Showing posts with label ಇಂದಿನ ಇತಿಹಾಸ History Today (September 1-10).. Show all posts
Showing posts with label ಇಂದಿನ ಇತಿಹಾಸ History Today (September 1-10).. Show all posts

Sunday, October 11, 2009

ಇಂದಿನ ಇತಿಹಾಸ History Today ಅಕ್ಟೋಬರ್ 10

ಇಂದಿನ ಇತಿಹಾಸ

ಅಕ್ಟೋಬರ್ 10

ಭಾರತದ ನಾಲ್ವರು ಗಣ್ಯ ವ್ಯಕ್ತಿಗಳು ಈ ದಿನ ಜನಿಸಿದರು. ಕನ್ನಡದ ಜ್ಞಾನಪೀಠ ಪ್ರಶಸ್ತಿ ವಿಜೇತ ಸಾಹಿತಿ, ಕಡಲ ಕರೆಯ ಭಾರ್ಗವ, ನಡೆದಾಡುವ ವಿಶ್ವಕೋಶ, ಒಂದು ವಿಶ್ವವಿದ್ಯಾಲಯ ಎಂದೇ ಖ್ಯಾತರಾದ ಶಿವರಾಮ ಕಾರಂತ (10-10-1902ರಿಂದ-9-12-1997) ಅವರು 1902 ರಲ್ಲಿ ಈದಿನ ಜನಿಸಿದರು. ಭಾರತೀಯ ವಕೀಲ ಹಾಗೂ ರಾಷ್ಟ್ರೀಯವಾದಿ ಬದ್ರುದ್ದೀನ್ ತ್ಯಾಬ್ಜಿ (1844-1906) ಅವರು 1844ರಲ್ಲಿ ಈದಿನ ಹುಟ್ಟಿದರು. ಖ್ಯಾತ ಕಾದಂಬರಿಕಾರ ಆರ್.ಕೆ. ನಾರಾಯಣ್ ಎಂದೇ ಪ್ರಸಿದ್ಧರಾದ ರಾಸಿಪುರಂ ಕೃಷ್ಣಸ್ವಾಮಿ ನಾರಾಯಣ್ (1906-2001) ಅವರು 1906ರಲ್ಲಿ ಈದಿನ ಜನಿಸಿದರು. ಭಾರತದ ಖ್ಯಾತ ಚಿತ್ರನಟಿ ರೇಖಾ ಅವರು 1954ರಲ್ಲಿ ಇದೇ ದಿನ ಹುಟ್ಟಿದರು.
2014: ಓಸ್ಲೊ:: ಭಾರತದ ಮಕ್ಕಳ ಹಕ್ಕುಗಳ ಹೋರಾಟಗಾರ ಕೈಲಾಸ್ ಸತ್ಯಾರ್ಥಿ (60) ಮತ್ತು ಪಾಕಿಸ್ತಾನದ ಹೆಣ್ಣು ಮಕ್ಕಳ ಶಿಕ್ಷಣ ಹಕ್ಕುಗಳ ಯುವ ಹೋರಾಟಗಾರ್ತಿ ಮಲಾಲ ಯೂಸೂಫ್ಝೈ ಅವರು 2014ರ ಸಾಲಿನ ನೊಬೆಲ್ ಶಾಂತಿ ಪುರಸ್ಕಾರಕ್ಕೆ ಆಯ್ಕೆಯಾದರು. ಹದಿನೇಳು ವರ್ಷದ ಮಲಾಲ ನೊಬೆಲ್ ಶಾಂತಿ ಪುರಸ್ಕಾರ ಪಡೆಯುತ್ತಿರುವ ಅತ್ಯಂತ ಕಿರಿಯ ಸಾಧಕಿ ಎನಿಸಿದರು. ಕೈಲಾಸ್ ಸತ್ಯಾರ್ಥಿ ಅವರು ೩೦ ವರ್ಷಗ­ಳಿಂದಲೂ ‘ಬಚಪನ್ ಬಜಾವೊ’ ಆಂದೋಲನದ ಮೂಲಕ ಮಕ್ಕಳ ಹಕ್ಕುಗಳ ರಕ್ಷಣೆಯಲ್ಲಿ ತೊಡಗಿಸಿಕೊಂಡವರು. ಮಕ್ಕಳ ಮಾರಾಟ, ಬಾಲ ಕಾರ್ಮಿಕ ಪದ್ಧತಿ ನಿಯಂತ್ರಣಕ್ಕೆ ಈ ಸಂಸ್ಥೆ ಮುಂಚೂಣಿ­ಯಲ್ಲಿ ನಿಂತು ಕೆಲಸ ಮಾಡುತ್ತಿದೆ.  ‘ಮಕ್ಕಳ ಹಕ್ಕುಗಳು ಹಾಗೂ ಶಿಕ್ಷಣದ ಬಗ್ಗೆ ಯುವ ಜನರಲ್ಲಿ ಜಾಗೃತಿ ಮೂಡಿಸಿದ ಚಳವಳಿಗಾಗಿ ಕೈಲಾಸ್ ಮತ್ತು ಮಲಾಲ ಅವರಿಗೆ ಪುರಸ್ಕಾರ ನೀಡಲಾಗುತ್ತಿದೆ’ ಎಂದು ಆಯ್ಕೆ ಸಮಿತಿ ಹೇಳಿತು. ‘ಗಾಂಧೀವಾದಿಯಾಗಿರುವ ಕೈಲಾಸ್ ಸತ್ಯಾರ್ಥಿ ಮಕ್ಕಳ ಹಕ್ಕುಗಳ ರಕ್ಷಣೆ ಹಾಗೂ ಮಕ್ಕಳ ಕಳ್ಳಸಾಗಣೆ ತಡೆಗೆ ಆಂದೋಲನ ರೂಪಿಸಿದ್ದಾರೆ. ಮಕ್ಕಳ ಹಕ್ಕುಗಳ ಉಲ್ಲಂಘನೆಯಾದ ಸಂದರ್ಭದಲ್ಲೆಲ್ಲಾ ಅವರು ನಿರಂತರ ಹೋರಾಟ ಮಾಡುತ್ತಾ ಬಂದಿದ್ದಾರೆ’ ಎಂದು ಸಮಿತಿ ಹೇಳಿತು. ‘ಮಲಾಲ ಹೆಣ್ಣು ಮಕ್ಕಳ ಶಿಕ್ಷಣಕ್ಕೆ ದನಿಯಾಗಿದ್ದಾರೆ. ಹಿಂದುಳಿದ ರಾಷ್ಟ್ರಗಳ ಹೆಣ್ಣು ಮಕ್ಕಳ ಶೈಕ್ಷಣಿಕ ಹಕ್ಕುಗಳಿಗಾಗಿ ಹೋರಾಡುತ್ತಿರುವ ಮಲಾಲ ಅವರ ಕಾರ್ಯ ಪರಿಣಾಮಕಾರಿಯಾಗಿದೆ. ಅವರ ಚಳವಳಿಯಿಂದ ಹಲವು ಹೆಣ್ಣು ಮಕ್ಕಳಿಗೆ ಶಿಕ್ಷಣ ದೊರೆಯುವಂತಾಗಿದೆ’ ಎಂದು ಸಮಿತಿ ತಿಳಿಸಿತು. ‘ಕೈಲಾಸ್ ಮತ್ತು ಮಲಾಲ ಅವರನ್ನು ಶಾಂತಿ ಪುರಸ್ಕಾರಕ್ಕೆ ಜಂಟಿಯಾಗಿ ಆಯ್ಕೆ ಮಾಡಿರುವುದು ಒಬ್ಬ ಹಿಂದೂ– ಒಬ್ಬ ಮುಸ್ಲಿಂ ಹಾಗೂ ಒಬ್ಬ ಭಾರತೀಯ– ಒಬ್ಬ ಪಾಕಿಸ್ತಾನಿ ಒಂದೇ ವಿಷಯದ ಬಗ್ಗೆ ಹೋರಾಟ ನಡೆಸುತ್ತಿರುವುದನ್ನು ಗುರುತಿಸಿದಂತಾಗಿದೆ’ ಎಂದು ಸಮಿತಿ ಅಭಿಪ್ರಾಯಪಟ್ಟಿತು. ‘ಈ ಪುರಸ್ಕಾರ ಮಕ್ಕಳ ಹಕ್ಕುಗಳ ಹೋರಾಟಕ್ಕೆ ಸಂದಿರುವ ಗೌರವ’ ಎಂದು ಕೈಲಾಸ್ ಸತ್ಯಾರ್ಥಿ ಪ್ರತಿಕ್ರಿಯಿಸಿದರು. ಮದರ್ ತೆರೆಸಾ ಬಳಿಕ ಭಾರತಕ್ಕೆ ನೊಬೆಲ್ ಶಾಂತಿ ಪ್ರಶಸ್ತಿ ಸಂದಿರುವುದು ಇದು ಎರಡನೇ ಬಾರಿ.

2014: ವಾಷಿಂಗ್ಟನ್ : ಪ್ರತಿಷ್ಠಿತ ಜೇಮ್ಸ್ ಬಿಯರ್ಡ್ ಪ್ರತಿ­ಷ್ಠಾನ ನೀಡುವ ‘ಲೀಡರ್ಶಿಪ್’ ಪ್ರಶಸ್ತಿಗೆ ಭಾರತೀಯ ಮೂಲದ ಅಮೆರಿಕ ಕಾರ್ಯ­ಕರ್ತೆ ನವಿನಾ ಖನ್ನಾ ಆಯ್ಕೆಯಾದರು. ಆಹಾರ, ಪಾನೀಯ ವೃತ್ತಿಪರ­ರಿಗೆ ಅಮೆರಿಕದ ಅತ್ಯುನ್ನತ ಗೌರವ ಇದು.

2008: ಆರ್ಬಿಐ ಹಾಗೂ ಕೇಂದ್ರ ಹಣಕಾಸು ಸಚಿವರ ತಕ್ಷಣದ ಕ್ರಮಗಳು ಹಾಗೂ ನಿರೀಕ್ಷೆ ಮೀರಿ ಹಣದುಬ್ಬರದ ಕುಸಿತ ಹಣಹೂಡಿಕೆದಾರರಲ್ಲಿ ವಿಶ್ವಾಸ ಮರಳಿಸುವುದು ಸಾಧ್ಯವಾಗದೆ, ಮುಂದುವರೆದ ತೀವ್ರ ಮಾರಾಟ ಒತ್ತಡದಿಂದಾಗಿ ಮುಂಬೈ ಷೇರು ಸಂವೇದಿ ಸೂಚ್ಯಂಕ ಸುಮಾರು 801 ಅಂಶಗಳಷ್ಟು ಕುಸಿತ ಕಂಡಿತು. ಬೆಳಗ್ಗೆ ವಹಿವಾಟು ಆರಂಭವಾದಾಗಲೇ ಸೂಚ್ಯಂಕ 1,000 ಅಂಶಗಳಷ್ಟು ಕುಸಿಯಿತು. ದಿನದ ವಹಿವಾಟು ಅಂತ್ಯವಾದಾಗ ಒಂದಷ್ಟು ನಷ್ಟವನ್ನು ತುಂಬಿಕೊಂಡ ಷೇರು ಸಂವೇದಿ ಸೂಚ್ಯಂಕ 10,527.85ರಲ್ಲಿ ಅಂತ್ಯ ಕಂಡು 800.51 ಅಂಶ ಅಥವಾ ಶೇ. 7.07ರಷ್ಟು ಕುಸಿತವನ್ನು ದಾಖಲಿಸಿತು.

2008: ಕುಖ್ಯಾತ ಅಪರಾಧಿ ಚಾರ್ಲ್ಸ್ ಶೋಭರಾಜ್, ನೇಪಾಳಿ ಮೂಲದ ತನ್ನ ಹದಿಹರೆಯದ ಪ್ರಿಯತಮೆ ನಿಹಿತಾ ಬಿಸ್ವಾಸಳನ್ನು ವಿಜಯ ದಶಮಿ ದಿನದಂದು ಮದುವೆಯಾಗಿರುವುದಾಗಿ ಭಾರತೀಯ ಮೂಲದ ಮಾಧ್ಯಮಗಳಲ್ಲಿ ಬಂದ ವರದಿಗಳನ್ನು `ವದಂತಿ' ಎಂದು ಕಠ್ಮಂಡುವಿನ ಕೇಂದ್ರ ಕಾರಾಗೃಹದ ಅಧಿಕಾರಿಗಳು ಸ್ಪಷ್ಟ ಪಡಿಸಿದರು. `ಭಾರತೀಯ ಮಾಧ್ಯಮಗಳಲ್ಲಿ ಮದುವೆಯ ಕುರಿತು ವರದಿಗಳು ಪ್ರಕಟಗೊಳ್ಳುವ ಮೊದಲು ತಮಗೆ ಈ ಮಾಹಿತಿ ಇರಲಿಲ್ಲ' ಎಂದು ಕಾರಾಗೃಹದ ಭದ್ರತೆಯ ಜವಾಬ್ದಾರಿ ಹೊಂದಿರುವ ಹಿರಿಯ ಅಧಿಕಾರಿ ಹೇಳಿದರು.

2008: ಕಾನೂನು ಸುವ್ಯವಸ್ಥೆ ಸಂಬಂಧಿತ ಸಮಸ್ಯೆಗಳಲ್ಲಿ ಷಾಮೀಲಾಗುವ ಮಹಿಳೆಯರ ಸಂಖ್ಯೆ ಹೆಚ್ಚಿದ ಹಿನ್ನೆಲೆಯಲ್ಲಿ ಮಹಿಳಾ ಪೊಲೀಸ್ ಠಾಣೆಗಳನ್ನು ತೆರೆಯಲು ಹಾಗೂ ಎಲ್ಲ ಜಿಲ್ಲೆಗಳ ಕೇಂದ್ರ ಕಚೇರಿಗಳಲ್ಲಿ ಮಹಿಳಾ ಕಮಾಂಡೋ ಘಟಕಗಳಿಗೆ ಹೆಚ್ಚಿನ ಸಂಖ್ಯೆಯಲ್ಲಿ ಮಹಿಳೆಯರನ್ನು ನೇಮಿಸಲು ಮಣಿಪುರ ಸರ್ಕಾರ ನಿರ್ಧರಿಸಿತು. ಪೊಲೀಸ್ ಇಲಾಖೆಗೆ ಹೆಚ್ಚಿನ ಸಂಖ್ಯೆಯಲ್ಲಿ ಮಹಿಳೆಯರನ್ನು ನೇಮಕ ಮಾಡಿಕೊಳ್ಳಲಾಗುವುದು. ಇದಕ್ಕಾಗಿ ಕೇಂದ್ರದ 2008-09ರ ಸಾಲಿನ ವಿಶೇಷ ಯೋಜನಾ ನೆರವು ಕಾರ್ಯಕ್ರಮದಲ್ಲಿ ಹಣ ನಿಗದಿ ಪಡಿಸಲಾಗಿದೆ ಎಂದು ಅಧಿಕೃತ ಮೂಲಗಳು ತಿಳಿಸಿದವು. ಈ ಮಹಿಳಾ ಕಮಾಂಡೋಗಳು ಉಗ್ರಗಾಮಿಗಳನ್ನೂ ನಿಭಾಯಿಸಬಲ್ಲ ಸಾಮರ್ಥ್ಯ ಹೊಂದಿರುತ್ತಾರೆ ಎಂದು ಮೂಲಗಳು ಹೇಳಿದವು. ಕಾನೂನು ಸುವ್ಯವಸ್ಥೆ ಸಮಸ್ಯೆಗಳಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಮಹಿಳೆಯರು ಪಾಲ್ಗೊಳ್ಳುತ್ತಿರುವ ಹಿನ್ನೆಲೆಯಲ್ಲಿ ಈ ನಿರ್ಧಾರ ಕೈಗೊಳ್ಳಲಾಗಿದೆ ಎಂದು ಮೂಲಗಳು ಸ್ಪಷ್ಟ ಪಡಿಸಿದವು.

2008: ಟಿಬೆಟಿಯನ್ನರ ಆಧ್ಯಾತ್ಮಿಕ ನಾಯಕ ದಲಾಯಿ ಲಾಮಾ ಅವರಿಗೆ ನವದೆಹಲಿಯ ಸರ್ ಗಂಗಾರಾಮ್ ಆಸ್ಪತ್ರೆಯಲ್ಲಿ ಪಿತ್ತಕೋಶ ಸರ್ಜರಿ ನಡೆಸಲಾಯಿತು. ನೊಬೆಲ್ ಪುರಸ್ಕೃತರಾದ 73 ವರ್ಷದ ದಲಾಯಿ ಲಾಮಾ ಅವರನ್ನು ಕಿಬ್ಬೊಟ್ಟೆಯಲ್ಲಿ ತೀವ್ರ ನೋವು ಕಾಣಿಸಿಕೊಂಡ ಹಿನ್ನೆಲೆಯಲ್ಲಿ ಆಸ್ಪತ್ರೆಗೆ ದಾಖಲು ಮಾಡಲಾಗಿತ್ತು.

2008: ಕೊಸೊವೊದಿಂದ ಇಂಡೋನೇಷ್ಯಾದವರೆಗೆ ಹಲವಾರು ವಲಯಗಳಲ್ಲಿ ಬೇರುಬಿಟ್ಟಿರುವ ಸಂಘರ್ಷದ ವಾತಾವರಣ ತಿಳಿಗೊಳಿಸುವಲ್ಲಿ ಪ್ರಮುಖ ಪಾತ್ರ ವಹಿಸಿದ್ದ ಫಿನ್ಲೆಂಡ್ನ ಮಾಜಿ ಅಧ್ಯಕ್ಷ ಮಾರ್ಟಿ ಅಹಿಸ್ತಾರಿ (71) ಅವರು ಈ ಸಾಲಿನ ನೊಬೆಲ್ ಶಾಂತಿ ಪುರಸ್ಕಾರಕ್ಕೆ ಆಯ್ಕೆಯಾದರು. ಸುಮಾರು ಮೂರು ದಶಕಕ್ಕೂ ಹೆಚ್ಚಿನ ಸಮಯದಿಂದ ಹಲವಾರು ಖಂಡಗಳಲ್ಲಿ ಅಂತಾರಾಷ್ಟ್ರೀಯ ಸಂಘರ್ಷಗಳನ್ನು ಪರಿಹರಿಸಲು ಅವರು ಪಟ್ಟಿರುವ ಶ್ರಮ ಅಪಾರ ಎಂದು ನಾರ್ವೆ ನೊಬೆಲ್ ಸಮಿತಿಯ ಮುಖ್ಯಸ್ಥ ಓಲೆ ಡ್ಯಾನ್ ಬೋಲ್ಟ್ ಮೊಯೇಸ್ ಹೇಳಿದರು. ಮಾರ್ಟಿ ಅವರ ಈ ಶ್ರಮವು ವಿವಿಧ ರಾಷ್ಟ್ರಗಳ ಮಧ್ಯೆ ಭ್ರಾತೃತ್ವ ನಿರ್ಮಿಸಿ ಶಾಂತಿಗೆ ಕಾರಣವಾಗಿದ್ದು ಅಲ್ಫ್ರೆಡ್ ನೊಬೆಲ್ಲರ ಆಶಯಕ್ಕೆ ಅನುಗುಣವಾಗಿದೆ ಎಂದೂ ಹೇಳಿದರು.

2007: ಅವಿಭಜಿತ ಜನತಾ ಪರಿವಾರದ ಹಿರಿಯ ಮುಖಂಡ ಹಾಗೂ ಮಾಜಿ ಮುಖ್ಯಮಂತ್ರಿ ಸೋಮಪ್ಪ ರಾಯಪ್ಪ ಬೊಮ್ಮಾಯಿ (84) ಅವರು ಈದಿನ ಬೆಂಗಳೂರಿನಲ್ಲಿ ನಿಧನರಾದರು. ಕೆಲ ಕಾಲದಿಂದ ಅಸ್ವಸ್ಥರಾಗಿ ವೊಕ್ಹಾರ್ಡ್ ಆಸ್ಪತ್ರೆಗೆ ದಾಖಲಾಗಿದ್ದ ಇವರು ರಾತ್ರಿ 8.45ರ ವೇಳೆಗೆ ಕೊನೆಯುಸಿರೆಳೆದರು. ಸವಣೂರು ತಾಲೂಕಿನ ಕಾರಡಗಿ ಗ್ರಾಮದಲ್ಲಿ 1924ರ ಜೂನ್ ಆರರಂದು ರಾಯಪ್ಪ ಹಾಗೂ ಶಿವಮ್ಮ ದಂಪತಿಗಳ ಪುತ್ರನಾಗಿ ಜನಿಸಿದ ಬೊಮ್ಮಾಯಿ, 1988ರಲ್ಲಿ 10 ತಿಂಗಳ ಕಾಲ ರಾಜ್ಯದ ಮುಖ್ಯಮಂತ್ರಿಯಾಗಿ, 1996ರಲ್ಲಿ ಕೇಂದ್ರ ಮಾನವ ಸಂಪನ್ಮೂಲ ಇಲಾಖೆ ಸಚಿವರಾಗಿ ಸೇವೆ ಸಲ್ಲಿಸಿದ್ದರು. ಸ್ವಂತ ಊರಾದ ಕುಂದಗೋಳ ತಾಲೂಕಿನ ಕಮಡೊಳ್ಳಿ ಗ್ರಾಮದಲ್ಲಿ ಏಳನೇ ತರಗತಿವರೆಗೆ ವಿದ್ಯಾಭ್ಯಾಸ ಪಡೆದ ಬೊಮ್ಮಾಯಿ ಅವರಿಗೆ ಅವರ ತಾಯಿ ಪರ ಊರಿನಿಂದ ಬರುತ್ತಿದ್ದ ಬಡ ಮಕ್ಕಳಿಗೆ ನೀಡುತ್ತಿದ್ದ ಮಧ್ಯಾಹ್ನದ ಊಟವೇ ಸಮಾಜವಾದದ ಮೊದಲ ಪಾಠವಾಗಿ ಪರಿಣಮಿಸಿತು. ಕಾನೂನು ವ್ಯಾಸಂಗ ಮಾಡುವಾಗ ಎಡಪಂಥೀಯ ವಿಚಾರಗಳಿಗೆ ಮನಸೋತು ಪಶ್ಚಿಮ ಬಂಗಾಳದ ಎಂ.ಎನ್. ರಾಯ್ ಅವರ ರ್ಯಾಡಿಕಲ್ ಹ್ಯೂಮನಿಸ್ಟ್ ಪಕ್ಷಕ್ಕೆ ಸೇರಿದ್ದ ಬೊಮ್ಮಾಯಿ, ಹುಬ್ಬಳ್ಳಿಯಲ್ಲಿ ಕ್ರಾಂತಿಕಾರಿ ಮುರುಗೋಡು ಮಹದೇವಪ್ಪ ನೇತೃತ್ವದಲ್ಲಿ ಸ್ವಾತಂತ್ರ್ಯ ಚಳವಳಿಯಲ್ಲಿ ಪಾಲ್ಗೊಂಡರು. ಇದೇ ಕಾರಣದಿಂದ ಬ್ರಿಟಿಷರು ಬಂಧನ ವಾರೆಂಟ್ ಹೊರಡಿಸಿದಾಗ, ಕಣ್ಣು ತಪ್ಪಿಸಿ ಕೆಲ ಕಾಲ ದೇಶ ಪರ್ಯಟನೆ ಮಾಡಿದರು. ಈ ಸಂದರ್ಭದಲ್ಲೇ ಸುಭಾಶ್ ಚಂದ್ರ ಬೋಸರನ್ನು ಹುಬ್ಬಳ್ಳಿಗೆ ಆಹ್ವಾನಿಸಿ ಬಹಿರಂಗ ಸಭೆ ಏರ್ಪಡಿಸಿದ್ದರು. ಕಾನೂನು ವ್ಯಾಸಂಗ ಮುಗಿಸಿದ ನಂತರ ಗೋವಾ ವಿಮೋಚನ ಚಳವಳಿ, ಕರ್ನಾಟಕ ಏಕೀಕರಣ ಹೋರಾಟದಲ್ಲಿ ಮುಂಚೂಣಿ ಪಾತ್ರ ವಹಿಸಿ, ಬಂಧಿತರ ಪರ ವಕಾಲತ್ತು ಸಹ ಮಾಡಿದ್ದರು. 1967ರಲ್ಲಿ ಕುಂದಗೋಳ ಕ್ಷೇತ್ರದಿಂದ ಲೋಕಸೇವಕ ಸಂಘದಿಂದ ಸ್ಪರ್ಧಿಸಿ ವಿಧಾನಸಭೆ ಪ್ರವೇಶಿಸಿದರು. 69ರಲ್ಲಿ ಅಂದಿನ ಮುಖ್ಯಮಂತ್ರಿ ವೀರೇಂದ್ರ ಪಾಟೀಲರ ಒತ್ತಡದಿಂದ ಕಾಂಗ್ರೆಸ್ ಸೇರಿದರು. ಕಾಂಗ್ರೆಸ್ ವಿಭಜನೆಯಾದಾಗ ವೀರೇಂದ್ರ ಪಾಟೀಲರ ಸಂಸ್ಥಾ ಕಾಂಗ್ರೆಸ್ ಜೊತೆ ಸೇರಿದರು. 1971ರಲ್ಲಿ ಕುಂದಗೋಳದಿಂದ ಸ್ಪರ್ಧಿಸಿ ಸೋತು, 1972ರಲ್ಲಿ ಸ್ಥಳೀಯ ಸಂಸ್ಥೆಗಳ ಮೂಲಕ ವಿಧಾನಪರಿಷತ್ತಿಗೆ ಆಯ್ಕೆಯಾದರು. 75ರಿಂದ ಪರಿಷತ್ತಿನ ವಿರೋಧ ಪಕ್ಷದ ನಾಯಕರಾಗಿ ಕೆಲಸ ಮಾಡಿದರು. ತುರ್ತುಪರಿಸ್ಥಿತಿಯ ವಿರುದ್ಧ ಹೋರಾಟ ಮಾಡಿ ಕೆಲ ಕಾಲ ಭೂಗತರಾಗಿದ್ದರು. 1977ರಲ್ಲಿ ರಾಜ್ಯ ಜನತಾಪಕ್ಷದ ಉಪಾಧ್ಯಕ್ಷರಾದರು. 1978ರಲ್ಲಿ ಹೃದಯಾಘಾತದಿಂದ ಬೆಂಗಳೂರಿನ ವಿಕ್ಟೋರಿಯಾ ಆಸ್ಪತ್ರೆಗೆ ದಾಖಲಾದರೂ ಅಲ್ಲಿಂದಲೇ ಹುಬ್ಬಳ್ಳಿ ಗ್ರಾಮೀಣ ಕ್ಷೇತ್ರದ ಅಭ್ಯರ್ಥಿಯಾಗಿ ವಿಧಾನಸಭೆಗೆ ಸ್ಪರ್ಧಿಸಿ ಜಯಗಳಿಸಿ, ವಿರೋಧ ಪಕ್ಷದ ನಾಯಕರಾಗಿ ಕಾರ್ಯ ನಿರ್ವಹಿಸಿದರು. 1980ರಲ್ಲಿ ನವಲಗುಂದ, ನರಗುಂದ ರೈತರ ಹೋರಾಟದ ಮುಂಚೂಣಿಯಲ್ಲಿದ್ದ ಬೊಮ್ಮಾಯಿ, ಮಲಪ್ರಭಾ ವ್ಯಾಪ್ತಿಯ ರೈತರಿಗೆ ನೀರಾವರಿ ಕರ, ಭೂಕಂದಾಯ ಮತ್ತಿತರ ತೆರಿಗೆ ಮನ್ನಾ ಮಾಡಿಸುವಲ್ಲಿ ಯಶಸ್ವಿಯಾದರು. 1980ರಲ್ಲಿ ಜನತಾಪಕ್ಷದ ರಾಜ್ಯ ಘಟಕದ ಅಧ್ಯಕ್ಷರಾಗಿ ನೇಮಕ, ಕಾಂಗ್ರೆಸ್ಸೇತರ ಸರ್ಕಾರ ರಚಿಸಲು ಕ್ರಾಂತಿರಂಗದ ಜೊತೆ ಸೇರಿ ಜನತಾರಂಗ ರಚನೆ ಮಾಡಲು ಯತ್ನ. ಫಲವಾಗಿ 1983ರಲ್ಲಿ ನಡೆದ ಚುನಾವಣೆಯಲ್ಲಿ ಜನತಾರಂಗಕ್ಕೆ ಗೆಲುವು ದೊರೆತು ರಾಮಕೃಷ್ಣ ಹೆಗಡೆ ಮುಖ್ಯಮಂತ್ರಿಯಾದರು. ಹೆಗಡೆ ಸಂಪುಟದಲ್ಲಿ ಕೈಗಾರಿಕೆ ಸಚಿವ. ಇವರ ಚಿಂತನೆಯ ಫಲವಾಗಿ ಎಲೆಕ್ಟ್ರಾನಿಕ್ ಸಿಟಿ ಆರಂಭ. ರಾಜ್ಯದಪ್ರಥಮ ಐಟಿ ಕಂಪನಿ ಟೆಕ್ಸಾಸ್ ಇನ್ ಸ್ಟ್ರೂಮೆಂಟ್ ಸ್ಥಾಪನೆಗೆ ಸಾಕಷ್ಟು ಪ್ರೋತ್ಸಾಹ. 1984ರಲ್ಲಿ ಹಣಕಾಸು ಸಚಿವ. 1985ರಲ್ಲಿ ವಿಧಾನಸಭೆಗೆ ಪುನರಾಯ್ಕೆಯಾಗಿ ಕಂದಾಯ ಸಚಿವರಾಗಿ ಅಧಿಕಾರ ಸ್ವೀಕಾರ. ಇದೇ ಅವಧಿಯಲ್ಲಿ ನಾಡಕಚೇರಿ ಸ್ಥಾಪನೆ ಮತ್ತು ಬೆಂಗಳೂರು ನಗರ ಜಿಲ್ಲೆ ಸ್ಥಾಪಿಸುವ ಜೊತೆಗೆ ಜಿಲ್ಲಾ ಪುನರ್ ವಿಂಗಡಣೆಗೆ ಚಾಲನೆ ನೀಡಿದರು. 1988ರಲ್ಲಿ ಕರ್ನಾಟಕ ರಾಜ್ಯದ ಮುಖ್ಯಮಂತ್ರಿಯಾಗಿ ಆಯ್ಕೆ. ಜನತಾದಳ ಸ್ಥಾಪನೆಯಲ್ಲಿ ಪ್ರಮುಖ ಪಾತ್ರ ವಹಿಸಿದರು. ಆದರೆ ಮುಖ್ಯಮಂತ್ರಿ ಪದವಿ ಬಹುಕಾಲ ಉಳಿಯಲಿಲ್ಲ. ಆಗಿನ ರಾಜ್ಯಪಾಲ ವೆಂಕಟಸುಬ್ಬಯ್ಯ ಬೊಮ್ಮಾಯಿ ನೇತೃತ್ವದ ಸರ್ಕಾರವನ್ನು ಕಿತ್ತುಹಾಕಿದರು. ಸಂವಿಧಾನ ವಿರೋಧಿ ಕ್ರಮವನ್ನು ಪ್ರಶ್ನಿಸಿ ನ್ಯಾಯಕ್ಕಾಗಿ ಸುಪ್ರೀಂಕೋರ್ಟಿನವರೆಗೂ ಹೋರಾಟ. ಫಲವಾಗಿ ಬೊಮ್ಮಾಯಿ ಪರವಾಗಿ ಸುಪ್ರೀಂಕೋರ್ಟ್ ತೀರ್ಪು ನೀಡಿತು. ಸರ್ಕಾರದ ಬಹುಮತ ಪರೀಕ್ಷೆಗೆ ವಿಧಾನಸಭೆಯೇ ವೇದಿಕೆಯಾಗಬೇಕು ಎನ್ನುವ ಈ ಐತಿಹಾಸಿಕ ತೀರ್ಪು 'ಬೊಮ್ಮಾಯಿ ಪ್ರಕರಣ' ಎಂದೇ ಖ್ಯಾತಿ ಪಡೆದು, ಮಹತ್ವದ ತೀರ್ಪಾಗಿ ಉಳಿಯಿತು. 1990ರಲ್ಲಿ ಜನತಾದಳದ ರಾಷ್ಟ್ರೀಯ ಅಧ್ಯಕ್ಷತೆ. ಇವರು ಅಧ್ಯಕ್ಷರಾಗಿದ್ದಾಗಲೇ ಜನತಾದಳ ಉತ್ತರ ಪ್ರದೇಶ, ಗುಜರಾತ್, ಒರಿಸ್ಸಾ, ಬಿಹಾರ ಹಾಗೂ ಹರಿಯಾಣಗಳಲ್ಲಿ ಅಧಿಕಾರ ಹಿಡಿಯಿತು. 1992ರಲ್ಲಿ ಒರಿಸ್ಸಾದಿಂದ ರಾಜ್ಯಸಭೆಗೆ ಆಯ್ಕೆ. 1996ರಲ್ಲಿ ಜನತಾದಳ ಕೇಂದ್ರದಲ್ಲಿ ಅಧಿಕಾರ ಹಿಡಿದಾಗ ಮಾನವ ಸಂಪನ್ಮೂಲ ಖಾತೆ ಸಚಿವರಾಗಿ ಅಧಿಕಾರ ದೊರಕಿತು. ಈ ಅವದಿಯಲ್ಲಿ ರಾಜ್ಯದ ವಿಶ್ವವಿದ್ಯಾಲಯಗಳು ಸಾಕಷ್ಟು ಅನುದಾನ ಪಡೆದರೆ, ಹೈದರಾಬಾದಿನಲ್ಲಿ ಮೌಲಾನ ಅಬ್ದುಲ್ ಕಲಾಂ ವಿಶ್ವವಿದ್ಯಾಲಯ ಹಾಗೂ ಇಂದೋರಿನಲ್ಲಿ ಐಐಎಂ ಸ್ಥಾಪನೆಯಾಯಿತು. 1998ರಲ್ಲಿ ಕರ್ನಾಟಕದಿಂದ ರಾಜ್ಯಸಭೆಗೆ ಪುನರಾಯ್ಕೆ. ಜನತಾದಳ ವಿಭಜನೆ ಬಳಿಕ 2002ರಲ್ಲಿ ಎರಡನೇ ಸಾಲಿನ ಮುಖಂಡರು ರಚಿಸಿದ ಅಖಿಲ ಭಾರತ ಪ್ರಗತಿಪರ ಜನತಾದಳದ ಅಧ್ಯಕ್ಷ. 2004ರಲ್ಲಿ ರಾಜ್ಯಸಭೆ ಸದಸ್ಯತ್ವದಿಂದ ನಿವೃತ್ತಿ. ಸಕ್ರಿಯ ರಾಜಕಾರಣದಿಂದ ದೂರ.

2007: ಭಾರತ ಹಾಗೂ ವಿಯೆಟ್ನಾಂ ದೇಶಗಳ ನಡುವಿನ ಮೈತ್ರಿಯನ್ನು ಮತ್ತಷ್ಟು ಗಟ್ಟಿಗೊಳಿಸುವ ಸಂಕೇತವಾಗಿ ಭಾರತದ ಮಾಜಿ ಪ್ರಧಾನಿ ದಿವಂಗತ ಇಂದಿರಾ ಗಾಂಧಿಯವರ ಪ್ರತಿಮೆಯನ್ನು ವಿಯೆಟ್ನಾಮಿನ ಹನೋಯಿಯಲ್ಲಿ ಇಂದಿರಾಗಾಂಧಿ ಅವರದೇ ಹೆಸರಿನ ಉದ್ಯಾನದಲ್ಲಿ ಸ್ಥಾಪಿಸಲಾಯಿತು. ಹನೋಯ್ ಪೀಪಲ್ಸ್ ಕಮಿಟಿ ಉಪಾಧ್ಯಕ್ಷ ಥಾಯ್ ಥನ್ಹಾ ಹಂಗ್ ಪ್ರತಿಮೆ ಅನಾವರಣಗೊಳಿಸಿದರು.

2007: ಜರ್ಮನಿಯ ಗೇರ್ ಹಾರ್ಡ್ ಎರ್ತಾಲ್ ಅವರು ರಸಾಯನ ಶಾಸ್ತ್ರ ವಿಭಾಗದಲ್ಲಿ 2007ರ ಪ್ರತಿಷ್ಠಿತ ನೊಬೆಲ್ ಪ್ರಶಸ್ತಿಗೆ ಆಯ್ಕೆಯಾದರು. `ಓಜೋನ್ ಪದರ ತೆಳುವಾಗುತ್ತಿರುವ' ಕುರಿತು ಮಾಡಿದ ಸಂಶೋಧನೆಗೆ ಈ ಪ್ರಶಸ್ತಿ ಲಭ್ಯವಾಯಿತು.

2007: ಗುಜರಾತ್ ಮತ್ತು ಹಿಮಾಚಲ ಪ್ರದೇಶ ರಾಜ್ಯಗಳ ವಿಧಾನಸಭೆಗಳಿಗೆ ಎರಡು ಹಂತದ ಚುನಾವಣೆಯನ್ನು ಚುನಾವಣಾ ಆಯೋಗ ಪ್ರಕಟಿಸಿತು. ಗುಜರಾತಿನಲ್ಲಿ ಡಿಸೆಂಬರ್ 11 ಮತ್ತು 16ರಂದು ಹಾಗೂ ಹಿಮಾಚಲ ಪ್ರದೇಶದಲ್ಲಿ ನವೆಂಬರ್ 11 ಮತ್ತು ಡಿಸೆಂಬರ್ 19ರಂದು ಚುನಾವಣೆ ನಡೆಯುವುದು ಎಂದು ಮುಖ್ಯ ಚುನಾವಣಾ ಆಯುಕ್ತರು ಪ್ರಕಟಿಸಿದರು.

2007: ಸ್ತನ ಕ್ಯಾನ್ಸರಿಗೂ, ತಾಯಿಯ ನಿತಂಬಕ್ಕೂ (ಪೃಷ್ಠ) ಸಂಬಂಧ ಇದೆ ಎಂದು ಬ್ರಿಟನ್ನಿನ ವಿಜ್ಞಾನಿಗಳು ಇಂಗ್ಲೆಂಡಿನಲ್ಲಿ ಪ್ರಕಟಿಸಿದರು. ತಾಯಿಯ ಪೃಷ್ಠ ದೊಡ್ಡದಾಗಿ, ಹೆಚ್ಚು ವೃತ್ತಾಕಾರವಾಗಿದ್ದರೆ ಸ್ತನ ಕ್ಯಾನ್ಸರ್ ಬರುವ ಸಾಧ್ಯತೆ ಏಳು ಪಟ್ಟು ಹೆಚ್ಚು ಎಂದು `ಡೈಲಿ ಮೇಲ್' ಪತ್ರಿಕೆ ಈ ವಿಜ್ಞಾನಿಗಳ ಸಂಶೋಧನೆಯನ್ನು ಉದ್ಧರಿಸಿ ವರದಿ ಮಾಡಿತು. ತಾಯಿಯ ನಿತಂಬ ಆಕೆಯಲ್ಲಿರುವ ಓಸ್ಟ್ರೋಜನ್ ಹಾರ್ಮೋನಿನ ಉತ್ಪತ್ತಿಯ ಗುರುತು. ದೊಡ್ಡ ಪೃಷ್ಠವೆಂದರೆ ಕಾಮೋತ್ತೇಜಕ ಹಾರ್ಮೋನುಗಳ ಸಂಗ್ರಹ ಹೆಚ್ಚಿದೆ ಎಂದರ್ಥ. ಇದರಿಂದ ಆಕೆಯ ಮಗಳಲ್ಲಿ ಸ್ತನ ಕ್ಯಾನ್ಸರ್ ಕಂಡುಬರುವ ಸಾಧ್ಯತೆ ಅಧಿಕ ಎಂದು ವಿಜ್ಞಾನಿ ಪ್ರೊ. ಡೇವಿಡ್ ಬಾರ್ಕರ್ ಹೇಳಿದರು. 1934ರಿಂದ 1944ರ ನಡುವೆ ಜನಿಸಿದ ಫಿನ್ಲೆಂಡಿನ ಆರು ಸಾವಿರಕ್ಕೂ ಹೆಚ್ಚು ಮಹಿಳೆಯರ ಅಧ್ಯಯನ ನಡೆಸಿ ವಿಜ್ಞಾನಿಗಳು ಈ ತೀರ್ಮಾನಕ್ಕೆ ಬಂದರು. ತಾಯಿಯ ಪೃಷ್ಠದ ಗಾತ್ರ 30 ಸೆ.ಮೀ.ಗೂ ಹೆಚ್ಚಿದ್ದರೆ ಮಗಳಲ್ಲಿ ಬರುವ ಸ್ತನ ಕ್ಯಾನ್ಸರಿನ ಪ್ರಮಾಣ ಶೇಕಡ 60ಕ್ಕೂ ಹೆಚ್ಚಿತ್ತು ಎಂಬುದು ಅವರ ಸಂಶೋಧನೆಯ ವಿವರಣೆ.

2007: ದಿನಕ್ಕೊಂದು ಕಿತ್ತಳೆ ಹಣ್ಣು ತಿನ್ನುವುದರಿಂದ ಮುಖ ಸುಕ್ಕುಗಟ್ಟುವುದನ್ನು ನಿಯಂತ್ರಿಸಬಹುದು ಎಂದು ಅಮೆರಿಕದ ವಿಜ್ಞಾನಿಗಳು ಪ್ರಕಟಿಸಿದರು. ಕಿತ್ತಳೆಯಲ್ಲಿ ಇರುವ ವಿಟಮಿನ್ ಸಿ ಚರ್ಮ ನೆರಿಗೆಗಟ್ಟುವುದನ್ನು ತಡೆಯುತ್ತದೆ ಎಂದು ಅವರು ತಿಳಿಸಿದರು.

2006: ಭಾರತವೂ ಸೇರಿದಂತೆ ಸುಮಾರು 150 ರಾಷ್ಟ್ರಗಳ 24,000 ವಿದ್ಯಾರ್ಥಿಗಳು ವ್ಯಾಸಂಗ ಮಾಡುತ್ತಿರುವ ಲಂಡನ್ನಿನ ಪ್ರತಿಷ್ಠಿತ ವೆಸ್ಟ್ ಮಿನ್ ಸ್ಟರ್ ವಿಶ್ವವಿದ್ಯಾಲಯದ ಕುಲಪತಿಯಾಗಿ ಅನಿವಾಸಿ ಭಾರತೀಯ ಲಾರ್ಡ್ ಸ್ವರಾಜ್ ಪಾಲ್ ಅಧಿಕಾರ ವಹಿಸಿಕೊಂಡರು. ಈ ವಿಶ್ವವಿದ್ಯಾಲಯ 1838ರಲ್ಲಿ ಸ್ಥಾಪನೆಗೊಂಡಿದೆ. ವೋಲ್ವರ್ಹಾಂಪ್ಟನ್ ವಿಶ್ವವಿದ್ಯಾಲಯದ ಕುಲಪತಿಯೂ ಆಗಿರುವ ಸ್ವರಾಜ್ ಪಾಲ್ ಏಕಕಾಲದಲ್ಲಿ ಎರಡು ವಿಶ್ವವಿದ್ಯಾಲಯಗಳ ಕುಲಪತಿಯಾದ ಮೊದಲ ವ್ಯಕ್ತಿ ಎಂಬ ಹೆಗ್ಗಳಿಕೆಗೆ ಪಾತ್ರರಾದರು.

2006: ರಕ್ಷಣಾ ಹಗರಣವನ್ನು ತೆಹೆಲ್ಕಾ ಬಹಿರಂಗಪಡಿಸಿದ ಐದು ವರ್ಷಗಳ ಬಳಿಕ ಮಾಜಿ ರಕ್ಷಣಾ ಸಚಿವ ಜಾರ್ಜ್ ಫರ್ನಾಂಡಿಸ್, ಸಮತಾ ಪಕ್ಷದ ಮಾಜಿ ಅಧ್ಯಕ್ಷೆ ಜಯಾ ಜೇಟ್ಲಿ, ಪಕ್ಷದ ಮಾಜಿ ಖಜಾಂಚಿ ಆರ್.ಕೆ. ಜೈನ್ ಹಾಗೂ ನೌಕಾದಳದ ಮಾಜಿ ಮುಖ್ಯಸ್ಥ ಅಡ್ಮಿರಲ್ ಸುಶೀಲ್ ಕುಮಾರ್ ಅವರ ವಿರುದ್ಧ ನಿಯೋಜಿತ ನ್ಯಾಯಾಲಯದಲ್ಲಿ ಸಿಬಿಐ ಪ್ರಥಮ ಮಾಹಿತಿ ವರದಿ (ಎಫ್ ಐಆರ್) ದಾಖಲಿಸಿತು. ಜಾರ್ಜ್, ಜಯಾ ಹಾಗೂ ಜೈನ್ ವಿರುದ್ಧ 2 ಕೋಟಿ ರೂಪಾಯಿಗೂ ಅಧಿಕ ಲಂಚ ಸ್ವೀಕರಿಸಿದ ಆರೋಪ ಮತ್ತು ಸುಶೀಲ್ ಕುಮಾರ್ ವಿರುದ್ಧ 2000 ದಲ್ಲಿ ಇಸ್ರೇಲಿನಿಂದ ಬರಾಕ್ ಕ್ಷಿಪಣಿ ಖರೀದಿಸುವಾಗ ಅವ್ಯವಹಾರ ನಡೆಸಿದ ಆರೋಪಕ್ಕಾಗಿ ಎಫ್ ಐ ಆರ್ ದಾಖಲಿಸಲಾಯಿತು. ಬರಾಕ್ ಕ್ಷಿಪಣಿ ವ್ಯವಸ್ಥೆಯ ಖರೀದಿ ಸೇರಿದಂತೆ ಹಲವಾರು ಶಸ್ತ್ರಾಸ್ತ್ರ ಖರೀದಿಯಲ್ಲಿ ಭ್ರಷ್ಟಾಚಾರ ನಡೆದಿದೆ ಎಂಬುದು 2001ರಲ್ಲಿ ತೆಹೆಲ್ಕಾ ಡಾಟ್ ಕಾಮ್ ವೆಬ್ಸೈಟ್ ನಡೆಸಿದ ಕುಟುಕು ಕಾರ್ಯಾಚರಣೆಯಲ್ಲಿ `ಬಹಿರಂಗ'ಗೊಂಡಿತ್ತು.

