Showing posts with label Priyanka vadhra. Show all posts
Showing posts with label Priyanka vadhra. Show all posts

Monday, August 10, 2020

ಅಶೋಕ ಗೆಹ್ಲೋಟ್ ಪರ ಸಚಿನ್, ಬೆಂಬಲಿಗರ ಮತ?

 ಅಶೋಕ ಗೆಹ್ಲೋಟ್  ಪರ ಸಚಿನ್, ಬೆಂಬಲಿಗರ ಮತ?

ಪ್ರಿಯಾಂಕಾಗೆ ಫೋನ್, ಅಂತಿಮಸೂತ್ರ ಸೋನಿಯಾ ಕೈಯಲ್ಲಿ

ನವದೆಹಲಿ: ರಾಜಸ್ಥಾನ ಉಪಮುಖ್ಯಮಂತ್ರಿ ಸ್ಥಾನ ಮತ್ತು ಪಕ್ಷದ ರಾಜ್ಯ ಘಟಕ ಅಧ್ಯಕ್ಷ ಸ್ಥಾನದಿಂದ ವಜಾಗೊಂಡಿರುವ ಬಂಡಾಯ ನಾಯಕ ಸಚಿನ್ ಪೈಲಟ್ ಮತ್ತು ಅವರ ಬೆಂಬಲಿಗ ಶಾಸಕರು ಆಗಸ್ಟ್ ೧೪ ರಂದು ಆರಂಭವಾಗಲಿರುವ ವಿಧಾನಸಭೆ ಅಧಿವೇಶನದಲ್ಲಿ ವಿಶ್ವಾಸಮತ ಯಾಚನೆ ಪ್ರಕ್ರಿಯೆ ವೇಳೆ ಮುಖ್ಯಮಂತ್ರಿ ಅಶೋಕ ಗೆಹ್ಲೋಟ್ ಪರ ಮತ ಚಲಾಯಿಸುವ ಸಾಧ್ಯತೆಯಿದೆ ಎಂದು ಸುದ್ದಿ ಮೂಲಗಳು ತಿಳಿಸಿದವು.

ಮೂಲಗಳ ಪ್ರಕಾರ, ಪೈಲಟ್ ಅವರು ಕಾಂಗ್ರೆಸ್ ವರಿಷ್ಠರ ಜೊತೆ ಸಂಪರ್ಕದಲ್ಲಿದ್ದಾರೆ ಮತ್ತು ಪ್ರಿಯಾಂಕಾ ಗಾಂಧಿ ವಾದ್ರಾ ಅವರೊಂದಿಗೆ ದೂರವಾಣಿ ಮೂಲಕ ಮಾತನಾಡಿದ್ದಾರೆ.

ಯಾವುದೇ ಕ್ರಮ ತೆಗೆದುಕೊಳ್ಳುವುದಿಲ್ಲ ಎಂದು ವರಿಷ್ಠ ಮಂಡಳಿಯು ಬಂಡಾಯ ನಾಯಕನಿಗೆ ಭರವಸೆ ನೀಡಿದೆ ಮತ್ತು ಅಶೋಕ ಗೆಹ್ಲೋಟ್ ಶಿಬಿರಕ್ಕೆ ಅವರ ಬೆಂಬಲವನ್ನು ಕೋರಿದೆ ಎಂದು ಮೂಲಗಳು ತಿಳಿಸಿವೆ. ಕಾಂಗ್ರೆಸ್ ಮುಖ್ಯಸ್ಥೆ ಸೋನಿಯಾ ಗಾಂಧಿ ಅವರು "ಸಮನ್ವಯದ ಅಂತಿಮ ಸೂತ್ರ" ವನ್ನು ನಿರ್ಧರಿಸಲಿದ್ದಾರೆ ಎಂದು ಹೇಳಲಾಗಿದೆ.

ಅಶೋಕ ಗೆಹ್ಲೋಟ್ ವಿರುದ್ಧ ಬಹಿರಂಗ ಬಂಡಾಯ ಘೋಷಿಸಿ, ೧೮ ಶಾಸಕರೊಂದಿಗೆ ತಮ್ಮ ಸರ್ಕಾರದ ಕೈಬಿಟ್ಟ ಪೈಲಟ್, ಕಳೆದ ತಿಂಗಳು ಕಾಂಗ್ರೆಸ್ ಶಾಸಕಾಂಗ ಪಕ್ಷದ ಸಭೆಗಳಿಗೆ ಹಾಜರಾಗದ ಕಾರಣ ಉಪಮುಖ್ಯಮಂತ್ರಿ ಮತ್ತು ರಾಜ್ಯ ಕಾಂಗ್ರೆಸ್ ಅಧ್ಯಕ್ಷ ಸ್ಥಾನದಿಂದ ವಜಾಗೊಂಡಿದ್ದರು.

ಪೈಲಟ್ ಶಿಬಿರದಲ್ಲಿ ಇದ್ದ ಇತರ ಇಬ್ಬರು ಮಂತ್ರಿಗಳನ್ನೂ ಕ್ಯಾಬಿನೆಟ್‌ನಿಂದ ಕೈಬಿಡಲಾಯಿತು. ಪಕ್ಷದ ರಾಜಸ್ಥಾನ ಘಟಕದ ಅಧ್ಯಕ್ಷರಾಗಿ ಗೋವಿಂದ್ ಸಿಂಗ್ ದೋಟಾಸರ ಅವರನ್ನು ಕಾಂಗ್ರೆಸ್ ನೇಮಿಸಿತು.

