"ನೀವು ನಿಜವಾದ ಭಾರತೀಯರಾಗಿದ್ದರೆ, ಇದನ್ನು ಹೇಳುತ್ತಿರಲಿಲ್ಲ!"
ರಾಹುಲ್
ಗಾಂಧಿಗೆ ಸುಪ್ರೀಂ ಕೋರ್ಟ್ ಚಾಟಿ
ಭಾರತೀಯ ಸೇನೆಯ ಬಗ್ಗೆ
ರಾಹುಲ್ ಗಾಂಧಿ ನೀಡಿದ ಹೇಳಿಕೆಗಳಿಗಾಗಿ ಅವರ ವಿರುದ್ಧ ದಾಖಲಾಗಿದ್ದ
ಮಾನನಷ್ಟ ಮೊಕದ್ದಮೆಗೆ ಸುಪ್ರೀಂ ಕೋರ್ಟ್ ಸೋಮವಾರ (ಆಗಸ್ಟ್ 4, 2025) ತಡೆಯಾಜ್ಞೆ ನೀಡಿತು. ಆದರೆ ಸೇನೆ ಬಗ್ಗೆ ಆಡಿದ ಮಾತುಗಳಿಗಾಗಿ ಅವರನ್ನು ತರಾಟೆಗೆ ತೆಗೆದುಕೊಂಡಿತು.
2020ರ ಗಾಲ್ವಾನ್ ಕಣಿವೆ ಸಂಘರ್ಷದ
ಸಂದರ್ಭದಲ್ಲಿ ಚೀನಿಯರು ಭಾರತೀಯ ಭೂಪ್ರದೇಶವನ್ನು ಆಕ್ರಮಿಸಿಕೊಂಡಿದ್ದಾರೆ ಎಂಬ ರಾಹುಲ್
ಗಾಂಧಿಯವರ ಹೇಳಿಕೆ ಕುರಿತು ಸುಪ್ರೀಂ ಕೋರ್ಟ್ ಈ ಪ್ರತಿಕ್ರಿಯೆ ನೀಡಿದೆ.
ರಾಹುಲ್ ಗಾಂಧಿಯವರಿಗೆ
ತಾತ್ಕಾಲಿಕ ಪರಿಹಾರ ಸಿಕ್ಕಿದರೂ, ವಿಚಾರಣೆಯ ವೇಳೆ
ನ್ಯಾಯಮೂರ್ತಿಗಳಾದ
ದೀಪಂಕರ್ ದತ್ತಾ ಮತ್ತು ಎ.ಜಿ. ಮಸಿಹ್ ಅವರನ್ನೊಳಗೊಂಡ ಪೀಠವು ಗಾಂಧಿಯವರ ಹೇಳಿಕೆಗಳ
ಬಗ್ಗೆ ತೀವ್ರ ಅಸಮಾಧಾನ ವ್ಯಕ್ತಪಡಿಸಿತು.
ಸಂಸತ್ತಿನಲ್ಲಿ
ಯಾಕೆ ಹೇಳಲಿಲ್ಲ?
ರಾಹುಲ್ ಗಾಂಧಿ ಪರ ವಾದ
ಮಂಡಿಸಿದ ಹಿರಿಯ ವಕೀಲ ಡಾ. ಅಭಿಷೇಕ್ ಮನು ಸಿಂಘ್ವಿ, "ವಿರೋಧ ಪಕ್ಷದ ನಾಯಕರು
ವಿಷಯಗಳನ್ನು ಪ್ರಸ್ತಾಪಿಸಲು ಸಾಧ್ಯವಾಗದಿದ್ದರೆ ಅದು ದುರದೃಷ್ಟಕರ" ಎಂದು ಹೇಳಿದರು.
"ಪತ್ರಿಕೆಗಳಲ್ಲಿ ಪ್ರಕಟವಾದ ವಿಷಯಗಳನ್ನು ಅವರು ಹೇಳಲು ಸಾಧ್ಯವಾಗದಿದ್ದರೆ, ಅವರು
ವಿರೋಧ ಪಕ್ಷದ ನಾಯಕರಾಗಿರಲು ಸಾಧ್ಯವಿಲ್ಲ" ಎಂದೂ ಸಿಂಘ್ವಿ ವಾದಿಸಿದರು.
