Showing posts with label Vittla. Show all posts
Showing posts with label Vittla. Show all posts

Friday, January 23, 2026

ಪಂಚಲಿಂಗೇಶ್ವರನ ಅವಭೃತ

 ಪಂಚಲಿಂಗೇಶ್ವರನ ಅವಭೃತ

ವಭೃತ (ದೇವನಾಗರಿಯಲ್ಲಿ ʼವಭೃʼ) ಎಂದರೆ ವೈದಿಕ ಯಜ್ಞಗಳು ಅಥವಾ ಪ್ರಮುಖ ಧಾರ್ಮಿಕ ವಿಧಿವಿಧಾನಗಳು ಮುಗಿದ ನಂತರ ಯಜಮಾನನು ಮಾಡುವ ಪವಿತ್ರವಾದ ಮಂಗಳಸ್ನಾನ. ಇದು ಯಜ್ಞದ ಸಮಾಪ್ತಿಯನ್ನು ಸೂಚಿಸುವ ವಿಧಿಯಾಗಿದ್ದು, ಪಾಪ ಪರಿಹಾರ ಮತ್ತು ಶುದ್ಧೀಕರಣದ ಸಂಕೇತ. 


ಅವಭೃತದ ಮುಖ್ಯಾಂಶಗಳು:

  • ಯಜ್ಞಾಂತ ಸ್ನಾನ: ಪ್ರಧಾನ ಯಾಗ ಅಥವಾ ಯಜ್ಞ ಪೂರ್ಣಗೊಂಡ ನಂತರ ಮಾಡಲಾಗುವ ವಿಶೇಷ ಜಳಕ.
  • ಶುದ್ಧೀಕರಣ: ಯಜ್ಞದ ಸಮಯದಲ್ಲಿ ಉಂಟಾಗಬಹುದಾದ ದೋಷಗಳನ್ನು ಕಳೆದು, ಯಜಮಾನನನ್ನು ಶುದ್ಧಗೊಳಿಸುವ ಪ್ರಕ್ರಿಯೆ.
  • ಮಂಗಳ ಕಾರ್ಯ: ಇದು ಯಜ್ಞದ ಮುಕ್ತಾಯದ ಸೂಚಕವಾಗಿದ್ದು, ಯಶಸ್ಸನ್ನು ಸೂಚಿಸುತ್ತದೆ.
  • ನದಿ/ತೀರ್ಥ ಸ್ನಾನ: ಸಾಮಾನ್ಯವಾಗಿ ಹರಿಯುವ ನದಿ ಅಥವಾ ಪವಿತ್ರ ತೀರ್ಥಗಳಲ್ಲಿ ಈ ಸ್ನಾನವನ್ನು ಆಚರಿಸಲಾಗುತ್ತದೆ. 

ಸರಳವಾಗಿ ಹೇಳುವುದಾದರೆಯಜ್ಞದ ಕೊನೆಯಲ್ಲಿ ಆಚರಿಸಲಾಗುವ ಸಮಾರೋಪ ಸ್ನಾನವೇ 'ಅವಭೃತ'. ದೇವಾಲಯದ ವಾರ್ಷಿಕೋತ್ಸವ, ಜಾತ್ರೆ, ಆಯನ ಕೂಡಾ ದೇವರ ಶಕ್ತಿಯನ್ನು ಜಾಗೃತಗೊಳಿಸುವ ಯಜ್ಞ, ಹಾಗಾಗಿಯೇ ಆಯನದ ಕೊನೆಗೆ ಅವಭೃತ ನಡೆಯುತ್ತದೆ.

ವಿಟ್ಲಾಯನದ ಸಡಗರದ ರಥೋತ್ಸವದ ಮರುದಿನ ಕೊಡಂಗಾಯಿ ಹೊಳೆಯಲ್ಲಿ ವಿಟ್ಲದೊಡೆಯ ಪಂಚಲಿಂಗೇಶ್ವರನ ಅವಭೃತ ನಡೆಯುತ್ತದೆ. ಈ ಅವಭೃತಕ್ಕಾಗಿ ದೇವಸ್ಥಾನದಿಂದ ಕೊಡಂಗಾಯಿವರೆಗೆ ಸಾಗುವಾಗ  ದೇವಸ್ಥಾನದ ಕಟ್ಟೆಯಿಂದ ತೊಡಗಿ, ವಿವಿಧ ಕಟ್ಟೆಗಳಲ್ಲಿ ಪಂಚಲಿಂಗೇಶ್ವರನಿಗೆ ಪೂಜೆ ಸಲ್ಲುತ್ತದೆ. ಪ್ರತಿವರ್ಷವೂ ಈ ಕಟ್ಟೆಗಳಿಗೆ ದೇವರು ಬರುವ ಹೊತ್ತಿನಲ್ಲಿ ಆಸುಪಾಸಿನ ಜನರು ಭಕ್ತಿ ಪೂರ್ವಕವಾಗಿ ನೆರೆದು ಭಗವಂತನಿಗೆ ಕೈ ಮುಗಿಯುತ್ತಾರೆ.

ಅವಭೃತಕ್ಕಾಗಿ ಪಂಚಲಿಂಗೇಶ್ವರನು ಸಾಗುವ ದೃಶ್ಯದ ವಿಡಿಯೋ ಹಾಗೂ ಪಂಚಲಿಂಗೇಶ್ವರ ದೇವಸ್ಥಾನ ಹಾಗೂ ಸಮೀಪದ ನೆತ್ರಕೆರೆಯ ಎರಡು ಕಟ್ಟೆಗಳಲ್ಲಿ ನಡೆದ ಪಂಚಲಿಂಗನ ಪೂಜೆಯ ಚಿತ್ರ, ವಿಡಿಯೋಗಳು ಮೇಲಿವೆ. (ಚಿತ್ರ, ವಿಡಿಯೋ ಕೃಪೆ: ಸದಾಶಿವ ಬನ, ವಿಟ್ಲ ಸುದ್ದಿಗಳು ಗ್ರೂಪ್‌, ನೆತ್ರಕೆರೆ ಮಠ ಗ್ರೂಪ್)

ಅವಭೃತದ ಮರುದಿನ ಧ್ವಜಾವರತಣದೊಂದಿಗೆ ವಿಟ್ಲಾಯನದ ಸಡಗರ ಕೊನೆಗೊಳ್ಳುತ್ತದೆ.

Thursday, January 22, 2026

ವಿಟ್ಲ ತೇರಿನ ಸುಂದರ ಕ್ಷಣ!

 ವಿಟ್ಲ ತೇರಿನ ಸುಂದರ ಕ್ಷಣ!

ವಿಟ್ಲಾಯನದ ಮಹತ್ವದ ದಿನ ವಿಟ್ಲ ತೇರು ಮತ್ತು ಬೆಡಿಯ ದಿನ. ೨೦೨೬ರ ಜನವರಿ ೨೧ರಂದು ಈ ಸಂಭ್ರಮದ ಹೊತ್ತು.

ವಿಟ್ಲ ತೇರಿನ ಸುಂದರ ಕ್ಷಣದ ವಿಡಿಯೋ ಇಲ್ಲಿದೆ 👇👇.


ಇದನ್ನೂ ನೋಡಿ:

ವಿಟ್ಲ ಶ್ರೀ ಪಂಚಲಿಂಗೇಶ್ವರ ಜಾತ್ರೋತ್ಸವ ಆರಂಭ

Thursday, January 15, 2026

ವಿಟ್ಲ ಶ್ರೀ ಪಂಚಲಿಂಗೇಶ್ವರ ಜಾತ್ರೋತ್ಸವ ಆರಂಭ

 ವಿಟ್ಲ ಶ್ರೀ ಪಂಚಲಿಂಗೇಶ್ವರ ಜಾತ್ರೋತ್ಸವ ಆರಂಭ

ವಿಟ್ಲದ ಸಹಸ್ರಾರು ವರ್ಷಗಳ ಇತಿಹಾಸ ಪ್ರಸಿದ್ಧ ಮಹತೋಭಾರ ಶ್ರೀ ಪಂಚಲಿಂಗೇಶ್ವರ ದೇವರ ಕಾಲಾವಧಿ ಜಾತ್ರೆಯು ಸಡಗರದೊಂದಿಗೆ ೨೦೨೬ ಜನವರಿ ೧೪ರ ಬುಧವಾರ ಮಕರ ಸಂಕ್ರಾಂತಿಯ ಶುಭದಿನ ಆರಂಭವಾಯಿತು. ವಿಟ್ಲ ಪಂಚಲಿಂಗೇಶ್ವರ ಜಾತ್ರೆಯು ಆಸುಪಾಸಿನಲ್ಲಿ ʼವಿಟ್ಲಾಯನʼ ಎಂದೇ ಖ್ಯಾತಿ ಪಡೆದಿದೆ.

ಧ್ವಜಾರೋಹಣದೊಂದಿಗೆ ಆರಂಭವಾದ ಜಾತ್ರಾ ಸಡಗರವು ಜನವರಿ ೨೧ರವರೆಗೆ ಮುಂದುವರಿಯಲಿದ್ದು, ವಿವಿಧ ಸಾಂಸ್ಕೃತಿಕ ಕಾರ್ಯಕ್ರಗಳೊಂದಿಗೆ ಭಕ್ತರನ್ನು ಮುದಗೊಳಿಸಲಿವೆ.

