Showing posts with label ಬಾಹ್ಯಾಕಾಶ. Show all posts
Showing posts with label ಬಾಹ್ಯಾಕಾಶ. Show all posts

Sunday, July 13, 2025

"ಆಜ್ ಕಾ ಭಾರತ್ ಅಭಿ ಭಿ ಸಾರೆ ಜಹಾನ್ ಸೇ ಅಚ್ಛಾ"

 "ಆಜ್ ಕಾ ಭಾರತ್ ಅಭಿ ಭಿ ಸಾರೆ ಜಹಾನ್ ಸೇ ಅಚ್ಛಾ"

ಆಕ್ಸಿಯಂ-4 ವಿದಾಯ ಭಾಷಣದಲ್ಲಿ ಶುಭಾಂಶು ಶುಕ್ಲಾ

ಬೆಂಗಳೂರು: ಭಾರತೀಯ ವಾಯುಪಡೆಯ ಗ್ರೂಪ್ ಕ್ಯಾಪ್ಟನ್ ಮತ್ತು ಗಗನಯಾತ್ರಿ ಶುಭಾಂಶು ಶುಕ್ಲಾ ಅವರು ತಮ್ಮ ಆಕ್ಸಿಯಂ-4 ಮಿಷನ್ ಪ್ರಯಾಣವು ಅದ್ಭುತವಾಗಿತ್ತು ಎಂದು ೨೦೨೫ ಜುಲೈ ೭ರ ಭಾನುವಾರ ಹೇಳಿದರು. ಈ ಯಶಸ್ಸಿಗೆ ಮಿಷನ್‌ನಲ್ಲಿ ಭಾಗಿಯಾಗಿದ್ದ ಎಲ್ಲರಿಗೂ ಕೃತಜ್ಞತೆ ಸಲ್ಲಿಸಿದರು. ವಿದಾಯ ಸಮಾರಂಭದಲ್ಲಿ ಮಾತನಾಡಿ, "ನಮಗೆ ಸಿಕ್ಕಿದ ಪ್ರತೀ ಕ್ಷಣದಲ್ಲಿಯೂ ನಾವು ಭೂಮಿಯನ್ನು ನೋಡುತ್ತಿದ್ದೆವು. ಅದು ನಿಜಕ್ಕೂ ಮಾಂತ್ರಿಕವಾಗಿ ಕಾಣುತ್ತಿತ್ತು" ಎಂದು ನುಡಿದರು.

"ಇದು ನಂಬಲಸಾಧ್ಯವಾದ ಪ್ರಯಾಣ. ಇದರಲ್ಲಿ ತೊಡಗಿಕೊಂಡ ಜನರಿಂದಾಗಿ ಇದು ಅದ್ಭುತವಾಗಿದೆ" ಎಂದು ಅವರು ತಿಳಿಸಿದರು.

ದೇಶವಾಸಿಗಳಿಗೆ ಹಿಂದಿಯಲ್ಲಿ ಸಂದೇಶ ನೀಡಿದ ಶುಭಾಂಶು ಶುಕ್ಲಾ,  "ನನ್ನ ಬಾಹ್ಯಾಕಾಶ ಪ್ರಯಾಣ ಮುಗಿಯುತ್ತಿರಬಹುದು, ಆದರೆ ಭಾರತದ ಮಾನವ ಬಾಹ್ಯಾಕಾಶ ಮಿಷನ್ ಪ್ರಯಾಣ ಇನ್ನೂ ಬಹಳ ಸುದೀರ್ಘ ಕಠಿಣವಾಗಿದೆ" ಎಂದು ಹೇಳಿದರು.

"ಆಪ್ಕಿ ಔರ್ ಮೇರಿ ಯಾತ್ರಾ ಅಭಿ ಬಹುತ್ ಲಂಬಿ ಹೈ (ನಮ್ಮ ಪ್ರಯಾಣ ಇನ್ನೂ ಬಹಳ ಸುದೀರ್ಘವಿದೆ)" ಎಂದು ಅವರು ನುಡಿದರು.

"ನಾನು ನಿಮಗೆ ಭರವಸೆ ನೀಡುತ್ತೇನೆ, ನಾವು ದೃಢ ನಿರ್ಧಾರ ಮಾಡಿದರೆ, ನಕ್ಷತ್ರಗಳನ್ನೂ ತಲುಪಬಹುದು" ಎಂದು ಅವರು ಹೇಳಿದರು.

'ಇಂದಿನ ಭಾರತ'

ʼ41 ವರ್ಷಗಳ ಹಿಂದೆ ಒಬ್ಬ ಭಾರತೀಯ (ರಾಕೇಶ್ ಶರ್ಮಾ) ಬಾಹ್ಯಾಕಾಶಕ್ಕೆ ಹೋಗಿ ಅಲ್ಲಿಂದ ನಮ್ಮ ದೇಶ ಹೇಗಿತ್ತು ಎಂದು ಹೇಳಿದರು. ಈಗಿನ ಜನರು ಇಂದಿನ ಭಾರತ ಹೇಗಿದೆ ಎಂದು ತಿಳಿಯಲು ಬಯಸುತ್ತಾರೆʼ ಎಂದು ನುಡಿದ ಶುಕ್ಲಾ ಭಾರತ ತಮಗೆ ಕಂಡ ಬಗೆಯನ್ನು ವರ್ಣಿಸಿದರು.

"ಆಜ್ ಕಾ ಭಾರತ್ ಸ್ಪೇಸ್ ಸೇ ಮಹತ್ವಾಕಾಂಕ್ಷಿ ದಿಖ್ತಾ ಹೈ, ಆಜ್ ಕಾ ಭಾರತ್ ನಿದರ್ ದಿಖ್ತಾ ಹೈ, ಆಜ್ ಕಾ ಭಾರತ್ ಕಾನ್ಫಿಡೆಂಟ್ ದಿಖ್ತಾ ಹೈ, ಆಜ್ ಕಾ ಭಾರತ್ ಗರ್ವ್ ಸೇ ಪೂರ್ಣ ದಿಖ್ತಾ ಹೈ, ಆಜ್ ಕಾ ಭಾರತ್ ಅಭಿ ಭಿ ಸಾರೆ ಜಹಾನ್ ಸೇ ಅಚ್ಛಾ ದಿಖ್ತಾ ಹೈ, ಜಲ್ದಿ ಹಿ ಧರ್ತಿ ಪರ್ ಮುಲಾಕಾತ್ ಕರ್ತೆ ಹೈ (ಇಂದಿನ ಭಾರತ ಬಾಹ್ಯಾಕಾಶದಿಂದ ಮಹತ್ವಾಕಾಂಕ್ಷಿಯಾಗಿ ಕಾಣುತ್ತದೆ, ಇಂದಿನ ಭಾರತ ನಿರ್ಭೀತವಾಗಿ ಕಾಣುತ್ತದೆ, ಇಂದಿನ ಭಾರತ ಆತ್ಮವಿಶ್ವಾಸದಿಂದ ಕಾಣುತ್ತದೆ, ಇಂದಿನ ಭಾರತ ಹೆಮ್ಮೆಯಿಂದ ತುಂಬಿದಂತೆ ಕಾಣುತ್ತದೆ, ಇಂದಿನ ಭಾರತ ಇನ್ನೂ ಇಡೀ ಜಗತ್ತಿಗಿಂತ ಉತ್ತಮವಾಗಿ ಕಾಣುತ್ತದೆ. ಶೀಘ್ರದಲ್ಲೇ ಭೂಮಿಯ ಮೇಲೆ ಭೇಟಿಯಾಗೋಣ)" ಎಂದು ಅವರು ಹೇಳಿದರು.