ಇದಕ್ಕೆ ನ್ಯಾಯಮೂರ್ತಿ
ದತ್ತಾ,
"ನಿಮಗೆ ಏನು ಹೇಳಬೇಕೋ ಅದನ್ನು ಸಂಸತ್ತಿನಲ್ಲಿ ಏಕೆ ಹೇಳಬಾರದು? ಸಾಮಾಜಿಕ
ಮಾಧ್ಯಮದಲ್ಲಿ ಯಾಕೆ ಹೇಳಬೇಕು?"
ಎಂದು ಪ್ರಶ್ನಿಸಿದರು.
"ನೀವು
ನಿಜವಾದ ಭಾರತೀಯರಾಗಿದ್ದರೆ ಹೀಗೆ ಹೇಳುತ್ತಿರಲಿಲ್ಲ"
ಗಾಂಧಿಯವರ ಹೇಳಿಕೆಗಳ
ಬಗ್ಗೆ ಮತ್ತಷ್ಟು ಅಸಮಾಧಾನ ವ್ಯಕ್ತಪಡಿಸಿದ ನ್ಯಾಯಮೂರ್ತಿ ದತ್ತಾ, "ಡಾ. ಸಿಂಘ್ವಿಯವರಿಗೆ ಹೇಳಿ, 2000 ಚದರ ಕಿಲೋಮೀಟರ್ ಭಾರತೀಯ
ಭೂಪ್ರದೇಶವನ್ನು ಚೀನಿಯರು ಆಕ್ರಮಿಸಿಕೊಂಡಿದ್ದಾರೆ ಎಂದು ನಿಮಗೆ ಹೇಗೆ ಗೊತ್ತಾಯಿತು? ನೀವು
ಅಲ್ಲಿ ಇದ್ದಿರಾ? ನಿಮ್ಮ ಬಳಿ ಯಾವುದೇ ವಿಶ್ವಾಸಾರ್ಹ ಮಾಹಿತಿ
ಇದೆಯೇ? ಯಾವುದೇ ಆಧಾರವಿಲ್ಲದೆ ಯಾಕೆ ಇಂತಹ ಹೇಳಿಕೆಗಳನ್ನು ನೀಡುತ್ತೀರಿ? ನೀವು
ನಿಜವಾದ ಭಾರತೀಯರಾಗಿದ್ದರೆ,
ಇವೆಲ್ಲವನ್ನೂ ಹೇಳುತ್ತಿರಲಿಲ್ಲ" ಎಂದು ತೀವ್ರವಾಗಿ ಚಾಟಿ
ಬೀಸಿದರು.
ಇದಕ್ಕೆ ಉತ್ತರ
ನೀಡಿದ ಸಿಂಘ್ವಿ, "ನಮ್ಮ 20 ಭಾರತೀಯ ಸೈನಿಕರನ್ನು ಥಳಿಸಿ ಕೊಲ್ಲಲಾಗಿದೆ ಮತ್ತು ಇದು ಆತಂಕಕಾರಿ
ವಿಷಯ ಎಂದು ನಿಜವಾದ ಭಾರತೀಯ ಹೇಳಬಹುದು" ಎಂದರು.
"ಗಡಿಯಲ್ಲಿ ಸಂಘರ್ಷ
ಇರುವಾಗ ಎರಡೂ ಕಡೆ ಸಾವು-ನೋವುಗಳು ಆಗುವುದು ಅಸಾಮಾನ್ಯವೇನಲ್ಲ ಅಲ್ಲವೇ?" ಎಂದು ನ್ಯಾಯಮೂರ್ತಿ ದತ್ತಾ ಮರುಪ್ರಶ್ನಿಸಿದರು.
ಗಾಂಧಿ ಕೇವಲ ಸರಿಯಾದ
ಮಾಹಿತಿ ಬಹಿರಂಗಪಡಿಸುವಿಕೆ ಮತ್ತು ಮಾಹಿತಿ ಮುಚ್ಚಿಡುವಿಕೆಯ ಬಗ್ಗೆ ಕಳವಳ
ವ್ಯಕ್ತಪಡಿಸುತ್ತಿದ್ದರು ಎಂದು ಸಿಂಘ್ವಿ ಹೇಳಿದರು. ಆದರೆ ಪ್ರಶ್ನೆಗಳನ್ನು ಎತ್ತಲು ಸರಿಯಾದ
ವೇದಿಕೆ ಇದೆ ಎಂದು ನ್ಯಾಯಮೂರ್ತಿ ದತ್ತಾ ಹೇಳಿದರು.