2006: ಭಾರತೀಯ ಸಂಜಾತೆ ಯುವ ಲೇಖಕಿ, ಅಮೆರಿಕದ ಕೊಲಂಬಿಯ ವಿಶ್ವವಿದ್ಯಾಲಯದ ವಿದ್ಯಾರ್ಥಿನಿ 35 ವರ್ಷ ವಯಸ್ಸಿನ ಕಿರಣ ದೇಸಾಯಿ ಅವರ `ದಿ ಇನ್ ಹೆರಿಟೆನ್ಸ್ ಆಫ್ ಲಾಸ್' ಕಾದಂಬರಿಗೆ ಪ್ರಸಕ್ತ ಸಾಲಿನ ಪ್ರತಿಷ್ಠಿತ ಬೂಕರ್ ಪ್ರಶಸ್ತಿ ಲಭಿಸಿತು. ಕಿರಣ ದೇಸಾಯಿ ಈ ಪ್ರಶಸ್ತಿ ಪಡೆದ ಎರಡನೇ ಅತ್ಯಂತ ಕಿರಿಯ ಲೇಖಕಿ ಎಂಬ ಹೆಗ್ಗಳಿಕೆಗೆ ಪಾತ್ರರಾದರು. ತಮ್ಮ ಎರಡನೇ ಕಾದಂಬರಿಗೆ ಪ್ರಶಸ್ತಿ ಪಡೆದಿರುವ ಕಿರಣ 50 ಸಾವಿರ ಪೌಂಡುಗಳ ಬಹುಮಾನ ಪಡೆದರು. ಕಿರಣ ದೇಸಾಯಿ ಖ್ಯಾತ ಕಾದಂಬರಿಗಾರ್ತಿ ಅನಿತಾ ದೇಸಾಯಿ ಅವರ ಮಗಳು. ಅನಿತಾ ದೇಸಾಯಿ ಅವರ ಕಾದಂಬರಿಗಳು ಮೂರು ಬಾರಿ ಬೂಕರ್ ಪ್ರಶಸ್ತಿಗೆ ನಾಮಕರಣಗೊಂಡಿದ್ದರೂ ಅವರಿಗೆ ಪ್ರಶಸ್ತಿ ಒಲಿದಿರಲಿಲ್ಲ. 1997ರಲ್ಲಿ ಆರುಂಧತಿ ರಾಯ್ ಈ ಪ್ರಶಸ್ತಿ ಪಡೆದ ಮೊದಲ ಭಾರತೀಯ ಲೇಖಕಿ ಎನಿಸಿಕೊಂಡಿದ್ದರು. 1991ರಲ್ಲಿ ಬೆನ್ ಒಕ್ರಿ ತಮ್ಮ 32ನೇ ವಯಸ್ಸಿನ್ಲಲಿ ಬೂಕರ್ ಪ್ರಶಸ್ತಿ ಪಡೆದಿದ್ದರು. ಅವರನ್ನು ಬಿಟ್ಟರೆ ಬೂಕರ್ ಮಡಿಲಿಗೆ ಹಾಕಿಕೊಂಡ ಅತ್ಯಂತ ಕಿರಿಯ ಲೇಖಕಿ ಕಿರಣ ದೇಸಾಯಿ. ಅಮ್ಮನಿಗೆ ಸಮರ್ಪಿಸಿದ್ದ ಈ ಕಾದಂಬರಿಯನ್ನು ಬರೆಯಲು ಕಿರಣ ಎಂಟು ವರ್ಷ ತೆಗೆದುಕೊಂಡಿದ್ದರು.

2006: ಮುಂಚೂಣಿಯ ಹೋಟೆಲ್ ಉದ್ಯಮಿ, ರಾಜ್ಯಸಭಾ ಸದಸ್ಯ ಲಲಿತ್ ಸೂರಿ(60) ಅವರು ಹೃದಯಾಘಾತದಿಂದ ಲಂಡನ್ನಿನಲ್ಲಿ ನಿಧನರಾದರು. ಆಟೋಮೊಬೈಲ್ ಎಂಜಿನಿಯರ್ ಆಗಿದ್ದ ಸೂರಿ 1947ರಲ್ಲಿ ಈಗಿನ ಪಾಕಿಸ್ಥಾನದ ರಾವಲ್ಪಿಂಡಿಯಲ್ಲಿ ಜನಿಸಿದ್ದರು.

2006: ಮನೆಗೆಲಸ, ಹೋಟೆಲ್, ಚಹಾದಂಗಡಿ, ಡಾಬಾ, ರೆಸಾರ್ಟ್ ಮತ್ತು ಮನರಂಜನಾ ತಾಣಗಳಲ್ಲಿ 14 ವರ್ಷಕ್ಕಿಂತ ಕಿರಿಯ ಮಕ್ಕಳನ್ನು ಕೆಲಸಕ್ಕೆ ನೇಮಕಗೊಳಿಸುವುದನ್ನು ನಿಷೇಧಿಸುವ ಬಾಲ ಕಾರ್ಮಿಕ ಕಾನೂನು ಜಾರಿಗೊಂಡಿತು. ಕಾಯ್ದೆ ಉಲ್ಲಂಘಿಸಿದವರಿಗೆ ಒಂದು ವರ್ಷದ ಜೈಲು ಶಿಕ್ಷೆ ಸೇರಿದಂತೆ ವಿವಿಧ ದಂಡನೆ ವಿಧಿಸುವ ಪ್ರಸ್ತಾವನೆಯುಳ್ಳ ಅಧಿಸೂಚನೆಂಯನ್ನು ಕಾರ್ಮಿಕ ಸಚಿವಾಲಯ ಹೊರಡಿಸಿತು.

2000: ಜಗತ್ತಿನ ಮೊತ್ತ ಮೊದಲ `ಮಹಿಳಾ ಪ್ರಧಾನಿ' ಸಿಲೋನಿನ (ಈಗಿನ ಶ್ರೀಲಂಕಾ) ಸಿರಿಮಾವೋ ಬಂಡಾರನಾಯಿಕೆ ತಮ್ಮ 84ನೇ ವಯಸಿನಲ್ಲಿ ಮೃತರಾದರು. ಸಿರಿಮಾವೋ ಅವರು ಶ್ರೀಲಂಕಾ ಅಧ್ಯಕ್ಷೆ ಚಂದ್ರಿಕಾ ಬಂಡಾರನಾಯಿಕೆ ಕುಮಾರತುಂಗ ಅವರ ತಾಯಿ. 1994ರ ನವೆಂಬರಿನಲ್ಲಿ ಸಿರಿಮಾವೋ ಅವರು ಪುನಃ ಪ್ರಧಾನಿಯಾದಾಗ ತಾಯಿ ಮತ್ತು ಮಗಳು ರಾಷ್ಟ್ರದ ಎರಡೂ ಉನ್ನತ ಹುದ್ದೆಗಳನ್ನು (ಪ್ರಧಾನಿ ಹಾಗೂ ಆಧ್ಯಕ್ಷಸ್ಥಾನ) ಹೊಂದಿದ ವಿಶೇಷ ದಾಖಲೆ ನಿರ್ಮಾಣವಾಯಿತು.

1986: ಇಸ್ರೇಲ್ ಪ್ರಧಾನಿ ಶಿಮೋನ್ ಪೆರೆಸ್ ರಾಜೀನಾಮೆ.

1947: ಸಾಹಿತಿ ಶೇಷಾದ್ರಿ ಕಿನಾರೆ ಜನನ.

1937: ಸಾಹಿತಿ ಕುಸುಮ ಸೊರಬ ಜನನ.

1936: ಸಾಹಿತಿ ವಸಂತ ಕುಷ್ಟಗಿ ಜನನ.

1933: ಪ್ರಾಕ್ಟರ್ ಅಂಡ್ ಗ್ಯಾಂಬ್ಲ್ ಸಂಸ್ಥೆಯು ಮನೆ ಬಳಕೆಗಾಗಿ `ಡ್ರೆಫ್ಟ್' ಹೆಸರಿನ ಮೊತ್ತ ಮೊದಲ ಡಿಟರ್ಜೆಂಟನ್ನು ಮಾರುಕಟ್ಟೆಗೆ ಬಿಡುಗಡೆ ಮಾಡಿತು. 1920ರಲ್ಲಿಪ್ರಾಕ್ಟರ್ ಅಂಡ್ ಗ್ಯಾಂಬ್ಲ್ ಸಂಸ್ಥೆಯ ಸಂಶೋಧಕರು ಗ್ರೀಸ್ ಮತ್ತಿತರ ಕೊಳೆಗಳನ್ನು ಬಟ್ಟೆಯಿಂದ ತೆಗೆಯಲು ಸಾಧ್ಯವಿರುವಂತಹ ವಿಶೇಷವಾದ `ಪವಾಡದ ಕಣ'ಗಳನ್ನು ಸೃಷ್ಟಿಸಿದ್ದರು, ಡಿಟರ್ಜೆಂಟ್ ತಂತ್ರಜ್ಞಾನದ ಸಂಶೋಧನೆ ಶುಚೀಕರಣ ತಂತ್ರಜ್ಞಾನದಲ್ಲಿಕ್ರಾಂತಿಗೆ ನಾಂದಿ ಹಾಡಿತು.

1888: ಸಾಹಿತಿ ಸಾಲಿ ರಾಮಚಂದ್ರರಾಯ ಜನನ.

1886: `ಟುಕ್ಸೆಡೊ' ಡಿನ್ನರ್ ಜಾಕೆಟ್ ಮೊತ್ತ ಮೊದಲ ಬಾರಿಗೆ ಸಾರ್ವಜನಿಕರ ಮುಂದೆ ಪ್ರದರ್ಶನಗೊಂಡಿತು. ನ್ಯೂಯಾರ್ಕಿನ ಟುಕ್ಸೆಡೊ ಪಾರ್ಕ್ ಸೆಂಚುರಿ ಕ್ಲಬ್ಬಿನಲ್ಲಿ ಮೊತ್ತ ಮೊದಲ ಬಾರಿಗೆ ಸಾರ್ವಜನಿಕವಾಗಿ ಕಾಣಿಸಿಕೊಂಡದ್ದರಿಂದ ಅದಕ್ಕೆ ಕ್ಲಬ್ಬಿನ ಹೆಸರು ಅಂಟಿಕೊಂಡಿತು.

Wednesday, September 16, 2009

ಇಂದಿನ ಇತಿಹಾಸ History Today ಸೆಪ್ಟೆಂಬರ್ 10

ಇಂದಿನ ಇತಿಹಾಸ

ಸೆಪ್ಟೆಂಬರ್ 10


 ಸ್ವಿಜರ್ಲೆಂಡಿನ ರೋಜರ್ ಫೆಡರರ್ ನಾಗಾಲೋಟಕ್ಕೆ ತಡೆಯೊಡ್ಡಬಲ್ಲ ಟೆನಿಸಿಗನೊಬ್ಬ ಇನ್ನೂ ಹುಟ್ಟಿಬಂದಿಲ್ಲ ಎಂಬುದು ಮತ್ತೊಮ್ಮೆ ಸಾಬೀತಾಯಿತು. ನ್ಯೂಯಾರ್ಕಿನ ಅರ್ಥರ್ ಆಷ್ ಕ್ರೀಡಾಂಗಣದಲ್ಲಿ ಕೊನೆಗೊಂಡ ಅಮೆರಿಕಾ ಓಪನ್ ಟೂರ್ನಿಯಲ್ಲಿ 12ನೇ ಗ್ರ್ಯಾಂಡ್ ಸ್ಲಾಮ್ ಪ್ರಶಸ್ತಿ ಜಯಿಸಿದ ವಿಶ್ವದ ಅಗ್ರ ರ್ಯಾಂಕಿಂಗ್ ಆಟಗಾರ ಫೆಡರರ್ ವಿಶ್ವ ಟೆನಿಸ್ ನಲ್ಲಿ ತಮ್ಮ ಮೇಧಾವಿತ್ವ ಪ್ರಚುರಪಡಿಸಿದರು.

2008: ಬ್ರಹ್ಮಾಂಡದ ರಹಸ್ಯ ಅರಿಯುವತ್ತ, ಬಹು ಚರ್ಚಿತ ಬಿಗ್ ಬ್ಯಾಂಗ್ (ಮಹಾಸ್ಛೋಟ) ಸಿದ್ಧಾಂತದ ಸತ್ಯಾಸತ್ಯತೆ ಅಳೆಯುವತ್ತ ವಿಜ್ಞಾನಿ ಸಮುದಾಯ ದೈತ್ಯ ಹೆಜ್ಜೆ ಇಟ್ಟಿತು. ಅಂತಾರಾಷ್ಟ್ರೀಯ ಕಾಲಮಾನ ಬೆಳಗಿನ 7.30ರ ಹೊತ್ತಿಗೆ ಸರಿಯಾಗಿ ಫ್ರಾನ್ಸ್- ಸ್ವಿಟ್ಜರ್ ಲ್ಯಾಂಡ್ ಗಡಿಯಲ್ಲಿ 100 ಮೀಟರ್ ಆಳದಲ್ಲಿ ನಿರ್ಮಿಸಲಾದ 27 ಕಿ.ಮೀ. ಉದ್ದದ ವೃತ್ತಾಕಾರದ ಸುರಂಗದಲ್ಲಿ(ದೈತ್ಯ ಡಿಕ್ಕಿಕಾರ- ಎಲ್ ಎಚ್ ಸಿ) ಮನುಷ್ಯನ ಕೂದಲಿನಷ್ಟು ದಪ್ಪದ ಪ್ರೋಟಾನ್ ಪುಂಜವನ್ನು  ತೂರಲಾಯಿತು. ಕಣ ಭೌತಶಾಸ್ತ್ರಜ್ಞರು, ವಿಜ್ಞಾನದ ವಿದ್ಯಾರ್ಥಿಗಳು, ಗ್ರಹ, ನಕ್ಷತ್ರಗಳ ಹುಟ್ಟು, ಚಲನೆ, ಜೀವಾಣುಗಳ ಉತ್ಪತ್ತಿ ಸೇರಿದಂತೆ ವಿಶ್ವದ ನಿಗೂಢ ವಿದ್ಯಮಾನಗಳನ್ನು ಬೆರಗುಗಣ್ಣಿನಿಂದ ನೋಡುವವರೆಲ್ಲ ಟಿ.ವಿ ಪರದೆಯ ಮುಂದೆ ಕಣ್ಣು ಕೀಲಿಸಿ ಕುಳಿತು ಈ ಘಟನೆಯನ್ನು ವೀಕ್ಷಿಸಿದರು.

2007: ಸ್ವಿಜರ್ಲೆಂಡಿನ ರೋಜರ್ ಫೆಡರರ್ ನಾಗಾಲೋಟಕ್ಕೆ ತಡೆಯೊಡ್ಡಬಲ್ಲ ಟೆನಿಸಿಗನೊಬ್ಬ ಇನ್ನೂ ಹುಟ್ಟಿಬಂದಿಲ್ಲ ಎಂಬುದು ಮತ್ತೊಮ್ಮೆ ಸಾಬೀತಾಯಿತು. ನ್ಯೂಯಾರ್ಕಿನ ಅರ್ಥರ್ ಆಷ್ ಕ್ರೀಡಾಂಗಣದಲ್ಲಿ ಕೊನೆಗೊಂಡ ಅಮೆರಿಕಾ ಓಪನ್ ಟೂರ್ನಿಯಲ್ಲಿ 12ನೇ ಗ್ರ್ಯಾಂಡ್ ಸ್ಲಾಮ್ ಪ್ರಶಸ್ತಿ ಜಯಿಸಿದ ವಿಶ್ವದ ಅಗ್ರ ರ್ಯಾಂಕಿಂಗ್ ಆಟಗಾರ ಫೆಡರರ್ ವಿಶ್ವ ಟೆನಿಸ್ ನಲ್ಲಿ ತಮ್ಮ ಮೇಧಾವಿತ್ವ ಪ್ರಚುರಪಡಿಸಿದರು. ಫೈನಲಿನಲ್ಲಿ ಅವರು 7-6, 7-6, 6-4 ಅಂತರದಲ್ಲಿ ಸರ್ಬಿಯಾದ ಯುವ ಪ್ರತಿಭೆ ನೊವಾಕ್ ಜೊಕೊವಿಕ್ ಅವರನ್ನು ಮಣಿಸಿದರು. ಈ ಮೂಲಕ 14 ಗ್ರ್ಯಾಂಡ್ ಸ್ಲಾಮ್ ಪ್ರಶಸ್ತಿ ಗೆದ್ದಿರುವ ಅಮೆರಿಕದ ಪೀಟ್ ಸಾಂಪ್ರಾಸ್ ಅವರ ದಾಖಲೆ ಮುರಿಯುವ ನಿಟ್ಟಿನಲ್ಲೂ ಮತ್ತೊಂದು ಹೆಜ್ಜೆ ಮುಂದಿಟ್ಟರು. ಬಿಲ್ ಟಿಲ್ಡನ್ ಅವರು 1920 ರಿಂದ 25ರವರೆಗೆ ಸತತ ಆರು ವರ್ಷಗಳ ಕಾಲ ಅಮೆರಿಕಾ ಓಪನ್ ಪ್ರಶಸ್ತಿ ಗೆದ್ದಿದ್ದರು. ಆ ಬಳಿಕ ಆಟಗಾರನೊಬ್ಬ ಇಲ್ಲಿ ಸತತ ನಾಲ್ಕು ಬಾರಿ ಪ್ರಶಸ್ತಿ ಗೆದ್ದದ್ದು ಇದೇ ಮೊದಲು.

2007: ಪಾಕಿಸ್ಥಾನದ ಅಧ್ಯಕ್ಷ ಜನರಲ್ ಪರ್ವೇಜ್ ಮುಷರಫ್ ಅವರಿಗೆ ರಾಜಕೀಯ ಸವಾಲು ಹಾಕುವ ರೀತಿಯಲ್ಲಿ ಏಳು ವರ್ಷಗಳ ನಂತರ ಈದಿನ ಸ್ವದೇಶಕ್ಕೆ ಮರಳಿದ ಮಾಜಿ ಪ್ರಧಾನಿ ನವಾಜ್ ಷರೀಫ್ ಅವರನ್ನು ಪಾಕ್ ಸರ್ಕಾರ ಬಂಧಿಸಿ, ಕೆಲ ಗಂಟೆಗಳಲ್ಲೇ ಸೌದಿ ಅರೇಬಿಯಾಕ್ಕೆ ಗಡೀಪಾರು ಮಾಡಿತು. ಇದರಿಂದಾಗಿ ವಿಶ್ವದಾದ್ಯಂತ ಕುತೂಹಲ ಕೆರಳಿಸಿದ್ದ ಈ `ರಾಜಕೀಯ ಪ್ರಹಸನ' ಐದು ಗಂಟೆಗಳಲ್ಲಿ ಅಂತ್ಯಗೊಂಡಿತು. ಬೆಳಗಿನ ವೇಳೆಯಲ್ಲಿ ಲಂಡನ್ನಿನಿಂದ ಆಗಮಿಸಿದ ನವಾಜ್ ಷರೀಫ್ ಅವರನ್ನು ಇಸ್ಲಾಮಾಬಾದ್ ವಿಮಾನ ನಿಲ್ದಾಣದಲ್ಲಿ ಬಂಧಿಸಿ, 90 ನಿಮಿಷ ಕಾಲ ವಿಮಾನದಲ್ಲಿಯೇ ಇರಿಸಲಾಯಿತು. ನಂತರ ವಿಮಾನದಿಂದ ಇಳಿದ ಷರೀಫ್ಗೆ ಬಂಧನದ ವಾರಂಟ್ ನೀಡಿದ ಹಿರಿಯ ಪೊಲೀಸ್ ಅಧಿಕಾರಿಗಳು, ಅವರ ತೋಳು ಹಿಡಿದು ವಶಕ್ಕೆ ತೆಗೆದುಕೊಂಡರು. ಹೆಲಿಕಾಪ್ಟರಿನಲ್ಲಿ ಕೂರಿಸಿ, ಅಜ್ಞಾತ ಸ್ಥಳಕ್ಕೆ ಕೊಂಡೊಯ್ಯಲಾಯಿತು. ಆನಂತರ ಹೆಲಿಕಾಪ್ಟರ್ ಇಸ್ಲಾಮಾಬಾದಿಗೆ ಮರಳಿ ಬಂತು. ನವಾಜರನ್ನು ವಿಶೇಷ ವಿಮಾನದಲ್ಲಿ ಬಲವಂತವಾಗಿ ಕೂರಿಸಲಾಯಿತು. ಅವರನ್ನು ಸೌದಿ ಅರೇಬಿಯಾದ ಜೆಡ್ಡಾಗೆ ಗಡೀಪಾರು ಮಾಡಲಾಗಿದೆ ಎಂದು ಕೆಲ ನಿಮಿಷಗಳಲ್ಲೇ ಅಧಿಕೃತವಾಗಿ ಪ್ರಕಟಿಸಲಾಯಿತು. 1999ರ ಅಕ್ಟೋಬರಿನಲ್ಲಿ ಸೇನಾ ಕ್ರಾಂತಿಯ ನಂತರ ಮುಷರಫ್, ನವಾಜ್ ಷರೀಫರನ್ನು ಪ್ರಧಾನಿ ಪಟ್ಟದಿಂದ ಪದಚ್ಯುತಗೊಳಿಸಿದ್ದರು. ಭ್ರಷ್ಟಾಚಾರದ ಆರೋಪದ ಮೇಲೆ ಜೂನ್ 2000ದಲ್ಲಿ ಪಾಕ್ ನ್ಯಾಯಾಲಯ ಷರೀಫ್ ಗೆ 14 ವರ್ಷ ಜೈಲು ಶಿಕ್ಷೆ ವಿಧಿಸಿತ್ತು. 21 ವರ್ಷಗಳ ಕಾಲ ಸಾರ್ವಜನಿಕ ಹುದ್ದೆ ವಹಿಸಿಕೊಳ್ಳದಂತೆ ನಿರ್ಬಂಧಿಸಿತ್ತು. ಪಾಕ್ ಸರ್ಕಾರ ಹಾಗೂ ಸೌದಿ ಅರೇಬಿಯಾ ರಾಜಮನೆತನದ ನಡುವೆ ಆದ ಒಪ್ಪಂದದಂತೆ ಷರೀಫ್ 2000ನೇ ಇಸ್ವಿ ಡಿಸೆಂಬರಿನಲ್ಲಿ ತಮ್ಮ ಕುಟುಂಬದ 20 ಸದಸ್ಯರೊಂದಿಗೆ ಜೆಡ್ಡಾದಲ್ಲಿ ಭೂಗತರಾದರು. ಈ ವರ್ಷ ಆಗಸ್ಟ್ 23ರಂದು ಪಾಕ್ ಸುಪ್ರೀಂಕೋರ್ಟ್ ನವಾಜ್ ಷರೀಫ್ ತಾಯ್ನಾಡಿಗೆ ಮರಳಬಹುದು ಎಂದು ತೀರ್ಪು ನೀಡಿತ್ತು. ಸಾರ್ವತ್ರಿಕ ಚುನಾವಣೆಯಲ್ಲಿ ಮುಷರಫ್ ವಿರುದ್ಧ ಸಮರ ಸಾರಲು ತಾಯ್ನಾಡಿಗೆ ಮರಳುವುದಾಗಿ ಷರೀಫ್ ಘೋಷಿಸಿದ್ದರು.

2007: ಭಾರತ-ಅಮೆರಿಕ ನಾಗರಿಕ ಪರಮಾಣು ಸಹಕಾರ ಒಪ್ಪಂದದ ಪರಿಶೀಲನೆಗೆ ಜಂಟಿ ಸಂಸದೀಯ ಸಮಿತಿ (ಜೆಪಿಸಿ) ರಚಿಸುವಂತೆ ಆಗ್ರಹಿಸಿ ಸತತ ಎರಡನೇ ವಾರವೂ ಪ್ರತಿಪಕ್ಷಗಳು ಪ್ರತಿಭಟನೆ ಮುಂದುವರಿಸಿದ ಪರಿಣಾಮ ಸಂಸತ್ತಿನ ಉಭಯ ಸದನಗಳನ್ನು ಯಾವುದೇ ಕಲಾಪ ನಡೆಸಲಾಗದೆ ಅನಿರ್ದಿಷ್ಟ ಕಾಲದವರೆಗೆ ಮುಂದೂಡಲಾಯಿತು. ಲೋಕಸಭೆಯಲ್ಲಿ ಬಿಜೆಪಿ ಸದಸ್ಯರು ಜೆಪಿಸಿ ರಚನೆಗೆ ಒತ್ತಾಯಿಸಿ ಸರ್ಕಾರದ ವಿರುದ್ಧ ಘೋಷಣೆಗಳನ್ನು ಕೂಗುತ್ತಾ ಸಭಾಧ್ಯಕ್ಷರ ಪೀಠದ ಮುಂದೆ ಧಾವಿಸಿದ ಸಂದರ್ಭದಲ್ಲಿಯೇ ಯಾವುದೇ ಚರ್ಚೆ ಇಲ್ಲದೆ ವೈಮಾನಿಕ (ತಿದ್ದುಪಡಿ) ಮಸೂದೆ-2006ನ್ನು ಅಂಗೀಕರಿಸಲಾಯಿತು. ಇದರೊಂದಿಗೆ ಏಜೆಂಟರು ಮತ್ತು ಕೊರಿಯರ್ ಏಜೆನ್ಸಿಗಳನ್ನು ಒಳಗೊಂಡಂತೆ ರಸ್ತೆ ಮೇಲಿನ ಸರಕು ಸಾಗಾಟವನ್ನು ನಿಯಂತ್ರಿಸುವ ಮತ್ತು ಬೆಲೆ ನಿಗದಿಪಡಿಸುವ ಪ್ರಮುಖ ಮಸೂದೆಗೂ ಲೋಕಸಭೆ ಅಂಗೀಕಾರ ನೀಡಿತು.

2007: ಆರು ತಿಂಗಳಿಂದ ದೇಶದಲ್ಲಿ ಆಂತರಿಕ ರಾಜಕೀಯದ ಮೇಲೆ ಹೇರಿದ್ದ ನಿಷೇಧವನ್ನು ಬಾಂಗ್ಲಾದೇಶದ ಸೇನಾ ಬೆಂಬಲಿತ ಹಂಗಾಮಿ ಸರ್ಕಾರ ರಾಜಧಾನಿ ಢಾಕಾದಲ್ಲಿ ಮಾತ್ರ ಹಿಂತೆಗೆದುಕೊಂಡಿತು. ಎಲ್ಲ ರಾಜಕೀಯ ಪಕ್ಷಗಳು ತಮ್ಮ ಕಚೇರಿಗಳ ಬಾಗಿಲನ್ನು ಮತ್ತೆ ತೆರೆದವು. ದೇಶವನ್ನು ಉದ್ದೇಶಿಸಿ ಮಾತನಾಡಿದ ಸರ್ಕಾರದ ಮುಖ್ಯ ಸಲಹೆಕಾರ ಫಕ್ರುದ್ದೀನ್ ಅಹ್ಮದ್ ಅವರು, 2008ರೊಳಗೇ ದೇಶದಲ್ಲಿ ಸಂಸತ್ ಚುನಾವಣೆ ನಡೆಸುವುದಾಗಿ ಹೇಳಿದರು.

2007:  ಕೊಲಂಬಿಯಾದ ಪಶ್ಚಿಮ ಕಡಲ ತೀರದ ಬಳಿ ಈದಿನ ರಾತ್ರಿ ರಿಕ್ಟರ್ ಮಾಪನದಲ್ಲಿ 6.8 ರಷ್ಟಿದ್ದ ಪ್ರಬಲ ಭೂಕಂಪ ಸಂಭವಿಸಿತು.

2006: ರಷ್ಯಾದ ಮರಿಯಾ ಶೆರ್ಪೋವಾ ಅವರು ಅಮೆರಿಕದ ನ್ಯೂಯಾರ್ಕಿನ ಫ್ಲಷಿಂಗ್ ಮಿಡೋಸ್ನ ಆರ್ಥರ್ ಆಶ್ ಕ್ರೀಡಾಂಗಣದಲ್ಲಿ ನಡೆದ ಪಂದ್ಯದಲ್ಲಿ ಅಮೆರಿಕ ಓಪನ್ ಟೆನಿಸ್ ಚಾಫಿಯನ್ ಶಿಪ್ ನ ಮಹಿಳೆಯರ ಸಿಂಗಲ್ಸ್ ಪ್ರಶಸ್ತಿ ಗೆದ್ದುಕೊಂಡರು.

2006: ಅಮೆರಿಕದ ಮೆಸಾಚ್ಯುಸೆಟ್ಸ್ ತಂತ್ರಜ್ಞಾನ ವಿಶ್ವವಿದ್ಯಾಲಯದ `ಟೆಕ್ನಾಲಜಿ ರಿವ್ಯೂ' ನಿಯತಕಾಲಿಕದ ಪ್ರತಿಷ್ಠಿತ ಪ್ರಶಸ್ತಿಗೆ ಭಾರತೀಯ ಮೂಲದ 6 ಮಂದಿ ಅಮೆರಿನ್ನರೂ ಸೇರಿದಂತೆ 35 ವಿಜ್ಞಾನಿಗಳನ್ನು ಆಯ್ಕೆ ಮಾಡಲಾಯಿತು. ಪೃಥ್ವೀಸ್ ಬಸು (ಬಿಬಿಎನ್ ಟೆಕ್ನಾಲಜೀಸ್), ರಾಮಕೃಷ್ಣಮೂರ್ತಿ (ಇಂಟೆಲ್), ಅಶೋಕ ಮಲೈಕಲ್ (ಲ್ಯೂಸೆಂಟ್ ಟೆಕ್ನಾಲಜೀಸ್), ಆನಂದ ರಘುನಾಥನ್ (ಎನ್ ಇಸಿ ಲ್ಯಾಬೋರೇಟರೀಸ್), ಜಯ್ ಶೆಂದುರೆ (ಹಾರ್ವರ್ಡ್ ಮೆಡಿಕಲ್ ಸ್ಕೂಲ್) ಮತ್ತು ಸುಮಿತ್ ಸಿಂಗ್ (ಸಿಸ್ಕೊ) ಈ ಗೌರವಕ್ಕೆ ಪಾತ್ರರಾದವರು.

1999: ಅಮೇಥಿ ಲೋಕಸಭಾ ಕ್ಷೇತ್ರದಲ್ಲಿ ಕಾಂಗ್ರೆಸ್ ಅಭ್ಯರ್ಥಿಯಾಗಿ ಸೋನಿಯಾ ಗಾಂಧಿ ನಾಮಪತ್ರ ಸಲ್ಲಿಸಿದರು.

1988: ಯು.ಎಸ್. ಓಪನ್ ಪಂದ್ಯದಲ್ಲಿ ಸ್ಟೆಫಿ ಗ್ರಾಫ್ ಅವರು ಗ್ಯಾಬ್ರೀಲಾ ಸಬಾಟಿನಿ ಅವರನ್ನು ಪರಾಭವಗೊಳಿಸಿದರು.  ಈ ಮೂಲಕ ಟೆನಿಸ್ ಗ್ರ್ಯಾಂಡ್ ಸ್ಲಾಮ್ ಗೆದ್ದುಕೊಂಡ ಮೂರನೇ ಮಹಿಳೆ ಎಂಬ ಹೆಗ್ಗಳಿಕೆಗೆ ಅವರು ಪಾತ್ರರಾದರು.

1981: ಇಪ್ಪತ್ತನೇ ಶತಮಾನದ ಶ್ರೇಷ್ಠ ವರ್ಣಚಿತ್ರ್ರ ಎನ್ನಲಾದ ಪಾಬ್ಲೊ ಪಿಕಾಸೋ ಅವರ `ಗುಯೆರ್ನಿಕಾ' ವರ್ಣಚಿತ್ರವು ಮ್ಯಾಡ್ರಿಡ್ ನ ಪ್ರಾಡೋ ಮ್ಯೂಸಿಯಂಗೆ ಹಿಂತಿರುಗಿತು. 1940ರಲ್ಲಿ ಸುರಕ್ಷಿತವಾಗಿ ಇಡುವ ಸಲುವಾಗಿ ಪಿಕಾಸೋ ಅದನ್ನು ನ್ಯೂಯಾರ್ಕಿಗೆ ಕಳುಹಿಸಿದ್ದರು.

1976: ಯುಗೋಸ್ಲಾವಿಯಾದ ವಾಯುನೆಲಯಲ್ಲಿ ಹಾರಾಡುತ್ತಿದ್ದ ಎರಡು ಪ್ರಯಾಣಿಕರ ವಿಮಾನಗಳು ಪರಸ್ಪರ ಡಿಕ್ಕಿ ಹೊಡೆದು 176 ಪ್ರಯಾಣಿಕರು ಅಸು ನೀಗಿದರು.

1966: ಹರಿಯಾಣ ಮತ್ತು ಪಂಜಾಬನ್ನು ಪ್ರತ್ಯೇಕ ರಾಜ್ಯಗಳಾಗಿ ವಿಭಜಿಸುವ ಪಂಜಾಬ್ ಪುನರ್ರಚನಾ ಮಸೂದೆಗೆ ಸಂಸತ್ ಒಪ್ಪಿಗೆ.

1951: ಸಾಹಿತಿ ಕರೀಗೌಡ ಬೀಚನಹಳ್ಳಿ ಜನನ.

1946: ಡಾರ್ಜಿಲಿಂಗ್ ಗೆ ರೈಲಿನಲ್ಲಿ ಪ್ರಯಾಣ ಮಾಡುತ್ತಿದ್ದಾಗ ಕೋಲ್ಕತ್ತಾದ ಮದರ್ ತೆರೇಸಾ ಅವರಿಗೆ ಅನಾಥರ ಸೇವೆ ಕೈಗೆತ್ತಿಕೊಳ್ಳುವಂತೆ `ದೈವ ಪ್ರೇರಣೆ'ಯಾಯಿತು.

1937: ಸಾಹಿತಿ ಬಿ.ಜಿ. ಸತ್ಯಮೂರ್ತಿ ಜನನ.

1936: ಭಾರತದ ಮಾಜಿ ಉಪರಾಷ್ಟ್ರಪತಿ ಬಸಪ್ಪ ದಾನಪ್ಪ ಜತ್ತಿ (ಬಿ.ಡಿ. ಜತ್ತಿ) (10-9-1936ರಿಂದ 7-6-2002) ಜನ್ಮದಿನ. ಉತ್ತರ ಕರ್ನಾಟಕದ ಬಾಗಲಕೋಟೆ ಜಿಲ್ಲೆ ಜಮಖಂಡಿ ತಾಲ್ಲೂಕಿನ ಸಾವಳಗಿಯವರಾದ ಜತ್ತಿ ಸ್ವ ಸಾಮರ್ಥ್ಯದಿಂದ ತಮ್ಮ ಬದುಕು ರೂಪಿಸಿಕೊಂಡು ಭಾರತದ ಉಪರಾಷ್ಟ್ರಪತಿ ಸ್ಥಾನದವರೆಗಿನ ಉನ್ನತ ಸ್ಥಾನಕ್ಕೆ ಏರಿದವರು. ರಾಷ್ಟ್ರಪತಿ ಫಕ್ರುದ್ದೀನ್ ಆಲಿ ಅಹ್ಮದ್ ಅವರು ನಿಧನರಾದಾಗ ಸ್ವಲ್ಪ ಕಾಲ ಹಂಗಾಮಿ ರಾಷ್ಟ್ರಪತಿಯಾಗಿಯೂ ಜತ್ತಿ ಕಾರ್ಯ ನಿರ್ವಹಿಸಿದ್ದರು. ಗುಡ್ಡಗಾಡು ಪ್ರದೇಶದ ಅತ್ಯಂತ ಬಡ ಕುಟುಂಬದಲ್ಲಿ ಜನಿಸಿ 1943ರಲ್ಲಿಸಾವಳಗಿಯ ಗ್ರಾಮ ಪಂಚಾಯ್ತಿ ಸದಸ್ಯರಾದ ಅವರು ವಿವಿಧ ಹುದ್ದೆಗಳಲ್ಲಿ ಸೇವೆ ಸಲ್ಲಿಸಿದರು. 1940ರಲ್ಲಿ ನ್ಯಾಯವಾದಿಯಾಗಿ ಬದುಕು ಆರಂಭಿಸಿದ ಅವರು ರಾಜಕಾರಣಿಯಾಗಿ ಜೀವನವನ್ನು ಸಮಾಜ ಸೇವೆಗೆ ಅರ್ಪಿಸಿಕೊಂಡರು. ಅವರು ಹೊಂದಿದ್ದ ಪ್ರಮುಖ ಹುದ್ದೆಗಳಲ್ಲಿ ಕೆಲವು: ಮುಂಬೈ ವಿಧಾನಸಭೆಯ ಶಾಸಕ (1949), ಮುಂಬೈ ರಾಜ್ಯದ ಉಪ ಮುಖ್ಯಮಂತ್ರಿ (1955), ಭೂಸುಧಾರಣಾ ಮಂಡಲದ ಅಧ್ಯಕ್ಷ (1957), ರಾಜ್ಯ ಪುನರ್ ವಿಂಗಡಣೆಯ ಬಳಿಕ ಕರ್ನಾಟಕದ ಮುಖ್ಯಮಂತ್ರಿ (1958), ಪಾಂಡಿಚೇರಿಯ (ಈಗಿನ ಪುದುಚೆರಿ) ಲೆಫ್ಟಿನೆಂಟ್ ಗವರ್ನರ್ (1968), ಒರಿಸ್ಸಾ ರಾಜ್ಯದ ರಾಜ್ಯಪಾಲ (1972), ಭಾರತದ ಉಪರಾಷ್ಟ್ರಪತಿ (1974). ಭಾರತದ ಹಂಗಾಮೀ ರಾಷ್ಟ್ರಪತಿ (11-2-1977ರಿಂದ 25-7-1977).

1935: ಸಾಹಿತಿ ಆರ್. ರಾಚಪ್ಪ ಜನನ.

1926: ಸಾಹಿತಿ ಎ.ಎಂ. ಮುತ್ತಯ್ಯ ಜನನ.

1924: ಖ್ಯಾತ ಹಿಂದಿ ಬರಗಾರ ಕೆ.ಟಿ. ಗೋಪಾಲಕೃಷ್ಣನ್ ಜನನ.

1920: ತಮಿಳು ಭಾಷೆಯ ರಾಷ್ಟ್ರಕವಿ, ಉತ್ತಮ ವಾಗ್ಮಿ, ಸಂಪಾದಕ, ತತ್ವಜ್ಞಾನಿ, ಕ್ರಾಂತಿಕಾರಿ ಸುಬ್ರಹ್ಮಣ್ಯ ಭಾರತಿ ಜನನ.

1915: ಜತೀಂದ್ರನಾಥ ಮುಖರ್ಜಿ ಯಾನೆ ಬಾಘಾ ಜತಿನ್ ಅವರು ಒರಿಸ್ಸಾದ ಬಾಲಸೋರಿನ ಆಸ್ಪತ್ರೆಯೊಂದರಲ್ಲಿ ನಿಧನರಾದರು. ಒಂದು ದಿನ ಮೊದಲು ಅವರು ಕಪ್ಟಿಪಾಡಾದಲ್ಲಿ ಬ್ರಿಟಿಷ್ ಪೊಲೀಸರ ಜೊತೆಗೆ ಗುಂಡಿನ ಘರ್ಷಣೆ ನಡೆಸಿದ್ದರು.

1909: ಅಣಕು ಸಾಹಿತ್ಯ, ಚುಟುಕು ಪದ್ಯಗಳ ಮೂಲಕ ಜನಮನ ಸೂರೆಗೊಂಡ `ಚುಟುಕು ಬ್ರಹ್ಮ' ದಿನಕರ ದೇಸಾಯಿ (10-9-1909ರಿಂದ 6-11-1982) ಅವರು ದತ್ತಾತ್ರೇಯ- ಅಂಬಿಕೆ ದಂಪತಿಯ ಮಗನಾಗಿ ಉತ್ತರ ಕನ್ನಡ ಜಿಲ್ಲೆಯ ಕುಮಟಾ ತಾಲ್ಲೂಕಿನ ಅಂತರವಳ್ಳಿ ಗ್ರಾಮದ ಹಂಡದೊಕ್ಕಲ ದೇಸಾಯರ ಮನೆಯಲ್ಲಿ ಜನಿಸಿದರು. ಮಾಧ್ಯಮಿಕ ಶಾಲೆಯಲ್ಲಿ ಓದುತ್ತಿದ್ದಾಗಲೇ ಇವರ ಬರವಣಿಗೆ ಆರಂಭ. ಕುಮಟಾದಿಂದ ಪ್ರಕಟವಾಗುತ್ತಿದ್ದ `ಕಾನಡಾ ಧುರೀಣ' ಪತ್ರಿಕೆಯಲ್ಲಿ ಸಂಪಾದಕ ಶ್ರೀರಾಮ ಸೋಮಯಾಜಿ ಅವರು ದಿನಕರ ದೇಸಾಯಿ ಬರೆದ ಕವನಗಳನ್ನು ಪ್ರಕಟಿಸಿ ಪ್ರೋತ್ಸಾಹ ನೀಡಿದರು. ಮುಂದೆ ವಿ.ಸೀ., ಬಿ.ಎಂ.ಶ್ರೀ. ಮಾರ್ಗದರ್ಶನ. ಅಣಕು ಸಾಹಿತ್ಯದ ಮೂಲಕ ಸಮಾಜ ಪರಿವರ್ತನೆಗೆ ಯತ್ನಿಸಿದ ದಿನಕರ ದೇಸಾಯಿ, ಭಾರತ ಸೇವಾ ಸಮಾಜ, ಕೆನರಾ ವೆಲ್ ಫೇರ್ ಟ್ರಸ್ಟುಗಳ ಮೂಲಕ ಕಾರ್ಮಿಕ ಸಂಘಟನೆ, ಉತ್ತರ ಕನ್ನಡ ಜಿಲ್ಲೆಯಲ್ಲಿ ಸಮಗ್ರ ಶಿಕ್ಷಣ ಅಭಿವೃದ್ಧಿಗೆ ಯತ್ನಿಸಿದರು. ಇದಕ್ಕಾಗಿ ಹೈಸ್ಕೂಲು, ಹೈಯರ್ ಸೆಕೆಂಡರಿ ಶಾಲೆ, ಕಾಲೇಜುಗಳು ಸೇರಿದಂತೆ 21 ಶಿಕ್ಷಣ ಸಂಸ್ಥೆಗಳನ್ನು ಸ್ಥಾಪಿಸಿದರು. ಆರು ಸಮಾಜ  ಸೇವಾ ಸಂಸ್ಥೆಗಳ ಸ್ಥಾಪನೆ ಜೊತೆಗೆ ಲೋಕಸಭಾ ಸದಸ್ಯರಾಗಿಯೂ ಸೇವೆ ಸಲ್ಲಿಸಿದರು.

1894: ಸಾಹಿತಿ ಪಿ.ಆರ್. ರಾಮಯ್ಯ ಜನನ.

1887: ಭಾರತದ ರಾಷ್ಟ್ರೀಯ ನಾಯಕ ಗೋವಿಂದ ವಲ್ಲಭ ಪಂತ್ ಜನ್ಮದಿನ. ಸ್ವಾತಂತ್ರ್ಯಾನಂತರ ಇವರು ಉತ್ತರ ಪ್ರದೇಶದ ಪ್ರಥಮ ಮುಖ್ಯಮಂತ್ರಿಯಾದರು.

1872: ಜಗತ್ತಿನ ಶ್ರೇಷ್ಠ ಕ್ರಿಕೆಟ್ ಆಟಗಾರರಲ್ಲಿ ಒಬ್ಬರಾದ ನವನಗರದ ಸರ್ ರಣಜಿತ್ ಸಿನ್ಹಜಿ ವಿಭಾಜಿ ಮಹಾರಾಜ (1872-1933) ಜನ್ಮದಿನ. ಇವರ ಗೌರವಾರ್ಥ ಭಾರತದಲ್ಲಿ `ರಣಜಿ ಟ್ರೋಫಿ' ಸ್ಥಾಪಿಸಲಾಗಿದೆ.

(ಸಂಗ್ರಹ: ನೆತ್ರಕೆರೆ ಉದಯಶಂಕರ)

ಇಂದಿನ ಇತಿಹಾಸ History Today ಸೆಪ್ಟೆಂಬರ್ 09

ಇಂದಿನ ಇತಿಹಾಸ

ಸೆಪ್ಟೆಂಬರ್  09


ಜಮೈಕಾದ ಅಸಫಾ ಪೊವೆಲ್ ಪುರುಷರ 100 ಮೀ. ಓಟದ ಸ್ಪರ್ಧೆಯಲ್ಲಿ ನೂತನ ವಿಶ್ವದಾಖಲೆ ಸ್ಥಾಪಿಸಿದರು. ಇಟಲಿಯ ರೀಟಿಯಲ್ಲಿ ನಡೆದ ಐಎಎಫ್ ಗ್ರ್ಯಾನ್ ಪ್ರಿ ಸ್ಪರ್ಧೆಯಲ್ಲಿ ಮಿಂಚಿನ ವೇಗದಲ್ಲಿ ಓಡಿದ ಪೊವೆಲ್ 100 ಮಿ. ದೂರವನ್ನು 9.74 ಸೆಕೆಂಡುಗಳಲ್ಲಿ ಕ್ರಮಿಸಿ ತಮ್ಮದೇ ಹೆಸರಿನಲ್ಲಿದ್ದ ದಾಖಲೆಯನ್ನು ಮುರಿದರು. 