ಶುಭಾಂಶು ಶುಕ್ಲಾ ಅವರು ಕಳುಹಿಸಿದ ಸುಂದರ ವಿಡಿಯೋ ನೋಡಲು ಕೆಳಗೆ ಕ್ಲಿಕ್‌ ಮಾಡಿರಿ

'ಮಾಂತ್ರಿಕವಾಗಿ ಕಾಣುತ್ತದೆ'

ಮಿಷನ್ ಸಮಯದಲ್ಲಿ ಅವಕಾಶ ಸಿಕ್ಕಿದ ಯಾವುದೇ ಸಮಯದಲ್ಲಿಯೂ ಸಿಬ್ಬಂದಿ ಭೂಮಿಯನ್ನು ನೋಡುತ್ತಿದ್ದರು ಮತ್ತು ಅದು ಅವರಿಗೆ "ಮಾಂತ್ರಿಕವಾಗಿ" ಕಾಣುತ್ತಿತ್ತು ಎಂದು ಶುಭಾಂಶು ಶುಕ್ಲಾ ಹೇಳಿದರು.

"ಕಳೆದ ಎರಡೂವರೆ ವಾರಗಳಿಂದ, ನಾವು ಹೊರಗಡೆ ಚಟುವಟಿಕೆಗಳನ್ನು ಮಾಡಿದ್ದೇವೆ ಮತ್ತು ನಾವು ಅವಕಾಶ ಸಿಕ್ಕಿದಾಗಲೆಲ್ಲಾ ಭೂಮಿಯನ್ನು ನೋಡುತ್ತಿದ್ದೆವು, ನಾವು ಯಾವಾಗಲೂ ಕಿಟಕಿಯಿಂದ ಹೊರಗೆ ನೋಡುತ್ತಿದ್ದೆವು. ಅದು ನನಗೆ ಮಾಂತ್ರಿಕವಾಗಿ ಕಾಣುತ್ತಿತ್ತು” ಎಂದು ಅವರು ನುಡಿದರು.

ಈ ಮಿಷನ್‌ಗೆ ಅವಕಾಶ ನೀಡಿದ ಇಸ್ರೋ (ISRO)ಗೆ, ತಾವು ತೆಗೆದುಕೊಂಡು ಹೋಗಿದ್ದ ವಸ್ತುಗಳನ್ನು ಅಭಿವೃದ್ಧಿಪಡಿಸಿದ ಭಾರತದ ಸಂಶೋಧಕರು ಮತ್ತು ವಿದ್ಯಾರ್ಥಿಗಳಿಗೆ ಕೃತಜ್ಞತೆ ಸಲ್ಲಿಸಿದರು.


"ಈ ಅವಕಾಶವನ್ನು ಬಳಸಿಕೊಂಡು ನನ್ನ ದೇಶಕ್ಕೆ ಮತ್ತು ಈ ಮಿಷನ್ ಹಾಗೂ ನನಗೆ ಪೂರ್ಣ ಹೃದಯದಿಂದ ಬೆಂಬಲ ನೀಡಿದ ಎಲ್ಲಾ ನಾಗರಿಕರಿಗೆ ಧನ್ಯವಾದ ಹೇಳಲು ಬಯಸುತ್ತೇನೆ. ಇದನ್ನು ಸಾಧ್ಯವಾಗಿಸಿದ ಇಸ್ರೋಗೆ, ಎಲ್ಲಾ ಪ್ರೋಟೋಕಾಲ್‌ಗಳು ಮತ್ತು ಔಟ್ರೀಚ್ ಚಟುವಟಿಕೆಗಳನ್ನು ಅಭಿವೃದ್ಧಿಪಡಿಸಲು ದಣಿವರಿಯದೆ ಕೆಲಸ ಮಾಡಿದ ಇಸ್ರೋದ ಎಲ್ಲಾ ಸಹೋದ್ಯೋಗಿಗಳಿಗೆ ಧನ್ಯವಾದ ಹೇಳಲು ಬಯಸುತ್ತೇನೆ" ಎಂದು ಅವರು ಹೇಳಿದರು.

"ನಾವು ಸಾಕಷ್ಟು ಉತ್ತಮ ತರಬೇತಿ ಪಡೆದಿರುವುದನ್ನು ಖಚಿತಪಡಿಸಿದ ಮತ್ತು ನಿರಂತರ ಬೆಂಬಲ ನೀಡಿದ NASA ಮತ್ತು ಅದರ ಅಂತರರಾಷ್ಟ್ರೀಯ ಪಾಲುದಾರರಾದ ಆಕ್ಸಿಯಂ ಸ್ಪೇಸ್, ಸ್ಪೇಸ್‌ಎಕ್ಸ್ ಸಂಸ್ಥೆಗಳಿಗೂ ನಾನು ಧನ್ಯವಾದ ಹೇಳಲು ಬಯಸುತ್ತೇನೆ" ಎಂದು ಅವರು ಸೇರಿಸಿದರು.

ಮಿಷನ್‌ನಿಂದ ಏನನ್ನು ಮರಳಿ ತೆಗೆದುಕೊಂಡು ಹೋಗುತ್ತಿದ್ದೇನೆ ಎಂದು ಅವರು ವರ್ಣಿಸಿದರು.

