮ್ಸ್' ಕಾಯ್ದೆ ತಿದ್ದುಪಡಿಯನ್ನು ಪ್ರಶ್ನಿಸಿ ಸಲ್ಲಿಸಿದ್ದ ಅರ್ಜಿಯನ್ನು ಸುಪ್ರೀಂ ಕೋರ್ಟ್ ಪುರಸ್ಕರಿಸಿತು. ಏಮ್ಸ್ ಕಾಯ್ದೆಗೆ ತಿದ್ದುಪಡಿಯು ಅಸಂವಿಧಾನಾತ್ಮಕವಾದುದು ಹಾಗಾಗಿ ಅದನ್ನು ರದ್ದುಗೊಳಿಸಲಾಗುವುದು ಎಂದು ಸುಪ್ರೀಂಕೋರ್ಟ್ ಮಹತ್ವದ ತೀರ್ಪು ನೀಡಿತು. ವೇಣುಗೋಪಾಲ್ ವಿರುದ್ಧ `ಸಮರ'ವನ್ನೇ ಸಾರಿದಂತಿದ್ದ ಕೇಂದ್ರ ಆರೋಗ್ಯ ಸಚಿವ ಅನ್ಬುಮಣಿ ರಾಮದಾಸ್ ಅವರಿಗೆ ಈ ತೀರ್ಪಿನಿಂದ ತೀವ್ರ ಮುಖಭಂಗವಾದರೆ, ಕೇಂದ್ರ ಸರ್ಕಾರಕ್ಕೆ ಕೂಡಾ ಮುಜುಗರ ಉಂಟಾಯಿತು. ಏಮ್ಸ್ ನಿರ್ದೇಶಕ ಸ್ಥಾನದಲ್ಲಿ ಇರುವವವರು 65 ವರ್ಷಕ್ಕೆ ನಿವೃತ್ತಿ ಹೊಂದಬೇಕು ಮತ್ತು ಅವರ ಅಧಿಕಾರದ ಅವಧಿಯನ್ನು ಗರಿಷ್ಠ 5 ವರ್ಷಗಳವರೆಗೆ ವಿಸ್ತರಿಸಲೂಬಹುದು ಎಂದು ನ್ಯಾಯಮೂರ್ತಿಗಳಾದ ತರುಣ್ ಚಟರ್ಜಿ ಮತ್ತು ಹರ್ಜಿತ್ ಸಿಂಗ್ ಬೇಡಿ ಅವರನ್ನೊಳಗೊಂಡ ವಿಭಾಗೀಯ ಪೀಠ ಹೇಳಿತು.

2008: ಜಮ್ಮುವಿನ ಕಿಸ್ತ್ವಾರ್ ಪ್ರದೇಶದಲ್ಲಿ ಚಿನಾಬ್ ನದಿಗೆ ಬಸ್ ಉರುಳಿ ಬಿದ್ದ ಕಾರಣ 28 ಮಂದಿ ಪ್ರಯಾಣಿಕರು ಅಸು ನೀಗಿದರು.

2008: ನಂದಿ ಇನ್ ಫ್ರಾಸ್ಟ್ರಕ್ಚರ್ ಕಾರಿಡಾರ್ ಎಂಟರ್ ಪ್ರೈಸಸ್ (ನೈಸ್) ಕುರಿತು ರಾಜ್ಯಪಾಲ ರಾಮೇಶ್ವರ ಠಾಕೂರ್ ನೇತೃತ್ವದ ಕಾರ್ಯಕಾರಿ ಸಮಿತಿ ಕಳೆದ ಏಪ್ರಿಲಿನಲ್ಲಿ ತೆಗೆದುಕೊಂಡ ನಿರ್ಣಯವನ್ನು ಆಕ್ಷೇಪಿಸಿದ ಚುನಾವಣಾ ಆಯೋಗ ಮೇ 28 ರತನಕ ಇದನ್ನು ತಡೆಹಿಡಿಯಲು ಸೂಚಿಸಿತು. ಬಿಎಂಐಸಿ ಯೋಜನೆಯಿಂದ `ನೈಸ್'ನ್ನು ಬೇರ್ಪಡಿಸಲು ಈ ಹಿಂದಿನ ಕುಮಾರಸ್ವಾಮಿ ಸರ್ಕಾರ ತೆಗೆದುಕೊಂಡ ನಿರ್ಣಯವನ್ನು ಮಾರ್ಪಾಡು ಮಾಡಿ ಕಳೆದ ಏಪ್ರಿಲ್ 25 ರಂದು ರಾಜ್ಯಪಾಲರು ನಿರ್ಣಯ ತೆಗೆದುಕೊಂಡಿದ್ದರು. ರಾಜ್ಯಪಾಲರ ನಿರ್ಣಯದಲ್ಲಿ ನೈಸ್ ಮೇಲೆ ಹಿಂದಿನ ಸರ್ಕಾರ ವಿಧಿಸಿದ್ದ ಹಲವು ನಿರ್ಬಂಧಗಳನ್ನು ಸಡಿಲಿಸಲಾಗಿತ್ತು. ಈ ನಿರ್ಣಯವನ್ನು ರಾಜ್ಯಪಾಲರು ಚುನಾವಣೆ ಮುಗಿಯುವ ತನಕ ಅಂದರೆ ಮೇ 28ರತನಕ ಕೈಗೊಳ್ಳುವಂತಿಲ್ಲ ಎಂದು ಮುಖ್ಯ ಚುನಾವಣಾ ಆಯುಕ್ತ ಗೋಪಾಲಸ್ವಾಮಿ ತಿಳಿಸಿದರು.

2008: ಸುನಿಲ್ ಗಾವಸ್ಕರ್ ಅವರು ಐಸಿಸಿ ಕ್ರಿಕೆಟ್ ಸಮಿತಿಯ ಹುದ್ದೆಗೆ ರಾಜೀನಾಮೆ ನೀಡಿದರು. ಭಾರತ ತಂಡದ ಮಾಜಿ ಆಟಗಾರ ಈದಿನ ತಮ್ಮ ನಿರ್ಧಾರವನ್ನು ಅಂತಾರಾಷ್ಟ್ರೀಯ ಕ್ರಿಕೆಟ್ ಸಮಿತಿಗೆ ತಿಳಿಸಿದರು. ಇದರೊಂದಿಗೆ ಗಾವಸ್ಕರ್ ಅವರ ಎಂಟು ವರ್ಷಗಳ ಸುದೀರ್ಘ ಅವಧಿಯ ಆಡಳಿತ ಅನಿರೀಕ್ಷಿತವಾಗಿ ಅಂತ್ಯಗೊಂಡಿತು. ಗಾವಸ್ಕರ್ ಈ ಅವಧಿಯಲ್ಲಿ ಕ್ರಿಕೆಟ್ ಕ್ರೀಡೆಯ ಬೆಳವಣಿಗೆಗೆ ಹಲವು ಕ್ರಮಗಳನ್ನು ಕೈಗೊಂಡಿದ್ದರಲ್ಲದೆ ವಿವಾದಗಳಲ್ಲೂ ಸಿಲುಕಿದ್ದರು. ಐಸಿಸಿ ಹುದ್ದೆಯಲ್ಲಿದ್ದುಕೊಂಡು ಅವರು ಮಾಧ್ಯಮಗಳಿಗೆ ಅಂಕಣ ಬರೆಯುತ್ತಿದ್ದುದು ವಿವಾದಕ್ಕೆ ಕಾರಣವಾಗಿತ್ತು. ಕ್ರಿಕೆಟ್ ಸಮಿತಿ ಹುದ್ದೆ ಅಥವಾ ಮಾಧ್ಯಮ ಹುದ್ದೆ ಈ ಎರಡರಲ್ಲಿ ಒಂದನ್ನು ಆಯ್ಕೆ ಮಾಡಿಕೊಳ್ಳಬೇಕೆಂದು ಐಸಿಸಿ ಇತ್ತೀಚೆಗೆ ಅವರಲ್ಲಿ ಕೇಳಿಕೊಂಡಿತ್ತು.

2008: ಒಲಿಂಪಿಕ್ ಜ್ಯೋತಿಯ ಮೌಂಟ್ ಎವರೆಸ್ಟ್ ಪಯಣ ಈದಿನ ಯಶಸ್ವಿಯಾಗಿ ನಡೆಯಿತು. ಬೀಜಿಂಗ್ ಕೂಟದ ಜ್ಯೋತಿಯ ಪಯಣದ `ಹೈಲೈಟ್' ಎಂದೇ ಬಣ್ಣಿಸಲಾದ ಈ ಸಾಹಸ ಯಾತ್ರೆ ಯಶಸ್ವಿಯಾಗಿ ಕೊನೆಗೊಂಡಿತು. 26 ಸದಸ್ಯರ ಪರ್ವತಾರೋಹಿಗಳ ತಂಡದವರು ಬೆಳಗಿನ ಜಾವ 3.00 ಗಂಟೆಗೆ ತಮ್ಮ ಯಾತ್ರೆಯನ್ನು ಆರಂಭಿಸಿ, 9.18ಕ್ಕೆ ಸರಿಯಾಗಿ 8,844 ಮೀ. ಎತ್ತರದ ಶಿಖರದ ತುತ್ತತುದಿ ತಲುಪುವಲ್ಲಿ ಯಶಸ್ವಿಯಾದರು. ಚೀನಾದ ಧ್ವಜ ಮತ್ತು ಒಲಿಂಪಿಕ್ ಧ್ವಜಗಳನ್ನು ಬೀಸುವ ಮೂಲಕ ಪರ್ವತಾರೋಹಿಗಳು ಸಂಭ್ರಮಿಸಿದರು. ಆ ಕ್ಷಣವು ಒಲಿಂಪಿಕ್ ಜ್ಯೋತಿಯ ಇತಿಹಾಸದಲ್ಲಿ ಅವಿಸ್ಮರಣೀಯ ಕ್ಷಣ ಎನಿಸಿತು. ಪರ್ವತಾರೋಹಿಗಳು ಸಾಹಸ ಯಾತ್ರೆ ಆರಂಭಕ್ಕೆ ಮುನ್ನ ಶಿಖರದ ತಳಭಾಗದಲ್ಲಿ 30 ಮೀ. ದೂರದ ರಿಲೇ ನಡೆಸಿದ್ದರು. ತಂಡದಲ್ಲಿರುವ ಮಹಿಳಾ ಸದಸ್ಯೆ ರಿಲೇಗೆ ಚಾಲನೆ ನೀಡಿದರು. ಬೇಸ್ ಕ್ಯಾಂಪಿನಲ್ಲಿ ತಂಗಿದ್ದ ಪರ್ವತಾರೋಹಿಗಳು ಮಧ್ಯರಾತ್ರಿ 1.30ಕ್ಕೆ ಎದ್ದು ಪ್ರಾರ್ಥನೆ ಮಾಡಿದರು. ಆ ಬಳಿಕ ತಮ್ಮ ಯಾತ್ರೆ ಆರಂಭಿಸಿದರು. ಎವರೆಸ್ಟ್ ಯಾತ್ರೆಗೆ ಪರ್ವತಾರೋಹಿಗಳು ಒಂದು ವಾರದಿಂದ ಪ್ರಯತ್ನ ನಡೆಸಿದ್ದರು. ಹಿಂದಿನ ವಾರ ಯಾತ್ರೆ ಆರಂಭಿಸಿದ್ದರೂ, ಹಿಮಪಾತ ಉಂಟಾದ ಕಾರಣ ಬೇಸ್ ಕ್ಯಾಂಪಿಗೆ ವಾಪಸಾಗಿದ್ದರು. ಎರಡು ದಿನಗಳ ಕಾಲ ಹಿಮಪಾತವಾದುದರಿಂದ ಜ್ಯೋತಿಯ ಯಾತ್ರೆಯ ಬಗ್ಗೆ ಅನಿಶ್ಚಿತತೆ ಉಂಟಾಗಿತ್ತು. ಆದರೆ ಸಂಘಟಕರು ಈ ಸಾಹಸದಿಂದ ಹಿಂದೆ ಸರಿಯಲಿಲ್ಲ.

2008: ಭಾರತವು ಅಗ್ನಿ-3 ಕ್ಷಿಪಣಿ ಪರೀಕ್ಷೆ ನಡೆಸಿದ ಬೆನ್ನಲ್ಲೇ ಪಾಕಿಸ್ಥಾನವು ಯುದ್ಧ ವಿಮಾನಗಳಿಂದ ಉಡಾಯಿಸಬಹುದಾದ ಹಾಗೂ ಅಣ್ವಸ್ತ್ರ ಸಿಡಿತಲೆ ಹೊತ್ತೊಯ್ಯಬಲ್ಲ `ಹತ್ಫ್-8 ರಾದ್' ಕ್ಷಿಪಣಿಯ ಪರೀಕ್ಷೆ ನಡೆಸಿತು. `ದೇಶೀಯವಾಗಿ ಅಭಿವೃದ್ಧಿಪಡಿಸಲಾಗಿದೆ' ಎಂದು ಹೇಳಿಕೊಳ್ಳಲಾಗಿರುವ ಈ ಕ್ಷಿಪಣಿಗೆ 350 ಕಿ.ಮೀ. ದೂರಕ್ಕೆ ಚಲಿಸಿ ಗುರಿ ತಲುಪುವ ಸಾಮರ್ಥ್ಯ ಇದೆ ಎಂದು ಜಿಯೊ ಟಿವಿ ವರದಿ ಮಾಡಿತು.

2008: ಹಿಂದೂ ದೇವತೆಗಳನ್ನು ಅಶ್ಲೀಲವಾಗಿ ಚಿತ್ರಿಸುವ ಮೂಲಕ ಒಂದು ಕೋಮಿನ ಭಾವನೆಗಳನ್ನು ಕೆರಳಿಸಿದ್ದಾರೆಂದು ಆರೋಪಿಸಿ ಖ್ಯಾತ ಕಲಾವಿದ ಎಂ.ಎಫ್. ಹುಸೇನ್ ವಿರುದ್ಧ ದಾಖಲಾಗಿದ್ದ ಪ್ರಕರಣಗಳ ವಿಚಾರಣೆಯನ್ನು ದೆಹಲಿ ಹೈಕೋರ್ಟ್ ವಜಾಗೊಳಿಸಿತು. ಅವರ ಮೇಲಿನ ಆರೋಪ ಹುರುಳಿಲ್ಲದ್ದು ಎಂದು ನ್ಯಾಯಮೂರ್ತಿ ಸಂಜಯ್ ಕಿಶನ್ ಹೇಳಿದರು. ಹುಸೇನ್ ಮೇಲಿನ ಆರೋಪದ ದೂರನ್ನು ವಿವಿಧ ರಾಜ್ಯಗಳಿಂದ ದಾಖಲಿಸಿದ್ದು ಅದನ್ನು ನ್ಯಾಯಾಲಯ ವಜಾ ಮಾಡಿತು. ಈ ಮುನ್ನ ಈ ದೂರುಗಳಿಗೆ ನ್ಯಾಯಾಲಯ ತಡೆಯಾಜ್ಞೆ ನೀಡಿತ್ತು.

2008: ಮಾಹಿತಿ ಶೋಧನೆಯ ಅಂತರ್ಜಾಲ ಸೇವಾ ತಾಣ ಯಾಹೂ ವೆಬ್ ಸರ್ವೀಸಸ್ ಇಂಡಿಯಾ ಪ್ರೈವೇಟ್ ಲಿಮಿಟೆಡ್, ಒಂದು ಪುಟದ ಪರಿಹಾರ ನೀಡುವ `ಗ್ಲೂ ಪೇಜ್' ವಿಶೇಷ ಸೇವೆಗೆ ಬೆಂಗಳೂರಿನಲ್ಲಿ ಚಾಲನೆ ನೀಡಿತು. ಆನಂತರ ಸುದ್ದಿಗೋಷ್ಠಿಯಲ್ಲಿ ವಿವರ ನೀಡಿದ ಯಾಹೂ ಇಂಡಿಯಾ ಮುಖ್ಯಸ್ಥ ಗೋಪಾಲ್ ಕೃಷ್ಣ, `ಬಳಕೆದಾರರು ಸರ್ಚಿನಲ್ಲಿ ಕೇಳುವ ಪ್ರಶ್ನೆಗೆ ನೇರ ಉತ್ತರವನ್ನು ದೊರಕಿಸುವ ಉದ್ದೇಶದಿಂದ ಗ್ಲೂ ಪೇಜ್ ಪರಿಣಾಮಕಾರಿಯಾಗಿ ಬಳಕೆಯಾಗಲಿದೆ. ಪ್ರಸ್ತುತ ಪರೀಕ್ಷಾರ್ಥವಾಗಿ ಬಳಕೆಗೆ ಬಿಡಲಾಗಿತ್ತು. ಪ್ರತಿಕ್ರಿಯೆ ಕೂಡಾ ಅದ್ಭುತವಾಗಿ ಬಂದಿದೆ' ಎಂದು ಹೇಳಿದರು.

2007: ಏಪ್ರಿಲ್ ಒಂದರಿಂದ ಜಾರಿಗೆ ಬರುವಂತೆ ಎಲ್ಲ ಬಗೆಯ ಲಾಟರಿ ನಿಷೇಧ ಮಾಡಿ ಸರ್ಕಾರ ಕಳೆದ ಮಾರ್ಚ್ 27ರಂದು ಹೊರಡಿಸಿದ್ದ ಅಧಿಸೂಚನೆಯನ್ನು ಕರ್ನಾಟಕ ಹೈಕೋರ್ಟ್ ಎತ್ತಿ ಹಿಡಿಯಿತು. ಕೊನೆಯ ಪಕ್ಷ ನಾಲ್ಕು ವಾರಗಳ ಮಟ್ಟಿಗಾದರೂ ಈ ತೀರ್ಪಿಗೆ ತಡೆ ನೀಡಿ ಲಾಟರಿ ಮುಂದುವರೆಸಲು ಅವಕಾಶ ನೀಡುವಂತೆ ಅರ್ಜಿದಾರರು ಮಾಡಿದ್ದ ಮನವಿಯನ್ನು ನ್ಯಾಯಮೂರ್ತಿ ವಿ. ಜಗನ್ನಾಥ ತಿರಸ್ಕರಿಸಿದರು.

2007: ಎಂಟು ವರ್ಷಗಳ ಹಿಂದೆ ಸಿಪಿಐ- ಎಂ.ಎಲ್. ಕಾರ್ಯಕರ್ತ ಛೋಟೆಲಾಲ್ ಗುಪ್ತ ಅವರನ್ನು ಅಪಹರಿಸಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ ಸಿವಾನ್ ವಿಶೇಷ ನ್ಯಾಯಾಲಯವು ಆರ್ ಜೆ ಡಿ ಸಂಸತ್ ಸದಸ್ಯ ಮೊಹಮ್ಮದ್ ಶಹಾಬ್ದುದ್ದೀನ್ ಅವರಿಗೆ ಜೀವಾವಧಿ ಶಿಕ್ಷೆ ನೀಡಿತು. ಸಿವಾನಿನ ಹೆಚ್ಚುವರಿ ಜಿಲ್ಲಾ ಮತ್ತು ಸೆಷನ್ಸ್ ನ್ಯಾಯಾಧೀಶ ಗ್ಯಾನೇಶ್ವರ ಪ್ರಸಾದ್ ಅವರು ಶಹಾಬುದ್ದೀನ್ ಅವರಿಗೆ 10,000 ರೂಪಾಯಿಗಳ ದಂಡವನ್ನೂ ವಿಧಿಸಿದರು. 1999ರ ಫೆಬ್ರುವರಿ 7ರಂದು ಸಿಪಿಐ-ಎಂ.ಎಲ್ ಕಾರ್ಯಕರ್ತ ಛೋಟೆಲಾಲ್ ಅವರನ್ನು ಕೊಲ್ಲುವ ಸಲುವಾಗಿ ಅಪಹರಿಸಿದ ಪ್ರಕರಣದಲ್ಲಿ ಶಹಾಬ್ದುದೀನ್ ತಪ್ಪಿತಸ್ಥರು ಎಂದು ನ್ಯಾಯಾಲಯ ಮೇ 5ರಂದು ತೀರ್ಪು ನೀಡಿತ್ತು.

2007: ವಿಶ್ವದಲ್ಲೇ ಅತ್ಯಂತ ದೊಡ್ಡದಾದ ನಾಗರಿಕ ವಿಮಾನ ಯಾನಿ ಸೂಪರ್ ಜಂಬೋ ವಿಮಾನ ಏರ್ ಬಸ್ ಎ 380 ಈದಿನ ದೆಹಲಿಯಿಂದ ಹೊರಟು ಮುಂಬೈಯಲ್ಲಿ ಬಂದಿಳಿಯಿತು.

2007: ಹಿಂದೆಂದೂ ಕಂಡು ಕೇಳರಿಯದಂತಹ ಅತ್ಯಂತ ಪ್ರಖರ ಮತ್ತು ಭಾರಿ ನಕ್ಷತ್ರಪುಂಜದ ಸ್ಫೋಟ (ಸೂಪರ್ ನೋವಾ) ತಾರಾಮಂಡಲದಲ್ಲಿ ಇತ್ತೀಚೆಗೆ ನಡೆದುದನ್ನು ಪತ್ತೆ ಹಚ್ಚಿರುವುದಾಗಿ ವಿಜ್ಞಾನಿಗಳು ಪ್ರಕಟಿಸಿದರು. ಸೂಪರ್ ನೋವಾ ಎಂದು ಕರೆಯಲಾಗುವ ಪ್ರಕ್ರಿಯೆಯನ್ನು ನಾಸಾದ ಚಂದ್ರ ಎಕ್ಸ್ ರೇ ದೂರದರ್ಶಕ ಮತ್ತು ವೀಕ್ಷಣಾಲಯ ದಾಖಲಿಸಿದೆ. ಸೂಪರ್ ನೋವಾ ಸರಣಿಗಳಲ್ಲೇ ಇದು ಅತ್ಯಂತ ದೊಡ್ಡದು ಎನ್ನಲಾಗಿದ್ದು ಸೂರ್ಯ ಒಂದು ಕೋಟಿ ವರ್ಷಕಾಲ ನೀಡುವಷ್ಟು ಓಜಸ್ಸು (ಶಕ್ತಿ) ಈ ಸ್ಫೋಟವೊಂದರಲ್ಲೇ ಬಿಡುಗಡೆಯಾಗಿದೆ. ಸ್ಫೋಟದ ಅಲೆಗಳು ಇಡೀ ನಕ್ಷತ್ರ ಸಮೂಹದ ಅನಿಲವನ್ನೇ ಅಲುಗಾಡಿಸಿದೆ. ಸೌರಮಂಡಲ ಸೃಷ್ಟಿಯಾದ ಆರಂಭದಲ್ಲಿದ್ದ ನಕ್ಷತ್ರಗಳ ಅವನತಿಗೆ ಕಾರಣವೇನು ಎಂಬುದಕ್ಕೆ ಈ ಸೂಪರ್ ನೋವಾ ಉತ್ತರ ಒದಗಿಸಿದೆ. ಭೂಮಿಯಿಂದ 2.4 ಕೋಟಿ ಜ್ಯೋತಿರ್ ವರ್ಷಗಳಷ್ಟು ದೂರದಲ್ಲಿರುವ ಆಕಾಶ ಗಂಗೆ ಎನ್ ಜಿ ಸಿ 1260ರಲ್ಲಿ ಈ ಸ್ಫೋಟ ಸಂಭವಿಸಿದೆ ಎಂದು ಬರ್ಕಲಿಯದಲ್ಲಿನ ಕ್ಯಾಲಿಫೋರ್ನಿಯಾ ವಿ.ವಿ. ವಿಜ್ಞಾನಿ ನಾಥನ್ ಸ್ಮಿತ್ ವಿವರಿಸಿದರು. ಭಾರಿ ನಕ್ಷತ್ರಗಳು ಶಕ್ತಿ ಅಥವಾ ಇಂಧನ ಕಳೆದುಕೊಂಡು ತಮ್ಮ ಸ್ವಂತ ಗುರುತ್ವಾಕರ್ಷಣದಲ್ಲೇ ಕುಸಿದು ಬಿದ್ದಾಗ ಇಂತಹ ಸ್ಫೋಟಗಳು ಸಂಭವಿಸುತ್ತವೆ.

2007: ಕ್ಯೂಬಾದ ರಾಜಧಾನಿ ಹವಾನಾದಲ್ಲಿ ಶ್ರೇಷ್ಠ ಕವಿ ರಬೀಂದ್ರನಾಥ ಟ್ಯಾಗೋರ್ ಅವರ 146ನೇ ಜಯಂತಿ ಆಚರಿಸಿ ಅವರ ಪ್ರತಿಮೆ ಅನಾವರಣ ಮಾಡಲಾಯಿತು.

2006: ಲಾಭದಾಯಕ ಹುದ್ದೆ ಹೊಂದಿದ್ದಾರೆ ಎಂಬ ಕಾರಣಕ್ಕೆ ರಾಜ್ಯಸಭೆ ಸದಸ್ಯತ್ವದಿಂದ ಅನರ್ಹಗೊಳಿಸಿದ್ದ ಕ್ರಮವನ್ನು ಪ್ರಶ್ನಿಸಿ ಜಯಾ ಬಚ್ಚನ್ ಸಲ್ಲಿಸಿದ್ದ ಅರ್ಜಿಯನ್ನು ಸುಪ್ರೀಂಕೋರ್ಟ್ ತಳ್ಳಿಹಾಕಿತು. ಜಯಾ ಅವರು ಲಾಭದಾಯಕ ಹುದ್ದೆ ಹೊಂದಿದ್ದಾರೆಂದು ಆಪಾದಿಸಿ ಅವರನ್ನು ರಾಜ್ಯಸಭೆ ಸದಸ್ಯತ್ವದಿಂದ ಅನರ್ಹಗೊಳಿಸುವಂತೆ ಚುನಾವಣಾ ಆಯೋಗ ರಾಷ್ಟ್ರಪತಿ ಎ.ಪಿ.ಜೆ. ಅಬ್ದುಲ್ ಕಲಾಂ ಅವರಿಗೆ ಶಿಫಾರಸು ಮಾಡಿತ್ತು. ಈ ಶಿಫಾರಸನ್ನು ಅನುಸರಿಸಿ ರಾಷ್ಟ್ರಪತಿ ಜಯಾ ಅವರನ್ನು ಅನರ್ಹಗೊಳಿಸಿ ಆದೇಶ ಹೊರಡಿಸಿದ್ದರು.

2006: ಟೈಟಾನಿಕ್ ಹಡಗು ದುರಂತದ ಐತಿಹಾಸಿಕ ಘಟನೆಯನ್ನು ಕಣ್ಣಾರೆ ಕಂಡ ಸಾಕ್ಷಿಗಳ ಪೈಕಿ ಜೀವಿಸಿದ್ದ ಕೊನೆಯ ವ್ಯಕ್ತಿ ಲಿಲಿಯೆನ್ ಜೆರ್ ಟ್ರೂಡ್ ಆಸ್ಟ್ಲೆಂಡ್ ಈದಿನ ನಿಧನರಾದರು. 1912ರಲ್ಲಿ ರಾತ್ರಿ ವೇಳೆಯಲ್ಲಿ ದುರಂತ ಸಂಭವಿಸಿದಾಗ ಆಸ್ಟ್ಲೆಂಡ್ ಕೇವಲ ಐದರ ಹರೆಯದ ಬಾಲಕಿ. ಈ ಮಹಾನ್ ದುರಂತದಲ್ಲಿ ಆಕೆ ತನ್ನ ತಂದೆ ಹಾಗೂ ಚಿಕ್ಕಪ್ಪನ ಅವಳಿ ಮಕ್ಕಳೂ ಸೇರಿದಂತೆ ಮೂವರು ಸಹೋದರರನ್ನು ಕಳೆದುಕೊಂಡಿದ್ದರು. ದುರಂತದಲ್ಲಿ ಬದುಕಿ ಉಳಿದ ಬಾರ್ಬರಾ ಜಾಯ್ಸ್ ವೆಸ್ಟ್ ಡೇಂಟೆನ್ ಹಾಗೂ ಎಲಿಜಬೆತ್ ಗ್ಲಾಡಿಸ್ ಅವರಿಗೆ ಆಗ ಕ್ರಮವಾಗಿ ಕೇವಲ 10 ತಿಂಗಳು ಮತ್ತು ಎರಡು ತಿಂಗಳ ವಯಸ್ಸಾಗಿದ್ದದ್ದರಿಂದ ಇಬ್ಬರಿಗೂ ಘಟನೆಯ ಬಗ್ಗೆ ಯಾವುದೇ ನೆನಪೂ ಉಳಿದಿಲ್ಲ.

2006: ಆಂಡ್ರ್ಯೂ ಫ್ಲಿಂಟಾಫ್ ಹಾಗೂ ಕ್ಯಾಥರೀನ್ ಬ್ರಂಟ್ ಅವರು ಕ್ರಮವಾಗಿ ಇಂಗ್ಲೆಂಡಿನ ವರ್ಷದ ಕ್ರಿಕೆಟ್ ಆಟಗಾರ ಮತ್ತು ಆಟಗಾರ್ತಿ ಗೌರವಕ್ಕೆ ಪಾತ್ರರಾದರು. ಈ ದಿನ ರಾತ್ರಿ ಲಂಡನ್ನಿನಲ್ಲಿ ಈ ಪ್ರಶಸ್ತಿ ಪ್ರದಾನ ಸಮಾರಂಭ ನಡೆಯಿತು.

