Showing posts with label ಇಂದಿನ ಇತಿಹಾಸ History Today (May 21-31). Show all posts
Showing posts with label ಇಂದಿನ ಇತಿಹಾಸ History Today (May 21-31). Show all posts

Wednesday, June 2, 2010

ಇಂದಿನ ಇತಿಹಾಸ History Today ಮೇ 31

ಇಂದಿನ ಇತಿಹಾಸ

ಮೇ 31

ಮಾಜಿ ಉಪಪ್ರಧಾನಿ ದಿವಂಗತ ಜಗಜೀವನ್ ರಾಮ್ ಅವರ ಪುತ್ರಿ, ಬಿಹಾರದ ದಲಿತ ನಾಯಕಿ ಮೀರಾ ಕುಮಾರ್ (64) ಅವರನ್ನು ಕಾಂಗ್ರೆಸ್ ಪಕ್ಷವು ಲೋಕಸಭಾಧ್ಯಕ್ಷರ ಸ್ಥಾನಕ್ಕೆ ಆಯ್ಕೆ ಮಾಡಿತು. ಆಂಧ್ರಪ್ರದೇಶದ ಹಿರಿಯ ನಾಯಕ ಕಿಶೋರ್ ಚಂದ್ರ ದೇವ್ ಅವರನ್ನು ಈ ಸ್ಥಾನಕ್ಕೆ ಆಯ್ಕೆ ಮಾಡಲಾಗುವುದು ಎಂಬ ವದಂತಿ ಕಳೆದ ಹದಿನೈದು ದಿನಗಳಿಂದ ಸುಳಿದಾಡುತ್ತಿತ್ತು. ಈದಿನ ಮಧ್ಯಾಹ್ನ ಮೀರಾ ಕುಮಾರ್, ಸೋನಿಯಾ ನಿವಾಸಕ್ಕೆ ಭೇಟಿ ನೀಡುವುದರೊಂದಿಗೆ ಸ್ಪೀಕರ್ ಆಯ್ಕೆ ಕುರಿತು ಎದ್ದಿದ್ದ ಊಹಾಪೋಹಗಳಿಗೆ ತೆರೆಬಿದ್ದಿತು.

2009: 'ರಾಜ್ಯದ ಸರ್ವಾಂಗೀಣ ಅಭಿವೃದ್ಧಿ ಸಾಧಿಸುವುದೇ ನಮ್ಮ ಗುರಿ. ಅದಕ್ಕಾಗಿ ಯಾರ ಮನೆ ಬಾಗಿಲಿಗೆ ಹೋಗಲೂ ಸಿದ್ಧ' ಎಂದು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಬೆಂಗಳೂರಿನಲ್ಲಿ ಘೋಷಿಸಿದರು. ರಾಜ್ಯ ಬಿಜೆಪಿ ಸರ್ಕಾರದ ಮೊದಲ ವಾರ್ಷಿಕೋತ್ಸವದ ಅಂಗವಾಗಿ ನ್ಯಾಷನಲ್ ಹೈಸ್ಕೂಲ್ ಮೈದಾನದಲ್ಲಿ ಏರ್ಪಡಿಸಿದ್ದ 'ವಿಕಾಸ ಸಂಕಲ್ಪ ಉತ್ಸವ' ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು. 'ಬೆಳಿಗ್ಗೆ ಕೇಂದ್ರ ಸಚಿವರಾದ ಮಲ್ಲಿಕಾರ್ಜುನ ಖರ್ಗೆ ಮತ್ತು ವೀರಪ್ಪ ಮೊಯಿಲಿ ಅವರ ಮನೆಗೆ ಭೇಟಿ ನೀಡಿ ಅವರನ್ನು ಅಭಿನಂದಿಸಿದೆ. ಲೋಕಸಭೆಯಲ್ಲಿ ರಾಜ್ಯದ ಸಮಸ್ಯೆಗಳ ಬಗ್ಗೆ ಬೆಳಕು ಚೆಲ್ಲಬೇಕು, ಪ್ರಧಾನಿಯವರ ಗಮನ ಸೆಳೆದು ಪರಿಹಾರ ದೊರಕಿಸಿಕೊಡಬೇಕು, ಮತ್ತೊಮ್ಮೆ ರಾಜ್ಯಕ್ಕೆ ಅನ್ಯಾಯ ಆಗದಂತೆ ಎಚ್ಚರ ವಹಿಸಬೇಕು ಎಂದು ಮನವಿ ಮಾಡಿದೆ' ಎಂದು ಅವರು ಹೇಳಿದರು.

2009: ಮಾಜಿ ಉಪಪ್ರಧಾನಿ ದಿವಂಗತ ಜಗಜೀವನ್ ರಾಮ್ ಅವರ ಪುತ್ರಿ, ಬಿಹಾರದ ದಲಿತ ನಾಯಕಿ ಮೀರಾ ಕುಮಾರ್ (64) ಅವರನ್ನು ಕಾಂಗ್ರೆಸ್ ಪಕ್ಷವು ಲೋಕಸಭಾಧ್ಯಕ್ಷರ ಸ್ಥಾನಕ್ಕೆ ಆಯ್ಕೆ ಮಾಡಿತು. ಆಂಧ್ರಪ್ರದೇಶದ ಹಿರಿಯ ನಾಯಕ ಕಿಶೋರ್ ಚಂದ್ರ ದೇವ್ ಅವರನ್ನು ಈ ಸ್ಥಾನಕ್ಕೆ ಆಯ್ಕೆ ಮಾಡಲಾಗುವುದು ಎಂಬ ವದಂತಿ ಕಳೆದ ಹದಿನೈದು ದಿನಗಳಿಂದ ಸುಳಿದಾಡುತ್ತಿತ್ತು. ಈದಿನ ಮಧ್ಯಾಹ್ನ ಮೀರಾ ಕುಮಾರ್, ಸೋನಿಯಾ ನಿವಾಸಕ್ಕೆ ಭೇಟಿ ನೀಡುವುದರೊಂದಿಗೆ ಸ್ಪೀಕರ್ ಆಯ್ಕೆ ಕುರಿತು ಎದ್ದಿದ್ದ ಊಹಾಪೋಹಗಳಿಗೆ ತೆರೆಬಿದ್ದಿತು.

2009: ಆಸ್ಟ್ರೇಲಿಯಾದಲ್ಲಿ ಭಾರತೀಯ ವಿದ್ಯಾರ್ಥಿಗಳ ಮೇಲೆ ನಡೆದ ಜನಾಂಗೀಯ ಹಲ್ಲೆಗಳಿಂದ ಭಯಭೀತರಾದ ಸಾವಿರಾರು ಭಾರತೀಯರು ಮೆಲ್ಬರ್ನ್‌ನಲ್ಲಿ ಶಾಂತಿ ಮೆರವಣಿಗೆ ನಡೆಸಿ ತಮಗೆ ನ್ಯಾಯ ನೀಡುವಂತೆ ಆಗ್ರಹಿಸಿದರು. ಆಸ್ಟ್ರೇಲಿಯಾದ ಭಾರತೀಯ ವಿದ್ಯಾರ್ಥಿಗಳ ಒಕ್ಕೂಟ (ಎಫ್‌ಐಎಸ್‌ಎ) ಹಾಗೂ ರಾಷ್ಟ್ರೀಯ ವಿದ್ಯಾರ್ಥಿಗಳ ಸಂಘಟನೆ ಜಂಟಿಯಾಗಿ ಏರ್ಪಡಿಸಿದ್ದ ಪ್ರತಿಭಟನಾ ಮೆರವಣಿಗೆಯನ್ನು ರಾಯಲ್ ಮೆಲ್ಬರ್ನ್ ಆಸ್ಪತ್ರೆ ಹೊರಭಾಗದಿಂದ ಆರಂಭಿಸಲಾಯಿತು.

2009: ಮಲಯಾಳಂ ಹಾಗೂ ಇಂಗ್ಲಿಷಿನ ಹೆಸರಾಂತ ಕವಯಿತ್ರಿ ಮತ್ತು ಲೇಖಕಿ ಕಮಲಾ ದಾಸ್, ಈದಿನ ಬೆಳಗಿನ ಜಾವ ಪುಣೆಯಲ್ಲಿ ಕೊನೆಯುಸಿರೆಳೆದರು. ಮಧುಮೇಹದಿಂದ ಬಳಲುತ್ತಿದ್ದ ಅವರು, ನ್ಯೂಮೋನಿಯಾದಿಂದಾಗಿ ಖಾಸಗಿ ಆಸ್ಪತ್ರೆಗೆ ದಾಖಲಾಗಿದ್ದರು. ಸಾಹಿತ್ಯ ಕೃತಿಗಳಲ್ಲಿ ಸ್ತ್ರೀಸಂವೇದನೆಯನ್ನು ಅತ್ಯಂತ ನಿಸ್ಸಂಕೋಚ ಹಾಗೂ ಮುಕ್ತ ಮನಸ್ಸಿನಿಂದ ಅಭಿವ್ಯಕ್ತಿಪಡಿಸಿದ ಕೆಲವೇ ಕೆಲವು ಭಾರತೀಯ ಲೇಖಕಿಯರಲ್ಲಿ ಮಾಧವಿ ಕುಟ್ಟಿ (ಕಮಲಾ ದಾಸ್) ಕೂಡ ಒಬ್ಬರು. ಸಂಪ್ರದಾಯದ ವಿರುದ್ಧ ಬಂಡೆದ್ದು ಯಾವುದೇ ಅಳುಕಿಲ್ಲದೇ ಬರೆದದ್ದಕ್ಕಾಗಿ ಇವರು ಒಂದು ವರ್ಗದ ಓದುಗರ ಕೆಂಗಣ್ಣಿಗೂ ಗುರಿಯಾಗಬೇಕಾಯಿತು. ತಮ್ಮ ಕೃತಿಗಳಿಗೆ ರಾಷ್ಟ್ರೀಯ ಹಾಗೂ ಅಂತಾರಾಷ್ಟ್ರೀಯ ಮಟ್ಟದಲ್ಲಿ ಅನೇಕ ಪ್ರಶಸ್ತಿಗಳನ್ನು ಮುಡಿಗೇರಿಸಿಕೊಂಡಿದ್ದ ಕಮಲಾ ಒಳ್ಳೆಯ ಚಿತ್ರಕಲಾವಿದೆಯೂ ಹೌದು. ದಶಕಗಳ ಹಿಂದೆ, ಅಂದರೆ 1999 ರಲ್ಲಿ ಮುಸ್ಲಿಂ ಧರ್ಮಕ್ಕೆ ಮತಾಂತರಗೊಂಡ ಅವರು ತಮ್ಮ ಹೆಸರನ್ನು 'ಕಮಲಾ ಸುರಯ್ಯ' ಎಂದು ಬದಲಾಯಿಸಿಕೊಂಡಿದ್ದರು. ಇದು ಸಾಮಾಜಿಕ ಹಾಗೂ ಸಾಹಿತ್ಯಿಕ ವಲಯದಲ್ಲಿ ಭಾರಿ ಕೋಲಾಹಲ ಉಂಟು ಮಾಡಿತ್ತು. ಕಮಲಾಗೆ ರಾಜಕೀಯದಲ್ಲಿಯೂ ಆಸಕ್ತಿ ಇತ್ತು. ಅನಾಥ ತಾಯಂದಿರಿಗೆ ಆಶ್ರಯ ನೀಡುವ ಹಾಗೂ ಜಾತ್ಯತೀತ ಮೌಲ್ಯ ಎತ್ತಿಹಿಡಿಯುವ ಉದ್ದೇಶದಿಂದ 'ಲೋಕ್ ಸೇವಾ ಪಾರ್ಟಿ' ಹುಟ್ಟುಹಾಕಿದ್ದರು. 1984 ರಲ್ಲಿ ಲೋಕಸಭಾ ಚುನಾವಣೆಗೂ ಸ್ಪರ್ಧಿಸಿದ್ದರು. 1934 ರ ಮಾರ್ಚ್ 31 ರಂದು ವಿ.ಎಂ.ನಾಯರ್ ಹಾಗೂ ಬಾಲಮಣಿ ಅಮ್ಮ ದಂಪತಿಗೆ ಜನಿಸಿದ ಕಮಲಾ, ತಮ್ಮ ಬಾಲ್ಯದ ದಿನಗಳನ್ನು ತಂದೆ ಕೆಲಸ ಮಾಡುತ್ತಿದ್ದ ಕೋಲ್ಕತದಲ್ಲಿಯೇ ಕಳೆದರು. ಕವಯಿತ್ರಿ ಅಮ್ಮ, ಚಿಕ್ಕಪ್ಪ, ಖ್ಯಾತ ಲೇಖಕ ನಲಪತ್ ನಾರಾಯಣ ಮೆನನ್ ಅವರಿಂದ ಪ್ರಭಾವಿತರಾಗಿದ್ದ ದಾಸ್, ತಮ್ಮ 17 ನೇ ವಯಸ್ಸಿನಲ್ಲಿ 'ಮಾಧವಿಕುಟ್ಟಿ' ಎಂಬ ಕಾವ್ಯನಾಮದಲ್ಲಿ ಬರವಣಿಗೆ ಶುರುಮಾಡಿದರು. ತಮಗಿಂತಲೂ 15 ವರ್ಷ ದೊಡ್ಡವರಾದ ಮಾಧವ್ ದಾಸ್ ಅವರನ್ನು ಮದುವೆಯಾದ ಕಮಲಾಗೆ 3 ಮಕ್ಕಳು. ಹಿರಿಯ ಪುತ್ರ ಎಂ.ಡಿ.ನಲಪತ್ ಇಂಗ್ಲಿಷ್ ದಿನಪತ್ರಿಕೆಯೊಂದರ ರಾಜಕೀಯ ವಿಭಾಗದ ಸಂಪಾದಕರು. ಇನ್ನೊಬ್ಬ ಮಗ ಚಿನ್ನನ್‌ದಾಸ್ ಕೂಡ ಅದೇ ಪತ್ರಿಕೆಯ ಆಡಳಿತ ಮಂಡಳಿಯ ನಿರ್ದೇಶಕರು. 42 ನೇ ವಯಸ್ಸಿನಲ್ಲಿ 'ಮೈ ಸ್ಟೋರಿ' ಎಂಬ ಆತ್ಮಕಥೆಯೊಂದಿಗೆ ಅವರ ಚೊಚ್ಚಲ ಕೃತಿ ಹೊರಬಂದಿತು. 2007 ರಲ್ಲಿ ಕಮಲಾ ಕೇರಳದಿಂದ ಪುಣೆಗೆ ತೆರಳಿ ಅಲ್ಲಿಯೇ ನೆಲೆ ನಿಂತರು. 'ದಿ ಸೈರನ್ಸ್' ( ಏಷ್ಯಾ ಕವನ ಸ್ಪರ್ಧೆಯಲ್ಲಿ ಬಹುಮಾನ), 'ಸಮ್ಮರ್ ಇನ್ ಕಲ್ಕತ್ತಾ' (ಕೆಂಟ್ ಪ್ರಶಸ್ತಿ), 'ದಿ ಡಿಸೆಂಡೆಂಟ್ಸ್', 'ದಿ ಓಲ್ಡ್ ಪೆಹ್ಲೌಸ್', 'ಅದರ್ ಪೊಯಮ್ಸ್', 'ಅಲ್ಫಾಬೆಟ್ ಆಫ್ ಲಸ್ಟ್' (ಕಾದಂಬರಿ). 'ದಿ ಅಣ್ಣಾಮಲೈ ಪೊಯಮ್ಸ್', 'ಪದ್ಮಾವತಿ ದಿ ಹರ್ಲೊಟ್ ಆಂಡ್ ಅದರ್ ಸ್ಟೋರೀಸ್ (ಸಣ್ಣ ಕಥೆಗಳು), 'ಓನ್ಲಿ ದ ಸೋಲ್ ನೋಸ್ ಹೌ ಟು ಸಿಂಗ್' ಮತ್ತು 'ಯಾ ಅಲ್ಲಾ' (ಕವನ) ಕಮಲಾಗೆ ಖ್ಯಾತಿ ತಂದುಕೊಟ್ಟ ಕೃತಿಗಳು. ಮಲಯಾಳಂನಲ್ಲಿಯೂ ಇವರು ಸಾಕಷ್ಟು ಕೃತಿಗಳನ್ನು ರಚಿಸಿದ್ದರು. 'ಪಕ್ಷಿಯುಡೆ ಮನಂ' , 'ನಾರಿಚೀರುಕಳ್ ಪರಕ್ಕಂಬೊಲ್', ಥಾನುಪ್ಪು' ( ಸಾಹಿತ್ಯ ಅಕಾಡೆಮಿ ಪ್ರಶಸ್ತಿ), 'ಮಾಧವಿಕುಟ್ಟಿಯುಡೆ ಉನ್ಮಕ್ಕಧಕ್ಕಳ್'-ಇವು ಮಾಧವಿ ಕುಟ್ಟಿ (ಕಮಲಾ ದಾಸ್) ಅವರ ಪ್ರಮುಖ ಸಣ್ಣಕಥೆಗಳು. 'ನೀರ್‌ಮಾದಳಂ ಪೂತ ಕಾಲಂ' (ವಯಲಾರ್ ಪ್ರಶಸ್ತಿ), 'ಬಾಲ್ಯಕಾಲ ಸ್ಮರಣಂಗಳ್'ನಂಥ ನೆನಪಿನಲ್ಲಿ ಉಳಿಯುವ ಕಾದಂಬರಿಗಳನ್ನೂ ಅವರು ಬರೆದಿದ್ದರು. ಇವರ ಕಥೆ ಹಾಗೂ ಕಾದಂಬರಿಗಳು ಬೇರೆ ಭಾಷೆಗಳಿಗೂ ಅನುವಾದಗೊಂಡಿವೆ. 'ನೀರ್‌ಮಾದಳ ಪೂತಂ ಕಾಲಂ' ಕಾದಂಬರಿಯನ್ನು ಕನ್ನಡಕ್ಕೆ ಪಾರ್ವತಿ ಐತಾಳ್ ಅನುವಾದಿಸಿದ್ದರು. ಇದು 'ಸುಧಾ' ವಾರಪತ್ರಿಕೆಯಲ್ಲಿ ಧಾರಾವಾಹಿ ರೂಪದಲ್ಲಿ ಪ್ರಕಟಗೊಂಡಿತ್ತು.

2009: ಜಮ್ಮು- ಕಾಶ್ಮೀರದ ಕುಪ್ವಾರದಲ್ಲಿ ಈದಿನ ಬೆಳಿಗ್ಗೆ ಉಗ್ರರ ಜತೆ ನಡೆದ ಗುಂಡಿನ ಕಾಳಗದಲ್ಲಿ ಬೆಂಗಳೂರಿನ ಯೋಧ ಗುರುರಾಜ್ (27) ವೀರ ಮರಣವನ್ನಪ್ಪಿದರು. ಚಾಮರಾಜಪೇಟೆಯ ಮೊದಲನೇ ಮುಖ್ಯ ರಸ್ತೆಯಲ್ಲಿ ಗುರುರಾಜ್ ಅವರ ಮನೆ. ಮೂರು ವರ್ಷದ ಹಿಂದೆ ಉಷಾ ಅವರನ್ನು ಗುರುರಾಜ್ ವಿವಾಹವಾಗಿದ್ದರು.

2009: ನಾಗಪುರ ಮೂಲದ ಏರ್‌ಚೀಫ್ ಮಾರ್ಷಲ್ ಪ್ರದೀಪ್ ವಸಂತ್ ನಾಯಕ್ ಅವರು ಭಾರತೀಯ ವಾಯುಪಡೆಯ ಮುಖ್ಯಸ್ಥರಾಗಿ ನವದೆಹಲಿಯಲ್ಲಿ ಅಧಿಕಾರ ವಹಿಸಿಕೊಂಡರು. ಎರಡು ವರ್ಷಗಳಿಂದ ಸಮರದ ನೇರ ಅನುಭವವಿಲ್ಲದವರ ನೇತೃತ್ವದಲ್ಲಿದ್ದ ವಾಯುಪಡೆ, ಇದರಿಂದಾಗಿ ರಣರಂಗದ ಅನುಭವ ಇರುವ ವ್ಯಕ್ತಿಯ ಸುಪರ್ದಿಗೆ ಬಂದಿತು.

2009: ಬ್ರಿಟನ್‌ನಲ್ಲಿ ಎದ್ದು ಕಾಣುವ ಮೈಲಿಗಲ್ಲುಗಳಲ್ಲಿ ಒಂದಾದ ಲಂಡನ್ನಿನ ಚತುರ್ಮುಖ ಸಂಗೀತ ಗಡಿಯಾರ ಗೋಪುರ 'ಬಿಗ್ ಬೆನ್'ಗೆ ಈದಿನ 150 ವರ್ಷಗಳು ಪೂರ್ಣಗೊಂಡವು. ಎರಡನೇ ವಿಶ್ವಸಮರದ ವೇಳೆ ಲಂಡನ್ನಿನ ವೆಸ್ಟ್‌ಮಿನ್‌ಸ್ಟರ್ ಪ್ಯಾಲೇಸ್ ಹಾಗೂ ಬಿಗ್ ಬೆನ್ ಗಡಿಯಾರ ಗೋಪುರದ ಮೇಲೆ ಭಾರಿ ಪ್ರಮಾಣದ ಬಾಂಬ್ ಸ್ಫೋಟ ನಡೆದಿತ್ತು. ವೈಮಾನಿಕ ದಾಳಿಗೆ ಜಖಂಗೊಂಡರೂ ಗಡಿಯಾರ ನಿರಂತರವಾಗಿ ಕೆಲಸ ಮಾಡುತ್ತಲೇ ಇದೆ. 1834ರಲ್ಲಿ ಬ್ರಿಟನ್ ಸಂಸತ್‌ನಲ್ಲಿ ನಡೆದ ಭಾರಿ ಅಗ್ನಿ ದುರಂತದ ಬಳಿಕ ಈ ಗಡಿಯಾರ ಗೋಪುರ ಅಸ್ತಿತ್ವಕ್ಕೆ ಬಂತು. 1859 ರ ಮೇ 31 ರಂದು ಇದು ಸಮಯ ತೋರಿಸಲು ಆರಂಭಿಸಿತು. 19 ನೇ ಶತಮಾನದ ತಂತ್ರಜ್ಞಾನವನ್ನು ಹೊಂದಿರುವ ಈ ಗಡಿಯಾರ ಇಂದಿಗೂ ಕೂಡ ಸರಿಯಾದ ಸಮಯ ತೋರಿಸುವುದು ವಿಶೇಷ.

2009: ನೈಋತ್ಯ ಚೀನಾ ಪ್ರಾಂತ್ಯದ ಗಣಿಯೊಂದರಲ್ಲಿ ಸ್ಫೋಟ ಸಂಭವಿಸಿ ಕನಿಷ್ಠ 30 ಜನ ಮೃತರಾದರು. ದುರಂತದಲ್ಲಿ 59 ಜನ ಗಾಯಗೊಂಡವರು ಸೇರಿದಂತೆ ನೂರಕ್ಕೂ ಹೆಚ್ಚು ಜನರನ್ನು ರಕ್ಷಿಸಲಾಯಿತು. ಟೋಂಗ್ವಾ ಕಲ್ಲಿದ್ದಲು ಗಣಿಯಲ್ಲಿ ಹಿಂದಿನ ದಿನ 131 ಕಾರ್ಮಿಕರು ಕಾರ್ಯ ನಿರ್ವಹಿಸುತ್ತಿದ್ದಾಗ ಅನಿಲ ಸ್ಫೋಟಿಸಿ ಈ ದುರಂತ ಸಂಭವಿಸಿತು.

2008: ಅಧಿವೇಶನದ ಆರಂಭದಲ್ಲೇ ಜಂಟಿ ಅಧಿವೇಶನವನ್ನು ಉದ್ದೇಶಿಸಿ ಮಾತನಾಡುವ ಸಂಪ್ರದಾಯಕ್ಕೆ ಬದಲಾಗಿ ಸರ್ಕಾರವು ಬಹುಮತ ಸಾಬೀತು ಪಡಿಸಿದ ಬಳಿಕ ಅಧಿವೇಶನವನ್ನು ಉದ್ದೇಶಿಸಿ ಮಾತನಾಡುವುದಾಗಿ ರಾಜ್ಯಪಾಲ ರಾಮೇಶ್ವರ ಠಾಕೂರ್ ಅವರು ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರಿಗೆ ತಿಳಿಸಿದರು.

2008: ಪಾಕಿಸ್ಥಾನದ ಮಾನವ ಹಕ್ಕುಗಳ ಮಾಜಿ ಸಚಿವ ಅನ್ಸರ್ ಬರ್ನೆ ಅವರನ್ನು ಭಾರತಕ್ಕೆ ಆಗಮಿಸಿದ ಕೆಲವೇ ಕ್ಷಣಗಳಲ್ಲಿ ದುಬೈಗೆ ಗಡೀಪಾರು ಮಾಡಿದ ಘಟನೆ ಈದಿನ ರಾತ್ರಿ ದೆಹಲಿಯ ಇಂದಿರಾ ಗಾಂಧಿ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ನಡೆಯಿತು. ಕೇಂದ್ರ ಗೃಹ ಸಚಿವಾಲಯದ ಉನ್ನತ ಅಧಿಕಾರಿಗಳಿಂದ ಬಂದ ಆದೇಶದ ಮೇರೆಗೆ ಬರ್ನೆ ಅವರನ್ನು ಗಡೀಪಾರು ಮಾಡಲಾಗಿದೆ ಎಂದು ವಿಮಾನ ನಿಲ್ದಾಣದ ಅಧಿಕಾರಿಗಳು ವಿವರಿಸಿದರು. ಆದರೆ ಬರ್ನೆ ಆಗಮನ ಕುರಿತು ವಿದೇಶಾಂಗ ಸಚಿವಾಲಯಕ್ಕೆ ಯಾವುದೇ ಮಾಹಿತಿ ಇರಲಿಲ್ಲ. ಬರ್ನೆ ಗಡೀಪಾರಿನ ಕುರಿತು ವರದಿ ನೀಡಬೇಕೆಂದು ಅದು ಗೃಹ ಸಚಿವಾಲಯಕ್ಕೆ ವಿದೇಶಾಂಗ ಸಚಿವಾಲಯ ಸೂಚಿಸಿತು. ಕಾಶ್ಮೀರ್ ಸಿಂಗ್ ಬಿಡುಗಡೆ ಹಾಗೂ ಸರಬ್ಜಿತ್ ಸಿಂಗ್ ಗಲ್ಲು ಶಿಕ್ಷೆ ಮುಂದೂಡುವಿಕೆಯಲ್ಲಿ ಬರ್ನೆ ಮಹತ್ವದ ಪಾತ್ರ ವಹಿಸಿದ್ದರು. ಕೇಂದ್ರ ಸರ್ಕಾರ ಈ ಘಟನೆಗೆ ವಿಷಾದ ವ್ಯಕ್ತಪಡಿಸಿ, ಬರ್ನೆ ಅವರು ಭಾರತಕ್ಕೆ ಯಾವಾಗ ಬೇಕಾದರೂ ಬರಬಹುದು ಎಂದು ಹೇಳಿತು.

2008: ಕೇರಳಕ್ಕೆ ಮುಂಗಾರು ಪ್ರವೇಶಿಸಿತು. ನಿರೀಕ್ಷಿತ ನೈರುತ್ಯ ಮಾರುತದ ಅಬ್ಬರದೊಂದಿಗೆ ಕೇರಳದ ಬಹುತೇಕ ಕಡೆ ಭಾರಿ ಮಳೆಯಾಗಿದೆ ಎಂದು ಭಾರತೀಯ ಹವಾಮಾನ ಇಲಾಖೆಯು ತಿಳಿಸಿತು.

2008: ನೂತನ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರ ಸಚಿವಾಲಯಕ್ಕೆ ಮೂವರು ಹಿರಿಯ ಐಎಎಸ್ ಅಧಿಕಾರಿಗಳನ್ನು ವರ್ಗಾವಣೆ ಮಾಡಿ ಸರ್ಕಾರ ಆದೇಶ ಹೊರಡಿಸಿತು. ಸಾರಿಗೆ ಇಲಾಖೆ ಆಯುಕ್ತ ಎಂ.ಲಕ್ಷ್ಮೀ ನಾರಾಯಣ ಅವರನ್ನು ಮುಖ್ಯಮಂತ್ರಿ ಗಳ ಕಾರ್ಯದರ್ಶಿಯಾಗಿ, ವಿಜಾಪುರ ಜಿಲ್ಲಾಧಿಕಾರಿ ಬಿ.ಜಿ.ನಂದಕುಮಾರ್ ಅವರನ್ನು ಮುಖ್ಯಮಂತ್ರಿಗಳ ಉಪ ಕಾರ್ಯದರ್ಶಿ, ವಾಣಿಜ್ಯ ತೆರಿಗೆ ಇಲಾಖೆಯ ಜಂಟಿ ಆಯುಕ್ತ ದಯಾಶಂಕರ ಅವರನ್ನು ಮುಖ್ಯಮಂತ್ರಿಗಳ ಆಪ್ತ ಕಾರ್ಯದರ್ಶಿಯಾಗಿ ನಿಯೋಜನೆ ಮಾಡಲಾಯಿತು. ಕೆಎಎಸ್ ಅಧಿಕಾರಿ ಬಿ.ಎನ್. ಕೃಷ್ಣಯ್ಯ ಅವರನ್ನು ಮುಖ್ಯಮಂತ್ರಿಗಳ ವಿಶೇಷ ಕರ್ತವ್ಯ ಅಧಿಕಾರಿಯಾಗಿ ನೇಮಕ ಮಾಡಲಾಯಿತು.

2008: ಬೆಂಗಳೂರಿನಲ್ಲಿ ಸುರಿದ ಧಾರಾಕಾರ ಮಳೆಯಿಂದಾಗಿ ಹಲವು ಬಡಾವಣೆಗಳಲ್ಲಿ ಮನೆಗಳಿಗೆ ನೀರು ನುಗ್ಗಿ, ವಿದ್ಯುತ್ ಕಂಬ ನೆಲಕ್ಕುರುಳಿ ಜನ ಜೀವನ ಅಸ್ತವ್ಯಸ್ತವಾಯಿತು.

2008: ಭಾರತೀಯ ಮೂಲದ 8ನೇ ಗ್ರೇಡ್ ವಿದ್ಯಾರ್ಥಿ ಸಮೀರ್ ಮಿಶ್ರಾ ಅವರು `ಗೆರ್ಡಾನ್' ಪದವನ್ನು ಸರಿಯಾಗಿ ಉಚ್ಚಾರ ಮಾಡಿ, ಅದರ ಸ್ಪೆಲ್ಲಿಂಗ್ ಹೇಳುವ ಮೂಲಕ ಸ್ಕ್ರಿಪ್ಸ್ ನ್ಯಾಷನಲ್ ಸ್ಪೆಲ್ಲಿಂಗ್ ಬೀ ಸ್ಪರ್ಧೆಯನ್ನು ಗೆದ್ದುಕೊಂಡರು. 8ರಿಂದ 15ರ ವಯಸ್ಸಿನ ಒಟ್ಟು 288 ಮಂದಿ ಸ್ಪರ್ಧಿಸಿದ್ದರು. ಅಂತಿಮ 12 ಮಂದಿಯಲ್ಲಿ 4 ಮಂದಿ ಭಾರತೀಯರೇ ಆಗಿದ್ದರು. 2ನೇ ಸ್ಥಾನವನ್ನು ಮತ್ತೊಬ್ಬ ಭಾರತೀಯ ಮೂಲದ ವಿದ್ಯಾರ್ಥಿ ಸಿದ್ಧಾರ್ಥ ಚಂದ್ ಪಡೆದರು. ಬಹುಮಾನ ರೂಪದಲ್ಲಿ ಮಿಶ್ರಾಗೆ 30 ಸಾವಿರ ಡಾಲರ್ ನಗದು ಲಭಿಸಿತು. 2005ರಲ್ಲಿ ಅನುರಾಗ್ ಕಾಶ್ಯಪ್ ಎಂಬ ವಿದ್ಯಾರ್ಥಿ `ಅಪೋಜಿತುರಾ' ಎಂಬ ಪದವನ್ನು ಸರಿಯಾಗಿ ಉಚ್ಚರಿಸಿ ಸ್ಪೆಲ್ಲಿಂಗ್ ಹೇಳಿ ಇದೇ ಪ್ರಶಸ್ತಿ ಗೆದ್ದಿದ್ದರು.

2008: ಇಥಿಯೋಪಿಯಾದ ಪೂರ್ವ ಭಾಗದಲ್ಲಿ ಸಂಭವಿಸಿದ ಹಠಾತ್ ಪ್ರವಾಹಕ್ಕೆ ಸಿಕ್ಕಿ 25 ಮಂದಿ ಮೃತರಾದರು. ವೇಬ್ ಮತ್ತು ಶೆಬೆಲ್ ನದಿಗಳು ಉಕ್ಕಿ ಹರಿದುದರಿಂದ ಜಿಜಿಗಾದಲ್ಲಿ ಈ ಸಾವು ಸಂಭವಿಸಿತು.

2008: ಪೆರುವಿನಲ್ಲಿ 1980-2000 ಅವಧಿಯಲ್ಲಿ ನಡೆದ ಆಂತರಿಕ ಯುದ್ಧದ ಸಂದರ್ಭದಲ್ಲಿ 100 ಮಕ್ಕಳನ್ನು ಗುಂಡಿಟ್ಟು ಕೊಂದು ಸಾಮೂಹಿಕವಾಗಿ ಹೂತ ಸ್ಥಳವೊಂದು ಅಯಾಕುಚೋ ಪ್ರಾಂತ್ಯದ ಪುಟಿಸ್ ಗುಡ್ಡಗಾಡು ಪ್ರದೇಶದಲ್ಲಿ ಪತ್ತೆಯಾಯಿತು. 1984ರಲ್ಲಿ ನೂರಾರು ಜನರನ್ನು ಕೊಂದ ಬಳಿಕ ಜನರು ಈ ಪ್ರದೇಶ ತೊರೆದಿದ್ದರು.

2008: ಮ್ಯಾನ್ಮಾರಿನ ಈಶಾನ್ಯ ಭಾಗದಲ್ಲಿ ಜನಾಂಗೀಯ ಶಾನ್ ಬಂಡುಕೋರರು ಗಿರಣಿಗೆ ಬೆಂಕಿ ಹಚ್ಚಿ ಎಂಟು ಜನರನ್ನು ಕೊಂದರು.

2008: ನೇಪಾಳದ ಸಿಂಹಾಸನವನ್ನು `ಶಾಂತಿಯುತ' ರೀತಿಯಲ್ಲಿ ತೊರೆಯಲು ದೊರೆ ಜ್ಞಾನೇಂದ್ರ ಸಮ್ಮತಿಸಿದ್ದರೂ, ತಮಗೆ, ತಮ್ಮ ಕುಟುಂಬಕ್ಕೆ ಸೂಕ್ತ ವಸತಿ ಮತ್ತು ಭದ್ರತೆ ಒದಗಿಸಬೇಕು ಎಂದು ಆಗ್ರಹಿಸಿದ್ದಾರೆ. ಸಂವಿಧಾನ ರಚನಾ ಸಭೆಯ ಐತಿಹಾಸಿಕ ನಿರ್ಧಾರವನ್ನು ಗೌರವಿಸಲು ಮತ್ತು ಶಾಂತಿಯುತವಾಗಿ ಸಿಂಹಾಸನ ತೊರೆಯಲು ದೊರೆ ಒಪ್ಪಿದ್ದಾರೆ ಎಂದು ನಾರಾಯಣಹಿತಿ ಅರಮನೆಯನ್ನು ನೋಡಿಕೊಳ್ಳುವ ಕಾರ್ಯದರ್ಶಿ ಪ್ರದೀಪ್ ಆರ್ಯಾಲ್ ತಿಳಿಸಿದರು. ಸರ್ಕಾರವು ದೊರೆಗೆ ಔಪಚಾರಿಕ ಪತ್ರ ಕಳುಹಿಸಿ, 15 ದಿನಗಳ ಒಳಗೆ ಅರಮನೆ ತೊರೆಯಲು ಕೇಳಿಕೊಂಡಿತ್ತು. ಮೇ 28ರಂದು ಸಂವಿಧಾನ ರಚನಾ ಸಭೆಯು 240 ವರ್ಷಗಳ ಕಾಲದ ರಾಜಮನೆತನವನ್ನು ಕೊನೆಗೊಳಿಸುವ ಐತಿಹಾಸಿಕ ನಿರ್ಧಾರ ಕೈಗೊಂಡಿತ್ತು. ಈ ಮಧ್ಯೆ, ದೊರೆ ಜ್ಞಾನೇಂದ್ರ ಅವರು ಅರಮನೆ ತೊರೆದಿದ್ದಾರೆ ಎಂಬ ವದಂತಿಗಳನ್ನು ಗೃಹ ಸಚಿವ ಕೃಷ್ಣ ಪ್ರಸಾದ್ ಸಿತೂಲಾ ಅವರು ಅಲ್ಲಗಳೆದರು.

2008: ಪೆರು ಗಡಿಯ ಸಮೀಪದ ಬ್ರೆಜಿಲಿನ ಅಮೆಜಾನ್ ಪ್ರದೇಶದಲ್ಲಿ ಇದುವರೆಗೆ ಯಾರ ಸಂಪರ್ಕಕ್ಕೂ ಬಾರದ `ಇಂಡಿಯನ್' ಬುಡಕಟ್ಟು ಜನಾಂಗವೊಂದು ಪತ್ತೆಯಾಗಿದೆ ಎಂದು `ಫುನೈ' ಹೆಸರಿನ ಸರ್ಕಾರಿ ಪ್ರತಿಷ್ಠಾನ ಹೇಳಿತು.

2008: ಆಸ್ಟ್ರೇಲಿಯಾ ತಂಡದ ನಾಯಕ ರಿಕಿ ಪಾಂಟಿಂಗ್ ಅವರು ಟೆಸ್ಟ್ ಕ್ರಿಕೆಟ್ಟಿನಲ್ಲಿ 10 ಸಾವಿರ ರನ್ ಪೂರೈಸಿದ ಸಾಧನೆ ತಮ್ಮದಾಗಿಸಿದರು. ವೆಸ್ಟ್ ಇಂಡೀಸ್ ವಿರುದ್ಧ ಅಂಟಿಗುವಾದಲ್ಲಿ ಆರಂಭವಾದ ಎರಡನೇ ಕ್ರಿಕೆಟ್ ಟೆಸ್ಟ್ ಪಂದ್ಯದ ಮೊದಲ ದಿನ 61 ರನ್ ಗಳಿಸಿದ ಸಂದರ್ಭ ಅವರು ಈ ಮೈಲಿಗಲ್ಲು ನೆಟ್ಟರು. 33 ರ ಹರೆಯದ ಪಾಂಟಿಂಗ್ ಈ ಸಾಧನೆ ಮಾಡುತ್ತಿದ್ದಂತೆಯೇ ತಮ್ಮ ಬ್ಯಾಟ್ ಮೇಲೆತ್ತಿ ಸಂಭ್ರಮಿಸಿದರು. ಈ ವೇಳೆ ಬ್ಯಾಟಿಂಗ್ ಮಾಡುತ್ತಿದ್ದ ಸಹ ಆಟಗಾರ ಕಾಟಿಚ್ ಪಾಂಟಿಂಗ್ ಅವರನ್ನು ಅಭಿನಂದಿಸಿದರು. ಟೆಸ್ಟ್ ಕ್ರಿಕೆಟ್ಟಿನಲ್ಲಿ 10 ಸಾವಿರ ರನ್ ಪೂರೈಸಿದ ವಿಶ್ವದ ಏಳನೇ ಮತ್ತು ಆಸ್ಟ್ರೇಲಿಯಾದ ಮೂರನೇ ಬ್ಯಾಟ್ಸ್ ಮನ್ ಎಂಬ ಗೌರವಕ್ಕೆ ಪಾಂಟಿಂಗ್ ಪಾತ್ರರಾದರು. ಈ ಸಾಧನೆ ಮಾಡಿದ ಆಸ್ಟ್ರೇಲಿಯಾದ ಇತರ ಇಬ್ಬರೆಂದರೆ ಸ್ಟೀವ್ ವಾ ಮತ್ತು ಅಲನ್ ಬಾರ್ಡರ್. ಪಾಂಟಿಂಗ್ ತಮ್ಮ 118ನೇ ಟೆಸ್ಟ್ ಪಂದ್ಯದಲ್ಲಿ ಈ ಸಾಧನೆ ಮಾಡಿದರು. ಬ್ರಯನ್ ಲಾರಾ (111 ಟೆಸ್ಟ್) ಬಳಿಕ ಅತಿ ಕಡಿಮೆ ಪಂದ್ಯಗಳಲ್ಲಿ ಈ ಸಾಧನೆ ಮಾಡಿದ ಬ್ಯಾಟ್ಸ್ ಮನ್ ಎಂಬ ಗೌರವವನ್ನು ಪಾಂಟಿಂಗ್ ಪಡೆದರು. ಭಾರತದ ಸುನಿಲ್ ಗಾವಸ್ಕರ್, ಸಚಿನ್ ತೆಂಡೂಲ್ಕರ್ ಮತ್ತು ರಾಹುಲ್ ದ್ರಾವಿಡ್ ಅವರು `10 ಸಾವಿರ ರನ್ ಕ್ಲಬ್' ಸೇರಿದ ಇತರ ಬ್ಯಾಟ್ಸ್ ಮನ್ನರು.