ಕಾಂಗ್ರೆಸ್ ಸರ್ಕಾರವನ್ನು ಉರುಳಿಸುವ ಸಂಚು ಆಪಾದನೆಯ ಹಿನ್ನೆಲೆಯಲ್ಲಿ ರಾಜಸ್ಥಾನ ಪೊಲೀಸರು ತಮಗೆ ಕಳುಹಿಸಿದ ನೋಟಿಸ್ ಬಗ್ಗೆ ಪೈಲಟ್ ತೀವ್ರ ಅಸಮಾಧಾನಗೊಂಡಿದ್ದರು ಎಂದು ಸಚಿನ್ ಬೆಂಬಲಿಗರು ಹೇಳಿದ್ದರು.

ಹೇಳಿಕೆ ದಾಖಲಿಸಿಕೊಳ್ಳುವ ಸಲುವಾಗಿ ಕಾಲಾವಕಾಶ ನೀಡುವಂತೆ ವಿಶೇಷ ಕಾರ್ಯಾಚರಣೆ ಗುಂಪು (ಎಸ್‌ಒಜಿ) ಸಚಿನ್ ಅವರಿಗೆ ನೋಟಿಸ್ ಕಳಿಸಿತ್ತು.

ಅದೇ ನೋಟಿಸುಗಳನ್ನು ಮುಖ್ಯಮಂತ್ರಿ ಗೆಹ್ಲೋಟ್, ಸರ್ಕಾರಿ ಮುಖ್ಯ ಸಚೇತಕ ಮಹೇಶ್ ಜೋಶಿ ಮತ್ತು ಇತರ ಕೆಲವು ಶಾಸಕರಿಗೆ ಕಳುಹಿಸಲಾಗಿತ್ತು. ಆದರೆ ಪೈಲಟ್ ಅವರನ್ನು ಅವಮಾನಿಸುವುದಕ್ಕಾಗಿಯೇ ಕ್ರಮ ಕೈಗೊಳ್ಳಲಾಗಿತ್ತು ಎಂದು ಸಚಿನ್ ಪೈಲಟ್ ಆಪ್ತರು ದೂರಿದ್ದರು.

Sunday, January 5, 2020

‘ಭೀತಿ ಸಾಮ್ರಾಜ್ಯ’ದಲ್ಲಿ ಸುತ್ತಾಡಿದ ಪ್ರಿಯಾಂಕಾ ಗಾಂಧಿ ವಾದ್ರಾ

‘ಭೀತಿ ಸಾಮ್ರಾಜ್ಯದಲ್ಲಿ ಸುತ್ತಾಡಿದ  ಪ್ರಿಯಾಂಕಾ  ಗಾಂಧಿ  ವಾದ್ರಾ
ಮುಜಾಫ್ಫರನಗರ ಸಂತ್ರಸ್ಥರ ಭೇಟಿ, ಪೊಲೀಸ್ ದೌರ್ಜನ್ಯಕ್ಕೆ ಖಂಡನೆ
ಮೀರತ್: ಕಾಂಗ್ರೆಸ್ ನಾಯಕಿ ಪ್ರಿಯಾಂಕಾ ಗಾಂಧಿ ವಾದ್ರಾ ಅವರು 2020 ಜನವರಿ 04ರ  ಶನಿವಾರ ಉತ್ತರಪ್ರದೇಶದ ಪಶ್ಚಿಮಭಾಗದ ಮುಜಾಫ್ಫರನಗರದಲ್ಲಿ ಕಳೆದ ತಿಂಗಳಲ್ಲಿ ಪೌರತ್ವ ತಿದ್ದುಪಡಿ ಕಾಯ್ದೆ ವಿರೋಧೀ ಪ್ರತಿಭಟನೆಗಳ ವೇಳೆಯಲ್ಲಿ ಮೃತರಾದವರು, ಗಾಯಗೊಂಡವರು ಮತ್ತು ಬಂಧನಕ್ಕೆ ಒಳಗಾದವರ ಮನೆಗಳಿಗೆ ಭೇಟಿ ನೀಡಿ ಅವರ ಜೊತೆಗೆ ಮಾತುಕತೆ ನಡೆಸಿದರು.

ಪೂರ್ವ ಉತ್ತರಪ್ರದೇಶದ ಉಸ್ತುವಾರಿ ವಹಿಸಿರುವ ಪಕ್ಷದ ಪ್ರಧಾನ ಕಾರ್ಯದರ್ಶಿ ಮೀರತ್ ಹೊರವಲಯದಲ್ಲಿ ಡಿಸೆಂಬರ್ ೨೦ರಂದು ನಡೆದ ಪ್ರತಿಭಟನೆ ಕಾಲದಲ್ಲಿ ಮೃತರಾದ ವ್ಯಕ್ತಿಗಳ ಸಂಬಂಧಿಗಳನ್ನು ಭೇಟಿ ಮಾಡಿದರು. ಮುನ್ನ ಅವರಿಗೆ ಮೃತರ ಬಂಧುಗಳ ಭೇಟಿಗೆ ಅವಕಾಶ ನಿರಾಕರಿಸಲಾಗಿತ್ತು.