2006: ಏಪ್ರಿಲ್ ತಿಂಗಳಲ್ಲಿ ನಡೆದ ಥಾಯ್ಲೆಂಡ್ ಮಹಾ ಚುನಾವಣೆಯನ್ನು ಸಂವಿಧಾನ ವಿರೋಧಿ ಎಂದು ತೀರ್ಪು ನೀಡಿದ ಸುಪ್ರೀಂಕೋರ್ಟ್ ಹೊಸದಾಗಿ ಚುನಾವಣೆ ನಡೆಸುವಂತೆ ಆದೇಶ ನೀಡಿತು. ಮಹಾಚುನಾವಣೆಯಲ್ಲಿ ವಿರೋಧ ಪಕ್ಷಗಳು ಭಾಗವಹಿಸಲಿಲ್ಲ. ಆದರೂ ಸಂಸತ್ತಿನ 400 ಸ್ಥಾನಗಳಿಗೆ ಚುನಾವಣೆ ನಡೆಯಿತು. ಇದರಲ್ಲಿ ಉಸ್ತುವಾರಿ ಪ್ರಧಾನಿ ತಕ್ ಸಿನ್ ಶಿನವರ್ತ ನೇತೃತ್ವದ ಥಾಯ್ ರಾಕ್ ಥಾಯ್ ಪಕ್ಷ ಮಾತ್ರವೇ ಭಾಗವಹಿಸಿದ್ದರೂ ಪ್ರಧಾನಿ ಸರ್ಕಾರ ರಚಿಸಲು ವಿಫಲವಾದರು. ಚುನಾವಣೆಗೆ ಸಿದ್ಧತೆ ನಡೆಸಲು ಸಮಯ ಸಿಗಲಿಲ್ಲ ಎಂದು ವಿರೋಧ ಪಕ್ಷಗಳು ಆಪಾದಿಸಿದ ಹಿನ್ನೆಲೆ ಹಾಗೂ ಚುನಾವಣೆಯ ಬಗ್ಗೆ ಪರಿಶೀಲನೆ ನಡೆಸುವಂತೆ ದೇಶದಲ್ಲಿ ಪೂಜ್ಯ ಸ್ಥಾನ ಪಡೆದುಕೊಂಡಿರುವ ದೊರೆ ಭುಮಿಬೋಲ್ ಅಡುಲ್ ಯಾದೇಜ್ ನ್ಯಾಯಾಲಯವನ್ನು ಕೋರಿದ್ದರು.

1971: ಕನ್ನಡ ಸಾಹಿತಿ ದೊಡ್ಡಬೆಲೆಯ ಡಿ.ಎಲ್.ಎನ್. (27-10-1906- 8-5-1971) ಮೃತರಾದರು. ಸಂಶೋಧನೆ, ವಿಮರ್ಶಾ ಕ್ಷೇತದಲ್ಲಿ ಹೆಚ್ಚಿನ ಸಾಧನೆ ಮಾಡಿರುವ ಇವರು `ವಡ್ಡಾರಾಧನೆ', `ಪಂಪರಾಮಾಯಣ ಸಂಗ್ರಹ', `ಭೀಷ್ಮಪರ್ವ' ಇತ್ಯಾದಿ ಕೃತಿಗಳ ಮೂಲಕ ಖ್ಯಾತರು.

1971: ಕನ್ನಡ ಸಾಹಿತಿ ಧಾರವಾಡದ ಉತ್ತಂಗಿ ಚನ್ನಪ್ಪ (28-10-1881ರಿಂದ 8-5-1971) ನಿಧನರಾದರು. `ಹಿಂದೂ ಸಮಾಜದ ಹಿತಚಿಂತಕ', `ಮಕ್ಕಳ ಶಿಕ್ಷಣಪಟ' ಇತ್ಯಾದಿ ಕೃತಿಗಳನ್ನು ರಚಿಸಿದ ಇವರು 1949ರಲ್ಲಿ 32ನೇ ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷರಾಗಿದ್ದರು.

1928: ಇಂಗ್ಲಿಷ್, ಕನ್ನಡ, ಸಂಸ್ಕೃತ ಭಾಷಾ ವಿದ್ವಾಂಸ, ಸಂಗೀತ ವಿಮರ್ಶಕ ಶಂಕರ ಮೊಕಾಶಿ ಪುಣೇಕರ ಹುಟ್ಟಿದ ದಿನ. ಧಾರವಾಡದಲ್ಲಿ ರಾವಜಿ ರಾವ್- ಸುಂದರಾಬಾಯಿ ದಂಪತಿಯ ಪುತ್ರನಾಗಿ 1928ರಲ್ಲಿ ಈದಿನ ಜನಿಸಿದ ಮೊಕಾಶಿ ಕೇಂದ್ರ ಸಾಹಿತ್ಯ ಅಕಾಡೆಮಿ, ರಾಜ್ಯ ಸಾಹಿತ್ಯ ಅಕಾಡೆಮಿ, ಕರ್ನಾಟಕ ಚಲನಚಿತ್ರ ಪ್ರಶಸ್ತಿ ಸೇರಿದಂತೆ ಹಲವಾರು ಪ್ರಶಸ್ತಿಗಳನ್ನು ಪಡೆದಿದ್ದಾರೆ.

1917: ಅಮೆರಿಕದ ಚಾರ್ಲ್ಸ್ `ಸೋನ್ನಿ' ಲಿಸ್ಟನ್ (1917-70) ಹುಟ್ಟಿದ ದಿನ. 1962ರಿಂದ 1964ರವರೆಗೆ ಈತ ಜಾಗತಿಕ ಹೆವಿವೈಟ್ ಬಾಕ್ಸಿಂಗ್ ಚಾಂಪಿಯನ್ ಆಗಿದ್ದ. 1964ರಲ್ಲಿ ಮೊಹಮ್ಮದಾಲಿ ಈತನನ್ನು ಸೋಲಿಸಿದ.

1916: ಸ್ವಾಮಿ ಚಿನ್ಮಯಾನಂದ ಸರಸ್ವತಿ ಎಂದೇ ಖ್ಯಾತರಾದ ಬಾಲಕೃಷ್ಣ ಮೆನನ್ (1916-93) ಜನ್ಮದಿನ. ಚಿನ್ಮಯ ಮಿಷನನ್ನು ಸ್ಥಾಪಿಸಿದ ಇವರು 1993ರಲ್ಲಿ ಚಿಕಾಗೋದಲ್ಲಿ ನಡೆದ ಜಾಗತಿಕ ಧಾರ್ಮಿಕ ಸಂಸತ್ತಿನಲ್ಲಿ ಭಾರತವನ್ನು ಪ್ರತಿನಿಧಿಸಿದ್ದರು.

1891: ಥಿಯೋಸೋಫಿಕಲ್ ಸೊಸೈಟಿಯ ಸಹ ಸಂಸ್ಥಾಪಕಿ ಮೇಡಂ ಹೆಲೆನಾ ಬ್ಲಾವಟ್ ಸ್ಕಿ ನಿಧನರಾದರು.

1884: ಹ್ಯಾರಿ ಎಸ್. ಟ್ರೂಮನ್ (1884-1972) ಜನ್ಮದಿನ. ಅಮೆರಿಕದ 33ನೇ ಅಧ್ಯಕ್ಷನಾಗಿದ್ದ ಈತ ಸೋವಿಯತ್ ಮತ್ತು ಚೀನೀ ಕಮ್ಯೂನಿಸಂ ವಿರುದ್ಧದ ಅಂತಾರಾಷ್ಟ್ರೀಯ ಹೋರಾಟದತ್ತ ತನ್ನ ರಾಷ್ಟ್ರವನ್ನು ಮುನ್ನಡೆಸಿದ.

1794: ಆಧುನಿಕ ರಸಾಯನ ಶಾಸ್ತ್ರದ ಪಿತಾಮಹನೆಂದೇ ಖ್ಯಾತನಾದ ಫ್ರೆಂಚ್ ವಿಜ್ಞಾನಿ ಆಂಟೋನಿ ಲಾವೋಯಿಸೀರನನ್ನು ಗಿಲೋಟಿನ್ಗೆ ಗುರಿಪಡಿಸಿ ಕೊಲ್ಲಲಾಯಿತು. `ಆ ತಲೆ ಕಡಿಯಲು ಕ್ಷಣ ಸಾಕಾಯಿತು. ಆದರೆ ಇನ್ನೂ ನೂರು ವರ್ಷ ಕಳೆದರೂ ಅಂತಹ ಇನ್ನೊಂದು ತಲೆ ಉತ್ಪಾದಿಸಲು ಸಾಧ್ಯವಾಗಲಾರದು' ಎಂದು ಗಣಿತ ತಜ್ಞ ಜೋಸೆಫ್ ಲೂಯಿ ಉದ್ಗರಿಸಿದ.

Thursday, May 6, 2010

ಇಂದಿನ ಇತಿಹಾಸ History Today ಮೇ 07

ಇಂದಿನ ಇತಿಹಾಸ

ಮೇ 07

ಭೂ ಮೇಲ್ಮೈಯಿಂದ ಮೇಲ್ಮೈಗೆ 3000 ಕಿ.ಮೀ. ದೂರದವರೆಗೆ ಅಣ್ವಸ್ತ್ರ ಸಾಗಣೆ ಸಾಮರ್ಥ್ಯ ಉಳ್ಳ ಅಗ್ನಿ- 3 ಕ್ಷಿಪಣಿಯ ಪರೀಕ್ಷಾ ಹಾರಾಟವನ್ನು ಭಾರತವು ಒರಿಸ್ಸಾ ಕರಾವಳಿಯ ವ್ಹೀಲರ್ಸ್ ದ್ವೀಪದಿಂದ ಈದಿನ ನಡೆಸಿತು. ಮಧ್ಯಂತರಗಾಮೀ ಖಂಡಾಂತರ ಕ್ಷಿಪಣಿಯನ್ನು (ಐ ಆರ್ ಬಿ ಎಂ) ಸಮಗ್ರ ಪರೀಕ್ಷಾ ವಲಯದ ಉಡಾವಣಾ ಸಮುಚ್ಚಯದ ಸಂಚಾರಿ ಉಡಾವಣಾ ವಾಹನದಿಂದ ಬೆಳಗ್ಗೆ 9.56ರ ವೇಳೆಗೆ ಉಡಾಯಿಸಲಾಯಿತು.

2009: ಎಂಟು ರಾಜ್ಯಗಳ 85 ಲೋಕಸಭಾ ಕ್ಷೇತ್ರಗಳಲ್ಲಿ ನಡೆದ ನಾಲ್ಕನೇ ಹಂತದ ಚುನಾವಣೆಯಲ್ಲಿ ಒಟ್ಟಾರೆ ಶೇ 57ರಷ್ಟು ಮತದಾನವಾಯಿತು. ಪಶ್ಚಿಮ ಬಂಗಾಳದಲ್ಲಿ ಮೂವರು, ರಾಜಸ್ಥಾನದಲ್ಲಿ ಒಬ್ಬ ಸೇರಿ ಒಟ್ಟು ನಾಲ್ವರು ಹಿಂಸಾಚಾರದಲ್ಲಿ ಮೃತರಾದರು. ಉಳಿದಂತೆ ಬಹುತೇಕ ಶಾಂತಿಯುತ ಚುನಾವಣೆ ನಡೆಯಿತು.

2009: ಎಲ್‌ಟಿಟಿಇ ವಿರುದ್ಧ ಕಾದಾಟವನ್ನು ತೀವ್ರಗೊಳಿಸಿದ ಶ್ರೀಲಂಕಾ ಸೇನಾ ಪಡೆಗಳು ಅದರ ನಾಯಕ ವಿ.ಪ್ರಭಾಕರನ್ ಅಡಗಿರುವ ಸ್ಥಳದಿಂದ ಕೇವಲ 800 ಮೀಟರ್‌ಗಳಷ್ಟು ದೂರ ತಲುಪಿದವು. ದಾಳಿಯಲ್ಲಿ ಹತ್ತಾರು ಬಂಡುಕೋರರು ಹತರಾದರು. ಮೂವರ ಶವಗಳು ಲಭಿಸಿದವು. ಸಂಘರ್ಷ ವಲಯದಲ್ಲಿ 10ರಿಂದ 15 ಸಾವಿರ ನಾಗರಿಕರು ಸಿಲುಕಿ ಅತಂತ್ರರಾದರು.

2009: ನಮಕ್ಕಲ್ ಜಿಲ್ಲೆಯ ಖಾದ್ಯ ತೈಲ ಗಿರಣಿಯಲ್ಲಿ ಸಂಭವಿಸಿದ ಭಾರಿ ಅಗ್ನಿ ದುರಂತದಲ್ಲಿ ಬಾಲ ಕಾರ್ಮಿಕರೂ ಸೇರಿದಂತೆ 14 ಮಂದಿ ಕಾರ್ಮಿಕರು ಸಜೀವ ದಹನಗೊಂಡ ದಾರುಣ ಘಟನೆ ಸಂಭವಿಸಿತು. ಘಟನೆಯಲ್ಲಿ ಐವರು ತೀವ್ರವಾಗಿ ಗಾಯಗೊಂಡರು. ವಲಯಪಟ್ಟಿಯಲ್ಲಿ ಭತ್ತದ ತೌಡಿನಿಂದ ಖಾದ್ಯತೈಲ ತಯಾರಿಸುತ್ತಿದ್ದ ಗೋದಾಮಿನಲ್ಲಿ ರಾತ್ರಿ ಬೆಂಕಿ ಹೊತ್ತಿಕೊಂಡಿತು.

2009: ಹಿರಿಯ ಸಂಶೋಧಕ ಡಾ. ಎಂ.ಚಿದಾನಂದಮೂರ್ತಿ ಅವರ ಹೆಸರಿನಲ್ಲಿ ನೀಡುವ 'ಚಿದಾನಂದ ಪ್ರಶಸ್ತಿ'ಗೆ ಧಾರವಾಡದ ಕರ್ನಾಟಕ ವಿಶ್ವವಿದ್ಯಾಲಯದ ಹಿರಿಯ ಪ್ರಾಧ್ಯಾಪಕ ಡಾ.ವೀರಣ್ಣ ರಾಜೂರ ಆಯ್ಕೆಯಾದರು.

2009: ಧಾರವಾಡದ ವ್ಯಂಗ್ಯಚಿತ್ರ ಕಲಾವಿದ ಪ್ರಭಾಕರ ರಾವ್ ಬೈಲ್ ಅವರಿಗೆ ಬೆಂಗಳೂರಿನ ಭಾರತೀಯ ವ್ಯಂಗ್ಯ ಚಿತ್ರಕಾರರ ಸಂಸ್ಥೆ ನೀಡುವ ಜೀವಮಾನ ಶ್ರೇಷ್ಠ ಸಾಧನೆ ಪ್ರಶಸ್ತಿ ಲಭಿಸಿತು. ದೇಶದ ಏಳು ಪ್ರಸಿದ್ಧ ವ್ಯಂಗ್ಯಚಿತ್ರಕಾರರಿಗೆ ಈ ಪ್ರಶಸ್ತಿ ದೊರೆತಿದ್ದು, ರಾಜ್ಯದಿಂದ ರಾವ್ ಬೈಲ್ ಒಬ್ಬರು ಈ ಪ್ರಶಸ್ತಿಗೆ ಪಾತ್ರರಾದರು. ಮೂಲತಃ ಕೇರಳದವರಾದ ರಾವ್ ಬೈಲ್, ಭಾರತೀಯ ಜೀವ ವಿಮಾ ನಿಗಮದ ಮುಂಬೈಯ ಕೇಂದ್ರ ಕಚೇರಿಯಲ್ಲಿ ಸೇವೆ ಸಲ್ಲಿಸಿ, ನಂತರ 1989ರಲ್ಲಿ ಕೆಲಸಕ್ಕೆ ರಾಜಿನಾಮೆ ನೀಡಿ ಧಾರವಾಡಕ್ಕೆ ಬಂದು ನೆಲೆಸಿದ್ದರು. 'ಪ್ರಜಾವಾಣಿ', 'ಮಯೂರ' ಸೇರಿದಂತೆ ರಾಷ್ಟ್ರದ ಅನೇಕ ಹೆಸರಾಂತ ಪತ್ರಿಕೆಗಳಲ್ಲಿ ಇವರ ವ್ಯಂಗ್ಯಚಿತ್ರಗಳು ಪ್ರಕಟಗೊಂಡಿವೆ.

2009: ವಿಪ್ರೊ ಟೆಕ್ನಾಲಾಜಿಸ್‌ನ ನೂತನ 'ತರಂಗ್' ಪ್ರಯೋಗಾಲಯವನ್ನು ಮಾಜಿ ರಾಷ್ಟ್ರಪತಿ ಡಾ. ಎ.ಪಿ.ಜೆ.ಅಬ್ದುಲ್ ಕಲಾಂ ಅವರು ಬೆಂಗಳೂರಿನಲ್ಲಿ ಉದ್ಘಾಟಿಸಿದರು.

2008: ಭೂ ಮೇಲ್ಮೈಯಿಂದ ಮೇಲ್ಮೈಗೆ 3000 ಕಿ.ಮೀ. ದೂರದವರೆಗೆ ಅಣ್ವಸ್ತ್ರ ಸಾಗಣೆ ಸಾಮರ್ಥ್ಯ ಉಳ್ಳ ಅಗ್ನಿ- 3 ಕ್ಷಿಪಣಿಯ ಪರೀಕ್ಷಾ ಹಾರಾಟವನ್ನು ಭಾರತವು ಒರಿಸ್ಸಾ ಕರಾವಳಿಯ ವ್ಹೀಲರ್ಸ್ ದ್ವೀಪದಿಂದ ಈದಿನ ನಡೆಸಿತು. ಮಧ್ಯಂತರಗಾಮೀ ಖಂಡಾಂತರ ಕ್ಷಿಪಣಿಯನ್ನು (ಐ ಆರ್ ಬಿ ಎಂ) ಸಮಗ್ರ ಪರೀಕ್ಷಾ ವಲಯದ ಉಡಾವಣಾ ಸಮುಚ್ಚಯದ ಸಂಚಾರಿ ಉಡಾವಣಾ ವಾಹನದಿಂದ ಬೆಳಗ್ಗೆ 9.56ರ ವೇಳೆಗೆ ಉಡಾಯಿಸಲಾಯಿತು. 16 ಮೀಟರ್ ಉದ್ದ, 1.8 ಮೀಟರ್ ಅಗಲದ ಕ್ಷಿಪಣಿಯು ಲಂಬವಾಗಿ ಮೇಲಕ್ಕೇರಿ ಸ್ವಲ್ಪ ಬಾಗಿದ ಸ್ಥಿತಿಯಲ್ಲಿ ದಟ್ಟವಾದ ಕಿತ್ತಳೆ ಹಾಗೂ ಬಿಳಿ ಬಣ್ಣದ ಧೂಮದ ಕಂಭವನ್ನು ಹಿಂದಿನಿಂದ ಸೃಷ್ಟಿಸುತ್ತಾ ಗಗನಕ್ಕೆ ಚಿಮ್ಮಿತು. ಕೆಲವೇ ಸೆಕೆಂಡುಗಳಲ್ಲಿ ಬರಿಗಣ್ಣಿಗೆ ಕಾಣದಷ್ಟು ದೂರಕ್ಕೆ ಅದು ಚಲಿಸಿತು ಎಂದು ಪ್ರತ್ಯಕ್ಷದರ್ಶಿಗಳು ತಿಳಿಸಿದರು. ಅಗ್ನಿ-3 ಕ್ಷಿಪಣಿಯ ಒಳಗೆ ಅದರ ಮಾರ್ಗದರ್ಶನಕ್ಕಾಗಿ ಕಂಪ್ಯೂಟರ್ ಒಂದನ್ನು ಇರಿಸಲಾಗಿತ್ತು. ಮುಖ್ಯ ಉಡಾವಣಾ ಸ್ಥಳವಲ್ಲದೆ, ನೌಕಾಪಡೆಯ ಇತರ ಎರಡು ಸಮರ ನೌಕೆಗಳು ಅತ್ಯಾಧುನಿಕ ಬ್ಯಾಟರಿ ಚಾಲಿತ ರೇಡಾರ್, ಎಲೆಕ್ಟ್ರೋ- ಆಪ್ಟಿಕ್ ಪತ್ತೆ ವ್ಯವಸ್ಥೆಗಳು, ಟೆಲಿಮೆಟ್ರಿಕ್ ಮಾಹಿತಿ ಕೇಂದ್ರಗಳೊಂದಿಗೆ ಕ್ಷಿಪಣಿಯ ಚಲನೆಯನ್ನು ಗಮನಿಸುತ್ತವೆ. ಹಾರಾಟದ ಮಾಹಿತಿ ಲಭಿಸಿದ ಬಳಿಕ ಪರೀಕ್ಷಾ ಫಲಿತಾಂಶ ತಿಳಿಯುತ್ತದೆ ಎಂದು ರಕ್ಷಣಾ ಮೂಲಗಳು ಹೇಳಿದವು. 48 ಟನ್ ತೂಕದ ಅಗ್ನಿ-3 ಕ್ಷಿಪಣಿಯ ಪರೀಕ್ಷಾ ಹಾರಾಟವನ್ನು 2006ರ ಜುಲೈ 9ರಂದು ಮೊದಲ ಬಾರಿಗೆ ನಡೆಸಲಾಗಿತ್ತು. ಆದರೆ ತಾಂತ್ರಿಕ ಸಮಸ್ಯೆಗಳ ಕಾರಣ ಅದು ವಿಫಲಗೊಂಡಿತ್ತು. 2007ರ ಏಪ್ರಿಲ್ 12ರಂದು ನಡೆಸಲಾದ ಎರಡನೇ ಪರೀಕ್ಷಾ ಹಾರಾಟವು ಯಶಸ್ವಿಯಾಗಿ ಉದ್ದೇಶವನ್ನು ಈಡೇರಿಸಿತ್ತು. ಅಗ್ನಿ-3 ರಾಷ್ಟ್ರದ ಮೊತ್ತ ಮೊದಲ ಘನ ಇಂಧನ ಕ್ಷಿಪಣಿಯಾಗಿದ್ದು, ಸುಲಲಿತವಾಗಿ ಬಳಸಲು ಸಾಧ್ಯವಿರುವಂತಹ ಕ್ಷಿಪಣಿ. ಈ ಪ್ರಯೋಗದಲ್ಲಿ ಯಶಸ್ವಿಯಾಗಿರುವ ಭಾರತ ಇದೀಗ ದೇಶಾಂತರ್ಗಾಮಿ ಕ್ಷಿಪಣಿಗಳನ್ನು (ಐ ಆರ್ ಬಿ ಎಂ) ಹೊಂದಿರುವ ರಾಷ್ಟ್ರಗಳ ಗುಂಪಿಗೆ ಸೇರಿದಂತಾಯಿತು. 3,500ಕಿ.ಮೀ. ವ್ಯಾಪ್ತಿಯುಳ್ಳ ಈ ಕ್ಷಿಪಣಿ ಭಾರತದಿಂದ ಚೀನಾದ ಬೀಜಿಂಗ್ ಅಥವಾ ಶಾಂಘೈ ನಗರಕ್ಕೆ ಕೆಲವೇ ಕ್ಷಣಗಳಲ್ಲಿ ತಲುಪುವ ಸಾಮರ್ಥ್ಯ ಹೊಂದಿರುವುದು ವಿಶೇಷ.

2008: ಬಾಂಗ್ಲಾದೇಶದ ಭ್ರಷ್ಟಾಚಾರ ವಿರೋಧಿ ಸಮಿತಿಯು ವರ್ಷದ ಹಿಂದೆ ಬಂಧಿಸಲಾದ ಖಲೀದಾ ಜಿಯಾ ಅವರ ಪುತ್ರ ತಾರಿಖ್ ರಹಮಾನ್ ವಿರುದ್ಧ, ಕೊಲೆ ಪ್ರಕರಣವೊಂದನ್ನು ಮುಚ್ಚಿಹಾಕಲು 12.6 ಕೋಟಿ ರೂಪಾಯಿ ಲಂಚ ಪಡೆದಿರುವುದಾಗಿ ಆಪಾದಿಸಿ ದೋಷಾರೋಪ ಪಟ್ಟಿಯನ್ನು ಸಲ್ಲಿಸಿತು. ರಹಮಾನ್, ಮಾಜಿ ಬಿ ಎನ್ ಪಿ ಸಚಿವ ಲುಫ್ತುಜಾಮನ್ ಬಾಬರ್ ಮತ್ತು ಇತರ ಆರು ಮಂದಿ ವಿರುದ್ಧ 2006ರಲ್ಲಿ ನಡೆದ ಬಶುಂಧರಾ ಬಿಸಿನೆಸ್ ಗ್ರೂಪಿನ ನಿರ್ದೇಶಕ ಹುಮಾಯೂನ್ ಕಬೀರ ಸಬ್ಬೀರ್ ಕೊಲೆ ಪ್ರಕರಣದ ತನಿಖೆಗೆ ಅಡ್ಡಿ ಒಡ್ಡಲು ಅಧಿಕಾರ ದುರುಪಯೋಗಿಸಿದ ಆಪಾದನೆ ಹೊರಿಸಲಾಯಿತು. ಆರೋಪಿಗಳು 21 ಕೋಟಿ ಟಾಕಾವನ್ನು ಕಂಪೆನಿ ಅಧ್ಯಕ್ಷ ಅಹ್ಮದ್ ಅಕ್ಬರ್ ಸೋಭನ್ ಅವರಿಂದ ಲಂಚ ಪಡೆದಿದ್ದರು. ಸಬ್ಬೀರನನ್ನು ಕೊಲೆಗೈದ ಆರೋಪಕ್ಕೆ ಒಳಗಾಗಿರುವ ಸೋಭನ್ ಪುತ್ರ ಷಫಿಯತ್ ಸೋಭನ್ ಸನ್ವೀರನ ಹೆಸರನ್ನು ಪ್ರಕರಣದಿಂದ ಕೈಬಿಡಲು ಈ ಲಂಚ ಸ್ವೀಕರಿಸಲಾಗಿತ್ತು ಎಂದು ಸಮಿತಿ ಹೇಳಿತು.

2008: ರಷ್ಯಾದ ನೂತನ ಅಧ್ಯಕ್ಷರಾಗಿ ದಿಮಿತ್ರಿ ಮೆಡ್ವೆಡೆವ್ ಪ್ರಮಾಣ ವಚನ ಸ್ವೀಕರಿಸಿದರು. ಪ್ರಮಾಣ ವಚನ ಸ್ವೀಕರಿಸಿದ ಸ್ವಲ್ಪ ಹೊತ್ತಿನ ಬಳಿಕ ಮೆಡ್ವೆಡೆವ್, ವ್ಲಾದಿಮೀರ್ ಪುಟಿನ್ ಅವರನ್ನು ಮತ್ತೆ ರಷ್ಯ ಪ್ರಧಾನಿಯಾಗಿ ನೇಮಿಸಿದರು. ಮಾಸ್ಕೊ ನಗರದ ದಿ ಗ್ರಾಂಡ್ ಕ್ರೆಮ್ಲಿನ್ ಅರಮನೆಯಲ್ಲಿ ನಡೆದ ಅಭೂತಪೂರ್ವ ಸಮಾರಂಭದಲ್ಲಿ ಎರಡು ಸಾವಿರ ಆಹ್ವಾನಿತ ಪ್ರತಿನಿಧಿಗಳು ಹಾಜರಿದ್ದರು. ಮಾಜಿ ಕಾರ್ಪೊರೇಟ್, ವಕೀಲರಾಗಿದ್ದ ಮೆಡ್ವೆಡೆವ್, ಪುಟಿನ್ ಅವರ ಬಹಳ ಹಳೆಯ ಒಡನಾಡಿ. ಪ್ರಧಾನಿ ವಿಕ್ಟೋರ್ ಝುಬ್ಕೊವ್ ಅವರು ರಾಜೀನಾಮೆ ಸಲ್ಲಿಸಿದ್ದರಿಂದ ಅವರ ಸ್ಥಾನಕ್ಕೆ ಮೆಡ್ವೆಡೆವ್ ಅವರು ಪುಟಿನ್ ಅವರನ್ನು ನೇಮಕ ಮಾಡಿದರು.

2008: ಮ್ಯಾನ್ಮಾರಿನಲ್ಲಿ ನರ್ಗೀಸ್ ಚಂಡಮಾರುತದ ಹಾವಳಿಯಲ್ಲಿ ಬದುಕುಳಿದವರ ನೆರವಿಗಾಗಿ ಭಾರತ `ಸಹಾಯ ಕಾರ್ಯಾಚರಣೆ' ಆರಂಭಿಸಿತು. ಈ ಚಂಡಮಾರುತದಿಂದ ಮ್ಯಾನ್ಮಾರಿನಲ್ಲಿ ಸುಮಾರು 22.500 ಜನರು ಸತ್ತಿದ್ದು ಇತರ 41 ಸಾವಿರ ಜನರು ನಾಪತ್ತೆಯಾದರು. ಮೇ 2 ಮತ್ತು 3ರಂದು ಮ್ಯಾನ್ಮಾರ್ ಕಡಲ ತೀರವನ್ನು ಅಪ್ಪಳಿಸಿದ್ದ ಈ ಚಂಡಮಾರುತವು ಅನೇಕ ಹಳ್ಳಿಗಳನ್ನು ನೆಲಸಮ ಮಾಡಿತ್ತು. ಲಕ್ಷಾಂತರ ಜನರು ಮನೆಮಠ ಕಳೆದುಕೊಂಡು ನಿರಾಶ್ರಿತರಾದರು.