ಜಾತ್ರೋತ್ಸವ ಸಡಗರದ ವಿವಿಧ ಸಂದರ್ಭದ ಚಿತ್ರ ಹಾಗೂ ವಿಡಿಯೋಗಳು ಇಲ್ಲಿವೆ. (ಚಿತ್ರ, ವಿಡಿಯೋ ಕೃಪೆ: ವಿಟ್ಲ ಸುದ್ದಿಗಳು ವಾಟ್ಸಪ್‌ ಗ್ರೂಪ್)




 

Saturday, November 1, 2025

ಹೆಸರಾಂತ ಯಕ್ಷಗಾನ ಅರ್ಥಧಾರಿ ವಿಟ್ಲ ಶಂಭು ಶರ್ಮ ಇನ್ನಿಲ್ಲ

 ಹೆಸರಾಂತ ಯಕ್ಷಗಾನ ಅರ್ಥಧಾರಿ ವಿಟ್ಲ ಶಂಭು ಶರ್ಮ ಇನ್ನಿಲ್ಲ

ಹೆಸರಾಂತ ಯಕ್ಷಗಾನ ಅರ್ಥಧಾರಿ ವಿಟ್ಲ ಶಂಭು ಶರ್ಮ ಅವರು ಇನ್ನಿಲ್ಲ. ೨೦೨೫ರ ನವೆಂಬರ್‌ ೧ರ ಶನಿವಾರ ಅವರು ಸ್ವರ್ಗಸ್ಥರಾದರು.
ಶಂಭು ಶರ್ಮರ ಬಗ್ಗೆ ಯಕ್ಷದೀಪ.ಕಾಮ್‌ ಐದು ವರ್ಷಗಳ ಹಿಂದೆ ಇದೇ ದಿನ ಪ್ರಕಟಿಸಿದ್ದ ಬರಹ ಇಲ್ಲಿದೆ. ಶಂಭುಶರ್ಮದ ಸಂಪೂರ್ಣ ಚಿತ್ರವನ್ನು ಇದು ನೀಡುತ್ತದೆ. ಇದರ ಜೊತೆಗೆ ಶಂಭು ಶರ್ಮರು ಉತ್ತರಕುಮಾರನಾಗಿ ಮಾಡಿದ್ದ ಅರ್ಥಗಾರಿಕೆಯ ತುಣುಕೊಂದು ಇಲ್ಲಿದೆ.
ವಿಟ್ಲ ಶಂಭು ಶರ್ಮ ಎಂಬ ಹೆಸರೇ ಒಂದು ಕಾಲದಲ್ಲಿ ಯಕ್ಷಗಾನ ತಾಳಮದ್ದಳೆ ಕ್ಷೇತ್ರದಲ್ಲಿ ಸಂಚಲನ ಮೂಡಿಸುತ್ತಿದ್ದ ಹೆಸರು. ತಾಳಮದ್ದಳೆ ಪ್ರಿಯ ಪ್ರೇಕ್ಷಕರ ದೈನಂದಿನ ಚರ್ಚೆಗಳಲ್ಲಿ ಆಗಾಗ ಪ್ರಸ್ತಾಪವಾಗುತ್ತಿದ್ದ ವ್ಯಕ್ತಿತ್ವ. ನಾನು ಕಾಲೇಜಿಗೆ ಹೋಗುತ್ತಿದ್ದ ದಿನಗಳಲ್ಲಿಯೂ ಮನೆಯಲ್ಲಿ, ಸಮಾರಂಭಗಳಲ್ಲಿ ಶಂಭು ಶರ್ಮ ಎಂಬ ತಾಳಮದ್ದಳೆಯ ಹೊಸ ಪ್ರತಿಭೆಯ ಬಗ್ಗೆ ಮಾತನಾಡುವುದನ್ನು ಕೇಳಿದ್ದೆ. ‘ಒಳ್ಳೆ ಅರ್ಥ ಹೇಳ್ತಾರಂತೆ, ವಾದದಲ್ಲಿ ಎತ್ತಿದ ಕೈ” ಹೀಗೆ ಮಾತನಾಡುವುದು ಕೇಳಿಬರುತ್ತಿತ್ತು.
ಆಮೇಲೆ ಅವರ ಅರ್ಥಗಾರಿಕೆಯನ್ನು ಹಲವಾರು ಬಾರಿ ಕೇಳುವ ಅವಕಾಶವೂ ಬಂತು.  ವರ್ತಮಾನದ ಆಗುಹೋಗುಗಳ ಹೋಲಿಕೆ, ಹಾಸ್ಯಪ್ರವೃತ್ತಿ, ಶೃಂಗಾರಹುಡುಗಾಟಿಕೆಯ ಮನೋಭಾವಇವುಗಳನ್ನೆಲ್ಲಾ ತನ್ನ ಅರ್ಥಗಾರಿಕೆಯಲ್ಲಿ ಬಳಸುವ ಶಂಭು ಶರ್ಮರ ಅರ್ಥಗಾರಿಕೆಯ ಶೈಲಿ  ಜನಪ್ರಿಯತೆಯನ್ನು ಸಾಧಿಸಿತು.  ತಾಳಮದ್ದಳೆ ಕ್ಷೇತ್ರದಲ್ಲಿ ಸಂಚಲನ ಮೂಡಿಸಿದ ಹೆಸರು. ಮಲ್ಪೆ ಶಂಕರನಾರಾಯಣ ಸಾಮಗ, ಶೇಣಿ ಗೋಪಾಲಕೃಷ್ಣ ಭಟ್, ದೇರಾಜೆ ಸೀತಾರಾಮಯ್ಯ ಮತ್ತು  ಪ್ರಸ್ತುತ ಕೂಟಗಳಲ್ಲಿ ಸಕ್ರಿಯರಾಗಿರುವ ಹಲವಾರು ಈಗಿನ ಕಿರಿಯ ಅರ್ಥಧಾರಿಗಳ ಜೊತೆಗೂ ಈಗಲೂ ಬಹುಬೇಡಿಕೆಯ ಅರ್ಥಧಾರಿ.
ಅವರು ಅತಿ ಕಿರಿಯ ವಯಸ್ಸಿನಲ್ಲಿ ಪ್ರೇಕ್ಷಕನಾಗಿ ಹೋಗಿದ್ದ ತಾಳಮದ್ದಳೆ ಕೂಟವೊಂದರಲ್ಲಿ ಅನಿವಾರ್ಯವಾಗಿ ಅರ್ಥಧಾರಿಯಾಗಿ ಭಾಗವಹಿಸಿದಾಗ ಎದುರು ಪಾತ್ರಧಾರಿಯಿಂದ ಆದ ಮಾತಿನ ದಾಳಿಯಲ್ಲಿ ಸೋತು ಕಣ್ಣೀರಿಳಿಸಿದ ಅವರು ಮುಂದೆ ಹಠದಿಂದ ತಾಳಮದ್ದಳೆ ಅರ್ಥಧಾರಿಯಾಗಿ ಸಾಧನೆಯನ್ನು ಮಾಡಿದರು. 

