Sunday, August 3, 2025

ಆ.10: ಮೆಟ್ರೋ ಹಳದಿ ಮಾರ್ಗಕ್ಕೆ ಪ್ರಧಾನಿ ಮೋದಿ ಹಸಿರು ನಿಶಾನೆ

 ಆ.10: ಮೆಟ್ರೋ ಹಳದಿ ಮಾರ್ಗಕ್ಕೆ ಪ್ರಧಾನಿ ಮೋದಿ ಹಸಿರು ನಿಶಾನೆ

ಬೆಂಗಳೂರು: ನಮ್ಮ ಬೆಂಗಳೂರು ಮೆಟ್ರೋವು ನಿರ್ಮಿಸಿರುವ ಬೊಮ್ಮಸಂದ್ರದಿಂದ ಆರ್‌ ವಿ ರಸ್ತೆವರೆಗಿನ ೧೯.೧೫ ಕಿ.ಮೀ. ದೂರದ ಹಳದಿ ಮೆಟ್ರೋ ಮಾರ್ಗವನ್ನು ಪ್ರಧಾನಿ ನರೇಂದ್ರ ಮೋದಿ ಅವರು ೨೦೨೫ ಆಗಸ್ಟ್‌ ೧೦ರಂದು ಲೋಕಾರ್ಪಣೆ ಮಾಡಲಿದ್ದಾರೆ.

ಅದೇ ದಿನ ೧೫,೬೧೧ ಕೋಟಿ ರೂಪಾಯಿ ವೆಚ್ಚದಲ್ಲಿ ನಿರ್ಮಿಸಲಾಗುವ ಮೂರನೇ ಹಂತದ ಮೆಟ್ರೋ ಮಾರ್ಗಕ್ಕೆ ಶಂಕುಸ್ಥಾಪನೆಯನ್ನೂ ನೆರವೇರಿಸಲಿದ್ದಾರೆ. ಈ ಮೆಟ್ರೋ ಮಾರ್ಗವು ೪೪.೬೫ ಕಿಮೀ ಉದ್ದವಿರಲಿದೆ.

ಆರ್.ವಿ.ರಸ್ತೆಯಿಂದ ಬೊಮ್ಮಸಂದ್ರದವರೆಗಿನ ಹಳದಿ ಮೆಟ್ರೋ ಮಾರ್ಗವನ್ನು ೫,೦೫೬.೯೯ ಕೋಟಿ ರೂಪಾಯಿ ವೆಚ್ಚದಲ್ಲಿ ನಿರ್ಮಿಸಲಾಗಿದ್ದು ಸುಮಾರು ೮ ಲಕ್ಷ ಪ್ರಯಾಣಿಕರಿಗೆ ಅನುಕೂಲವಾಗಲಿದೆ.

ಪ್ರಧಾನಿಯ ನರೇಂದ್ರ ಮೋದಿ ಅವರಿಂದ ಹಳದಿ ಮೆಟ್ರೋ ಮಾರ್ಗದ ಉದ್ಘಾಟನೆ ಮತ್ತು ಮೂರನೇ ಹಂತದ ಮೆಟ್ರೋ ಮಾರ್ಗಕ್ಕೆ ಶಂಕು ಸ್ಥಾಪನೆ ನೆರವೇರಿಸಲಿರುವ ವಿಚಾರವನ್ನು ಕೇಂದ್ರದ ವಸತಿ ಮತ್ತು ನಗರ ವ್ಯವಹಾರಗಳ ಸಚಿವ ಮನೋಹರಲಾಲ್‌ ಖಟ್ಟರ್‌ ಮತ್ತು ಬೆಂಗಳೂರು ದಕ್ಷಿಣದ ಸಂಸತ್‌ ಸದಸ್ಯ ತೇಜಸ್ವಿ ಸೂರ್ಯ ಎಕ್ಸ್‌ ಮೂಲಕ ನೀಡಿದ ಪ್ರತ್ಯೇಕ ಸಂದೇಶಗಳಲ್ಲಿ ಹಂಚಿಕೊಂಡಿದ್ದಾರೆ.