2008: ಫಾರ್ವರ್ಡ್ ಬ್ಲಾಕ್ ಸದಸ್ಯ ಬರುನ್ ಮುಖರ್ಜಿ ಅವರು ತಮ್ಮ ರಾಜ್ಯಸಭಾ ಸ್ಥಾನಕ್ಕೆ ನೀಡಿದ ರಾಜೀನಾಮೆಯನ್ನು ಅಧ್ಯಕ್ಷ ಹಮೀದ್ ಅನ್ಸಾರಿ ಮಾನ್ಯ ಮಾಡಿದರು. ಎಡರಂಗವು ರಾಜ್ಯಸಭೆಯಲ್ಲಿ ಪಶ್ಚಿಮ ಬಂಗಾಳದ ಸಿಪಿಐಗೆ ಪ್ರಾತಿನಿಧ್ಯ ನೀಡಿಲ್ಲ ಎಂದು ಆರೋಪಿಸಿ ಅವರು ತಮ್ಮ ಸ್ಥಾನಕ್ಕೆ ರಾಜೀನಾಮೆ ಸಲ್ಲಿಸಿದ್ದರು.

2008: ದಶಕದ ಬಳಿಕ ಚೀನಾ ಹಾಗೂ ಜಪಾನ್ ದೇಶಗಳ ನಡುವೆ ಮೊದಲ ಶೃಂಗ ಸಭೆ ಟೋಕಿಯೋದಲ್ಲಿ ಆರಂಭವಾಯಿತು.

2007: ನೊಬೆಲ್ ಪ್ರಶಸ್ತಿ ಪುರಸ್ಕೃತ ಅಮರ್ತ್ಯಸೇನ್ ಅವರು ಮೊದಲ `ವಿಶ್ವ ಆರ್ಥಿಕ ಪ್ರಶಸ್ತಿ'ಗೆ ಆಯ್ಕೆಯಾದರು. ಅರ್ಥ ವ್ಯವಸ್ಥೆ ಮತ್ತು ಕಲ್ಯಾಣ ಕಾರ್ಯಕ್ರಮಗಳಲ್ಲಿನ ಮೂಲಭೂತ ಸಮಸ್ಯೆಗಳ ಸಂಶೋಧನೆಗೆ ನೀಡಿದ ಕೊಡುಗೆಯನ್ನು ಪರಿಗಣಿಸಿ ಜರ್ಮನ್ ಮಾಜಿ ಚಾನ್ಸಲರ್ ಹೆಲ್ಮಂಡ್ ಶ್ಮಿಂಡ್ ಅವರೊಂದಿಗೆ ಸೇನ್ ಅವರನ್ನೂ ಈ ಪ್ರಶಸ್ತಿಗೆ ಆಯ್ಕೆ ಮಾಡಲಾಯಿತು.

2007: ಮೊದಲ ಸ್ವಾತಂತ್ರ್ಯ ಸಂಗ್ರಾಮದ 150ನೇ ವಾರ್ಷಿಕೋತ್ಸವದ ಅಂಗವಾಗಿ ಮೀರತ್ತಿನಿಂದ ದೆಹಲಿಗೆ ದೇಶಭಕ್ತಿ ಗೀತೆಗಳನ್ನು ಹಾಡುತ್ತಾ ಹೊರಟ 10,000ಕ್ಕೂ ಹೆಚ್ಚು ಯುವಕರ `ಯಾತ್ರೆ'ಗೆ ಮೀರತ್ತಿನಲ್ಲಿ ಕ್ರೀಡಾ ಮತ್ತು ಯುವಜನ ವ್ಯವಹಾರಗಳ ಸಚಿವ ಮಣಿ ಶಂಕರ ಅಯ್ಯರ್ ಚಾಲನೆ ನೀಡಿದರು.

2007: ಕಾವೇರಿ ನ್ಯಾಯಮಂಡಳಿ ನೀಡಿದ್ದ ಅಂತಿಮ ತೀರ್ಪನ್ನು ಪ್ರಶ್ನಿಸಿ ಕರ್ನಾಟಕ, ಕೇರಳ, ಮತ್ತು ತಮಿಳುನಾಡು ಸಲ್ಲಿಸಿದ್ದ ವಿಶೇಷ ಮೇಲ್ಮನವಿಗಳನ್ನು ಅಂಗೀಕರಿಸಿ ಅದನ್ನು ವಿಸ್ತೃತ ಪೀಠಕ್ಕೆ ವರ್ಗಾಯಿಸಲು ನಿರ್ಧರಿಸುವ ಮೂಲಕ ಸುಪ್ರೀಂಕೋರ್ಟ್ ಕಾವೇರಿ ವಿವಾದಕ್ಕೆ ಸಂಬಂಧಿಸಿದಂತೆ ಇನ್ನೊಂದು ಸುತ್ತಿನ ಕಾನೂನು ಸಮರಕ್ಕೆ ಹಸಿರು ನಿಶಾನೆ ತೋರಿತು.

2007: ಢಾಕ್ಕಾಕ್ಕೆ ಮರಳುವುದಕ್ಕೆ ಕೊನೆ ಕ್ಷಣದಲ್ಲಿ ವಿಮಾನ ಏರಲು ಅವಕಾಶ ನಿರಾಕರಿಸಲಾದ 15 ದಿನಗಳ ನಂತರ ಬಾಂಗ್ಲಾದೇಶದ ಮಾಜಿ ಪ್ರಧಾನಿ ಶೇಖ್ ಹಸೀನಾ (60) ಅವರು ಲಂಡನ್ನಿನಿಂದ ಸ್ವದೇಶಕ್ಕೆ ಪ್ರಯಾಣ ಬೆಳೆಸಿದರು.

2007: ತೀವ್ರ ಹಣಾಹಣಿಯಿಂದ ಕೂಡಿದ್ದ ಫ್ರಾನ್ಸಿನ ಅಧ್ಯಕ್ಷೀಯ ಚುನಾವಣೆಯಲ್ಲಿ ಬಲಪಂಥೀಯ ಅಭ್ಯರ್ಥಿ ನಿಕೋಲಾಸ್ ಸರ್ಕೋಜಿ ಆಯ್ಕೆಯಾದ ಹಿನ್ನೆಲೆಯಲ್ಲಿ ರಾಷ್ಟ್ರದಾದ್ಯಂತ ಹಿಂಸಾಚಾರ ಭುಗಿಲೆದ್ದಿತು.

2006: ಇರಾನಿನ ದಕ್ಷಿಣಕ್ಕಿರುವ ಜರಾಂದ್ ಪಟ್ಟಣ ಹಾಗೂ ತೈವಾನಿನ ಕರಾವಳಿಯಲ್ಲಿ ರಿಕ್ಟರ್ ಮಾಪಕದಲ್ಲಿ 5.2ರಷ್ಟು ಪ್ರಮಾಣದ ಭಾರಿ ಭೂಕಂಪ ಸಂಭವಿಸಿತು. 74 ಮಂದಿ ಗಾಯಗೊಂಡು, ಬಹುತೇಕ ಮನೆಗಳು ಅಪಾರ ಪ್ರಮಾಣದಲ್ಲಿ ಹಾನಿಗೊಂಡವು.

2006: ಗ್ರಾಮೀಣ ಉನ್ನತೀಕರಣಕ್ಕೆ ವಿಜ್ಞಾನ ಮತ್ತು ತಂತ್ರಜ್ಞಾನದ ಬಳಕೆ `ಅಸ್ತ್ರ' ಸಂಸ್ಥೆಯ ಸ್ಥಾಪಕ ಎಕೆಎನ್ ಎಂದೇ ಖ್ಯಾತರಾಗಿದ್ದ ಪ್ರೊ. ಅಮೂಲ್ಯ ಕುಮಾರ ನಾರಾಯಣ ರೆಡ್ಡಿ (75) ಮೂತ್ರಪಿಂಡದ ವೈಫಲ್ಯದ ಪರಿಣಾಮವಾಗಿ ಬೆಂಗಳೂರಿನಲ್ಲಿ ಅಸು ನೀಗಿದರು. ಸೆಂಟ್ರಲ್ ಎಲೆಕ್ಟ್ರೋ ಕೆಮಿಕಲ್ ರೀಸರ್ಚ್ ಇನ್ಸ್ಟಿಟ್ಯೂಟಿನಲ್ಲಿ ಸಂಶೋಧನಾ ಅಧಿಕಾರಿಯಾಗಿ ಹಾಗೂ ಭಾರತೀಯ ವಿಜ್ಞಾನ ಸಂಸ್ಥೆಯ ಭೌತ ರಸಾಯನ ಶಾಸ್ತ್ರ ವಿಭಾಗದ ಮುಖ್ಯಸ್ಥರಾಗಿ ಸೇವೆ ಸಲ್ಲಿಸಿದ್ದ ರೆಡ್ಡಿ, ಭಾರತೀಯ ವಿಜ್ಞಾನ ಸಂಸ್ಥೆಯಲ್ಲಿ `ಅಸ್ತ್ರ' ಸಂಸ್ಥೆಯನ್ನು ಹುಟ್ಟು ಹಾಕಿದ್ದರು. ಎನರ್ಜಿ ಫಾರ್ ಸಸ್ಟೈನೇಬಲ್ ವರ್ಲ್ಡ್ಡ್ ಸಂಸ್ಥೆಯು ಇವರಿಗೆ 2000ದಲ್ಲಿ ವೋಲ್ವೊ ಪ್ರಶಸ್ತಿ ನೀಡಿ ಗೌರವಿಸಿತ್ತು. 2002ರಲ್ಲಿ ಸರ್. ಎಂ. ವಿಶ್ವೇಶ್ವರಯ್ಯ ರಾಜ್ಯ ಪ್ರಶಸ್ತಿ ಕೂಡಾ ಇವರಿಗೆ ಲಭಿಸಿತ್ತು.

2006: ಮಧ್ಯಪ್ರದೇಶ ಸರ್ಕಾರದ ಸಂಸ್ಕೃತಿ ಇಲಾಖೆಯು ಲಘು ಸಂಗೀತದಲ್ಲಿ ಮಾಡಿದ ಸಾಧನೆಗೆ ನೀಡುವ ಲತಾ ಮಂಗೇಶ್ಕರ್ ರಾಷ್ಟ್ರೀಯ ಪ್ರಶಸ್ತಿಯನ್ನು ಖ್ಯಾತ ಹಿನ್ನಲೆ ಗಾಯಕಿ ಕವಿತಾ ಕೃಷ್ಣಮೂರ್ತಿ ಅವರಿಗೆ ಮುಖ್ಯಮಂತ್ರಿ ಶಿವರಾಜ್ ಸಿಂಗ್ ಚೌಹಾಣ್ ಅವರು ಪ್ರದಾನ ಮಾಡಿದರು. ಪ್ರಶಸ್ತಿಯು ಒಂದು ಲಕ್ಷ ರೂಪಾಯಿ ನಗದು ಬಹುಮಾನ ಹಾಗೂ ಪ್ರಶಸ್ತಿ ಫಲಕವನ್ನು ಹೊಂದಿದೆ.

1978: ಇಟಲಿಯ ರೀನ್ ಹೋಲ್ಡ್ ಮೆಸ್ನರ್ ಮತ್ತು ಆಸ್ಟ್ರಿಯಾದ ಪೀಟರ್ ಹಬ್ಲೆರರ್ ಆಮ್ಲಜನಕ ಇಲ್ಲದೆಯೇ ಮೊತ್ತ ಮೊದಲ ಬಾರಿಗೆ ಮೌಂಟ್ ಎವರೆಸ್ಟ್ ಏರಿದರು.

1956: ಕಲಾವಿದ ವಲ್ಲೀಶ್ ವಿ. ಜನನ.

1955: ಕಲಾವಿದ ರಮೇಶ ಟಿ.ಎನ್. ಜನನ.

1949: ಸಂಗೀತ ಹಾಗೂ ಶಿಕ್ಷಣ ತಜ್ಞ ಡಾ. ಎಸ್.ವಿ. ರಮಣಕುಮಾರ್ ಅವರು ಜಿ.ಎಲ್. ಸೂರಪ್ಪ- ಕಮಲಮ್ಮ ದಂಪತಿಯ ಮಗನಾಗಿ ಕೋಲಾರ ಜಿಲ್ಲೆಯ ಶ್ರೀನಿವಾಸಪುರದಲ್ಲಿ ಜನಿಸಿದರು.

1945: ಕಲಾವಿದ ಶೆಲ್ವ ನಾರಾಯಣ ಜನನ.

1915: ಜರ್ಮನಿಯ ಯು-139 ಜಲಾಂತರ್ಗಾಮಿ ಮೂಲಕ ಸಿಡಿಸಿದ ಜಲಕ್ಷಿಪಣಿ (ಟಾರ್ಪೆಡೊ) ಐರಿಷ್ ಕರಾವಳಿಯ ಬಳಿ ಇದ್ದ ಬ್ರಿಟಿಷ್ ನೌಕೆ ಲುಸಿಟಾನಿಯಾವನ್ನು ಮುಳುಗಿಸಿತು. ಅದರಲ್ಲಿದ್ದ ಸುಮಾರು 1200 ಜನ ಮೃತರಾದರು.

1888: ಜಾರ್ಜ್ ಈಸ್ಟ್ ಮನ್ ಮೊದಲ ಬಾರಿಗೆ ಅಮೆರಿಕನ್ ಮಾರುಕಟ್ಟೆಗೆ ಕೊಡಕ್ ಕ್ಯಾಮರಾವನ್ನು ಪರಿಚಯಿಸಿದ. `ನೀವು ಬಟನ್ ಒತ್ತಿರಿ, ಉಳಿದದ್ದನ್ನೆಲ್ಲ ನಾವು ಮಾಡುತ್ತೇವೆ' ಎಂಬ ಘೋಷಣೆಯೊಂದಿಗೆ ಆತ ಈ ಕ್ಯಾಮರಾವನ್ನು ಮಾರುಕಟ್ಟೆಗೆ ಬಿಟ್ಟ. ಕೈಯಲ್ಲಿ ಹಿಡಿದುಕೊಳ್ಳಬಹುದಾದ ಈ ಸರಳ ಬಾಕ್ಸ್ ಕ್ಯಾಮರಾದಿಂದ 100 ಫ್ರೇಮುಗಳ ರೋಲ್ ಹಾಕಿ ಫೋಟೋ ತೆಗೆಯಬಹುದಿತ್ತು. ಫಿಲ್ಮ್ ಮುಗಿದ ಬಳಿಕ ಡೆವಲಪ್ಪಿಂಗ್, ಪ್ರಿಂಟಿಂಗ್, ರಿಲೋಡಿಂಗಿಗೆ ಕ್ಯಾಮರಾವನ್ನೇ ಉತ್ಪಾದಕರಿಗೆ ಕಳುಹಿಸಬಹುದಾಗಿತ್ತು.

1861: ರಬೀಂದ್ರನಾಥ್ ಟ್ಯಾಗೋರ್ (1861-1941) ಜನ್ಮದಿನ. ಬಂಗಾಳಿ ಕವಿ, ಸಾಹಿತಿಯಾದ ಇವರು 1913ರಲ್ಲಿ ಸಾಹಿತ್ಯಕ್ಕಾಗಿ ನೊಬೆಲ್ ಪ್ರಶಸ್ತಿ ಪಡೆದ ಮೊದಲ ಏಷಿಯನ್ನರೆಂಬ ಹೆಗ್ಗಳಿಕೆ ಪಡೆದವರು. ಗಾಂಧೀಜಿಯವರನ್ನು ಮೊತ್ತ ಮೊದಲ ಬಾರಿಗೆ `ಮಹಾತ್ಮ' ಎಂಬುದಾಗಿ ಕರೆದದ್ದು ರಬೀಂದ್ರನಾಥ್ ಟ್ಯಾಗೋರ್ ಅವರೇ.

ಇಂದಿನ ಇತಿಹಾಸ History Today ಮೇ 06

ಇಂದಿನ ಇತಿಹಾಸ

ಮೇ 06
ಅಮೆರಿಕದ ಟೆಕ್ಸಾಸ್ ನಿವಾಸಿ 33 ವರ್ಷದ ಶಿಕ್ಷಕಿ ಜೂಡಿ ಟ್ರುನೆಲ್ ವಿಶ್ವದಾದ್ಯಂತ ಹರಡಿದ ಹಾಗೂ ಭಾರಿ ಭೀತಿ ಹುಟ್ಟಿಸಿದ ಹಂದಿಜ್ವರಕ್ಕೆ ಬಲಿಯಾದ ಮೊದಲ ಅಮೆರಿಕದ ಮಹಿಳೆ ಎನ್ನಲಾಯಿತು. ಟೆಕ್ಸಾಸ್‌ನ ಆರೋಗ್ಯ ಅಧಿಕಾರಿಗಳು ಈದಿನ ಈ ವಿಷಯವನ್ನು ದೃಢಪಡಿಸಿದರು.

2009: 23 ದೇಶಗಳಿಗೆ ಹಂದಿಜ್ವರದ ಸೋಂಕು ವ್ಯಾಪಿಸಿ 31 ಜನರು ಸಾವನ್ನಪ್ಪಿದರು ಎಂದು ವಿಶ್ವ ಆರೋಗ್ಯ ಸಂಸ್ಥೆ ಹೇಳಿತು. ಪ್ರಯೋಗಾಲಯಕ್ಕೆ ಕಳುಹಿಸಿರುವ ರಕ್ತದ ಮಾದರಿಯಲ್ಲಿ ವಿವಿಧ ದೇಶಗಳ 1,893 ಜನರಿಗೆ ಎಚ್1ಎನ್1 ಸೋಂಕು ಇರುವುದು ಪತ್ತೆಯಾಯಿತು. ಮೆಕ್ಸಿಕೋದಲ್ಲಿ 942 ಜನರಿಗೆ ಸೋಂಕು ತಗುಲಿರುವುದು ಪತ್ತೆಯಾಯಿತು. ಇವರಲ್ಲಿ 29 ಜನರು ಸಾವನ್ನಪ್ಪಿದ್ದಾರೆ ಎಂದು ಸಂಸ್ಥೆಯ ಪ್ರಕಟಣೆ ಹೇಳಿತು.

2009: ಅಮೆರಿಕದ ಟೆಕ್ಸಾಸ್ ನಿವಾಸಿ 33 ವರ್ಷದ ಶಿಕ್ಷಕಿ ಜೂಡಿ ಟ್ರುನೆಲ್ ವಿಶ್ವದಾದ್ಯಂತ ಹರಡಿದ ಹಾಗೂ ಭಾರಿ ಭೀತಿ ಹುಟ್ಟಿಸಿದ ಹಂದಿಜ್ವರಕ್ಕೆ ಬಲಿಯಾದ ಮೊದಲ ಅಮೆರಿಕದ ಮಹಿಳೆ ಎನ್ನಲಾಯಿತು. ಟೆಕ್ಸಾಸ್‌ನ ಆರೋಗ್ಯ ಅಧಿಕಾರಿಗಳು ಈದಿನ ಈ ವಿಷಯವನ್ನು ದೃಢಪಡಿಸಿದರು.

2009: ಈಸ್ಟ್ರೋ ಜೆನ್ ಒಂದು ಲೈಂಗಿಕ ಚೋದಕ (ಹಾರ್ಮೋನ್) ಅಷ್ಟೇ ಅಲ್ಲ; ಶ್ರವಣ ನಿಯಂತ್ರಣ ಸೇರಿದಂತೆ ಹಲವು ಇನ್ನಿತರ ಕಾರ್ಯಗಳಲ್ಲಿ ಮುಖ್ಯ ಪಾತ್ರ ವಹಿಸುತ್ತದೆ ಎಂದು ವಿಜ್ಞಾನಿಗಳು ವಾಷಿಂಗ್ಟನ್‌ನಲ್ಲಿ ಪ್ರತಿಪಾದಿಸಿದರು. ಈಸ್ಟ್ರೋಜೆನ್ ವಹಿಸುವ ಪಾತ್ರವನ್ನು ಸರಿಯಾಗಿ ಅರ್ಥ ಮಾಡಿಕೊಂಡರೆ ಶ್ರವಣ ದೋಷ ಸೇರಿದಂತೆ ಹಲವು ಸಮಸ್ಯೆಗಳಿಗೆ ಚಿಕಿತ್ಸೆ ನೀಡುವ ಹೊಸ ಮಾರ್ಗಗಳೇ ತೆರೆದುಕೊಳ್ಳಲಿವೆ ಎಂದೂ ವಿಜ್ಞಾನಿಗಳು ಹೇಳಿದರು. 'ಮಿದುಳು ಶ್ರವಣ ಮಾಹಿತಿಯನ್ನು ಸ್ವೀಕರಿಸಿ- ಸಂಸ್ಕರಿಸುವಲ್ಲಿ ಈಸ್ಟ್ರೋ ಜೆನ್ ಮಹತ್ವದ ಪಾತ್ರ ವಹಿಸುತ್ತದೆಂಬುದನ್ನು ನಾವು ಸಾಬೀತು ಮಾಡುತ್ತೇವೆ. ಈವರೆಗಿನ ಯಾವ ಅಧ್ಯಯನವೂ ಈ ಅಂಶವನ್ನು ಗುರುತಿಸಿರಲಿಲ್ಲ' ಎಂದು ರೊಚೆಸ್ಟರ್ ವಿ.ವಿ.ಯ ಸಹಾಯಕ ಪ್ರೊಫೆಸರ್ ರ್ಯಾಫೆಲ್ ಪಿನಾಡ್ ಹೇಳಿದರು. ಮಿಲಿ ಸೆಕೆಂಡಿನೊಳಗೆ ಶ್ರವಣ ಸಂಕೇತಗಳನ್ನು ಸಂಸ್ಕರಿಸಲು ನೆರವಾಗುವ ಈಸ್ಟ್ರೋಜೆನ್ ಹೊಸ ವಿಷಯಗಳ ಕಲಿಕೆ ಮತ್ತು ನೆನಪು ರೂಪುಗೊಳ್ಳುವಲ್ಲೂ ಮುಖ್ಯಪಾತ್ರ ವಹಿಸುತ್ತದೆ. ಪುರುಷರು ಮತ್ತು ಮಹಿಳೆಯರ ಸಂವೇದನಾ ವ್ಯವಸ್ಥೆ ಚುರುಕಾಗಿರಲು ಈ ಚೋದಕ ಸೂಕ್ತ ಪ್ರಮಾಣದಲ್ಲಿರಬೇಕು' ಎಂದು ರಾಫೆಲ್ ಹೇಳಿದರು. ನರ ವಿಜ್ಞಾನಕ್ಕೆ ಸಂಬಂಧಿಸಿದ ನಿಯತಕಾಲಿಕದಲ್ಲಿ ಈ ಸಂಶೋಧನೆ ಕುರಿತು ಸವಿಸ್ತಾರವಾಗಿ ಲೇಖನ ಪ್ರಕಟಗೊಂಡಿತು.

2009: ಸ್ವಾತ್ ಕಣಿವೆಯಲ್ಲಿ ಪಾಕಿಸ್ಥಾನ ಸೇನಾಪಡೆಗಳು ತಾಲಿಬಾನ್ ಉಗ್ರರನ್ನು ಗುರಿಯಾಗಿಸಿ ನಡೆಸಿದ ವೈಮಾನಿಕ ದಾಳಿಗೆ ಕನಿಷ್ಠ 100 ಜನರು ಬಲಿಯಾದರು. ಇವರಲ್ಲಿ 60 ತಾಲಿಬಾನ್ ಉಗ್ರರು ಹಾಗೂ 35 ನಾಗರಿಕರು ಎಂದು ಸೇನಾ ಅಧಿಕಾರಿಗಳು ತಿಳಿಸಿದರು. ಪೂರ್ಣ ಪ್ರಮಾಣದ ಸೇನಾ ಕಾರ್ಯಾಚರಣೆ ನಡೆಯುವ ಸಾಧ್ಯತೆಯ ಹಿನ್ನೆಲೆಯಲ್ಲಿ ಸಾವಿರಾರು ನಾಗರಿಕರು ಸ್ವಾತ್ ಜಿಲ್ಲೆಯಿಂದ ಪಲಾಯನಗೈದರು.

2009: ಆಂಧ್ರಪ್ರದೇಶದ ಮುಖ್ಯಮಂತ್ರಿ ವೈ.ಎಸ್. ರಾಜಶೇಖರ ರೆಡ್ಡಿ ಅವರ ತಂದೆ ವೈ.ಎಸ್. ರಾಜರೆಡ್ಡಿ ಅವರ ಹತ್ಯೆಯ ಸಂಬಂಧ ರಾಜ್ಯದ ಹೈಕೋರ್ಟ್ ಹನ್ನೊಂದು ಮಂದಿಗೆ ವಿಧಿಸಿದ್ದ ಜೀವಾವಧಿ ಶಿಕ್ಷೆಯನ್ನು ಸುಪ್ರೀಂಕೋರ್ಟ್ ಎತ್ತಿಹಿಡಿಯಿತು. ಈ ಎಲ್ಲ ಆರೋಪಿಗಳು ಪ್ರಮುಖ ವಿರೋಧ ಪಕ್ಷ ತೆಲಗು ದೇಶಂ ಕಾರ್ಯಕರ್ತರು. 2006ರ ಸೆ.29ರಂದು ಹೈಕೋರ್ಟ್ ಇವರಿಗೆ ಶಿಕ್ಷೆ ವಿಧಿಸಿತ್ತು. ಪರ್ಲಾ ಸೋಮಶೇಖರ ರೆಡ್ಡಿ, ಪರ್ಲಾ ಶೇಷ ರೆಡ್ಡಿ, ಪರ್ಲಾ ರಾಮಾಂಜನೇಯ ರೆಡ್ಡಿ, ಪರ್ಲಾ ರಾಮಕೃಷ್ಣ ರೆಡ್ಡಿ, ಅಣ್ಣಾ ರೆಡ್ಡಿ ಸಾಂಬಶಿವ ರೆಡ್ಡಿ, ಅಣ್ಣಾ ರೆಡ್ಡಿ ಶ್ರೀನಿವಾಸ ರೆಡ್ಡಿ, ಅಣ್ಣಾ ರೆಡ್ಡಿ ದಾಸಿರೆಡ್ಡಿಗಾರಿ ಲಕ್ಷ್ಮಿರೆಡ್ಡಿ, ಪಲ್ಲೆ ವೆಂಕಟರಾಮಿ ರೆಡ್ಡಿ, ವಡ್ಡರಪು ಓಬಯ್ಯ, ರಾಗಿಪಿಂಡಿ ಸುಧಾಕರ ರೆಡ್ಡಿ ಮತ್ತು ಪೋರೆಡ್ಡಿ ವಿಶ್ವನಾಥ ರೆಡ್ಡಿ ಆರೋಪಿಗಳು. 1998ರ ಮೇ 23ರಲ್ಲಿ ತಮ್ಮ ತೋಟದ ಮನೆಯಿಂದ ಕಾರಿನಲ್ಲಿ ಪುಲಿವೆಂದುಲಕ್ಕೆ ಹಿಂತಿರುಗುತ್ತಿದ್ದಾಗ 75 ವರ್ಷದ ರಾಜ ರೆಡ್ಡಿ ಅವರನ್ನು ಬಾಂಬ್ ದಾಳಿಯಲ್ಲಿ ತವರೂರಾದ ಕಡಪ ಜಿಲ್ಲೆಯಲ್ಲಿ ಕೊಲ್ಲಲಾಗಿತ್ತು.

2009: 'ಪ್ರಜಾವಾಣಿ'ಯ ನಿವೃತ್ತ ಕಾರ್ಯನಿರ್ವಾಹಕ ಸಂಪಾದಕ ಜಿ.ಎನ್.ರಂಗನಾಥ್ ರಾವ್ ಅವರನ್ನು 2009ನೇ ಸಾಲಿನ ಖಾದ್ರಿ ಶಾಮಣ್ಣ ಸ್ಮಾರಕ ಪ್ರಶಸ್ತಿಗೆ ಆಯ್ಕೆ ಮಾಡಲಾಯಿತು.