ವಿಟ್ಲ ಶಂಭುಶರ್ಮ ಹುಟ್ಟಿದ್ದು  13-10-1951ರಲ್ಲಿ ಕುಂಬಳೆ ಸೀಮೆಯ ಎಡನಾಡು ಗ್ರಾಮದ ಶೆಡಂಪಾಡಿ ಎಂಬಲ್ಲಿ.  ತಂದೆಯವರು ದಿ| ಕೃಷ್ಣ ಭಟ್ರು, ತಾಯಿ ಹೇಮಾವತಿ ಅಮ್ಮ. ತಂದೆಯವರು ಹೆಡ್‍ಮಾಸ್ಟ್ರು. ಓದಿದ್ದು ಬೇರೆ ಬೇರೆ ಕಾಲೇಜುಗಳಲ್ಲಿ. ಬೆಂಗಳೂರು ವಿಶ್ವವಿದ್ಯಾಲಯದಲ್ಲಿ ಎಂ.ಎ  ಓದಿ 35 ವರ್ಷ ಬೇರೆ ಬೇರೆ ಕಾಲೇಜುಗಳಲ್ಲಿ ಉಪನ್ಯಾಸಕರಾಗಿ ದುಡಿದು ಎಲ್ಲಿಯೂ ಖಾಯಂ ಆಗದೆ ನಿವೃತ್ತಿ ಹೊಂದಿದರು. 
ಮೊದಲೇ ಹೇಳಿದಂತೆ ಆಕಸ್ಮಿಕ ಸನ್ನಿವೇಶವೊಂದರಲ್ಲಿ ಯಕ್ಷಗಾನ ತಾಳಮದ್ದಳೆ ಕೂಟವೊಂದರಲ್ಲಿ ಅರ್ಥ ಹೇಳಿದ ಶಂಭು ಶರ್ಮ ಮುಂದಕ್ಕೆ ಅದರಲ್ಲಿ ಆಸಕ್ತಿಯನ್ನು ಬೆಳೆಸಿಕೊಂಡರು. ಮೊದಲ ಅನಿರೀಕ್ಷಿತ ಅವಕಾಶದಲ್ಲಿ ಆದ ಮುಖಭಂಗ ಅವರನ್ನು ಮುಂದೆ ಹಠವಾದಿಯನ್ನಾಗಿ ಬೆಳೆಸಿತು. ವಿಟ್ಲಕ್ಕೆ ಬಂದಿದ್ದ ಪ್ರಸಿದ್ಧ ಅರ್ಥಧಾರಿ ದೇರಾಜೆ ಸೀತಾರಾಮಯ್ಯನವರನ್ನು ಭೇಟಿಯಾಗಿ ಅರ್ಥಗಾರಿಕೆ ಕಲಿಸಿಕೊಡುವಂತೆ ಬಿನ್ನವಿಸಿದ್ದರು. ‘‘ಅರ್ಥಗಾರಿಕೆ ಎಂಬುದು ಕಲಿಸಿಕೊಡುವಂಥದ್ದಲ್ಲ. ತಾನಾಗಿ ಕಲಿತು ಸಿದ್ಧಿಸುವಂತದ್ದು’’ ಎಂದು ದೇರಾಜೆಯವರು ಹೇಳಿದರು. ಆದರೂ ಅವರೊಡನೆ ಸಂಭಾಷಣೆಯ ಮತ್ತು ಪಾತ್ರಗಳ ಸೂಕ್ಷ ಮರ್ಮಗಳನ್ನು ಕಲಿತರು.
ಅರ್ಥಧಾರಿಯಾಗಿ ಬೆಳೆಯಲು ಕರ್ಗಲ್ಲು ಸುಬ್ಬಣ್ಣ ಭಟ್ಟರು ಶಂಭು ಶರ್ಮರಿಗೆ ತುಂಬಾ ಪ್ರೋತ್ಸಾಹವನ್ನು ಕೊಟ್ಟರು. ಅದರಂತೆ ವಿಟ್ಲದ ಹಲವಾರು ಕೂಟಗಳಲ್ಲಿ ಹಿರಿಯ ಕಲಾವಿದರಾಗಿ ಮೂಡಂಬೈಲು ಗೋಪಾಲಕೃಷ್ಣ ಶಾಸ್ತ್ರಿಗಳು, ಪೆರುವೋಡಿ ನಾರಾಯಣ ಭಟ್ಟರೇ ಮೊದಲಾದವರು ಭಾಗವಹಿಸುತ್ತಿದ್ದುದರಿಂದ ಶಂಭು ಶರ್ಮರಿಗೆ ಅರ್ಥಧಾರಿಯಾಗಿ ಬೆಳೆಯಲು ಅನುಕೂಲವಾಯಿತು. ಆದರೆ ಶಂಭು ಶರ್ಮರಿಗೆ ಉದ್ಯೋಗದ ಕಾರಣದಿಂದ ಅರ್ಥಗಾರಿಕೆಯಲ್ಲಿ ಮತ್ತು ತಾಳಮದ್ದಳೆಯಲ್ಲಿ ನಿರಂತರವಾಗಿ ತೊಡಗಿಸಿಕೊಳ್ಳಲು ಆಗುತ್ತಲೇ ಇರಲಿಲ್ಲ. ಅವರು ಉಪನ್ಯಾಸಕ ವೃತ್ತಿಯನ್ನು ಕೈಗೊಂಡಿದ್ದ ಕೆಲವು ಕಾಲೇಜಿನ ಪರಿಸರಗಳಲ್ಲಿ ಯಕ್ಷಗಾನ, ತಾಳಮದ್ದಳೆಗಳು ನಡೆಯುತ್ತಿರಲಿಲ್ಲ. ಹೀಗೆ ಆಗಾಗ ತನ್ನ ವೃತ್ತಿ ಬದುಕಿನ ನಡುವೆ ಯಕ್ಷಗಾನ ಕ್ಷೇತ್ರದಿಂದ ದೂರ ಉಳಿಯಬೇಕಾಗಿ ಬರುತ್ತಿತ್ತು. 
ತುರ್ತುಪರಿಸ್ಥಿತಿಯ ವಿರುದ್ಧದ ಚಟುವಟಿಕೆಗಳಲ್ಲಿ ತೊಡಗಿಸಿಕೊಂಡು ಯಕ್ಷಗಾನದಿಂದ ದೂರವಾಗಿದ್ದರು.  ತುರ್ತುಪರಿಸ್ಥಿತಿಯ ನಂತರ ಗಣಪತಿ ಜೂನಿಯರ್ ಕಾಲೇಜಿನಲ್ಲಿ ಉಪನ್ಯಾಸಕರಾಗಿ ಸೇವೆಗೆ ಸೇರಿದ ನಂತರ ಆ ಸಂದರ್ಭದಲ್ಲಿ ಪುನಃ ಯಕ್ಷಗಾನದಲ್ಲಿ ಬೆಳೆಯುವುದಕ್ಕೆ ಅವಕಾಶ ಆಯಿತು. ಬೆಸೆಂಟ್ ಸಂಜೆ ಕಾಲೇಜು, ಬೆಸೆಂಟ್ ಡೇ ಕಾಲೇಜು- ಹೀಗೆ ಹಲವು ಕಾಲೇಜುಗಳಲ್ಲಿ ದುಡಿಯುತ್ತಾ  ರಾತ್ರಿ ಶ್ರೀಧರ ರಾಯರ ನೇತೃತ್ವದ ಯಕ್ಷಗಾನ ಬಯಲಾಟಗಳಲ್ಲಿ ಭಾಗವಹಿಸುತ್ತಿದ್ದರು. ತಾಳಮದ್ದಳೆಗಳಲ್ಲಿ ಭಾಗವಹಿಸುತ್ತಿದ್ದರು. 
ಯೌವನದ ಪ್ರಾರಂಭದಲ್ಲಿ ಹೀಗೆ ಅವಿಶ್ರಾಂತಿಯಿಂದ ದುಡಿಯುತ್ತಿದ್ದರೂ ಮತ್ತೆ ಪುನಃ ಮೂರ್ನಾಡಿಗೆ ಉದ್ಯೋಗಕ್ಕಾಗಿ ತೆರಳಿದಾಗ ಯಕ್ಷಗಾನದ ಸಂಪರ್ಕ ಮುರಿಯಿತು. ಎರಡು ವರ್ಷದ ನಂತರ ಮೂರ್ನಾಡಿಂದ ಮಂಗಳೂರಿನ ಫಿಶರೀಸ್ ಕಾಲೇಜಿಗೆ ಬಂದಾಗ ಮತ್ತೆ ಯಕ್ಷಗಾನದ ಅವಕಾಶಗಳು ಕೈತುಂಬಾ ಬಂದು ಜನಪ್ರಿಯನಾಗಲು ಸಹಾಯಕವಾಯಿತು. ಆದರೆ ಯಾಕೋ ಮತ್ತೆ ತಡೆ ಬಂತು. ಮುಂದಿನ ಎಂಟು ವರ್ಷಗಳ ಕಾಲ ಸೋಮವಾರಪೇಟೆಯ ಕಾಲೇಜಿನಲ್ಲಿ ಕೆಲಸ ಮಾಡಬೇಕಾಗಿ ಬಂತು. ಹೀಗೆ ಯಕ್ಷಗಾನದ ಸಂಪರ್ಕ ಆಗಾಗ ಕಡಿಯುತ್ತಾ ಇದ್ದುದು ಶಂಭು ಶರ್ಮರ ಕಲಾ ಬದುಕಿನ ದುರಂತವೆಂದೇ ಹೇಳಬೇಕು. ಸೋಮವಾರಪೇಟೆಯಿಂದ ಬಂದ ನಂತರ ವಿಜಯಾ ಕಾಲೇಜು, ಮುಲ್ಕಿ, ಸುಂಕದಕಟ್ಟೆ ಕಾಲೇಜು ಇಲ್ಲಿ ಕೆಲಸ ಮಾಡುತ್ತಿದ್ದಾಗ ಪ್ರಥಮ ಹಂತದ ಅರ್ಥಧಾರಿಗಳ ಸಾಲಿಗೆ ಸೇರಿದ್ದರು. 
ವಿಟ್ಲ ಶಂಭು ಶರ್ಮ ಕೇವಲ ತಾಳಮದ್ದಳೆ ಕ್ಷೇತ್ರದಲ್ಲಿ ಅರ್ಥಧಾರಿ ಎಂದು ಹಚ್ಚಿನವರು ಭಾವಿಸಿರಬಹುದು. ಆದರೆ ಅವರು ಯಕ್ಷಗಾನ ವೇಷಧಾರಿಯಾಗಿಯೂ ಕೆಲವು ವರ್ಷಗಳ ತಿರುಗಾಟ ಮಾಡಿದ್ದಾರೆ ಎಂದರೆ ಕೆಲವರಿಗೆ ಆಶ್ಚರ್ಯವಾಗಬಹುದು. ಶ್ರೀಧರ ರಾಯರ ತಂಡದಲ್ಲಿ ಹಾಗೂ ಕರ್ನೂರು ಕೊರಗಪ್ಪ ರೈಗಳ ತಂಡದಲ್ಲಿ ಖಾಯಂ ವೇಷಧಾರಿಯಾಗಿದ್ದರು.  ಮಾತ್ರವಲ್ಲ ಫೆಬ್ರವರಿ 28ಕ್ಕೆ ಕಾಲೇಜಿನ ಪಾಠವನ್ನು ಮುಗಿಸಿದ ಮೇಲೆ, ಬೇರೆ ಬೇರೆ ಮೇಳಗಳಲ್ಲಿ ಅಂದರೆ, ಸುಬ್ರಹ್ಮಣ್ಯ, ಕದ್ರಿಮೇಳ ಮೊದಲಾದುವುಗಳಲ್ಲಿ ಅತಿಥಿ ಕಲಾವಿದನಾಗಿ ಭಾಗವಹಿಸುತ್ತಿದ್ದರು.  ಒಂದು ವರ್ಷ ಉದ್ಯೋಗಕ್ಕೆ ರಜೆ ಹಾಕಿ ಪೂರ್ಣಾವಧಿ ಕಲಾವಿದನಾಗಿ ನಾರಾಯಣ ಕಮ್ತಿಯವರ ಬಪ್ಪನಾಡು ಮೇಳದಲ್ಲಿ ತಿರುಗಾಟ ಮಾಡಿದ್ದರು.
ಆಮೇಲೆ ಅನಿರೀಕ್ಷಿತ ಅಪಘಾತವಾಗಿದ್ದರಿಂದ ಚಿಟ್ಟೆಪಟ್ಟಿ ಕಟ್ಟಲಿಕ್ಕೂ ಕಷ್ಟವಾಗಿ ಯಕ್ಷಗಾನ ತಿರುಗಾಟವನ್ನು ನಿಲ್ಲಿಸಿದ್ದರು. ಆದರೆ ಕೆಲವೊಮ್ಮೆ ಅತಿಥಿ ಕಲಾವಿದನಾಗಿ ಅಪರೂಪಕ್ಕೆ ಒಂದೊಂದು ವೇಷವನ್ನು ಆಗಾಗ ಮಾಡುತ್ತಿದ್ದರು. ಶಂಭು ಶರ್ಮ ತನ್ನ 14ನೆಯ ವಯಸ್ಸಿನಲ್ಲಿ ಸೂರಂಬೈಲಿನಲ್ಲಿ ನಡೆದ ‘ಭೀಷ್ಮಪರ್ವ’ ತಾಳಮದ್ದಳೆ ಕೂಟದಲ್ಲಿ ದೊಡ್ಡ ಸಾಮಗರ (ಮಲ್ಪೆ ಶಂಕರನಾರಾಯಣ ಸಾಮಗ) ಭೀಷ್ಮನ ಪಾತ್ರಕ್ಕೆದುರಾಗಿ ಅಭಿಮನ್ಯುವಾಗಿ ಅರ್ಥ ಹೇಳಿದ್ದರು. ದೊಡ್ಡ ಸಾಮಗರು ಇವರ ಅರ್ಥವನ್ನು ಮೆಚ್ಚಿಕೊಂಡು ಪ್ರಶಂಸಿಸಿದ್ದರು. 
ಯಕ್ಷಗಾನಕ್ಕೆ ಶೈಕ್ಷಣಿಕ ಶಿಸ್ತಿನ ಗ್ರಂಥವನ್ನು ಅವಶ್ಯಕತೆಯ ಬಗ್ಗೆ ಶಂಭು ಶರ್ಮರಲ್ಲಿ ಕೇಳಿದಾಗ “ಅದು ಸಾಧ್ಯ ಇಲ್ಲ ಎಂದೇ ನನ್ನ ಅಭಿಪ್ರಾಯ. ಯಕ್ಷಗಾನ ಎಂದರೆ ಚೌಕಟ್ಟಿನೊಳಗಿರುವ ಸ್ವಾತಂತ್ರ್ಯ. ಇದಕ್ಕೆ ಚೌಕಟ್ಟೂ ಇದೆ, ಸ್ವಾತಂತ್ರ್ಯವೂ ಇದೆ ಎಂದಾಗ ಒಂದು clean syllabus ಸಾಧ್ಯವಿಲ್ಲ. ಒಂದು ರೂಪುರೇಷೆಗಳ outline ಮಾಡಬಹುದೇ ಹೊರತು ಕಡ್ಡಾಯ ಕಾನೂನಿನಲ್ಲಿ ಯಕ್ಷಗಾನವನ್ನು ಒಳಪಡಿಸಲು ಸಾಧ್ಯವೇ ಇಲ್ಲ. ಸ್ವಾತಂತ್ರ್ಯ ಸ್ವಲ್ಪ ಇದ್ದರೂ ಅದು ದುರುಪಯೋಗ ಆಗಬಾರದು ಎಂದು ನಿರ್ದೇಶನಗಳನ್ನು ಕೊಡಬಹುದೇ ಹೊರತು ಕಟ್ಟುನಿಟ್ಟು ಎಂಬುದು ಯಕ್ಷಗಾನದಲ್ಲಿ ಕಷ್ಟ” ಎಂದು ಅಭಿಪ್ರಾಯ ವ್ಯಕ್ತಪಡಿಸುತ್ತಾರೆ.
ಶಂಭು ಶರ್ಮರಿಗೆ ಸಂಕಷ್ಟದ ಕಾಲವೊಂದಿತ್ತು. ಅಪಘಾತವೊಂದರಲ್ಲಿ ದೈಹಿಕವಾಗಿ ಜರ್ಝರಿತರಾಗಿದ್ದ ಸಮಯದಲ್ಲಿ ಫ್ರಾಕ್ಚರ್ ಆಗಿ ಕೈಯೊಂದನ್ನು ರಾಡ್ ಹಾಕಿ ಕೊರಳಿಗೆ ನೇತಾಡಿಸಿದ್ದರು. ಈ ಸ್ಥಿತಿಯಲ್ಲೇ ಶಂಭು ಶರ್ಮರು ಸುಮಾರು 50 ತಾಳಮದ್ದಳೆಗಳಲ್ಲಿ ಭಾಗವಹಿಸಿದ್ದರು. ಎಲ್ಲರಿಂದಲೂ ಇದು ಸಾಧ್ಯವಾಗುವ ಕಾರ್ಯವಲ್ಲ. ಶಂಭು ಶರ್ಮ ಇವರು ಯಕ್ಷರಂಗ ಪ್ರಶಸ್ತಿ, ಪೆರ್ಲ ಕೃಷ್ಣ ಭಟ್ಟ ಪ್ರಶಸ್ತಿ, ಕೀಲಾರು ಗೋಪಾಲಕೃಷ್ಣಯ್ಯ ಪ್ರತಿಷ್ಠಾನ, ಸಂಪಾಜೆಯ ಪುರಸ್ಕಾರ, ವಿಟ್ಲ ಜೋಷಿ ಪ್ರಶಸ್ತಿ, ಮುಂಬಯಿ ಅಜೆಕಾರು ಪ್ರಶಸ್ತಿಯೇ ಮೊದಲಾದ ಹಲವಾರು ಪ್ರಶಸ್ತಿ, ಸನ್ಮಾನಗಳನ್ನು ಪಡೆದಿದ್ದಾರೆ. ಈಗ ಪತ್ನಿ ಲಕ್ಷ್ಮೀಶರ್ಮ, ಮಗ ಕೃಷ್ಣರಾಜ, ಸೊಸೆ ವಿದ್ಯಾ, ಮೊಮ್ಮಗ ನಿಶ್ಚಯರೊಂದಿಗೆ ಸಂತೃಪ್ತ ಜೀವನವನ್ನು ನಡೆಸಿದ್ದರು.

