Showing posts with label ಜಮ್ಮು. Show all posts
Showing posts with label ಜಮ್ಮು. Show all posts

Sunday, June 8, 2025

ವಿಶ್ವದ ಅತಿ ಎತ್ತರದ ಸೇತುವೆ ಮೇಲೆ ವಂದೇ ಭಾರತ್ ಓಡಾಟ ಶುರು

 ವಿಶ್ವದ ಅತಿ ಎತ್ತರದ ಸೇತುವೆ ಮೇಲೆ ವಂದೇ ಭಾರತ್ ಓಡಾಟ ಶುರು

ಮ್ಮು: ವಿಶ್ವದ ಅತಿ ಎತ್ತರದ ಕಮಾನು ಸೇತುವೆಯಾದ ಚೆನಾಬ್‌ ಸೇತುವೆ ಮೇಲೆ ಸಾಗುವ ಕತ್ರಾ ಮತ್ತು ಶ್ರೀನಗರ ನಡುವಣ ವಂದೇ ಭಾರತ್ ರೈಲುಗಳ ವಾಣಿಜ್ಯ ಕಾರ್ಯಾಚರಣೆಯನ್ನು ಉತ್ತರ ರೈಲ್ವೆ ೨೦೨೫ ಜೂನ್‌ ೭ರ ಶನಿವಾರ ಆರಂಭಿಸಿದೆ.

೨೦೨೫ ಜೂನ್‌ ಜೂನ್ 6ಶುಕ್ರವಾರ ಪ್ರಧಾನಿ ನರೇಂದ್ರ ಮೋದಿ ಅವರು ಕತ್ರಾದಲ್ಲಿ ಹಸಿರು ನಿಶಾನೆ ತೋರಿದ ವಂದೇ ಭಾರತ್ ಎಕ್ಸ್‌ಪ್ರೆಸ್ ರೈಲು ಕಾಶ್ಮೀರವನ್ನು ದೇಶದ ಉಳಿದ ಭಾಗಗಳೊಂದಿಗೆ ರೈಲು ಮೂಲಕ ಸಂಪರ್ಕಿಸುತ್ತದೆ.

ಕತ್ರಾದಿಂದ ಬಾರಾಮುಲ್ಲಾಗೆ ಅಥವಾ ಬಾರಾಮುಲ್ಲಾದಿಂದ ಕತ್ರಾಗೆ ರೈಲುಗಳನ್ನು ಹತ್ತಿದ ಪ್ರಯಾಣಿಕರು ಅಪಾರ ಉತ್ಸಾಹ ವ್ಯಕ್ತಪಡಿಸಿದರು, ಅನೇಕರು ರೈಲಿನಲ್ಲಿ ಕಾಶ್ಮೀರಕ್ಕೆ ಪ್ರಯಾಣಿಸುವ ಅವಕಾಶಕ್ಕಾಗಿ ಕಾತರದಿಂದ ಕಾಯುತ್ತಿದ್ದೆವು ಎಂದು ಹೇಳಿದರು.

ರೈಲುಗಳಲ್ಲಿ ಸಂಚರಿಸಿದ ಪ್ರಯಾಣಿಕರು ʼಭಾರತ್‌ ಮಾತಾ ಕೀ ಜಯ್‌ʼ, ʼವಂದೇ ಮಾತರಂʼ ಘೋಷಣೆಗಳನ್ನು ಕೂಗಿ ಹರ್ಷ ವ್ಯಕ್ತ ಪಡಿಸುತ್ತಿದ್ದ ವಿಡಿಯೋ ಜಾಲತಾಣಗಳಲ್ಲಿ ವೈರಲ್‌ ಆಗಿದೆ.

ಸಂಜೆಯ ವೇಳೆಗೆ ರೈಲುಗಳು ತಮ್ಮ ಗಮ್ಯಸ್ಥಾನಗಳನ್ನು ತಲುಪಿದ್ದರಿಂದ ಮೊದಲ ದಿನದ ವಾಣಿಜ್ಯ ಕಾರ್ಯಾಚರಣೆ ಸರಾಗವಾಗಿ ನಡೆಯಿತು ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಸಾರ್ವಜನಿಕರ ಉತ್ಸಾಹ ಹೆಚ್ಚಾಗಿದ್ದುದರಿಂದ ರೈಲು ಉದ್ಘಾಟನೆಯಾದ ಕೆಲವೇ ಗಂಟೆಗಳಲ್ಲಿ ಹೆಚ್ಚಿನ ಸೀಟುಗಳು ಬುಕ್ ಆಗಿದ್ದವು ಎಂದು ಅಧಿಕಾರಿಗಳೂ ಹೇಳಿದರು.