2008: ದೀರ್ಘ ಕಾಲದಿಂದ ನೆನೆಗುದಿಗೆ ಬಿದ್ದಿದ್ದ ಮಹಿಳಾ ಮೀಸಲಾತಿ ಮಸೂದೆಯನ್ನು ನಾಟಕೀಯ ದೃಶ್ಯಗಳು ಮತ್ತು ಸಮಾಜವಾದಿ ಪಕ್ಷ ಸದಸ್ಯರ ಭಾರಿ ಪ್ರತಿಭಟನೆಯ ಮಧ್ಯೆ ರಾಜ್ಯಸಭೆಯಲ್ಲಿ ಮಂಡಿಸಲಾಯಿತು. ಮಸೂದೆಯು ಸಂಸತ್ತು ಹಾಗೂ ರಾಜ್ಯ ವಿಧಾನಮಂಡಲಗಳಲ್ಲಿ ಮಹಿಳೆಯರಿಗೆ ಶೇಕಡಾ 33 ಮೀಸಲಾತಿಯನ್ನು ಕಲ್ಪಿಸಿದೆ. ಸಚಿವ ಸಂಪುಟವು ಹಿಂದಿನ ದಿನ ರಾತ್ರಿ ಒಪ್ಪಿಗೆ ಸಂವಿಧಾನ (108ನೇ ತಿದ್ದುಪಡಿ) ಮಸೂದೆ 2008ಕ್ಕೆ ಒಪ್ಪಿಗೆ ನೀಡಿತ್ತು. ಮಹಿಳಾ ಮೀಸಲು ಮಸೂದೆ ಮಂಡಿಸಿದ್ದನ್ನು ಕಾಂಗ್ರೆಸ್, ಎಡಪಕ್ಷಗಳು ಹಾಗೂ ವಿರೋಧ ಪಕ್ಷವಾದ ಬಿಜೆಪಿ ಸ್ವಾಗತಿಸಿದವು. ಆದರೆ, ಸಮಾಜವಾದಿ ಪಕ್ಷ (ಎಸ್ಪಿ), ಬಹುಜನ ಸಮಾಜ ಪಕ್ಷ (ಬಿಎಸ್ಪಿ) ಹಾಗೂ ಯುಪಿಎ ಸರ್ಕಾರದ ಭಾಗವಾಗಿರುವ ಆರ್ಜೆಡಿ ಮಸೂದೆಯನ್ನು ಈಗಿರುವ ಸ್ವರೂಪದಲ್ಲೇ ಅಂಗೀಕರಿಸುವುದನ್ನು ವಿರೋಧಿಸಿದವು. ಶಾಸನ ಸಭೆಗಳಲ್ಲಿ ಮಹಿಳೆಯರಿಗೆ ಶೇ 33ರಷ್ಟು ಸ್ಥಾನ ಕಲ್ಪಿಸುವ ಮಹಿಳಾ ಮೀಸಲು ಮಸೂದೆಯ ಹಾದಿ ಬಹು ಏಳುಬೀಳಿನದ್ದು. 12 ವರ್ಷಗಳ ಹಿಂದೆಯೇ ಮಸೂದೆಯ ಕರಡು ಸಿದ್ಧವಾಗಿದ್ದರೂ, ಸಂಸತ್ತಿನಲ್ಲಿ ಮಸೂದೆ ಮಂಡಿಸಿ, ಅಂಗೀಕಾರ ಪಡೆಯಲು ಈ ಹಿಂದೆ ಮೂರು ಸರ್ಕಾರಗಳು ನಡೆಸಿದ್ದ ಯತ್ನಗಳು ವಿಫಲವಾಗಿದ್ದವು. ಮಸೂದೆ ಕುರಿತಾಗಿ ವಿವಿಧ ರಾಜಕೀಯ ಪಕ್ಷಗಳಲ್ಲಿ ಒಮ್ಮತ ಮೂಡಿಸಲು ಈ ಸರ್ಕಾರಗಳು ನಡೆಸಿದ ಕಸರತ್ತುಗಳು ವ್ಯರ್ಥವಾದವು. 12 ವರ್ಷಗಳ ಹಿಂದೆ 1996ರ ಸೆಪ್ಟೆಂಬರಿನಲ್ಲಿ ಎಚ್.ಡಿ. ದೇವೇಗೌಡ ಪ್ರಧಾನಿಯಾಗಿದ್ದಾಗ 81ನೇ ಸಂವಿಧಾನ ತಿದ್ದುಪಡಿ ಮಸೂದೆಯನ್ನು ಲೋಕಸಭೆಯಲ್ಲಿ ಮಂಡಿಸಲಾಗಿತ್ತು. ಆನಂತರ ಈ ಮಸೂದೆಯನ್ನು ಜಂಟಿ ಸಂಸದೀಯ ಸಮಿತಿ ಮುಂದೆ ಇಡಲಾಯಿತು. 11ನೇ ಲೋಕಸಭೆ ವಿಸರ್ಜನೆಯಾದ ಕಾರಣ ಮಸೂದೆ ರದ್ದಾಯಿತು. 1998ರಲ್ಲಿ ಅಟಲ್ ಬಿಹಾರಿ ವಾಜಪೇಯಿ ಪ್ರಧಾನಿಯಾಗಿದ್ದಾಗ ಮಹಿಳೆಯರಿಗೆ ಶೇ 33ರಷ್ಟು ಮೀಸಲು ಕಲ್ಪಿಸಲು 84ನೇ ಸಂವಿಧಾನ ತಿದ್ದುಪಡಿ ಮಸೂದೆಯನ್ನು ಲೋಕಸಭೆಯಲ್ಲಿ ಮಂಡಿಸಲಾಯಿತು. 12ನೇ ಲೋಕಸಭೆ ವಿಸರ್ಜನೆಯಾದುದುರಿಂದ ಆ ಬಾರಿಯೂ ಮಸೂದೆ ರದ್ದಾಯಿತು. 1999ರ ಡಿಸೆಂಬರ್ 23ರಂದು ಮತ್ತೊಮ್ಮೆ ಲೋಕಸಭೆಯಲ್ಲಿ ಮಸೂದೆ ಮಂಡಿಸಲಾಯಿತು. ಆದರೆ, ವಿವಿಧ ಪಕ್ಷಗಳ ನಡುವೆ ಒಮ್ಮತಾಭಿಪ್ರಾಯ ಮೂಡದೇ ಮಸೂದೆ ಅಂಗೀಕಾರವಾಗಲಿಲ್ಲ. ಆದರೆ, ಮಸೂದೆ ರದ್ದಾಗದಂತೆ ಇದೇ ಮೊದಲ ಬಾರಿ ರಾಜ್ಯಸಭೆಯಲ್ಲಿ ಮಂಡಿಸಲಾಯಿತು.

2008: ರಾಹುಲ್ ಗಾಂಧಿ ಸುತ್ತ `ದುಷ್ಟಕೂಟ' ಸುತ್ತುವರೆದಿದೆ ಎಂದು ಆಪಾದಿಸಿ ಹಿರಿಯ ಕಾಂಗ್ರೆಸ್ ನಾಯಕ ಅಖಿಲೇಶ್ ದಾಸ್ ಅವರು ಪಕ್ಷ ಹಾಗೂ ರಾಜ್ಯಸಭಾ ಸದಸ್ಯತ್ವಕ್ಕೆ ರಾಜೀನಾಮೆ ನೀಡಿದರು. ಇದರೊಂದಿಗೆ ಕಾಂಗ್ರೆಸ್ ಭಾರಿ ಹೊಡೆತವೊಂದನ್ನು ಅನುಭವಿಸಿತು. ಅಖಿಲೇಶ್ ದಾಸ್ ಅವರನ್ನು ಇತ್ತೀಚೆಗೆ ಕೇಂದ್ರ ಸಚಿವ ಸಂಪುಟದಿಂದ ಕೈಬಿಡಲಾಗಿತ್ತು. ರಾಜ್ಯಸಭೆಯಲ್ಲಿ ಉತ್ತರ ಪ್ರದೇಶವನ್ನು ಪ್ರತಿನಿಧಿಸುತ್ತಿದ್ದ ದಾಸ್ ಅವರು ರಾಜ್ಯಸಭೆಯಲ್ಲಿ ಸದನ ಸಮಾವೇಶಗೊಳ್ಳುತಿದ್ದಂತೆಯೇ ನಾಟಕೀಯವಾಗಿ ಸಭಾಪತಿ ಹಮೀದ್ ಅನ್ಸಾರಿ ಅವರತ್ತ ತೆರಳಿ ತಮ್ಮ ರಾಜೀನಾಮೆ ಪತ್ರವನ್ನು ಸಲ್ಲಿಸಿ, `ನನಗೆ ಕಾಂಗ್ರೆಸ್ ಪಕ್ಷದಲ್ಲಿ ವಿಶ್ವಾಸ ಇಲ್ಲ' ಎಂದು ಸದನದಲ್ಲಿ ಹೇಳುವ ಮೂಲಕ ಎಲ್ಲರನ್ನೂ ಚಕಿತಗೊಳಿಸಿದರು.

2008: ಬಾಂಬೆ ಹೈಕೋರ್ಟಿನಲ್ಲಿ ಈದಿನ ಅಪರೂಪದ ಅತಿಥಿ `ಕೋತಿ' ಪ್ರತ್ಯಕ್ಷವಾಗಿ ನ್ಯಾಯಮೂರ್ತಿಗಳಿಂದ ಹಿಡಿದು ಸಿಬ್ಬಂದಿವರೆಗೆ ಎಲ್ಲರೂ ಬೇಸ್ತು ಬಿದ್ದರು. ಮಧ್ಯಾಹ್ನ 1.20ರ ವೇಳೆಯಲ್ಲಿ ಈ ಕೋತಿ ನ್ಯಾಯಾಲಯದ ಅತ್ಯಂತ ಮೇಲಿನ ಮಹಡಿಯ ಛಾವಣಿಯ ಒಳಭಾಗದಲ್ಲಿ ತುತ್ತ ತುದಿಯಲ್ಲಿ ಆರಾಮವಾಗಿ ಆಸೀನವಾಗಿತ್ತು. ಈ ಮಹಡಿಯಲ್ಲಿ ನ್ಯಾಯಮೂರ್ತಿಗಳ ಕೊಠಡಿಗಳಿದ್ದವು. ಸಿಬ್ಬಂದಿಗೆ ಈ ಕೋತಿಯನ್ನು ಅಲ್ಲಿಂದ ಎಬ್ಬಿಸಿ ಓಡಿಸಲು ಸಾಧ್ಯವಾಗದೇ ಹೋದಾಗ, ಅಗ್ನಿಶಾಮಕ ದಳವನ್ನು ಸ್ಥಳಕ್ಕೆ ಕರೆಸಲಾಯಿತು. ಎರಡು ಗಂಟೆಗಳ ಸತತ ಯತ್ನದ ಬಳಿಕ ಮಂಗವನ್ನು ಹಿಡಿದು ದೂರಕ್ಕೆ ಒಯ್ಯಲು ಸಾಧ್ಯವಾಯಿತು. ಕೋತಿ ಹೇಗೆ ಕಟ್ಟಡದ ಒಳಭಾಗ ಪ್ರವೇಶಿಸಿತು ಎಂದು ಪತ್ತೆ ಹಚ್ಚಲು ಅಗ್ನಿಶಾಮಕ ಅಧಿಕಾರಿಗಳಿಗೂ ಸಾಧ್ಯವಾಗಲಿಲ್ಲ. ಹೈಕೋರ್ಟಿನ ಸುತ್ತ ದೊಡ್ಡ ಮರಗಳಿದ್ದರೂ ಯಾವುದೇ ಮರದ ಕೊಂಬೆ ಕಟ್ಟಡದ ಬಳಿಗೆ ಚಾಚಿಲ್ಲ, ಹಾಗಿರುವಾಗ ಕೋತಿ ಹೇಗೆ ಒಳಗೆ ಬಂತು ಎಂಬುದು ಯಕ್ಷ ಪ್ರಶ್ನೆಯಾಗಿಯೇ ಉಳಿಯಿತು.

2008: ಭಾರತೀಯ ಮಧ್ಯಮ ವರ್ಗದ ಅತ್ಯುತ್ತಮ ಆಹಾರ ಸೇವನೆಯೂ ಜಾಗತಿಕ ಆಹಾರ ಸಮಸ್ಯೆಯ ಕಾರಣಗಳಲ್ಲಿ ಒಂದು ಎಂದು ಜಾರ್ಜ್ ಬುಷ್ ನೀಡಿದ ಹೇಳಿಕೆಯ ಬೆನ್ನಲ್ಲೇ ವಿಶ್ವ ಆರೋಗ್ಯ ಸಂಸ್ಥೆ (ಡಬ್ಲ್ಯು ಎಚ್ ಒ) ಆಘಾತಕಾರಿ ಹೇಳಿಕೆಯೊಂದನ್ನು ನೀಡಿ, `ಜಾಗತಿಕ ತಾಪಮಾನ ಮತ್ತು ಹವಾಮಾನ ವೈಪರೀತ್ಯದಿಂದಾಗಿ ಮುಂದಿನ ದಿನಗಳಲ್ಲಿ ಭಾರತವು ಆಹಾರ ಸಮಸ್ಯೆ ಎದುರಿಸಬೇಕಾಗುತ್ತದೆ' ಎಂದು ಹೇಳಿತು. ಹವಾಮಾನ ವೈಪರೀತ್ಯವು ಆಹಾರ ಬೆಳೆಗಳ ಉತ್ಪಾದನೆಯ ಮೇಲೆ ತೀವ್ರವಾದ ಪ್ರತಿಕೂಲ ಪರಿಣಾಮ ಬೀರಲಿದೆ ಎಂದಿರುವ ಡಬ್ಲ್ಯು ಎಚ್ ಒ ವರದಿಯು `ಇದರಿಂದಾಗಿ ಭಾರತದಲ್ಲಿ ಪೌಷ್ಠಿಕಾಂಶ ಭರಿತ ಆಹಾರದ ಕೊರತೆ ಹೆಚ್ಚಾಗಲಿದೆ' ಎಂದು ಹೇಳಿತು. ಇದೇ ಕಾರಣದಿಂದ ಗಂಗಾನದಿಯಲ್ಲಿ ನೀರಿನ ಕೊರತೆಯೂ ಉಂಟಾಗಲಿದೆ. ಇದರಿಂದಾಗಿ ಗಂಗಾ ತಪ್ಪಲು ಪ್ರದೇಶದಲ್ಲಿ ತೇವಾಂಶ ಕಡಿಮೆಯಾಗಿ ಕೃಷಿಯ ಮೇಲೆ ಪ್ರತಿಕೂಲ ಪರಿಣಾಮ ಉಂಟಾಗಲಿದೆ ಎಂದೂ ಈ ವರದಿ ಹೇಳಿತು.

2008: ವಿನಾಶಕಾರಿ `ನರ್ಗಿಸ್' ಚಂಡಮಾರುತದಿಂದ ತತ್ತರಿಸಿದ ಮ್ಯಾನ್ಮಾರಿನಲ್ಲಿ (ಬರ್ಮಾ) ಈದಿನ ಸಂಜೆ ಹೊತ್ತಿಗೆ ಸಾವಿನ ಸಂಖ್ಯೆ 25 ಸಾವಿರ ಮೀರಿತು. ಸುನಾಮಿ ನಂತರ ದಕ್ಷಿಣ ಏಷ್ಯಾ ಭಾಗ ಕಂಡ ಅತ್ಯಂತ ಭೀಕರ ಪ್ರಕೃತಿ ವಿಕೋಪ ಇದು. ಸುನಾಮಿಯ ಸಂದರ್ಭದಲ್ಲೂ ವಿದೇಶಿ ಸಹಾಯಕ್ಕೆ ಕೈಚಾಚದ ದೇಶದ ಸೇನಾ ಆಡಳಿತ ಈ ಬಾರಿ ಅಂತಾರಾಷ್ಟ್ರೀಯ ಸಹಾಯ ಯಾಚಿಸಿತು. ಭಾರತ ಸಹಿತ ಹಲವು ದೇಶಗಳಿಂದ ಪರಿಹಾರ ಸಾಮಗ್ರಿಗಳು ಹರಿದುಬರತೊಡಗಿದವು. ಮ್ಯಾನ್ಮಾರಿನಲ್ಲಿ ಜನಸಂಖ್ಯೆ ಹೆಚ್ಚಿ ಕಾಂಡ್ಲಾ ಕಾಡುಗಳನ್ನು ಕಡಿದು ಅಲ್ಲಿ ಜನವಸತಿ ಪ್ರದೇಶ ಮತ್ತು ಕೃಷಿ ಭೂಮಿ ತಲೆ ಎತ್ತಿದ್ದು, ಚಂಡಮಾರುತದಿಂದ ಸಂರಕ್ಷಣೆ ನೀಡುವ ನೈಸರ್ಗಿಕ ಕಾಂಡ್ಲಾ ಕಾಡುಗಳ ನಾಶದ ಪರಿಣಾಮವಾಗಿ ದೊಡ್ಡ ಪ್ರಮಾಣದ ಹಾನಿ ಸಂಭವಿಸಿದೆ ಎಂದು 'ಆಸಿಯಾನ್' ಪ್ರಾದೇಶಿಕ ವಿಭಾಗವು ಸಿಂಗಪುರದಲ್ಲಿ ಅಭಿಪ್ರಾಯಪಟ್ಟಿತು.

2008: ಪೌರಾಣಿಕ ಮಹತ್ವದ ರಾಮಸೇತುವಿಗೆ ಸಂವಿಧಾನದ 25ನೇ ವಿಧಿ ಅಡಿ ರಕ್ಷಣೆ ದೊರಕುತ್ತದೆ ಎಂದು ಸಂವಿಧಾನ ತಜ್ಞ ಹಾಗೂ ಹಿರಿಯ ವಕೀಲ ಸೋಲಿ ಸೊರಾಬ್ಜಿ ಅವರು ಸುಪ್ರೀಂಕೋರ್ಟ್ ಮುಂದೆ ಹೇಳಿದರು. ಲಕ್ಷಾಂತರ ಜನರಿಂದ ಪೂಜಿಸಲ್ಪಡುವ ನಿರ್ಮಾಣಗಳಿಗೆ ಸಂವಿಧಾನದ 25ನೇ ವಿಧಿ ಅಡಿ ರಕ್ಷಣೆ ಕಲ್ಪಿಸಲಾಗಿದೆ. ರಾಮನಿಂದ ನಿರ್ಮಾಣವಾಗಿದೆ ಎಂದು ನಂಬಲಾದ ಈ ಸೇತುವೆಯನ್ನು ಪೂಜಿಸುವ ಸುದೀರ್ಘ ಪರಂಪರೆ ದೇಶದಲ್ಲಿ ಇದೆ ಎಂದು ಸೊರಾಬ್ಜಿ ಅವರು ಮುಖ್ಯ ನ್ಯಾಯಮೂರ್ತಿ ಕೆ.ಜಿ. ಬಾಲಕೃಷ್ಣನ್, ನ್ಯಾಯಮೂರ್ತಿ ಆರ್. ವಿ. ರವೀಂದ್ರನ್ ಹಾಗೂ ಜೆ. ಎಂ. ಪಂಚಾಲ್ ಅವರನ್ನು ಒಳಗೊಂಡ ನ್ಯಾಯಪೀಠದ ಮುಂದೆ ಪ್ರತಿಪಾದಿಸಿದರು. ರಾಮಸೇತುವಿಗೆ ಹಾನಿ ಮಾಡಿದಲ್ಲಿ ನಿರ್ದಿಷ್ಟ ಧರ್ಮದ ಜನರ ಭಾವನೆಗೆ ಸರ್ಕಾರ ಘಾಸಿ ಮಾಡಿದಂತೆ ಆಗುತ್ತದೆ. ಹಾಗಾಗಿ 2,087 ಕೋಟಿ ರೂಪಾಯಿ ವೆಚ್ಚದ ಸೇತುಸಮುದ್ರಂ ಯೋಜನೆಯನ್ನು ನಿಲ್ಲಿಸಲು ನ್ಯಾಯಾಲಯ ಸರ್ಕಾರಕ್ಕೆ ಸೂಚಿಸಬೇಕು ಎಂದು ಸೊರಾಬ್ಜಿ ಮನವಿ ಮಾಡಿದರು. ಜನತಾ ಪಕ್ಷದ ಅಧ್ಯಕ್ಷ ಸುಬ್ರಮಣಿಯನ್ ಸ್ವಾಮಿ ಸೇರಿದಂತೆ ರಾಮಸೇತು ಧ್ವಂಸಗೊಳಿಸುವುದನ್ನು ವಿರೋಧಿಸಿ ಅರ್ಜಿ ಸಲ್ಲಿಸಿದ್ದ ಕೆಲವರ ಪರವಾಗಿ ಸೊರಾಬ್ಜಿ ವಾದಿಸಿದರು.

2007: ಜಗತ್ತಿನ ಅತಿದೊಡ್ಡ ಉಕ್ಕಿನ ಹಕ್ಕಿ ಸೂಪರ್ ಜಂಬೋ ಎ-380 ನವದೆಹಲಿಯಲ್ಲಿ ಭಾರತದ ನೆಲವನ್ನು ಸ್ಪರ್ಶಿಸಿತು. ಕಿಂಗ್ ಫಿಶರ್ ಏರ್ ಲೈನ್ಸಿನ ಎರಡನೇ ವಾರ್ಷಿಕೋತ್ಸವ ಸಂದರ್ಭದಲ್ಲಿ ಈ ಜಂಬೋ ಭಾರತದ ನೆಲಕ್ಕೆ ಬಂದಿಳಿಯಿತು. 80 ಅಡಿ ಉದ್ದದ ಈ ವಿಮಾನದಲ್ಲಿ 850 ಜನಕ್ಕೆ ಕೂರಲು ಸೌಲಭ್ಯಗಳಿವೆ. ಆದರೆ ಮೂರು ವರ್ಗಗಳಲ್ಲಿ 550 ಪ್ರಯಾಣಿಕರಿಗೆ ಅನುಕೂಲವಾಗುವಂತೆ ಇದನ್ನು ವಿನ್ಯಾಸಗೊಳಿಸಲಾಗಿದೆ. ಇದು ನಿರಂತರವಾಗಿ 15,000 ಕಿ.ಮೀ. ದೂರವನ್ನು ಒಂದೇ ಸಲಕ್ಕೆ ಕ್ರಮಿಸಬಲ್ಲುದು. 300 ದಶಲಕ್ಷ ಡಾಲರ್ ಬೆಲೆಯ ಈ ಸೂಪರ್ ಜಂಬೋ ವಿಮಾನಕ್ಕೆ ರೋಲ್ಸ್ ರಾಯ್ಸ್ ಕಂಪೆನಿ ಎಂಜಿನ್ ಸಿದ್ಧ ಪಡಿಸಿದೆ. ಕಿಂಗ್ ಫಿಶರ್ ಸಂಸ್ಥೆಯು ಇಂತಹ ಐದು ವಿಮಾನಗಳಿಗೆ ಬೇಡಿಕೆ ಸಲ್ಲಿಸಿದೆ.

2007: ಭಾರತದ ಖಾಸಗಿ ಬ್ಯಾಂಕಿಂಗ್ ಕ್ಷೇತ್ರದ ಅತಿದೊಡ್ಡ ಬ್ಯಾಂಕ್ ಆಗಿರುವ ಐಸಿಐಸಿಐ ದುಬೈಯ ದೋಹಾದಲ್ಲಿ ತನ್ನ ಮೊತ್ತ ಮೊದಲ ಶಾಖೆಯನ್ನು ಆರಂಭಿಸಿತು.

2007: ಸೊಹ್ರಾಬ್ದುದೀನ್ ಷೇಕ್ ನನ್ನು ನಕಲಿ ಎನ್ಕೌಂಟರಿನಲ್ಲಿ ಕೊಂದ ಆರೋಪಕ್ಕೆ ಒಳಗಾಗಿ ಬಂಧಿತರಾದ 12 ದಿನಗಳ ಬಳಿಕ ಗುಜರಾತ್ ಸರ್ಕಾರವು ತನ್ನ ಇಬ್ಬರು ಹಿರಿಯ ಪೊಲೀಸ್ ಅಧಿಕಾರಿಗಳನ್ನು ಅಮಾನತು ಮಾಡಿತು.

2007: ಸಂಗೀತ ವಿದುಷಿ, ಸಮಾಜ ಸೇವಕಿ ಚೊಕ್ಕಮ್ಮ ಎನ್. ಎನ್. ಅಯ್ಯಂಗಾರ್ ಅವರು ಬೆಂಗಳೂರಿನಲ್ಲಿ ನಿಧನರಾದರು. ಪಿಟೀಲು ಚೌಡಯ್ಯ ಮತ್ತು ವಿದ್ವಾನ್ ದೇವೇಂದ್ರಪ್ಪ ಅವರ ಬಳಿ ಸಂಗೀತ ಅಭ್ಯಾಸ ಮಾಡಿದ್ದ ಚೊಕ್ಕಮ್ಮ ಅನೇಕ ವರ್ಷಗಳ ಕಾಲ ಆಕಾಶವಾಣಿಯಲ್ಲಿ ಕರ್ನಾಟಕ ಶಾಸ್ತ್ರೀಯ ಸಂಗೀತ ಕಾರ್ಯಕ್ರಮಗಳನ್ನು ನಡೆಸಿಕೊಟ್ಟಿದ್ದರು. ಚೊಕ್ಕಮ್ಮ ಅವರು ಹಿರಿಯ ಅಧಿಕಾರಿ ದಿವಂಗತ ಎನ್. ನರಸಿಂಹ ಅಯ್ಯಂಗಾರ್ ಅವರ ಪತ್ನಿ.

2007: ಬಲಪಂಥೀಯ ಧುರೀಣ ನಿಕೋಲಸ್ ಸರ್ಕೋಜಿ ಅವರು ಪ್ರಾನ್ಸಿನ ನೂತನ ಅಧ್ಯಕ್ಷರಾಗಿ ಆಯ್ಕೆಯಾದರು.
2007: ಹರಿದ್ವಾರದ ನ್ಯಾಯಾಲಯವೊಂದರ ಆದೇಶದ ಅನುಸಾರ ಮುಂಬೈ ಪೊಲೀಸರು ವಿವಾದಾತ್ಮಕ ಖ್ಯಾತ ಕಲಾವಿದ ಎಂ.ಎಫ್. ಹುಸೇನ್ ಅವರ ಆಸ್ತಿಪಾಸ್ತಿ ಮುಟ್ಟುಗೋಲು ಪ್ರಕ್ರಿಯೆ ಆರಂಭಿಸಿದರು. ತಮ್ಮ ಕಲಾಕೃತಿಯಲ್ಲಿ ಹಿಂದೂ ದೇವತೆಗಳನ್ನು ಅಶ್ಲೀಲವಾಗಿ ಚಿತ್ರಿಸಿದ್ದಾರೆ ಎಂದು ದೂರಿ ಸಲ್ಲಿಸಲಾಗಿದ್ದ ಮೊಕದ್ದಮೆಗೆ ಸಂಬಂಧಪಟ್ಟಂತೆ ಮೇಲಿಂದಮೇಲೆ ಸಮನ್ಸ್ ಕಳುಹಿಸಿದ್ದರೂ ಹುಸೇನ್ ಹಾಜರಾಗಿರಲಿಲ್ಲ. ಈ ಹಿನ್ನೆಲೆಯಲ್ಲಿ ಅವರ ಆಸ್ತಿ ಜಪ್ತಿಗೆ ನ್ಯಾಯಾಲಯ ಆದೇಶಿಸಿತ್ತು.

2007: ಚೀನಾದ ಉತ್ತರ ಭಾಗದಲ್ಲಿ ಗಣಿಗಾರಿಕೆ ನಡೆಸುತ್ತಿದ್ದಾಗ ಸ್ಫೋಟ ಸಂಭವಿಸಿ 20 ಮಂದಿ ಮೃತರಾದರು. ಜಗತ್ತಿನಲ್ಲೇ ಅತಿದೊಡ್ಡ ಗಣಿಗಾರಿಕೆ ಸಂಸ್ಥೆಯ ಪುಡೆಂಗ್ ಮೈನ್ ನಲ್ಲಿ ಈ ಸ್ಫೋಟ ಸಂಭವಿಸಿತು. ಈ ಸಂದರ್ಭದಲ್ಲಿ 125 ಕಾರ್ಮಿಕರಿದ್ದು, 95 ಮಂದಿ ಅಪಾಯದಿಂದ ಪಾರಾದರು.

2006: ಕನ್ನಡ ಚಲನಚಿತ್ರ ರಂಗಕ್ಕೆ ಮೊತ್ತ ಮೊದಲ ಸ್ವರ್ಣ ಕಮಲ ಪ್ರಶಸ್ತಿ ತಂದುಕೊಟ್ಟಿದ್ದ `ಸಂಸ್ಕಾರ' ಚಿತ್ರದ ನಿರ್ದೇಶಕ ಟಿ. ಪಟ್ಟಾಭಿರಾಮರೆಡ್ಡಿ (87) ಅವರು ದೀರ್ಘಕಾಲದ ಅನಾರೋಗ್ಯದಿಂದ ಈದಿನ ಬೆಳಗಿನ ಜಾವ 3.30ರ ವೇಳೆಗೆ ಮಲ್ಯ ಆಸ್ಪತೆಯಲ್ಲಿ ನಿಧನರಾದರು. ಆಂಧ್ರಪ್ರದೇಶದ ನೆಲ್ಲೂರಿನಲ್ಲಿ 1919ರ ಫೆಬ್ರುವರಿ 2ರಂದು ಜನಿಸಿದ ಪಟ್ಟಾಭಿ `ಸಂಸ್ಕಾರ'ದ ಮೂಲಕ ಕನ್ನಡ ಚಲನಚಿತ್ರ ರಂಗದಲ್ಲಿ ಸಮಾನಾಂತರ ಚಿತ್ರಗಳ ಹೊಸ ಯುಗಕ್ಕೆ ನಾಂದಿ ಹಾಡಿದವರು. ರಾಷ್ಟ್ರೀಯ, ಅಂತಾರಾಷ್ಟ್ರೀಯ ಮಟ್ಟದಲ್ಲಿ ಗೌರವಕ್ಕೆ ಪಾತ್ರರಾಗಿದ್ದ ಅವರಿಗೆ ರಾಜ್ಯಸರ್ಕಾರ 2005ರಲ್ಲಿ ಪ್ರತಿಷ್ಠಿತ ಪುಟ್ಟಣ್ಣ ಕಣಗಾಲ್ ಪ್ರಶಸ್ತಿ ನೀಡಿ ಗೌರವಿಸಿತ್ತು. ಯು.ಆರ್. ಅನಂತಮೂರ್ತಿ ಅವರ ಕಾದಂಬರಿ ಆಧಾರಿತ `ಸಂಸ್ಕಾರ' ಗಿರೀಶ ಕಾರ್ನಾಡ್, ಪಿ. ಲಂಕೇಶ್ ಮತ್ತಿತರರಿಗೆ ಚಿತ್ರರಂಗ ಪ್ರವೇಶಕ್ಕೆ ಅವಕಾಶ ಕಲ್ಪಿಸಿತ್ತು. ರೆಡ್ಡಿ ಅವರ ಪತ್ನಿ ಸ್ನೇಹಲತಾ ರೆಡ್ಡಿ ಅವರು `ಸಂಸ್ಕಾರ' ಚಿತ್ರದಲ್ಲಿ ಪ್ರಮುಖ ಭೂಮಿಕೆಯಲ್ಲಿದ್ದರು. `ಚಂಡಮಾರುತ', `ಶೃಂಗಾರಮಾಸ', `ದೇವರ ಕಾಡು' ಪಟ್ಟಾಭಿರಾಮರೆಡ್ಡಿ ನಿರ್ದೇಶಿಸಿದ ಇತರ ಕನ್ನಡ ಚಿತ್ರಗಳು.