2008: ಗಲಾಪಗೋಸ್ ದ್ವೀಪ ಸಮೂಹದಲ್ಲಿ ದೊಡ್ಡದಾದ ಇಸಬೆಲ್ಲಾ ದ್ವೀಪದ ಬೃಹತ್ ಜ್ವಾಲಾಮುಖಿ ಸೆರೋ ಅಝುಲ್ ಲಾವಾರಸ ಹೊರಸೂಸತೊಡಗಿತು. ಈ ಲಾವಾರಸ ಹೊರಸೂಸುವ ಈ ಚಿತ್ರವನ್ನು ಗಲಾಪಗೋಸ್ ರಾಷ್ಟ್ರೀಯ ಉದ್ಯಾನ ಅಧಿಕಾರಿಗಳು ಈದಿನ ಬಿಡುಗಡೆ ಮಾಡಿದರು.

2008: ಪುಣೆಯ ಖಡಕ್ ವಾಸ್ಲಾದಲ್ಲಿ ನಡೆದ ನ್ಯಾಷನಲ್ ಡಿಫೆನ್ಸ್ ಅಕಾಡೆಮಿ (ಎನ್ಡಿಎ)ಯ ನಿರ್ಗಮನ ಪಥ ಸಂಚಲನದಲ್ಲಿ ಪಾಲ್ಗೊಂಡ್ದಿದ ಕೇಂದ್ರ ರಕ್ಷಣಾ ಸಚಿವ ಎ.ಕೆ.ಆಂಟನಿ ಅವರು ವೇದಿಕೆಯಲ್ಲೇ ಕಣ್ಣು ಕತ್ತಲೆ ಬಂದು ಕುಸಿದು ಬಿದ್ದು ಮೂರ್ಛೆ ಹೋದ ಪರಿಣಾಮ ಅವರನ್ನು ತಕ್ಷಣ ಆಸ್ಪತ್ರೆಗೆ ದಾಖಲಿಸಲಾಯಿತು.

2008: ಆಋಷಿ ಕೊಲೆಗೆ ಸಂಬಂಧಿಸಿದಂತೆ ಸಿಬಿಐ ತನಿಖೆ ನಡೆಸುವಂತೆ ಕೋರಿ ಉತ್ತರ ಪ್ರದೇಶ ಸರ್ಕಾರ ಕಳುಹಿಸಿದ್ದ ಪತ್ರ ಕೇಂದ್ರ ಸರ್ಕಾರಕ್ಕೆ ತಲುಪಿತು. ಸಿಬ್ಬಂದಿ ಸಚಿವಾಲಯ ಈ ಪತ್ರವನ್ನು ಸಿಬಿಐಗೆ ರವಾನಿಸಿದ್ದು, ಜೋಡಿ ಕೊಲೆಯ ಹಿಂದಿನ ರಹಸ್ಯವನ್ನು ಭೇದಿಸುವಂತೆ ತಿಳಿಸಿತ್ತು. ನೋಯ್ಡಾದಲ್ಲಿ ಡಿಪಿಎಸ್ ಶಾಲೆಯಲ್ಲಿ 9ನೇ ತರಗತಿ ಓದುತ್ತಿದ್ದ ಆಋಷಿ ತನ್ನ ಮನೆಯಲ್ಲಿ 2008ರ ಮೇ 16ರಂದು ಕೊಲೆಯಾಗಿದ್ದಳು. ಈಕೆಯ ಜೊತೆಗೆ ಅವರ ಮನೆಯ ನೌಕರ ಹೇಮರಾಜನೂ ಕೊಲೆಯಾಗಿದ್ದ.

2008: ಗುರ್ಜರ್ ಚಳವಳಿಯನ್ನು ಸಮರ್ಪಕವಾಗಿ ನಿರ್ವಹಿಸಲಿಲ್ಲ ಎಂಬ ಕಾರಣಕ್ಕೆ ರಾಜಸ್ಥಾನ ಸರ್ಕಾರವು ಪೊಲೀಸ್ ಮಹಾ ನಿರ್ದೇಶಕ ಎ. ಎಸ್. ಗಿಲ್ ಅವರನ್ನು ದೀರ್ಘಕಾಲದ ರಜೆಯ ಮೇಲೆ ತೆರಳುವಂತೆ ಆದೇಶಿಸಿತು. ಭ್ರಷ್ಟಾಚಾರ ನಿಗ್ರಹ ದಳದ ವಿಶೇಷ ಪೊಲೀಸ್ ಮಹಾ ನಿರ್ದೇಶಕ ಕೆ. ಎಸ್. ಬೈನ್ಸ್ ಅವರು ನೂತನ ಡಿಜಿಪಿಯಾಗಿ ಅಧಿಕಾರ ವಹಿಸಿಕೊಂಡರು.

2008: ಸಿಡ್ನಿ ವಿಶ್ವವಿದ್ಯಾಲಯದ ಸಂಶೋಧಕ ಹಾಗೂ ಭಾರತದ ಶ್ರೇಷ್ಠ ಯುವ ವಿಜ್ಞಾನಿ ಪ್ರಶಸ್ತಿ ಪುರಸ್ಕೃತ ಡಾ.ರಾಜಕುಮಾರ ಶಿವಪ್ಪ ರಡ್ಡೇರ (35) ಈದಿನ ನಸುಕಿನ ಜಾವ ಹೃದಯಾಘಾತದಿಂದ ಮುಳವಾಡ ಗ್ರಾಮದಲ್ಲಿ ನಿಧನರಾದರು. ಬಸವನ ಬಾಗೇವಾಡಿ ತಾಲ್ಲೂಕು ಮುಳವಾಡ ಗ್ರಾಮದವರಾದ ಈ ಯುವ ವಿಜ್ಞಾನಿ ರಡ್ಡೇರ ಅವರಿಗೆ 2003ರಲ್ಲಿಭಾರತ ಸರಕಾರ `ಶ್ರೇಷ್ಠ ಯುವ ವಿಜ್ಞಾನಿ' ಪ್ರಶಸ್ತಿ ನೀಡಿ ಪುರಸ್ಕರಿಸಿತ್ತು.

2008: ಭೂಮಿ ಬಿಸಿಯಾಗುವಿಕೆ, ಜಾಗತಿಕ ತಾಪಮಾನದಿಂದ ಧ್ರುವ ಪ್ರದೇಶಗಳಲ್ಲಿನ ಹಿಮ ಗರಿಷ್ಠ ಪ್ರಮಾಣದಲ್ಲಿ ಕರಗುತ್ತ ಸಮುದ್ರದ ನೀರಿನ ಮಟ್ಟದಲ್ಲಿ ಆಗುವ ಹೆಚ್ಚಳವು ಅನೇಕ ದೇಶಗಳಲ್ಲಿ ಭಾರಿ ಅನಾಹುತಕ್ಕೆ ಎಡೆ ಮಾಡಿಕೊಡಲಿದೆ ಎಂದು ವಿಶ್ವಬ್ಯಾಂಕ್ ವರದಿ ಮತ್ತೊಮ್ಮೆ ಎಚ್ಚರಿಸಿತು. ಒಟ್ಟು 84 ಅಭಿವೃದ್ಧಿಶೀಲ ದೇಶಗಳ ಕರಾವಳಿ ಪ್ರದೇಶದಲ್ಲಿನ ಇತ್ತೀಚಿನ ಬದಲಾವಣೆಗಳ ಬಗ್ಗೆ ಉಪಗ್ರಹಗಳಿಂದ ಪಡೆದ ನಕ್ಷೆ ಮತ್ತು ಇತರ ಮಾಹಿತಿ ವಿಶ್ಲೇಷಿಸಿ ಈ ವರದಿ ಸಿದ್ಧಪಡಿಸಲಾಗಿದೆ.
ಸಮುದ್ರದ ನೀರಿನ ಮಟ್ಟ ಹೆಚ್ಚಳದಿಂದ ತೀರ ಪ್ರದೇಶದಲ್ಲಿ ವಾಸಿಸುವವರ ಜನಜೀವನ, ಒಟ್ಟು ರಾಷ್ಟ್ರೀಯ ಉತ್ಪನ್ನ (ಜಿಡಿಪಿ), ನಗರ ಪ್ರದೇಶ ಮತ್ತು ಕೃಷಿ ಯೋಗ್ಯ ಭೂಮಿ ಮೇಲೆ ಆಗುವ ಒಟ್ಟಾರೆ ಪರಿಣಾಮಗಳನ್ನು ವರದಿಯಲ್ಲಿ ಪಟ್ಟಿ ಮಾಡಲಾಗಿದೆ. `ಪರಿಸರ ನಿರಾಶ್ರಿತರ' ಹೊಸ ಸಮಸ್ಯೆ ಉದ್ಭವವಾಗಲಿದೆ ಎಂದು ವರದಿ ಎಚ್ಚರಿಸಿತು. ಸಮುದ್ರದಲ್ಲಿ ಒಂದು ಮೀಟರಿನಷ್ಟು ನೀರು ಹೆಚ್ಚಿದರೆ (ಅಂದಾಜು ಶೇ 0.3ರಷ್ಟು) ಅದರಿಂದ 1,94,000 ಚದರ ಕಿ.ಮೀಗಳಷ್ಟು ಭೂಮಿಯ 5.5 ಕೋಟಿ ಜನರು (ಒಟ್ಟು ಜನಸಂಖ್ಯೆಯ ಶೇ 1.28ರಷ್ಟು) ಸಂಕಷ್ಟಕ್ಕೆ ಒಳಗಾಗುವರು. ಈ ದೇಶಗಳ ಜಿಡಿಪಿ ನಷ್ಟವು ಶೇ 1.3ರಷ್ಟಾಗುವುದು. ಪ್ರತಿಯೊಂದು ದೇಶಗಳ ನಷ್ಟದ ಅಂದಾಜನ್ನು ಬೇರೆ, ಬೇರೆ ಮಾನದಂಡಗಳ ಆಧಾರದ ಮೇಲೆ ಲೆಕ್ಕ ಹಾಕಲಾಗಿದೆ ಎಂದು ವರದಿ ತಿಳಿಸಿತು. ಪಶ್ಚಿಮ ಬಂಗಾಳದ ಸುಂದರಬನ ಮತ್ತು ಒರಿಸ್ಸಾದ ಸತಭಯ ಪ್ರದೇಶದಲ್ಲಿ ಸಮುದ್ರ ರಾಜನ ಆರ್ಭಟಕ್ಕೆ ಕಳೆದ ಒಂದೂವರೆ ದಶಕದಲ್ಲಿ ಸಾಕಷ್ಟು ಭೂಮಿ ಜಲಾವೃತವಾಗಿದೆ. ಎರಡೂವರೆ ಕಿ.ಮೀಗಳಷ್ಟು ದೂರ ನೀರು ಆಕ್ರಮಿಸಿಕೊಂಡಾಗಿದೆ ಎಂದು ಸ್ಥಳೀಯರು ಹೇಳುತ್ತಾರೆ. ಈ ಪ್ರದೇಶದಲ್ಲಿನ ಏಳು ಗ್ರಾಮಗಳ ಸಂಖ್ಯೆ ಈಗ ಒಂದಕ್ಕೆ ಇಳಿದಿದೆ. ಕೃಷಿ ಭೂಮಿಯಂತೂ ಇಲ್ಲವೇ ಇಲ್ಲ. ಇಂತಹ `ಪರಿಸರ ನಿರಾಶ್ರಿತರ' ಪರಿಸ್ಥಿತಿಯ ಗಂಭೀರತೆ ಸರ್ಕಾರದ ಅರಿವಿಗೆ ಬರಬೇಕು. ಇನ್ನಷ್ಟು ಭೂಮಿ ಸಮುದ್ರ ರಾಜನಿಗೆ ಆಪೋಶನಗೊಳ್ಳುವ ಮುನ್ನ ಸೂಕ್ತ ಮುನ್ನೆಚ್ಚರಿಕೆ ಕ್ರಮಗಳನ್ನು ಕೈಗೊಳ್ಳಬೇಕು ಎಂದು ವರದಿ ಹೇಳಿತು.

2008: ಆಲೋಚನೆಯಿಂದಲೇ ಯಂತ್ರಗಳನ್ನು ನಿಯಂತ್ರಿಸಲು ಸಾಧ್ಯ. ಮಾನವನಿಗೆ ಅಳವಡಿಸುವ ಯಾಂತ್ರಿಕ ಅಂಗಾಂಗಗಳನ್ನು ಬರೀ ಆಲೋಚನೆಯಿಂದಲೇ ಬೇಕಾದ ಹಾಗೆ ಬಳಸಲು ಸಾಧ್ಯ ಎನ್ನುವುದು ಕೋತಿಗಳ ಮೇಲಿನ ಪ್ರಯೋಗದಿಂದ ಸಾಬೀತಾಯಿತು. ಯಂತ್ರಗಳನ್ನು ನಿರ್ವಹಿಸುವ ಮೆದುಳಿನ ಆಲೋಚನಾ ಶಕ್ತಿಯ ಸಾಮರ್ಥ್ಯಕ್ಕೆ ಕೋತಿಗಳ ಮೇಲೆ ಪ್ರಯೋಗ ನಡೆಸಲಾಗಿತ್ತು. ಬೆನ್ನು ಹುರಿ ಗಾಯ, ಪಾರ್ಶ್ವವಾಯು ಮತ್ತಿತರ ಕಾಯಿಲೆಗಳಿಗೆ ಗುರಿಯಾಗಿ ಕೈಕಾಲು ಸ್ವಾಧೀನ ಕಳೆದುಕೊಳ್ಳುವವರಿಗೆ ಈ ಪ್ರಯೋಗದಿಂದ ಹೆಚ್ಚು ಉಪಯೋಗವಾಗಲಿದೆ. ಎರಡು ಕೋತಿಗಳ ಮೆದುಳಿನಲ್ಲಿ ಅಳವಡಿಸಿದ, ಸಂವೇದನೆ ಗ್ರಹಿಸುವ ಪುಟ್ಟ ಗಾತ್ರದ ಸಾಧನಗಳ ನೆರವಿನಿಂದ ಕೋತಿಗಳು ಯಾಂತ್ರಿಕ ತೋಳನ್ನು ನಿರ್ವಹಿಸುವುದನ್ನು ಸಮರ್ಪಕವಾಗಿ ತೋರಿಸಿವೆ. ಕೋತಿಗಳಿಗೆ ಅಳವಡಿಸಿದ ಯಾಂತ್ರಿಕ ಕೈಯನ್ನು ಅದರ ಆಲೋಚನೆಯಿಂದಲೇ ಯಶಸ್ವಿಯಾಗಿ ನಿರ್ವಹಿಸಲಾಯಿತು. ಪದಾರ್ಥ ತಲುಪಿಸಲು, ಆಹಾರ ಹಿಡಿಯಲು, ಯಾಂತ್ರಿಕ ಕೈಚಾಚಲು, ಅಗತ್ಯ ಬಿದ್ದಾಗ ಆಹಾರ ತುಂಡಿನ ಗಾತ್ರಕ್ಕೆ ಅನುಗುಣವಾಗಿ ಕೈಬೆರಳುಗಳ ಗಾತ್ರ ಕುಗ್ಗಿಸುವ, ಹಿಗ್ಗಿಸುವುದನ್ನೂ ಕೋತಿಗಳು ನಿರಾಯಾಸವಾಗಿ (ಯಾಂತ್ರಿಕವಾಗಿ) ನಿರ್ವಹಿಸಿದ್ದನ್ನು `ನೇಚರ್' ಪತ್ರಿಕೆ ವರದಿ ಮಾಡಿತು. ಈ ಪ್ರಯೋಗದಲ್ಲಿ ಕೋತಿಗಳಿಗೆ ಜೋಡಿಸಿದ ಕೃತಕ ಕೈಯನ್ನು ಅವುಗಳ ಮೆದುಳು ತನ್ನದೇ ದೇಹದ ಒಂದು ಅಂಗ ಎಂಬಂತೆ ಗುರುತಿಸುವಲ್ಲಿ ಸಂವೇದನೆಯ ಸಾಧನ ನೆರವಾಗಿತ್ತು. ಹೀಗಾಗಿ ಆ ಕೃತಕ ತೋಳನ್ನು ಸಹಜ ಕೈ ಎಂಬಂತೆ ಈ ಕೋತಿಗಳು ಬಳಸಿದ್ದವು. ಅಪಘಾತ ಮತ್ತು ಗಂಭೀರ ಸ್ವರೂಪದ ಕಾಯಿಲೆಗಳಲ್ಲಿ ಕೈಕಾಲುಗಳ ಮೇಲೆ ಸ್ವಾಧೀನ ಕಳೆದುಕೊಂಡವರಲ್ಲಿ ಹೊಸ ಭರವಸೆ ಮೂಡಿಸುವಲ್ಲಿ ಈ ಪ್ರಯೋಗ ಯಶಸ್ವಿಯಾಯಿತು.

2007: ಭಾಷಾ ಮಾಧ್ಯಮದ ಉಲ್ಲಂಘನೆಯ ಆರೋಪದಿಂದ ಮಾನ್ಯತೆ ಕಳೆದುಕೊಂಡ ಖಾಸಗಿ ಶಾಲೆಗಳ ಮಾನ್ಯತೆ ರದ್ದತಿಗೆ ತಾನು ಈ ಹಿಂದೆ ನೀಡಿದ ತಡೆಯಾಜ್ಞೆಯನ್ನು ಹೈಕೋರ್ಟ್ ಜೂನ್ 14ರವರೆಗೆ ವಿಸ್ತರಿಸಿತು.

2007: ಶಸ್ತ್ರಾಸ್ತ್ರ ಮದ್ದುಗುಂಡು, ಮದ್ದುಗುಂಡು ಸಾಗಣೆ, ಅಕ್ರಮವಾಗಿ ಶಸ್ತ್ರಾಸ್ತ್ರ ಹೊಂದಿರುವುದು ಮತ್ತು 1993ರ ಮುಂಬೈ ಸರಣಿ ಬಾಂಬ್ ಸ್ಫೋಟದ ಸಂಚಿನಲ್ಲಿ ವಹಿಸಿದ ಪಾತ್ರಕ್ಕಾಗಿ ಏಳು ಮಂದಿಗೆ ವಿಶೇಷ ಟಾಡಾ ನ್ಯಾಯಾಲಯವು ಐದು ವರ್ಷಗಳ ಕಠಿಣ ಸಜೆಯಿಂದ ಜೀವಾವಧಿ ಸಜೆವರೆಗಿನ ಶಿಕ್ಷೆಗಳನ್ನು ವಿಧಿಸಿತು.

2007: ಅಗ್ಗದ ದರದ ವಿಮಾನಯಾನ ಸಂಸ್ಥೆ ಏರ್ ಡೆಕ್ಕನ್ ತನ್ನ ಶೇಕಡಾ 26ರಷ್ಟು ಪಾಲನ್ನು ವಿಜಯ ಮಲ್ಯ ನೇತೃತ್ವದ ಯುಬಿ ಹೋಲ್ಡಿಂಗ್ಸ್ ಕಂಪೆನಿಗೆ ಮಾರಾಟ ಮಾಡಿರುವುದಾಗಿ ಘೋಷಿಸಿತು.

2007: ಜೈಬಾಸಾ ಬೊಕ್ಕಸದಿಂದ 1990ರ ದಶಕದಲ್ಲಿ 48 ಕೋಟಿ ರೂಪಾಯಿಗಳನ್ನು ಅಕ್ರಮವಾಗಿ ಪಡೆದುಕೊಂಡದ್ದಕ್ಕಾಗಿ ರೈಲ್ವೆ ಸಚಿವ ಲಾಲು ಪ್ರಸಾದ್ ಅವರ ಇಬ್ಬರು ಸೋದರಳಿಯಂದಿರು ಸೇರಿದಂತೆ ಒಟ್ಟು 58 ಮಂದಿಗೆ ಎರಡೂವರೆ ವರ್ಷಗಳಿಂದ 6 ವರ್ಷಗಳವರೆಗಿನ ಸೆರೆವಾಸದ ಶಿಕ್ಷೆಯನ್ನು ಮೇವು ಹಗರಣದ ವಿಚಾರಣೆ ನಡೆಸಿದ ವಿಶೇಷ ಸಿಬಿಐ ನ್ಯಾಯಾಲಯವು ವಿಧಿಸಿತು.

2007: ನೇತಾಜಿ ಸುಭಾಶ್ ಚಂದ್ರ ಬೋಸ್ ಅವರ ನಿಗೂಢ ಕಣ್ಮರೆ/ಸಾವಿಗೆ ಸಂಬಂಧಿಸಿದ ಕಡತವನ್ನು 30 ವರ್ಷಗಳ ಹಿಂದೆ ನಾಶ ಪಡಿಸಿದ್ದಕ್ಕೆ ಸಂಬಂಧಿಸಿದ ದಾಖಲೆಗಳನ್ನು ಕೇಳಿ ಕೇಂದ್ರೀಯ ಮಾಹಿತಿ ಆಯೋಗದ ಮುಂದೆ ಸಲ್ಲಿಸಲಾದ ಅರ್ಜಿಯನ್ನು ಪ್ರಧಾನ ಮಂತ್ರಿಗಳ ಕಚೇರಿ ಬಲವಾಗಿ ವಿರೋಧಿಸಿತು. ದೆಹಲಿ ಮೂಲಕ ಮಿಷನ್ ನೇತಾಜಿ ಸಂಸ್ಥೆ ಈ ಅರ್ಜಿ ಸಲ್ಲಿಸಿತ್ತು.

2006: ತತ್ ಕ್ಷಣ ಕರ್ತವ್ಯಕ್ಕೆ ಹಾಜರಾಗುವಂತೆ ಸುಪ್ರೀಂಕೋರ್ಟ್ ಆದೇಶಿಸಿದ್ದನ್ನು ಅನುಸರಿಸಿ ನವದೆಹಲಿಯ ಎಲ್ಲ ಪ್ರಮುಖ ವೈದ್ಯಕೀಯ ಕಾಲೇಜು ಆಸ್ಪತ್ರೆಗಳ ಸ್ಥಾನೀಯ ವೈದ್ಯರು ಮುಷ್ಕರಕ್ಕೆ ಅಂತ್ಯ ಘೋಷಿಸಿದರು. ಉನ್ನತ ಶಿಕ್ಷಣ ಸಂಸ್ಥೆಗಳಲ್ಲಿ ಮೀಸಲಾತಿ ವಿವಾದದ ಹಿನ್ನೆಲೆಯಲ್ಲಿ 20 ದಿನಗಳಿಂದ ವೈದ್ಯರು ಅಸಹಕಾರ ಚಳವಳಿ ನಡೆಸಿದ್ದರು.

2006: ಬ್ರಹ್ಮೋಸ್ ಸೂಪರ್ ಸಾನಿಕ್ ಕ್ರೂಸ್ ಕ್ಷಿಪಣಿಯ 12ನೇ ಹಾರಾಟ ಪರೀಕ್ಷೆಯನ್ನು ರಾಜಸ್ಥಾನ ಮರುಭೂಮಿಯಲ್ಲಿ ಯಶಸ್ವಿಯಾಗಿ ನಡೆಸಲಾಯಿತು.

2006: ಒರಿಸ್ಸಾದ ಕರಾವಳಿಯ ಆತಾಲ ಗ್ರಾಮದ ನಿವಾಸಿ ಬಸುದೇವ್ ಭೋಯಿ ಅವರ ಪುತ್ರಿ 30 ವರ್ಷದ ಬಿಂಬಾಲಿ ಭೋಯಿ ಎಂಬ ತರುಣಿ ಈ ದಿನ ನಾಗದೇವತೆಯನ್ನು ಶಾಸ್ತ್ರೋಕ್ತವಾಗಿ ಮದುವೆಯಾದಳು. ತನ್ನನ್ನು ವರಿಸಲು ಬಂದ ಯಾವುದೇ ವರ ಒಪ್ಪದೇ ಹೋದುದರಿಂದ ಬೇಸತ್ತ ಆಕೆ ಕೊನೆಗೆ ನಾಗದೇವತೆಯನ್ನು ಮದುವೆಯಾಗಲು ನಿರ್ಧರಿಸಿದಳು. ಕೆಲವು ದಿನಗಳ ಹಿಂದೆ 30ರ ಹರೆಯದ ಯುವಕನೊಬ್ಬ ಆಕೆಯ ತಾಯಿಯ ಬಳಿ ನಿಮ್ಮ ಮಗಳು 14 ವರ್ಷದಿಂದ ಪೂಜಿಸುತ್ತಾ ಬಂದ ನಾಗರ ಹಾವನ್ನು ಮದುವೆಯಾಗಲಿ ಎಂದು ಹೇಳಿದ್ದು ಹಾಗೂ ಇದಕ್ಕೂ ಮೊದಲು ಒಂದು ದಿನ ಮನೆಯ ಹಿಂಬದಿಯ ಹುತ್ತದಲ್ಲಿ ಹಾವು ಬಿಂಬಾಲಿಗೆ ದರ್ಶನ ನೀಡಿದ ಘಟನೆ ನಡೆದು, ಆ ಬಳಿಕ ಆಕೆ ಆ ಹಾವಿನೊಂದಿಗೆ ಪ್ರೀತಿ ಹೊಂದಿದ್ದಳು. ಕುಟುಂಬ ಸದಸ್ಯರು ಮೊದಲು ಈ ಮದುವೆಗೆ ಒಪ್ಪದಿದ್ದರೂ ನಂತರ ಗ್ರಾಮದ ಹಿರಿಯರ ಸಲಹೆ ಮೇರೆಗೆ ಆಕೆಗೂ ಕಂಚಿನಿಂದ ಮಾಡಿದ ಹಾವಿನ ಪ್ರತಿರೂಪಕ್ಕೂ ಶಾಸ್ತ್ರೋಕ್ತವಾಗಿ ಮದುವೆ ನೆರವೇರಿಸಲಾಯಿತು.

1996: ಹಿರಿಯ ಸಮಾಜವಾದಿ ಚಿಂತಕ ಜೆ.ಎಚ್. ಪಟೇಲ್ ಅವರು ಈದಿನ ಕರ್ನಾಟಕದ ಮುಖ್ಯಮಂತ್ರಿಯಾಗಿ ಅಧಿಕಾರ ಸ್ವೀಕರಿಸಿದರು.

1988: ಈ ದಿನವನ್ನು `ತಂಬಾಕುರಹಿತ ದಿನ' ಎಂದು ಆಚರಿಸಬೇಕು ಎಂದು ವಿಶ್ವ ಸ್ವಾಸ್ಥ್ಯ ಸಂಸ್ಥೆ ಘೋಷಿಸಿತು.

1962: ನಾಝಿ ಕ್ರಿಮಿನಲ್ ಅಡಾಲ್ಫ್ ಇಚ್ಮನ್ ಗೆ ಇಸ್ರೇಲಿನಲ್ಲಿ ಗಲ್ಲು ವಿಧಿಸಲಾಯಿತು. ಇದು ಇಸ್ರೇಲಿನ ಪ್ರಪ್ರಥಮ ಗಲ್ಲು ಶಿಕ್ಷೆ.

1939: ಜೈನ ಸಾಹಿತ್ಯ, ಸಿದ್ಧಾಂತಗಳಿಗೆ ಮಹತ್ವದ ಕಾಣಿಕೆಗಳನ್ನು ನೀಡಿದ ಸಾಹಿತಿ ಡಾ. ಎಸ್.ಪಿ. ಪಾಟೀಲ ಅವರು ಪೀರಗೌಡ ಧರ್ಮ ಗೌಡ ಪಾಟೀಲ- ಪದ್ಮಾವತಿ ದಂಪತಿಯ ಪುತ್ರನಾಗಿ ಮಹಾರಾಷ್ಟ್ರದ ಸಾಂಗಲಿಯಲ್ಲಿ ಈದಿನ ಜನಿಸಿದರು.

1928: ಪದ್ಮಶ್ರೀ ಪ್ರಶಸ್ತಿ ಪುರಸ್ಕೃತ ಕ್ರಿಕೆಟಿಗ ಪಂಕಜ್ ಖಿರೋಡ್ ಜನನ.

1911: ಜಗತ್ತಿನ ಅತ್ಯಾಧುನಿಕ ನೌಕೆ `ಟೈಟಾನಿಕ್' ಬೆಲ್ ಫಾಸ್ಟ್ ನಿಂದ ತನ್ನ ಮೊದಲ ಪಯಣ ಆರಂಭಿಸಿತು.

1845; ರೂಕ್ಸ್ ಇವೆಲಿನ್ ಬೆಲ್ ಕ್ರಾಂಪ್ಟನ್ (1845-1940) ಜನ್ಮದಿನ. ಬ್ರಿಟಿಷ್ ಸಂಶೋಧಕನಾದ ಈತ ವಿದ್ಯುತ್ ದೀಪಗಳ ಅಭಿವೃದ್ಧಿಯಲ್ಲಿ ಮಹತ್ವದ ಪಾತ್ರ ವಹಿಸಿದ.

1818: ವಿಲಿಯಂ ಕ್ಯಾರೀ ಮತ್ತು ಸೆರಾಂಪೋರಿನ ಜೊಶುವಾ ಮಾರ್ಶ್ ಮ್ಯಾನ್ ನೇತೃತ್ವದಲ್ಲಿ ಬಂಗಾಳಿಯಲ್ಲಿ ಪ್ರಪ್ರಥಮ ಪ್ರಾದೇಶಿಕ ಭಾಷಾ ಪತ್ರಿಕೆ `ಸಮಾಚಾರ್ ದರ್ಪಣ್' ಪ್ರಕಟಣೆ ಆರಂಭವಾಯಿತು.

1578: ರೋಮ್ನ ಸಮಾಧಿ ಗುಹೆಗಳು ಅನಿರೀಕ್ಷಿತವಾಗಿ ಪತ್ತೆಯಾದವು. ಉತ್ತರ ರೋಮ್ನ ಪ್ರವೇಶದ್ವಾರದಲ್ಲಿ ಕೆಲವು ಕಾರ್ಮಿಕರ ಭೂಮಿ ಅಗೆಯುತ್ತಿದ್ದಾಗ ಸಮಾಧಿಗುಹೆಯೊಂದರ ಸುರಂಗ ಕಾಣಿಸಿ, ಸಮಾಧಿ ಗುಹೆ ಬೆಳಕಿಗೆ ಬಂತು. ಹದಿನೈದು ವರ್ಷಗಳ ನಂತರ ನಂತರ 1593ರಲ್ಲಿ 18ರ ತರುಣ ಆಂಟಾನಿಯೋ ಬೋಸಿಯೋ ಈ ಗುಹಾ ಸಮಾಧಿಗಳ ಪತ್ತೆ ಕಾರ್ಯ ಆರಂಭಿಸಿದ. ತಮ್ಮ ಜೀವಮಾನಪೂರ್ತಿ ಇದೇ ಕಾರ್ಯ ಮಾಡಿದ ಈತ ಈ ಸಮಾಧಿ ಗುಹೆಗಳ ಮಧ್ಯೆ ಸಂಪರ್ಕ ಇದ್ದುದನ್ನು ಪತ್ತೆ ಹಚ್ಚಿದ. ಅವುಗಳಿಗೆ 30 ಹೆಚ್ಚುವರಿ ಪ್ರವೇಶದ್ವಾರಗಳು ಇದ್ದುದನ್ನೂ ಪತ್ತೆ ಮಾಡಿದ. ಈ ಸಮಾಧಿ ಗುಹೆಗಳು ಮೂರನೇ ಶತಮಾನದಷ್ಟು ಪ್ರಾಚೀನ ಕಾಲದವು. ಸ್ಮಶಾನಗಳಲ್ಲಿ ಶವ ಹೂಳದಂತೆ ಬಹಿಷ್ಕೃತರಾಗಿದ್ದ ಕ್ರೈಸ್ತರು ಈ ಗುಹೆಗಳಲ್ಲಿ ಶವಗಳನ್ನು ಹೂಳುತ್ತಿದ್ದರು.

Sunday, May 30, 2010

ಇಂದಿನ ಇತಿಹಾಸ History Today ಮೇ 30

ಇಂದಿನ ಇತಿಹಾಸ

ಮೇ 30

ಬಡವರಿಗೆ ರಿಯಾಯಿತಿ ದರದಲ್ಲಿ ನಗರ ಸಾರಿಗೆ ಸೇವೆ ಒದಗಿಸುವ 'ಅಟಲ್ ಸಾರಿಗೆ' ಬಸ್ಸುಗಳ ಸಂಚಾರಕ್ಕೆ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರು ಬೆಂಗಳೂರು ನ್ಯಾಷನಲ್ ಹೈಸ್ಕೂಲ್ ಮೈದಾನದಲ್ಲಿ ಹಸಿರು ನಿಶಾನೆ ತೋರಿಸುವ ಮೂಲಕ ಚಾಲನೆ ನೀಡಿದರು. ಆರ್ಥಿಕವಾಗಿ ಹಿಂದುಳಿದವರು ಹೆಚ್ಚಾಗಿ ವಾಸಿಸುವ ಆಯ್ದ ಸ್ಥಳಗಳಿಂದ ಈ ಬಸ್ಸುಗಳು ಹತ್ತಿರದ ಬಸ್ ನಿಲ್ದಾಣಗಳವರೆಗೆ ಸಂಚರಿಸುತ್ತವೆ.

2009: ಆಸ್ಟ್ರೇಲಿಯಾ ವಿಶ್ವವಿದ್ಯಾನಿಲಯವೊಂದು ತಮಗೆ ನೀಡ ಬಯಸಿರುವ ಗೌರವ ಡಾಕ್ಟರೇಟ್ ಪದವಿಯನ್ನು ಬಾಲಿವುಡ್ ನಟ ಅಮಿತಾಭ್ ಬಚ್ಚನ್ ನಿರಾಕರಿಸಿದರು. ಆ ದೇಶದಲ್ಲಿ ಭಾರತೀಯರ ಮೇಲೆ ನಡೆಯುತ್ತಿರುವ ಜನಾಂಗೀಯ ದಾಳಿಯನ್ನು ಪ್ರತಿಭಟಿಸಿ ಅವರು ಈ ನಿರ್ಧಾರಕ್ಕೆ ಬಂದರು. ಬ್ರಿಸ್ಬೇನ್‌ನ ಕ್ವೀನ್ಸ್‌ಲ್ಯಾಂಡ್ ವಿಶ್ವವಿದ್ಯಾನಿಲಯ 66 ವರ್ಷದ ಅಮಿತಾಭ್ ಅವರು ಮನರಂಜನಾ ಪ್ರಪಂಚಕ್ಕೆ ನೀಡಿರುವ ಕೊಡುಗೆಯನ್ನು ಆಧರಿಸಿ ಈ ಪದವಿಯನ್ನು ನೀಡಲು ಮುಂದೆ ಬಂದಿತ್ತು. ಇದನ್ನು ಈ ಮುನ್ನ ಬಚ್ಚನ್ ಒಪ್ಪಿಕೊಂಡಿದ್ದರು. 'ಆಸ್ಟ್ರೇಲಿಯಾದಲ್ಲಿ ಭಾರತೀಯ ವಿದ್ಯಾರ್ಥಿಗಳ ಮೇಲೆ ಇತ್ತೀಚೆಗೆ ನಡೆದಿರುವ ದಾಳಿಯನ್ನು ಮಾಧ್ಯಮಗಳಲ್ಲಿ ಕಂಡು ನನಗೆ ಹತಾಶೆ ಮತ್ತು ದಿಗ್ಭ್ರಮೆಯಾಗಿದೆ. ಪದವಿ ನಿರಾಕರಿಸುವ ಮೂಲಕ ನನಗೆ ಗೌರವ ನೀಡುತ್ತಿರುವ ಸಂಸ್ಥೆಗೆ ನಾನು ಅಗೌರವ ತೋರುತ್ತಿಲ್ಲ' ಎಂದೂ ಅವರು ಸ್ಪಷ್ಟ ಪಡಿಸಿದರು.

2009: ಬಡವರಿಗೆ ರಿಯಾಯಿತಿ ದರದಲ್ಲಿ ನಗರ ಸಾರಿಗೆ ಸೇವೆ ಒದಗಿಸುವ 'ಅಟಲ್ ಸಾರಿಗೆ' ಬಸ್ಸುಗಳ ಸಂಚಾರಕ್ಕೆ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರು ಬೆಂಗಳೂರು ನ್ಯಾಷನಲ್ ಹೈಸ್ಕೂಲ್ ಮೈದಾನದಲ್ಲಿ ಹಸಿರು ನಿಶಾನೆ ತೋರಿಸುವ ಮೂಲಕ ಚಾಲನೆ ನೀಡಿದರು. ಆರ್ಥಿಕವಾಗಿ ಹಿಂದುಳಿದವರು ಹೆಚ್ಚಾಗಿ ವಾಸಿಸುವ ಆಯ್ದ ಸ್ಥಳಗಳಿಂದ ಈ ಬಸ್ಸುಗಳು ಹತ್ತಿರದ ಬಸ್ ನಿಲ್ದಾಣಗಳವರೆಗೆ ಸಂಚರಿಸುತ್ತವೆ. ಕೊಳೆಗೇರಿ ನಿವಾಸಿಗಳು, ಗಾರ್ಮೆಂಟ್ ಕಾರ್ಮಿಕರು ಮೊದಲಾದ ಕೂಲಿ ಕಾರ್ಮಿಕರಿಗೆ ರಿಯಾಯಿತಿ ದರದ ಸಾರಿಗೆ ಸೇವೆ ಸಿಗುವುದು. ರಾಜ್ಯ ಬಿಜೆಪಿ ಸರ್ಕಾರಕ್ಕೆ ಒಂದು ವರ್ಷ ತುಂಬಿದ ಸಂದರ್ಭವನ್ನು ನೆನಪಿನಲ್ಲಿಡಲು ನಗರದಲ್ಲಿ 'ಅಟಲ್ ಸಾರಿಗೆ' ಹೆಸರಿನಲ್ಲಿ ಶೇಕಡಾ 50ರಷ್ಟು ಕಡಿಮೆ ಪ್ರಯಾಣದ ದರ ಸೌಲಭ್ಯವನ್ನು ಸರ್ಕಾರ ಕಲ್ಪಿಸಿತು. ವಿಕಾಸ ಸಂಕಲ್ಪ ಉತ್ಸವಕ್ಕೆ ಸಜ್ಜಾದ ನಗರದ ನ್ಯಾಷನಲ್ ಹೈಸ್ಕೂಲ್ ಮೈದಾನದಲ್ಲಿ ಕೇಸರಿ ಮತ್ತು ಹಸಿರು ಬಣ್ಣದ ಪಟ್ಟಿ ಹೊಂದಿರುವ 'ಅಟಲ್ ಸಾರಿಗೆ' ಬಸ್‌ಗಳಿಗೆ ಮುಖ್ಯಮಂತ್ರಿ ಹಸಿರು ನಿಶಾನೆ ತೋರಿದರು.

2009: ಮುಂಬೈ ಮೇಲಿನ ದಾಳಿಗೆ ಕಾರಣ ಎನ್ನಲಾದ ಜಮಾತ್-ಉದ್ ದವಾ (ಜೆಯುಡಿ) ಸಂಘಟನೆ ಅಲ್ ಖೈದಾ ಜತೆ ಸಂಪರ್ಕ ಹೊಂದಿದೆ ಎಂದು ಇದೇ ಮೊದಲ ಬಾರಿ ಪಾಕಿಸ್ಥಾನ ಒಪ್ಪಿಕೊಂಡಿತು. ಜೆಯುಡಿ ಅಲ್ ಖೈದಾ ಜತೆ ಸಂಪರ್ಕ ಹೊಂದಿದೆ ಎಂಬುದು ಮೇಲ್ನೋಟಕ್ಕೆ ಸಾಬೀತಾಗಿದೆ ಎಂದು ಪಾಕ್ ಸರ್ಕಾರ ಹೇಳಿತು. ಜೆಯುಡಿ ಮುಖ್ಯಸ್ಥ ಹಫೀಜ್ ಸಯೀದ್ ಬಂಧನವನ್ನು ಪ್ರಶ್ನಿಸಿ ಸಲ್ಲಿಸಿದ್ದ ಅರ್ಜಿಯ ವಿಚಾರಣೆಯ ಸಂದರ್ಭದಲ್ಲಿ ಪಾಕಿಸ್ಥಾನದ ಅಟಾರ್ನಿ ಜನರಲ್ ಲತೀಫ್ ಖೋಸಾ ಲಾಹೋರ್ ಹೈಕೋರ್ಟ್ ಮುಂದೆ ಈ ವಿಚಾರ ಮಂಡಿಸಿದರು.

2009: ಬೆಂಗಳೂರು ವಿಶ್ವವಿದ್ಯಾಲಯವು ಬೆಂಗಳೂರು ನಗರದಲ್ಲಿ ಹಮ್ಮಿಕೊಂಡಿದ್ದ ಕಾರ್ಯಕ್ರಮದಲ್ಲಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರು ಆದಿಚುಂಚನಗಿರಿ ಮಠದ ಬಾಲಗಂಗಾಧರನಾಥ ಸ್ವಾಮೀಜಿ ಅವರಿಗೆ ಗೌರವ ಡಾಕ್ಟರೇಟ್ ಪದವಿ ಪ್ರದಾನ ಮಾಡಿದರು.