ಪ್ರಿಯಾಂಕಾ ಅವರು ದೆಹಲಿಗೆ ವಾಪಸಾಗುವ ಮಾರ್ಗದಲ್ಲಿ ಬೈಪಾಸ್ ರಸ್ತೆಯಲ್ಲಿ ಐವರು ಮೃತರ ಕುಟುಂಬಗಳ ಜೊತೆ ಮಾತನಾಡಿದರು ಎಂದು ಮೀರತ್ ನಗರ ಕಾಂಗ್ರೆಸ್ ಘಟಕದ ಮುಖ್ಯಸ್ಥ ಜಹೀದ್ ಅನ್ಸಾರಿ ಹೇಳಿದರು.

ಪ್ರಿಯಾಂಕಾಗಾಂಧಿ ಅವರು ಮುಜಾಫ್ಫರನಗರಕ್ಕೆ ಶನಿವಾರ ಬೆಳಗ್ಗೆ ಆಗಮಿಸಿ ಮೀನಾಕ್ಷಿ ಚೌಕದ ಬಳಿ ಮದ್ರಸಾ ಹೊಜ್ ಇಲ್ಮಿಯಾ ನಡೆಸುವ ಮೌಲಾನಾ ಅಸದ್ ಹುಸೈನಿ ಅವರನ್ನು ಭೇಟಿ ಮಾಡಿದರು. ಪೌರತ್ವ ತಿದ್ದುಪಡಿ ಕಾಯ್ದೆ ವಿರೋಧಿ ಪ್ರತಿಭಟನೆ ವೇಳೆಯಲ್ಲಿ ಇದೇ ಚೌಕದಲ್ಲಿ ಹಿಂಸಾಚಾರ ಭುಗಿಲೆದ್ದಿತ್ತು.

ಸಂತ್ರಸ್ಥರೆಲ್ಲರೂ ಪೊಲೀಸರು ಭೀತಿಯ ಸಾಮ್ರಾಜ್ಯ ಸೃಷ್ಟಿಸಿದ್ದಾರೆ ಮತ್ತು ಮಾಡದ ತಪ್ಪುಗಳಿಗಾಗಿ ತಮ್ಮನ್ನು ಥಳಿಸುತ್ತಿದ್ದಾರೆ ಎಂದು ಆಪಾದಿಸಿದರುಎಂದು ಹುಸೈನಿ ಮತ್ತು ಇತರ ಸಂತ್ರಸ್ಥರ ಜೊತೆಗಿನ ಮಾತುಕತೆಯ ಬಳಿಕ ಪ್ರಿಯಾಂಕಾ ಅವರು ಹೇಳಿದರು. ಪೊಲೀಸರು ಮದ್ರಸಾವನ್ನು ಪ್ರವೇಶಿಸಿ ಮೌಲಾನಾ ಮತ್ತು ಅವರ ವಿದ್ಯಾರ್ಥಿಗಳನ್ನು ಥಳಿಸಿದರು ಎಂದು ಪ್ರಿಯಾಂಕಾ ನುಡಿದರು.

ಪೊಲೀಸರಿಂದ ಕ್ರೂರವಾಗಿ ಥಳಿಸಲ್ಪಟ್ಟ ಮೌಲಾನಾ ಅಸದ್ ಹುಸೈನಿ ಅವರನ್ನು ನಾನು ಭೇಟಿ ಮಾಡಿದ್ದೇನೆ. ಅಪ್ರಾಪ್ತರೂ ಸೇರಿದಂತೆ ಮದ್ರಸಾದ ವಿದ್ಯಾರ್ಥಿಗಳನ್ನು ಯಾವ ಕಾರಣವೂ ಇಲ್ಲದೆ ಪೊಲೀಸರು ವಶಕ್ಕೆ ತೆಗೆದುಕೊಂಡಿದ್ದಾರೆ. ಅವರಲ್ಲಿ ಕೆಲವರನ್ನು ಬಿಡುಗಡೆ ಮಾಡಲಾಗಿದೆ, ಕೆಲವರು ಇನ್ನೂ ಪೊಲೀಸರ ವಶದಲ್ಲೇ ಇದ್ದಾರೆಎಂದು ಅವರು ವರದಿಗಾರರ ಜೊತೆ ಮಾತನಾಡುತ್ತಾ ಹೇಳಿದರು.

ಪ್ರಿಯಾಂಕಾ ಗಾಂಧಿ ಅವರು ಪ್ರತಿಭಟನೆಗಳ ಕಾಲದಲ್ಲಿ ಸಾವನ್ನಪ್ಪಿದ ನೂರ್ ಮೊಹಮ್ಮದ್ ಮನೆಗೂ ಭೇಟಿ ನೀಡಿದರು. ಒಂದೂವರೆ ವರ್ಷದ ಮಗಳನ್ನೂ ಹೊಂದಿರುವ ಮೃತ ನೂರ್ ಮೊಹಮ್ಮದ್ ಅವರ ಏಳು ತಿಂಗಳ ಗರ್ಭಿಣಿ ಪತ್ನಿ ಜೊತೆಗೂ ಪ್ರಿಯಾಂಕಾ ಮಾತನಾಡಿದರು.

