Showing posts with label Bengal. Show all posts
Showing posts with label Bengal. Show all posts

Thursday, May 21, 2026

ಗೋಹತ್ಯೆಯು ಇಸ್ಲಾಂ / ಈದ್ ಹಬ್ಬಕ್ಕೆ ಅತ್ಯಗತ್ಯವಲ್ಲ: ಕೋರ್ಟ್

 ಗೋಹತ್ಯೆಯು ಇಸ್ಲಾಂ / ಈದ್ ಹಬ್ಬಕ್ಕೆ ಅತ್ಯಗತ್ಯವಲ್ಲ: ಕೋರ್ಟ್

ಕೋಲ್ಕತ: ಬಕ್ರೀದ್ ಹಬ್ಬಕ್ಕಿಂತ ಮುಂಚಿತವಾಗಿ, ಹಬ್ಬದ ಸಂದರ್ಭದಲ್ಲಿ ಪ್ರಾಣಿ ಬಲಿ ನೀಡುವುದಕ್ಕೆ ಸಂಬಂಧಿಸಿದಂತೆ ಪಶ್ಚಿಮ ಬಂಗಾಳ ಸರ್ಕಾರ ವಿಧಿಸಿದ್ದ ನಿರ್ಬಂಧಗಳನ್ನು ಪ್ರಶ್ನಿಸಿ ಸಲ್ಲಿಸಲಾಗಿದ್ದ ಅರ್ಜಿಯನ್ನು ಕಲ್ಕತ್ತಾ ಹೈಕೋರ್ಟ್ ೨೦೨೬ ಮೇ ೨೧ರ ಗುರುವಾರ ವಜಾ ಮಾಡಿದೆ.

ಗೋಹತ್ಯೆಯು (ಹಸುವಿನ ಬಲಿ) ಇಸ್ಲಾಂ ಧರ್ಮದ ಅಥವಾ ಬಕ್ರೀದ್ ಆಚರಣೆಯ ಅತ್ಯಗತ್ಯ ಭಾಗವಲ್ಲ ಎಂದು ಅವಲೋಕಿಸಿದ ನ್ಯಾಯಾಲಯವು, ಸಾರ್ವಜನಿಕ ಹಿತದೃಷ್ಟಿಯಿಂದ ಪ್ರಾಣಿ ಹತ್ಯೆಯನ್ನು ನಿಯಂತ್ರಿಸುವ ಅಥವಾ ನಿರ್ಬಂಧಿಸುವ ಅಧಿಕಾರ ರಾಜ್ಯ ಸರ್ಕಾರಕ್ಕಿದೆ ಎಂದು ಹೇಳಿದೆ.

ಮುಕ್ತ ಅಥವಾ ಸಾರ್ವಜನಿಕ ಸ್ಥಳಗಳಲ್ಲಿ ಪ್ರಾಣಿ ಬಲಿ ಮತ್ತು ಹತ್ಯೆ ಮಾಡುವಂತಿಲ್ಲ ಹಾಗೂ ಇದನ್ನು ಕೇವಲ ನಿಗದಿಪಡಿಸಿದ ಮತ್ತು ಸುರಕ್ಷಿತ ಸ್ಥಳಗಳಲ್ಲಿ ಮಾತ್ರ ನಡೆಸಬೇಕು ಎಂದು ಹೈಕೋರ್ಟ್ ನಿರ್ದೇಶಿಸಿದೆ. ಅದೇ ಸಮಯದಲ್ಲಿ, ಇತರ ಪ್ರಾಣಿಗಳ ಬಲಿಗೆ ಸಂಬಂಧಿಸಿದಂತೆ ನಿಯಮ ಸಡಿಲಿಕೆಯನ್ನು ಪರಿಗಣಿಸುವಂತೆ ನ್ಯಾಯಾಲಯವು ರಾಜ್ಯ ಸರ್ಕಾರಕ್ಕೆ ತಿಳಿಸಿದೆ.

ಪ್ರಾಣಿಗಳ ಕಡ್ಡಾಯ ವೈದ್ಯಕೀಯ ತಪಾಸಣೆ ಮತ್ತು ಹತ್ಯೆಗೂ ಮುನ್ನ ಅಧಿಕಾರಿಗಳಿಂದ ಪ್ರಮಾಣೀಕರಣವನ್ನು ಪಡೆದುಕೊಳ್ಳುವುದೂ ಸೇರಿದಂತೆ ಪಶ್ಚಿಮ ಬಂಗಾಳ ಸರ್ಕಾರವು ಕಟ್ಟುನಿಟ್ಟಿನ ನಿಯಮಗಳನ್ನು ಜಾರಿಗೆ ತಂದ ಬೆನ್ನಲ್ಲೇ ಈ ಆದೇಶ ಹೊರಬಿದ್ದಿದೆ.

Advertisement