2008: ಜನ ಸಾಗರದ ಹರ್ಷೋದ್ಘಾರ, ಕಿವಿಗಡಚಿಕ್ಕುವ ಪಟಾಕಿಗಳ ಸದ್ದು, ಮುಗಿಲು ಮುಟ್ಟುವ ಜಯ ಘೋಷಗಳ ನಡುವೆ ಬೂಕನಕೆರೆ ಸಿದ್ಧಲಿಂಗಪ್ಪ ಯಡಿಯೂರಪ್ಪ ಅವರು ನಾಡಿನ 19ನೇ ಮುಖ್ಯಮಂತ್ರಿಯಾಗಿ ರೈತ ಮತ್ತು ಭಗವಂತನ ಹೆಸರಿನಲ್ಲಿ ಪ್ರಮಾಣ ವಚನ ಸ್ವೀಕರಿಸುವುದರೊಂದಿಗೆ ದಕ್ಷಿಣ ಭಾರತದಲ್ಲಿ ಪ್ರಥಮ ಬಾರಿಗೆ ಪೂರ್ಣ ಪ್ರಮಾಣದ ಬಿಜೆಪಿ ಸರ್ಕಾರ ಕರ್ನಾಟಕದಲ್ಲಿ ಅಸ್ತಿತ್ವಕ್ಕೆ ಬಂದಿತು. ಯಡಿಯೂರಪ್ಪ ಅವರೊಂದಿಗೆ ಐವರು ಪಕ್ಷೇತರರು, ಪಕ್ಷದ ಮೂವರು ವಿಧಾನ ಪರಿಷತ್ ಸದಸ್ಯರು ಮತ್ತು ಇಪ್ಪತ್ತು ಮಂದಿ ವಿಧಾನಸಭಾ ಸದಸ್ಯರು ಹಾಗೂ ಎರಡೂ ಸದನದ ಸದಸ್ಯರಲ್ಲದ ಡಾ.ಮುಮ್ತಾಜ್ ಅಲಿ ಖಾನ್ ಸೇರಿ ಇತರ 29 ಮಂದಿ ಸಂಪುಟ ದರ್ಜೆ ಸಚಿವರಾಗಿ ವಿಧಾನಸೌಧದ ಮುಂಭಾಗದಲ್ಲಿ ನಿರ್ಮಿಸಲಾಗಿದ್ದ ವಿಶೇಷ ವೇದಿಕೆಯಲ್ಲಿ ಪ್ರಮಾಣವಚನ ಸ್ವೀಕರಿಸಿದರು. ನೂತನ ಸಚಿವರು: ಕೆ.ಎಸ್.ಈಶ್ವರಪ್ಪ, ಡಾ.ವಿ.ಎಸ್. ಆಚಾರ್ಯ, ಗೋವಿಂದ ಕಾರಜೋಳ, ರಾಮಚಂದ್ರಗೌಡ, ಸಿ.ಎಂ.ಉದಾಸಿ, ಆರ್. ಅಶೋಕ್, ಮುಮ್ತಾಜ್ ಅಲಿಖಾನ್, ಶೋಭಾ ಕರಂದ್ಲಾಜೆ, ಬಿ.ಎನ್.ಬಚ್ಚೇಗೌಡ, ವಿಶ್ವೇಶ್ವರ ಹೆಗಡೆ ಕಾಗೇರಿ, ಬಿ.ಶ್ರೀರಾಮುಲು, ಕರುಣಾಕರ ರೆಡ್ಡಿ, ಜನಾರ್ದನ ರೆಡ್ಡಿ, ಎಸ್.ಎ. ರವೀಂದ್ರ ನಾಥ್, ಬಸವರಾಜ ಬೊಮ್ಮಾಯಿ, ಎಸ್. ಸುರೇಶ ಕುಮಾರ್, ರೇವುನಾಯ್ಕ್ ಬೆಳಮಗಿ, ಕೃಷ್ಣ ಪಾಲೆಮಾರ್, ಅರವಿಂದ ಲಿಂಬಾವಳಿ, ಎಸ್.ಕೆ.ಬೆಳ್ಳುಬ್ಬಿ, ಶಿವರಾಜ್ ತಂಗಡಗಿ, ಎಸ್.ಎನ್.ಕೃಷ್ಣಯ್ಯ ಶೆಟ್ಟಿ, ಲಕ್ಷ್ಮಣ ಸವದಿ, ಮುರುಗೇಶ್ ನಿರಾಣಿ, ನರೇಂದ್ರಸ್ವಾಮಿ, ಹಾಲಪ್ಪ
ವೆಂಕಟರಮಣಪ್ಪ, ಡಿ. ಸುಧಾಕರ್ ಮತ್ತು ಗೂಳಿಹಟ್ಟಿ ಶೇಖರ್.

2008: ಆಂಧ್ರಪ್ರದೇಶದ ವಿಶಾಖಪಟ್ಟಣಂನ ನೈಋತ್ಯ ಭಾಗದ ಹಲವು ಹಳ್ಳಿಗಳಲ್ಲಿ ಸಂಜೆ 4.50ರ ವೇಳೆಗೆ ಭೂಕಂಪ ಸಂಭವಿಸಿತು. ಈ ಕಂಪನದ ತೀವ್ರತೆ ರಿಕ್ಟರ್ ಮಾಪಕದಲ್ಲಿ 3.7ರಷ್ಟಿತ್ತು ಎಂದು ಚಂಡಮಾರುತ ಮುನ್ಸೂಚನಾ ಕೇಂದ್ರ ತಿಳಿಸಿತು. ನರ್ಸಿಪಟ್ನಂ ಗ್ರಾಮದಲ್ಲಿ ಮೂರು ಸೆಕೆಂಡುಗಳ ಕಾಲ ಭೂಮಿ ಕಂಪಿಸಿ, ಪಾತ್ರೆಗಳು ಉರುಳಿ ಬಿದ್ದವು. ಗಾಬರಿಯಾದ ಜನ ತಮ್ಮ ಮನೆಗಳಿಂದ ಹೊರಗೆ ಓಡಿ ಬಂದರು. ಮಕಾವರಿಪಲೇಂ, ಕೊಟೌರತ್ಲಾ, ನಟವರಂ, ಅನಕಪಲ್ಲಿ, ಪದೇರು, ಚೊಡಾವರಂ, ಕೊಥಾಕೊಟಾ, ಕಸ್ಮಿಕೊಟಾ, ಎಲೆಮಂಚಿಲಿ, ಬುಚ್ಚಿಯಪೇಟ ಮುಂತಾದೆಡೆ ಭೂಕಂಪದ ಅನುಭವವಾಯಿತು.

2008: ಆರು ವರ್ಷಗಳ ಹಿಂದೆ ದೇಶಾದ್ಯಂತ ಸಂಚಲನ ಮೂಡಿಸಿದ್ದ ನಿತೀಶ್ ಕಟಾರಾ ಕೊಲೆ ಪ್ರಕರಣದಲ್ಲಿ ಉತ್ತರ ಪ್ರದೇಶದ ರಾಜಕಾರಣಿ ಡಿ.ಪಿ. ಯಾದವ್ ಅವರ ಪುತ್ರ ವಿಕಾಸ್ ಯಾದವ್ ಹಾಗೂ ಆತನ ಸಹೋದರ ಸಂಬಂಧಿ ವಿಶಾಲ್ ಯಾದವ್ ಗೆ ದೆಹಲಿ ನ್ಯಾಯಾಲಯ ಜೀವಾವಧಿ ಶಿಕ್ಷೆ ವಿಧಿಸಿ ಆದೇಶ ನೀಡಿತು. ಈ ಪ್ರಕರಣದಲ್ಲಿ ತೀರ್ಪು ನೀಡಿದ ಹೆಚ್ಚುವರಿ ಸೆಶನ್ಸ್ ನ್ಯಾಯಾಧೀಶೆ ರವೀಂದರ್ ಕೌರ್ 'ಇಬ್ಬರು ತಪ್ಪಿತಸ್ಥರಿಗೂ ನಾನು ಜೀವಾವಧಿ ಶಿಕ್ಷೆ ನೀಡಿದ್ದೇನೆ. ಮರಣ ದಂಡನೆಗೆ ಅರ್ಹವಾದ ಪ್ರಕರಣ ಇದಲ್ಲ' ಎಂದು ಅಭಿಪ್ರಾಯ ವ್ಯಕ್ತಪಡಿಸಿದರು. ವಿಕಾಸ್ ಹಾಗೂ ವಿಶಾಲ್ ಯಾದವ್ 2002ರ ಫೆಬ್ರುವರಿ 16ರಂದು ಘಜಿಯಾಬಾದಿನ ಮದುವೆ ಸಮಾರಂಭವೊಂದರಿಂದ ನಿತೀಶ್ ಕಟಾರಾನನ್ನು ಅಪಹರಿಸಿ ಕೊಂದು ಹಾಕಿದ್ದರು. ತನ್ನ ಸಹೋದರಿ ಭಾರತಿ ಯಾದವ್ ಜೊತೆ ಕಟಾರಾ ಆತ್ಮೀಯವಾಗಿದ್ದುದನ್ನು ವಿಕಾಸ್ ವಿರೋಧಿಸುತ್ತಿದ್ದ. ನಿತೀಶ್ ತಾಯಿ ನೀಲಂ ಕಟಾರಾ, ಮಗನ ಕೊಲೆಗಾರರಿಗೆ ಶಿಕ್ಷೆಯಾಗುವತನಕ ಹೋರಾಡುವುದಾಗಿ ಪಣ ತೊಟ್ಟಿದ್ದರು.

2008: ಮಾಟ ಮಂತ್ರ ಮಾಡುತ್ತಿದ್ದ ಆರೋಪದ ಮೇರೆಗೆ 31 ವರ್ಷದ ಬುಡಕಟ್ಟು ಮಹಿಳೆಯೊಬ್ಬರನ್ನು ಸಜೀವ ದಹನ ಮಾಡಿದ ದಾರುಣ ಘಟನೆ ದಕ್ಷಿಣ ಒರಿಸ್ಸಾದ ಕೋರಾಪಟ್ ಜಿಲ್ಲೆಯ ಬಾಡಮಾಥೂರ್ ಗ್ರಾಮದಲ್ಲಿ ನಡೆಯಿತು. ಮಾರಮಣಿ ಜುಗೂರ್ ಎಂಬಾಕೆ ಸಜೀವ ದಹನಗೊಂಡ ನತದೃಷ್ಟೆ. ಈ ಕೃತ್ಯ ಎಸಗಿದ ಮೂವರ ಪೈಕಿ ಒಬ್ಬನ ಪತ್ನಿ ಮಹಿಳೆಯ ಮಾಟ ಮಂತ್ರದಿಂದಲೇ ಮೃತಪಟ್ಟಿದ್ದಾಳೆ ಎಂದು ನಂಬಿ ಈ ಹೇಯ ಕೃತ್ಯ ಎಸಗಲಾಯಿತು.

2008: ಕೊಲೆ ಪ್ರಕರಣವೊಂದರಲ್ಲಿ ಬಿಹಾರದ ಮಾಜಿ ಪಶು ಸಂಗೋಪನಾ ಸಚಿವ ಆದಿತ್ಯ ಸಿಂಗ್ ಮತ್ತು ಅವರ ಪುತ್ರ ಸುಮನ್ ಸಿಂಗ್ ತಪ್ಪಿತಸ್ಥರು ಎಂದು ಬಿಹಾರದ ನವಾಡಾ ಸ್ಥಳೀಯ ನ್ಯಾಯಾಲಯ ತೀರ್ಪು ನೀಡಿತು.

2008: ರಾಜಸ್ಥಾನದ ಸವಾಯ್ ಮಾಧೋಪುರ ಜಿಲ್ಲೆಯಲ್ಲಿ ಗುಜ್ಜರ್ ಪ್ರತಿಭಟನೆಯ ವೇಳೆ ಹಿಂಸಾಚಾರಕ್ಕೆ ಇಳಿದ ಜನರ ಮೇಲೆ ಪೊಲೀಸರು ಗುಂಡು ಹಾರಿಸಿದ್ದರಿಂದ ಇಬ್ಬರು ಮೃತರಾಗಿ ಇತರ ಇಬ್ಬರು ಗಂಭೀರವಾಗಿ ಗಾಯಗೊಂಡರು.

2008: ಗ್ರಾಮೀಣ ಪ್ರವಾಸೋದ್ಯಮವನ್ನು ಬೆಳೆಸಲು ರೂಪಿಸಲಾಗಿರುವ `ವಿಸ್ಮಯ ಭಾರತ' ಆಂದೋಲನ ಯೋಜನೆಯ ಪಟ್ಟಿಗೆ ಹಂಪಿ ಸಮೀಪದ ಆನೆಗೊಂದಿಯನ್ನು ಸೇರಿಸಲು ಕೇಂದ್ರ ಸರ್ಕಾರ ನಿರ್ಧರಿಸಿತು. ವಿಜಯನಗರ ಸಾಮ್ರಾಜ್ಯದ ಮೊದಲ ರಾಜಧಾನಿಯಾದ ಆನೆಗೊಂದಿಗೆ ದೇಶೀಯ ಹಾಗೂ ವಿದೇಶಿ ಪ್ರವಾಸಿಗರನ್ನು ಸೆಳೆಯುವ ಉದ್ದೇಶದಿಂದ ಕೇಂದ್ರ ಪ್ರವಾಸೋದ್ಯಮ ಇಲಾಖೆಯು ಈ ನಿರ್ಧಾರಕ್ಕೆ ಬಂದಿತು. ಪ್ರವಾಸೋದ್ಯಮ ಕಾರ್ಯದರ್ಶಿ ಎಸ್.ಬ್ಯಾನರ್ಜಿ ಅವರು, `ಈ ಯೋಜನೆಯಡಿ ದೇಶದಲ್ಲಿ ಆಯ್ಕೆ ಮಾಡಲಾದ 36 ಸ್ಥಳಗಳಲ್ಲಿ ಆನೆಗೊಂದಿ ಕೂಡ ಒಂದು' ಎಂದು ತಿಳಿಸಿದರು.

2008: ನಾಸಾದ ಮೂರು ಮಹಾನ್ ವೀಕ್ಷಣಾ ಪರಿಕರಗಳು ಸಂಗ್ರಹಿಸಿದ `ಕ್ಯಾಸಿಯೊಪಿಯಾ ಎ' ಹೆಸರಿನ ಬೃಹತ್ ನಕ್ಷತ್ರದ ಅವಶೇಷದ ಕಣ್ಮನ ಸೆಳೆಯುವ `ತಾತ್ಕಾಲಿಕ' ಬಣ್ಣದ ಚಿತ್ರವನ್ನು ಬಿಡುಗಡೆ ಮಾಡಲಾಯಿತು. ಈ ಚಿತ್ರವು ನಕ್ಷತ್ರಗಳ ಆಯುಷ್ಯ ಸಹಿತ ಖಗೋಳದ ಹಲವು ವಿಸ್ಮಯಗಳನ್ನೂ ಬಿಚ್ಚಿಟ್ಟಿತು. ಸ್ಪಿಟ್ಜರ್ ಸ್ಪೇಸ್ ಟೆಲಿಸ್ಕೋಪಿನಿಂದ ತೆಗೆದ ಚಿತ್ರ ಕೆಂಪು ಬಣ್ಣವನ್ನು, ಹಬ್ಬಲ್ ಸ್ಪೇಸ್ ಟೆಲಿಸ್ಕೋಪ್ ಹಳದಿ ಬಣ್ಣವನ್ನು ಮತ್ತು ಚಂದ್ರ ಎಕ್ಸರೇ ಅಬ್ಸರ್ವೇಟರಿ ಹಸಿರು ಮತ್ತು ನೀಲಿ ಬಣ್ಣವನ್ನು ದಾಖಲಿಸಿವೆ. ಹಲವು ವರ್ಷಗಳ ಹಿಂದೆ ನಕ್ಷತ್ರಗಳು ಸ್ಫೋಟಗೊಂಡು ನಾಶಗೊಂಡದ್ದರ ನಿಗೂಢ ಅಂಶಗಳನ್ನು ಪತ್ತೆಹಚ್ಚುವುದಕ್ಕೆ ಖಗೋಳ ತಜ್ಞರಿಗೆ ಇಂತಹ ಚಿತ್ರಗಳು ನೆರವಿಗೆ ಬರುತ್ತವೆ. ನಮ್ಮ ಕ್ಷೀರಪಥದಲ್ಲಿನ ಬೃಹತ್ ನಕ್ಷತ್ರಗಳ ಆಯಸ್ಸು ಅಳೆಯುವ ಕಾರ್ಯಕ್ಕೆ ಇದರಿಂದ ಹೊಸ ಆಯಾಮ ದೊರಕಿತು. ಈ ನಕ್ಷತ್ರ ಭೂಮಿಯಿಂದ 11,000 ಜ್ಯೋತಿರ್ ವರ್ಷ ದೂರದಲ್ಲಿ ಇರುವುದರಿಂದ ಈ ಚಿತ್ರದಲ್ಲಿನ ನಕ್ಷತ್ರ 11,300 ಜ್ಯೋತಿರ್ ವರ್ಷಗಳ ಹಿಂದೆ ನಾಶವಾದುದು ಸ್ಪಷ್ಟವಾಯಿತು. ನಕ್ಷತ್ರದಲ್ಲಿ ಸ್ಫೋಟ ಸಂಭವಿಸಿ ಉಂಟಾದ ಈ ಅದ್ಭುತ ಬಣ್ಣದ ಬೆಳಕು ಭೂಮಿಗೆ ತಲುಪಲು 300 ವರ್ಷ ಹಿಡಿದಿತ್ತು.

2008: ನೇಪಾಳವನ್ನು ಗಣರಾಜ್ಯ ಎಂದು ಘೋಷಿಸಿದ ಬೆನ್ನಲ್ಲಿಯೇ ಪದಚ್ಯುತ ದೊರೆ ಜ್ಞಾನೇಂದ್ರ ಅವರು ತಮಗೆ ನೀಡಿದ ಗಡುವಿಗೆ ಮುನ್ನವೇ ಈದಿನ ಮಧ್ಯರಾತ್ರಿ ನಾರಾಯಣಹಿತಿ ಅರಮನೆಯನ್ನು ತೊರೆದರು. ಮಧ್ಯರಾತ್ರಿ ಅರಮನೆ ತೊರೆದ ದೊರೆ ತಮ್ಮ ಕುಟುಂಬ ವರ್ಗದೊಂದಿಗೆ ಖಾಸಗಿ ನಿವಾಸವಾದ ಮಹಾರಾಜಾಗಂಜ್ನ ನಿರ್ಮಲ್ ನಿವಾಸಕ್ಕೆ ತೆರಳಿದರು ಎಂದು ಟಿವಿ ಚಾನೆಲ್ ಒಂದು ಪ್ರಸಾರ ಮಾಡಿತು. ನಿರ್ಮಲ್ ನಿವಾಸ್ ನಾರಾಯಣಹಿತಿ ಅರಮನೆಯಿಂದ ಮೂರು ಮೈಲಿ ದೂರದಲ್ಲಿದೆ. ಆದರೆ ದೊರೆಯ ಆಪ್ತ ಕಾರ್ಯದರ್ಶಿ ಪಶುಪತಿ ಭಕ್ತಾ ಮಹಾರಾಜನ್ ಇದನ್ನು ಅಲ್ಲಗಳೆದು, ಅರಮನೆ ತೊರೆಯಲು 15 ದಿನಗಳು ಕಾಲಾವಕಾಶ ಪಡೆದಿರುವ ಜ್ಞಾನೇಂದ್ರ ಇನ್ನೂ ಅಲ್ಲಿಯೇ ವಾಸವಾಗಿದ್ದಾರೆ ಎಂದು ಸ್ಪಷ್ಟ ಪಡಿಸಿದರು.

2008: ಭಾರತೀಯ ಮೂಲದ ಬಿಬಿಸಿ ವರದಿಗಾರ್ತಿ ಆಂಜೆಲ್ ಸೈನಿ (27) ಅವರಿಗೆ ಯೂರೋಪಿನ ಪ್ರತಿಷ್ಠಿತ `ಪ್ರಿಕ್ಸ್ ಸಿರ್ಕೊಮ್' ಪತ್ರಿಕೋದ್ಯಮ ಪ್ರಶಸ್ತಿ ಲಭಿಸಿತು. ಬ್ರಿಟನ್ನಿನಲ್ಲಿನ ನಕಲಿ ವಿಶ್ವವಿದ್ಯಾಲಯಗಳ ಕಾರ್ಯವೈಖರಿ ಬಯಲುಗೊಳಿಸುವ ಸಾಕ್ಷ್ಯಚಿತ್ರ ನಿರ್ಮಿಸಿದ್ದಕ್ಕಾಗಿ ಅವರಿಗೆ ಈ ಪ್ರಶಸ್ತಿ ಲಭಿಸಿತು. ಭಾರತೀಯರ ಸಹಿತ ಸಾವಿರಾರು ವಿದೇಶಿ ವಿದ್ಯಾರ್ಥಿಗಳನ್ನು ಸೆಳೆಯುತ್ತಿದ್ದ `ಐರಿಷ್ ಇಂಟರ್ ನ್ಯಾಷನಲ್ ಯೂನಿವರ್ಸಿಟಿ' ಬಗ್ಗೆ ಅವರು ಈ ತನಿಖಾ ವರದಿ ಸಿದ್ಧಪಡಿಸಿದ್ದರು.

2007: ಭಾಷಾ ಮಾಧ್ಯಮದ ಉಲ್ಲಂಘನೆಯ ಆರೋಪದಿಂದ ಮಾನ್ಯತೆ ಕಳೆದುಕೊಂಡ 2215 ಖಾಸಗಿ ಶಾಲೆಗಳು ಇನ್ನು ಮುಂದೆ ತಾವು ಅನುಮತಿ ಪಡೆದಿರುವ ಮಾಧ್ಯಮದಲ್ಲಿಯೇ ಬೋಧಿಸುವಂತೆ ವಾರದ ಹಿಂದೆ ನೀಡಿದ ಆದೇಶದಲ್ಲಿ ಮಾರ್ಪಾಡು ಮಾಡಲು ಕರ್ನಾಟಕ ಹೈಕೋರ್ಟ್ ನಿರಾಕರಿಸಿತು.

2007: ಅಡುಗೆ ಅರಿಶಿಣದಿಂದ ಕ್ಯಾನ್ಸರ್ ಗುಣಪಡಿಸಬಹುದು ಎಂಬುದನ್ನು ತಾನು ಪತ್ತೆ ಹಚ್ಚಿರುವುದಾಗಿ ಆದಿ ಚುಂಚನಗಿರಿ ಮಹಾಸಂಸ್ಥಾನದ ಕ್ಯಾನ್ಸರ್ ಸಂಶೋಧನಾ ಸಂಸ್ಥೆ ಪ್ರಕಟಿಸಿತು. ಕ್ಯಾನ್ಸ ರಿಗಷ್ಟೇ ಅಲ್ಲ ಹಾವು ಕಡಿತಕ್ಕೂ ಅಡುಗೆ ಅರಿಶಿಣ ಮದ್ದು ಎಂಬುದು ಸಂಶೋಧನೆಯಿಂದ ದೃಢಪಟ್ಟಿದೆ ಎಂದು ಸಂಶೋಧಕಿ ಡಾ. ಲೀಲಾ ಶ್ರೀನಿವಾಸನ್ ಅವರು ಬೆಂಗಳೂರಿನಲ್ಲಿ ಆದಿ ಚುಂಚನಗಿರಿ ಮಠದಲ್ಲಿ ಶ್ರೀ ಬಾಲಗಂಗಾಧರನಾಥ ಸ್ವಾಮೀಜಿ ಸಮ್ಮುಖದಲ್ಲಿ ಪ್ರಕಟಿಸಿದರು.

2007: ಮಹಿಳೆಯರು ಹಾನಿಕಾರಕ ಪ್ಲಾಸ್ಟಿಕ್ ಸ್ಟಿಕರ್ಸ್ ಗಳಿಗೆ (ಟಿಕಲಿ) ಬದಲಾಗಿ ಬಳಸಹುದಾದ ನಂಜುಮುಕ್ತ, ಪರಿಸರ ಸ್ನೇಹಿ ನೈಸರ್ಗಿಕ ಸಿಂಧೂರವನ್ನು ಅವಿಷ್ಕರಿಸಿರುವುದಾಗಿ ಲಖನೌ ಮೂಲದ ರಾಷ್ಟ್ರೀಯ ಸಸ್ಯ ಸಂಶೋಧನಾ ಸಂಸ್ಥೆ (ಎನ್ಬಿಆರ್ಐ) ಪ್ರಕಟಿಸಿತು.

2007: ಗುರ್ಜರ ಜನಾಂಗವನ್ನು ಪರಿಶಿಷ್ಟರ ಪಟ್ಟಿಗೆ ಸೇರಿಸಬೇಕು ಎಂದು ಸರ್ಕಾರವನ್ನು ಆಗ್ರಹಿಸಿ ಪ್ರತಿಭಟನೆ ಮಾಡಿದವರ ಮೇಲೆ ಪೊಲೀಸರು ಗೋಲಿಬಾರ್ ಮಾಡ್ದಿದನ್ನು ಖಂಡಿಸಿ ಗುರ್ಜರ ಮೀಸಲಾತಿ ಕ್ರಿಯಾ ಸಮಿತಿ ಕರೆಯ ಮೇರೆಗೆ ರಾಜಸ್ಥಾನದ ವಿವಿಧ ಪ್ರದೇಶಗಳಲ್ಲಿ ಸಂಪೂರ್ಣ ಬಂದ್ ಆಚರಿಸಲಾಯಿತು. ದೌಸಾ ಜಿಲ್ಲೆಯ ದುಬಿ ಮತ್ತು ಸಿಕಂದ್ರಾದಲ್ಲಿ ಎರಡು ಪೊಲೀಸ್ ಠಾಣೆಗಳಿಗೆ ಉದ್ರಿಕ್ತರು ಕಿಚ್ಚಿಟ್ಟರು.

2007: ಚಲನಚಿತ್ರೋದ್ಯಮ ರಂಗದಲ್ಲಿ `ಸ್ನೇಹಲ್ ಭಾಟ್ಕರ್' ಎಂದೇ ಖ್ಯಾತರಾಗಿದ್ದ ಗಾಯಕ ವಾಸುದೇವ ಗೋವಿಂದ ಭಾಟ್ಕರ್ (88) ಹೃದಯಾಘಾತದಿಂದ ನಿಧನರಾದರು. ಭಾಟ್ಕರ್ ಅವರು ಹಿಂದಿ ಮತ್ತು ಮರಾಠಿ ಚಿತ್ರಗಳಿಗೆ ಹಲವಾರು ಜನಪ್ರಿಯ ಹಾಡುಗಳನ್ನು ರಚಿಸಿದ್ದರು.

2006: ರಾಷ್ಟ್ರೀಯ ಸಲಹಾ ಮಂಡಳಿ ಅಧ್ಯಕ್ಷ ಹುದ್ದೆ ಸೇರಿದಂತೆ 56 ಹುದ್ದೆಗಳನ್ನು `ಲಾಭದಾಯಕ' ವ್ಯಾಪ್ತಿಯಿಂದ ಹೊರಗಿಡುವ ಮಸೂದೆಯನ್ನು ರಾಷ್ಟ್ರಪತಿ ಅಬ್ದುಲ್ ಕಲಾಂ ವಾಪಸ್ ಕಳುಹಿಸಿದರು. ಸಂಸದರು ಮತ್ತು ಶಾಸಕರನ್ನು `ಲಾಭದ ಹುದ್ದೆ' ವಿವಾದದಿಂದ ಪಾರುಮಾಡಲು ಯತ್ನಿಸಿದ್ದ ಕೇಂದ್ರ ಸರ್ಕಾರಕ್ಕೆ ರಾಷ್ಟ್ರಪತಿ ಕ್ರಮದಿಂದ ಹಿನ್ನಡೆಯಾಯಿತು.

2006: ಭಾರತದ ಗೌರಿ ಶಂಕರ್ ಅವರು ಚಿಕಾಗೊ ಅಂತಾರಾಷ್ಟ್ರೀಯ ಓಪನ್ ಚೆಸ್ ಚಾಂಪಿಯನ್ ಶಿಪ್ ನಲ್ಲಿ ಮೊದಲ ಸ್ಥಾನ ಪಡೆದುಕೊಂಡರು.

2006: ಕ್ಯಾನ್ನೆಸ್ಸಿನಲ್ಲಿ ಎರಡು ಬಾರಿ ಪ್ರತಿಷ್ಠಿತ ಪಾಲ್ಮೆ ಡಿ'ಓರ್ ಪ್ರಶಸ್ತಿಯನ್ನು ಗೆದ್ದ ಜಪಾನಿನ ಪ್ರಥಮ ಚಿತ್ರ ನಿರ್ದೇಶಕ ಶೋಹೆಲ್ ಇಮಾಮುರಾ ಈ ದಿನ 79ನೇ ವಯಸ್ಸಿನಲ್ಲಿ ನಿಧನರಾದರು. 1983ರಲ್ಲಿ ಪಾಲ್ಮೆ ಡಿ'ಓರ್ ಪ್ರಶಸ್ತಿಯನ್ನು `ದಿ ಬ್ಯಾಲ್ಲಡ್ ಆಫ್ ನರಯಾಮ'ಕ್ಕೆ ಪಡೆದಿದ್ದ ಇಮಾಮುರಾ, 1997ರಲ್ಲಿ `ದಿ ಎಲ್' ಗೆ ಈ ಪ್ರಶಸ್ತಿಯನ್ನು ಎರಡನೇ ಬಾರಿಗೆ ಪಡೆದರು.

1991: ಉಮಾಶಂಕರ ದೀಕ್ಷಿತ್ ನಿಧನರಾದರು.

1987: ಗೋವಾ ಭಾರತದ 25ನೇ ರಾಜ್ಯವಾಯಿತು. ಇಲ್ಲಿಯವರೆಗೆ ಅದು ಕೇಂದ್ರಾಡಳಿತ ಪ್ರದೇಶವಾಗಿತ್ತು.

1959: ಸರ್ ಕ್ರಿಸ್ಟೋಫರ್ ಕೋಕರೆಲ್ ಅವರು ವಿನ್ಯಾಸಗೊಳಿಸಿದ ಮೊತ್ತ ಮೊದಲ ಪ್ರಾಯೋಗಿಕ ಹೋವರ್ ಕ್ರಾಫ್ಟಿಗೆ ಐಲ್ ಆಫ್ ವೈಟ್ ನಲ್ಲಿ ಚಾಲನೆ ಸಿಕ್ಕಿತು. ಪ್ರಾರಂಭದಲ್ಲಿ ಇದನ್ನು ಸೇನಾ ಸೇವೆಗಾಗಿ ಮಾತ್ರ ಎಂಬುದಾಗಿ ರೂಪಿಸಲಾಗಿತ್ತಾದರೂ ನಂತರ ನಾಗರಿಕ ಬಳಕೆಗೆ ಇದನ್ನು ಬಿಡುಗಡೆ ಮಾಡಲಾಯಿತು.

1950: ಕಲಾವಿದೆ ಶೋಭಾ ಹುಣಸಗಿ ಜನನ.

1948: ಸುಗಮ ಸಂಗೀತರ ಗಾನ ಕೋಗಿಲೆ ಎಂದೇ ಖ್ಯಾತರಾಗಿದ್ದ ಪಂಕಜ ಸಿಂಹ (30-5-1948ರಿಂದ 20-12-2000) ಅವರು ಅಡ್ವೋಕೇಟ್ ಗೋವಿಂದರಾವ್- ಖ್ಯಾತ ಪಿಟೀಲು ವಾದಕಿ ಶಾರದಮ್ಮ ದಂಪತಿಯ ಮಗಳಾಗಿ ಹಾಸನದಲ್ಲಿ ಜನಿಸಿದರು.

1919: ಅಮೃತಸರದಲ್ಲಿ ನಡೆದ ಜಲಿಯನ್ ವಾಲಾ ಬಾಗ್ ಹತ್ಯಾಕಾಂಡವನ್ನು ಪ್ರತಿಭಟಿಸಿ ರಬೀಂದ್ರನಾಥ ಟ್ಯಾಗೋರ್ ಅವರು ತಮಗೆ ನೀಡಲಾಗಿದ್ದ `ನೈಟ್ ಹುಡ್' ಪದವಿಯನ್ನು ನಿರಾಕರಿಸಿ ಲಾರ್ಡ್ ಚೆಮ್ಸ್ ಫೋರ್ಡ್ ಅವರಿಗೆ ಪತ್ರ ಬರೆದರು.

1907: ನರೇಗಲ್ಲ ಮಾಸ್ತರ ಎಂದೇ ಖ್ಯಾತರಾಗಿದ್ದ ನರೇಗಲ್ಲ ಪ್ರಹ್ಲಾದರಾಯರು (30-5-1907ರಿಂದ 1977) ನವಲಗುಂದ ತಾಲ್ಲೂಕಿನ ಜಾವೂರಿನಲ್ಲಿ ಅನಂತರಾವ್ ನರೇಗಲ್ಲ- ಅಂಬಾಬಾಯಿ ಪುತ್ರನಾಗಿ ಜನಿಸಿದರು.

1895: ಖ್ಯಾತ ಇತಿಹಾಸಕಾರ ಪಾಂಡುರಂಗ ಶಂಕರಂ ಜನನ.

1606: ಸಿಖ್ ಧರ್ಮದ ಐದನೆಯ ಗುರುಗಳಾಗಿದ್ದ ಗುರು ಅರ್ಜುನ್ ದೇವ್ ಅವರನ್ನು ಬಂಡುಕೋರ ರಾಜಕುಮಾರ ಖುಸ್ರು ಬಗ್ಗೆ ಅನುಕಂಪ ವ್ಯಕ್ತಪಡಿಸಿದ ಕಾರಣಕ್ಕಾಗಿ ಮೊಘಲ್ ದೊರೆ ಜಹಾಂಗೀರ್ ಚಿತ್ರಹಿಂಸೆಗೆ ಗುರಿಪಡಿಸಿ ಕೊಲ್ಲಿಸಿದ. ಸಿಖ್ ಧರ್ಮದ ಮೊದಲನೆಯ ಹುತಾತ್ಮರಾದ ಅರ್ಜುನ್ ದೇವ್ `ಗುರು ಗ್ರಂಥ ಸಾಹಿಬ್'ನ್ನು ಸಂಕಲನಗೊಳಿಸಿದವರು.

Saturday, May 29, 2010

ಇಂದಿನ ಇತಿಹಾಸ History Today ಮೇ 29

ಇಂದಿನ ಇತಿಹಾಸ

ಮೇ 29

ಅಮೆರಿಕದ ವಾಷಿಂಗ್ಟನ್ನಿನಲ್ಲಿ ನಡೆದ ಸ್ಮರಣ ಶಕ್ತಿಗೆ ಸವಾಲೆಸೆಯುವ ರಾಷ್ಟ್ರೀಯ 'ಸ್ಪೆಲ್ಲಿಂಗ್ ಬೀ' (ಕಾಗುಣಿತ) ಸ್ಪರ್ಧೆಯಲ್ಲಿ ಕ್ಯಾನ್ಸಾಸ್‌ನ ಒಲಥೆ ನಿವಾಸಿ ಭಾರತೀಯ ಮೂಲದ 13 ವರ್ಷದ ಕಾವ್ಯಾ ಶಿವಶಂಕರ್ ಪಾರಿತೋಷಕ ಪಡೆದುಕೊಂಡರು. ಕಳೆದ ಮೂರು ವರ್ಷಗಳಲ್ಲೂ ಕಾವ್ಯ ಈ ಸ್ಪರ್ಧೆಯ ಅಂತಿಮ ಹಂತ ತಲುಪಿದ್ದರು.

2009: ಅಮೆರಿಕದ ವಾಷಿಂಗ್ಟನ್ನಿನಲ್ಲಿ ನಡೆದ ಸ್ಮರಣ ಶಕ್ತಿಗೆ ಸವಾಲೆಸೆಯುವ ರಾಷ್ಟ್ರೀಯ 'ಸ್ಪೆಲ್ಲಿಂಗ್ ಬೀ' (ಕಾಗುಣಿತ) ಸ್ಪರ್ಧೆಯಲ್ಲಿ ಕ್ಯಾನ್ಸಾಸ್‌ನ ಒಲಥೆ ನಿವಾಸಿ ಭಾರತೀಯ ಮೂಲದ 13 ವರ್ಷದ ಕಾವ್ಯಾ ಶಿವಶಂಕರ್ ಪಾರಿತೋಷಕ ಪಡೆದುಕೊಂಡರು. ಕಳೆದ ಮೂರು ವರ್ಷಗಳಲ್ಲೂ ಕಾವ್ಯ ಈ ಸ್ಪರ್ಧೆಯ ಅಂತಿಮ ಹಂತ ತಲುಪಿದ್ದರು. 2006ರಲ್ಲಿ 10ನೆಯವರಾಗಿ, 2007ರಲ್ಲಿ 8ನೆಯವರಾಗಿ ಹಾಗೂ 2008ರಲ್ಲಿ 4ನೆಯವರಾಗಿ ಆಯ್ಕೆಯಾಗಿದ್ದರು.

2009: ಸರಾಸರಿ ಭಾರತೀಯರ ಮಾಸಿಕ ಆದಾಯ ರಾಷ್ಟ್ರದ ಇತಿಹಾಸದಲ್ಲಿ ಇದೇ ಮೊದಲ ಬಾರಿಗೆ ರೂ 3000 ದಾಟಿದೆ ಎಂದು ಕೇಂದ್ರೀಯ ಅಂಕಿಅಂಶಗಳ ಸಂಸ್ಥೆ (ಸಿಎಸ್‌ಓ) ಈದಿನ ಬಿಡುಗಡೆ ಮಾಡಿದ ರಾಷ್ಟ್ರೀಯ ವರಮಾನದ ಮುಂಗಡ ಅಂದಾಜು ವರದಿ ಹೇಳಿತು. ಆರ್ಥಿಕ ಸುಧಾರಣೆಗಳು ಹಾಗೂ 2005-06ರಿಂದ ಮೂರು ವರ್ಷಗಳವರೆಗೆ ಶೇ.9ಕ್ಕಿಂತ ಹೆಚ್ಚಿನ ಮಟ್ಟದ ವೃದ್ಧಿ ದರ ಇದಕ್ಕೆ ಕಾರಣ. ನಾಗರಿಕರ ಸರಾಸರಿ ಆದಾಯದ ಅಳತೆಗೋಲಾಗಿರುವ ತಲಾ ಆದಾಯ (ಪರ್ ಕ್ಯಾಪಿಟಾ) ಶೇ.12.2ರಷ್ಟು ಹೆಚ್ಚಾಗಿ 2008-09ರಲ್ಲಿ ವಾರ್ಷಿಕ ರೂ 37,490ಕ್ಕೆ ಏರಿದೆ ಎಂದು ವರದಿ ಹೇಳಿತು.

2009: ಭಾರತದ ಅಗ್ರಗಣ್ಯ ಬಯೊಟೆಕ್ನಾಲಜಿ ಕಂಪೆನಿ ಬಯೋಕಾನ್, ಬೆಂಗಳೂರಿನಲ್ಲಿ 24 ಗಂಟೆ ಕಾರ್ಯ ನಿರ್ವಹಿಸುವ ನೂತನ ಬೇಸಲ್ ಇನ್ಸುಲಿನ್ 'ಬೇಸಲಾಗ್' ಬಿಡುಗಡೆ ಮಾಡಿತು. ಟೈಪ್ 1 ಮತ್ತು ಟೈಪ್ 2 ಮಧುಮೇಹಗಳೆರಡಕ್ಕೂ ಈ ಇನ್ಸುಲಿನ್ ಗಾಜಿರ್ಲ್ನ್ (ಮಾನವ ಇನ್ಸುಲಿನ್) ಸೂಕ್ತವೆನಿಸಿದ್ದು ದಿನವಿಡೀ ಒಂದೇ ರೀತಿಯಾಗಿ ಕಾರ್ಯ ನಿರ್ವಹಿಸುವ ಕಾರಣ ಆರೋಗ್ಯ ಸಮಸ್ಯೆಗಳಿರುವುದಿಲ್ಲ ಎಂದು ಇನ್ಸುಲಿನ್ ಬಿಡುಗಡೆ ಮಾಡಿ ಮಾತನಾಡಿದ ಬಯೋಕಾನ್ ಅಧ್ಯಕ್ಷೆ ಕಿರಣ್ ಮಜುಂದಾರ್ ಶಾ ಹೇಳಿದರು. ಮಧುಮೇಹ ನಿರ್ವಹಣೆಯಲ್ಲಿ ಪ್ರಮುಖ ಪಾತ್ರ ವಹಿಸಲಿರುವ ಮಧುಮೇಹಿಗಳ ಜೀವನದಲ್ಲೊಂದು ಮುಖ್ಯ ತಿರುವು ನೀಡಲಿರುವ ಈ ಔಷಧಿಯಿಂದ ತೂಕ ಗಳಿಕೆಯೂ ಕಡಿಮೆ ಎಂದು ಅವರು ಬಣ್ಣಿಸಿದರು.

2009: ಕಿರಿಯ ಮಗನನ್ನು ತನ್ನ 'ರಾಜಕೀಯ ಉತ್ತರಾಧಿಕಾರಿ'ಯನ್ನಾಗಿಸುವ ತಮಿಳುನಾಡು ಮುಖ್ಯಮಂತ್ರಿ ಎಂ. ಕರುಣಾನಿಧಿ ಅವರ ಬಹುಕಾಲದ ಕನಸು ನನಸಾಯಿತು. ರಾಜ್ಯ ಗ್ರಾಮೀಣಾಭಿವೃದ್ಧಿ ಸಚಿವರಾಗಿದ್ದ ಎಂ.ಕೆ. ಸ್ಟಾಲಿನ್ ಅವರನ್ನು ಈದಿನ ಉಪಮುಖ್ಯಮಂತ್ರಿ ಎಂದು ಘೋಷಿಸಲಾಯಿತು. ಕರುಣಾನಿಧಿ ಅವರ ಪುತ್ರರಾದ ಅಳಗಿರಿ ಮತ್ತು ಸ್ಟಾಲಿನ್‌ರಲ್ಲಿ ಮುಂದಿನ ಉತ್ತರಾಧಿಕಾರಿ ಯಾರು ಎಂಬ ಜನರ ಪ್ರಶ್ನೆಗೆ ಕೊನೆಗೂ ಉತ್ತರ ಸಿಕ್ಕಿತು. ಕಾಕತಾಳೀಯ ಎಂಬಂತೆ ಹಿರಿಯ ಪುತ್ರ ಕೇಂದ್ರದ ಸಚಿವನಾದ ಮರುದಿನವೇ ಕಿರಿಯ ಮಗನನ್ನು ಉಪ ಮುಖ್ಯಮಂತ್ರಿ ಎಂದು ಘೋಷಿಸಲಾಯಿತು.