ಲೇಖನ: ಮನಮೋಹನ್ ವಿ.ಎಸ್. 

ಕೃಪೆ: ಯಕ್ಷದೀಪ.ಕಾಮ್‌ (https://yakshadeepa.com/)

Friday, March 28, 2025

ವಿಟ್ಲ ಶ್ರೀ ಪಂಚಲಿಂಗೇಶ್ವರ- ಬೊಳ್ನಾಡು ಶ್ರೀ ಚೀರುಂಭ ಭಗವತಿ ಭೇಟಿ

 ವಿಟ್ಲ ಶ್ರೀ ಪಂಚಲಿಂಗೇಶ್ವರ- ಬೊಳ್ನಾಡು ಶ್ರೀ ಚೀರುಂಭ ಭಗವತಿ ಭೇಟಿ

ಇದು ೬೦೦ ವರ್ಷಗಳಗೊಮ್ಮೆ ನಡೆಯುವ ಅಪರೂಪದ ಉತ್ಸವ

ದೈವ -ದೇವತೆಗಳ ಬೀಡಾಗಿರುವ ಕರ್ನಾಟಕದ ದಕ್ಷಿಣ ಕನ್ನಡ ಜಿಲ್ಲೆಯ ಬಂಟ್ವಾಳ ತಾಲೂಕಿನ ವಿಟ್ಲದ ಶ್ರೀ ಪಂಚಲಿಂಗೇಶ್ವರ ದೇವಸ್ಥಾನಕ್ಕೆ ಸಹಸ್ರಾರು ವರ್ಷಗಳ ಇತಿಹಾಸವಿದೆ. ವಿಟ್ಲ ಪಾಂಡವರು ನೆಲೆಸಿದ್ದ ಏಕ ಚಕ್ರನಗರ ಎಂಬ ಪ್ರತೀತಿ ಇದೆ.

ಇದೇ ಬಂಟ್ವಾಳ ತಾಲೂಕಿನ ಬೊಳ್ನಾಡುವಿನ ಚೀರುಂಭ ಭಗವತಿ ದೇವಸ್ಥಾನ ಕೂಡಾ ಹಳೆಯದೇ. ಕೆಲವು ವರ್ಷಗಳ ಹಿಂದೆ ಶ್ರೀ ಪಂಚಲಿಂಗೇಶ್ವರ ದೇವಸ್ಥಾನದ ಜೀರ್ಣೋದ್ಧಾರ ಆಗಿದ್ದರೆ, ಇತ್ತೀಚೆಗೆ ಬೊಳ್ನಾಡು ಚೀರುಂಭ ಭಗವತಿ ದೇವಸ್ಥಾನದ ಜೀರ್ಣೋದ್ಧಾರ ನಡೆದಿದೆ. ೨೦೨೫ರ ಮಾರ್ಚ್‌ ೨೦ರಿಂದ ೨೭ರವರೆಗೆ ಭಗವತಿ ದೇವಸ್ಥಾನದಲ್ಲಿ ಭರಣಿ ಮಹೋತ್ಸವ ನಡೆದಿದೆ.