2008: ಪಂಜಾಬ್ ಮತ್ತು ಹರಿಯಾಣ ಹೈಕೋರ್ಟಿನ ನ್ಯಾಯಮೂರ್ತಿ ನಿರ್ಮಲ್ ಜಿತ್ ಕೌರ್ ಅವರ ಮನೆಗೆ 15 ಲಕ್ಷ ರೂಪಾಯಿ ರವಾನಿಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಕೌರ್ ಮತ್ತು ನ್ಯಾಯಮೂರ್ತಿ ನಿರ್ಮಲಾ ಯಾದವ್ ಅವರ ವಿರುದ್ಧ ಸಿಬಿಐನಿಂದ ತನಿಖೆ ನಡೆಸಲು ಸುಪ್ರೀಂ ಕೋರ್ಟ್ ಮುಖ್ಯ ನ್ಯಾಯಮೂರ್ತಿ ಕೆ. ಜಿ. ಬಾಲಕೃಷ್ಣನ್ ಸಮ್ಮತಿ ನೀಡಿದರು. ದೆಹಲಿಯ ಹೊಟೇಲ್ ಉದ್ಯಮಿ ರವೀಂದ್ರ ಸಿಂಗ್ ಎಂಬವರು ಹೈಕೋರ್ಟಿನ ಇನ್ನೊಬ್ಬ ನ್ಯಾಯಮೂರ್ತಿ ನಿರ್ಮಲಾ ಯಾದವ್ ಅವರಿಗಾಗಿ ಈ 15 ಲಕ್ಷ ರೂಪಾಯಿ ಕಳುಹಿಸಿಕೊಟ್ಟ್ದಿದರು. ಆದರೆ ಮಾಜಿ ಹೆಚ್ಚುವರಿ ಅಡ್ವೋಕೇಟ್ ಜನರಲ್ ಸಂಜೀವ್ ಬನ್ಸಲ್ ಅವರ ಸಹಾಯಕ ಪ್ರಕಾಶ್ ರಾಮ್ ಅವರು `ತಪ್ಪಿ' ಈ ಹಣವನ್ನು ಆಗಸ್ಟ್ 13ರಂದು ನಿರ್ಮಲ್ ಜಿತ್ ಕೌರ್ ಅವರ ಮನೆಗೆ ರವಾನಿಸಿದ್ದರು.

2008: ಪಾಕಿಸ್ಥಾನದ ನೂತನ ಅಧ್ಯಕ್ಷರಾಗಿ ಆಸಿಫ್ ಆಲಿ ಜರ್ದಾರಿ ಇಸ್ಲಾಮಾಬಾದಿನಲ್ಲಿ ಅಧ್ಯಕ್ಷರ ಅರಮನೆಯಲ್ಲಿ ನಡೆದ ಸಮಾರಂಭದಲ್ಲಿ ಅಧಿಕಾರ ಸ್ವೀಕರಿಸಿದರು. 53 ವರ್ಷದ ಜರ್ದಾರಿ ಅವರಿಗೆ ಸುಪ್ರೀಂಕೋರ್ಟ್ ಮುಖ್ಯ ನ್ಯಾಯಾಧೀಶ ಅಬ್ದುಲ್ ಹಮೀದ್ ದೊಗಾರ್ ಪ್ರಮಾಣ ವಚನ ಬೋಧಿಸಿದರು. ಸಭಾಂಗಣದಲ್ಲಿ ಬೃಹತ್ ಸಂಖ್ಯೆಯಲ್ಲಿ ನೆರೆದಿದ್ದ ಜರ್ದಾರಿ ಅವರ ಪಾಕಿಸ್ಥಾನ ಪೀಪಲ್ಸ್ ಪಾರ್ಟಿಯ (ಪಿಪಿಪಿ) ಕಾರ್ಯಕರ್ತರು ಜೀಯೊ ಭುಟ್ಟೊ (ಭುಟ್ಟೊ ಚಿರಾಯುವಾಗಲಿ), ಜಿಂದಾ ಹೈ ಬೀಬಿ (ಬೆನಜೀರ್ ಬದುಕಿದ್ದಾರೆ ಎಂಬ ಘೋಷಣೆಗಳನ್ನು ಕೂಗಿದರು.

2007: ಜಮೈಕಾದ ಅಸಫಾ ಪೊವೆಲ್ ಪುರುಷರ 100 ಮೀ. ಓಟದ ಸ್ಪರ್ಧೆಯಲ್ಲಿ ನೂತನ ವಿಶ್ವದಾಖಲೆ ಸ್ಥಾಪಿಸಿದರು. ಇಟಲಿಯ ರೀಟಿಯಲ್ಲಿ ನಡೆದ ಐಎಎಫ್ ಗ್ರ್ಯಾನ್ ಪ್ರಿ ಸ್ಪರ್ಧೆಯಲ್ಲಿ ಮಿಂಚಿನ ವೇಗದಲ್ಲಿ ಓಡಿದ ಪೊವೆಲ್ 100 ಮಿ. ದೂರವನ್ನು 9.74 ಸೆಕೆಂಡುಗಳಲ್ಲಿ ಕ್ರಮಿಸಿ ತಮ್ಮದೇ ಹೆಸರಿನಲ್ಲಿದ್ದ ದಾಖಲೆಯನ್ನು ಮುರಿದರು. ಪೊವೆಲ್ 2005 ರಲ್ಲಿ ಅಥೆನ್ಸಿನಲ್ಲಿ ಈ ದೂರವನ್ನು 9.77 ಸೆಕೆಂಡುಗಳಲ್ಲಿ ಕ್ರಮಿಸಿದ್ದು ಈವರೆಗಿನ ವಿಶ್ವದಾಖಲೆಯಾಗಿತ್ತು. 24ರ ಹರೆಯದ ಪೊವೆಲ್ ಆಗಸ್ಟ್ ತಿಂಗಳ ಆರಂಭದಲ್ಲಿ `ಈ ವರ್ಷ ವಿಶ್ವದಾಖಲೆ ಮುರಿಯಲಿದ್ದೇನೆ' ಎಂದು ಭವಿಷ್ಯ ನುಡಿದಿದ್ದರು. ಒಸಾಕದಲ್ಲಿ ಇತ್ತೀಚೆಗೆ ನಡೆದ ವಿಶ್ವ ಚಾಂಪಿಯನ್ ಶಿಪ್ ನಲ್ಲಿ ಪೊವೆಲ್ ಚಿನ್ನದ ಪದಕ ಗೆಲ್ಲುವಲ್ಲಿ ವಿಫಲರಾಗಿದ್ದರು.

2007: ಕುತೂಹಲದ ಘಟ್ಟ, ಮುಗಿಲು ಮುಟ್ಟಿದ ಕ್ರೀಡಾಭಿಮಾನಿಗಳ ಕೇಕೆ ಹಾಗೂ ನಾಟಕೀಯ ಬೆಳವಣಿಗೆಯ ನಡುವೆ ಚೆನ್ನೈಯ ಮೇಯರ್ ರಾಧಾಕೃಷ್ಣನ್ ಕ್ರೀಡಾಂಗಣದಲ್ಲಿ ನಡೆದ ಹಾಕಿ ಪಂದ್ಯದಲ್ಲಿ ಕೊರಿಯಾ ವಿರುದ್ಧ ಭಾರತವು ಅದ್ಭುತವಾದ ಗೆಲುವು ಪಡೆದು ಏಷ್ಯಾ ಕಪ್ ಗೆದ್ದುಕೊಂಡಿತು. ರೋಚಕ ಫೈನಲ್ ಪಂದ್ಯದಲ್ಲಿ ಭಾರತ ತಂಡದವರು 7-1 ಗೋಲುಗಳ ಭಾರಿ ಅಂತರದಿಂದ ಕೊರಿಯಾ ತಂಡವನ್ನು ಸೋಲಿಸಿದರಲ್ಲದೆ ಎರಡನೇ ಅತೀ ಹೆಚ್ಚು ಅಂತರದ ಗೆಲುವನ್ನು ದಾಖಲಿಸಿದರು. ಇದಕ್ಕೆ ಮೊದಲು ಭಾರತ ತಂಡದವರು 1985ರಲ್ಲಿ ಢಾಕಾದಲ್ಲಿ ನಡೆದ ಎರಡನೇ ಚಾಂಪಿಯನ್ ಶಿಪ್ ನಲ್ಲಿ 8-1 ಗೋಲುಗಳ ಗೆಲುವು ಪಡೆದುಕೊಂಡಿದ್ದರು. ಇದು ಯಾವುದೇ ಏಷ್ಯಾ ಕಪ್ ಚಾಂಪಿಯನ್ ಶಿಪ್ ನ ಫೈನಲಿನಲ್ಲಿ ಅತೀ ಹೆಚ್ಚು ಅಂತರದ ಗೆಲುವು ಕೂಡಾ. ಇದು 2003ರ ಏಷ್ಯಾ ಕಪ್ ಹಾಕಿ ಚಾಂಪಿಯನ್ ಶಿಪ್ ನಂತರ ಭಾರತಕ್ಕೆ ಮೊಟ್ಟ ಮೊದಲ ಪ್ರಶಸ್ತಿ.

2007: ಕರ್ನಾಟಕ ರಾಜ್ಯ ಕ್ರಿಕೆಟ್ ಸಂಸ್ಥೆ (ಕೆಎಸ್ಸಿಎ) ಚುನಾವಣೆಯ ಅಧ್ಯಕ್ಷ ಸ್ಥಾನದ ಸ್ಪರ್ಧೆಯಲ್ಲಿ ಮೈಸೂರು ರಾಜವಂಶಸ್ಥ ಶ್ರೀಕಂಠದತ್ತ ನರಸಿಂಹರಾಜ ಒಡೆಯರ್ ವಿಜಯ ಸಾಧಿಸಿದರು.  ಅವರು ಮಾಜಿ ಕ್ರಿಕೆಟಿಗ ಜಿ.ಆರ್. ವಿಶ್ವನಾಥ್ ಅವರನ್ನು ಸೋಲಿಸುವಲ್ಲಿ ಯಶಸ್ವಿಯದರು. ಪ್ರತಿಸ್ಪರ್ಧಿ ಬಣದ ಬ್ರಿಜೇಶ್ ಪಟೇಲ್ ಕಾರ್ಯದರ್ಸಿ ಸ್ಥಾನಕ್ಕೆ ಪುನರಾಯ್ಕೆಯಾದರು.

2007: ಬೆಲ್ಜಿಯಂನ ಬೆಡಗಿ ಜಸ್ಟಿನ್ ಹೆನಿನ್ ಹಾರ್ಡಿನ್ ಅವರು ನ್ಯೂಯಾರ್ಕಿನಲ್ಲಿ ನಡೆದ ಅಮೆರಿಕಾ ಓಪನ್ ಟೆನಿಸ್ ಟೂರ್ನಿಯ ಮಹಿಳೆಯರ ಸಿಂಗಲ್ಸ್ ವಿಭಾಗದ ಪ್ರಶಸ್ತಿ ಮುಡಿಗೇರಿಸಿಕೊಂಡರು. ಚಾಣಾಕ್ಷ ಆಟ ಪ್ರದರ್ಶಿಸಿದ 25ರ ಹರೆಯದ ಹೆನಿನ್ ಫೈನಲ್ ಪಂದ್ಯದಲ್ಲಿ 6-1, 6-3 ರಲ್ಲಿ ರಷ್ಯಾದ ಸ್ವೆಟ್ಲಾನಾ ಕುಜ್ನೆಟ್ಸೋವಾ ಅವರನ್ನು ಮಣಿಸಿದರು. ವಿಶ್ವದ ಅಗ್ರ ರ್ಯಾಂಕಿಂಗ್ ಆಟಗಾರ್ತಿ ಹೆನಿನ್ ಗೆ ಇದು ಈ ವರ್ಷದ ಎರಡನೇ ಮತ್ತು ವೃತ್ತಿ ಜೀವನದ ಏಳನೇ ಗ್ರ್ಯಾಂಡ್ ಸ್ಲಾಮ್ ಪ್ರಶಸ್ತಿ. ಈ ಮೊದಲು ಅವರು ಫ್ರೆಂಚ್ ಓಪನ್ನಿನಲ್ಲಿ ಕಿರೀಟ ಮುಡಿಗೇರಿಸಿದ್ದರು. ಅದೇ ರೀತಿ ಅಮೆರಿಕಾ ಓಪನ್ ಗೆದ್ದದ್ದು ಇದು ಎರಡನೇ ಬಾರಿ. 2003ರಲ್ಲಿ ಅವರು ಇಲ್ಲಿ ಕೊನೆಯದಾಗಿ ಪ್ರಶಸ್ತಿ ಗೆದ್ದಿದ್ದರು.

2007: ಹೈದರಾಬಾದಿನ ಪಂಜಗುಟ್ಟ ಕ್ರಾಸ್ ಬಳಿ ನಿರ್ಮಾಣ ಹಂತದಲ್ಲಿದ್ದ ಮೇಲು ಸೇತುವೆಯ (ಫ್ಲೈಓವರ್) ಒಂದು ಭಾಗ ರಾತ್ರಿ ಕುಸಿದು 15 ಮಂದಿ ಮೃತರಾದರು. ಫ್ಲೈ ಓವರ್ ಕೆಳಗೆ ನಿಲ್ಲಿಸಿದ್ದ ಸುಮಾರು 25 ಕಾರುಗಳು ಜಖಂಗೊಂಡು, 25 ಮಂದಿ ಗಾಯಗೊಂಡರು. ಈ ಮೇಲುಸೇತುವೆ 800 ಮೀಟರ್ ಉದ್ದವಿದ್ದು ಸುಮಾರು 20 ಅಡಿ ಎತ್ತರದಲ್ಲಿದೆ. (ಈ ಘಟನೆಯಲ್ಲ್ಲಿ ಸತ್ತವರ ಸಂಖ್ಯೆ ಕೇವಲ 2, ಗಾಯಗೊಂಡವರು 9 ಜನ ಎಂದು ಪೊಲೀಸ್ ಆಯುಕ್ತ ಬಲ್ವಿಂದರ್ ಸಿಂಗ್ ಮರುದಿನ ಸ್ಪಷ್ಟಪಡಿಸಿದರು.)

2007: ಮನುಷ್ಯನಂತೆ ಗೋವುಗಳಿಗೂ ಸಹಜವಾಗಿ ಹುಟ್ಟುವ, ಬೆಳೆಯುವ ಮತ್ತು ಸಾಯುವ ಹಕ್ಕು ಇದೆ. ರಾಜಧಾನಿಯಿಂದಲೇ ಈ ಪ್ರಜ್ಞೆ ಬೆಳೆದರೆ ಹಳ್ಳಿಗಳಿಗೆ ತಲುಪುವುದು ಸುಲಭ ಎಂಬ ಕಾರಣಕ್ಕೆ ಬೆಂಗಳೂರು ನಗರದಲ್ಲಿ ಗೋ ಸಂರಕ್ಷಾ ಕಾರ್ಯಕ್ರಮ ಹಮ್ಮಿಕೊಂಡುದಾಗಿ ರಾಮಚಂದ್ರಾಪುರ ಮಠದ ರಾಘವೇಶ್ವರ ಭಾರತಿ ಸ್ವಾಮೀಜಿ ಹೇಳಿದರು. ಸಂಜಯನಗರದಲ್ಲಿ ನಡೆದ ಗೋಸಂಧ್ಯಾ ಕಾರ್ಯಕ್ರಮದಲ್ಲಿ ಅವರು ಆಶೀರ್ವಚನ ನೀಡಿ, ಗೋವುಗಳ ಮೂಲಕ ಸಮಸ್ತ ಜೀವ ಸಂಕುಲದ ಬದುಕುವ ಹಕ್ಕನ್ನು ಸಂರಕ್ಷಿಸುವುದು ತಮ್ಮ ಗುರಿ. ಇದರಲ್ಲಿ ಯಾವುದೇ ರಾಜಕೀಯ ದ್ವೇಷ ಇಲ್ಲ, ಕೋಮು ಭಾವನೆ ಘಾಸಿಗೊಳಿಸುವ ಹುನ್ನಾರ ಇಲ್ಲ ಎಂದು ಅವರು ಹೇಳಿದರು.

2006: ಹಿರಿಯ ಚಿತ್ರನಟಿ, ಸಮಾಜ ಸೇವಕಿ ಶಬಾನಾ ಆಜ್ಮಿ ಅವರು ಲಂಡನ್ ಮೂಲದ ಗಾಂಧಿ ಪ್ರತಿಷ್ಠಾನ ನೀಡುವ ಪ್ರತಿಷ್ಠಿತ `ಗಾಂಧಿ ಶಾಂತಿ ಪ್ರಶಸ್ತಿ'ಗೆ ಆಯ್ಕೆಯಾದರು.

2006: ಆರು ಮಂದಿ ಗಗನಯಾತ್ರಿಗಳನ್ನು ಹೊತ್ತ ಅಮೆರಿಕದ ಅಟ್ಲಾಂಟಿಸ್ ಬಾಹ್ಯಾಕಾಶ ನೌಕೆ ಕೇಪ್ ಕೆನವೆರಾಲ್ನಿಂದ ಬೆಳಿಗ್ಗೆ ಗಗನಕ್ಕೆ ಹಾರಿತು. ತಾಂತ್ರಿಕ ತೊಂದರೆಯಿಂದ ಈ ನೌಕೆಯ ಉಡಾವಣೆ ವಿಳಂಬವಾಗಿತ್ತು. ಅಟ್ಲಾಂಟಿಸ್ ಗಗನಯಾತ್ರಿಗಳು 11 ದಿನಗಳ ವಾಸ್ತವ್ಯ ಕಾಲದ್ಲಲಿ 3 ಬಾಹ್ಯಾಕಾಶ ನಡಿಗೆ ಕೈಗೊಂಡು ಬಾಹ್ಯಾಕಾಶ ಅಟ್ಟಣಿಗೆ ನಿರ್ಮಾಣ ಮುಂದುವರೆಸುವರು. 3 ವರ್ಷಗಳ ಹಿಂದೆ ಕೊಲಂಬಿಯಾ ಗಗನನೌಕೆ ದುರಂತದ ಬಳಿಕ ಈ ಕಾರ್ಯ ಸ್ಥಗಿತಗೊಂಡಿತ್ತು.

2006: ಲೋಕಸಭಾ ಅಧ್ಯಕ್ಷ ಸೋಮನಾಥ ಚಟರ್ಜಿ, ಸಮಾಜವಾದಿ ಮುಖಂಡ ಅಮರಸಿಂಗ್, ಸೇರಿದಂತೆ ಅನೇಕ ಸಂಸದರ ವಿರುದ್ಧ ಸಲ್ಲಿಸಲಾಗಿದ್ದ ದೂರುಗಳನ್ನು ತಿರಸ್ಕರಿಸುವ ಮೂಲಕ ಚುನಾವಣಾ ಆಯೋಗವು `ಲಾಭದಾಯಕ ಹುದ್ದೆ' ವಿವಾದಕ್ಕೆ ತೆರೆ ಎಳೆಯಿತು. ರಾಷ್ಟ್ರಪತಿ ಅಬ್ದುಲ್ ಕಲಾಂ ಅವರು 50 ಪ್ರಮುಖ ಹುದ್ದೆಗಳನ್ನು ಲಾಭದಾಯಕ ಹುದ್ದೆ ವ್ಯಾಪ್ತಿಯಿಂದ ಹೊರಗಿಡುವ ಮಸೂದೆಗೆ ಸಹಿ ಹಾಕಿದ ಮೂರು ವಾರಗಳ ಬಳಿಕ ಚುನಾವಣಾ ಆಯೋಗವು ಮೂವರು ಸಚಿವರು ಸೇರಿ 13 ಮಂದಿ ಸಂಸದರ ವಿರುದ್ಧದ ದೂರುಗಳನ್ನು ತಿರಸ್ಕರಿಸಿತು.

2006: ಬೆಂಗಳೂರಿನ ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವ ವಿದ್ಯಾಲಯವು ಸಿದ್ಧಪಡಿಸಿದ ಕಂಪ್ಯೂಟರ್ ಮೂಲಕ ಎಂಜಿನಿಯರಿಂಗ್ ನಕ್ಷೆ ಬಿಡಿಸಲು ಮಾರ್ಗದರ್ಶನ ಮಾಡಬ್ಲಲ ದೇಶದ ಮೊದಲ ಪಠ್ಯಪುಸ್ತಕ `ಪ್ರೀಮಿಯರ್ ಆನ್ ಕಂಪ್ಯೂಟರ್ ಏಯ್ಡೆಡ್ ಎಂಜಿನಿಯರಿಂಗ್'ನ್ನು ರಕ್ಷಣಾ ಸಚಿವರ ಮಾಜಿ ವೈಜ್ಞಾನಿಕ ಸಲಹೆಗಾರ ವಿ.ಕೆ. ಆತ್ರೆ ಬಿಡುಗಡೆ ಮಾಡಿದರು.

2006: ರತ್ನಜ ನಿರ್ದೇಶನದ `ನೆನಪಿರಲಿ' ಚಿತ್ರವು ಕನ್ನಡ ಚಿತ್ರಗಳಿಗೆ ಮೀಸಲಿಡಲಾದ ಎಲ್ಲ ಐದು `ಫಿಲಂಫೇರ್' ಪ್ರಶಸ್ತಿಗಳನ್ನು ಬಾಚಿಕೊಂಡಿತು. ನಿರ್ದೇಶಕ ರತ್ನಜ, ಸಂಗೀತ ನಿರ್ದೇಶಕ ಹಂಸಲೇಖಾ, ನಾಯಕ ಪ್ರೇಮ್ ಕುಮಾರ್, ನಾಯಕಿ ವಿದ್ಯಾ ವೆಂಕಟೇಶ್ ಅವರು ಶ್ರೇಷ್ಠ ನಿರ್ದೇಶಕ, ಸಂಗೀತ ನಿರ್ದೇಶಕ, ನಾಯಕ, ನಾಯಕಿ ಪ್ರಶಸ್ತಿಗಳನ್ನು ಪಡೆದರು. ಚಿತ್ರಕ್ಕೆ ನೀಡಲಾಗುವ ಶ್ರೇಷ್ಠ ಪ್ರಶಸ್ತಿಯೂ ಈ ಚಿತ್ರಕ್ಕೇ ಲಭಿಸಿತು.

1997: ಅಯೋಧ್ಯೆಯ ಬಾಬ್ರಿ ಮಸೀದಿ ಧ್ವಂಸ ಘಟನೆಯ ಹಿನ್ನೆಲೆಯಲ್ಲಿ ಪ್ರಮುಖ ನಾಯಕರು ಸೇರಿದಂತೆ 47 ಮಂದಿಯ ವಿರುದ್ಧ ಆರೋಪಪಟ್ಟಿ ಸಲ್ಲಿಸಲು ನಿಯೋಜಿತ ನ್ಯಾಯಾಲಯ ನಿರ್ಧರಿಸಿತು. 1992ರ ಡಿಸೆಂಬರ್ 6ರಂದು ನಡೆದ ಅಯೋಧ್ಯೆಯ ಬಾಬ್ರಿ ಮಸೀದಿಯ ಧ್ವಂಸ ಘಟನೆಗೆ ಸಂಬಂಧಿಸಿದಂತೆ ದಾಖಲಿಸಲಾದ ಈ ಪ್ರಕರಣದಲ್ಲಿ ಶಿವಸೇನೆ ಮುಖ್ಯಸ್ಥ ಬಾಳಾ ಠಾಕ್ರೆ, ಅಂದಿನ ಬಿಜೆಪಿ ಅಧ್ಯಕ್ಷ ಎಲ್. ಕೆ. ಅಡ್ವಾಣಿ, ಉತ್ತರ ಪ್ರದೇಶದ ಮಾಜಿ ಮುಖ್ಯಮಂತ್ರಿ ಕಲ್ಯಾಣಸಿಂಗ್ ಆರೋಪಿಗಳಲ್ಲಿ ಪ್ರಮುಖರು.

1976: ಚೀನೀ ಧುರೀಣ ಅಧ್ಯಕ್ಷ ಮಾವೋ ತ್ಸೆ ತುಂಗ್ ತಮ್ಮ 82ನೇ ವಯಸ್ಸಿನಲ್ಲಿ ನಿಧನರಾದರು.

1960: ಬ್ರಿಟಿಷ್ ನಟ ಹಫ್ ಗ್ರಾಂಟ್ ಜನ್ಮದಿನ.

1949: ಭಾರತದ ರಾಷ್ಟ್ರೀಯ ಗೀತೆಯಾಗಿ ಹಿಂದಿಯನ್ನು ಅಂಗೀಕರಿಸಲಾಯಿತು.

1948: ಪೀಪಲ್ಸ್ ಡೆಮಾಕ್ರಟಿಕ್ ರಿಪಬ್ಲಿಕ್ ಆಫ್ ಕೊರಿಯಾ (ಉತ್ತರ ಕೊರಿಯಾ) ರಚನೆಯಾಯಿತು.

1946: ಸಾಹಿತಿ ಬಿ.ಆರ್. ಲಕ್ಷ್ಮಣ ರಾವ್ ಜನನ.

1944: ಸಾಹಿತಿ ಪದ್ಮಜ ಕೆ.ಆರ್. ಜನನ.

1941: ಮಾಜಿ ಕ್ರಿಕೆಟ್ ಆಟಗಾರ ಸೈಯದ್ ಅಬಿದ್ ಆಲಿ (1960) ಜನ್ಮದಿನ.

1937: ಸಾಹಿತಿ ಜ್ಯೋತಿ ಹೊಸೂರ ಜನನ.

1934: ಸಾಹಿತಿ ಶಿವಲಿಂಗಮ್ಮ ಕಟ್ಟಿ ಜನನ.

1933: ಸಾಹಿತಿ ಶೇಖರ ಇಡ್ಯ ಜನನ.

1910: ಖ್ಯಾತ ಸಾಹಿತಿ ಎಂ.ವಿ. ಸೀತಾರಾಮಯ್ಯ (9-9-1910ರಿಂದ 12-3-1990) ಅವರು ವೆಂಕಟದಾಸಪ್ಪ- ಸಾವಿತ್ರಮ್ಮ ದಂಪತಿಯ ಮಗನಾಗಿ ಮೈಸೂರಿನಲ್ಲಿ ಜನಿಸಿದರು. ರಾಘವ, ಮೈ.ವೆಂ.ಸೀ. ಇತ್ಯಾದಿ ಕಾವ್ಯನಾಮಗಳಿಂದ ಖ್ಯಾತರಾದ ಸೀತಾರಾಮಯ್ಯ 100ಕ್ಕೂ ಹೆಚ್ಚು ಸಾಹಿತ್ಯ ಕೃತಿಗಳನ್ನು ರಚಿಸಿದವರು. ದೇವರಾಜ ಬಹ್ದದೂರ್ ಬಹುಮಾನ, ರಾಜ್ಯ ಸರ್ಕಾರದ ಬಹುಮಾನ, ರಾಜ್ಯ ಸಾಹಿತ್ಯ ಅಕಾಡೆಮಿ ಪ್ರಶಸ್ತಿ, ರಾಜ್ಯೋತ್ಸವ ಪ್ರಶಸ್ತಿ, ಕನ್ನಡ ಸಾಹಿತ್ಯ ಪರಿಷತ್ ಬಹುಮಾನ ಇತ್ಯಾದಿ ಗೌರವಗಳಿಗೆ ಅವರು ಪಾತ್ರರಾಗಿದ್ದರು.

1893: ಅಮೆರಿಕದ ಅಧ್ಯಕ್ಷ ಕ್ಲೀವ್ ಲೆಂಡ್ ಅವರ ಪತ್ನಿ ಫ್ರಾನ್ಸೆಸ್ ಕ್ಲೀವ್ ಲೆಂಡ್ ಅವರು ಶ್ವೇತಭವನದಲ್ಲಿ ಪುತ್ರಿ ಎಸ್ತೆರ್ ಗೆ ಜನ್ಮ ನೀಡಿದರು. ಅಮೆರಿಕದ ಅಧ್ಯಕ್ಷರ ಅಧಿಕೃತ ನಿವಾಸದಲ್ಲಿ ಮಗು ಹುಟ್ಟಿದ ಘಟನೆ ಇದೇ ಮೊದಲು.

1850: ಆಧುನಿಕ ಹಿಂದಿ ಸಾಹಿತ್ಯದ ಪಿತಾಮಹರೆಂದೇ ಖ್ಯಾತರಾದ ಭರತೇಂದು ಹರಿಶ್ಚಂದ್ರ (1850-1885) ಜನನ.

1776: `ಯುನೈಟೆಡ್ ಕಾಲೋನಿ' ಎಂಬ ಹೆಸರನ್ನು ಕಾಂಟಿನೆಂಟಲ್ ಕಾಂಗ್ರೆಸ್ `ಯುನೈಟೆಡ್ ಸ್ಟೇಟ್ಸ್' ಎಂಬುದಾಗಿ ಬದಲಾಯಿಸಿತು. ಇದರೊಂದಿಗೆ `ಯುನೈಟೆಡ್ ಸ್ಟೇಟ್ಸ್' ಜನನವಾಯಿತು.

1659: ತನ್ನ ಸಿಂಹಾಸನಾರೋಹಣಕ್ಕೆ ಅಡ್ಡಿಯಾಗಬಾರದೆಂದು ಔರಂಗಜೇಬನು  ಸಹೋದರ ದಾರಾ ಶಿಖೋಹ್ ನನ್ನು ಕೊಲೆಗೈಯುವುದರೊಂದಿಗೆ ಮೊಘಲ್ ಕುಟುಂಬದ ಸದಸ್ಯರೊಳಗಿನ ಅಧಿಕಾರದ ಪೈಪೋಟಿ ಗಂಭೀರ ಹಂತ ತಲುಪಿತು. ಸಹೋದರನ ಕೊಲೆಯ ಬಳಿಕ ಔರಂಗಜೇಬನು ಆತನ ತಲೆಯನ್ನು ಕಡಿದು ಅದನ್ನು ಆಗ್ರಾಕೋಟೆಯಲ್ಲಿ ಬಂಧನದಲ್ಲಿದ್ದ ತಂದೆ ಶಹಜಹಾನ್ ಗೆ ಕಳುಹಿಸಿದ.

(ಸಂಗ್ರಹ: ನೆತ್ರಕೆರೆ ಉದಯಶಂಕರ)

Sunday, September 13, 2009

ಇಂದಿನ ಇತಿಹಾಸ History Today ಸೆಪ್ಟೆಂಬರ್ 08

ಇಂದಿನ ಇತಿಹಾಸ

ಸೆಪ್ಟೆಂಬರ್  08
ಬ್ರಿಟನ್ನಿನ ಪ್ರಧಾನಿ ಬ್ರೌನ್ ಅವರ ಪತ್ನಿ ಸಾರಾ ಬ್ರೌನ್ ಅವರಿಗೆ ವೊಲ್ವರ್ ಹ್ಯಾಂಪ್ಟನ್ ವಿಶ್ವವಿದ್ಯಾಲಯವು ಗೌರವ ಡಾಕ್ಟರೇಟ್ ಪದವಿ ನೀಡಿತು. ಕುಲಪತಿ ಲಾರ್ಡ್ ಸ್ವರಾಜ್ ಪಾಲ್  ವಿವಿ ಘಟಿಕೋತ್ಸವದಲ್ಲಿ ಲಾರಾಗೆ ಪದವಿ ಪ್ರದಾನ ಮಾಡಿದರು

2008: ಗೋದ್ನಾದಲ್ಲಿ 1200 ಮೆಗಾವಾಟ್ ಸಾಮರ್ಥ್ಯದ ಬೃಹತ್ ಶಾಖೋತ್ಪನ್ನ ವಿದ್ಯುತ್ ಘಟಕವನ್ನು ಆರಂಭಿಸುವ ಸಂಬಂಧ ಕರ್ನಾಟಕ ಮತ್ತು ಛತ್ತೀಸ್ ಗಢ ರಾಜ್ಯಗಳು ರಾಯಪುರದಲ್ಲಿ ಚಾರಿತ್ರಿಕ ಒಡಂಬಡಿಕೆ ಪತ್ರಕ್ಕೆ ಸಹಿ ಹಾಕಿದವು. ಕರ್ನಾಟಕ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ, ಛತ್ತೀಸ್ ಗಢ ಮುಖ್ಯಮಂತ್ರಿ ಡಾ. ರಮಣ್ ಸಿಂಗ್ ಸಮ್ಮುಖದಲ್ಲಿ ಕರ್ನಾಟಕ ವಿದ್ಯುತ್ ನಿಗಮದ ವ್ಯವಸ್ಥಾಪಕ ನಿರ್ದೇಶಕ ಡಾ. ಎಸ್. ಎಂ. ಜಾಮದಾರ್, ಇಂಧನ ಇಲಾಖೆಯ ಪ್ರಧಾನ ಕಾರ್ಯದರ್ಶಿ ಕೆ.ಜೈರಾಜ್, ಛತ್ತೀಸ್ ಗಢ ರಾಜ್ಯ ವಿದ್ಯುತ್ ಮಂಡಳಿಯ ಕಾರ್ಯದರ್ಶಿ ಸುಯೋಗ್ ಮಿಶ್ರಾ, ಇಂಧನ ಇಲಾಖೆ ಕಾರ್ಯದರ್ಶಿ ವಿವೇಕ್ ದಾಂಡ್ ಪರಸ್ಪರ ಒಡಂಬಡಿಕೆ ಪತ್ರಗಳನ್ನು ಹಸ್ತಾಂತರಿಸಿಕೊಂಡರು. ಜಿಂಜಗಿರಿ ಜಿಲ್ಲೆಯ ಗೋದ್ನಾದಲ್ಲಿ ಒಟ್ಟು 2000 ಮೆಗಾವಾಟ್ ಸಾಮರ್ಥ್ಯದ ವಿದ್ಯುತ್ ಘಟಕವನ್ನು ಕರ್ನಾಟಕ ವಿದ್ಯುತ್ ನಿಗಮ ನಿರ್ಮಿಸಲಿದ್ದು ಮೊದಲ ಹಂತದಲ್ಲೇ 1200 ಮೆಗಾವಾಟ್ ವಿದ್ಯುತ್ ಉತ್ಪಾದನೆ ಮಾಡುವ ಸಂಬಂಧ ಒಡಂಬಡಿಕೆ ಏರ್ಪಟ್ಟಿತು. ನಂತರ ಎರಡನೇ ಹಂತದಲ್ಲಿ 800 ಮೆಗಾವಾಟ್ ವಿದ್ಯುತ್ ಉತ್ಪಾದಿಸಲಾಗುತ್ತದೆ.

2007: ಬೆಂಗಳೂರಿನ ಕುಮಾರಸ್ವಾಮಿ ಬಡಾವಣೆಯ ಗೌಡನಪಾಳ್ಯದಲ್ಲಿ ಲಘು ವಿಮಾನವೊಂದು ನಿಯಂತ್ರಣ ತಪ್ಪಿ ಕೆರೆಗೆ ಬಿದ್ದ ಪರಿಣಾಮವಾಗಿ ಪೈಲಟ್ ಸಹಿತ ನಾಲ್ವರು ಮೃತರಾದರು. ಮೃತರನ್ನು ಪಟ್ನಾದ ಪೈಲಟ್ ಸಂತೋಷ್, ಸಹ ಪೈಲಟ್ ಕೊಯಮತ್ತೂರಿನ ಷಣ್ಮುಗಂ, ಕೊಟ್ಟಾಯಂನ ಸುನೀಲ್ ಜೋಸೆಫ್ ಮತ್ತು ಚೆನ್ನೈನ ಮೊಹಮ್ಮದ್ ಶಬೀರ್ ಎಂದು ಗುರುತಿಸಲಾಯಿತು. ಕೇರಳದ ಆಲೂಕಾಸ್ ಜ್ಯುಯೆಲರಿ ಗ್ರೂಪಿಗೆ ಸೇರಿದ ಪಿ68/ಸಿ ಲಘು ವಿಮಾನ ಬೆಂಗಳೂರಿನಿಂದ ಕೊಚ್ಚಿಗೆ ಹೊರಟಿತ್ತು. ಮಧ್ಯಾಹ್ನ ಮೂರು ಗಂಟೆ ಸುಮಾರಿಗೆ ಎಚ್ ಎಎಲ್ ವಿಮಾನ ನಿಲ್ದಾಣದಿಂದ ಹೊರಟ ವಿಮಾನ ಕೆಲವೇ ನಿಮಿಷಗಳಲ್ಲಿ (3.14ಕ್ಕೆ) ನಿಯಂತ್ರಣ ಕಳೆದುಕೊಂಡಿತು. ಗೌಡನಪಾಳ್ಯದಲ್ಲಿರುವ ತೆಂಗಿನ ಮರವೊಂದಕ್ಕೆ ಮೊದಲು ಡಿಕ್ಕಿ ಹೊಡೆದು, ನಂತರ ಕೆರೆಗೆ ಬಿತ್ತು.

2007: ಇಂಗ್ಲೆಂಡಿನ ಲಾರ್ಡ್ಸ್ ಕ್ರೀಡಾಂಗಣದಲ್ಲಿ ಅಂತ್ಯಗೊಂಡ ಇಂಗ್ಲೆಂಡ್ ವಿರುದ್ಧದ ಏಕದಿನ ಕ್ರಿಕೆಟ್ ಸರಣಿಯ ಅಂತಿಮ ಪಂದ್ಯದಲ್ಲಿ ಭಾರತ ಸೋಲು ಅನುಭವಿಸಿತು. ಬೌಲರ್ ಹಾಗೂ ಬ್ಯಾಟ್ಸ್ ಮನ್ ಗಳ ಸೊಗಸಾದ ಪ್ರದರ್ಶನದ ನೆರವಿನಿಂದ ಏಳು ವಿಕೆಟ್ ಗೆಲುವು ಸಾಧಿಸಿದ ಆತಿಥೇಯ ಇಂಗ್ಲೆಂಡ್ 4-3ರಲ್ಲಿ ಸರಣಿ ಗೆದ್ದು ಬೀಗಿತು. ಸರಣಿಯಲ್ಲಿ 70.33 ಸರಾಸರಿಯಲ್ಲಿ ಒಟ್ಟು 422 ರನ್ ಪೇರಿಸಿದ ಇಯಾನ್ ಬೆಲ್ `ಸರಣಿ ಶ್ರೇಷ್ಠ' ಎನಿಸಿದರು. ಕಾಲಿಂಗ್ ವುಡ್ ಗೆ `ಪಂದ್ಯ ಪುರುಷೋತ್ತಮ' ಗೌರವ ಲಭಿಸಿತು.

2007: ಬ್ರಿಟನ್ನಿನ ಪ್ರಧಾನಿ ಬ್ರೌನ್ ಅವರ ಪತ್ನಿ ಸಾರಾ ಬ್ರೌನ್ ಅವರಿಗೆ ವೊಲ್ವರ್ ಹ್ಯಾಂಪ್ಟನ್ ವಿಶ್ವವಿದ್ಯಾಲಯವು ಗೌರವ ಡಾಕ್ಟರೇಟ್ ಪದವಿ ನೀಡಿತು. ಕುಲಪತಿ ಲಾರ್ಡ್ ಸ್ವರಾಜ್ ಪಾಲ್  ವಿವಿ ಘಟಿಕೋತ್ಸವದಲ್ಲಿ ಲಾರಾಗೆ ಪದವಿ ಪ್ರದಾನ ಮಾಡಿದರು.

2007: ಮೊಬೈಲ್ ಸಂಸ್ಥೆ ಹಚ್ ಮೊಟ್ಟಮೊದಲ ಬಾರಿಗೆ ಕರೆ ನಿರ್ಬಂಧಿಸುವ (ಕಾಲ್ ಫಿಲ್ಟರ್) ಸೇವೆ ಆರಂಭಿಸಿತು. ಈ ಸೌಲಭ್ಯದಡಿಯಲ್ಲಿ ಗ್ರಾಹಕರು ನಿರ್ದಿಷ್ಟವಾದ ಸಂಖ್ಯೆಗಳಿಂದ ಒಳಬರುವ ಕರೆಗಳನ್ನು ತಡೆಯಬಹುದು. ಅನಗತ್ಯವಾದ ಸಂಖ್ಯೆಗಳಿಂದ ಒಳಬರುವ ಕರೆ ಬಂದಾಗ, ಕರೆ ಮಾಡಿದವರಿಗೆ ಪ್ರಸ್ತುತ ಹಚ್ ಚಂದಾದಾರರು ನಿಮ್ಮ ಕರೆ ಸ್ವೀಕರಿಸಲು ಇಚ್ಛಿಸುವುದಿಲ್ಲ, ದಯವಿಟ್ಟು ಸ್ವಲ್ಪ ಸಮಯದ ನಂತರ ಪ್ರಯತ್ನಿಸಿ ಎಂಬ ಸಂದೇಶ ಕೇಳಿಸುತ್ತದೆ. ಈ ಸೇವೆಯಿಂದ ಗ್ರಾಹಕರಿಗೆ ತಮಗೆ ಬರುವ ಕರೆಗಳ ಮೇಲೆ ಸಂಪೂರ್ಣ ನಿಯಂತ್ರಣ ದೊರೆಯುತ್ತದೆ. ಸ್ವೀಕರಿಸದ ಕರೆಗಳ ಬಗ್ಗೆ  ನೀಡುವ ಮಾಹಿತಿ (ಮಿಸ್ಡ್ ಕಾಲ್ ಅಲರ್ಟ್) ತಡೆಹಿಡಿಯಲಾದ ಸಂಖ್ಯೆಗಳಿಂದ ಬಂದ ಕರೆಗಳ ಕುರಿತು ನೀಡಲಾಗುತ್ತದೆ. ತಡೆಹಿಡಿಯಲಾದ ಸಂಖ್ಯೆಯಿಂದ ಮತ್ತೆ ಕರೆ ಬರುವಂತೆ ಸಹ ಚಂದಾದಾರರು ಮಾಡಿಕೊಳ್ಳಲು ಅವಕಾಶವಿರುತ್ತದೆ. ಕಪ್ಪು ಪಟ್ಟಿಯಿಂದ ಆ ಸಂಖ್ಯೆಗಳನ್ನು ತೆಗೆದುಹಾಕಿ ಒಳಬರುವ ಕರೆಗಳನ್ನು ಪುನಃ ಪಡೆಯಬಹುದು.

2007: ಲಾಹೋರಿನಲ್ಲಿ ನಡೆದ ಪ್ರಥಮ ದಕ್ಷಿಣ ಏಷ್ಯಾ ಈಜು ಮತ್ತು ವಾಟರ್ ಪೋಲೊ ಚಾಂಪಿಯನ್ಶಿಪ್ ನಲ್ಲಿ ಭಾರತದ ಪುರುಷರು ಒಟ್ಟಾರೆ ಹತ್ತೊಂಬತ್ತು ಚಿನ್ನದ ಪದಕಗಳನ್ನು ಗೆದ್ದುಕೊಂಡರು. ಅಗ್ನೀಶ್ವರ್ ಜಯಪ್ರಕಾಶ್ ಅವರು ಮುಕ್ತ ವಿಭಾಗದಲ್ಲಿ ಎರಡು ಬಂಗಾರದ ಪದಕ ಗೆಲ್ಲುವಲ್ಲಿ ಯಶಸ್ವಿಯಾದರು. ಅವರು 400 ಮೀ. ವೈಯಕ್ತಿಕ ಮೆಡ್ಲೆಯಲ್ಲಿ 4 ನಿಮಿಷ 48 ಸೆಕೆಂಡುಗಳಲ್ಲಿ ಗುರಿ ಮುಟ್ಟಿದರು. ಅವರಿಗೆ ನಿಕಟ ಪೈಪೋಟಿ ನೀಡಿದ ಭಾರತದವರೇ ಆದ ಆದಿತ್ಯ ಸಾಂಗ್ವೇಕರ್ 4 ನಿಮಿಷ  ಹಾಗೂ 51.67 ಸೆಕೆಂಡುಗಳಲ್ಲಿ ನಿಗದಿತ ಅಂತರವನ್ನು ಕ್ರಮಿಸಿ, ಎರಡನೇ ಸ್ಥಾನ ಪಡೆದರು. ಕಂಚಿನ ಪದಕವು ಆತಿಥೇಯ ಪಾಕಿಸ್ತಾನದ ಆದಿಲ್ ಬೇಗ್ ಅವರ ಪಾಲಾಯಿತು. ಅವರು 5 ನಿಮಿಷ ಹಾಗೂ 11.46 ಸೆಕೆಂಡುಗಳಲ್ಲಿ ಗುರಿ ತಲುಪಿದರು. 100 ಮೀ. ಬ್ರೆಸ್ಟ್ ಸ್ಟ್ರೋಕಿನಲ್ಲಿಯೂ ಅಗ್ನೀಶ್ವರ್ಗೆ (1:07.73 ಸೆ.) ಅಗ್ರಸ್ಥಾನದ ಗೌರವ ಸಿಕ್ಕಿತು. ಪಾಕಿಸ್ಥಾನದ ಅಬ್ದುಲ್ ಅಜೀಜ್ (1:10.25 ಸೆ.) ಹಾಗೂ ಶ್ರೀಲಂಕಾದ ಎಂ.ಎ.ಚಣಕಾ (1:12.03 ಸೆ.) ಕ್ರಮವಾಗಿ ಬೆಳ್ಳಿ ಹಾಗೂ ಕಂಚು ಪಡೆದರು.