ಉತ್ತರ ರೈಲ್ವೆಯ ಪ್ರಕಾರ, ಎರಡು ವಂದೇ ಭಾರತ್ ರೈಲುಗಳು ಕತ್ರಾ ಮತ್ತು ಶ್ರೀನಗರ ನಡುವೆ ಹಗಲಿನಲ್ಲಿ ನಾಲ್ಕು ಟ್ರಿಪ್‌ಗಳನ್ನು ಮಾಡಿದ್ದವು.

ಈ ರೈಲಿನಲ್ಲಿ ಚೇರ್ ಕಾರ್ (ಸಿಸಿ) ಮತ್ತು ಎಕ್ಸಿಕ್ಯುಟಿವ್ ಕ್ಲಾಸ್ (ಇಸಿ) ಎಂಬ ಎರಡು ಪ್ರಯಾಣ ತರಗತಿಗಳಿದ್ದು, ಟಿಕೆಟ್‌ಗಳ ಬೆಲೆ ಕ್ರಮವಾಗಿ 715 ಮತ್ತು 1,320 ರೂ. ಎಂದು ಅಧಿಕಾರಿಗಳು ಹೇಳಿದರು.

ಕತ್ರಾ ಎಲ್ಲಿದೆ?

ಕತ್ರಾ ಎಂಬುದು ಭಾರತದ ಕೇಂದ್ರಾಡಳಿತ ಪ್ರದೇಶವಾದ ಜಮ್ಮು ಮತ್ತು ಕಾಶ್ಮೀರದ ರಿಯಾಸಿ ಜಿಲ್ಲೆಯ ಒಂದು ನಗರ ಮತ್ತು ತಹಸಿಲ್ ಆಗಿದ್ದು, ಇದು ತ್ರಿಕೂಟ ಪರ್ವತಗಳ ಬುಡದಲ್ಲಿದೆ, ಅಲ್ಲಿ ವೈಷ್ಣೋದೇವಿಯ ದೇವಾಲಯವಿದೆ. ಕತ್ರಾವು ರಿಯಾಸಿ ಪಟ್ಟಣದಿಂದ 24 ಕಿಮೀ (15 ಮೈ) ದೂರದಲ್ಲಿದೆ, ಜಮ್ಮು ನಗರದಿಂದ 42 ಕಿಮೀ (26 ಮೈ) ಮತ್ತು ರಾಷ್ಟ್ರ ರಾಜಧಾನಿ ನವದೆಹಲಿಯ ಉತ್ತರಕ್ಕೆ ಸುಮಾರು 685 ಕಿಮೀ (426 ಮೈ) ದೂರದಲ್ಲಿದೆ ಮತ್ತು ಮಾತಾ ವೈಷ್ಣೋದೇವಿ ದೇವಸ್ಥಾನಕ್ಕೆ ಭೇಟಿ ನೀಡುವ ಯಾತ್ರಿಕರಿಗೆ ನೆಲೆಯಾಗಿದೆ.

ಬಾರಾಮುಲ್ಲಾ ಎಲ್ಲಿದೆ?