 "ಇಲ್ಲಿಂದ ಹಿಂದಿರುಗುವಾಗ, ಈ ಮಿಷನ್‌ನಿಂದ ನಾನು ಬಹಳಷ್ಟು ನೆನಪುಗಳು ಮತ್ತು ಕಲಿಕೆಗಳನ್ನು ಕೊಂಡೊಯ್ಯುತ್ತೇನೆ. ಅವುಗಳನ್ನು ನಾನು ಹಂಚಿಕೊಳ್ಳಲು ಪ್ರಯತ್ನಿಸುತ್ತೇನೆ. ಆದರೆ ಒಂದು ವಿಷಯ ನನ್ನ ಮನಸ್ಸಿನಲ್ಲಿ ಅಚ್ಚಳಿಯದೆ ಉಳಿದಿದೆ, ಅದು ಮಾನವಕುಲವು ಒಗ್ಗೂಡಿದಾಗ, ವಿಶ್ವದ ವಿವಿಧ ಭಾಗಗಳಿಂದ ಒಟ್ಟಾಗಿ ಒಂದು ಸಾಮಾನ್ಯ ಗುರಿಗಾಗಿ ಕೆಲಸ ಮಾಡಿದಾಗ ಏನನ್ನು ಬೇಕಾದರೂ ಸಾಧಿಸಲು ಸಾಧ್ಯವಿದೆ ಎನ್ನುವುದು. ಇದು ನಿಜಕ್ಕೂ ನಂಬಲಸಾಧ್ಯ" ಎಂದು ಅವರು ಹೇಳಿದರು.

ಈ ಕೆಳಗಿನದ್ದನ್ನೂ ಓದಿರಿ:

ಬಾಹ್ಯಾಕಾಶದಲ್ಲಿ ಮೈಸೂರಿನ ʼಕ್ಯಾರೆಟ್‌ ಹಲ್ವಾʼ

Friday, July 11, 2025

ಬಾಹ್ಯಾಕಾಶದಲ್ಲಿ ಮೈಸೂರಿನ ʼಕ್ಯಾರೆಟ್‌ ಹಲ್ವಾʼ

 ಬಾಹ್ಯಾಕಾಶದಲ್ಲಿ ಮೈಸೂರಿನ ʼಕ್ಯಾರೆಟ್‌ ಹಲ್ವಾʼ

ಭಾರತೀಯ ಗಗನಯಾತ್ರಿ ಶುಭಾಂಶು ಶುಕ್ಲಾ ಅವರು ಈ ವಾರ ಅಂತಾರಾಷ್ಟ್ರೀಯ ಬಾಹ್ಯಾಕಾಶ ನಿಲ್ದಾಣಕ್ಕೆ ತಮ್ಮ ಮನೆಯ ರುಚಿಯನ್ನು ಕೊಂಡೊಯ್ದಿದ್ದಾರೆ. ತಮ್ಮ ಸಹ ಗಗನಯಾತ್ರಿಗಳೊಂದಿಗೆ ಪ್ರೀತಿಯ ಸಿಹಿ ತಿನಿಸಾದ ಕ್ಯಾರೆಟ್‌ ಹಲ್ವಾವನ್ನು (ಗಾಜರ್ ಕಾ ಹಲ್ವಾ) ಹಂಚಿಕೊಳ್ಳುವ ಮೂಲಕ ಅಡುಗೆ ಮತ್ತು ಸಾಂಸ್ಕೃತಿಕ ವಿನಿಮಯದ ಸಂತೋಷದ ಸಂಭ್ರಮವನ್ನು ಆಚರಿಸಿದ್ದಾರೆ.

ಇಸ್ರೋ ಮತ್ತು ಡಿಆರ್‌ಡಿಓ ಸಂಸ್ಥೆಗಳು ಬಾಹ್ಯಾಕಾಶಕ್ಕಾಗಿ ವಿಶೇಷವಾಗಿ ಅಭಿವೃದ್ಧಿಪಡಿಸಿದ ಈ ಸಿಹಿ ತಿನಿಸು, ನಿಲ್ದಾಣದಲ್ಲಿ ನಡೆದ ಒಂದು ಸಣ್ಣ ಪಾರ್ಟಿಯ ಭಾಗವಾಗಿತ್ತು. ಇದು ಆಕ್ಸಿಯೋಮ್ ಮಿಷನ್ 4 (Ax-4) ರ ಅತ್ಯಂತ ಸ್ಮರಣೀಯ ಸಂಜೆಗಳಲ್ಲಿ ಒಂದಾಗಿತ್ತು.

ಶುಭಾಂಶು ಶುಕ್ಲ ಅವರು ಬಾಹ್ಯಾಕಾಶಕ್ಕೆ ಒಯ್ದ ಈ ಕ್ಯಾರೆಟ್‌ ಹಲ್ವಾವನ್ನು ಇಸ್ರೋ (ISRO) ಮತ್ತು ಡಿಆರ್‌ಡಿಓ (DRDO) ಸಂಸ್ಥೆಗಳು ಜಂಟಿಯಾಗಿ ಅಭಿವೃದ್ಧಿಪಡಿಸಿವೆ.

ಈ ವಿಶೇಷ ಸಿಹಿಯನ್ನು ಡಿಫೆನ್ಸ್ ಫುಡ್ ರಿಸರ್ಚ್ ಲ್ಯಾಬೊರೇಟರಿ (DFRL), ಮೈಸೂರಿನಲ್ಲಿ, DRDO ಮತ್ತು ISRO ವಿಜ್ಞಾನಿಗಳ ಸಹಯೋಗದೊಂದಿಗೆ ಬಾಹ್ಯಾಕಾಶ ಪ್ರಯಾಣಕ್ಕೆ ಸೂಕ್ತವಾಗುವಂತೆ ತಯಾರಿಸಲಾಗಿದೆ. ಇದನ್ನು ಫ್ರೀಜ್-ಡ್ರೈಯಿಂಗ್ ಮತ್ತು ವ್ಯಾಕ್ಯೂಮ್-ಪ್ಯಾಕಿಂಗ್‌ನಂತಹ ಸುಧಾರಿತ ಸಂರಕ್ಷಣಾ ತಂತ್ರಜ್ಞಾನಗಳನ್ನು ಬಳಸಿ, ಬಾಹ್ಯಾಕಾಶದಲ್ಲಿ ಹಲವಾರು ತಿಂಗಳುಗಳ ಕಾಲ ತಾಜಾ ಮತ್ತು ಸುರಕ್ಷಿತವಾಗಿರುವಂತೆ ಮಾಡಲಾಗಿದೆ.

ಈ ಹಬ್ಬದ ಊಟದಲ್ಲಿ ವೈವಿಧ್ಯಮಯ ಮೆನು ಇತ್ತು: ಪುನರ್ಜಲೀಕರಣಗೊಳಿಸಿದ (rehydrated) ಶ್ರಿಂಪ್ ಕಾಕ್‌ಟೇಲ್‌ಗಳು ಮತ್ತು ಕ್ರ್ಯಾಕರ್‌ಗಳು, ರುಚಿಕರವಾದ ಚಿಕನ್ ಫಾಜಿಟಾಸ್, ಮತ್ತು ಸಿಹಿಗಾಗಿ ಸಿಹಿ ಬ್ರೆಡ್, ಮಂದೀಕೃತ ಹಾಲು ಮತ್ತು ಆಕ್ರೋಡುಗಳಿಂದ ತಯಾರಿಸಿದ ಕೇಕ್ ಇತ್ತು. ಇದು ಸಿಬ್ಬಂದಿಯ ಅಂತರರಾಷ್ಟ್ರೀಯ ಸಂಯೋಜನೆಗೆ ನೀಡಿದ ಗೌರವವಾಗಿತ್ತು.