2007:  ಮೊಹಮ್ಮದ್ ಆಸಿಫ್ ಗೆ ಬ್ಯಾಟಿನಿಂದ ಹೊಡೆದ ಪ್ರಕರಣಕ್ಕೆ ಸಂಬಂಧಿಸಿದಂತೆ ಪಾಕಿಸ್ಥಾನ ಕ್ರಿಕೆಟ್ ಮಂಡಳಿ(ಪಿಸಿಬಿ)ಯು ಶೋಯಬ್ ಅಖ್ತರ್ ಮೇಲೆ ಅನಿರ್ಧಿಷ್ಟ ಅವಧಿಯ ನಿಷೇಧ ಹೇರಿತು. ಟ್ವೆಂಟಿ-20 ವಿಶ್ವಕಪ್ ಕ್ರಿಕೆಟಿನಲ್ಲಿ ಆಡುವ ಪಾಕಿಸ್ಥಾನ ತಂಡದಲ್ಲಿ ಇದ್ದ  ಶೋಯಬ್ ಅಭ್ಯಾಸದ ಸಂದರ್ಭದಲ್ಲಿ ಆಸಿಫ್ ಜೊತೆಗೆ ಮಾತಿನ ಚಕಮಕಿ ನಡೆಸಿದ್ದರು. ಆನಂತರ ಕೋಪದಿಂದ ಬ್ಯಾಟಿನಿಂದ ಹೊಡೆದಿದ್ದರು. ಇದನ್ನು ಗಂಭೀರವಾಗಿ ಪರಿಗಣಿಸಿ, ಪಿಸಿಬಿ ನಿಷೇಧ ಶಿಕ್ಷೆ ವಿಧಿಸಿತು.

2006: ಮಹಾರಾಷ್ಟ್ರದ ನಾಸಿಕ್ ಜಿಲ್ಲೆಯ ಸೂಕ್ಷ್ಮ ಪಟ್ಟಣವಾದ ಮಾಲೆಗಾಂವ್ ನ ಮಸೀದಿ ಹಾಗೂ ಮುಶಾವರಾತ್ ಮಾರುಕಟ್ಟೆ ಪ್ರದೇಶದಲ್ಲಿ ಶಕ್ತಿಶಾಲಿ ತ್ರಿವಳಿ ಸ್ಫೋಟಗಳು ಸಂಭವಿಸಿದ ಪರಿಣಾಮವಾಗಿ 38 ಜನ ಮೃತರಾಗಿ 100ಕ್ಕೂ ಹೆಚ್ಚು ಜನ ಗಾಯಗೊಂಡರು. ನೂರಾನಿ ಮಸೀದಿ ಬಳಿಯ ಬಡಾ ಖಬರಸ್ಥಾನ ಪ್ರದೇಶದ ಹೊರಗೆ ಹಾಗೂ ನಗರದ ಹೃದಯ ಭಾಗದಲ್ಲಿ ಜನರು ಶುಕ್ರವಾರದ ಪ್ರಾರ್ಥನೆ ಮುಗಿಸಿ ಹೊರಡುತ್ತಿದ್ದಾಗ ಮಧ್ಯಾಹ್ನ 1.50 ರ ಸಮಯದಲ್ಲಿ ಈ ಸ್ಫೋಟಗಳು ಸಂಭವಿಸಿದವು.

2006: ಅಮೆರಿಕದ ಸೇನೆಗಾಗಿ ಕ್ಷಿಪಣಿ ರಕ್ಷಣಾ ವ್ಯವಸ್ಥೆಯಲ್ಲಿ ಬಳಸಲು ಉಪಯುಕ್ತವಾದ `ಮಾದರಿ ಮಾನ್ಯತೆ' (ಪ್ಯಾಟರ್ನ್ ರೆಕಗ್ನಿಷನ್) ಭಾಗಗಳನ್ನು ಅಭಿವೃದ್ಧಿ ಪಡಿಸಿದ ಭಾರತದ ಅಸ್ಸಾಂ ಮೂಲದ ಅಮೆರಿಕ ವಿಜ್ಞಾನಿ ಅಭಿಜಿತ್ ಮಹಾಲನೋಬಿಸ್ ಅವರನ್ನು ಪ್ರತಿಷ್ಠಿತ ಎಮರಾಲ್ಡ್ ಆನರ್ಸ್ ಸಂಸ್ಥೆಯು `ವರ್ಷದ ವಿಜ್ಞಾನಿ' ಗೌರವಕ್ಕೆ ಆಯ್ಕೆ ಮಾಡಿತು. ಪ್ರತಿಷ್ಠಿತ ಎಮರಾಲ್ಡ್ ಆನರ್ಸ್ ಸಂಸ್ಥೆಯು ಅಲ್ಪಸಂಖ್ಯಾತ ವಿಜ್ಞಾನಿಗಳ ಸಾಧನೆಯನ್ನು ಗುರುತಿಸಿ ಈ ಗೌರವವನ್ನು ನೀಡುತ್ತದೆ. ಅಮೆರಿಕ ಸೇನೆಯ ಲಕ್ಹೀಡ್ ಮಾರ್ಟಿನ್ ಕ್ಷಿಪಣಿ ಮತ್ತು ಅಗ್ನಿ ನಿಯಂತ್ರಣ ವಿಭಾಗದಲ್ಲಿ ಕೆಲಸ ಮಾಡುತ್ತಿರುವ ಅಸ್ಸಾಂ ಮೂಲದ ಮಹಾಲನೋಬಿಸ್ ಅವರು ಮನುಷ್ಯರು ಮತ್ತು ಪ್ರಾಣಿಗಳ ಪ್ರಮುಖ ಜೋಡಣೆಗಳ ವಿಶ್ಲೇಷಣೆ ಮಾಡಲು ಸಾಧ್ಯವಾಗುವಂತಹ ಕಂಪ್ಯೂಟರ್ ತಂತ್ರಜ್ಞಾನ ಅಭಿವೃದ್ಧಿ ಪಡಿಸಿದ್ದರು. ಇದು ಕಂಪ್ಯೂಟರೀಕೃತ ಕ್ಷಿಪಣಿ ಬ್ಯಾಟರಿಗಳು ಗುರಿ ತಪ್ಪುವುದುನ್ನು ನಿವಾರಿಸಲು ಅನುಕೂಲವಾಗುವಂತಹ `ಮಾದರಿ ಮಾನ್ಯತೆ ವ್ಯವಸ್ಥೆ' ಅಭಿವೃದ್ಧಿ ಪಡಿಸಲು ಅನುಕೂಲ ಒದಗಿಸಿತು. ಮಹಾಲನೋಬಿಸ್ ಅವರ `ಆಟೋಮ್ಯಾಟಿಕ್ ಟಾರ್ಗೆಟ್ ರೆಕಗ್ನಿಷನ್ ಸಿಸ್ಟಮ್' ಕ್ಷಿಪಣಿ ಮತ್ತು ಅಮೆರಿಕ ಸೇನೆಯ ಅಗ್ನಿ ನಿಯಂತ್ರಣ ವ್ಯವಸ್ಥೆಗೆ ಅಡಿಪಾಯ ಒದಗಿಸಿತು. ಅಷ್ಟೇ ಅಲ್ಲ, ಭವಿಷ್ಯದ ಎಲ್ಲ ಸೇನಾ ಕಂಪ್ಯೂಟರ್ ಮಾನ್ಯತಾ ವ್ಯವಸ್ಥೆಗಳಿಗೆ ಒಂದು ಮಾದರಿಯನ್ನು ಒದಗಿಸಿತು ಎಂದು `ಸೈನ್ಸ್ ಸ್ಪ್ರೆಕ್ಟಮ್' ಬರೆಯಿತು.

2006: ವಿವಾದಕ್ಕೆ ಎಡೆ ಮಾಡಿದ್ದ ಕರ್ನಾಟಕದ ಧಾರ್ಮಿಕ ದತ್ತಿ ಕಾಯ್ದೆಯನ್ನು ಹೈಕೋರ್ಟ್ ರದ್ದು ಪಡಿಸಿತು. ಈ ಕಾಯ್ದೆ ಹಿಂದುಗಳಲ್ಲಿ ಒಡುಕುಂಟು ಮಾಡುವಂತಹುದು ಎಂದು ಕೋರ್ಟ್ ಹೇಳಿತು. ಮಠಗಳು, ಜೈನರು ಮತ್ತು ಸಿಖ್ ಧಾರ್ಮಿಕ ಸಂಸ್ಥೆಗಳನ್ನು ಈ ಕಾಯ್ದೆಯ ವ್ಯಾಪ್ತಿಯಿಂದ ಹೊರಗಿಟ್ಟ ಸರ್ಕಾರದ ನಿಲುವು ಅಸಮಾನತೆಯಿಂದ ಕೂಡಿದೆ ಎಂದು ನ್ಯಾಯಮೂರ್ತಿ ಗುರುರಾಜನ್ ಮತ್ತು ನ್ಯಾಯಮೂರ್ತಿ ಸಿ.ಆರ್. ಕುಮಾರ ಸ್ವಾಮಿ ಅವರನ್ನು ಒಳಗೊಂಡ ಪೀಠ ತಿಳಿಸಿತು.

2006: ಆಸ್ಟ್ರೇಲಿಯಾದ ಖ್ಯಾತ ಮೋಟಾರ್ ರೇಸಿಂಗ್ ಚಾಲಕ ಪೀಟರ್ ಬ್ರೋಕ್ ಅವರು ಸಿಡ್ನಿಯಲ್ಲಿ ನಡೆದ ಮೋಟಾರ್ ರ್ಯಾಲಿಯಲ್ಲಿ ಸಂಭವಿಸಿದ ಅಪಘಾತದಲ್ಲಿ ಮೃತರಾದರು.

2006: ಅಮೆರಿಕದ ಉತ್ತರ ಕ್ಯಾಲಿಫೋರ್ನಿಯಾದ ಯುರೇಕಾ ಅರಣ್ಯದಲ್ಲಿ ಇತ್ತೀಚೆಗೆ ಪತ್ತೆಯಾದ ಮೂರು ರೆಕ್ ವುಡ್ ಮರಗಳು (ಕೆಂಪು ಬಣ್ಣದ ಮಂಜತ್ತಿ ಮರ) ವಿಶ್ವದಲ್ಲೇ ಅತಿ ಎತ್ತರ ಎಂದು ತಜ್ಞರು ಅಂದಾಜು ಮಾಡಿದರು. ಈ ಮೂರು ಮರಗಳಲ್ಲಿ ಒಂದು ಮರ ಸುಮಾರು 378.1 ಅಡಿ (115.2 ಮೀಟರ್) ಎತ್ತರವಿದ್ದು, ಇದಕ್ಕೆ `ಹೈಪೀರಿಯನ್' ಎಂದು ಹೆಸರಿಡಲಾಗಿದೆ.

2001: ಬಾಂಗ್ಲಾದೇಶದ ಬ್ಯಾಟ್ಸ್ ಮನ್ ಮಹಮ್ಮದ್ ಆಶ್ರಫುಲ್ ಅವರು ಕೊಲಂಬೋದಲ್ಲಿ ನಡೆದ ಒಂದು ದಿನದ ಏಷಿಯನ್ ಟೆಸ್ಟ್ ಚಾಂಪಿಯನ್ ಶಿಪ್ ನಲ್ಲಿ ಶ್ರೀಲಂಕಾ ವಿರುದ್ಧ 114 ರನ್ನುಗಳನ್ನು ಗಳಿಸಿ, ಕ್ರಿಕೆಟ್ ಇತಿಹಾಸದಲ್ಲೇ ಶತಕ ಬಾರಿಸಿದ ಅತ್ಯಂತ ಕಿರಿಯ ಆಟಗಾರ ಎಂಬ ಹೆಗ್ಗಳಿಕೆ ಪಡೆದರು. ತಮ್ಮ 17ನೇ ಜನ್ಮದಿನದ ಮುನ್ನಾದಿನ ಅವರು ಈ ಸಾಧನೆ ಮಾಡಿದರು. 1960-61ರಲ್ಲಿ ಮುಸ್ತಾಕ್ ಮಹಮ್ಮದ್ ಅವರು 17 ವರ್ಷ 81 ದಿನಗಳ ವಯಸ್ಸಿನಲ್ಲಿ ಭಾರತ ವಿರುದ್ಧ ನಡೆದ ಪಂದ್ಯದಲ್ಲಿ ಶತಕ ಬಾರಿಸಿ ಅತ್ಯಂತ ಕಿರಿಯ ಆಟಗಾರ ಎನಿಸಿದ್ದರು.

1999: ಪಂಜಾಬಿನ ಮುಖ್ಯಮಂತ್ರಿಯಾಗಿ ಹರಿಚರಣ್ ಸಿಂಗ್ ಬ್ರಾರ್ ಅಧಿಕಾರ ಸ್ವೀಕಾರ.

1988: ತಮ್ಮ ಮೈಕ್ರೋ ಲೈಟ್ ಸಿಂಗಲ್ ಎಂಜಿನ್ ವಿಮಾನದಲ್ಲಿ ಲಂಡನ್ನಿನಿಂದ ಅಹಮದಾಬಾದಿಗೆ 21 ದಿನಗಳಲ್ಲಿ ಕ್ರಮಿಸುವ ಮೂಲಕ ಕೈಗಾರಿಕೋದ್ಯಮಿ ವಿಜಯಪತ್ ಸಿಂಘಾನಿಯಾ ಅವರು ವಿಮಾನಯಾನದಲ್ಲಿ ದಾಖಲೆ ನಿರ್ಮಿಸಿದರು.

1982: ಕಾಶ್ಮೀರಿ ನಾಯಕ ಷೇಕ್ ಅಬ್ದುಲ್ಲ ಅವರು ಶ್ರೀನಗರದಲ್ಲಿ ತಮ್ಮ 76ನೇ ವಯಸ್ಸಿನಲ್ಲಿ ನಿಧನರಾದರು.

1952: ಎರ್ನೆಸ್ಟ್ ಹೆಮಿಂಗ್ವೇ ಅವರ `ದಿ ಓಲ್ಡ್ ಮ್ಯಾನ್ ಅಂಡ್ ದಿ ಸೀ' ಕಾದಂಬರಿ ಪ್ರಕಟಗೊಂಡಿತು. ಈ ಕಾದಂಬರಿ ಹೆಮಿಂಗ್ವೇ ಅವರಿಗೆ `ಪುಲಿಟ್ಜರ್ ಪ್ರಶಸ್ತಿ'ಯನ್ನು ತಂದು ಕೊಟ್ಟಿತಲ್ಲದೆ, 1954ರಲ್ಲಿ ಸಾಹಿತ್ಯಕ್ಕಾಗಿ ನೀಡಲಾಗುವ ನೊಬೆಲ್ ಪ್ರಶಸ್ತಿ ತಂದುಕೊಡುವಲ್ಲಿ ಪ್ರಮುಖ ಪಾತ್ರ ವಹಿಸಿತು.

1949: ಸಾಹಿತಿ ಜರಗನಹಳ್ಳಿ ಶಿವಶಂಕರ್ ಜನನ.

1945: ಸಾಹಿತಿ ಕವಿತಾ ಕೃಷ್ಣ ಜನನ.

1942: ಸಾಹಿತಿ ಬಿ.ಎಸ್. ಸ್ವಾಮಿ ಜನನ.

1939: ಸಾಹಿತಿ ಕುಲಶೇಖರಿ ಜನನ.

1938: ಕೃಷಿ, ಪರಿಸರ ಕಾಳಜಿ, ಸಾಹಿತ್ಯ, ವಿಜ್ಞಾನ, ಮಾನವ ಶಾಸ್ತ್ರ ಇತ್ಯಾದಿ ಕ್ಷೇತ್ರಗಳಲ್ಲಿ ಅಪಾರ ಅಧ್ಯಯನ ನಡೆಸಿ ಪಾಂಡಿತ್ಯ ಪಡೆದ ಕೆ.ಪಿ. ಪೂರ್ಣಚಂದ್ರ್ರ ತೇಜಸ್ವಿ ಅವರು ಕುವೆಂಪು (ಕೆ.ವಿ. ಪುಟ್ಟಪ್ಪ) - ತಾಯಿ ಹೇಮಾವತಿ ದಂಪತಿಯ ಮಗನಾಗಿ ಶಿವಮೊಗ್ಗ ಜಿಲ್ಲೆಯ ತೀರ್ಥಹಳ್ಳಿಯಲ್ಲಿ ಈದಿನ ಜನಿಸಿದರು. ನವೋದಯ, ನವ್ಯ, ನವ್ಯೋತ್ತರ, ಆಧುನಿಕ ಕನ್ನಡ ಸೇರಿದಂತೆ ಕನ್ನಡ ಸಾಹಿತ್ಯದ ಎಲ್ಲ ಘಟ್ಟಗಳಲ್ಲೂ ಸಾಹಿತ್ಯ ಕೃತಿ ರಚಿಸಿದ ತೇಜಸ್ವಿ ಅವರು ರಾಜ್ಯ ಸಾಹಿತ್ಯ ಅಕಾಡೆಮಿ ಪ್ರಶಸ್ತಿ, ಕರ್ನಾಟಕ ಸಾಹಿತ್ಯ ಅಕಾಡೆಮಿ ಗೌರವ ಪ್ರಶಸ್ತಿ, ರಾಜ್ಯೋತ್ಸವ ಪ್ರಶಸ್ತಿ ಸೇರಿದಂತೆ ಹಲವಾರು ಪ್ರಶಸ್ತಿ ಪುರಸ್ಕಾರಗಳಿಗೆ ಭಾಜನರಾದವರು.

1933: ಭಾರತದ ಖ್ಯಾತ ಹಿನ್ನೆಲೆ ಗಾಯಕಿ ಆಶಾ ಭೋಂಸ್ಲೆ ಜನನ. 925ಕ್ಕೂ ಹೆಚ್ಚು ಬಾಲಿವುಡ್ ಚಿತ್ರಗಳಿಗೆ ಹಿನ್ನೆಲೆ ಗಾಯನ ನೀಡಿರುವ ಆಶಾ ಅವರು ಲತಾ ಮಂಗೇಶ್ಕರ್ ಅವರ ಸಹೋದರಿ. ಸಿನಿಮಾ, ಪಾಪ್, ಘಜಲ್, ಭಜನ್, ಭಾರತದ ಶಾಸ್ತ್ರೀಯ ಸಂಗೀತ, ಜಾನಪದ ಗೀತೆಗಳು, ಕವ್ವಾಲಿ ಮತ್ತು ರಬೀಂದ್ರ ಸಂಗೀತವನ್ನು ಹಾಡುವುದರಲ್ಲಿ ಆಶಾ ನಿಷ್ಣಾತರು. ಹಿಂದಿ, ಮರಾಠಿ, ಗುಜರಾತಿ, ತಮಿಳು, ಕನ್ನಡ, ಇಂಗ್ಲಿಷ್, ರಷ್ಯನ್, ಮಲಯ ಸೇರಿದಂತೆ 14 ಭಾಷೆಗಳಲ್ಲಿ ಹಾಡಿದ ಹೆಗ್ಗಳಿಕೆ ಇವರದು. ಇವರು ಹಾಡಿರುವ ಹಾಡುಗಳ ಒಟ್ಟು ಸಂಖ್ಯೆ 12,000ಕ್ಕೂ ಹೆಚ್ಚು ಎಂದು ಅಂದಾಜು.

1928: ಸಾಹಿತಿ ಟಿ. ಮಹಾಬಲೇಶ್ವರ ಭಟ್ಟ ಜನನ.

1664: ಡಚ್ಚರು ನ್ಯೂ ಆಮ್ ಸ್ಟರ್ ಡ್ಯಾಮನ್ನು ಬ್ರಿಟಿಷರಿಗೆ ಒಪ್ಪಿಸಿದರು. ಬ್ರಿಟಿಷರು ಅದಕ್ಕೆ ಯಾರ್ಕಿನ ಡ್ಯೂಕ್ ಭವಿಷ್ಯದ ದೊರೆ ಎರಡನೇ ಜೇಮ್ಸ್  ಗೌರವಾರ್ಥ `ನ್ಯೂಯಾರ್ಕ್' ಎಂದು ಹೆಸರಿಟ್ಟರು.

(ಸಂಗ್ರಹ: ನೆತ್ರಕೆರೆ ಉದಯಶಂಕರ)

Friday, September 11, 2009

ಇಂದಿನ ಇತಿಹಾಸ History Today ಸೆಪ್ಟೆಂಬರ್ 07

ಇಂದಿನ ಇತಿಹಾಸ

ಸೆಪ್ಟೆಂಬರ್  07
ಮಹಾತ್ಮಗಾಂಧಿ ಪಾತ್ರಕ್ಕಾಗಿ ಆಸ್ಕರ್ ಪ್ರಶಸ್ತಿ ಪಡೆದಿದ್ದ ನಟ ಸರ್ ಬೆನ್ ಕಿಂಗ್ ಸ್ಲೆ ತಮಗಿಂತ ಅರ್ಧದಷ್ಟು ವಯಸ್ಸಿನ ಬ್ರೆಜಿಲ್ ನಟಿಯೊಬ್ಬರನ್ನು ಗುಟ್ಟಾಗಿ ಮದುವೆಯಾದರು. ಇದು ಕಿಂಗ್ ಸ್ಲೆ ಅವರಿಗೆ ನಾಲ್ಕನೇ ಮದುವೆ. 63 ವರ್ಷದ ಬೆನ್ 34 ವರ್ಷದ ಡೇ ನಿಯಲಾ ಕಾರ್ನ್ ನಿರೋ ಅವರನ್ನು ವಿವಾಹವಾದರು.

ಇದು ಟೆಲಿವಿಷನ್ ಜನ್ಮದಿನ. 1927ರಲ್ಲಿ ಅಮೆರಿಕದ ಸಂಶೋಧಕ ಫಿಲೋ ಟಿ ಫ್ರಾನ್ಸ್ ವರ್ಥ್ ಅವರು ಸ್ಯಾನ್ ಫ್ರಾನ್ಸಿಸ್ಕೋದಲ್ಲಿ `ಇಮೇಜ್ ಡಿಸೆಕ್ಟರ್' ಎಂಬ ಉಪಕರಣವನ್ನು ಬಳಸಿ ಸಂಪೂರ್ಣವಾಗಿ ಎಲೆಕ್ಟ್ರಾನಿಕ್ ಮೂಲಕ ಚಿತ್ರವನ್ನು ರವಾನಿಸುವಲ್ಲಿ ಯಶಸ್ವಿಯಾದರು. `ನೀನು  ಎಲೆಕ್ಟ್ರಾನಿಕ್ ಟೆಲಿವಿಷನ್!' ಎಂದು ಈ ಸಂದರ್ಭದಲ್ಲಿ ಅವರು ಉದ್ಘರಿಸಿದರು.

2008: ಜೈಲಿನಲ್ಲಿ ನಡೆದ ಗಲಭೆ ಸಂದರ್ಭದಲ್ಲಿ ಜೈಲಿನಲ್ಲಿದ್ದ 69 ಕೈದಿಗಳ ಸಾಮೂಹಿಕ ಹತ್ಯೆಯಲ್ಲಿ ಭಾಗಿಯಾಗಿದ್ದ ಜೈಲಿನ ನಿವೃತ್ತ ಅಧಿಕಾರಿಯೊಬ್ಬನಿಗೆ ಹೊಂಡುರಾಸ್ ನ್ಯಾಯಾಲಯ 1,035 ವರ್ಷ ಸೆರೆವಾಸ ವಿಧಿಸಿ ಆದೇಶ ಹೊರಡಿಸಿತು. 2003ರ ಏಪ್ರಿಲಿನಲ್ಲಿ ಕೆರಿಬೀನ್ ಪ್ರಾಂತ್ಯದ ಅಟಲಾಂಟದ ಎಲ್ ಪೋರ್ವೆನೀರ್ ಜೈಲಿನಲ್ಲಿ ನಡೆದ ಸಾಮೂಹಿಕ ಹತ್ಯೆಯಲ್ಲಿ ಭಾಗಿಯಾಗಿದ್ದ 21ಜನ ಸಿಬ್ಬಂದಿಗೆ ಹೊಂಡುರಾಸಿನ ಲಾ ಸೀಬಾ ಪ್ರಾಂತ್ಯದ ನ್ಯಾಯಾಲಯ ವಿವಿಧ ಕಾನೂನುಗಳ ಅಡಿಯಲ್ಲಿ ಸೆರೆವಾಸದ ಶಿಕ್ಷೆ ವಿಧಿಸಿತು ಎಂದು ಅಟಾರ್ನಿ ಜನರಲ್ ಕಚೇರಿ ತಿಳಿಸಿತು. ಪೊಲೀಸ್ ಸಿಬ್ಬಂದಿ, ಸೇನೆ, ಜೈಲು ಅಧಿಕಾರಿಗಳು ಮತ್ತು ಕೈದಿಗಳು ಈ ಶಿಕ್ಷೆಗೆ ಒಳಗಾದವರು.

2007: ಲಾರಿಯೊಂದು ಕಣಿವೆಗೆ ಉರುಳಿ 128 ಜನ ಮೃತರಾಗಿ ಸುಮಾರು ನೂರು ಮಂದಿ ಗಾಯಗೊಂಡ ಘಟನೆ ಈದಿನ ರಾತ್ರಿ ಎಂಟು ಗಂಟೆಗೆ ರಾಜಸ್ಥಾನದ ಉದಯಪುರಕ್ಕೆ 150 ಕಿಲೋ ಮೀಟರ್ ದೂರವಿರುವ ರಾಜಸಮುಂದ್ ಜಿಲ್ಲೆಯ ದೆಸುರಿ ಕಿ ನಾಲ್ ಗ್ರಾಮದ ಬಳಿ ನಡೆಯಿತು. ಚಾಲಕನ ನಿಯಂತ್ರಣ ತಪ್ಪಿ ಲಾರಿಯು ರಸ್ತೆ ಪಕ್ಕದ ರಕ್ಷಣಾ ಗೋಡೆಗೆ ಡಿಕ್ಕಿ ಹೊಡೆದು ಕಡಿದಾದ ಕಣಿವೆಗೆ ಉರುಳಿದ್ದರಿಂದ ಈ ದುರ್ಘಟನೆ ಸಂಭವಿಸಿತು. ಹಿಂದೂ ಮುಸ್ಲಿಂ ಸಮುದಾಯದ ನೂರಾರು ಭಕ್ತರನ್ನು ಕರೆದುಕೊಂಡ ಈ ಲಾರಿಯು ಜೈಸಲ್ಮೇರಿನಲ್ಲಿರುವ ಸೂಫಿ ಸಂತ ರಾಮ್ ದೇವ್ರಾ ಜಾತ್ರೆಗೆ ಹೊರಟಿತ್ತು.

2007: ಆಂಧ್ರಪ್ರದೇಶದ ಚಿತ್ವೇಡ್ ಗ್ರಾಮದಲ್ಲಿ ಶಂಕಿತ ಮಾವೋವಾದಿ ನಕ್ಸಲರು ನಡೆಸಿದ ಶಕ್ತಿಶಾಲಿ ನೆಲಬಾಂಬ್ ಸ್ಫೋಟದಲ್ಲಿ ರಾಜ್ಯದ ಮಾಜಿ ಮುಖ್ಯಮಂತ್ರಿ ಎನ್. ಜನಾರ್ದನ ರೆಡ್ಡಿ ಹಾಗೂ ಅವರ ಪತ್ನಿ ಹಾಲಿ ಸಚಿವೆ ಎನ್. ರಾಜ್ಯಲಕ್ಷ್ಮಿ ಪಾರಾದರು. ಅವರ ಜೊತೆಗಿದ್ದ ಕಾಂಗ್ರೆಸ್ಸಿನ ಮೂವರು ಕಾರ್ಯಕರ್ತರು ಸಾವನ್ನಪ್ಪಿದರು. ಬೆಳಗಿನ ಜಾವ 6.30ಕ್ಕೆ ಭಾರಿ ಬೆಂಗಾವಲು ಪಡೆಯೊಂದಿಗೆ ತಮ್ಮ ಗ್ರಾಮದ ಮನೆಯಿಂದ ತಿರುಪತಿಯತ್ತ ಹೊರಟಿದ್ದ ರೆಡ್ಡಿ ಅವರ ಹತ್ಯೆ ಉದ್ದೇಶದಿಂದಲೇ ರಿಮೋಟ್ ಸಾಧನ ಬಳಸಿ ಸೇತುವೆಯೊಂದರ ಬಳಿ ಈ ಸ್ಫೋಟ ನಡೆಸಲಾಯಿತು. 70 ವರ್ಷ ವಯಸ್ಸಿನ ಜನಾರ್ದನ ರೆಡ್ಡಿ 1992ರಲ್ಲಿ ನಕ್ಸಲರ ಮೇಲೆ ನಿಷೇಧ ಹೇರಿದಾಗ ಆಂಧ್ರ ಮುಖ್ಯಮಂತ್ರಿಯಾಗಿದ್ದರು. ಆಗಿನಿಂದಲೂ ಅವರನ್ನು ಕೊಲ್ಲಲು ಮಾವೋವಾದಿ ನಕ್ಸಲರು ಯತ್ನಿ ನಡೆಸಿದ್ದರು. 2003ರಲ್ಲಿ ಅವರ ಮೇಲೆ ಇಂತಹುದೇ ಹತ್ಯೆ ಯತ್ನ ನಡೆದಿತ್ತು.

2007: ನಿಕರಾಗುವದ ಪೊರ್ಟೊ ಕ್ಯಾಬೆಜಾಸ್ ಪ್ರದೇಶದಲ್ಲಿ ಬೀಸಿದ ಬಲಶಾಲಿಯಾದ 'ಫೆಲಿಕ್ಸ್' ಚಂಡಮಾರುತಕ್ಕೆ 98 ಮಂದಿ ಬಲಿಯಾದರು.

2007: ಆಸ್ಪತ್ರೆ ಬಳಿ ಮೊಬೈಲ್ ಫೋನ್ ಬಳಸುವುದರಿಂದ ಆಸ್ಪತ್ರೆಯಲ್ಲಿನ ರೋಗಿಗಳು ಮತ್ತು ಹೃದಯಕ್ಕೆ ಸಂಬಂಧಿಸಿದ ಉಪಕರಣಗಳಾದ ಪೇಸ್ ಮೇಕರ್ (ಹೃದಯ ನಿಯಂತ್ರಕ ವಿದ್ಯುದುಪಕರಣ), ವೇಂಟಿಲೇಟರುಗಳಿಗೆ (ವಾಯು ಸಂಚಾರಕ ಸಲಕರಣೆ) ಹಾನಿ ಉಂಟಾಗುತ್ತದೆ ಎಂದು ಡಚ್ ಸಂಶೋಧನೆ ಮಂಡಳಿಯ ಸಂಶೋಧನೆ ಹೇಳಿತು. ಆಸ್ಪತ್ರೆಗಳಲ್ಲಿ ಮೊಬೈಲ್ ಫೋನ್ ಬಳಕೆಯಿಂದಾಗುವ ಪರಿಣಾಮ ಕುರಿತಂತೆ 50 ಪ್ರಕರಣಗಳನ್ನು ಅಧ್ಯಯನಕ್ಕೆ ಒಳಪಡಿಸಿದಾಗ ಮೊಬೈಲ್ ಫೋನಿನಿಂದ ಹೊರಹೊಮ್ಮುವ ವಿದ್ಯುತ್ಕಾಂತೀಯ ತರಂಗಗಳಿಂದ ಶೇ 75ರಷ್ಟು ಅಪಾಯ ಉಂಟಾಗುತ್ತದೆ ಎಂದು ಆಮ್ ಸ್ಟರ್ ಡ್ಯಾಮ್ ವಿಶ್ವವಿದ್ಯಾಲಯದ ಸಂಶೋಧಕರು ಪತ್ತೆ ಹಚ್ಚಿದರು. ಇದೇ ವರ್ಷದ ಆರಂಭದಲ್ಲಿ ಮಯೊ ಕ್ಲಿನಿಕ್ಕಿನ ಸಂಶೋಧಕರು ಪ್ರಮುಖ ಆಸ್ಪತ್ರೆಗಳ ತುರ್ತು ಚಿಕಿತ್ಸಾ ಉಪಕರಣಗಳ ಮೇಲೆ ಮೊಬೈಲ್ ಬಳಕೆಯಿಂದ ಯಾವುದೇ ಆಪಾಯ ಆಗುವುದಿಲ್ಲ ಎಂದು ಪ್ರಕಟಿಸಿದ್ದರು. ಆದರೆ ಇದಕ್ಕೆ ವ್ಯತಿರಿಕ್ತವಾಗಿ ಇತ್ತೀಚೆಗೆ ನಡೆಸಿದ  ಸಂಶೋಧನೆಯಿಂದ ಆಧುನಿಕ ತಂತ್ರಜ್ಞಾನದ ಜನರಲ್ ಪಾಕೇಟ್ ರೇಡಿಯೊ ಸರ್ವೀಸ್ (ಜಿಪಿಆರ್ ಎಸ್) ತರಂಗಗಳು ಮತ್ತು ನಿಸ್ತಂತು ಅಂತರ್ಜಾಲ ವ್ಯವಸ್ಥೆಯಿಂದ ಅಪಾಯ ಉಂಟಾಗುತ್ತದೆ ಎಂದು ತಿಳಿದುಬಂತು.

2007: ಮಹಾತ್ಮಗಾಂಧಿ ಪಾತ್ರಕ್ಕಾಗಿ ಆಸ್ಕರ್ ಪ್ರಶಸ್ತಿ ಪಡೆದಿದ್ದ ನಟ ಸರ್ ಬೆನ್ ಕಿಂಗ್ ಸ್ಲೆ ತಮಗಿಂತ ಅರ್ಧದಷ್ಟು ವಯಸ್ಸಿನ ಬ್ರೆಜಿಲ್ ನಟಿಯೊಬ್ಬರನ್ನು ಗುಟ್ಟಾಗಿ ಮದುವೆಯಾದರು. ಇದು ಕಿಂಗ್ ಸ್ಲೆ ಅವರಿಗೆ ನಾಲ್ಕನೇ ಮದುವೆ. 63 ವರ್ಷದ ಬೆನ್ 34 ವರ್ಷದ ಡೇ ನಿಯಲಾ ಕಾರ್ನ್ ನಿರೋ ಅವರನ್ನು ವಿವಾಹವಾದರು. ಸ್ಪೆಲ್ಸ್ ಬರಿಯಲಿರುವ ಬೆನ್ ಅವರ ನಿವಾಸ ಆಕ್ಸ್ ಫರ್ಡ್ ಶಿರೆಯಿಂದ ಅನತಿ ದೂರ ಐನ್ ಶಾಮ್ ಹಾಲಿನಲ್ಲಿ ಈ ವಿವಾಹ ಸಮಾರಂಭ ನಡೆಯಿತು.

2007: ವೃತ್ತಿಜೀವನದ ಎಂಟನೇ ಗ್ರ್ಯಾಂಡ್ ಸ್ಲಾಮ್ ಪ್ರಶಸ್ತಿ ಗೆಲ್ಲಬೇಕು ಎಂಬ ಭಾರತದ ಲಿಯಾಂಡರ್ ಪೇಸ್ ಅವರ ಕನಸು ನುಚ್ಚುನೂರಾಯಿತು. ನ್ಯೂಯಾರ್ಕಿನಲ್ಲಿ ನಡೆಯುತ್ತಿರುವ ಅಮೆರಿಕಾ ಓಪನ್ ಟೆನಿಸ್ ಟೂರ್ನಿಯ ಮಿಶ್ರ ಡಬಲ್ಸ್ ವಿಭಾಗದ ಫೈನಲಿನಲ್ಲಿ ಪೇಸ್- ಮೇಗನ್ ಶಾಗ್ನೆಸಿ ಜೋಡಿ ಮುಗ್ಗರಿಸಿತು. ಅಂತಿಮ ಪಂದ್ಯದಲ್ಲಿ ಬೆಲಾರಸ್ ನ ಮ್ಯಾಕ್ಸ್ ಮಿರ್ನಿ ಮತ್ತು ವಿಕ್ಟೋರಿಯಾ ಅಜರೆಂಕಾ ಜೋಡಿ 6-4, 7-5 ರಲ್ಲಿ ಭಾರತ- ಅಮೆರಿಕ ಜೋಡಿ ವಿರುದ್ಧ ಗೆಲುವು ಪಡೆದು ಪ್ರಶಸ್ತಿ ಜಯಿಸಿತು. 30ರ ಹರೆಯದ ಮ್ಯಾಕ್ಸ್ ಮಿರ್ನಿಗೆ ಇದು ಏಳನೇ ಗ್ರ್ಯಾಂಡ್ ಸ್ಲಾಮ್ ಡಬಲ್ಸ್ ಪ್ರಶಸ್ತಿ. ಇದೇ ವೇಳೆ 18ರ ಹರೆಯದ ಅಜರೆಂಕಾ ತಮ್ಮ ಚೊಚ್ಚಲ ಗ್ರ್ಯಾಂಡ್ ಸ್ಲಾಮ್ ಟ್ರೋಫಿಗೆ ಮುತ್ತಿಕ್ಕಿದರು.

2006: ವಂದೇ ಮಾತರಂ ಗೀತೆ ರಚನೆಯ ಶತಮಾನ ದಿನವನ್ನು ಭಾರತದಾದ್ಯಂತ ಆಚರಿಸಲಾಯಿತು. ಬಿಜೆಪಿ ಆಡಳಿತ ಇರುವ ರಾಜ್ಯಗಳಲ್ಲಿ ಬಹುಪಾಲು ಮುಸ್ಲಿಂ  ಶಿಕ್ಷಣ ಸಂಸ್ಥೆಗಳು ಈ ಗೀತೆಯನ್ನು ಹಾಡದೆ ರಾಜ್ಯ ಸರ್ಕಾರದ ಆದೇಶ ಉಲ್ಲಂಘಿಸಿದವು. ನವದೆಹಲಿಯಲ್ಲಿ ಕಾಂಗ್ರೆಸ್ ಪಕ್ಷ ಏರ್ಪಡಿಸಿದ್ದ ವಂದೇ ಮಾತರಂ ಗಾಯನದಲ್ಲಿ ಪಕ್ಷದ ಅಧ್ಯಕ್ಷೆ ಸೋನಿಯಾ ಗಾಂಧಿ ಮತ್ತು ಪ್ರಧಾನಿ ಮನಮೋಹನ್ ಸಿಂಗ್ ಪಾಲ್ಗೊಳ್ಳಲ್ಲಿಲ.

1997: ಜೈರೆಯ ಮಾಜಿ ಸರ್ವಾಧಿಕಾರಿ ಮೊಬುಟು ಸೆಸೆ ಸೆಕೊ ಅವರು ದೇಶಭ್ರಷ್ಟರಾಗಿದ್ದಾಗ ಮೊರಾಕ್ಕೊದಲ್ಲಿ ತಮ್ಮ 66ನೇ ವಯಸ್ಸಿನಲ್ಲಿ ಮೃತರಾದರು.

1986: ಡೆಸ್ಮಂಡ್ ಟುಟು ಅವರು ಕೇಪ್ ಟೌನಿನ ಆರ್ಚ್ ಬಿಷಪ್ ಆಗಿ ನೇಮಕಗೊಂಡರು. ದಕ್ಷಿಣ ಆಫ್ರಿಕದ ಆಂಗ್ಲಿಕನ್ ಚರ್ಚ್ ಮುನ್ನಡೆಸುವ ಪ್ರಪ್ರಥಮ ಕರಿಯ ವ್ಯಕ್ತಿ ಎಂಬ ಹೆಗ್ಗಳಿಕೆ ಅವರದಾಯಿತು.

1969: ಸಾಹಿತಿ ಡಾ. ಶ್ರೀನಿವಾಸ ಕಾ.ವೆಂ. ಜನನ.

1908: ಖ್ಯಾತ ಸಾಹಿತಿ, ಕನ್ನಡ ನಾಡು ನುಡಿಯ ಮೌನ ಸೇವಾವ್ರತಿ, ಸಾಮಾಜಿಕ ಕಾರ್ಯಕರ್ತ ಬಿ. ದಾಮೋದರ ಬಾಳಿಗ (7-9-1908ರಿಂದ 21-5-1985) ಅವರು ದಕ್ಷಿಣ ಕನ್ನಡ ಜಿಲ್ಲೆಯ ಪುತ್ತೂರಿನಲ್ಲಿ ಜನಿಸಿದರು. ಕನ್ನಡ ಹಾಗೂ ಇಂಗ್ಲಿಷಿನಲ್ಲಿ ಹಲವಾರು ಕೃತಿಗಳನ್ನು ರಚಿಸಿದ ಇವರು ಗೋವಿಂದ ಪೈಗಳ ಗೋಲ್ಗೊಥಾ, ವೈಶಾಖಿ, ಹೆಬ್ಬೆರಳು, ಚಿತ್ರಭಾನು ಇತ್ಯಾದಿಗಳನ್ನು ಪ್ರಕಟಿಸಿದವರು. ಗೋಲ್ಗೊಥಾವನ್ನು ಇಂಗ್ಲಿಷಿಗೆ ಭಾಷಾಂತರ ಮಾಡಿದ ಹೆಮ್ಮೆ ಕೂಡಾ ಇವರದು.

1903: ನ್ಯೂಯಾರ್ಕಿನಲ್ಲಿ ಅಮೆರಿಕನ್ ಸೈಕ್ಲಿಸ್ಟ್ ಒಕ್ಕೂಟ ರಚನೆಯಾಯಿತು.

1900: ಸಾಹಿತಿ ಚನ್ನಬಸಪ್ಪ ಎಲ್ಲಪ್ಪ ಕವಲಿ ಜನನ.

1822: ಪೋರ್ಚುಗಲ್ಲಿನಿಂದ ಬೇರ್ಪಟ್ಟ ಬ್ರೆಜಿಲ್ ಸ್ವತಂತ್ರ ರಾಷ್ಟ್ರವಾಯಿತು.

1813: ನ್ಯೂಯಾರ್ಕಿನ ಟ್ರಾಯ್ ಪೋಸ್ಟ್ ತನ್ನ ಸಂಪಾದಕೀಯದಲ್ಲಿ ಅಮೆರಿಕವನ್ನು ಸಾಂಕೇತಿಕವಾಗಿ ಉಲ್ಲೇಖಿಸಲು ಮೊತ್ತ ಮೊದಲ ಬಾರಿಗೆ `ಅಂಕಲ್ ಸ್ಯಾಮ್' ಅಡ್ಡ ಹೆಸರನ್ನು ಬಳಸಿತು. `ಅಂಕಲ್ ಸ್ಯಾಮ್' ಶಬ್ದವು ನ್ಯೂಯಾರ್ಕಿನ ವರ್ತಕ ಸ್ಯಾಮುವೆಲ್ ವಿಲ್ಸನ್ ಗೆ ಸಂಬಂಧಿಸಿದ್ದು. 1812ರಲ್ಲಿ ಸೇನೆಗೆ ಆತ ಸರಬರಾಜು ಮಾಡುತ್ತಿದ್ದ ಮಾಂಸದ ಬ್ಯಾರೆಲ್ಲುಗಳಿಗೆ ಸರ್ಕಾರಿ ಆಸ್ತಿ ಎಂದು ಸೂಚಿಸಲು `ಯು.ಎಸ್.' ಎಂದು ಬರೆಯಲಾಗುತ್ತಿತ್ತು. ಈ ಗುರುತು ಅಮೆರಿಕವನ್ನು `ಅಂಕಲ್ ಸ್ಯಾಮ್' ಎಂಬ ಅಡ್ಡ ಹೆಸರಿನಿಂದಲೇ ಗುರುತಿಸಲು ಕಾರಣವಾಯಿತು. 1961ರಲ್ಲಿ ಕಾಂಗ್ರೆಸ್ ಅಂಗೀಕರಿಸಿದ ನಿರ್ಣಯವೊಂದು ವಿಲ್ಸನ್ ಅವರನ್ನು ರಾಷ್ಟ್ರೀಯ ಸಂಕೇತಕ್ಕೆ ಕಾರಣಕರ್ತ ಎಂದು  ಮಾನ್ಯ ಮಾಡಿತು.

1812: ಜನರಲ್ ಕುಟುಝೊವ್ ನೇತೃತ್ವದಲ್ಲಿ ರಷ್ಯದ ಸೇನೆ ಮಾಸ್ಕೊದಿಂದ 110 ಕಿ.ಮೀ. ಪಶ್ಚಿಮಕ್ಕಿರುವ ಬೊರೊಡಿನೊ ಕದನದಲ್ಲಿ ನೆಪೋಲಿಯನ್ನನ್ನು ಸೋಲಿಸಿತು. ನೆಪೋಲಿಯನ್ ಒಂದು ವಾರದ ಬಳಿಕ ಮಾಸ್ಕೊ ಪ್ರವೇಶಿಸಿದ.

(ಸಂಗ್ರಹ: ನೆತ್ರಕೆರೆ ಉದಯಶಂಕರ)

Thursday, September 10, 2009

ಇಂದಿನ ಇತಿಹಾಸ History Today ಸೆಪ್ಟೆಂಬರ್ 06



ಇಂದಿನ ಇತಿಹಾಸ

ಸೆಪ್ಟೆಂಬರ್ 06

ಆಡಳಿತಾರೂಢ ಪಾಕಿಸ್ಥಾನ ಪೀಪಲ್ಸ್ ಪಕ್ಷದ ಮುಖಂಡ ಹಾಗೂ ದಿವಂಗತ ಬೆನಜೀರ್ ಭುಟ್ಟೋ ಪತಿ ಆಸೀಫ್ ಅಲಿ ಜರ್ದಾರಿ ಪಾಕಿಸ್ಥಾನದ 13ನೇ ಅಧ್ಯಕ್ಷರಾಗಿ ಭಾರಿ ಬಹುಮತದಿಂದ ಆಯ್ಕೆಯಾದರು.