ಈ ಸಂದರ್ಭದಲ್ಲಿ ಒಂದು ವಿಶೇಷವಾದ ಘಟನೆ ವಿಟ್ಲದಲ್ಲಿ ನಡೆದಿದೆ. ಮನುಷ್ಯರು ಅದರಲ್ಲೂ ಗಣ್ಯರು ಪರಸ್ಪರ ಭೇಟಿ ಮಾಡುವುದು ನಮಗೆಲ್ಲರಿಗೂ ಗೊತ್ತು. ಆದರೆ ದೇವರು- ದೇವಿ ಭೇಟಿ ಮಾಡುವುದು ಅಪರೂಪದ ಸಂಗತಿ. ಭಗವತಿ ದೇವಸ್ಥಾನದ ಭರಣಿ ಮಹೋತ್ಸವದ ಸಂದರ್ಭದಲ್ಲಿ ಚೀರುಂಭ ಭಗವತಿ, ಸನಿಹದ ಪಂಚಲಿಂಗೇಶ್ವರ ದೇಗುಲಕ್ಕೆ ಆಗಮಿಸಿ ಪಂಚಲಿಂಗೇಶ್ವರನ ದರ್ಶನಗೈದ ಘಟನೆ ನಡೆದಿದೆ.

ಶ್ರೀ ಪಂಚಲಿಂಗೇಶ್ವರ ಮತ್ತು ಚೀರುಂಭ ಭಗವತಿ ಭೇಟಿ ಹೀಗೆ ನಡೆಯುವುದು ೬೦೦ ವರ್ಷಗಳಿಗೆ ಒಮ್ಮೆ ಎಂಬ ಪ್ರತೀತಿ ಇದೆ. ಹೀಗಾಗಿ ಪ್ರಯಾಗದಲ್ಲಿ ನಡೆದ ಮಹಾಕುಂಭ ಮೇಳದಂತೆಯೇ, ಮನುಷ್ಯರ ಜೀವಮಾನದಲ್ಲಿ ಒಮ್ಮೆ ಮಾತ್ರ ಕಾಣಬಹುದಾದ, ಪಾಲ್ಗೊಳ್ಳಬಹುದಾದ ಅಪರೂಪದ ಭೇಟಿ ಇದು.

೨೦೨೫ರ ಮಾರ್ಚ್‌ ೨೫ರಂದು ವಿಟ್ಲದ ಶ್ರೀ ಪಂಚಲಿಂಗೇಶ್ವರ ದೇವಸ್ಥಾನದಲ್ಲಿ ಉತ್ಸವ ರೂಪದಲ್ಲಿ ಈ ಘಟನೆ ನಡೆಯಿತು. ಬೊಳ್ನಾಡು ಚೀರುಂಭ ಭಗವತಿ ದೇವಸ್ಥಾನದಿಂದ ಕಾಲ್ನಡಿಗೆಯಲ್ಲೇ ಹೊರಟು ವಿಟ್ಲದ ಶ್ರೀ ಪಂಚಲಿಂಗೇಶ್ವರ ಸನ್ನಿಧಾನಕ್ಕೆ ವಾದ್ಯಮೇಳದೊಂದಿಗೆ ಆಗಮಿಸಿದ ಭಗವತಿ ಮಾತೆಯು ಶ್ರೀ ಪಂಚಲಿಂಗೇಶ್ವರನ ದೇವರ ದರ್ಶನ-ಭೇಟಿಯನ್ನು ಮಾಡಿದ ಅಪರೂಪದ ದೃಶ್ಯವನ್ನು ಸಹಸ್ರಾರು ಮಂದಿ ವೀಕ್ಷಿಸಿದರು.


ಈ ಸಂದರ್ಭದ ವಿಡಿಯೋ ನೋಡಲು ಕೆಳಗೆ ಕ್ಲಿಕ್‌ ಮಾಡಿರಿ.

ಈ ಕೆಳಗಿನವುಗಳನ್ನೂ ಓದಿರಿ:

ವಿಟ್ಲ ಪಂಚಲಿಂಗೇಶ್ವರನಿಗೆ ಮರುಹುಟ್ಟು ಸಂಭ್ರಮ

ವಿಟ್ಲ ಪಂಚಲಿಂಗೇಶ್ವರನಿಗೆ ಧರ್ಮಸ್ಥಳದ 'ಮುಗುಳಿ'

ವಿಟ್ಲಾಯನದ ಕೊನೆಯ ದಿನ

Wahl! What Water falls..!

Tuesday, February 7, 2023

ವಾಹ್‌ ಮಹಿಷ... ಎಂತಹ ಪ್ರವೇಶ..!

 ವಾಹ್‌ ಮಹಿಷ... ಎಂತಹ ಪ್ರವೇಶ..!

ಕ್ಷಗಾನದ ದೇವಿ ಮಹಾತ್ಮೆ ಪ್ರಸಂಗ ಎಂತಹ ವ್ಯಕ್ತಿಯಲ್ಲಾದರೂ ರೋಮಗಳನ್ನು ನವಿರೇಳಿಸುವ ಪ್ರಸಂಗ. ದಕ್ಷಿಣ ಕನ್ನಡ ಜಿಲ್ಲೆಯ ಮೂಲೆ ಮೂಲೆಯಲ್ಲೂ ಇದೀಗ ಯಕ್ಷಗಾನದ ಚೆಂಡೆಧ್ವನಿ ಮಾರ್ದನಿಸುತ್ತಿದೆ.

ಅದರಲ್ಲೂ ದೇವಿ ಮಹಾತ್ಮೆಯಲ್ಲಿ ಮಧ್ಯರಾತ್ರಿಯಲ್ಲಿ ಯಾರಾದರೂ ತೂಕಡಿಸಹೊರಟರೆ ಅವರನ್ನು ಬಡಿದೆಬ್ಬಿಸುವ ದೃಶ್ಯ ಮಹಿಷಾಸುರ ಪ್ರವೇಶ. ಹೊರಗಿನಿಂದ ಆರ್ಭಟಿಸುತ್ತಾ ರಂಗಸ್ಥಳಕ್ಕೆ ಪ್ರವೇಶಿಸುವ ರೀತಿಯೇ ಮೈ ನವಿರೇಳಿಸುವಂತಹುದು.
ಯಕ್ಷಗಾನದಲ್ಲಿ ಸಾಮಾನ್ಯವಾಗಿ ಹೀಗೆ ಮಹಿಷಾಸುರನೊಬ್ಬನೇ ರಂಗಪ್ರವೇಶ ಮಾಡುವ ಸಂಪ್ರದಾಯ ಹಿಂದಿನಿಂದಲೇ ನಡೆದು ಬಂದಂತಹುದು.

ಆದರೆ ಮಹಿಷಾಸುರನ ರಂಗ ಪ್ರವೇಶಕ್ಕೆ ಹೊಸ ಸ್ವರೂಪವನ್ನೇ ನೀಡಬಹುದೇ?

ದಕ್ಷಿಣ ಕನ್ನಡ ಜಿಲ್ಲೆಯ ವಿಟ್ಲ ಸಮೀಪದ ಮುಡಿಪು ಕೈರಂಗಳದಲ್ಲಿ ನಡೆದ ದೇವಿ ಮಹಾತ್ಮೆ ಯಕ್ಷಗಾನದಲ್ಲಿ ಕಂಡು ಬಂದ ದೃಶ್ಯಗಳು ಅಪೂರ್ವ. 

ಪಾವಂಜೆ ಮೇಳದವರು ಪ್ರದರ್ಶಿಸಿದ ಈ ಯಕ್ಷಗಾನ ಬಯಲಾಟದಲ್ಲಿ ಮಹಿಷಾಸುರ ಮಾತ್ರವೇ ಅಲ್ಲ, ಆತನ ಗೆಳೆಯರ ಪಟಾಲಂ ಕೂಡಾ ಮಹಿಷಾಸುರನಂತೆಯೇ ಅಬ್ಬರದೊಂದಿಗೆ ಪ್ರವೇಶ ಮಾಡಿ ಮಹಿಷಾಸುರನನ್ನು ರಂಗಸ್ಥಳಕ್ಕೆ ತಂದು ಬಿಡುವ ದೃಶ್ಯ ಯಕ್ಷಗಾನ ಪ್ರಿಯರು ಕಂಡು ಕೇಳರಿಯದ ದೃಶ್ಯ ಎಂದರೆ ತಪ್ಪಲ್ಲ.

ಅದನ್ನು ನೋಡಲು ಇಲ್ಲಿ ಕ್ಲಿಕ್‌ ಮಾಡಿ.


ದೇವಿಗೆ ದೇವೇಂದ್ರ ಸೇರಿದಂತೆ ದೇವತೆಗಳು ಮನವಿ ಮಾಡಿಕೊಳ್ಳುವ ಇನ್ನೊಂದು ದೃಶ್ಯ ನೋಡಲು ಈ ಕೆಳಗೆ ಕ್ಲಿಕ್‌ ಮಾಡಿ.