2006: ಸಿಡಿಸಿದರೆ ದಾಳಿಕೋರನನ್ನು 40 ನಿಮಿಷ ಕಾಲ ನಿಶ್ಚೇತನಗೊಳಿಸುವ `ಒಲೆವೋ ಝ್ಯಾಪ್' ಎಂಬ ಸ್ವಯಂರಕ್ಷಣಾ ಸ್ಪ್ರೇಯನ್ನು ಸಂಸತ್ ಸದಸ್ಯ ಎಚ್.ಟಿ. ಸಾಂಗ್ಲಿಯಾನ ಬಿಡುಗಡೆ ಮಾಡಿದರು. ಕ್ಲಿಯರಾಕ್ ಎಂಟರ್ ಪ್ರೈಸಸ್ ಪ್ರೈವೇಟ್ ಲಿಮಿಟೆಡ್ ಎಂಬ ಸಂಸ್ಥೆ ಈ ಸಾಧನವನ್ನು ತಯಾರಿಸಿದೆ.

2006: ಹನ್ನೆರಡು ವರ್ಷಗಳ ಬಳಿಕ ಹಾಸನ- ಮಂಗಳೂರು ರೈಲ್ವೇ ಮಾರ್ಗವನ್ನು ಮಂಗಳೂರಿನಲ್ಲಿ ಉದ್ಘಾಟಿಸಲಾಯಿತು. ರೈಲ್ವೆ ಹಳಿಯನ್ನು ಮೀಟರ್ ಗೇಜ್ ನಿಂದ ನ್ಯಾರೋ ಗೇಜಿಗೆ ಪರಿವರ್ತಿಸುವ ಸಲುವಾಗಿ 1994ರಲ್ಲಿ ಈ ರೈಲುಮಾರ್ಗದ ಸೇವೆಯನ್ನು ನಿಲ್ಲಿಸಲಾಗಿತ್ತು.

2006: ಸಿಂಗಪುರದ ನಿರ್ಣಾಯಕ ಸಂಸದೀಯ ಚುನಾವಣೆಯಲ್ಲಿ ಆಳುವ ಪೀಪಲ್ಸ್ ಆಕ್ಷನ್ ಪಾರ್ಟಿ(ಪಿಎಪಿ) 82 ಸ್ಥಾನಗಳನ್ನು ಗೆದ್ದು ಭಾರಿ ಬಹುಮತ ಗಳಿಸಿತು. ವಿರೋಧ ಪಕ್ಷಕ್ಕೆ 2 ಸ್ಥಾನಗಳು ಮಾತ್ರ ಲಭಿಸಿದವು.

1947: ಕಲಾವಿದ ಮಹಾದೇವ ಪಾಂಚಾಲ್ ಜನನ.

1946: ಖ್ಯಾತ ಭಾರತೀಯ ವಕೀಲ ಭುಲಾಭಾಯಿ ದೇಸಾಯಿ (1877-1946) ತಮ್ಮ 68ನೇ ವಯಸ್ಸಿನಲ್ಲಿ ಮುಂಬೈಯಲ್ಲಿ ಮೃತರಾದರು. ನೇತಾಜಿ ಸುಭಾಶ್ ಚಂದ್ರ ಬೋಸ್ ಅವರ ಭಾರತ ರಾಷ್ಟ್ರೀಯ ಸೇನೆಯ (ಐ ಎನ್ ಎ) ಅಧಿಕಾರಿಗಳನ್ನು ಬ್ರಿಟಿಷ್ ಸರ್ಕಾರ 1945ರಲ್ಲಿ ವಿಚಾರಣೆಗೆ ಗುರಿಪಡಿಸಿದಾಗ ಐ ಎನ್ ಎ ಅಧಿಕಾರಿಗಳ ಪರವಾಗಿ ವಾದಿಸುವ ಮೂಲಕ ದೇಸಾಯಿ ವ್ಯಾಪಕ ಪ್ರಸಿದ್ಧಿ ಪಡೆದರು.

1935: ಕಲಾವಿದ ರಾಮಚಂದ್ರಮೂರ್ತಿ ನವರತ್ನ ಜನನ.

1928: ಖ್ಯಾತ ವ್ಯಂಗ್ಯಚಿತ್ರಕಾರ ಎಸ್.ಕೆ. ನಾಡಿಗ್ ಅವರು ಕೃಷ್ಣಸ್ವಾಮಿ ರಾವ್- ರಾಧಮ್ಮ ದಂಪತಿಯ ಮಗನಾಗಿ ಶಿವಮೊಗ್ಗದಲ್ಲಿ ಜನಿಸಿದರು.

1923: ಕಲಾವಿದ ಚೆನ್ನಬಸವಯ್ಯ ಗುಬ್ಬಿ ಜನನ.

1861: ಮೋತಿಲಾಲ್ ನೆಹರೂ (1861-1931) ಜನ್ಮದಿನ. ಭಾರತದ ರಾಷ್ಟ್ರೀಯ ನಾಯಕ, ಸ್ವರಾಜ್ ಪಕ್ಷದ ಸಹ ಸಂಸ್ಥಾಪಕರಾದ ಇವರು ಭಾರತದ ಪ್ರಥಮ ಪ್ರಧಾನಿ ಜವಾಹರಲಾಲ್ ನೆಹರೂ ಅವರ ತಂದೆ.

1856: ರಾಬರ್ಟ್ ಎಡ್ವಿನ್ ಪಿಯರೆ (1856-1920) ಹುಟ್ಟಿದ ದಿನ. ಅಮೆರಿಕದ ಸಂಶೋಧಕನಾದ ಈ ಭೂ ಶೋಧಕ 1909ರಲ್ಲಿ ಪ್ರಪ್ರಥಮ ಬಾರಿಗೆ ಉತ್ತರ ಧ್ರುವವನ್ನು ತಲುಪಿದ.

1542: ಫ್ರಾನ್ಸಿಸ್ ಝೇವಿಯರ್ ಮೊತ್ತ ಮೊದಲ ಕ್ರೈಸ್ತ ಪ್ರಚಾರಕನಾಗಿ ಗೋವಾಕ್ಕೆ ಆಗಮಿಸಿದ. ಆಧುನಿಕ ಕಾಲದ ಮಹಾನ್ ರೋಮನ್ ಕ್ಯಾಥೋಲಿಕ್ ಪ್ರಚಾರಕ ಎಂಬ ಹೆಗ್ಗಳಿಕೆ ಗಳಿಸಿರುವ ಈತ ಭಾರತ, ಮಲಯ ಹಾಗೂ ಜಪಾನಿನಲ್ಲಿ ಕ್ರೈಸಮತವನ್ನು ಪಸರಿಸಿದವರಲ್ಲಿ ಪ್ರಮುಖ ವ್ಯಕ್ತಿ.

Wednesday, May 5, 2010

ಇಂದಿನ ಇತಿಹಾಸ History Today ಮೇ 05

ಇಂದಿನ ಇತಿಹಾಸ

ಮೇ 05

ಹತ್ತು ಕೋಟಿ ರೂಪಾಯಿಗಳ ಚೆಕ್ ಅಮಾನ್ಯಗೊಂಡ ಪ್ರಕರಣಕ್ಕೆ ಸಂಬಂಧಿಸಿದಂತೆ ಚಿತ್ರನಟಿ ಶ್ರೀದೇವಿ ಮತ್ತು ಮಹಾರಾಷ್ಟ್ರ ಸರ್ಕಾರಕ್ಕೆ ಸುಪ್ರೀಂಕೋರ್ಟ್ ನೋಟಿಸ್ ಜಾರಿ ಮಾಡಿತು. ಮುಂಬೈಯ ಫೋಟೋ ಫಿಲ್ಮ್ ಸರಬರಾಜುದಾರ ಹಾಗೂ ಫೈನಾನ್ಸಿಯರ್ ಜಿ.ಜಿ. ಫೋಟೋ ಲಿಮಿಟೆಡ್, ಫೋಟೋ ಫಿಲ್ಮ್ ಇಂಡಸ್ಟೀಸ್ ಮತ್ತು ಫೋಟೋ ಇಂಡಸ್ಟ್ರೀಸ್ ಸಲ್ಲಿಸಿದ ಅರ್ಜಿ ಸಂಬಂಧವಾಗಿ ಪ್ರತಿಕ್ರಿಯೆ ನೀಡುವಂತೆ ಮುಖ್ಯ ನ್ಯಾಯಮೂರ್ತಿ ಕೆ.ಜಿ. ಬಾಲಕೃಷ್ಣನ್ ನೇತೃತ್ವದ ಪೀಠವು ಚಿತ್ರನಟಿ ಮತ್ತು ಮಹಾರಾಷ್ಟ್ರ ಸರ್ಕಾರಕ್ಕೆ ಸೂಚಿಸಿತು.

2009: ಪ್ರೀತಿಸಿ ವಿವಾಹವಾದ ಚಿತ್ರನಟರಾದ ಶ್ರುತಿ, ಮಹೇಂದರ್ ಅವರ ದಶಕದ ದಾಂಪತ್ಯದಲ್ಲಿ ಅಪಶ್ರುತಿ ಮೂಡಿತು. ಶ್ರುತಿ ಅವರು ವಿವಾಹ ವಿಚ್ಛೇದನಕ್ಕಾಗಿ ಕೋರ್ಟ್ ಮೆಟ್ಟಿಲೇರಿದರು. ಮೇ 21ರಂದು 11ನೇ ವರ್ಷದ ವಿವಾಹ ವಾರ್ಷಿಕೋತ್ಸವ ಆಚರಿಸಿಕೊಳ್ಳಬೇಕಾಗಿದ್ದ ಈ ದಂಪತಿಯ ವೈವಾಹಿಕ ಜೀವನ, ಕಾನೂನು ಸಮರಕ್ಕೆ ನಾಂದಿ ಹಾಡಿತು. ಶ್ರುತಿ ಅವರದ್ದು ಪ್ರೇಮ ವಿವಾಹ. 1998ರ ಮೇ 21ರಂದು ಒರಿಸ್ಸಾದ ಪುರಿಯ ಜಗನ್ನಾಥ ದೇವಾಲಯದಲ್ಲಿ ಇವರ ವಿವಾಹ ನೆರವೇರಿತ್ತು. 2002ರ ಜೂನ್ 6ರಂದು ಪುತ್ರಿ ಗೌರಿಗೆ ಶ್ರುತಿ ಜನ್ಮ ನೀಡಿದ್ದರು.

2009: ಪುರುಷರಿಗೆ ಯಾವುದೇ ಅಡ್ಡ ಪರಿಣಾಮವಿಲ್ಲದ ಸಂತಾನ ನಿರೋಧಕ ಚುಚ್ಚುಮದ್ದು ಕಂಡುಹಿಡಿಯುವಲ್ಲಿ ತಾವು ಯಶಸ್ವಿಯಾಗಿರುವುದಾಗಿ ಚೀನಾ ಸಂಶೋಧಕರು ಬೀಜಿಂಗ್‌ನಲ್ಲಿ ಪ್ರಕಟಿಸಿದರು. ಈ ಚುಚ್ಚುಮದ್ದು ಮಿದುಳಿನಲ್ಲಿ ಸೃಷ್ಟಿಯಾಗುವ ಎರಡು ಬಗೆಯ ನಿಯಂತ್ರಕ ರಾಸಾಯನಿಕಗಳ ಪ್ರಮಾಣ ಕುಗ್ಗಿಸಿ ವೀರ್ಯಾಣುಗಳ ಉತ್ಪಾದನೆಯನ್ನು ತಾತ್ಕಾಲಿಕವಾಗಿ ತಡೆಹಿಡಿಯುತ್ತದೆ ಎಂದು ಹೇಳಲಾಯಿತು. ಈ ಮುಂಚೆ ಪುರುಷರಿಗಾಗಿ ಇದ್ದ ಸಂತಾನ ನಿರೋಧಕಗಳು ಚಂಚಲ ಚಿತ್ತತೆ, ಲೈಂಗಿಕ ವಾಂಛೆಯ ಕ್ಷೀಣಿಸುವಿಕೆ ಸೇರಿದಂತೆ ಹಲವು ಅಡ್ಡ ಪರಿಣಾಮಗಳನ್ನು ಬೀರುತ್ತವೆ ಎಂಬ ದೂರುಗಳು ಕೇಳಿಬಂದಿದ್ದವು. ಟೆಸ್ಟೋಸ್ಟಿರಾನ್ ಆಧರಿಸಿದ ಈ ಚುಚ್ಚುಮದ್ದನ್ನು ಪುರುಷರಿಗೆ ನೀಡಿ ಪರೀಕ್ಷೆಗೆ ಒಳಪಡಿಸಿದಾಗ ಶೇ 99 ಯಶಸ್ಸು ಸಿಕ್ಕಿದೆ ಎಂದು ಸಂಶೋಧಕರು ಪ್ರತಿಪಾದಿಸಿದರು. 1000 ಆರೋಗ್ಯವಂತ ಪುರುಷರ ಮೇಲೆ ಎರಡು ವರ್ಷ ಕಾಲ ಚುಚ್ಚುಮದ್ದು ನೀಡಿ ಇದನ್ನು ಖಚಿತ ಮಾಡಿಕೊಳ್ಳಲಾಗಿದೆ ಎಂದು ರಾಷ್ಟ್ರೀಯ ಕುಟುಂಬ ನಿಯಂತ್ರಣ ಸಂಶೋಧನಾ ಕೇಂದ್ರದ ಮುಖ್ಯ ಸಂಶೋಧಕ ಡಾ.ಯಿ ಕುನ್ ಗು ತಿಳಿಸಿದರು.

2008: ಮ್ಯಾನ್ಮಾರನ್ನು ಬಾಧಿಸಿದ ಭೀಕರ `ನರ್ಗೀಸ್' ಚಂಡಮಾರುತದಿಂದ ಸತ್ತವರ ಸಂಖ್ಯೆ 10 ಸಾವಿರ ದಾಟಿದೆ ಎಂದು ಸರ್ಕಾರಿ ಸ್ವಾಮ್ಯದ ರೇಡಿಯೊ ವರದಿ ಮಾಡಿತು. ಇರವಡ್ಡಿ ನದಿಯ ತಟದಲ್ಲಿರುವ ಬೊಗಾಲೇ ಪಟ್ಟಣವೊಂದರಲ್ಲೇ 3 ಸಾವಿರಕ್ಕೂ ಅಧಿಕ ಮಂದಿ ಸತ್ತರು.

2008: ಲಾಟ್ವಿಯ ಕರಾವಳಿ ಬಳಿ ನೆಲಕಚ್ಚಿದ ಐಷಾರಾಮಿ ವಿಹಾರ ನೌಕೆಯನ್ನು ಮೇಲೆತ್ತುವ ಕಾರ್ಯ ವಿಫಲವಾಯಿತು. ಅದರಲ್ಲಿ ಸಿಕ್ಕಿಹಾಕಿಕೊಂಡ ಸುಮಾರು 650 ಪ್ರಯಾಣಿಕರನ್ನು ಸುರಕ್ಷಿತ ಸ್ಥಳಕ್ಕೆ ಸ್ಥಳಾಂತರಗೊಳಿಸಬೇಕಾಗಿದೆ ಎಂದು ಎಂದು ಸ್ಥಳೀಯ ಕರಾವಳಿ ರಕ್ಷಣಾ ಪಡೆ ತಿಳಿಸಿತು. ಬಾಲ್ಟಿಕ್ ಸಮುದ್ರದಿಂದ ರಿಗಾ ಬಂದರಿಗೆ ಹೊರಟಿದ್ದ ಬಹುತೇಕ ಜರ್ಮನ್ನರೇ ಇದ್ದ ಬಹಾಮಾ ನೋಂದಾಯಿತ `ಮೋನಾಲಿಸಾ' ಹೆಸರಿನ ಈ ನೌಕೆ ಇರ್ಬಿ ಕಡಲ್ಗಾಲುವೆಯಲ್ಲಿ ಸಿಕ್ಕಿಹಾಕಿಕೊಂಡಿತು.

2008: 1993ರ ಮುಂಬೈ ಸರಣಿ ಸ್ಫೋಟ ಪ್ರಕರಣದ ವಿಶೇಷ ಟಾಡಾ ನ್ಯಾಯಾಧೀಶರಾಗಿ ಕಾರ್ಯ ನಿರ್ವಹಿಸಿದ್ದ ಪ್ರಮೋದ್ ಕೋಡೆ ಅವರನ್ನು ನಾಸಿಕ್ ಜಿಲ್ಲಾ ನ್ಯಾಯಾಲಯಕ್ಕೆ ನ್ಯಾಯಾಧೀಶರನ್ನಾಗಿ ವರ್ಗಾವಣೆ ಮಾಡಲಾಯಿತು. ಬಾಂಬೆ ಹೈಕೋರ್ಟಿನ ಅಧಿಕೃತ ವೆಬ್ ಸೈಟಿನಲ್ಲಿ ಪ್ರಕಟವಾದ ಅಧಿಸೂಚನೆಯಲ್ಲಿ ಈ ವಿಷಯ ಬೆಳಕಿಗೆ ಬಂತು. ಕೋಡೆ ಅವರ ಸ್ಥಾನಕ್ಕೆ ನಾಗಪುರ ಜಿಲ್ಲಾ ನ್ಯಾಯಾಧೀಶ ಟಿ.ವಿ. ನಾಲ್ವಡೆ ಅವರನ್ನು ನೇಮಕ ಮಾಡಲಾಯಿತು. ಕೋಡೆ ಅವರು ದಾವೂದ್ ಇಬ್ರಾಹಿಂ ಶಾಮೀಲಾದ ಮುಂಬೈ ಸರಣಿ ಬಾಂಬ್ ಸ್ಫೋಟ ಪ್ರಕರಣವನ್ನು ಒಟ್ಟು 13 ವರ್ಷಗಳ ಕಾಲ ವಿಚಾರಣೆ ನಡೆಸಿ 100 ಜನರಿಗೆ ಶಿಕ್ಷೆ ನೀಡಿದ್ದರು. ಅದರಲ್ಲಿ 12 ಮಂದಿ ಗಲ್ಲು ಶಿಕ್ಷೆ ಮತ್ತು 20 ಮಂದಿಗೆ ಜೀವಾವಧಿ ಶಿಕ್ಷೆಯನ್ನು ಅವರು ಘೋಷಿಸಿದ್ದರು. ಬಾಲಿವುಡ್ ನಟ ಸಂಜಯ್ ದತ್ ಅವರನ್ನು ಕೋಡೆ ಅವರೇ ವಿಚಾರಣೆ ನಡೆಸಿ, ಶಸ್ತ್ರಾಸ್ತ್ರ ಕಾಯ್ದೆ ಅಡಿಯಲ್ಲಿ ಏಳು ವರ್ಷಗಳ ಸೆರೆಮನೆ ವಾಸ ಶಿಕ್ಷೆಯನ್ನು ವಿಧಿಸಿದ್ದರು.

2008: ಸಾರ್ವಜನಿಕರ ಅನುಕೂಲದ ದೃಷ್ಟಿಯಿಂದ ಎಚ್ ಎ ಎಲ್ ವಿಮಾನ ನಿಲ್ದಾಣದಲ್ಲಿ ನಾಗರಿಕ ವಿಮಾನಯಾನವನ್ನು ಮುಂದುವರೆಸಿಕೊಂಡು ಹೋಗಬೇಕೆಂಬ ಬೇಡಿಕೆಯನ್ನು ಪರಿಶೀಲಿಸುವಂತೆ ಸುಪ್ರೀಂಕೋರ್ಟ್ ಕೇಂದ್ರ ಸರ್ಕಾರಕ್ಕೆ ನಿರ್ದೇಶನ ನೀಡಿತು. ಬೆಂಗಳೂರಿನ ಸ್ವಯಂಸೇವಾ ಸಂಸ್ಥೆಯೊಂದು ಸಲ್ಲಿಸಿದ ಸಾರ್ವಜನಿಕ ಹಿತಾಸಕ್ತಿ ಅರ್ಜಿಯನ್ನು ವಿಚಾರಣೆಗೆ ಎತ್ತಿಕೊಂಡ ಮುಖ್ಯ ನ್ಯಾಯಮೂರ್ತಿ ಕೆ.ಜಿ.ಬಾಲಕೃಷ್ಣನ್ ಮತ್ತು ನ್ಯಾಯಮೂರ್ತಿ ಎಂ.ಕೆ. ಶರ್ಮಾ ` ಈ ವಿಷಯದಲ್ಲಿ ನಾವೂ ಕಳಕಳಿ ಹೊಂದಿದ್ದೇವೆ' ಎಂದರು.

2008: ರಾಷ್ಟ್ರಕವಿ ಡಾ. ಜಿ.ಎಸ್ .ಶಿವರುದ್ರಪ್ಪ ಅವರಿಗೆ ಬಸವ ವೇದಿಕೆಯು ಪ್ರಸಕ್ತ ಸಾಲಿನ `ಬಸವಶ್ರೀ' ಪ್ರಶಸ್ತಿ ನೀಡಿ ಗೌರವಿಸಲು ನಿರ್ಧರಿಸಿತು. ಶರಣ ಸಾಹಿತ್ಯದಲ್ಲಿ ಅಪಾರವಾದ ಕೃಷಿ ಮಾಡಿದ ಗುಲ್ಬರ್ಗ ವಿಶ್ವವಿದ್ಯಾಲಯದ ಪ್ರಾಧ್ಯಾಪಕಿ ಜಯಶ್ರೀ ದಂಡೆಯವರನ್ನು 2008ನೇ ಸಾಲಿನ `ವಚನ ಸಾಹಿತ್ಯ ಶ್ರೀ' ಪ್ರಶಸ್ತಿಗೆ ಆಯ್ಕೆ ಮಾಡಲಾಯಿತು ಎಂದು ಎಂದು ಆಯ್ಕೆ ಸಮಿತಿಯ ಕಾರ್ಯಾಧ್ಯಕ್ಷ ಡಾ. ಸಿ. ಸೋಮಶೇಖರ್ ತಿಳಿಸಿದರು.

2008: ಕಿರಿಯ ಓಟಗಾರ ಬುಧಿಯಾ ಸಿಂಗ್ ಗೆ ತರಬೇತಿ ನೀಡಿದ್ದ ಬಿರಾಂಚಿ ದಾಸ್ ಅವರನ್ನು ಕೊಲೆ ಮಾಡಿದ್ದ ಆರೋಪಿ ಸಂದೀಪ್ ಆಚಾರ್ಯ ಅಲಿಯಾಸ್ ರಾಜ ಆಚಾರ್ಯನನ್ನು ಗೋವಾದಲ್ಲಿ ಬಂಧಿಸಲಾಯಿತು.

2008: ಹೆಣ್ಣಾಗಿ ಹುಟ್ಟಿತು ಎಂಬ ಕಾರಣಕ್ಕಾಗಿ ಕೇವಲ 5 ದಿನದ ಹಸುಗೂಸನ್ನು ಸ್ವಂತ ತಂದೆ ತಾಯಿಗಳೇ 60 ಅಡಿ ಆಳದ ಬಾವಿಗೆ ಎಸೆದ ಘೋರ ಘಟನೆ ಸೇಲಂ ಬಳಿ ಜರುಗಿದ್ದು ಬೆಳಕಿಗೆ ಬಂತು. ಆಶ್ಚರ್ಯವೆಂದರೆ 60 ಅಡಿ ಬಾವಿಗೆ ಎಸೆದರೂ ಆ ಎಳೆಯ ಕಂದಮ್ಮ ಬದುಕಿತು. ಮೇ 4ರಂದು ಕೊಂಡಲಪಟ್ಟಿ ಹಳ್ಳಿಯಲ್ಲಿನ 60 ಅಡಿ ಆಳದ ಬಾವಿಯೊಳಗಿಂದ ಮಗುವಿನ ಅಳುವಿನ ದನಿ ಕೇಳಿದ ಸಾರ್ವಜನಿಕರು ಕೂಡಲೇ ಅಗ್ನಿಶಾಮಕ ದಳದವರಿಗೆ ಸುದ್ದಿ ಮುಟ್ಟಿಸಿದರು. ತತ್ ಕ್ಷಣವೇ ಆಗಮಿಸಿದ ಅಗ್ನಿಶಾಮಕ ಸಿಬ್ಬಂದಿ 40 ಅಡಿ ಆಳದ ಪೊದೆಯೊಂದರಲ್ಲಿ ಸಿಕ್ಕಿಬಿದ್ದು, ಮೈತುಂಬ ತರಚು ಗಾಯಗಳನ್ನು ಹೊಂದಿದ್ದ ಆ ಮಗುವನ್ನು ಸುರಕ್ಷಿತವಾಗಿ ಮೇಲಕ್ಕೆ ತಂದರು. ನಂತರ ಮಗುವಿಗೆ ಮೋಹನ್ ಕುಮಾರಮಂಗಲಂ ಸರ್ಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಿ ಅನಾಥಾಶ್ರಮವೊಂದಕ್ಕೆ ಸೇರಿಸಲಾಯಿತು.

2008: ಕಲಾಪಕ್ಕೆ ಅಡ್ಡಿಯುಂಟುಮಾಡಿದ 32 ಲೋಕಸಭಾ ಸದಸ್ಯರ ದುರ್ವರ್ತನೆಯನ್ನು ಹಕ್ಕು ಚ್ಯುತಿ ಸಮಿತಿ ಮುಂದಿಡುವ ಅಪರೂಪದ ನಿರ್ಧಾರ ಕೈಗೊಂಡಿದ್ದ ಲೋಕಸಭಾ ಅಧ್ಯಕ್ಷ ಸೋಮನಾಥ ಚಟರ್ಜಿ ತಮ್ಮ ನಿರ್ಧಾರ ವಾಪಸು ಪಡೆದರು. ಇದರಿಂದಾಗಿ ಐದು ದಿನಗಳಿಂದ ಉದ್ಭವಿಸಿದ್ದ ಬಿಕ್ಕಟ್ಟು ಕೊನೆಗೊಂಡಿತು. ಅಗತ್ಯ ವಸ್ತುಗಳ ಬೆಲೆ ಏರಿಕೆ ವಿರೋಧಿಸಿ ಏಪ್ರಿಲ್ 24ರಂದು ಬಿಜೆಪಿ ನೇತೃತ್ವದ ಎನ್ ಡಿ ಎ ಸದಸ್ಯರು ಲೋಕಸಭೆ ಕಲಾಪಕ್ಕೆ ಅಡ್ಡಿ ಮಾಡಿದ್ದರು. ಸದನ ಸುಗಮವಾಗಿ ಸಾಗುವಂತೆ ಸೋಮನಾಥ ಚಟರ್ಜಿ ಪದೇಪದೇ ಮಾಡಿದ ಮನವಿ ವ್ಯರ್ಥವಾಗಿತ್ತು. ಇದರಿಂದ ಕೆರಳಿದ ಚಟರ್ಜಿ ಸದಸ್ಯರ ದುರ್ವರ್ತನೆಯನ್ನು ಹಕ್ಕು ಚ್ಯುತಿ ಸಮಿತಿಗೆ ಒಪ್ಪಿಸಲು ನಿರ್ಧರಿಸಿದ್ದರು.

2008: ಜೂನ್ ಒಂದರಿಂದ ಬೆಂಗಳೂರು-ಮಂಗಳೂರು ರಾಷ್ಟ್ರೀಯ ಹೆದ್ದಾರಿ 48ರ ಶಿರಾಡಿ ಘಾಟಿಯಲ್ಲಿ ವಾಹನಗಳ ಸಂಚಾರಕ್ಕೆ ಅನುಮತಿ ನೀಡಲಾಗುವುದು ಎಂದು ಲೋಕೋಪಯೋಗಿ ಇಲಾಖೆಯ ಪ್ರಧಾನ ಕಾರ್ಯದರ್ಶಿ ಸುಧೀರ ಕೃಷ್ಣ ಸಕಲೇಶಪುರದಲ್ಲಿ ಪ್ರಕಟಿಸಿದರು. ಹೆದ್ದಾರಿಯ ಕಿ.ಮೀ 226 ರಿಂದ 264 ರ ವರೆಗಿನ 38ಕಿ.ಮೀ. ರಸ್ತೆ ಅಭಿವೃದ್ಧಿ ಕಾಮಗಾರಿ ಶೇ. 90 ಭಾಗ ಪೂರ್ಣಗೊಂಡಿದೆ. ಈ ಕಾಮಗಾರಿಯನ್ನು ಮೂರು ಭಾಗಗಳಾಗಿ ವಿಂಗಡಣೆ ಮಾಡಿ, ಮೂರು ಮಂದಿ ಗುತ್ತಿಗೆದಾರರಿಗೆ, ಗುತ್ತಿಗೆ ಆದಾರದ ಮೇಲೆ ನೀಡಲಾಗಿತ್ತು ಎಂದು ಅವರು ನುಡಿದರು.

2008: ವಿಶೇಷ ಒಲಿಂಪಿಕ್ ಜ್ಯೋತಿಯ ಎವರೆಸ್ಟ್ ಯಾತ್ರೆ ಈದಿನವೂ ನಡೆಯಲಿಲ್ಲ. ಹಿಮಪಾತ ಉಂಟಾಗಿದ್ದ ಕಾರಣ ಜ್ಯೋತಿಯ ಯಾತ್ರೆಗೆ ಅಡ್ಡಿಯುಂಟಾಗಿತ್ತು.