2008: ಆಡಳಿತಾರೂಢ ಪಾಕಿಸ್ಥಾನ ಪೀಪಲ್ಸ್ ಪಕ್ಷದ ಮುಖಂಡ ಹಾಗೂ ದಿವಂಗತ ಬೆನಜೀರ್ ಭುಟ್ಟೋ ಪತಿ ಆಸೀಫ್ ಅಲಿ ಜರ್ದಾರಿ ಪಾಕಿಸ್ಥಾನದ 13ನೇ ಅಧ್ಯಕ್ಷರಾಗಿ ಭಾರಿ ಬಹುಮತದಿಂದ ಆಯ್ಕೆಯಾದರು. ಅಧ್ಯಕ್ಷ ಸ್ಥಾನಕ್ಕೆ ಇಸ್ಲಾಮಾಬಾದಿನಲ್ಲಿ ನಡೆದ ಚುನಾವಣೆಯಲ್ಲಿ ಜರ್ದಾರಿ ತಮ್ಮ ಸಮೀಪದ ಪ್ರತಿಸ್ಫರ್ಧಿಗಳಾದ ಪಿಎಂಎಲ್-ಎನ್  ಪಕ್ಷದ ಅಭ್ಯರ್ಥಿ ಸಯೀದ್-ಉಜ್- ರಹಮಾನ್ ಹಾಗೂ ಪಿಎಂಎಲ್-ಕ್ಯೂ ಅಭ್ಯರ್ಥಿ ಮುಷಾಹಿದ್ ಹುಸೇನ್ ಸಯೀದ್ ಅವರನ್ನು ಹಿಮ್ಮೆಟ್ಟಿಸಿ ಭಾರಿ ಜಯ ಸಾಧಿಸಿದರು.

2008: ಪರಮಾಣು ಪೂರೈಕೆ ಮಾಡುವ 45 ದೇಶಗಳ ಗುಂಪಾದ `ಎನ್ ಎಸ್ ಜಿ'ಯು ವಿಯೆನ್ನಾದಲ್ಲಿ ತನ್ನ ಮಾರ್ಗದರ್ಶಿ ಸೂತ್ರಗಳಿಗೆ ತಿದ್ದುಪಡಿ ಮಾಡಿಕೊಂಡು ಭಾರತಕ್ಕೆ ತನ್ನ ನಿಯಮಾವಳಿಗಳಿಂದ `ಸಂಪೂರ್ಣ ವಿನಾಯಿತಿ' ನೀಡಿತು. ಈ ಮೂಲಕ ಭಾರತ- ಅಮೆರಿಕ ಪರಮಾಣು ಒಪ್ಪಂದಕ್ಕೆ ಹಾಗೂ ಭಾರತಕ್ಕೆ ಇತರ ದೇಶಗಳೊಂದಿಗೆ ಪರಮಾಣು ವಹಿವಾಟು ನಡೆಸಲು ರಹದಾರಿ ನಿರ್ಮಾಣವಾಯಿತು. ಎನ್ ಎಸ್ ಜಿ ಯ ಈ ಒಪ್ಪಿಗೆ ಸಿಗುವುದರೊಂದಿಗೆ,  ಅಮೆರಿಕದ ಜತೆಗಿನ ಅಣು ಒಪ್ಪಂದ ಪ್ರಕ್ರಿಯೆಯ ಮುಂದಿನ ನಡೆಯು ಅಮೆರಿಕದ ಸಂಸತ್ತಿಗೆ ವರ್ಗಾವಣೆಯಾಯಿತು.

2007: ಕಜಕಿಸ್ತಾನದಲ್ಲಿನ ಬೈಕಾನುರ್ ಉಡಾವಣಾ ಕೇಂದ್ರದಿಂದ ರಷ್ಯಾದ ರಾಕೆಟ್ ಮೂಲಕ ಉಡಾವಣೆಯಾದ ಪಾನ್ ದೂರಸಂಪರ್ಕ ಉಪಗ್ರಹ `ಜೆಸಿಸ್ಯಾಟ್-11' ನಭಕ್ಕೆ ಚಿಮ್ಮಿದ ಸ್ವಲ್ಪ ಸಮಯದಲ್ಲೇ ಸ್ಫೋಟಗೊಂಡಿತು. ಆದರೆ ಈ ಘಟನೆಯಲ್ಲಿ ಯಾವುದೇ ಪ್ರಾಣಹಾನಿಯಾಗಲಿಲ್ಲ. ಈ ಉಪಗ್ರಹವು ಜಪಾನ್, ಏಷ್ಯಾ ಪೆಸಿಫಿಕ್ ಪ್ರದೇಶ ಮತ್ತು ಹವಾಯಿ ದ್ವೀಪ ಸಮೂಹದಲ್ಲಿ ಟೆಲಿವಿಷನ್ ಪ್ರಸಾರಕ್ಕೆ ಸಹಾಯವಾಗುವ ಮರುಪ್ರಸಾರ ಕಾರ್ಯವನ್ನು ನಿರ್ವಹಿಸುವ ಉದ್ದೇಶ ಹೊಂದಿತ್ತು.

2007: ಡೆನ್ ಡೆನ್ ಹಡಗು ಮುಳುಗಿದ ದುರಂತ ನೆನಪಿನಿಂದ ಮಾಸುವ ಮುನ್ನವೇ ಮಂಗಳೂರಿನ ತಣ್ಣೀರುಬಾವಿ ಕಡಲ ತೀರದ ಅದೇ ಸ್ಥಳದಲ್ಲಿ ಚೀನಾ ಮೂಲದ ಚಾಂಗ್-ಲೆ-ಮೆನ್ ಎಂಬ ಹಡಗಿನ ತಳ ಈದಿನ ಮಧ್ಯಾಹ್ನ ಮರಳಿನಲ್ಲಿ ಹುದುಗಿ, ಲಂಬಕ್ಕಿಂತ 15 ಡಿಗ್ರಿಯಷ್ಟು ವಾಲಿತು. ತಣ್ಣೀರುಬಾವಿ ತೀರದಲ್ಲಿ ಕೆಲವೇ ವರ್ಷಗಳಲ್ಲಿ ತೊಂದರೆಗೆ ಸಿಲುಕಿದ ಮೂರನೇ ಹಡಗು ಇದು. ಕೆರಿಬಿಯನ್ ದ್ವೀಪ ಸಮೂಹದ ಸೇಂಟ್ ವಿನ್ಸೆಂಟ್ ದ್ವೀಪದಲ್ಲಿ ನೋಂದಣಿ ಹೊಂದಿದ ಹಡಗು ಇದು. ಕ್ಯಾಪ್ಟನ್ ಸೇರಿದಂತೆ ಒಟ್ಟು 28 ಮಂದಿ ಇದರಲ್ಲಿದ್ದರು. ಮಂಗಳೂರಿನ ಎನ್ಎಂಪಿಟಿ ಬಂದರಿನಿಂದ ಅಲ್ವಾರಿಸ್ ಥಾಮ್ಸನ್ ಎಂಬ ಕಂಪೆನಿಯಿಂದ 16,100 ಟನ್ ಕಬ್ಬಿಣದ ಅದಿರು ತುಂಬಿಕೊಂಡು ಮಧ್ಯಾಹ್ನ 11ಕ್ಕೆ ಚೀನಾಕ್ಕೆ ಪ್ರಯಾಣ ಆರಂಭಿಸಿತ್ತು. ಸಂಚಾರ ಆರಂಭಿಸಿದ ಕೆಲವೇ ಗಂಟೆಯೊಳಗೆ ಹಡಗಿನ ತಳಪಾಯ ಮರಳಿನಲ್ಲಿ ಹುದುಗಿ, ತಾಂತ್ರಿಕ ತೊಂದರೆ ಎದುರಾಯಿತು. ನವಮಂಗಳೂರು ಬಂದರಿನಿಂದ ಏಳು ನಾಟಿಕಲ್ ಮೈಲಿ ದೂರ ಹಡಗು ಸಿಲುಕಿಕೊಂಡಿತು.

2007: ಭಾರತದ ಪ್ರಪ್ರಥಮ ಮೂಳೆ ಬ್ಯಾಂಕ್ ಚೆನ್ನೈಯ ಜನರಲ್ ಆಸ್ಪತ್ರೆಯಲ್ಲಿ ಅಸ್ತಿತ್ವಕ್ಕೆ ಬರಲಿದೆ. ಮೃತದೇಹಗಳಿಂದ ಪಡೆದ ಮೂಳೆಗಳನ್ನು ಇಲ್ಲಿ ಸಂಗ್ರಹಿಸಿಡಲಾಗುವುದು ಎಂದು ಆಸ್ಪತ್ರೆಯ ಮೂಳೆತಜ್ಞ ಎಂ. ನಟರಾಜನ್ ಬಹಿರಂಗಪಡಿಸಿದರು. ಅಪಘಾತದಲ್ಲಿ ಗಾಯಗೊಂಡವರು, ಕ್ಯಾನ್ಸರ್ ರೋಗಿಗಳಿಗೆ ಮೂಳೆ ಬ್ಯಾಂಕ್ ಹೊಸ ಆಶಾಕಿರಣವಾಗಲಿದೆ. ದಾನಿಗಳಿಂದ ಅಥವಾ ವಿದೇಶಗಳ ಕಳೇಬರದಿಂದ ಪಡೆದ ಮೂಳೆಗಳನ್ನು ಇದಕ್ಕಾಗಿ ಆಮದು ಮಾಡಿಕೊಳ್ಳಲಾಗುವುದು. ಆಮದು ಮೂಳೆಗಳ ಬೆಲೆ ಸ್ವಲ್ಪ ದುಬಾರಿ. 15ರಿಂದ 20 ಸೆ.ಮೀ. ಉದ್ದದ ತೊಡೆಯ ಮೂಳೆಗೆ ಸುಮಾರು ನಾಲ್ಕರಿಂದ ಐದು ಸಾವಿರ ಡಾಲರುಗಳಾಗಬಹುದು. ಶ್ರೀಲಂಕಾದಲ್ಲಿ ಮೂಳೆಗಳು ಸುಲಭವಾಗಿ ದೊರೆಯುತ್ತವೆ. ಕೃತಕ ಮೂಳೆಗಳಿಗಿಂತ ಕಳೇಬರಗಳಿಂದ ಪಡೆದ ಮೂಳೆಗಳು ಹೆಚ್ಚು ಉತ್ತಮ ಎಂಬುದು ನಟರಾಜನ್ ಅಭಿಪ್ರಾಯ.

2007: ಬೆಳಗಾವಿ ಜನತೆಗೆ ದುಃಸ್ವಪ್ನವಾಗಿದ್ದ ಬಾಡಿಗೆ ಹಂತಕ ಪ್ರವೀಣ ಶಿಂತ್ರೆ (32) ಕರಾಳ  ಅಧ್ಯಾಯ ಪೊಲೀಸ್ ಎನ್ಕೌಂಟರಿನಲ್ಲಿ ಅಂತ್ಯ ಕಂಡಿತು. ಕೊಲೆ, ಅತ್ಯಾಚಾರದಂತಹ ಕುಕೃತ್ಯಗಳಿಗೆ  ತಾನು ಬಳಸಿಕೊಂಡಿದ್ದ ಬಂಗಲೆಯಲ್ಲೇ ಪೊಲೀಸರ ಗುಂಡಿಗೆ ಈತ ಬಲಿಯಾದ. ಸುಪಾರಿ ಸರಣಿ ಕೊಲೆ ಸೇರಿದಂತೆ ದರೋಡೆ, ಅತ್ಯಾಚಾರ ಮೊದಲಾದ 20ಕ್ಕೂ ಹೆಚ್ಚು ಪ್ರಕರಣಗಳಲ್ಲಿ ಭಾಗಿಯಾಗಿದ್ದ ಶಿಂತ್ರೆಯನ್ನು ವಿಚಾರಣೆ ಸಲುವಾಗಿ ಈದಿನ ಬೆಳಗಿನ ಜಾವ ಬೆಳಗಾವಿ ನಗರದ `ರಾಜದೀಪ' ಹೆಸರಿನ ಬಂಗಲೆಗೆ ಕರೆತರಲಾಗಿತ್ತು.

 2007: ಕರ್ನಾಟಕದ ಗುಲ್ಬರ್ಗ ಜಿಲ್ಲೆಯ ವಿವಿಧ ತಾಲ್ಲೂಕುಗಳು ಹಾಗೂ ಗುಲ್ಬರ್ಗ ನಗರದ ಕೆಲವೆಡೆ ಈದಿನ ಮಧ್ಯಾಹ್ನ 12.39ರ ಸುಮಾರಿಗೆ ಲಘು ಭೂಕಂಪ ಸಂಭವಿಸಿ, ಜನ ಗಾಬರಿಯಾದರು. ಆಳಂದ ತಾಲ್ಲೂಕಿನ ಖಜೂರಿ, ಚಿತ್ತಾಪುರ ತಾಲ್ಲೂಕಿನ ಶಹಾಬಾದ್, ಚಿಂಚೋಳಿ ಹಾಗೂ ಸೇಡಂನಲ್ಲೂ ಭೂಮಿ ಕಂಪಿಸಿತು. ಭೂಮಿ ಕಂಪಿಸಿದಾಗ ಕೆಲ ಸೆಕೆಂಡುಗಳ ಕಾಲ ಅದರ ಅನುಭವವಾಯಿತು. ಮೇಜಿನ ಮೇಲಿನ ವಸ್ತುಗಳು ಅಲುಗಾಡಿದವು. ಲಾತೂರಿನಲ್ಲಿ ಕೂಡಾ ಲಘು ಭೂಕಂಪ ಸಂಭವಿಸಿತು. ಭೂಕಂಪದ ತೀವ್ರತೆ ರಿಕ್ಟರ್ ಮಾಪಕದಲ್ಲಿ 4.1ರಷ್ಟಿತ್ತು. ಕೆಲವು ವರ್ಷಗಳ ಹಿಂದೆ ಇಲ್ಲಿ ಭಾರೀ ಭೂಕಂಪ ಸಂಭವಿಸಿತ್ತು.

2006: ಮುಂಬೈ ಮಾಜಿ ಪೊಲೀಸ್ ಆಯುಕ್ತ ಆರ್. ಎಸ್. ಶರ್ಮಾ ನೇಮಕದಲ್ಲಿ ಛಾಪಾ ಹಣ ಬಳಕೆಯಾಗಿದ್ದು ಕಾಂಗ್ರೆಸ್ ಹಾಗೂ ಎನ್ಸಿಪಿಯ ಪ್ರಮುಖ ನಾಯಕರು ಹಗರಣದಲ್ಲಿ ಪಾಲುದಾರರಾಗಿದ್ದಾರೆ ಎಂಬ ಅಂಶವು ಕನ್ನಡಿಗೆ ಪೊಲೀಸ್ ಅಧಿಕಾರಿ ದಿಲೀಪ್ ಕಾಮತ್ ಅವರು ನಡೆಸಿದ `ಬ್ರೈನ್ ಮ್ಯಾಪಿಂಗ್' ಪರೀಕ್ಷೆಯಲ್ಲಿ ಬಹಿರಂಗಗೊಂಡಿತು. ಎರಡು ಕಡೆ ದಾಳಿ ನಡೆಸಿದ್ದ ಕಾಮತ್ ಸಾಕಷ್ಟು ನಕಲಿ ಛಾಪಾಗಳನ್ನು ತಮ್ಮ ವಶಕ್ಕೆ ತೆಗೆದುಕೊಂಡಿದ್ದರು.

2006: ಚಿತ್ರದುರ್ಗದ ಮುರುಘಾಮಠ ನೀಡುವ ಪ್ರತಿಷ್ಠಿತ `ಬಸವಶ್ರೀ' ಪ್ರಶಸ್ತಿಗೆ ರಾಜ್ಯಸಭೆ ಸದಸ್ಯೆ ಖ್ಯಾತ ನಟಿ ಶಬಾನಾ ಆಜ್ಮಿ ಆಯ್ಕೆಯಾದರು. `ಬಸವಶ್ರೀ' ಪ್ರಶಸ್ತಿ ಸಿನೆಮಾ ತಾರೆಯೊಬ್ಬರಿಗೆ ಲಭಿಸಿದ್ದು ಇದೇ ಮೊದಲು.

1995: ಬಾಲಿವುಡ್ಡಿನ ಖ್ಯಾತ ಸಂಗೀತ ನಿರ್ದೇಶಕ ಸಲೀಲ್ ಚೌಧರಿ ನಿಧನ.

1990: ಪ್ರಸಾರ ಭಾರತಿ ಮಸೂದೆಗೆ ಸಂಸತ್ ಒಪ್ಪಿಗೆ.

1988: ದಕ್ಷಿಣ ಲಂಡನ್ನಿನ ಹನ್ನೊಂದು ವರ್ಷ ಹನ್ನೊಂದು ದಿನ ವಯಸ್ಸಿನ ಥಾಮಸ್ ಗ್ರೆಗೋರಿ ಇಂಗ್ಲಿಷ್ ಕಡಲ್ಗಾಲುವೆಯನ್ನು 11 ಗಂಟೆ 54 ನಿಮಿಷಗಳಲ್ಲಿ ಈಜಿದ ಅತ್ಯಂತ ಕಿರಿಯ ವ್ಯಕ್ತಿ ಎಂಬ ಹೆಗ್ಗಳಿಕೆಗೆ ಪಾತ್ರನಾದ.

1972: ಖ್ಯಾತ ಹಿಂದುಸ್ತಾನಿ ಸಂಗೀತಗಾರ ಉಸ್ತಾದ್ ಅಲಾವುದ್ದೀನ್ ಖಾನ್ ಅವರು ತಮ್ಮ 110ನೇ ವಯಸ್ಸಿನಲ್ಲಿ ನಿಧನರಾದರು.

1963: ಖ್ಯಾತ ಸಾಹಿತಿ ಮಂಜೇಶ್ವರ ಗೋವಿಂದ ಪೈ ನಿಧನ.

1960: ಭಾರತದ ಮಿಲ್ಖಾಸಿಂಗ್ ರೋಮ್ ಒಲಿಂಪಿಕ್ ಕ್ರೀಡಾಕೂಟದಲ್ಲಿ 400 ಮೀಟರ್ ಓಟದ ಒಲಿಂಪಿಕ್ ದಾಖಲೆಯನ್ನು ಮುರಿದರು. ಆದರೆ ದಕ್ಷಿಣ ಆಫ್ರಿಕಾದ ಮಾಲ್ಕೋಮ್ ಸ್ಪೆನ್ಸ್ ಅವರಿಂದ 0.1 ಸೆಕೆಂಡುಗಳಷ್ಟು ಹಿಂದೆ ಬಿದ್ದು ಕಂಚಿನ ಪದಕ ಕಳೆದುಕೊಂಡರು. ಇದೊಂದು ಅತ್ಯದ್ಭುತ ಓಟದ ಸ್ಪರ್ಧೆಯಾಗಿತ್ತು. ಮೊದಲ ಇಬ್ಬರು ಜಾಗತಿಕ ದಾಖಲೆಗಳನ್ನು ಮುರಿದರೆ, ಅವರನ್ನು ಹಿಂಬಾಲಿಸಿದ್ದ ಮೂವರು ಒಲಿಂಪಿಕ್ ದಾಖಲೆಗಳನ್ನು ಮುರಿದರು. ರಾಷ್ಟ್ರದ 38 ವರ್ಷಗಳ ಇತಿಹಾಸದಲ್ಲಿ ಅತ್ಯಂತ ಕಡಿಮೆ ಅವಧಿಯಲ್ಲಿ 400 ಮೀಟರ್ ಓಡಿದ ಮಿಲ್ಖಾಸಿಂಗ್ ಒಲಿಂಪಿಕ್ಸಿನಲ್ಲಿ ಅಥ್ಲೆಟಿಕ್ಸಿನ ಅಂತಿಮ ಸ್ಪರ್ಧೆಗೆ ಅರ್ಹತೆಪಡೆದ ಪ್ರಥಮ ಭಾರತೀಯ ಎಂಬ ಕೀರ್ತಿಗೆ ಭಾಜನರಾದರು.

1956: ರಾಜ್ಯಗಳ ಪುನರ್ ವಿಂಗಡಣಾ ಯೋಜನೆ ಜಾರಿಗೆ ತರುವ ಶಾಸನಾಂಶವಾದ ರಾಜ್ಯಾಂಗ ತಿದ್ದುಪಡಿ ಮಸೂದೆಯನ್ನು ಲೋಕಸಭೆ ಸರ್ವಾನುಮತದಿಂದ ಅಂಗೀಕರಿಸಿತು. ಈ ಯೋಜನೆ ನವೆಂಬರ್ 1ರಂದು ಜಾರಿಗೆ ಬರಲಿದ್ದು ದೇಶದ ಎಲ್ಲ ಜನರ, ಎಲ್ಲ ರಾಜಕೀಯ ಪಕ್ಷಗಳ ಸಹಕಾರ ದೊರೆಯುವ ನಂಬಿಕೆ ಇದೆ ಎಂದು ಗೃಹ ಸಚಿವ ಪಂಡಿತ ಗೋವಿಂದ ವಲ್ಲಭ ಪಂತ್ ಹೇಳಿದರು.

1956: ಕೊಡಗು ವಿಧಾನಸಭೆಯ ಅಂತಿಮ ಅಧಿವೇಶನವು `ಕೊಡಗು ಕಾಫಿ ಹೊಟ್ಟು ಹತೋಟಿ (ತಿದ್ದುಪಡಿ) ಮಸೂದೆ'ಯನ್ನು ಅಂಗೀಕರಿಸಿತು. ವಿಧಾನಸಭಾಧ್ಯಕ್ಷ ಕುಶಾಲಪ್ಪ ಅಧ್ಯಕ್ಷತೆ ವಹಿಸಿದ್ದರು.

1948: ನೆದರ್ಲೆಂಡ್ಸ್ ರಾಣಿಯಾಗಿ ಜೂಲಿಯಾನಾ ಆಯ್ಕೆ.

1941: ಜರ್ಮನ್ ಆಕ್ರಮಿತ ಪ್ರದೇಶಗಳಲ್ಲಿ ಆರು ವರ್ಷ ಮೀರಿದ ಎಲ್ಲ ಯಹೂದಿಗಳು ಡೇವಿಡ್ ನ ಹಳದಿ ನಕ್ಷತ್ರಗಳನ್ನು ಧರಿಸಬೇಕು ಎಂದು ಆಜ್ಞಾಪಿಸಲಾಯಿತು.

1889: ಕಾಂಗ್ರೆಸ್ ನಾಯಕ, ದೇಶಭಕ್ತ, ವಕೀಲ ಶರತ್ ಚಂದ್ರ ಬೋಸ್ (6-9-1889ರಿಂದ 20-2-1950) ಅವರು ಬಂಗಾಳದ ಕಲ್ಕತ್ತಾದಲ್ಲಿ ಜಾನಕಿನಾಥ ಅವರ ಮಗನಾಗಿ ಜನಿಸಿದರು. ಇವರು ಉಗ್ರ ರಾಷ್ಟ್ರೀಯವಾದಿ ನೇತಾಜಿ ಸುಭಾಶ್ ಚಂದ್ರ ಬೋಸ್ ಅವರ ಸಹೋದರ. ಬಂಗಾಳ ವಿಧಾನಸಭೆಯಲ್ಲಿ  ಕಾಂಗ್ರೆಸ್ ನಾಯಕರಾಗಿ ಮತ್ತು ಫಾರ್ವರ್ಡ್ ಬ್ಲಾಕ್ ನೇತಾರರಾಗಿ ಭಾರತದ ಸ್ವಾತಂತ್ರ್ಯಕ್ಕಾಗಿ ದುಡಿದ ಶರತ್ ಚಂದ್ರ ಬೋಸ್ 1936ರಲ್ಲಿ ಬಂಗಾಳ ಕಾಂಗ್ರೆಸ್ ಅಧ್ಯಕ್ಷರಾದರು. 1936ರಿಂದ 1945ರವರೆಗೆ ಅಖಿಲ ಭಾರತ ಕಾಂಗ್ರೆಸ್ ಕಾರ್ಯಕಾರಿ ಸಮಿತಿ ಸದಸ್ಯರಾಗಿದ್ದರು. ಬಂಗಾಳ ವಿಭಜನೆಗೆ ಅವರು ತೀವ್ರ ಪ್ರತಿರೋಧ ವ್ಯಕ್ತಪಡಿಸಿದ್ದರು.

1888: ಅಮೆರಿಕದ ಅಧ್ಯಕ್ಷ ಜಾನ್ ಎಫ್. ಕೆನಡಿ ಅವರ ತಂದೆ ವರ್ತಕ ಹಾಗೂ ಗ್ರೇಟ್ ಬ್ರಿಟನ್ನಿಗೆ 1937-40ರಲ್ಲಿ ರಾಯಭಾರಿಯಾಗಿದ್ದ ಜೋಸೆಫ್ ಪ್ಯಾಟ್ರಿಕ್ ಕೆನಡಿ (1888-1969) ಜನ್ಮದಿನ.

1880: ಲಂಡನ್ನಿನ ಓವಲ್ ನಲ್ಲಿ ಇಂಗ್ಲೆಂಡ್ ಆಸ್ಟ್ರೇಲಿಯಾ ಜೊತೆಗೆ ಕ್ರಿಕೆಟ್ ಆಟವಾಡಿತು. ಇದು ಇಂಗ್ಲೆಂಡಿನಲ್ಲಿ ನಡೆದ ಮೊತ್ತ ಮೊದಲ ಕ್ರಿಕೆಟ್ ಟೆಸ್ಟ್ ಪಂದ್ಯ.

(ಸಂಗ್ರಹ: ನೆತ್ರಕೆರೆ ಉದಯಶಂಕರ)

ಇಂದಿನ ಇತಿಹಾಸ History Today ಸೆಪ್ಟೆಂಬರ್ 05

ಇಂದಿನ ಇತಿಹಾಸ

ಸೆಪ್ಟೆಂಬರ್ 05

ನೌಕಾ ಪಡೆಯ ನಿವೃತ್ತ ಮುಖ್ಯಸ್ಥ ಎಸ್. ಎಂ. ನಂದಾ ಅವರ ಮೊಮ್ಮಗ ಸಂಜೀವ್ ನಂದಾ ಅವರಿಗೆ ಬಿಎಂಡಬ್ಲ್ಯೂ ಕಾರು ಅಪಘಾತ ಪ್ರಕರಣದಲ್ಲಿ ಆರು ಮಂದಿಯ ಸಾವಿಗೆ ಕಾರಣವಾಗಿ  ರುವುದಕ್ಕಾಗಿ  ದೆಹಲಿ  ನ್ಯಾಯಾಲಯವು  ಐದು ವರ್ಷ ಜೈಲು ಶಿಕ್ಷೆ ವಿಧಿಸಿತು. ಒಂಬತ್ತು ವರ್ಷದ ಹಿಂದೆ 1999ರ ಜನವರಿ 10ರ  ರಾತ್ರಿ  ಸಂತೋಷ ಕೂಟವೊಂದರಲ್ಲಿ ಭಾಗವಹಿಸಿದ್ದ ಸಂಜೀವ್ ನಂದಾ ಪಾನಮತ್ತನಾಗಿ ಬಿಎಂಡಬ್ಲ್ಯು ಕಾರನ್ನು ಅತಿ ವೇಗದಲ್ಲಿ ಚಲಾಯಿಸಿಕೊಂಡು ಬರುತ್ತಿದ್ದಾಗ ದಕ್ಷಿಣ ದೆಹಲಿಯ ಲೋಧಿ ಕಾಲೋನಿ ಬಳಿ ಅಪಘಾತ ಸಂಭವಿಸಿ ಮೂವರು ಪೊಲೀಸರು ಸೇರಿದಂತೆ ಆರು ಮಂದಿ ಮೃತರಾಗಿದ್ದರು.

ಇಂದು ಶಿಕ್ಷಕರ ದಿನ. 1888ರಲ್ಲಿ ಈದಿನ ಸರ್ವಪಳ್ಳಿ ರಾಧಾಕೃಷ್ಣನ್ ಜನಿಸಿದರು. ವಿದ್ವಾಂಸ ಹಾಗೂ ಮುತ್ಸದ್ಧಿಯಾಗಿದ್ದ ಅವರು 1962ರಿಂದ 1967ರವರೆಗೆ ಭಾರತದ ರಾಷ್ಟ್ರಪತಿಯಾಗಿದ್ದರು. ಅವರ ಜನ್ಮದಿನವನ್ನು `ಶಿಕ್ಷಕರ ದಿನ'ವಾಗಿ ಆಚರಿಸಲಾಗುತ್ತದೆ.

2008: ಭಾರತದ ಪಂಕಜ್ ಅಡ್ವಾಣಿ ಅವರು ಬೆಂಗಳೂರಿನಲ್ಲಿ ಮುಕ್ತಾಯವಾದ ಐ ಬಿ ಎಸ್ ಎಫ್ ವಿಶ್ವ ಬಿಲಿಯರ್ಡ್ಸ್ ಚಾಂಪಿಯನ್ ಶಿಪ್ನ ಪಾಯಿಂಟ್ ಫಾರ್ಮ್ಯಾಟಿನಲ್ಲಿ ಪ್ರಶಸ್ತಿ ಗೆದ್ದುಕೊಂಡರು. ಕೆ ಎಸ್ ಬಿ ಎ ಹಾಲಿನಲ್ಲಿ ನಡೆದ ಫೈನಲ್ ಪಂದ್ಯದಲ್ಲಿ ಪಂಕಜ್ ಅಡ್ವಾಣಿ ಅವರು 150-90, 151-00, 150-24, 150-00, 86-150, 150-72, 150-12ರಲ್ಲಿ ಅನುಭವಿ ಆಟಗಾರ ಗೀತ್ ಸೇಥಿ ಅವರನ್ನು ಪರಾಭವಗೊಳಿಸಿದರು. ಪಂಕಜ್ ಅವರು ಪಾಯಿಂಟ್ ಫಾರ್ಮ್ಯಾಟಿನಲ್ಲಿ ಎರಡನೇ ಬಾರಿ ಪ್ರಶಸ್ತಿ ಗೆದ್ದ ಸಾಧನೆ ಮಾಡಿದರು. ಈ ಹಿಂದೆ 2005ರಲ್ಲಿ ಅವರು ಕಿರೀಟ ಮುಡಿಗೇರಿಸಿದ್ದರು.

2008: ನೌಕಾ ಪಡೆಯ ನಿವೃತ್ತ ಮುಖ್ಯಸ್ಥ ಎಸ್. ಎಂ. ನಂದಾ ಅವರ ಮೊಮ್ಮಗ ಸಂಜೀವ್ ನಂದಾ ಅವರಿಗೆ ಬಿಎಂಡಬ್ಲ್ಯೂ ಕಾರು ಅಪಘಾತ ಪ್ರಕರಣದಲ್ಲಿ ಆರು ಮಂದಿಯ ಸಾವಿಗೆ ಕಾರಣವಾಗಿರುವುದಕ್ಕಾಗಿ  ದೆಹಲಿ  ನ್ಯಾಯಾಲಯವು  ಐದು ವರ್ಷ ಜೈಲು ಶಿಕ್ಷೆ ವಿಧಿಸಿತು. ಒಂಬತ್ತು ವರ್ಷದ ಹಿಂದೆ 1999ರ ಜನವರಿ 10ರ  ರಾತ್ರಿ  ಸಂತೋಷ ಕೂಟವೊಂದರಲ್ಲಿ ಭಾಗವಹಿಸಿದ್ದ ಸಂಜೀವ್ ನಂದಾ ಪಾನಮತ್ತನಾಗಿ ಬಿಎಂಡಬ್ಲ್ಯು ಕಾರನ್ನು ಅತಿ ವೇಗದಲ್ಲಿ ಚಲಾಯಿಸಿಕೊಂಡು ಬರುತ್ತಿದ್ದಾಗ ದಕ್ಷಿಣ ದೆಹಲಿಯ ಲೋಧಿ ಕಾಲೋನಿ ಬಳಿ ಅಪಘಾತ ಸಂಭವಿಸಿ ಮೂವರು ಪೊಲೀಸರು ಸೇರಿದಂತೆ ಆರು ಮಂದಿ ಮೃತರಾಗಿದ್ದರು.

2007: ಇರಾನಿನಲ್ಲಿ ಈದಿನ ಒಂದೇ ದಿನ 21 ಅಪರಾಧಿಗಳನ್ನು ಸಾಮೂಹಿಕವಾಗಿ ಗಲ್ಲಿಗೇರಿಸಲಾಯಿತು. ಆಫ್ಘಾನಿಸ್ಥಾನ ಮತ್ತು ತುರ್ಕ್ಮೆನಿಸ್ಥಾನದ ಗಡಿಯಲ್ಲಿರುವ ಈಶಾನ್ಯ ಪ್ರಾಂತ್ಯವಾದ ಖೊರಸಾನ್ ರಜವಿಯಲ್ಲಿ ಹೆರಾಯಿನ್ ಮತ್ತಿತರ ಮಾದಕವಸ್ತುಗಳನ್ನು ಕಳ್ಳಸಾಗಣೆ ಮಾಡುತ್ತಿದ್ದ ಆರೋಪ ಸಾಬೀತಾದ ಹಿನ್ನೆಲೆಯಲ್ಲಿ 17 ಮಂದಿಯನ್ನು ಮತ್ತು ಇವರೊಂದಿಗೆ ದಕ್ಷಿಣದ ಶಿರಾಜ್ ನಗರದಲ್ಲಿ ಇತರ ನಾಲ್ವರು ಅಪರಾಧಿಗಳನ್ನು ನೇಣಿಗೇರಿಲಾಯಿತು. ಇದೇ ರೀತಿ ಕಳೆದ ಜುಲೈ ಮತ್ತು ಆಗಸ್ಟ್ ತಿಂಗಳು ಅತ್ಯಾಚಾರ, ದರೋಡೆ ಮತ್ತು ಅಪಹರಣ ಕೃತ್ಯಗಳಿಗೆ ಸಂಬಂಧಿಸಿ 21 ಮಂದಿಯನ್ನು ಇರಾನ್ ಸರ್ಕಾರ ಗಲ್ಲಿಗೇರಿಸಿತ್ತು.

2007: ಆಹಾರ ಸುರಕ್ಷತೆ ಹಾಗೂ ಗುಣಮಟ್ಟ ಕಾಯ್ದೆಯನ್ನು ಜಾರಿಗೊಳಿಸದಿರುವ ಕೇಂದ್ರ ಸರ್ಕಾರವನ್ನು  ಸುಪ್ರೀಂಕೋರ್ಟ್ ತರಾಟೆಗೆ ತೆಗೆದುಕೊಂಡಿತು. ತಂಪು ಪಾನೀಯ ಬಾಟಲಿ ಮೇಲೆ ಉತ್ಪನ್ನದ ವಿವರ ಮುದ್ರಿಸುವುದನ್ನು ಕಂಪೆನಿಗಳಿಗೆ ಕಡ್ಡಾಯಗೊಳಿಸುವಂತೆ ಸೂಚಿಸಿರುವ ಆದೇಶವನ್ನು ಡಿಸೆಂಬರ್ ಅಂತ್ಯದೊಳಗೆ ಜಾರಿಗೊಳಿಸಬೇಕು ಎಂದು ನ್ಯಾಯಮೂರ್ತಿಗಳಾದ ಸಿ.ಕೆ. ಥಕ್ಕರ್ ಹಾಗೂ ದಲ್ವೀರ್ ಭಂಡಾರಿ ಅವರನ್ನೊಳಗೊಂಡ ಪೀಠ ತಾಕೀತು ಮಾಡಿತು. ತಂಪು ಪಾನೀಯಗಳಾದ ಪೆಪ್ಸಿ ಮತ್ತು ಕೋಕಾ ಕೋಲಾದಲ್ಲಿ ಕೀಟನಾಶಕ ಮತ್ತು ರಾಸಾಯನಿಕ ವಸ್ತುಗಳನ್ನು ಬಳಸುವುದರಿಂದ ಇವು ಆರೋಗ್ಯದ ಮೇಲೆ ಅಪಾಯಕಾರಿ ಪರಿಣಾಮ ಬೀರುತ್ತವೆ. ಹೀಗಾಗಿ ಇವುಗಳನ್ನು ನಿಷೇಧಿಸಬೇಕೆಂದು ಕೋರಿ ಸಲ್ಲಿಸಲಾಗಿದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿಯ ವಿಚಾರಣೆ ನಡೆಸಿದ ಪೀಠ ಈ ನಿರ್ದೇಶನ ನೀಡಿತು.

2007: ಚಿಕ್ಕಮಗಳೂರು ಜಿಲ್ಲೆಯ ಬಾಬಾಬುಡನ್ ಗಿರಿ ಮಾರ್ಗದಲ್ಲಿ ಖಾಸಗಿ ಬಸ್ ಉರುಳಿ ಸಂಭವಿಸಿದ ಭೀಕರ ದುರಂತದಲ್ಲಿ ಇಬ್ಬರು ಮಹಿಳೆಯರು ಸೇರಿ 9 ಮಂದಿ ಮೃತರಾಗಿ, 28 ಜನ ಗಾಯಗೊಂಡರು.

2007: ದಾವಣಗೆರೆ ಜಿಲ್ಲೆಯ ಹರಿಹರ ವಿಧಾನ ಸಭಾ ಕ್ಷೇತ್ರಕ್ಕೆ 2004ರ ಏಪ್ರಿಲ್ 20ರಂದು  ನಡೆದ ಚುನಾವಣೆಯನ್ನು ಹೈಕೋರ್ಟ್ ಅಸಿಂಧುಗೊಳಿಸಿತು. ಹತ್ತು ದಿನಗಳ ಒಳಗೆ ಒಬ್ಬ ಅಧಿಕಾರಿಯನ್ನು ನೇಮಿಸಿ, ಈ ಕ್ಷೇತ್ರದ ಮತ ಎಣಿಕೆ ಕಾರ್ಯವನ್ನು ಮತ್ತೆ ನಡೆಸಿ, ಒಂದು ತಿಂಗಳ ಒಳಗೆ ಫಲಿತಾಂಶ ಪ್ರಕಟಿಸಬೇಕು ಎಂದು ನ್ಯಾಯಾಲಯವು ರಾಜ್ಯ ಚುನಾವಣಾ ಆಯೋಗಕ್ಕೆ ಆದೇಶಿಸಿತು. 569 ಮತಗಳ ಅಂತರದಲ್ಲಿ ಗೆಲುವು ಸಾಧಿಸಿರುವ ಕಾಂಗ್ರೆಸ್ ಅಭ್ಯರ್ಥಿ ಡಾ. ವೈ. ನಾಗಪ್ಪ ಅವರ ವಿರುದ್ಧ ಪರಾಭವಗೊಂಡ ಜೆಡಿ (ಎಸ್) ಅಭ್ಯರ್ಥಿ ಶಿವಪ್ಪ ಅವರ ಚುನಾವಣಾ ಏಜೆಂಟ್ ಎಸ್. ಪ್ರಸನ್ನ ಕುಮಾರ್ ಸಲ್ಲಿಸಿದ ಅರ್ಜಿಯ ವಿಚಾರಣೆ ನಡೆಸಿದ ನ್ಯಾಯಮೂರ್ತಿ ವಿ.ಗೋಪಾಲಗೌಡ ಈ ಆದೇಶ ಹೊರಡಿಸಿದರು.

2006: ರಾಷ್ಟ್ರನಿರ್ಮಾಣ ಚಟುವಟಿಕೆಗಳಿಗೆ ನೀಡಿದ ಅಪಾರ ಕೊಡುಗೆಗಾಗಿ ಸಾರ್ವಜನಿಕ ಕ್ಷೇತ್ರದ ಭಾರತ ಹೆವಿ ಎಲೆಕ್ಟ್ರಿಕಲ್ಸ್ (ಬಿಎಚ್  ಇಎಲ್) ಲಿಮ್ಕಾ ದಾಖಲೆಗಳ ಪುಸ್ತಕದಲ್ಲಿ ಸೇರ್ಪಡೆಯಾಯಿತು. ಲಿಮ್ಕಾ ಪುಸ್ತಕದ `ಡೂಯಿಂಗ್ ಇಂಡಿಯಾ ಪ್ರೌಡ್' ವಿಭಾಗದಲ್ಲಿ ಬಿ ಎಚ್ ಇ ಎಲ್ ಗೆ ಮಾನ್ಯತೆ ಲಭಿಸಿತು. ದೇಶದ ವಿದ್ಯುತ್ ಅಭಿವೃದ್ಧಿ ಕಾರ್ಯಕ್ರಮಗಳಿಗೆ ಸಂಸ್ಥೆ ನೀಡಿದ ಕೊಡುಗೆ ಪರಿಗಣಿಸಿ ಈ ಗೌರವ ನೀಡಲಾಯಿತು.

2006: ಶಾಂತಿ ಪಾಲನಾ ಪಡೆಯ ಅಂಗವಾಗಿ ಲೆಬನಾನಿನಲ್ಲಿ ಕಾರ್ಯ ನಿರ್ವಹಿಸಿದ ಸಿಖ್ ರೆಜಿಮೆಂಟಿನ 4ನೇ ಬೆಟಾಲಿಯನ್ ಗೆ ವಿಶ್ವಸಂಸ್ಥೆಯ ಫೋರ್ಸ್ ಕಮಾಂಡರ್ಸ್ ಪುರಸ್ಕಾರ ಲಭಿಸಿತು. ತುಕಡಿಯ 73 ಯೋಧರಿಗೆ ಈ ಪ್ರಶಸ್ತಿಯನ್ನು ನೀಡಲಾಯಿತು. ಈ ಭಾರತೀಯ ಯೋಧರು ಇಸ್ರೇಲ್ ಮತ್ತು ಲೆಬನಾನ್ ನಡುವಣ 34 ದಿನಗಳ ಸಂಘರ್ಷ ಕಾಲದಲ್ಲಿ ತಮ್ಮ ಜೀವವನ್ನು ಪಣಕ್ಕಿಟ್ಟು ಮಾನವೀಯ ಸೇವೆ ಕೈಗೊಂಡಿದ್ದರು.

2006: ಕರ್ನಾಟಕದ ರಾಜಕಾರಣಿಗಳು ಮತ್ತು ಪೊಲೀಸರು ತನ್ನಿಂದ 2000 ಕೋಟಿ ರೂಪಾಯಿಗಳನ್ನು ಪಡೆದುಕೊಂಡಿರುವುದಾಗಿ ಛಾಪಾ ಕಾಗದ ಹಗರಣದ ಪ್ರಮುಖ ಆರೋಪಿ ಅಬ್ದುಲ್ ಕರೀಂ ತೆಲಗಿ ಮಂಪರು ಪರೀಕ್ಷೆಯಲ್ಲಿ ಹೇಳಿರುವ ವಿಚಾರ ಬಹಿರಂಗಗೊಂಡಿತು. 2003ರ ಡಿಸೆಂಬರ್ 29ರಂದು ತೆಲಗಿಯನ್ನು ಬೆಂಗಳೂರಿನ ವಿಕ್ಟೋರಿಯಾ ಆಸ್ಪತ್ರೆಯಲ್ಲಿ ಈ ಮಂಪರು ಪರೀಕ್ಷೆಗೆ ಒಳಪಡಿಸಲಾಗಿತ್ತು. ಒಂದೂವರೆ ತಾಸು ಕಾಲ ನಡೆದ ಈ ವಿಚಾರಣೆಯನ್ನು ವಿಡಿಯೋ ಸಿ.ಡಿ.ಗಳಲ್ಲಿ ಧ್ವನಿಮುದ್ರಿಸಲಾಗಿದ್ದು ಈ ಸಿ.ಡಿ.ಗಳು ಈ ದಿನ ಪತ್ರಿಕಾಲಯಗಳಿಗೆ ತಲುಪಿ ವಿಷಯ ಬಹಿರಂಗಗೊಂಡಿತು.

2006: `ಸಿದ್ದ' ಚಿಕಿತ್ಸೆ ಪದ್ಧತಿಯಲ್ಲಿ ಹೆಸರುವಾಸಿಯಾದ ಕೇರಳದ ಅಲಪ್ಪುಳ ಜಿಲ್ಲೆಯ ಚಾಂದಿರೂರ್ ಗ್ರಾಮವನ್ನು ದೇಶದ ಮೊದಲ ಸಿದ್ದ ಗ್ರಾಮ' ಎಂದು ಘೋಷಿಸಲಾಯಿತು. ಗ್ರಾಮಕ್ಕೆ ಭೇಟಿ ನೀಡಿದ ಕೇಂದ್ರ ಆರೋಗ್ಯ ಸಚಿವ ಅನ್ಬುಮಣಿ ರಾಮದಾಸ್ ಅವರು ಈ ಪ್ರಕಟಣೆ ಮಾಡಿದರು. ತಿರುವಂತಪುರ ಮೂಲದ ಶಾಂತಿಗಿರಿ ಆಶ್ರಮ ಈ ಗ್ರಾಮವನ್ನು ಆಯ್ಕೆ ಮಾಡಿ ಗ್ರಾಮಸ್ಥರಿಗೆ `ಸಿದ್ದ ವೈದ್ಯ ಪದ್ಧತಿ' ಬಗ್ಗೆ ಉಚಿತ ತಿಳುವಳಿಕೆ ನೀಡಿತ್ತು.