2009: ಮುಂಬೈ ಮೇಲಿನ ದಾಳಿ ಸಂದರ್ಭ ಹತ್ಯೆಯಾದ ಉಗ್ರ ಅಬು ಇಸ್ಮಾಯಿಲ್ ಜೇಬಿನಿಂದ ಪೊಲೀಸರು ವಶಪಡಿಸಿಕೊಂಡ ನಕಾಶೆಯನ್ನು (ದಾಳಿಗೆ ಗುರಿಯಿಟ್ಟ ಸ್ಥಳಗಳ ವಿವರ) ಸಾಕ್ಷಿಯೊಬ್ಬರು ನ್ಯಾಯಾಲಯದಲ್ಲಿ ವಿಚಾರಣೆ ವೇಳೆ ಗುರುತಿಸಿದರು. ಎಲ್‌ಇಟಿ ಉಗ್ರಗಾಮಿ ಸಂಘಟನೆಯ ಸಂಚುಕೋರರಿಗೆ ನಕಾಶೆ ಹಸ್ತಾಂತರಿಸಿದ ಆರೋಪ ಹೊತ್ತ ಸಬಾವುದ್ದೀನ್ ಅಹ್ಮದ್ ಮತ್ತು ದಾಳಿ ನಡೆಸುವಾಗ ಬದುಕುಳಿದ ಏಕೈಕ ಬಂಧಿತ ಉಗ್ರ ಮೊಹಮ್ಮದ್ ಅಜ್ಮಲ್ ಅಮೀರ್ ಕಸಾಬ್ ಜೊತೆ ವಿಚಾರಣೆ ಎದುರಿಸಿದ ಫಾಹೀಮ್ ಅನ್ಸಾರಿ ಈ ನಕಾಶೆ ಸಿದ್ಧಪಡಿಸಿದ್ದಾಗಿ ಪ್ರಾಸಿಕ್ಯೂಷನ್ ನ್ಯಾಯಾಲಯಕ್ಕೆ ತಿಳಿಸಿತು.

2009: ಲೋಕಸಭಾ ಚುನಾವಣೆಯ ಫಲಿತಾಂಶದ ಬಳಿಕ ಟಾಟಾ ಕಂಪನಿಯ ಚುನಾವಣಾ ವಿಭಾಗವು ದೇಣಿಗೆ ನೀಡಿದ ರೂ.27.65 ಲಕ್ಷ ಮೊತ್ತದ ಚೆಕ್ ಅನ್ನು ತೃಣಮೂಲ ಕಾಂಗ್ರೆಸ್ ನಾಯಕಿ ಮಮತಾ ಬ್ಯಾನರ್ಜಿ ವಾಪಸ್ ಕಳುಹಿಸಿದರು. ನಾವು ವಿನಯಪೂರ್ವಕವಾಗಿ ಚೆಕ್ ಅನ್ನು ವಾಪಸ್ ನೀಡಿದ್ದೇವೆ. ಕಾರಣ ಏನು ಎಂದು ವಿವರಿಸುವ ಪತ್ರವನ್ನೂ ವಿನಯಪೂರ್ವಕವಾಗಿ ರವಾನಿಸಿದ್ದೇವೆ. ಎಂದು ಮಮತಾ ಬ್ಯಾನರ್ಜಿ ಹೇಳಿದರು. 'ನಾವು ಕಾರ್ಪೊರೇಟ್ ಕಂಪನಿಗಳಲ್ಲಿ ಯಾವುದೇ ಋಣ ಇರಿಸಿಕೊಳ್ಳುವುದಿಲ್ಲ, ನಾವು ಏನಿದ್ದರೂ ಸಾಮಾನ್ಯ ಜನರು, ರೈತರು, ದುಡಿಯುವ ವರ್ಗದವರ ಋಣದಲ್ಲಿದ್ದೇವೆ' ಎಂದು ಪಕ್ಷದ ಸಚಿವ ಶಿಶಿರ್ ಅಧಿಕಾರಿ ತಿಳಿಸಿದರು.

2009: ರಾಜ್ಯದಲ್ಲಿ ಜಾರಿಯಲ್ಲಿರುವ ಕಾನೂನುಗಳ ಬಗ್ಗೆ ಸಾರ್ವಜನಿಕರಲ್ಲಿ ಅರಿವು ಮೂಡಿಸುವ ದೃಷ್ಟಿಯಿಂದ ಹೊರ ತರಲಾದ 'ಕರ್ನಾಟಕದ ಕಾನೂನುಗಳು' ಕುರಿತ ಸಿ.ಡಿ.ಯನ್ನು ಕಾನೂನು ಸಚಿವ ಎಸ್.ಸುರೇಶ ಕುಮಾರ್‌ ಬೆಂಗಳೂರಿನಲ್ಲಿ ಬಿಡುಗಡೆ ಮಾಡಿದರು. ಸಂಸದೀಯ ವ್ಯವಹಾರ ಮತ್ತು ಶಾಸನ ರಚನೆ ಇಲಾಖೆ ಹೊರ ತಂದಿರುವ ಸಿ.ಡಿ.ಯಲ್ಲಿ ಕನ್ನಡ ಮತ್ತು ಇಂಗ್ಲಿಷ್ ಎರಡೂ ಭಾಷೆಗಳಲ್ಲಿ 1956ರ ನವೆಂಬರ್ ಒಂದರಿಂದ ರಚಿತವಾದ ಎಲ್ಲ ಕಾನೂನುಗಳ ಬಗ್ಗೆ ಸಮಗ್ರವಾದ ಮಾಹಿತಿ ಲಭ್ಯವಿದೆ.

2009: ಭಾರತದ ಅತ್ಯಂತ ಜನಪ್ರಿಯ ಟೆನಿಸ್ ಆಟಗಾರ್ತಿ ಸಾನಿಯಾ ಮಿರ್ಜಾ ಕೊನೆಗೂ ತಮ್ಮ ಸೂಕ್ತ 'ಜೊತೆಗಾರ'ನನ್ನು ಕಂಡುಕೊಂಡರು. ಆದರೆ ಇದು ಮಿಶ್ರ ಡಬಲ್ಸ್ ಪಂದ್ಯದ ಜೊತೆಗಾರ ಅಲ್ಲ. ಬದಲಾಗಿ ಬಾಳಸಂಗಾತಿ. ತಮ್ಮ ಬಾಲ್ಯ ಕಾಲದ ಗೆಳೆಯ ಮೊಹಮ್ಮದ್ ಸೊಹ್ರಾಬ್ ಮಿರ್ಜಾ ಜೊತೆ ಸಾನಿಯಾ ನಿಶ್ಚಿತಾರ್ಥ ನಡೆದಿದೆ ಎಂದು ಸಾನಿಯಾ ಅವರ ತಂದೆ ಇಮ್ರಾನ್ ಮಿರ್ಜಾ ಖಚಿತ ಪಡಿಸಿದರು.

2009: ಹಾಲಿವುಡ್ ಸೂಪರ್‌ಸ್ಟಾರ್ ಏಂಜಲೀನಾ ಜೋಲಿ ವಿಶ್ವದ ಅತಿ ಸುಂದರ ಮಹಿಳೆಯರಲ್ಲಿ ಒಬ್ಬರು ಎಂಬ ಖ್ಯಾತಿ ಗಳಿಸಿಕೊಂಡರು. ಆದರೆ, ಅಚ್ಚ ಕನ್ನಡತಿ ಸುಂದರಿ ದೀಪಿಕಾ ಪಡುಕೋಣೆ ಸೌಂದರ್ಯದಲ್ಲಿ ಏಂಜಲಿನಾ ಜೋಲಿ ಅವರನ್ನು ಹಿಂದಿಕ್ಕಿದರು. ಹಾಲಿವುಡ್‌ನ ಖ್ಯಾತ ನಿರ್ದೇಶಕ ರಾಬ್ ಕೊಹೆನ್, ದೀಪಿಕಾ ಕಣ್ಣು ಕುಕ್ಕುವ ಸೌಂದರ್ಯ ಹೊಂದಿದ್ದು ಏಂಜಲಿನಾಗಿಂತ ಸುಂದರಿ ಎಂದು ಹೇಳಿರುವುದಾಗಿ ಲಂಡನ್ ಪತ್ರಿಕೆಯೊಂದು ವರದಿ ಮಾಡಿತು.

2008: ಹಾಸನ ಜಿಲ್ಲೆ ಅರಕಲಗೂಡಿನ ಅಗ್ರಹಾರ ಕೆರೆ ಏರಿಯಿಂದ ಕೆರೆಗೆ ಲಾರಿ ಮಗುಚಿಬಿದ್ದ ಕಾರಣ ಮಹಿಳೆಯರು, ಮಕ್ಕಳು ಸೇರಿದಂತೆ 25 ಜನ ಮೃತರಾಗಿ ಇತರ 46ಕ್ಕೂ ಹೆಚ್ಚು ಜನ ಗಾಯಗೊಂಡರು. ಮದುವೆ ಸಮಾರಂಭದ ಬೀಗರ ಊಟಕ್ಕೆ ಪಯಣಿಸುತ್ತಿದ್ದ ಲಾರಿ ಚಾಲಕನ ನಿರ್ಲಕ್ಷ್ಯದಿಂದಾಗಿ ಕಂದಕಕ್ಕೆ ಮಗುಚಿತು.

2008: ರಾಜ್ಯಪಾಲರ ಶಿಫಾರಸಿನ ಆಧಾರದಲ್ಲಿ ಹಿಂದಿನ ದಿನ ಕೇಂದ್ರ ಸಚಿವ ಸಂಪುಟ ರಾಜ್ಯದ ರಾಷ್ಟ್ರಪತಿ ಆಳ್ವಿಕೆಯನ್ನು ಹಿಂದಕ್ಕೆ ಪಡೆಯುವ ನಿಧರ್ಾರ ಕೈಗೊಂಡಿತ್ತು. ರಾಷ್ಟ್ರಪತಿ ಪ್ರತಿಭಾ ಪಾಟೀಲ್ ಸಂಪುಟ ನಿರ್ಧಾರಕ್ಕೆ ಈದಿನ ಅಂಕಿತ ಹಾಕಿದರು.

2008: ಕಠ್ಮಂಡುವಿನಲ್ಲಿ ನಡೆದ ರಾಜಕೀಯ ವಿದ್ಯಮಾನಗಳಲ್ಲಿ ಅರಮನೆಯ ಮೇಲೆ ಹಾರಾಡುತ್ತಿದ್ದ ರಾಜಮನೆತನದ ಬಾವುಟವನ್ನು ಕೆಳಗಿಳಿಸಿ, ರಾಷ್ಟ್ರೀಯ ಬಾವುಟವನ್ನು ಏರಿಸಲಾಯಿತು. ಇದರೊಂದಿಗೆ ನೇಪಾಳದಲ್ಲಿ ಎರಡೂವರೆ ಶತಮಾನಗಳ ಅರಸೊತ್ತಿಗೆ ಆಳ್ವಿಕೆ ಅಧಿಕೃತವಾಗಿ ಕೊನೆಗೊಂಡಂತಾಯಿತು. ಮಾಜಿ ದೊರೆ ಜ್ಞಾನೇಂದ್ರ ಅವರಿಗೆ ಅರಮನೆ ಬಿಡುವಂತೆ ರಾಜಕೀಯ ಪಕ್ಷಗಳು 15 ದಿನ ಗಡುವು ನೀಡಿದವು. ಅಷ್ಟರೊಳಗೆ ಅರಮನೆ ಬಿಡದಿದ್ದಲ್ಲಿ ಬಲವಂತವಾಗಿ ಹೊರಗೆ ಕಳುಹಿಸಬೇಕಾಗುತ್ತದೆ ಎಂದು ಗೃಹ ಸಚಿವ ಕೃಷ್ಣಪ್ರಸಾದ್ ಸಿತೌಲ ಎಚ್ಚರಿಕೆ ನೀಡಿದರು. ನೇಪಾಳದ ಅರಸೊತ್ತಿಗೆ ರದ್ದುಪಡಿಸಿ ಹೊಸ ಸರ್ಕಾರವನ್ನು ಸ್ಥಾಪಿಸಲು 560 ಮಂದಿ ಪರವಾಗಿ ಹಾಗೂ ನಾಲ್ಕು ಮಂದಿ ವಿರೋಧವಾಗಿ ಮತ ಚಲಾಯಿಸಿದ್ದರು.

2008: ಬೆಂಗಳೂರಿನ ನಾಗರಬಾವಿ ರಸ್ತೆಯ ವಿಸ್ತರಣಾ ಕಾರ್ಯದಿಂದ ಧರೆಗುರುಳಬೇಕಿದ್ದ ಸುಮಾರು 40 ಮರಗಳಿಗೆ ಮರು ಜೀವ ಬಂದಿತು. ವಸಂತಕಾಲದಲ್ಲಿ ಹೂವುಗಳು ಚಿಗುರಿ ಆಕರ್ಷಕವಾಗಿ ಕಂಗೊಳಿಸುತ್ತಿರುವ ಸುಮಾರು 40 `ತಬಿಬುಯಾ ರೋಸಿಯಾ' ಮರಗಳ ಬುಡಕ್ಕೆ ಕೊಡಲಿ ಪೆಟ್ಟು ಬಿದ್ದರೂ ಜೀವ ಕಳೆದುಕೊಳ್ಳಲಿಲ್ಲ. ಹೀಗಾಗಿ ಈ ಮರಗಳನ್ನು ಬುಡಸಮೇತ ಕಿತ್ತು ಬೆಂಗಳೂರು ವಿಶ್ವವಿದ್ಯಾಲಯದ ಜ್ಞಾನಭಾರತಿ ಆವರಣದಲ್ಲಿನ ಕಾನೂನು ಕಾಲೇಜಿನ ಸುತ್ತಮುತ್ತ ನೆಡುವ ಮೂಲಕ ಮರು ಜೀವ ನೀಡಲಾಯಿತು.

2008: ರಾಷ್ಟ್ರಪತಿ ಪ್ರತಿಭಾ ಪಾಟೀಲ್ ಅವರು ನವದೆಹಲಿಯ ರಾಷ್ಟ್ರಪತಿ ಭವನದಲ್ಲಿ ನಡೆದ ಸಮಾರಂಭದಲ್ಲಿ ಬೆಂಗಳೂರಿನ ಟಿ. ಎಲ್. ದೇವರಾಜ್ ಅವರಿಗೆ 2007ರ `ರಾಂ ನಾರಾಯಣ ವೈದ್ಯ ಪ್ರಶಸ್ತಿ' ಪ್ರದಾನ ಮಾಡಿದರು. ಆಯುರ್ವೇದ ಶಿಕ್ಷಣ ಮತ್ತು ಚಿಕಿತ್ಸೆಗೆ ನೀಡಿದ ಗಮನಾರ್ಹ ಕೊಡುಗೆಗಾಗಿ ದೇವರಾಜ್ 2007ರ `ರಾಂ ನಾರಾಯಣ ವೈದ್ಯ ಪ್ರಶಸ್ತಿ' ಪಡೆದುಕೊಂಡರು. ಆಯುರ್ವೇದ ರಂಗದಲ್ಲಿನ ಸಾಧನೆಗಾಗಿ ನೀಡಲಾಗುವ ದೇಶದ ಅತ್ಯಂತ ಪ್ರತಿಷ್ಠಿತ ಪ್ರಶಸ್ತಿ ಇದು. ಪ್ರಶಸ್ತಿಯು ರೂ 1.5 ಲಕ್ಷ ನಗದು ಒಳಗೊಂಡಿದೆ.

2007: ಹೊಟ್ಟೆಯ ಭಾಗದಲ್ಲಿ ಅಂಟಿಕೊಂಡಿದ್ದ 10 ತಿಂಗಳ ಗಂಡು ಸಯಾಮಿ ಅವಳಿ ಮಕ್ಕಳನ್ನು ಬೇರ್ಪಡಿಸುವ ಶಸ್ತ್ರಕ್ರಿಯೆಯನ್ನು ರಾಯಪುರ ವೈದ್ಯಕೀಯ ಕಾಲೇಜು ಆಸ್ಪತ್ರೆಯಲ್ಲಿ ವೈದ್ಯರು ಯಶಸ್ವಿಯಾಗಿ ನೆರವೇರಿಸಿದರು. ದೇಶದಲ್ಲಿ ನಡೆದ ಸಯಾಮಿ ಅವಳಿ ಮಕ್ಕಳನ್ನು ಬೇರ್ಪಡಿಸುವ ನಾಲ್ಕನೇ ಶಸ್ತ್ರ ಚಿಕಿತ್ಸೆ ಇದು. ಅವಳಿ ಮಕ್ಕಳಾದ ರಾಮ ಮತ್ತು ಲಕ್ಷ್ಮಣನನ್ನು ಐದು ಗಂಟೆಗಳ ಶಸ್ತ್ರಚಿಕಿತ್ಸೆಯ ಬಳಿಕ ಯಶಸ್ವಿಯಾಗಿ ಬೇರ್ಪಡಿಸಲಾಯಿತು.

2007: ಪರಿಶಿಷ್ಟ ವರ್ಗದ ಸ್ಥಾನಮಾನ ನೀಡಬೇಕು ಎಂದು ಆಗ್ರಹಿಸಿ ಗುರ್ಜರ ಸಮುದಾಯದವರು ರಾಜಸ್ಥಾನದ ದೌಸಾ ಹಾಗೂ ಬಂಡಿ ಜಿಲ್ಲೆಯಲ್ಲಿ ನಡೆಸಿದ ಪ್ರತಿಭಟನೆ ಹಿಂಸಾರೂಪಕ್ಕೆ ತಿರುಗಿ, ಪೊಲೀಸರು ಗೋಲಿಬಾರ್ ಮಾಡಿದ ಪರಿಣಾಮವಾಗಿ 14 ಜನ ಗುಂಡಿಗೆ ಬಲಿಯಾದರು.

2007: ಸೌರ ಮಂಡಲ ಮತ್ತು ಭೂಮಿಯ ಅಸ್ತಿತ್ವವು ಊಹೆಗೂ ನಿಲುಕದ ಬ್ರಹ್ಮಾಂಡದಲ್ಲಿ ಅಪರೂಪದ ಸಂಗತಿಯೇನೂ ಅಲ್ಲ, ಅನಂತ ಆಕಾಶದಲ್ಲಿ ವಾಸಕ್ಕೆ ಯೋಗ್ಯವಾದ ಇಂತಹ ಕೋಟ್ಯಂತರ ಗ್ರಹಗಳು ಇರುವ ಸಾಧ್ಯತೆಗಳು ಹೆಚ್ಚು ಇವೆಎಂದು ವಿಜ್ಞಾನಿಗಳು ಅಭಿಪ್ರಾಯಪಟ್ಟರು. ಹೊನೊಲುಲುವಿನಲ್ಲಿ ನಡೆದ ಅಮೆರಿಕದ ಖಗೋಳ ವಿಜ್ಞಾನಿಗಳ ಸಮಾವೇಶದಲ್ಲಿ ಸಂಶೋಧಕರು ಈ ಅಭಿಪ್ರಾಯ ವ್ಯಕ್ತಪಡಿಸಿದರು. ಖಗೋಳ ವಿಜ್ಞಾನಿಗಳು ಕಳೆದ ವರ್ಷ ಒಟ್ಟು 28 ಹೊಸ ಗ್ರಹಗಳನ್ನು ಪತ್ತೆ ಹಚ್ಚಿದ್ದಾರೆ. ನಮ್ಮ ಸೌರವ್ಯೂಹದ ಆಚೆಗೆ ಈವರೆಗೆ 236 ಗ್ರಹಗಳನ್ನು ಗುರುತಿಸಲಾಗಿದೆ ಎಂಬುದು ಅವರ ಅಭಿಪ್ರಾಯ.

2007: ಮೆಕ್ಸಿಕೊದಲ್ಲಿ ನಡೆದ ಸೌಂದರ್ಯ ಸ್ಪರ್ಧೆಯಲ್ಲಿ ಜಪಾನಿನ ನೃತ್ಯ ಕಲಾವಿದೆ ರಿಯೋ ಮೋರಿ 2007ನೇ ಸಾಲಿನ ಭುವನಸುಂದರಿಯಾಗಿ ಆಯ್ಕೆಯಾದರು. `ಭಾರತ ಸುಂದರಿ' ಪೂಜಾ ಗುಪ್ತ ಕೊನೆಯ ಐವರು ಸ್ಪರ್ಧಿಗಳಲ್ಲಿ ಸೇರ್ಪಡೆ ಆಗುವ ಅವಕಾಶದಿಂದಲೂ ವಂಚಿತರಾದರು.

2007: ಮುಂಬೈಯಲ್ಲಿ 1993ರಲ್ಲಿ ಸಂಭವಿಸಿದ ಸರಣಿ ಬಾಂಬ್ ಸ್ಫೋಟಕ್ಕಿಂತ ಸ್ವಲ್ಪ ಮುಂಚೆ ತಲೆ ತಪ್ಪಿಸಿಕೊಂಡ ಪ್ರಮುಖ ಆರೋಪಿ ಟೈಗರ್ ಮೆಮನ್ ಗೆ ಶಸ್ತ್ರಾಸ್ತ್ರಗಳು, ಸ್ಫೋಟಕಗಳು ಮತ್ತು ಆರ್ ಡಿ ಎಕ್ಸ್ ಸಾಗಣೆಯಲ್ಲಿ ನೆರವಾದ ಅಪರಾಧಕ್ಕಾಗಿ ಕಸ್ಟಮ್ಸ್ ಇಲಾಖೆಯ ನಾಲ್ಕು ಮಂದಿ ಮಾಜಿ ಅಧಿಕಾರಿಗಳಿಗೆ ನಿಯೋಜಿತ ಟಾಡಾ ನ್ಯಾಯಾಲಯವು 7ರಿಂದ 9 ವರ್ಷಗಳವರೆಗಿನ ಕಠಿಣ ಸೆರೆವಾಸದ ಶಿಕ್ಷೆ ವಿಧಿಸಿತು.

2007: ಬಡಗುತಿಟ್ಟು ಯಕ್ಷಗಾನದ ಖ್ಯಾತ ಮದ್ದಳೆ ವಾದಕ, ಮಾಂತ್ರಿಕ ದುರ್ಗಪ್ಪ ಗುಡಿಗಾರ (65) ಮಣಿಪಾಲ ಆಸ್ಪತ್ರೆಯಲ್ಲಿ ನಿಧನರಾದರು. ಭಟ್ಕಳದ ಚೌತನಿಯವರಾದ ದುರ್ಗಪ್ಪ ಗುಡಿಗಾರ ತಮ್ಮ ಕಲಾ ಸೇವೆಗಾಗಿ ಕರ್ನಾಟಕ ಜಾನಪದ ಮತ್ತು ಯಕ್ಷಗಾನ ಅಕಾಡೆಮಿ ಪ್ರಶಸ್ತಿ, ಕನ್ನಡ ಸಾಹಿತ್ಯ ಪರಿಷತ್ತಿನ ಕರ್ನಾಟಕ ಶ್ರೀ, ಮುದೂರು ದೇವರು ಹೆಗ್ಗಡೆ ಪ್ರತಿಷ್ಠಾನ, ಮಸ್ಕತ್ ರಂಗಭೂಮಿ ಪ್ರಶಸ್ತಿ, ಜನಪದ ಪ್ರಶಸ್ತಿ ಸೇರಿದಂತೆ ಹತ್ತಾರು ಪ್ರಶಸ್ತಿ, ಸನ್ಮಾನಕ್ಕೆ ಪಾತ್ರರಾಗಿದ್ದರು.

2006: ಕಾವೇರಿ ನ್ಯಾಯಮಂಡಳಿಯ ನ್ಯಾಯದರ್ಶಿಗಳ ವರದಿಯನ್ನು ತಿರಸ್ಕರಿಸಿ 408 ಟಿಎಂಸಿ ನೀರಿಗೆ ಬೇಡಿಕೆ ಸಲ್ಲಿಸಲು ಕರ್ನಾಟಕ ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ ಅಧ್ಯಕ್ಷತೆಯಲ್ಲಿ ನಡೆದ ಸರ್ವಪಕ್ಷಗಳ ಸಭೆಯಲ್ಲಿ ಒಮ್ಮತದ ನಿರ್ಧಾರ ಕೈಗೊಳ್ಳಲಾಯಿತು. ಕರ್ನಾಟಕಕ್ಕೆ 251 ಟಿಂಎಸಿ ನೀರು ನಿಗದಿ ಪಡಿಸಿ ನ್ಯಾಯದರ್ಶಿಗಳು ತಯಾರಿಸಿದ ವರದಿ ನ್ಯಾಯೋಚಿತವಲ್ಲ, ಅದನ್ನು ಒಪ್ಪಲಾಗದು ಎಂದು ಸಭೆ ಸ್ಪಷ್ಟ ಪಡಿಸಿತು.

2006: ಸೇನಾ ತರಬೇತಿಯನ್ನು ಸಾಂಸ್ಥೀಕರಣಗೊಳಿಸುವ ಪ್ರಪ್ರಥಮ ಚಾರಿತ್ರಿಕ ಒಪ್ಪಂದಕ್ಕೆ ಭಾರತ ಮತ್ತು ಚೀನಾ ಸೋಮವಾರ ಬೀಜಿಂಗಿನಲ್ಲಿ ಸಹಿ ಹಾಕಿದವು. ಈ ಒಪ್ಪಂದವು ಜಂಟಿ ಸೇನಾ ಕವಾಯತು ಹಾಗೂ ವಿಚಾರ ವಿನಿಮಯಗಳಿಗೆ ಅವಕಾಶ ಕಲ್ಪಿಸಲಿದೆ. ಚೀನಾಕ್ಕೆ ಭೇಟಿ ನೀಡಿದ ಭಾರತದ ರಕ್ಷಣಾ ಸಚಿವ ಪ್ರಣವ್ ಮುಖರ್ಜಿ ಮತ್ತು ಚೀನಿ ರಕ್ಷಣಾ ಸಚಿವ ಜನರಲ್ ಕಾವೊ ಗಾಂಗ್ ಚುವಾನ್ ಅವರು ಇಲ್ಲಿ ಕೇಂದ್ರೀಯ ಸೇನಾ ಕಮೀಷನ್ ಮುಖ್ಯ ಕಚೇರಿಯಲ್ಲಿ 2 ಗಂಟೆಗಳ ಕಾಲ ನಡೆದ ಮಾತುಕತೆ ಬಳಿಕ ಈ ಒಪ್ಪಂದಕ್ಕೆ ಸಹಿ ಹಾಕಿದರು.

2006: ದಕ್ಷಿಣ ಬಾಂಗ್ಲಾದೇಶದಲ್ಲಿ ಕಳೆದ ವರ್ಷ ಬಾಂಬ್ ದಾಳಿ ನಡೆಸಿ ಇಬ್ಬರು ನ್ಯಾಯಾಧೀಶರನ್ನು ಕೊಲೆಗೈದ ಪ್ರಕರಣದಲ್ಲಿ ವಹಿಸಿದ ಪಾತ್ರಕ್ಕಾಗಿ ನಿಷೇಧಿತ ಇಸ್ಲಾಮಿಕ್ ಉಗ್ರಗಾಮಿ ಸಂಘಟನೆ ಜುಮತುಲ್ ಮುಜಾಹಿದೀನ್ ಬಾಂಗ್ಲಾದೇಶ್ ಸಂಘಟನೆಯ ಉನ್ನತ ನಾಯಕರಾದ ಷೇಕ್ ಅಬ್ದುರ್ ರಹಮಾನ್ ಮತ್ತು ಸಿದ್ದುಕಿಲ್ ಇಸ್ಲಾಂ ಸೇರಿದಂತೆ ಏಳು ಮಂದಿ ಇಸ್ಲಾಮಿಕ್ ಉಗ್ರಗಾಮಿಗಳಿಗೆ ಜéಲಕಥಿ ಪಟ್ಟಣದ ನ್ಯಾಯಾಲಯವೊಂದು ಮರಣದಂಡನೆ ವಿಧಿಸಿತು. ದಕ್ಷಿಣ ಜéಲಕಥಿ ಪಟ್ಟಣದಲ್ಲಿ ನ್ಯಾಯಾಧೀಶ ರೇಝಾ ತಾರಿಖ್ ಅಹಮದ್ ಅವರು ತೀರ್ಪನ್ನು ಓದಿ ಹೇಳಿದರು. ಈ ಪಟ್ಟಣದಲ್ಲೇ ನವೆಂಬರ್ 14ರಂದು ಇಬ್ಬರು ನ್ಯಾಯಾಧೀಶರನ್ನು ಕೊಲೆಗೈಯಲಾಗಿತ್ತು.

1973: ಕಲಾವಿದೆ ರೂಪ ಸಿ. ಜನನ.

1972: ಖ್ಯಾತ ಚಿತ್ರನಟ ಹಾಗೂ ರಂಗನಟ ಪೃಥ್ವಿರಾಜ್ ಕಪೂರ್ ತಮ್ಮ 65ನೇ ವಯಸ್ಸಿನಲ್ಲಿ ಅಸುನೀಗಿದರು. ಇವರು ಚಿತ್ರನಟರಾದ ರಾಜ್ ಕಪೂರ್, ಶಮ್ಮಿ ಕಪೂರ್ ಮತ್ತು ಶಶಿ ಕಪೂರ್ ಅವರ ತಂದೆ. ರಾಜ್ಯಸಭೆಗೆ ಸದಸ್ಯರಾಗಿ ನಾಮಕರಣಗೊಂಡ ಚಿತ್ರರಂಗದ ಪ್ರಪ್ರಥಮ ವ್ಯಕ್ತಿ ಇವರು. 1972 ರಲ್ಲಿ ಇವರಿಗೆ ಮರಣೋತ್ತರವಾಗಿ ದಾದಾಸಾಹೇಬ್ ಫಾಲ್ಕೆ ಪ್ರಶಸ್ತಿಯನ್ನು ನೀಡಲಾಯಿತು.

1968: ಕಲಾವಿದ ದೊಡ್ಡಮನಿ ಎಂ.ಜಿ. ಜನನ.

1953: ನ್ಯೂಜಿಲ್ಯಾಂಡಿನ ಎಡ್ಮಂಡ್ ಹಿಲರಿ ಮತ್ತು ಶೆರ್ಪಾ ತೇನ್ ಸಿಂಗ್ ನೋರ್ಗೆ ಪ್ರಪ್ರಥಮ ಬಾರಿಗೆ ಜಗತ್ತಿನ ಅತ್ಯುನ್ನತ ಶಿಖರ ಎವರೆಸ್ಟನ್ನು ಏರಿದರು.

1917: ಜಾನ್ ಎಫ್. ಕೆನಡಿ ಜನ್ಮದಿನ(1917-63). ಇವರು 1961-63ರ ಅವಧಿಯಲ್ಲಿ ಅಮೆರಿಕದ 35ನೇ ಅಧ್ಯಕ್ಷರಾಗಿದ್ದರು. ಡಲ್ಲಾಸ್ನಲ್ಲಿ ಮೋಟಾರಿನಲ್ಲಿ ಹೋಗುತ್ತಿದ್ದಾಗ ಇವರನ್ನು ಗುಂಡಿಟ್ಟು ಕೊಲೆಗೈಯಲಾಯಿತು.

1906: ಮೈಸೂರು ಶೈಲಿಯ ಭರತನಾಟ್ಯದ ಪ್ರವರ್ತಕರಲ್ಲಿ ಒಬ್ಬರು ಎಂದೇ ಖ್ಯಾತರಾದ ಡಾ. ಕೆ. ವೆಂಕಟಲಕ್ಷ್ಮಮ್ಮ (19-5-1906ರಿಂದ 3-7-2002) ಅವರು ಕಡೂರಿನ ತಂಗಲಿ ತಾಂಡ್ಯದಲ್ಲಿ ಜನಿಸಿದರು.

1877: ಸಾಹಿತಿ ನವರತ್ನ ರಾಮರಾವ್ (29-5-1877ರಿಂದ 27-11-1960) ಅವರು ನವರತ್ನ ಬಾಲಕೃಷ್ಣರಾಯರ ಪುತ್ರನಾಗಿ ಬೆಂಗಳೂರು ಜಿಲ್ಲೆಯ ದೇವನಹಳ್ಳಿಯಲ್ಲಿ ಈ ದಿನ ಜನಿಸಿದರು. ಇವರ ದಕ್ಷ ಸೇವೆ, ಕನ್ನಡಕ್ಕೆ ನೀಡಿದ ಕೊಡುಗೆಗಾಗಿ ಮೈಸೂರಿನ ಮಹಾರಾಜರು `ರಾಜಸೇವಾಸಕ್ತ' ಬಿರುದು ನೀಡಿದ್ದರು.

1660: ಚಾರ್ಲ್ಸ್ ಸ್ಟುವರ್ಟ್ ತನ್ನ 30ನೇ ಹುಟ್ಟು ಹಬ್ಬದಂದು ಎರಡನೆಯ ಚಾರ್ಲ್ಸ್ ದೊರೆಯಾಗುವ ಸಲುವಾಗಿ ಲಂಡನ್ನಿಗೆ ಮರುಪ್ರವೇಶ ಮಾಡಿದ. 1651ರಲ್ಲಿ ವೋರ್ಸ್ಟರ್ ಯುದ್ಧದ ಬಳಿಕ ಇಂಗ್ಲೆಂಡಿನಿಂದ ಪರಾರಿಯಾಗಿದ್ದ. ಹಾಗೆ ಪರಾರಿಯಾಗುವಾಗ ಬೊಸ್ಕೊಬೆಲ್ನಲ್ಲಿ ಓಕ್ ಗಿಡವೊಂದನ್ನು ಅಡಗಿಸಿ ಇಟ್ಟಿದ್ದನಂತೆ. ಆತ ಮತ್ತೆ ದೊರೆಯಾದ ಸಂಭ್ರಮಕ್ಕಾಗಿ ಆತನಿಗೆ ನಿಷ್ಠರಾಗಿದ್ದ ಪ್ರಜೆಗಳು ಓಕ್ ಎಲೆಗಳನ್ನು ಧರಿಸಿ ಈ ದಿನವನ್ನು `ಓಕ್ ಆಪಲ್ ಡೇ' ಆಗಿ ಆಚರಿಸಿದರು.

Friday, May 28, 2010

ಇಂದಿನ ಇತಿಹಾಸ History Today ಮೇ 28

ಇಂದಿನ ಇತಿಹಾಸ

ಮೇ 28

ಕೆನಡಾದ ಖ್ಯಾತ ಕಥೆಗಾರ್ತಿ ಅಲಿಸ್ ಮನ್ರೊ ಈ ವರ್ಷದ 'ಮ್ಯಾನ್ ಬುಕರ್ ಅಂತಾರಾಷ್ಟ್ರೀಯ ಪ್ರಶಸ್ತಿ'ಗೆ ಆಯ್ಕೆಯಾದರು. ಜ್ಞಾನಪೀಠ ಪುರಸ್ಕೃತ ಭಾರತದ ಮಹಾಶ್ವೇತಾ ದೇವಿ ಹಾಗೂ ಭಾರತ ಮೂಲದ ನೊಬೆಲ್ ಪ್ರಶಸ್ತಿ ಪುರಸ್ಕೃತ ಸಾಹಿತಿ ವಿ. ಎಸ್. ನೈಪಾಲ್ ಅವರನ್ನು ಹಿಂದಕ್ಕೆ ತಳ್ಳಿ ಮನ್ರೊ ಈ ಪ್ರಶಸ್ತಿ ಗೆದ್ದುಕೊಂಡರು.

2009: ಮಲ್ಲಿಕಾರ್ಜುನ ಖರ್ಗೆ, ಕೆ.ಎಚ್.ಮುನಿಯಪ್ಪ ಸೇರಿದಂತೆ 59 ಸಚಿವರು ರಾಷ್ಟ್ರಪತಿ ಭವನದಲ್ಲಿ ಪ್ರಮಾಣವಚನ ಸ್ವೀಕರಿಸುವುದರೊಂದಿಗೆ ಕೇಂದ್ರ ಸರ್ಕಾರದ ಚೊಚ್ಚಲ ಸಂಪುಟ ವಿಸ್ತರಣಾ ಸಮಾರಂಭ ಯಶಸ್ವಿಯಾಗಿ ನಡೆಯಿತು. ಈ ಮೂಲಕ ಯುಪಿಎ ವೇದಿಕೆಯಡಿ ಒಗ್ಗೂಡಿದ ಮನಮೋಹನ ಸಿಂಗ್ ನೇತೃತ್ವದ 79 ಸದಸ್ಯರ ಸಮ್ಮಿಶ್ರ ಪಡೆ, ದೇಶವನ್ನು ಮುನ್ನಡೆಸಲು ಸನ್ನದ್ಧವಾಯಿತು.