ಅಷ್ಟೇ ಅಲ್ಲ, ಈ  ಬಯಲಾಟದಲ್ಲಿ  ರಕ್ತಬೀಜಾಪುರನನ್ನು ವಧಿಸಲು ದೇವಿ ಪ್ರವೇಶಿಸುವ ರೀತಿ ಕೂಡಾ ಕಂಡು ಕೇಳರಿಯದ್ದೇ. 

ಅದನ್ನು ನೋಡಲು ಈ ಕೆಳಗೆ ಕ್ಲಿಕ್‌ ಮಾಡಿ.

ಪ್ರೇಕ್ಷಕರಿಂದ ಶಹಬ್ಬಾಸ್‌ ಗಿರಿ ಪಡೆದುಕೊಂಡ ಈ ಯಕ್ಷಗಾನ ಬಯಲಾಟದ ಈ ವಿಡಿಯೋ ಕ್ಲಿಪ್‌ಗಳು ಈಗ  ವಾಟ್ಸಪ್‌ ಗುಂಪುಗಳಲ್ಲಿ ರೋಮಾಂಚನ ಎಬ್ಬಿಸುತ್ತಾ ವೈರಲ್‌ ಆಗುತ್ತಿದೆ.

ವಿಡಿಯೋ ಕೃಪೆ: ನೆತ್ರಕೆರೆ ಮಠ ವಾಟ್ಸಪ್‌ ಗುಂಪು. 

-ನೆತ್ರಕೆರೆ ಉದಯಶಂಕರ.

Monday, January 23, 2023

ವಿಟ್ಲಾಯನದ ಕೊನೆಯದಿನ: ನೆತ್ರಕೆರೆಯಲ್ಲಿ ಕಟ್ಟೆಪೂಜೆ

 ವಿಟ್ಲಾಯನದ ಕೊನೆಯದಿನ: ನೆತ್ರಕೆರೆಯಲ್ಲಿ ಕಟ್ಟೆಪೂಜೆ


ದಕ್ಷಿಣ ಕನ್ನಡ ಜಿಲ್ಲೆ ಬಂಟ್ವಾಳ ತಾಲೂಕಿನ ವಿಟ್ಲದ ಶ್ರೀ ಪಂಚಲಿಂಗೇಶ್ವರ ದೇವರ ಜಾತ್ರೆಯ ಕೊನೆಯ ದಿನ (೨೩ ಜನವರಿ ೨೦೨೩) ದೇವಸ್ಥಾನದ ಓಕುಳಿ ಕಟ್ಟೆಯಲ್ಲಿ ಪೂಜೆಯ ಬಳಿಕ ಕೊಡಂಗಾಯಿಗೆ ಅವಭೃತ ಸ್ನಾನಕ್ಕೆ ಹೋಗುವುದು ಕ್ರಮ.

ಹೀಗೆ  ಹೋಗುವ ದಾರಿಯಲ್ಲಿ  ವಿಟ್ಲ ಪ್ರಾಥಮಿಕ ಶಾಲೆ, ಕೂಡೂರು ಕಟ್ಟೆ, ನೆತ್ರಕೆರೆ ಕಟ್ಟೆಗಳು, ಕಡಂಬು ಕಟ್ಟೆ ಸೇರಿದಂತೆ ವಿವಿಧ ಕಟ್ಟೆಗಳಲ್ಲಿ ಕಟ್ಟೆ ಪೂಜೆ ಸ್ವೀಕರಿಸಿ ಕೊಡಂಗಾಯಿಯಲ್ಲಿ ಅವಭೃತ ಸ್ನಾನ ಪೂರೈಸಿ ಪಂಚಲಿಂಗೇಶ್ವರನು ಸ್ವಸ್ಥಾನಕ್ಕೆ ವಾಪಸಾಗುತ್ತಾನೆ.


ಅವಭೃತ ಸ್ನಾನಕ್ಕಾಗಿ ಪಂಚಲಿಂಗೇಶ್ವರನು ಸವಾರಿ ನಡೆಸುವ ದೃಶ್ಯ ಮತ್ತು ನೆತ್ರಕೆರೆ ಕಟ್ಟೆಗಳಲ್ಲಿ ಪೂಜೆ ಸ್ವೀಕರಿಸುವ ಸಂಭ್ರಮದ ವಿಡಿಯೋ ಇಲ್ಲಿದೆ. (ವಿಡಿಯೋ, ಚಿತ್ರಗಳು: ಎನ್.‌ ಶ್ಯಾಮ್‌, ಎನ್‌.ಟಿ. ಗಣೇಶ್)



೨೦೨೩ರ ವಿಟ್ಲ ಜಾತ್ರೋತ್ಸವವನ್ನು ಮತ್ತೊಮ್ಮೆ ಮೆಲುಕು ಹಾಕುವಿರಾದರೆ ಕೆಳಗೆ ಕ್ಲಿಕ್‌ ಮಾಡಿರಿ:

ವಿಟ್ಲಾಯನದ ಕೊನೆಯ ದಿನ

 ವಿಟ್ಲ ರಥೋತ್ಸವ ಸಂಭ್ರಮ

ವಿಟ್ಲ ಜಾತ್ರೆ ಬಯ್ಯದ ಬಲಿ

 ವಿಟ್ಲಾಯನ ವೈಭವ

ವಿಟ್ಲ ಜಾತ್ರೋತ್ಸವ ಸಂಭ್ರಮ

Sunday, January 22, 2023

ವಿಟ್ಲಾಯನದ ಕೊನೆಯ ದಿನ

ವಿಟ್ಲಾಯನದ ಕೊನೆಯ ದಿನ

೨೦೨೩ ಜನವರಿ ೨೨ ಭಾನುವಾರ. ಇಂದು ದಕ್ಷಿಣ ಕನ್ನಡ ಜಿಲ್ಲೆ ವಿಟ್ಲದ ಶ್ರೀ ಪಂಚಲಿಂಗೇಶ್ವರನ ಜಾತ್ರೋತ್ಸವದ ಕೊನೆಯ ದಿನ. 

ಶನಿವಾರ ʼಬೆಡಿʼಯ ಮಧ್ಯೆ ಮಹಾರಥೋತ್ಸವದ ಬಳಿಕ ಬೀದಿ ಮೆರವಣಿಗೆ ಶಯನೋತ್ಸವ ನಡೆದು ವಿಶ್ರಾಂತಿ ಪಡೆಯುವ ದೇವರನ್ನು ಭಾನುವಾರ ಈದಿನ ಬೆಳಗ್ಗೆ ಎಬ್ಬಿಸಿ ಕವಟೋದ್ಘಾಟನೆ , ಬಳಿಕ ಮಹಾಪೂಜೆ ನಡೆಯುತ್ತದೆ. ಈ ವೇಳೆಯಲ್ಲಿ ಬಟ್ಲು ಕಾಣಿಕೆ, ತುಲಾಭಾರ ಸೇವೆ ನಡೆಯುತ್ತದೆ. 

ಓಕುಳಿಕಟ್ಟೆಯಲ್ಲಿ ಕಟ್ಟೆ ಪೂಜೆಗಾಗಿ ದೇವಾಲಯದ ಒಳಗಿನಿಂದ ಹೊರ ಬರುತ್ತಿರುವ ದೃಶ್ಯದ ವಿಡಿಯೋ ಇಲ್ಲಿದೆ:


ರಾತ್ರಿ ದೇವಸ್ಥಾನದ ಒಳಗಿನ ಬಲಿಯ ಬಳಿಕ ಹೊರಗೆ ಓಕುಳಿ ಕಟ್ಟೆಯಲ್ಲಿ ಕಟ್ಟೆ ಪೂಜೆ. ಕಟ್ಟೆ ಪೂಜೆಯ ಬಳಿಕ ಶ್ರೀವರಿಗೆ ಅಷ್ಟಾವಧಾನ ಸೇವೆ. ಅಲ್ಲಿಂದ ಕೊಡಂಗಾಯಿಗೆ ಅವಭೃತ ಸ್ನಾನಕ್ಕೆ ಸವಾರಿ,

ಈ ಸವಾರಿಯಲ್ಲಿ ಪ್ರಾಥಮಿಕ ಶಾಲೆ, ಕೂಡೂರು ಕಟ್ಟೆ, ನೆತ್ರಕೆರೆ ಕಟ್ಟೆಗಳು, ಕಡಂಬು ಕಟ್ಟೆ ಸೇರಿದಂತೆ ವಿವಿಧ ಕಟ್ಟೆಗಳಲ್ಲಿ ಕಟ್ಟೆ ಪೂಜೆಗಳು ನಡೆಯುತ್ತದೆ. ಇಲ್ಲಿನ ಭಕ್ತಾದಿಗಳು ತಮ್ಮ ತಮ್ಮ ಪ್ರದೇಶದ ಕಟ್ಟೆಗೆ ಬರುವ ದೇವರನ್ನು ಸಂಭ್ರಮೋತ್ಸಾಹದೊಂದಿಗೆ ಸ್ವಾಗತಿಸಿ, ಪೂಜೆ ನೀಡಿ ಬೀಳ್ಕೊಡುತ್ತಾರೆ.

ಕೊಡಂಗಾಯಿಯಲ್ಲಿ ಅವಭೃತ ಸ್ನಾನದ ಬಳಿಕ ಮರಳಿ ದೇವಸ್ಥಾನಕ್ಕೆ ವಾಪಸ್.‌ ಬರುವಾಗ ಪುನಃ ಭಕ್ತಾದಿಗಳಿಂದ ಅಲ್ಲಲ್ಲಿ ಪೂಜೆ ಮಂಗಳಾರತಿ. ಕೊನೆಗೆ ಧ್ವಜಾವರೋಹಣ, ಸಂಪ್ರೋಕ್ಷಣೆಯೊಂದಿಗೆ ವಿಟ್ಲ ಜಾತ್ರೆಗೆ ತೆರೆ.