2006: `ನಡೆದಾಡುವ ವಿಶ್ವಕೋಶ' ಎಂದು ಖ್ಯಾತರಾಗಿದ್ದ ಉರ್ದು ಸಾಹಿತಿ ಪ್ರೊ. ಅಬ್ದುಲ್ ಮಘನಿ (70) ಈದಿನ ಬಿಹಾರಿನ ಪಟ್ನಾದಲ್ಲಿ ನಿಧನರಾದರು. ಉರ್ದು ಭಾಷೆಯಲ್ಲಿ ಅಪಾರ ಪ್ರೌಢಿಮೆ ಹೊಂದಿದ್ದ ಮಘನಿ, ಖ್ಯಾತ ಉರ್ದು ಕವಿ ಇಕ್ಬಾಲ್ ಬರಹಗಳ ಕುರಿತು ಒಂದು ಸಂಪುಟ ಸಹಿತ 18 ಪುಸ್ತಕಗಳನ್ನು ಪ್ರಕಟಿಸಿದ್ದರು. `ಕುರಾನ್' ಗ್ರಂಥವನ್ನು ಇಂಗ್ಲಿಷಿಗೆ ಅನುವಾದ ಮಾಡಿದ್ದರು. ಮಿಥಿಲಾ ವಿಶ್ವವಿದ್ಯಾಲಯದ ಕುಲಪತಿಯಾಗಿ, ಬಿಹಾರಿನ `ಅಂಜುಮನ್ ತಾರಿಖಿ' ಸಂಸ್ಥೆಯ ಅಧ್ಯಕ್ಷರಾಗಿ ಸೇವೆ ಸಲ್ಲಿಸಿದ್ದರು.

2006: ಹೆಸರಾಂತ ಪಕ್ಕವಾದ್ಯ ಕಲಾವಿದ ಅಲಿಪ್ಪರಂಬು ಶಿವರಾಮ ಪೊದುವಾಳ್ (82) ಅವರು ಕೇರಳದ ಚೆರಪುಲ್ಲಸೇರಿ ಪಟ್ಟಣದ ತಮ್ಮ ನಿವಾಸದಲ್ಲಿ ನಿಧನರಾದರು. ಹಲವಾರು ಪುರಸ್ಕಾರಗಳಿಗೆ ಭಾಜನರಾಗಿದ್ದ ಅವರು `ಚೆಂಡೆ ವಾದನ'ದಲ್ಲಿ ಪ್ರಾವೀಣ್ಯ ಸಾದಿಸಿದ್ದರು.

1997: ಮದರ್ ತೆರೇಸಾ ಅವರು ತಮ್ಮ 87ನೇ ವಯಸ್ಸಿನಲ್ಲಿ ನಿಧನರಾದರು.

1986: ಪ್ರಾಣಾಪಾಯವನ್ನು ಲೆಕ್ಕಿಸದೆ ಅಪಹೃತರಿಗೆ ನೆರವು ನೀಡಿದ್ದಕ್ಕಾಗಿ ಗಗನಸಖಿ ನೀರಜಾ ಭಾನೋಟ್ ಬಲಿದಾನ ಮಾಡಬೇಕಾಗಿ ಬಂದ ದಿನವಿದು. ಮುಂಬೈಯಿಂದ ಪಾಕಿಸ್ಥಾನದ ಕರಾಚಿಗೆ ಅಪಹರಿಸಲಾದ ಅಮೆರಿಕದ ಪಾನ್ ಆಮ್ 73 ವಿಮಾನದ ಗಗನಸಖಿ ನೀರಜಾ ಅವರನ್ನು ಭಯೋತ್ಪಾದಕರು ಪ್ರಯಾಣಿಕರಿಗೆ ಪಾರಾಗಲು ಮಾರ್ಗದರ್ಶನ ಮಾಡಿದ್ದಕ್ಕಾಗಿ ಗುಂಡಿಟ್ಟು ಕೊಂದರು. 394 ಜನರಿದ್ದ ಈ ವಿಮಾನ ಅಪಹರಣದ ನಾಟಕ 16 ಗಂಟೆಗಳ ಬಳಿಕ ಕೊನೆಗೊಂಡಾಗ 19 ಜನರ ಸತ್ತು  130 ಜನ ಗಾಯಗೊಂಡಿದ್ದರು. ರಾಷ್ಟ್ರವು ನೀರಜಾ ಬಾನೋಟ್ ಅವರನ್ನು `ಮರಣೋತ್ತರ ಅಶೋಕ ಚಕ್ರ' ಪ್ರಶಸ್ತಿ ನೀಡಿ ಗೌರವಿಸಿತು.

1980: ಪ್ರಪಂಚದ ಅತಿ ಉದ್ದದ ಸ್ವಯಂಚಾಲಿತ ಸುರಂಗಮಾರ್ಗ ಸ್ವಿಜರ್ಲೆಂಡಿನಲ್ಲಿ (ಸ್ವಿಸ್) ಆರಂಭ.

1972: ಒಲಿಂಪಿಕ್ಸ್ ಕ್ರೀಡಾಕೂಟದ ಇತಿಹಾಸದ ರಕ್ತರಂಜಿತ ದಿನ ಇದು. `ಬ್ಲಾಕ್ ಸೆಪ್ಟೆಂಬರ್' ಗುಂಪಿನ ಅರಬ್ ಭಯೋತ್ಪಾದಕರು ಮ್ಯೂನಿಕ್ ಒಲಿಂಪಿಕ್ ಕ್ರೀಡಾಗ್ರಾಮಕ್ಕೆ ನುಗ್ಗಿ ಇಬ್ಬರು ಇಸ್ರೇಲಿ ಅಥ್ಲೆಟ್ ಗಳನ್ನು ಕೊಂದು ಇತರ 9 ಜನರನ್ನು ಒತ್ತೆಯಾಳುಗಳನ್ನಾಗಿ ಹಿಡಿದಿಟ್ಟುಕೊಂಡರು. ನಂತರ ನಡೆದ ಗುಂಡಿನ ಘರ್ಷಣೆಯಲ್ಲಿ ಒಬ್ಬ ಜರ್ಮನ್ ಪೊಲೀಸ್ ಸೇರಿದಂತೆ ಒತ್ತೆಯಾಳುಗಳು ಹಾಗೂ ಭಯೋತ್ಪಾದಕರು ಮೃತರಾದರು.

1967: ಪ್ರಧಾನಿ ಅಧ್ಯಕ್ಷತೆಯಲ್ಲಿ ಕೇಂದ್ರೀಯ ಹಿಂದಿ ಸಮಿತಿ ರಚನೆಯಾಯಿತು.

1958: ಮೊದಲ ಕಲರ್ ವಿಡಿಯೋ ರೆಕಾರ್ಡಿಂಗ್ ಕ್ಯಾಸೆಟ್ ಬಿಡುಗಡೆ.

1953: ಸಾಹಿತಿ ಡಾ. ನರಹಳ್ಳಿ ಬಾಲಸುಬ್ರಹ್ಮಣ್ಯ ಜನನ.

1948: ಸಾಹಿತಿ ಶ್ರೀಕಂಠ ಕೂಡಿಗೆ ಜನನ.

1919: ಸಾಹಿತಿ ಕೃಷ್ಣಮೂರ್ತಿ ಪುರಾಣಿಕ ಜನನ.

1872: ಭಾರತೀಯ ಸ್ವಾತಂತ್ರ್ಯ ಹೋರಾಟಗಾರ ಚಿದಂಬರಂ ಪಿಳ್ಳೈ (1872-1936) ಜನ್ಮದಿನ. 1909ರಲ್ಲಿ ಇವರು `ಸ್ವದೇಶಿ ಶಿಪ್ಪಿಂಗ್ ಕಂಪೆನಿ' ಹೆಸರಿನಲ್ಲಿ ಭಾರತದಲ್ಲಿ ಮೊತ್ತ ಮೊದಲ ಶಿಪ್ಪಿಂಗ್ ಕಂಪೆನಿಯನ್ನು ಸ್ಥಾಪಿಸಿದರು.

1844: ಮೈಸೂರು ತಾತಯ್ಯ ಎಂದೇ ಖ್ಯಾತರಾಗಿದ್ದ ಸಮಾಜ ಸೇವಕ, ಸಾಹಿತಿ, ಪತ್ರಿಕೋದ್ಯಮಿ ಎಂ. ವೆಂಕಟಕೃಷ್ಣಯ್ಯ (5-9-1844ರಿಂದ 8-11-1933) ಅವರು ಸುಬ್ಬಯ್ಯ- ಭಾಗೀರಥಮ್ಮ ದಂಪತಿಯ ಮಗನಾಗಿ ಹೆಗ್ಗಡದೇವನಕೋಟೆ ತಾಲ್ಲೂಕಿನ ಮಗ್ಗೆ ಗ್ರಾಮದಲ್ಲಿ ಜನಿಸಿದರು.

1612: ಈಸ್ಟ್ ಇಂಡಿಯಾ ಕಂಪೆನಿಯ ನೌಕಾದಳ ಅಸ್ತಿತ್ವಕ್ಕೆ ಬಂದಿತು.

(ಸಂಗ್ರಹ: ನೆತ್ರಕೆರೆ ಉದಯಶಂಕರ)

Monday, September 7, 2009

ಇಂದಿನ ಇತಿಹಾಸ History Today ಸೆಪ್ಟೆಂಬರ್ 04

ಇಂದಿನ ಇತಿಹಾಸ 

ಸೆಪ್ಟೆಂಬರ್ 04

ದಾದಾಭಾಯಿ ನವರೋಜಿ ಜನ್ಮದಿನ. ಭಾರತದ ರಾಷ್ಟ್ರೀಯವಾದಿಯೂ, ಬ್ರಿಟಿಷರು ಭಾರತದಲ್ಲಿ ಅನುಸರಿಸುತ್ತಿದ್ದ ಆರ್ಥಿಕ ನೀತಿಯ ಉಗ್ರ ಟೀಕಾಕಾರರೂ ಆಗಿದ್ದ ನವರೋಜಿ ಭಾರತೀಯ ರಾಷ್ಟ್ರೀಯ ಚಳವಳಿಯ `ಪಿತಾಮಹ' ಎಂದೇ ಖ್ಯಾತರಾಗಿದ್ದಾರೆ. `ಸ್ವರಾಜ್' ಪದವನ್ನು ಜನಪ್ರಿಯಗೊಳಿಸಿದವರು ನವರೋಜಿ ಅವರೇ.

2008: ಭಾರತದ ಲಿಯಾಂಡರ್ ಪೇಸ್ ಅವರು ಜಿಂಬಾಬ್ವೆಯ ಕಾರಾ ಬ್ಲಾಕ್ ಅವರೊಂದಿಗೆ ಯು.ಎಸ್. ಓಪನ್ ಟೆನಿಸ್ ಚಾಂಪಿಯನ್ ಶಿಪ್ನ ಮಿಕ್ಸೆಡ್ ಡಬಲ್ಸ್ ಪ್ರಶಸ್ತಿ ಗೆದ್ದುಕೊಂಡರು. ಪೇಸ್ ಮತ್ತು ಬ್ಲಾಕ್ ಜೋಡಿ ನ್ಯೂಯಾರ್ಕಿನಲ್ಲಿ ನಡೆದ ಫೈನಲಿನಲ್ಲಿ ಮರ್ರೆ ಮತ್ತು ಹಬೆರ್ ಜೋಡಿಯನ್ನು 7-6, 6-4ರಿಂದ ಸೋಲಿಸಿತು. ಲಿಯಾಂಡರ್ ಪೇಸ್ ಅವರು ಟೆನಿಸ್ ಬದುಕಿನ 8ನೇ ಗ್ರ್ಯಾನ್ ಸ್ಲಾಮ್ ಪ್ರಶಸ್ತಿ ಇದು. ಸೆಮಿಫೈನಲಿನಲ್ಲಿ ಪೇಸ್ ಜೋಡಿ 6-2, 6-0ಯಿಂದ ಅರ್ಜೆಂಟೀನಾದ ಮ್ಯಾಕ್ಸಿಮ್ ಮತ್ತು ಜೂನ್ ಮೊನಾಕೊ ಜೋಡಿಯನ್ನು ಮಣಿಸಿತ್ತು.

2007: ಕಳೆದ ತಿಂಗಳು ಹೈದರಾಬಾದಿನ ಲುಂಬಿನಿ ಪಾರ್ಕ್ ಹಾಗೂ ಗೋಪಾಲ್ ಚಾಟ್ ಭಂಡಾರದಲ್ಲಿ ಸಂಭವಿಸಿದ ಅವಳಿ ಬಾಂಬ್ ಸ್ಫೋಟಕ್ಕೆ ಸಂಬಂಧಿಸಿದಂತೆ ಆಂಧ್ರದ ವಿಶೇಷ ತನಿಖಾ ತಂಡವು ಬಾಂಗ್ಲಾದೇಶದ ವಿದ್ಯಾರ್ಥಿನಿ ಶಾಹಿ ಲಜ್ಜಾಜಿನಿ ಎಂಬಾಕೆಯನ್ನು ತಮಿಳುನಾಡಿನ ವೆಲ್ಲೂರಿನಲ್ಲಿ ಬಂಧಿಸಿತು. ಲಜ್ಜಾಜಿನಿ ವೆಲ್ಲೂರಿನ ಕ್ರಿಶ್ಚಿಯನ್ ವೈದ್ಯಕೀಯ ಕಾಲೇಜಿನ ವಿದ್ಯಾರ್ಥಿನಿ ಎಂದು ಹೇಳಲಾಗಿತ್ತು. ಆದರೆ ತನಿಖೆಯ ವೇಳೆ ಈಕೆ ವೆಲ್ಲೂರಿನ 2008ರ ಆಕ್ಸಿಲಿಯಮ್ ಕಾಲೇಜಿನಲ್ಲಿ ಅಂತಿಮ ವರ್ಷದ ಬಿಎ (ಇಂಗ್ಲಿಷ್ ಸಾಹಿತ್ಯ) ವ್ಯಾಸಂಗ ಮಾಡುತ್ತಿರುವ ವಿಷಯ ಬಹಿರಂಗೊಂಡಿತು.

2007: ಕೊಳೆರೋಗದಿಂದ ತೀವ್ರ ನಷ್ಟಕ್ಕೆ ಒಳಗಾಗಿರುವ ಅಡಿಕೆ ಬೆಳೆಗಾರರ ನೆರವಿಗೆ ಬಂದ ರಾಜ್ಯ ಸರ್ಕಾರ, ತತ್ ಕ್ಷಣದ ಕ್ರಮವಾಗಿ 10 ಕೋಟಿ ರೂಪಾಯಿಗಳ ಸಬ್ಸಿಡಿ ಪ್ರಕಟಿಸಿತು. ಬೆಂಗಳೂರಿನ ವಿಧಾನಸೌಧದಲ್ಲಿ ಕರ್ನಾಟಕದ 7 ಜಿಲ್ಲೆಗಳಿಂದ ಆಗಮಿಸಿದ ಅಡಿಕೆ ಬೆಳೆಗಾರರು ಮತ್ತು ಅಡಿಕೆ ಮಾರಾಟ ಸಹಕಾರ ಸಂಘಗಳ ಮುಖಂಡರೊಂದಿಗೆ ಸಭೆ ನಡೆಸಿದ ಬಳಿಕ ಉಪಮುಖ್ಯಮಂತ್ರಿ ಬಿ. ಎಸ್. ಯಡಿಯೂರಪ್ಪ ಅವರು ಪತ್ರಕರ್ತರಿಗೆ ಈ ವಿಷಯ ತಿಳಿಸಿದರು.

2007: ರಾಜ್ಯದ ಒಟ್ಟು 208 ನಗರ ಪ್ರದೇಶಗಳ ಸ್ಥಳೀಯ ಸಂಸ್ಥೆಗಳಿಗೆ ಸೆಪ್ಟೆಂಬರ್ 28ರಂದು ಚುನಾವಣೆ ನಡೆಸಲು ರಾಜ್ಯ ಚುನಾವಣಾ ಆಯೋಗ ನಿರ್ಧರಿಸಿತು.

2007: ವಿಶಾಖ ಪಟ್ಟಣದಿಂದ 130 ನಾಟಿಕಲ್ ಮೈಲು ದೂರ ಕಡಲಿನಲ್ಲಿ ಈದಿನ ಪ್ರಾರಂಭವಾದ  ಜಂಟಿ ಸಮರಾಭ್ಯಾಸದಲ್ಲಿ ಅಮೆರಿಕ, ಭಾರತ, ಜಪಾನ್, ಆಸ್ಟ್ರೇಲಿಯ ಹಾಗೂ ಸಿಂಗಪುರದ 26 ಯುದ್ಧ ನೌಕೆ ಪಾಲ್ಗೊಂಡವು.

2007: ರಾವಲ್ಪಿಂಡಿಯ ಜನನಿಬಿಡ ಮಾರುಕಟ್ಟೆ ಪ್ರದೇಶಗಳಲ್ಲಿ ಈದಿನ ಸಂಭವಿಸಿದ ಎರಡು ಬಾಂಬ್ ಸ್ಫೋಟಗಳಲ್ಲಿ ಕನಿಷ್ಠ 29 ಜನರು ಮೃತರಾದರು. ಪಾಕಿಸ್ಥಾನದ ಅಣುಶಕ್ತಿ ಆಯೋಗದ ನೌಕರರನ್ನು ಖಾಸೀಂ ಬಜಾರ್ ಪ್ರದೇಶದಲ್ಲಿನ ಕಚೇರಿಗೆ ಕರೆದೊಯ್ಯುತ್ತಿದ್ದ ಸೇನಾ ಪಡೆಯ ಬಸ್ಸಿನಲ್ಲಿ ಮೊದಲ ಸ್ಫೋಟ ಬೆಳಿಗ್ಗೆ 7.30ರ ಸಮಯದಲ್ಲಿ ಸಂಭವಿಸಿ, ಕನಿಷ್ಠ 17 ಮಂದಿ ಮೃತರಾದರು. ನಂತರ ಆರ್. ಎ. ಬಜಾರಿನಲ್ಲಿ ಮೋಟಾರ್ ಬೈಕಿನಲ್ಲಿಟ್ಟ ಬಾಂಬ್ ಸ್ಫೋಟಗೊಂಡು ಕನಿಷ್ಠ 12 ಜನರು ಅಸುನೀಗಿದರು.

2007: ಖಾಸಗಿ ವಿಮಾನಯಾನ  ಕಂಪೆನಿ ಜೆಟ್ ಏರ್ ವೇಸ್, ನವದೆಹಲಿಯಿಂದ ಟೊರಾಂಟೊಗೆ ನೇರ ವಿಮಾನ ಸೇವೆ ಆರಂಭಿಸಿತು.

2006: ಅತ್ಯದ್ಭುತ ಸಾಹಸಗಳಿಂದ ವನ್ಯಜೀವಿಗಳ ನಿಗೂಢ ಲೋಕವನ್ನು ಜಗತ್ತಿಗೆ ತೆರೆದಿಟ್ಟಿದ್ದ ಆಸ್ಟ್ರೇಲಿಯಾದ ಸಾಹಸಿಗ `ಕ್ರೊಕೊಡೈಲ್ ಹಂಟರ್' (ಮೊಸಳೆ (ಚಿತ್ರ) ಹಿಡಿಯುವವ) ಸ್ಟೀವ್ ಇರ್ವಿನ್ (44) ಅವರು ಆಸ್ಟ್ರೇಲಿಯಾದ ಕ್ವೀನ್ಸ್ ಲ್ಯಾಂಡ್ ಸಮೀಪದ ಸಾಗರದಲ್ಲಿ ಜಲಚರಗಳ ಚಿತ್ರೀಕರಣದಲ್ಲಿ ತೊಡಗಿದ್ದಾಗ ವಿಷಪೂರಿತ `ಸ್ಟಿಂಗ್ ರೆ' ಮೀನಿನ ದಾಳಿಗೆ ಗುರಿಯಾಗಿ ದುರ್ಮರಣವನ್ನಪ್ಪಿದರು. ಮೀನಿನ ವಿಷಪೂರಿತ ಬಾಣ ಅವರ ಎದೆಗೆ ನಾಟಿ ಸಾಗರಗರ್ಭದಲ್ಲೇ ಅವರು ಅಸು ನೀಗಿದರು. ಮೊಸಳೆಗಳ ಜೀವನ, ಆಹಾರ ಅಭ್ಯಾಸಗಳ ಬಗ್ಗೆ ಇರ್ವಿನ್ ನಿರ್ಮಿಸಿದ ಚಿತ್ರವನ್ನು 1992 ರಲ್ಲಿ ಪ್ರಸಾರ ಮಾಡಲಾಗಿತ್ತು. ಆ ಬಳಿಕ ಅವರು ಅತ್ಯಂತ ಜನಪ್ರಿಯರಾಗಿ ಮನೆ ಮಾತಾಗಿದ್ದರು. ವನ್ಯ ಜೀವಿಗಳ ಸಂರಕ್ಷಣೆಗೆ ತಮ್ಮ ಜೀವನವನ್ನೇ ಮುಡುಪಾಗಿದ್ದ ಇರ್ವಿನ್ ಅಪರೂಪದ ವನ್ಯಜೀವಿಗಳ ಸಾಕ್ಷ್ಯಚಿತ್ರ ನಿರ್ಮಿಸಿ ಅವುಗಳ ನಿಗೂಢ ಲೋಕವನ್ನು ವೀಕ್ಷಕರ ಎದುರು ಅನಾವರಣ ಗೊಳಿಸಿದ್ದರು. ದೈತ್ಯಾಕಾರದ ಮೊಸಳೆ, ವಿಷಪೂರಿತ ಹಾವುಗಳು, ಹುಲಿ, ಸಿಂಹಗಳ ಜೊತೆಗಿನ ಅವರ ಒಡನಾಟದ ದೃಶ್ಯಗಳು ವೀಕ್ಷಕರಲ್ಲಿ ನಡುಕ ಉಂಟು ಮಾಡುತ್ತಿದ್ದವು. ವನ್ಯ ಜೀವಿಗಳ ಬಗ್ಗೆ ಜಾಗೃತಿ ಮೂಡಿಸುವುದರ ಜೊತೆಗೆ ಅವುಗಳನ್ನು ಪ್ರೀತಿಸುವ ಹೊಸ ಪೀಳಿಗೆಯನ್ನೇ ಇರ್ವಿನ್ ಸೃಷ್ಟಿಸಿದ್ದರು. ಆಸ್ಟ್ರೇಲಿಯಾದಲ್ಲಿ ಸರೀಸೃಪಗಳ ಉದ್ಯಾನವನ್ನೂ ನಿರ್ವಹಿಸುತ್ತಿದ್ದರು.

2006: ಎರಡನೇ ಮಹಾಯುದ್ಧದ ಸಂದರ್ಭದಲ್ಲಿ ತನ್ನ ಸಾಹಸ, ಚಾಣಾಕ್ಷತೆಯಿಂದ ಇಂಗ್ಲೆಂಡ್ ಮತ್ತು ಫ್ರಾನ್ಸಿನ ಪ್ರಶಂಸೆಗೆ ಪಾತ್ರರಾಗಿದ್ದ ಭಾರತೀಯ ಮೂಲದ ಗೂಢಚಾರಿಣಿ ನೂರುನ್ನೀಸಾ ಇನಾಯತ್ ಖಾನ್ ಅವರನ್ನು ಭಾರತ ಸರ್ಕಾರವು ಆರು ದಶಕಗಳ ಬಳಿಕ ಸ್ಮರಿಸಿಕೊಂಡು ಗೌರವ ಸಲ್ಲಿಸಿತು. ಅಧಿಕೃತ ಪ್ರವಾಸದ ಮೇಲೆ ಫ್ರಾನ್ಸಿಗೆ ಆಗಮಿಸಿದ ರಕ್ಷಣಾ ಸಚಿವ ಪ್ರಣವ್ ಮುಖರ್ಜಿ ಪ್ಯಾರಿಸ್ಸಿನಲ್ಲಿ ನೂರುನ್ನೀಸಾ ವಾಸಿಸುತ್ತಿದ್ದ ನಿವಾಸಕ್ಕೆ ಭೇಟಿ ನೀಡಿ ಶ್ರದ್ಧಾಂಜಲಿ ಸಲ್ಲಿಸಿದರು. ಎರಡನೇ ಮಹಾಯುದ್ಧ ಕಾಲದಲ್ಲಿ ನೂರುನ್ನೀಸಾ ಇಂಗ್ಲಿಷ್ ಸೇನೆ ಪರ ಗೂಢಚಾರಿಣಿಯಾಗಿ ಸೇವೆ ಸಲ್ಲಿಸಿದ್ದರು. ನಂತರ ಅವರನ್ನು ಜರ್ಮನ್ ಸೈನಿಕರು ಹತ್ಯೆ ಮಾಡಿದ್ದರು. ಈ ಭಾರತೀಯ ಸಂಜಾತೆಗೆ ಬ್ರಿಟನ್ ಸರ್ಕಾರ ಜಾರ್ಜ್ ಕ್ರಾಸ್ ಹಾಗೂ ಫ್ರಾನ್ಸ್ ಸರ್ಕಾರ ಕ್ರೋಯಿಕ್ಸ್ ಡಿ ಗ್ಯುರ್ರೆ ಪ್ರಶಸ್ತಿಗಳನ್ನು ಮರಣೋತ್ತರವಾಗಿ ನೀಡಿ ಗೌರವಿಸಿವೆ.

2006: ಕ್ರಿಮಿನಾಶಕ ಅಂಶಗಳಿರುವ ತಂಪು ಪಾನೀಯಗಳನ್ನು ನಿಷೇಧಿಸಿ ಕರ್ನಾಟಕ ಸರ್ಕಾರ ಹೊರಡಿಸಿರುವ ಸುತ್ತೊಲೆ ಬಗ್ಗೆ ಅನುಮಾನ ವ್ಯಕ್ತ ಪಡಿಸಿದ ಹೈಕೋರ್ಟ್ ಶಾಲಾ ಕಾಲೇಜುಗಳನ್ನು ಹೊರತು ಪಡಿಸಿ ಉಳಿದೆಡೆಗಳಲ್ಲಿ ಮಾರಾಟ ಮಾಡಲು ಅನುಮತಿ ನೀಡಿತು.

2006: ವಿಶ್ವ ಚಾಂಪಿಯನ್ ಮಾನವ ಜಿತ್ ಸಿಂಗ್ ಸಂಧು ಅವರು ಸಿಂಗಪುರದಲ್ಲಿ ನಡೆದ ಏಷ್ಯನ್ ಕ್ಲೇ ಶೂಟಿಂಗ್ ಚಾಂಪಿಯನ್ ಶಿಪ್ ನ ಪುರುಷರ ಟ್ರ್ಯಾಪ್ ವಿಭಾಗದಲ್ಲಿ ಚಿನ್ನದ ಪದಕ ಗೆದ್ದುಕೊಂಡರು.

2006: ಬಿಹಾರದ ಮಾಜಿ ಮುಖ್ಯಮಂತ್ರಿ ಸತ್ಯೇಂದ್ರ ನಾರಾಯಣ ಸಿನ್ಹ (89) ಪಟ್ನಾದಲ್ಲಿ ಈದಿನ ನಿಧನರಾದರು. `ಛೋಟೆ ಸಾಹೇಬ್' ಎಂದೇ ಹೆಸರಾಗಿದ್ದ ಸಿನ್ಹ 1952ರಲ್ಲಿ ಅಸ್ತಿತ್ವಕ್ಕೆ ಬಂದ ಪ್ರಥಮ ಲೋಕಸಭೆಗೆ ಔರಂಗಾಬಾದಿನಿಂದ ಆಯ್ಕೆಯಾಗಿದ್ದರು. ನಂತರ ಇದೇ ಕ್ಷೇತ್ರದಿಂದ ಅವರು 7 ಬಾರಿ ಲೋಕಸಭೆಗೆ ಆಯ್ಕೆಯಾದರು. ಬಿಹಾರ ರಾಜಕೀಯದಲ್ಲೂ ಮಿಂಚಿದ ಅವರು 1961ರಲ್ಲಿ ವಿವೇಕಾನಂದ ಝಾ ಸಂಪುಟದಲ್ಲಿ, 1963ರಲ್ಲಿ ಕೆ.ಬಿ. ಸಹಾಯ್ ಸಂಪುಟದಲ್ಲಿ ಸಚಿವರಾಗಿದ್ದರು. 1989ರಲ್ಲಿ ಆಗಿನ ಮುಖ್ಯಮಂತ್ರಿ ಭಗವತ್ ಝಾ ಆಜಾದ್ ವಿರುದ್ಧ ಬಂಡೆದ್ದು ತಾವೇ ಮುಖ್ಯಮಂತ್ರಿಯಾದರು.    

2006: ರಾಜಸ್ಥಾನದ ರಾಜಧಾನಿ ಜೈಪುರದಿಂದ 30 ಕಿ.ಮೀ. ದೂರದ ಬೆನಾಡ್ ಗ್ರಾಮದ ರಾಷ್ಟ್ರೀಯ ಹೆದ್ದಾರಿಯಲ್ಲಿ ಟ್ರಕ್ ಒಂದರ ಅಡಿಗೆ ಸಿಲುಕಿ ಕರಿಯ ನಾಗರ ಒಂದು ಈದಿನ ಮೃತಪಟ್ಟಿತು. ಗ್ರಾಮಸ್ಥರು ಚಿತೆ ನಿರ್ಮಿಸಿ ಅದರ ಅಂತ್ಯ ಸಂಸ್ಕಾರದ ವ್ಯವಸ್ಥೆ ಮಾಡಿದರು. ಚಿತೆಗೆ ಅಗ್ನಿಸ್ಪರ್ಶ ಮಾಡುತ್ತಿದ್ದಂತೆಯೇ ಎಲ್ಲಿಂದಲೋ ಬಂದ ಹೆಣ್ಣು ಹಾವೊಂದು ಛಂಗನೆ ಚಿತೆಗೆ ಜಿಗಿದು `ಸತಿ ಸಹಗಮನ' ಮಾಡಿತು. ಸಂಗಾತಿಯ ಅಗಲಿಕೆಯ ನೋವು ತಾಳಲಾಗದೆ ನಾಗಿಣಿ ಸಹಗಮನ ಮಾಡಿಕೊಂಡ ಈ ಗ್ರಾಮ ಭಕ್ತಾದಿಗಳಿಗೆ ಪವಿತ್ರ ಕ್ಷೇತ್ರವಾಗಿ ಮಾರ್ಪಟ್ಟಿತು.

2001: ಮಾನವ ಎಂಬ್ರಿಯೋನಿಕ್ ಸ್ಟೆಮ್ ಸೆಲ್ ಗಳನ್ನು ರಕ್ತ ಕಣಗಳಾಗಿ (ರಕ್ತಕೋಶ) ಪರಿವರ್ತಿಸಬಹುದು ಎಂದು ಅಮೆರಿಕನ್ ವಿಜ್ಞಾನಿಗಳು ಮೊತ್ತ ಮೊದಲ ಬಾರಿಗೆ ಪ್ರಕಟಿಸಿದರು. ವೈದ್ಯಕೀಯ ಚಿಕಿತ್ಸೆಗಳಿಗೆ ರಕ್ತ ಸರಬರಾಜು ಮಾಡುವ ನಿಟ್ಟಿನಲ್ಲಿ ಇದು ಮಹತ್ವದ ಹೆಜ್ಜೆಯಾಯಿತು. ಚಿಕಿತ್ಸೆ ಅಥವಾ ಟ್ರಾನ್ಸ್ ಫ್ಯೂಷನ್ ಗಳಿಗೆ ಲ್ಯಾಬೋರೋಟರಿಯಲ್ಲಿ ಅಭಿವೃದ್ಧಿ ಪಡಿಸಲಾದ ರಕ್ತವನ್ನು ರಕ್ತಕೋಶಗಳ ಬದಲಿಗೆ ಬಳಸಬಹುದಾದ ವಿಧಾನದ ಬಗ್ಗೆ ಉತ್ತಮ ತಿಳುವಳಿಕೆ ಹೊಂದಲು ಈ ಸಾಧನೆ ನೆರವಾಗಲಿದೆ ಎಂದು ಯುನಿವರ್ಸಿಟಿಆಫ್ ವಿಸ್ ಕೊನ್ ಸಿನ್ ನ ಸಂಶೋಧಕರು ಹೇಳಿದರು.

2001: `ಕಂಪ್ಯೂಟರ್ ದೈತ್ಯ' ಹ್ಯೂಲೆಟ್- ಪ್ಯಾಕಾರ್ಡ್ ಸಂಸ್ಥೆಯು ಕಾಂಪಾಕ್ ಕಂಪ್ಯೂಟರ್ಸ್ ಸಂಸ್ಥೆಯನ್ನು 250ಕೋಟಿ ಡಾಲರುಗಳಿಗೆ ಖರೀದಿಸಲು ಒಪ್ಪಿತು. `ನ್ಯೂ ಎಚ್-ಪಿ'ಯ ಒಟ್ಟು ಆದಾಯ 870 ಕೋಟಿ ಡಾಲರುಗಳು ಆಗಬಹುದು ಎಂದು ನಿರೀಕ್ಷಿಸಲಾಯಿತು. ಇದರಿಂದಾಗಿ ಕಂಪ್ಯೂಟರ್ ಉದ್ಯಮದ ನಾಯಕನೆಂಬ ಹೆಸರಿದ್ದ ಐಬಿಎಮ್ ಗೆ ತೀವ್ರ ಸ್ಪರ್ಧೆ ಎದುರಾಯಿತು.

1997: ಖ್ಯಾತ ಪತ್ರಕರ್ತ ಧರ್ಮವೀರ್ ಭಾರತಿ ನಿಧನ.

1981: ಬಾಂಬೆಹೈ ಸಮೀಪ ಹೊಸ ತೈಲ ನಿಕ್ಷೇಪ ಒಂದನ್ನು ಪತ್ತೆ ಹಚ್ಚಲಾಗಿದೆ ಎಂದು ಪೆಟ್ರೋಲಿಯಂ ಮತ್ತು ರಾಸಾಯನಿಕ ಸಚಿವ ಪಿ.ಸಿ. ಸೇಠಿ ಪ್ರಕಟಿಸಿದರು. ಬಾಂಬೆ ಹೈನ ಪೂರ್ವಕ್ಕೆ 35 ಕಿ.ಮೀ. ದೂರದಲ್ಲಿ ಈ ಹೊಸ ನಿಕ್ಷೇಪ ಪತ್ತೆಯಾಗಿದೆ.

1972: ಅಮೆರಿಕದ ಈಜುಗಾರ ಮಾರ್ಕ್ ಸ್ಪಿಟ್ಜ್ ಅವರು ಮ್ಯೂನಿಕ್ ಒಲಿಂಪಿಕ್ಸ್ ಕ್ರೀಡಾಕೂಟದಲ್ಲಿ 400 ಮೀಟರುಗಳ ಮೆಡ್ಲೆ ರಿಲೇಯಲ್ಲಿ ಏಳನೇ ಚಿನ್ನದ ಪದಕ ಗೆದ್ದುಕೊಂಡರು. ಇದರೊಂದಿಗೆ ಒಂದೇ ಒಲಿಂಪಿಕ್ಸ್ ಕ್ರೀಡಾಕೂಟದಲ್ಲಿ ಏಳು ಚಿನ್ನದ ಪದಕಗಳನ್ನು ಹೆಗಲಿಗೆ ಏರಿಸಿಕೊಂಡ ಪ್ರಪ್ರಥಮ ಈಜುಗಾರ ಎಂಬ ಖ್ಯಾತಿ ಇವರದಾಯಿತು.

1967: ಮಹಾರಾಷ್ಟ್ರದ ಕೊಯ್ನಾ ಅಣೆಕಟ್ಟು ಕೇಂದ್ರಿತ ಭೂಕಂಪದಲ್ಲಿ 200 ಜನರ ಸಾವು. ಭೂಕಂಪದ ತೀವ್ರತೆ ರಿಕ್ಟರ್ ಮಾಪಕದಲ್ಲಿ 6.5ರಷ್ಟಿತ್ತು.

1962: ಭಾರತ ಕ್ರಿಕೆಟ್ ತಂಡದ ಮಾಜಿ ವಿಕೆಟ್ ಕೀಪರ್ ಹಾಗೂ ಭಾರತ ಕ್ರಿಕೆಟ್ ತಂಡದ ಆಯ್ಕೆ ಸಮಿತಿ ಅಧ್ಯಕ್ಷ ಕಿರಣ್ ಮೋರೆ ಗುಜರಾತಿನ ಬರೋಡದ್ಲಲಿ ಈದಿನ ಜನಿಸಿದರು.

1933: ಕವಿ, ನಾಟಕಕಾರ, ವಿಮರ್ಶ, ಅನುವಾದಕ ಬುದ್ದಣ್ಣ ಹಿಂಗಮಿರೆ ಅವರು ಬಾಬು-ದುಂಡವ್ವ ದಂಪತಿಯ ಮಗನಾಗಿ ಬೆಳಗಾವಿ ಜಿಲ್ಲೆಯ ರಾಜಾಪುರದಲ್ಲಿ ಜನಿಸಿದರು.

1888: ಜಾರ್ಜ್ ಈಸ್ಟ್ ಮನ್ ಅವರಿಗೆ ಅವರ `ರೋಲ್ ಫಿಲ್ಮ್ ಕ್ಯಾಮರಾ'ಕ್ಕೆ ಪೇಟೆಂಟ್ ಸಿಕ್ಕಿತು. ಅವರು ಅದನ್ನು `ಕೊಡಕ್' ಟ್ರೇಡ್ ಮಾರ್ಕಿನಲ್ಲಿ ನೋಂದಣಿ ಮಾಡಿಸಿದರು.

1880: ಬಂಗಾಳಿ ಸಾಹಿತಿ ಭೂಪೇಂದ್ರನಾಥ ದತ್ತ ಜನನ.

1825: ದಾದಾಭಾಯಿ ನವರೋಜಿ ಜನ್ಮದಿನ. ಭಾರತದ ರಾಷ್ಟ್ರೀಯವಾದಿಯೂ, ಬ್ರಿಟಿಷರು ಭಾರತದಲ್ಲಿ ಅನುಸರಿಸುತ್ತಿದ್ದ ಆರ್ಥಿಕ ನೀತಿಯ ಉಗ್ರ ಟೀಕಾಕಾರರೂ ಆಗಿದ್ದ ನವರೋಜಿ ಭಾರತೀಯ ರಾಷ್ಟ್ರೀಯ ಚಳವಳಿಯ `ಪಿತಾಮಹ' ಎಂದೇ ಖ್ಯಾತರಾಗಿದ್ದಾರೆ. `ಸ್ವರಾಜ್' ಪದವನ್ನು ಜನಪ್ರಿಯಗೊಳಿಸಿದವರು ನವರೋಜಿ ಅವರೇ.

(ಸಂಗ್ರಹ: ನೆತ್ರಕೆರೆ ಉದಯಶಂಕರ)

Sunday, September 6, 2009

ಇಂದಿನ ಇತಿಹಾಸ History Today ಸೆಪ್ಟೆಂಬರ್ 03

ಇಂದಿನ ಇತಿಹಾಸ

ಸೆಪ್ಟೆಂಬರ್ 03

ಪ್ರಸಿದ್ಧ ಪರಿಸರವಾದಿ ಡಾ. ಉಲ್ಲಾಸ ಕಾರಂತ ಅವರು ಪರಿಸರ ಸಂರಕ್ಷಣಾ ನಾಯಕತ್ವಕ್ಕೆ ನೀಡಲಾಗುವ `ವಿಶ್ವ ವನ್ಯಮೃಗ ನಿಧಿ' (ಡಬ್ಲ್ಯುಡಬ್ಲ್ಯುಎಫ್)ಯ ಪ್ರತಿಷ್ಠಿತ `ಜೆ. ಪೌಲ್ ಗ್ರೆಟ್ಟಿ ಪ್ರಶಸ್ತಿ'ಗೆ ಪಾತ್ರರಾದರು. ಪ್ರಶಸ್ತಿಯ ಜತೆ ನೀಡಲಾಗುವ ಎರಡು ಲಕ್ಷ ಡಾಲರ್ (ಸುಮಾರು 82 ಲಕ್ಷ ರೂ) ಹಣವನ್ನು ತಮ್ಮ ಆಯ್ಕೆಯ ವಿಶ್ವವಿದ್ಯಾಲಯದಲ್ಲಿ ಪದವಿ ವಿದ್ಯಾರ್ಥಿಗಳಿಗೆ ಪರಿಸರ ಸಂಬಂಧಿ ವಿಷಯಗಳ ಅಧ್ಯಯನಕ್ಕಾಗಿ ಫೆಲೋಶಿಪ್ ಕಾರ್ಯಕ್ರಮ ಪ್ರಾರಂಭಿಸಲು ಡಾ.ಕಾರಂತರು ಬಳಸಬಹುದು. ಸಂಶೋಧನೆ, ಪ್ರಕಟಣೆ ಮತ್ತು ಹೋರಾಟದ ಮೂಲಕ ವನ್ಯಮೃಗ ಸಂರಕ್ಷಣೆಯ ಕ್ಷೇತ್ರದಲ್ಲಿ ಮಾಡಿದ ಸುದೀರ್ಘ ಕಾಲದ ಕಾರ್ಯವನ್ನು ಗುರುತಿಸಿ ಈ ಪ್ರಶಸ್ತಿ ನೀಡಲಾಯಿತು.

2008: ಇದೇ ವರ್ಷ ಮೇ ತಿಂಗಳಲ್ಲಿ ಚೀನಾದ ಸಿಚುವಾನ್ ಪ್ರಾಂತದಲ್ಲಿ ಸಂಭವಿಸಿದ ದಾರುಣ ಭೂಕಂಪದಲ್ಲಿ ಕನಿಷ್ಠ 87,000 ಜನರು ಮೃತರಾಗಿರಬಹುದೆಂದು ಹೊಸದಾಗಿ ಮತ್ತೊಮ್ಮೆ ಅಂದಾಜು ಮಾಡಲಾಯಿತು. ಭೂಕಂಪದಲ್ಲಿ 69 ಸಾವಿರ ಜನ ಸತ್ತಿದ್ದಾರೆ, 18 ಸಾವಿರ ಜನ ಕಾಣೆಯಾಗಿದ್ದಾರೆ ಎಂದು ಜೂನ್ ತಿಂಗಳ ಮಧ್ಯದಲ್ಲಿ ಅಂದಾಜು ಮಾಡಲಾಗಿತ್ತು. ದಾರುಣ ಭೂಕಂಪ ಸಂಭವಿಸಿ ಈಗಾಗಲೇ ಮೂರು ತಿಂಗಳು ಕಳೆದಿದ್ದು, ಕಾಣೆಯಾದವರು ಇನ್ನೂ ಬದುಕಿರುತ್ತಾರೆ ಎಂಬ ವಿಶ್ವಾಸ ಉಳಿದಿಲ್ಲ ಎಂದು ಭೂಕಂಪ ತಜ್ಞರ ಸಮಿತಿ ತಿಳಿಸಿತು. ರಿಕ್ಟರ್ ಮಾಪಕದಲ್ಲಿ ಎಂಟರಷ್ಟು ಪ್ರಮಾಣದಲ್ಲಿದ್ದ ಭೂಕಂಪದಿಂದ 42 ದಶಲಕ್ಷ ಜನ ತೊಂದರೆಗೀಡಾದರು. ಒಟ್ಟು 40 ಸಾವಿರ ಚದುರ ಕಿ.ಮೀ ಪ್ರದೇಶದ ವ್ಯಾಪ್ತಿಯಲ್ಲಿದ್ದ ಜನರು ಅದರ ಪರಿಣಾಮ ಎದುರಿಸಬೇಕಾಯಿತು. ಭೂಕಂಪದಿಂದ 121 ಶತಕೋಟಿ ಡಾಲರಿನಷ್ಟು ಮೌಲ್ಯದ ಆಸ್ತಿಪಾಸ್ತಿಗೆ ಹಾನಿ ಸಂಭವಿಸಿತ್ತು.