ಮಾನನಷ್ಟ
ಮೊಕದ್ದಮೆಗೆ ತಾತ್ಕಾಲಿಕ ತಡೆ
ತಮ್ಮ ಕಕ್ಷಿದಾರರು
ಹೇಳಿಕೆಗಳನ್ನು ಉತ್ತಮವಾಗಿ ರೂಪಿಸಬಹುದಿತ್ತು ಎಂದು ಸಿಂಘ್ವಿ ಒಪ್ಪಿಕೊಂಡರು. ಆದರೆ ವಿರೋಧ
ಪಕ್ಷದ ನಾಯಕರಾಗಿ ಪ್ರಶ್ನೆಗಳನ್ನು ಎತ್ತುವುದು ಅವರ ಕರ್ತವ್ಯವಾಗಿದ್ದು, ತಮಗೆ
ಕಿರುಕುಳ ನೀಡುವ ಪ್ರಯತ್ನ ಇದು ಎಂದು ಅವರು ವಾದಿಸಿದರು. ಕ್ರಿಮಿನಲ್ ದೂರು
ದಾಖಲಿಸುವ ಮೊದಲು ಆರೋಪಿಯ ಪೂರ್ವಭಾವಿ ವಿಚಾರಣೆ ಕಡ್ಡಾಯವಾಗಿತ್ತು, ಆದರೆ
ಈ ಪ್ರಕರಣದಲ್ಲಿ ಅದನ್ನು ಪಾಲಿಸಿಲ್ಲ ಎಂದು ಸೆಕ್ಷನ್ 223 ಬಿಎನ್ಎಸ್ಎಸ್
ಉಲ್ಲೇಖಿಸಿದರು. ಆದರೆ ಈ ಅಂಶವನ್ನು ಹೈಕೋರ್ಟ್ ಮುಂದೆ ಪ್ರಸ್ತಾಪಿಸಲಾಗಿಲ್ಲ ಎಂದು ನ್ಯಾಯಮೂರ್ತಿ
ದತ್ತಾ ಗಮನಸೆಳೆದರು.
ಈ ವಿಷಯವನ್ನು
ಮುಂದಿಡಲು ವಿಳಂಬವಾಯಿತು ಎಂದು ಸಿಂಘ್ವಿ ಒಪ್ಪಿಕೊಂಡರು. ದೂರುದಾರರು "ಬಾಧಿತ
ವ್ಯಕ್ತಿ" ಅಲ್ಲದಿದ್ದರೂ,
"ಮಾನಹಾನಿಯಾದ ವ್ಯಕ್ತಿ" ಎಂದು ಸಿಂಘ್ವಿ
ಪ್ರತಿಪಾದಿಸಿದರು.
ಅಂತಿಮವಾಗಿ, ಸುಪ್ರೀಂ
ಕೋರ್ಟ್ ಈ ಅಂಶವನ್ನು ಪರಿಗಣಿಸಲು ಒಪ್ಪಿಕೊಂಡಿತು ಮತ್ತು ಅಲಹಾಬಾದ್ ಹೈಕೋರ್ಟ್ನ ತೀರ್ಪನ್ನು
ಪ್ರಶ್ನಿಸಿ ಗಾಂಧಿಯವರ ವಿಶೇಷ ಅರ್ಜಿಯ ಕುರಿತು ನೋಟಿಸ್ ಜಾರಿ ಮಾಡಿತು. ಮೂರು ವಾರಗಳ ಕಾಲ
ಮಧ್ಯಂತರ ತಡೆಯಾಜ್ಞೆಯನ್ನು ನೀಡಲಾಯಿತು.
ಲಕ್ನೋದ ಸಂಸದ- ಶಾಸಕರ
ನ್ಯಾಯಾಲಯದಲ್ಲಿ ದಾಖಲಾದ ಮಾನನಷ್ಟ ಪ್ರಕರಣ ಮತ್ತು ಫೆಬ್ರವರಿ 2025 ರಲ್ಲಿ ನೀಡಿದ್ದ ಸಮನ್ಸ್ ಆದೇಶವನ್ನು ಪ್ರಶ್ನಿಸಿ ರಾಹುಲ್ ಗಾಂಧಿ ಹೈಕೋರ್ಟ್ಗೆ ಮೊರೆ ಹೋಗಿದ್ದರು. ಮೇ 29
ರಂದು ಅಲಹಾಬಾದ್ ಹೈಕೋರ್ಟ್ ಅವರ ಅರ್ಜಿಯನ್ನು ವಜಾಗೊಳಿಸಿತ್ತು. ಭಾರತೀಯ ಸೇನೆಗೆ
ಮಾನಹಾನಿ ಮಾಡುವ ಹೇಳಿಕೆಗಳನ್ನು ನೀಡುವುದು ವಾಕ್ ಮತ್ತು ಅಭಿವ್ಯಕ್ತಿ ಸ್ವಾತಂತ್ರ್ಯದಲ್ಲಿ
ಸೇರಿಲ್ಲ ಎಂದು ಹೈಕೋರ್ಟ್ನ ನ್ಯಾಯಮೂರ್ತಿ ಸುಭಾಷ್ ವಿದ್ಯಾರ್ಥಿ ಅಭಿಪ್ರಾಯಪಟ್ಟಿದ್ದರು.