ಇಲ್ಲಿ ಶನಿವಾರದ ಮಹಾರಥೋತ್ಸವದ ಚಿತ್ರ ಹಾಗೂ ʼಬೆಡಿʼ ಸಂಭ್ರಮದ ವಿಡಿಯೋವನ್ನು ನೋಡಬಹುದು. (ಚಿತ್ರ, ವಿಡಿಯೋ ಕೃಪೆ: ವಿಟ್ಲ ಸುದ್ದಿಗಳು ವಾಟ್ಸಪ್‌ ಗ್ರೂಪ್).

ವಿಟ್ಲ ಜಾತ್ರೆಯ ಹಿಂದಿನ ಸುದ್ದಿಗಳನ್ನು ಕೆಳಗೆ ಕ್ಲಿಕ್‌ ಮಾಡಿರಿ:

 ವಿಟ್ಲ ರಥೋತ್ಸವ ಸಂಭ್ರಮ

ವಿಟ್ಲ ಜಾತ್ರೆ ಬಯ್ಯದ ಬಲಿ

 ವಿಟ್ಲಾಯನ ವೈಭವ

ವಿಟ್ಲ ಜಾತ್ರೋತ್ಸವ ಸಂಭ್ರಮ

Saturday, January 21, 2023

ವಿಟ್ಲ ರಥೋತ್ಸವ ಸಂಭ್ರಮ

 ವಿಟ್ಲ ರಥೋತ್ಸವ ಸಂಭ್ರಮ


ದಕ್ಷಿಣ ಕನ್ನಡ ಜಿಲ್ಲೆ ಬಂಟ್ವಾಳ ತಾಲೂಕಿನ ವಿಟ್ಲದ ಶ್ರೀ ಪಂಚಲಿಂಗೇಶ್ವರ ದೇವಸ್ಥಾನದ ರಥೋತ್ಸವ ೨೦೨೩ ಜನವರಿ ೨೧ರ ಶನಿವಾರ ವಿಜೃಂಭಣೆಯಿಂದ ನಡೆಯುತ್ತಿದೆ. 

ರಥೋತ್ಸವದ ದಿನ ಇಡೀ ಊರ ಮಂದಿಯ ಕೊಡುಗೆಯೊಂದಿಗೆ ನಡೆಯುವ ʼಬೆಡಿʼ - ಪಟಾಕಿಯ ಸಂಭ್ರಮದ ಎಲ್ಲರ ಕಣ್ಮನ ಸೆಳೆಯುತ್ತದೆ.

ಅದಕ್ಕೂ ಮುನ್ನ ಈವರೆಗೆ ನಡೆದ ಬಯ್ಯದ ಬಲಿ, ಕೆರೆ ಆಯನ, ಹೂ ತೇರು, ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳ ವಿಡಿಯೋಗಳು ಇಲ್ಲಿವೆ. ವಿಡಿಯೋ, ಚಿತ್ರ ಕೃಪೆ: ವಿಟ್ಲ ಸುದ್ದಿಗಳು ವಾಟ್ಸಪ್‌ ಗ್ರೂಪ್, ಸದಾಶಿವ ಶಿಲ್ಪಿ ಸ್ಟುಡಿಯೋ, ನಮ್ಮ ನ್ಯೂಸ್‌ ಇತ್ಯಾದಿ.  

ನಡು ದೀಪೋತ್ಕೆಸವ ಕೆರೆ ಆಯನ, ಸಾಂಸ್ಕೃತಿಕ ಕಾರ್ಯಕ್ರಮಗಳ ಸಂಭ್ರಮ ನೋಡಲು ಕೆಳಗೆ ಕ್ಲಿಕ್‌ ಮಾಡಿರಿ:


ಪಂಚಲಿಂಗೇಶ್ವರ ದೇವರು ʼಹೂ ತೇರುʼ ಏರು ಮುನ್ನ....



ಜಾತ್ರಾ ಸಂಭ್ರಮದ ಇನ್ನೊಂದು ದೃಶ್ಯ.


ಬಯ್ಯದ ಬಲಿ ಸಂದರ್ಭದಲ್ಲಿ ದೇವರ ಸಮೀಪ ದೃಶ್ಯಗಳನ್ನು ನೋಡಿ:

Thursday, January 19, 2023

ವಿಟ್ಲ ಜಾತ್ರೆ ಬಯ್ಯದ ಬಲಿ

ವಿಟ್ಲ ಜಾತ್ರೆ ಬಯ್ಯದ ಬಲಿ


ದಕ್ಷಿಣ ಕನ್ನಡ ಜಿಲ್ಲೆ ಬಂಟ್ವಾಳ ತಾಲೂಕಿನ ವಿಟ್ಲದ ಶ್ರೀ ಪಂಚಲಿಂಗೇಶ್ವರ ದೇವಸ್ಥಾನದ ಜಾತ್ರೆಯಲ್ಲಿ ಐದನೇ ದಿನ ವಿಶೇಷ. ಇಲ್ಲಿಯವರೆ ಸಣ್ಣ ತೇರಿನಲ್ಲಿ ದೇವರ ಉತ್ಸವ ನಡೆದರೆ ʼಬಯ್ಯದ ಬಲಿʼ ಎಂಬುದಾಗಿ ಕರೆಯಲಾಗುವ ಐದನೇ ದಿನ ದೇವರು ದೊಡ್ಡ ರಥವನ್ನು ಏರಿ ಸವಾರಿ ಮಾಡುವುದು ವಿಶೇಷ. ಈ ದಿನದ ಸಂಭ್ರಮ ಕೂಡಾ ಹಿಂದಿನ ನಾಲ್ಕು ದಿನಗಳ ಸಂಭ್ರಮಕ್ಕಿಂತ ಹೆಚ್ಚು.

ಈದಿನ ವಿಟ್ಲ ಸಮೀಪದ ಕೇಪುವಿನಿಂದ ಶ್ರೀ ಮಲರಾಯ ದೈವದ ಭಂಡಾರ ವಿಟ್ಲ ಶ್ರೀ ಪಂಚಲಿಂಗೇಶ್ವರ ದೇವಸ್ಥಾನಕ್ಕೆ ಬರುತ್ತದೆ. ವಿಟ್ಲದ ʼಬಯ್ಯದ ಬಲಿʼ ಉತ್ಸವ ಸಂಭ್ರಮ ಶ್ರೀ ಮಲರಾಯ ದೈವದ ಭಂಡಾರ ಆಗಮನದೊಂದಿಗೆ ಶುರುವಾಗುತ್ತದೆ.

ʼಬಯ್ಯದ  ಬಲಿʼ ಸಂಭ್ರಮವನ್ನು ಈ ಕೆಳಗಿನ ವಿಡಿಯೋಗಳಲ್ಲಿ ನೋಡಿ. ಚಿತ್ರ ವಿಡಿಯೋ ಕೃಪೆ: ವಿಟ್ಲ ಸುದ್ದಿಗಳು ವಾಟ್ಸಪ್‌ ಗ್ರೂಪ್‌, ವಿಟಿವಿ. 

ಕೇಪುವಿನಿಂದ ಶ್ರೀ ಮಲರಾಯ ದೈವದ ಭಂಡಾರ ಆಗಮನ ಮತ್ತು ಜಾತ್ರಾ ವೈಭವದ ವೀಕ್ಷಣೆಗೆ ಕೆಳಗಿನ ಚಿತ್ರ ಕ್ಲಿಕ್‌ ಮಾಡಿ.

ಜಾತ್ರೆಯ ಮೊದಲ ದಿನ ಅಂದರೆ ಲಕ್ಷ ದೀಪೋತ್ಸವದ ದಿನ ನಡೆದ ರುದ್ರಯಾಗ ಮತ್ತು ಜಾತ್ರೆಯ ವೈಭವದ ಇನ್ನೊಂದು ವಿಡಿಯೋ ಇಲ್ಲಿದೆ. ಕೃಪೆ: ನಮ್ಮ ನ್ಯೂಸ್

Sunday, January 15, 2023

ವಿಟ್ಲಾಯನ ವೈಭವ

 ವಿಟ್ಲಾಯನ ವೈಭವ


ದಕ್ಷಿಣ ಕನ್ನಡ ಜಿಲ್ಲೆ ಬಂಟ್ವಾಳ ತಾಲೂಕಿನ ವಿಟ್ಲದ ಶ್ರೀ ಪಂಚಲಿಂಗೇಶ್ವರ ದೇವಸ್ಥಾನದ ವರ್ಷಾವಧಿ ಜಾತ್ರೆಯ ಎರಡನೇ ದಿನವಾದ ೨೦೨೩ ಜನವರಿ ೧೫ರ ಭಾನುವಾರ ಸಂಜೆ ಪಂಚಲಿಂಗೇಶ್ವರನ ನಿತ್ಯೋತ್ಸವ -ರಥೋತ್ಸವ ಜರುಗಿತು. 

ಪುಟ್ಟ ತೇರಿನಲ್ಲಿ ರಥೋತ್ಸವ ಮುಗಿದ ಬಳಿಕ ದೇವಾಲಯದ ಹೊರಾವರಣ ಕಟ್ಟೆಯಲ್ಲಿ ದೇವರ ಪೂಜೆ ನೆರವೇರಿತು.