2008: ಹತ್ತು ಕೋಟಿ ರೂಪಾಯಿಗಳ ಚೆಕ್ ಅಮಾನ್ಯಗೊಂಡ ಪ್ರಕರಣಕ್ಕೆ ಸಂಬಂಧಿಸಿದಂತೆ ಚಿತ್ರನಟಿ ಶ್ರೀದೇವಿ ಮತ್ತು ಮಹಾರಾಷ್ಟ್ರ ಸರ್ಕಾರಕ್ಕೆ ಸುಪ್ರೀಂಕೋರ್ಟ್ ನೋಟಿಸ್ ಜಾರಿ ಮಾಡಿತು. ಮುಂಬೈಯ ಫೋಟೋ ಫಿಲ್ಮ್ ಸರಬರಾಜುದಾರ ಹಾಗೂ ಫೈನಾನ್ಸಿಯರ್ ಜಿ.ಜಿ. ಫೋಟೋ ಲಿಮಿಟೆಡ್, ಫೋಟೋ ಫಿಲ್ಮ್ ಇಂಡಸ್ಟೀಸ್ ಮತ್ತು ಫೋಟೋ ಇಂಡಸ್ಟ್ರೀಸ್ ಸಲ್ಲಿಸಿದ ಅರ್ಜಿ ಸಂಬಂಧವಾಗಿ ಪ್ರತಿಕ್ರಿಯೆ ನೀಡುವಂತೆ ಮುಖ್ಯ ನ್ಯಾಯಮೂರ್ತಿ ಕೆ.ಜಿ. ಬಾಲಕೃಷ್ಣನ್ ನೇತೃತ್ವದ ಪೀಠವು ಚಿತ್ರನಟಿ ಮತ್ತು ಮಹಾರಾಷ್ಟ್ರ ಸರ್ಕಾರಕ್ಕೆ ಸೂಚಿಸಿತು. ಪ್ರಕರಣಕ್ಕೆ ಸಂಬಂಧಿಸಿದಂತೆ ಚಿತ್ರನಟಿ ಶ್ರೀದೇವಿ ವಿರುದ್ಧ ಕ್ರಿಮಿನಲ್ ಖಟ್ಲೆ ಹೂಡದಂತೆ ಬಾಂಬೆ ಹೈಕೋರ್ಟ್ ನೀಡಿದ ಆದೇಶವನ್ನು ಅರ್ಜಿದಾರರು ಸುಪ್ರೀಂಕೋರ್ಟಿನಲ್ಲಿ ಪ್ರಶ್ನಿಸಿದ್ದರು. ಚಿತ್ರನಟಿ ಶ್ರೀದೇವಿ ಅವರು ನೀಡಿದ ವಿಜಯಾಬ್ಯಾಂಕಿನ ಸಾಂತಾಕ್ರೂಜ್ ಶಾಖೆಯ ಮೂರು ಚೆಕ್ಕುಗಳು ಖಾತೆಯಲ್ಲಿ ಸಾಕಷ್ಟು ಹಣವಿರದ ಕಾರಣ ಅಮಾನ್ಯಗೊಂಡಿವೆ ಎಂದು ಮೂರು ಸಂಸ್ಥೆಗಳ ಮಾಲೀಕರಾದ ಮಧು ಗುಪ್ತ ಮತ್ತು ಸುಶೀಲ್ ಗುಪ್ತ ತಮ್ಮ ಅರ್ಜಿಯಲ್ಲಿ ಆಪಾದಿಸಿದ್ದರು.

2008: ದಲಾಯಿ ಲಾಮಾ ಪ್ರತಿನಿಧಿಗಳು ಮತ್ತು ಚೀನಾ ನಡುವಣ ಬಹು ನಿರೀಕ್ಷಿತ ಮಾತುಕತೆ ಈದಿನ ಆರಂಭವಾದ ಎರಡು ಗಂಟೆಗಳ ಬಳಿಕ ಹಠಾತ್ತನೆ ಅಂತ್ಯಗೊಂಡಿತು. ಟಿಬೆಟಿನಲ್ಲಿ ಕಳೆದ ಮಾರ್ಚ್ ತಿಂಗಳಲ್ಲಿ ಅಶಾಂತಿ ಭುಗಿಲೆದ್ದ ಬಳಿಕ ಉಭಯ ಕಡೆಗಳು ಇದೇ ಮೊತ್ತ ಮೊದಲ ಬಾರಿಗೆ ಸಭೆ ಸೇರಿದ್ದವು.

2007: ತಮಿಳುನಾಡಿನ ರಣಜಿ ಆಟಗಾರ ಶ್ರೀಧರನ್ ಶರತ್ ಅವರು ಚೆನ್ನೈಯಲ್ಲಿ ಪ್ರಥಮ ದರ್ಜೆ ಕ್ರಿಕೆಟ್ಟಿಗೆ ವಿದಾಯ ಘೋಷಿಸಿದರು. ಕಳೆದ 15 ವರ್ಷಗಳಿಂದ ಅವರು ದೇಸೀ ಕ್ರಿಕೆಟ್ಟಿನಲ್ಲಿ ತಮಿಳುನಾಡು ತಂಡವನ್ನು ಪ್ರತಿನಿಧಿಸಿದ್ದರು.

2007: ಕರ್ನಾಟಕದ ಮಾಜಿ ಶಾಸಕ, ಹಿರಿಯ ವಕೀಲ ಕೆ.ಪಿ. ನಾಡಗೌಡ ಮುಧೋಳದಲ್ಲಿ ನಿಧನರಾದರು. ಮುಧೋಳ ಕ್ಷೇತ್ರದಲ್ಲಿ
1965-1976ರ ನಡುವಣ ಅವಧಿಯಲ್ಲಿ ಅವರು ಎರಡು ಸಲ ಚುನಾಯಿತರಾಗಿದ್ದರು. ಅವರು ಕಡಿದಾಳ್ ಮಂಜಪ್ಪ ಮತ್ತು ದೇವರಾಜ ಅರಸು ಅವರ ನಿಕಟವರ್ತಿಗಳಾಗಿದ್ದರು.

2007: ನಾಸಿಕ್ ಸಮೀಪದ ಸಿನ್ಹಾರಿನಲ್ಲಿ ನಡುರಾತ್ರಿ ವೇಳೆಯಲ್ಲಿ ಸಂಭವಿಸಿದ ರಾಸಾಯನಿಕ ಕಾರ್ಖಾನೆ ಸ್ಫೋಟದಲ್ಲಿ 20 ಮಂದಿ ಮೃತರಾಗಿ ಇತರ 10 ಮಂದಿ ಗಾಯಗೊಂಡರು.

2007: ದೇಶದಾದ್ಯಂತ ಚರ್ಚೆಗೆ ಕಾರಣವಾಗಿದ್ದ ಮುಂಬೈ ಅಪಘಾತ ಪ್ರಕರಣದಲ್ಲಿ ಅಲಿಸ್ಟರ್ ಪೆರೇರಾ ಎಂಬ ಯುವ ಉದ್ಯಮಿಗೆ ಆರು ತಿಂಗಳ ಲಘು ಸಜೆ ವಿಧಿಸಿ ತೀರ್ಪು ನೀಡಿದ್ದ ನ್ಯಾಯಾಧೀಶ ಅಜಿತ್ ಮಿಶ್ರ ಅವರು ತಮ್ಮ ಹುದ್ದೆಗೆ ರಾಜೀನಾಮೆ ಸಲ್ಲಿಸಿದರು. ಮುಂಬೈಯ ಬಾಂದ್ರಾದ ಫುಟ್ ಪಾತಿನಲ್ಲಿ ಮಲಗಿದ್ದವರ ಮೇಲೆ ಕಾರು ಹತ್ತಿಸಿದ ಅಲಿಸ್ಟರ್ 7 ಜನರ ಸಾವಿಗೆ ಕಾರಣನಾಗಿದ್ದ.

2007: ಸರಳ ಸಾಮೂಹಿಕ ವಿವಾಹ ಜನಪ್ರಿಯಗೊಳಿಸಲು ರಾಜ್ಯ ಸರ್ಕಾರವು ಮುಂಗಡಪತ್ರದಲ್ಲಿ ಪ್ರಕಟಿಸಿದ `ಆದರ್ಶ ವಿವಾಹ' ಯೋಜನೆಯ ಅಧಿಕೃತ ಆದೇಶ ಹೊರಬಿದ್ದಿತು.

2007: ಝೀ ಟಿವಿ ಚಾನೆಲ್ಲಿನ ಸಾಹಸಗಳ ಸರಮಾಲೆ `ಶಹಬ್ಬಾಸ್ ಇಂಡಿಯಾ' ಮಾಲಿಕೆಯ ಬುಕ್ ಆಫ್ ರೆಕಾರ್ಡಿನಲ್ಲಿ ಕುಂದಾಪುರದ ಬಾಲ ಈಜುಪಟು ಹರ್ಷಿತ್ ಎನ್ ಖಾರ್ವಿ (12) ದಾಖಲಾದನು. ಈತ ಗಂಗೊಳ್ಳಿ ಲೈಟ್ಹೌಸ್ ಸಮುದ್ರ ಕಿನಾರೆಯಿಂದ ಪಂಚಗಂಗಾವಳಿ ನದಿಯವರೆಗಿನ ಸುಮಾರು 25 ಕಿ.ಮೀ. ದೂರವನ್ನು ಸಂಕೋಲೆ ತೊಟ್ಟು ಈಜುವ ಮೂಲಕ ದಾಖಲೆ ನಿರ್ಮಿಸಿದ.

2007: ದಕ್ಷಿಣ ಕ್ಯಾಮರೂನಿನಲ್ಲಿ ಕೀನ್ಯಾ ಏರ್ ವೇಸ್ ವಿಮಾನ ಅಪಘಾತಕ್ಕೆ ಈಡಾಗಿ 15 ಭಾರತೀಯರ ಸಹಿತ 115 ಜನ ಮೃತರಾದರು. ಈ ವಿಮಾನ ಹೊರಟ ಕೆಲವೇ ಕ್ಷಣಗಳಲ್ಲಿ ಕಣ್ಮರೆಯಾಗಿ ನಂತರ ಅಪಘಾತಕ್ಕೆ ಈಡಾಗಿರುವುದು ಪತ್ತೆಯಾಯಿತು.

2006: ಭಾರತೀಯ ಚಿತ್ರರಂಗದ ಸಾರ್ವಕಾಲಿಕ ಶ್ರೇಷ್ಠ ಸಂಗೀತ ನಿರ್ದೇಶಕರಲ್ಲಿ ಒಬ್ಬರಾದ, ಭಾರತೀಯ ಚಿತ್ರ ಸಂಗೀತಕ್ಕೆ ಹೊಸ ಆಯಾಮ ನೀಡಿದ್ದ ಹಿರಿಯ ಸಂಗೀತ ನಿರ್ದೇಶಕ ನೌಷಾದ್ ಅಲಿ (86) ಅವರು ಮುಂಬೈಯ ನಾನಾವತಿ ಆಸ್ಪತ್ರೆಯಲ್ಲಿ ಬೆಳಗ್ಗೆ ಹೃದಯ ಸ್ಥಂಭನದಿಂದ ಅಸು ನೀಗಿದರು.

2006: ಖ್ಯಾತ ಕೊಳಲುವಾದಕ ವಿದ್ವಾನ್ ಎಂ.ಆರ್. ದೊರೆಸ್ವಾಮಿ (84) ಅವರು ಬೆಂಗಳೂರಿನ ತಮ್ಮ ನಿವಾಸದಲ್ಲಿ ನಿಧನರಾದರು. ಚಿಕ್ಕಮಗಳೂರಿನವರಾದ ದೊರೆಸ್ವಾಮಿ 10ನೇ ವಯಸ್ಸಿನಲ್ಲೇ ಕೊಳಲುವಾದನ ಆರಂಭಿಸಿದ್ದರು.

2006: ಕಲ್ಪನಾ ಚಾವ್ಲಾ ಅವರ ಬಳಿಕ ಇದೀಗ ಭಾರತೀಯ ಮೂಲದ ಎರಡನೇ ಮಹಿಳಾ ಗಗನಯಾನಿಯಾಗಿ ಅಮೆರಿಕ ಬಾಹ್ಯಾಕಾಶ ಯೋಜನಾ ಇಲಾಖೆಯು ಸುನೀತಾ ವಿಲಿಯಮ್ಸ್ ಅವರನ್ನು ಆಯ್ಕೆ ಮಾಡಿತು. ಮೂಲತಃ ಸುನೀತಾ ಪಾಂಡ್ಯ ಆಗಿದ್ದ ಈಕೆ ಪ್ರಸ್ತುತ ಸುನೀತಾ ವಿಲಿಯಮ್ಸ್ ಎಂದೇ ಖ್ಯಾತಳಾಗಿದ್ದು, ಸೆಪ್ಟೆಂಬರ್ ತಿಂಗಳಲ್ಲಿ ಗಗನಕ್ಕೆ ಏರಿ ಅಂತಾರಾಷ್ಟ್ರೀಯ ಬಾಹ್ಯಾಕಾಶ ನಿಲ್ದಾಣದಿಂದ ಒಬ್ಬ ಗಗನಯಾನಿಯನ್ನು ಭೂಮಿಗೆ ಕಳುಹಿಸಿ, ತಾವು ಆರು ತಿಂಗಳ ಕಾಲ ಅಲ್ಲೇ ಉಳಿಯಲಿದ್ದಾರೆ ಎಂದು ಪ್ರಕಟಿಸಲಾಯಿತು.

1992: ಮಹಿಳೆಯರಿಗೆ ಮೀಸಲಾದ ಸಬರ್ಬನ್ ರೈಲ್ವೇಸೇವೆಯನ್ನು ಜಗತ್ತಿನಲ್ಲೇ ಮೊತ್ತ ಮೊದಲ ಬಾರಿಗೆ ಮುಂಬೈಯ ಪಶ್ಚಿಮ ರೈಲ್ವೇ ವಿಭಾಗವು ಆರಂಭಿಸಿತು.

1965: ಕಲಾವಿದ ಗುರುದತ್ ಎಂ.ಎಸ್. ಜನನ.

1957: ಮೈಸೂರು ಸಂಸ್ಥಾನದ ಗೇಣಿಗೆ ಸಂಬಂಧಿಸಿದ ನಾಲ್ಕು ಮಸೂದೆಗಳಿಗೆ ರಾಷ್ಟ್ರಪತಿಗಳು ತಮ್ಮ ಅಂಗೀಕಾರವನ್ನಿತ್ತರು. ಏಕರೀತಿಯ ಶಾಸನ ಜಾರಿಗೆ ಬರುವ ತನಕ, ಮೈಸೂರು ರಾಜ್ಯದ ವಿವಿಧ ಭಾಗಗಳಲ್ಲಿ ಜಾರಿಯಲ್ಲಿರುವ ವಿವಿಧ ಗೇಣಿ ಶಾಸನಗಳನ್ನು ಯಥಾಸ್ಥಿತಿಯಲ್ಲಿ ಇಡುವ ಬಗ್ಗೆ ಮೊದಲೇ ತರಲಾಗಿದ್ದ ತುರ್ತು ಶಾಸನಕ್ಕೆ ಬದಲು ಈ ಮಸೂದೆಗಳನ್ನು ಮಂಡಿಸಲಾಗಿತ್ತು.

1956: ಕೊಣನೂರಿನ ಸಂಗೀತ ಹಾಗೂ ಹರಿಕಥಾ ವಿದ್ವಾಂಸರ ಮನೆತನದಿಂದ ಬಂದ ಕರ್ನಾಟಕ ಸಂಗೀತ ಕಲಾವಿದೆ ಗೀತಾ ಬಾಲಸುಬ್ರಹ್ಮಣ್ಯಂ ಅವರು ಸಂಗೀತ ವಿದ್ವಾಂಸ ರಾಮಕೃಷ್ಣ ಶಾಸ್ತ್ರಿ- ಲೇಖಕಿ ವಾಗೀಶ್ವರಿ ಶಾಸ್ತ್ರಿ ದಂಪತಿಯ ಮಗನಾಗಿ ಹಾಸನ ಜಿಲ್ಲೆಯ ಅರಸೀಕೆರೆಯಲ್ಲಿ ಜನಿಸಿದರು.

1948: ಕಲಾವಿದ ಶಿವರಾಜ ಗವಾಯಿ ಜನನ.

1945: ಕಲಾವಿದೆ ಧನಲಕ್ಷ್ಮಿ ಎಸ್. ಜನನ.

1938: ಕಲಾವಿದ ಕೃಷ್ಣರಾವ್ ಇನಾಂದಾರ್ ಜನನ.

1916: ಗಿಯಾನಿ ಜೈಲ್ ಸಿಂಗ್ (1916-94) ಜನ್ಮದಿನ. 1982-1987 ರವರೆಗೆ ಇವರು ಭಾರತದ ರಾಷ್ಟ್ರಪತಿಯಾಗಿದ್ದರು.

1821: ನೆಪೋಲಿಯನ್ ಬೋನಪಾರ್ಟೆ ಸೈಂಟ್ ಹೆಲೆನಾ ದ್ವೀಪದಲ್ಲಿ ಅಸುನೀಗಿದ. ವಿಷಸೇವನೆಯಿಂದ ಆತ ಮೃತನಾದ ಎಂದು ನಂಬಲಾಗಿದೆ. ಆದರೂ ಆತನ ಸಾವಿಗೆ ಕಾರಣ ಏನೆಂಬುದು ಇಂದಿನವರೆಗೂ ಚರ್ಚೆಯ ವಿಷಯವಾಗಿಯೇ ಉಳಿದಿದೆ.
1818: ಜರ್ಮನ್ ತತ್ವಜ್ಞಾನಿ, ಕಮ್ಯೂನಿಸಂ ಸ್ಥಾಪಕ ಕಾರ್ಲ್ ಮಾರ್ಕ್ಸ್ ಜರ್ಮನಿಯ ಟ್ರೈಯರಿನಲ್ಲಿ ಹುಟ್ಟಿದ.

1760: ಅರ್ಲ್ ಫೆರ್ರೆರ್ಸ್ ನಿಗೆ ಮರಣದಂಡನೆ ವಿಧಿಸಲು `ಹ್ಯಾಂಗ್ ಮನ್ಸ್ ಡ್ರಾಪ್'ನ್ನು ಮೊತ್ತ ಮೊದಲ ಬಾರಿಗೆ ಲಂಡನ್ನಿನ ಟೈಬರ್ನಿನಲ್ಲಿ ಬಳಸಲಾಯಿತು.

1766: ಭಾರತದಲ್ಲಿ ಬ್ರಿಟಿಷರೊಡನೆ ನಡೆದ 7 ವರ್ಷಗಳ ಯುದ್ಧದಲ್ಲಿ ಶರಣಾಗತನಾದುದಕ್ಕಾಗಿ ಆಗ ಭಾರತದಲ್ಲಿ ಫ್ರೆಂಚ್ ಪಡೆಗಳ ನಾಯಕನಾಗಿದ್ದ ಜನರಲ್ ಕಾಮ್ಟೆ ಡೆ ಲಾಲ್ಲಿಗೆ ಪ್ಯಾರಿಸ್ಸಿನಲ್ಲಿ ಮರಣದಂಡನೆ ವಿಧಿಸಲಾಯಿತು

Tuesday, May 4, 2010

ಇಂದಿನ ಇತಿಹಾಸ History Today ಮೇ 04


ಇಂದಿನ ಇತಿಹಾಸ

ಮೇ 04

ಸೇನಾ ಮುಖ್ಯಸ್ಥನನ್ನು ವಜಾ ಮಾಡುವ ಮಾವೋವಾದಿ ಸರ್ಕಾರದ ನಿರ್ಧಾರವನ್ನು ಅಧ್ಯಕ್ಷರು ತಿರಸ್ಕರಿಸಿದ ಹಿನ್ನೆಲೆಯಲ್ಲಿ ನೇಪಾಳದ ಪ್ರಧಾನಿ ಪ್ರಚಂಡ ತಮ್ಮ ಹುದ್ದೆಗೆ ರಾಜೀನಾಮೆ ಸಲ್ಲಿಸಿದರು. ಇದರೊಂದಿಗೆ ನೇಪಾಳದಲ್ಲಿ ರಾಜಕೀಯ ಬಿಕ್ಕಟ್ಟು ಇನ್ನಷ್ಟು ಉಲ್ಬಣಿಸಿತು. ಅಧ್ಯಕ್ಷ ರಾಮ್ ಬರನ್ ಯಾದವ್ ಅವರು ಸೇನಾ ದಂಡ ನಾಯಕ ರುಕ್ಮಾಂಗದ ಕಟ್ವಾಲ್ ಅವರಿಗೆ ಹುದ್ದೆಯಲ್ಲಿ ಮುಂದುವರೆಯುವಂತೆ ನಿರ್ದೇಶಿಸಿದ ಬೆನ್ನಲ್ಲೇ ಪ್ರಚಂಡ ಅವರು ತಮ್ಮ ರಾಜೀನಾಮೆಯನ್ನು ಪ್ರಕಟಿಸಿದರು.

2009: ಸೇನಾ ಮುಖ್ಯಸ್ಥನನ್ನು ವಜಾ ಮಾಡುವ ಮಾವೋವಾದಿ ಸರ್ಕಾರದ ನಿರ್ಧಾರವನ್ನು ಅಧ್ಯಕ್ಷರು ತಿರಸ್ಕರಿಸಿದ ಹಿನ್ನೆಲೆಯಲ್ಲಿ ನೇಪಾಳದ ಪ್ರಧಾನಿ ಪ್ರಚಂಡ ತಮ್ಮ ಹುದ್ದೆಗೆ ರಾಜೀನಾಮೆ ಸಲ್ಲಿಸಿದರು. ಇದರೊಂದಿಗೆ ನೇಪಾಳದಲ್ಲಿ ರಾಜಕೀಯ ಬಿಕ್ಕಟ್ಟು ಇನ್ನಷ್ಟು ಉಲ್ಬಣಿಸಿತು. ಅಧ್ಯಕ್ಷ ರಾಮ್ ಬರನ್ ಯಾದವ್ ಅವರು ಸೇನಾ ದಂಡ ನಾಯಕ ರುಕ್ಮಾಂಗದ ಕಟ್ವಾಲ್ ಅವರಿಗೆ ಹುದ್ದೆಯಲ್ಲಿ ಮುಂದುವರೆಯುವಂತೆ ನಿರ್ದೇಶಿಸಿದ ಬೆನ್ನಲ್ಲೇ ಪ್ರಚಂಡ ಅವರು ತಮ್ಮ ರಾಜೀನಾಮೆಯನ್ನು ಪ್ರಕಟಿಸಿದರು.

2009: ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾದ ಡೆಪ್ಯುಟಿ ಗವರ್ನರ್ ರಾಕೇಶ್ ಮೋಹನ್ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿದರು. ಅಮೆರಿಕದ ಸ್ಟಾನ್‌ಫೋರ್ಡ್ ವಿಶ್ವ ವಿದ್ಯಾಲಯದಲ್ಲಿರುವ ಅಂತಾರಾಷ್ಟ್ರೀಯ ಅಭಿವೃದ್ಧಿ ಕೇಂದ್ರದಲ್ಲಿ ಸಲಹಾ ಪ್ರೊಫೆಸರ್ ಆಗಿ ಅವರು ನಿಯೋಜಿತರಾದ ಹಿನ್ನೆಲೆಯಲ್ಲಿ ಈ ಹುದ್ದೆಗೆ ರಾಜೀನಾಮೆ ನೀಡಿದರು ಎಂದು ಆರ್‌ಬಿ ಐ ತಿಳಿಸಿತು.

2009: ಭಾರತ ರಾಷ್ಟ್ರೀಯ ವಿಮಾನಯಾನ ಕಂಪೆನಿ ಲಿಮಿಟೆಡ್ (ಎನ್‌ಎಸಿಐಎಲ್- ಏರ್‌ಇಂಡಿಯಾ) ಅಧ್ಯಕ್ಷ ಹಾಗೂ ವ್ಯವಸ್ಥಾಪಕ ನಿರ್ದೇಶಕರಾಗಿ ಅರವಿಂದ್ ಜಾಧವ್ ಅಧಿಕಾರ ವಹಿಸಿಕೊಂಡರು. ಜಾಧವ್ ಅವರು ಕರ್ನಾಟಕ ಸರ್ಕಾರದ ಮೂಲಸೌಕರ್ಯ ಅಭಿವೃದ್ಧಿ ಇಲಾಖೆಯ ಪ್ರಧಾನ ಕಾರ್ಯದರ್ಶಿ ಆಗಿದ್ದರು. 1978ರಲ್ಲಿ ಭಾರತೀಯ ಆಡಳಿತ ಸೇವೆಗೆ (ಐಎಎಸ್) ಸೇರಿದ ಜಾಧವ್ ಅವರು ಕರ್ನಾಟಕ ಕೇಡರ್‌ಗೆ ಸೇರಿದವರು.

2008: ಪಾನಮತ್ತನಾಗಿದ್ದ ಕಾರು ಚಾಲಕನೊಬ್ಬ ವಾಹನವನ್ನು ಅಡ್ಡಾದಿಡ್ಡಿ ಚಲಾಯಿಸಿ ಪಾದಚಾರಿಗಳಿಗೆ ಡಿಕ್ಕಿ ಹೊಡೆದ ಪರಿಣಾಮ ಓರ್ವ ವ್ಯಕ್ತಿ ಮೃತನಾಗಿ ಇತರ ಎಂಟು ಮಂದಿ ತೀವ್ರವಾಗಿ ಗಾಯಗೊಂಡ ಘಟನೆ ಬೆಂಗಳೂರಿನ ಶಾಂಪುರ ಮುಖ್ಯ ರಸ್ತೆಯ ಅಂಬೇಡ್ಕರ್ ವೈದ್ಯಕೀಯ ಕಾಲೇಜಿನ ಬಳಿ ನಡೆಯಿತು. ಘಟನೆಯಿಂದ ಆಕ್ರೋಶಗೊಂಡ ಸಾರ್ವಜನಿಕರು ಚಾಲಕ ಅಕ್ಬರ್ ಖಾನನನ್ನು ಹಿಗ್ಗಾಮುಗ್ಗಾ ಥಳಿಸಿ ಕಾರನ್ನು ಜಖಂಗೊಳಿಸಿದರು.

2008: ಒರಿಸ್ಸಾದಲ್ಲಿ ಬಿಸಿಲ ಧಗೆ ಅಸಹನೀಯವಾಗಿ, ಉಷ್ಣಾಂಶ 42 ಡಿಗ್ರಿ ಸೆಲ್ಸಿಯಸ್ಸಿಗೆ ಏರಿತು. ಬಿಸಿಲ ಝಳಕ್ಕೆ ಇಬ್ಬರು ಸಾವನ್ನಪ್ಪಿದರು. ಇದರೊಂದಿಗೆ ಬಿಸಿಲ ತಾಪಕ್ಕೆ ಬಲಿಯಾದವರ ಸಂಖ್ಯೆ 15ಕ್ಕೆ ಏರಿತು.

2008: ಹಿಮಾಲಯದ ತಪ್ಪಲಿನ `ತಂಪು' ಊರೆಂದೇ ಹೆಸರಾಗಿರುವ ಶಿಮ್ಲಾದಲ್ಲಿ ಉಷ್ಣಾಂಶ 28.7 ಸೆಲ್ಸಿಯಸ್ಸಿಗೆ ಏರಿತು. ಈ ಋತುವಿನಲ್ಲಿ ಇಲ್ಲಿ ಕಂಡು ಬಂದ ಅತ್ಯಧಿಕ ಉಷ್ಣಾಂಶ ಇದು.

2008: ಬೆಂಗಳೂರಿನ ಎಚ್ ಎ ಎಲ್ ಪೊಲೀಸ್ ಠಾಣೆ ವ್ಯಾಪ್ತಿಯ ಮುನ್ನೆಕೊಳಲಿನ ಮಂಜುನಾಥ ಲೇಔಟ್ ಸಮೀಪ ಅಕ್ರಮವಾಗಿ ಗೋಮಾಂಸ ಮಾರಾಟ ಮಾಡಲಾಗುತ್ತಿದೆ ಎಂದು ಆರೋಪಿಸಿ ಆರೆಸ್ಸೆಸ್ ಕಾರ್ಯಕರ್ತರು ಮಾಂಸದ ಮಳಿಗೆಯೊಂದಕ್ಕೆ ಮುತ್ತಿಗೆ ಹಾಕಿದ ಘಟನೆ ನಡೆಯಿತು. ನಂತರ ಸ್ಥಳಕ್ಕೆ ಬಂದ ಪೊಲೀಸರು ಪರವಾನಗಿ ಇಲ್ಲದೆ ಮಾಂಸದ ಅಂಗಡಿ ನಡೆಸುತ್ತಿದ್ದ ವೈಟ್ ಫೀಲ್ಡಿನ ನಾಲ್ವರನ್ನು ಬಂಧಿಸಿದರು.