ಯಾರಿಗೆ ಯಾವ ಖಾತೆ
ಪ್ರಧಾನ ಮಂತ್ರಿ
ಡಾ. ಮನಮೋಹನ್ ಸಿಂಗ್ - ಹಂಚಿಕೆಯಾಗದೇ ಉಳಿದ ಎಲ್ಲಾ ಖಾತೆಗಳು
ಸಂಪುಟ ದರ್ಜೆ ಸಚಿವರು
ಪ್ರಣವ್ ಮುಖರ್ಜಿ - ಹಣಕಾಸು
ಎ.ಕೆ.ಆಂಟನಿ - ರಕ್ಷಣೆ
ಪಿ.ಚಿದಂಬರಂ - ಗೃಹ
ಶರದ್ ಪವಾರ್ - ಕೃಷಿ, ಆಹಾರ-ನಾಗರಿಕ ಸರಬರಾಜು, ಗ್ರಾಹಕ ವ್ಯವಹಾರ
ಮಮತಾ ಬ್ಯಾನರ್ಜಿ - ರೈಲ್ವೆ
ಎಸ್.ಎಂ.ಕೃಷ್ಣ - ವಿದೇಶಾಂಗ ವ್ಯವಹಾರ
ಗುಲಾಂ ನಬಿ ಆಜಾದ್ - ಆರೋಗ್ಯ ಮತ್ತು ಕುಟುಂಬ ಕಲ್ಯಾಣ
ಸುಶೀಲ್ ಕುಮಾರ್ ಶಿಂಧೆ - ಇಂಧನ
ಎಂ.ವೀರಪ್ಪ ಮೊಯಿಲಿ - ಕಾನೂನು
ಎಸ್.ಜೈಪಾಲ್ ರೆಡ್ಡಿ - ನಗರಾಭಿವೃದ್ಧಿ
ಕಮಲನಾಥ್ - ಭೂ ಸಾರಿಗೆ ಮತ್ತು ಹೆದ್ದಾರಿ
ವಯಲಾರ್ ರವಿ - ಸಾಗರೋತ್ತರ ಭಾರತೀಯ ವ್ಯವಹಾರ
ಮೀರಾ ಕುಮಾರ್ - ಜಲ ಸಂಪನ್ಮೂಲ
ಮುರಳಿ ದೇವ್ರಾ - ಪೆಟ್ರೋಲಿಯಂ ಮತ್ತು ನೈಸರ್ಗಿಕ ಅನಿಲ
ಕಪಿಲ್ ಸಿಬಲ್ - ಮಾನವ ಸಂಪನ್ಮೂಲ ಅಭಿವೃದ್ಧಿ
ಅಂಬಿಕಾ ಸೋನಿ - ವಾರ್ತಾ ಮತ್ತು ಪ್ರಸಾರ
ಬಿ.ಕೆ.ಹಂಡಿಕ್ - ಗಣಿ, ಈಶಾನ್ಯ ಪ್ರದೇಶ ಅಭಿವೃದ್ಧಿ
ಆನಂದ ಶರ್ಮ - ವಾಣಿಜ್ಯ ಮತ್ತು ಕೈಗಾರಿಕೆ
ಸಿ.ಪಿ.ಜೋಷಿ - ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್
ವೀರಭದ್ರ ಸಿಂಗ್ - ಉಕ್ಕು
ವಿಲಾಸರಾವ್ ದೇಶಮುಖ್ - ಬೃಹತ್ ಕೈಗಾರಿಕೆ ಮತ್ತು ಸಾರ್ವಜನಿಕ ಉದ್ದಿಮೆ
ಡಾ. ಫಾರೂಕ್ ಅಬ್ದುಲ್ಲ - ಹೊಸ ಮತ್ತು ಪುನರ್‌ಬಳಕೆ ಇಂಧನ
ಎಂ.ಕೆ.ಅಳಗಿರಿ - ರಾಸಾಯನಿಕ ಮತ್ತು ರಸಗೊಬ್ಬರ
ದಯಾನಿಧಿ ಮಾರನ್ - ಜವಳಿ
ಎ.ರಾಜಾ - ಸಂಪರ್ಕ ಮತ್ತು ಮಾಹಿತಿ ತಂತ್ರಜ್ಞಾನ
ಮಲ್ಲಿಕಾರ್ಜುನ ಖರ್ಗೆ - ಕಾರ್ಮಿಕ ಮತ್ತು ಉದ್ಯೋಗ
ಕುಮಾರಿ ಸೆಲ್ಜಾ - ವಸತಿ, ನಗರ ಬಡತನ ನಿರ್ಮೂಲನೆ, ಪ್ರವಾಸೋದ್ಯಮ
ಸುಬೋಧ್ ಕಾಂತ್ ಸಹಾಯ್ - ಆಹಾರ ಸಂಸ್ಕರಣಾ ಕೈಗಾರಿಕೆ
ಡಾ. ಎಂ.ಎಸ್.ಗಿಲ್ - ಯುವಜನ ಸೇವಾ ಮತ್ತು ಕ್ರೀಡೆ
ಜಿ.ಕೆ.ವಾಸನ್ - ನೌಕೆ
ಪವನ್ ಕುಮಾರ್ ಬನ್ಸಾಲ್ - ಸಂಸದೀಯ ವ್ಯವಹಾರ
ಮುಕುಲ್ ವಾಸ್ನಿಕ್ - ಸಾಮಾಜಿಕ ನ್ಯಾಯ ಮತ್ತು ಸಬಲೀಕರಣ
ಕಾಂತಿಲಾಲ್ ಭುರಿಯ - ಬುಡಕಟ್ಟು ವ್ಯವಹಾರ
ಸ್ವತಂತ್ರ ನಿರ್ವಹಣೆಯ ರಾಜ್ಯ ಸಚಿವರು
ಪ್ರಫುಲ್ ಪಟೇಲ್ - ನಾಗರಿಕ ವಿಮಾನಯಾನ
ಪೃಥ್ವಿರಾಜ್ ಚೌಹಾಣ್ - ವಿಜ್ಞಾನ ಮತ್ತು ತಂತ್ರಜ್ಞಾನ, ಭೂ ವಿಜ್ಞಾನ, ಪ್ರಧಾನಿ
ಕಚೇರಿ, ಸಿಬ್ಬಂದಿ, ಸಾರ್ವಜನಿಕ ದೂರು, ಪಿಂಚಣಿ,
ಸಂಸದೀಯ ವ್ಯವಹಾರ
ಶ್ರೀಪ್ರಕಾಶ್ ಜೈಸ್ವಾಲ್ - ಕಲ್ಲಿದ್ದಲು, ಅಂಕಿ ಅಂಶ, ಯೋಜನೆ ಜಾರಿ
ಸಲ್ಮಾನ್ ಖುರ್ಷಿದ್ - ಕಂಪನಿ ವ್ಯವಹಾರ, ಅಲ್ಪಸಂಖ್ಯಾತರು
ಜೈರಾಮ್ ರಮೇಶ್ - ಪರಿಸರ ಮತ್ತು ಅರಣ್ಯ
ಕೃಷ್ಣಾ ತೀರ್ಥ - ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ
ದಿನ್ಷ ಪಟೇಲ್ - ಅತಿ ಸಣ್ಣ, ಸಣ್ಣ, ಮಧ್ಯಮ ಕೈಗಾರಿಕೆ
ರಾಜ್ಯ ಸಚಿವರು
ಇ.ಅಹಮದ್ - ರೈಲ್ವೆ
ವಿ.ನಾರಾಯಣ ಸ್ವಾಮಿ - ಯೋಜನಾ ಮತ್ತು ಸಂಸದೀಯ ವ್ಯವಹಾರ
ಶ್ರೀಕಾಂತ್ ಜೇನಾ - ರಾಸಾಯನಿಕ ಮತ್ತು ರಸಗೊಬ್ಬರ
ಮುಲ್ಲಪಲ್ಲಿ ರಾಮಚಂದ್ರನ್ - ಗೃಹ ವ್ಯವಹಾರ
ಜ್ಯೋತಿರಾದಿತ್ಯ ಸಿಂಧಿಯ - ವಾಣಿಜ್ಯ ಮತ್ತು ಕೈಗಾರಿಕೆ
ಡಿ.ಪುರಂದೇಶ್ವರಿ - ಮಾನವ ಸಂಪನ್ಮೂಲ ಅಭಿವೃದ್ಧಿ
ಕೆ.ಎಚ್.ಮುನಿಯಪ್ಪ - ರೈಲ್ವೆ
ಪನಬಾಕ ಲಕ್ಷ್ಮಿ - ಜವಳಿ
ಅಜಯ್ ಮಾಕನ್ - ಗೃಹ ವ್ಯವಹಾರ
ನಮೋ ನಾರಾಯಣ ಮೀನಾ - ಹಣಕಾಸು
ಎಂ.ಎಂ.ಪಲ್ಲಂ ರಾಜು - ರಕ್ಷಣೆ
ಸೌಗತ ರೇ - ನಗರಾಭಿವೃದ್ಧಿ
ಎಸ್.ಎಸ್.ಪಳನಿ ಮಾಣಿಕ್ಯಂ - ಹಣಕಾಸು
ಜಿತಿನ್ ಪ್ರಸಾದ್ - ಪೆಟ್ರೋಲಿಯಂ, ನೈಸರ್ಗಿಕ ಅನಿಲ
ಎ.ಸಾಯಿ ಪ್ರತಾಪ್ - ಉಕ್ಕು
ಪ್ರಿಣೀತ್ ಕೌರ್ - ವಿದೇಶಾಂಗ ವ್ಯವಹಾರ
ಗುರುದಾಸ್ ಕಾಮತ್ - ಸಂಪರ್ಕ ಮತ್ತು ಮಾಹಿತಿ ತಂತ್ರಜ್ಞಾನ
ಹರೀಶ್ ರಾವತ್ - ಕಾರ್ಮಿಕ ಮತ್ತು ಉದ್ಯೋಗ
ಕೆ.ವಿ.ಥಾಮಸ್ - ಕೃಷಿ, ಗ್ರಾಹಕ ವ್ಯವಹಾರ, ಆಹಾರ-ನಾಗರಿಕ ಸರಬರಾಜು
ಭರತ್ ಸಿನ್ಹ ಸೋಲಂಕಿ - ಇಂಧನ
ಮಹಾದೇವ್ ಎಸ್. ಖಂಡೇಲ - ಭೂ ಸಾರಿಗೆ ಮತ್ತು ಹೆದ್ದಾರಿ
ದಿನೇಶ್ ತ್ರಿವೇದಿ - ಆರೋಗ್ಯ ಮತ್ತು ಕುಟುಂಬ ಕಲ್ಯಾಣ
ಸಿಸಿರ್ ಅಧಿಕಾರಿ - ಗ್ರಾಮೀಣಾಭಿವೃದ್ಧಿ
ಸುಲ್ತಾನ್ ಅಹಮದ್ - ಪ್ರವಾಸೋದ್ಯಮ
ಮುಕುಲ್ ರಾಯ್ - ನೌಕೆ
ಮೋಹನ್ ಜತುವಾ - ವಾರ್ತಾ ಮತ್ತು ಪ್ರಸಾರ
ಡಿ.ನೆಪೋಲಿಯನ್ - ಸಾಮಾಜಿಕ ನ್ಯಾಯ ಮತ್ತು ಸಬಲೀಕರಣ
ಡಾ. ಎಸ್.ಜಗತ್‌ರಕ್ಷಕನ್ - ವಾರ್ತಾ ಮತ್ತು ಪ್ರಸಾರ
ಎಸ್.ಗಾಂಧಿ ಸೆಲ್ವನ್ - ಆರೋಗ್ಯ ಮತ್ತು ಕುಟುಂಬ ಕಲ್ಯಾಣ
ತುಷಾರ್‌ಭಾಯಿ ಚೌಧರಿ - ಬುಡಕಟ್ಟು ವ್ಯವಹಾರ
ಸಚಿನ್ ಪೈಲಟ್ - ಸಂಪರ್ಕ ಮತ್ತು ಮಾಹಿತಿ ತಂತ್ರಜ್ಞಾನ
ಅರುಣ್ ಯಾದವ್ - ಯುವಜನ ಸೇವೆ ಮತ್ತು ಕ್ರೀಡೆ
ಪ್ರತೀಕ್ ಪ್ರಕಾಶ್‌ಬಾಪು ಪಾಟೀಲ್ - ಬೃಹತ್ ಕೈಗಾರಿಕೆ ಮತ್ತು ಸಾರ್ವಜನಿಕ ಉದ್ದಿಮೆ
ಆರ್.ಪಿ.ಎನ್.ಸಿಂಗ್ - ಭೂ ಸಾರಿಗೆ ಮತ್ತು ಹೆದ್ದಾರಿ
ಶಶಿ ತರೂರ್ - ವಿದೇಶಾಂಗ ವ್ಯವಹಾರ
ವಿನ್ಸೆಂಟ್ ಪಾಲ - ಜಲ ಸಂಪನ್ಮೂಲ
ಪ್ರದೀಪ್ ಜೈನ್ - ಗ್ರಾಮೀಣಾಭಿವೃದ್ಧಿ
ಅಗಾಥಾ ಸಂಗ್ಮಾ - ಗ್ರಾಮೀಣಾಭಿವೃದ್ಧಿ

2009: ಕೆನಡಾದ ಖ್ಯಾತ ಕಥೆಗಾರ್ತಿ ಅಲಿಸ್ ಮನ್ರೊ ಈ ವರ್ಷದ 'ಮ್ಯಾನ್ ಬುಕರ್ ಅಂತಾರಾಷ್ಟ್ರೀಯ ಪ್ರಶಸ್ತಿ'ಗೆ ಆಯ್ಕೆಯಾದರು. ಜ್ಞಾನಪೀಠ ಪುರಸ್ಕೃತ ಭಾರತದ ಮಹಾಶ್ವೇತಾ ದೇವಿ ಹಾಗೂ ಭಾರತ ಮೂಲದ ನೊಬೆಲ್ ಪ್ರಶಸ್ತಿ ಪುರಸ್ಕೃತ ಸಾಹಿತಿ ವಿ. ಎಸ್. ನೈಪಾಲ್ ಅವರನ್ನು ಹಿಂದಕ್ಕೆ ತಳ್ಳಿ ಮನ್ರೊ ಈ ಪ್ರಶಸ್ತಿ ಗೆದ್ದುಕೊಂಡರು. 77 ವರ್ಷದ ಮನ್ರೊ, ಈ ಪ್ರಶಸ್ತಿ ಪಡೆದ ಮೂರನೇ ಸಾಹಿತಿ. ಪ್ರಶಸ್ತಿ 60,000 ಪೌಂಡ್‌ಗಳಷ್ಟು ನಗದು ಹಣ ಒಳಗೊಂಡಿದೆ.

2009: ಅಕಾಲಕ್ಕೆ ತಲೆಗೂದಲು ಉದುರುವುದು (ಬೊಕ್ಕತಲೆ) ಗಂಡಸರನ್ನು ಕಾಡುವ ಒಂದು ಸಮಸ್ಯೆ. ಅದರಲ್ಲೂ ಯೌವನದಲ್ಲೇ ಇದು ಕಾಣಿಸಿಕೊಂಡರೆ ಚಿಂತೆಯ ಗೆರೆಗಳು ಹೆಚ್ಚಾಗುತ್ತವೆ. ಇದಕ್ಕೆ ಕಾರಣವಾಗುವ ವಂಶವಾಹಿನಿ ಪತ್ತೆಹಚ್ಚಿರುವ ವಿಜ್ಞಾನಿಗಳು ಈ ಸಮಸ್ಯೆ ನಿವಾರಿಸಲು ಪರಿಣಾಮಕಾರಿ ಅಸ್ತ್ರ ಸಿಕ್ಕಿದೆ ಎಂದು ಪ್ರಕಟಿಸಿದರು. ಟೋಕಿಯೊದ ರಾಷ್ಟ್ರೀಯ ತಳಿ ವಿಜ್ಞಾನ ಸಂಸ್ಥೆಯ ವಿಜ್ಞಾನಿಗಳ ತಂಡ ಈ ಸಾಧನೆ ಮಾಡಿದ್ದು, 'ಎಸ್‌ಒಎಕ್ಸ್ 21' ಎಂಬ ವಂಶವಾಹಿನಿಯೇ ವ್ಯಕ್ತಿಯ ತಲೆ ಮೇಲೆ ಕೂದಲು ಇರಬೇಕೋ, ಬೇಡವೋ ಎಂಬುದನ್ನು ತೀರ್ಮಾನಿಸುತ್ತದೆ ಎಂದು ಹೇಳಿದರು. ಈ ವಂಶವಾಹಿನಿಯ ಇರುವಿಕೆ ಮುಂಚೆಯೇ ಗೊತ್ತಿತ್ತಾದರೂ ಈವರೆಗೆ ಅದು ನರಕೋಶಗಳ ರೂಪುಗೊಳ್ಳುವಿಕೆಯಲ್ಲಿ ಪಾತ್ರ ವಹಿಸುತ್ತದೆ ಎಂದೇ ಭಾವಿಸಲಾಗಿತ್ತು. ಆದರೆ ಇದೀಗ ಈ ವಂಶವಾಹಿನಿ ಕೂದಲು ಪೋಷಕ ಎಂದು ಅಧ್ಯಯನಗಳು ದೃಢಪಡಿಸಿದವು. ಇದೇ ವಂಶವಾಹಿನಿ ಹೊಂದಿರುವ ಇಲಿಗಳ ಮೇಲೆ ನಡೆಸಿದ ಪ್ರಯೋಗಗಳಿಂದ ಇದು ದೃಢಪಟ್ಟಿದೆ. ಆಗತಾನೇ ಹುಟ್ಟಿದ ಇಲಿಮರಿಗಳಲ್ಲಿ 'ಎಸ್‌ಒಎಕ್ಸ್ 21'ವಂಶವಾಹಿನಿಯ ಚಟುವಟಿಕೆ ಸ್ಥಗಿತಗೊಳಿಸಿದಾಗ 15 ದಿನಗಳಲ್ಲೇ ಅವುಗಳ ಕೂದಲು ಉದುರಲು ಶುರುವಾಗಿ ನಂತರದ ಒಂದೇ ವಾರದಲ್ಲಿ ಪೂರ್ತಿ ಬೋಳಾಗಿದ್ದುದು ಕಂಡುಬಂತು. ಹೀಗಾಗಿ ಮನುಷ್ಯರಲ್ಲೂ ಬೊಕ್ಕತಲೆ ಸಮಸ್ಯೆಗೆ ಇದೇ ಕಾರಣವೆಂಬ ತೀರ್ಮಾನಕ್ಕೆ ಬರಲಾಗಿದೆ ಎಂದು ವಿಜ್ಞಾನಿಗಳ ತಂಡದ ನೇತೃತ್ವ ವಹಿಸಿದ್ದ ಪ್ರೊ.ಯುಮಿಕೊ ಪ್ರತಿಪಾದಿಸಿದರು.

2009: ಖ್ಯಾತ ವಿದ್ವಾಂಸ, ಡೆಮಾಕ್ರಟಿಕ್ ಪಕ್ಷದ ಮಾಜಿ ಸಂಸದ ತಿಮೋಥಿ ರೋಮರ್ ಅವರನ್ನು ಅಧ್ಯಕ್ಷ ಬರಾಕ್ ಒಬಾಮ ಅವರು ಭಾರತಕ್ಕೆ ಅಮೆರಿಕದ ನೂತನ ರಾಯಭಾರಿಯನ್ನಾಗಿ ಹೆಸರಿಸಿದರು.

2008: ವಾಯುಮಾಲಿನ್ಯ ವಿಷಯದಲ್ಲಿ ದೇಶದ ರಾಜಧಾನಿ ದೆಹಲಿಯನ್ನೂ ಕೋಲ್ಕತ ಮೀರಿಸಿ ಪರಿಸರ ಮಾಲಿನ್ಯದಲ್ಲಿ ಮುಂಚೂಣಿಯಲ್ಲಿದೆ!. ದೆಹಲಿಗಿಂತಲೂ ಅತಿ ಹೆಚ್ಚು ಶ್ವಾಸಕೋಶ ಕ್ಯಾನ್ಸರ್ ಮತ್ತು ಹೃದಯಾಘಾತ ಸಂಭವಿಸುವುದು ಕೂಡಾ ಕೋಲ್ಕತದಲ್ಲೇ! ವರ್ಷವೊಂದರಲ್ಲಿ ಕೋಲ್ಕತದಲ್ಲಿ ಪ್ರತಿ ಲಕ್ಷ ಜನರಲ್ಲಿ 18ಕ್ಕೂ ಹೆಚ್ಚು ಮಂದಿ ಶ್ವಾಸಕೋಶ ಕ್ಯಾನ್ಸರ್ ಇಲ್ಲವೇ ಹೃದಯಾಘಾತಕ್ಕೆ ಬಲಿಯಾದರೆ ಅದೇ ದೆಹಲಿಯಲ್ಲಿ ಲಕ್ಷ ಜನರ್ಲಲಿ 13 ಮಂದಿ ಈ ಖಾಯಿಲೆಗಳಿಗೆ ಬಲಿಯಾಗುತ್ತಾರೆ ಎಂದು ಚಿತ್ತರಂಜನ್ ರಾಷ್ಟ್ರೀಯ ಕ್ಯಾನ್ಸರ್ ಇನ್ಸ್ಟಿಟ್ಯೂಟ್ (ಸಿಎನ್ಸಿಐ)ನ ಪರಿಸರ ವಿಜ್ಞಾನಿ ತ್ವಿಷಾ ಲಹಿರಿ ಬಹಿರಂಗ ಪಡಿಸಿದರು. ಕ್ಯಾನ್ಸರಿಗಿಂತಲೂ ಹೆಚ್ಚಾಗಿ ಹೃದಯಾಘಾತ ಪ್ರಕರಣಗಳ ಸಂಖ್ಯೆ ಕೋಲ್ಕತದಲ್ಲಿ ಹೆಚ್ಚಾಗಿದೆ ಎಂದು ಸಿಎನ್ಸಿಐನ ವರದಿ ತಿಳಿಸಿತು.

2008: ದೇಶದ ಹಲವಾರು ಕಡೆಗಳಲ್ಲಿ ಹಾಗೂ ಇತ್ತೀಚೆಗೆ ಜೈಪುರದಲ್ಲಿ ಸೈಕಲುಗಳನ್ನು ಬಳಸಿ ಉಗ್ರರು ಬಾಂಬ್ ಸ್ಫೋಟ ಕೃತ್ಯದಲ್ಲಿ ತೊಡಗಿದ ಹಿನ್ನೆಲೆಯಲ್ಲಿ ತಾಜ್ ಮಹಲ್ ಬಳಿ ಸೈಕಲ್ ನಿಲುಗಡೆಯನ್ನು ನಿಷೇಧಿಸಲಾಯಿತು. ವಿಶ್ವದ ಪ್ರಸಿದ್ಧ ತಾಜ್ ಮಹಲ್ ಭಯೋತ್ಪಾದಕ ಸಂಘಟನೆಗಳ ಕೆಂಗಣ್ಣಿಗೆ ಗುರಿಯಾದ ಹಿನ್ನೆಲೆಯಲ್ಲಿ ತಾಜ್ ಮಹಲ್ಗೆ ವಿವಿಧ ಏಜೆನ್ಸಿಗಳ ಭದ್ರತಾ ಪಡೆಗಳನ್ನು ಹಾಕಲಾಯಿತು.

2008: ಕನ್ನಡ ನೆಲದ ಕೀರ್ತಿ ಪತಾಕೆಯನ್ನು ಅಂತಾರಾಷ್ಟ್ರೀಯ ಮಟ್ಟದಲ್ಲಿ ಎತ್ತಿ ಹಿಡಿದ ಅಂಪೈರ್ ಎ.ವಿ.ಜಯಪ್ರಕಾಶ್ ಮಟ್ಟಿಗೆ ಈದಿನ ತಮ್ಮೂರು ಬೆಂಗಳೂರಿನಲ್ಲಿಯೇ ಕೊನೆಯ ಬಾರಿಗೆ ಅಂಪೈರ್ ಆಗಿ ಕಾರ್ಯ ನಿರ್ವಹಿಸಿದರು. ಕ್ರಿಕೆಟ್ ವೃತ್ತಿಪರ ಅಂಪೈರ್ ಜೀವನದಿಂದ ನಿವೃತ್ತಿ ಹೊಂದುವ ನಿರ್ಧಾರ ಪ್ರಕಟಿಸಿದ ಜಯಪ್ರಕಾಶ್ ಕೊನೆಯ ಬಾರಿಗೆ ಕ್ಷೇತ್ರದ ಅಂಪೈರ್ ಆಗಿ ಎಂ.ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಕಾಣಿಸಿಕೊಂಡರು. ಮುಂಬೈ ಇಂಡಿಯನ್ಸ್ ಹಾಗೂ ರಾಯಲ್ ಚಾಲೆಂಜರ್ಸ್ ತಂಡಗಳ ನಡುವೆ ನಡೆದ ಐಪಿಎಲ್ ಟ್ವೆಂಟಿ-20 ಟೂರ್ನಿಯ ಪಂದ್ಯದಲ್ಲಿ ಅವರು ತಮ್ಮ ಹೊಣೆಯನ್ನು ಕೊನೆಯ ಬಾರಿಗೆ ನಿಭಾಯಿಸಿದರು. 58 ವರ್ಷ ವಯಸ್ಸಿನ ಜಯಪ್ರಕಾಶ್ ದೀರ್ಘ ಕಾಲ ಅಂತಾರಾಷ್ಟ್ರೀಯ ಕ್ರಿಕೆಟ್ ಮಂಡಳಿ (ಐಸಿಸಿ) ಅಂಪೈರ್ ಸಮಿತಿಯ ಸದಸ್ಯರಾಗಿಯೂ ಕಾರ್ಯ ನಿರ್ವಹಿಸಿದ್ದರು. ಅವರು ಕ್ಷೇತ್ರದ ಅಂಪೈರ್ ಆಗಿದ್ದಾಗಲೇ ನವದೆಹಲಿಯ ಫಿರೋಜ್ ಷಾ ಕೋಟ್ಲಾ ಕ್ರೀಡಾಂಗಣದಲ್ಲಿ ಪಾಕಿಸ್ಥಾನದ ವಿರುದ್ಧ ಲೆಗ್ ಸ್ಪಿನ್ನರ್ ಅನಿಲ್ ಕುಂಬ್ಳೆ ಒಂದೇ ಇನಿಂಗ್ಸಿನಲ್ಲಿ ಹತ್ತು ವಿಕೆಟ್ ಕಬಳಿಸಿ ಗಮನ ಸೆಳೆದಿದ್ದರು.

2008: ಬಾಲಿವುಡ್ ನಟ ಸಂಜಯ್ ದತ್ ಹಾಗೂ ಮಾನ್ಯತಾರ ವಿವಾಹಕ್ಕೆ ಕಡೆಗೂ ನ್ಯಾಯಾಲಯ ಒಪ್ಪಿಗೆಯ ಮುದ್ರೆ ಒತ್ತಿತು. ಇವರಿಬ್ಬರ ವಿವಾಹ ಕಾನೂನು ಬದ್ಧವಾಗಿದೆ ಎಂದು ಮುಂಬೈನ ಸೆಷನ್ಸ್ ಕೋರ್ಟ್ ಹೇಳಿತು. ವಿಚಾರಣಾಧೀನ ಕೈದಿ ಮೆಹ್ರಾಜ್ ಶೇಕ್ ಎಂಬುವವನು, `ಮಾನ್ಯತಾ ನನ್ನ ಹೆಂಡತಿ. ಆಕೆ ನನ್ನಿಂದ ಕಾನೂನು ಬದ್ಧವಾಗಿ ವಿಚ್ಛೇದನ ಪಡೆದಿಲ್ಲ. ಹೀಗಾಗಿ ಆಕೆ ಸಂಜಯ ದತ್ ಅವರನ್ನು ಮದುವೆಯಾಗಿರುವುದು ಕಾನೂನು ಬದ್ಧವಲ್ಲ. ಆದ್ದರಿಂದ ಆಕೆಯ ವಿರುದ್ಧ ಬಹುಪತಿತ್ವ ಕಾನೂನಿನಡಿ ಕ್ರಮ ಜರುಗಿಸಬೇಕು ಎಂದು ಮುಂಬೈ ಮೆಟ್ರೋಪಾಲಿಟನ್ ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸಿದ್ದ. ಸುಪ್ರೀಂ ಕೋರ್ಟಿನಿಂದ ಜಾಮೀನು ದೊರೆತ ನಂತರ ಸಂಜಯ್ ಮಾನ್ಯತಾರನ್ನು ಪ್ರಸಕ್ತ ವರ್ಷದ ಫೆಬ್ರುವರಿ ತಿಂಗಳ ಮೊದಲ ವಾರ ಗೋವಾದಲ್ಲಿ ಮದುವೆಯಾಗಿದ್ದರು. ತದನಂತರ ಫೆ.11ರಂದು ಅವರು ಮಾಧ್ಯಮದವರಿಗೆ ತಮ್ಮ ಮದುವೆ ವಿಷಯವನ್ನು ಬಹಿರಂಗಗೊಳಿಸಿ ಶಾಸ್ತ್ರೋಕ್ತವಾಗಿ ಮುಂಬೈಯಲ್ಲಿ ಮತ್ತೆ ಮದುವೆಯಾದರು.

2008: ಮಂಗಳೂರಿನಲ್ಲಿ ಬಹುಕೋಟಿ ರೂಪಾಯಿ ಬಂಡವಾಳದ ಪೆಟ್ರೋಲಿಯಂ, ರಾಸಾಯನಿಕ ಮತ್ತು ಪೆಟ್ರೋಕೆಮಿಕಲ್ ಹೂಡಿಕೆ ವಲಯವನ್ನು (ಪಿಸಿಪಿಐಆರ್) ಸ್ಥಾಪಿಸುವ ಕರ್ನಾಟಕದ ಪ್ರಸ್ತಾವಕ್ಕೆ ಕೇಂದ್ರ ಅನುಮೋದನೆ ನೀಡಿದೆ ಎಂದು ರಾಸಾಯನಿಕ ಮತ್ತು ಪೆಟ್ರೋಕೆಮಿಕಲ್ ಇಲಾಖೆ ಕಾರ್ಯದರ್ಶಿ ವಿ.ಎಸ್.ಸಂಪತ್ ಬಹಿರಂಗ ಪಡಿಸಿದರು. ರಾಜ್ಯ ಸರ್ಕಾರವು ಬಹಳ ಹಿಂದೆಯೇ ಈ ಕುರಿತ ಪ್ರಸ್ತಾವವನ್ನು ಕೇಂದ್ರಕ್ಕೆ ಸಲ್ಲಿಸಿತ್ತು. ಆದರೆ, ಕೇಂದ್ರವು ಭೂಮಿಯ ಲಭ್ಯತೆ ಹಾಗೂ ಇತರ ಮೂಲಸೌಕರ್ಯಗಳ ಬಗ್ಗೆ ಇನ್ನಷ್ಟು ವಿವರಣೆ ಕೋರಿ ಪ್ರಸ್ತಾವವನ್ನು ಹಿಂದಕ್ಕೆ ಕಳುಹಿಸಿತ್ತು.

2008: ಕರ್ನಾಟಕದ ವಿವಿಧೆಡೆ ಗುಡುಗು, ಸಿಡಿಲು, ಗಾಳಿಯಿಂದ ಕೂಡಿದ ಮಳೆ ಸುರಿದು ಆಸ್ತಿಪಾಸ್ತಿ ಹಾಗೂ ಜೀವಹಾನಿ ಸಂಭವಿಸಿತು. ಸಿಡಿಲು ಬಡಿದು ದಾವಣಗೆರೆ ಜಿಲ್ಲೆಯ ಹರಪನಹಳ್ಳಿ ತಾಲ್ಲೂಕಿನಲ್ಲಿ ನಾಲ್ವರು ಹಾಗೂ ಶಿವಮೊಗ್ಗ ಜಿಲ್ಲೆಯ ಗೋಂದಿಚಟ್ನಹಳ್ಳಿಯಲ್ಲಿ, ಉಡುಪಿ ಜಿಲ್ಲೆಯ ಹೆಜಮಾಡಿಕೋಡಿ ಎಂಬಲ್ಲಿ ತಲಾ ಒಬ್ಬರು ಮೃತರಾದರು.

2008: ಆರು ವರ್ಷಗಳ ಹಿಂದೆ ನಡೆದ ನಿತೀಶ್ ಕಟಾರಾ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ನವದೆಹಲಿಯ ಹೆಚ್ಚುವರಿ ಸೆಷನ್ಸ್ ನ್ಯಾಯಾಲಯವು ವಿಕಾಸ್ ಮತ್ತು ಆತನ ಸಹೋದರ ಸಂಬಂಧಿ ವಿಶಾಲ್ ಯಾದವ್ ಅಪರಾಧಿಗಳು ಎಂದು ಘೋಷಿಸಿತು. ಉತ್ತರಪ್ರದೇಶದ ರಾಜಕಾರಣಿ ಡಿ. ಪಿ.ಯಾದವ್ ಅವರ ಪುತ್ರನಾದ ವಿಕಾಸ್ ಮತ್ತು ಆತನ ಸಹೋದರ ಸಂಬಂಧಿ ವಿಶಾಲ್ ವಿರುದ್ಧದ ಕೊಲೆ, ಅಪಹರಣ ಮತ್ತು ಸಾಕ್ಷಿಗಳ ನಾಶ ಆಪಾದನೆಗಳು ಸಾಬಿತಾಗಿವೆ ಎಂದು ನ್ಯಾಯಾಧೀಶ ರವೀಂದ್ರ ಕೌರ್ ಪ್ರಕಟಿಸಿದರು.

2008: ವೀರರಾಣಿ ಕಿತ್ತೂರ ಚನ್ನಮ್ಮಾಜಿ ವಂಶಸ್ಥ ಹಾಗೂ ಸ್ವಾತಂತ್ರ್ಯ ಹೋರಾಟಗಾರ ತಾತ್ಯಾ ಸಾಹೇಬ ಬಾಪುಸಾಹೇಬ ದೇಸಾಯಿ (ಕಿತ್ತೂರಕರ) (89) ಈದಿನ ರಾತ್ರಿ ಚನ್ನಮ್ಮನ ಕಿತ್ತೂರಿನ ತಮ್ಮ ಸ್ವಗೃಹದಲ್ಲಿ ಹೃದಯಾಘಾತದಿಂದ ನಿಧನರಾದರು. ಸ್ವಾತಂತ್ರ್ಯ ಚಳವಳಿಯಲ್ಲಿ ಭಾಗವಹಿಸಿದ್ದ, ರಾಣಿ ಚನ್ನಮ್ಮಾಜಿಯ 5 ನೇ ವಂಶಸ್ಥರಾದ ಅವರು ಪಾಂಡಿಚೇರಿಯ ಅರವಿಂದ ಆಶ್ರಮದಲ್ಲಿ 25 ವರ್ಷಕಾಲ ಇದ್ದು ಕಿತ್ತೂರಿಗೆ ಆಗಮಿಸಿದ್ದರು. ಇಲ್ಲಿನ ಪ್ರತಿಷ್ಠಿತ ಕಿತ್ತೂರ ರಾಣಿ ಚನ್ನಮ್ಮ ಸ್ಮಾರಕ ಸಮಿತಿಯ ಆಡಳಿತ ಮಂಡಳಿ ಉಪಾಧ್ಯಕ್ಷರಾಗಿ ಸೇವೆ ಸಲ್ಲಿಸುತ್ತಿದ್ದರು.

2007: ಎರಡನೇ ಮಹಾಯುದ್ಧ ಕಾಲದಲ್ಲಿ ಜಪಾನ್ ಸೈನಿಕ ಹಾರಿಸಿದ್ದ ಗುಂಡು ಹೊಕ್ಕು 64 ವರ್ಷಗಳಿಂದ ತಲೆನೋವಿನಿಂದ ನರಳುತ್ತಿದ್ದ ಚೀನೀ ಮಹಿಳೆಯ ತಲೆಯಿಂದ ಗುಂಡನ್ನು ವೈದ್ಯರು ಕೊನೆಗೂ ಹೊರತೆಗೆದರು. 1943ರಲ್ಲಿ ತನ್ನ ತಾತನನ್ನು ನೋಡಲು ಹೊಗ್ಲು ಪ್ರಾಂತ್ಯಕ್ಕೆ ತೆರಳಿದ ಸಂದರ್ಭದಲ್ಲಿ ಜಪಾನಿ ಸೇನಾಪಡೆಯವನೊಬ್ಬ ಹಾರಿಸಿದ ಗುಂಡು ಜಿನ್ ಗುಂಜಿಂಗ್ (77) ತಲೆಗೆ ಹೊಕ್ಕು ಆಕೆ ಪ್ರಜ್ಞೆ ಕಳೆದುಕೊಂಡಿದ್ದಳು. ಬಳಿಕ ಅಸಭ್ಯ ಮಾತುಗಳೊಂದಿಗೆ ನಿರಂತರ ತಲೆ ನೋವು ಅನುಭವಿಸುತ್ತಿದ್ದಳು. ಮಾನಸಿಕವಾಗಿ ಅಸ್ವಸ್ಥಗೊಂಡಿದ್ದಳು.

2007: ಭ್ರಷ್ಟಾಚಾರ ಆರೋಪ ಎದುರಿಸುತ್ತಿದ್ದ ಜಪಾನಿನ ಕೃಷಿ ಸಚಿವ ತೊಷಿಕಾತ್ಸು ಮಾತ್ಸುಕಾ (62) ಆತ್ಮಹತ್ಯೆ ಮಾಡಿಕೊಂಡರು. ನೇಣು ಹಾಕಿಕೊಳ್ಳಲು ಯತ್ನಿಸಿ ಮನೆಯಲ್ಲಿ ಪ್ರಜ್ಞಾಹೀನರಾಗಿ ಬಿದ್ದಿದ್ದ ಮಾತ್ಸುಕಾ ಅವರನ್ನು ಟೋಕಿಯೋದ ಕಿಯೋ ವಿವಿ ಆಸ್ಪತ್ರೆಗೆ ತಂದಾಗ ಪ್ರಾಣ ಹಾರಿಹೋಗಿತ್ತು.

2007: ಆದಾಯಕ್ಕೂ ಮೀರಿ ಆಸ್ತಿ ಹೊಂದಿದ ಆರೋಪ ಹೊತ್ತಿರುವ ಮಾಜಿ ಸಿಕ್ಕಿಂ ಮುಖ್ಯಮಂತ್ರಿ ಎನ್. ಬಿ. ಭಂಡಾರಿ ಅವರಿಗೆ ವಿಶೇಷ ಸಿಬಿಐ ನ್ಯಾಯಾಲಯವು ಒಂದು ತಿಂಗಳ ಕಾರಾಗೃಹ ಶಿಕ್ಷೆ ಮತ್ತು 5000 ರೂಪಾಯಿಗಳ ದಂಡ ವಿಧಿಸಿ ತೀರ್ಪು ನೀಡಿತು. ಸಿಕ್ಕಿಂ ಪ್ರದೇಶ ಕಾಂಗ್ರೆಸ್ ಸಮಿತಿ ಅಧ್ಯಕ್ಷ ಭಂಡಾರಿ ಅವರು ತಾವು ಮುಖ್ಯಮಂತ್ರಿಯಾಗಿದ್ದ ಅವಧಿಯಲ್ಲಿ ತಮ್ಮ ಆದಾಯ ಮೀರಿ 15.22 ಲಕ್ಷ ರೂಪಾಯಿಗಳಷ್ಟು ಅಕ್ರಮ ಆಸ್ತಿ ಸಂಪಾದಿಸಿದ್ದನ್ನು ಸಿಬಿಐ ಪತ್ತೆ ಹಚ್ಚಿತ್ತು.

2007: ಶ್ರವಣಬೆಳಗೊಳದ ರಾಷ್ಟ್ರೀಯ ಪ್ರಾಕೃತ ಅಧ್ಯಯನ ಸಂಶೋಧನ ಸಂಸ್ಥೆಯ ನಿಯೋಜಿತ ನಿರ್ದೇಶಕ ಡಾ. ಪ್ರೇಮ ಸುಮನ್ ಜೈನ್ ಅವರು 35 ವರ್ಷಗಳಿಂದ ಪಾಲಿ, ಪ್ರಾಕೃತ ಭಾಷೆಯ ಶೈಕ್ಷಣಿಕ ಮತ್ತು ಸಂಶೋಧನ ಕ್ಷೇತ್ರದಲ್ಲಿ ಸಲ್ಲಿಸಿದ ಸೇವೆಗಾಗಿ ರಾಷ್ಟ್ರಪತಿ ಎ.ಪಿ.ಜೆ. ಅಬ್ದುಲ್ ಕಲಾಂ ಅವರಿಂದ ರಾಷ್ಟ್ರೀಯ ಗೌರವ ಪುರಸ್ಕಾರ ಪಡೆದರು.

2007: ಸ್ತನ ಕ್ಯಾನ್ಸರ್ ರೋಗಕ್ಕೆ ಕಾರಣವಾಗುವ ವಂಶವಾಹಿಗಳನ್ನು (ಜೀನ್ಸ್) ಪತ್ತೆ ಹಚ್ಚುವಲ್ಲಿ ತಾವು ಯಶಸ್ವಿಯಾಗಿರುವುದಾಗಿ ಕ್ಯಾನ್ಸರ್ ತಜ್ಞ ಕರೋಲ್ ಸಿಕೋರ ನೇತೃತ್ವದ ವಿಜ್ಞಾನಿಗಳ ತಂಡವೊಂದು ಲಂಡನ್ನಿನಲ್ಲಿ ಪ್ರಕಟಿಸಿತು. ಮಹಿಳೆಯರಲ್ಲಿ ಸ್ತನ ಕ್ಯಾನ್ಸರಿಗೆ ಕಾರಣವಾಗುವ ಕನಿಷ್ಠ ನಾಲ್ಕು ವಂಶವಾಹಿಗಳನ್ನು ತಾವು ಪತ್ತೆ ಹಚ್ಚಿರುವುದಾಗಿ ಈ ವಿಜ್ಞಾನಿಗಳು `ನೇಚರ್ ಅಂಡ್ ನೇಚರ್ ಜೆನೆಟಿಕ್ಸ್' ಪತ್ರಿಕೆಯ ಆನ್ ಲೈನ್ ಆವೃತ್ತಿಯಲ್ಲಿ ಪ್ರಕಟಿಸಿದರು. ವಂಶವಾಹಿ ವಿಜ್ಞಾನದಲ್ಲಿ ಇದೊಂದು ಮಹತ್ವದ ಮುನ್ನಡೆ.

2007: ಎಂಜಿನಿಯರಿಂಗ್ ಶಿಕ್ಷಣದ ಬಡ ವಿದ್ಯಾರ್ಥಿಗಳ ಅನುಕೂಲಕ್ಕಾಗಿ ವಿಶ್ವೇಶ್ವರಯ್ಯ ತಾಂತ್ರಿಕ ವಶ್ವ ವಿದ್ಯಾಲಯವು (ವಿಟಿಯು) ತನ್ನ ವಾಪ್ತಿಗೆ ಒಳಪಟ್ಟ ಕಾಲೇಜುಗಳ ವಿದ್ಯಾರ್ಥಿಗಳಿಗೆ ಯಾವುದೇ ಭದ್ರತೆಯ ಆವಶ್ಯಕತೆ ಇಲ್ಲದೆ 4 ಲಕ್ಷ ರೂಪಾಯಿಗಳವರೆಗೆ ಸಾಲ ನೀಡಲು ನಿರ್ಧರಿಸಿತು. ವಿಟಿಯು ಕುಲಪತಿ ಡಾ. ಕೆ. ಬಾಲವೀರರೆಡ್ಡಿ ಈ ವಿಚಾರ ಪ್ರಕಟಿಸಿದರು.

2007: ಉಡುಪಿ ಜಿಲ್ಲೆಯ ಮೂಳೂರು ಪ್ರದೇಶದಲ್ಲಿ ರಾಷ್ಟ್ರೀಯ ಹೆದ್ದಾರಿಯಲ್ಲಿ ಮದುವೆಗೆ ಹೊರಟಿದ್ದ ವ್ಯಾನೊಂದು ಅಪಘಾತಕ್ಕೆ ಈಡಾದ ಪರಿಣಾಮವಾಗಿ 7 ಮಕ್ಕಳು, 9 ಮಹಿಳೆಯರು ಸೇರಿ ಒಟ್ಟು 17 ಜನ ಮೃತರಾದರು.

2007: ಸುಂದರಗಢ ಜಿಲ್ಲೆಯ ಖಂದಧರ್ ಬೆಟ್ಟಗಳಲ್ಲಿ ಸಮೀಕ್ಷೆ ಕಾಲದಲ್ಲಿ ಅವಯವ ರಹಿತ ಹಲ್ಲಿಗಳನ್ನು ಪತ್ತೆ ಹಚ್ಚಿದುದಾಗಿ ಒರಿಸ್ಸಾ ಪ್ರಾಣಿಶಾಸ್ತ್ರಜ್ಞರ ತಂಡ ಪ್ರಕಟಿಸಿತು.

2006: ಫಿಲಿಪ್ಪೀನ್ಸಿನ ರಾಜಧಾನಿ ಮನಿಲಾ ಸಮೀಪದ ಫೆಸಿಗ್ ನಗರದಲ್ಲಿ ಈದಿನ ಮುಕ್ತಾಯಗೊಂಡ ನಾಲ್ಕು ಸ್ಟಾರ್ ಫಿಲಿಪ್ಪೀನ್ಸ್ ಓಪನ್ ಬ್ಯಾಡ್ಮಿಂಟನ್ ಚಾಂಪಿಯನ್ ಶಿಪ್ಪಿನ ಫೈನಲ್ಲಿನಲ್ಲಿ ಪ್ರಶಸ್ತಿ ಗೆದ್ದ ನೈನಾ ನೆಹ್ವಾಲ್ ರಾಷ್ಟ್ರದ ಬ್ಯಾಡ್ಮಿಂಟನ್ ರಂಗದ ದಾಖಲೆಯ ಪುಟದಲ್ಲಿ ತಮ್ಮ ಹೆಸರು ಸೇರ್ಪಡೆ ಮಾಡಿದರು.