ಶನಿವಾರ
ಮದುವೆಗೆ ಸಜ್ಜಾಗುತ್ತಿದ್ದ ರುಕಿಯಾ ಜೊತೆಗೂ ಪ್ರಿಯಾಂಕಾ ಮಾತನಾಡಿದರು. ಆಕೆಯ ಮನೆಯನ್ನು ಧ್ವಂಸಗೊಳಿಸಿದ ಪೊಲೀಸರು ಮದುವೆಗಾಗಿ ತಂದಿದ್ದ ಸಾಮಗ್ರಿಯನ್ನೂ ಹಾನಿಪಡಿಸಿದ್ದರು.

ಪ್ರತಿಭಟನೆ
ಕಾಲದಲ್ಲಿ ನಡೆದ ಪೊಲೀಸ್ ದೌರ್ಜನ್ಯಗಳನ್ನು ವಿವರಿಸಿ ರಾಜ್ಯಪಾಲರಾದ ಆನಂದಿಬೆನ್ ಪಟೇಲ್ ಅವರಿಗೆ ತಾವು ಮನವಿಯೊಂದನ್ನು ಸಲ್ಲಿಸಿರುವುದಾಗಿ ಪ್ರಿಯಾಂಕಾ ಹೇಳಿದರು.

ತಾನು ಮತ್ತು ತಮ್ಮ ಕಾಂಗ್ರೆಸ್ ಪಕ್ಷವು ಸಂತ್ರಸ್ಥರು ಮತ್ತು ಅವರ ಕುಟುಂಬಗಳ ಪರವಾಗಿ ಸದಾಕಾಲವೂ ನಿಲ್ಲುವ ಬದ್ಧತೆಯನ್ನು ಪುನರುಚ್ಚರಿಸಿದ ಪ್ರಿಯಾಂಕಾ, ಜನರಿಗೆ ಅನ್ಯಾಯವಾದ ಪ್ರತಿಸ್ಥಳಕ್ಕೂ ಹೋಗುವುದಾಗಿ ಹೇಳಿದರು.

ಪ್ರಿಯಾಂಕಾ
ಗಾಂಧಿ ಮತ್ತು ಅವರ ಸಹೋದರ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಅವರು ಡಿಸೆಂಬರ್ ಕೊನೆಯ ವಾರ ಸಂತ್ರಸ್ಥರ ಕುಟುಂಬಗಳನ್ನು ಭೇಟಿ ಮಾಡಲು ಯತ್ನಿಸಿದ್ದರು. ಆದರೆ ಅವರಿಗೆ ಅನುಮತಿ ನಿರಾಕರಿಸಿ ನಗರದ ಹೊರವಲಯದಿಂದಲೇ ವಾಪಸ್ ಕಳುಹಿಸಲಾಗಿತ್ತು.

ಲಕ್ನೋ ಮತ್ತು ಬಿಜ್ನೋರಿನಲ್ಲಿ ಹಿಂಸಾತ್ಮಕ ಪ್ರತಿಭಟನೆ ಕಾಲದಲ್ಲಿ ಮೃತರಾದವರು, ಗಾಯಾಳುಗಳು ಅಥವಾ ಬಂಧನಕ್ಕೆ ಒಳಗಾದವರ ಕುಟುಂಬ ಸದಸ್ಯರನ್ನು ಪ್ರಿಯಾಂಕಾ ಗಾಂಧಿ ಭೇಟಿ ಮಾಡುತ್ತಿದ್ದಾರೆ.

ಹಿಂಸಾತ್ಮಕ ಪ್ರತಿಭಟನೆಗಳ ಕಾಲದಲ್ಲಿ ಉತ್ತರ ಪ್ರದೇಶದಲ್ಲಿ ಪೊಲೀಸರೊಂದಿಗೆ ನಡೆದ ಘರ್ಷಣೆಗಳ ವೇಳೆಯಲ್ಲಿ ೨೦ಕ್ಕೂ ಹೆಚ್ಚು ಮಂದಿ ಸಾವನ್ನಪ್ಪಿದ್ದು ನೂರಾರು ಮಂದಿ ಗಾಯಗೊಂಡಿದ್ದರು. ಬಳಿಕ ಹಿಂಸಾತ್ಮಕ ಪ್ರತಿಭಟನೆಗಳು ರಾಜ್ಯದ ಇತರ ಹಲವಾರು ಪ್ರದೇಶಗಳಿಗೂ ಹರಡಿತ್ತು.