ಶುಕ್ಲಾ ಅವರ ಗಾಜರ್‌ ಕಾ ಹಲ್ವಾ, ಭಾರತದ ಸಾಂಪ್ರದಾಯಿಕ ಕ್ಯಾರೆಟ್ ಆಧಾರಿತ ಸಿಹಿಯಾಗಿದೆ. ಇದು ಬಾಹ್ಯಾಕಾಶ ಆಹಾರ ತಂತ್ರಜ್ಞಾನದಲ್ಲಿನ ಹೊಸತನವನ್ನು ಮತ್ತು ಭೂಮಿಯಿಂದ ದೂರದಲ್ಲಿ ಸಂಪ್ರದಾಯಗಳನ್ನು ಹಂಚಿಕೊಳ್ಳುವ ಆಪ್ತತೆಯನ್ನು ಸಂಕೇತಿಸುತ್ತದೆ.

ಬಾಹ್ಯಾಕಾಶದಲ್ಲಿನ ಪಾರ್ಟಿಯ ಚಿತ್ರಗಳನ್ನು ಎಕ್ಸ್‌ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿರುವ ಗಗನಯಾತ್ರಿ ಜಾನಿ ಕಿಮ್ ಆ ಸಂಜೆಯ ಬಗ್ಗೆ ಹೀಗೆ ಹೇಳಿದ್ದಾರೆ: "ಈ ಮಿಷನ್‌ನಲ್ಲಿ ನಾನು ಅನುಭವಿಸಿದ ಅತ್ಯಂತ ಮರೆಯಲಾಗದ ಸಂಜೆಗಳಲ್ಲಿ ಒಂದು, ಅಂತಾರಾಷ್ಟ್ರೀಯ ಬಾಹ್ಯಾಕಾಶ ನಿಲ್ದಾಣದಲ್ಲಿ ಹೊಸ ಸ್ನೇಹಿತರಾದ Ax-4 ಸಿಬ್ಬಂದಿಯೊಂದಿಗೆ ಊಟವನ್ನು ಹಂಚಿಕೊಂಡಿದ್ದು. ನಾವು ಕಥೆಗಳನ್ನು ವಿನಿಮಯ ಮಾಡಿಕೊಂಡೆವು ಮತ್ತು ವಿಭಿನ್ನ ಹಿನ್ನೆಲೆ ಮತ್ತು ರಾಷ್ಟ್ರಗಳ ಜನರು ಬಾಹ್ಯಾಕಾಶದಲ್ಲಿ ಮಾನವೀಯತೆಯನ್ನು ಪ್ರತಿನಿಧಿಸಲು ಹೇಗೆ ಒಗ್ಗೂಡಿದ್ದಾರೆ ಎಂದು ಆಶ್ಚರ್ಯಚಕಿತರಾದೆವು."

ಇಂತಹ ಕೂಟಗಳು ಕೇವಲ ದಿನಚರಿಯಿಂದ ವಿರಾಮವಲ್ಲ; ಅವು ಸೌಹಾರ್ದತೆಯನ್ನು ಬೆಳೆಸುತ್ತವೆ ಮತ್ತು ಆಹಾರದ ಏಕೀಕರಿಸುವ ಶಕ್ತಿಯನ್ನು ಎತ್ತಿ ತೋರಿಸುತ್ತವೆ. ಸೂಕ್ಷ್ಮ ಗುರುತ್ವಾಕರ್ಷಣೆಗಾಗಿ ವಿಶೇಷವಾಗಿ ಅಳವಡಿಸಲಾದ ಭಾರತೀಯ ಪಾಕಪದ್ಧತಿಯನ್ನು ಸೇರಿಸಿಕೊಳ್ಳುವುದು, ಬಾಹ್ಯಾಕಾಶ ಕಾರ್ಯಾಚರಣೆಗಳಲ್ಲಿ ಅಂತಾರಾಷ್ಟ್ರೀಯ ಸಹಯೋಗದ ಹೆಚ್ಚುತ್ತಿರುವ ಪಾತ್ರವನ್ನು ಮತ್ತು ಪರಿಚಿತ ಸೌಕರ್ಯಗಳೊಂದಿಗೆ ಗಗನಯಾತ್ರಿಗಳ ಯೋಗಕ್ಷೇಮವನ್ನು ಬೆಂಬಲಿಸುವ ಪ್ರಾಮುಖ್ಯತೆಯನ್ನು ಪ್ರದರ್ಶಿಸುತ್ತದೆ.

ಶುಕ್ಲಾ ಮತ್ತು ಅವರ ಸಿಬ್ಬಂದಿ ತಮ್ಮ ಸಂಶೋಧನೆ ಮತ್ತು ಅನ್ವೇಷಣೆಯನ್ನು ಮುಂದುವರಿಸಿದಂತೆ, ಇಂತಹ ಕ್ಷಣಗಳು ಬಾಹ್ಯಾಕಾಶ ಪ್ರಯಾಣದ ಮಾನವೀಯ ಭಾಗವನ್ನು ಎತ್ತಿ ತೋರಿಸುತ್ತವೆ. ಅಲ್ಲಿ ಒಂದು ಸರಳ ಸಿಹಿಯನ್ನು ಹಂಚಿಕೊಳ್ಳುವುದು ಸಂಸ್ಕೃತಿಗಳನ್ನು ಒಗ್ಗೂಡಿಸುತ್ತದೆ ಮತ್ತು ಭೂಮಿಯಿಂದ ನೂರಾರು ಕಿಲೋಮೀಟರ್ ಎತ್ತರದಲ್ಲಿದ್ದರೂ ಶಾಶ್ವತ ನೆನಪುಗಳನ್ನು ಸೃಷ್ಟಿಸುತ್ತದೆ.

Ax-4 ಸಿಬ್ಬಂದಿ ಈಗ ತಮ್ಮ ಮಿಷನ್‌ನ ಅಂತಿಮ ಹಂತದಲ್ಲಿದ್ದಾರೆ. ಅವರು ಸೋಮವಾರ ISS ನಿಂದ ಬೇರ್ಪಡಲು ಸಿದ್ಧರಾಗಿದ್ದಾರೆ.