1998: ಭಾರತದ ಅಣ್ವಸ್ತ್ರ ಪರೀಕ್ಷೆಗಳಿಗೆ ಪ್ರತಿಯಾಗಿ ಪಾಕಿಸ್ಥಾನ ಐದು ಅಣ್ವಸ್ತ್ರಗಳನ್ನು ಸ್ಫೋಟಿಸಿತು. ಇದನ್ನು ಅನುಸರಿಸಿ ಅಮೆರಿಕ, ಜಪಾನ್ ಮತ್ತು ಇತರ ರಾಷ್ಟ್ರಗಳು ಪಾಕಿಸ್ಥಾನದ ವಿರುದ್ಧ ಆರ್ಥಿಕ ದಿಗ್ಬಂಧನ ಹೇರಿದವು.

1997: ಮಾಜಿ ಕೇಂದ್ರ ಸಚಿವರಾದ ಅರ್ಜುನ್ ಸಿಂಗ್, ಎನ್.ಡಿ. ತಿವಾರಿ, ಆರ್.ಕೆ. ಧವನ್ ಮತ್ತು ಮಾಧವರಾವ್ ಸಿಂಧಿಯಾ ಅವರನ್ನು ವಿ.ಬಿ. ಗುಪ್ತ ನೇತೃತ್ವದ ವಿಶೇಷ ನ್ಯಾಯಾಲಯವು ಜೈನ್ ಹವಾಲಾ ಹಗರಣದಿಂದ ಮುಕ್ತಗೊಳಿಸಿತು.

1964: ಪ್ಯಾಲಸ್ಥೈನ್ ಲಿಬರೇಶನ್ ಆರ್ಗನೈಸೇಷನ್ (ಪಿಎಲ್ಒ) ಸ್ಥಾಪನೆಗೊಂಡಿತು.

1961: ಮಾನವ ಹಕ್ಕುಗಳ ಉಲ್ಲಂಘನೆ ಕುರಿತು ಜನಾಭಿಪ್ರಾಯ ರೂಪಿಸಲು ಮತ್ತು ರಾಜಕೀಯ ಕೈದಿಗಳ ಬಿಡುಗಡೆಗೆ ಒತ್ತಾಯಿಸಲು ಬ್ರಿಟಿಷ್ ವಕೀಲ ಪೀಟರ್ ಬೆನೆನ್ಸನ್ ಲಂಡನ್ನಿನಲ್ಲಿ `ಅಮ್ನೆಸ್ಟಿ ಇಂಟರ್ ನ್ಯಾಷನಲ್' ಸಂಘಟನೆಯನ್ನು ಸ್ಥಾಪಿಸಿದರು. ಶಾಂತಿ, ನ್ಯಾಯ ಮತ್ತು ಜಗತ್ತಿನಲ್ಲಿ ಶಾಂತಿ ಸ್ಥಾಪನೆಗೆ ನೆಲೆಗಟ್ಟು ಒದಗಿಸಲು ಸಲ್ಲಿಸಿದ ಸೇವೆಗಾಗಿ ಈ ಸಂಘಟನೆಗೆ 1977ರ ನೊಬೆಲ್ ಪ್ರಶಸ್ತಿ ಲಭಿಸಿತು.

1930: ಕ್ರಾಂತಿಕಾರಿ ಸ್ವಾತಂತ್ರ್ಯ ಹೋರಾಟಗಾರ ಭಗವತಿ ಚರಣ ವೋಹ್ರಾ ನಿಧನರಾದರು.

1906: ಸಾಹಿತಿ, ಕಾದಂಬರಿಕಾರ, ನಾಟಕಕಾರ ಕೆ. ವೆಂಕಟರಾಮಪ್ಪ (28-5-1906 ರಿಂದ 2-9-1991) ಅವರು ಸುಬ್ಬಾಶಾಸ್ತ್ರಿ- ಸಾವಿತ್ರಮ್ಮ ದಂಪತಿಯ ಪುತ್ರನಾಗಿ ಈ ದಿನ ಜನಿಸಿದರು. ಕರ್ನಾಟಕ ಸಾಹಿತ್ಯ ಪರಿಷತ್ ವೆಂಕಟರಾಮಪ್ಪ ಅವರ ವಿದ್ವತ್ತನ್ನು ಗುರುತಿಸಿ 1986ರಲ್ಲಿ ಕರ್ನಾಟಕ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ನೀಡಿ ಗೌರವಿಸಿತ್ತು.

1923: ತೆಲುಗು ಚಿತ್ರನಟ, ತೆಲುಗುದೇಶಂ ಪಕ್ಷದ ಸ್ಥಾಪಕ, ಆಂಧ್ರಪ್ರದೇಶದ ಮಾಜಿ ಮುಖ್ಯಮಂತ್ರಿ ಎನ್.ಟಿ. ರಾಮರಾವ್ (1923-96) ಜನ್ಮದಿನ.

1883: ಭಾರತದ ಕ್ರಾಂತಿಕಾರಿ ಸ್ವಾತಂತ್ರ್ಯ ಹೋರಾಟಗಾರ ವಿನಾಯಕ ದಾಮೋದರ ಸಾವರ್ಕರ್ (1883-1966) ಜನ್ಮದಿನ.

1865: `ಬ್ರೋಚೆವಾರೆವರುರಾ' ಕೃತಿ ರಚಿಸಿದ ಖ್ಯಾತ ಸಂಗೀತಗಾರ ಮೈಸೂರು ವಾಸುದೇವಾಚಾರ್ಯ (28-5-1865ರಿಂದ 17-5-1961) ಅವರು ಸುಬ್ರಹ್ಮಣ್ಯಾಚಾರ್ಯ- ಕೃಷ್ಣಾಬಾಯಿ ದಂಪತಿಯ ಮಗನಾಗಿ ಮೈಸೂರಿನಲ್ಲಿ ಜನಿಸಿದರು.
1759: ವಿಲಿಯಂ ಪಿಟ್ ಜನ್ಮದಿನ (1759-1806). ಈತ ಅತ್ಯಂತ ಕಿರಿಯ ಬ್ರಿಟಿಷ್ ಪ್ರಧಾನಿ. 1783ರಲ್ಲಿ ಪ್ರಧಾನಿಯಾದಾಗ ಈತನಿಗೆ 24 ವರ್ಷ ವಯಸ್ಸು. ಈತ ಪ್ರಧಾನಿ ಸ್ಥಾನಕ್ಕೆ ತಂದೆಯ ಉತ್ತರಾಧಿಕಾರಿಯಾಗಿ ಆಯ್ಕೆಯಾದ ಮೊತ್ತ ಮೊದಲ ವ್ಯಕ್ತಿ ಕೂಡಾ.

1738: ಜೋಸೆಫ್ ಗಿಲೋಟಿನ್ (1738-1814) ಹುಟ್ಟಿದ ದಿನ. ಫ್ರಾನ್ಸಿನ `ತಲೆ ಕಡಿಯುವ ಯಂತ್ರ'ಕ್ಕೆ ಈ ವ್ಯಕ್ತಿಯ ಹೆಸರನ್ನೇ ಇಡಲಾಯಿತು. ಇಂತಹ ಯಂತ್ರದ ಬಗ್ಗೆ ಬೋಧಿಸುತ್ತಿದ್ದ ಹಿನ್ನೆಲೆಯಲ್ಲಿ ಈತನ ಹೆಸರನ್ನು ಅದಕ್ಕೆ ನೀಡಲಾಯಿತು. ಆದರೆ ಈ ಯಂತ್ರ ಆತನ ಸಂಶೋಧನೆಯಲ್ಲ.

(ಸಂಗ್ರಹ: ನೆತ್ರಕೆರೆ ಉದಯಶಂಕರ)

ಇಂದಿನ ಇತಿಹಾಸ History Today ಮೇ 27

ಇಂದಿನ ಇತಿಹಾಸ

ಮೇ 27

ಅಮೆರಿಕದ ಫೋನಿಕ್ಸ್ನಲ್ಲಿ ಮನೆಯಲ್ಲಿ ಆಟವಾಡುತ್ತಿದ್ದ ವೇಳೆ ಆಕಸ್ಮಿಕವಾಗಿ ಟ್ರೆಡ್ ಮಿಲ್‌ನಲ್ಲಿ (ನಡಿಗೆ ಯಂತ್ರ) ಕತ್ತು ಸಿಕ್ಕಿಕೊಂಡು ಗಾಯಗೊಂಡು ಆಸ್ಪತ್ರೆಗೆ ದಾಖಲಾದ ಮಾಜಿ ಹೇವಿ ವೇಟ್‌ಲಿಫ್ಟಿಂಗ್ ಚಾಂಪಿಯನ್ ಮೈಕ್ ಟೈಸನ್ ಪುತ್ರಿ ಎಕ್ಸೋಡಸ್ ಟೈಸನ್ (4) ಈದಿನ ಕೊನೆಯುಸಿರೆಳೆದಳು ಎಂದು ಪೊಲೀಸರು ತಿಳಿಸಿದರು.

2009: ಪಾಕಿಸ್ಥಾನದಲ್ಲಿ ಭಯೋತ್ಪಾದಕರು ಮತ್ತೆ ತಮ್ಮ ಅಟ್ಟಹಾಸ ಮೆರೆದು, ಪಂಜಾಬ್ ಪ್ರಾಂತ್ಯದ ರಾಜಧಾನಿ ಲಾಹೋರಿನಲ್ಲಿ ರಕ್ತದ ಕೋಡಿ ಹರಿಸಿದರು. ಶಂಕಿತ ತಾಲಿಬಾನ್ ಉಗ್ರರು, ಲಾಹೋರ್ ಪ್ರಾಂತ್ಯದ ಐಎಸ್‌ಐ ಕಚೇರಿ ಮೇಲೆ ಈದಿನ ಬೆಳಿಗ್ಗೆ ನಡೆಸಿದ ಭೀಕರ ದಾಳಿಯಲ್ಲಿ ಏಳು ಜನ ಐಎಸ್‌ಐ (ಇಂಟರ್ ಸರ್ವೀಸಸ್ ಇಂಟೆಲಿಜೆನ್ಸ್) ಸಿಬ್ಬಂದಿ ಸೇರಿದಂತೆ 35 ಜನ ಮೃತರಾಗಿ 100ಕ್ಕೂ ಹೆಚ್ಚು ಜನ ಗಾಯಗೊಂಡರು. ಎರಡರಿಂದ ನಾಲ್ಕರಷ್ಟಿದ್ದ ಶಸ್ತ್ರಸಜ್ಜಿತ ಉಗ್ರರು ಜನನಿಬಿಡ ರಸ್ತೆಯಲ್ಲಿದ್ದ ಐಎಸ್‌ಐ ಪ್ರಾಂತೀಯ ಕಚೇರಿಯ ಮೇಲೆ ದಾಳಿ ನಡೆಸಲೆಂದೇ ಸಜ್ಜಾಗಿ ಬಂದಿದ್ದರು. ಶಕ್ತಿಶಾಲಿ ಸ್ಫೋಟಕಗಳು ತುಂಬಿದ್ದ ಕಾರನ್ನು ಐಎಸ್‌ಐ ಕಚೇರಿಯೊಳಗೆ ನುಗ್ಗಿಸಲು ಹವಣಿಸಿದರು. ಆದರೆ, ಐಎಸ್‌ಐ ಕಚೇರಿಯ ಭದ್ರತಾ ಸಿಬ್ಬಂದಿ ಅವರನ್ನು ತಡೆಯಲು ಯತ್ನಿಸಿದಾಗ ವಾಹನದಿಂದ ಕೆಳಗಿಳಿದ ಉಗ್ರರು ಭದ್ರತಾ ಸಿಬ್ಬಂದಿಯತ್ತ ಗುಂಡು ಹಾರಿಸುತ್ತಾ ವಾಹನ ಸ್ಫೋಟಿಸಿದರು.

2009: ವಿಶ್ವದ 17 ರಾಷ್ಟ್ರಗಳ 22 ಹೊಸ ಮೀಸಲು ವನ್ಯಜೀವಿ ಅಭಯಾರಣ್ಯಗಳನ್ನು ಗುರುತಿಸಿದ ಯುನೆಸ್ಕೊ, ತನ್ನ ವಿಶ್ವವ್ಯಾಪಿ ಜೀವವೈವಿಧ್ಯ ಮೀಸಲು ಅರಣ್ಯದ ಪಟ್ಟಿಯಲ್ಲಿ ಭಾರತದ ಮೂರು ತಾಣಗಳಿಗೆ ಸ್ಥಾನ ಕಲ್ಪಿಸಿತು. ಅದರಲ್ಲಿ ಒರಿಸ್ಸಾದ ಸಿಂಪ್ಲಿಪಾಲ್, ಮೇಘಾಲಯದ ನಾರ್‌ಕೆಕ್, ಮಧ್ಯಪ್ರದೇಶದ ಪಂಚ್‌ಮರ್ಲಿ ಮೀಸಲು ಅರಣ್ಯಗಳು ಹೊಸದಾಗಿ ಸೇರ್ಪಡೆಯಾದವು. ಜಾಗತಿಕ ಜೀವ ಜಗತ್ತಿನ ಮಾಹಿತಿ ಸಂಪರ್ಕ ಕಲ್ಪಿಸುತ್ತಿರುವ ಯುನೆಸ್ಕೊ 107 ರಾಷ್ಟ್ರಗಳ ಮೀಸಲು ಅಭಯಾರಣ್ಯಗಳ ಮಾಹಿತಿ ಹೊಂದಿದೆ.

2009: ಡಾರ್ಜಿಲಿಂಗ್‌ನಲ್ಲಿ ಸಂಭವಿಸಿದ ಭೂ ಕುಸಿತದ ಭಗ್ನಾವಶೇಷದಿಂದ ಇನ್ನೂ ಐದು ಶವಗಳನ್ನು ಹೊರತೆಗೆಯಲಾಯಿತು., ಇದರೊಂದಿಗೆ ಪಶ್ಚಿಮ ಬಂಗಾಳದ ಚಂಡಮಾರುತದಲ್ಲಿ ಸತ್ತವರ ಸಂಖ್ಯೆ 86ಕ್ಕೆ ಏರಿದಂತಾಯಿತು.

2009: ಮುಂಬೈ ದಾಳಿಯ (26/11) ಬಂಧಿತ ಆರೋಪಿ ಅಜ್ಮಲ್ ಕಸಾಬ್‌ನ ವಿಚಾರಣೆಯನ್ನು ನಡೆಸಿದ ವಿಶೇಷ ನ್ಯಾಯಾಲಯವು ಪ್ರತ್ಯಕ್ಷ ಸ್ವತಂತ್ರ ಸಾಕ್ಷಿ ಎಂಬ ನೆಲೆಯಲ್ಲಿ ನಾಗರಿಕರೊಬ್ಬರ ಸಾಕ್ಷ್ಯವನ್ನು ದಾಖಲಿಸಿಕೊಂಡಿತು. ಕಸಾಬ್‌ನನ್ನು ಗುರುತಿಸುವಲ್ಲಿ ಪ್ರಸ್ತುತ ಸ್ವತಂತ್ರ ಸಾಕ್ಷಿದಾರ ಯಶಸ್ವಿಯಾದರು. ಹೊಟೇಲ್ ತಾಜ್‌ನಲ್ಲಿ ನೌಕರನಾಗಿದ್ದ ಭರತ್ ತಾಮೋರ್ ಎಂಬವರೇ ಈ ಸಾಕ್ಷಿದಾರ. ನವೆಂಬರ್ 26ರಂದು ದೋಣಿಯ ಮೂಲಕ ನಗರದ ಸಮುದ್ರ ತೀರದಲ್ಲಿರುವ ಮೀನುಗಾರರ ಕಾಲೋನಿಯಲ್ಲಿ ಬಂದಿಳಿದ 10 ಬಂಧೂಕುಧಾರಿ ವ್ಯಕ್ತಿಗಳಲ್ಲಿ ಕಸಾಬ್ ಕೂಡ ಇದ್ದ ಎಂಬುದಾಗಿ ಸಾಕ್ಷಿದಾರ ಗುರುತಿಸಿದರು. ಸಾಕ್ಷಿದಾರ ಸಾಮಾನ್ಯ ನಾಗರಿಕನಾಗಿರುವುದರಿಂದ ಪ್ರಸ್ತುತ ಪುರಾವೆಗಳು ಅತ್ಯಂತ ಮಹತ್ವದ್ದು. ಈ ವ್ಯಕ್ತಿ ಪ್ರಥಮ ಪ್ರತ್ಯಕ್ಷ ಸಾಕ್ಷ್ಯದಾರ ಎಂಬುದಾಗಿ ವಿಶೇಷ ನ್ಯಾಯಾಲಯ ದಾಖಲಿಸಿತು.. ಕಸಾಬ್‌ನನ್ನೊಳಗೊಂಡ ಉಗ್ರರ ತಂಡವನ್ನು ದಾಳಿ ನಡೆಸುವ ಮುನ್ನ ಈ ವ್ಯಕ್ತಿ ನೋಡಿದ್ದರು. ರಾತ್ರಿ 9.15ರ ವೇಳೆಗೆ ನೌಕರಿಗೆ ತೆರಳುತ್ತಿದ್ದಾಗ ಈ ಘಟನೆ ಸಂಭವಿಸಿದೆ ಎಂದು ಸರ್ಕಾರಿ ಅಭಿಯೋಜಕರು ಉಲ್ಲೇಖಿಸಿದ್ದರು. ದುಷ್ಕರ್ಮಿಗಳಲ್ಲಿ ಇಬ್ಬರು ಭರತ್ ತಾಮೋರ್‌ನೊಂದಿಗೆ ವಾಗ್ವಾದ ನಡೆಸಿದ್ದರು. ತಾಮೋರ್ ಶಸ್ತ್ರಧಾರಿ ತಂಡದವರಲ್ಲಿ ನೀವ್ಯಾರು ಎಂದು ವಿಚಾರಿಸಿದ್ದೇ ಮಾತಿನ ಚಕಮಕಿಗೆ ಕಾರಣ ಎಂದು ನ್ಯಾಯಾಲಯದ ಕಟಕಟೆಯಲ್ಲಿ ಅವರು ಹೇಳಿದರು. ದೋಣಿಯಲ್ಲಿ ಬಂದ 10 ಮಂದಿಯಲ್ಲಿ 8 ಜನರು ಕೆಳಕ್ಕಿಳಿದು ಸಾಗಿದರೆ, ಉಳಿದಿಬ್ಬರು ನಾರಿಮನ್ ಪಾಯಿಂಟ್ ಕಡೆಗೆ ದೋಣಿ ಚಲಾಯಿಸಿದ್ದರು.

2009: ಇಲಿಯೊಂದು ಕಣ್ಣಿಗೆ ಬಿದ್ದಾಕ್ಷಣ ನಿಂತಲ್ಲೇ ಕುಪ್ಪಳಿಸಿ, ಚೀರಾಡಿ, ದಿಗಿಲು ಬೀಳುವವರೇ ಹೆಚ್ಚು. ಆದರೆ, ಅಷ್ಟೇನೂ ದಿಗಿಲು ಬೀಳಬೇಡಿ; ಮನುಷ್ಯರಿಗೂ ಇಲಿಗಳಿಗೂ ಜೈವಿಕವಾಗಿ ಅಷ್ಟೇನೂ ವ್ಯತ್ಯಾಸವಿಲ್ಲ ಎಂದು ವಿಜ್ಞಾನಿಗಳು ಬಹಿರಂಗ ಪಡಿಸಿದರು. ಇಲಿಯ ವಂಶವಾಹಿ ನಕ್ಷೆ ರಹಸ್ಯವನ್ನು ಇದೀಗ ಸಂಪೂರ್ಣ ಬಿಡಿಸುವಲ್ಲಿ ಯಶಸ್ವಿಯಾಗಿರುವ ಬ್ರಿಟನ್, ಅಮೆರಿಕ, ಸ್ವೀಡನ್ ಸಂಶೋಧಕರ ತಂಡ ಈ ಮಾಹಿತಿ ಹೊರಗೆಡಹಿತು. 'ಮನುಷ್ಯರು ಮತ್ತು ಇಲಿಗಳ ವಂಶವಾಹಿ ನಕ್ಷೆಯಲ್ಲಿ ಶೇ 20ರಷ್ಟು ಮಾತ್ರ ವ್ಯತ್ಯಾಸವಿದ್ದರೆ, ಶೇ 80ರಷ್ಟು ಸಾಮ್ಯತೆ ಇದೆ. ಇದು ಖಚಿತವಾಗಿರುವುದರಿಂದ ಮನುಷ್ಯರನ್ನು ಕಾಡುವ ರೋಗಗಳಿಗೆ ಮದ್ದು ಕಂಡುಹಿಡಿದ ಸಂದರ್ಭದಲ್ಲಿ ಇಲಿಗಳ ಮೇಲೆ ಅದನ್ನು ಪ್ರಯೋಗಿಸಬಹುದಾದ ಸಾಧ್ಯತೆ ಇನ್ನಷ್ಟು ಹೆಚ್ಚಾಗಿದೆ' ಎಂದು ಸಂಶೋಧಕರು ವಿವರಿಸಿದರು. ಇಲಿಗಳ ವಂಶವಾಹಿ ನಕ್ಷೆ 90 ದಶಲಕ್ಷ ವರ್ಷಗಳ ವಿಕಾಸ ಅವಧಿಯಲ್ಲಿ ಸಾಕಷ್ಟು ಬದಲಾಗಿದ್ದು, ಕೆಲವು ತಳಿಗುಣಗಳು ಪ್ರಸ್ತುತ ಕ್ಷಿಪ್ರವಾಗಿ ವಿಕಾಸವಾಗುತ್ತಿವೆ ಎಂದೂ ಅವರು ಪ್ರತಿಪಾದಿಸಿದರು. ಸಸ್ತನಿ ವರ್ಗದ ಪ್ರಾಣಿಗಳ ಸಾಮಾನ್ಯ ವಂಶವಾಹಿ ಪತ್ತೆ ಹಚ್ಚಲು, ಇಲಿ- ಮನುಷ್ಯರ ಮಧ್ಯೆ ವ್ಯತ್ಯಾಸಕ್ಕೆ ಕಾರಣವಾದ ವಂಶವಾಹಿಗಳ ಜಾಡು ಹಿಡಿಯಲು ತಮ್ಮ ಅನ್ವೇಷಣೆ ರಹದಾರಿ ಒದಗಿಸುತ್ತದೆ ಎಂಬ ಆಶಾಭಾವದ ಮಿಂಚು ಕೂಡ ವಿಜ್ಞಾನಿಗಳಲ್ಲಿ ಮೂಡಿತು.

2009: ಅಮೆರಿಕದ ಫೋನಿಕ್ಸ್ನಲ್ಲಿ ಮನೆಯಲ್ಲಿ ಆಟವಾಡುತ್ತಿದ್ದ ವೇಳೆ ಆಕಸ್ಮಿಕವಾಗಿ ಟ್ರೆಡ್ ಮಿಲ್‌ನಲ್ಲಿ (ನಡಿಗೆ ಯಂತ್ರ) ಕತ್ತು ಸಿಕ್ಕಿಕೊಂಡು ಗಾಯಗೊಂಡು ಆಸ್ಪತ್ರೆಗೆ ದಾಖಲಾದ ಮಾಜಿ ಹೇವಿ ವೇಟ್‌ಲಿಫ್ಟಿಂಗ್ ಚಾಂಪಿಯನ್ ಮೈಕ್ ಟೈಸನ್ ಪುತ್ರಿ ಎಕ್ಸೋಡಸ್ ಟೈಸನ್ (4) ಈದಿನ ಕೊನೆಯುಸಿರೆಳೆದಳು ಎಂದು ಪೊಲೀಸರು ತಿಳಿಸಿದರು. 7 ವರ್ಷದ ಅಣ್ಣನೊಂದಿಗೆ ಆಟವಾಡುತ್ತಿದ್ದಾಗ ಟ್ರೆಡ್ ಮಿಲ್‌ನ ಕೇಬಲ್‌ಗೆ ಕತ್ತು ಸಿಲುಕಿಕೊಂಡು ತೊಂದರೆಗೊಳಗಾದ ಎಕ್ಸೋಡಸ್‌ಳನ್ನು ಎರಡು ದಿನ ಹಿಂದೆ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಅವಘಡ ಸಂಭವಿಸಿದಾಗ ಮೈಕ್ ಟೈಸನ್ ಮನೆಯಲ್ಲಿ ಇರಲಿಲ್ಲ.

2008: ಕರ್ನಾಟಕ ರಾಜ್ಯದಲ್ಲಿ ಹೊಸದಾಗಿ 13ನೇ ವಿಧಾನಸಭೆ ರಚನೆಯಾಗಿರುವ ಹಿನ್ನೆಲೆಯಲ್ಲಿ ರಾಷ್ಟ್ರಪತಿ ಆಡಳಿತವನ್ನು ಹಿಂದಕ್ಕೆ ಪಡೆಯುವಂತೆ ಕೋರಿ ರಾಜ್ಯಪಾಲ ರಾಮೇಶ್ವರ ಠಾಕೂರ್ ಅವರು ರಾಷ್ಟ್ರಪತಿಗಳಿಗೆ ಪತ್ರ ಬರೆದರು. ಒಟ್ಟು 224 ಮಂದಿ ಶಾಸಕರ ಆಯ್ಕೆ ಕುರಿತು ಚುನಾವಣಾ ಆಯೋಗ ರಾಜ್ಯಪತ್ರ (ಗೆಜೆಟ್) ಪ್ರಕಟಿಸಿ, ಅದರ ಪ್ರತಿಯೊಂದನ್ನು ರಾಜ್ಯಪಾಲರಿಗೆ ಸಲ್ಲಿಸಿತು.

2008: ಟೆಂಪೊ ಮತ್ತು ಲಾರಿ ನಡುವೆ ಡಿಕ್ಕಿ ಸಂಭವಿಸಿ, ಗುಬ್ಬಿ ಶಾಸಕರನ್ನು ಅಭಿನಂದಿಸಲು ಹೋಗಿದ್ದ ನಾಲ್ವರು ಜೆಡಿಎಸ್ ಕಾರ್ಯಕರ್ತರು ಮೃತರಾಗಿ, ಇತರ 14 ಮಂದಿ ತೀವ್ರವಾಗಿ ಗಾಯಗೊಂಡ ಘಟನೆ ತುಮಕೂರು ನಗರ ಸಮೀಪದ ಮಲ್ಲಸಂದ್ರದ ಹಾಲಿನ ಡೇರಿ ಬಳಿ ರಾಷ್ಟ್ರೀಯ ಹೆದ್ದಾರಿ 206ರಲ್ಲಿ ಸಂಭವಿಸಿತು.

2008: ಜರ್ಮನ್ ಪ್ರವಾಸದಲ್ಲಿದ್ದ ರಕ್ಷಣಾ ಸಚಿವ ಎ.ಕೆ. ಆಂಟನಿ ಅವರು ಐತಿಹಾಸಿಕ ಬರ್ಲಿನ್ ಯುದ್ಧ ಸಮಾಧಿ ಸ್ಥಳಕ್ಕೆ ಭೇಟಿ ನೀಡಿ, ಎರಡನೇ ಮಹಾ ಯುದ್ಧದಲ್ಲಿ ಮಡಿದ ಭಾರತೀಯ ಯೋಧರಿಗೆ ಗೌರವ ನಮನ ಸಲ್ಲಿಸಿದರು. ಎರಡನೇ ಮಹಾಯುದ್ಧದಲ್ಲಿ ಮಡಿದ 50 ಭಾರತೀಯರನ್ನು ಇಲ್ಲಿ ಸಮಾಧಿ ಮಾಡಲಾಗಿತ್ತು.

2008: ತಮಿಳು ಉಗ್ರಗಾಮಿಗಳ ನೆಲೆಗಳ ಮೇಲೆ ಶ್ರೀಲಂಕಾ ವಾಯುಪಡೆ ನಡೆಸಿದ ದಾಳಿಯಲ್ಲಿ 36 ಮಂದಿ ಬಂಡುಕೋರರು ಹತರಾದರು. ಸ್ಫೋಟಕ ತಯಾರಿಕೆಯಲ್ಲಿ ನಿಷ್ಣಾತನಾಗಿದ್ದ ಡೋರಾ ಎಂಬ ಕುಖ್ಯಾತ ಉಗ್ರ ಈ ದಾಳಿಯಲ್ಲಿ ಮೃತನಾದ ಎಂದು ವರದಿಗಳು ತಿಳಿಸಿದವು.

2008: ಪ್ರಸಿದ್ಧ ಪರ್ವತಾರೋಹಿ ಹಾಗೂ ರಾಜತಾಂತ್ರಿಕ ದಿವಂಗತ ಸರ್ ಎಡ್ಮಂಡ್ ಹಿಲರಿ ಅವರಿಗೆ ದೇಶದ ಅತ್ಯುನ್ನತ ಗೌರವಗಳಲ್ಲಿ ಒಂದಾದ ಪದ್ಮ ವಿಭೂಷಣ ಪ್ರಶಸ್ತಿಯನ್ನು ನೀಡಿ ಗೌರವಿಸಲಾಯಿತು. ದೇಶದ ಅತ್ಯುನ್ನತ ಪ್ರಶಸ್ತಿಯಾದ ಪದ್ಮ ವಿಭೂಷಣವನ್ನು ಮೆಲ್ಬೋರ್ನಿನಲ್ಲಿ ಆಯೋಜಿಸಲಾಗಿದ್ದ ಸಮಾರಂಭದಲ್ಲಿ ವಾಣಿಜ್ಯ ಸಚಿವ ಕಮಲ್ ನಾಥ್ ಅವರು ಸರ್ ಎಡ್ಮಂಡ್ ಹಿಲರಿ ಅವರ ಪತ್ನಿ ಜೂನ್ ಹಿಲರಿ ಅವರಿಗೆ ಪ್ರದಾನ ಮಾಡಿದರು.

2008: ಕಂಪ್ಯೂಟರ್ ಮುಂದೆ ಕುಳಿತು ಇ-ಮೇಲ್ ಮೂಲಕ ಬೆದರಿಕೆ ಹಾಕುವವರ ಪತ್ತೆಗೆ ಲಖನೌ ಮೂಲದ ಸಂಸ್ಥೆಯೊಂದು ಸಾಫ್ಟ್ವೇರ್ ಒಂದನ್ನು ತಯಾರಿಸಿತು. ಜೈಪುರದಲ್ಲಿ ಸಂಭವಿಸಿದ ಬಾಂಬ್ ಸ್ಫೋಟ ಪ್ರಕರಣದಲ್ಲಿ ಆರೋಪಿಗಳು ಇ-ಮೇಲ್ ತಂತ್ರಜ್ಞಾನವನ್ನು ಬಳಸಿದ್ದರ ಹಿನ್ನೆಲೆಯಲ್ಲಿ ಈ ಸಾಫ್ಟ್ವೇರನ್ನು ಅಭಿವೃದ್ಧಿಪಡಿಸಲಾಯಿತು ಎಂದು ಜಿಐ ಬಯೋಮೆಟ್ರಿಕ್ಸ್ನ ನಿರ್ದೇಶಕ ಅಮಿತ್ ಕೌಶಲ್ ತಿಳಿಸಿದರು. ಗ್ರಾಹಕ ನೊಂದಣಿ ಮತ್ತು ಗುರುತಿಸುವಿಕೆ (ಸಿಆರ್ಐಸಿಎಚ್-ಕ್ರಿಷ್) ಎಂಬ ಹೆಸರಿನ ಈ ಸಾಫ್ಟವೇರ್ ಬಳಸಿ ಕಂಪ್ಯೂಟರ್ ಮೂಲಕ ಇ-ಮೇಲ್ ಮಾಡುವವರ ಭಾವಚಿತ್ರ ಮತ್ತು ಬೆರಳಚ್ಚುಗಳನ್ನು ಪತ್ತೆ ಹಚ್ಚಬಹುದು. ಇದು ಆರೋಪಿಗಳ ಪತ್ತೆಗೆ ಬಹುಪಯೋಗಿಯಾಗಲಿದೆ ಎಂಬುದು ಅಮಿತ್ ಕೌಶಲ್ ಹೇಳಿಕೆ.

2008: ಪ್ರಸಿದ್ಧ ಶಬರಿಮಲೈ ದೇವಸ್ಥಾನದಲ್ಲಿ ಪ್ರತಿವರ್ಷ ಮಕರ ಸಂಕ್ರಾಂತಿಯಂದು ಭಕ್ತರಿಗೆ ಕಾಣಿಸಿಕೊಳ್ಳುವ `ಮಕರ ಜ್ಯೋತಿ' ಅತೀಂದ್ರಿಯ ಬೆಳಕಲ್ಲ. ಅದು ಮಾನವ ನಿರ್ಮಿತ ಎಂದು ಅಯ್ಯಪ್ಪ ಸ್ವಾಮಿ ದೇವಸ್ಥಾನದ ವಕ್ತಾರ ರಾಹುಲ್ ಈಶ್ವರ್ ತಿಳಿಸಿದರು. ಪೂರ್ವ ಪ್ರದೇಶದ ಪೊನ್ನಂಬಳಮೇಡು ಬೆಟ್ಟದ ನಡುವೆ ಬುಡಕಟ್ಟು ಜನರು ಈ ಬೆಳಕನ್ನು ಹಚ್ಚುತ್ತಾರೆ. ಇದು ಪವಿತ್ರ ಜ್ಯೋತಿ. ಇದನ್ನು ಮೊದಲು ಪರಶುರಾಮ ಆಚರಿಸಿದ ಎಂಬ ದಂತಕತೆಯಿದೆ. ಈ ಸಂದರ್ಭದಲ್ಲಿ ನಕ್ಷತ್ರ ಕಾಣಿಸಿಕೊಳ್ಳುತ್ತದೆ. ಆಗ ಬೆಟ್ಟದಲ್ಲಿನ ಬುಡಕಟ್ಟು ಜನರು ಜ್ಯೋತಿಯನ್ನು ಉರಿಸುತ್ತಾರೆ. ಆದರೆ ಯಾರು ಉರಿಸುತ್ತಾರೆ ಎಂಬುದು ತಮಗೆ ಗೊತ್ತಿಲ್ಲ ಎಂದು ಈಶ್ವರ ವಿವರಿಸಿದರು. ಶಬರಿಮಲೈ ದೇವಸ್ಥಾನವು ಅಸಂಖ್ಯ ಭಕ್ತರು ಭೇಟಿ ನೀಡುವ ಪ್ರಪಂಚದ ಐದು ಪ್ರಸಿದ್ಧ ದೇವಸ್ಥಾನಗಳಲ್ಲಿ ಒಂದು. ಇದು ವಿವಾದಗಳು ಹಾಗೂ ತಪ್ಪು ಮಾಹಿತಿಗಳಿಂದ ಮುಕ್ತವಾಗಿರಬೇಕೆಂಬ ಉದ್ದೇಶದಿಂದ ಈ ಸ್ಪಷ್ಟನೆ ನೀಡುತ್ತಿರುವುದಾಗಿ ಅವರು ಹೇಳಿದರು.

2008: ಬಾಲಿವುಡ್ ಮೆಘಾ ಸ್ಟಾರ್ ಅಮಿತಾಭ್ ಬಚ್ಚನ್ ಅವರು ಕುಟುಂಬದ ಸದಸ್ಯರೊಂದಿಗೆ ಪ್ರಭಾದೇವಿಯಲ್ಲಿ ಸಿದ್ಧಿವಿನಾಯಕ ದೇವಸ್ಥಾನಕ್ಕೆ ಭೇಟಿ ನೀಡಿ, ಪೂಜೆ ಸಲ್ಲಿಸಿದರು. ಅಮಿತಾಭ್ ಅವರು ಪುತ್ರ ಅಭಿಷೇಕ್ ಬಚ್ಚನ್ ಹಾಗೂ ಸೊಸೆ ಐಶ್ವರ್ಯ ರೈ ಅವರೊಂದಿಗೆ ಮುಂಬೈನ `ಜಲ್ಸಾ' ನಿವಾಸದಿಂದ ಬೆಳಿಗ್ಗೆ ಪ್ರಭಾದೇವಿಯಲ್ಲಿರುವ ಸಿದ್ಧಿವಿನಾಯಕ ದೇವಸ್ಥಾನಕ್ಕೆ ಕಾಲು ನಡಿಗೆಯಲ್ಲಿ ಆಗಮಿಸಿ, ಸೂರ್ಯ ಉದಯವಾಗುವ ಮುನ್ನ ದೇವಸ್ಥಾನದಲ್ಲಿ ನಡೆಯುವ ವಿಶೇಷ ಪೂಜೆ `ಕಾಕಡಾರತಿ'ಯಲ್ಲಿ ಪಾಲ್ಗೊಂಡರು. ಜಯಾಭಾದುರಿ ಅವರು ದೇವಸ್ಥಾನದಲ್ಲಿ ಅವರ ಜೊತೆಯಾದರು.

2008: ರಾಜ್ಯ ರಸ್ತೆ ಸಾರಿಗೆ ನಿಗಮ ಈ ವರ್ಷ ಉತ್ತಮ ಆದಾಯ ಗಳಿಸುವಲ್ಲಿ ದಾಪುಗಾಲು ಹಾಕಿತು. ಹಿಂದಿನ ದಿನ (ಮೇ 26) ಒಂದೇ ದಿನದಲ್ಲಿ 6.67ಕೋಟಿ ಆದಾಯಗಳಿಸಿ ಹೊಸ ದಾಖಲೆ ನಿರ್ಮಿಸಿತು. ಇದು ನಿಗಮದ ಇತಿಹಾಸದಲ್ಲಿಯೇ ಅತ್ಯಧಿಕ ಆದಾಯ ಗಳಿಸಿದ ದಿನವಾಯಿತು. ಇದೇ ಮೇ 19ರಂದು 5.95 ಕೋಟಿ ರೂ. ಹಾಗೂ ಮೇ 12ರಂದು 5.82 ಕೋಟಿ ರೂ. ಆದಾಯವನ್ನು ಗಳಿಸಿ ನಿಗಮ ದಾಖಲೆ ಮಾಡಿತ್ತು.

2007: ಮುಖ್ಯಮಂತ್ರಿ ಎಚ್. ಡಿ. ಕುಮಾರಸ್ವಾಮಿ ಮತ್ತು ಸಿಬ್ಬಂದಿಯನ್ನು ಹೊತ್ತ ಹೆಲಿಕಾಪ್ಟರ್ ಪ್ರತಿಕೂಲ ಹವಾಮಾನದ ಪರಿಣಾಮವಾಗಿ ಚಾಮರಾಜನಗರ ಜಿಲ್ಲೆಯ ಯಳಂದೂರು ಬಳಿಯ ಕೆರೆ ಅಂಗಳದಲ್ಲಿ ಇಳಿಯಿತು. ಆದರೆ ಮುಖ್ಯಮಂತ್ರಿ ಸೇರಿದಂತೆ ಎಲ್ಲ ಸಿಬ್ಬಂದಿ ಅಪಾಯದಿಂದ ಪಾರಾದರು.

2007: ಖ್ಯಾತ ಚಿತ್ರ ನಿರ್ದೇಶಕ ಮಣಿರತ್ನಮ್ ಅವರ ಸಹೋದರ ಚಿತ್ರ ನಿರ್ಮಾಪಕ ಜಿ. ಶ್ರೀನಿವಾಸನ್ ಅವರು ಮನಾಲಿಯ ಹಾಲನ್ನಿನಲ್ಲಿ ಟ್ರೆಕ್ಕಿಂಗ್ ನಿರತರಾಗಿದ್ದಾಗ 50 ಅಡಿ ಆಳದ ಕಮರಿಗೆ ಬಿದ್ದು ಅಸು ನೀಗಿದರು. ಶ್ರೀನಿವಾಸನ್ ಅವರು ಗುರು ಚಿತ್ರದ ನಿರ್ಮಾಪಕರಾಗಿದ್ದು ಪತ್ನಿ ಸಂಧ್ಯಾ ಲಕ್ಷ್ಮಣ್, ಪುತ್ರಿ ಶ್ರೇಯಾ ಸೇರಿದಂತೆ ಕುಟುಂಬ ಸದಸ್ಯರೊಂದಿಗೆ ಟ್ರೆಕ್ಕಿಂಗ್ ನಡೆಸುತ್ತಿದ್ದಾಗ ದುರಂತಕ್ಕೆ ತುತ್ತಾದರು.

2007: ಡಾ. ಬಾಬಾ ಸಾಹೇಬ್ ಅಂಬೇಡ್ಕರ್ ಅವರ 50ನೇ ಜನ್ಮದಿನೋತ್ಸವದ ಸಂದರ್ಭದಲ್ಲಿ ಮಹಾರಾಷ್ಟ್ರದ ಸುಮಾರು 50,000 ದಲಿತರು ಬೌದ್ಧ ಧರ್ಮವನ್ನು ಸ್ವೀಕರಿಸಿದರು. ಮಹಾಲಕ್ಷ್ಮಿ ರೇಸ್ ಕೋರ್ಸಿನಲ್ಲಿ ಈ ಕಾರ್ಯಕ್ರಮ ನಡೆಯಿತು.

2007: ದೇಶದ ಪ್ರಮುಖ ಕಂಪೆನಿ ರಿಲಯನ್ಸ್ ಇಂಡಸ್ಟ್ರೀಸ್ ಅಧ್ಯಕ್ಷ ಮುಖೇಶ ಅಂಬಾನಿ ಅವರು ಭಾರತದ ಏಕೈಕ ಒಂದು ಲಕ್ಷ ಕೋಟ್ಯಧಿಪತಿ ಎಂಬ ಹೆಗ್ಗಳಿಕೆಗೆ ಪಾತ್ರರಾದರು.

2006: ಮಲಯಾಳಂ ಚಿತ್ರರಂಗದ ಖ್ಯಾತ ನಟ ಒಡವಿಲ್ ಉನ್ನಿಕೃಷ್ಣನ್ (62) ನಿಧನರಾದರು.