ಕಾಶ್ಮೀರಿ ಭಾಷೆಯಲ್ಲಿ ವರ್ಮುಲ್ (ಕಾಶ್ಮೀರಿ ಉಚ್ಚಾರಣೆ: [ʋarmul] ) ಎಂಬುದಾಗಿ ಕರೆಯಲ್ಪಡುವ ಬಾರಾಮುಲ್ಲಾ,  ಜಮ್ಮು ಮತ್ತು ಕಾಶ್ಮೀರದ ಬಾರಾಮುಲ್ಲಾ ಜಿಲ್ಲೆಯ ಒಂದು ನಗರ ಮತ್ತು ಪುರಸಭೆ. ಇದು ಬಾರಾಮುಲ್ಲಾ ಜಿಲ್ಲೆಯ ಆಡಳಿತ ಕೇಂದ್ರ. ಇದು ಜಮ್ಮು ಮತ್ತು ಕಾಶ್ಮೀರದ ಬೇಸಿಗೆಯ ರಾಜಧಾನಿಯಾದ ಶ್ರೀನಗರದಿಂದ ಕೆಳಕ್ಕೆ ಝೀಲಂ ನದಿಯ ದಡದಲ್ಲಿದೆ . ಬಾರಾಮುಲ್ಲಾ ಪಟ್ಟಣವನ್ನು ಮೊದಲು ಕಾಶ್ಮೀರದ ಗೇಟ್‌ವೇ ಎಂಬುದಾಗಿ ಕರೆಯಲಾಗುತ್ತಿತ್ತು, ಝೀಲಂ ಕಣಿವೆಯ ಬಂಡಿ ರಸ್ತೆಯ ಮೂಲಕ ಕಾಶ್ಮೀರ ಕಣಿವೆಗೆ ಬರುವ ಸರಕುಗಳಿಗೆ ಪ್ರಮುಖ ವಿತರಣಾ ಕೇಂದ್ರವಾಗಿ ಕಾರ್ಯನಿರ್ವಹಿಸುತ್ತಿತ್ತು. ಇದು ಪೀರ್ ಪಂಜಾಲ್ ಶ್ರೇಣಿಯ ತಪ್ಪಲಿನಲ್ಲಿರುವ ಕಾಶ್ಮೀರ ಕಣಿವೆಯೊಳಗೆ ಇದೆ. ಬಾರಾಮುಲ್ಲಾ ಪಟ್ಟಣವನ್ನು ಮೊದಲು ವರಾಹಮೂಲ ಎಂದು ಕರೆಯಲಾಗುತ್ತಿತ್ತು.

ಚೆನಾಬ್‌ ಸೇತುವೆ ಎಲ್ಲಿದೆ? ವಿಶೇಷತೆ ಏನು?

ಚೆನಾಬ್ ಸೇತುವೆಯು, ಜಮ್ಮು- ಕಾಶ್ಮೀರದಲ್ಲಿ ಅಂಜಿ ನದಿಯ ಮೇಲೆ ನಿರ್ಮಿಸಲಾದ ದೇಶದ ಮೊದಲ ಕೇಬಲ್-ಸ್ಟೇಡ್ ರೈಲು ಸೇತುವೆ. ಜಮ್ಮು-ಕಾಶ್ಮೀರದ ರಿಯಾಸಿ ಜಿಲ್ಲೆಯಲ್ಲಿ ವಿಶ್ವದ ಅತಿ ಎತ್ತರದ ರೈಲ್ವೆ ಕಮಾನು ಸೇತುವೆ ಇದು. ಇದರ ಎತ್ತರ ನದಿಯಿಂದ 359 ಮೀಟರ್.

ವಾಸ್ತುಶಿಲ್ಪದ ಅದ್ಭುತ ಚೆನಾಬ್ ರೈಲು ಸೇತುವೆಯು ವಿಶ್ವದ ಅತಿ ಎತ್ತರದ ರೈಲ್ವೆ ಕಮಾನು ಸೇತುವೆಯಾಗಿದೆ. ಇದು ಭೂಕಂಪ ಮತ್ತು ಪ್ರಬಲ ಗಾಳಿಯ ಪರಿಸ್ಥಿತಿಗಳನ್ನು ತಡೆದುಕೊಳ್ಳುವಂತೆ ವಿನ್ಯಾಸಗೊಳಿಸಲಾದ 1,315 ಮೀಟರ್ ಉದ್ದದ ಉಕ್ಕಿನ ಕಮಾನು ಸೇತುವೆ.  ಇದು ಜಮ್ಮು-ಶ್ರೀನಗರ ನಡುವಿನ ಸಂಪರ್ಕವನ್ನು ಹೆಚ್ಚಿಸುವುದು.

ಚೆನಾಬ್‌ ಸೇತುವೆಯ ಮೇಲೆ ಚಲಿಸುವ ವಂದೇ ಭಾರತ್ ರೈಲು ಮೂಲಕ, ಕತ್ರಾ ಮತ್ತು ಶ್ರೀನಗರ ನಡುವಣ ಪಯಣ ಸುಮಾರು ೩ ಗಂಟೆಯಷ್ಟು ತಗ್ಗಲಿದೆ.

ವಿಶ್ವದ ಅತಿ ಎತ್ತರದ ಚೆನಾಬ್‌ ಸೇತುವೆ ಇಲ್ಲಿದೆ ನೋಡಿ:

Advertisement