ಈ ಸಂದರ್ಭದ ದೃಶ್ಯಗಳು ವಿಡಿಯೋದಲ್ಲಿ ಮೂಡಿಬಂದದ್ದು ಹೀಗೆ: ವಿಡಿಯೋ ಕೃಪೆ: ವಿಟ್ಲ ಸುದ್ದಿಗಳು ವಾಟ್ಸಪ್‌ ಗ್ರೂಪ್. ವಿಡಿಯೋ ಕ್ಲಿಕ್ಲಿಸಿದವರು: ನೆತ್ರಕೆರೆ ಶ್ಯಾಮ್‌ .

ವಿಡಿಯೋ ನೋಡಲು ಕೆಳಗೆ ಕ್ಲಿಕ್‌ ಮಾಡಿರಿ:




ವಿಟ್ಲ ಜಾತ್ರೋತ್ಸವ ಸಂಭ್ರಮ

 ವಿಟ್ಲ ಜಾತ್ರೋತ್ಸವ ಸಂಭ್ರಮ


ದಕ್ಷಿಣ ಕನ್ನಡ ಜಿಲ್ಲೆ ಬಂಟ್ವಾಳ ತಾಲೂಕಿನ ವಿಟ್ಲದಲ್ಲಿ ಸಹಸ್ರಾರು ವರ್ಷಗಳಷ್ಟು ಪುರಾತನವಾದ ಶ್ರೀ ಪಂಚಲಿಂಗೇಶ್ವರ ದೇವಸ್ಥಾನದ ಜಾತ್ರೋತ್ಸವ ಸಂಭ್ರಮ ೨೦೨೩ ಜನವರಿ ೧೪ರ ಶನಿವಾರ ಮಕರ ಸಂಕ್ರಾಂತಿಯೊಂದಿಗೆ ಆರಂಭವಾಗಿದೆ.

ʼವಿಟ್ಲಾಯನʼ ಎಂಬುದಾಗಿಯೇ ಖ್ಯಾತವಾಗಿರುವ  ವಿಟ್ಲ ಜಾತ್ರೆಯ ಮೊದಲ ದಿನದ ಧ್ವಜಾರೋಹಣ, ಲಕ್ಷದೀಪೋತ್ಸವ  ಸಂಭ್ರಮದ ಕೆಲವು ದೃಶ್ಯಗಳು ಇಲ್ಲಿವೆ. ಚಿತ್ರ ಹಾಗೂ  ವಿಡಿಯೋ ಕೃಪೆ: ವಿಟ್ಲ ಸುದ್ದಿಗಳು ವಾಟ್ಸಪ್‌ ಗ್ರೂಪಿನ ಶ್ಯಾಮ್‌ ನೆತ್ರಕೆರೆ, ಸದಾಶಿವ "ಶಿಲ್ಪಿʼ ವಿಟ್ಲ.









 ಸಂಜೆ ಭಜನಾ ತಂಡಗಳ ಜೊತೆಗೆ ನಡೆದ ಉಲ್ಪೆ ಮೆರವಣಿಗೆ ಮತ್ತು ಹಸಿರುವಾಣಿ ಮೆರವಣಿಗೆ ಸಂಭ್ರಮದ  ವಿಡಿಯೋ  l ಇಲ್ಲಿದೆ.  ಕೃಪೆ : ವಿಟಿವಿ, ವಿಟ್ಲ. ಕೆಳಗಿನ ಚಿತ್ರ ಕ್ಲಿಕ್‌ ಮಾಡಿರಿ:

Saturday, August 13, 2022

ನೇತ್ರದಾನ ಮೂಲಕ ಸಾರ್ಥಕತೆ ಪಡೆದ ಮನುಭಟ್‌

 ನೇತ್ರದಾನ ಮೂಲಕ ಸಾರ್ಥಕತೆ ಪಡೆದ ಮನುಭಟ್‌

2022 ಆಗಸ್ಟ್‌ 13ರ ಶನಿವಾರ. ಅಂತಾರಾಷ್ಟ್ರೀಯ ಅಂಗಾಂಗದಾನದ ದಿನ. ಅಂಗಾಂಗ ದಾನಕ್ಕೆ ಪ್ರೇರೇಪಣೆ ಮೂಡಿಸಲೆಂದೇ ಇರುವ ದಿನ.

ಈ ಹೊತ್ತಿನಲ್ಲಿ ಈ ಹುಡುಗನನ್ನು ನೆನಪಿಸಿಕೊಳ್ಳಬೇಕು.

ಈತ ವಿಟ್ಲದ  ಮನು ಭಟ್‌ ಪೂರ್ಲುಪಾಡಿ. ವಯಸ್ಸು 27 ವರ್ಷ. ಆದರೆ ಬುದ್ದಿ ಕೇವಲ ಒಂದೂ ಮುಕ್ಕಾಲು ವರ್ಷದ ಮಗುವಿನದ್ದು. ಹೀಗಾಗಿ ಈತ ಪುಟ್ಟ ಬಾಲಕನೂ ಹೌದು, ಯುವಕನೂ ಹೌದು.

ಚಿಕ್ಕವನಾಗಿದ್ದಾಗ ಬಂದಿದ್ದ ಮಿದುಳು ಜ್ವರ ಈತನ ಬುದ್ದಿಯ ಬೆಳವಣಿಗೆಯನ್ನೇ ಸ್ಥಗಿತಗೊಳಿಸಿತ್ತು. ಆತನ ಚಿಕಿತ್ಸೆಗಾಗಿ ಪಟ್ಟ ಕಷ್ಟ ಅಷ್ಟಿಷ್ಟಲ್ಲ. ಆದರೆ ಅದ್ಯಾವುದೂ ಪ್ರಯೋಜನವಾಗಲಿಲ್ಲ.

ಬದುಕಿ ಬಾಳಿದ ಅಷ್ಟೂ ಕಾಲ ನಿರಂತರವಾಗಿ ಅಮ್ಮ, ದೊಡ್ಡಮ್ಮ, ಅಜ್ಜಿ, ಚಿಕ್ಕಮ್ಮ, ಅಕ್ಕ, ಅಣ್ಣಂದಿರ ಕೈಕೂಸಾಗಿಯೇ ಬದುಕಿದ.

ಯಾರು ಬಂದರೂ ಸರಿ ಮುಗ್ಧ ನಗುವಿನಿಂದ ಗಮನ ಸೆಳೆಯುತ್ತಿದ್ದ ಈತ ಆಸುಪಾಸಿನ ಮಕ್ಕಳಿಗೆಲ್ಲ ಅಚ್ಚುಮೆಚ್ಚು. ಪ್ರತಿವರ್ಷವೂ ಹುಟ್ಟು ಹಬ್ಬ ಬಂದರೆ ಸಾಕು ಈ ಓರಗೆಯ ಮಕ್ಕಳೆಲ್ಲ ಒಂದಾಗಿ ಆತನ ಹುಟ್ಟು ಹಬ್ಬ ಆಚರಿಸುತ್ತಿದ್ದರು. ಸಂಭ್ರಮಿಸುತ್ತಿದ್ದರು. (ವಿಡಿಯೋ ನೋಡಿ)

1994ರ ಏಪ್ರಿಲ್‌ 24ರಂದು ಜನಿಸಿದ್ದ ಈತ 2022ರ ಜುಲೈ 18ರಂದು ಇಹಲೋಕ ತ್ಯಜಿಸಿದ. ನಾಲ್ಕು ವರ್ಷಗಳ ಹಿಂದೆ ಹೆಚ್ಚು ಕಡಿಮೆ ತನ್ನಷ್ಟೇ ವಯಸ್ಸಿನಲ್ಲಿ ದೇವರ ಜೊತೆ ಸೇರಿಕೊಂಡ ಪ್ರೀತಿಯ ಅಣ್ಣ ಅನುಪಕೃಷ್ಣನ ಜೊತೆ ಸೇರಿಕೊಂಡ. ನಾಲ್ಕು ವರ್ಷಗಳ ಹಿಂದೆ ಈತನ ಅಣ್ಣನೂ ಜುಲೈ ತಿಂಗಳ 5ರಂದು ಭಗವಂತನ ಮಡಿಲು ಸೇರಿದ್ದ.

ಮಣಿಪಾಲದ ಕೆಎಂಸಿ ಆಸ್ಪತ್ರೆಯಲ್ಲಿ ದೇಹ ತ್ಯಾಗ ಮಾಡಿದ ಮನುವಿನ ಕಣ್ಣುಗಳು ಕುಟುಂಬ ಸದಸ್ಯರ ಆಶಯದಂತೆ ಬೇರೊಬ್ಬರ ಬಾಳಿಗೆ ಬೆಳಕಾಗುವ ಸಲುವಾಗಿ ವೈದ್ಯರ ಬಳಿ ಸೇರಿದವು.

ನೇತ್ರ ದಾನದ ಮೂಲಕ ಮನುಭಟ್‌ ಜೀವನ ಸಾರ್ಥಕತೆ ಪಡೆಯಿತು.

ಅಂಗಾಂಗದಾನದ ಈದಿನ ಮನುವಿನ ಆತ್ಮಕ್ಕೆ ಶಾಂತಿ ಕೋರುವುದರ ಜೊತೆಗೆ ಆತನ ಜೀವನ ಸಾರ್ಥಕವಾದುದಕ್ಕಾಗಿ ಗೌರವ ಸಲ್ಲಿಸೋಣ.

Advertisement