ಶುಭಾಂಶು ಶುಕ್ಲ ಮತ್ತು ಇತರ ಗಗನಯಾತ್ರಿಗಳು ಆಕ್ಸಿಯಮ್ ಮಿಷನ್ 4 (Ax-4) ಮೂಲಕ ಜೂನ್ 25, 2025 ರಂದು ಬಾಹ್ಯಾಕಾಶಕ್ಕೆ ಪ್ರಯಾಣ ಬೆಳೆಸಿದ್ದಾರೆ.

ಅವರು ಅಮೆರಿಕದ ಫ್ಲೋರಿಡಾದಲ್ಲಿರುವ ನಾಸಾ ಕೆನಡಿ ಬಾಹ್ಯಾಕಾಶ ಕೇಂದ್ರದ ಲಾಂಚ್ ಕಾಂಪ್ಲೆಕ್ಸ್ 39A ನಿಂದ ಸ್ಪೇಸ್‌ಎಕ್ಸ್ ಫಾಲ್ಕನ್ 9 ರಾಕೆಟ್ ಮೂಲಕ ಹಾರಾಟ ನಡೆಸಿದ್ದಾರೆ.

ಚಿತ್ರಗಳು: X/@JonnyKim

ಈ ಕುರಿತ ಮಾಹಿತಿ ಪೂರ್ಣ ವಿಡಿಯೋ ನೋಡಲು ಕೆಳಗಿನ ಚಿತ್ರ ಕ್ಲಿಕ್‌ ಮಾಡಿ. ಅಥವಾ ವಿಡಿಯೋ ಕೊಂಡಿ ಕ್ಲಿಕ್‌ ಮಾಡಿ.

Thursday, April 24, 2025

ಬನ್ನಿ ನಾನು ಹಬಲ್..‌ ಬಾನಂಗಳದಲ್ಲಿ ವಿಹರಿಸೋಣ..!

 ಬನ್ನಿ ನಾನು ಹಬಲ್..‌ ಬಾನಂಗಳದಲ್ಲಿ ವಿಹರಿಸೋಣ..!

ನಾನು ಹಬಲ್.‌ ಕಳೆದ 35 ವರ್ಷಗಳಿಂದ ಬಾಹ್ಯಾಕಾಶದಲ್ಲಿ ಇದ್ದುಕೊಂಡೇ ದೂರದರ್ಶಕವಾಗಿ ಕಾರ್ಯ ನಿರ್ವಹಿಸುತ್ತಿದ್ದೇನೆ.

35 ವರ್ಷಗಳ ಹಿಂದೆ 1990ರ ಏಪ್ರಿಲ್ 24ರಂದು ಅಮೆರಿಕದ ನಾಸಾ ಬಾಹ್ಯಾಕಾಶ ಕೇಂದ್ರವು ಡಿಸ್ಕವರಿ ಬಾಹ್ಯಾಕಾಶ ನೌಕೆಯ ಮೂಲಕ ನನ್ನನ್ನು ಬಾಹ್ಯಾಕಾಶಕ್ಕೆ ಏರಿಸಿತು ಮತ್ತು ಬಾಹ್ಯಾಕಾಶದ ವಿವಿಧ ಮಜಲುಗಳ ಚಿತ್ರ ತೆಗೆಯುವ ಕಾರ್ಯಕ್ಕೆ ನನ್ನನ್ನು ನಿಯೋಜಿಸಿತು.

ಈ 35 ವರ್ಷಗಳಲ್ಲಿ ನಾನು ಬಾಹ್ಯಾಕಾಶದ ಲಕ್ಷಾಂತರ ಚಿತ್ರಗಳನ್ನು ತೆಗೆದು ಭೂಮಿಗೆ ಕಳುಹಿಸಿದ್ದೇನೆ. ನಾನು ಬಾಹ್ಯಾಕಾಶಕ್ಕೆ ಏರಿದ ಈದಿನದ ಆಚರಣೆಗೆ ಈ ಚಿತ್ರಗಳು ಅಪೂರ್ವವಾಗಿದ್ದು ಬ್ರಹ್ಮಾಂಡಕ್ಕೆ ಹೊಸ ಉಡುಗೊರೆಯಾಗಿವೆ ಎಂದು ನನ್ನನ್ನು ಇಲ್ಲಿಗೆ ಕಳುಹಿಸಿದ ವಿಜ್ಞಾನಿಗಳು ಹೇಳುತ್ತಿದ್ದಾರೆ.

ಬ್ರಹ್ಮಾಂಡದ ರಹಸ್ಯಗಳನ್ನು ಅರಿಯಲು ನಾನು ಕಳುಹಿಸಿದ ಚಿತ್ರಗಳು ಅನುಕೂಲಕರವಾಗಿವೆಯಂತೆ. ಬಾಹ್ಯಾಕಾಶ ಪಯಣದ ಇತಿಹಾಸದಲ್ಲಿ ನಾನು ಅತ್ಯಂತ ಪ್ರತಿಮಾರೂಪದ ವೈಜ್ಞಾನಿಕ ಸಾಧನಗಳಲ್ಲಿ ಒಂದಾಗಿದ್ದೇನೆ ಎಂದು ಅವರು ಹೇಳುತ್ತಿದ್ದಾರೆ.

ʼಬ್ರಹ್ಮಾಂಡದ ಅಸ್ಪಷ್ಟ ರಹಸ್ಯವನ್ನು ಸ್ಪಷ್ಟ ಕಣ್ಣಿನ ಅನ್ವೇಷಣೆಯಾಗಿ ಪರಿವರ್ತಿಸಿದ ಯಂತ್ರ ನಾನುʼ ಎಂದೂ ವಿಜ್ಞಾನಿಯೊಬ್ಬರು ಬಣ್ಣಿಸಿದ್ದಾರೆ.

"35 ವರ್ಷಗಳ ಹಿಂದೆ ಉಡಾವಣೆಯಾದಾಗ ಹಬಲ್ ವಿಶ್ವಕ್ಕೆ ಹೊಸ ಕಿಟಕಿಯನ್ನು ತೆರೆಯಿತು" ಎಂದು ನಾಸಾ ಪ್ರಧಾನ ಕಚೇರಿಯಲ್ಲಿರುವ ಖಗೋಳ ಭೌತಶಾಸ್ತ್ರ ವಿಭಾಗದ ಕಾರ್ಯಕಾರಿ ನಿರ್ದೇಶಕ ಶಾನ್ ಡೊಮಗಲ್-ಗೋಲ್ಡ್‌ಮನ್ ಹೇಳಿದರಂತೆ.