Sunday, December 29, 2019

ಬಂಧಿತ ಕಾರ್ಯಕರ್ತರ ಮನೆಗೆ ಭೇಟಿ: ಪ್ರಿಯಾಂಕಾ ಗಾಂಧಿಗೆ ತಡೆ

ಬಂಧಿತ ಕಾರ್ಯಕರ್ತರ ಮನೆಗೆ ಭೇಟಿ: ಪ್ರಿಯಾಂಕಾ ಗಾಂಧಿಗೆ ತಡೆ
ಪೊಲೀಸರಿಂದ ಒರಟು ವರ್ತನೆ: ಕಾಂಗ್ರೆಸ್ ನಾಯಕಿ ಆರೋಪ
ನವದೆಹಲಿ: ಉತ್ತರಪ್ರದೇಶದ ಲಕ್ನೋದಲ್ಲಿ ಇಬ್ಬರು ಬಂಧಿತ ಕಾರ್ಯಕರ್ತರ ಕುಟುಂಬ ಸದಸ್ಯರನ್ನು ಭೇಟಿ ಮಾಡಲು ಹೊರಟಿದ್ದ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಪ್ರಿಯಾಂಕಾ ಗಾಂಧಿ ವಾದ್ರಾ ಅವರನ್ನು ತಡೆದ ಪೊಲೀಸರು ಅವರೊಂದಿಗೆ ಒರಟಾಗಿ ವರ್ತಿಸಿದರೆಂದು ಆಪಾದಿಸಲಾದ ನಾಟಕಿಯ ಘಟನೆ 2019 ಡಿಸೆಂಬರ್ 28ರ ಶನಿವಾರ ಘಟಿಸಿತು.

ಪ್ರಿಯಾಂಕಾ
ಅವರು ನಗರದಲ್ಲಿ ನಡೆದ ಪೌರತ್ವ  ತಿದ್ದುಪಡಿ ಕಾಯ್ದೆ ವಿರೋಧಿ ಪ್ರತಿಭಟನೆಯ ವೇಳೆಯಲ್ಲಿ ಬಂಧಿತರಾಗಿದ್ದ ಇಬ್ಬರು ಕಾರ್ಯಕರ್ತರ ಮನೆಗೆ ಭೇಟಿ ನೀಡುವ ಸಲುವಾಗಿ ಹೊರಟಿದ್ದರು.

ಸುದ್ದಿ ಸಂಸ್ಥೆಯ ವರದಿ ಪ್ರಕಾರ ಪ್ರಿಯಾಂಕಾ ಗಾಂಧಿ ಅವರು ಪ್ರತಿಭಟನೆಗಳ ವೇಳೆಯಲ್ಲಿ ಬಂಧಿತರಾದ ಸದಾಫ್ ಜಫರ್ ಮತ್ತು ಮಾಜಿ ಐಪಿಎಸ್ ಅಧಿಕಾರಿ ಎಸ್ಆರ್ ದಾರಾಪುರಿ ಅವರ ಕುಟುಂಬಗಳನ್ನು ಭೇಟಿ ಮಾಡಬಯಸಿದ್ದರು.

ತಾವು ಪಯಣಿಸುತ್ತಿದ್ದ ವಾಹನವನ್ನು ದಿಢೀರನೆ ಅಡ್ಡಗಟ್ಟಲಾಯಿತು ಮತ್ತು ವಾಹನ ಮುಂದಕ್ಕೆ ಹೋಗದಂತೆ ಪೊಲೀಸರು ತಡೆದರು ಎಂದು ಪ್ರಿಯಾಂಕಾ ಗಾಂಧಿ ಹೇಳಿದರು.

ಪೊಲೀಸರ ಮಾತುಗಳನ್ನು  ನಿರ್ಲಕ್ಷಿಸಿ ಪಕ್ಷ ಕಾರ್ಯಕರ್ತರೊಬ್ಬರ ಸ್ಕೂಟರ್ ಏರಿ ನಾನು ಪಯಣ ಮುಂದುವರೆಸಿದೆ. ಸ್ವಲ್ಪ ದೂರ ಹೋಗುತ್ತಿದ್ದಂತೆಯೇ ಸ್ಕೂಟರನ್ನೂ ತಡೆಯಲಾಯಿತು. ನಾನು ಇಳಿದು ನಡೆದುಕೊಂಡು ಹೊರಟೆ. ಆದರೆ ಪ್ರಯೋಜನವಾಗಲಿಲ್ಲ. ಪೊಲೀಸರು ಮತ್ತೆ ಅಡ್ಡಗಟ್ಟಿದರು. ಅಡ್ಡಗಟ್ಟಿದ ಮಹಿಳಾಪೇದೆ ನನ್ನೊಂದಿಗೆ ಒರಟಾಗಿ ನಡೆದುಕೊಂಡರು ಎಂದು ಪ್ರಿಯಾಂಕಾ ದೂರಿದರು.

ಆಕೆ (ಮಹಿಳಾ ಪೇದೆ) ನನ್ನನ್ನು ತಡೆದರು, ನನ್ನನ್ನು ಹಿಡಿದು ಹಿಂದಕ್ಕೆ ತಳ್ಳಿದರು. ಆಕೆ ನನ್ನ ಕತ್ತನ್ನೂ ಹಿಡಿದರುಎಂದು ಪ್ರಿಯಾಂಕಾ ವರದಿಗಾರರಿಗೆ ತಿಳಿಸಿದರು.

ಪ್ರಿಯಾಂಕಾ ಅವರು ಬಳಿಕ ಎಸ್ಆರ್ ದಾರಾಪುರಿ ಅವರ ಮನೆಗೆ ತೆರಳಿ ಅವರ ಕುಟುಂಬ ಸದಸ್ಯರನ್ನು ಭೇಟಿ ಮಾಡಿದರು.