2007: ಪ್ರಸಿದ್ಧ ಪರಿಸರವಾದಿ ಡಾ. ಉಲ್ಲಾಸ ಕಾರಂತ ಅವರು ಪರಿಸರ ಸಂರಕ್ಷಣಾ ನಾಯಕತ್ವಕ್ಕೆ ನೀಡಲಾಗುವ `ವಿಶ್ವ ವನ್ಯಮೃಗ ನಿಧಿ' (ಡಬ್ಲ್ಯುಡಬ್ಲ್ಯುಎಫ್)ಯ ಪ್ರತಿಷ್ಠಿತ `ಜೆ. ಪೌಲ್ ಗ್ರೆಟ್ಟಿ ಪ್ರಶಸ್ತಿ'ಗೆ ಪಾತ್ರರಾದರು. ಪ್ರಶಸ್ತಿಯ ಜತೆ ನೀಡಲಾಗುವ ಎರಡು ಲಕ್ಷ ಡಾಲರ್ (ಸುಮಾರು 82 ಲಕ್ಷ ರೂ) ಹಣವನ್ನು ತಮ್ಮ ಆಯ್ಕೆಯ ವಿಶ್ವವಿದ್ಯಾಲಯದಲ್ಲಿ ಪದವಿ ವಿದ್ಯಾರ್ಥಿಗಳಿಗೆ ಪರಿಸರ ಸಂಬಂಧಿ ವಿಷಯಗಳ ಅಧ್ಯಯನಕ್ಕಾಗಿ ಫೆಲೋಶಿಪ್ ಕಾರ್ಯಕ್ರಮ ಪ್ರಾರಂಭಿಸಲು ಡಾ.ಕಾರಂತರು ಬಳಸಬಹುದು. ಸಂಶೋಧನೆ, ಪ್ರಕಟಣೆ ಮತ್ತು ಹೋರಾಟದ ಮೂಲಕ ವನ್ಯಮೃಗ ಸಂರಕ್ಷಣೆಯ ಕ್ಷೇತ್ರದಲ್ಲಿ ಮಾಡಿದ ಸುದೀರ್ಘ ಕಾಲದ ಕಾರ್ಯವನ್ನು ಗುರುತಿಸಿ ಈ ಪ್ರಶಸ್ತಿ ನೀಡಲಾಯಿತು. ಪಶ್ಚಿಮಘಟ್ಟದ ಮೂರು ಕಡೆಗಳಲ್ಲಿ ಅಭಿವೃದ್ಧಿಪಡಿಸಿರುವ ಏಷ್ಯಾದ ಆನೆ ಮತ್ತು ಹುಲಿಗಳ ಸಂರಕ್ಷಣಾಧಾಮಗಳು ಹಾಗೂ ಜನತೆ ಮತ್ತು ವನ್ಯಮೃಗಗಳಿಗೆ ಅನೂಕೂಲವಾಗುವ ರೀತಿಯಲ್ಲಿ ರೂಪಿಸಲಾಗಿರುವ ಸ್ವಇಚ್ಛೆಯ ಪುನರ್ವಸತಿ ಕಾರ್ಯಕ್ರಮಗಳನ್ನು ವಿಶ್ವ ವನ್ಯಮೃಗ ನಿಧಿ ವಿಶೇಷವಾಗಿ ಉಲ್ಲೇಖಿಸಿತು. ಜೀವವೈವಿಧ್ಯತೆಯ ಸಂರಕ್ಷಣೆಯೂ ಸೇರಿದಂತೆ ಭಾರತದ ಪರಿಸರ ನೀತಿ ರಚನೆ ಮತ್ತು ಭಾರತೀಯ ಪರಿಸರ ವಿಜ್ಞಾನಿಗಳ ಶಿಕ್ಷಣದ ಮೇಲೆ ಡಾ.ಕಾರಂತರು ಅಪಾರ ಪ್ರಭಾವ ಬೀರಿದ್ದಾರೆ ಎಂದು ಅದು ಹೇಳಿತು.

2007: ಹೈದರಾಬಾದ್ ಬಾಂಬ್ ಸ್ಫೋಟದ ಪ್ರಮುಖ ಆರೋಪಿ ರಿಜ್ವಾನನನು ಕರ್ನಾಟಕ ಮತ್ತು ಹೈದರಾಬಾದ್ ಪೊಲೀಸರು ಬೆಂಗಳೂರಿನಲ್ಲಿ ತಮ್ಮ ವಶಕ್ಕೆ ತೆಗೆದುಕೊಂಡರು. ಸಿಸಿಬಿ ಭಯೋತ್ಪಾದಕ ನಿಗ್ರಹ ದಳ ಮತ್ತು ಹೈದರಾಬಾದ್ ವಿಶೇಷ ತನಿಖಾ ತಂಡದ (ಎಸ್ಐಟಿ) ಸದಸ್ಯರು ಜಂಟಿ ಕಾರ್ಯಾಚರಣೆ ನಡೆಸಿ, ಮೈಕೋ ಲೇಔಟ್ ಸಮೀಪದ ಹಳೆಗುರಪ್ಪನಪಾಳ್ಯದ ಮನೆಯೊಂದರಲ್ಲಿ ವಾಸವಾಗಿದ್ದ ರಿಜ್ವಾನನ್ನು ತಮ್ಮ ವಶಕ್ಕೆ ತೆಗೆದುಕೊಂಡರು. ರಿಜ್ವಾನನೊಂದಿಗೆ ಇದ್ದ ಬಾಂಗ್ಲಾದೇಶ ಮೂಲದ ಶಿಯಾಕ್ ಎಂಬ ಮಹಿಳೆಯನ್ನೂ ಪೊಲೀಸರು ವಶಕ್ಕೆ ತೆಗೆದುಕೊಂಡರು.

2007: ಜನತಾದಳ(ಎಸ್) ಕರ್ನಾಟಕ ರಾಜ್ಯ ಘಟಕದ ಅಧ್ಯಕ್ಷರಾಗಿ ಮೆರಾಜ್ದುದೀನ್ ಪಟೇಲ್ ಹಾಗೂ ಯುವ ಘಟಕದ ಅಧ್ಯಕ್ಷರಾಗಿ ಅರವಿಂದ ದಳವಾಯಿ ಬೆಂಗಳೂರಿನಲ್ಲಿ ಅಧಿಕಾರ ಸ್ವೀಕರಿಸಿದರು.

2007: `ತನಿಖೆ' ಚಿತ್ರದ ಮೂಲಕ ಸುದ್ದಿಯಾಗಿದ್ದ ನಟ ಗುಲ್ಜಾರ್ ಖಾನ್ (55) ಈದಿನ ಬೆಂಗಳೂರಿನಲ್ಲಿ ಹೃದಯಾಘಾತದಿಂದ ನಿಧನರಾದರು. ಅನಾರೋಗ್ಯದಿಂದ ಬಳಲುತ್ತಿದ್ದ ಅವರು ಹೃದಯದ ಶಸ್ತ್ರಚಿಕಿತ್ಸೆ ಮಾಡಿಸಿಕೊಳ್ಳಲು 15 ದಿನದ ಹಿಂದೆ ಜಯದೇವ ಹೃದ್ರೋಗ ಚಿಕಿತ್ಸಾ ಕೇಂದ್ರಕ್ಕೆ ದಾಖಲಾಗಿದ್ದರು. 1988ರಲ್ಲಿ `ಅಪ್ಪಿಕೋ ನನ್ನ' ಎಂಬ ಚಿತ್ರ ನಿರ್ಮಿಸುವ ಪ್ರಯತ್ನಕ್ಕೆ ಕೈಹಾಕಿದ್ದ ಗುಲ್ಜಾರ್ ಖಾನ್ ಅದನ್ನು ಪೂರ್ಣವಾಗಿಸಲಾರದೆ ದುಬೈಗೆ ಹೋಗಿದ್ದರು. ಅಲ್ಲಿಂದ ಮರಳಿದ ಮೇಲೆ ರಿಯಲ್ ಎಸ್ಟೇಟ್ ವ್ಯವಹಾರದಲ್ಲಿ ತೊಡಗಿಸಿಕೊಂಡು ಸಿನಿಮಾ ಪ್ರೀತಿಯನ್ನೂ ಬೆಳೆಸಿಕೊಂಡರು. ಅದರ ಪರಿಣಾಮವಾಗಿ ಸಿದ್ಧಗೊಂಡದ್ದು `ತನಿಖೆ'. ಈ ಚಿತ್ರದ ನಿರ್ಮಾಣ, ನಿರ್ದೇಶನ, ಹಾಡುಗಾರಿಕೆ, ಸಾಹಿತ್ಯ ಹೀಗೆ ಹಲವಾರು ಕ್ಷೇತ್ರಗಳಲ್ಲಿ ಅವರು ಕೈಯಾಡಿಸಿದ್ದರು. ನಂತರ `ಸಾರಥಿ' ಎಂಬ ಚಿತ್ರ ನಿರ್ಮಿಸುವುದು ಅವರ ಕನಸಾಗಿತ್ತು. ಆದರೆ, ಹಾಡುಗಳ ಧ್ವನಿಮುದ್ರಣದ ನಂತರ ಅವರು ಕೊಲೆ ಪ್ರಕರಣವೊಂದರ ಆರೋಪಿಯಾದರು. ಆ ಚಿತ್ರಕ್ಕೆ ಡಾ. ರಾಜ್ ಕುಮಾರ್ ಕೂಡಾ ಒಂದು ಹಾಡು ಹಾಡಿದ್ದರು. 1994ರಲ್ಲಿ ಇಬ್ಬರು ಸಹಚರರೊಂದಿಗೆ ಸೇರಿ ತಿಮ್ಮರಾಜು ಎಂಬ ವ್ಯಕ್ತಿಯನ್ನು ಗುಲ್ಜಾರ್ ಕೊಲೆ ಮಾಡಿದ್ದಾರೆಂದು ಕಾಡುಗೋಡಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿತ್ತು. ಒಂದು ವರ್ಷದ ಹಿಂದೆ ಈ ಪ್ರಕರಣದಲ್ಲಿ ಅವರಿಗೆ ಜೀವಾವಧಿ ಶಿಕ್ಷೆಯಾಗಿತ್ತು. ಈ ಹಿಂದೆ ಸಹ ಒಮ್ಮೆ ಪೆರೋಲ್ ಮೇಲೆ ಹೊರಬಂದು ಚಿಕಿತ್ಸೆ ಪಡೆದಿದ್ದರು.

2007: ಟಾಟಾ ಕನ್ಸಲ್ಟೆನ್ಸಿ ಸರ್ವೀಸಸ್ಸಿನ ಮಾಹಿತಿ ತಂತ್ರಜ್ಞಾನ ಸೇವಾ ಸಂಸ್ಥೆ `ಸಿಎಂಸಿ ಲಿಮಿಟೆಡ್' ನ ಪ್ರಥಮ ಅಧ್ಯಕ್ಷ, ಪದ್ಮಶ್ರೀ ಪ್ರಶಸ್ತಿ ಪುರಸ್ಕೃತ ಪ್ರೊ. ಆರ್. ನರಸಿಂಹನ್ (82) ಈದಿನ ಬೆಂಗಳೂರಿನಲ್ಲಿ ನಿಧನರಾದರು. ಟಾಟಾ ಮೂಲಭೂತ ಸಂಶೋಧನಾ ಕೇಂದ್ರ (ಟಿಐಎಫ್ಆರ್) ಪ್ರಾಧ್ಯಾಪಕರಾಗಿದ್ದ ನರಸಿಂಹನ್, 1990ರಲ್ಲಿ ಸೇವೆಯಿಂದ ನಿವೃತ್ತರಾಗಿದ್ದರು. ಭಾರತದ ಮೊದಲ ಎಲೆಕ್ಟ್ರಾನಿಕ್ ಡಿಜಿಟಲ್ ಕಂಪ್ಯೂಟರ್ `ಟಿಐಎಫ್ ಆರ್ ಎಸಿ'ನ ನಿರ್ಮಾಣ ತಂಡದಲ್ಲೂ ಕಾರ್ಯ ನಿರ್ವಹಿಸಿದ್ದರು. 1976ರಲ್ಲಿ ಪದ್ಮಶ್ರೀ ಪ್ರಶಸ್ತಿ ಪುರಸ್ಕೃತರಾಗಿದ್ದ ನರಸಿಂಹನ್, ಜವಾಹರಲಾಲ್ ನೆಹರು ಫೆಲೋಶಿಪ್, ಹೋಮಿ ಜಹಾಂಗೀರ್ ಭಾಭಾ ಪ್ರಶಸ್ತಿ ಸೇರಿದಂತೆ ಹಲವು ಪುರಸ್ಕಾರಗಳಿಗೆ ಪಾತ್ರರಾಗಿದ್ದರು. ಅವರು ಕಂಪ್ಯೂಟರ್ ಸೊಸೈಟಿ ಆಫ್ ಇಂಡಿಯಾ(ಸಿಎಸ್ಐ)ದ ಮೊದಲ ಅಧ್ಯಕ್ಷರಾಗಿಯೂ ಸೇವೆ ಸಲ್ಲಿಸಿದ್ದರು. ರಾಷ್ಟ್ರೀಯ ವಿಜ್ಞಾನ ಅಕಾಡೆಮಿಯ ಫೆಲೋಶಿಪ್ ಪಡೆದಿದ್ದ ನರಸಿಂಹನ್, ಕೃತಕ ಜ್ಞಾನ ಮತ್ತು ಭಾಷಾ ವಿಜ್ಞಾನದ ವಿಷಯಗಳಲ್ಲಿ ನಾಲ್ಕು ಕೃತಿಗಳನ್ನು ರಚಿಸಿದ್ದರು. ಕ್ಯಾಲಿಫೋರ್ನಿಯಾ ತಾಂತ್ರಿಕ ಶಿಕ್ಷಣ ಸಂಸ್ಥೆಯಲ್ಲಿ ಎಂಜಿನಿಯರಿಂಗ್ ಪದವಿ ಅಧ್ಯಯನ ಮಾಡಿದ್ದ ಅವರು, ಗಣಿತ ವಿಷಯದಲ್ಲಿ ಪಿಎಚ್.ಡಿ ಪದವಿ ಪಡೆದಿದ್ದರು.

2007: ಖ್ಯಾತ ವಿಜ್ಞಾನಿ ಹಾಗೂ ವಿಜ್ಞಾನ ಮತ್ತು ಕೈಗಾರಿಕಾ ಸಂಶೋಧನಾ ಮಂಡಳಿ (ಸಿಎಸ್ ಐಆರ್) ಮಾಜಿ ಪ್ರಧಾನ ನಿರ್ದೇಶಕ ಎ.ಪಿ.ಮಿತ್ರಾ ನವದೆಹಲಿಯಲ್ಲಿ ನಿಧನರಾದರು. ಕಾಸ್ಮಿಕ್ ಕಿರಣ, ವಾತಾವರಣ ಹಾಗೂ ಉಷ್ಣಾಂಶ ಕುರಿತು ಅವರು ನಡೆಸಿದ ಸಂಶೋಧನೆಗಳು ಅಂತಾರಾಷ್ಟ್ರೀಯ ಮಟ್ಟದಲ್ಲಿ ಖ್ಯಾತಿ ಪಡೆದಿದ್ದವು. ಅವರ ಸಂಶೋಧನೆಯನ್ನು ರೇಡಿಯೋ ಪ್ರಸಾರ ಮತ್ತು ದೂರಸಂಪರ್ಕ ಕ್ಷೇತ್ರದಲ್ಲಿ ಬಳಸಿಕೊಳ್ಳಲಾಗಿದೆ. ಪದ್ಮಭೂಷಣ, ಎಸ್. ಎಸ್. ಭಟ್ನಾಗರ್ ಪ್ರಶಸ್ತಿ, ಸಿ.ವಿ.ರಾಮನ್ ಪ್ರಶಸ್ತಿ ಸೇರಿದಂತೆ ಹಲವು ಪ್ರಮುಖ ಪ್ರಶಸ್ತಿಗಳನ್ನು ಅವರು ಪಡೆದಿದ್ದರು.

2007: ಮಂಜೇಶ್ವರದ ಹೊಸಂಗಡಿಯಲ್ಲಿ ಈದಿನ ಕೇರಳ ಮುಖ್ಯಮಂತ್ರಿ ವಿ.ಎಸ್. ಅಚ್ಯುತಾನಂದನ್ ಅವರು ತುಳು ಅಕಾಡೆಮಿಯನ್ನು ಉದ್ಘಾಟಿಸಿದರು. ದಿನೇ ದಿನೇ ಮೂಲ ಬೇರಿನಿಂದ ದೂರ ಸರಿಯುವ ಅಸಹಾಯಕತೆಯಲ್ಲಿರುವ ಮಂಜೇಶ್ವರದ ಬಹುಸಂಖ್ಯಾತ `ತುಳು' ಭಾಷಿಗರ ಸಾಂಸ್ಕೃತಿಕ ಕನಸಿಗೆ `ಅಕಾಡೆಮಿ' ಎಂಬ ಸೌಧ ಕಟ್ಟಿದ ಕೇರಳ ಸರ್ಕಾರ, ತುಳು ಭಾಷಾ ಸಂಸ್ಕೃತಿಯ ಉಳಿವಿಗೆ ಪಣತೊಟ್ಟಿತು. ಆ ಮೂಲಕ ಮಲೆಯಾಳೀಕರಣದ ಪ್ರಭಾವದಿಂದ ಕನ್ನಡ ಮಾಯವಾಗುತ್ತಿರುವ ಈ `ಗಡಿಕನ್ನಡ'ದ ನಾಡಿನಲ್ಲಿ ಮೂಲತಃ ಕನ್ನಡಿಗರೇ ಆಗಿರುವ ತುಳುಭಾಷಿಗರಿಗೆ `ಸರ್ಕಾರಿ ಮಾನ್ಯತೆ' ನೀಡಿ ಪ್ರೋತ್ಸಾಹಿಸುವ ಭರವಸೆ ನೀಡಿತು. ಕೇವಲ ಒಬ್ಬ ಶಾಸಕನ (ಮಂಜೇಶ್ವರ ಶಾಸಕ- ಸಿ.ಎಚ್. ಕುಂಞಂಬು) ಹಠ, ಹೋರಾಟದ ಫಲಶ್ರುತಿಯಾಗಿ 20 ಲಕ್ಷ ರೂ. ಮಂಜೂರಾತಿಯೊಂದಿಗೆ ತುಳು ಅಕಾಡೆಮಿಗೆ ರೂಪು ಬಂದಿತು. ಕಳೆದ ಬಜೆಟ್ ಅಧಿವೇಶನದಲ್ಲಿ ಈ ಶಾಸಕ ಮುಂದಿಟ್ಟ ಬೇಡಿಕೆಗೆ ಎಡರಂಗ ಸರ್ಕಾರ ಹಸಿರು ನಿಶಾನೆ ತೋರಿತು. ಅಷ್ಟೇ ಅಲ್ಲ, ಅಕಾಡೆಮಿ ರಚನೆಯನ್ನು ಘೋಷಿಸಿ, ವರ್ಷ ಪೂರ್ತಿಯಾಗುವ ಮೊದಲೇ ಅಧಿಕೃತವಾಗಿ ಚಾಲನೆಯನ್ನೂ ನೀಡಿತು. ತುಳು ಭಾಷೆ, ಸಂಸ್ಕೃತಿಯನ್ನು ಉಳಿಸಿ, ಬೆಳೆಸಿ ಪ್ರೋತ್ಸಾಹಿಸುವುದು ಅಕಾಡೆಮಿಯ ಕಾರ್ಯತಂತ್ರ. ಈ ನಿಟ್ಟಿನಲ್ಲಿ ಅಗತ್ಯವಿರುವ ಎಲ್ಲರೀತಿಯ ಸಹಕಾರವನ್ನು ಸರ್ಕಾರ ನೀಡಲಿದೆ ಎನ್ನುವುದು ಅಚ್ಯುತಾನಂದನ್ ಅವರ ಗಟ್ಟಿ ಮಾತು. ತುಳು ಭಾಷೆಯ ಸಾಹಿತ್ಯ ಕೃತಿಗಳು ಈಗ ಕನ್ನಡ ಲಿಪಿಯಲ್ಲಿ ಲಭ್ಯವಿವೆ. ಆದರೆ ತುಳು ಭಾಷೆಗೂ ಈಗ ಲಿಪಿ ಪತ್ತೆಯಾಗಿದೆ. ಹೀಗಾಗಿ ತುಳು ಲಿಪಿಯನ್ನು ಜನಪ್ರಿಯಗೊಳಿಸುವ ಕೆಲಸವಾಗಬೇಕು. ತುಳು ಸಾಹಿತ್ಯದ ಪ್ರಧಾನ ಕೃತಿಗಳು ತುಳು ಲಿಪಿಯಲ್ಲೇ ಮರುಮುದ್ರಣಗೊಳ್ಳಬೇಕು. ಅಲ್ಪಸಂಖ್ಯಾತರ ಭಾಷೆ ಎಂಬ ಕಾರಣಕ್ಕೆ ತುಳು ಭಾಷೆಯನ್ನು ಶಾಲೆಗಳಲ್ಲಿ ಕಲಿಸುವ ಬಗ್ಗೆ ಚಿಂತನೆ ನಡೆಯಬೇಕು. ಈ ಹಿನ್ನೆಲೆಯಲ್ಲಿ ಕಳೆದ 10 ವರ್ಷಗಳಿಂದ ಅಸ್ತಿತ್ವದಲ್ಲಿರುವ ಕರ್ನಾಟಕ ತುಳು ಅಕಾಡೆಮಿಯ ಜತೆ ಸೇರಿ ಕೇರಳ ತುಳು ಅಕಾಡೆಮಿ ಕಾರ್ಯಕ್ರಮ ರೂಪಿಸಲಿದೆ ಎಂದು ಅವರು ಹೇಳಿದರು. ಕೇರಳದ ಶಿಕ್ಷಣ ಮತ್ತು ಸಾಂಸ್ಕೃತಿಕ ಸಚಿವ ಎಂ.ಎ. ಬೇಬಿ ಅಧ್ಯಕ್ಷತೆ ವಹಿಸಿದ್ದರು.. ಕೇಂದ್ರ ಆಡಳಿತ ಸುಧಾರಣಾ ಆಯೋಗದ ಅಧ್ಯಕ್ಷ ಎಂ. ವೀರಪ್ಪ ಮೊಯಿಲಿ, ದ.ಕ.ಜಿಲ್ಲಾ ಉಸ್ತುವಾರಿ ಸಚಿವ ಬಿ. ನಾಗರಾಜ ಶೆಟ್ಟಿ, ಕಾಸರಗೋಡು ಸಂಸದ ಪಿ.ಕರುಣಾಕರನ್ ಹಾಜರಿದ್ದರು.

2006: ಎರಡು ಬಾರಿ ಒಲಿಂಪಿಕ್ ಡೆಕಾತ್ಲಾನ್ ಚಾಂಪಿಯನ್ ಆಗಿದ್ದ ಅಮೆರಿಕದ ಬಾಬ್ ಮಥಾಯಿಸ್ (75) ಕ್ಯಾಲಿಫೋರ್ನಿಯಾದಲ್ಲಿ ನಿಧನರಾದರು. 1948ರ ಲಂಡನ್ ಒಲಿಂಪಿಕ್ಸಿನಲ್ಲಿ ಮಥಾಯಿಸ್ ತಮ್ಮ ಮೊದಲ ಚಿನ್ನ ಗೆದ್ದಿದ್ದರು. 17ನೇ ವಯಸ್ಸಿನಲ್ಲಿ ಈ ಸಾಧನೆ ಮಾಡುವ ಮೂಲಕ ಎಲ್ಲರ ಹುಬ್ಬೇರಿಸಿದ್ದರು. 1952ರ ಹೆಲ್ಸಿಂಕಿ ಒಲಿಂಪಿಕ್ಸಿನಲ್ಲೂ ಮಥಾಯಿಸ್ ಡೆಕಾತ್ಲಾನ್ ಸ್ವರ್ಣವನ್ನು ತಮ್ಮ ಮಡಿಲಿಗೆ ಹಾಕಿಕೊಂಡಿದ್ದರು.

2006: ನ್ಯೂಯಾರ್ಕಿನಲ್ಲಿ ನಡೆದ ಅಮೆರಿಕ ಓಪನ್ ಟೆನಿಸ್ ಚಾಂಪಿಯನ್ ಶಿಪ್ ನ ಪುರುಷರ ಸಿಂಗಲ್ಸಿನ ಮೂರನೇ ಸುತ್ತಿನ ಪಂದ್ಯದದಲ್ಲಿ ಜರ್ಮನಿಯ ಬೆಂಜಮಿನ್ ಬೆಕ್ಕರ್ ಎದುರಿನಲ್ಲಿ ಪರಾಭವ ಅನುಭವಿಸುವುದರೊಂದಿಗೆ ಅಮೆರಿಕದ ಅಪ್ರತಿಮ ಟೆನಿಸ್ ಆಟಗಾರ ಆ್ಯಂಡ್ರೆ ಅಗಾಸ್ಸಿ ಟೆನಿಸ್ ರಂಗಕ್ಕೆ ವಿದಾಯ ಹೇಳಿದರು.

2006: ಅಮೆರಿಕದ ಬಾಲ್ಟಿಮೋರ್ಸಿನಲ್ಲಿ ನಡೆದ ನಾಲ್ಕನೇ ಅಕ್ಕ ವಿಶ್ವ ಕನ್ನಡ ಸಮ್ಮೇಳನಕ್ಕೆ ತೆರೆಬಿತ್ತು.

2006: ಎಐಸಿಸಿ ಅಧ್ಯಕ್ಷೆ ಸೋನಿಯಾಗಾಂಧಿ ಸಮ್ಮುಖದಲ್ಲಿ ಬೆಂಗಳೂರಿನಲ್ಲಿ ನಡೆದ ಬೃಹತ್ ಸಮಾವೇಶದಲ್ಲಿ ಮಾಜಿ ಉಪ ಮುಖ್ಯಮವಂತ್ರಿ ಸಿದ್ದರಾಮಯ್ಯ ನೇತೃತ್ವದ ಅಖಿಲ ಭಾರತ ಪ್ರಗತಿಪರ ಜನತಾದಳವು ಕಾಂಗ್ರೆಸ್ ಪಕ್ಷದಲ್ಲಿ ವಿಧ್ಯುಕ್ತವಾಗಿ ವಿಲೀನಗೊಂಡಿತು.

2006: ವೋಲ್ಕರ್ ಸಮಿತಿ ಬಹಿರಂಗಪಡಿಸಿದ ಇರಾಕಿನ ಆಹಾರಕ್ಕಾಗಿ ತೈಲ ಹಗರಣ ಕುರಿತು ತನಿಖೆ ಆರಂಭಿಸಿದ 10 ತಿಂಗಳ ಬಳಿಕ ಕೊನೆಗೂ ಜಾರಿ ನಿರ್ದೇಶನಾಲವವು ಮಾಜಿ ವಿದೇಶಾಂಗ ಸಚಿವ ಕೆ. ನಟವರ್ ಸಿಂಗ್, ಪುತ್ರ ಜಗತ್ ಮತ್ತಿತರರಿಗೆ ನೋಟಿಸ್ ಜಾರಿ ಮಾಡಿತು.

1994: ಇಪ್ಪತ್ತೊಂದು ಸರ್ಕಾರಿ ಸ್ವಾಮ್ಯದ ಉದ್ದಿಮೆಗಳಿಂದ ಬಂಡವಾಳ ಹಿಂತೆಗೆಯಲು ಕೇಂದ್ರ ಸರ್ಕಾರದ ನಿರ್ಧಾರ.

1976: ಅಮೆರಿಕದ ಪ್ರಪ್ರಥಮ ಮಾನವ ರಹಿತ ಬಾಹ್ಯಾಕಾಶ ನೌಕೆ ವೈಕಿಂಗ್ 2 ಮಂಗಳ ಗ್ರಹದಲ್ಲಿ ಇಳಿಯಿತು. ಭೂಮಿಯಿಂದ ಹೊರಟು ಹೆಚ್ಚು ಕಡಿಮೆ ಒಂದು ವರ್ಷ ಕಾಲ ಪ್ರಯಾಣ ನಡೆಸಿದ ಬಳಿಕ ಮಂಗಳ ಗ್ರಹ ತಲುಪಿದ ಈ ಬಾಹ್ಯಾಕಾಶ ನೌಕೆ ಮೊತ್ತ ಮೊದಲ ಬಾರಿಗೆ ಈ ಗ್ರಹದ ಸಮೀಪದಿಂದ ವರ್ಣ ಛಾಯಾಚಿತ್ರಗಳನ್ನು ತೆಗೆದು ಭೂಮಿಗೆ ಕಳುಹಿಸಿತು. ಗ್ರಹದ ಮೇಲಿನ ವಾತಾವರಣ, ಮೇಲ್ಮೈ ಬಗೆಗಿನ ವಿವರಗಳನ್ನೂ ಸಂಗ್ರಹಿಸಿತು.

1967: ರಸ್ತೆಯ ಬಲಬದಿಯಲ್ಲಿ ವಾಹನ ಚಲಿಸಲು ಸ್ವೀಡನ್ನಿನಲ್ಲಿ ಒಪ್ಪಿಗೆ.

1947: ಸಾಹಿತಿ ಎನ್.ಎಸ್. ತಿಮ್ಮೇಗೌಡ ಜನನ.

1939: ಬ್ರಿಟನ್, ಆಸ್ಟ್ರೇಲಿಯ, ನ್ಯೂಜಿಲ್ಯಾಂಡ್ ಮತ್ತು ಫ್ರಾನ್ಸ್ ಜರ್ಮನಿಯ ವಿರುದ್ಧ ಸಮರ ಘೋಷಣೆ ಮಾಡಿದವು. ಅದೇ ದಿನ ಮಹಿಳೆಯರು ಮತ್ತು ಮಕ್ಕಳನ್ನು ಅಮೆರಿಕಕ್ಕೆ ಒಯ್ಯುತ್ತಿದ್ದ ಅಥೇನಿಯಾ ನೌಕೆಯನ್ನು ಯು-ಬೋಟ್ ಮೂಲಕ ನೀರೊಳಗಿಂದ ಬಾಂಬ್ ಸ್ಫೋಟಿಸಿ ಮುಳುಗಿಸಲಾಯಿತು. ನೌಕೆಯಲ್ಲಿದ್ದ 112 ಜನ ಮೃತರಾದರು.

1929: ಸಾಹಿತಿ ಗೋಪಾಲಕೃಷ್ಣ ಪಿ. ನಾಯಕ್ ಜನನ.

1899: ಸಾಹಿತಿ ಹಾಗೂ ತತ್ವಶಾಸ್ತ್ರದ ಪ್ರಖ್ಯಾತ ಪ್ರಾಧ್ಯಾಪಕರಾಗಿದ್ದ ಯಮುನಾಚಾರ್ಯ (3-9-1899ರಿಂದ 4-1-1970) ಅವರು ನಾರಾಯಣ ಅಯ್ಯಂಗಾರ್- ಮಾಣಿಕ್ಕಮ್ಮ ದಂಪತಿಯ ಮಗನಾಗಿ ಮೈಸೂರಿನಲ್ಲಿ ಜನಿಸಿದರು. ತತ್ವಶಾಸ್ತ್ರಕ್ಕೆ ಸಂಬಂಧಪಟ್ಟಂತೆ ಹಲವಾರು ಕೃತಿಗಳನ್ನು ರಚಿಸಿದ ಯಮುನಾಚಾರ್ಯ ಅವರು ತಮ್ಮ ಸಂಪಾದಕತ್ವದಲ್ಲಿ ಪ್ರಕಟಿಸಿದ 20 ಸಂಪುಟಗಳ ಗಾಂಧಿ ಸಾಹಿತ್ಯವು ಸಾಹಿತ್ಯ ಕ್ಷೇತ್ರಕ್ಕೆ ಬಹುದೊಡ್ಡ ಕೊಡುಗೆ. ದೆಹಲಿಯ ಗಾಂಧಿ ಪೀಸ್ ಪೌಂಡೇಷನ್ ಅಧ್ಯಕ್ಷರಾಗಿಯೂ ಹಲವಾರು ವರ್ಷಗಳ ಸೇವೆ ಸಲ್ಲಿಸಿದ್ದರು.

1783: ಸ್ವತಂತ್ರ ಅಮೆರಿಕದ ಜನ್ಮದಿನವಿದು. ಅಮೆರಿಕ ಮತ್ತು ಗ್ರೇಟ್ ಬ್ರಿಟನ್ ನಡುವಣ `ಪ್ಯಾರಿಸ್ ಒಪ್ಪಂದ'ವು (ಟ್ರೀಟಿ ಆಫ್ ಪ್ಯಾರಿಸ್) ಕ್ರಾಂತಿಕಾರಿ ಯುದ್ಧಕ್ಕೆ ಮಂಗಳ ಹಾಡಿ ಅಮೆರಿಕವನ್ನು ಸ್ವತಂತ್ರ ರಾಷ್ಟ್ರವನ್ನಾಗಿ ಸ್ಥಾಪನೆ ಮಾಡಿತು. ಬೆಂಜಮಿನ್ ಫ್ರಾಂಕ್ಲಿನ್, ಜಾನ್ ಆಡಮ್ಸ್ ಮತ್ತು ಜಾನ್ ಜೇ ಅವರು ಮಾತುಕತೆಯಲ್ಲಿ ಅಮೆರಿಕನ್ನರನ್ನು ಪ್ರತಿನಿಧಿಸಿದ್ದರು.

1658: ಇಂಗ್ಲೆಂಡಿನ ಲಾರ್ಡ್ ಪ್ರೊಟೆಕ್ಟರ್ ಒಲಿವರ್ ಕ್ರಾಮ್ ವೆಲ್ ಲಂಡನ್ನಿನ ವೈಟ್ ಹಾಲಿನಲ್ಲಿ ಮೃತರಾದರು. ಅವರ ಪುತ್ರ ರಿಚರ್ಡ್ ಇಂಗ್ಲೆಂಡಿನ ನೂತನ ಪ್ರೊಟೆಕ್ಟರ್ ಆದರು.

Saturday, September 5, 2009

ಇಂದಿನ ಇತಿಹಾಸ History Today ಸೆಪ್ಟೆಂಬರ್ 02

ಇಂದಿನ ಇತಿಹಾಸ

ಸೆಪ್ಟೆಂಬರ್ 02

ಮಾಜಿ ಪ್ರಧಾನಿಗಳಾದ ಇಂದಿರಾ ಗಾಂಧಿ, ಮೊರಾರ್ಜಿ ದೇಸಾಯಿ ಮತ್ತು ರಾಜೀವ್ ಗಾಂಧಿ ಅವರಿಗೆ ಮಾಧ್ಯಮ ಸಲಹೆಗಾರರಾಗಿದ್ದ ಹಾಗೂ ಇಂದಿರಾ ಗಾಂಧಿ ಅವರ ಅತ್ಯಂತ ಆಪ್ತರಲ್ಲಿ ಒಬ್ಬರಾಗಿದ್ದ ಮೈಸೂರಿನ ಎಚ್. ವೈ. ಶಾರದಾ ಪ್ರಸಾದ್ (84) ನವದೆಹಲಿಯಲ್ಲಿ ನಿಧನರಾದರು. ಶಾರದಾ ಪ್ರಸಾದ್ ಅವರು ಇಂದಿರಾ ಗಾಂಧಿ ಅವರು ಅಧಿಕಾರದಲ್ಲಿ ಇದ್ದ ಅವಧಿಯುದ್ದಕ್ಕೂ (15 ವರ್ಷ) ಮಾಧ್ಯಮ ಸಲಹೆಗಾರರಾಗಿದ್ದುದು ಮಾತ್ರವಲ್ಲದೆ ಅವರಿಗೆ ಭಾಷಣ ಬರೆದುಕೊಡುವವರೂ ಆಗಿದ್ದರು. ಜೊತೆಗೆ ಇಂದಿರಾ ಅವರ ಅತ್ಯಂತ ನಿಕಟ ರಾಜಕೀಯ ವಿಶ್ವಾಸಪಾತ್ರರಲ್ಲಿ ಒಬ್ಬರಾಗಿದ್ದರು.

2008: ಮಾಜಿ ಪ್ರಧಾನಿಗಳಾದ ಇಂದಿರಾ ಗಾಂಧಿ, ಮೊರಾರ್ಜಿ ದೇಸಾಯಿ ಮತ್ತು ರಾಜೀವ್ ಗಾಂಧಿ ಅವರಿಗೆ ಮಾಧ್ಯಮ ಸಲಹೆಗಾರರಾಗಿದ್ದ ಹಾಗೂ ಇಂದಿರಾ ಗಾಂಧಿ ಅವರ ಅತ್ಯಂತ ಆಪ್ತರಲ್ಲಿ ಒಬ್ಬರಾಗಿದ್ದ ಮೈಸೂರಿನ ಎಚ್. ವೈ. ಶಾರದಾ ಪ್ರಸಾದ್ (84) ನವದೆಹಲಿಯಲ್ಲಿ ನಿಧನರಾದರು. ಶಾರದಾ ಪ್ರಸಾದ್ ಅವರು ಇಂದಿರಾ ಗಾಂಧಿ ಅವರು ಅಧಿಕಾರದಲ್ಲಿ ಇದ್ದ ಅವಧಿಯುದ್ದಕ್ಕೂ (15 ವರ್ಷ) ಮಾಧ್ಯಮ ಸಲಹೆಗಾರರಾಗಿದ್ದುದು ಮಾತ್ರವಲ್ಲದೆ ಅವರಿಗೆ ಭಾಷಣ ಬರೆದುಕೊಡುವವರೂ ಆಗಿದ್ದರು. ಜೊತೆಗೆ ಇಂದಿರಾ ಅವರ ಅತ್ಯಂತ ನಿಕಟ ರಾಜಕೀಯ ವಿಶ್ವಾಸಪಾತ್ರರಲ್ಲಿ ಒಬ್ಬರಾಗಿದ್ದರು. ಅವರಿಗೆ 2000ದಲ್ಲಿ ಪದ್ಮಭೂಷಣ ಮತ್ತು
2001ರಲ್ಲಿ ಇಂದಿರಾ ಗಾಂಧಿ ರಾಷ್ಟ್ರೀಯ ಏಕತಾ ಪ್ರಶಸ್ತಿ ನೀಡಿ ಸನ್ಮಾನಿಸಲಾಗಿತ್ತು.

2007: ಭಾರತದ ಅತ್ಯಾಧುನಿಕ `ಇನ್ಸಾಟ್- 4ಸಿಆರ್' ಸಂಪರ್ಕ ಉಪಗ್ರಹವನ್ನು ಹೊತ್ತ `ಜಿಎಸ್ಎಲ್ವಿ- ಎಫ್04' ಉಡಾವಣಾ ನೌಕೆ ನಿಗದಿತ ಸಮಯಕ್ಕಿಂತ ಎರಡು ತಾಸು ವಿಳಂಬದ ನಂತರ ಸಂಜೆ 6.21ಕ್ಕೆ ಶ್ರೀಹರಿಕೋಟದ ಸತೀಶ್ ಧವನ್ ಬಾಹ್ಯಾಕಾಶ ಕೇಂದ್ರದಿಂದ ನಭಕ್ಕೆ ಚಿಮ್ಮಿತು. ದಟ್ಟ ಹೊಗೆಯ ಮೋಡವನ್ನು ಉಗುಳಿ ಆಕಾಶಕ್ಕೆ ನೆಗೆದ 49 ಮೀಟರ್ ಉದ್ದದ ನೌಕೆ ಉಡಾವಣೆಗೊಂಡ 16 ನಿಮಿಷ 40 ಸೆಕೆಂಡುಗಳ ನಂತರ ಈ ಮೊದಲೇ ನಿಗದಿಪಡಿಸಲಾದ 248 ಕಿ.ಮೀ. ಎತ್ತರದಲ್ಲಿನ ಭೂ ಸಮಾನಾಂತರ ಕಕ್ಷೆಗೆ ಉಪಗ್ರಹವನ್ನು ಕೂರಿಸಿತು. 2130 ಕೆಜಿ ತೂಕದ ಇನ್ಸಾಟ್ ಉಪಗ್ರಹದಲ್ಲಿ 12 ಶಕ್ತಿಯುತ ಕ್ಯು-ಬ್ಯಾಂಡ್ ಟ್ರಾನ್ಸ್ಪಾಂಡರುಗಳಿದ್ದು ಇವು ಡಿಟಿಎಚ್ ಸೇವೆ, ವಿಡಿಯೋ ಚಿತ್ರಗಳ ರವಾನೆ ಹಾಗೂ ಡಿಜಿಟಲ್ ಸುದ್ದಿ ಸಂಗ್ರಹಕ್ಕೆ ನೆರವಾಗುವುವು. ಇದರ ಆಯಸ್ಸು 10 ವರ್ಷ. ಇದು ಕಳೆದ 9 ತಿಂಗಳಲ್ಲಿ ಯಶಸ್ವಿಯಾಗಿ ಉಡಾವಣೆಗೊಂಡ ಮೂರನೇ ಉಪಗ್ರಹ. 2006ರ ಡಿಸೆಂಬರ್ 22ರಂದು ಇನ್ಸಾಟ್-4ಎ ಹಾಗೂ 2007ರ ಮಾರ್ಚ್ 12ರಂದು ಇನ್ಸಾಟ್-4ಬಿ ಯನ್ನು ಯಶಸ್ವಿಯಾಗಿ ಹಾರಿಸಲಾಗಿತ್ತು. ಜಿಎಸ್ಎಲ್ವಿ-ಎಫ್ 04 ಈ ಸರಣಿಯಲ್ಲಿ ಐದನೇ ಉಡಾವಣಾ ನೌಕೆ. 2006ರ ಜುಲೈ 10ರಂದು ಕೈಗೊಂಡ ಉಡಾವಣೆ ವಿಫಲವಾಗಿ 56 ಸೆಕೆಂದುಗಳಲ್ಲೇ ಅದು ಹೊತ್ತೊಯ್ದಿದ್ದ ಇನ್ಸಾಟ್-4 ಸಿ ಉಪಗ್ರಹ ಸ್ಫೋಟಗೊಂಡು ಕಡಲ ಪಾಲಾಗಿತ್ತು.

2007: ಕ್ಷಿಪ್ರ ರಾಜಕೀಯ ಬೆಳವಣಿಗೆಯಲ್ಲಿ ಮಾಜಿ ಸಚಿವರೂ ಆದ ಶಾಸಕ ಮೆರಾಜುದ್ದೀನ್ ಪಟೇಲ್ ಅವರನ್ನು ಜೆಡಿ (ಎಸ್) ರಾಜ್ಯ ಘಟಕದ ನೂತನ ಅಧ್ಯಕ್ಷರನ್ನಾಗಿ ದಿಢೀರ್ ನೇಮಕ ಮಾಡಲಾಯಿತು. ಬೆಂಗಳೂರಿನಲ್ಲಿ ಜೆಡಿ (ಎಸ್) ಕಚೇರಿಯಲ್ಲಿ ನಡೆದ ಅಲ್ಪಸಂಖ್ಯಾತರ ಸಮಾವೇಶ ಉದ್ಘಾಟಿಸಿದ ಬಳಿಕ ರಾಷ್ಟ್ರೀಯ ಅಧ್ಯಕ್ಷ ಎಚ್.ಡಿ. ದೇವೇಗೌಡ ಈ ವಿಷಯ ಪ್ರಕಟಿಸಿದರು.

2007: ಕೀನ್ಯಾದ ಅಲ್ ಫ್ರೆಡ್ ಕಿರ್ವಾ ಯೆಗೊ ಅವರಿಗೆ ಈದಿನ ಸದಾ ನೆನಪಿಸಿಕೊಳ್ಳುವ ದಿನ. ಒಸಾಕಾದಲ್ಲಿ ನಡೆದ 11ನೇ ವಿಶ್ವ ಅಥ್ಲೆಟಿಕ್ಸ್ ಚಾಂಪಿಯನ್ ಶಿಪ್ ನ 800 ಮೀಟರ್ ಓಟದಲ್ಲಿ ಅವರು ಬಂಗಾರದ ಪದಕ ಗೆದ್ದರು. ಕೂದಲೆಳೆ ಅಂತರದಲ್ಲಿ ಅಲ್ ಫ್ರೆಡ್ ಈ ಸಾಧನೆ ಮಾಡಿದರು. ಕೆನಡಾದ ಗ್ಯಾರಿ ರೀಡ್ ಮೊದಲ ಸ್ಥಾನ ಪಡೆದ ಕೀನ್ಯಾದ ಸ್ಪರ್ಧಿಗೆ ತೀವ್ರ ಪೈಪೋಟಿ ನೀಡಿದರು.

2007: ಡೆಹರಾಡೂನ್ (ಯುಎನ್ಐ): ಉತ್ತರಖಂಡ ಮುಖ್ಯಮಂತ್ರಿ ಮತ್ತು ಬಿಜೆಪಿ ಅಭ್ಯರ್ಥಿ ಮೇಜರ್ ಜನರಲ್ (ನಿವೃತ್ತ) ಭುವನಚಂದ್ರ ಖಂಡೂರಿ ಅವರು ಧುಮಕೊಟ್ ವಿಧಾನಸಭೆ ಉಪಚುನಾವಣೆಯಲ್ಲಿ ಜಯಗಳಿಸಿದರು. ಕಾಂಗ್ರೆಸ್ ಅಭ್ಯರ್ಥಿ ಸುರೇಂದ್ರ ಸಿಂಗ್ ನೇಗಿ ಅವರನ್ನು ಖಂಡೂರಿ 14,171 ಮತಗಳ ಅಂತರದಲ್ಲಿ ಸೋಲಿಸಿದರು. ಈ ವಿಜಯದೊಂದಿಗೆ ರಾಜ್ಯ ವಿಧಾನಸಭೆಯಲ್ಲಿ ಬಿಜೆಪಿಗೆ ನಿಚ್ಚಳ ಬಹುಮತ ದೊರೆತಂತಾಯಿತು.

2007: ಅಂಗವಿಕಲರು ಮತ್ತು ಮಹಿಳೆಯರನ್ನು ಜಾತಿ ಆಧಾರಿತ ಮೀಸಲಾತಿ ಅಡಿ ತರುವಂತಿಲ್ಲ ಎಂದು ಭಾರತದ ಸುಪ್ರೀಂ ಕೋರ್ಟ್ ತೀರ್ಪು ನೀಡಿತು. ಆದರೆ ಮಹಿಳೆಯರು, ಅಂಗವಿಕಲರು, ಅಂಧರು ಮತ್ತಿತರ ವಿಶೇಷ ವರ್ಗಗಳಿಗೆ ಮೀಸಲು ಸೌಲಭ್ಯ ಕಲ್ಪಿಸುವುದಕ್ಕಾಗಿ ಶೇ 50ರ ಗರಿಷ್ಠ ಮಿತಿಯನ್ನೂ ಮೀರಬಹುದು ಎಂದು ಅದು ಹೇಳಿತು. 1992ರ ಮಂಡಲ್ ಆಯೋಗ ಪ್ರಕರಣದಲ್ಲಿ (ಇಂದಿರಾ ಸಾಹ್ನಿ ಪ್ರಕರಣ), ಯಾವುದೇ ಸಂದರ್ಭದಲ್ಲಿಯೂ ಮೀಸಲಾತಿ ಪ್ರಮಾಣ ಶೇ 50ನ್ನು ಮೀರಬಾರದು ಎಂದು ಕೋರ್ಟ್ ನಿರ್ಬಂಧ ಹೇರಿತ್ತು. ಆದರೆ ಈಗ ಅದನ್ನು ಸಡಿಲಿಸಿದಂತಾಯಿತು.