"ಅದರ ಬೆರಗುಗೊಳಿಸುವ ಚಿತ್ರಣವು ಪ್ರಪಂಚದಾದ್ಯಂತ ಜನರಿಗೆ ಸ್ಫೂರ್ತಿ ನೀಡಿತು ಮತ್ತು ಆ ಚಿತ್ರಗಳ ಹಿಂದಿನ ದತ್ತಾಂಶವು ಆರಂಭಿಕ ಗ್ಯಾಲಕ್ಸಿಗಳಿಂದ ಹಿಡಿದು ನಮ್ಮದೇ ಸೌರವ್ಯೂಹದ ಗ್ರಹಗಳವರೆಗೆ ಎಲ್ಲದರ ಬಗ್ಗೆ ಹಲವಾರು ಅಚ್ಚರಿಗಳನ್ನು ಬಹಿರಂಗ ಪಡಿಸಿತು” ಎಂದು ಹೇಳಿದ್ದು ಗೋಲ್ಡಮನ್ ಮಾರಾಯರೇ -‌ ನಾನಲ್ಲ.”

ಏನೋ, ನನಗೆ ಗೊತ್ತಿಲ್ಲ. ಈ ವರ್ಷ ನನ್ನ ಬಾನಿಗೇರಿದ ವರ್ಷಾಚರಣೆಗಾಗಿ ಒಂದಷ್ಟು ಚಿತ್ರಗಳನ್ನು ವಿಶ್ವಕ್ಕೆ ಕಳುಹಿಸಿಬಿಡಬೇಕು ಎಂದು ತೀರ್ಮಾನಿಸಿ, ನಾಸಾ ಒಂದಷ್ಟು ಚಿತ್ರಗಳನ್ನು ಬಿಡುಗಡೆ ಮಾಡಿದೆ. ಅವುಗಳಲ್ಲಿ ನನಗೆ ಪ್ರಮುಖ ಅನ್ನಿಸಿದ ಚಿತ್ರಗಳಲ್ಲಿ ಕೆಲವು ಇಲ್ಲಿವೆ ನೋಡಿ.

ಮೇಲಿನಿಂದ ಎಡಕ್ಕೆ: ಡಿಸೆಂಬರ್ 2024 ರ ಕೊನೆಯಲ್ಲಿ ಭೂಮಿಯಿಂದ ಸರಿಸುಮಾರು 61 ಮಿಲಿಯನ್ ಮೈಲುಗಳಷ್ಟು ದೂರದಲ್ಲಿದ್ದಾಗ ಕಂಡು ಬಂದ ಮಂಗಳ ಗ್ರಹ ಇದು. ನನ್ನ ವಿಶಿಷ್ಟ ನೇರಳಾತೀತ ಸಾಮರ್ಥ್ಯದಿಂದ ಬಹಿರಂಗಗೊಂಡ ತೆಳುವಾದ ನೀರು-ಮಂಜುಗಡ್ಡೆಯ ಮೋಡಗಳು ಕೆಂಪು ಗ್ರಹಕ್ಕೆ ಹಿಮಭರಿತ ನೋಟವನ್ನು ನೀಡಿವೆ.

ಮೇಲಿನಿಂದ ಬಲಕ್ಕೆ: ಇದು ಗ್ರಹ ನೀಹಾರಿಕೆ NGC 2899. ನೋಡಲು ಪತಂಗದಂತೆ ಕಾಣುವ ನೀಹಾರಿಕೆಯು ಮಧ್ಯದಲ್ಲಿ ಸುಮಾರು 40,000-ಡಿಗ್ರಿ-ಫ್ಯಾರನ್‌ಹೀಟ್ ಉಷ್ಣಾಂಶದೊಂದಿಗೆ ಸಾಯುತ್ತಿರುವ ನಕ್ಷತ್ರ ಅಂದರೆ ʼಬಿಳಿ ಕುಬ್ಜʼದಿಂದ ಬರುತ್ತಿರುವ ವಿಕಿರಣ ಮತ್ತು ನಾಕ್ಷತ್ರಿಕ ಗಾಳಿಗಳ ಹೊರಹರಿವಿನಿಂದಾಗಿ ಹೀಗೆ ಪತಂಗವನ್ನು ಕೆತ್ತಿ ಇಟ್ಟಿರುವಂತೆ ಕಾಣುತ್ತಿದೆ.

ಕೆಳಗಿನಿಂದ ಎಡಕ್ಕೆ: ರಕ್ಕಸನಂತೆ ಕಾಣುತ್ತಿದೆಯಲ್ಲ? ಇದು ರೋಸೆಟ್ ನೀಹಾರಿಕೆ. ಇದು ಬೃಹತ್ ನಕ್ಷತ್ರವೊಂದು ರೂಪುಗೊಳ್ಳುತ್ತಿರುವ ಪ್ರದೇಶದ  ಸಣ್ಣ ಭಾಗ. ಧೂಳಿನಿಂದ ಕೂಡಿದ ಹೈಡ್ರೋಜನ್ ಅನಿಲದ ಕರಿಯ ಮೋಡಗಳು ಇಂತಹ ರೂಪವನ್ನು ಇದಕ್ಕೆ ನೀಡಿವೆ.

ಕೆಳಗಿನಿಂದ ಬಲಭಾಗಕ್ಕೆ: ಇದು NGC 5335 ನಕ್ಷತ್ರಪುಂಜ, ಇದು ಒಂದು ಚಪ್ಪಟೆಯಾದ ಸುರುಳಿಯಾಕಾರದ ನಕ್ಷತ್ರಪುಂಜ. ಇದರ ಡಿಸ್ಕ್‌ನಾದ್ಯಂತ ನಕ್ಷತ್ರ ರಚನೆಯ ತೇಪೆಯ ಸ್ಟ್ರೀಮರ್‌ಗಳಿವೆ. ನಕ್ಷತ್ರಪುಂಜದ ಮಧ್ಯಭಾಗವನ್ನು ಗಮನಾರ್ಹವಾದ ಲಟ್ಟಣಿಗೆಯಂತಹ ರಚನೆಯು ವಿಭಜಿಸುತ್ತದೆ.

ಈ ಚಿತ್ರಗಳಿಗೆ ಸಂಬಂಧಿಸಿದಂತೆ ನಾಸಾದ ವಿಜ್ಞಾನಿಯೊಬ್ಬರು ನೀಡಿದ ವಿವರಣೆಯ ವಿಡಿಯೋ 👇👇👇 ಒಂದನ್ನು ಕೂಡಾ ನಾಸಾ ಬಿಡುಗಡೆ ಮಾಡಿದೆ.