2008: ಬ್ರಿಟನ್ನಿನಲ್ಲಿ ರೆಸ್ಟೋರೆಂಟ್ ಒಂದರ ಮಾಲೀಕರಾದ ಭಾರತೀಯ ಮೂಲದ ರಾಜ್ ರಾಣಾ ಅವರಿಗೆ ಲಂಡನ್ನಿನ ಬಕಿಂಗ್ ಹ್ಯಾಮ್ ಅರಮನೆಯಲ್ಲಿ ನಡೆಯುವ ಸತ್ಕಾರಕೂಟಕ್ಕೆ ಇಂಗ್ಲೆಂಡಿನ ರಾಣಿ ಆಹ್ವಾನಿಸಿದರು. `ಇತಿಹಾಸ್' ಎಂಬ ರೆಸ್ಟೋರೆಂಟಿನ ಮಾಲೀಕ ರಾಣಾ ಅವರು ಸಮಕಾಲೀನ ಬ್ರಿಟನ್-ಭಾರತೀಯ ರೆಸ್ಟೋರೆಂಟ್ ಉದ್ಯಮಕ್ಕೆ 3.2 ಬಿಲಿಯನ್ ಪೌಂಡ್ ಹಣವನ್ನು ದೇಣಿಗೆ ನೀಡಿದ್ದರು. ಅವರ `ಇತಿಹಾಸ್' ರೆಸ್ಟೋರೆಂಟ್ ಬ್ರಿಟನ್ನಿನ ಉತ್ತಮ ರೆಸ್ಟೋರೆಂಟಿಗಾಗಿ ನೀಡಲಾಗುವ 2007-08ರ ಸಾಲಿನ `ಕೊಬ್ರಾ ಗುಡ್ ಕರ್ರಿ ಪ್ರಶಸ್ತಿ'ಯನ್ನೂ ಗೆದ್ದುಕೊಂಡಿತ್ತು. ಈ ಅವಿಸ್ಮರಣೀಯ ಘಟನೆಯನ್ನು ನೆನಪಿಟ್ಟುಕೊಳ್ಳಲು ರಾಣಾ ಒಡೆತನದ `ಇತಿಹಾಸ್' ಅಂದು `ಕುಂಭ್ ಮಲಾಯಿ' ಎಂಬ ವಿಶೇಷ ಖಾದ್ಯ ತಯಾರಿಸುವುದಾಗಿ ಪ್ರಕಟಿಸಿತು.

2008: ಪೂರ್ವ ಜರ್ಮನಿಯ ಅತಿ ಭಯಾನಕ ಸ್ಟಾಸಿ ಪೊಲೀಸ್ ಗುಪ್ತ ದಳದ ಬಗ್ಗೆ ಸಂಪೂರ್ಣ ಮಾಹಿತಿ ಕಲೆ ಹಾಕುವುದು ನೋವಿನ ವಿಚಾರವಾದರೂ 9 ಮಂದಿ ತಜ್ಞರು ಎರಡು ದಶಕಗಳ ಕಾಲ ಅತ್ಯಂತ ಶ್ರಮಪಟ್ಟು ಲಕ್ಷಾಂತರ ಕಾಗದದ ತುಂಡುಗಳನ್ನು ಜೋಡಿಸಿ ಮಾಹಿತಿ ಸಂಗ್ರಹಿಸಿದರು. 1989ರಲ್ಲಿ ಬರ್ಲಿನ್ ಗೋಡೆ ಉರುಳಿತು. ನಂತರವೂ ಕಮ್ಯೂನಿಸ್ಟ್ ಸರ್ಕಾರ ನಡೆಸಿದ ದೌರ್ಜನ್ಯ ಜನರ ಎದೆ ನಡುಗಿಸುತ್ತಿತ್ತು. ಈ ಹಿನ್ನೆಲೆಯಲ್ಲಿ ಸ್ಟಾಸಿ ಪೊಲೀಸ್ ಗುಪ್ತ ದಳದ ಸಿಬ್ಬಂದಿ ಗೌಪ್ಯ ಕಡತಗಳನ್ನು ನಾಶಪಡಿಸಲು ಆರಂಭಿಸಿದರು. ಆದರೆ ನಾಗರಿಕರ ಸಮಿತಿ ಸದಸ್ಯರು ಈ ಪೊಲೀಸ್ ಕಚೇರಿಗೆ ನುಗ್ಗಿ ಎಲ್ಲ ಕಡತಗಳು ನಾಶವಾಗದಂತೆ ನೋಡಿಕೊಂಡರು. ಹರಿದು ಚೂರು ಮಾಡಲಾಗಿದ್ದ ಕಾಗದಗಳ ತುಣುಕಿನ 15,500 ಚೀಲಗಳನ್ನು ವಶಪಡಿಸಿಕೊಂಡಿದ್ದರು. 1995ರಿಂದ ಬವೇರಿಯಾದ ನ್ಯೂರೆಂಬರ್ಗಿನಲ್ಲಿ ತಜ್ಞರು ಹರಿದ ಕಾಗದದ ಚೂರುಗಳನ್ನು ಸರಿಯಾಗಿ ಜೋಡಿಸಿ ಮಾಹಿತಿ ಸಂಗ್ರಹಿಸುವ ಕಾರ್ಯದಲ್ಲಿ ಮಗ್ನರಾದರು.

2007: ಮಂಡ್ಯ ಜಿಲ್ಲಾ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕ ಬಸವರಾಜ ಹೂಗಾರ ಅವರ `ತತ್ರಾಣಿ' ಕವನ ಸಂಕಲನಕ್ಕೆ 2007ರ ಸಾಲಿನ ಕಡೆಂಗೋಡ್ಲು ಸ್ಮಾರಕ ಪ್ರಶಸ್ತಿ ಲಭಿಸಿತು. ಉಡುಪಿಯ ರಾಷ್ಟ್ರಕವಿ ಗೋವಿಂದ ಪೈ ಸಂಶೋಧನಾ ಕೇಂದ್ರವು ಪ್ರತಿವರ್ಷ ಒಬ್ಬ ಕವಿಗೆ ಕಡೆಂಗೋಡ್ಲು ಶಂಕರ ಭಟ್ಟರ ಹೆಸರಿನಲ್ಲಿ ಈ ಪ್ರಶಸ್ತಿಯನ್ನು ನೀಡುತ್ತದೆ.

2007: ಅಮೆರಿಕದ `ಟೈಮ್' ನಿಯತಕಾಲಿಕವು ಪ್ರಕಟಿಸಿದ ವಿಶ್ವದ 100 ಅತ್ಯಂತ ಪ್ರಭಾವಿ ವ್ಯಕ್ತಿಗಳ ಸಾಲಿಗೆ ಭಾರತೀಯರಾದ ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿ, ಉಕ್ಕು ಉದ್ಯಮಿ ಲಕ್ಷ್ಮಿ ಮಿತ್ತಲ್ ಹಾಗೂ ಪೆಪ್ಸಿ ಕಂಪೆನಿ ಮುಖ್ಯ ಕಾರ್ಯ ನಿರ್ವಾಹಕ ಅಧಿಕಾರಿ ಇಂದ್ರಾ ನೂಯಿ ಸೇರ್ಪಡೆಯಾದರು. ಪಟ್ಟಿಯಲ್ಲಿ ಅಲ್ ಖೈದಾ ನಾಯಕ ಬಿನ್ ಲಾಡೆನ್ ಹೆಸರಿದ್ದು, ಅಮೆರಿಕ ಅಧ್ಯಕ್ಷ ಜಾರ್ಜ್ ಬುಷ್ ಅವರನ್ನು ಕಳೆದ ನಾಲ್ಕು ವರ್ಷಗಳಲ್ಲಿ ಇದೇ ಮೊದಲ ಬಾರಿಗೆ ಕೈಬಿಡಲಾಯಿತು.

2007: ಗೋಕಾಕ ನಗರ ಹೊರವಲಯದ ರಿದ್ದಿ-ಸಿದ್ದಿ ಕಾರ್ಖಾನೆಯಲ್ಲಿ ರಾತ್ರಿ ಬಾಯ್ಲರ್ ಸ್ಫೋಟಿಸಿದ ಪರಿಣಾಮವಾಗಿ ಇಬ್ಬರು ಮೃತರಾಗಿ 35ಕ್ಕೂ ಹೆಚ್ಚು ಮಂದಿ ಗಾಯಗೊಂಡರು.

2007: ಕಾವೇರಿ ನ್ಯಾಯಮಂಡಳಿಯ ಅಂತಿಮ ತೀರ್ಪು ವಿರೋಧಿಸಿ 89 ದಿನಗಳಿಂದ ನಡೆಸುತ್ತಿದ್ದ ಚಳವಳಿಯನ್ನು ಸ್ಥಗಿತಗೊಳಿಸಲು ಮಂಡ್ಯ ಜಿಲ್ಲೆ ರೈತರು ತೀರ್ಮಾನಿಸಿದರು. ಕಾವೇರಿ ನ್ಯಾಯಮಂಡಳಿಯ ಅಂತಿಮ ತೀರ್ಪನ್ನು ವಿರೋಧಿಸಿ ಕರ್ನಾಟಕದ ವಿವಿಧ ಕನ್ನಡಪರ ಸಂಘಟನೆಗಳು ನವದೆಹಲಿಯ ಜಂತರ್- ಮಂತರ್ ಎದುರು ಬೃಹತ್ ಪ್ರತಿಭಟನಾ ಪ್ರದರ್ಶನ ನಡೆಸಿದವು.

2007: ಕರ್ನಾಟಕದ ರಾಜಧಾನಿ ಬೆಂಗಳೂರಿನ ಹೊರವಲಯ ಅಭಿವೃದ್ಧಿ ಸಲುವಾಗಿ ಬೆಂಗಳೂರು ಮಹಾನಗರಾಭಿವೃದ್ಧಿ ಪ್ರಾಧಿಕಾರವು `ಮಾಸ್ಟರ್ ಪ್ಲಾನ್' ಸಿದ್ಧಪಡಿಸಿತು.

2007: ಭೂಮಿಯ ತಾಪ ಏರಿಕೆ ಹಾಗೂ ಹವಾಮಾನ ಬದಲಾವಣೆಯನ್ನು ನಿಯಂತ್ರಿಸಲು ಒಮ್ಮತದ ಮಾರ್ಗೋಪಾಯಗಳನ್ನು ಕಂಡುಕೊಳ್ಳಲು ಬ್ಯಾಂಕಾಕಿನಲ್ಲಿ ನಡೆದ ವಿಶ್ವಸಂಸ್ಥೆ ಸಮ್ಮೇಳನ ನಿರ್ಧರಿಸಿತು. ವಿಶ್ವಸಂಸ್ಥೆಯು ಮುಂದಿಟ್ಟ ವರದಿಯನ್ನು 120ಕ್ಕೂ ಹೆಚ್ಚು ರಾಷ್ಟ್ರಗಳ 2000ಕ್ಕೂ ಹೆಚ್ಚು ಮಂದಿ ವಿಜ್ಞಾನಿಗಳು ಹಾಗೂ ಅಧಿಕಾರಿಗಳು ಒಪ್ಪಿಕೊಂಡರು.

2006: ದೇಶದ ಭರವಸೆಯ ರಾಜಕಾರಣಿಗಳಲ್ಲಿ ಒಬ್ಬರಾಗಿದ್ದ, ಬಿಜೆಪಿಯ ಸಂಘಟನಾ ಚತುರ ಮತ್ತು ಕಾರ್ಯತಂತ್ರ ನಿಪುಣ ಪ್ರಮೋದ ಮಹಾಜನ್ (56) ಅವರ ಅಂತ್ಯಕ್ರಿಯೆ ಮುಂಬೈಯ ಶಿವಾಜಿ ಪಾರ್ಕಿನಲ್ಲಿ ಸಕಲ ಸರ್ಕಾರಿ ಗೌರವಗಳೊಂದಿಗೆ ನಡೆಯಿತು.

2006: ಮಂಗಳೂರು ವಿಮಾನ ನಿಲ್ದಾಣದಿಂದ ಅಂತಾರಾಷ್ಟ್ರೀಯ ವಿಮಾನಗಳ ಹಾರಾಟಕ್ಕೆ ಕಸ್ಟಮ್ಸ್ ಇಲಾಖೆ ಅನುಮತಿ ನೀಡಿತು. ಇದರೊಂದಿಗೆ ಮಂಗಳೂರು ವಿಮಾನ ನಿಲ್ದಾಣವು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ಆಗಬೇಕು ಎಂಬ ಬಹುಕಾಲದ ಕನಸು ನನಸಾಗುವ ಕಾಲ ಸನ್ನಿಹಿತವಾಯಿತು.

2006: ಅಮೆರಿಕದಲ್ಲಿ 3000ಕ್ಕೂ ಹೆಚ್ಚು ಮಂದಿಯನ್ನು ಬಲಿತೆಗೆದುಕೊಂಡ 2001 ಸೆಪ್ಟೆಂಬರ 11ರ ಭಯೋತ್ಪಾದನಾ ದಾಳಿಯ ಸಂಚುಕೋರ ಮೊರಾಕ್ಕೋ ಮೂಲದ ಅಲ್ ಖೈದಾ ಸಂಘಟನೆಗೆ ಸೇರಿದ ಝಕ್ರಿಯಾಸ್ ಮೌಸಾವಿಗೆ ಮರಣದಂಡನೆಯ ಬದಲು ಜೀವಾವಧಿ ಶಿಕ್ಷೆ ವಿಧಿಸಲು ಅಮೆರಿಕ ನ್ಯಾಯಮೂರ್ತಿಗಳ ಪೀಠ ನಿರ್ಧರಿಸಿತು.

2006: ಸಾನ್ ಸಾಲ್ವಡೋರಿನ ಹಣ್ಣು ಹಣ್ಣು ಮುದುಕಿ ಕ್ರೂಜ್ ಹೆರ್ನಾಂಡೆಸ್ ರಿವಾಸ್ ತನ್ನ 128ನೇ ಜನ್ಮದಿನವನ್ನು ಆಚರಿಸಿದರು. 1878ರಲ್ಲಿ ಜನಿಸಿದ ಈಕೆಗೆ 13 ಮಕ್ಕಳು, 60 ಮೊಮ್ಮಕ್ಕಳು. ಮಕ್ಕಳ ಪೈಕಿ ಬದುಕಿ ಉಳಿದವರು ಐವರು ಮಾತ್ರ.

2006: ಭಾರತದ ಗಗನಯಾನಿ ಕಲ್ಪನಾ ಚಾವ್ಲಾ ಅವರು ಗಗನಯಾನ ದುರಂತದಲ್ಲಿ ಮಡಿದ ಮೂರು ವರ್ಷಗಳ ಬಳಿಕ, ಭಾರತೀಯ ಮೂಲದ ಇನ್ನೊಬ್ಬ ಅಮೆರಿಕನ್ ಮಹಿಳಾ ಗಗನಯಾನಿ ಸುನೀತಾ ವಿಲಿಯಮ್ಸ್ ಅವರು ಅಂತಾರಾಷ್ಟ್ರೀಯ ಬಾಹ್ಯಾಕಾಶ ನಿಲ್ದಾಣಕ್ಕೆ (ಐಎಸ್ಎಸ್) ಫ್ಲೈಟ್ ಎಂಜಿನಿಯರ್ ಆಗಿ ತನ್ನ ಚೊಚ್ಚಲ ಪಯಣ ಮಾಡುವರು ಎಂದು ನಾಸಾ ಪ್ರಕಟಿಸಿತು.

2006: ಆದಾಯ ಮೂಲ ಮೀರಿದ ಆಸ್ತಿ, ಪಾಸ್ತಿ ಹೊಂದಿದ ಆರೋಪದ ಹಿನ್ನೆಲೆಯಲ್ಲಿ ಹರಿಯಾಣಾದ ಮಾಜಿ ಮುಖ್ಯಮಂತ್ರಿ ಓಂ ಪ್ರಕಾಶ್ ಚೌಟಾಲಾ ಹಾಗೂ ಸಂಸತ್ ಸದಸ್ಯರಾಗಿರುವ ಅವರ ಪುತ್ರ ಅಜಯ್ ಚೌಟಾಲಾ ಅವರಿಗೆ ಸೇರಿದ 6 ರಾಜ್ಯ ಮತ್ತು ಕೇಂದ್ರಾಡಳಿತ ಪ್ರದೇಶಗಳಲ್ಲಿನ 24 ನಿವಾಸಗಳು ಹಾಗೂ ಇತರ ಸ್ಥಳಗಳ ಮೇಲೆ ಸಿಬಿಐ ಅಧಿಕಾರಿಗಳು ದಾಳಿ ನಡೆಸಿದರು. ಚೌಟಾಲಾ ಮತ್ತು ಅವರ ಕುಟುಂಬಕ್ಕೆ ಸೇರಿದ 1467 ಕೋಟಿ ರೂಪಾಯಿ ಮೌಲ್ಯದ ಅಕ್ರಮ ಆಸ್ತಿಪಾಸ್ತಿಗೆ ಸಂಬಂಧಿಸಿದಂತೆ ಈ ದಾಳಿಗಳು ನಡೆದಿದ್ದು, ಆದಾಯ ಮೂಲ ಮೀರಿದ ಆಸ್ತಿಪಾಸ್ತಿಗೆ ಸಂಬಂಧಿಸಿದ ಹಲವಾರು ದಾಖಲೆಗಳು ಪತ್ತೆಯಾದವು. ದೆಹಲಿ, ಹರಿಯಾಣ, ರಾಜಸ್ಥಾನ, ಹಿಮಾಚಲ ಪ್ರದೇಶ, ಉತ್ತರಪ್ರದೇಶ, ಉತ್ತರಾಂಚಲ ಹಾಗೂ ಚಂಡೀಗಢದಲ್ಲಿರುವ ಚೌತಾಲಾ ಅವರ ನಿವಾಸ ಹಾಗೂ ತೋಟದ ಮನೆಗಳ ಮೇಲೆ ದಾಳಿ ನಡೆಯಿತು. ಕಿರಿಯ ಪ್ರಾಥಮಿಕ ಶಾಲಾ ಶಿಕ್ಷಕರ ನೇಮಕಾತಿ ಅವ್ಯವಹಾರದ ಕುರಿತು ತನಿಖೆ ನಡೆಸುವ ಸಂದರ್ಭದಲ್ಲಿ ಸಿಬಿಐಗೆ ಅಕ್ರಮ ಆಸ್ತಿ ಕುರಿತು ಮಾಹಿತಿ ದೊರಕಿತ್ತು.

2006: ವೋಲ್ಕರ್ ಪ್ರಕರಣಕ್ಕೆ ಸಂಬಂಧಿಸಿದಂತೆ 1.50 ಕೋಟಿ ರೂಪಾಯಿ ಲಂಚವನ್ನು ಮಾಜಿ ವಿದೇಶಾಂಗ ಸಚಿವ ಕೆ. ನಟವರ್ ಸಿಂಗ್ ಅವರ ಪುತ್ರ ಜಗತ್ ಸಿಂಗ್ ಅವರಿಗೆ ಪಾವತಿ ಮಾಡಲಾಗಿದೆ ಎಂಬುದು ಜಾರಿ ನಿರ್ದೇಶನಾಲಯದ ತನಿಖೆಯಿಂದ ಬೆಳಕಿಗೆ ಬಂದಿದೆ ಎಂದು ಎನ್ ಡಿಟಿವಿ ವರದಿ ಮಾಡಿತು.

1935: ಕಾವ್ಯ, ಕಥೆ, ಕಾದಂಬರಿ, ನಾಟಕ, ವಿಮರ್ಶೆ ಸೇರಿದಂತೆ ಸಾಹಿತ್ಯದ ಹಲವಾರು ಕ್ಷೇತ್ರಗಳಲ್ಲಿ ದುಡಿದ ಡಾ. ಸುಮತೀಂದ್ರ ನಾಡಿಗ್ ಅವರು ರಾಘವೇಂದ್ರರಾವ್- ಸುಬ್ಬಮ್ಮ ದಂಪತಿಯ ಮಗನಾಗಿ ಚಿಕ್ಕಮಗಳೂರು ಜಿಲ್ಲೆ ಕಳಸದಲ್ಲಿ ಈದಿನ ಜನಿಸಿದರು.

1913: ಭಾರತದ ಮೊತ್ತ ಮೊದಲ ಸಂಪೂರ್ಣ ದೇಸೀ ಚಲನಚಿತ್ರ `ರಾಜಾ ಹರಿಶ್ಚಂದ್ರ' ಮುಂಬೈಯ ಕೊರೊನೇಷನ್ ಸಿನಿಮಾದಲ್ಲಿ ಬಿಡುಗಡೆಯಾಯಿತು. ಭಾರತೀಯ ಚಿತ್ರೋದ್ಯಮದ ಪಿತಾಮಹ ದಾದಾಸಾಹೇಬ್ ಫಾಲ್ಕೆ ಅವರು ಈ ಚಿತ್ರವನ್ನು ನಿರ್ಮಿಸಿದವರು.

1854: ಭಾರತದ ಮೊತ್ತ ಮೊದಲ ಅಂಚೆಚೀಟಿಯನ್ನು ಕಲಕತ್ತಾದಲ್ಲಿ (ಇಂದಿನ ಕೊಲ್ಕತ) ಅಧಿಕೃತವಾಗಿ ಬಿಡುಗಡೆ ಮಾಡಲಾಯಿತು. ಅರ್ಧ `ಆಣೆ' ಬೆಲೆಯ ಈ ಅಂಚೆಚೀಟಿಯಲ್ಲಿ ರಾಣಿ ವಿಕ್ಟೋರಿಯಾ ಚಿತ್ರವನ್ನು ಮುದ್ರಿಸಲಾಗಿತ್ತು.

1799: ಮೈಸೂರಿನ ದೊರೆ ಟಿಪ್ಪುಸುಲ್ತಾನ್ ಶ್ರೀರಂಗಪಟ್ಟಣದಲ್ಲಿ ಬ್ರಿಟಿಷರ ಜೊತೆಗೆ ನಡೆದ ನಾಲ್ಕನೇ ಮೈಸೂರು ಯುದ್ಧದಲ್ಲಿ ಅಸುನೀಗಿದರು. ಈ ಯುದ್ಧದಲ್ಲಿ ಬ್ರಿಟಿಷ್ ಪಡೆಗಳ ನೇತೃತ್ವವನ್ನು ಲಾರ್ಡ್ ಮೋರಿಂಗ್ಟನ್ ವಹಿಸಿದ್ದ.

1555: ಕಾಲಜ್ಞಾನಿ ನಾಸ್ಟ್ರಡಾಮಸ್ ತನ್ನ `ಸೆಂಚುರೀಸ್' ಕೃತಿಯನ್ನು ಪ್ರಕಟಿಸಿದ. ಈ ಕೃತಿ 350 ಚೌಪದಿಗಳನ್ನು ಒಳಗೊಂಡಿದ್ದು ವಿಶ್ವ ವಿಖ್ಯಾತಿ ಪಡೆದಿದೆ. ಈ ಗ್ರಂಥದ ಎರಡನೇ ಆವೃತ್ತಿಯನ್ನು ನಾಸ್ಟ್ರಡಾಮಸ್ ಎರಡನೇ ಹೆನ್ರಿಗೆ ಅರ್ಪಿಸಿದ. ಹೆನ್ರಿಯ ಸಾವಿನ ಬಗ್ಗೆ ಈ ಪುಸ್ತಕದಲ್ಲಿ ಆತ ಸ್ಪಷ್ಟವಾಗಿ ಭವಿಷ್ಯ ನುಡಿದಿದ್ದ.

1494: ಕ್ರಿಸ್ಟೋಫರ್ ಕೊಲಂಬಸ್ ಜಮೈಕಾ ದ್ವೀಪವನ್ನು ಪತ್ತೆಹಚ್ಚಿದ.

Monday, May 3, 2010

ಇಂದಿನ ಇತಿಹಾಸ History Today ಮೇ 03

ಇಂದಿನ ಇತಿಹಾಸ

ಮೇ 03

ಪ್ಲಾಸ್ಟಿಕ್ ಆಧಾರಿತ ಪರಿಣಾಮಕಾರಿ ವಿದ್ಯುತ್ ಕೋಶವನ್ನು ಕಂಡು ಹಿಡಿಯುವ ಮೂಲಕ ದಕ್ಷಿಣ ಕೊರಿಯಾದ ವಿಜ್ಞಾನಿಗಳು ಸೌರಶಕ್ತಿಯ ವಾಣಿಜ್ಯ ಬಳಕೆಯ ವೇಗವನ್ನು ಹೆಚ್ಚಿಸುವ ಮಹತ್ವದ ವಿದ್ಯಮಾನವೊಂದಕ್ಕೆ ಮುನ್ನುಡಿ ಬರೆದರು. ಈ ಪ್ಲಾಸ್ಟಿಕ್ ಆಧಾರಿತ ವಿದ್ಯುತ್ ಕೋಶ, ಸಸ್ಯಗಳಲ್ಲಿರುವ ಫೋಟೋ ವೋಲ್ಟಾಯಿಕ್ ಕೋಶದ ಕಾರ್ಯವೈಖರಿಯನ್ನು ಹೋಲುತ್ತದೆ. ದಕ್ಷಿಣ ಕೊರಿಯಾದ ಗ್ವಾಂಗ್ಜು ವಿಜ್ಞಾನ ಮತ್ತು ತಂತ್ರಜ್ಞಾನ ಸಂಸ್ಥೆಯ ವಿಜ್ಞಾನಿ ಲೀ ಕ್ವಾಂಗ್ ಹೀ ನೇತೃತ್ವದಲ್ಲಿ ವಿಜ್ಞಾನಿಗಳು ಈ ವಿದ್ಯುತ್ ಕೋಶವನ್ನು ಅಭಿವೃದ್ಧಿ ಪಡಿಸಿದರು.

2009: ನೇಪಾಳೀ ಸರ್ಕಾರದ ಆಜ್ಞೆಯನ್ನು ಪಾಲಿಸದ ಆರೋಪದ ಮೇಲೆ ಸೇನಾ ಪಡೆಯ ಮುಖ್ಯಸ್ಥ ಜನರಲ್ ರುಕ್ಮಾಂಗದ ಕಟ್ವಾಲ್ ಅವರನ್ನು ವಜಾಗೊಳಿಸಿ, ಅವರ ಸ್ಥಾನಕ್ಕೆ ಮಾವೋವಾದಿಗಳ ನಿಷ್ಠಾವಂತ ಎನ್ನಲಾದ ಲೆಫ್ಟಿನೆಂಟ್ ಜನರಲ್ ಕೌಲ್ ಬಹದ್ದೂರ್ ಖಾಡ್ಕಾ ಅವರನ್ನು ನೇಮಿಸಲಾಯಿತು. ಸೇನಾ ಮುಖ್ಯಸ್ಥರನ್ನು ವಜಾಗೊಳಿಸಲು ಪ್ರಧಾನಿ ಪ್ರಚಂಡ ಅವರ ಅಧ್ಯಕ್ಷತೆಯಲ್ಲಿ ಕರೆಯಲಾಗಿದ್ದ ವಿಶೇಷ ಸಚಿವ ಸಂಪುಟ ಸಭೆಯನ್ನು ಸರ್ಕಾರದ ಪ್ರಮುಖ ಅಂಗಪಕ್ಷಗಳಾದ ನೇಪಾಳ ಕಮ್ಯುನಿಸ್ಟ್ ಪಕ್ಷ ಯುಎಂಎಲ್, ಮಾದೇಶಿ ಪೀಪಲ್ಸ್ ರೈಟ್ಸ್ ಒಕ್ಕೂಟ, ಸದ್ಭಾವನಾ ಪಕ್ಷ ಹಾಗೂ ಸಿಪಿಎನ್-ಯುನೈಟೆಡ್‌ನ ನಾಲ್ಕು ಪ್ರಮುಖ ನಾಯಕರು ಬಹಿಷ್ಕರಿಸಿದ್ದರು. ಅವರ ಬಹಿಷ್ಕಾರದ ನಡುವೆಯೇ ಸರ್ಕಾರ ಈ ನಿರ್ಧಾರವನ್ನು ಕೈಗೊಂಡಿತು. ಸೇನಾ ಮುಖ್ಯಸ್ಥರ ವಜಾ ಕ್ರಮವನ್ನು ನೇಪಾಳದ ಪ್ರಮುಖ ಪ್ರತಿಪಕ್ಷ ನೇಪಾಳಿ ಕಾಂಗ್ರೆಸ್ ಸೇರಿದಂತೆ 16 ಪಕ್ಷಗಳು ವಿರೋಧಿಸಿದ್ದವು.