ಹಳದಿ ಮೆಟ್ರೋ ಮಾರ್ಗದ ಉದ್ಘಾಟನೆ ಮತ್ತು ಮೂರನೇ ಹಂತದ ಮೆಟ್ರೋ ಮಾರ್ಗಕ್ಕೆ ಶಂಕುಸ್ಥಾಪನೆಯನ್ನು ಪ್ರಧಾನಿಯವರು ಆಗಸ್ಟ್‌ ೧೦ರಂದು ನೆರವೇರಿಸಲಿದ್ದಾರೆ ಎಂದು ಖಟ್ಟರ್‌ ಅವರು ತಿಳಿಸಿದರೆ, ಹಳದಿ ಮಾರ್ಗದ ಉದ್ಘಾಟನೆ ಮೂಲಕ ನಮ್ಮ ನಗರ ಮೂಲಸೌಕರ್ಯ ಅಭಿವೃದ್ಧಿಗೆ ಆದ್ಯತೆ ನೀಡಿದ್ದಕ್ಕಾಗಿ ಪ್ರಧಾನಿಯವರಿಗೆ ತೇಜಸ್ವಿ ಸೂರ್ಯ ಧನ್ಯವಾದ ಅರ್ಪಿಸಿದ್ದಾರೆ.

ಈ ಮಾರ್ಗದ ಉದ್ಘಾಟನೆಯಿಂದ ೮ ಲಕ್ಷ ಪ್ರಯಾಣಿಕರಿಗೆ ಅನುಕೂಲವಾಗಲಿದೆ ಮತ್ತು ಸಿಲ್ಕ್‌ ಬೋರ್ಡಿನ ಸಂಚಾರ ದಟ್ಟಣೆ ಸಮಸ್ಯೆ ಪರಿಹಾರವಾಗಲಿದೆ ಎಂದು ತೇಜಸ್ವಿ ಹೇಳಿದ್ದಾರೆ.

ಸಂಚಾರ ದಟ್ಟಣೆ ಕಡಿಮೆ ಮಾಡಲು ಸಾರ್ವಜನಿಕ ಸಾರಿಗೆಯೇ ಏಕೈಕ ಆಯ್ಕೆ. ನಾವು ಆಗಸ್ಟ್‌ ೧೫ರ ಗಡುವನ್ನು ಪೂರೈಸುತ್ತಿದ್ದೇವೆ. ಯಾವುದೇ ವಿಳಂಬವಿಲ್ಲದೆ ಇದು ಸಾರ್ವಜನಿಕರಿಗೆ ಮುಕ್ತವಾಗಬೇಕು ಎಂಬ ಪ್ರಧಾನಿಯವರ ವೈಯಕ್ತಿಕ ಆಗ್ರಹದಿಂದಾಗಿಯೇ ಇದು ಸಾಧ್ಯವಾಗುತ್ತಿದೆ ಎಂದು ಸೂರ್ಯ ಬರೆದಿದ್ದಾರೆ.

ಈ ಕೆಳಗಿದ್ದನ್ನೂ ಓದಿರಿ:

ಬೆಂಗಳೂರಿನ ಮೊದಲ ಚಾಲಕ ರಹಿತ ಮೆಟ್ರೋ ರೈಲು
ನಾಗವಾರ, ಕೆಂಪಾಪುರ, ಹೆಬ್ಬಾಳಕ್ಕೂ ಬರಲಿದೆ ಮೆಟ್ರೋ ಇಂಟರ್‌ ಚೇಂಜ್‌ ನಿಲ್ದಾಣ
ಆಗ್ರಾ ಮೆಟ್ರೋ ರೈಲು ಯೋಜನೆ: ಮೊದಲ ಹಂತದ ಉದ್ಘಾಟನೆ
ಏನಿದು ರಾಷ್ಟ್ರೀಯ ಸಾಮಾನ್ಯ ಸಂಚಾರೀ ಕಾರ್ಡ್ ?
ಭಾರತದ ಮೊದಲ ಚಾಲಕರಹಿತ ರೈಲು: ಪ್ರಧಾನಿ ಹಸಿರು ನಿಶಾನೆ
ರಾಷ್ಟ್ರೀಯ ಸಾಮಾನ್ಯ ಸಂಚಾರಿ ಕಾರ್ಡ್: ಪ್ರಧಾನಿ ಉದ್ಘಾಟನೆ
ಬೆಂಗಳೂರು ಸುರಂಗ ರಸ್ತೆ, ಮೆಟ್ರೋಗೆ ರಕ್ಷಣಾ ಭೂಮಿ: ಕೇಂದ್ರಕ್ಕೆ ಮುಖ್ಯಮಂತ್ರಿ ಮನವಿ
 

No comments:

Advertisement