ಹೆಚ್ಚಿಲ್ಲ, ಒಂದೈದು ನಿಮಿಷ ಬಿಡುವು ಮಾಡಿಕೊಂಡು ಈ ವಿಡಿಯೋ ಒಳಹೊಕ್ಕು ನೋಡಿ. ನಿಮ್ಮ ಭೂಮಿಯಾಚೆ ಇರುವ ಈ ನಭೋ ಮಂಡಲದಲ್ಲಿ ಎಂತೆಂತಹ ವಿಸ್ಮಯಗಳಿವೆ ಎಂಬುದು ನಿಮಗೆ ಗೊತ್ತಾಗುತ್ತದೆ. ಈ ಬಾಹ್ಯಾಕಾಶ ಯಾನ ಅದೆಷ್ಟು ಸುಂದರ ಎಂದು ನಂತರ ನೀವೇ ಮೂಗಿನ ಮೇಲೆ ಬೆರಳು ಇಡುತ್ತೀರಿ. ಖಂಡಿತ.

-ನೆತ್ರಕೆರೆ ಉದಯಶಂಕರ.

ಇವುಗಳನ್ನೂ ಓದಿ:

ಇಸ್ರೋದಿಂದ ಕೋವಿಡ್ ಲಾಕ್‌ಡೌನ್ ನಂತರ ಮೊದಲ ಭೂ ವೀಕ್ಷಣೆ ಉಪಗ್ರಹ ಉಡಾವಣೆ
ಮೂರ್ಜೆ ಸುನಿತಾ ಪ್ರಭುವಿಗೆ ಪ್ರಧಾನ ಮಂತ್ರಿ ಬಾಲ ಪುರಸ್ಕಾರ

Indian-American Scientist to Get Rare Honour
Prestigious INSA Teachers Award to Prof. R Vasudeva
Ancient India had Planes: Claim at Indian Science Congress


Wednesday, August 23, 2023

ಹೌದು.. ಭಾರತ ಇದೀಗ ಚಂದ್ರನ ಮೇಲೆ!

 ಹೌದು.. ಭಾರತ ಇದೀಗ ಚಂದ್ರನ ಮೇಲೆ!

ಬೆಂಗಳೂರು: ಹೌದು. ಭಾರತ ಅದನ್ನು ಸಾಧಿಸಿತು. ಚಂದ್ರನ ಬಳಿಗೆ ಈವರೆಗೆ ಭೂಮಿಯ ಯಾವದೇ ದೇಶ ಸಾಗದ ಜಾಗಕ್ಕೆ ಸಾಗುವ ಸಾಧನೆಯನ್ನು ಈದಿನ ೨೦೨೩ರ ಆಗಸ್ಟ್‌ ೨೩ರ ಬುಧವಾರ ಸಾಧಿಸಿತು.

ಅತ್ಯಂತ ಸುರಕ್ಷಿತವಾಗಿ, ಭಾರತದ ಚಂದ್ರಯಾನ-೩ ಬಾಹ್ಯಾಕಾಶ ನೌಕೆಯಿಂದ ಬೇರ್ಪಟ್ಟ ʼವಿಕ್ರಮ್‌ʼ ಲ್ಯಾಂಡರ್‌ ಚಂದ್ರನ ದಕ್ಷಿಣ ಧ್ರುವ ಪ್ರದೇಶದಲ್ಲಿ ಸಂಜೆ ೬ ಗಂಟೆಯ ನಿಗದಿತ ವೇಳೆಯಲ್ಲಿ ಯಶಸ್ವಿಯಾಗಿ ʼಹಗುರʼವಾಗಿ ಇಳಿಯಿತು.

ಪ್ರಧಾನಿ ನರೇಂದ್ರ ಮೋದಿ ಸೇರಿದಂತೆ ದೇಶಾದ್ಯಂತ ಕರತಾಡನ ಹರ್ಷೋದ್ಘಾರದೊಂದಿಗೆ ಇಸ್ರೋ ವಿಜ್ಞಾನಿಗಳು ಆನಂದ ತುಂದಿಲರಾದರು.

ಈ ಸಂದರ್ಭದಲ್ಲಿ  ಪ್ರಧಾನಿ ನರೇಂದ್ರ ಮೋದಿ ಅವರು ವಿಜ್ಞಾನಿಗಳ ಸಮೂಹ ಮತ್ತು ದೇಶದ ಜನತೆಯನ್ನು ಅಭಿನಂದಿಸಿದರು. 

ವಿಡಿಯೋ ನೋಡಲು ಕೆಳಗಿನ ಚಿತ್ರ ಕ್ಲಿಕ್ಕಿಸಿ:


ಇವುಗಳನ್ನೂ ಓದಿ:

ಚಂದ್ರನತ್ತ ಪಯಣ: ಭಾರತದ ದಾಪುಗಾಲು,  ʼಚಂದಮಾಮʼ ಸ್ಪರ್ಶಕ್ಕೆ ತ್ರಿ ʼವಿಕ್ರಮʼ ಹೆಜ್ಜೆ

ಚಂದ್ರನತ್ತ ಪಯಣ: ಭಾರತದ ದಾಪುಗಾಲು

 ʼಚಂದಮಾಮʼ ಸ್ಪರ್ಶಕ್ಕೆ ತ್ರಿ ʼವಿಕ್ರಮʼ ಹೆಜ್ಜೆ

ಚಂದ್ರನತ್ತ ಪಯಣ: ಭಾರತದ ದಾಪುಗಾಲು

ಚಂದ್ರಯಾನ ೧
೨೦೦೩ ಆಗಸ್ಟ್‌ ೧೫: ಆಗಿನ ಪ್ರಧಾನಿ ಅಟಲ್‌ ಬಿಹಾರಿ ವಾಜಪೇಯಿ ಅವರಿಂದ ಚಂದ್ರಯಾನ ಕಾರ್ಯಕ್ರಮದ ಘೋಷಣೆ

೨೦೦೮ ಆಕ್ಟೋಬರ್‌ ೨೦೦೮: ಆಂದ್ರಪ್ರದೇಶದ ಶ್ರೀಹರಿಕೋಟಾದ ಸತೀಶ ಧವನ್‌ ಬಾಹ್ಯಾಕಾಶ ಕೇಂದ್ರದಿಂದ ಚಂದ್ರಯಾನ-೧ ಉಡ್ಡಯನ

೨೦೦೮ ನವೆಂಬರ್‌ ೦೮: ಚಂದ್ರಯಾನ ೧ರಿಂದ ಚಂದ್ರನ ವರ್ಗಾವಣೆ ಪಥ ಪಯಣ ಪ್ರಾರಂಭ.