2006: ಸುನಾಮಿ ಏಟಿನಿಂದ ಇನ್ನೂ ಚೇತರಿಸದ ಇಂಡೋನೇಷ್ಯಕ್ಕೆ ಈದಿನ ನಸುಕಿನಲ್ಲಿ ಇನ್ನೊಂದು ಆಘಾತ. ಭಾರಿ ಜನಸಾಂದ್ರತೆ ಇರುವ ಜಾವಾ ಪ್ರಾಂತ್ಯದಲ್ಲಿ ಶಕ್ತಿಶಾಲಿ ಭೂಕಂಪ ಸಂಭವಿಸಿ ಒಟ್ಟು 5000ಕ್ಕೂ ಹೆಚ್ಚು ಮಂದಿ ಮೃತರಾದರು. ಸಹಸ್ರಾರು ಮಂದಿ ಗಾಯಗೊಂಡರು. ರಿಕ್ಟರ್ ಮಾಪಕದಲ್ಲಿ ಭೂಕಂಪದ ತೀವ್ರತೆ 6.2ರಷ್ಟಿತ್ತು. ಆ ಬಳಿಕ ಭೂಮಿ ಸುಮಾರು 45 ಸಲ ಕಂಪಿಸಿತು.

1999: ಕರ್ನಾಟಕದ ಜೆ.ಎಚ್. ಪಟೇಲ್ ನೇತೃತ್ವದ ಸರ್ಕಾರ ರಾಜ್ಯದಲ್ಲಿ ಭೂ ದಾಖಲೆಗಳ ಗಣಕೀಕರಣ ಕಾರ್ಯಕ್ರಮ ಆರಂಭಿಸಿತು. ಕಂದಾಯ ಸಚಿವ ಸೋಮಶೇಖರ್ ಕಾಲದಲ್ಲಿ ಚಿತ್ರದುರ್ಗ ಹಾಗೂ ಗುಲ್ಬರ್ಗದಲ್ಲಿ ಪ್ರಾಯೋಗಿಕವಾಗಿ ಕೇಂದ್ರ ನೆರವಿನೊಂದಿಗೆ ಈ ಕಾರ್ಯಕ್ರಮ ಆರಂಭಗೊಂಡಿತು. ಸರ್ಕಾರ ಅವಧಿಗೆ ಮುನ್ನ ಬಿದ್ದ ಕಾರಣ ಅದು ಮುಂದುವರೆಯಲಿಲ್ಲ. 2001ರಲ್ಲಿ ಎಸ್.ಎಂ. ಕೃಷ್ಣ ನೇತೃತ್ವದ ಸರ್ಕಾರ `ಭೂಮಿ' ಹೆಸರಿನಲ್ಲಿ ಈ ಕಾರ್ಯಕ್ರಮವನ್ನು ಮತ್ತೆ ಅನುಷ್ಠಾನಗೊಳಿಸಿತು. ಪಾರದರ್ಶಕತೆಗೆ ಅವಕಾಶ ಮಾಡಿಕೊಟ್ಟ ಈ ಕಾರ್ಯಕ್ರಮ 2006ರಲ್ಲಿ ವಿಶ್ವಸಂಸ್ಥೆಯ `ಸಾರ್ವಜನಿಕ ಸೇವಾ ಪ್ರಶಸ್ತಿ'ಗೆ ಪಾತ್ರವಾಯಿತು.

1994: ಅಲೆಗ್ಸಾಂಡರ್ ಸೋಲ್ಜೆನಿತ್ಸಿನ್ 20 ವರ್ಷಗಳ ವಿದೇಶವಾಸದ ನಂತರ ರಷ್ಯಕ್ಕೆ ಹಿಂತಿರುಗಿದರು.

1964: ಭಾರತದ ಮೊದಲ ಪ್ರಧಾನಿ ಜವಾಹರಲಾಲ್ ನೆಹರೂ ನವದೆಹಲಿಯಲ್ಲಿ ತಮ್ಮ 74ನೇ ವಯಸ್ಸಿನಲ್ಲಿ ನಿಧನರಾದರು.

1937: ಸ್ಯಾನ್ ಫ್ರಾನ್ಸಿಸ್ಕೊ ಮತ್ತು ಕ್ಯಾಲಿಫೋರ್ನಿಯಾದ ಮರೀನ್ ಕೌಂಟಿಯನ್ನು ಸಂಪರ್ಕಿಸಲು ಹೊಸದಾಗಿ ನಿರ್ಮಿಸಲಾದ ಗೋಲ್ಡನ್ ಗೇಟ್ ಬ್ರಿಜ್ಜನ್ನು ಸಾರ್ವಜನಿಕರಿಗೆ ಸಂಚಾರಕ್ಕಾಗಿ ತೆರೆಯಲಾಯಿತು. ಮೊದಲ ದಿನವೇ 2 ಲಕ್ಷ ಮಂದಿ ಸೇತುವೆಯನ್ನು ದಾಟಿದರು. ಈ ಸೇತುವೆಯನ್ನು ಪೂರ್ಣಗೊಳಿಸಲು 4 ವರ್ಷ, 4 ತಿಂಗಳು, 22 ದಿನಗಳು ಬೇಕಾದವು.

1914: ಅಗ್ರಗಣ್ಯ ಪಿಟೀಲು ವಿದ್ವಾಂಸರಲ್ಲಿ ಒಬ್ಬರಾದ ಆರ್. ಆರ್. ಕೇಶವ ಮೂರ್ತಿ (27-5-1914ರಿಂದ 23-10-2006ರ ವರೆಗೆ) ಅವರು ರಾಮಸ್ವಾಮಯ್ಯ- ಸುಬ್ಬಮ್ಮ ದಂಪತಿಯ ಮಗನಾಗಿ ಸಂಗೀತ ಕಾಶಿ ಎನಿಸಿದ್ದ ರುದ್ರಪಟ್ಟಣದಲ್ಲಿ ಜನಿಸಿದರು.

1902: ಕಲಾವಿದ ಹಾರಾಡಿ ರಾಮ ಗಾಣಿಗ ಜನನ.

1897: ಸಾಹಿತ್ಯ ಮತ್ತು ರಂಗಭೂಮಿ ಎರಡರಲ್ಲೂ ವಿಶಿಷ್ಟ ಸೇವೆ ಸಲ್ಲಿಸಿದ ಬಿ. ಪುಟ್ಟಸ್ವಾಮಯ್ಯ (27-5-1897ರಿಂದ 25-1-1984) ಅವರು ಬಸಪ್ಪ - ಮಲ್ಲಮ್ಮ ದಂಪತಿಯ ಪುತ್ರನಾಗಿ ಬೆಂಗಳೂರಿನಲ್ಲಿ ಜನಿಸಿದರು. ಹಲವಾರು ಪತ್ರಿಕೆಗಳ ಸಂಪಾದಕರಾಗಿಯೂ ಸೇವೆ ಸಲ್ಲಿಸಿದ ಇವರು ಕಥೆ, ಕಾದಂಬರಿ ನಾಟಕಗಳನ್ನು ಬರೆದಿದ್ದು, ಇವರ ಜನಪ್ರಿಯ `ಮಲ್ಲಮ್ಮನ ಪವಾಡ' ಕಾದಂಬರಿ ಚಲನಚಿತ್ರವಾಗಿತ್ತು.

1703: ತ್ಸಾರ್ ದೊರೆ ಪೀಟರ್ ದಿ ಗ್ರೇಟ್ ರಷ್ಯದ ನೂತನ ರಾಜಧಾನಿ ಸೇಂಟ್ ಪೀಟರ್ಸ್ ಬರ್ಗನ್ನು ನಿರ್ಮಿಸಿದ. 1914ರಲ್ಲಿ ಅದನ್ನು ಪೆಟ್ರೋಗ್ರಾಡ್ ಎಂದು ಹೆಸರಿಸಲಾಯಿತು. 1924ರಲ್ಲಿ ಅದಕ್ಕೆ `ಲೆನಿನ್ ಗ್ರಾಡ್' ಎಂದು ಸೋವಿಯತ್ ನಾಯಕ ವ್ಲಾಡಿಮೀರ್ ಲೆನಿನ್ ಹೆಸರನ್ನು ಇಡಲಾಯಿತು. 1991ರಲ್ಲಿ ಮತ್ತೆ ಅದಕ್ಕೆ ಮೂಲ ಹೆಸರನ್ನೇ (ಸೇಂಟ್ ಪೀಟರ್ಸ್ ಬರ್ಗ್) ಇಡಲಾಯಿತು.

1679: ಇಂಗ್ಲೆಂಡಿನ ಸಂಸತ್ತು ಸಾರ್ವಜನಿಕರಿಗೆ ಅನಗತ್ಯ ಬಂಧನದಿಂದ ರಕ್ಷಣೆ ಒದಗಿಸುವ ಸಲುವಾಗಿ ಹೇಬಿಯಸ್ ಕಾರ್ಪಸ್ ಕಾನೂನನ್ನು ಅಂಗೀಕರಿಸಿತು. ಈ ಕಾನೂನಿನ ಮುಖ್ಯಾಂಶಗಳನ್ನು ನಂತರ ಅಮೆರಿಕದ ಸಂವಿಧಾನದಲ್ಲಿ ಸೇರ್ಪಡೆ ಮಾಡಲಾಯಿತು.

Wednesday, May 26, 2010

ಇಂದಿನ ಇತಿಹಾಸ History Today ಮೇ 26


ಇಂದಿನ ಇತಿಹಾಸ

ಮೇ 26

ರಷ್ಯದ ಸೆವೆರ್ ಸ್ಟಾಲ್ ಉಕ್ಕು ಕಂಪೆನಿಯನ್ನು ಖರೀದಿಸಲು ಆರ್ಸೆಲರ್ ಸಂಸ್ಥೆ ನಿರ್ಧರಿಸಿತು. ಇದರಿಂದ ಆರ್ಸೆಲರ್ ಸಂಸ್ಥೆಯನ್ನು ಖರೀದಿಸುವ ಮಿತ್ತಲ್ ಉಕ್ಕು ಸಂಸ್ಥೆಯ ಯತ್ನಕ್ಕೆ ಅಡ್ಡಗಾಲು ಬಿದ್ದಂತಾಯಿತು.

2009: ಲೋಕಸಭಾ ಚುನಾವಣೆಯ ಬಿಡುವಿನ ಬಳಿಕ ನಡೆದ ಮೊದಲ ಕಾರ್ಯಾಚರಣೆಯಲ್ಲಿ ಲೋಕಾಯುಕ್ತ ಪೊಲೀಸರು ಏಳು ಭ್ರಷ್ಟ ಅಧಿಕಾರಿಗಳನ್ನು ಬಲೆಗೆ ಕೆಡವಿದರು. ರಾಜ್ಯದ ವಿವಿಧೆಡೆ ಏಕಕಾಲಕ್ಕೆ ನಡೆದ ದಾಳಿಯಲ್ಲಿ ಏಳು ಕೋಟಿ ರೂಪಾಯಿಗೂ ಹೆಚ್ಚು ಮೊತ್ತದ ಅಕ್ರಮ ಆಸ್ತಿಯನ್ನು ಪತ್ತೆಹಚ್ಚಿದರು. ಬೀದರಿನ ಅಬಕಾರಿ ಉಪ ಆಯುಕ್ತ ಆಸಾದ್ ಅಲಿ, ಹಿರಿಯ ಮೋಟಾರು ವಾಹನ ನಿರೀಕ್ಷಕ ಕೆ.ಎಲ್.ನಾಗರಾಜ್, ಮೈಸೂರಿನ ಸಹಾಯಕ ಕಾರ್ಮಿಕ ಆಯುಕ್ತ ಶೇಖ್ ಸಮೀವುಲ್ಲಾ ಷರೀಫ್, ಕ್ಷೇತ್ರ ಶಿಕ್ಷಣಾಧಿಕಾರಿ ಟಿ.ಬಸವರಾಜು, ಕಿತ್ತೂರಿನ ಪೊಲೀಸ್ ಇನ್ಸ್‌ಪೆಕ್ಟರ್ ಬಸವರೆಡ್ಡಿ ವಿ. ಲಿಂಗದಾಳ, ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರದ ಪ್ರಥಮ ದರ್ಜೆ ಸಹಾಯಕ ಶಿವರಾಂ ಮತ್ತು ಗುಲ್ಬರ್ಗದ ಜಿಲ್ಲಾ ಪಂಚಾಯತ್ ಸಹಾಯಕ ಕಾರ್ಯನಿರ್ವಾಹಕ ಎಂಜಿನಿಯರ್ ಶಿವಾಜಿ ಕಾವಲೆ ಅವರು ಆದಾಯಕ್ಕಿಂತ ಹೆಚ್ಚು ಆಸ್ತಿ ಸಂಪಾದಿಸಿರುವುದು ಬೆಳಕಿಗೆ ಬಂದಿತು.

2009: ಶರಣ ಸಾಹಿತ್ಯದ ವಿಷಯವಾಗಿ ಅಪಾರ ಕೆಲಸ ಮಾಡಿದ ಹಿರಿಯ ಸಾಹಿತಿ ಹಾಗೂ ಸಂಶೋಧಕ ಡಾ.ವೀರಣ್ಣ ರಾಜೂರ ಅವರಿಗೆ ಹುಬ್ಬಳ್ಳಿಯ ಮೂರುಸಾವಿರ ಮಠದಲ್ಲಿ ಏರ್ಪಡಿಸಲಾಗಿದ್ದ ಕಾರ್ಯಕ್ರಮದಲ್ಲಿ 'ಡಾ.ಮೂಜಗಂ' ಸಾಹಿತ್ಯ ಪ್ರಶಸ್ತಿ ಪ್ರದಾನ ಮಾಡಲಾಯಿತು. ಮೂರುಸಾವಿರ ಮಠದ ಹಿಂದಿನ ಪೀಠಾಧಿಪತಿ ಡಾ.ಗಂಗಾಧರ ರಾಜಯೋಗೀಂದ್ರ ಸ್ವಾಮೀಜಿ ಅವರ 6ನೇ ಪುಣ್ಯಸ್ಮರಣೆ ಅಂಗವಾಗಿ ಹಮ್ಮಿಕೊಂಡಿದ್ದ ಸಮಾರಂಭದಲ್ಲಿ ಗುರುಸಿದ್ಧ ರಾಜಯೋಗೀಂದ್ರ ಸ್ವಾಮೀಜಿ ಪ್ರಶಸ್ತಿ ಪ್ರದಾನ ಮಾಡಿದರು.

2009: ಪಶ್ಚಿಮ ಬಂಗಾಳದಲ್ಲಿ ಎದ್ದ 'ಐಲಾ' ಚಂಡಮಾರುತದಿಂದ ಸುಮಾರು 67ಕ್ಕೂ ಹೆಚ್ಚು ಜನ ಸಾವನ್ನಪ್ಪಿದರು.

2009: ಪ್ರಸಾರ ಭಾರತಿಯ ಅಧ್ಯಕ್ಷ ಅರುಣ್ ಭಟ್ನಾಗರ್ ಅವರು ಮಂಡಳಿಯ ಆಡಳಿತ ವೈಖರಿಯಿಂದ ಅಸಮಾಧಾನಗೊಂಡು ತಮ್ಮ ಹುದ್ದೆಗೆ ರಾಜೀನಾಮೆ ಸಲ್ಲಿಸಿದರು.

2009: ಪಶ್ಚಿಮ ಬಂಗಾಳದ ಪರ್ವತಮಯ ಡಾರ್ಜಿಲಿಂಗ್ ಜಿಲ್ಲೆಯ ಹಲವೆಡೆ ಸಂಭವಿಸಿದ ಭೂಕುಸಿತದಲ್ಲಿ 23 ಮಂದಿ ಮೃತರಾಗಿ 6 ಮಂದಿ ನಾಪತ್ತೆಯಾದರು.

2009: ಅಣ್ವಸ್ತ್ರ ಪರೀಕ್ಷೆ ನಡೆಸಿ ವಿಶ್ವದಾದ್ಯಂತ ಕಳವಳ ಹುಟ್ಟಿಸಿದ ಬೆನ್ನಲ್ಲಿಯೇ ಉತ್ತರ ಕೊರಿಯಾ, ತನ್ನ ಪೂರ್ವ ತೀರದಿಂದ ಮತ್ತೆರಡು ಕ್ಷಿಪಣಿಗಳನ್ನು ಯಶಸ್ವಿಯಾಗಿ ಉಡಾವಣೆ ಮಾಡಿತು. ಭೂಮಿಯಿಂದ ನೀರಿನೊಳಗೆ ಹಾಗೂ ಆಕಾಶಕ್ಕೆ ನೆಗೆಯುವ 130 ಕಿ.ಮೀ ದೂರ ಸಾಮರ್ಥ್ಯದ ಎರಡು 'ಸಮೀಪ-ದೂರ' ಕ್ಷಿಪಣಿಗಳನ್ನು ಉತ್ತರ ಕೊರಿಯಾ ಉಡಾವಣೆ ಮಾಡಿದೆ ಎಂದು ಯೋನಾಪ್ ಸುದ್ದಿ ಸಂಸ್ಥೆ ವರದಿ ಮಾಡಿತು.

2009: ಶ್ರೀಲಂಕಾದಲ್ಲಿ ನಡೆದ ಯುದ್ಧದಲ್ಲಿ ಎಲ್‌ಟಿಟಿಇ ಮುಖ್ಯಸ್ಥ ವಿ.ಪ್ರಭಾಕರನ್‌ನ ಪತ್ನಿ, ಪುತ್ರಿ ಮತ್ತು ಸಂಘಟನೆಯ ಉನ್ನತ ಕಮಾಂಡರ್ ಪೊಟ್ಟು ಅಮ್ಮಾನ್ ಕೂಡ ಹತರಾಗಿದ್ದಾರೆ ಎಂಬುದನ್ನು ಪ್ರಭಾಕರನ್ ಮಾಜಿ ಬಂಟ ಹಾಗೂ ಸರ್ಕಾರದಲ್ಲಿ ಫೆಡರಲ್ ಸಚಿವರಾದ ಕರುಣಾ ಅಮ್ಮನ್ ಖಚಿತಪಡಿಸಿದರು. ಎಲ್‌ಟಿಟಿಇ ಅಂತಾರಾಷ್ಟ್ರೀಯ ಸಂಪರ್ಕ ವ್ಯವಹಾರಗಳ ಮುಖ್ಯಸ್ಥ ಪದ್ಮನಾಭನ್ ಇದನ್ನು ದೃಢಪಡಿಸಿದ್ದಾರೆ ಎಂದು 2004ರವರೆಗೆ ಎಲ್‌ಟಿಟಿಇ ಪೂರ್ವ ಪ್ರಾಂತ್ಯದ ಕಮಾಂಡರ್ ಆಗಿದ್ದು ನಂತರ ಸಂಘಟನೆಯಿಂದ ಸಿಡಿದುಬಂದು ರಾಜಕೀಯ ವಾಹಿನಿ ಪ್ರವೇಶಿಸಿದ ಕರ್ನಲ್ ಕರುಣಾ ಹೇಳಿದರು.

2009: ಪಾಕಿಸ್ಥಾನದ ಮಾಜಿ ಪ್ರಧಾನಿ, ಪಿಎಂಎಲ್-ಎನ್ ಪಕ್ಷದ ಮುಖಂಡ ನವಾಜ್ ಷರೀಫ್ ಹಾಗೂ ಅವರ ಸೋದರ ಶಹಬಾಜ್ ಷರೀಫ್, ಚುನಾವಣೆಗೆ ಸ್ಪರ್ಧಿಸಲು ಅರ್ಹರು ಎಂದು ಸುಪ್ರೀಂಕೋರ್ಟ್ ತೀರ್ಪು ನೀಡಿತು. ನ್ಯಾಯಮೂರ್ತಿ ತಸ್ಸಕ್ ಹುಸೇನ್ ಗಿಲಾನಿ ನೇತೃತ್ವದ ಐವರು ಸದಸ್ಯರ ಪೀಠವು, ಈ ಸಂಬಂಧ ಲಾಹೋರ್ ಹೈಕೋರ್ಟ್ ನೀಡಿದ್ದ ತೀರ್ಪನ್ನು ತಳ್ಳಿಹಾಕಿತು. ಪ್ರತ್ಯೇಕ ಅಪರಾಧ ಪ್ರಕರಣಗಳಲ್ಲಿ ಶಿಕ್ಷೆಗೊಳಪಟ್ಟ ಷರೀಫ್ ಸೋದರರು ಚುನಾವಣಾ ರಾಜಕೀಯಕ್ಕೆ ಅನರ್ಹರು ಎಂದು ಹೈಕೋರ್ಟ್ ತೀರ್ಪು ನೀಡಿತ್ತು. ಇದನ್ನು ಪ್ರಶ್ನಿಸಿ ನವಾಜ್ ಹಾಗೂ ಶಹಬಾಜ್ ಸುಪ್ರೀಂಕೋರ್ಟ್‌ಗೆ ಮೇಲ್ಮನವಿ ಸಲ್ಲಿಸಿದ್ದರು. ಈದಿನ ಮನವಿಯ ವಿಚಾರಣೆ ನಡೆಸಿದ ಸುಪ್ರೀಂಕೋರ್ಟ್, ಷರೀಫ್ ಸೋದರರಿಗೆ ಚುನಾವಣೆಗೆ ಸ್ಪರ್ಧಿಸಲು ಅನುಮತಿ ನೀಡಿತು.

2008: ಹಿಂದೂಗಳ ಪವಿತ್ರ ನಗರ ವಾರಣಾಸಿಯಲ್ಲಿ ಸದಾ ಮೈತುಂಬಿಕೊಂಡು ಜುಳುಜುಳು ಎಂದು ಹರಿಯುತ್ತಿದ್ದ ಗಂಗಾ ನದಿ ಈಗ ಬಡಕಲಾಗಿರುವುದು ಬೆಳಕಿಗೆ ಬಂತು. ಈ ವರ್ಷದ ಬೇಸಿಗೆಯಲ್ಲಿ ಹಿಂದೆಂದೂ ಕಡಿಮೆಯಾಗದಷ್ಟು ನೀರು ಕಡಿಮೆಯಾಗಿ ಮರಳ ದಂಡೆಗಳು ಎದ್ದು ಕಾಣಿಸತೊಡಗಿದವು. ನದಿಯಲ್ಲಿ ನೀರು ಕಡಿಮೆಯಾಗಲು ಅನೇಕ ಅಂಶಗಳು ಕಾರಣ ಎಂಬುದು ತಜ್ಞರು ಹಾಗೂ ಸಂಬಂಧಪಟ್ಟ ಇಲಾಖೆಯ ಅಧಿಕಾರಿಗಳು ಅಭಿಪ್ರಾಯ. ಕಳೆದ ಎರಡು ದಶಕಗಳಲ್ಲಿ ವಾರಣಾಸಿಯಲ್ಲಿ ಗಂಗಾನದಿಯ ನೀರಿನ ಪ್ರಮಾಣ 1.5 ಮೀಟರಿನಿಂದ 2 ಮೀಟರಿನವರೆಗೆ ಕಡಿಮೆಯಾಗಿದೆ ಎಂಬುದು ಬನಾರಸ್ ಹಿಂದೂ ವಿಶ್ವವಿದ್ಯಾಲಯದ ಗಂಗಾ ಸಂಶೋಧನಾ ಪ್ರಯೋಗಾಲಯದ ಪ್ರೊ. ಉದಯಕಾಂತ್ ಚೌಧರಿ ಹೇಳಿಕೆ. 1988ರಲ್ಲಿ 340ರಿಂದ 355 ಮೀಟರ್ ಅಗಲದಲ್ಲಿ ಹರಿಯುತ್ತಿದ್ದ ಗಂಗೆ ಈ ವರ್ಷ 250 ಮೀಟರಿಗೆ ಇಳಿದಳು. ಇದೊಂದು ಆತಂಕಕಾರಿ ಬೆಳವಣಿಗೆಯಾದ್ದರಿಂದ ಸಾರ್ವಜನಿಕರು ಮತ್ತು ಸರ್ಕಾರ ಪವಿತ್ರವಾದ ಗಂಗಾ ನದಿಯನ್ನು ಉಳಿಸಿಕೊಳ್ಳಲು ಶೀಘ್ರ ಕ್ರಮ ತೆಗೆದುಕೊಳ್ಳಬೇಕು ಎಂಬುದು ಚೌಧರಿ ಸಲಹೆ. 1988ರಲ್ಲಿ ವಾರಣಾಸಿಯಲ್ಲಿ ಗಂಗಾ ನದಿಯಲ್ಲಿ ಎಂಟು ಸಾವಿರದಿಂದ ಒಂಭತ್ತು ಸಾವಿರ ಕ್ಯೂಸೆಕ್ ನೀರು ಹರಿಯುತ್ತಿತ್ತು. ಈಗ ಈ ಪ್ರಮಾಣ ಐದರಿಂದ ಆರು ಸಾವಿರಕ್ಕೆ ಇಳಿದಿದೆ. ಒಳಚರಂಡಿ ಮತ್ತು ಕೈಗಾರಿಕಾ ತ್ಯಾಜ್ಯಗಳು ಗಂಗಾ ನದಿಗೆ ಸೇರುತ್ತಿರುವುದರಿಂದ ನೀರಿನ ಮಾಲಿನ್ಯ ಪ್ರಮಾಣವೂ ಹೆಚ್ಚಳವಾಗಿದೆ. ತೆಹರಿ ಅಣೆಕಟ್ಟು ಸೇರಿದಂತೆ ಅನೇಕ ಅಣೆಕಟ್ಟುಗಳ ನಿರ್ಮಾಣ, ನೀರಾವರಿ ಕಾಲುವೆಗಳ ನಿರ್ಮಾಣದಿಂದಾಗಿ ಗಂಗಾ ನದಿಯಲ್ಲಿ ನೀರಿನ ಪ್ರಮಾಣ ಕಡಿಮೆಯಾಗಿದೆ ಹಾಗೂ ವಾರಣಾಸಿಯಲ್ಲಿ ಅಂತರ್ಜಲ ಮಟ್ಟವೂ ಗಣನೀಯವಾಗಿ ಕುಸಿದಿದೆ ಎಂಬುದು ತಜ್ಞರ ಅಭಿಪ್ರಾಯ.

2008: ಪಕ್ಷೇತರ ಶಾಸಕರ ಒಲವು ಸಂಪಾದಿಸುವ ಪ್ರಯತ್ನದಲ್ಲಿ ಸಫಲವಾದ ಭಾರತೀಯ ಜನತಾ ಪಕ್ಷವು, ನೂತನ ಸರ್ಕಾರ ರಚನೆಗೆ ಈದಿನ ರಾತ್ರಿ ರಾಜ್ಯಪಾಲರ ಮುಂದೆ ಹಕ್ಕು ಮಂಡಿಸಿತು. ಮುಖ್ಯಮಂತ್ರಿ ಅಭ್ಯರ್ಥಿ ಬಿ.ಎಸ್.ಯಡಿಯೂರಪ್ಪ, ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿಗಳಾದ ಅರುಣ್ ಜೇಟ್ಲಿ, ಅನಂತಕುಮಾರ್, ಜಗದೀಶ್ ಶೆಟ್ಟರ್, ಶ್ರೀರಾಮುಲು ಮೊದಲಾದವರು ರಾಜ್ಯಪಾಲ ರಾಮೇಶ್ವರ ಠಾಕೂರ್ ಅವರನ್ನು ಭೇಟಿ ಮಾಡಿ 115 ಶಾಸಕರ ಪಟ್ಟಿಯನ್ನು ಸಲ್ಲಿಸಿ, ಸರ್ಕಾರ ರಚಿಸಲು ಆಹ್ವಾನ ನೀಡುವಂತೆ ಮನವಿ ಮಾಡಿದರು. ಪಕ್ಷೇತರ ಶಾಸಕರಾದ ನರೇಂದ್ರಸ್ವಾಮಿ, ಶಿವರಾಜ್ ತಂಗಡಗಿ, ಗೂಳಿಹಟ್ಟಿ ಶೇಖರ್, ವೆಂಕಟರವಣಪ್ಪ, ಡಿ.ಸುಧಾಕರ್ ಅವರು ರಾಜ್ಯಪಾಲರ ಮುಂದೆ ಹಾಜರಾಗಿ ಬಿಜೆಪಿಗೆ ಬೆಂಬಲ ಘೋಷಿಸಿದರು. ಇದರೊಂದಿಗೆ ಬಹುಮತಕ್ಕೆ ಬೇಕಾದ ಸಂಖ್ಯೆಗಿಂತ (113) ಎರಡು ಹೆಚ್ಚು ಸ್ಥಾನಗಳನ್ನು ಬಿಜೆಪಿ ಹೊಂದಿದಂತಾಯಿತು.

2008: ಅಮೆರಿಕದ ಪುಟ್ಟ ಬಾಹ್ಯಾಕಾಶ ನೌಕೆ `ಫೀನಿಕ್ಸ್' ಮಂಗಳ ಗ್ರಹವನ್ನು ತಲುಪಿ, ಉತ್ತರ ಧ್ರುವದಲ್ಲಿ ಇಳಿದ ಎರಡೇ ತಾಸುಗಳಲ್ಲಿ ಅಲ್ಲಿನ ಮಂಜುಗಟ್ಟಿದ ಪರಿಸರದ ಚಿತ್ರಗಳನ್ನು ಕಳುಹಿಸಿತು. ಮೂರು ತಿಂಗಳ ಕಾಲ ಮಂಗಳ ಗ್ರಹದಲ್ಲಿ ಇರಲಿರುವ `ಫೀನಿಕ್ಸ್' ನೌಕೆ, ಅಲ್ಲಿ ನೀರಿನ ಲಭ್ಯತೆ ಮತ್ತು ಜೀವೋತ್ಪತಿಗೆ ಕಾರಣವಾಗುವ ಅಂಶಗಳ ಬಗ್ಗೆ ಹುಡುಕಾಟ ನಡೆಸುವುದು. ಕಳೆದ 10 ತಿಂಗಳ ಅವಧಿಯಲ್ಲಿ 423 ದಶಲಕ್ಷ ಮೈಲು ದೂರ ಕ್ರಮಿಸಿದ ಬಳಿಕ ಈ ನೌಕೆ ಹಿಂದಿನ ದಿನ ರಾತ್ರಿ ಮಂಗಳ ಗ್ರಹವನ್ನು ತಲುಪಿದ್ದು ಅದು ಈಗ ಕಳುಹಿಸಿದ ಚಿತ್ರಗಳಿಂದ ದೃಢಪಟ್ಟದ್ದು ನಾಸಾ ವಿಜ್ಞಾನಿಗಳಿಗೆ ಸಂತಸ ತಂದಿತು. ಸೌರ ಶಕ್ತಿಯನ್ನು ಬಳಸಿ ಮಂಗಳನ ಅಂಗಳಕ್ಕೆ ಇಳಿಯುವ ನೌಕೆಯನ್ನು ನಾಲ್ಕು ವರ್ಷಗಳಲ್ಲಿ ಅಭಿವೃದ್ಧಿಪಡಿಸಿದ ಭಾರತ ಮೂಲದ ಎಂಜಿನಿಯರ್ ಪ್ರಸನ್ನ ದೇಸಾಯಿ, `ಎಲ್ಲವೂ ಅದ್ಭುತವಾಗಿ ನಡೆಯುತ್ತಿದೆ` ಎಂದರು. ಮಂಗಳನ ಅಂಗಳದಲ್ಲಿ ನೌಕೆಯನ್ನು ಇಳಿಸುವುದು ಸವಾಲಿನ ಕಾರ್ಯವಾಗಿತ್ತು. ಗಂಟೆಗೆ 12 ಸಾವಿರ ಮೈಲು ವೇಗದಲ್ಲಿ ಸಂಚರಿಸುತ್ತಿದ್ದ `ಫೀನಿಕ್ಸ್'ನ್ನು ಮೆತ್ತನೆಯ ಹಾಸಿಗೆಯ ಮೇಲೆ ಬೀಳಿಸುವ ಬದಲು ಮೂರು ಕಾಲುಗಳ ಮೇಲೆಯೇ ನಿಲ್ಲಿಸುವ ತಂತ್ರ ಹೆಣೆಯಲಾಗಿತ್ತು. ಮಂಗಳನ ವಾತಾವರಣವನ್ನು ನೌಕೆ ಪ್ರವೇಶಿಸುತ್ತಿದ್ದಂತೆಯೇ ನೌಕೆಯ ಪ್ಯಾರಾಚೂಟ್ ಬಿಚ್ಚಿಕೊಂಡು ಅದರ ವೇಗವನ್ನು ತಗ್ಗಿಸಿತು. ನೌಕೆಯ ಉಷ್ಣ ತಡೆ ಗುರಾಣಿಯೂ ಚಾಚಿಕೊಂಡಿತು. ಜೆಟ್ ರಾಕೆಟ್ ಎಂಜಿನ್ ಉರಿಸಿ ವೇಗವನ್ನು ಕಡಿತಗೊಳಿಸಲಾಯಿತು. ಕೊನೆಗೆ ಮಂಗಳನ ಅಂಗಳಕ್ಕೆ ಇಳಿಯುವ ಹೊತ್ತಿಗೆ `ಫೀನಿಕ್ಸ್'ನ ವೇಗ ಗಂಟೆಗೆ 5 ಮೈಲುಗಳಿಗೆ ಇಳಿಯಿತು. ನೌಕೆ ನೆಲದಲ್ಲಿ ತಳ ಊರುತ್ತಿದ್ದಂತೆಯೇ ದೂಳು ಎದ್ದಿತು. ವಿಜ್ಞಾನಿಗಳ ಪಾಲಿಗೆ ಇದು `ಏಳು ನಿಮಿಷಗಳ ಆತಂಕದ ಕ್ಷಣ'ವಾಗಿತ್ತು. ದೂಳು ಚದುರಿದ ತತ್ ಕ್ಷಣ ನೌಕೆ ತನ್ನ ಸೌರ ಫಲಕವನ್ನು ಬಿಚ್ಚಿಕೊಂಡಿತು. ಕಳೆದ ವರ್ಷ ಆಗಸ್ಟ್ 4ರಂದು `ಫೀನಿಕ್ಸ್'ನ್ನು ಉಡಾಯಿಸಲಾಗಿತ್ತು. 420 ದಶಲಕ್ಷ ಡಾಲರ್ ವೆಚ್ಚದಲ್ಲಿ ಲಾಕ್ ಹೀಡ್ ಮಾರ್ಟಿನ್ ಕಂಪೆನಿಯು ಈ ನೌಕೆಯನ್ನು ನಿರ್ಮಿಸಿತ್ತು. ಮಂಗಳನ ಅಂಗಳಕ್ಕೆ ಇಳಿದು ಸಂಶೋಧನೆ ನಡೆಸುವ ಈ ಮೊದಲಿನ ಹಲವು ಯತ್ನಗಳು ವಿಫಲವಾಗಿದ್ದವು.

2008: ಮಣಿಪುರದ ಕೇಂದ್ರ ಸ್ಥಳ ರಾಜಧಾನಿ ಇಂಫಾಲದ ವೈದ್ಯಕೀಯ ಕಾಲೇಜು ಆಸ್ಪತ್ರೆಯಲ್ಲಿ(ರಿಮ್ಷ್) ಉಗ್ರರು ಶಕ್ತಿಶಾಲಿ ಬಾಂಬ್ ಸ್ಫೋಟಿಸಿದರು.

2008: 66 ಜನರನ್ನು ಬಲಿ ತೆಗೆದುಕೊಂಡಿದ್ದ ಜೈಪುರ ಸರಣಿ ಬಾಂಬ್ ಸ್ಫೋಟ ಪ್ರಕರಣಕ್ಕೆ ಸಂಬಂಧ ಪಟ್ಟಂತೆ ಭರತ್ ಪುರ ಜಾಮಾ ಮಸೀದಿಯ ಇಮಾಮ್ ಮೊಹಮ್ಮದ್ ಇಲಯಾಸ್ ಅವರನ್ನು ವಿಚಾರಣೆಗೆ ಒಳಪಡಿಸಲಾಯಿತು.

2008: ವಿವಿಧ ರಾಜ್ಯಗಳಲ್ಲಿ ಲೋಕಸಭೆ ಹಾಗೂ ವಿಧಾನಸಭೆಗೆ ನಡೆದ ಉಪಚುನಾವಣೆಯಲ್ಲಿ ಬಹುತೇಕ ಆ ಕ್ಷೇತ್ರವನ್ನು ಪ್ರತಿನಿಧಿಸಿದ್ದ ರಾಜಕೀಯ ಪಕ್ಷಗಳ ಅಭ್ಯರ್ಥಿಗಳೇ ಗೆಲುವು ಸಾಧಿಸಿದರು. ಕಾಂಗ್ರೆಸ್ ಪಕ್ಷ ನೆಲ ಕಚ್ಚಿತು. ಥಾಣೆ ಲೋಕಸಭಾ ಕ್ಷೇತ್ರದ ಉಪ ಚುನಾವಣೆಯಲ್ಲಿ ಶಿವಸೇನೆ ಜಯಭೇರಿ ಭಾರಿಸಿತು. ಹಿಮಾಚಲ ಪ್ರದೇಶದ ಹಮಿರ್ ಪುರ್ ಲೋಕಸಭಾ ಕ್ಷೇತ್ರದಲ್ಲಿ ಬಿಜೆಪಿ ಅಭ್ಯರ್ಥಿ ಅಲ್ಲಿನ ಮುಖ್ಯಮಂತ್ರಿ ಪ್ರೇಮ್ ಕುಮಾರ್ ಧುಮಾಲ್ ಅವರ ಪುತ್ರ ಅನುರಾಗ್ ಠಾಕೂರ್, ಮೇಘಾಲಯದ ಟುರಾ ಲೋಕಸಭಾ ಕ್ಷೇತ್ರದಲ್ಲಿ ನ್ಯಾಷನಲಿಸ್ಟ್ ಕಾಂಗ್ರೆಸ್ ಪಾರ್ಟಿ (ಎನ್ ಸಿ ಪಿ) ಅಭ್ಯರ್ಥಿ ಲೋಕಸಭೆಯ ಮಾಜಿ ಸ್ಪೀಕರ್ ಪಿ.ಎ. ಸಂಗ್ಮಾ ಅವರ ಪುತ್ರಿ ಅಗಾಥಾ ಸಂಗ್ಮಾ, ಹರಿಯಾಣದ ಗೊಹಾನಾ ವಿಧಾನಸಭಾ ಕ್ಷೇತ್ರದಲ್ಲಿ ಕಾಂಗ್ರೆಸ್ಸಿನ ಜಗಬೀರ್ ಸಿಂಗ್ ಮಲಿಕ್, ಆದಂಪುರ ಕ್ಷೇತ್ರದಲ್ಲಿ ಹರಿಯಾಣ ಜನಹಿತ ಕಾಂಗ್ರೆಸ್ ಅಭ್ಯರ್ಥಿ ಮಾಜಿ ಮುಖ್ಯಮಂತ್ರಿ ಭಜನ್ ಲಾಲ್, ಅಮೃತಸರ ದಕ್ಷಿಣ ವಿಧಾನಸಭಾ ಕ್ಷೇತ್ರದಲ್ಲಿ ಶಿರೋಮಣಿ ಅಕಾಲಿ ದಳ- ಬಿಜೆಪಿ ಅಭ್ಯರ್ಥಿ ಇಂದೇರ್ಬಿರ್ ಸಿಂಗ್ ಬೊಲಾರಿಯಾ ಜಯಗಳಿಸಿದರು.

2008: ಚಂಡಮಾರುತದಿಂದ ತತ್ತರಿಸಿದ ಮ್ಯಾನ್ಮಾರಿನ ಜನರು ಸೇನೆ ರೂಪಿಸಿರುವ ನೂತನ ಸಂವಿಧಾನವನ್ನು ಸ್ವಾಗತಿಸಿದ್ದು, ಜನಮತಗಣನೆಯಲ್ಲಿ ಶೇ 93 ಮಂದಿ ಇದಕ್ಕೆ ಸಮ್ಮತಿ ಸೂಚಿಸಿದ್ದಾರೆ ಎಂದು ಸರ್ಕಾರಿ ಮಾಧ್ಯಮ ವರದಿ ಮಾಡಿತು. ನರ್ಗಿಸ್ ಚಂಡಮಾರುತದಿಂದ ತತ್ತರಿಸಿದ ಪ್ರದೇಶದಲ್ಲಿ ಜನಮತಗಣೆ ನಡೆದಿತ್ತು.

2008: ಪತ್ರಿಕೋದ್ಯಮ, ಕಲೆ, ಶಿಕ್ಷಣ ಹಾಗೂ ಹಣಕಾಸು ಕ್ಷೇತ್ರದಲ್ಲಿ ಸಾಧನೆ ಮಾಡಿದ ಭಾರತೀಯ ಮೂಲದ ಮಹಿಳೆಯರಿಗೆ ಈ ಸಾಲಿನ `ಏಷ್ಯನ್ ವುಮೆನ್ ಆಫ್ ಅಚೀವ್ಮೆಂಟ್' ಪ್ರಶಸ್ತಿ ನೀಡಿ ಗೌರವಿಸಲಾಯಿತು. ಹಿಲ್ಟನ್ನಿನಲ್ಲಿ ನಡೆದ 9 ನೇ ವಾರ್ಷಿಕ ಪ್ರಶಸ್ತಿ ಪ್ರದಾನ ಕಾರ್ಯಕ್ರಮದಲ್ಲಿ ಐಟಿಎನ್ ಸುದ್ದಿ ಸಂಪಾದಕಿ ಆರತಿ ಲುಖಾ, ನೃತ್ಯ ನಿರ್ದೇಶಕಿ ಶೋಭನಾ ಜಯಸಿಂಗ್ ಹಾಗೂ ವೆಸ್ಟ್ ನಟ್ಟಿಂಗ್ ಹ್ಯಾಮ್ ಶೈರ್ ಕಾಲೇಜಿನ ಆಶಾ ಖೇಮ್ಕಾ ಮತ್ತು ಬಾಲಾ ಠಾಕ್ರಾರ್ ಅವರಿಗೆ ಪ್ರಶಸ್ತಿ ಪ್ರದಾನ ಮಾಡಲಾಯಿತು. ಅಂತಾರಾಷ್ಟ್ರೀಯ ಹಾಗೂ ಸಮುದಾಯ ಮಟ್ಟದ ಅನೇಕ ಕಾರ್ಯಕ್ರಮಗಳಲ್ಲಿ ಕೆಲಸ ಮಾಡಿದ ಭಾರತೀಯ ಮೂಲದ ಸ್ವಯಂಸೇವಕ ಗೋಪಾಲ್ ದಾಸ್ ಪೋಪಟ್ (85) ಅವರಿಗೆ ಅಂತಾರಾಷ್ಟ್ರೀಯ ಸ್ವಯಂಸೇವಕ ಪ್ರಶಸ್ತಿ ನೀಡಿ ಗೌರವಿಸಲಾಯಿತು.