2009: ಪ್ಲಾಸ್ಟಿಕ್ ಆಧಾರಿತ ಪರಿಣಾಮಕಾರಿ ವಿದ್ಯುತ್ ಕೋಶವನ್ನು ಕಂಡು ಹಿಡಿಯುವ ಮೂಲಕ ದಕ್ಷಿಣ ಕೊರಿಯಾದ ವಿಜ್ಞಾನಿಗಳು ಸೌರಶಕ್ತಿಯ ವಾಣಿಜ್ಯ ಬಳಕೆಯ ವೇಗವನ್ನು ಹೆಚ್ಚಿಸುವ ಮಹತ್ವದ ವಿದ್ಯಮಾನವೊಂದಕ್ಕೆ ಮುನ್ನುಡಿ ಬರೆದರು. ಈ ಪ್ಲಾಸ್ಟಿಕ್ ಆಧಾರಿತ ವಿದ್ಯುತ್ ಕೋಶ, ಸಸ್ಯಗಳಲ್ಲಿರುವ ಫೋಟೋ ವೋಲ್ಟಾಯಿಕ್ ಕೋಶದ ಕಾರ್ಯವೈಖರಿಯನ್ನು ಹೋಲುತ್ತದೆ. ದಕ್ಷಿಣ ಕೊರಿಯಾದ ಗ್ವಾಂಗ್ಜು ವಿಜ್ಞಾನ ಮತ್ತು ತಂತ್ರಜ್ಞಾನ ಸಂಸ್ಥೆಯ ವಿಜ್ಞಾನಿ ಲೀ ಕ್ವಾಂಗ್ ಹೀ ನೇತೃತ್ವದಲ್ಲಿ ವಿಜ್ಞಾನಿಗಳು ಈ ವಿದ್ಯುತ್ ಕೋಶವನ್ನು ಅಭಿವೃದ್ಧಿ ಪಡಿಸಿದರು. ಸಸ್ಯಗಳು ದ್ಯುತಿಸಂಶ್ಲೇಷಣಾ ಕ್ರಿಯೆ ಮೂಲಕ ಆಹಾರ ತಯಾರಿಸಿಕೊಳ್ಳುವ ಹಾಗೆ ಈ ವಿದ್ಯುತ್ ಕೋಶದ ತಯಾರಿಕೆಗೆ ಬಳಸಿರುವ ಪ್ಲಾಸ್ಟಿಕ್ ಹಾಳೆ ಕೂಡ ಸೌರ ಶಕ್ತಿಯನ್ನು ಹೀರಿಕೊಂಡು ವಿದ್ಯುತ್ ತಯಾರಿಸುತ್ತದೆ ಎಂಬುದು ವಿಜ್ಞಾನಿಗಳ ವಿವರಣೆ. ಈ ವಿದ್ಯುತ್ ಕೋಶದ 'ಉತ್ಪಾದನಾ' ಸಾಮರ್ಥ್ಯ ಹೆಚ್ಚಿಸುವ ಸಲುವಾಗಿ ಈ ಪ್ಲಾಸ್ಟಿಕ್ ಹಾಳೆಗೆ ಟಿಟಾನಿಯಮ್ ಆಕ್ಸೈಡ್ ಬಳಸಲಾಗಿತ್ತು. ಪಾಸ್ಲ್ಟಿಕ್ ಆಧಾರಿತ ವಿದ್ಯುತ್ ಕೋಶ ಸಂಪೂರ್ಣ ಅಭಿವೃದ್ಧಿಗೊಂಡರೆ ಇದನ್ನು ಎಲ್ಲಿ ಬೇಕಾದರೂ ಬಳಸಬಹುದು. ಬೇಕಾದ ಹಾಗೆ ಬಾಗಿಸಬಹುದು. ಕೋಟ್, ಬ್ಯಾಗ್ ಅಷ್ಟೇ ಏಕೆ ಯಾವುದೇ ಎಲೆಕ್ಟ್ರಾನಿಕ್ ಉಪಕರಣಗಳ ಮೇಲೆ, ಕಟ್ಟಡಗಳ ಕಿಟಕಿಗಳ ಮೇಲೂ ಈ ಕೋಶಗಳನ್ನು ಸಿಕ್ಕಿಸಬಹುದು ಎನ್ನುತ್ತಾರೆ ವಿಜ್ಞಾನಿಗಳು. ವಿಜ್ಞಾನಿ ಲೀ ಪ್ರಕಾರ, ಪ್ಲಾಸ್ಟಿಕ್ ಆಧಾರಿತ ವಿದ್ಯುತ್ ಕೋಶ ಶೇ 17 ರಷ್ಟು ವಿದ್ಯುತ್ ಉತ್ಪಾದನೆ ಮಾಡುವುದು. ಪ್ರಸ್ತುತ ಗೃಹ ಬಳಕೆಯಲ್ಲಿರುವ ಸಾಂಪ್ರದಾಯಿಕ ಅಜೈವಿಕ ಸಿಲಿಕಾನ್ ಆಧಾರಿತ ಸೋಲಾರ್ ವಿದ್ಯುತ್ ಕೋಶದ ತಟ್ಟೆಗಳು ಶೇ 7ರಿಂದ 8 ರಷ್ಟು ವಿದ್ಯುತ್ ಉತ್ಪಾದಿಸುತ್ತಿವೆ. ಇವು ತುಂಬಾ ದುಬಾರಿ ಎನಿಸಿವೆ. ಹೀಗಾಗಿ ಪ್ಲಾಸ್ಟಿಕ್ ಆಧಾರಿತ ವಿದ್ಯುತ್‌ಕೋಶಗಳು ವಾಣಿಜ್ಯಾಧಾರಿತ ವಿದ್ಯುತ್ ಉತ್ಪಾದನೆಗೆ ನೆರವಾಗಲಿದೆ ಎನ್ನುವುದು ತಜ್ಞರ ಅಭಿಪ್ರಾಯ. ಈ ಮಹತ್ವದ ವಿದ್ಯಮಾನವನ್ನು ಅಮೆರಿಕದ ರಾಷ್ಟ್ರೀಯ ಪುನರ್ಬಳಕೆ ಇಂಧನ ಪ್ರಯೋಗಾಲಯ ದೃಢಪಡಿಸಿ, ತನ್ನ ಆನ್-ಲೈನ್‌ಪತ್ರಿಕೆ 'ನೇಚರ್ ಫೋಟೊನಿಕ್ಸ್'ನಲ್ಲೂ ಪ್ರಕಟಿಸಿತು.

2009: ಎಲ್‌ಟಿಟಿಇ ಉಗ್ರರ ವಿರುದ್ಧ ಶ್ರೀಲಂಕಾ ಸೇನೆ ನಡೆಸಿದ ಅಂತಿಮ ಹಣಾಹಣಿಯಲ್ಲಿ 21 ಎಲ್‌ಟಿಟಿಇ ಉಗ್ರರು ಸಾವನ್ನಪ್ಪಿದರು. ಮುಲೈತೀವುವಿನ ವಳಯಾನ್‌ಮಠಂ ಪ್ರದೇಶದಲ್ಲಿ ನಡೆದ ಕಾರ್ಯಾಚರಣೆಯಲ್ಲಿ ಸೇನೆ ಮತ್ತು ಎಲ್‌ಟಿಟಿಇ ಎರಡೂ ಪಾಳೆಯಗಳಲ್ಲಿ ಸಾವು ನೋವು ಸಂಭವಿಸಿತು.

2009: ಪಾಕಿಸ್ಥಾನದ ಬುನೆರ್ ಜಿಲ್ಲೆಯಲ್ಲಿ ಸೇನೆ ನಡೆಸಿದ ಕಾರ್ಯಾಚರಣೆಯಲ್ಲಿ ಭಾನುವಾರ 80 ಮಂದಿ ತಾಲಿಬಾನಿಗಳು ಹತರಾದರು. ಪಾಕ್ ಕಮಾಂಡರ್ ಬ್ರಿಗೇಡಿಯರ್ ಫಯಾಜ್ ಅವರ ಹೇಳಿಕೆಯನ್ನು ಉಲ್ಲೇಖಿಸಿ ಜಿಯೋ ಟಿವಿ ಈ ಮಾಹಿತಿ ನೀಡಿತು.

2008: ಪಾಕಿಸ್ಥಾನದಲ್ಲಿ ಆಡಳಿತತಾರೂಢ ಪಾಕಿಸ್ಥಾನ ಪೀಪಲ್ಸ್ ಪಾರ್ಟಿಯ ಮುಖಂಡರ ಜತೆ ಹಲವು ಸುತ್ತಿನ ಗೌಪ್ಯ ಮಾತುಕತೆಯ ನಂತರ ಅಧ್ಯಕ್ಷ ಪರ್ವೇಜ್ ಮುಷರಫ್ ಅವರು ಸಂಸತ್ತನ್ನು ವಿಸರ್ಜಿಸುವ ಹಾಗೂ ಪ್ರಧಾನಿಯನ್ನು ವಜಾ ಮಾಡುವ ಅಧಿಕಾರವನ್ನು ಬಿಟ್ಟುಕೊಡಲು ನಿರ್ಧರಿಸಿದರು. ಸಂವಿಧಾನದ ಅನುಚ್ಛೇದ 58 (2ಬಿ) ಅಡಿಯಲ್ಲಿ ಇರುವ ಅಧಿಕಾರವನ್ನು ಮೊಟಕುಗೊಳಿಸುವ ತಿದ್ದುಪಡಿಗೆ ಸಹಿ ಹಾಕಲು ತಮ್ಮ ಒಪ್ಪಿಗೆ ಇದೆ ಎಂದು ಮುಷರಫ್ ಅವರು ತಮ್ಮ ಸಹಾಯಕನ ಮೂಲಕ ಪಿಪಿಪಿ ಸಹ ಅಧ್ಯಕ್ಷ ಅಸಿಫ್ ಅಲಿ ಜರ್ದಾರಿ ಅವರಿಗೆ ತಿಳಿಸಿದರು ಎಂದು ಡಾನ್ ಸುದ್ದಿ ಚಾನೆಲ್ ವರದಿ ಮಾಡಿತು.

2008: ಅನುಪಾತ ಪದ್ಧತಿ ಅಡಿಯಲ್ಲಿ ನೇಪಾಳದ ಪ್ರಧಾನಿ ಗಿರಿಜಾ ಪ್ರಸಾದ್ ಕೊಯಿರಾಲ ಅವರು ನೇಪಾಳ ಸಂವಿಧಾನ ರಚನೆ ಸಭೆಗೆ ಆಯ್ಕೆಯಾದರು. ಈ ಪದ್ಧತಿಯಲ್ಲಿ ಮಾವೋವಾದಿಗಳು ಮೂರನೇ ಒಂದು ಭಾಗದಷ್ಟು ಸ್ಥಾನಗಳನ್ನು ಗಳಿಸಿದರು. ಚುನಾವಣೆಯಲ್ಲಿ ಸ್ಪರ್ಧಿಸಿದ್ದ ಎಲ್ಲಾ 25 ಪಕ್ಷಗಳು ತಾವು ಗಳಿಸಿದ ಸ್ಥಾನಗಳ ಆಧಾರದ ಮೇಲೆ ದೊರಕುವ ಅನುಪಾತ ಸ್ಥಾನಗಳಿಗೆ ತಮ್ಮ ಅಭ್ಯರ್ಥಿಗಳ ಪಟ್ಟಿಯನ್ನು ಚುನಾವಣಾ ಆಯೋಗಕ್ಕೆ ಸಲ್ಲಿಸಿದರು. ಅನುಪಾತ ಪದ್ಧತಿಯಲ್ಲಿ 335 ಅಭ್ಯರ್ಥಿಗಳು, ಚುನಾವಣೆಯ ಮೂಲಕ 240 ಅಭ್ಯರ್ಥಿಗಳು ಆಯ್ಕೆಯಾಗಿದ್ದು 26 ಮಂದಿಯನ್ನು ಪ್ರಧಾನಿ ಅವರು ನಾಮಕರಣ ಮಾಡುವರು.

2008: ಕೊಂಕಣಿ ಲೇಖಕಿ ಗೋದೂಬಾಯಿ ಕೇಳ್ಕರ್ (83) ಅವರು ಪಣಜಿಯಲ್ಲಿ ಹಿಂದಿನ ದಿನ ರಾತ್ರಿ ನಿಧನರಾದರು. ಗೋದೂಬಾಯಿ ಅವರು ಪತಿ ಹೆಸರಾಂತ ಸಾಹಿತಿ, ಪದ್ಮಭೂಷಣ ಪುರಸ್ಕೃತ ರವೀಂದ್ರ ಕೇಳ್ಕರ್ ಮತ್ತು ಪುತ್ರನನ್ನು ಅಗಲಿದರು.

2008: ಏಷ್ಯಾದ ಅತಿ ದೊಡ್ಡ ಮಾರುಕಟ್ಟೆಗಳಲ್ಲಿ ಒಂದಾದ ಗುಂಟೂರಿನ ಮೆಣಸಿನಕಾಯಿ ಮಾರುಕಟ್ಟೆಯಲ್ಲಿ ಆಕಸ್ಮಿಕ ಬೆಂಕಿ ಅವಘಡ ಸಂಭವಿಸಿ ಕೋಟ್ಯಂತರ ರೂಪಾಯಿ ಮೌಲ್ಯದ ಫಸಲು ಸುಟ್ಟು ಭಸ್ಮವಾಯಿತು. ಮಾರುಕಟ್ಟೆಯಲ್ಲಿದ್ದ ಸುಮಾರು 500ಕ್ಕೂ ಹೆಚ್ಚು ದಲ್ಲಾಳಿ ಅಂಗಡಿಗಳು, ಒಂದೂವರೆ ಲಕ್ಷ ಮೆಣಸಿನಕಾಯಿ ಚೀಲಗಳು ಭಸ್ಮವಾದವು. ಬೆಂಕಿ ಸುಮಾರು 60 ಸಾವಿರ ಎಕರೆ ಪ್ರದೇಶದಲ್ಲಿ ಹರಡಿಕೊಂಡಿತ್ತು.

2008: ಬೀಜಿಂಗ್ ಒಲಿಂಪಿಕ್ ಕೂಟದ ಜ್ಯೋತಿಯನ್ನು ವಿಶ್ವದ ಅತ್ಯಂತ ಎತ್ತರದ ಶಿಖರ ಮೌಂಟ್ ಎವರೆಸ್ಟ್ ತುತ್ತತುದಿಗೆ ಕೊಂಡೊಯ್ಯುವ ಚೀನಾದ ಪ್ರಯತ್ನಕ್ಕೆ ಹಿಮಪಾತ ಅಡ್ಡಿಯಾಗಿ ಪರಿಣಮಿಸಿತು. ವಿಶೇಷ ಜ್ಯೋತಿಯನ್ನು ಹಿಡಿದ ಚೀನಾದ ಪರ್ವತಾರೋಹಿಗಳ ತಂಡದ ಸದಸ್ಯರು ಹಿಂದಿನ ದಿನ ತಮ್ಮ ಸಾಹಸ ಯಾತ್ರೆಗೆ ಚಾಲನೆ ನೀಡಿದರಾದರೂ ಯಶ ಕಾಣಲಿಲ್ಲ. ಹಿಮಾಲಯ ಪರ್ವತ ಪ್ರದೇಶದಲ್ಲಿ ಬಲವಾದ ಗಾಳಿ ಬೀಸಿ, ಹಿಮಮಪಾತ ಉಂಟಾದ ಕಾರಣ ಪರ್ವತಾರೋಹಿಗಳು ಸುಮಾರು 6,500 ಮೀ. ಕ್ರಮಿಸಿದ ಬಳಿಕ ಯಾತ್ರೆಯನ್ನು ಮೊಟಕುಗೊಳಿಸಲಾಯಿತು.

2008: ನಕಲಿ ಛಾಪಾ ಕಾಗದ ಹಗರಣದ ಪ್ರಮುಖ ಆರೋಪಿ ಅಬ್ದುಲ್ ಕರೀಮ್ ಲಾಲಾ ತೆಲಗಿಯನ್ನು ಬೆಂಗಳೂರಿನ ಪರಪ್ಪನ ಅಗ್ರಹಾರ ಕಾರಾಗೃಹಕ್ಕೆ ಸ್ಥಳಾಂತರಿಸಲು ಮಹಾರಾಷ್ಟ್ರ ಸಂಘಟಿತ ಅಪರಾಧ ನಿಯಂತ್ರಣ ಕಾಯ್ದೆ (ಮೋಕಾ) ನ್ಯಾಯಾಲಯ ಆದೇಶ ನೀಡಿತು. ಪುಣೆ ಕಾರಾಗೃಹದಲ್ಲಿದ್ದ ತೆಲಗಿ ವಿರುದ್ಧ ಬೆಂಗಳೂರಿನಲ್ಲಿ ದಾಖಲಾದ ದೂರುಗಳ ವಿಚಾರಣೆಗೆ ಅನುಕೂಲ ಮಾಡಿಕೊಡುವ ಉದ್ದೇಶದಿಂದ ನ್ಯಾಯಾಲಯ ಈ ಆದೇಶ ನೀಡಿತು.

2007: ಖ್ಯಾತ ಶಹನಾಯಿ ವಾದಕ ದಿವಂಗತ ಉಸ್ತಾದ್ ಬಿಸ್ಮಿಲ್ಲಾ ಖಾನ್ ಅವರ ಸಮಾಧಿ ನಿರ್ಮಿಸಲು ಸರ್ಕಾರ ವಿಳಂಬ ಧೋರಣೆ ಅನುಸರಿಸಿದ್ದನ್ನು ಪ್ರತಿಭಟಿಸಿ ಅವರ ಕುಟುಂಬದ ಸದಸ್ಯರು ಉತ್ತರ ಪ್ರದೇಶ ವಿಧಾನಸಭಾ ಚುನಾವಣೆಯಲ್ಲಿ ಮತದಾನವನ್ನು ಬಹಿಷ್ಕರಿಸಿದರು. ವಾರಣಾಸಿ ಪಟ್ಟಣದ ದಕ್ಷಿಣ ಭಾಗದ ವಿಧಾನಸಭೆ ಕ್ಷೇತ್ರದ ಸಾರೈ ಹರ್ಹಾ ಪ್ರದೇಶದಲ್ಲಿ ವಾಸಿಸುತ್ತಿರುವ ಬಿಸ್ಮಿಲ್ಲಾ ಖಾನ್ ಕುಟುಂಬದಲ್ಲಿನ ಮತದಾರರ ಸಂಖ್ಯೆ 60. ಇವರ ಪೈಕಿ ಯಾರೊಬ್ಬರೂ ಮತದಾನ ಮಾಡಲು ಬರಲಿಲ್ಲ.

2007: ತಮಿಳುನಾಡಿಗೆ ವರ್ಷಕ್ಕೆ 192 ಟಿಎಂಸಿ ಅಡಿಗಳಷ್ಟು ನೀರು ಬಿಡಬೇಕಾದರೆ ಅಂತಾರಾಜ್ಯ ಗಡಿಯಲ್ಲಿ ಜಲಾಶಯ ನಿರ್ಮಿಸಬೇಕಾಗುತ್ತದೆ ಎಂದು ಕರ್ನಾಟಕವು ಕಾವೇರಿ ನದಿನೀರು ವಿವಾದ ನ್ಯಾಯಮಂಡಳಿಗೆ ತಿಳಿಸಿತು.

2006: ಸೋದರ ಪ್ರವೀಣ್ ಗುಂಡೇಟಿನಿಂದ ತೀವ್ರವಾಗಿ ಗಾಯಗೊಂಡು 12 ದಿನಗಳ ಕಾಲ ಮುಂಬೈಯ ಹಿಂದೂಜಾ ಆಸ್ಪತೆಯಲ್ಲಿ ಜೀವನ್ಮರಣ ಹೋರಾಟ ನಡೆಸಿದ ಬಿಜೆಪಿ ಪ್ರಧಾನ ಕಾರ್ಯದರ್ಶಿ ಪ್ರಮೋದ್ ಮಹಾಜನ್ (56) ಈ ದಿನ ಸಂಜೆ 4.10ಕ್ಕೆ ಕೊನೆ ಉಸಿರೆಳೆದರು. ಆಂಧ್ರಪ್ರದೇಶದ ಮೆಹಬೂಬ್ ನಗರದಲ್ಲಿ 1949ರ ಅಕ್ಟೋಬರ್ 30ರಂದು ಜನಿಸಿದ ಮಹಾಜನ್ 1974ರಲ್ಲಿ ಶಿಕ್ಷಕ ಹುದ್ದೆಗೆ ರಾಜೀನಾಮೆ ನೀಡಿ ರಾಷ್ಟ್ರೀಯ ಸ್ವಯಂ ಸೇವಕ ಸಂಘದಲ್ಲಿ ಸಕ್ರಿಯರಾದರು. 1979ರಲ್ಲಿ ಅಧಿಕೃತವಾಗಿ ಬಿಜೆಪಿಗೆ ಸೇರಿದ ಅವರು 1983ರಲ್ಲಿ ರಾಷ್ಟ್ರೀಯ ಕಾರ್ಯದರ್ಶಿಯಾದರು. 1986ರಲ್ಲಿ ರಾಜ್ಯಸಭೆ ಪ್ರವೇಶಿಸಿದರು. 1990ರಲ್ಲಿ ಎಲ್. ಕೆ. ಆಡ್ವಾಣಿ ಅವರ ರಥಯಾತ್ರೆಯ ಹೊಣೆ ಹೊತ್ತಿದ್ದರು. 1996ರಲ್ಲಿ ವಾಜಪೇಯಿ ಸರ್ಕಾರದಲ್ಲಿ ರಕ್ಷಣಾ ಸಚಿವರಾದರು. 2001ರಲ್ಲಿ ದೂರಸಂಪರ್ಕ ಸಚಿವರಾದರು. 2004ರಲ್ಲಿ ಭಾರತ ಪ್ರಕಾಶಿಸುತ್ತಿದೆ ಜಾಹೀರಾತಿನ ರೂವಾರಿ. 2005ರಲ್ಲಿ ಅಟಲ್ ಬಿಹಾರಿ ವಾಜಪೇಯಿ ಅವರಿಂದ `ಲಕ್ಷ್ಮಣ' ಬಿರುದು. 2006ರ ಏಪ್ರಿಲ್ 22ರಂದು ಮುಂಬೈಯ ವರ್ಲಿಯ ಸ್ವಂತ ಮನೆಯಲ್ಲಿ ಕಿರಿಯ ಸಹೋದರ ಪ್ರವೀಣ್ ಮಹಾಜನ್ ರಿಂದ ಗುಂಡೇಟು.

2006: ದೇಲಂಪಾಡಿ ಬನಾರಿಯ ಶ್ರೀ ಗೋಪಾಲಕೃಷ್ಣ ಯಕ್ಷಗಾನ ಕಲಾ ಸಂಘದ ವತಿಯಿಂದ ನೀಡಲಾಗುವ ಕೀರಿಕ್ಕಾಡು ಮಾಸ್ಟರ್ ವಿಷ್ಣುಭಟ್ ಪ್ರಶಸ್ತಿಯನ್ನು ಹಿರಿಯ ಕಲಾವಿದ, ಹರಿದಾಸ ಡಾ. ಶೇಣಿ ಗೋಪಾಲಕೃಷ್ಣ ಭಟ್ ಅವರಿಗೆ ಘೋಷಿಸಲಾಯಿತು.

2006: ರಷ್ಯದ ಕಪ್ಪು ಸಮುದ್ರ ತೀರದಲ್ಲಿ ಈದಿನ ನಸುಕಿನ ವೇಳೆಯಲ್ಲಿ ಆರ್ಮೇನಿಯಾದ ನಾಗರಿಕ ವಿಮಾನವೊಂದು ಅಪಘಾತಕ್ಕೆ ಈಡಾಗಿ ಅದರಲ್ಲಿದ್ದ ಎಲ್ಲ 113 ಮಂದಿ ಪ್ರಯಾಣಿಕರು ಅಸು ನೀಗಿದರು. ಅರ್ಮೇನಿಯಾ ಏರ್ ಲೈನ್ಸ್ ಅರ್ಮೇನಿಯಾಕ್ಕ್ಕೆ ಸೇರಿದ ಏರ್ ಬಸ್-320 ಯೆರವಾನಿನಿಂದ ದಕ್ಷಿಣ ರಷ್ಯದ ಕಪ್ಪು ಸಮುದ್ರದ ಪ್ರವಾಸಿ ನಗರ ಸೋಚಿಗೆ ತೆರಳುತ್ತಿದ್ದಾಗ ಮುಂಜಾನೆ 7ರ ವೇಳೆಗೆ (ಭಾರತೀಯ ಕಾಲಮಾನ 8.30) ಈ ದುರಂತ ಸಂಭವಿಸಿತು.

2006: ಸಾಹಿತ್ಯ ಕೃತಿ ಚೌರ್ಯ ಆರೋಪ ಹೊತ್ತಿರುವ ಭಾರತೀಯ ಮೂಲದ ಕಾವ್ಯಾ ವಿಶ್ವನಾಥನ್ ಅವರ ವಿವಾದಿಕ ಕೃತಿಯನ್ನು ಶಾಶ್ವತವಾಗಿ ಮಾರುಕಟ್ಟೆಯಿಂದ ಹಿಂದಕ್ಕೆ ಪಡೆಯಲಾಯಿತು. ಕಾವ್ಯಾ ಅವರು ಬರೆದಿರುವ ಇತರ ಎರಡು ಪುಸ್ತಕಗಳ ಪ್ರಕಟಣೆಗೆ ಮಾಡಿಕೊಳ್ಳಲಾಗಿದ್ದ ಒಪ್ಪಂದವನ್ನೂ ಪ್ರಕಾಶನ ಸಂಸ್ಥೆ `ಲಿಟಲ್ , ಬ್ರೌನ್ ಅಂಡ್ ಕಂಪೆನಿ' ರದ್ದು ಪಡಿಸಿತು.

2006: ಬೆಂಗಳೂರಿನ ಸಾರ್ವಜನಿಕ ವ್ಯವಹಾರಗಳ ಕೇಂದ್ರದ (ಪಿಎಸಿ) ಸ್ಥಾಪಕ ಅಧ್ಯಕ್ಷ ಡಾ. ಸ್ಯಾಮ್ಯುಯೆಲ್ ಪೌಲ್ ಅವರಿಗೆ ವಿಶ್ವಸಂಸ್ಥೆಯ ಸಾರ್ವಜನಿಕ ಸೇವಾ ಪ್ರಶಸ್ತಿ ಲಭಿಸಿತು.

1915: ಬೆಂಗಳೂರಿನ ಶಂಕರಪುರಂನ ಪುಟ್ಟ ಬಾಡಿಗೆ ಕೋಣೆಯೊಂದರಲ್ಲಿ ಕನ್ನಡಿಗರ ಬಹುದಿನಗಳ ಆಶಯದ `ಕರ್ನಾಟಕ ಸಾಹಿತ್ಯ ಪರಿಷತ್ತು' (ಈಗಿನ ಕನ್ನಡ ಸಾಹಿತ್ಯ ಪರಿಷತ್ತು) ಆರಂಭಗೊಂಡಿತು. ನಂತರ 1933ರಲ್ಲಿ ಪರಿಷತ್ತು ಚಾಮರಾಜಪೇಟೆಯ ಈಗಿನ ಸ್ವಂತ ಕಟ್ಟಡಕ್ಕೆ ಸ್ಥಳಾಂತರಗೊಂಡಿತು. ಕರ್ನಾಟಕದ ವಿವಿಧ ಜಿಲ್ಲೆಗಳಲ್ಲದೆ ದೆಹಲಿ, ಮುಂಬೈ, ಚೆನ್ನೈ ಮತ್ತಿತರ ಕಡೆಗಳಲ್ಲಿಯೂ ಪರಿಷತ್ತು ತನ್ನ ಶಾಖೆಗಳನ್ನು ಹೊಂದಿದ್ದು, ಪ್ರತಿ ಶಾಖೆಗೂ ಪ್ರತ್ಯೇಕ ಕಾರ್ಯಕಾರಿ ಸಮಿತಿಯನ್ನು ಹೊಂದಿರುತ್ತದೆ.

1939: ನೇತಾಜಿ ಸುಭಾಶ್ ಚಂದ್ರ ಬೋಸ್ ಕಾಂಗ್ರೆಸ್ ಪಕ್ಷದಲ್ಲೇ ಹೊಸ ವಿಭಾಗವೊಂದರ ರಚನೆಯನ್ನು ಕಲಕತ್ತಾದಲ್ಲಿ (ಈಗಿನ ಕೋಲ್ಕತ) ಪ್ರಕಟಿಸಿದರು. ಅದನ್ನು `ಫಾರ್ವರ್ಡ್ ಬ್ಲಾಕ್' ಎಂದು ಅವರು ಕರೆದರು. ರಾಷ್ಟ್ರದಲ್ಲಿನ ಎಲ್ಲ ಕ್ರಾಂತಿಕಾರಿ ಮತ್ತು ಸಾಮ್ರಾಜ್ಯಶಾಹಿ ವಿರೋಧಿ ಪ್ರಗತಿಪರ ಶಕ್ತಿಗಳನ್ನು ಕನಿಷ್ಠ ಕಾರ್ಯಕ್ರಮದ ಅಡಿಯಲ್ಲಿ ಒಗ್ಗೂಡಿಸುವ ಉದ್ದೇಶ ಇದರದ್ದಾಗಿತ್ತು.

1916: ಐರಿಷ್ ರಾಷ್ಟ್ರೀಯವಾದಿ, ಕವಿ, ಶಿಕ್ಷಣತಜ್ಞ ಪ್ಯಾಟ್ರಿಕ್ ಹೆನ್ರಿ ಪಿಯರ್ಸ್ ಮತ್ತು ಇತರ ಇಬ್ಬರನ್ನು ಬ್ರಿಟಿಷ್ ಸರ್ಕಾರ ಈಸ್ಟರ್ ದಂಗೆಯಲ್ಲಿ ವಹಿಸಿದ ಪಾತ್ರಕ್ಕಾಗಿ ಗಲ್ಲಿಗೇರಿಸಿತು. 1916ರ ಏಪ್ರಿಲ್ 24ರಂದು ಆರಂಭವಾದ ಬ್ರಿಟಿಷ್ ವಿರೋಧಿ ದಂಗೆಯಲ್ಲಿ ಪಿಯರ್ಸ್ ಐರಿಷ್ ಪಡೆಗಳ ಮಹಾದಂಡನಾಯಕನಾಗಿದ್ದ.

1898: ಗೋಲ್ಡಾ ಮೀಯರ್ (1898-1978) ಹುಟ್ಟಿದ ದಿನ. ಈಕೆ ಇಸ್ರೇಲಿನ ನಾಲ್ಕನೇ ಪ್ರಧಾನಿ ಹಾಗೂ ಅಲ್ಲಿನ ಪ್ರಥಮ ಮಹಿಳಾ ಪ್ರಧಾನಿ.

1897: ವಿ.ಕೆ. ಕೃಷ್ಣ ಮೆನನ್ (1897-1974) ಜನ್ಮದಿನ. ವಿಶ್ವಸಂಸ್ಥೆಯ ಜನರಲ್ ಅಸೆಂಬ್ಲಿಯಲ್ಲಿ ಭಾರತವನ್ನು ಪ್ರತಿನಿಧಿಸಿದ್ದ ಇವರು 1962ರಲ್ಲಿ ಭಾರತದ ಮೇಲೆ ಚೀನ ದಾಳಿ ನಡೆಸಿದಾಗ ಭಾರತದ ರಕ್ಷಣಾ ಸಚಿವರಾಗಿದ್ದರು.

Advertisement