ಪ್ರಿಯಾಂಕಾ
ಗಾಂಧಿ ಅವರ ಕಾರ್ಯಕರ್ತರ ಮನೆ ಭೇಟಿ ಕಾರ್ಯಕ್ರಮ ಪೂರ್ವ ನಿರ್ಧರಿತವಾದುದಾಗಿರಲಿಲ್ಲ. ಘಟನೆ ಘಟಿಸಿತು ಎನ್ನಲಾದ ನಗರದ ಲೋಹಿಯಾ ಪಾರ್ಕ್ ಪ್ರದೇಶದ ಸುತ್ತ ಮುತ್ತ ಸೆಕ್ಷನ್ ೧೪೪ರ ಅಡಿಯಲ್ಲಿ ನಿಷೇಧಾಜ್ಞೆ ಜಾರಿಯಲ್ಲಿತ್ತು.

ಇದಕ್ಕೆ
ಮುನ್ನ, ಪ್ರಿಯಾಂಕಾ ಅವರು ಪಕ್ಷದ ೧೩೫ನೇ ಸ್ಥಾಪನಾ ದಿನಾಚರಣೆ ಸಮಾರಂಭಗಳಲ್ಲಿ ಪಾಲ್ಗೊಂಡಿದ್ದರು ಮತ್ತು ನಗರದಲ್ಲಿ ಪಕ್ಷದ ಕಾರ್ಯಕರ್ತರಿಗೆ ಸಂವಿಧಾನದ ಪೀಠಿಕೆಯ ಪ್ರಮಾಣವಚನ ಬೋಧಿಸಿದ್ದರು.

ಏನಿದ್ದರೂ ಉತ್ತರಪ್ರದೇಶ ಪೊಲೀಸರು ಪ್ರಿಯಾಂಕಾ ಆರೋಪವನ್ನು ತಳ್ಳಿ ಹಾಕಿದರು.

Wednesday, December 4, 2019

ಪ್ರಿಯಾಂಕಾ ಗಾಂಧಿ ನಿವಾಸದ ಭದ್ರತಾ ಲೋಪ ಕಾಕತಾಳೀಯ

ಪ್ರಿಯಾಂಕಾ ಗಾಂಧಿ ನಿವಾಸದ ಭದ್ರತಾ ಲೋಪ ಕಾಕತಾಳೀಯ
ಭದ್ರತಾ ಸಿಬ್ಬಂದಿ ಅಮಾನತು, ಉನ್ನತ ತನಿಖೆಗೆ ಆದೇಶ: ಅಮಿತ್ ಶಾ
ನವದೆಹಲಿ: ಕಾಂಗ್ರೆಸ್ ನಾಯಕಿ ಪ್ರಿಯಾಂಕಾ ಗಾಂಧಿ ವಾದ್ರಾ ಅವರ ನಿವಾಸದಲ್ಲಿ ಸಂಭವಿಸಿದ ಭದ್ರತಾ ಲೋಪದ ಘಟನೆಯ ಹಿನ್ನೆಲೆಯಲ್ಲಿ ಮೂರು ಮಂದಿ ಭದ್ರತಾ ಸಿಬ್ಬಂದಿಯನ್ನು ಅಮಾನತುಗೊಳಿಸಲಾಗಿದ್ದು, ಉನ್ನತ ಮಟ್ಟದ ತನಿಖೆಗೆ ಆಜ್ಞಾಪಿಸಲಾಗಿದೆ ಎಂದು ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು 2019 ಡಿಸೆಂಬರ್ 03ರ  ಮಂಗಳವಾರ ರಾಜ್ಯಸಭೆಯಲ್ಲಿ ಪ್ರಕಟಿಸಿದರು.

ವಿಶೇಷ ಭದ್ರತಾ ಗುಂಪು (ಸ್ಪೆಷಲ್ ಪ್ರೊಟೆಕ್ಷನ್ ಗ್ರೂಪ್- ಎಸ್ಪಿಜಿ) ಕಾಯ್ದೆ ತಿದ್ದುಪಡಿ ಮೇಲಿನ ಕೋಲಾಹಲಕಾರೀ ಚರ್ಚೆಯ ಕೊನೆಯಲ್ಲಿ ಪ್ರಕಟಣೆ ಮಾಡಿದ ಅಮಿತ್ ಶಾಇದು ಕೇವಲ ಕಾಕತಾಳೀಯ ಘಟನೆಎಂದು ಹೇಳಿದರು.

ಗಾಂಧಿ ಕುಟುಂಬದ ಸದಸ್ಯರ ಭದ್ರತೆಗೆ ಸಂಬಂಧಿಸಿದಂತೆ ಸದನದಲ್ಲಿ ವ್ಯಕ್ತವಾದ ಕಳವಳಕ್ಕೆ ಪ್ರತಿಕ್ರಿಯಿಸಿದ ಅಮಿತ್ ಶಾಸರ್ಕಾರವು ಪೊಲೀಸ್ ಸಿಬ್ಬಂದಿ ವಿರುದ್ಧ ಕ್ರಮ ಕೈಗೊಂಡಿದೆ ಮತ್ತು ಉನ್ನತ ಮಟ್ಟದ ತನಿಖೆಗೆ ಆಜ್ಞಾಪಿಸಿದೆ. ಯಾರೂ ಅವಕಾಶಗಳನ್ನು ತೆಗೆದುಕೊಳ್ಳಲು ಸರ್ಕಾರ ಬಯಸುವುದಿಲ್ಲಎಂದು ಅವರು ನುಡಿದರು.