ಭಾರತ್
ಜೋಡೋ ಯಾತ್ರೆಯ ವೇಳೆ ನೀಡಿದ ಹೇಳಿಕೆಗಳು
ಮಾಜಿ ಗಡಿ ರಸ್ತೆ
ಸಂಸ್ಥೆ (ಬಿ.ಆರ್.ಒ) ನಿರ್ದೇಶಕ ಉದಯ್ ಶಂಕರ್ ಶ್ರೀವಾಸ್ತವ ಅವರು ಈ ಮಾನನಷ್ಟ ದೂರು
ದಾಖಲಿಸಿದ್ದಾರೆ. 2022ರ ಡಿಸೆಂಬರ್ 16
ರಂದು ರಾಹುಲ್ ಗಾಂಧಿ ಭಾರತ್ ಜೋಡೋ ಯಾತ್ರೆಯ ವೇಳೆ ನೀಡಿದ ಹೇಳಿಕೆಗಳೇ
ಇದಕ್ಕೆ ಕಾರಣ. 2022ರ ಡಿಸೆಂಬರ್ 9
ರಂದು ಭಾರತೀಯ ಮತ್ತು ಚೀನೀ ಸೇನೆಗಳ ನಡುವಿನ ಘರ್ಷಣೆಗೆ
ಸಂಬಂಧಿಸಿದಂತೆ ಗಾಂಧಿಯವರ ಹೇಳಿಕೆಗಳು ಭಾರತೀಯ ಸೇನೆಗೆ ಮಾನಹಾನಿ ಮಾಡಿವೆ ಎಂದು ದೂರಿನಲ್ಲಿ
ಹೇಳಲಾಗಿದೆ.
ಅರುಣಾಚಲ ಪ್ರದೇಶದಲ್ಲಿ
ಚೀನೀ ಸೇನೆಯು ನಮ್ಮ ಸೈನಿಕರಿಗೆ 'ಥಳಿಸುತ್ತಿದೆ' ಮತ್ತು
ಈ ಬಗ್ಗೆ ಭಾರತೀಯ ಮಾಧ್ಯಮಗಳು ಯಾವುದೇ ಪ್ರಶ್ನೆ ಕೇಳುವುದಿಲ್ಲ ಎಂದು ಗಾಂಧಿ ಪದೇ ಪದೇ
ಅವಹೇಳನಕಾರಿಯಾಗಿ ಹೇಳಿದ್ದಾರೆ ಎಂದು ನಿರ್ದಿಷ್ಟವಾಗಿ ಆರೋಪಿಸಲಾಗಿದೆ.
ಗಾಂಧಿಯವರ ಹೇಳಿಕೆಗಳು ಭಾರತೀಯ ಸೇನೆ ಮತ್ತು ಅದಕ್ಕೆ ಸಂಬಂಧಿಸಿದ ವ್ಯಕ್ತಿಗಳು ಮತ್ತು ಅವರ ಕುಟುಂಬದ ಸದಸ್ಯರ ಸ್ಥೈರ್ಯವನ್ನು ಕುಗ್ಗಿಸಿವೆ ಎಂದು ಲಕ್ನೋ ನ್ಯಾಯಾಲಯದ ಆದೇಶದಲ್ಲಿ ಪ್ರಾಥಮಿಕವಾಗಿ ಹೇಳಲಾಗಿದ್ದು, ಇದನ್ನು ಪ್ರಶ್ನಿಸಿ ಗಾಂಧಿ ಹೈಕೋರ್ಟ್ ಮೆಟ್ಟಿಲೇರಿದ್ದರು.
ಇನ್ನಷ್ಟು ಸುದ್ದಿಗಳಿಗೆ ಈ ಚಿತ್ರ ಕ್ಲಿಕ್ ಮಾಡಿರಿ:


No comments:
Post a Comment