2008: ಬಹ್ರೇನ್ ಏರ್ ಸಂಸ್ಥೆಯು ಕೊಚ್ಚಿಗೆ ನೇರ ವಿಮಾನಯಾನ ಸೇವೆ ಆರಂಭಿಸಿತು.

2008: ಇರಾಕ್ ಫುಟ್ಬಾಲ್ ತಂಡ ಒಂದು ವರ್ಷದ ಅವಧಿಗೆ ಯಾವುದೇ ರೀತಿಯ ಅಂತಾರಾಷ್ಟ್ರೀಯ ಪಂದ್ಯಗಳಲ್ಲಿ ಪಾಲ್ಗೊಳ್ಳುವುದರ ಮೇಲೆ ಫಿಫಾ ನಿಷೇಧ ಹೇರಿತು.ಇರಾಕ್ ತಂಡವನ್ನು 12 ತಿಂಗಳುಗಳ ಅವಧಿಗೆ ಅಮಾನತು ಮಾಡಿರುವ ನಿರ್ಧಾರವನ್ನು ಫಿಫಾ ಆಡಳಿತ ಮಂಡಳಿ ಈದಿನ ಪ್ರಕಟಿಸಿತು.
2008: ಕೊಯಮತ್ತೂರಿನ ಉದುಮಲ್ಪೇಟೆ ಸಮೀಪದ ತಿರುಮೂರ್ತಿ ಅಣೆಕಟ್ಟಿನ ಪಂಚಲಿಂಗ ಜಲಪಾತದ ಕ್ಷಿಪ್ರ ಪ್ರವಾಹಕ್ಕೆ ಸಿಲುಕಿ 13 ಮಂದಿ ಪ್ರವಾಸಿಗರು ಅಸು ನೀಗಿದ ಘಟನೆ ಹಿಂದಿನ ದಿನ ನಡೆಯಿತು. ಕೇರಳದ ಮರೈಯೂರಿನಲ್ಲಿ ಬಿದ್ದ ಭಾರಿ ಮಳೆಯೇ ಈ ಪ್ರವಾಹಕ್ಕೆ ಕಾರಣ ಎಂದು ಪೊಲೀಸರು ತಿಳಿಸಿದರು.

2008: ಚನ್ನರಾಯಪಟ್ಟಣ ತಾಲ್ಲೂಕಿನ ಗಡಿಭಾಗದಲ್ಲಿರುವ ಇತಿಹಾಸ ಪ್ರಸಿದ್ಧ ಗಿರಿಕ್ಷೇತ್ರದಲ್ಲಿ 18 ಲಕ್ಷ ರೂ. ವೆಚ್ಚದಲ್ಲಿ ಜೀರ್ಣೋದ್ಧಾರಗೊಂಡ ಶ್ರೀ ಲಕ್ಷ್ಮಿವೆಂಕಟೇಶ್ವರ ಸ್ವಾಮಿ ದೇಗುಲದ ಉದ್ಘಾಟನೆ ವಿಜೃಂಭಣೆಯಿಂದ ನೆರವೇರಿತು.

2007: ಕೇಂದ್ರದ ಮಾಜಿ ಸಚಿವ, ರಾಷ್ಟ್ರೀಯ ನ್ಯಾಯಮಂಡಳಿಯ ಅಧ್ಯಕ್ಷ ಚಂದ್ರಜಿತ್ ಯಾದವ್ ನವದೆಹಲಿಯಲ್ಲಿ ನಿಧನರಾದರು. ಅವರು ಇಂದಿರಾಗಾಂಧಿ ಸಂಪುಟದಲ್ಲಿ ಉಕ್ಕು ಮತ್ತು ಗಣಿ ಸಚಿವರಾಗಿ ಕಾರ್ಯ ನಿರ್ವಹಿಸಿದ್ದರು.

2007: ರಾಷ್ಟ್ರದ ಭದ್ರತಾ ಸಮಸ್ಯೆಗಳನ್ನು ಸಮರ್ಥವಾಗಿ ನಿಭಾಯಿಸುವ ಸಲುವಾಗಿ ಕೇಂದ್ರ ಸರ್ಕಾರವು ವಿವಿಧೋದ್ದೇಶ ರಾಷ್ಟ್ರೀಯ ಗುರುತು ಚೀಟಿ ಯೋಜನೆಗೆ ಚಾಲನೆ ನೀಡಿತು. ರಾಜಧಾನಿಯ ನರೇಲಾದಲ್ಲಿ ಭಾರತದ ರಿಜಿಸ್ಟ್ರಾರ್ ಜನರಲ್ ದೇವೇಂದರ್ ಕುಮಾರ್ ಸಿಕ್ರಿ ಅವರು ವಾಯವ್ಯ ದೆಹಲಿಯ ನರೇಲಾದ ಮಹಿಳೆಯೊಬ್ಬರಿಗೆ ಮೊತ್ತ ಮೊದಲ ರಾಷ್ಟ್ರೀಯ ಗುರುತು ಚೀಟಿ ವಿತರಿಸಿದರು.

2007: ಪಕ್ಷದ ನಿಯಮ ಉಲ್ಲಂಘಿಸಿ ಪರಸ್ಪರ ಆರೋಪ- ಪ್ರತ್ಯಾರೋಪದಲ್ಲಿ ತೊಡಗಿದ್ದ ಕೇರಳದ ಮುಖ್ಯಮಂತ್ರಿ ವಿ.ಎಸ್. ಅಚ್ಯುತಾನಂದನ್ ಮತ್ತು ಸಿಪಿ ಎಂ ರಾಜ್ಯ ಕಾರ್ಯದರ್ಶಿ ಪಿನರಾಯಿ ವಿಜಯನ್ ಅವರನ್ನು ಸಿಪಿಎಂನ ಉನ್ನತ ನೀತಿ ನಿರೂಪಕ ಸಮಿತಿಯಾದ ಪಾಲಿಟ್ ಬ್ಯೂರೋದಿಂದ ಅಮಾನತುಗೊಳಿಸಲಾಯಿತು.

2007: ಭಾರತೀಯ ಕ್ರಿಕೆಟ್ ತಂಡದ ಅಗ್ರಶ್ರೇಯಾಂಕದ ನಾಲ್ವರು ಆಟಗಾರರು ಢಾಕಾದ ಮೀರ್ ಪುರ ಬೆಂಗಾಲ್ ಜೈತಿಯಾ ಕ್ರೀಡಾಂಗಣದಲ್ಲಿ ಮೊತ್ತ ಮೊದಲ ಬಾರಿಗೆ ಶತಕ ಗಳಿಸುವುದರೊಂದಿಗೆ ವಿಶ್ವದಾಖಲೆ ನಿರ್ಮಿಸಿದರು. ವಾಸಿಂ ಜಾಫರ್ (ಗಾಯಗೊಂಡು ನಿವೃತ್ತಿ 138), ದಿನೇಶ್ ಕಾರ್ತಿಕ್ (129), ರಾಹುಲ್ ದ್ರಾವಿಡ್ (129) ಹಾಗೂ ಸಚಿನ್ ತೆಂಡೂಲ್ಕರ್ (ಔಟಾಗದೇ 122) ಅವರು ಇತಿಹಾಸ ನಿರ್ಮಿಸಿದ ಆಟಗಾರರು.

2007: ಜರ್ಮನಿಯಿಂದ ಅಟ್ಲಾಂಟಾಕ್ಕೆ ಹೊರಟಿದ್ದ ಡೆಲ್ಟಾ ಏರ್ ಲೈನ್ಸ್ ವಿಮಾನದಲ್ಲಿ ಡಾ. ರಾಬರ್ಟ್ ವಿನ್ಸೆಂಟ್ ಮತ್ತು ಡಾ. ಡಿಯೇಟರ್ ಕೆ. ಗುಣ್ ಕಲ್ ಅವರು ಹಾರುತ್ತಿದ್ದ ವಿಮಾನದಲ್ಲೇ ಮಹಿಳೆಯೊಬ್ಬರಿಗೆ ಹೆರಿಗೆ ನೋವು ಕಾಣಿಸಿಕೊಂಡಾಗ ಸೂಕ್ತ ವೈದ್ಯೋಪಚಾರ ಮಾಡಿ ಹೆರಿಗೆ ಮಾಡಿಸಿದರು. ಹುಟ್ಟಿದ ಗಂಡು ಮಗು ಉಸಿರಾಡದೇ ಇದ್ದಾಗ ಬಾಯಿಯ ಮೂಲಕ ಉಸಿರೆಳೆದು ಕೃತಕ ಉಸಿರಾಟ ನಡೆಸಿ ಮಗುವನ್ನು ಬದುಕಿಸಿದರು.

2006: ರಷ್ಯದ ಸೆವೆರ್ ಸ್ಟಾಲ್ ಉಕ್ಕು ಕಂಪೆನಿಯನ್ನು ಖರೀದಿಸಲು ಆರ್ಸೆಲರ್ ಸಂಸ್ಥೆ ನಿರ್ಧರಿಸಿತು. ಇದರಿಂದ ಆರ್ಸೆಲರ್ ಸಂಸ್ಥೆಯನ್ನು ಖರೀದಿಸುವ ಮಿತ್ತಲ್ ಉಕ್ಕು ಸಂಸ್ಥೆಯ ಯತ್ನಕ್ಕೆ ಅಡ್ಡಗಾಲು ಬಿದ್ದಂತಾಯಿತು.

2006: ಮಾವೋವಾದಿ ಹಿಂಸಾಚಾರವನ್ನು ಕೊನೆಗಾಣಿಸಲು ಮುಂದಡಿ ಇಟ್ಟ ನೇಪಾಳ ಸರ್ಕಾರವು ಶಾಂತಿ ಮಾತುಕತೆ ಆರಂಭಿಸುವ ದ್ಯೋತಕವಾಗಿ 467 ಮಾವೋವಾದಿ ಉಗ್ರಗಾಮಿಗಳನ್ನು ಬಿಡುಗಡೆ ಮಾಡಿತು.

2002: `ಒಡಿಸ್ಸಿ' ಹೆಸರಿನ ನೌಕೆಯು ಮಂಗಳ ಗ್ರಹದಲ್ಲಿ ಹೆಪ್ಪುಗಟ್ಟಿದ ನೀರಿನ ನಿಕ್ಷೇಪವನ್ನು ಪತ್ತೆ ಮಾಡಿತು.

1999: ಬಟಾಲಿಕ್ನಿಂದ ಲಡಾಖ್ ನ ಡ್ರಾಸ್ ವರೆಗಿನ ಗಡಿ ನಿಯಂತ್ರಣ ರೇಖೆಯನ್ನು ಅತಿಕ್ರಮಿಸಿದ್ದ ಪಾಕಿಸ್ಥಾನಿ ಬೆಂಬಲಿತ ಉಗ್ರಗಾಮಿಗಳ ವಿರುದ್ಧ ಭಾರತ `ಆಪರೇಷನ್ ವಿಜಯ್' ಆರಂಭಿಸಿತು. ಅತಿಕ್ರಮಿಗಳನ್ನು ತೆರವುಗೊಳಿಸುವ ಈ ಕಾರ್ಯಾಚರಣೆ ಯಶಸ್ವಿಯಾಯಿತು ಎಂದು ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿ ಜುಲೈ 14ರಂದು ಘೋಷಿಸಿದರು.

1976: ಕಲಾವಿದ ವೇಣುಗೋಪಾಲ್ ವಿ.ಜಿ. ಜನನ.

1972: ಯುದ್ಧ ಕ್ಷಿಪಣಿಗಳನ್ನು ನಿಯಂತ್ರಿಸುವ `ಆಯಕಟ್ಟಿನ ಶಸ್ತ್ರಾಸ್ತ್ರ ಮಿತಿ ಒಪ್ಪಂದ'ಕ್ಕೆ (ಸಾಲ್ಟ್ 1) ಅಮೆರಿಕ ಮತ್ತು ಯುಎಸ್ಸೆಸ್ಸಾರ್ ಸಹಿ ಹಾಕಿದವು.

1966: ಬ್ರಿಟಿಷ್ ಗಯಾನಾಕ್ಕೆ ಸ್ವಾತಂತ್ರ್ಯ ಸಿಕ್ಕಿತು. ಅದು ಈ ದಿನದಿಂದ `ಗಯಾನಾ' ಅಷ್ಟೆ.

1951: ಅಮೆರಿಕದ ಮಹಿಳಾ ಗಗನಯಾನಿ ಸ್ಯಾಲ್ಲಿ ರೈಡ್ ಜನ್ಮದಿನ. ಈಕೆ 1983ರಲ್ಲಿ ಬಾಹ್ಯಾಕಾಶ ಷಟ್ಲ್ ನೌಕೆ ಚಾಲೆಂಜರ್ ಮೂಲಕ ಭೂಮಿಗೆ ಪ್ರದಕ್ಷಿಣೆ ಹಾಕಿದ ಮೊತ್ತ ಮೊದಲ ಮಹಿಳೆ.

1948: ಜಾನಪದ ಕಲಾವಿದರ ಕುಟುಂಬದಿಂದ ಬಂದ ಕಲಾವಿದ ಗುರುರಾಜ ಹೊಸಕೋಟೆ ಅವರು ರುದ್ರಪ್ಪ ಹೊಸಕೋಟೆ ಹಾಗೂ ಹಾಡುಗಾರ್ತಿ ಗೌರಮ್ಮ ದಂಪತಿಯ ಮಗನಾಗಿ ಬಾಗಲಕೋಟೆ ಜಿಲ್ಲೆಯ ಮುಧೋಳ ತಾಲ್ಲೂಕಿನ ಮಹಾಲಿಂಗಪುರದಲ್ಲಿ ಜನಿಸಿದರು.

1940: ಕಲಾವಿದ ಚನ್ನವೀರೇಶ ಸಂಪಗಿ ಜನನ.

1926: ಉಜ್ವಲ ರಾಷ್ಟ್ರಪ್ರೇಮಿ, ಚಿಂತಕ, ಬಹುಭಾಷಾ ಕೋವಿದ ಖ್ಯಾತ ಲೇಖಕ ಹೊ.ವೆ. ಶೇಷಾದ್ರಿ (26-5-1926ರಿಂದ 14-8-2005) ಅವರು ಹೊಂಗಸಂದ್ರದಲ್ಲಿ ವೆಂಕಟರಾಮಯ್ಯ- ಪಾರ್ವತಮ್ಮ ದಂಪತಿಯ ಪುತ್ರನಾಗಿ ಈ ದಿನ ಜನಿಸಿದರು. ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಪ್ರಧಾನ ಕಾರ್ಯದರ್ಶಿ 9 ವರ್ಷ ಸೇವೆ ಸಲ್ಲಿಸಿದ ಇವರ ಲೇಖನಿಯಿಂದ ಬಂದ ಗ್ರಂಥಗಳು ಅಸಂಖ್ಯಾತ. ಇವರ ಲಲಿತ ಪ್ರಬಂಧಗಳ ಸಂಕಲನ ತೋರ್ ಬೆರಳುಗೆ 1982ರಲ್ಲಿ ಕರ್ನಾಟಕ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ನೀಡಿ ಗೌರವಿಸಿತು.

(ಸಂಗ್ರಹ: ನೆತ್ರಕೆರೆ ಉದಯಶಂಕರ)

Tuesday, May 25, 2010

ಇಂದಿನ ಇತಿಹಾಸ History Today ಮೇ 25

ಇಂದಿನ ಇತಿಹಾಸ

ಮೇ 25

ಅಪಾ ಶೆರ್ಪಾ (49) ಅವರು ಹತ್ತೊಂಬತ್ತು ಬಾರಿ ಮೌಂಟ್ ಎವೆರೆಸ್ಟ್‌ನ್ನು ಏರಿ ದಾಖಲೆ ನಿರ್ಮಿಸಿ ಸಂಭ್ರಮಿಸಿದರು.

2009: ಅಪಾ ಶೆರ್ಪಾ (49) ಅವರು ಹತ್ತೊಂಬತ್ತು ಬಾರಿ ಮೌಂಟ್ ಎವೆರೆಸ್ಟ್‌ನ್ನು ಏರಿ ದಾಖಲೆ ನಿರ್ಮಿಸಿ ಸಂಭ್ರಮಿಸಿದರು.

2009: ಪಶ್ಚಿಮ ಬಂಗಾಳದ ಐದು ಜಿಲ್ಲೆಗಳು ಹಾಗೂ ಒರಿಸ್ಸಾದ ಕರಾವಳಿ ತೀರ ಪ್ರದೇಶಗಳಿಗೆ ಅಪ್ಪಳಿಸಿದ 'ಐಲಾ' ಚಂಡಮಾರುತಕ್ಕೆ ಬಲಿಯಾದವರ ಸಂಖ್ಯೆ 32ಕ್ಕೆ ಏರಿತು. ಒಂದು ಲಕ್ಷಕ್ಕೂ ಅಧಿಕ ಮಂದಿ ನಿರಾಶ್ರಿತರಾದರು. ಕೋಲ್ಕತ್ತ ನಗರಕ್ಕೆ ಅಪ್ಪಳಿಸಿದ ಚಂಡಮಾರುತ ನಗರದ ಜನಜೀವನವನ್ನು ಅಸ್ತವ್ಯಸ್ತಗೊಳಿಸಿತು.. ಬಸ್, ರೈಲು ಹಾಗೂ ವಿಮಾನ ಸಂಚಾರದಲ್ಲಿ ಏರುಪೇರಾಯಿತು.

2009: ಸತ್ಯಂ ಕಂಪ್ಯೂಟರ್ ಕಂಪೆನಿಯ ಹೊರ ಗುತ್ತಿಗೆ ವಿಭಾಗದಲ್ಲಿ ಕಾರ್ಯನಿರ್ವಹಿಸುತ್ತಿದ್ದ ಮೂವರು ಉನ್ನತ ಮಟ್ಟದ ಅಧಿಕಾರಿಗಳು ರಾಜೀನಾಮೆ ನೀಡಿದರು. ಈ ಮೂಲಕ ಕಂಪೆನಿಯ ಉದ್ಯೋಗಿಗಳಿಗೆ ಗೇಟ್‌ಪಾಸ್ ನೀಡುವ ಪ್ರಕ್ರಿಯೆ ಆರಂಭವಾಯಿತೇ ಎಂಬ ಶಂಕೆ ಹುಟ್ಟುಕೊಂಡಿತು. ಆದರೆ ಕಂಪೆನಿ ಈ ಶಂಕೆಯನ್ನು ತಳ್ಳಿಹಾಕಿತು. 'ಈ ಅಧಿಕಾರಿಗಳು ರಾಜೀನಾಮೆ ಪತ್ರವನ್ನು ಒಂದೆರಡು ತಿಂಗಳು ಹಿಂದೆಯೇ ನೀಡಿದ್ದರು' ಎಂದು ಕಂಪೆನಿ ಹೇಳಿತು. ಬಿಪಿಒ ವಿಭಾಗದ ಗ್ಲೋಬಲ್ ಮುಖ್ಯಸ್ಥ (ಎಚ್‌ಆರ್) ನರೇಶ್ ಜಂಗಿನಿ, ಕಾರ್ಪೋರೇಟ್ ಸೇವಾ ವಿಭಾಗದ ವಿ. ಸತ್ಯಾನಂದಮ್ ಹಾಗೂ ಏಷ್ಯಾ-ಪೆಸಿಫಿಕ್ ಮಾರ್ಕೆಟಿಂಗ್ ವಿಭಾಗದ ಕುಲವಿಂದರ್ ಸಿಂಗ್ ರಾಜೀನಾಮೆ ನೀಡಿದವರು.

2009: ಕಮ್ಯುನಿಸ್ಟ್ ಹಿರಿಯ ನಾಯಕ ಮಾಧವ್ ಕುಮಾರ್ ನೇಪಾಳ್ ನೂತನ ಪ್ರಧಾನಿಯಾಗಿ ಪ್ರಮಾಣ ವಚನ ಸ್ವೀಕರಿಸಿದರು. ದೇವರಲ್ಲಿ ನಂಬಿಕೆ ಇಲ್ಲದಿದ್ದರೂ ಈ ಸಂದರ್ಭದಲ್ಲಿ ಸಾಂಪ್ರದಾಯಿಕ ನೇಪಾಳಿ ವೇಷಭೂಷಣದಲ್ಲಿ ಗಮನ ಸೆಳೆದರು. 56 ವರ್ಷದ ನೇಪಾಳ್ ಮೊದಲು ಬ್ಯಾಂಕ್ ಒಂದರಲ್ಲಿ ಕ್ಯಾಷಿಯರ್ ಆಗಿದ್ದರು. ಇದೀಗ ಗಣರಾಜ್ಯ ನೇಪಾಳದ ಎರಡನೇ ಪ್ರಧಾನಿಯಾದರು.

2009: ಎರಡು ವರ್ಷಗಳಿಂದ ಛತ್ತೀಸ್‌ಗಢ ಕಾರಾಗೃಹದಲ್ಲಿದ್ದ ಪ್ರಸಿದ್ಧ ನಾಗರಿಕ ಹಕ್ಕುಗಳ ಕಾರ್ಯಕರ್ತ ವಿನಾಯಕ ಸೇನ್ ಅವರನ್ನು ಜಾಮೀನಿನ ಮೇಲೆ ಬಿಡುಗಡೆಗೊಳಿಸುವಂತೆ ಸುಪ್ರೀಂಕೋರ್ಟ್ ಆದೇಶಿಸಿತು. ನ್ಯಾಯಮೂರ್ತಿಗಳಾದ ಮಾರ್ಕಂಡೇಯ ಕಟ್ಜು ಮತ್ತು ದೀಪಕ್ ವರ್ಮಾ ಅವರನ್ನು ಒಳಗೊಂಡ ನ್ಯಾಯಪೀಠವು, ಸ್ಥಳೀಯ ವಿಚಾರಣಾ ನ್ಯಾಯಾಲಯದ ಇಚ್ಛೆಯನ್ವಯ ವೈಯಕ್ತಿಕ ಬಾಂಡ್ ಪಡೆದು ಸೇನ್ ಅವರನ್ನು ಜಾಮೀನಿನ ಮೇಲೆ ಬಿಡುಗಡೆಗೊಳಿಸಲು ಸೂಚಿಸಿತು.

2009: ಜಾಗತಿಕ ಸಮುದಾಯದ ಒತ್ತಡದ ಹೊರತಾಗಿಯೂ ಉತ್ತರ ಕೊರಿಯಾ ಯಶಸ್ವಿಯಾಗಿ 2ನೇ ಬಾರಿ ಅಣ್ವಸ್ತ್ರ ಪರೀಕ್ಷೆ ನಡೆಸಿತು. ಈ ಬಾರಿಯ ಸ್ಫೋಟ ಮೊದಲಿಗಿಂತಲೂ ಪ್ರಬಲವಾಗಿತ್ತು. ಸ್ವರಕ್ಷಣಾ ಯೋಜನೆಯ ಭಾಗವಾಗಿ ಭೂಗತವಾಗಿ ಯಶಸ್ವಿಯಾಗಿ ಅಣ್ವಸ್ತ್ರ ಪರೀಕ್ಷೆ ನಡೆಸಲಾಗಿದೆ ಎಂದು ಕೊರಿಯಾ ಕೇಂದ್ರ ಸುದ್ದಿ ಸಂಸ್ಥೆ (ಕೆಸಿಎನ್‌ಎ) ವರದಿ ಮಾಡಿತು.

2008: ದಕ್ಷಿಣ ಭಾರತದಲ್ಲಿ ಪ್ರಪ್ರಥಮ ಬಾರಿಗೆ ಸ್ವಂತ ಬಲದಿಂದ ಅಧಿಕಾರಕ್ಕೆ ಬರುವ ಭಾರತೀಯ ಜನತಾ ಪಕ್ಷದ ಕನಸು ನನಸಾಗುವ ಕಾಲ ಸನ್ನಿಹಿತವಾಯಿತು. ಆದರೆ ಸರ್ಕಾರ ರಚಿಸಲು ಮೂರು ಸ್ಥಾನಗಳ ಕೊರತೆ ಬಿಜೆಪಿಯನ್ನು ಕಾಡಿತು. ಮೂರು ಹಂತದಲ್ಲಿ ನಡೆದ ಮತದಾನದ ಫಲಿತಾಂಶ ಪ್ರಕಟಗೊಂಡು, ಒಟ್ಟು 224 ವಿಧಾನಸಭಾ ಕ್ಷೇತ್ರಗಳ ಪೈಕಿ ಬಿಜೆಪಿ 110, ಕಾಂಗ್ರೆಸ್ 80 ಮತ್ತು ಜನತಾದಳ (ಎಸ್) 28 ಸ್ಥಾನಗಳಲ್ಲಿ ಜಯಗಳಿಸಿದವು. ಕಾಂಗ್ರೆಸ್ಸಿನಿಂದ ಬಂಡೆದ್ದು ಸ್ಪರ್ಧಿಸಿದ್ದ ನಾಲ್ವರು ಹಾಗೂ ಬಿಜೆಪಿ ಮತ್ತು ಜೆಡಿಎಸ್ನ ತಲಾ ಒಬ್ಬೊಬ್ಬರು ಬಂಡಾಯ ಅಭ್ಯರ್ಥಿಗಳು ಗೆದ್ದರು. ಒಟ್ಟಾರೆ ಮೂವರು ಮಹಿಳೆಯರಿಗೆ ಮಾತ್ರ ವಿಧಾನಸಭೆ ಪ್ರವೇಶಿಸಲು ಸಾಧ್ಯವಾಯಿತು. ಅತಂತ್ರ ವಿಧಾನಸಭೆಯಿಂದಾಗಿ ಕಳೆದ ನಾಲ್ಕು ವರ್ಷಗಳ ರಾಜಕೀಯ ಪ್ರಹಸನಗಳಿಂದ ರೋಸಿಹೋದಂತೆ ಕಂಡು ಬಂದ ರಾಜ್ಯದ ಮತದಾರರು ಹೆಚ್ಚು ಕಡಿಮೆ ಒಂದು ಪಕ್ಷಕ್ಕೆ ಬಹುಮತ ನೀಡುವ ಇಂಗಿತ ವ್ಯಕ್ತಪಡಿಸಿದರು.

2008: ಚಿತ್ತಾಪುರ ಕ್ಷೇತ್ರದಿಂದ ಕರ್ನಾಟಕ ವಿಧಾನಸಭೆಗೆ ಆಯ್ಕೆಯಾಗುವ ಮೂಲಕ ಮಲ್ಲಿಕಾರ್ಜುನ ಖರ್ಗೆ ಅವರು ಸತತ 9ನೇ ಸಲ ವಿಧಾನಸಭೆ ಪ್ರವೇಶಿಸಿ ವಿಶ್ವದಾಖಲೆ ಮಾಡಿದರು. ಜೇವರ್ಗಿಯಲ್ಲಿ ಸೋಲುವ ಮೂಲಕ ಧರ್ಮಸಿಂಗ್ ಅವರು ಸತತ 9ನೇ ಬಾರಿ ಆಯ್ಕೆಯಾಗಿ ವಿಶ್ವ ದಾಖಲೆ ಮಾಡುವ ಅವಕಾಶದಿಂದ ವಂಚಿತರಾದರು.

2008: ಚೀನಾದಲ್ಲಿ ಭೂಕಂಪದ ಅವಶೇಷಗಳಡಿ ಹೂತುಹೋಗಿದ್ದ 80 ವರ್ಷದ ಕ್ಷತಾ ಝೀಹು ಎಂಬ ಪಾರ್ಶ್ವವಾಯು ಪೀಡಿತ ವ್ಯಕ್ತಿಯನ್ನು 11 ದಿನಗಳ ಬಳಿಕ ಜೀವಂತವಾಗಿಯೇ ಹೊರ ತೆಗೆಯಲಾಯಿತು ಎಂದು ಸರ್ಕಾರಿ ಸುದ್ದಿ ವಾಹಿನಿ ಪ್ರಸಾರ ಮಾಡಿತು. ಈತ ಭೂಕಂಪದಲ್ಲಿ ಕುಸಿದುಬಿದ್ದ ತನ್ನ ಮನೆಗಳ ಅವಶೇಷಗಳ ಅಡಿಯಲ್ಲಿ ಸಿಕ್ಕಿಕೊಂಡಿದ್ದ.

2008: ನ್ಯೂಯಾರ್ಕಿನ `ಫೋಬ್ಸರ್್' ಪತ್ರಿಕೆ ಪ್ರಕಟಿಸಿದ ಮಲೇಷ್ಯಾದ 40 ಮಂದಿ ಶ್ರೀಮಂತರ ಪಟ್ಟಿಯಲ್ಲಿ ಭಾರತೀಯ ಮೂಲದ ಆನಂದ ಕೃಷ್ಣನ್ ಮತ್ತು ವಿನೋದ್ ಶೇಖರ್ ಸ್ಥಾನ ಪಡೆದರು. ಆನಂದ ಕೃಷ್ಣನ್ ಅವರು 7.2 ಶತಕೋಟಿ ಡಾಲರ್ ವಹಿವಾಟು ಹೊಂದಿದ್ದು ಟೆಲಿಕಾಂ ವಾಣಿಜ್ಯ ಸಂಸ್ಥೆಯೊಂದನ್ನು ನಡೆಸುತ್ತಿದ್ದು ಪಟ್ಟಿಯಲ್ಲಿ ಎರಡನೇ ಸ್ಥಾನ ಗಳಿಸಿದರು. 320 ದಶಲಕ್ಷ ಡಾಲರ್ ಮೌಲ್ಯದ ಆಸ್ತಿ ಹೊಂದಿದ ವಿನೋದ್ ಶೇಖರ್ (40) ಪಟ್ಟಿಯಲ್ಲಿ 16ನೇ ಸ್ಥಾನ ಗಳಿಸಿದರು. ಇವರು ತಮ್ಮ ಮಗಳ ಹೆಸರಿನಲ್ಲಿ `ಪೆಟ್ರಾ ಸಮೂಹ'ವನ್ನು ಸ್ಥಾಪಿಸಿದ್ದು, ಅದು ಪುನರ್ ಬಳಕೆ ಮಾಡಬಹುದಾದ ಹಸಿರು ರಬ್ಬರನ್ನು ಉತ್ಪಾದಿಸುತ್ತದೆ.

2007: ಮುಂಬೈಯಲ್ಲಿ 1993ರಲ್ಲಿ ಸಂಭವಿಸಿದ ಸರಣಿ ಸ್ಫೋಟಕ್ಕೆ ಮುನ್ನ ಶಸ್ತ್ರಾಸ್ತ್ರ ಹಾಗೂ ಮದ್ದುಗುಂಡು ಸಾಗಿಸಿದ 8 ಮಂದಿಗೆ ವಿಶೇಷ ಟಾಡಾ ನ್ಯಾಯಾಲಯವು ಐದರಿಂದ ಹತ್ತು ವರ್ಷಗಳ ಕಠಿಣ ಸಜೆ ವಿಧಿಸಿತು.

2007: ಭಾರತ ಕ್ರಿಕೆಟ್ ತಂಡದ ನಾಯಕ ರಾಹುಲ್ ದ್ರಾವಿಡ್ ಅವರು ಅತಿ ಹೆಚ್ಚು ಶತಕಗಳ ಜೊತೆಯಾಟ (65ನೇ ಪಂದ್ಯದಲ್ಲಿ) ನಿಭಾಯಿಸಿದ ಹೊಸ ದಾಖಲೆ ಸ್ಥಾಪಿಸಿದರು. ಬಾಂಗ್ಲಾದೇಶದ ಢಾಕಾದಲ್ಲಿ ಆರಂಭವಾದ ಎರಡನೇ ಟೆಸ್ಟ್ ಪಂದ್ಯದ ಮೊದಲ ದಿನ ವಾಸಿಂ ಜಾಫರ್ ಜೊತೆಗೆ 106 ರನ್ನುಗಳ ಜೊತೆಯಾಟ ನಿಭಾಯಿಸುವ ಮೂಲಕ ದ್ರಾವಿಡ್ ಈ ಗೌರವ ಪಡೆದರು. ಆಸ್ಟ್ರೇಲಿಯಾದ ಸ್ಟೀವ್ ವಾ ಅವರ ಹೆಸರಿನಲ್ಲಿ (64 ಪಂದ್ಯಗಳು) ಈ ದಾಖಲೆ ಇತ್ತು.

2007: ಹೈದರಾಬಾದಿನ ಮೆಕ್ಕಾ ಮಸೀದಿಯಲ್ಲಿ ವಾರದ ಹಿಂದೆ ಸಂಭವಿಸಿದ ಸ್ಫೋಟ ಪ್ರಕರಣಕ್ಕೆ ಸಂಬಂಧಿಸಿದಂತೆ ಮಹಾರಾಷ್ಟ್ರದ ಜಲ್ಸಾ ಪಟ್ಟಣದ ವ್ಯಕ್ತಿಯೊಬ್ಬನನ್ನು ಪೊಲೀಸರು ಬಂಧಿಸಿದರು.

2006: ಕನ್ನಡ ಭಾಷೆ 2300 ವರ್ಷಗಳಿಗೂ ಹೆಚ್ಚಿನ ಇತಿಹಾಸ ಹೊಂದಿದೆ ಎಂಬುದನ್ನು ವಿವರಿಸುವ ದಾಖಲೆಗಳನ್ನು ಒಳಗೊಂಡ ವರದಿಯನ್ನು ಕರ್ನಾಟಕ ಸರ್ಕಾರವು ಕೇಂದ್ರ ಸರ್ಕಾರಕ್ಕೆ ಸಲ್ಲಿಸಿತು. ಕನ್ನಡಕ್ಕೆ ಶಾಸ್ತ್ರೀಯ ಭಾಷೆ ಗೌರವ ನೀಡಬೇಕೆಂಬ ಮನವಿಗೆ ಪೂರಕವಾಗಿ ಸಂಶೋಧಕ ಸಾಹಿತಿ ಡಾ. ಎಂ. ಚಿದಾನಂದ ಮೂರ್ತಿ ನೇತೃತ್ವದ ಸಮಿತಿಯು ಸಿದ್ಧಪಡಿಸಿದ ಈ ವರದಿಯನ್ನು ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ ಅವರು ಕೇಂದ್ರ ಸಂಸ್ಕೃತಿ ಸಚಿವೆ ಅಂಬಿಕಾ ಸೋನಿ ಅವರಿಗೆ ಸಲ್ಲಿಸಿದರು.

2001: ಕನೆಕ್ಟಿಕಟ್ಟಿನ ಸರ್ಜನ್ ಅರುವತ್ತನಾಲ್ಕು ವರ್ಷದ ಶೆರ್ಮನ್ ಬುಲ್ ಅವರು ಎವರೆಸ್ಟ್ ಶಿಖರವನ್ನು ಏರುವ ಮೂಲಕ ಜಗತ್ತಿನ ಅತ್ಯುನ್ನತ ಶಿಖರವನ್ನು ಏರಿದ ಅತ್ಯಂತ ಹಿರಿಯ ವ್ಯಕ್ತಿ ಎಂಬ ಹೆಗ್ಗಳಿಕೆ ಗಳಿಸಿಕೊಂಡರು.

1982: ಮರುಸೃಷ್ಟಿಯಾದ ವೆನಿಸ್ ಸಿಂಪ್ಲೊನ್ ಓರಿಯಂಟ್ ಎಕ್ಸ್ ಪ್ರೆಸ್ ಮೊತ್ತ ಮೊದಲ ಬಾರಿಗೆ ಲಂಡನ್ನಿನಿಂದ ಪ್ರಯಾಣ ಹೊರಟಿತು. ಶಿಪ್ಪಿಂಗ್ ಉದ್ಯಮಿ ಜೇಮ್ಸ್ ಶೆರ್ ವುಡ್ ಅವರು ಹಳೆ ಓರಿಯಂಟ್ ಎಕ್ಸ್ ಪ್ರೆಸ್ಸಿನ ಬೋಗಿಗಳನ್ನು ಸೋದ್ ಬಿಯ ಹರಾಜಿನಲ್ಲಿ ಖರೀದಿಸಿ ತಂದು ಹೊಸ ವೆನಿಸ್ ಸಿಂಪ್ಲೋನ್ ಓರಿಯಂಟ್ ಎಕ್ಸ್ ಪ್ರೆಸ್ಸಿಗಾಗಿ ಬಳಸಿಕೊಂಡರು. ಈ ರೈಲುಗಾಡಿ ಲಂಡನ್ನಿನ ವಿಕ್ಟೋರಿಯಾ ಟರ್ಮಿನಸ್ ಮತ್ತು ವೆನಿಸ್ ಮಧ್ಯೆ ಓಡಾಡುತ್ತದೆ.

1950: ಖ್ಯಾತ ಸುಗಮ ಸಂಗೀತಗಾರ ಯಶವಂತ ಹಳಿಬಂಡಿ ಅವರು ಕರ್ನಾಟಕ ಜಾನಪದ ಹಾಡುಗಾರಿಕೆಯ ಮನೆತನದ ಹನುಮಂತಪ್ಪ- ಬಸವೇಶ್ವರಿ ದಂಪತಿಯ ಮಗನಾಗಿ ಉತ್ತರ ಕರ್ನಾಟಕದ ತೇರಗಾಂವದಲ್ಲಿ ಜನಿಸಿದರು.

1948: ಕಲಾವಿದ ಸುರೇಶ ವೆಂಕಟೇಶ ಕುಲಕರ್ಣಿ ಜನನ.

1940: ಆಕ್ಸಫರ್ಡ್ ವಿಶ್ವವಿದ್ಯಾಲಯದ ಪೆಥಾಲಜಿ ವಿಭಾಗದಲ್ಲಿ ಅರ್ನೆಸ್ಟ್ ಚೈನ್ ಮತ್ತು ನಾರ್ಮನ್ ಜಿ. ಹೀಟ್ಲೆ ಅವರು ಎಂಟು ಇಲಿಗಳಿಗೆ ಸ್ಟ್ರೆಪ್ಟೋಕೋಕ್ಸಿಯನ್ನು ನೀಡಿದರು. ಅವುಗಳಲ್ಲಿ ನಾಲ್ಕು ಇಲಿಗಳಿಗೆ ನಂತರ ಪೆನಿಸಿಲಿನ್ ನೀಡಲಾಯಿತು. ಮರುದಿನ ಮುಂಜಾನೆ ವೇಳೆಗೆ ಪೆನಿಸಿಲಿನ್ ನೀಡಲಾಗಿದ್ದ ಇಲಿಗಳು ಜೀವಂತವಾಗಿದ್ದರೆ, ಉಳಿದ ನಾಲ್ಕು ಇಲಿಗಳು ಸತ್ತು ಬಿದ್ದಿದ್ದವು. ಸೋಂಕಿಗೆ ಚಿಕಿತ್ಸೆ ನೀಡಲು ಪೆನಿಸಿಲಿನ್ ಬಳಸುವ ಸಾಧ್ಯತೆ ಈ ಮೂಲಕ ಮೊತ್ತ ಮೊದಲ ಬಾರಿಗೆ ಪತ್ತೆಯಾಯಿತು.

1935: ಕಲಾವಿದ ನೀಲಾರಾಮ್ ಗೋಪಾಲ್ ಜನನ.

1908: ಸಾಹಿತಿ ವಾಸಂತಿ ದೇವಿ (25-5-1908ರಿಂದ 1-4-1995) ಅವರು ಅಣ್ಣಾಜಿರಾವ್- ರಾಧಾಬಾಯಿ ದಂಪತಿಯ ಮಗಳಾಗಿ ಬರ್ಮಾ ದೇಶದ (ಈಗಿನ ಮ್ಯಾನ್ಮಾರ್) ಮಿಥಿಲದಲ್ಲಿ ಹುಟ್ಟಿದರು. ಚಿತ್ರರಂಗ, ಸಾಹಿತ್ಯ, ರಂಗಭೂಮಿ, ಚಿತ್ರಕಲೆಗಳಿಗೆ ಕಾಣಿಕೆ ನೀಡಿರುವ ವಾಸಂತಿ ದೇವಿ ಅವರ ಪ್ರಮುಖ ಕೃತಿಗಳಲ್ಲಿ ಒಂದು `ನನ್ನ ಮಗ ಗುರುದತ್ತ'.

1889: ಸಿಕೊರಸ್ಕಿ (1889-1972) ಜನ್ಮದಿನ. ರಷ್ಯ ಮೂಲದ ಈ ಅಮೆರಿಕನ್ ವಿಮಾನ ವಿನ್ಯಾಸಗಾರ ಹೆಲಿಕಾಪ್ಟರನ್ನು ಯಶಸ್ವಿಯಾಗಿ ಅಭಿವೃದ್ಧಿ ಪಡಿಸಿದ ವ್ಯಕ್ತಿ.

1886: ಭಾರತದ ಕ್ರಾಂತಿಕಾರಿ ಸ್ವಾತಂತ್ರ್ಯ ಹೋರಾಟಗಾರ ರಾಸ್ ಬಿಹಾರಿ ಬೋಸ್ (1886-1945) ಜನ್ಮದಿನ.

Advertisement