ಪ್ರಿಯಾಂಕಾ ಗಾಂಧಿ ಅವರ ನಿವಾಸಕ್ಕೆ ಕರಿಯ ಟಾಟಾ ಸಫಾರಿ ಇತ್ತೀಚೆಗೆ ಭದ್ರತಾ ಸಿಬ್ಬಂದಿಯಿಂದ ತಪಾಸಣಾ ತಡೆ ಇಲ್ಲದೆ ಪ್ರವೇಶಿಸಿದ್ದು ಹೇಗೆ ಎಂಬುದನ್ನು ಕೂಡಾ ಶಾ ಸದನದಲ್ಲಿ ವಿವರಿಸಿದರು. ಭದ್ರತಾ ಲೋಪ ಎಂಬುದಾಗಿ ಪರಿಗಣಿಸಲಾದ ಘಟನೆ ಬಗ್ಗೆ ಕಾಂಗ್ರೆಸ್ ಪಕ್ಷವು ತೀವ್ರ ಕಳವಳ ವ್ಯಕ್ತ ಪಡಿಸಿತ್ತು.

ಘಟನೆಯು ನವೆಂಬರ್ ೨೫ರಂದು ವರದಿಯಾಗಿತ್ತು ಎಂದು ನುಡಿದ ಶಾ ಘಟನಾವಳಿಗಳ ವಿವರ ನೀಡಿದರು.

ಪ್ರಿಯಾಂಕಾ ಗಾಂಧಿ ನಿವಾಸದಲ್ಲಿ ನಿಯೋಜಿತರಾಗಿದ್ದ ಭದ್ರತಾ ಸಿಬ್ಬಂದಿಗೆ ರಾಹುಲ್ ಗಾಂಧಿಯವರು ಕರಿಯ ಟಾಟಾ ಸಫಾರಿಯಲ್ಲಿ ಬರುತ್ತಿದ್ದಾರೆ ಎಂಬ ಸಂದೇಶ ಬಂದಿತ್ತು. ಅದೇ ವೇಳೆಗೆ ಇನ್ನೊಂದು ಟಾಟಾ ಸಫಾರಿ ಸಮುಚ್ಚಯವನ್ನು ಪ್ರವೇಶಿಸಿತು.  ಬಂದದ್ದು ಮನೆಗೆ ಅನಿರ್ಬಂಧಿತ ಪ್ರವೇಶಾವಕಾಶ ಹೊಂದಿದ್ದ ರಾಹುಲ್ ಗಾಂಧಿ ಎಂಬುದಾಗಿ ಭಾವಿಸಿ ಭದ್ರತಾ ಸಿಬ್ಬಂದಿ ಅದನ್ನು ತಡೆಯಲಿಲ್ಲ ಎಂದು ಗೃಹ ಸಚಿವರು ವಿವರಿಸಿದರು.

ಅದೊಂದು ಕಾಕತಾಳೀಯ ಘಟನೆಯಾಗಿತ್ತುಎಂದು ಅಮಿತ್ ಶಾ ಹೇಳಿದರು.

ಪ್ರಿಯಾಂಕಾ ಗಾಂಧಿ ಅವರ ಲೋಧಿ ಎಸ್ಟೇಸ್ ನಿವಾಸವನ್ನು ಪ್ರವೇಶಿಸಿದ ಕರಿಯ ಎಸ್ಯುವಿ ಮೀರತ್ ಕಾಂಗ್ರೆಸ್ ನಾಯಕಿ ಶಾರ್ದಾ ತ್ಯಾಗಿ ಅವರದಾಗಿತ್ತು ಮತ್ತು ನಾಲ್ವರು ಪಕ್ಷ ಕಾರ್ಯಕರ್ತರು ಆಕೆಯ ಜೊತೆಗಿದ್ದರು ಎಂದು ಶಾ ವಿವರಿಸಿದರು.

ಸರ್ಕಾರವು ಪ್ರಿಯಾಂಕಾ ಗಾಂಧಿ, ಅವರ ಸಹೋದರ ರಾಹುಲ್ ಗಾಂಧಿ ಮತ್ತು ತಾಯಿ ಸೋನಿಯಾ ಗಾಂಧಿ ಅವರಿಗೆ ಇದ್ದ ವಿಶೇಷ ಭದ್ರತಾ ಗುಂಪು ಅಥವಾ ಎಸ್ಪಿಜಿ ಕಮಾಂಡೋ ರಕ್ಷಣೆಯನ್ನು ಹಿಂತೆಗೆದುಕೊಂಡು ಸಿಆರ್ಪಿಎಫ್ ಯೋಧರ ರಕ್ಷಣೆ ಒದಗಿಸಿದ ಕೆಲವೇ ವಾರಗಳ ಒಳಗಾಗಿ ಸಂಭವಿಸಿದ ಭದ್ರತಾ ಲೋಪದ ಬಗ್ಗೆ ಕಾಂಗ್ರೆಸ್ ನಾಯಕರು ತೀವ್ರ ಕಳವಳ ವ್ಯಕ್ತ ಪಡಿಸಿದರು.