2007: `ಜೆಡಿಎಸ್ ಜತೆ ಸಮ್ಮಿಶ್ರ ಸರ್ಕಾರ ಮುಂದುವರಿಸುವುದಕ್ಕಿಂತ ವಿಧಾನಸಭೆಗೆ ಮಧ್ಯಂತರ ಚುನಾವಣೆ ನಡೆಸುವುದೇ ಒಳ್ಳೆಯದು' ಎಂದು ರಾಷ್ಟ್ರೀಯ ಸ್ವಯಂಸೇವಕ ಸಂಘದ (ಆರೆಸ್ಸೆಸ್) ಸಭೆ ಮೈಸೂರಿನಲ್ಲಿ ಅಭಿಪ್ರಾಯಪಡುವ ಮೂಲಕ ತನ್ನ ರಾಜಕೀಯ ದಾಳವನ್ನು ಉರುಳಿಸಿತು.

2006: ಸತ್ಯಾಗ್ರಹ ಶತಮಾನೋತ್ಸವದ ಅಂಗವಾಗಿ ಏರ್ಪಡಿಸಲಾದ `ಸತ್ಯಾಗ್ರಹ ಶತಮಾನೋತ್ಸವ ಪ್ರದರ್ಶವನ್ನು ರಾಷ್ಟ್ರಪತಿ ಎ.ಪಿ.ಜೆ. ಅಬ್ದುಲ್ ಕಲಾಂ ಉದ್ಘಾಟಿಸಿದರು.

2006: ಮಾಹಿತಿ ತಂತ್ರಜ್ಞಾನ ಕುರಿತ ವಿಶೇಷ ಚಿಂತನಾ ತಂಡದ ಅಧ್ಯಕ್ಷರಾಗುವಂತೆ ರಾಜ್ಯ ಸರ್ಕಾರ ನೀಡಿದ್ದ ಆಹ್ವಾನವನ್ನು ಇನ್ಫೋಸಿಸ್ ಮುಖ್ಯಸ್ಥ ಎನ್. ಆರ್. ನಾರಾಯಣಮೂರ್ತಿ ಒಪ್ಪಿಕೊಂಡರು. ದೇವನಹಳ್ಳಿ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ಸಂಸ್ಥೆ (ಬಿಐಎಎಲ್) ಅಧ್ಯಕ್ಷರಾಗಿ ಸೇವೆ ಸಲ್ಲಿಸಿದ್ದ ನಾರಾಯಣಮೂರ್ತಿ ಧರ್ಮಸಿಂಗ್ ಸರ್ಕಾರದ ಅವದಿಯಲ್ಲಿ ಮಾಜಿ ಪ್ರಧಾನಿ ಎಚ್. ಡಿ. ದೇವೇಗೌಡರೊಂದಿಗೆ ಮುನಿಸಿಕೊಂಡು ಬಿಐಎಎಲ್ ಅಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ ನೀಡಿದ್ದರು.

2006: ಕೇಂದ್ರ ಸರ್ಕಾರಿ ನೌಕರರ ವೇತನ ಮತ್ತು ಭತ್ಯೆಗಳನ್ನು ಪರಿಸ್ಕರಿಸಲಿರುವ 6ನೇ ವೇತನ ಆಯೋಗದ ಅಧ್ಯಕ್ಷರಾಗಿ ಮೂಲತಃ ಕರ್ನಾಟಕದವರಾದ ಸುಪ್ರೀಂ ಕೋರ್ಟಿನ ಮಾಜಿ ನ್ಯಾಯಮೂರ್ತಿ ಬಿ.ಎನ್. ಶ್ರೀಕೃಷ್ಣ ಅವರನ್ನು ನೇಮಿಸಲಾಯಿತು. ಐಐಎಂ ಪ್ರಾಚಾರ್ಯ ರವೀಂದ್ರ ಧೋಲಾಕಿಯ, ಮಾಜಿ ಹೆಚ್ಚುವರಿ ಕಾರ್ಯದರ್ಶಿ (ಬಜೆಟ್) ಜೆ.ಎಸ್. ಮಾಹುರ್ ಮತ್ತು ವೆಚ್ಚ ಸುಧಾರಣೆ ಆಯೋಗದ ಎಸ್. ನಾಥ್ ಆಯೋಗದ ಇತರ ಸದಸ್ಯರಾಗಿ ನೇಮಕಗೊಂಡರು.

2006: ಭಾರತೀಯ ನೌಕಾಪಡೆಯ ಮುಖ್ಯಸ್ಥರಾಗಿ ವೈಸ್ ಅಡ್ಮಿರಲ್ ಸುರೇಶ ಮೆಹ್ತಾ ಅವರು ಅಡ್ಮಿರಲ್ ಅರುಣ್ ಪ್ರಕಾಶ್ ಸ್ಥಾನಕ್ಕೆ ನೇಮಕಗೊಂಡರು.

2006: ಖಂಡಾಂತರ ಕ್ಷಿಪಣಿಗಳನ್ನು ಮಾರ್ಗ ಮಧ್ಯದಲ್ಲೇ ಹೊಡೆದು ಉರುಳಿಸುವ ಪ್ರಯೋಗ ಯಶಸ್ವಿಯಾಗಿದೆ ಎಂದು ಅಮೆರಿಕ ಪ್ರಕಟಿಸಿತು. ಅಲಾಸ್ಕಾದ ಕೊಡಿಯಾಕಿನಿಂದ ಗುರಿಯತ್ತ ಹಾರಿಬಿಡಲಾದ ದೂರಗಾಮೀ ಖಂಡಾಂತರ ಕ್ಷಿಪಣಿ ಮಾದರಿಯನ್ನು ಕ್ಯಾಲಿಫೋರ್ನಿಯಾದಿಂದ ಉಡಾಯಿಸಲಾದ ಸಾಧನವು ಕರಾರುವಾಕ್ಕಾಗಿ ಹೊಡೆದು ಉರುಳಿಸಿತು ಎಂದು ಅಮೆರಿಕದ ಕ್ಷಿಪಣಿ ರಕ್ಷಣಾ ಸಂಸ್ಥೆಯ ಮೂಲಗಳು ಪ್ರಕಟಿಸಿದವು.

2001: ಡಾ. ಕ್ರಿಸ್ಟಿಯನ್ ಬರ್ನಾರ್ಡ್ ಅವರು ಸೈಪ್ರಸ್ಸಿನಲ್ಲಿ ರಜಾದಿನಗಳನ್ನು ಕಳೆಯುತ್ತಿದ್ದಾಗ ತಮ್ಮ 78ನೇ ವಯಸ್ಸಿನಲ್ಲಿ ಅಸ್ತಮಾ ಕಾಯಿಲೆಯಿಂದಾಗಿ ನಿಧನರಾದರು. ಮೊತ್ತ ಮೊದಲ `ಹೃದಯ ಕಸಿ' ಶಸ್ತ್ರಚಿಕಿತ್ಸೆ ನಡೆಸುವ ಮೂಲಕ ಅವರು ಖ್ಯಾತಿ ಪಡೆದಿದ್ದರು.

1999: ಭಾರತೀಯ ಈಜುಗಾರ್ತಿ ಬುಲಾ ಚೌಧುರಿ ಅವರು ಇಂಗ್ಲಿಷ್ ಕಡಲ್ಗಾಲುವೆಯನ್ನು ಎರಡು ಬಾರಿ ಈಜಿದ ಮೊದಲ ಏಷ್ಯನ್ ಮಹಿಳೆ ಎಂಬ ಕೀರ್ತಿಗೆ ಭಾಜನರಾದರು.

1984: ಪಂಜಾಬಿನ ಅಮೃತಸರದ ಸರ್ಣಮಂದಿರದಲ್ಲಿ ಸರ್ಕಾರಿ ಪಡೆಗಳು ಬೀಡು ಬಿಟ್ಟ್ದದ್ದನ್ನು ಪ್ರತಿಭಟಿಸಿ ಸಹಸ್ರಾರು ಸಿಖ್ಖರು ಮಂದಿರದ ಬಳಿ ಬೃಹತ್ ರ್ಯಾಲಿ ನಡೆಸಿದರು.

1946: ಅವಿಭಜಿತ ಭಾರತದ ಮಧ್ಯಂತರ ಸರ್ಕಾರದ ಪ್ರಧಾನ ಮಂತ್ರಿಯಾಗಿ ಜವಾಹರಲಾಲ್ ನೆಹರೂ ಅಧಿಕಾರ ಸ್ವೀಕಾರ.

1945: ಯುಎಸ್ಎಸ್ ಮಿಸ್ಸೌರಿ ನೌಕೆಯಲ್ಲಿ ನಡೆದ ಸಮಾರಂಭದ್ಲಲಿ ಜಪಾನ್ ಔಪಚಾರಿಕವಾಗಿ ತನ್ನ ಶರಣಾಗತಿಯನ್ನು ಪ್ರಕಟಿಸಿತು. ಇದರೊಂದಿಗೆ ಎರಡನೇ ಜಾಗತಿಕ ಸಮರ ಅಂತ್ಯಗೊಂಡಿತು. ಈ ದಿನವನ್ನು ಜಪಾನ್ ಮೇಲಿನ ವಿಜಯ ದಿನವಾಗಿ ಆಚರಿಸಲಾಯಿತು.

1945: ಹನೋಯಿಯ ಬಾ ದಿನ್ಹ್ ಚೌಕದಲ್ಲಿ ಸಮಾವೇಶಗೊಂಡಿದ್ದ ಬೃಹತ್ ಜನಸಮುದಾಯದ ಮುಂದೆ ಹೊ ಚಿ ಮಿನ್ಹ್ ಅವರು ವಿಯೆಟ್ನಾಂ ಒಂದು ಸ್ವತಂತ್ರ ಗಣರಾಜ್ಯ ಎಂದು ಘೋಷಿಸಿದರು. 25 ವರ್ಷಗಳ ಬಳಿಕ ಇದೇ ದಿನ ಅವರು ಹನೋಯಿಯಲ್ಲಿ ತಮ್ಮ 79ನೇ ವಯಸ್ಸಿನಲ್ಲಿ ಮೃತರಾದರು. ವಿಯೆಟ್ನಾಮಿನ ರಾಷ್ಟ್ರೀಯ ಚಳವಳಿಯ ಧುರೀಣರಾಗಿ ಅಷ್ಟೇ ಅಲ್ಲ, ಎರಡನೇ ಜಾಗತಿಕ ಸಮರದ ಬಳಿಕ ಏಷ್ಯಾದಲ್ಲಿ ಸಾಮ್ರಾಜ್ಯಶಾಹಿ ವಿರೋಧಿ ಚಳವಳಿಗೆ ಚಾಲನೆ ನೀಡಿದ ನಾಯಕರಲ್ಲಿ ಒಬ್ಬರಾಗಿಯೂ ಅವರು ಖ್ಯಾತಿ ಪಡೆದರು.

1930: ಯುರೋಪಿನಿಂದ ಮೊದಲ ತಡೆರಹಿತ ವಿಮಾನ (37) ಗಂಟೆ ಹಾರಾಟ.

1923: ಸಾಹಿತಿ ಜಿ. ನಾರಾಯಣ ಜನನ.

1917: ಸಾಹಿತಿ ನಾಗಾನಂದ ಜನನ.

1911: ನಟ, ನಿರ್ದೇಶಕ, ನಾಟಕಕಾರ, `ಪರ್ವತವಾಣಿ' ಎಂದೇ ಹೆಸರಾದ ಪಿ. ನರಸಿಂಗರಾವ್ (2-9-1911ರಿಂದ 17-3-1994) ಅವರು ಗೋಪಾಲರಾಯ- ರುಕ್ಮಣಮ್ಮ ದಂಪತಿಯ ಮಗನಾಗಿ ತಮಿಳುನಾಡಿನ ಹೊಸೂರು ಸಮೀಪದ ಮಾರಂಡ ಪಟ್ಟಿ ಹತ್ತಿರದ ಪರ್ವತವಾಡಿಯಲ್ಲಿ ಜನಿಸಿದರು. ಎಂಬತ್ತಕ್ಕೂ ಹೆಚ್ಚು ನಾಟಕ ಕೃತಿಗಳನ್ನು ರಚಿಸಿದ ಅವರಿಗೆ ಕನ್ನಡ ಸಾಹಿತ್ಯ ಪರಿಷತ್ ಪ್ರಶಸ್ತಿ, ಕರ್ನಾಟಕ ಸಾಹಿತ್ಯ ಅಕಾಡೆಮಿ ಪ್ರಶಸ್ತಿ, ಕರ್ನಾಟಕ ನಾಟಕ ಅಕಾಡೆಮಿ ಪ್ರಶಸ್ತಿ ಸೇರಿದಂತೆ ಹಲವಾರು ಪ್ರಶಸ್ತಿಗಳು ಲಭಿಸಿವೆ.

1862: ಸಾಹಿತಿ ತಮ್ಮಣ್ಣಪ್ಪ ಚಿಕ್ಕೋಡಿ ಜನನ.

1666: ಲಂಡನ್ನಿನಲ್ಲಿ ಭಾರೀ ಅಗ್ನಿ ಅನಾಹುತ ಸಂಭವಿಸಿತು. ಈ ದುರಂತದಲ್ಲಿ ಸಹಸ್ರಾರು ಮನೆಗಳು ಅಗ್ನಿಗೆ ಆಹುತಿಯಾದವು ಆದರೆ ಅತಿ ಸ್ವಲ್ಪ ಪ್ರಮಾಣದಲ್ಲಿ ಸಾವು ಸಂಭವಿಸಿತು. ಲಂಡನ್ನಿನ ಇತಿಹಾಸದಲ್ಲೇ ಅತಿ ಭೀಕರ ಎಂದು ಪರಿಗಣಿಸಲಾದ ಈ ಅಗ್ನಿ ಅನಾಹುತದಲ್ಲಿ ನಾಗರಿಕ ಕಟ್ಟಡಗಳು, ಸೇಂಟ್ ಪೌಲ್ಸ್ ಕೆಥೆಡ್ರಲ್, 87 ಇಗರ್ಜಿಗಳು (ಚರ್ಚ್ಗಳು), 13,000 ಮನೆಗಳು ಸೇರಿದಂತೆ ಲಂಡನ್ ನಗರದ ಬಹುತೇಕ ಭಾಗ ಭಸ್ಮವಾಯಿತು. ಲಂಡನ್ ಸೇತುವೆ ಸಮೀಪದ ಪಡ್ಡಿಂಗ್ ಲೇನಿನ ಕಿಂಗ್ಸ್ ಬೇಕರ್ ಮನೆಯಲ್ಲಿ ಆಕಸ್ಮಿಕವಾಗಿ ಬೆಂಕಿ ಹೊತ್ತಿಕೊಂಡಿತು. ನಾಲ್ಕುದಿನಗಳ ಕಾಲ ಬೆಂಕಿ ಅವ್ಯಾಹತವಾಗಿ ಉರಿಯಿತು. ಕೊನೆಗೆ ಬೆಂಕಿ ಹರಡದಂತೆ ತಡೆಯಲು ಹಲವು ಮನೆಗಳನ್ನು ಸ್ಫೋಟಿಸಬೇಕಾಯಿತು.

Friday, September 4, 2009

ಇಂದಿನ ಇತಿಹಾಸ History Today ಸೆಪ್ಟೆಂಬರ್ 01

ಇಂದಿನ ಇತಿಹಾಸ

ಸೆಪ್ಟೆಂಬರ್ 01

2008: ಭಾರತೀಯ ರಿಸರ್ವ್ ಬ್ಯಾಂಕಿನ (ಆರ್ ಬಿ ಐ) ನೂತನ ಗವರ್ನರ್ ಆಗಿ ಹಣಕಾಸು ಕಾರ್ಯದರ್ಶಿ ಡಿ. ಸುಬ್ಬರಾವ್ ಅವರನ್ನು ಸರ್ಕಾರ ನೇಮಕ ಮಾಡಿತು.

2008: ತಂದೆಯ ಶತಕೋಟಿ ಡಾಲರ್ ಆಸ್ತಿಗೆ `ಹಕ್ಕುದಾರ ಪುತ್ರಿಯರು ` ಪಟ್ಟಿಯಲ್ಲಿ ಭಾರತದ ವನಿಶಾ ಮಿತ್ತಲ್, ಇಶಾ ಅಂಬಾನಿ ಮತ್ತು ಪಿಯಾ ಸಿಂಗ್ ಅವರು ಪ್ರಮುಖ ವಾಣಿಜ್ಯ ನಿಯತಕಾಲಿಕೆ `ಫೋಬ್ಸ್' ಪಟ್ಟಿಯಲ್ಲಿ ಮೊದಲ ಮೂರು ಸ್ಥಾನ ಗಳಿಸಿಕೊಂಡರು. ಇವರು ಅನುಕ್ರಮವಾಗಿ ಲಕ್ಷ್ಮೀ ಮಿತ್ತಲ್, ಮುಖೇಶ್ ಅಂಬಾನಿ ಮತ್ತು ಕೆ.ಪಿ. ಸಿಂಗ್ ಅವರ ಪುತ್ರಿಯರು. ಪರಾಂಪರಗತವಾಗಿ ಬರುವ ಅತಿ ಹೆಚ್ಚಿನ ಆಸ್ತಿಗೆ ಒಡತಿಯರಾಗುವ ಸಾಧ್ಯತೆಗಳ ಬಗ್ಗೆ ವಿಶ್ವದಾದ್ಯಂತ ಇರುವ ವಿವಿಧ ಉದ್ಯಮಿಗಳ ಪುತ್ರಿಯರು ಮತ್ತು ಹೆಣ್ಣು ಮೊಮ್ಮಕ್ಕಳನ್ನು ಪರಿಗಣಿಸಿದಾಗ, ಲಕ್ಷ್ಮೀ ಮಿತ್ತಲ್ ಪುತ್ರಿ ಮೊದಲ ಸ್ಥಾನದಲ್ಲಿದ್ದಾರೆ ಎಂದು ಪತ್ರಿಕೆ ವಿವರಿಸಿತು.

2007: ಶಾಲೆಗಳಲ್ಲಿ ಮಕ್ಕಳಿಗೆ ದೈಹಿಕವಾಗಿ ಶಿಕ್ಷಿಸುವ ಹಾಗೂ ಅವಮಾನ ಮಾಡುವ ಅಧಿಕಾರ ಶಿಕ್ಷಕರಿಗಿಲ್ಲ. ಒಂದು ವೇಳೆ ಶಿಕ್ಷಕರು ಈ ಸಾಹಸಕ್ಕೆ ಕೈಹಾಕಿದರೆ ಸೂಕ್ತ ಕಾನೂನು ಕ್ರಮ ಎದುರಿಸಬೇಕಾಗುತ್ತದೆ ಎಂದು ಕರ್ನಾಟಕ ರಾಜ್ಯ ಸಾರ್ವಜನಿಕ ಶಿಕ್ಷಣ ಇಲಾಖೆ ವಿಶೇಷ ಸುತ್ತೋಲೆ ಹೊರಡಿಸಿ, ಎಲ್ಲ ಜಿಲ್ಲಾ ಉಪನಿರ್ದೇಶಕರ ಕಚೇರಿಗಳಿಗೆ ಕಳುಹಿಸಿತು. ಬೆಂಗಳೂರಿನಲ್ಲಿ ಆರನೇ ತರಗತಿಯ ಕೆ. ಸಂಗೀತಾ ಎಂಬ ಬಾಲಕಿಯ ಮೇಲೆ ಶಾಲಾ ಶಿಕ್ಷಕಿಯರು ನಡೆಸಿದ ಹಲ್ಲೆ ಹಾಗೂ ರಾಷ್ಟ್ರೀಯ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗ ನೀಡಿದ ನಿರ್ದೇಶನಗಳ ಹಿನ್ನೆಲೆಯಲ್ಲಿ ಶಿಕ್ಷಣ ಇಲಾಖೆ ಈ ಸುತ್ತೋಲೆ ಹೊರಡಿಸಿತು. ಸುತ್ತೋಲೆಯ ಪ್ರಕಾರ ಶಿಕ್ಷಕರು ವಿದ್ಯಾರ್ಥಿಗಳನ್ನು ಹೊಡೆಯುವ, ಜಿಗುಟುವ, ಶಾಲೆಯ ಸುತ್ತ ಓಡಿಸುವ, ಒಂಟಿ ಕಾಲಿನಲ್ಲಿ ಮತ್ತು ಬೆಂಚಿನ ಮೇಲೆ ನಿಲ್ಲಿಸುವ ಶಿಕ್ಷೆಗಳನ್ನು ನೀಡಿದರೆ ಭಾರತೀಯ ದಂಡ ಸಂಹಿತೆ ಪ್ರಕಾರ ಶಿಕ್ಷೆ ಎದುರಿಸಬೇಕಾಗುತ್ತದೆ.

2007: ಸಂಗಪಲ್ಲಿ ಬಳಿ ಆಗಸ್ಟ್ 24ರಂದು ಸಂಭವಿಸಿದ ರಸ್ತೆ ಅಪಘಾತದಲ್ಲಿ ಗಂಭೀರವಾಗಿ ಗಾಯಗೊಂಡಿದ್ದ ಬೆಂಗಳೂರಿನ ಭಾರತೀಯ ಬಾಹ್ಯಾಕಾಶ ಸಂಸ್ಥೆ (ಇಸ್ರೊ) ಸಾರ್ವಜನಿಕ ಸಂಪರ್ಕ ನಿರ್ದೇಶಕ ಎಸ್. ಕೃಷ್ಣಮೂರ್ತಿ ತಿರುಪತಿಯ ಆಸ್ಪತ್ರೆಯಲ್ಲಿ ಮೃತರಾದರು. ಈ ಅಪಘಾತದಲ್ಲಿ ಇಸ್ರೊ ಹಿರಿಯ ವಿಜ್ಞಾನಿ ರಾಜೀವ ಲೋಚನ ಸ್ಥಳದಲ್ಲಿಯೇ ಅಸು ನೀಗಿದ್ದರು.

2007: ಬೆಂಗಳೂರು ನಗರದ ಭಗವಾನ್ ಮಹಾವೀರ ಜೈನ್ ಕಾಲೇಜಿನ ಪಿಯುಸಿ ವಿದ್ಯಾರ್ಥಿ ಜಿ. ಎನ್. ನಿಶ್ಚಲ್ ತನ್ನ ಮೂಗಿನ ಮೇಲೆ ಕ್ರಿಕೆಟ್ ಬ್ಯಾಟ್ ನೆಟ್ಟಗೆ ಇರಿಸಿಕೊಂಡು ಸಮತೋಲನ ಮಾಡುವ ಮೂಲಕ ಗಿನ್ನೆಸ್ ಪುಸ್ತಕದಲ್ಲಿ ಹೆಸರು ದಾಖಲಿಸಲು ಯತ್ನಿಸಿದ. ಪ್ರೆಸ್ ಕ್ಲಬ್ ಆವರಣದಲ್ಲಿ ಮೂಗಿನ ಮೇಲೆ ಸುಮಾರು 1.25 ಕೆ.ಜಿ. ತೂಕವಿರುವ ಕ್ರಿಕೆಟ್ ಬ್ಯಾಟನ್ನು ನೆಟ್ಟಗೆ ನಿಲ್ಲಿಸಿಕೊಂಡು ಸಮತೋಲನ ಕಾಯ್ದುಕೊಳ್ಳುವಲ್ಲಿ ಈತ ಯಶಸ್ವಿಯಾದ. ``ಈ ಅಭ್ಯಾಸವನ್ನು ಗಿನ್ನೆಸ್ ಪುಸ್ತಕದಲ್ಲಿ ದಾಖಲಿಸಲು ಪ್ರಾಥಮಿಕ ಹಂತದಲ್ಲಿ ಪ್ರಯತ್ನ ನಡೆಸಿರುವೆ. ಗಿನ್ನೆಸ್ ಬುಕ್ ಆಫ್ ರೆಕಾರ್ಡಿಸಿನಿಂದ ಅನುಮತಿಗೆ ಕಾಯುತ್ತಿರುವೆ. ನಂತರ ಲಿಮ್ಕಾದಲ್ಲೂ ದಾಖಲೆ ಮಾಡುವೆ'' ಎಂದು ಆತ ಹೇಳಿದ. ಈತ ಗಿರಿನಗರದ ನಿವಾಸಿಗಳಾದ ಜಿ. ನೇತ್ರಾನಂದ್ ಮತ್ತು ಲತಾ ನೇತ್ರಾನಂದ್ ದಂಪತಿಯ ಪುತ್ರ.

2006: ಪೆಪ್ಸಿ ಕಂಪೆನಿಯ ನಿಯೋಜಿತ ಮುಖ್ಯ ಕಾರ್ಯ ನಿರ್ವಹಣಾಧಿಕಾರಿ ಇಂದ್ರಾ ನೂಯಿ ಅವರು ನಾಲ್ಕನೇ ಜಗತ್ತಿನ ಪ್ರಭಾವಶಾಲಿ ಮಹಿಳೆಯಾಗಿದ್ದು, ಕಾಂಗ್ರೆಸ್ ಪಕ್ಷದ ಅಧ್ಯಕ್ಷೆ ಸೋನಿಯಾ ಗಾಂಧಿ 13ನೇ ಪ್ರಭಾವಶಾಲಿ ಮಹಿಳೆ ಎಂದು ಫೋರ್ಬ್ ನಿಯತಕಾಲಿಕದ ವಾರ್ಷಿಕ ಸಮೀಕ್ಷೆ ಪ್ರಕಟಿಸಿತು. 2005ರಲ್ಲಿ ಇಂದ್ರಾ ನೂಯಿ ಅವರು ಈ ಪಟ್ಟಿಯಲ್ಲಿ 28ನೇ ಸ್ಥಾನದಲ್ಲಿದ್ದರು. ಈ ಸಲ 4ನೇ ಸ್ಥಾನಕ್ಕೆ ಬಡ್ತಿ ಪಡೆದರು. ಪಟ್ಟಿಗೆ ಸೋನಿಯಾಗಾಂಧಿ ಹೆಸರು ಇದೇ ಮೊದಲ ಬಾರಿಗೆ ಸೇರ್ಪಡೆಗೊಂಡಿತು.

2006: ಇರಾನ್ ಏರ್ ಲೈನ್ಸ್ ಸಂಸ್ಥೆಗೆ ಸೇರಿದ ಪ್ರಯಾಣಿಕರ ವಿಮಾನವೊಂದು ಮಶಾದ್ ವಿಮಾನ ನಿಲ್ದಾಣದಲ್ಲಿ ಕೆಳಗೆ ಇಳಿಯುವಾಗ ಅಪಘಾತಕ್ಕೆ ಈಡಾಗಿ ಕನಿಷ್ಠ 80 ಮಂದಿ ಪ್ರಯಾಣಿಕರು ಅಸು ನೀಗಿದರು. ಅಂತರಿಕ್ಷ ಯಾನಕ್ಕೆ ಬಳಕೆಯಾಗುತ್ತಿದ್ದ ರಷ್ಯ ನಿರ್ಮಿತ `ತುಪಲೊವ್' ವಿಮಾನವು ಬಂದರು ಅಬ್ಬಾಸ್ ನಗರದಿಂದ ಮಶಾದ್ ನಗರಕ್ಕೆ ಆಗಮಿಸಿ ಇಳಿಯಲು ಅಣಿಯಾಗುತ್ತಿದ್ದಾಗ ವಿಮಾನದ ಚಕ್ರಗಳು ಸಿಡಿದು ಬೆಂಕಿ ಹೊತ್ತಿಕೊಂಡಿತು. ವಿಮಾನದಲ್ಲಿ 140 ಮಂದಿ ಪ್ರಯಾಣಿಕರಿದ್ದರು.

2006: ಖ್ಯಾತ ಸರೋದ್ ವಾದಕ ಅಲಿ ಅಕ್ಬರ್ ಖಾನ್ ಅವರ ಪುತ್ರ, ದಂತಕಥೆಯಾಗಿದ್ದ ಉಸ್ತಾದ್ ಅಲ್ಲಾವುದ್ದೀನ್ ಖಾನ್ ಅವರ ಮೊಮ್ಮಗ ಅಶೀಶ್ಖಾನ್ ಹಿಂದು ಧರ್ಮಕ್ಕೆ ಮತಾಂತರ ಮಾಡಿದರು. ತ್ರಿಪುರ ಮೂಲದ ತಮ್ಮ ಪೂರ್ವಜರು ಕ್ರಿಮಿನಲ್ ಪ್ರಕರಣದಲ್ಲಿ ಸಿಕ್ಕಿಹಾಕಿಕೊಂಡ ಸಂದರ್ಭದಲ್ಲಿ ಅದರಿಂದ ಪಾರಾಗಲು ಇಸ್ಲಾಮಿಗೆ ಮತಾಂತರ ಮಾಡಿದ್ದು, ಈಗ ಪ್ರಜ್ಞಾಪೂರ್ವಕವಾಗಿಯೇ ತಾನು ಹಿಂದು ಧರ್ಮಕ್ಕೆ ಮರಳಿದ್ದೇನೆ ಎಂದು ಅಶೀಶ್ ಖಾನ್ ಕೋಲ್ಕತಾದಲ್ಲಿ ಪ್ರಕಟಿಸಿದರು.

2006: ವೈಸ್ ಅಡ್ಮಿರಲ್ ಸುರೇಶ ಮೆಹ್ತಾ ಅವರು ಭಾರತೀಯ ನೌಕಾಪಡೆಯ ಮುಖ್ಯಸ್ಥರಾಗಿ ನೇಮಕಗೊಂಡರು.

2006: ಆಂಧ್ರಪ್ರದೇಶದ ತೆಲಂಗಾಣ ರಾಷ್ಟ್ರಸಮಿತಿ (ಟಿಆರ್ಎಸ್) ಕೇಂದ್ರದ ಯುಪಿಎ ಸರ್ಕಾರಕ್ಕೆನೀಡಿದ್ದ ತನ್ನ ಬೆಂಬಲವನ್ನು ಹಿಂತೆಗೆದುಕೊಂಡಿತು.

2006: ಅಮೆರಿಕದ ಬಾಲ್ಟಿಮೋರಿನಲ್ಲಿ ನಾಲ್ಕನೇ `ಅಕ್ಕ' ವಿಶ್ವ ಕನ್ನಡ ಸಮ್ಮೇಳನವು ಡಾ. ರಾಜ್ ಕುಮಾರ್ ನೆನಪಿನಲ್ಲಿ ಸಜ್ಜುಗೊಂಡ ಸಭಾಗಣದಲ್ಲಿ ಆರಂಭವಾಯಿತು. ಜಗತ್ತಿನ ವಿವಿಧೆಡೆಗಳಿಂದ 4000 ಕನ್ನಡಿಗರು ಈ ಸಮ್ಮೇಳನಕ್ಕೆ ಆಗಮಿಸಿದ್ದರು. ಆರ್ಟ್ ಆಫ್ ಲಿವಿಂಗ್ ಖ್ಯಾತಿಯ ಶ್ರೀ ಶ್ರೀ ರವಿ ಶಂಕರ ಅವರ ಆಧ್ಯಾತ್ಮಿಕ ಗೋಷ್ಠಿಯೊಂದಿಗೆ ಸಮ್ಮೇಳನ ವಿಧ್ಯುಕ್ತವಾಗಿ ಆರಂಭಗೊಂಡಿತು.

2006: ಪಾಕಿಸ್ತಾನಿ ವಾಯುಪಡೆಯ ಬಾಂಬ್ ದಾಳಿಗೆ ವಾರದ ಹಿಂದೆ ಬಲಿಯಾದ ಬಲೂಚಿಸ್ಥಾನದ ಬುಡಕಟ್ಟು ಹೋರಾಟದ ಹಾಗೂ ಬಲೂಚಿಸ್ಥಾನ್ ಲಿಬರೇಶನ್ ಆರ್ಮಿಯ ನಾಯಕ ನವಾಬ್ ಅಕ್ಬರ್ ಖಾನ್ ಬುಗ್ತಿ ಅವರ ಪಾರ್ಥಿವ ಶರೀರವನ್ನು ಅವರ ಕುಟುಂಬ ಸದಸ್ಯರಿಗೂ ತೋರಿಸದೆ, ರಹಸ್ಯವಾಗಿ ಅವರ ಹಿರಿಯರಿಗೆ ಸೇರಿದ ದೇರಾ ಬುಗ್ತಿ ಸ್ಮಶಾನದಲ್ಲಿ ಸಮಾಧಿ ಮಾಡಲಾಯಿತು. ಪಾಕಿಸ್ಥಾನಿ ಸೇನಾ ಕಾರ್ಯಾಚರಣೆಯಲ್ಲಿ ಹತರಾದ ಬುಗ್ತಿ ಅವರ ಶವವನ್ನು ಐದು ದಿನಗಳ ಬಳಿಕ ಒಂದು ದಿನ ಹಿಂದೆಯಷ್ಟೇ ಬಲೂಚಿಸ್ಥಾನದ ಕೊಹ್ಲು ಜಿಲ್ಲೆಯ ತಾರ್ತಾನಿ ಪ್ರದೇಶದ ಗುಹೆಯೊಂದರಲ್ಲಿ ಪತ್ತೆ ಹಚ್ಚಿ ಗುರುತಿಸಲಾಗಿತ್ತು.

1999: ಬಾಹ್ಯಾಕಾಶ ವಿಜ್ಞಾನಿ ಡಾ. ಎಸ್. ಶ್ರೀನಿವಾಸನ್ ನಿಧನ.

1985: ನ್ಯೂಫೌಂಡ್ ಲ್ಯಾಂಡಿನ ಕರಾವಳಿ ಸಮೀಪ ಸಮುದ್ರದಲ್ಲಿ ಮುಳುಗಿದ ಟೈಟಾನಿಕ್ ನೌಕೆಯ ಅವಶೇಷ ಪತ್ತೆಯಾಯಿತು. ಫ್ರಾನ್ಸ್ ಹಾಗೂ ಅಮೆರಿಕ ಕೈಗೊಂಡ ಜಂಟಿ ಯತ್ನದ ಭಾಗವಾಗಿ ರಾಬರ್ಟ್ ಬಲ್ಲಾರ್ಡ್ ಹಾಗೂ ಜೀನ್ ಲೂಯಿ ಮಿಚೆಲ್ ಅವರು ಟೈಟಾನಿಕ್ ಅವಶೇಷ ಪತ್ತೆಗೆ ಯತ್ನಿಸಿ ಸಫಲರಾದರು. ನೌಕೆ ನ್ಯೂಫೌಂಡ್ ಲ್ಯಾಂಡಿನ ಸೇಂಟ್ ಜಾನ್ಸ್ ಗೆ ಆಗ್ನೇಯಭಾಗದಲ್ಲಿ 375 ಕಿಮೀ ದೂರದಲ್ಲಿ ಸಮುದ್ರಮಟ್ಟಕ್ಕಿಂತ 12,460 ಅಡಿ ಕೆಳಗೆ ಇತ್ತು.

1972: ಅಮೆರಿಕದ ರಾಬರ್ಟ್ `ಬಾಬ್ಬಿ' ಫಿಶರ್ ಅವರು ಐಸ್ ಲ್ಯಾಂಡಿನ ರೇಕ್ಯಾವಿಕ್ ನಲ್ಲಿ ನಡೆದ ಸ್ಪರ್ಧೆಯಲ್ಲಿ ಸೋವಿಯತ್ ಯೂನಿಯನ್ನಿನ ಬೋರಿಸ್ ಸ್ಪಾಸ್ಕಿ ಅವರನ್ನು ಪರಾಭವಗೊಳಿಸಿ ವಿಶ್ವ ಚೆಸ್ ಕಿರೀಟವನ್ನು ಗೆದ್ದುಕೊಂಡರು. ಈ ಪ್ರಶಸ್ತಿಯನ್ನು ಗೆದ್ದುಕೊಂಡ ಮೊದಲ ರಷ್ಯೇತರ ವ್ಯಕ್ತಿ ಎಂಬ ಹೆಗ್ಗಳಿಕೆ ಅವರದಾಯಿತು. 20 ವರ್ಷಗಳ ಬಳಿಕ 50 ಲಕ್ಷ ಡಾಲರುಗಳ ಬಹುಮಾನದ ಮೊತ್ತಕ್ಕಾಗಿ ನಿಗದಿಯಾದ ಸ್ಪರ್ಧೆಯಲ್ಲಿ ಬೋರಿಸ್ ಸ್ಪಾಸ್ಕಿ ಅವರ ಜತೆಗೆ ಮರುಸ್ಪರ್ಧೆಗೆ ಇಳಿಯುವ ಹಿಂದಿನ ದಿನ ರಾಬರ್ಟ್ ಅವರು ಬೋಸ್ನಿಯಾದ ಸ್ವೇತಿ ಸ್ಟೆಫಾನಿನಲ್ಲಿ ಪತ್ರಿಕಾಗೋಷ್ಠಿಯನ್ನು ಉದ್ದೇಶಿಸಿ ಮಾತನಾಡಿದರು. ಯುಗೋಸ್ಲಾವಿಯಾ ವಿರುದ್ಧ ವಿಶ್ವಸಂಸ್ಥೆಯ ದಿಗ್ಭಂಧನ ಹಾಗೂ ಅಮೆರಿಕದ ಹಣಕಾಸು ಇಲಾಖೆಯ ಎಚ್ಚರಿಕೆಯ ಹೊರತಾಗಿಯೂ ಈ ಸ್ಪರ್ಧೆಯಲ್ಲಿ ಪಾಲ್ಗೊಳ್ಳಲು ತಾವು ನಿರ್ಧರಿಸಿದ್ದಾಗಿ ಅವರು ಹೇಳಿದರು. ಮರುದಿನ ನಡೆದ ಸ್ಪರ್ಧೆಯಲ್ಲಿ ರಾಬರ್ಟ್ ಅವರು ಸ್ಪಾಸ್ಕಿ ಅವರನ್ನು ಪರಾಭವಗೊಳಿಸಿದರು.

1962: ಸಾಹಿತಿ ಹಂಸ ಆರ್. ಜನನ.

1957: ಸಾಹಿತಿ ಪ್ರೀತಿ ಶುಭ ಚಂದ್ರ ಜನನ.

1956: ಕುಮಾರಿ ಸರಳಾ ಖನ್ನಾ ಐ.ಪಿ.ಎಸ್. ಅವರು ಸಿಮ್ಲಾ ಜಿಲ್ಲಾಧಿಕಾರಿಯಾಗಿ ಈದಿನ ಅಧಿಕಾರ ವಹಿಸಿಕೊಂಡರು. ಭಾರತದ ಪ್ರಥಮ ಮಹಿಳಾ ಜಿಲ್ಲಾಧಿಕಾರಿ ಎಂಬ ಹೆಗ್ಗಳಿಕೆ ಇವರದಾಯಿತು.

1956: ಭಾರತೀಯ ಜೀವ ವಿಮಾ ನಿಗಮ (ಎಲ್ಲೈಸಿ) ಅಸ್ತಿತ್ವಕ್ಕೆ ಬಂತು.

1948: ವಿಶ್ವ ಆರೋಗ್ಯ ಸಂಸ್ಥೆ ಸ್ಥಾಪನೆ.

1948: ಸಾಹಿತಿ ಉಮಾರಾವ್ ಜನನ.

1948: ಕಥೆಗಾರ್ತಿ ಗಂಗಾ ಪಾದೇಕಲ್ ಜನನ.

1947: ಇಂಡಿಯನ್ ಸ್ಟಾಂಡರ್ಡ್ ಟೈಮ್ (ಐಎಸ್ಟಿ) ಅನುಷ್ಠಾನಗೊಂಡಿತು. ಭಾರತದಾದ್ಯಂತ ಎ್ಲಲ ಗಡಿಯಾರಗಳಲ್ಲಿ ಐಎಸ್ಟಿ ಪ್ರಕಾರವೇ ಗಂಟೆ ನಿಗದಿಯಾಯಿತು.

1947: ಹಿಂದುಗಳು ಮತ್ತು ಮುಸ್ಲಿಮರ ನಡುವೆ ಒಗ್ಗಟ್ಟು ಮೂಡಿಸುವ ಸಲುವಾಗಿ ಮಹಾತ್ಮ ಗಾಂಧಿ ಅವರಿಂದ ಉಪವಾಸ.

1942: ರಾಸ್ ಬಿಹಾರಿ ಬೋಸ್ ಅವರು 50,000 ಸೈನಿಕರನ್ನು ಒಳಗೊಂಡ ಭಾರತೀಯ ರಾಷ್ಟ್ರೀಯ ಸೇನೆ (ಇಂಡಿಯನ್ ನ್ಯಾಷನಲ್ ಆರ್ಮಿ) ಸಂಘಟಿಸಿದರು. ನೇತಾಜಿ ಸುಭಾಶ್ ಚಂದ್ರ ಬೋಸ್ ಅವರು 1943ರ ಆಗಸ್ಟ್ 25ರಂದು ಸೇನೆಯ ಪರಮೋಚ್ಚ ನಾಯಕರಾಗಿ (ಸುಪ್ರೀಮ್ ಕಮಾಂಡ್) ಅಧಿಕಾರ ವಹಿಸಿಕೊಂಡರು.

1939: ನಾಝಿ ಜರ್ಮನಿಯ ಪೋಲಂಡ್ ಮೇಲೆ ಆಕ್ರಮಣ ನಡೆಸುವುದರೊಂದಿಗೆ ಎರಡನೇ ಜಾಗತಿಕ ಸಮರ ಆರಂಭಗೊಂಡಿತು.

1938: ಹಾಸ್ಯ ಸಾಹಿತ್ಯಕ್ಕೆ ವಿಶಿಷ್ಟ ಕೊಡುಗೆ ನೀಡಿದ ಸಾಹಿತಿ ಎಂ.ಪಿ. ಮನೋಹರ ಚಂದ್ರನ್ ಅವರು ಪುಟ್ಟಪ್ಪ- ಸಾವಿತ್ರಮ್ಮ ದಂಪತಿಯ ಮಗನಾಗಿ ಚಿತ್ರದುರ್ಗ ಜಿಲ್ಲೆಯ ಮೊಳಕಾಲ್ಮೂರಿನಲ್ಲಿ ಜನಿಸಿದರು. ಮಾಸಿಕ ಒಂದರಲ್ಲಿ ಕಂಡ ಅಪೂರ್ಣ ಕಥೆಯನ್ನು ಪೂರ್ಣಗೊಳಿಸುವ ಮೂಲಕ ಅಚಾನಕ್ ಆಗಿ ಸಾಹಿತ್ಯ ಲೋಕ ಪ್ರವೇಶಿಸಿದ ಮನೋಹರ ಚಂದ್ರನ್ ಆಯ್ದುಕೊಂಡದ್ದು ಹಾಸ್ಯ ಸಾಹಿತ್ಯ. ಅವರ ಹಾಸ್ಯ ಲೇಖನಗಳು ಪ್ರಮುಖ ಪತ್ರಿಕೆ, ವಿಶೇಷಾಂಕಗಳಲ್ಲಿ ಪ್ರಕಟವಾಗಿವೆ. ಹಲವಾರು ಹಾಸ್ಯ ಸಂಕಲನ ರೂಪದಲ್ಲೂ ಬಂದಿವೆ. 20ಕ್ಕೂ ಹೆಚ್ಚು ಕೃತಿಗಳು ಪ್ರಕಟವಾಗಿವೆ.

1928: ಖ್ಯಾತ ಸಾಹಿತಿ ತ್ರಿವೇಣಿ ಜನನ.

1928: ಸಾಹಿತಿ ಎಸ್.ಎಂ. ವೃಷಭೇಂದ್ರಸ್ವಾಮಿ ಜನನ.

1923: ಟೋಕಿಯೋ ಮತ್ತು ಯೋಕೋಹೋಮಾದಲ್ಲಿ ಭೂಕಂಪ. 1,06,000 ಮಂದಿ ಬಲಿ.

1896: ಸ್ವಾಮಿ ಪ್ರಭುಪಾದ ಎಂದೇ ಖ್ಯಾತರಾದ ಭಾರತದ ಧಾರ್ಮಿಕ ಧುರೀಣ ಎ.ಸಿ. ಭಕ್ತಿವೇದಾಂತ (1-9-1896ರಿಂದ 14-11-1977) ಜನ್ಮದಿನ. ಕೋಲ್ಕತಾದಲ್ಲಿ ಜನಿಸಿದ ಇವರು 54 ವರ್ಷಗಳ ಸಾಂಸಾರಿಕ ಜೀವನದ ನಂತರ ಸನ್ಯಾಸ ಸ್ವೀಕರಿಸಿದರು. ಆಧ್ಯಾತ್ಮಿಕ ಗುರು, ಭಕ್ತಿ ಸಿದ್ಧಾಂತ ಸರಸ್ವತಿ ಗೋಸ್ವಾಮಿ ಪ್ರಭುಪಾದರ ಗುರು. ಇವರು 1965ರಲ್ಲಿ ಇಂಟರ್ ನ್ಯಾಷನಲ್ ಸೊಸೈಟಿ ಫಾರ್ ಕೃಷ್ಣ ಕಾನ್ಷಿಯಸ್ ನೆಸ್ (ಇಸ್ಕಾನ್) ಸ್ಥಾಪಿಸಿದರು. ಹರೇ ಕೃಷ್ಣ ಚಳವಳಿ ಎಂದೇ ಇದು ಖ್ಯಾತಿ ಪಡೆಯಿತು. 1977ರ ನವೆಂಬರ್ 14ರಂದು ಇಹಲೋಕ ತ್ಯಜಿಸಿದರು.

(ಸಂಗ್ರಹ: ನೆತ್ರಕೆರೆ ಉದಯಶಂಕರ)

Advertisement