೨೦೦೮ ನವೆಂಬರ್‌ ೧೪: ಚಂದ್ರಯಾನ ೧ರ ಮೊದಲ ಮೂನ್‌ ಇಂಪ್ಯಾಕ್ಟ್‌ ಪ್ರೋಬ್‌ ಹೊರ ಹಾರಿತು ಮತ್ತು ಚಂದ್ರನ ಮೇಲ್ಮೈಗೆ ಸಮೀಪ ಅಪ್ಪಳಿಸಿತು. ಚಂದ್ರನ ಮೇಲ್ಮೈಯಲ್ಲಿ ನೀರಿನ ಕಣಗಳ ಅಸ್ತಿತ್ವ ದೃಢಪಟ್ಟಿತು.

೨೦೦೯ ಆಗಸ್ಟ್‌ ೨೮: ಇಸ್ರೋ ಪ್ರಕಾರ ಚಂದ್ರಯಾನ ೧ ಕಾರ್ಯಕ್ರಮ ಕೊನೆಗೊಂಡಿತು.

ಚಂದ್ರಯಾನ ೨

೨೦೧೯ ಜುಲೈ ೨೨: ಶ್ರೀಹರಿಕೋಟಾದ ಸತೀಶ ಧವನ್‌ ಬಾಹ್ಯಾಕಾಶ ಕೇಂದ್ರದಿಂದ ಚಂದ್ರಯಾನ-೨ ಉಡಾವಣೆ

೨೦೧೯ ಆಗಸ್ಟ್‌ ೨೦: ಚಂದ್ರಯಾನ -೨ ಬಾಹ್ಯಾಕಾಶ ನೌಕೆ ಚಂದ್ರಕಕ್ಷೆಯನ್ನು ಪ್ರವೇಶಿಸಿತು.

೨೦೧೯ ಸೆಪ್ಟೆಂಬರ್‌ ೦೨: ಚಂದ್ರಧ್ರುವ ಕಕ್ಷೆಯಲ್ಲಿ ೧೦೦ ಕಿಮೀ ಎತ್ತರದಲ್ಲಿದ್ದಾಗ ಚಂದ್ರಯಾನದಿಂದ ವಿಕ್ರಮ್‌ ಲ್ಯಾಂಡರನ್ನು ಬೇರ್ಪಡಿಸಲಾಯಿತು. ವಿಕ್ರಮ್‌ ಲ್ಯಾಂಡರ್‌  ಚಂದ್ರನ ಮೇಲ್ಮೈಯಿಂದ ೨.೧ ಕಿಮೀ ಎತ್ತದಲ್ಲಿದ್ದಾಗ ಭೂ ಕೇಂದ್ರದ ಸಂಪರ್ಕ ಕಡಿದುಹೋಯಿತು.

ಚಂದ್ರಯಾನ ೩

೨೦೨೩ ಜುಲೈ ೧೪: ಚಂದ್ರಯಾನ -೩ ಬಾಹ್ಯಾಕಾಶ ನೌಕೆಯನ್ನು ಶ್ರೀಹರಿಕೋಟಾದ ಸತೀಶ ಧವನ್‌ ಬಾಹ್ಯಾಕಾಶ ಕೇಂದ್ರದಿಂದ ಉಡಾವಣೆ ಮಾಡಲಾಯಿತು.

ಚಂದ್ರಯಾನ ೩ರ ಎಲ್ಲ ಪರೀಕ್ಷೆಗಳೂ ಸಫಲವಾಗಿದ್ದು, ಚಂದ್ರಕಕ್ಷೆಯಲ್ಲಿ ಚಂದ್ರನಿಗೆ ಅತ್ಯಂತ ಸಮೀಪಕ್ಕೆ ತಲುಪಿದೆ. ಬಾಹ್ಯಾಕಾಶ ನೌಕೆಯನ್ನು ನಿಧಾನವಾಗಿ ವೇಗ ತಗ್ಗಿಸುತ್ತಾ ಚಂದ್ರ ನೆಲದ ಸಮೀಪಕ್ಕೆ ಒಯ್ಯಲಾಗಿದೆ.

೨೦೨೩ ಆಗಸ್ಟ್‌ ೨೩: ಚಂದ್ರಯಾನ -೩ ವಿಕ್ರಮ್‌ ಲ್ಯಾಂಡರ್‌ ಮತ್ತು ರೋವರ್‌ ಚಂದ್ರನೆಲದ ಮೇಲೆ ʼಹಗುರ ಸ್ಪರ್ಶʼಕ್ಕೆ ಸಜ್ಜಾಗಿದೆ. ಕೊನೆಯ ಕ್ಷಣಗಳಲ್ಲಿ ಏನಾದರೂ ಅನಿರೀಕ್ಷಿತ ಸಮಸ್ಯೆ ಕಂಡು ಬಂದರೆ ಚಂದ್ರ ಸ್ಪರ್ಶ ಕಾರ್ಯಕ್ರಮವನ್ನು ಆಗಸ್ಟ್‌ ೨೭ರವರೆಗೆ ವಿಳಂಬಿಸಬಹುದು ಎಂದು ವಿಜ್ಞಾನಿಯೊಬ್ಬರು ಹೇಳಿದ್ದಾರೆ.

ಆದರೆ ಇಸ್ರೋದ ಎಲ್ಲ ವಿಜ್ಞಾನಿಗಳೂ ಈದಿನ ಯಶಸ್ವೀ ಚಂದ್ರ ಸ್ಪರ್ಶ ಖಚಿತ ಎಂಬ ವಿಶ್ವಾಸದಲ್ಲಿದ್ದಾರೆ.

ಚಂದ್ರ ಸ್ಪರ್ಶಕ್ಕೆ ಕ್ಷಣಗಣನೆ ಆರಂಭವಾಗಿದೆ. ಸಂಜೆ ೬ ಗಂಟೆ ಸುಮಾರಿಗೆ ಚಂದ್ರಸ್ಪರ್ಶಕ್ಕೆ ಸಮಯ ನಿಗದಿ ಪಡಿಸಲಾಗಿದೆ. ಈ ಸಾಧನೆಯೊಂದಿಗೆ ಚಂದ್ರನೆಲವನ್ನು ಈವರೆಗೆ ಯಾರೂ ಸ್ಪರ್ಶಿಸದ ಭಾಗವನ್ನು ತಲುಪಿದ ಪ್ರಪ್ರಥಮ ದೇಶ ಭಾರತ ಎಂಬ ಹೆಗ್ಗಳಿಕೆ ಭಾರತದ್ದಾಗಲಿದೆ.

ಈ ಕೌತುಕದ ಕ್ಷಣವನ್ನು ನೇರವಾಗಿ ವೀಕ್ಷಿಸಲು ಕೆಳಗಿನ ಚಿತ್ರವನ್ನು ಕ್ಲಿಕ್ಕಿಸಿ: 


 ಇವುಗಳನ್ನೂ ಓದಿ: 

Zanda Ooncha Rahe Hamara.. Vijyaee Chandra Tiranga Pyara.!


 

Advertisement