೧೯೮೪ರಲ್ಲಿ ಪ್ರಧಾನಿ ಇಂದಿರಾಗಾಂಧಿ ಹತ್ಯೆಯ ಬಳಿಕ ರಚಿಸಲಾದ ವಿಶೇಷ ಪಡೆಯ ರಕ್ಷಣೆಯನ್ನು ಪ್ರಧಾನಿ ಮತ್ತು ಅವರ ಅಧಿಕೃತ ನಿವಾಸದಲ್ಲಿ ವಾಸವಾಗಿರುವ ಕುಟುಂಬದ ಸಮೀಪ ಸಂಬಂಧಿಗಳಿಗೆ ಮಾತ್ರವೇ ಸೀಮಿತಗೊಳಿಸುವ ಸಲುವಾಗಿ ಸರ್ಕಾರವು ಎಸ್ಪಿಜಿ ಕಾಯ್ದೆಗೆ ತಿದ್ದುಪಡಿ ತಂದಿದೆ. ತಿದ್ದುಪಡಿಯ ಪ್ರಕಾರ ಪ್ರಧಾನಿಯ ಹೊರತಾಗಿ ಮಾಜಿ ಪ್ರಧಾನಿಗಳಿಗೆ ಐದು ವರ್ಷಗಳಿಗೆ ಎಸ್ಪಿಜಿ ರಕ್ಷಣೆ ಒದಗಿಸಲಾಗುತ್ತದೆ.

ಘಟನೆಯನ್ನು ಸೋರಿಕೆ ಮಾಡಿದ್ದಕ್ಕಾಗಿ ಕಾಂಗ್ರೆಸ್ ಪಕ್ಷವನ್ನು ತರಾಟೆಗೆ ತೆಗೆದುಕೊಂಡ ಅಮಿತ್ ಶಾ, ಭದ್ರತಾ ಲೋಪದ ಘಟನಾವಳಿಗಳ ಕುರಿತ ವಿವರಣೆಗೆ ಆದ್ಯತೆ ನೀಡಿದರು. ಕಾಂಗ್ರೆಸ್ ನಾಯಕರಿಗೆ ಪ್ರಿಯಾಂಕಾ ಗಾಂಧಿ ಅವರ ಭದ್ರತೆ ಬಗ್ಗೆ ನಿಜವಾಗಿಯೂ ಕಾಳಜಿ ಇದ್ದಿದ್ದರೆ ಅವರು ಮಾಹಿತಿಯನ್ನು ಸೋರಿಕೆ ಮಾಡಬಾರದಾಗಿತ್ತು ಎಂದು ಅಮಿತ್ ಶಾ ಹೇಳಿದರು.

ಆದರೆ ಇದರಲ್ಲೂ ರಾಜಕೀಯ ಮಾಡಲು ನೀವು ಬಯಸುವುದಾದರೆ ಅದು ಬೇರೆ ವಿಷಯಎಂದು ಶಾ ಚುಚ್ಚಿದರು.

ಎಸ್ಪಿಜಿ ಕಾನೂನಿಗೆ ಮಾಡಲಾಗುತ್ತಿರುವ ಬದಲಾವಣೆ ಕೇವಲ ಒಂದು ಕುಟಂಬವನ್ನು ಗುರಿಯಾಗಿಟ್ಟುಕೊಂಡು ಮಾಡುತ್ತಿರುವುದಲ್ಲ ಎಂದು ಶಾ ಸ್ಪಷ್ಟ ಪಡಿಸಿದರು.

ನಾವು ಪರಿವಾರವನ್ನು (ಕುಟುಂಬ) ವಿರೋಧಿಸುತ್ತಿಲ್ಲ, ಆದರೆ ಪರಿವಾರ-ವಾದವನ್ನು (ಸ್ವಜನಪಕ್ಷಪಾತ) ವಿರೋಧಿಸುತ್ತಿದ್ದೇವೆ. ಭಾರತದ ಪ್ರಜಾಪ್ರಭುತ್ವ ರೀತಿ ನಡೆಯಲು ಸಾಧ್ಯವಿಲ್ಲ. ಕೇವಲ ಗಾಂಧಿ ಕುಟುಂಬದ ಭದ್ರತೆ ಬಗ್ಗೆ ಮಾತನಾಡುವುದು ಏಕೆ? ಗಾಂಧಿ ಕುಟುಂಬ ಸೇರಿದಂತೆ ೧೩೦ ಕೋಟಿ ಭಾರತೀಯರ ಭದ್ರತೆ ಸರ್ಕಾರದ ಹೊಣೆಗಾರಿಕೆಯಾಗಿದೆಎಂದು ಗೃಹ ಸಚಿವರು ನುಡಿದರು.

ಗೃಹ ಸಚಿವರ ಉತ್ತರದ ಬಳಿಕ ಸದನವು ಎಸ್ಪಿಜಿ (ತಿದ್ದುಪಡಿ) ಕಾಯ್ದೆಗೆ ತನ್ನ ಅನುಮೋದನೆ ನೀಡಿತು.

Advertisement